ಈ ಅಂಕಣಕ್ಕೆ ಆರಂಭದ ಟಿಪ್ಪಣಿ ಮಾಡುತ್ತಿರುವ ದಿನ ಆಗಸ್ಟ್ ೮ನೆಯ ತಾರೀಕು. ‘ಆಗಸ್ಟ್ ಕ್ರಾಂತಿ ದಿನ.’ ಎಂಬತ್ತನಾಲ್ಕು ವರ್ಷಗಳ ಕೆಳಗೆ ೧೯೪೨ರ ಆಗಸ್ಟ್ ೮ರಂದು ಆರಂಭವಾದ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳುವಳಿಯ ನೆನಪಿನ ಆಚರಣೆಯ ದಿನ. ಮಾರನೆಯ ದಿನ ಆಗಸ್ಟ್ ೯. ಅಂದು ಜನತಾಕ್ರಾಂತಿಯ ಸಹಜ ಸ್ಫೋಟವಾಗಿತ್ತು.
ಭಾರತದ ಸ್ವಾತಂತ್ರ್ಯ ಚಳುವಳಿಯ ಉಜ್ವಲ ಘಟ್ಟವಾದ ‘ಆಗಸ್ಟ್ ಕ್ರಾಂತಿ’ಯ ಮಹತ್ವ ಹೊಸ ತಲೆಮಾರುಗಳಿಗಿರಲಿ, ನಮ್ಮ ಸಾರ್ವಜನಿಕ ವ್ಯಕ್ತಿಗಳಿಗೂ, ಆಗಸ್ಟ್ ಕ್ರಾಂತಿಯ ಮುಂಚೂಣಿಯಲ್ಲಿದ್ದ ಪಕ್ಷದ ಇಂದಿನ ವಾರಸುದಾರರಿಗೂ ಮರೆತುಹೋದಂತಿದೆ!
ಆಗಸ್ಟ್ ೮, ೧೯೪೨. ಆ ಸಂಜೆ ಗಾಂಧೀಜಿ ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಎಂಬ ಅಂತಿಮ ಎಚ್ಚರಿಕೆ ಕೊಟ್ಟರು. ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಕಾಯುತ್ತಿದ್ದ ಜನಸಮೂಹಕ್ಕೆ ‘ಡೂ ಆರ್ ಡೈ’ (ಮಾಡು ಇಲ್ಲವೇ ಮಡಿ) ಕರೆ ಕೊಟ್ಟರು. ದೇಶದುದ್ದಕ್ಕೂ ಮಿಂಚಿನ ಸಂಚಾರವಾಯಿತು. ಮಾರನೆಯ ಬೆಳಗಿಗೇ ಗಾಂಧೀಜಿ ಹಾಗೂ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾದ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಸೇರಿದಂತೆ ರಾಷ್ಟ್ರಾದ್ಯಂತ ಹಿರಿಯ, ಕಿರಿಯ ಚಳುವಳಿಯ ನಾಯಕರ ಬಂಧನವಾಯಿತು.
ಅವತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಸುತ್ತಮುತ್ತಲ ಸ್ವಾತಂತ್ರ್ಯ ಚಳುವಳಿಗಾರರು ಹೈಸ್ಕೂಲಿನ ಬಳಿ ಬಂದಾಗ, ಪರೀಕ್ಷೆಯನ್ನು ಅರ್ಧಕ್ಕೇ ಬಿಟ್ಟು ಹೊರ ಬಂದು, ಚಳುವಳಿಗಾರರ ಜೊತೆ ಸೇರಿಕೊಂಡ ಹುಡುಗರಲ್ಲಿ ಶಾಂತವೇರಿ ಗೋಪಾಲಗೌಡ ಎಂಬ ಹುಡುಗನೂ ಇದ್ದ. ಇಂಥ ಲಕ್ಷಾಂತರ ಹುಡುಗ, ಹುಡುಗಿಯರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಮುಂದೆ ಹೊಸ ರಾಜಕೀಯ ನಾಯಕ ನಾಯಕಿಯರಾಗಿ ಬೆಳೆದ ಅಪೂರ್ವ ಚರಿತ್ರೆಯನ್ನು ಭಾರತದ ಹೊಸ ತಲೆಮಾರುಗಳು ಎಂದೂ ಮರೆಯಬಾರದು. ಮೊನ್ನೆ ಸರ್ಕಾರದ ಭಕ್ತ ಲಾಯರೊಬ್ಬರು ಹದಿನೆಂಟು ವರ್ಷ ವಯಸ್ಸಿನೊಳಗಿನ ಹುಡುಗಿಯೊಬ್ಬಳನ್ನು ವಿದ್ಯಾರ್ಥಿ ಚಳುವಳಿಗೆ ಕರೆತಂದವರಾರು ಎಂಬ ಚಿಲ್ಲರೆ ‘ಲೀಗಲ್’ ಪ್ರಶ್ನೆಯನ್ನೆತ್ತಿ ಸರ್ಕಾರವನ್ನು ನೇವರಿಸಿದರು. ಇಂಥವರಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದರು ಎಂಬ ಚರಿತ್ರೆಯ ವಿವರಗಳೇ ಅರಿವಿರಲಿಕ್ಕಿಲ್ಲ.
೯ ಆಗಸ್ಟ್ ೧೯೪೨. ರಾಷ್ಟ್ರ ನಾಯಕರ ಬಂಧನದಿಂದ ಸಿಟ್ಟಿಗೆದ್ದ ಜನ ತಂತಾವೇ ನಾಯಕರಾದರು. ತಮತಮಗೆ ತೋಚಿದಂತೆ ‘ಮಾಡು ಇಲ್ಲವೇ ಮಡಿ’ ಕರೆಯನ್ನು ಜಾರಿಗೊಳಿಸತೊಡಗಿದರು. ಪೊಲೀಸ್ ಠಾಣೆಗಳು, ಅಂಚೆ ಕಛೇರಿಗಳು, ಟೆಲಿಫೋನ್ ವೈರುಗಳು, ರೈಲ್ವೆ ಹಳಿಗಳು...ಮುಂತಾಗಿ ಸರ್ಕಾರಿ ಆಸ್ತಿಯನ್ನು ಧ್ವಂಸ ಮಾಡತೊಡಗಿದರು. ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಜೈಲಿನಲ್ಲಿರುವಾಗ ಸ್ವಾತಂತ್ರ್ಯ ಚಳುವಳಿಯನ್ನು ಬಗ್ಗು ಬಡಿಯುವುದು ಸುಲಭ ಎಂದು ಭ್ರಮಿಸಿದ್ದ ಬ್ರಿಟಿಷ್ ಆಡಳಿತ ಭಾರತೀಯ ಪೊಲೀಸರನ್ನೇ ಭಾರತೀಯ ಚಳುವಳಿಗಾರರ ಮೇಲೆ ಛೂಬಿಟ್ಟಿತು. ಜನರನ್ನು ಜೈಲಿಗಟ್ಟಿದ ಮೇಲೆ ಚಳುವಳಿಯ ಕತೆ ಮುಗಿಯಿತು ಎಂದುಕೊಂಡಿತ್ತು.
ಆದರೆ ‘ಆಗಸ್ಟ್ ಕ್ರಾಂತಿ’ ಅದೇ ಆಗ ಶುರುವಾಗಿತ್ತು!
೯ ಆಗಸ್ಟ್ ೧೯೪೨. ಆ ರಾತ್ರಿ ೩೨ ವರ್ಷದ ರಾಮಮನೋಹರ ಲೋಹಿಯಾ ಸಮಾಜವಾದಿ ಸಂಗಾತಿಗಳಾದ ಅಚ್ಯುತ್ ಪಟವರ್ಧನ್, ಅರುಣಾ ಅಸಫ್ ಆಲಿ, ಸುಚೇತಾ ಕೃಪಲಾನಿ ಮೊದಲಾದವರ ಜೊತೆಗೆ ಭೂಗತರಾದರು. ಈ ವಿವರಗಳೆಲ್ಲ ಚರಿತ್ರೆಯ ಪುಸ್ತಕಗಳಲ್ಲಿವೆ; ಆದರೆ ಲೋಹಿಯಾರ ಪುಟ್ಟ ತಂಡ ಕಾಂಗ್ರೆಸ್ ರೇಡಿಯೋ ಮೂಲಕ ಆಗಸ್ಟ್ ಕ್ರಾಂತಿಯ ಚೈತನ್ಯವನ್ನು ಕಾಯ್ದಿಟ್ಟುಕೊಂಡು ಚಳುವಳಿಯನ್ನು ಮುನ್ನಡೆಸಿದ ರೋಮಾಂಚಕಾರಿ ಸಾಹಸದ ವಿವರಗಳು ಹಿನ್ನೆಲೆಗೆ ಸರಿದುಬಿಟ್ಟಿವೆ; ‘ಡೂ ಆರ್ ಡೈ’ ಘೋಷಣೆ ರೂಪಿಸಿದವರು ಸೋಷಲಿಸ್ಟ್ ಯೂಸುಫ್ ಮೆಹರಾಲಿ ಎಂಬ ಸತ್ಯವೂ ಹುದುಗಿಹೋಗಿದೆ!
ಆ ಕಾಲದ ಸಾವಿರಾರು ಸಾಹಸಗಳ ನಡುವೆ ಒಂದು ಪುಟ್ಟ ಗುಂಪು ನಡೆಸಿದ ‘ಕಾಂಗ್ರೆಸ್ ರೇಡಿಯೋ’ ಸಾಹಸ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಒಂದು ಸಂಜೆ ಇದ್ದಕ್ಕಿದ್ದಂತೆ ‘ಇದು ಕಾಂಗ್ರೆಸ್ ರೇಡಿಯೋ! ಭಾರತದ ಯಾವುದೋ ಭಾಗದಿಂದ ನಾವು ಮಾತಾಡುತ್ತಿದ್ದೇವೆ! ತರಂಗಾಂತರ ೪೧.೪೨’ ಎಂದು ಬಾನುಲಿಯಲ್ಲಿ ಹೆಣ್ಣು ದನಿಯೊಂದು ಘೋಷಿಸಿತು! ಬ್ರಿಟಿಷ್ ಸರ್ಕಾರ ಬೆಚ್ಚಿತು. ಮರುಗಳಿಗೆಗೇ ರೇಡಿಯೋದಲ್ಲಿ ಗಂಡಿನ ದನಿಯಲ್ಲಿ ಸ್ವಾತಂತ್ರ್ಯ ಚಳುವಳಿಗೆ ಮಾರ್ಗದರ್ಶನ ಶುರುವಾಯಿತು.
ಈ ಭೂಗತ ರೇಡಿಯೋ ಪ್ರಸಾರಗಳಲ್ಲಿ ಬ್ರಿಟಿಷ್ ಪೊಲೀಸರು ನಡೆಸುತ್ತಿದ್ದ ಹಿಂಸೆಗಳ ವರದಿಗಳು ಬಿತ್ತರವಾಗತೊಡಗಿದವು. ಪ್ರತಿರಾತ್ರಿ ೮.೩೦ರ ಸುಮಾರಿಗೆ ಕವಿ ಇಕ್ಬಾಲರ ‘ಸಾರೆ ಜಹಾಂ ಸೆ ಅಚ್ಛಾ’ ಹಾಡು ಮೊಳಗುತ್ತಿತ್ತು; ಹಿಂದೂಸ್ತಾನಿ ಅಥವಾ ಇಂಗ್ಲಿಷಿನಲ್ಲಿ ಶುರುವಾಗುತ್ತಿದ್ದ ಪ್ರಸಾರ ‘ವಂದೇ ಮಾತರಂ’ ಹಾಡಿನೊಂದಿಗೆ ಮುಗಿಯುತ್ತಿತ್ತು. ಕಾಂಗ್ರೆಸ್ ರೇಡಿಯೋ, ಫ್ರೀಡಂ ರೇಡಿಯೋ, ಆಝಾದಿ ರೇಡಿಯೋ ಎಂದು ಕರೆಯಲಾಗುತ್ತಿದ್ದ ಈ ರೇಡಿಯೋವನ್ನು ಬ್ರಿಟಿಷ್ ಪೊಲೀಸರು ‘ಇಲ್ಲೀಗಲ್ ಕಾಂಗ್ರೆಸ್ ರೇಡಿಯೋ’ ಎನ್ನುತ್ತಿದ್ದರು! ಈ ಭೂಗತ ರೇಡಿಯೋ ಪ್ರಸಾರದ ಕೆಲವು ತುಣುಕುಗಳು:
‘ಬ್ರಿಟಿಷರು ಸ್ವಾತಂತ್ರ್ಯ ಚಳುವಳಿಯನ್ನು ತುಳಿಯಲು ಏನೆಲ್ಲಾ ಮಾಡುತ್ತಿದ್ದಾರೆ. ಆದರೆ ಭಾರತೀಯರು ಜಗ್ಗದೆ ಎದುರಾಳಿಯನ್ನು ಎದುರಿಸುತ್ತಿದ್ದಾರೆ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಡಲೂ ತಯಾರಾಗಿದ್ದಾರೆ ಎಂಬುದು ಬ್ರಿಟಿಷರಿಗೆ ಅರಿವಾಗತೊಡಗಿದೆ...ದಬ್ಬಾಳಿಕೆಯ ಆಳ್ವಿಕೆಯನ್ನು ಮೂಕ ಪ್ರಾಣಿಗಳಂತೆ ಸಹಿಸಲು ಭಾರತೀಯರು ಸಿದ್ಧರಿಲ್ಲ ಎಂಬುದನ್ನು ಚಳುವಳಿ ಸಿದ್ಧ ಮಾಡಿ ತೋರಿಸಿದೆ...ಬ್ರಿಟಿಷ್ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆ ಬರುವ ತನಕ ಚಳುವಳಿ ಮುಂದುವರಿಯುತ್ತಲೇ ಇರುತ್ತದೆ...’
‘ಬ್ರಿಟಿಷ್ ಸರ್ಕಾರ ಮತ್ತು ಕಾಂಗ್ರೆಸ್ಸಿನ ನಡುವೆ ರಾಜಿಕಬೂಲಿ ಮಾಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗಾಂಧೀಜಿ ಜೈಲು ಸೇರುವ ಮುನ್ನ ‘ಇದು ಕೊನೇ ಯುದ್ಧ’ ಎಂದು ಸಾರಿ ಹೋಗಿದ್ದಾರೆ; ಅವರ ಕರೆಯಂತೆ ‘ಮಾಡು ಇಲ್ಲವೇ ಮಡಿ’ ಈ ಎರಡರ ನಡುವೆ ನಮ್ಮ ಆಯ್ಕೆ ಯಾವುದೆಂಬುದನ್ನು ನಿರ್ಧರಿಸಬೇಕಾಗಿದೆ.’
‘ಹಿಂದೂಗಳು, ಮಹಮ್ಮದೀಯರು, ಕ್ರಿಶ್ಚಿಯನ್ನರು, ಪಾರ್ಸಿಗಳು ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಕಾಲದಲ್ಲಿ ಸುಳ್ಳು ಹೇಳುವುದು ಕಾನೂನುಬದ್ಧವಾಗಿಬಿಟ್ಟಿದೆ! ಈಗಿನ ದೊಡ್ಡ ಸುಳ್ಳು- ‘ಕೆಲವೇ ಮಂದಿ ಮಾತ್ರ ಸ್ವಾತಂತ್ರ್ಯ ಕೇಳುತ್ತಿದ್ದಾರೆ; ಆದರೆ ಒಂಬತ್ತು ಕೋಟಿ ಮಹಮ್ಮದೀಯರು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದಾರೆ’ ಎನ್ನುವುದು. ಇಂಥ ಸುಳ್ಳನ್ನು ಬ್ರಿಟಿಷರನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ! ಲಕ್ಷಗಟ್ಟಲೆ, ಕೋಟಿಗಟ್ಟಲೆ ಮುಸ್ಲಿಮರು ನಮಗೆ ಹೆಗಲೆಣೆಯಾಗಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆ ಸಾರಿ ಹೇಳುತ್ತಿದೆ...’
‘ಚಳುವಳಿಗಾರರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬ ಪೊಲೀಸ್ ತಂಡದೊಂದಿಗೆ ಹಳ್ಳಿಯೊಂದಕ್ಕೆ ಬಂದ; ಆದರೆ ಹಳ್ಳಿಯ ಜನ ಅಲ್ಲಿ ಹೇಗೆ ಮುತ್ತಿಕೊಂಡರೆಂದರೆ ಪೊಲೀಸರು ಕಂಗಾಲಾಗಿ ಯಾರನ್ನೂ ಬಂಧಿಸಲಾಗದೆ ಅಲ್ಲಿಂದ ಹೊರಟರು. ಡಾರ್ಜಿಲಿಂಗ್ ಗೋಲಿಬಾರಿನಲ್ಲಿ ಹಲವರು ಗಾಯಗೊಂಡರು; ಮೂವರು ಮೃತಪಟ್ಟರು. ಭಾರತೀಯರು ಇದನ್ನೆಲ್ಲ ಸಹಿಸುವುದಿಲ್ಲ.’
‘ವಿದೇಶಿ ವಸ್ತುಗಳ ಫ್ಯಾಕ್ಟರಿ, ಕಛೇರಿಗಳೆದುರು ಶಾಂತಿಯುತವಾಗಿ ಪಿಕೆಟಿಂಗ್ ನಡೆಸಿ. ಸರ್ಕಾರಿ ನೌಕರಿ ಬಿಟ್ಟುಬನ್ನಿ. ಮನೆಮನೆಗಳಲ್ಲಿ ಚರಕಾ ಇರಲಿ. ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ. ಹಿಂದೂ-ಮುಸ್ಲಿಂ ಸಾಮರಸ್ಯ ಕಾಪಾಡಿ.’
ಈ ಪ್ರಸಾರಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗದ ಪೊಲೀಸ್ ಹಿಂಸೆ, ಜನರ ಹೋರಾಟಗಳ ವಿವರಗಳಿರುತ್ತಿದ್ದವು. ಬಾಂಬೆ, ನಾಸಿಕ್, ಕಲ್ಕತ್ತಾಗಳ ಗುಪ್ತ ಕೇಂದ್ರಗಳಿಂದ ಕಾಂಗ್ರೆಸ್ ರೇಡಿಯೋ ಬಿತ್ತರವಾಗುತ್ತಿತ್ತು.
ಅತ್ತ ಎಚ್.ವಿ.ಆರ್. ಅಯ್ಯಂಗಾರ್ ಎಂಬ ಬಾಂಬೆ ಬ್ರಿಟಿಷ್ ಸರ್ಕಾರದ ಅಡಿಶನಲ್ ಸೆಕ್ರೆಟರಿ ಈ ಕಾಂಗ್ರೆಸ್ ರೇಡಿಯೋ ಪ್ರಸಾರಗಳನ್ನು ನಿತ್ಯ ಕೇಳಿಸಿಕೊಳ್ಳುತ್ತಾ, ಆ ಮಾತುಗಳ ವಿಷಯ, ಭಾಷೆ, ಧೋರಣೆಗಳನ್ನೆಲ್ಲ ‘ಸ್ಟಡಿ’ ಮಾಡುತ್ತಿದ್ದ. ಕೊನೆಗೆ, ‘ಈ ಪ್ರಸಾರದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಫಿಲಾಸಫಿ ಇದೆ; ಭೂಗತವಾಗಿರುವ ರಾಮಮನೋಹರ ಲೋಹಿಯಾ ಈ ಪ್ರಸಾರಗಳ ಹಿನ್ನೆಲೆಯಲ್ಲಿದ್ದಂತಿದೆ’ ಎಂದು ಅಯ್ಯಂಗಾರ್ ತೀರ್ಮಾನಿಸಿದ. ‘ಸ್ವತಂತ್ರ ಇಂಡಿಯಾ ರೈತರ, ಕಾರ್ಮಿಕರ, ಕೂಲಿಕಾರರದಾಗಿರುತ್ತದೆ’; ‘ಸ್ವಾತಂತ್ರ್ಯಕ್ಕೋಸ್ಕರ ಕ್ರಾಂತಿ ಎಂದರೆ ಬಡವರಿಗಾಗಿ ಕ್ರಾಂತಿ…’ ಇಂಥ ವಾಕ್ಯಗಳನ್ನು ಅಯ್ಯಂಗಾರ್ ಹೆಕ್ಕಿ ತೋರಿಸಿದ. ‘ಇದು ಸೋಷಲಿಸ್ಟರ ಕ್ರಾಂತಿಕಾರಿ ಚಳುವಳಿ’ ಎಂದು ಬ್ರಿಟಿಷ್ ಸರ್ಕಾರ ತೀರ್ಮಾನಿಸಿತು.
ಭೂಗತ ರೇಡಿಯೋದ ಐಡಿಯಾ ಕೊಟ್ಟ ರಾಮಮನೋಹರ ಲೋಹಿಯಾ ಹಣಕಾಸನ್ನೂ ಕಲೆ ಹಾಕಿದ್ದರು; ಪ್ರಸಾರಕ್ಕಾಗಿ ವರದಿ, ವಿಶ್ಲೇಷಣೆಗಳನ್ನು ಸಿದ್ಧಪಡಿಸುತ್ತಿದ್ದರು. ೨೨ ವರ್ಷದ ಕಾನೂನು ವಿದ್ಯಾರ್ಥಿನಿ ಉಷಾ ಮೆಹ್ತಾ ವಿಠ್ಠಲದಾಸ ಮಾಧವಜೀ, ಬಾಬುರಾವ್ ಜವೇರಿ ಮೊದಲಾದವರ ಜೊತೆಗೂಡಿ ‘ಕಾಂಗ್ರೆಸ್ ರೇಡಿಯೋ’ದ ಉಸ್ತುವಾರಿ, ಪ್ರಸಾರ ನೋಡಿಕೊಳ್ಳುತ್ತಿದ್ದರು. ಜೀವದ ಹಂಗು ತೊರೆದ ತರುಣಿ ಉಷಾ ಮೆಹ್ತಾರ ಸಾಹಸ ಅದ್ಭುತವಾದುದು. ೯೦ ದಿನಗಳ ನಂತರ, ಈ ಅಲೆಮಾರಿ ರೇಡಿಯೋ ಸ್ಟೇಶನ್ನಿನ ಮೇಲೆ ಪೊಲೀಸರ ದಾಳಿಯಾಯಿತು; ಆಗ ಲೋಹಿಯಾ ದೇಶದ ಯಾವುದೋ ಮೂಲೆಯಲ್ಲಿದ್ದರು. ವಿಠಲದಾಸ್, ಜವೇರಿ, ಉಷಾ ಮೆಹ್ತಾ ಜೈಲು ಶಿಕ್ಷೆಗೊಳಗಾದರು.
ಮುಂದೆ ಸ್ವತಂತ್ರ ಭಾರತದಲ್ಲಿ ಓದು ಮುಂದುವರಿಸಿ, ಡಾಕ್ಟರೇಟ್ ಪಡೆದ ಉಷಾ ಮೆಹ್ತಾ ಮುಂಬೈ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ಪ್ರೊಫೆಸರ್ ಆದರು; ಇಂಡಿಯಾದ ಸಾರ್ವಜನಿಕ ಜೀವನದ ಪತನ ಕಂಡು ‘ಇದಕ್ಕಾಗಿ ನಾವು ಅಂದು ಹೋರಾಡಬೇಕಿತ್ತೇ?’ ಎಂದು ನೊಂದುಕೊಳ್ಳುತ್ತಿದ್ದರು. ೨೦೧೦ರಲ್ಲಿ ತೀರಿಕೊಂಡ ಉಷಾ ಮೆಹ್ತಾರ ಜೀವನವನ್ನಾಧರಿಸಿ ಕಣ್ಣನ್ ಅಯ್ಯರ್ ನಿರ್ದೇಶಿಸಿದ `ಏ ವತನ್ ಮೇರೆ ವತನ್’ ಸಿನಿಮಾದಲ್ಲಿ (೨೦೨೪) ಸಾರಾ ಆಲಿ ಖಾನ್ ಉಷಾ ಮೆಹ್ತಾ ಪಾತ್ರ ಮಾಡಿದ್ದರು.
ಒಂದು ಅಂಕಿ ಅಂಶದ ಪ್ರಕಾರ, ಆಗಸ್ಟ್ ಕ್ರಾಂತಿಯಲ್ಲಿ ೬೦೨೨೯ ಜನ ಬಂಧನಕ್ಕೊಳಗಾದರು; ಡಿಫೆನ್ಸ್ ಕಾಯ್ದೆಯಡಿಯಲ್ಲಿ ೧೮೦೦೦ ಜನ ಬಂಧನಕ್ಕೊಳಗಾದರು; ಪೊಲೀಸರು, ಹಾಗೂ ಸೈನಿಕರು ೯೪೦ ಜನರನ್ನು ಕೊಂದರು; ೧೬೩೦ ಜನ ಗಾಯಗೊಂಡರು; ೪೪ ಜನ ಗಲ್ಲು ಶಿಕ್ಷೆ ಅನುಭವಿಸಿದರು. ವಿಷಾದದ ಸಂಗತಿಯೆಂದರೆ, ‘ಆಗಸ್ಟ್ ಕ್ರಾಂತಿ ದಿನ’ ವನ್ನು ನೆನೆದ ಸುದ್ದಿ ಕಣ್ಣಿಗೆ ಬೀಳಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯನ್ನು ಮುನ್ನಡೆಸಿದ ಅಜ್ಞಾತ ಗುಂಪುಗಳು; ಪೊಲೀಸರ ಹಿಂಸೆಯನ್ನು ಎದುರಿಸಿದ ಸಾಮಾನ್ಯ ಭಾರತೀಯರ ಕೆಚ್ಚು, ಬಲಿದಾನ ಮಾಡಿದವರ ತ್ಯಾಗ; ರಾತ್ರೋರಾತ್ರಿ ಕರಪತ್ರಗಳನ್ನು ಹಂಚುತ್ತಿದ್ದ ನಿರ್ಭೀತ ತರುಣ ತರುಣಿಯರು; ಭೂಗತ ಬಾನುಲಿಯ ಮೂಲಕ ದೇಶವನ್ನು ಎಚ್ಚರದಲ್ಲಿಟ್ಟ ಧೀರರು ಮುಂತಾದ ಸ್ಫೂರ್ತಿದಾಯಕ ಸತ್ಯಗಳು ಕಣ್ಮರೆಯಾಗಲು ಬಿಡಬಾರದು.
೧೯೬೭ರ ಆಗಸ್ಟ್ ಕ್ರಾಂತಿಯ ಬೆಳ್ಳಿ ಮಹೋತ್ಸವದ ಕಾಲದಲ್ಲಿ ಬರೆದ ಲೇಖನವೊಂದರಲ್ಲಿ ಆಗಸ್ಟ್ ಕ್ರಾಂತಿ ನಿಜವಾದ ಅರ್ಥದಲ್ಲಿ ಜನತಾ ಕ್ರಾಂತಿಯಾಗಿತ್ತು ಎಂಬುದನ್ನು ಲೋಹಿಯಾ ನೆನೆದರು:
‘ಆಗಸ್ಟ್ ೯, ೧೯೪೨ ಜನರ ಸಂಕಲ್ಪವನ್ನು ವ್ಯಕ್ತಪಡಿಸಿತು: ನಾವು ಸ್ವತಂತ್ರರಾಗಬಯಸುತ್ತೇವೆ ಮತ್ತು ಸ್ವತಂತ್ರರಾಗುತ್ತೇವೆ ಎಂಬ ಸಂಕಲ್ಪ ಅದು. ನಮ್ಮ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಟಿಗಟ್ಟಲೆ ಜನರು ಸ್ವತಂತ್ರರಾಗುವ ಆಸೆಯನ್ನು ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಇದನ್ನು ಸಾಕಷ್ಟು ಶಕ್ತಿಯುತವಾಗಿಯೇ ವ್ಯಕ್ತಪಡಿಸಲಾಯಿತು. ಬಲ್ಲಿಯಾ ಎಂಬ ಜಿಲ್ಲೆ ಕೆಲ ಕಾಲ ಸ್ವತಂತ್ರವಾಯಿತು… ನೂರಾರು ಪೊಲೀಸ್ ವಲಯಗಳು ಸ್ವತಂತ್ರವಾದವು. ಆದರೆ ಜನರ ಸಂಕಲ್ಪ ಸಾಕಷ್ಟು ಶಕ್ತಿಯುತವಾಗಿತ್ತಾದಾರೂ ಅದರ ಆಯುಷ್ಯ ದೀರ್ಘವಾಗಿರಲಿಲ್ಲ.’
ಜಗತ್ತಿನ ಸ್ವಾತಂತ್ರ್ಯ ಹೋರಾಟಗಳ ಚರಿತ್ರೆಯಲ್ಲೇ ಅನನ್ಯವಾದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಸಾವಿರಾರು ನಾಯಕ ನಾಯಕಿಯರು, ಲಕ್ಷಾಂತರ ಚಳುವಳಿಗಾರರು, ಜನಸಾಮಾನ್ಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟಿರುವ ಸ್ವಾತಂತ್ರ್ಯ ಅತ್ಯಂತ ಅಮೂಲ್ಯವಾದುದು ಎಂದು ನೆನಪಿಸುತ್ತಲೇ ಇರುತ್ತದೆ. ಇಂಥ ಸ್ವಾತಂತ್ರ್ಯವನ್ನು ನಾವು ರಕ್ಷಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂಬುದನ್ನು ನಾವು ದಣಿವರಿಯದೆ ನೆನಪು ಮಾಡುತ್ತಿರಲೇಬೇಕು.