Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
20 Sep 2026 ವ್ಯಕ್ತಿಚಾರಿತ್ರ್ಯ v/s ಅಧಿಕಾರ

ಈಚೆಗೆ ನೂರು ತುಂಬಿದ ಅಪರೂಪದ ಸಮಾಜವಾದಿ ಅಮ್ಮೆಂಬಳ ಆನಂದರ ಬಗ್ಗೆ ಟಿಪ್ಪಣಿ ಮಾಡುತ್ತಿದ್ದ ಸಂಜೆ ಗೆಳೆಯರೊಬ್ಬರ ‘ಸಂಕ್ಷಿಪ್ತ ಮೇಘಸಂದೇಶ’ (ಎಸ್ಎಂಎಸ್) ಪ್ರತ್ಯಕ್ಷವಾಯಿತು. ೨೦೨೪ರಲ್ಲಿ ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿಯವರನ್ನು ಕುರಿತ ನನ್ನ ‘ಪ್ರಜಾವಾಣಿ’ ಲೇಖನವನ್ನು ಸಮುದಾಯದ ಸುರೇಂದ್ರ ಫೇಸ್‌ಬುಕ್‌ನಲ್ಲಿ ಹಂಚಿದ್ದನ್ನು ಓದಿದ್ದ ಗೆಳೆಯ ಬರೆದಿದ್ದರು: ‘ಒಬ್ಬ ಸಮಾಜವಾದಿಯಾಗಿ ನೀವು ಕಮ್ಯುನಿಸ್ಟರೊಬ್ಬರ ಬಗ್ಗೆ ಗೌರವಯುತವಾಗಿ ಬರೆದಿದ್ದು ಇಷ್ಟವಾಯಿತು.’ 

ಈ ಪ್ರತಿಕ್ರಿಯೆಗೆ ಚಣ ಸ್ಟನ್ನಾದೆ. ’ಸಮಾಜವಾದ, ಕಮ್ಯುನಿಸಂಗಳನ್ನು ಪೂರಾ ತಿಳಿಯದೆ, ಅನುಸರಿಸದೆ ಸಮಾಜವಾದಿ ಎಂದುಕೊಳ್ಳಲಾರೆ’ ಎಂದು ಅವರಿಗೆ ಹೇಳಿದರೂ, ಸಮತಾವಾದ ಸಮಾಜವಾದ, ಮಾರ್ಕ್ಸ್‌ವಾದ, ಸ್ತ್ರೀವಾದ ಇತ್ಯಾದಿ ಯುಗಪ್ರವರ್ತಕ ಚಿಂತನೆಗಳ ಗಂಭೀರ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ ಎಂದುಕೊಳ್ಳಲು ಹಿಂಜರಿಕೆಯೇನಿಲ್ಲ! ಮೂಲತಃ ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಸಮತೆಯ ವಿವಿಧ ಪಾಠಗಳನ್ನು ಕಲಿಸುವ ಸಿಮೊನ್ ದ ಬುವಾ, ಮಾರ್ಕ್ಸ್, ಲೋಹಿಯಾ, ಯೆಚೂರಿ, ಅಂಬೇಡ್ಕರ್ ಎಲ್ಲರೂ ಸಹಜವಾಗೇ ನನ್ನ ಬರವಣಿಗೆಯಲ್ಲಿ ಒದಗಿ ಬರುತ್ತಾರೆಂದು ಕಾಣುತ್ತದೆ. ಅವರ ಚಿಂತನೆಗಳು ಅಂಕಣ, ಟೀಚಿಂಗ್, ಕಾದಂಬರಿ, ಜೀವನಚರಿತ್ರೆ, ಸಂಕಿರಣ, ಮಾತುಕತೆ… ಹೀಗೆ ಕಾಲಕಾಲಕ್ಕೆ ನನ್ನನ್ನು ತೊಡಗಿಸುವ ಪ್ರಕಾರಗಳಲ್ಲಿ ಹರಿದು ಬರುತ್ತವೆಂದು ಕಾಣುತ್ತದೆ. ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ಸಂಜೆ ಕೂಡ ಲೋಹಿಯಾ, ಸಿಮೊನ್ ದ ಬುವಾ, ಯೆಚೂರಿ, ಅಮ್ಮೆಂಬಳ ಆನಂದ ಮೊದಲಾದವರ ಬಗೆಗೆ ಅವರಿವರ ಜೊತೆ ಮಾತಾಡಿದ್ದು, ಬರೆದಿದ್ದು ಆಕಸ್ಮಿಕವಲ್ಲ! 

ಅದೇನೇ ಇರಲಿ. ಮೊನ್ನೆ ಉತ್ತರಕನ್ನಡದ ‘ಕರಾವಳಿ ಮುಂಜಾವು’ ಪತ್ರಿಕೆಯಲ್ಲಿ ನೂರಕ್ಕೆ ಅಡಿಯಿಟ್ಟ ಸಮಾಜವಾದಿ ಅಮ್ಮೆಂಬಳ ಆನಂದರು ಅಂಕೋಲದಲ್ಲಿ ಗಿಡಕ್ಕೆ ನೀರೆರೆಯುತ್ತಿದ್ದ ಫೋಟೋ ನೋಡುತ್ತಿದ್ದಾಗ ಇದು ಈಚೆಗೆ ನಾನು ನೋಡಿದ ಅತ್ಯಂತ ಅರ್ಥಪೂರ್ಣ ಫೋಟೋಗಳಲ್ಲಿ ಒಂದು ಎನ್ನಿಸಿತು. ಭಾರತದ  ಸ್ವಾತಂತ್ರ‍್ಯ ಹೋರಾಟಕ್ಕೆ, ಸಮಾಜವಾದಿ ಚಳುವಳಿಗೆ ನೀರೆರೆದ ಕೋಟ್ಯಂತರ ಕೈಗಳಲ್ಲಿ ದಕ್ಷಿಣ ಕನ್ನಡದ ಬಂಟ್ವಾಳದ ಅಮ್ಮೆಂಬಳ ಆನಂದರ ಈ ಪುಟ್ಟ ಕೈಗಳೂ ಇದ್ದವು ಎಂಬುದನ್ನು ಹೊಸ ತಲೆಮಾರುಗಳಿಗೆ ನೆನಪಿಸುತ್ತಿದ್ದೇನೆ. ಐವತ್ತು ವರ್ಷ ಅಂಕೋಲದಲ್ಲಿದ್ದ ಆನಂದರು ಈಗ ಮಣಿಪಾಲದ ಮಗಳ ಮನೆಯಲ್ಲಿದ್ದಾರೆ ಎಂದು ಗೆಳೆಯರು ಹೇಳಿದಾಗ, ಪ್ರೀತಿಯ ಲೇಖಕಿ ವೈದೇಹಿಯವರಿಗೆ ಫೋನ್ ಮಾಡಿ, ‘ಅಮ್ಮೆಂಬಳ ಆನಂದ ಮಣಿಪಾಲದಲ್ಲಿದ್ದಾರಾ?’ ಎಂದೆ. 

ಆನಂದರ ಹೆಸರು ಹೇಳುತ್ತಿದ್ದಂತೆ, ವೈದೇಹಿ ‘ಅವರಾ? ‘ಬಂಗಾರದ ಮನುಷ್ಯ’ ಎಂದರು. ಆನಂದ ತಮ್ಮ ತೊಂಬತ್ತೊಂದನೆಯ ವಯಸ್ಸಿನವರೆಗೂ ವೈದೇಹಿಯವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರು. ವೈದೇಹಿ, ‘ಅವರೊಬ್ಬ ಪ್ರೀತಿ ತುಂಬಿದ ಮನುಷ್ಯ, ಪ್ರೀತಿಯಲ್ಲದೆ ಅವರಲ್ಲಿ ಬೇರೇನನ್ನೂ ಕಾಣಲಿಲ್ಲ. ಎಲ್ಲರ ಬಗೆಗೂ ಅವರಿಗೆ ಪ್ರೀತಿ’ ಎನ್ನುತ್ತಾ  ಸಮಾಜವಾದಿಗಳು, ಕಮಲಾದೇವಿ ಚಟ್ಟೋಪಾಧ್ಯಾಯ,ಜಾರ್ಜ್ ಫರ್ನಾಂಡಿಸ್... ಎಲ್ಲರನ್ನೂ ನೆನೆಸಿಕೊಂಡರು.      

ಕರ್ನಾಟಕದ ಸಮಾಜವಾದಿ ಚರಿತ್ರೆಯಲ್ಲಿ ನನ್ನ ಮನಸ್ಸಿನಲ್ಲಿ ಉಳಿದಿರುವ ಹಲವು ಹೆಸರುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಮೆಂಬಳ ಊರಿನ ಆನಂದ ಹಾಗೂ ಅವರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ಇಬ್ಬರೂ ಹಸಿರಾಗಿದ್ದಾರೆ.  ಸ್ವಾತಂತ್ರ‍್ಯ ಚಳುವಳಿಯ ಕಾಲಘಟ್ಟದ ಸ್ಪಿರಿಟ್ ಹಾಗೂ ಗಾಂಧಿ, ಜೆ.ಪಿ., ಲೋಹಿಯಾ ಥರದವರು ಇಂಥ ಕ್ರಿಯಾಶಾಲಿಗಳಲ್ಲಿ ಬೆಳೆಸಿದ ಆದರ್ಶ ಸಮಾಜದ ಕಲ್ಪನೆಗಳು, ಅವು ಸಾಕಾರವಾಗುವಂತೆ ಅವರು ಸಹಜವಾಗಿ ಬದುಕಿದ ರೀತಿ ಇವತ್ತಿಗೂ ಧನ್ಯತೆಯ ಭಾವ ಹುಟ್ಟಿಸುತ್ತವೆ.  ಸ್ವಾತಂತ್ರ‍್ಯ ಚಳುವಳಿಯ ಆದರ್ಶದ ಫಲವಾಗಿ ಕೂಡ ಅಮ್ಮೆಂಬಳ ಆನಂದ ೧೯೫೪ರಲ್ಲಿ ವಿಧವೆ ಗಂಗಮ್ಮನವರನ್ನು ಮದುವೆಯಾದರು; ಗಂಗಮ್ಮನವರ ಮಗಳನ್ನೂ ತಮ್ಮ ಮಗಳಾಗಿ ಸ್ವೀಕರಿಸಿದರು. ಆ ದಿನವನ್ನು ದಾಖಲಿಸಿರುವ ಪಾಟೀಲ ಪುಟ್ಟಪ್ಪನವರ ಮಾತನ್ನು ನೆನೆಯುವ ಅಂಕೋಲದ ಕವಿ ವಿಷ್ಣುನಾಯ್ಕರು ಅಮ್ಮೆಂಬಳ ಆನಂದರನ್ನು ಕುರಿತು ಕೊಡುವ ವಿವರಗಳು:  

ಬಂಟ್ವಾಳದಲ್ಲಿ ಹುಟ್ಟಿದ ಅಮ್ಮೆಂಬಳ ಆನಂದ (೧೭ ಸೆಪ್ಟೆಂಬರ್ ೧೯೨೭) ಮೆಟ್ರಿಕ್ ಶಿಕ್ಷಣ ಮುಗಿಸುವ ಹೊತ್ತಿಗೆ ಮಂಗಳೂರಿನ ಪ್ರಖರ ಸಮಾಜವಾದಿ ಕಮಲಾದೇವಿ ಚಟ್ಟೋಪಾಧ್ಯಾಯಯರ ವಲಯಕ್ಕೆ ಬಂದರು. ಕಮಲಾದೇವಿ ಅಷ್ಟೊತ್ತಿಗಾಗಲೇ ಲೋಹಿಯಾ, ಜಯಪ್ರಕಾಶ ನಾರಾಯಣರ ಸಂಪರ್ಕಕ್ಕೆ ಬಂದು ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ದಲ್ಲಿದ್ದರು. ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ಕಮಲಾದೇವಿಯವರ ಸೂಚನೆಯಂತೆ ಆನಂದ ಹುಬ್ಬಳ್ಳಿಗೆ ಬಂದು ಪ್ರಾಂತ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾದರು. ಅಲ್ಲಿ ರೈಲ್ವೆ ಕೆಲಸಗಾರರನ್ನು ಸಂಘಟಿಸಿದರು. ನಂತರ ಆನಂದ ‘ನವಯುಗ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸಮಾಜವಾದಿ ಚಟುವಟಿಕೆಯನ್ನು ಸಹಿಸದ ಪತ್ರಿಕೆ ಅವರನ್ನು ಕೆಲಸದಿಂದ ತೆಗೆದುಹಾಕಿತು. ಮುಂದೆ ವಡ್ಡರ್ಸೆ ರಘುರಾಮಶೆಟ್ಟರ ಸಹಾಯದಿಂದ ಮುಂಬೈಗೆ ಬಂದ ಆನಂದ, ಹೋಟೆಲ್ ಕಾರ್ಮಿಕರಿಗೆ ರಾತ್ರಿ ಪಾಠಶಾಲೆಯಲ್ಲಿ ಪಾಠ ಹೇಳಿದರು. ನಂತರ ಮಂಗಳೂರಿಗೆ ಬಂದು ಮೇಷ್ಟರಾದರು. ‘ನವಭಾರತ’ ಪತ್ರಿಕೆಯ ಉಪಸಂಪಾದಕರಾದರು. 

ಕವಿ-ರಾಜಕಾರಣಿ ದಿನಕರ ದೇಸಾಯಿ ಆನಂದರನ್ನು ‘ಜನಸೇವಕ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಲು ಅಂಕೋಲಕ್ಕೆ ಕರೆತಂದರು. ಜೊತೆಗೆ ಗಂಗಮ್ಮನವರನ್ನು ಹಳ್ಳಿ ಮಹಿಳೆಯರ ಪ್ರಸೂತಿ ಕೆಲಸದಲ್ಲಿ ತೊಡಗಿಸಿದರು. ಅಮ್ಮೆಂಬಳ ಕುಟುಂಬ ಅಂಕೋಲದಲ್ಲಿ ಅರ್ಥಪೂರ್ಣವಾಗಿ ಬೆರೆತದ್ದು ಹೀಗೆ. ‘ಜನಸೇವಕ’ ಆನಂದರಲ್ಲಿ ಮೊಳೆಯುತ್ತಿದ್ದ ಬರವಣಿಗೆಗೆ ವೇದಿಕೆಯಾಯಿತು. ಅಲ್ಲಿ ಅವರು ‘ನೇಗಿಲಯೋಗಿ’ ಎಂಬ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ದಿನಕರ ದೇಸಾಯಿ ಬಿಜಿಯಾಗಿದ್ದಾಗ ಮುಖಪುಟ ಲೇಖನಗಳು ಹಾಗೂ ಸಂಪಾದಕೀಯ ಲೇಖನಗಳನ್ನೂ ಆನಂದ ಬರೆಯುತ್ತಿದ್ದರು.  

ಐವತ್ತರ ದಶಕದಲ್ಲಿ ಸ್ವತಃ ವಿಷ್ಣುನಾಯ್ಕರ ಜೀವನದಲ್ಲೇ ಆನಂದರು ನೆರವಾದ ಬಗೆ ವಿಶಿಷ್ಟವಾದುದು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮದರ್ಜೆ ಪಡೆದು ಕಾಲೇಜು ಸೇರಲು ಹಣವಿಲ್ಲದೆ ಅಳುತ್ತಾ ನಿಂತಿದ್ದ ಹದಿಹರೆಯದ ವಿಷ್ಣುನಾಯ್ಕ ಎಂಬ ಹುಡುಗನ ಬಡತನದ ಕಷ್ಟ ದಿನಕರ ದೇಸಾಯಿ, ಆನಂದರಿಗೂ ತಲುಪಿತು. ಆನಂದ ಹಾಗೂ ನಾಡಕರ್ಣಿ ‘ಜನಸೇವಕ’ ಕಛೇರಿಯಲ್ಲಿ ಒಂದು ದೇಣಿಗೆ ರಿಜಿಸ್ಟರ್ ಇಟ್ಟರು. ಕಛೇರಿಗೆ ಬಂದವರು ಈ ಹುಡುಗನಿಗೆ ತಮ್ಮ ಕೈಲಾದ ದೇಣಿಗೆ ಕೊಟ್ಟು ಓದಲು ನೆರವಾದರು. ಮುಂದೆ ಉತ್ತರ ಕನ್ನಡದ ದೊಡ್ಡ ವ್ಯಕ್ತಿತ್ವವಾಗಿ, ಕವಿಯಾಗಿ ಬೆಳೆದ ವಿಷ್ಣುನಾಯ್ಕರ ಹದಿಹರೆಯದಲ್ಲಿ ಆನಂದರು ನೆರವಾದ ರೀತಿಯೂ ದಾಖಲಾಗಬೇಕಾಗುತ್ತದೆ. 

ತಮ್ಮ ಐವತ್ತು ವರ್ಷಗಳ ಅಂಕೋಲೆಯ ನಂಟಿನಲ್ಲಿ ಆನಂದ ತಮ್ಮ ಓದುಗಓದುಗಿಯರನ್ನು ರೈತಪರವಾಗಿ, ಕಾರ್ಮಿಕರ ಪರವಾಗಿ ಬೆಳೆಸಿದರು. ರೈತ ಕಾರ್ಮಿಕರ ಮನೆಮನೆಗೆ ಹೋಗಿ ಸಂಘಟಿಸಿದರು. ಅಂಕೋಲ ತಾಲೂಕು ೧೯೬೦ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾಜವಾದಿಗಳ ಆಡಳಿತಕ್ಕೆ ಒಳಪಟ್ಟಿದ್ದರ ಹಿನ್ನೆಲೆಯಲ್ಲಿ ಆನಂದರ ಶ್ರಮ ಇದ್ದದ್ದನ್ನೂ ವಿಷ್ಣುನಾಯ್ಕ ನೆನೆಯುತ್ತಾರೆ. ೧೯೬೭ರಲ್ಲಿ ದಿನಕರ ದೇಸಾಯಿ ಪ್ರಜಾಸಮಾಜವಾದಿ ಪಕ್ಷದ ಬೆಂಬಲ ಪಡೆದು ಲೋಕಸಭಾ ಚುನಾವಣೆ ಗೆದ್ದ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಿಂದ ಐದು ಜನ ಪ್ರಜಾ ಸಮಾಜವಾದಿ ಪಕ್ಷದ ಶಾಸಕರು ಗೆದ್ದದ್ದರ ಹಿನ್ನೆಲೆಯಲ್ಲಿ ದಿನಕರ ದೇಸಾಯಿ, ನಾಡಕರ್ಣಿ, ಟಿ.ಕೆ. ಮಹಮೂದ್, ಶಂಕರ ಕೇಣಿಯವರು ರೂಪಿಸಿದ ರಾಜಕೀಯ ಕಾರ್ಯತಂತ್ರದಲ್ಲಿ ಅಮ್ಮೆಂಬಳ ಆನಂದರ ಕೊಡುಗೆಯೂ ಮುಖ್ಯವಾಗಿತ್ತು. 

ಆನಂದರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ತಮ್ಮ ಕಣ್ಣಿಗೆ ಅಕಸ್ಮಾತ್ ಬಿದ್ದ ಮಂಗಳೂರಿನ ಬಿಜೈನ ಹುಡುಗ ಜಾರ್ಜ್ ಫರ್ನಾಂಡಿಸರನ್ನು ಸಮಾಜವಾದಿ ಪಕ್ಷದ ಕಚೇರಿಗೆ ಕರೆದೊಯ್ದರು. ಜಾರ್ಜ್ ಮುಂದೆ ದೇಶದ ದೊಡ್ಡ ಕಾರ್ಮಿಕ ನಾಯಕರಾಗಿ, ಸಮಾಜವಾದಿ ನಾಯಕರಾಗಿ ಬೆಳೆದರು. ಆನಂದರಿಗಿಂತ ಮೂರು ವರ್ಷ ಕಿರಿಯರಾಗಿದ್ದ ಜಾರ್ಜ್ ಹಾಗೂ ಆನಂದ ಒಟ್ಟಿಗೇ ಓದಿದವರು, ಕೆಲವು ಹೋರಾಟಗಳಲ್ಲಿ ಒಟ್ಟಿಗೇ ಭಾಗಿಯಾದವರು ಎಂಬುದನ್ನು ನೆನೆಯುತ್ತಾ ವಿಷ್ಣುನಾಯ್ಕರು ಈ ಇಬ್ಬರ ಭೇಟಿಯ ಪ್ರಸಂಗವೊಂದನ್ನು ಉಲ್ಲೇಖಿಸುತ್ತಾರೆ: ತೊಂಬತ್ತರ ದಶಕದ ಆರಂಭದಲ್ಲಿ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಕಾರವಾರದಲ್ಲಿ ಆರಂಭವಾಗಲಿದ್ದ ನೌಕಾಪಡೆಯ ಅಡಿಗಲ್ಲು ಸಮಾರಂಭಕ್ಕೆ ಬಂದಿದ್ದರು. ಅಲ್ಲಿ ಆನಂದರನ್ನು ಕಂಡ ಜಾರ್ಜ್ ‘ಆನಂದ್, ನೀವಿಲ್ಲಿ!’ ಎನ್ನುತ್ತಾ ಅಭಿಮಾನದಿಂದ ಅಪ್ಪಿಕೊಂಡರು.

ಜೀವಮಾನದುದ್ದಕ್ಕೂ ಸಮಾಜವಾದಿಯಾಗಿಯೇ ಉಳಿದಿರುವ ಅಮ್ಮೆಂಬಳ ಆನಂದರಿಗೆ ಮುಂದೆ ಜಾರ್ಜ್ ಫರ್ನಾಂಡಿಸ್ ಸಮಾಜವಾದದ ಹಾದಿ ಬಿಟ್ಟು ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದನ್ನು ಕಂಡು ಏನೆನ್ನಿಸಿತೋ, ಏನೋ.  ಜಾರ್ಜರ ಪತನ ಕಂಡು ದೇಶದ ಹಲವಾರು ಸಮಾಜವಾದಿಗಳಿಗೆ, ಪ್ರಗತಿಪರರಿಗೆ ಆದಂತೆ ಆನಂದರಿಗೂ   ದಿಗ್ಭ್ರಮೆಯಾಗಿರಬಹುದು. ಈ ಮಾತು ಬರೆಯುತ್ತಿರುವಾಗ, ಚರಿತ್ರೆಯ ಚಕ್ರದ ಈಚಿನ ಉರುಳುವಿಕೆಯಲ್ಲಿ ಒಂದು ಅಂಶ ನನ್ನಂಥವರಿಗೆ ಎದ್ದು ಕಾಣುತ್ತದೆ: 

ಜಾರ್ಜ್ ಫರ್ನಾಂಡಿಸ್ ಪಕ್ಷದಿಂದ ಪಕ್ಷಕ್ಕೆ ಸಾಗುತ್ತಾ, ಚುನಾವಣೆ ಗೆಲ್ಲುತ್ತಾ, ಸೋಲುತ್ತಾ ಮಂತ್ರಿಗಿರಿಯ ಸವಲತ್ತುಗಳನ್ನು ಅನುಭವಿಸುತ್ತಾ ಬದುಕಿದ್ದರೂ ಕೊನೆಗೆ ಅವರ ಹೋರಾಟಗಾರ ವ್ಯಕ್ತಿತ್ವ ಪತನಗೊಂಡಿತು. ಆದರೆ ಯಾವ ಅಧಿಕಾರಕ್ಕೂ ಕೈಚಾಚದೆ, ಸ್ವಂತ ಹಾಗೂ ಸಾರ್ವಜನಿಕ ಬದುಕಿನಲ್ಲಿ ಶುಭ್ರತೆ, ಘನತೆಗಳನ್ನು ಉಳಿಸಿಕೊಂಡ ಅಮ್ಮೆಂಬಳ ಆನಂದ ನೂರಕ್ಕೆ ಅಡಿಯಿಟ್ಟು ಈ ನೆಲದಲ್ಲಿ ಇನ್ನೂ ಏನಾದರೂ ಹೊಸತು ಹುಟ್ಟಬಹುದು ಎಂದು ಸೂಚಿಸುವಂತೆ ಅಂಕೋಲದಲ್ಲಿ ಗಿಡವೊಂದಕ್ಕೆ ನೀರೆರೆಯುತ್ತಿದ್ದಾರೆ. ವ್ಯಕ್ತಿಯ ಬದುಕಿನಲ್ಲಿ ಕೊನೆಗೂ ಉಳಿಯುವುದು ವ್ಯಕ್ತಿತ್ವದ ಶುಭ್ರತೆ ಹಾಗೂ ವ್ಯಕ್ತಿತ್ವದ ಸಮಗ್ರತೆಗಳೇ ಎಂಬುದನ್ನು ನೆನಪಿಸುತ್ತಿದ್ದಾರೆ.  

ಅಮ್ಮೆಂಬಳ ಆನಂದರ ವ್ಯಕ್ತಿತ್ವದ ಶುಭ್ರತೆ ಕುರಿತು ಬರೆಯುವ ಹೊತ್ತಿಗೆ ಮತ್ತೆ ಕಣ್ಣಿಗೆ ಬಿದ್ದ ಗಾಂಧೀ-ಲೋಹಿಯಾ ಮಾತುಕತೆ ಈ ವ್ಯಕ್ತಿತ್ವದ ಶುಭ್ರತೆಯ ಮಾತನ್ನು ವಿಸ್ತರಿಸುವಂತೆ ಕಂಡಿತು. ಲೋಹಿಯಾ ದಾಖಲಿಸಿರುವ ಆ ಮಾತುಕತೆಯ ಭಾಗ:

ಒಮ್ಮೆ ಗಾಂಧೀಜಿ ಲೋಹಿಯಾರನ್ನು ‘ಧೈರ್ಯಶಾಲಿ' ಎನ್ನುತ್ತಾ, ‘ನಿಮ್ಮ ಬಳಗದಲ್ಲಿ ಇನ್ನೂ ಧೈರ್ಯಶಾಲಿಗಳಿರಬಹುದು’ ಎಂದರು. ಬಳಿಕ, ‘ಧೈರ್ಯಶಾಲಿ' ಎಂಬ ಪರಿಕಲ್ಪನೆಯ ಬಗೆಗೇ ನಗುತ್ತಾ, ‘ಹುಲಿಯೂ ಧೈರ್ಯಶಾಲಿ ಎನಿಸಿಕೊಂಡಿರುತ್ತದಲ್ಲ!' ಎಂದರು. ‘ನಿಮ್ಮ ಬಳಗದಲ್ಲಿ ನಿಮಗಿಂತಲೂ ಹೆಚ್ಚಿಗೆ ಕಲಿತವರಿರಬಹುದು' ಎಂದವರೇ, ‘ವಕೀಲರೂ ಕಲಿತಿರುತ್ತಾರಲ್ಲ!' ಎಂದು ಒಟ್ಟು ಕಲಿಕೆಯ ಪರಿಕಲ್ಪನೆಯ ಬಗೆಗೇ ನಕ್ಕರು. ನಂತರ, ‘ಆದರೆ ನಿಮ್ಮಲ್ಲಿರುವಂತೆ ಕ್ಯಾರಕ್ಟರ್ ಅಥವಾ ವ್ಯಕ್ತಿ ಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಬರುವ ಸಾಮರ್ಥ್ಯ ನಿಮ್ಮ ಬಳಗದ ಬೇರೆಯವರಲ್ಲಿ ಸಿಗಲಾರದು' ಎಂದರು.

ಗಾಂಧೀ ನಿರ್ಗಮನದ ನಂತರ ಈ ಮಾತನ್ನು ನೆನೆಯುವ ಲೋಹಿಯಾಗೆ ಹೀಗೆನ್ನಿಸಿತು: ‘ನನ್ನ ಬಗೆಗಿನ ಪ್ರೀತಿ ಹಾಗೂ ನನ್ನ ಬಗೆಗೆ ಪೂರ್ಣ ಮಾಹಿತಿಯಿಲ್ಲದ ಕಾರಣ ಅವರು ನನ್ನ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರಲೂಬಹುದು. ಆದರೆ ಅವರು ಹೇಳಿದ್ದು ಸತ್ಯವೇ ಆಗಿದ್ದರೆ ನನಗಂತೂ ನಿಜಕ್ಕೂ ಸಂತೋಷವೇ. ಅಂದರೆ, ಧೈರ್ಯವಲ್ಲ; ಜ್ಞಾನವೂ ಅಲ್ಲ; ಬದಲಿಗೆ, ವ್ಯಕ್ತಿ ಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ಒಂದು ದೊಡ್ಡ ಮಾನವ ಗುಣ ಎಂಬುದು ಗಾಂಧೀಜಿಯ ನಿಲುವಾಗಿತ್ತು.'   

ವ್ಯಕ್ತಿಯ ಕ್ಯಾರಕ್ಟರ್ ಅಥವಾ ವ್ಯಕ್ತಿಚಾರಿತ್ರ್ಯ ಕುರಿತ ಲೋಹಿಯಾ-ಗಾಂಧಿ ಸಂವಾದವನ್ನು ದಾಖಲಿಸುತ್ತಿರುವಾಗ ಲೋಹಿಯಾರ ಸಂಗಾತಿ ಜಾರ್ಜ್ ಮತ್ತೆ ನೆನಪಾಗುತ್ತಾರೆ. ಒಂದು ಕಾಲಕ್ಕೆ ಇಡೀ ಮುಂಬೈ ಸ್ತಬ್ದವಾಗುವಂಥ ಕಾರ್ಮಿಕ ಚಳುವಳಿ ನಡೆಸಿದ್ದ ಜಾರ್ಜ್ ದೇಶದ ದೊಡ್ಡ ನಾಯಕರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದೇ ಲೋಕಸಭಾ ಚುನಾವಣೆಯಲ್ಲಿ ಅದ್ಭುತವಾಗಿ ಗೆದ್ದವರು. ದೇಶದ ಲಕ್ಷಾಂತರ ಕಾರ್ಮಿಕರು ಅವರ ಹೋರಾಟದ ಫಲ ಪಡೆದಿದ್ದಾರೆ. ಹಲವು ಖಾತೆಗಳ ಸಚಿವರಾಗಿ ಜಾರ್ಜ್ ಜನಪರ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರಕ್ಕಾಗಿ ಕೊನೆಯ ಘಟ್ಟದ ರಾಜಿ ಮತ್ತು ಪತನ ಅವರ ಇತರ ಎಲ್ಲ ಸಾಧನೆಗಳನ್ನು ಮಣ್ಣಾಗಿಸಿದ್ದು ದುಗುಡ ಹುಟ್ಟಿಸುತ್ತದೆ. ಇಂಥ ದುಗುಡ ಜಾರ್ಜರನ್ನು ಹತ್ತಿರದಿಂದ ಬಲ್ಲ ಅಮ್ಮೆಂಬಳ ಆನಂದರಂಥವರಲ್ಲಿ ಇನ್ನೂ ಆಳವಾಗಿ ಮುತ್ತಿರುತ್ತದೆ.

ಆದರೆ ತಮ್ಮ ಬದುಕಿನ ಕೊನೆಯ ಒಂಬತ್ತು ವರ್ಷ ಆಲ್ಜೀಮರ್‍ಸ್ ಹಾಗೂ ಪಾರ್ಕಿನ್‌ಸನ್ಸ್ ಕಾಯಿಲೆಗಳಿಗೆ ತುತ್ತಾಗಿದ್ದ ಜಾರ್ಜ್‌ಗೆ  ವ್ಯಕ್ತಿಚಾರಿತ್ರ್ಯ ಮತ್ತು ಅಧಿಕಾರ ಕುರಿತು ನಿಜಕ್ಕೂ ಏನೆನ್ನಿಸಿತ್ತೋ, ಕೊನೆಗೂ ಯಾರಿಗೂ ತಿಳಿಯಲಿಲ್ಲ.

blog
13 Sep 2026 9/11 : ಮರುಕಳಿಸಿದ ಸಂಕೇತ  

ಸಂಕೇತಗಳು ಸೃಷ್ಟಿಯಾಗುವ ರೀತಿ ಹಾಗೂ ಸಂಕೇತಗಳನ್ನು ಸಂದರ್ಭ, ಸಮುದಾಯ, ಕಾಲ, ದೇಶ, ಗುಂಪುಗಳು ಸೃಷ್ಟಿಸುವ ರೀತಿ ಈಗ ಎಲ್ಲರಿಗೂ ಪರಿಚಿತ. ವಿದ್ಯಮಾನಗಳು ಕೂಡ ಸಂಕೇತಗಳನ್ನು ಸೃಷ್ಟಿಸುತ್ತವೆ. ಅನೇಕ ಸಲ ಈ ಸಂಕೇತಗಳ ಅರ್ಥ ಒಂದೇ ರೂಪದ್ದಾಗಿರುವುದಿಲ್ಲ. ಸಂಕೇತ, ರೂಪಕಗಳ ವಿದ್ಯಾರ್ಥಿಯಾದ ಈ ಅಂಕಣಕಾರನಿಗೆ ಈ ಥರದ ವಿದ್ಯಮಾನಗಳು ಸಾಂಸ್ಕೃತಿಕ-ರಾಜಕೀಯ ಅಧ್ಯಯನಗಳಿಗೆ ಹೊಸ ಹೊಳಹುಗಳನ್ನು ಕೊಡುತ್ತಿರುತ್ತವೆ. ಇಂಥದೊಂದು ಸಂಕೇತ ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ಸೆಪ್ಟೆಂಬರ್ ೧೧ನೆಯ ತಾರೀಕು ಮತ್ತೆ ಎದುರಾಯಿತು. 

ಅವತ್ತು ಜಗತ್ತಿನ ಸುದ್ದಿಜಾಲಗಳಲ್ಲಿ ೯/೧೧ ಎಂಬ ಶೀರ್ಷಿಕೆ ಮತ್ತೆ ಮತ್ತೆ ಕಾಣತೊಡಗಿತು. ಈಚಿನ ದಶಕಗಳಲ್ಲಿ ಜಗತ್ತಿನ ನೆನಪಿನಲ್ಲಿ ಕಾಯಮ್ಮಾಗಿ ಉಳಿದಿರುವ ೯/೧೧ ಎಂಬ ಸಂಕೇತ ಜಗತ್ತಿನ ಮಾಧ್ಯಮಗಳಲ್ಲಿ ಇದೀಗ ಮತ್ತೆ ಎದ್ದು ಕಾಣಲು ಕಾರಣವಿತ್ತು: ಈ ಸಾಂಕೇತಿಕ ದಿನಾಂಕದ ಹುಟ್ಟಿಗೆ ಕಾರಣವಾದ ಭಯಾನಕ ಘಟನೆಗಳು ನಡೆದು ಇದೇ ಸೆಪ್ಟೆಂಬರ್ ೧೧ಕ್ಕೆ ಇಪ್ಪತ್ತೈದು ವರ್ಷವಾಯಿತು.  
ಇಪ್ಪತ್ತೈದು ವರ್ಷಗಳ ಕೆಳಗೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲೆ ನಡೆದ ದಾಳಿ ನಿಮಗೆ ನೆನಪಿರಬಹುದು. ಅವತ್ತು ಇದು ಅತಿಭೀಕರ ಭಯೋತ್ಪಾದನೆಯೆಂದು ಅಮೆರಿಕ ಹಾಗೂ ಯೂರೋಪು ಬಣ್ಣಿಸಿದರೆ, ಅಮೆರಿಕವನ್ನು ಕಂಡರಾಗದವರು ಇದು ಅಮೆರಿಕದ ಭಯೋತ್ಪಾದನೆಗೆ ಆದ ಗರ್ವಭಂಗ ಎಂದರು. ಒಬ್ಬನ ಪಾಲಿಗೆ ಭಯೋತ್ಪಾದಕನಾದವನು ಮತ್ತೊಬ್ಬನ ಪಾಲಿಗೆ ಸ್ವಾತಂತ್ರ್ಯ ಹೋರಾಟಗಾರನಾಗುವ ರೀತಿ ಈ ವಿದ್ಯಮಾನಕ್ಕೆ ಬಂದ ಪ್ರತಿಕ್ರಿಯೆಯಲ್ಲೂ ಕಾಣುತ್ತಿತ್ತು! ಈ ಹಿನ್ನೆಲೆಯಲ್ಲಿ, ೯/೧೧ ಎಂಬ ಸಂಕೇತ ಜಗತ್ತಿನ ವಿವಿಧ ಭಾಗಗಳಲ್ಲಿ, ವಿವಿಧ ಧರ್ಮಗಳು, ಪಂಥಗಳ ಅನುಯಾಯಿಗಳಲ್ಲಿ ಯಾವ ಯಾವ ಯಾವ ಅರ್ಥ ಹುಟ್ಟಿಸುತ್ತಾ ಬಂದಿದೆ ಎಂಬುದನ್ನು ಊಹಿಸಬಹುದು.

೨೦೦೧ನೆಯ ಇಸವಿಯ ೯/೧೧ ದಿನವನ್ನು ಅಮೆರಿಕನ್ ಚರಿತ್ರೆಯ ಭೀಕರ ದಿನವೆಂದು ಮತ್ತೆ ಮತ್ತೆ ನೆನೆಯುತ್ತಿದ್ದ ಅಮೆರಿಕಕ್ಕೆ, ಅದಕ್ಕಿಂತ ಇಪ್ಪತ್ತೆಂಟು ವರ್ಷಗಳ ಕೆಳಗೆ ಹುಟ್ಟಿದ್ದ ೯/೧೧ ಸಂಕೇತವನ್ನೂ ಖ್ಯಾತ ಚಿಂತಕ ನೋಮ್ ಚಾಮ್‌ಸ್ಕಿ ಒಮ್ಮೆ ನೆನಪಿಸಿದರು. ‘ಫಸ್ಟ್ ೯/೧೧’ ಎನ್ನಲಾಗುವ ಈ ಸಂಕೇತ ಲ್ಯಾಟಿನ್ ಅಮೆರಿಕದ ಚಿಲಿಯಲ್ಲಿ ಸೃಷ್ಟಿಯಾಗಲು ಅಮೆರಿಕದ ಹುನ್ನಾರ ಕಾರಣವಾಗಿತ್ತು. 

೯. ೧೧. ೧೯೭೩. ಅವತ್ತು ಚಿಲಿ ದೇಶದಲ್ಲಿ ಒಂದು ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆಯಿತು.  ಚಿಲಿಯ ರಾಷ್ಟ್ರಾಧ್ಯಕ್ಷ ಸಾಲ್ವಡಾರ್‍ ಅಯಂಡೆಯ ಬದುಕಿನ ಕೊನೆಯಾಯಿತು. ‘ಪಾಪ್ಯುಲರ್‍ ಸೋಷಲಿಸ್ಟ್ ಪಾರ್ಟಿ’ಯ ನಾಯಕ ಅಯಂಡೆ ಚಿಲಿಯಲ್ಲಿ ಜನರಿಂದ ಚುನಾಯಿತನಾದ ಪ್ರಥಮ ಮಾರ್ಕ್ಸಿಸ್ಟ್ ಅಧ್ಯಕ್ಷನಾಗಿದ್ದ. ‌ಅವತ್ತಿನ ಮಿಲಿಟರಿ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ಅಮೆರಿಕದ ಕೈವಾಡವಿತ್ತು ಎಂಬುದು ಈಗ ಜನಜನಿತವಾಗಿದೆ. ಅಯಂಡೆಯ ಸಾವು ಆತ್ಮಹತ್ಯೆಯೋ, ಹತ್ಯೆಯೋ ಎಂಬುದು ವಿವಾದಾಸ್ಪದವಾಗಿಯೇ ಉಳಿದಿದೆ. ಅಮೆರಿಕನ್ ಕೈವಾಡ ಮಿಲಿಟರಿ ಸರ್ವಾಧಿಕಾರಿ ಆಗಸ್ಟೊ ಪೀನೋಶೆಯನ್ನು ಚಿಲಿಯ ಆಡಳಿತದಲ್ಲಿ ತಂದು ಕೂರಿಸಿತು. 

ಸವಾಧಿಕಾರಿ ಪೀನೋಶೆ ಚಿಲಿಯಲ್ಲಿ ನಾಗರಿಕ ಹಕ್ಕುಗಳ ಹರಣದ ಬರ್ಬರ ಹಿಂಸಾಸರಣಿಯನ್ನೇ ಶುರು ಮಾಡಿದ. ಸರ್ವಾಧಿಕಾರ ಹೊಸ ಹೊಸ ಹಿಂಸೆಗಳನ್ನು ಸೃಷ್ಟಿಸುವ ರೀತಿಯನ್ನು ಚರಿತ್ರೆ ಮತ್ತೊಮ್ಮೆ ಕಂಡಿತು. ಪ್ರಜಾಪ್ರಭುತ್ವ ಮಾರ್ಗದಲ್ಲಿ ಚುನಾಯಿತನಾಗಿದ್ದ ಕಮ್ಯುನಿಸ್ಟ್ ಅಧ್ಯಕ್ಷನನ್ನು ಕೆಳಗಿಳಿಸಿ ಜನಕಂಟಕ ಸರ್ವಾಧಿಕಾರಿಯನ್ನು ಪ್ರತಿಷ್ಠಾಪಿಸಿದ ಅಮೆರಿಕದ ಪಾಪಕೃತ್ಯದ ಫಲವಾಗಿ ಫಸ್ಟ್ ೯/೧೧ ‌ಎಂಬ ದಿನ ಲ್ಯಾಟಿನ್ ಅಮೆರಿಕದಲ್ಲಿ ಭೀಕರ ನೆನಪಾಗಿ ದಾಖಲಾಯಿತು. ಚಿಲಿಯ ಜನಮಾನಸದಲ್ಲಿ ಉಳಿದಿರುವ ಈ ೯/೧೧ರ ಸಂಕೇತವನ್ನು ಮರೆತಂತಿದ್ದ ಅಮೆರಿಕವನ್ನು ಇಪ್ಪತ್ತೆಂಟು ವರ್ಷದ ನಂತರ ಮತ್ತೊಂದು ೯/೧೧ ಬೆಚ್ಚಿ ಬೀಳಿಸಿತು.

ಇಪ್ಪತ್ತೈದು ವರ್ಷಗಳ ಕೆಳಗೆ ಜಗತ್ತನ್ನು ಅಲುಗಾಡಿಸಿದ್ದ ೯/೧೧ ದಿನದ ಘಟನೆಯ ವಿವರಗಳನ್ನು ನೆನಪಿಸಿಕೊಳ್ಳಿ: 

೨೦೦೧ನೇ ಇಸವಿಯ ಸೆಪ್ಟೆಂಬರ್ ೧೧ರ ಬೆಳಗ್ಗೆ ಅಲ್ ಖೈದಾ ಸಂಘಟನೆಯ ತಂಡ ಎರಡು ವಿಮಾನಗಳನ್ನು ಹೈಜಾಕ್ ಮಾಡಿ ಅಮೆರಿಕದ ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರಿನ ಉತ್ತರ ಟವರ್ ಹಾಗೂ ದಕ್ಷಿಣ ಟವರ್ ಕಡೆಗೆ ನುಗ್ಗಿಸಿತು. ಮೂರನೆಯ ವಿಮಾನವನ್ನು ವಾಶಿಂಗ್ಟನ್‌ನ ಪೆಂಟಗನ್ ಕಡೆಗೆ ನುಗ್ಗಿಸಲಾಯಿತು. ಅಮೆರಿಕದ ಪಾರ್ಲಿಮೆಂಟ್ ವೈಟ್‌ಹೌಸ್ ಕಡೆಗೆ ನುಗ್ಗಲು ಹೊರಟಿತ್ತೆಂದು ಊಹಿಸಲಾದ ನಾಲ್ಕನೆಯ ವಿಮಾನದ ದಿಕ್ಕನ್ನು ಆ ವಿಮಾನದ ಪ್ರಯಾಣಿಕರೇ ಧೀರೋದಾತ್ತವಾಗಿ ಮುನ್ನುಗ್ಗಿ ಬದಲಿಸಿದ್ದರು. ಈ ಪ್ರಯಾಣಿಕರು ತಮ್ಮ ಕೈಗೆ ಸಿಕ್ಕ ಫುಡ್ ಟ್ರಾಲಿ, ಬೆಂಕಿ ನಂದಿಸುವ ಸಿಲಿಂಡರ್, ಕುದಿವ ನೀರಿನ ಪಾತ್ರೆ ಇತ್ಯಾದಿಗಳನ್ನು ಹಿಡಿದುಕೊಂಡು ಪೈಲಟ್ ಕೂರುವ ಕಾಕ್‌ಪಿಟ್ ಕಡೆಗೆ ನುಗ್ಗಿದರು. ಹೈಜಾಕರ್-ಪೈಲಟ್ ವಿಮಾನವನ್ನು ಬೇರೆ ದಿಕ್ಕಿಗೆ ನುಗ್ಗಿಸಿದ. ವಿಮಾನ ಪೆನ್ಸಿಲ್ವೇನಿಯಾದ ಬಯಲಿಗೆ ಅಪ್ಪಳಿಸಿತು.  

ವಿಮಾನದಲ್ಲಿದ್ದ ಯಾರೊಬ್ಬರೂ ಬದುಕಿ ಉಳಿಯಲಿಲ್ಲ. ಕಂಟ್ರೋಲ್ ರೂಮಿನ ಸಂಭಾಷಣೆಯ ದಾಖಲೆಗಳು, ವಾಯ್ಸ್ ರೆಕಾರ್ಡರುಗಳು, ಟೆಲಿಫೋನ್ ಕರೆಗಳ ಆಧಾರದ ಮೇಲೆ ವಿಮಾನದ ಪ್ರಯಾಣಿಕರ ಬದುಕಿನ ಕೊನೆಗಳಿಗೆಯ ಧೀರೋದಾತ್ತ ಸಾಹಸ ಅನಂತರ ಲೋಕಕ್ಕೆ ಗೊತ್ತಾಯಿತು. ಈ ಪ್ರಯಾಣಿಕರನ್ನು ನೆನೆಯುವ ರಾಷ್ಟ್ರೀಯ ಸ್ಮಾರಕ ಪೆನ್ಸಿಲ್ವೇನಿಯಾದ ಸ್ಟೋನಿಕ್ರೀಕ್ ಟೌನ್‌ಶಿಪ್ ನಲ್ಲಿದೆ. 

ಈ ದಾಳಿಯನ್ನು ರೂಪಿಸಿದ ಒಸಾಮ ಬಿನ್ ಲ್ಯಾಡನ್, ‘ಇನ್ನು ಮುಂದೆ ಅಮೆರಿಕ ಸದಾ ಸಣ್ಣಪುಟ್ಟ ಯುದ್ಧದಲ್ಲಿ ತೊಡಗುವಂತೆ ಮಾಡುವ ಮೂಲಕ ಅದರ ಆರ್ಥಿಕತೆಯನ್ನು ಭಗ್ನಗೊಳಿಸುವ ಯತ್ನವಿದು’ ಎಂದಿದ್ದ. ಜಗತ್ತಿನ ಅತ್ಯಂತ ತೀಕ್ಷ್ಣವಾದ ಇಂಟೆಲೆಜೆನ್ಸ್ ಸರ್ವಿಸ್ ಎನ್ನಲಾದ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್.ಬಿ.ಐ.) ಈ ಮಟ್ಟದ ಅಪಾಯವನ್ನು ನಿರೀಕ್ಷಿಸಿರಲಿಲ್ಲ. ಒಸಾಮಾಗಾಗಿ ಅಮೆರಿಕ ಮುಂದಿನ ಹತ್ತು ವರ್ಷ ಹುಡುಕುತ್ತಲೇ ಇತ್ತು. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನದ ಎಲ್ಲೆಯೊಳಕ್ಕೆ ಪ್ರವೇಶಿಸಿದ ಅಮೆರಿಕನ್ ಗುಪ್ತ ಪಡೆ ಮೇ ೨೦೧೧ರ ಸಂಜೆ ಅಲ್ಲಿನ ಅಬ್ಬೊತ್ತಾಬಾದಿನ ಮನೆಯಲ್ಲಿದ್ದ ಒಸಾಮನನ್ನು ಹತ್ಯೆ ಮಾಡಿತು. 

೯/೧೧ರ ಪರಿಣಾಮಗಳನ್ನು ಹಾಗೂ ಬಿನ್ ಲ್ಯಾಡನ್ ಹತ್ಯೆಯನ್ನು ಅಮೆರಿಕ ದಕ್ಕಿಸಿಕೊಂಡಿದೆಯೋ ಅಥವಾ ಬಿನ್ ಲ್ಯಾಡನ್ ಮಾಡಿದ್ದ ಊಹೆಯಂತೆ ತನ್ನ ಸೂಪರ್ ಪವರ್ ಇಮೇಜನ್ನು ಉಳಿಸಿಕೊಳ್ಳಲು ಹಲವು ಯುದ್ಧಗಳಿಗೆ ಸಿಕ್ಕಿಕೊಂಡು ತನ್ನ ಆರ್ಥಿಕ ಬಿಕ್ಕಟ್ಟು-ಸಂಕಟಗಳನ್ನು ಹೆಚ್ಚಿಸಿಕೊಳ್ಳುತ್ತಿದೆಯೋ? ಇಂಥ ಗಂಭೀರ ಪ್ರಶ್ನೆಗಳನ್ನು  ಅಂತರ ರಾಷ್ಟ್ರೀಯ ವಿದ್ಯಮಾನಗಳ ವಸ್ತುನಿಷ್ಠ ತಜ್ಞರಷ್ಟೇ ಉತ್ತರಿಸಬಲ್ಲರು. ಲ್ಯಾಡನ್ ಹತ್ಯೆಯ ನಂತರ, ೧೩ ಮೇ ೨೦೧೩ರಂದು ಅಮೆರಿಕದ ಅಧ್ಯಕ್ಷ ಒಬಾಮ ‘ಟೆರರಿಸಂ ವಿರುದ್ಧ ಯುದ್ಧ ಮುಗಿಯಿತು’ ಎಂದು ಘೋಷಿಸಿದ್ದೂ ಆಯಿತು. ೯/೧೧ರ ಘಟನೆಯಿಂದ ನೊಂದ ಅಮೆರಿಕನ್ನರು ಈ ಘೋಷಣೆಯನ್ನು ಬೆಂಬಲಿಸಿದರೂ, ಅಮೆರಿಕ ಆ ಹಾದಿ ಬಿಟ್ಟು ಹೊರಳಲಿಲ್ಲ.  ಲೋಕದ ಎಲ್ಲ ಬಗೆಯ ಶಸ್ತ್ರಾಸ್ತ್ರಗಳ ಹಿಂಸಾಸರಣಿಯ ಜುಟ್ಟು ಈಗ ದೇಶಗಳ ಕೈಯಲ್ಲಿಲ್ಲ; ಅದು ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯ ಕೈಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಇಂಥ ಲೋಕದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್‍ ಪತನದ ನಡುವೆಯೂ  ಬದುಕುಳಿದ ‘ದ ಡಸ್ಟ್ ಲೇಡಿ’ ಎಂದೇ ಹೆಸರಾದ ಮಾಸೀ ಬಾರ್ಡರ್‍ಸ್ ದನಿಯನ್ನು ಯಾರು ತಾನೇ ಕೇಳಿಸಿಕೊಳ್ಳುತ್ತಾರೆ?

೨೦೦೧ರ ಘಟನೆ ನಡೆದು ಇಪ್ಪತ್ತೈದು ವರ್ಷಗಳಾಗಿದ್ದರಿಂದ ಈ ವರ್ಷದ ಸೆಪ್ಟೆಂಬರ್ ೧೧ರಂದು ಇದನ್ನೊಂದು ‘ಲೀಡ್ ಸ್ಟೋರಿ’ ಮಾಡಲು ಜಗತ್ತಿನ ಮಾಧ್ಯಮಗಳು ಸಿದ್ಧತೆ ಮಾಡಿಕೊಂಡಿದ್ದವು; ಅವಲೋಕನ, ಸಂದರ್ಶನ, ಸ್ಪೆಷಲ್ ಸ್ಟೋರಿಗಳ ಪ್ರಸಾರಗಳನ್ನು ಶುರು ಮಾಡಲು ಹೊರಟಿದ್ದವು. ಆದರೆ ಅವತ್ತೇ ೯/೧೧ರ ಸಂಕೇತವನ್ನು ಹಿಮ್ಮೆಟ್ಟಿಸಿ ಮತ್ತೊಂದು ಸಂಕೇತವನ್ನು ಸ್ಥಾಪಿಸುವ ರೀತಿಯಲ್ಲಿ ಇರಾನ್ ಬೆಂಬಲಿತ ‘ಹೂಥಿ’ಗಳು ಯಮನ್ ಮೇಲೆ ಹಿಡಿತ ಸಾಧಿಸಲೆತ್ನಿಸಿದರು. ಈ ಹೂಥಿ ಆಕ್ರಮಣ ಈ ವರ್ಷದ ಸೆಪ್ಟೆಂಬರ್ ೧೧ರಂದೇ ಪೂರ್ಣಗೊಂಡಿದ್ದು ಪೂರ್ವಯೋಜಿತವೋ, ಆಕಸ್ಮಿಕವೋ ಊಹಿಸುವುದು ಕಷ್ಟ. ಆದರೂ ಈ  ಹೂಥಿ ದಾಳಿ ಇಪ್ಪತ್ತೈದು ವರ್ಷಗಳ ಹಿಂದಿನ ಸೆಪ್ಟೆಂಬರ್ ೧೧ರ ನೆನಪನ್ನು ಹಿಮ್ಮೆಟ್ಟಿಸಿ ಜಗತ್ತಿನ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ನಿಜ. ಇಪ್ಪತ್ತೈದು ವರ್ಷಗಳ ಹಿಂದಿನ ಒಸಾಮಾ ನಡೆಯನ್ನು ಅಮೆರಿಕ ಹೇಗೆ ಊಹಿಸಿರಲಿಲ್ಲವೋ ಹಾಗೆಯೇ ಇವತ್ತು ಹೂಥಿಗಳ ಈ ನಡಿಗೆಯನ್ನೂ ಅಮೆರಿಕವೂ ಸೇರಿದಂತೆ ವಿವಿಧ ದೇಶಗಳ ಭದ್ರತಾ ಪಡೆಗಳು ಊಹಿಸಿದ್ದಂತೆ ಕಾಣುತ್ತಿಲ್ಲ.

ಪ್ರತಿ ವರ್ಷ ೯/೧೧ ಎಂಬ ಭೀಕರ ನೆನಪಿಗೆ ಮರಳುವ ಅಮೆರಿಕ ಆ ಭೀಕರ ಘಟನೆಯ ನಂತರವೂ ಕಾಲು ಕೆರೆದು ಯುದ್ಧಕ್ಕಿಳಿಯುವ ಚಾಳಿ ಬಿಟ್ಟಿಲ್ಲ. ಅಮೆರಿಕ, ಇಸ್ರೇಲ್ ಆರಂಭಿಸಿದ ಯುದ್ಧದ ಭಾಗವಾಗಿಯೇ ಈಗ ಇರಾನ್ ಬೆಂಬಲಿತ ಹೂಥಿ ಪಡೆಗಳ ಆಕ್ರಮಣ ನಡೆದಿರುವುದು ಸ್ಪಷ್ಟ. ಹೂಥಿಗಳು ಯಮನ್ ಬಳಿಯ ಕೆಂಪು ಸಮುದ್ರದ ಕರಾವಳಿಯ ಮೇಲೆ ಹಿಡಿತ ಸಾಧಿಸಿರುವುದರಿಂದ ಇರಾನಿನ ಕೈ ಮೇಲಾಗಲಿದೆ ಎಂದು ಕೆಲವರು ಹೇಳುತ್ತಿದ್ದರೆ, ಇದು ತಾತ್ಕಾಲಿಕ ಗೆಲುವು ಎನ್ನುವವರಿದ್ದಾರೆ. ತನ್ನ ದೇಶದ ಸಂರಕ್ಷಣೆಗಾಗಿ ಅಮೆರಿಕವನ್ನು ನಂಬಿಕೊಂಡಿದ್ದ ಸೌದಿ ಅರೇಬಿಯಾದ ಯುವರಾಜ ನೆರವಿಗಾಗಿ ಮಾಡುತ್ತಿರುವ ಮೊರೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಈತನಕ ಕಿವಿಗೊಟ್ಟಿಲ್ಲ! ನಿತ್ಯ ಬದಲಾಗುವ ಅಮೆರಿಕದ ಅಧ್ಯಕ್ಷೀಯ ವರಸೆಯ ಲೆಕ್ಕಾಚಾರಗಳೇ ಬೇರೆ. ಅಥವಾ ಮತ್ತೊಂದು ೯/೧೧ ಸಂಕೇತದ ದೀರ್ಘಕಾಲಿಕ ಅರ್ಥ ಅಮೆರಿಕಕ್ಕೆ ಹೊಳೆದಿರಬಹುದೆ?

ಕಾರಣ, ೧೯೭೩ರಲ್ಲಿ ಮೊದಲನೆಯ ೯/೧೧ನ್ನು ಸೃಷ್ಟಿಸಿದ ಅಮೆರಿಕ, ೨೦೦೧ರಲ್ಲಿ ಮತ್ತೊಂದು ೯/೧೧ಕ್ಕೆ ಬಲಿಯಾಯಿತು. ಇದೀಗ ೨೦೨೬ರ ಇನ್ನೊಂದು ೯/೧೧ರ ಹೊಸ ಬೆಳವಣಿಗೆ, ಸಣ್ಣ ಪುಟ್ಟ ಗುಂಪುಗಳು ಕೂಡ ಸೂಪರ್ ಪವರ್ ಗಳನ್ನು ಎದುರಾಗಬಲ್ಲ ಸಾಧ್ಯತೆಯನ್ನು ತೋರಿಸುತ್ತಿರುವ ರೀತಿ ಲೋಕದ ಯುದ್ಧೋನ್ಮಾದದ ಅಮಲನ್ನು ಇಳಿಸಬಲ್ಲದೆ? ಅದು ಸಂಕೇತಗಳನ್ನು ಯಾರು ಯಾವ ರೀತಿ ಓದುತ್ತಾರೆ ಎಂಬುದನ್ನೂ ಅವಲಂಬಿಸಿದೆ!
 

blog
06 Sep 2026 ಕಲಿತಿಲ್ಲವೆಂಬ ನೆನಪುಳಿಸು

'ನೋಡಿದ್ರೆ ಗೊತ್ತಾಗಲ್ವ? ಅವನು ಎಂಥವನೂಂತ?' ಎಂದು ಮತ್ತೊಬ್ಬರ ಒಳಹೊರಗು ಬಲ್ಲವರಂತೆ ಜನ ಆರಾಮಾಗಿ ಹೇಳುವುದನ್ನು ಕೇಳಿದಾಗ ಅಚ್ಚರಿಯಾಗುತ್ತದೆ. ಅದರಲ್ಲೂ ಹೆಂಗಸರು, 'ಅವನ್ನ ನೋಡಿದ್ರೆ ಕಳ್ಳನ ಥರ ಇದ್ದ ಕಣ್ರೀ' ಎಂದು ಕಳ್ಳರಿಗೂ ಒಂದು ಯೂನಿಫಾರ್ಮ್ ಇದೆ ಅನ್ನುವಂತೆ ಮಾತಾಡುವುದನ್ನು ಕೇಳಿದಾಗ ಇನ್ನಷ್ಟು ವಿಸ್ಮಯವಾಗುತ್ತದೆ. 

ಈ ಥರದ ಸಲೀಸು ಮಾತುಗಳನ್ನು ಕೇಳಿಸಿಕೊಂಡಿದ್ದರೆ ಮನೋವಿಜ್ಞಾನಿ ಫ್ರಾಯ್ಡ್‌ಗೋ, ತತ್ವಜ್ಞಾನಿ ನೀಷೆಗೋ ಏನನ್ನಿಸುತ್ತಿತ್ತೋ! ನಿಮಗೆ ಗೊತ್ತಿದೆ- ಜೀವಮಾನವಿಡೀ ಕನಸುಗಳ ಅಧ್ಯಯನ ಮಾಡಿ ಮನುಷ್ಯರ ಹೊರ ಭಾವ, ಒಳ ಲೋಕ, ಪ್ರಜ್ಞೆ, ಅಪ್ರಜ್ಞೆಗಳ ಬಗ್ಗೆ ತಾನು ಕಂಡ ಸತ್ಯವನ್ನು ಥಿಯರಿ ಮಾಡಿ ಹೇಳಿದವನು ಫ್ರಾಯ್ಡ್. ಸಮಯ ಸಿಕ್ಕಾಗಲೆಲ್ಲ ಸುಮ್ಮನೆ ಫ್ರಾಯ್ಡ್ ಬರಹಗಳ ಒಳ ಹೊಕ್ಕರೆ ಸಾಕು, ನನ್ನಂಥವನಿಗೆ, ಒಂದು ಜೀವಮಾನಕ್ಕಾಗುವಷ್ಟು ಒಳನೋಟಗಳು ಕಾಣತೊಡಗುತ್ತವೆ. ಹಾಗೇ ನೀಷೆಯ ಫಿಲಸಾಫಿಕಲ್ ಲೋಕ. ಇವೆರಡೂ ನಮ್ಮಂಥ ಕೇವಲ ಮನುಷ್ಯರಿಗೆ ಸುಲಭವಾಗಿ ಕಾಣದ, ನಮಗೆ ಸುಲಭವಾಗಿ ದಕ್ಕದ ಲೋಕ. ಫ್ರಾಯ್ಡ್, ನೀಷೆ ಇಬ್ಬರೂ ನನ್ನ ಪ್ರಿಯ ಲೇಖಕರ ಪಟ್ಟಿಯ ಮೊದಲ ಸಾಲಿನಲ್ಲಿರುವುದು ಈ ಕಾರಣಕ್ಕೇ. ನನ್ನಂಥವರಿಗೆ ಅವರು ಹಾಗೆ ಪ್ರಿಯರಾಗುವುದು ಅವರ ಬರಹಗಳು ಕಾಣಿಸುವ ಸತ್ಯದ ಜೊತೆಗೇ ಅವರ ಬರವಣಿಗೆಯ ಶಕ್ತಿಯಿಂದ ಕೂಡ. 

ನಾನು ಆಗಾಗ ಕನ್ನಡಿಸಿರುವ ನೀಷೆಯ ಕೆಲವು ಗಾಢ ಸತ್ಯಗಳನ್ನು, ಈ ಅಂಕಣದಲ್ಲಿ ಗದ್ಯ-ಪದ್ಯ ರೂಪದಲ್ಲಿ 'ನೀಷೆಗೆ ಹೊಳೆದ ಸತ್ಯ' ಎಂಬ ತಲೆಬರಹದಡಿ ಇಲ್ಲಿ ಆಗಾಗ ಕೊಡುವುದನ್ನು ನೀವು ಗಮನಿಸಿರಬಹುದು: ಹಿಂದೆ ನಮ್ಮ ಕನ್ನಡ ಟೈಮ್ಸ್ ಪತ್ರಿಕೆಗಾಗಿ ಶುರು ಮಾಡಿದ ಈ ನೀಷೆ ಪಯಣ ಸಾಗುತ್ತಲೇ ಇದೆ. ನನ್ನ ಡೈರಿಯಲ್ಲಿರುವ ಅಂಥ ಇನ್ನೊಂದು ನೀಷೆಗೆ ಹೊಳೆದ ಸತ್ಯ: 
ನೀವು ನಿಮ್ಮ ಬಾಯಿಂದ ಸುಳ್ಳು ಹೇಳಬಹುದು;

ಆದರೆ, 
ಆ ಸುಳ್ಳಿನ ಜೊತೆಗೇ ಮೂಡುವ 
ತಿರುಚಿದ, ಕಹಿ ವ್ಯಗ್ರ ಮುಖ
ಹೇಗೂ ಸತ್ಯವನ್ನು ಹೇಳಿಯೇ ತೀರುವುದು.

ಇಂಥ ನಿಷ್ಠುರ ಸತ್ಯ ತಲುಪಲು ಕತೆಯೋ ಕವಿತೆಯೋ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನ್ನಿಸಿ ಫಿಲಾಸಫಿಯ ಅಡಕ ಗುಣದ ಬಗ್ಗೆ ವಿಸ್ಮಯವಾಗುತ್ತದೆ. ನನ್ನ ಕಥಾ ಸಂಕಲನವೊಂದಕ್ಕೆ ಮುನ್ನುಡಿ ಬರೆಯುವಾಗ ತತ್ವಜ್ಞಾನಿ ನೀಷೆ ತಲುಪುವ ಸತ್ಯಗಳ ಬಗ್ಗೆ ಹುಟ್ಟಿದ ಅಚ್ಚರಿ ಇವತ್ತಿಗೂ ಹಾಗೇ ಇದೆ. ಆ ಮುನ್ನುಡಿಯ ಕೆಲವು ಭಾಗಗಳು: 

ನೀಷೆಯಂಥ ದೊಡ್ಡ ತತ್ವಜ್ಞಾನಿಯನ್ನು ಓದುತ್ತಾ ಓದುತ್ತಾ ಅವನು ಎಷ್ಟೋ ಸಲ ಒಂದೇ ಸಾಲಿನಲ್ಲಿ ಅಥವಾ ಒಂದು ಪುಟ್ಟ ಟಿಪ್ಪಣಿಯಲ್ಲಿ ತಲುಪುವ ಸೂಕ್ಷ್ಮ ಸತ್ಯಗಳನ್ನು ಕಂಡು ಅಚ್ಚರಿಯಾಗುತ್ತದೆ. ಅವನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಈ ಥರದ ತೀಕ್ಷ್ಣ ಸತ್ಯ ತಲುಪಲು ಕತೆ ಬರೆಯುವ ವ್ಯಕ್ತಿ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನಿಸತೊಡಗುತ್ತದೆ...

ಆದರೂ ಕತೆ ಬರೆಯವ ವ್ಯಕ್ತಿಗೆ ಎಂದೋ ಕಂಡ, ಹೊಳೆದ, ಬೆಳೆದ ಘಟನೆಗಳಿಗೆ ಅಥವಾ ಘಟನೆಗಳಂಥ ರೂಪಕಕ್ಕೆ ಬರಬರುತ್ತಾ ಹೊಸ ಮುಖಗಳು ಸೇರಿಕೊಳ್ಳತೊಡಗುತ್ತವೆ; ಕಥಾಮಾಧ್ಯಮವೇ ಕಾಣಿಸುವ ಸತ್ಯಗಳು ಕತೆ ಬರೆಯುವ ಕೆಲಸದ ಬಗ್ಗೆ ಹೊಸ ಉಮೇದು ಹುಟ್ಟಿಸತೊಡಗುತ್ತವೆ. ಆ ಉಮೇದು ಯಾವುದೋ ಗಳಿಗೆಯಲ್ಲಿ ಹಾಗೇ ನಿಂತುಹೋಗುತ್ತದೆ; ಮುಂದೆಂದೋ, ಯಾವ ವರ್ಷವೋ ಆ ಕತೆಗೆ ಇನ್ನೇನೋ ಕೂಡಿಕೊಂಡಂತಾಗಿ ಬರೆಯುವ ಒತ್ತಾಯ ಶುರುವಾಗುತ್ತದೆ. ಇದು ಒಂದು ಕತೆಯನ್ನು ವರ್ಷಗಟ್ಟಲೆ ಬರೆಯವ ನನ್ನ ಅನುಭವ. 

ಇದೆಲ್ಲದರ ನಡುವೆ ಒಂದು ದೃಶ್ಯ: 

ಬೆಂಗಳೂರಿನ ಜೆ.ಪಿ.ನಗರದ ವೈನ್ ಸ್ಟೋರಿನ ಹೊರಗಿನ ಮಂದ ಬೆಳಕಿನಲ್ಲಿ ಗೋಡೆಗೊರಗಿ ಬಿಳಿಯ ಹತ್ತಿ ಸೀರೆ ಉಟ್ಟ ಆ ಕಪ್ಪನೆಯ ತಮಿಳು ಹೆಂಗಸು ಅದೇ ಆಗ ಒಂದೇ ಗುಟುಕಿಗೆ ಮದ್ಯವನ್ನು ಗಂಟಲಿಗಿಳಿಸಿ ಹುಡುಗನೊಬ್ಬನಿಗೆ ಏನನ್ನೋ ತಿನ್ನಲು ಕೊಡುತ್ತಾ, ಅವನ ಬಗೆಗೆ ಪ್ರೀತಿಯನ್ನೋ, ಮತ್ತಾವುದೋ ಭಾವವನ್ನೋ ತೋರುತ್ತಿರುವ ದೃಶ್ಯ ನೆನಪಾಗುತ್ತದೆ. ಆ ಗಳಿಗೆಯಲ್ಲಿ ಆ ಹೆಣ್ಣಿನ ಮುಖದ ಮೇಲಿದ್ದ ಭಾವ ಏನನ್ನು ಹೇಳುತ್ತಿತ್ತು ಎಂಬ ಪ್ರಶ್ನೆ ಮುತ್ತತೊಡಗುತ್ತದೆ. ಆ ಹುಡುಗನನ್ನು ಸಾಕಲಾಗದ ಅಸಹಾಯಕತೆಯೇ? ಅವನನ್ನು ಎಂದೋ ಬಿಟ್ಟ ಅಗಲಿಕೆಯ ಭಾವವೇ? ಆ ಹುಡುಗನ ಮುಖದ ಭಾವವೇನು? ಅವನ ಮನಸ್ಸಿನಲ್ಲಿ ನಡೆಯುತ್ತಿರಬಹುದಾದ ವ್ಯಾಪಾರ ಏನಿರಬಹುದು...?  ಫೋಟೋದ ಫ್ರೇಮಿನಂತೆ ಆ ಚಿತ್ರ ನನ್ನ ಚಿತ್ತದಲ್ಲಿ ಹಾಗೇ ಇದೆ, ಮಾಸಲು ಮಾಸಲಾಗಿ. ಆ ಹೆಂಗಸಿನ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಹೆಂಗಸಿನ ಮುಖವೂ ಈ ಫೋಟೋದೊಳಗೆ ಸೇರಿಕೊಳ್ಳಲೆತ್ನಿಸುತ್ತದೆ.  ಅವತ್ತು ಅಲ್ಲೇ ನಿಂತು ವಿಚಾರಿಸಿದ್ದರೆ ಆ ಮೂವರ ಆ ಕ್ಷಣದ ಮನೋಲೋಕ ನನ್ನ ಅರಿವಿಗೆ ಬರುತ್ತಿತ್ತೇ? ಅವರು ತಮಿಳರಿರಬಹುದೆಂಬ ಊಹೆಯ ಮೇಲೆ ಹೇಳುವುದಾದರೆ, ಅವರ ಭಾಷೆ ಬರದ ನನಗೆ ಅವರ ಮನಸ್ಸು ತಿಳಿಯುವುದು ಸಾಧ್ಯವಿತ್ತೇ? ಅಕಸ್ಮಾತ್ ತಮಿಳು ಬಂದಿದ್ದರೂ ಆ ಭಾವ ತಿಳಿಯುತ್ತಿತ್ತೇ? ನಾನು ಅವರನ್ನು ವಿಚಾರಿಸಿದ್ದರೂ ಅವರು ತಮ್ಮ ಮನಸ್ಸಿನಲ್ಲಿ ನಡೆಯುತ್ತಿದ್ದುದನ್ನು ವಿವರಿಸುವುದು ಸಾಧ್ಯವಿತ್ತೇ... 

ಹೀಗೆ ಆ ಚಿತ್ರ ನೆನಪಾದಾಗಲೆಲ್ಲ ಆ ಸನ್ನಿವೇಶದ ಅಸಲಿ ಅರ್ಥ ಇನ್ನೆಂದೂ ಹೊಳೆಯುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಅಷ್ಟೇ ಯಾಕೆ, ಇವತ್ತು ಕೂಡ ಆ ಸನ್ನಿವೇಶ ಅರ್ಥವಾಗುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಅಂದರೆ, ಮಾನವ ಸನ್ನಿವೇಶ ಹಾಗೂ ಸ್ಥಿತಿಗಳು ನನಗೆ ಅರ್ಥವಾಗಿವೆ ಎಂದು ಬರೆಯಲು ಹೊರಡುವುದೇ ಒಂದು ಭ್ರಮೆಯೇನೋ! ಬರೆವ ಕ್ರಿಯೆಯಲ್ಲೇ ಕೆಲವು ಅರ್ಥಗಳು ಹೊಳೆಯುತ್ತವೆ ಎಂಬ ಗ್ರಹಿಕೆ ಕೂಡ ಪೂರ್ತಿ ನಿಜವಿರಲಿಕ್ಕಿಲ್ಲ. ಬರೆಯುವವರು ಕೊನೆಗೂ ಮತ್ತೊಬ್ಬನ ಅಥವಾ ಮತ್ತೊಬ್ಬಳ ಬಗೆಗಿನ ಹೊರ ವಿವರಗಳನ್ನು ಕೊಡಬಹುದೇ ಹೊರತು ಅವರೊಳಗೆ ನಿಜಕ್ಕೂ ಏನಾಗುತ್ತಿದೆ ಎಂದು ಹೇಳುವುದು ಕಷ್ಟ...

ಈ ಅರಿವಿನ ಎದುರು, ಬರವಣಿಗೆಯ ಮೂಲಕ `ಕಂಡಿರುವೆ’, `ಕಾಣುತ್ತಿರುವೆ’ ಎಂಬ ಠೇಂಕಾರ ಝರ್ರನೆ ಇಳಿದು, ಅಷ್ಟಿಷ್ಟು ಸತ್ಯ ಮಾತ್ರ ಅಕಸ್ಮಾತ್ ಹೊಳೆದಿರಬಹುದು ಹಾಗೂ ಕೆಲಬಗೆಯ ವೈರುಧ್ಯಗಳಾದರೂ ಈ ಬರವಣಿಗೆಯ ಕ್ರಿಯೆಯಲ್ಲಿ ಗೋಚರಿಸಿರಬಹುದು ಎಂಬ ಅನುಮಾನದಿಂದ ಈ ಕತೆಗಳನ್ನು ನಿಮಗೆ ದಾಟಿಸುತ್ತಿರುವೆ... 

ಇವು ಅಂದು ಬರೆದ ಮಾತುಗಳು. ಈ ಮಾತುಗಳನ್ನು ಬರೆದು ಹದಿನೇಳು ವರ್ಷಗಳಾದ ಮೇಲೂ ಕತೆ ಬರೆಯುವ ಬಗೆಗಿನ ಅಳುಕು ಹಾಗೇ ಇದೆ. ‘ಕಲಿತಿಲ್ಲವೆಂಬ ನೆನಪುಳಿಸು’ ಎಂಬ ಅಡಿಗರ ಸಾಲು ಎಚ್ಚರಿಸುತ್ತಲೇ ಇರುತ್ತದೆ.

ಈ ಅಂಕಣ ಬರೆಯುವ ಶನಿವಾರ, ಧಾರವಾಡದ ರಿಫ್ರೆಶರ್ ಕೋರ್ಸ್ ನಲ್ಲಿ ಮಾತಾಡಲು ಯೋಚಿಸುತ್ತಿದ್ದ ರೀಡರ್ ರೆಸ್ಪಾನ್ಸ್ ಥಿಯರಿಯ ಸುತ್ತ ಅಡ್ಡಾಡುತ್ತಿದ್ದ ಮನಸ್ಸು  ಯಾಕೋ ಹಲವು ವರ್ಷಗಳ ಕೆಳಗೆ ಆ ವೈನ್ ಸ್ಟೋರಿನ ಬಳಿ ಕಂಡ ಫೋಟೋ ಫ್ರೇಮಿನ ಕಡೆ ಹೊರಳಿತು. ಲೇಖಕ ಅಥವಾ ಲೇಖಕಿ ಏನು ಬೇಕಾದರೂ ಹೇಳ ಹೊರಟಿರಲಿ, ರೀಡರ್ ಅವನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದೇ ಮುಖ್ಯ ಎನ್ನುತ್ತದೆ ಈ ರೀಡರ್ ರೆಸ್ಪಾನ್ಸ್ ಥಿಯರಿ. ಆ ಚಿತ್ರಗಳ ಓದುಗನಾಗಿ ನನಗೇನೆನ್ನಿಸುತ್ತದೆ ಎಂಬ ಸುಂದರ ಕಸರತ್ತಿನಲ್ಲಿ ಇದೀಗ ತೊಡಗಬೇಕೆನ್ನಿಸಿತು...

ಅಕಸ್ಮಾತ್ ಈ ಅಂಕಣದ ಓದುಗ, ಓದುಗಿಯರು ಈ ಚಿತ್ರಕ್ಕೆ ಸ್ಪಂದಿಸದೆ ಕತೆಯಾಗಿಸಬಹುದೆ ಎಂದು ಕಾದು ನೋಡಲು ನಿರ್ಧರಿಸಿದೆ! ಅಕಸ್ಮಾತ್ ನೀವು ಮೇಲಿನ ಚಿತ್ರವನ್ನು ಕತೆಯಾಗಿಸಿದರೆ ವಿಸ್ತರಿಸಿ ಕಳಿಸಿ, ಅದನ್ನು ಮುಂದೆ ಬೆಳೆಸೋಣ.



ನೆನಪು ಹೇಳುವುದು:
‘ನಾನು ಅದನ್ನು ಮಾಡಿದ್ದೇನೆ.’  
ಸ್ವಾಭಿಮಾನ ಹೇಳುವುದು: 
‘ನಾನು ಅದನ್ನು ಮಾಡುವುದು ಸಾಧ್ಯವೇ ಇಲ್ಲ.’  
ಹಾಗೇ ಸೆಟೆದುಕೊಂಡೇ ಇರುವುದು ಸ್ವಾಭಿಮಾನ;
ಕೊನೆಗೆ ನೆನಪು ಶರಣಾಗುವುದು.  


ನಾವು ಕೊನೆಗೂ ಪ್ರೀತಿಸುವುದು
ನಮ್ಮ ಬಯಕೆಗಳನ್ನು ಮಾತ್ರ;
ಬಯಸಿದ ವಸ್ತುವನ್ನಲ್ಲ.



Latest Video


Nataraj Huliyar Official
YouTube Channel

SUBSCRIBE