Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
09 Aug 2026 ಆಗಸ್ಟ್ ಕ್ರಾಂತಿ ಮರೆತುಹೋಯಿತೆ?

ಈ ಅಂಕಣಕ್ಕೆ ಆರಂಭದ ಟಿಪ್ಪಣಿ ಮಾಡುತ್ತಿರುವ ದಿನ ಆಗಸ್ಟ್ ೮ನೆಯ ತಾರೀಕು. ‘ಆಗಸ್ಟ್ ಕ್ರಾಂತಿ ದಿನ.’ ಎಂಬತ್ತನಾಲ್ಕು ವರ್ಷಗಳ ಕೆಳಗೆ ೧೯೪೨ರ ಆಗಸ್ಟ್ ೮ರಂದು ಆರಂಭವಾದ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳುವಳಿಯ ನೆನಪಿನ ಆಚರಣೆಯ ದಿನ. ಮಾರನೆಯ ದಿನ ಆಗಸ್ಟ್ ೯. ಅಂದು ಜನತಾಕ್ರಾಂತಿಯ ಸಹಜ ಸ್ಫೋಟವಾಗಿತ್ತು.

ಭಾರತದ ಸ್ವಾತಂತ್ರ‍್ಯ ಚಳುವಳಿಯ ಉಜ್ವಲ ಘಟ್ಟವಾದ ‘ಆಗಸ್ಟ್ ಕ್ರಾಂತಿ’ಯ ಮಹತ್ವ ಹೊಸ ತಲೆಮಾರುಗಳಿಗಿರಲಿ, ನಮ್ಮ ಸಾರ್ವಜನಿಕ ವ್ಯಕ್ತಿಗಳಿಗೂ, ಆಗಸ್ಟ್ ಕ್ರಾಂತಿಯ ಮುಂಚೂಣಿಯಲ್ಲಿದ್ದ ಪಕ್ಷದ ಇಂದಿನ ವಾರಸುದಾರರಿಗೂ ಮರೆತುಹೋದಂತಿದೆ!  

ಆಗಸ್ಟ್ ೮, ೧೯೪೨. ಆ ಸಂಜೆ ಗಾಂಧೀಜಿ ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಎಂಬ ಅಂತಿಮ ಎಚ್ಚರಿಕೆ ಕೊಟ್ಟರು. ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಕಾಯುತ್ತಿದ್ದ ಜನಸಮೂಹಕ್ಕೆ ‘ಡೂ ಆರ್ ಡೈ’ (ಮಾಡು ಇಲ್ಲವೇ ಮಡಿ) ಕರೆ ಕೊಟ್ಟರು. ದೇಶದುದ್ದಕ್ಕೂ ಮಿಂಚಿನ ಸಂಚಾರವಾಯಿತು. ಮಾರನೆಯ ಬೆಳಗಿಗೇ ಗಾಂಧೀಜಿ ಹಾಗೂ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾದ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಸೇರಿದಂತೆ ರಾಷ್ಟ್ರಾದ್ಯಂತ ಹಿರಿಯ, ಕಿರಿಯ ಚಳುವಳಿಯ ನಾಯಕರ ಬಂಧನವಾಯಿತು. 

ಅವತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಸುತ್ತಮುತ್ತಲ ಸ್ವಾತಂತ್ರ‍್ಯ ಚಳುವಳಿಗಾರರು ಹೈಸ್ಕೂಲಿನ ಬಳಿ ಬಂದಾಗ, ಪರೀಕ್ಷೆಯನ್ನು ಅರ್ಧಕ್ಕೇ ಬಿಟ್ಟು ಹೊರ ಬಂದು, ಚಳುವಳಿಗಾರರ ಜೊತೆ ಸೇರಿಕೊಂಡ ಹುಡುಗರಲ್ಲಿ ಶಾಂತವೇರಿ ಗೋಪಾಲಗೌಡ ಎಂಬ ಹುಡುಗನೂ ಇದ್ದ. ಇಂಥ ಲಕ್ಷಾಂತರ ಹುಡುಗ, ಹುಡುಗಿಯರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಮುಂದೆ ಹೊಸ ರಾಜಕೀಯ ನಾಯಕ ನಾಯಕಿಯರಾಗಿ ಬೆಳೆದ ಅಪೂರ್ವ ಚರಿತ್ರೆಯನ್ನು ಭಾರತದ ಹೊಸ ತಲೆಮಾರುಗಳು ಎಂದೂ ಮರೆಯಬಾರದು. ಮೊನ್ನೆ ಸರ್ಕಾರದ ಭಕ್ತ ಲಾಯರೊಬ್ಬರು ಹದಿನೆಂಟು ವರ್ಷ ವಯಸ್ಸಿನೊಳಗಿನ ಹುಡುಗಿಯೊಬ್ಬಳನ್ನು ವಿದ್ಯಾರ್ಥಿ ಚಳುವಳಿಗೆ ಕರೆತಂದವರಾರು ಎಂಬ ಚಿಲ್ಲರೆ ‘ಲೀಗಲ್’ ಪ್ರಶ್ನೆಯನ್ನೆತ್ತಿ ಸರ್ಕಾರವನ್ನು ನೇವರಿಸಿದರು. ಇಂಥವರಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲೂ ಭಾಗವಹಿಸಿದ್ದರು ಎಂಬ ಚರಿತ್ರೆಯ ವಿವರಗಳೇ ಅರಿವಿರಲಿಕ್ಕಿಲ್ಲ.  

೯ ಆಗಸ್ಟ್ ೧೯೪೨. ರಾಷ್ಟ್ರ ನಾಯಕರ ಬಂಧನದಿಂದ ಸಿಟ್ಟಿಗೆದ್ದ ಜನ ತಂತಾವೇ ನಾಯಕರಾದರು. ತಮತಮಗೆ ತೋಚಿದಂತೆ ‘ಮಾಡು ಇಲ್ಲವೇ ಮಡಿ’ ಕರೆಯನ್ನು ಜಾರಿಗೊಳಿಸತೊಡಗಿದರು. ಪೊಲೀಸ್ ಠಾಣೆಗಳು, ಅಂಚೆ ಕಛೇರಿಗಳು, ಟೆಲಿಫೋನ್ ವೈರುಗಳು, ರೈಲ್ವೆ ಹಳಿಗಳು...ಮುಂತಾಗಿ ಸರ್ಕಾರಿ ಆಸ್ತಿಯನ್ನು ಧ್ವಂಸ ಮಾಡತೊಡಗಿದರು. ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಜೈಲಿನಲ್ಲಿರುವಾಗ ಸ್ವಾತಂತ್ರ‍್ಯ ಚಳುವಳಿಯನ್ನು ಬಗ್ಗು ಬಡಿಯುವುದು ಸುಲಭ ಎಂದು ಭ್ರಮಿಸಿದ್ದ ಬ್ರಿಟಿಷ್ ಆಡಳಿತ ಭಾರತೀಯ ಪೊಲೀಸರನ್ನೇ ಭಾರತೀಯ ಚಳುವಳಿಗಾರರ ಮೇಲೆ ಛೂಬಿಟ್ಟಿತು. ಜನರನ್ನು ಜೈಲಿಗಟ್ಟಿದ ಮೇಲೆ ಚಳುವಳಿಯ ಕತೆ ಮುಗಿಯಿತು ಎಂದುಕೊಂಡಿತ್ತು. 

ಆದರೆ ‘ಆಗಸ್ಟ್ ಕ್ರಾಂತಿ’ ಅದೇ ಆಗ ಶುರುವಾಗಿತ್ತು!

೯ ಆಗಸ್ಟ್ ೧೯೪೨. ಆ ರಾತ್ರಿ ೩೨ ವರ್ಷದ ರಾಮಮನೋಹರ ಲೋಹಿಯಾ ಸಮಾಜವಾದಿ ಸಂಗಾತಿಗಳಾದ ಅಚ್ಯುತ್ ಪಟವರ್ಧನ್, ಅರುಣಾ ಅಸಫ್ ಆಲಿ, ಸುಚೇತಾ ಕೃಪಲಾನಿ ಮೊದಲಾದವರ ಜೊತೆಗೆ ಭೂಗತರಾದರು. ಈ ವಿವರಗಳೆಲ್ಲ ಚರಿತ್ರೆಯ ಪುಸ್ತಕಗಳಲ್ಲಿವೆ; ಆದರೆ ಲೋಹಿಯಾರ ಪುಟ್ಟ ತಂಡ ಕಾಂಗ್ರೆಸ್ ರೇಡಿಯೋ ಮೂಲಕ ಆಗಸ್ಟ್ ಕ್ರಾಂತಿಯ ಚೈತನ್ಯವನ್ನು ಕಾಯ್ದಿಟ್ಟುಕೊಂಡು ಚಳುವಳಿಯನ್ನು ಮುನ್ನಡೆಸಿದ ರೋಮಾಂಚಕಾರಿ ಸಾಹಸದ ವಿವರಗಳು ಹಿನ್ನೆಲೆಗೆ ಸರಿದುಬಿಟ್ಟಿವೆ; ‘ಡೂ ಆರ್ ಡೈ’ ಘೋಷಣೆ ರೂಪಿಸಿದವರು ಸೋಷಲಿಸ್ಟ್ ಯೂಸುಫ್ ಮೆಹರಾಲಿ ಎಂಬ ಸತ್ಯವೂ ಹುದುಗಿಹೋಗಿದೆ! 
ಆ ಕಾಲದ ಸಾವಿರಾರು ಸಾಹಸಗಳ ನಡುವೆ ಒಂದು ಪುಟ್ಟ ಗುಂಪು ನಡೆಸಿದ ‘ಕಾಂಗ್ರೆಸ್ ರೇಡಿಯೋ’ ಸಾಹಸ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಒಂದು ಸಂಜೆ ಇದ್ದಕ್ಕಿದ್ದಂತೆ ‘ಇದು ಕಾಂಗ್ರೆಸ್ ರೇಡಿಯೋ! ಭಾರತದ ಯಾವುದೋ ಭಾಗದಿಂದ ನಾವು ಮಾತಾಡುತ್ತಿದ್ದೇವೆ! ತರಂಗಾಂತರ ೪೧.೪೨’ ಎಂದು ಬಾನುಲಿಯಲ್ಲಿ ಹೆಣ್ಣು ದನಿಯೊಂದು ಘೋಷಿಸಿತು! ಬ್ರಿಟಿಷ್ ಸರ್ಕಾರ ಬೆಚ್ಚಿತು. ಮರುಗಳಿಗೆಗೇ ರೇಡಿಯೋದಲ್ಲಿ ಗಂಡಿನ ದನಿಯಲ್ಲಿ ಸ್ವಾತಂತ್ರ‍್ಯ ಚಳುವಳಿಗೆ ಮಾರ್ಗದರ್ಶನ ಶುರುವಾಯಿತು. 

ಈ ಭೂಗತ ರೇಡಿಯೋ ಪ್ರಸಾರಗಳಲ್ಲಿ ಬ್ರಿಟಿಷ್ ಪೊಲೀಸರು ನಡೆಸುತ್ತಿದ್ದ ಹಿಂಸೆಗಳ ವರದಿಗಳು ಬಿತ್ತರವಾಗತೊಡಗಿದವು. ಪ್ರತಿರಾತ್ರಿ ೮.೩೦ರ ಸುಮಾರಿಗೆ ಕವಿ ಇಕ್ಬಾಲರ ‘ಸಾರೆ ಜಹಾಂ ಸೆ ಅಚ್ಛಾ’ ಹಾಡು ಮೊಳಗುತ್ತಿತ್ತು; ಹಿಂದೂಸ್ತಾನಿ ಅಥವಾ ಇಂಗ್ಲಿಷಿನಲ್ಲಿ ಶುರುವಾಗುತ್ತಿದ್ದ ಪ್ರಸಾರ ‘ವಂದೇ ಮಾತರಂ’ ಹಾಡಿನೊಂದಿಗೆ ಮುಗಿಯುತ್ತಿತ್ತು. ಕಾಂಗ್ರೆಸ್ ರೇಡಿಯೋ, ಫ್ರೀಡಂ ರೇಡಿಯೋ, ಆಝಾದಿ ರೇಡಿಯೋ ಎಂದು ಕರೆಯಲಾಗುತ್ತಿದ್ದ ಈ ರೇಡಿಯೋವನ್ನು ಬ್ರಿಟಿಷ್ ಪೊಲೀಸರು ‘ಇಲ್ಲೀಗಲ್ ಕಾಂಗ್ರೆಸ್ ರೇಡಿಯೋ’ ಎನ್ನುತ್ತಿದ್ದರು! ಈ ಭೂಗತ ರೇಡಿಯೋ ಪ್ರಸಾರದ ಕೆಲವು ತುಣುಕುಗಳು:

‘ಬ್ರಿಟಿಷರು ಸ್ವಾತಂತ್ರ‍್ಯ ಚಳುವಳಿಯನ್ನು ತುಳಿಯಲು ಏನೆಲ್ಲಾ ಮಾಡುತ್ತಿದ್ದಾರೆ. ಆದರೆ ಭಾರತೀಯರು ಜಗ್ಗದೆ ಎದುರಾಳಿಯನ್ನು ಎದುರಿಸುತ್ತಿದ್ದಾರೆ, ಸ್ವಾತಂತ್ರ‍್ಯಕ್ಕಾಗಿ ಪ್ರಾಣ ಬಿಡಲೂ ತಯಾರಾಗಿದ್ದಾರೆ ಎಂಬುದು ಬ್ರಿಟಿಷರಿಗೆ ಅರಿವಾಗತೊಡಗಿದೆ...ದಬ್ಬಾಳಿಕೆಯ ಆಳ್ವಿಕೆಯನ್ನು ಮೂಕ ಪ್ರಾಣಿಗಳಂತೆ ಸಹಿಸಲು ಭಾರತೀಯರು ಸಿದ್ಧರಿಲ್ಲ ಎಂಬುದನ್ನು  ಚಳುವಳಿ ಸಿದ್ಧ ಮಾಡಿ ತೋರಿಸಿದೆ...ಬ್ರಿಟಿಷ್ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆ ಬರುವ ತನಕ ಚಳುವಳಿ ಮುಂದುವರಿಯುತ್ತಲೇ ಇರುತ್ತದೆ...’  

‘ಬ್ರಿಟಿಷ್ ಸರ್ಕಾರ ಮತ್ತು ಕಾಂಗ್ರೆಸ್ಸಿನ ನಡುವೆ ರಾಜಿಕಬೂಲಿ ಮಾಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗಾಂಧೀಜಿ ಜೈಲು ಸೇರುವ ಮುನ್ನ ‘ಇದು ಕೊನೇ ಯುದ್ಧ’ ಎಂದು ಸಾರಿ ಹೋಗಿದ್ದಾರೆ; ಅವರ ಕರೆಯಂತೆ ‘ಮಾಡು ಇಲ್ಲವೇ ಮಡಿ’ ಈ ಎರಡರ ನಡುವೆ ನಮ್ಮ ಆಯ್ಕೆ ಯಾವುದೆಂಬುದನ್ನು ನಿರ್ಧರಿಸಬೇಕಾಗಿದೆ.’

‘ಹಿಂದೂಗಳು, ಮಹಮ್ಮದೀಯರು, ಕ್ರಿಶ್ಚಿಯನ್ನರು, ಪಾರ್ಸಿಗಳು ಎಲ್ಲರೂ ಸ್ವಾತಂತ್ರ‍್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಕಾಲದಲ್ಲಿ ಸುಳ್ಳು ಹೇಳುವುದು ಕಾನೂನುಬದ್ಧವಾಗಿಬಿಟ್ಟಿದೆ! ಈಗಿನ ದೊಡ್ಡ ಸುಳ್ಳು- ‘ಕೆಲವೇ ಮಂದಿ ಮಾತ್ರ ಸ್ವಾತಂತ್ರ‍್ಯ ಕೇಳುತ್ತಿದ್ದಾರೆ; ಆದರೆ ಒಂಬತ್ತು ಕೋಟಿ ಮಹಮ್ಮದೀಯರು ಸ್ವಾತಂತ್ರ‍್ಯಕ್ಕೆ ವಿರುದ್ಧವಾಗಿದ್ದಾರೆ’ ಎನ್ನುವುದು. ಇಂಥ ಸುಳ್ಳನ್ನು ಬ್ರಿಟಿಷರನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ! ಲಕ್ಷಗಟ್ಟಲೆ, ಕೋಟಿಗಟ್ಟಲೆ ಮುಸ್ಲಿಮರು ನಮಗೆ ಹೆಗಲೆಣೆಯಾಗಿ ಈ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆ ಸಾರಿ ಹೇಳುತ್ತಿದೆ...’

‘ಚಳುವಳಿಗಾರರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬ ಪೊಲೀಸ್ ತಂಡದೊಂದಿಗೆ ಹಳ್ಳಿಯೊಂದಕ್ಕೆ ಬಂದ; ಆದರೆ ಹಳ್ಳಿಯ ಜನ ಅಲ್ಲಿ ಹೇಗೆ ಮುತ್ತಿಕೊಂಡರೆಂದರೆ ಪೊಲೀಸರು ಕಂಗಾಲಾಗಿ ಯಾರನ್ನೂ ಬಂಧಿಸಲಾಗದೆ ಅಲ್ಲಿಂದ ಹೊರಟರು. ಡಾರ್ಜಿಲಿಂಗ್ ಗೋಲಿಬಾರಿನಲ್ಲಿ ಹಲವರು ಗಾಯಗೊಂಡರು; ಮೂವರು ಮೃತಪಟ್ಟರು. ಭಾರತೀಯರು   ಇದನ್ನೆಲ್ಲ ಸಹಿಸುವುದಿಲ್ಲ.’ 

‘ವಿದೇಶಿ ವಸ್ತುಗಳ ಫ್ಯಾಕ್ಟರಿ, ಕಛೇರಿಗಳೆದುರು ಶಾಂತಿಯುತವಾಗಿ ಪಿಕೆಟಿಂಗ್ ನಡೆಸಿ. ಸರ್ಕಾರಿ ನೌಕರಿ ಬಿಟ್ಟುಬನ್ನಿ. ಮನೆಮನೆಗಳಲ್ಲಿ ಚರಕಾ ಇರಲಿ. ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ. ಹಿಂದೂ-ಮುಸ್ಲಿಂ ಸಾಮರಸ್ಯ ಕಾಪಾಡಿ.’     

ಈ ಪ್ರಸಾರಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗದ ಪೊಲೀಸ್ ಹಿಂಸೆ, ಜನರ ಹೋರಾಟಗಳ ವಿವರಗಳಿರುತ್ತಿದ್ದವು. ಬಾಂಬೆ, ನಾಸಿಕ್, ಕಲ್ಕತ್ತಾಗಳ ಗುಪ್ತ ಕೇಂದ್ರಗಳಿಂದ ಕಾಂಗ್ರೆಸ್ ರೇಡಿಯೋ ಬಿತ್ತರವಾಗುತ್ತಿತ್ತು.  

ಅತ್ತ ಎಚ್.ವಿ.ಆರ್. ಅಯ್ಯಂಗಾರ್ ಎಂಬ ಬಾಂಬೆ ಬ್ರಿಟಿಷ್ ಸರ್ಕಾರದ ಅಡಿಶನಲ್ ಸೆಕ್ರೆಟರಿ ಈ ಕಾಂಗ್ರೆಸ್ ರೇಡಿಯೋ ಪ್ರಸಾರಗಳನ್ನು ನಿತ್ಯ ಕೇಳಿಸಿಕೊಳ್ಳುತ್ತಾ, ಆ ಮಾತುಗಳ ವಿಷಯ, ಭಾಷೆ, ಧೋರಣೆಗಳನ್ನೆಲ್ಲ ‘ಸ್ಟಡಿ’ ಮಾಡುತ್ತಿದ್ದ. ಕೊನೆಗೆ, ‘ಈ ಪ್ರಸಾರದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಫಿಲಾಸಫಿ ಇದೆ; ಭೂಗತವಾಗಿರುವ ರಾಮಮನೋಹರ ಲೋಹಿಯಾ ಈ ಪ್ರಸಾರಗಳ ಹಿನ್ನೆಲೆಯಲ್ಲಿದ್ದಂತಿದೆ’ ಎಂದು ಅಯ್ಯಂಗಾರ್ ತೀರ್ಮಾನಿಸಿದ. ‘ಸ್ವತಂತ್ರ ಇಂಡಿಯಾ ರೈತರ, ಕಾರ್ಮಿಕರ, ಕೂಲಿಕಾರರದಾಗಿರುತ್ತದೆ’; ‘ಸ್ವಾತಂತ್ರ‍್ಯಕ್ಕೋಸ್ಕರ ಕ್ರಾಂತಿ ಎಂದರೆ ಬಡವರಿಗಾಗಿ ಕ್ರಾಂತಿ…’ ಇಂಥ ವಾಕ್ಯಗಳನ್ನು ಅಯ್ಯಂಗಾರ್ ಹೆಕ್ಕಿ ತೋರಿಸಿದ. ‘ಇದು ಸೋಷಲಿಸ್ಟರ ಕ್ರಾಂತಿಕಾರಿ ಚಳುವಳಿ’ ಎಂದು ಬ್ರಿಟಿಷ್ ಸರ್ಕಾರ ತೀರ್ಮಾನಿಸಿತು. 

ಭೂಗತ ರೇಡಿಯೋದ ಐಡಿಯಾ ಕೊಟ್ಟ ರಾಮಮನೋಹರ ಲೋಹಿಯಾ ಹಣಕಾಸನ್ನೂ ಕಲೆ ಹಾಕಿದ್ದರು; ಪ್ರಸಾರಕ್ಕಾಗಿ ವರದಿ, ವಿಶ್ಲೇಷಣೆಗಳನ್ನು ಸಿದ್ಧಪಡಿಸುತ್ತಿದ್ದರು. ೨೨ ವರ್ಷದ ಕಾನೂನು ವಿದ್ಯಾರ್ಥಿನಿ ಉಷಾ ಮೆಹ್ತಾ ವಿಠ್ಠಲದಾಸ ಮಾಧವಜೀ, ಬಾಬುರಾವ್ ಜವೇರಿ ಮೊದಲಾದವರ ಜೊತೆಗೂಡಿ ‘ಕಾಂಗ್ರೆಸ್ ರೇಡಿಯೋ’ದ ಉಸ್ತುವಾರಿ, ಪ್ರಸಾರ ನೋಡಿಕೊಳ್ಳುತ್ತಿದ್ದರು. ಜೀವದ ಹಂಗು ತೊರೆದ ತರುಣಿ ಉಷಾ ಮೆಹ್ತಾರ ಸಾಹಸ ಅದ್ಭುತವಾದುದು. ೯೦ ದಿನಗಳ ನಂತರ, ಈ ಅಲೆಮಾರಿ ರೇಡಿಯೋ ಸ್ಟೇಶನ್ನಿನ ಮೇಲೆ ಪೊಲೀಸರ ದಾಳಿಯಾಯಿತು; ಆಗ ಲೋಹಿಯಾ ದೇಶದ ಯಾವುದೋ ಮೂಲೆಯಲ್ಲಿದ್ದರು. ವಿಠಲದಾಸ್, ಜವೇರಿ, ಉಷಾ ಮೆಹ್ತಾ ಜೈಲು ಶಿಕ್ಷೆಗೊಳಗಾದರು. 

ಮುಂದೆ ಸ್ವತಂತ್ರ ಭಾರತದಲ್ಲಿ ಓದು ಮುಂದುವರಿಸಿ, ಡಾಕ್ಟರೇಟ್ ಪಡೆದ ಉಷಾ ಮೆಹ್ತಾ ಮುಂಬೈ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್  ಪ್ರೊಫೆಸರ್ ಆದರು; ಇಂಡಿಯಾದ ಸಾರ್ವಜನಿಕ ಜೀವನದ ಪತನ ಕಂಡು ‘ಇದಕ್ಕಾಗಿ ನಾವು ಅಂದು ಹೋರಾಡಬೇಕಿತ್ತೇ?’ ಎಂದು  ನೊಂದುಕೊಳ್ಳುತ್ತಿದ್ದರು. ೨೦೧೦ರಲ್ಲಿ ತೀರಿಕೊಂಡ ಉಷಾ ಮೆಹ್ತಾರ ಜೀವನವನ್ನಾಧರಿಸಿ ಕಣ್ಣನ್ ಅಯ್ಯರ್ ನಿರ್ದೇಶಿಸಿದ `ಏ ವತನ್ ಮೇರೆ ವತನ್’ ಸಿನಿಮಾದಲ್ಲಿ (೨೦೨೪) ಸಾರಾ ಆಲಿ ಖಾನ್ ಉಷಾ ಮೆಹ್ತಾ ಪಾತ್ರ ಮಾಡಿದ್ದರು.  

ಒಂದು ಅಂಕಿ ಅಂಶದ ಪ್ರಕಾರ, ಆಗಸ್ಟ್ ಕ್ರಾಂತಿಯಲ್ಲಿ ೬೦೨೨೯ ಜನ ಬಂಧನಕ್ಕೊಳಗಾದರು; ಡಿಫೆನ್ಸ್ ಕಾಯ್ದೆಯಡಿಯಲ್ಲಿ ೧೮೦೦೦ ಜನ ಬಂಧನಕ್ಕೊಳಗಾದರು; ಪೊಲೀಸರು, ಹಾಗೂ ಸೈನಿಕರು ೯೪೦ ಜನರನ್ನು ಕೊಂದರು; ೧೬೩೦ ಜನ ಗಾಯಗೊಂಡರು; ೪೪ ಜನ ಗಲ್ಲು ಶಿಕ್ಷೆ ಅನುಭವಿಸಿದರು. ವಿಷಾದದ ಸಂಗತಿಯೆಂದರೆ, ‘ಆಗಸ್ಟ್ ಕ್ರಾಂತಿ ದಿನ’ ವನ್ನು ನೆನೆದ ಸುದ್ದಿ ಕಣ್ಣಿಗೆ ಬೀಳಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯನ್ನು ಮುನ್ನಡೆಸಿದ ಅಜ್ಞಾತ ಗುಂಪುಗಳು; ಪೊಲೀಸರ ಹಿಂಸೆಯನ್ನು ಎದುರಿಸಿದ ಸಾಮಾನ್ಯ ಭಾರತೀಯರ ಕೆಚ್ಚು, ಬಲಿದಾನ ಮಾಡಿದವರ ತ್ಯಾಗ; ರಾತ್ರೋರಾತ್ರಿ ಕರಪತ್ರಗಳನ್ನು ಹಂಚುತ್ತಿದ್ದ ನಿರ್ಭೀತ ತರುಣ ತರುಣಿಯರು; ಭೂಗತ ಬಾನುಲಿಯ ಮೂಲಕ ದೇಶವನ್ನು ಎಚ್ಚರದಲ್ಲಿಟ್ಟ ಧೀರರು ಮುಂತಾದ ಸ್ಫೂರ್ತಿದಾಯಕ ಸತ್ಯಗಳು ಕಣ್ಮರೆಯಾಗಲು ಬಿಡಬಾರದು.  

೧೯೬೭ರ ಆಗಸ್ಟ್ ಕ್ರಾಂತಿಯ ಬೆಳ್ಳಿ ಮಹೋತ್ಸವದ ಕಾಲದಲ್ಲಿ ಬರೆದ ಲೇಖನವೊಂದರಲ್ಲಿ ಆಗಸ್ಟ್ ಕ್ರಾಂತಿ ನಿಜವಾದ ಅರ್ಥದಲ್ಲಿ ಜನತಾ ಕ್ರಾಂತಿಯಾಗಿತ್ತು ಎಂಬುದನ್ನು ಲೋಹಿಯಾ ನೆನೆದರು:

‘ಆಗಸ್ಟ್ ೯, ೧೯೪೨ ಜನರ ಸಂಕಲ್ಪವನ್ನು ವ್ಯಕ್ತಪಡಿಸಿತು: ನಾವು ಸ್ವತಂತ್ರರಾಗಬಯಸುತ್ತೇವೆ ಮತ್ತು ಸ್ವತಂತ್ರರಾಗುತ್ತೇವೆ ಎಂಬ ಸಂಕಲ್ಪ ಅದು. ನಮ್ಮ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಟಿಗಟ್ಟಲೆ ಜನರು ಸ್ವತಂತ್ರರಾಗುವ ಆಸೆಯನ್ನು ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಇದನ್ನು ಸಾಕಷ್ಟು ಶಕ್ತಿಯುತವಾಗಿಯೇ ವ್ಯಕ್ತಪಡಿಸಲಾಯಿತು. ಬಲ್ಲಿಯಾ ಎಂಬ ಜಿಲ್ಲೆ ಕೆಲ ಕಾಲ ಸ್ವತಂತ್ರವಾಯಿತು… ನೂರಾರು ಪೊಲೀಸ್ ವಲಯಗಳು ಸ್ವತಂತ್ರವಾದವು. ಆದರೆ ಜನರ ಸಂಕಲ್ಪ ಸಾಕಷ್ಟು ಶಕ್ತಿಯುತವಾಗಿತ್ತಾದಾರೂ ಅದರ ಆಯುಷ್ಯ ದೀರ್ಘವಾಗಿರಲಿಲ್ಲ.’  

ಜಗತ್ತಿನ ಸ್ವಾತಂತ್ರ‍್ಯ ಹೋರಾಟಗಳ ಚರಿತ್ರೆಯಲ್ಲೇ ಅನನ್ಯವಾದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಸಾವಿರಾರು ನಾಯಕ ನಾಯಕಿಯರು, ಲಕ್ಷಾಂತರ ಚಳುವಳಿಗಾರರು, ಜನಸಾಮಾನ್ಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟಿರುವ ಸ್ವಾತಂತ್ರ‍್ಯ ಅತ್ಯಂತ ಅಮೂಲ್ಯವಾದುದು ಎಂದು ನೆನಪಿಸುತ್ತಲೇ ಇರುತ್ತದೆ. ಇಂಥ ಸ್ವಾತಂತ್ರ‍್ಯವನ್ನು ನಾವು ರಕ್ಷಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂಬುದನ್ನು ನಾವು ದಣಿವರಿಯದೆ ನೆನಪು ಮಾಡುತ್ತಿರಲೇಬೇಕು.   

blog
02 Aug 2026 ಕಣ್ಣ ರೆಪ್ಪೆಯ ಬರವಣಿಗೆ!

ಮೊನ್ನೆ ಬೆಂಗಳೂರಿನ ಜಯನಗರ ನ್ಯಾಶನಲ್ ಕಾಲೇಜಿನಲ್ಲಿ ಕತೆಗಾರ-ಗೆಳೆಯ ಮೊಗಳ್ಳಿ ಗಣೇಶರ ಸಾಹಿತ್ಯ ಕುರಿತು ಮಾತಾಡುತ್ತಾ, ಮೊಗಳ್ಳಿ ಎಡೆಬಿಡದೆ ಬರೆಯುತ್ತಿದ್ದುದು ನೆನಪಾಗಿ, ‘ಬರೆಯುವುದು ೨೪/೭ ಕೆಲಸ; ಅದು ಪಾರ್ಟ್ ಟೈಮ್ ಕೆಲಸ ಅಲ್ಲ’ ಅಂದೆ.  ಗಣೇಶ್ ಸಾವಿನ ಹಾಸಿಗೆಯಲ್ಲಿ ಬರೆದ ‘ಹೊಸಿಲು ದಾಟಿದವರು’ ಎಂಬ ಕೊನೆಯ ಕತೆಯ ಹಸ್ತಪ್ರತಿಯ ಹಾಳೆಗಳು ಕಣ್ಣೆದುರು ಬಂದವು. ಸಾವನ್ನು ಮುಂದೂಡಲು ‘ಅರೇಬಿಯನ್ ನೈಟ್ಸ್’ನ ಶಹರ್ಜಾದೆ ಹೇಳಿದ ಸಾವಿರದೊಂದು ಕತೆಗಳಂತೆ ಗಣೇಶ್ ಕೂಡ ಸಾವನ್ನು ಮುಂದೂಡಲು ಕತೆ ಬರೆಯುತ್ತಿದ್ದನೇನೋ ಅನ್ನಿಸಿತು. 

ಈ ಅಂಕಣದಲ್ಲಿ ಹಿಂದೊಮ್ಮೆ ಚರ್ಚಿಸಿದ ಮಾರ್ಕ್ವೆಜ್ ಆತ್ಮಕತೆ ‘ಲಿವಿಂಗ್ ಟು ಟೆಲ್ ದ ಟೇಲ್’ ನೆನಪಾಯಿತು. ಪ್ರೊಸ್ಟೇಟ್ ಕ್ಯಾನ್ಸರಿನಿಂದ ಚೇತರಿಸಿಕೊಂಡು ಬರೆದ ತನ್ನ ಅರ್ಧ ಆತ್ಮಕತೆಗೆ ಮಾರ್ಕ್ವೆಜ್ ಕೊಟ್ಟ ಹೆಸರಿನ ಇನ್ನೊಂದು ಅರ್ಥ ಈಗ ಹೊಳೆಯುತ್ತಿದೆ: ಮಾರ್ಕ್ವೆಜ್ ಅರ್ಧಕ್ಕೆ ಬರೆದು ಬಿಟ್ಟು ಹೋದ ಕತೆ ಈಗ ಬದುಕಿ ಲೇಖಕನ ಕತೆ ಹೇಳುತ್ತಿದೆ! ಅಂದರೆ, ‘ದ ಟೇಲ್ ಈಸ್ ಲಿವಿಂಗ್ ಟು ಟೆಲ್ ದ ಟೇಲ್ ಆಫ್ ದಿ ಆಥರ್!’ 

ಬರೆಯುವ ಆಸೆ, ಕಾತರ, ಒತ್ತಡ, ಬರೆದು ಹಗುರಾಗುವ ತುಡಿತ ಇವೆಲ್ಲ ಸೇರಿ ಸಾವನ್ನು ಕೊಂಚ ಮುಂದೂಡಿದ ಒಂದು ಅಪೂರ್ವ ಜೀವನಗಾಥೆ ಕುರಿತು ಹಿಂದೊಮ್ಮೆ ನಮ್ಮ ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿದ್ದು ನೆನಪಾಯಿತು. ಆಗ ಗೆಳೆಯ ಲಿಂಗದಹಳ್ಳಿ ಚೇತನ್‌ಕುಮಾರ್ ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್‍ ಫ್ಲೈ’ ಸಿನಿಮಾದ ಸಿ.ಡಿ. ತಂದುಕೊಟ್ಟಾಗ ಜಾನ್ ಡೊಮಿನೀಕ್ ಬಾಬಿಯ ಮೂಲ ಪುಸ್ತಕ ಸಿಕ್ಕಿರಲಿಲ್ಲ. ೧೯೯೭ರಲ್ಲಿ ಪ್ರಕಟವಾದ ಈ ಪುಸ್ತಕ ಮೊನ್ನೆ ಕಣ್ಣಿಗೆ ಬಿತ್ತು. 

ನೂರ ನಲವತ್ತು ಪುಟಗಳ ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್ ಫ್ಲೈ’ ಎಂಬ ಪುಟ್ಟ ಪುಸ್ತಕ ಹೀಗೆ ಶುರುವಾಗುತ್ತದೆ: 

'ಕಿಟಕಿಯ ಸವೆದ ಪರದೆಯ ಮೂಲಕ ಮಂದ ಬೆಳಕು ಬೆಳಗಾಯಿತು ಎಂದು ಘೋಷಿಸುತ್ತದೆ. ನನ್ನ ಹಿಮ್ಮಡಿ ನೋಯುತ್ತಿದೆ. ತಲೆಯ ಮೇಲೆ ಹೆಣ ಭಾರವಿದೆ. ಎಂಥದೋ ಅಗೋಚರವಾದ ಡೈವಿಂಗ್ ಬೆಲ್ ನನ್ನ ದೇಹವನ್ನು ಸೆರೆಯಾಳಾಗಿಸಿಬಿಟ್ಟಿದೆ. ನನ್ನ ರೂಮು ಕತ್ತಲೆಯಿಂದ ಮೆಲ್ಲಗೆ ಹೊರಗಿಣುಕುತ್ತಿದೆ. ನನ್ನ ವಸ್ತುಗಳ ಮೇಲೆ ಕಣ್ಣಾಡಿಸುತ್ತೇನೆ:  ಪ್ರಿಯರ ಫೋಟೋಗಳು, ನನ್ನ ಮಕ್ಕಳು ಬರೆದ ಚಿತ್ರಗಳು, ಪೋಸ್ಟರುಗಳು, ಗೆಳೆಯ ಕಳಿಸಿದ ಪುಟ್ಟ ತಗಡಿನ ಸೈಕ್ಲಿಸ್ಟ್… ಕಳೆದ ಆರು ತಿಂಗಳಿಂದ, ಬಂಡೆಗೆ ಅಂಟಿಕೊಂಡ ಒಂಟಿ ಏಡಿಯ ಥರ ನಾನು ಅಂಟಿಕೊಂಡಿರುವ ಈ ಹಾಸುಗೆಯ ಮೇಲೆ ತೂಗುತ್ತಿರುವ ನಾಲ್ಕನೇ ಕಂಬಿ… ನನ್ನ ಚಿರಪರಿಚಿತ ಬದುಕು ಕಳೆದ ವರ್ಷದ ೮ನೇ ಡಿಸೆಂಬರ್ ಆರಿಹೋಯಿತು ಎಂಬುದನ್ನು ಮತ್ತೆ ನೆನೆಯಬೇಕಾದ್ದೇ ಇಲ್ಲ.’

ಈ ಪುಸ್ತಕವನ್ನು ಆಧರಿಸಿದ ಸಿನಿಮಾ ಮಾನವನ ಮೈ ಮನಸ್ಸು ಪ್ರಜ್ಞೆಗಳ ಹೋರಾಟದ ಹೊಸ ಮುಖವನ್ನು ಕಾಣಿಸಿದ್ದನ್ನು ಕುರಿತ ಹಳೆಯ ಟಿಪ್ಪಣಿಗಳು:

೮ ಡಿಸೆಂಬರ್ ೧೯೯೫. ‘ಎಲ್ಲೆ’ ಎಂಬ ಫ್ರೆಂಚ್ ಪತ್ರಿಕೆಯ ಸಂಪಾದಕನಾಗಿದ್ದ ಜಾನ್ ಡೊಮಿನೀಕ್ ಬಾಬಿಗೆ ಇದ್ದಕ್ಕಿದ್ದಂತೆ ಸ್ಟ್ರೋಕ್ ಆಯಿತು. ಮೂರು ವಾರಗಳಿಂದ ಕೋಮಾ ಸ್ಥಿತಿಯ ನಂತರ ಇದೀಗ ಪ್ರಜ್ಞೆ ಬಂದಿದೆ. ಡಾಕ್ಟರ್ ಮಾತಾಡುತ್ತಿದ್ದಾರೆ. ಅದು ಬಾಬಿಗೆ ಅರ್ಥವಾಗುತ್ತಿದೆ. 

‘ಆದರೆ, ಡಾಕ್ಟರೇ, ನನ್ನ ಮಾತೇಕೆ ನಿಮಗೆ ಕೇಳಿಸುತ್ತಿಲ್ಲ…' ಬಾಬಿಯ ಮನಸ್ಸು ಚೀರುತ್ತಿದೆ...ನರಶಾಸ್ತ್ರಜ್ಞ ಡಾ. ಅಲನ್ ಲೆಪಾಗ್ ಹೇಳುತ್ತಾನೆ. 'ನಿನಗೆ ಸೆರೆವಾಸ್ಕುಲಾರ್ ಅಪಘಾತ ಆಗಿದೆ. ಇದರಿಂದಾಗಿ ನಿನ್ನ ಮಿದುಳು ಮತ್ತು ಸ್ಟೈನಲ್ ಕಾರ್ಡಿನ ನಡುವಣ ಕೊಂಡಿ ಕಳಚಿಹೋಗಿದೆ. ಮೊದಲಾಗಿದ್ದರೆ, ಇಷ್ಟಕ್ಕೇ ನೀನು ಸತ್ತೆ ಅಂತ ತೀರ್ಮಾನಿಸುತ್ತಿದ್ದರು. ಈಗ ಹಾಗಲ್ಲ, ನಾವು ನಿನ್ನನ್ನು ಇನ್ನಷ್ಟು ಕಾಲ ಜೀವಿಸುವ ಥರ ಮಾಡಬಲ್ಲೆವು.' 

'ಇದು ಜೀವನವೇ?' ಎಂದುಕೊಳ್ಳುತ್ತಾನೆ ಬಾಬಿ. ಅದು ಯಾರಿಗೂ ಕೇಳಿಸುವುದಿಲ್ಲ. 

ಡಾಕ್ಟರು, 'ನಿನಗೆ ಸಂಪೂರ್ಣ ಪಾರ್ಶ್ವವಾಯು ಬಡಿದಿದೆ. ಇದಕ್ಕೆ 'ಲಾಕ್ಡ್ ಇನ್ ಸಿಂಡ್ರೋಮ್' ಅಂತಾರೆ. ಅಲ್ಲಪ್ಪಾ, ನೀನು ಸಿಗರೇಟ್ ಸೇದ್ತಾ ಇರಲಿಲ್ಲ. ಈ ಸ್ಟ್ರೋಕ್‌ಗೆ ಕಾರಣಾನೇ ಗೊತ್ತಾಗ್ತಾ ಇಲ್ಲ. ಆದರೂ ಒಂದು ಭರವಸೆ ಇದೆ. ಅದೇನೂ ಅಂದ್ರೆ, ನಿನ್ನ ಮಿದುಳು ಚೆನ್ನಾಗಿ ಕೆಲಸ ಮಾಡ್ತಾ ಇದೆ. ನಿನ್ನ ಒಂದು ಕಣ್ಣು ಕೆಲಸ ಮಾಡ್ತಾ ಇದೆ. ಹಾಂ, ನಿನ್ನ ನೋಡಿಕೊಳ್ಳೋಕೆ ಇಬ್ಬರು ಸುಂದರಿಯರು ಬರ್ತಾರೆ. ಟ್ರೈ ಮಾಡೋಣ' ಎನ್ನುತ್ತಾರೆ.

ಮಾರನೆಯ ದಿನ ಹೆನ್ರಿಟ್ ಮತ್ತು ಮಾರೀ ಎಂಬ ಇಬ್ಬರು ಸುಂದರಿಯರು ಬಾಬಿಗೆ ಫಿಸಿಯೋ ಥೆರಪಿ ಮಾಡಲು ಒಳಬರುತ್ತಾರೆ! ‘ಅರೆ! 'ನಾನೇನು ಸ್ವರ್ಗದಲ್ಲಿದ್ದೀನಾ!' ಎನಿಸುತ್ತದೆ ಬಾಬಿಗೆ.
'ನಾನು ಸ್ಪೀಚ್ ಥೆರಪಿಸ್ಟ್, ನಿನ್ನ ನಾಲಿಗೆ ಮತ್ತು ತುಟಿಗಳ ಮೇಲೆ ವರ್ಕ್ ಮಾಡೋಳು' ಎನ್ನುತ್ತಾಳೆ ಹೆನ್ರಿಟ್.

'ಇದೊಳ್ಳೆ ತಮಾಷೆಯಾಗಿದೆಯಲ್ಲ!' ಬಾಬಿ ಅಂದುಕೊಂಡ.

'ಈಗ ಒಂದು ಕೆಲಸ ಮಾಡೋಣ. ನಾನೀಗ ಕೆಲವು ಪ್ರಶ್ನೆ ಕೇಳೀನಿ. ನೀನು ಒಂದು ಸಲ ರೆಪ್ಪೆ ಬಡಿದರೆ 'ಹೌದು' ಅಂತ. ಎರಡು ಸಲ ರೆಪ್ಪೆ ಬಡಿದರೆ ‘ಇಲ್ಲ’ ಅಂತ. ಈಗ ಹೇಳು- ‘ನಾನು, ಅಂದರೆ ಹೆನ್ರಿಟ್, ಗಂಡಸಾ?' ಹೆನ್ರಿಟ್ ಕೇಳುತ್ತಾಳೆ.

ಬಾಬಿಯ ರೆಪ್ಪೆ ‘ಇಲ್ಲ’ ಎಂದು ಸೂಚಿಸಲು ಎರಡು ಸಲ ಬಡಿಯುತ್ತದೆ. 

ಹೆನ್ರಿಟ್, 'ನಾನು ಹೆಂಗಸಾ?' ಎಂದಾಗ, ಬಾಬಿಯ ರೆಪ್ಪೆ ಒಂದು ಸಲ ಬಡಿಯುತ್ತದೆ. ಬಾಬಿ ಈಗ ‘ರೆಪ್ಪೆ ಭಾಷೆ’ ಕಲಿಯಲು ಶುರುಮಾಡಿದ್ದಾನೆ!

ಬಾಬಿಯ ಹೆಂಡತಿ ಬರುತ್ತಾಳೆ. ರೆಪ್ಪೆ ಭಾಷೆಯ ಮೂಲಕ ಬಾಬಿಯ ಜೊತೆ ಮಾತಾಡುತ್ತಾಳೆ.  

ಮರುದಿನ ಥೆರಪಿಸ್ಟ್ ಹೆನ್ರಿಟ್ ಹೇಳುತ್ತಾಳೆ: 'ನಾವೆಲ್ಲ ಸೇರಿ ಒಂದು ಮೆಥೆಡ್ ಹುಡುಕಿದೀವಿ, ನಾನೀಗ ಆರ್ ಇ ಎಸ್ ಎ ಆರ್‍ ಐ ಎನ್ - ಹೀಗೆ ಫ್ರೆಂಚ್ ಅಕ್ಷರ ತೋರಿಸ್ತೀನಿ. ನೀನು ಏನಾದರೂ ಹೇಳಬೇಕೂಂತ ಅನ್ನಿಸಿದಾಗ ರೆಪ್ಪೆ ಮಿಟುಕಿಸು. ನಾನು ಒಂದೊಂದೇ ಅಕ್ಷರ ಓದ್ತೀನಿ, ನಿನಗೆ ಬೇಕಾದ ಮೊದಲನೇ ಅಕ್ಷರ ಬಂದಾಗ ಒಂದ್ಬಲ ರೆಪ್ಪೆ ಬಡಿ. ನಾನು ಬರ್ಕೋತೀನಿ. ಇದೇ ಥರ ಶಬ್ದ, ವಾಕ್ಯ ರಚನೆ ಮಾಡೋಣ.'
ಈ ರೆಪ್ಪೆ ಬಡಿತದ ಶಬ್ದರಚನೆ ಬಾಬಿಗೆ ತ್ರಾಸವೆನ್ನಿಸತೊಡಗುತ್ತದೆ. 

ನರ್ಸುಗಳು ನೀರಿನಲ್ಲಿ ಥೆರಪಿ ಮಾಡುತ್ತಿದ್ದರೆ, ‘ಇದೇನು! ನನ್ನನ್ನು ದೊಡ್ಡ ಮಗೂ ಥರ ಆಡಿಸ್ತಿದಾರಲ್ಲ! ಇದೇನು ನಗೆಪಾಟಲಪ್ಪ!’ ಎನಿಸುತ್ತದೆ. 'ಒಬ್ಬ ಹುಚ್ಚ ಮಾತ್ರ ನಗೋದಕ್ಕೆ ಏನೂ ಇರದಿದ್ದರೂ ನಗ್ತಾ ಇರ್ತಾನೆ' ಅಂದ ಕವಿಯೊಬ್ಬನ ಮಾತು ನೆನಪಿಗೆ ಬರುತ್ತದೆ.

ಬಾಬಿಯ ಹೆಂಡತಿ ಅವನಿಗೆ ಕನ್ನಡಿ ತೋರಿಸಿ ಮುತ್ತು ಕೊಡುವುದನ್ನು ಕಲಿಸಲೆತ್ನಿಸುತ್ತಾಳೆ. ಕನ್ನಡಿ ಕಿತ್ತೆಸೆಯಬೇಕೆನಿಸುತ್ತದೆ.  

ಹೆನ್ರಿಟ್‌ ರೆಪ್ಪೆ ಸಂವಹನದ ಪಾಠ ಶುರುವಾಗುತ್ತದೆ. ಒಂದೊಂದೇ ಅಕ್ಷರಕ್ಕೆ ಬಾಬಿ ರೆಪ್ಪೆ ಬಡಿದಂತೆ, 'ಐ ವಾಂಟ್ ಟು ಡೈ' ಎಂಬ ವಾಕ್ಯ ಮೂಡುತ್ತದೆ.

'ಆಂ! ಎಷ್ಟು ಧೈರ್ಯ ನಿನಗೆ! ನಿನಗಾಗಿ ಕಾಳಜಿ ತೋರಿಸೋರು, ಇಷ್ಟೊಂದು ಪ್ರೀತಿಸೋರು ಇದಾರೆ. ಹೀಗಿದ್ದೂ ನಾನು ಸಾಯಬೇಕು ಅಂತೀಯಲ್ಲ?' ಎನ್ನುತ್ತಾಳೆ ಹೆನ್ರಿಟ್.

ಹಿಂದೊಮ್ಮೆ ಬಾಬಿ ಪ್ರಕಾಶಕಿಯೊಬ್ಬಳಿಗೆ ಪುಸ್ತಕ ಬರೆದು ಕೊಡಲು ಒಪ್ಪಿದ್ದ. 'ಈಗಲೂ ಬಾಬಿ ಪುಸ್ತಕ ಬರೆಯಬಲ್ಲ' ಎಂದು ಹೆನ್ರಿಟ್ ಆ ಪ್ರಕಾಶಕಿಗೆ ಪೋನ್ ಮಾಡುತ್ತಾಳೆ. 

ಬಾಬಿ ತನ್ನ ರೆಪ್ಪೆ ಭಾಷೆಯ ಮೂಲಕ ಸೂಚಿಸಿದ್ದನ್ನು ಕ್ಲಾಡ್ ಎಂಬ ಹುಡುಗಿ ಅಪಾರ ಸಹನೆಯಿಂದ ಬರೆದುಕೊಳ್ಳಲಾರಂಭಿಸುತ್ತಾಳೆ. ಲ್ಯಾಟಿನ್ ಭಾಷೆಯಲ್ಲಿ ಈ ಥರದ ಬರವಣಿಗೆಯನ್ನು amanuensis ಎನ್ನುತ್ತಾರೆ. ಅಂದರೆ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಬರೆದುಕೊಳ್ಳುವುದು. ಡಿಕ್ಟೇಶನ್, ಉಕ್ತಲೇಖನದ ಥರ ಬಾಬಿಯ ಬರವಣಿಗೆಯನ್ನು ‘ಸಂಜ್ಞಾಲೇಖನ’ ಅನ್ನಬಹುದೇನೋ.

ಬಾಬಿಯ ರೆಪ್ಪೆ ಭಾಷೆ ಹೇಳಿದ್ದನ್ನು ಕ್ಲಾಡ್ ಬರೆದುಕೊಳ್ಳುವ ಕಸರತ್ತು ಶುರುವಾಗುತ್ತದೆ:

'ನನ್ನಿಡೀ ಜೀವನ ವೈಫಲ್ಯಗಳ ಸರಣಿಯಂತೆ ಕಾಣುತ್ತಿದೆ…ನಾನು ಪ್ರೀತಿಸಲಾಗದ ಹೆಂಗಸರು, ಕೈ ತಪ್ಪಿದ ಅವಕಾಶಗಳು, ನಾನೇ ಜಾರಿಹೋಗಲು ಬಿಟ್ಟ ಸಂತೋಷದ ಗಳಿಗೆಗಳು... ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿದ್ದರೂ, ಗೆಲ್ಲುವವನ ಮೇಲೆ ಬೆಟ್ ಕಟ್ಟದೇ ಕಳೆದುಕೊಂಡ ರೇಸುಗಳು... ನಾನೇನು ಕುರುಡಾಗಿದ್ದೆನೆ? ಮೂರ್ಖನಾಗಿದ್ದೆನೆ?’

ಬಾಬಿಯ ಬದುಕು-ಬರವಣಿಗೆ ಹೀಗೆ ನಡೆದಿರುವಾಗ ಒಂದು ದಿನ ಬಾಬಿಯ ತಂದೆಯ ಫೋನ್ ಬರುತ್ತದೆ. ಫೋನ್ ರಿಸೀವರನ್ನು ಬಾಬಿಯ ಕಿವಿಗಿಡುತ್ತಾರೆ: ‘ಅತ್ತ ನೀನು ನಿನ್ನ ದೇಹದಲ್ಲಿ, ಇತ್ತ ನಾನು ನನ್ನ ಅಪಾರ್ಟ್‌ಮೆಂಟ್‌ನಲ್ಲಿ ’ಲಾಕ್ಡ್ ಇನ್ ಸಿಂಡ್ರೋಮ್‌’ನಲ್ಲಿ ಸಿಕ್ಕಿಬಿದ್ದಿದ್ದೇವೆ' ಎಂದು ತಂದೆ ಅಳಲಾರಂಭಿಸುತ್ತಾನೆ. 

ಆಮೇಲೆ, ಐನಸ್ ಎಂಬ ಬಾಬಿಯ ಹಳೆಯ ಪ್ರೇಯಸಿ 'ನಾನು ಬರಲೇ' ಎಂದು ಬಾಬಿಯ ಪತ್ನಿ ಸಿಲಿನಾ ಎದುರೇ ಫೋನ್ ಮಾಡುತ್ತಾಳೆ. ಬಾಬಿ ರೆಪ್ಪೆಭಾಷೆಯಲ್ಲಿ 'ಪ್ರತಿ ದಿನ ನಿನಗಾಗಿ ಕಾಯುತ್ತಿರುವೆ' ಎನ್ನುತ್ತಾನೆ! 

ಬಾಬಿಯ ರೆಪ್ಪೆ ಭಾಷೆ ಬರೆಸುತ್ತಾ ಹೋಗುತ್ತದೆ: 'ನನಗೆ ಭಾನುವಾರ ಎಂದರೆ ಭಯ. ಇವತ್ತು ಫಿಸಿಯೋಥೆರಪಿಸ್ಟ್ ಬರಲ್ಲ. ಭಾನುವಾರ ಅನ್ನೋದು ಸುದೀರ್ಘ ಮರುಭೂಮಿಯ ಹಾಗೆ...' 
ಬಾಬಿಯ ರೆಪ್ಪೆಬರವಣಿಗೆ ಮುಂದುವರೆಯುತ್ತದೆ. ಈಜುಕೊಳದಲ್ಲಿ ಡೈವಿಂಗ್ ಸೂಟ್‌ನಲ್ಲಿ ಜಲಚಿಕಿತ್ಸೆ ಪಡೆಯುತ್ತಿರುವ ಬಾಬಿಗೆ ತಾನು ಬರೆಯುತ್ತಿರುವ ಅನುಭವ ಕಥನಕ್ಕೆ ‘ಪ್ರೆಷರ್ ಕುಕ‌ರ್‍’ ಅಥವಾ 'ಡೈವಿಂಗ್ ಬೆಲ್' ಅಂತ ಹೆಸರಿಡಬಹುದು ಅನಿಸುತ್ತದೆ.

ಪವಾಡಗಳು ಜರುಗುವುದಿಲ್ಲ ಎಂಬ ಕಟು ಸತ್ಯ ಬಾಬಿಗೆ ಗೊತ್ತಿತ್ತು. ಆದರೂ ಏನಾದರೂ ಪವಾಡವಾಗಿ, ನಾನು ಹಾಡಬಲ್ಲೆ ಎಂದುಕೊಳ್ಳುತ್ತಾನೆ. ‘ನೀನು ಹಾಡಬಲ್ಲೆ’ ಎಂದು ಎಲ್ಲರೂ ಹುರಿದುಂಬಿಸುತ್ತಾರೆ. ಆದರೆ ಕೊನೆಗೂ ಹಾಡಲಾಗದ ಬಾಬಿಯ ಪುಸ್ತಕವೇ ಅವನ ಹಾಡಾಗಿತ್ತು. 

ಜಾನ್ ಡೊಮಿನೀಕ್ ಬಾಬಿ 'ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್ ಫ್ಲೈ' ಪುಸ್ತಕವನ್ನು ಎರಡು ಲಕ್ಷ ಸಲ ತನ್ನ ಎಡಗಣ್ಣಿನ ರೆಪ್ಪೆ ಬಡಿದು ಬರೆಸಿದ. ಇದನ್ನು ಬರೆದುಕೊಂಡ ಕ್ಲಾಡ್ ಎಂಬ ಹುಡುಗಿಯ ಸಹನೆ, ಬದ್ಧತೆಗಳು ಊಹಿಸಲೂ ಅಸಾಧ್ಯವಾದುವು. ಅದು ಪಶ್ಚಿಮ. ಅದರಲ್ಲೂ ಫ್ರಾನ್ಸ್. ಅಲ್ಲಿನ ವೃತ್ತಿಪರತೆಯ ಬದ್ಧತೆ, ಶಿಸ್ತುಗಳ ಥರವೇ ಬೇರೆ.

ಪುಸ್ತಕದ ಕೊನೆಯ ಪ್ಯಾರಾದ ಆರಂಭದ ಸಾಲುಗಳು: 

‘ಕಳೆದ ಎರಡು ತಿಂಗಳಿಂದ ಪ್ರತಿ ಮದ್ಯಾಹ್ನದ ಮೌನದಲ್ಲಿ, ಶೂನ್ಯದಲ್ಲಿ ನಾವು ತಾಳ್ಮೆಯಿಂದ ಅಗೆದು ತೆಗೆದ ಈ ಪುಟಗಳನ್ನು ಕ್ಲಾಡ್ ಗಟ್ಟಿಯಾಗಿ ಓದುತ್ತಿದ್ದಾಳೆ.  ಕೆಲವು ಪುಟಗಳನ್ನು ಮತ್ತೆ ನೋಡಿದಾಗ ಖುಷಿ. ಇನ್ನು ಕೆಲವನ್ನು ಕಂಡಾಗ ಬೇಜಾರು. ಇದೆಲ್ಲ ಸೇರಿ ಒಂದು ಪುಸ್ತಕ ಆಗುತ್ತದೆಯೆ?’ 

ಪುಸ್ತಕದ ಕೊನೆಯ ಸಾಲುಗಳು:

‘ನನ್ನ ಡೈವಿಂಗ್ ಬೆಲ್ ತೆರೆಯುವ ಕೀಲಿಕೈಗಳು ಈ ಬ್ರಹ್ಮಾಂಡದಲ್ಲಿವೆಯೆ? ನಿಲ್ದಾಣವಿಲ್ಲದ ಒಂದು ಸುರಂಗ ಮಾರ್ಗ? ನನ್ನ ಸ್ವಾತಂತ್ಯ್ರವನ್ನು ಮರಳಿ ಪಡೆಯುವ ಶಕ್ತಿಯಿರುವ ನಾಣ್ಯ ಇದೆಯೆ? ನಾವು ಹೀಗೇ ನೋಡುತ್ತಾ. ಕಾಯುತ್ತಾ ಇರಬೇಕು. ಈಗ ವಿರಮಿಸುವೆ.                                              (ಬರ್ಕ್-ಪ್ಲೇಗ್ ಜುಲೈ ಆಗಸ್ಟ್ ೧೯೯೬)

೭ ಮಾರ್ಚ್ ೧೯೯೭.  ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್ ಫ್ಲೈ’ಪುಸ್ತಕ ಪ್ರಕಟವಾದ ಮೊದಲ ದಿನವೇ ೨೫೦೦೦ ಪ್ರತಿಗಳು ಖರ್ಚಾದವು. ಈ ಫ್ರೆಂಚ್ ಪುಸ್ತಕ ಬಿಡುಗಡೆಯಾದ ಎರಡೇ ದಿನಕ್ಕೆ, ೯ ಮಾರ್ಚ್ ೧೯೯೭ರಂದು ಜಾನ್ ಬಾಬಿ ನ್ಯುಮೋನಿಯಾದಿಂದ ತೀರಿಕೊಂಡ. ಆ ವಾರ ಪುಸ್ತಕದ ಒಂದೂವರೆ ಲಕ್ಷ ಪ್ರತಿಗಳು ಖರ್ಚಾದವು. ಈಗ ಮರಾಠಿ, ತಮಿಳು ಅನುವಾದಗಳೂ ಸೇರಿದಂತೆ ಮಿಲಿಯನ್‌ಗಟ್ಟಲೆ ಪ್ರತಿಗಳು ಓದುಗ, ಓದುಗಿಯರನ್ನು ತಲುಪಿವೆ. ಇಂಗ್ಲಿಷ್ ಅನುವಾದದ ಪಿಡಿಎಫ್ ಪ್ರತಿ ಕೂಡ ಜಾಲತಾಣದಲ್ಲಿದೆ. 

ಈ ಹಿಂದೆ ’ಮಯೂರ’ ದಲ್ಲಿ ಮೊಗಳ್ಳಿ ಕುರಿತು ಸುದೀರ್ಘ ಲೇಖನ ಬರೆದ ಮೇಲೆ, ಮತ್ತೆ ಮೊಗಳ್ಳಿ ಗಣೇಶ್ ಸಾವಿನ ಹಾಸಿಗೆಯಲ್ಲಿ ಬರೆದ ಕತೆಗಳ ಬಗ್ಗೆ ಮೊನ್ನೆ ಮಾತಾಡಿದ ನಂತರ ಯಾಕೋ ನನ್ನ ಅಲೆವ ಮನ ಜಾನ್ ಬಾಬಿಯ ಬರವಣಿಗೆಯ ಬದುಕಿನತ್ತ ಹೊರಳಿತು; ಹೀಗಾಗಿ ಬಾಬಿಯ ಅಪೂರ್ವ ಬರಹ ಸಾಹಸವನ್ನು ಇಲ್ಲಿ ಕೊಟ್ಟಿರುವೆ.

ಅದರ ಜೊತೆಗೇ, ರೆಪ್ಪೆ ಬರವಣಿಗೆಯನ್ನು ಸಹಜವಾಗಿ ಬಲ್ಲ, ಆದರೆ ಬರೆಯದ, ಬರೆಯಲಾಗದ, ಮಹಿಳೆಯರು ಕೊನೇಪಕ್ಷ ರೆಪ್ಪೆ ಬರವಣಿಯ ಮೂಲಕವಾದರೂ ತಮ್ಮ ಬರವಣಿಗೆಯನ್ನು ಮುನ್ನಡೆಸಲು ಇದೆಲ್ಲ ಸ್ಫೂರ್ತಿಯಾಗಲಿ ಎಂದು ಹಾರೈಸುವೆ!

 


 

blog
26 Jul 2026 ಏಐ: ಮಾಯಾವಿ, ಬಂಟ, ಬುಲ್ಡೋಝರ್

ಈಗ ಕರ್ನಾಟಕದ ಮುಖ್ಯಮಂತ್ರಿಗಳೂ ಸೇರಿದಂತೆ, ಎಲ್ಲಿ ನೋಡಿದರೂ ಮೇಲ್ವರ್ಗ, ಮಧ್ಯಮ ವರ್ಗಗಳ ಜನ ‘ಏಐ’ ‘ಏಐ’ ಎಂಬ ಜಪ ಶುರು ಮಾಡಿದ್ದಾರೆ! 

ಈ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ಗೆ ಈ ಅಂಕಣದಲ್ಲಿ ಕೊಟ್ಟ ‘ಕೃತಕ ಜಾಣತನ’ ಅಥವಾ ‘ಕೃಜಾ’ ಎಂಬ ಕನ್ನಡ ಪದಗಳು ನಿಮಗೆ ನೆನಪಿರಬಹುದು. 

ಮೊನ್ನೆ ಲಂಡನ್ನಿನಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿಯವರನ್ನು ‘ಸೃಜನಶೀಲ ಕ್ರಿಯೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಏನು ಪಾತ್ರ ನಿರ್ವಹಿಸುತ್ತದೆ?’ ಎಂದು ಯಾರೋ ಕೇಳಿದರು. 
‘ಝೀರೋ’ ಎನ್ನುತ್ತಾ ರಶ್ದಿ ವಿವರಿಸಿದರು: 

‘ಕತೆ, ಕಾದಂಬರಿ, ಕವಿತೆ ಬರೆಯುವವರಿಗೆ ಕೃಜಾದಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಕೃಜಾಕ್ಕೆ ಒರಿಜಿನಾಲಿಟಿ ಇಲ್ಲ. ಅದೇನಿದ್ದರೂ ಭಾರೀ ಪ್ರಮಾಣದ ಮಾಹಿತಿ ಹೆಕ್ಕಿ, ಹೀರಿಕೊಂಡು ಅದರ ಬೇರೆ ಬೇರೆ ರೂಪಗಳನ್ನು ಕೊಡುತ್ತದೆ. ಆದರೆ ಈ ಹಿಂದೆ ಯಾರೂ ಮಾಡಿರದಿದ್ದನ್ನು ಅದು ಮಾಡಲಾರದು. ಕಲೆಯ ಕೆಲಸ ಏನೆಂದರೆ, ಜನ ಈವರೆಗೆ ಏನನ್ನು ಮಾಡಿಲ್ಲವೋ ಅದನ್ನು ಮಾಡುವುದು. ಆದ್ದರಿಂದ ನನಗೆ ಕೃಜಾದಲ್ಲಿ ಝೀರೋಕ್ಕಿಂತ ಕಡಿಮೆ ಆಸಕ್ತಿ.’ 

ರಶ್ದಿ ಹೇಳುವುದರಲ್ಲಿ ಅರ್ಥವಿದೆ. ರಶ್ದಿಯ ‘ವಿಕ್ಟರಿ ಸಿಟಿ’ (ವಿಜಯನಗರ) ಥರದ ಕಾದಂಬರಿಯನ್ನೋ, ಮಾರ್ಕ್ವೆಝ್‌ನ ‘ಒನ್ ಹಂಡ್ರಡ್ ಯಿರ‍್ಸ್ ಆಫ್ ಸಾಲಿಟ್ಯೂಡ್’ ಥರದ ಕಾದಂಬರಿಯನ್ನೋ, ಬ್ರೆಕ್ಟ್‌ನ ‘ಕಕೇಶಿಯನ್ ಚಾಕ್ ಸರ್ಕಲ್’ ಥರದ ವಿಶಿಷ್ಟ ನ್ಯಾಯದ ನಾಟಕವನ್ನೋ, ಅಥವಾ ಕನ್ನಡದ ‘ಕರ್ವಾಲೊ’ ಥರದ ‘ಒರಿಜಿನಲ್’ ಐಡಿಯಾದ ಕಾದಂಬರಿಯನ್ನೋ ಕೃಜಾ ಸಷ್ಟಿಸಲಾರದು.  

ಆದರೆ ವಿವಿಧ ಅತ್ಯಾಧುನಿಕ ವಲಯಗಳಲ್ಲಿ ಕೆಲಸದಲ್ಲಿ ತೊಡಗಿರುವವರಲ್ಲಿ ಕೃಜಾ  ಅವರ ಅಸ್ತಿತ್ವದ ಬಗ್ಗೆಯೇ ಭಯ ಸೃಷ್ಟಿಸಿರುವುದು ನಿಜ: ಗೆಳೆಯರೊಬ್ಬರ ಸಂಸ್ಥೆಯಲ್ಲಿ ಇಪ್ಪತ್ತೈದು ಜನರನ್ನು ಕೆಲಸದಿಂದ ತೆಗೆದರು. ಕಾರಣ, ಈ ಇಪ್ಪತ್ತೈದು ಜನ ಮಾಡುತ್ತಿದ್ದ ಯಾವುದೋ ಬಗೆಯ ಅನಾಲಿಸಿಸ್‌ನ ಕೆಲಸವನ್ನು ಒಂದು ಎಐ ಟೂಲ್ ಮಾಡುತ್ತದೆ. 

ಆ ಗೆಳೆಯರನ್ನು ಒಂದು ಸರಳ ಪ್ರಶ್ನೆ ಕೇಳಿದೆ: ‘ಈ ಇಪ್ಪತ್ತೈದು ಜನರ ಸಂಬಳ ತಿಂಗಳಿಗೆ ತಲಾ ಒಂದು ಲಕ್ಷ ಎಂದಿಟ್ಟುಕೊಳ್ಳಿ. ಅಂದರೆ ಇಪ್ಪತ್ತೈದು ಲಕ್ಷ. ಈಗ ನಿಮ್ಮ ಸಂಸ್ಥೆ ಏಐಗೆ ಕೊಟ್ಟಿರುವ ಫೀಸು ಒಂದೆರಡು ಕೋಟಿ ಇರಬಹುದು. ಮೊದಲು ಆ ಕೆಲಸ ಮಾಡುತ್ತಿದ್ದ ಜನರೆಲ್ಲ ಹೋದ ಮೇಲೆ ಆ ಏಐ ಸಂಸ್ಥೆ ಒಂದು ವರ್ಷದಲ್ಲಿ ತನ್ನ ಕೆಲಸದ ತಿಂಗಳ ಶುಲ್ಕವನ್ನೋ, ಅಥವಾ ಹೊಸ ಸಾಧನಗಳಿಗೆ ತಕ್ಕ ಫೀಸನ್ನೋ ಏರಿಸಿ ಅದನ್ನು ತಿಂಗಳಿಗೆ ಇಪ್ಪತ್ತೈದು ಲಕ್ಷಕ್ಕೇ ತರಬಹುದು. ಇದರಿಂದ ಆ ಇಪ್ಪತ್ತೈದು ಜನರ ಜೀವನ ಸಾಧನವನ್ನು ಕಿತ್ತುಕೊಂಡು ಒಬ್ಬ ಬಂಡವಾಳಶಾಹಿಗೆ ಕೊಟ್ಟಂತಾಗಲಿಲ್ಲವೆ?’

ಅದಕ್ಕೆ ಗೆಳೆಯರ ಉತ್ತರ: ‘ಕಾಲಾನಂತರ ಎಐ ವೆಚ್ಚ ಅಲ್ಲಿಗೇ ಬಂದು ನಿಲ್ಲಲೂಬಹುದು. ಆದರೆ ಇಡೀ ಸಮಸ್ಯೆಯ ಒಂದು ಮೂಲ ಏನಾದರೂ ಮಾಡಿ ಮನುಷ್ಯರನ್ನು ಓಡಿಸಬೇಕು ಎಂಬ ಬಂಡವಾಳಶಾಹಿ ದಾಹದಲ್ಲಿದೆ. ಈ ಟೆಕ್ನೋ-ಡಿಜಿಟಲ್ ಬಂಡವಾಳಶಾಹಿ ವ್ಯವಸ್ಥೆಗೆ ಮನುಷ್ಯರನ್ನು ಕಂಡರಾಗುವುದಿಲ್ಲ. ಏನಾದರೂ ಮಾಡಿ ಮನುಷ್ಯರನ್ನು ಓಡಿಸುವುದೇ ಅದರ ಹಟ.’ 

‘ಇದೇ ಕಂಪನಿಯಲ್ಲಿ ಎಐ ಮಾಡತೊಡಗಿರುವ ಅನಾಲಿಸಿಸ್ ಅಕಸ್ಮಾತ್ ಕರಾರುವಾಕ್ಕಾಗದೆ,  ತಾನು ತೆಗೆದು ಹಾಕಿದ ಜನರನ್ನೇ ವಾಪಸ್ ಕರೆಯುವ ಕಾಲವೂ ಬರಬಹುದು. ಆಗ ಮ್ಯಾನೇಜ್‌ಮೆಂಟಿನ ಅಹಮ್ಮಿಗೆ ಪೆಟ್ಟು ಬೀಳುವುದರಿಂದ ಅವರನ್ನು ವಾಪಸ್ ಕರೆಯದೆ ಬೇರೆಯವರನ್ನು ಕರೆಯಬಹುದು’ ಎಂದೆ. 

ಇದು ಕೃಜಾ ಪರ ನಿಂತಿರುವ ಮನುಷ್ಯರ ಸಹಜ ಅಹಮ್ಮಿನ ಸಂಕೀರ್ಣ ಆಟ! ಅವರು ಯಂತ್ರಕ್ಕೆ ಗುಲಾಮರಾದಾರೇ ಹೊರತು, ಮನುಷ್ಯರೆದುರು ಒಂಚೂರು ಬಾಗಲಾರರು! 

ಈ ಮಾತುಕತೆಯಾದ ಒಂದೇ ತಿಂಗಳಲ್ಲಿ ‘ಬಿಬಿಸಿ.ಕಾಂ’ನಲ್ಲಿ ಒಂದು ಸುದ್ದಿ ಕಂಡು  ಚಕಿತಗೊಂಡೆ: 

‘ಕ್ವಾಲಿಟ್ ಚೆಕ್ ಮಾಡಲು ಎಐ ವಿಫಲ; ಮತ್ತೆ ಮಾನವ ಇಂಜಿನಿಯರುಗಳನ್ನು ಕೆಲಸಕ್ಕೆ ಕರೆದ ಫೋರ್ಡ್.’

ಅರೆರೆ! ತಿಂಗಳ ಕೆಳಗೆ ನಾನು ಕೇಳಿದ ಕಾಮನ್‌ಸೆನ್ಸ್ ಪ್ರಶ್ನೆಗೆ ಇಲ್ಲೇ ಉತ್ತರವಿದೆ ಅನ್ನಿಸಿತು! ಕೃಜಾ ಜಾಗಕ್ಕೆ ಮತ್ತೆ ಸಜಾಗಳು -ಸಹಜ ಜಾಣರು- ಬಂದ ಈ ನಿಜ ಪ್ರಸಂಗ ಹೀಗಿದೆ: 

ತನ್ನ ಉತ್ಪಾದನೆಯ ವೆಚ್ಚ ಕಡಿಮೆ ಮಾಡಿಕೊಳ್ಳಲು ಕಾರ್ ತಯಾರಿಸುವ ಅಮೆರಿಕದ ಪ್ರಖ್ಯಾತ ಫೋರ್ಡ್ ಕಂಪನಿ ಹಲವು ಇಂಜಿನಿಯರುಗಳನ್ನು ಮನೆಗೆ ಕಳಿಸಿತು. ಅದರಲ್ಲಿ ಕ್ವಾಲಿಟಿ ಚೆಕ್ ಇಂಜಿನಿಯರುಗಳೂ ಇದ್ದರು. ಆದರೆ ಈ ಕ್ವಾಲಿಟಿ ಚೆಕ್ ಕೆಲಸವನ್ನು ಎಐ ದಕ್ಷವಾಗಿ ನಿಭಾಯಿಸಲಾಗಲಿಲ್ಲ. ಹೀಗಾಗಿ ಫೋರ್ಡ್ ಸಂಸ್ಥೆ ಮುನ್ನೂರು ಅನುಭವಸ್ಥ ಇಂಜಿನಿಯರುಗಳನ್ನು ಮತ್ತೆ ಕರೆಸಿಕೊಳ್ಳಬೇಕಾಯಿತು.

ಈ ಸುದ್ದಿ ಬಂದ ಮೇಲೆ ಪಶ್ಚಿಮದ ವಾಹನಗಳ ಹಾರ್ಡ್ ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷ ಹೇಳಿದ: ‘ಎಐ ಒಂದು ಫ್ಯಾಂಟಾಸ್ಟಿಕ್ ಸಾಧನ, ನಿಜ. ಆದರೆ ನೀವು ತರಬೇತಿ ಕೊಡುವಾಗ ಎಷ್ಟು ಮಾಹಿತಿ ಕೊಡುತ್ತೀರೋ ಅಷ್ಟರ ಮಟ್ಟಕ್ಕೆ ಅದರ ಜಾಣತನ ತಲುಪುತ್ತದೆ. ಏಐ ನಂಬಿಕೊಂಡು, ಎಷ್ಟೋ ವರ್ಷಗಳಿಂದ ಉತ್ಪಾದನೆಯಲ್ಲಿ ಭಾಗಿಯಾಗಿರುವ ನಮ್ಮ ಅತ್ಯಂತ ಜ್ಞಾನಿಗಳಾದ ಇಂಜಿನಿಯರುಗಳ ಅನುಭವಕ್ಕೆ ಕೊಡಬೇಕಾದಷ್ಟು ಬೆಲೆ ಕೊಡದೇ ಹೋದೆವು.’

ರಶ್ದಿ ಹೇಳಿದ್ದು ಅದೇ! ಈ ಕ್ವಾಲಿಟಿ ಚೆಕ್ ಎಐಗೆ ಒದಗಿಸಿದ್ದ ಮಾಹಿತಿಯನ್ನು ದಾಟಿ ಅದು ಸಾಗಲಿಲ್ಲ. ಹೀಗಾಗಿ ಫೋರ್ಡ್ ಸಂಸ್ಥೆ ಎಐ ಬಳಸಿ ಮಾಡಿದ ಕ್ವಾಲಿಟಿ ಚೆಕ್ ದಕ್ಷವಾಗಿರಲಿಲ್ಲ;  ಮತ್ತೆ ಈಗ ಅದು ಮಾನವ ಜ್ಞಾನಕ್ಕೆ ಮೊರೆ ಹೋಗಬೇಕಾಯಿತು. 

‘ಹಣ ಉಳಿಸುವುದೆಂದರೆ ಮನುಷ್ಯರನ್ನು ಕೆಲಸದಿಂದ ತೆಗೆಯುವುದು’ ಎಂಬ ದುಷ್ಟ ಧೋರಣೆ ಈ ಕಾಲದ ಸಂಸ್ಥೆಗಳಲ್ಲಿ ಮಹಾನ್ ಫಿಲಾಸಫಿಯ ಮಟ್ಟಕ್ಕೆ ಬೆಳೆದು ನಿಂತಿದೆ! ಅದು ವ್ಯಕ್ತಿಗಳಲ್ಲೂ ಹಬ್ಬಿದೆ. ಒಮ್ಮೆ ಒಬ್ಬ ಮಧ್ಯಮ ವರ್ಗದ ಮಹಿಳೆ ಮನೆಕೆಲಸದವಳನ್ನು ಬಿಡಿಸಿ ಮನೆ ಗುಡಿಸುವ ಕೆಲಸಕ್ಕೆ ರೊಬೋಟ್ ತರುತ್ತೇನೆಂದು ಹೇಳುತ್ತಿದ್ದಳು. ಕೆಲಸದವಳಿಗೆ ತಿಂಗಳಿಗೆ ಕೊಡುತ್ತಿದ್ದ ಮೂರು ಸಾವಿರ ಉಳಿಸಲು ಈ ಮಹಿಳೆ ರೊಬೋಟ್ ತರಲು ಬಯಸಿದ್ದಳೋ? ಅಥವಾ ಇದು ಆಕೆ ಲೇಟೆಸ್ಟ್ ಸಾಧನಗಳನ್ನು ಬಳಸುತ್ತಿರುವೆ ಎಂಬ ಅಹಂಕಾರವನ್ನು ಉಬ್ಬಿಸಿಕೊಳ್ಳುವ ಶೋಕಿಯೋ? ಅದು ಮನೋವಿಶ್ಲೇಷಕರು ತೀರ್ಮಾನಿಸಬೇಕಾದ ವಿಚಾರ!  

ಈ ಥರದ ಮನೋಭಾವ ಮ್ಯಾನೇಜ್‌ಮೆಂಟ್ ಪದವೀಧರರಿಂದ ಮಾಧ್ಯಮ ಸಂಸ್ಥೆಗಳಿಗೂ ಹಬ್ಬಿರುವುದನ್ನು ನೀವು ನೋಡಿರಬಹುದು. ಏನನ್ನು ಬೇಕಾದರೂ ‘ಮ್ಯಾನೇಜ್ ಮಾಡುತ್ತೇವೆ’ ಎಂದು ಹೂಂಕರಿಸುವ ಈ ಮಂದಿ ಮ್ಯಾನೇಜ್‌ಮೆಂಟಿಗೆ ಹೇಳಿಕೊಡುತ್ತಿರುವ ಉಳಿತಾಯದ ಪಾಠ: ‘ಒಬ್ಬ ಉಪಸಂಪಾದಕನನ್ನು ಕೆಲಸದಿಂದ ತೆಗೆದರೆ ಮೂವರು ಹೊಸ ವರದಿಗಾರರನ್ನು ನೇಮಿಸಿಕೊಳ್ಳಬಹುದು.’ 

ಆದರೆ ಈ ಹೊಸ ವರದಿಗಾರರ ಕ್ವಾಲಿಟಿ, ಭಾಷಾಜ್ಞಾನ, ಬರವಣಿಗೆಯ ಮಟ್ಟ ಇವೆಲ್ಲದರ ಬಗ್ಗೆ ಈ ಮ್ಯಾನೇಜ್‌ಮೆಂಟ್ ಮಹನೀಯರಿಗೆ ಯಾವ ಐಡಿಯಾವೂ ಇಲ್ಲ! ಒಮ್ಮೆ ಒಂದು ಇಂಗ್ಲಿಷ್ ಪತ್ರಿಕೆಯ ಜಾಹಿರಾತು ವಿಭಾಗದ ಹೆಡ್ಡು ಮತ್ತು ವರದಿಗಾರನ ನಡುವೆ ನಡೆದ ಮಾತುಕತೆ: 

ಜಾಹಿರಾತು ಹೆಡ್ಡ: ಮುಖ್ಯಮಂತ್ರಿ, ಮಂತ್ರಿಗಳನ್ನು ಸುಮ್ಮನೆ ಹೊಗಳಿ ಬರೀರ‍್ರೀ. ಹೆಚ್ಚು ಹೆಚ್ಚು ಜಾಹಿರಾತು ತರಬಹುದು.

ವರದಿಗಾರ: ಅದೆಂಗೆ ಸುಮ್ಮಸುಮ್ಮನೆ ಬರೆಯೋಕಾಗುತ್ತೆ?

ಜಾಹೆ: ಯಾಕೆ ಬರೆಯೋಕಾಗಲ್ರೀ? 

ಇಂಥವರೂ ಒಂಥರದಲ್ಲಿ ಕೃಜಾಗಳೇ! ಕೃತಕ ಬರವಣಿಗೆ ಬರೆಯುವಂತೆ ಹೇಳುವ ಮಾನವ ಕೃಜಾಗಳಿಗೆ ಬರವಣಿಗೆಯ ಸತ್ಯಶೋಧಕ ಗುಣ, ವರದಿಯ ಸತ್ಯಬದ್ಧತೆ, ನೈತಿಕ ದೃಷ್ಟಿ, ಭಾಷೆಯ ಬಳಕೆಯ ನೈತಿಕತೆ, ಪದ ಬಳಕೆ ಕುರಿತ ಹಿಂಜರಿಕೆ… ಇತ್ಯಾದಿಗಳ ಬಗ್ಗೆ ಏನನ್ನಾದರೂ ಹೇಳಿದರೆ ಅರ್ಥವಾಗುವ ಸಾಧ್ಯತೆ ಇಲ್ಲ! ಇದೆಲ್ಲ ತಂಟೆಯೇ ಬೇಡವೆಂದು ಪಕ್ಷಗಳು, ಸಂಸ್ಥೆಗಳು ತಮತಮಗೆ ಬೇಕಾದಂತೆ ಲೇಖನ ಬರೆದುಕೊಡುವ, ಬರೆಸಿಕೊಟ್ಟದ್ದನ್ನು ಕಂಡೂ ಕಾಣದಂತೆ ಸಣ್ಣಕ್ಷರದಲ್ಲಿ ನಮೂದಿಸುವ, ‘ಅಡ್ವೆಟೋರಿಯಲ್’ ಅಥವಾ ‘ಜಾಹಿರಾತು ಪುರವಣಿ’ಯ ಮಾದರಿಗಳು ಬಂದಿವೆ. ಈ ಪೇಯ್ಡ್ ನ್ಯೂಸ್ ‘ಕೃಜಾ’ ಥರದ ಒಂದು ‘ಮಾಜಾ’ ಅನ್ನಬಹುದು; ಅಂದರೆ, ಮಾರ್ಕೆಟ್ ಜಾಣತನ! 

ಅದೇನೇ ಇರಲಿ. ನಿಜಕ್ಕೂ ಸೃಜನಶೀಲರಾಗಿರಬೇಕು ಎನ್ನುವ ಯಾರೇ ಆಗಲಿ, ಬರವಣಿಗೆ, ಕಲೆ ಇತ್ಯಾದಿಗಳಲ್ಲಿ ಎಐ ಬಗ್ಗೆ ರಶ್ದಿಯ ನಿಲುವನ್ನೇ ತಳೆಯುವುದು ಒಳ್ಳೆಯದು. ಎಐ ಬಳಸಿ ಕಾಗುಣಿತ ದೋಷ, ವಾಕ್ಯ ರಚನೆಯ ದೋಷಗಳನ್ನು ಸರಿಪಡಿಸಿಕೊಳ್ಳುವ ಸಾಧ್ಯತೆ ಈಗ ಕನ್ನಡದಲ್ಲೂ ಇದೆ. ಆದರೆ ಅದೇ ರೂಢಿಯಾದರೆ ಕಾಗುಣಿತ, ವ್ಯಾಕರಣ ಎಲ್ಲವೂ ಮರೆತು ಹೋಗುತ್ತದೆ. ನಮ್ಮ ಸ್ವಂತದ ಸೃಜನಶೀಲ ಶ್ರಮದ ಸುಖ ಕಣ್ಮರೆಯಾಗುತ್ತದೆ. 

ಈ ಕುರಿತ ಒಂದು ಈಚಿನ ಅನುಭವ: ಮೊನ್ನೆ ಯಾವುದೋ ಪುಸ್ತಕಕ್ಕಾಗಿ ಇಂಗ್ಲಿಷ್ ಲೇಖನವೊಂದರ ಒಂದು ಪುಟವನ್ನು ಅರ್ಧ ಗಂಟೆಯಲ್ಲಿ ಅನುವಾದಿಸಿದೆ. ಏನನ್ನೋ ಹೊಸದಾಗಿ ಬರೆದ ಖುಷಿಯಾಯಿತು. ಅಕಸ್ಮಾತ್ ಇದೇ ಲೇಖನವನ್ನು ಕೃಜಾ ಮೂಲಕ ಅನುವಾದ ಮಾಡಿ, ಅದನ್ನು ಒರಿಜಿನಲ್ ಜೊತೆ ಹೋಲಿಸಿ, ಅರ್ಧ ಗಂಟೆ ತಿದ್ದಿ ತೀಡಿದ್ದರೆ ಏನೋ ಕೆಲಸ ಮಾಡಿದ ಭಾವ, ಬರವಣಿಗೆಯಲ್ಲೇ, ಭಾಷೆಯ ಬಳಕೆಯಲ್ಲೇ, ಹುಟ್ಟುವ ಆನಂದ ಮೂಡುತ್ತಿರಲಿಲ್ಲ. 

ಅಂದರೆ, ನಮ್ಮ ಸಹಜ ಜಾಣತನದ ಸತ್ವ, ಬೆಂಬಲ, ಸೃಜನಶೀಲತೆಯನ್ನು ಕಳೆದುಕೊಳ್ಳುವುದು ನಮಗೇ ಭಾರಿ ನಷ್ಟವಾಗಬಲ್ಲದು. ಒಮ್ಮೆ ಡಾಕ್ಟರೊಬ್ಬರು ಹೇಳಿದ ನಾಲ್ಕು ವಸ್ತುಗಳಲ್ಲಿ ಒಂದನ್ನು ಮರೆತು ಮತ್ತೆ ಅವರನ್ನು ಕೇಳಿದೆ; ಆಗ ಅವರು ಹೇಳಿದ ಮಾತು ಚೆನ್ನಾಗಿ ನೆನಪಿದೆ: ‘ಬ್ರೈನ್ ಗೆ ಒಂಚೂರು ಕೆಲಸ ಕೊಡಿ, ಅದು ಜ್ಞಾಪಿಸಿಕೊಳ್ಳುತ್ತೆ.’  ಪ್ರಯತ್ನ ಮಾಡಿದೆ. ಮರೆತ ವಸ್ತುವನ್ನು ನೆನಸಿಕೊಂಡೆ!  

ಈ ಬರಹ ಮುಗಿಸುವ ಮುನ್ನ ಕೃಜಾದ ಮತ್ತೊಂದು ಭಯಾನಕ ಪ್ರಸಂಗ:

‘ಹಗ್ಗಿಂಗ್ ಫೇಸ್’ ಎಂಬ ಎಐ ಟೂಲ್‌ಗಳ ಆ್ಯಪ್ ಸ್ಟೋರನ್ನು ‘ಓಪನ್ ಎಐ’ ಹ್ಯಾಕ್ ಮಾಡಿದೆಯಂತೆ! ‘ಹಗ್ಗಿಂಗ್ ಫೇಸ್’ ಕಂಪನಿ ಪೊಲೀಸು, ಸೈಬರ್‍ ಕ್ರೈಂ ಎಲ್ಲರನ್ನೂ ಮೊರೆ ಹೊಕ್ಕಿತು. ಏನು ಜಾಲಾಡಿದರೂ, ಯಾವ ಮಾನವರೂ ಈ ಕ್ರೈಂನಲ್ಲಿ ಭಾಗಿಯಾಗಿರಲಿಲ್ಲ ಎಂಬುದು ತಿಳಿಯಿತು. ನಂತರ ಡಿಜಿಟಲ್ ಲೋಕ ಬಲ್ಲವರಿಗೆಲ್ಲ ಪರಿಚಿತವಿರುವ ‘ಚಾಟ್ ಜಿಪಿಟಿ’ ಈ ಹ್ಯಾಕಿಂಗ್ ಮಾಡಿದೆ ಎಂಬ ಸುದ್ದಿ ಬಂತು! ಇದು ಯಾರೂ ಊಹಿಸಲಾಗದ ಪ್ರಮಾಣದ ಮಾನವೇತರ ಸೈಬರ್ ಕ್ರೈಂ. 

ಮಾನವನ ಸಹಜ ಜಾಣತನ ಸೃಷ್ಟಿಸಿದ ಈ ಕೃತಕ ಜಾಣತನದ ಮಾಯಾರಾಕ್ಷಸ ಎಂಬ ಬುಲ್ಡೋಜರ್ ತಾನು ಯಾವ ವಲಯವನ್ನೂ ಹೊಗದೆ ಬಿಡುವುದಿಲ್ಲ ಎಂದು ಹೂಂಕರಿಸುತ್ತಿರುವಂತಿದೆ! ‘ಏಳಿ!ಎಚ್ಚರಗೊಳ್ಳಿ!’ ಎಂದು ಸಹಜ ಜ್ಞಾನತನ ಎಚ್ಚರಿಸುತ್ತಿದೆ!  

ಸಹ ಸ್ಪಂದನ...ಸಹಸ್ಪಂದನ

ಕಳೆದ ವಾರ ಪ್ರಕಟವಾದ ‘ಸುಳ್ಳು ಎಂಬುದರ ಸತ್ಯ ರೂಪಗಳು’ ಲೇಖನದಲ್ಲಿ ಜೋಸೆಫ್ ಡನ್ ಗುರುತಿಸಿದ ಸುಳ್ಳುಗಳ ಬಗ್ಗೆ ಚರ್ಚಿಸುತ್ತಾ ಇಬ್ಬರು ಬಹುಕಾಲದ ಫ್ರೆಂಡುಗಳು ಕೊಟ್ಟ ಸಂವಾದಿ ಪದಗಳು ಕುತೂಹಲಕರವಾಗಿವೆ:

ಡಾ. ನಿರಂಜನಮೂರ್ತಿ:  CRAPಗೆ ಸಂವಾದಿ ಪದ: (ವಿಶ್ವಾಸಭರಿತ ನಂಬುಗೆ ರೂಪದ ಸುಳ್ಳು- ವಿನರೂಸುಳ್ಳು).  CRAP (ಕಾನ್ಫಿಡೆಂಟ್ ರ‍್ಯಾಶನಲೈಸೇಷನ್ ಅಂಡ್ ಪ್ರೊಜೆಕ್ಷನ್)  ಎನ್ನುವುದು ನಮ್ಮನ್ನು ನಾವು ಸರಿಯೆಂದು ನಂಬುವ, ನಮ್ಮ ತಪ್ಪುಗಳನ್ನು ಕೂಡ ಸರಿಯೆಂದು ನಂಬಿಸಿಕೊಂಡು ಬಿಂಬಿಸಿಕೊಳ್ಳುವ ನಮ್ಮ ಬುದ್ಧಿಯ ಆಟ ಎನ್ನುತ್ತಾನೆ ಡನ್.

ಡಾ. ಅರುಂಧತಿ: ‘ಬಿಳಿ ಸುಳ್ಳು’ ‘ಕರಿ ಸುಳ್ಳು’ ಪದಗಳ ಬದಲಾಗಿ ಬೇರೆ ಪದ ಪ್ರಯೋಗಗಳ ಅಗತ್ಯವಿದೆ: ‘ಸಾದಾ ಸುಳ್ಳು’ ‘ವಿಪರೀತದ ಸುಳ್ಳು.’

ಇಂಥ ನಿರಂತರ ಬುದ್ಧೀಜೀವಿ ಸಹಸ್ಪಂದನವನ್ನೇ ನಾನು ಈ ಹಿಂದೆ ಕುವೆಂಪು ಸಾಲಿನ ಮೂಲಕ ಸೂಚಿಸಿದ್ದು: 

‘ನೀನು ಬೆಳೆದರೆ ನಾನು ಬೆಳೆವೆ!’

ಥ್ಯಾಂಕ್ಯೂ.
 



Latest Video


Nataraj Huliyar Official
YouTube Channel

SUBSCRIBE