Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
18 May 2025 ಹೆಣ್ಣಿನ ಅರಿವು; ಗಂಡಿನ ಅರ್ಥ

ಈ ಅಂಕಣದಲ್ಲಿ ಕಳೆದ ವಾರ ಬುದ್ಧನ ಬಗ್ಗೆ ಬರೆದು, ಈ ವಾರ ಯುದ್ಧದ ಬಗ್ಗೆ ಬರೆಯುತ್ತಿರುವುದಕ್ಕೆ `ಬುದ್ಧ; - ‘ಯುದ್ಧ’ಗಳ ಪ್ರಾಸದ ರಾಜಕಾರಣ ಕಾರಣವಲ್ಲ. ಎಷ್ಟೋ ಸಲ ಇದ್ದಕ್ಕಿದ್ದಂತೆ ಹುಟ್ಟುವ ಪ್ರಾಸಗಳೇ ನಮ್ಮ ಯೋಚನೆಗಳನ್ನು, ಕವಿತೆಗಳನ್ನು ಮುನ್ನಡೆಸುವ ಪರಿ ಕಂಡು ಈ ಮಾತು ಬರೆದೆ! ಈ ಮಾತು ಬರೆಯುತ್ತಿರುವಾಗ `ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ’ ಎಂಬ ಸಾಲು ಮನಸ್ಸಿಗೆ ಬಂತು. ಕೆ.ಎಸ್. ನರಸಿಂಹಸ್ವಾಮಿಯವರ `ಗಾಳಿಯು ನಿನ್ನದೆ ದೀಪವು ನಿನ್ನದೆ’ಎಂದು ಶುರುವಾಗುವ ‘ಪ್ರಥಮ ರಾಜನಿಗೆ’ಎಂಬ ಕವಿತೆಯಲ್ಲಿ ಬರುವ ವಿರುದ್ದಾರ್ಥದ ರೂಪಕಗಳಿವು. ಸಾವಿರಾರು ವರ್ಷಗಳಿಂದ ಜಾತಿಪದ್ಧತಿಯಲ್ಲಿ ಮಲೆತು, ಕೊಳೆತು ನಿಂತ ಸಮಾಜದ ವಿರುದ್ಧ ಬುದ್ಧ ಹೂಡಿದ ಯುದ್ಧವೇನೂ ಸಾಮಾನ್ಯವಾದುದಲ್ಲ; ಅದು ಕೂಡ ಭಾರತದ ನಿರ್ಣಾಯಕ ಯುದ್ಧವೇ ಹೌದು ಎಂಬುದನ್ನು ಈ ರೂಪಕಗಳು ಮತ್ತೆ ಮನವರಿಕೆ ಮಾಡಿಕೊಟ್ಟವು.

ಇದೆಲ್ಲಕ್ಕಿಂತ ಮೊದಲು ಬೆಳ್ಳಂಬೆಳಗಿಗೇ ನೆನಪಾದದ್ದು ನಾನು ಹಿಂದೊಮ್ಮೆ ಪಿಯುಸಿ ಹುಡುಗಿಯರಿಗೆ ಟೀಚ್ ಮಾಡಿದ  ‘ದ ವಾರ್’ಎಂಬ ಕತೆ. 

ಇಟಲಿಯ ನೊಬೆಲ್ ಪ್ರಶಸ್ತಿವಿಜೇತ ಲೇಖಕ ಲೂಜಿ ಪಿರಂಡಲ್ಲೋ ಬರೆದ ಈ ಪ್ರಖ್ಯಾತ ಕತೆ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಈ ಕತೆ ನೆನಪಾದದ್ದಕ್ಕೆ ಕಾರಣ- ಮೊನ್ನೆ ಹಸೆಮಣೆಯಿಂದಲೇ ಪತಿಯನ್ನು ಸೇನೆಗೆ ಕಳಿಸಿಕೊಟ್ಟ ನವ ವಧುವಿನ ಬಗ್ಗೆ; ಮಿಲಿಟರಿಯಿಂದ ರಜೆಗೆ ಬಂದ ಮಗನನ್ನು ಮತ್ತೆ ಸೇನೆಯ ಕರ್ತವ್ಯಕ್ಕೆ ಕಳಿಸಿಕೊಟ್ಟ ತಾಯಿಯ ಬಗ್ಗೆ... ಜನ ಹೆಗ್ಗಳಿಕೆಯಿಂದ ಆಡುತ್ತಿರುವ ತೋರುಗಾಣಿಕೆಯ ಮಾತುಗಳು. ಈ ಮಾತುಗಳನ್ನು ಕೇಳುತ್ತಿದ್ದರೆ, ತರಾಸು ಥರದವರ ಅತಿರಂಜಿತ ಐತಿಹಾಸಿಕ ಕಾದಂಬರಿಗಳ ಅಥವಾ ಅಗ್ಗದ ಚರಿತ್ರೆಯ ಪುಸ್ತಕಗಳ ವೀರತಿಲಕ, ವೀರಸ್ವರ್ಗಗಳ ರೆಟರಿಕ್‌ನ- ಅಂದರೆ ಭಾಷಣರೂಪಿ ಭಾಷೆಯ- ಪ್ರಭಾವಗಳು ಇಲ್ಲೇ ಎಲ್ಲೋ ಗಾಳಿಯಲ್ಲಿ ಅಡ್ಡಾಡುತ್ತಿರುವಂತೆ ಕಾಣುತ್ತವೆ. ಒಂದು ಭಾಷೆಯಲ್ಲಿ ಹಬ್ಬುವ ಉತ್ಪ್ರೇಕ್ಷೆಗಳು ಅಷ್ಟು ಸುಲಭವಾಗಿ ಕಿವಿಮರೆಯಾಗುವುದಿಲ್ಲ! 

ಮೇಲೆ ಹೇಳಿದ ಲೂಜಿ ಪಿರಾಂಡಲ್ಲೋನ ‘ದ ವಾರ್’ ಕತೆಯ ಸಂಗ್ರಹರೂಪ:  

ಇಟಲಿಯ ಫ್ಯಾಬ್ರಿಯಾನೋದ ರೈಲ್ವೇನಿಲ್ದಾಣ. ಯಾವುದೋ ದುಃಖದಲ್ಲಿದ್ದ ಗಂಡ, ಹೆಂಡತಿ ರೈಲ್ವೆ ಬೋಗಿಯೊಂದಕ್ಕೆ ಬಂದು ಕೂತರು. ಗಂಡ ಹೆಂಡತಿಯ ಕಡೆಗೆ ತಿರುಗಿ ಅನುಕಂಪದಿಂದ ಕೇಳಿದ: ‘ಆರ್ ಯು ಆಲ್ ರೈಟ್, ಡಿಯರ್?’ 

ಹೆಂಡತಿ ಅಳು ಉಕ್ಕುತ್ತಿದ್ದ ಮುಖವನ್ನು ಮುಚ್ಚಿಕೊಂಡಳು. ಅವರಿಬ್ಬರೂ ಇನ್ನು ಮೂರು ದಿನದಲ್ಲಿ ಯುದ್ಧಕ್ಕೆ ತೆರಳಲಿದ್ದ ತಮ್ಮ ಇಪ್ಪತ್ತು ವರ್ಷದ ಮಗನಿಗೆ ವಿದಾಯ ಹೇಳಲು ಹೊರಟಿದ್ದರು.  

ಗಂಡ ಆಕೆಯ ದುಃಖದ ಕಾರಣವನ್ನು ಅಲ್ಲಿದ್ದ ಸಹಪಯಣಿಗರಿಗೆ ಹೇಳತೊಡಗಿದ. ಆ ಬೋಗಿಯಲ್ಲಿದ್ದ ಎಲ್ಲರ ಕತೆಯೂ ಹೆಚ್ಚು ಕಡಿಮೆ ಹೀಗೇ ಇತ್ತು. ಎಲ್ಲರ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಯುದ್ಧಕ್ಕೆ ಹೋಗಿದ್ದರು. 

`ಅಯ್ಯೋ! ನಿಮ್ಮ ಮಗ ಪರವಾಯಿಲ್ಲಪ್ಪ, ಈಗ ಹೋಗ್ತಾ ಇದಾನೆ; ನನ್ನ ಮಗ ಎರಡು ಸಲ ಗಾಯ ಆಗಿ ಮನೆಗೆ ಬಂದ; ಈಗ ಮತ್ತೆ ಯುದ್ಧಕ್ಕೆ ಕಳಿಸಿದಾರೆ’ಅಂದ ಒಬ್ಬ.

‘ಅಯ್ಯೋ! ನನ್ನ ಇಬ್ಬರು ಮಕ್ಕಳು, ಮೂವರು ಸೋದರಳಿಯರು ತುಕಡಿಯಲ್ಲಿದಾರೆ’ಎಂದ ಮತ್ತೊಬ್ಬ.

‘ಇರಬೌದು. ಆದರೆ ನಮ್ಮೋನು ಒಬ್ಬನೇ ಮಗ...’ ಎಂದು ರಾಗ ಎಳೆದ, ಈ ಮಾತುಕತೆ ಶುರು ಮಾಡಿದ್ದ ಗಂಡ.  

‘ಆದರೆ ನಾನು ಇಬ್ಬರು ಮಕ್ಕಳ ನೋವನ್ನೂ ಅನುಭವಿಸಬೇಕಲ್ಲಪ್ಪಾ...’ ಎಂದ ಆ ತಂದೆ. 

‘ಆದರೆ... ಒಬ್ಬ ಹೋದರೂ ಇನ್ನೊಬ್ಬ ಮಗ ಅಪ್ಪನ್ನ ಸಮಾಧಾನ ಮಾಡೋಕೆ ಉಳಿದರೆ...’ ಎಂದು ಗಂಡ ರಾಗ ಎಳೆದ.

‘ಅಯ್ಯೋ! ಉಳಿದಿರೋ ಒಬ್ಬ ಮಗನಿಗಾಗಿ ಅಪ್ಪ ಬದುಕಲೇಬೇಕಾಗುತ್ತಲ್ಲಪ್ಪಾ. ಒಬ್ಬನೇ ಮಗ ಇದ್ದು, ಅವನು ಸತ್ತಿದ್ರೆ ಅಪ್ಪನೂ ಸತ್ತು ತನ್ನ ಗೋಳಿಗೆ ಕೊನೆ ಹಾಡಬಹುದಿತ್ತಲ್ಲ; ನಿಮ್ಮದೇ ಪರವಾಯಿಲ್ಲ’ಎಂದ ಆ ಎರಡು ಮಕ್ಕಳ ತಂದೆ. 

ಹೀಗೇ ಮಾತುಕತೆ ನಡೆಯುತ್ತಿತ್ತು. ಈ ಮಾತುಕತೆ ಕೇಳಿಸಿಕೊಳ್ಳುತ್ತಿದ್ದ ಕೆಂಪು ಮುಖದ ಒಬ್ಬ ಧಡೂತಿ ಆಸಾಮಿ ಕಣ್ಣು ಕೆಂಪಾಗಿಸಿಕೊಂಡು, ಉದ್ವೇಗದಿಂದ ಏದುಸಿರುಬಿಡುತ್ತಾ, ‘ನಾನ್ಸೆನ್ಸ್’ ಅಂದ. ಅದೇ ಉಸಿರಿನಲ್ಲಿ, ‘ನಾನ್ಸೆನ್ಸ್. ಏನು, ನಾವು ನಮ್ಮ ಅನುಕೂಲಕ್ಕೋಸ್ಕರ ಮಕ್ಕಳನ್ನು ಹುಟ್ಟಿಸ್ತೀವೇನ್ರಿ?’ ಅಂದ. 

ಯುದ್ಧದ ಮೊದಲ ದಿನದಿಂದಲೇ ತುಕಡಿಯಲ್ಲಿದ್ದ ಯೋಧನ ಅಪ್ಪ, ‘ನೀವನ್ನೋದು ನಿಜ. ನಮ್ಮ ಮಕ್ಕಳು ನಮಗೆ ಸೇರಿದೋರಲ್ಲ; ದೇಶಕ್ಕೆ ಸೇರಿದೋರು’ಎನ್ನುತ್ತಾ ನಿಟ್ಟುಸಿರಿಟ್ಟ. 

ಧಡೂತಿ ಆಸಾಮಿ ಭಾಷಣವನ್ನೇ ಶುರು ಮಾಡಿದ: ‘ಥತ್! ಮಕ್ಕಳಿಗೆ ಜನ್ಮ ಕೊಡುವಾಗ ನಾವು ದೇಶದ ಬಗ್ಗೆ ಯೋಚನೆ ಮಾಡಿರ‍್ತಿವೇನ್ರಿ? ನಾವು ಇಪ್ಪತ್ತನೇ ವಯಸ್ಸಿನಲ್ಲಿ ಹೇಗಿದ್ವೋ ಹಾಗೇ ನಮ್ಮ ಮಕ್ಳು ಕೂಡ ಇರ‍್ತಾರೆ.  ನಾವು ಕೂಡ ಆ ವಯಸ್ಸಿನಲ್ಲಿ ದೇಶ ನಮ್ಮನ್ನ ಕರೆದರೆ ಹೋಗ್ತಾ ಇದ್ವು. ಈಗ ನಮಗೆ ನಮ್ಮ ಈ ವಯಸ್ನಲ್ಲಿ ನಮ್ಮ ಮಕ್ಕಳಿಗಿರೋ ದೇಶಪ್ರೇಮಕ್ಕಿಂತ ಇನ್ನೂ ಹೆಚ್ಚು ದೇಶಪ್ರೇಮ ಇರುತ್ತೆ, ಅಲ್ವ? ನಮ್ಮಲ್ಲಿ ಯಾರೇ ಆಗಲಿ, ನಮ್ಮ ಮಕ್ಕಳ ಬದಲಿಗೆ ದೇಶಕ್ಕಾಗಿ ಸೇನಾ ತುಕಡಿ ಸೇರೋಕೆ ಸಿದ್ಧ ಇದೀವಿ, ಅಲ್ವ?’

ಯಾರೂ ಮಾತಾಡಲಿಲ್ಲ. ಧಡೂತಿ ಆಸಾಮಿ ಭಾಷಣದ ಧಾಟಿಯಲ್ಲಿ ಮಾತು ಮುಂದುವರಿಸಿದ. ‘ನೋಡಿ, ನಮ್ಮ ಮಕ್ಕಳಿಗೆ ಅವರ ಇಪ್ಪತ್ತನೇ ವಯಸ್ನಲ್ಲಿ ನಮ್ಮ ಬಗ್ಗೆ ಇರೋ ಪ್ರೀತಿಗಿಂತ ದೇಶದ ಬಗ್ಗೆ ಹೆಚ್ಚು ಪ್ರೀತಿ ಇರೋದು ನ್ಯಾಚುರಲ್, ಅಲ್ವಾ? ನಮ್ಮ ಮಕ್ಕಳು ಈ ಜೀವನದ ಕರಾಳ ಮುಖಗಳನ್ನ ನೋಡದೇ, ಈ ಬದುಕಿನ ಕಹಿ, ಭ್ರಮನಿರಸನ, ಬೇಸರ... ಇವನ್ನೆಲ್ಲ ನೋಡದೆ ಎಳೇ ವಯಸ್ಸಿನಲ್ಲೇ ಸಂತೋಷವಾಗಿ ಸತ್ತರೆ ಅದಕ್ಕಿಂತ ಬೇರೆ ಇನ್ನೇನು ಬೇಕು, ಹೇಳಿ? ಈಗ ನನ್ನ ಮಾತು ಕೇಳಿ- ಎಲ್ಲಾರೂ ಅಳೋದನ್ನ ನಿಲ್ಲಿಸಬೇಕು. ಎಲ್ಲಾರೂ ನನ್ ಥರಾ ನಗಬೇಕು. ನನ್ನ ಮಗ ಸಾಯೋಕೆ ಮುಂಚೆ ನನಗೆ ಕಳಿಸಿದ ಸಂದೇಶದಲ್ಲಿ ಏನು ಹೇಳಿದ್ದ ಗೊತ್ತ? ‘ನಾನು ಯಾವ ಥರ ಅತ್ಯುತ್ತಮ ರೀತೀಲಿ ಸಾಯಬೇಕು ಅಂದುಕೊಂಡಿದ್ನೋ ಅದೇ ರೀತೀಲಿ ಸಾಯ್ತಿದೀನಿ; ನಾನು ತೃಪ್ತಿಯಿಂದ ಸಾಯ್ತಿದೀನಿ’ಅಂತ. ಅದುಕ್ಕೇ ನೋಡಿ- ನಾನು ಮೌರ್ನಿಂಗ್ ಡ್ರೆಸ್ ಕೂಡ ಹಾಕ್ಕೊಂಡಿಲ್ಲ.’

ಈ ಮಾತು ಹೇಳುತ್ತಾ ಆ ಮುದುಕ ತನ್ನ ಬಿಳಿಕೋಟನ್ನು ತೋರಿಸಿದ. ಅವನ ಕಣ್ಣು ತುಂಬಿ ಬಂದಿದ್ದವು. ಜೋರಾಗಿ ನಕ್ಕ; ಅದು ಬಿಕ್ಕಳಿಕೆ ಕೂಡ ಆಗಬಹುದಿತ್ತೇನೋ.

ಅಲ್ಲಿದ್ದವರೆಲ್ಲ, ‘ಊಂ, ಊಂ, ನಿಜ ನಿಜ ಕಣಪ್ಪ’ಅಂದರು.  

ಮಾತಾಡುತ್ತಿದ್ದವರೆಲ್ಲ ಗಂಡಸರು. ಅವತ್ತು ಮಗನನ್ನು ತುಕಡಿಗೆ ಕಳಿಸಲು ಗಂಡನ ಜೊತೆಗೆ ಹೊರಟು ದುಃಖದಲ್ಲಿ ಮುಳುಗಿದ್ದ ಆ ಮಹಿಳೆಗೆ ತನ್ನದೇ ತಪ್ಪು ಅನ್ನಿಸತೊಡಗಿತು. ತಮ್ಮ ಮಕ್ಕಳನ್ನು ಸೇನಾ ತುಕಡಿಗೆ ಮಾತ್ರವಲ್ಲ, ಸಾವಿನ ಬಾಯಿಗೆ ಕೂಡ ಕಳಿಸಲು ಸಿದ್ಧರಿದ್ದ ತಂದೆ, ತಾಯಂದಿರ ಎತ್ತರಕ್ಕೆ ತಾನು ಏರಲಾಗಿಲ್ಲವಲ್ಲ ಎಂದು ಆಕೆಗೆ ಪೆಚ್ಚೆನಿಸಿತು. ಇದೀಗ ಆಕೆ ಧಡೂತಿ ಆಸಾಮಿಯ ಮಾತುಗಳನ್ನು ಇನ್ನಷ್ಟು ಕಿವಿಗೊಟ್ಟು ಕೇಳಿಸಿಕೊಳ್ಳತೊಡಗಿದಳು. 

ಧಡೂತಿ ಮುದುಕ ಹೇಳುತ್ತಲೇ ಇದ್ದ: ‘ನನ್ನ ಮಗ ಹೀರೋ ಆಗಿ ಸತ್ತ; ರಾಜನಿಗಾಗಿ, ದೇಶಕ್ಕಾಗಿ ಪ್ರಾಣಕೊಟ್ಟ; ಸಂತೋಷದಿಂದ... ಯಾವ ವಿಷಾದವೂ ಇಲ್ಲದೆ ಸತ್ತ...’ 
ಹೀಗೇ ಅವನ ಮಾತು ಮುಂದುವರಿದಿತ್ತು.

ಆಕೆ ನೋಡುತ್ತಲೇ ಇದ್ದಳು. ಇಂಥದೊಂದು ಲೋಕವಿದೆ ಎನ್ನುವುದೇ ಅವಳಿಗೆ ಗೊತ್ತಿರಲಿಲ್ಲ. ತನ್ನ ಮಗನ ಸಾವಿನ ಬಗ್ಗೆ ಅಷ್ಟೊಂದು ನಿರ್ಲಿಪ್ತವಾಗಿ ಮಾತಾಡುತ್ತಿರುವ ತಂದೆಯನ್ನು ಎಲ್ಲರೂ ಅಭಿನಂದಿಸುತ್ತಿದ್ದರು.

ಆಗ ಆಕೆ ಆವರೆಗೆ ಹೇಳಿದ್ದು ಏನೂ ಕೇಳಿಸದವಳಂತೆ, ಅದೇ ಆಗ ಕನಸಿನಿಂದ ಎದ್ದವಳಂತೆ ಆ ಮುದುಕನ ಕಡೆಗೆ ತಿರುಗಿ ಕೇಳಿದಳು: 

‘ಹಂಗಾರೆ...ನಿಮ್ಮ ಮಗ ನಿಜವಾಗ್ಲೂ ತೀರಿಕೊಂಡಿದಾನಾ?’ 

ಉಳಿದವರೆಲ್ಲ ಕೆಕ್ಕರುಗಣ್ಣಿನಿಂದ ಅವಳನ್ನು ನೋಡಿದರು. ಮುದುಕನ ಮಂಜಾದ ಕಣ್ಣುಗಳು ಅವಳನ್ನು ನೋಡಲೆತ್ನಿಸಿದವು. ಆತ ತಡವರಿಸುತ್ತಾ ಅವಳ ಪ್ರಶ್ನೆಗೆ ಉತ್ತರ ಕೊಡಲೆತ್ನಿಸಿದ. ಮಾತೇ ಹೊರಡಲಿಲ್ಲ. ಅವಳನ್ನೇ ನೋಡುತ್ತಿದ್ದ... ಅವಳ ಆ ಸಿಲ್ಲಿ, ಅಸಂಬದ್ಧ ಪ್ರಶ್ನೆಯ ಅರ್ಥ ಈಗ ಅವನಿಗೆ ತಟ್ಟಿದಂತಾಯಿತು: ಅಂದರೆ, ಮಗ ಇನ್ನೆಂದೂ ಬಾರದಂತೆ ಹೊರಟು ಹೋಗಿದ್ದಾನೆ. 

ಅವನ ಮುಖ ಕುಗ್ಗಿತು. ಕಿವುಚಿಕೊಂಡಿತು. ತಕ್ಷಣ ಜೇಬಿನಿಂದ ಕಚೀಫ್ ಎಳೆದುಕೊಂಡ; ಸುತ್ತ ಇದ್ದವರ ಎದೆಯೊಡೆಯುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ...

ಎಷ್ಟೋ ವರ್ಷಗಳ ಕೆಳಗೆ ‘ದ ವಾರ್’ ಕತೆಯನ್ನು ಪಾಠ ಮಾಡಿದಾಗ, ಈ ಕತೆಯ ಕೊನೆಯಲ್ಲಿರುವ, ‘Then…is your son really dead?’ ಎಂಬ ಆ ಮಹಿಳೆಯ ಪ್ರಶ್ನೆಯಲ್ಲಿರುವ `ರಿಯಲೀ’ ಎಂಬ ಪದ ಹೊರಡಿಸುವ ಆಳವಾದ ಅರ್ಥ; ಅಥವಾ ‘ಯುವರ್’ ಅಥವಾ ‘ಸನ್’ ಈ ಯಾವ ಪದದ ಮೇಲೆ ಒತ್ತು ಹಾಕಿದರೂ ಹೊರಡುವ ಬೇರೆ ಬೇರೆ ಅರ್ಥ...ಇವೆಲ್ಲದರ ಬಗ್ಗೆ ಜಾಣ ಹುಡುಗಿಯರು ಚರ್ಚಿಸಿದ್ದು ನೆನಪಾಗುತ್ತದೆ. ನೊಂದವರ ಮನಸ್ಸಿನಲ್ಲಿ ನಡೆಯುತ್ತಿದ್ದ ಭಾವನೆಗಳ ‘ಯುದ್ಧ’; ಹೊರ ಮಾತು-ಒಳಸತ್ಯಗಳ ನಡುವೆ ನಡೆವ ‘ಯುದ್ಧ’; ನಮ್ಮ ಉಬ್ಬಿದ ಮಾತುಗಳ ಅರ್ಥಹೀನತೆ... ಇವೆಲ್ಲವನ್ನೂ ಗ್ರಹಿಸಲೆತ್ನಿಸುತ್ತಿದ್ದ ಆ ಹದಿಹರೆಯದ ಹುಡುಗಿಯರಿಗೆ ತಾಯಿಯ ದುಃಖ, ಭಾಷೆ ನಿಧಾನಕ್ಕೆ ಅರ್ಥವಾಗತೊಡಗಿತ್ತು. 

ಆದರೆ ತಾವು ಮಾತ್ರ ಸುರಕ್ಷಿತವಾಗಿ ಬದುಕುತ್ತಾ, ಇನ್ನೊಬ್ಬರನ್ನು ಉಬ್ಬಿಸುವ 'ಗಂಡು ಭಾಷೆ’ ಬಳಸುವ ಮಧ್ಯಮ ವರ್ಗಗಳ ಗಂಡಸರಿಗೆ ಈ ಸೂಕ್ಷ್ಮಗಳು ಸುಲಭವಾಗಿ ಅರ್ಥವಾಗಬಲ್ಲವೆ?

blog
11 May 2025 ಬುದ್ಧಪೂರ್ಣಿಮೆಯ ಬೆಳಕಿಗಾಗಿ

ನಿಮಗೂ ಹೀಗಾಗಿರಬಹುದು; ನಾವು ಯಾರ ಕಣ್ಣಿನ ಮೂಲಕ ಯಾರನ್ನು ನೋಡುತ್ತೇವೆ ಎಂಬುದು ಅನೇಕ ಸಲ ನಿರ್ಣಾಯಕವಾಗಬಲ್ಲದು! 

ಬಾಲ್ಯದಲ್ಲಿ ಜಿ.ಪಿ. ರಾಜರತ್ನಂ ಮೊದಲಾದವರ ಮೂಲಕ ಬುದ್ಧನನ್ನು ಕಂಡಿದ್ದ ನನಗೆ, ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಲೇಖನ ಆತ್ಮೀಯ ಗೆಳೆಯನಂತಿರುವ ಬುದ್ಧನನ್ನು ಕಾಣಿಸಿತು. ಹಾಗೆಯೇ ರಾಜಲಕ್ಷ್ಮಿ ಎನ್. ರಾವ್ ಅವರ 'ಸಂಗಮ’ ಕಥಾಸಂಕಲನದ ‘ವೈಶಾಖ ಶುದ್ಧ ಪೂರ್ಣಿಮೆ’ಕತೆಯ ಪ್ರೀತಿ, ಹಾಡು, ದುರಂತಗಳ ನಡುವೆ ಮುಕ್ಕಾಗದ ಬುದ್ಧ ಪ್ರತಿಮೆ; ಈ ಪುಸ್ತಕದ ಮುಖಪುಟಕ್ಕಾಗಿ ಆರ್. ಎಸ್.ಎನ್. ನಾಯ್ಡು ಬರೆದ ಬುದ್ಧ… 

ಇನ್ನು ಬೇಂದ್ರೆಯವರ ‘ಬುದ್ಧ... ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಬಣ್ಣನೆಯಂತೂ ಸದಾ ಚಕಿತಗೊಳಿಸುತ್ತಲೇ ಇರುತ್ತದೆ. ಕಾರಣ: ಈ ಬಣ್ಣನೆ ವಾಚ್ಯಾರ್ಥವಾಗಿಯೂ ನಿಜ; ನಿತ್ಯ ಬೆಳೆಯುವ ರೂಪಕಾರ್ಥಗಳಲ್ಲಿ ಇನ್ನಷ್ಟು ನಿಜ!  'ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ಎಂಬ ರೂಪಕಾರ್ಥದ ಪ್ರತಿರೂಪದಂತಿರುವ ಅಂಬೇಡ್ಕರ್  ವೈಚಾರಿಕ ಬುದ್ಧನನ್ನು ಕಡೆದರು. ಬರಬರುತ್ತಾ ನನ್ನೊಳಗೆ ಬೆಳೆಯತೊಡಗಿದ ಅಂಬೇಡ್ಕರ್  ಬುದ್ಧಶಿಲ್ಪ ನನ್ನೊಳಗೆ ನೆಲೆ ನಿಂತಿದೆ. ಮೇ ತಿಂಗಳ ೧೨ನೆಯ ತಾರೀಕಿನ ಬುದ್ಧ ಪೂರ್ಣಿಮೆಯನ್ನು ಎದುರುಗೊಳ್ಳಲು ಅಂಬೇಡ್ಕರ್ ರೂಪಿಸಿದ ಬುದ್ಧ, ಬೌದ್ಧ ಧಮ್ಮ ಕುರಿತು ಆಗಾಗ ಬರೆದ ಟಿಪ್ಪಣಿಗಳು:

ಅಂಬೇಡ್ಕರ್ ಒಮ್ಮೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಭೆಯಲ್ಲಿ ಮಾತಾಡುತ್ತಾ 'ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ಏನು ಮಾಡಿದರೋ ಅದನ್ನು ನಾನು ಬೌದ್ಧ ಧರ್ಮಕ್ಕೆ ಮಾಡುತ್ತೇನೆ’ ಎಂದರು. ಗೌತಮಬುದ್ಧನಿಗೆ ಜ್ಞಾನೋದಯವಾದ ಹಾಗೆಯೇ ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಬಹುದೊಡ್ಡ ಜ್ಞಾನೋದಯವಾಗಿತ್ತು. ಸ್ವಂತದ ದುಃಖ ಹಾಗೂ ಸಮುದಾಯದ ದುಃಖ, ಅವಮಾನ, ಅಧ್ಯಯನ, ಹುಡುಕಾಟ, ಚಿಂತನೆ, ಸಂಘರ್ಷಗಳಿಂದ ಹುಟ್ಟಿದ ಈ ಅಂಬೇಡ್ಕರ್ ಜ್ಞಾನೋದಯ ಭಾರತದ ಚರಿತ್ರೆಯ ದಿಕ್ಕನ್ನು ಬದಲಿಸುವಷ್ಟು ಶಕ್ತಿಶಾಲಿಯಾಗಿತ್ತು.  ಅದು ೨೫೦೦ ವರ್ಷಗಳ ಕೆಳಗೆ ಬುದ್ಧನಿಗೆ ಆದ ಜ್ಞಾನೋದಯದ ಆಧುನಿಕ ಆವೃತ್ತಿಯಂತಿತ್ತು.

ಅಷ್ಟೊತ್ತಿಗಾಗಲೇ ಅಂಬೇಡ್ಕರ್ ತಮ್ಮ ಕಣ್ಣೆದುರಿಗಿರುವ ಯಾವ ಧರ್ಮದಲ್ಲಿ ದಲಿತರ ಅಸ್ಪೃಶ್ಯತೆಗೆ ಬಿಡುಗಡೆಯಿದೆಯೆಂದು ಆಳವಾಗಿ ಪರಿಶೀಲಿಸಿದ್ದರು. ಅಷ್ಟೇ ಅಲ್ಲ, ಇಡೀ ದೇಶಕ್ಕೇ ಅಗತ್ಯವಾದ ಅತ್ಯುತ್ತಮ ಧರ್ಮ ಯಾವುದೆಂಬ ಬಗ್ಗೆಯೂ ಯೋಚಿಸಿದ್ದರು. ಬೌದ್ಧ ಧಮ್ಮ ಸ್ವೀಕಾರಕ್ಕೂ ಮುನ್ನ ಅಂಬೇಡ್ಕರ್ ಪ್ರಾಚೀನ ಭಾರತದ ಚರಿತ್ರೆಯ ಅನೇಕ ವಿವರಗಳನ್ನು ಪುನರ್ ನಿರ್ಮಿಸಿಕೊಂಡರು. ಚರಿತ್ರೆಯಲ್ಲಿ ಬೌದ್ಧ ಧಮ್ಮ ಮತ್ತು ಬ್ರಾಹ್ಮಣವಾದಗಳ ನಡುವೆ ನಡೆದ ಮುಖಾಮುಖಿಯ ಸ್ವರೂಪವನ್ನು ಆಳವಾಗಿ ಸಂಶೋಧಿಸಿದರು. ದಲಿತರು ಮೂಲತಃ ಬೌದ್ಧರಾಗಿದ್ದರು ಎಂಬುದನ್ನು ಆಧಾರಸಮೇತ ಸಾಬೀತು ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಬೌದ್ಧ ಧಮ್ಮವನ್ನು ಆಧುನಿಕ ಕಾಲಕ್ಕೆ ತಕ್ಕ ಧರ್ಮವನ್ನಾಗಿ ವ್ಯಾಖ್ಯಾನಿಸಿ, ಮರುರೂಪಿಸಿದರು. 

೧೯೫೪ರಲ್ಲಿ ಮಾಡಿದ ರೇಡಿಯೋ ಭಾಷಣವೊಂದರಲ್ಲಿ ‘ಸ್ವಾತಂತ್ರ‍್ಯ, ಸಮಾನತೆ ಹಾಗೂ ಸೋದರತೆಗಳ ತತ್ವವನ್ನು ಫ್ರೆಂಚ್ ಕ್ರಾಂತಿಯಿಂದ ನಾನು ಪಡೆಯಲಿಲ್ಲ; ಬದಲಿಗೆ ನನ್ನ ಗುರು ಬುದ್ಧನಿಂದ ಈ ತತ್ವಗಳನ್ನು ಪಡೆದೆ’ಎಂದು ಅಂಬೇಡ್ಕರ್ ಹೇಳಿದರು. ‘ನನ್ನ ಸಿದ್ಧಾಂತದ ಬೇರುಗಳು ಧರ್ಮದಲ್ಲಿವೆಯೇ ಹೊರತು ರಾಜ್ಯಶಾಸ್ತ್ರದಲ್ಲಲ್ಲ’ ಎಂದು ಅವರು ಇದೇ ಭಾಷಣದಲ್ಲಿ ಹೇಳಿದ್ದರು.

ಬುದ್ಧನನ್ನು ವೈಚಾರಿಕವಾಗಿ ವಿವರಿಸಲೆತ್ನಿಸಿದ ಅಂಬೇಡ್ಕರ್, ಬುದ್ಧನ ಬಗೆಗಿನ ಸಿದ್ಧಪುರಾಣಗಳನ್ನು ಒಡೆದರು. ನಾವೆಲ್ಲ ಚರಿತ್ರೆಯ ಜನಪ್ರಿಯ ಪುಸ್ತಕಗಳ ಮೂಲಕ ತಿಳಿದಿರುವಂತೆ ಸಿದ್ಧಾರ್ಥ ‘ರೋಗ, ಮುಪ್ಪು ಹಾಗೂ ಸಾವಿನ ಚಿತ್ರಗಳನ್ನು ಕಂಡು ವಿರಾಗಿಯಾದ’ ತಾನೆ? ಈ ದೃಶ್ಯಗಳು ರೂಪಕಗಳಾಗಿ ಅತ್ಯಂತ ಅರ್ಥಪೂರ್ಣವಾಗಿವೆ ಎನ್ನುವುದು ನಿಜ. ಆದರೆ ಚರಿತ್ರೆಯ ಅಧ್ಯಯನದ ಮೂಲಕ ಅಂಬೇಡ್ಕರ್ ಕಂಡುಕೊಂಡ ಸತ್ಯದ ಪ್ರಕಾರ, ಬುದ್ಧ ಈ ದೃಶ್ಯಗಳನ್ನು ಕಂಡು ವಿರಾಗಿಯಾಗಲಿಲ್ಲ; ಬದಲಿಗೆ, ತನ್ನ ತಂದೆಯ ರಾಜ್ಯಕ್ಕೂ ಪಕ್ಕದ ರಾಜ್ಯಕ್ಕೂ ನದಿಯ ನೀರಿನ ವಿಷಯದಲ್ಲಿ ಉಂಟಾದ ಜಗಳದಿಂದ ಬೇಸರಗೊಂಡು ರಾಜ್ಯ ತೊರೆದ. ಬುದ್ಧನನ್ನು ಹತ್ತು ಅವತಾರಗಳ ಜೊತೆ ಹನ್ನೊಂದಾಗಿಸಿ ನುಂಗಲೆತ್ನಿಸಿದ ಪುರಾಣಗಳನ್ನೂ ಅಂಬೇಡ್ಕರ್ ತಿರಸ್ಕರಿಸಿದರು. ಏಸು ಕ್ರಿಸ್ತ, ಪೈಗಂಬರರ ಹಾಗೆ ಬುದ್ಧ ತಾನು ದೇವದೂತನೆಂದಾಗಲೀ, ಕೃಷ್ಣನಂತೆ ದೇವರದೇವನೆಂದಾಗಲೀ ಎಂದೂ ಹೇಳಿಕೊಳ್ಳಲಿಲ್ಲ ಎಂಬ ಸತ್ಯವನ್ನು ಒತ್ತಿ ಹೇಳಿದರು.

ಹೀಗೆ ಅಂಬೇಡ್ಕರ್ ತಮ್ಮ ಒಟ್ಟು ಜೀವಿತದಲ್ಲಿ ಬೌದ್ಧ ಧಮ್ಮವನ್ನು ಆಧುನಿಕವಾಗಿ ಹಾಗೂ ವೈಚಾರಿಕವಾಗಿ ವಿವರಿಸಿಕೊಂಡ ಕ್ರಮ ಇಂದು ಇಡೀ ಜಗತ್ತಿಗೆ ಆದರ್ಶ ಮಾದರಿಯಾಗಬಲ್ಲದು. ಯಾಕೆಂದರೆ, ಧರ್ಮಗಳನ್ನು ಅಸಮಾನತೆ ಹಾಗೂ ಪ್ರತ್ಯೇಕತೆಗಳನ್ನು ಉತ್ತೇಜಿಸುವ ಕಾಲ ಇದು; ಧರ್ಮ ಉಕ್ಕಿಸಬಲ್ಲ ಭಾವನಾತ್ಮಕತೆಯನ್ನು ಜನರನ್ನು ಬೆಸೆಯಲು ಬಳಸದೆ, ಜನರಲ್ಲಿ ಭಾವನಾತ್ಮಕ ವಿಕಾರಗಳನ್ನು ಹಬ್ಬಿಸುವ ಕ್ರೌರ್ಯ ಇಂದು ಹೆಚ್ಚಾಗಿದೆ. ಇಂಥ ಕಾಲದಲ್ಲಿ, ಅಂಬೇಡ್ಕರ್ ಬೌದ್ಧಧಮ್ಮವನ್ನು ವಿವರಿಸಿರುವ ಆರೋಗ್ಯಕರ ರೀತಿಯನ್ನು ಹೀಗೆ ಸಂಗ್ರಹಿಸಬಹುದು:

೧.ಉದಾರವಾದಿ ಪ್ರಜಾಪ್ರಭುತ್ವ, ಮಾನವತಾವಾದ, ವೈಜ್ಞಾನಿಕತೆ ಹಾಗೂ ವಿಚಾರವಾದಗಳನ್ನು ಒಪ್ಪುವ ಆಧುನಿಕ ಮನಸ್ಸಿಗೆ ಬೌದ್ಧ ಧಮ್ಮ ಒಪ್ಪಿತವಾಗುತ್ತದೆ.
೨. ಸ್ವಾತಂತ್ರ‍್ಯ, ಸಮಾನತೆ ಹಾಗೂ ಸೋದರತ್ವ-ಸೋದರಿತ್ವ(ಫ್ರಾಟರ್ನಿಟಿ)ಗಳ ತತ್ವವನ್ನು ಬೌದ್ಧ ಧಮ್ಮ ಪ್ರತಿಪಾದಿಸುತ್ತದೆ. 
೩.ಧರ್ಮದ ಹೆಸರಿನಲ್ಲಿ ಅನಿಷ್ಟವಾದ ಆಚರಣೆಗಳನ್ನು ಬೌದ್ಧ ಧಮ್ಮ ಒಪ್ಪುವುದಿಲ್ಲ.
೪.ಬೌದ್ಧ ಧಮ್ಮ ಜಾತಿಯ ಮೇಲು, ಕೀಳುಗಳನ್ನು ತಿರಸ್ಕರಿಸುತ್ತದೆ.
೫.ಈ ಧಮ್ಮದ ಮಾರ್ಗಗಳನ್ನು ಪ್ರಶ್ನಿಸುವ, ವಿವರಣೆಯ ಮೂಲಕ ಅದಕ್ಕೆ ತಿದ್ದುಪಡಿ ತರುವ ಸ್ವಾತಂತ್ರ ಧಮ್ಮದ ಅನುಯಾಯಿಗೆ ಇದೆ.
೬.ಧರ್ಮಗಳು ಸಾಮಾನ್ಯವಾಗಿ ಪವಾಡಗಳು, ಅಲೌಕಿಕ ಘಟನೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಕಟ್ಟಿದ ಸುಳ್ಳುಗಳ ಮೂಲಕ ಜನರ ಮೇಲೆ ಯಜಮಾನಿಕೆ ಸ್ಥಾಪಿಸುತ್ತಿರುತ್ತವೆ. ಆದರೆ, ಬೌದ್ಧ ಧಮ್ಮ ಪವಾಡಗಳಾಗಲೀ ಅಲೌಕಿಕವಾದ ದೈವದ ಕಲ್ಪನೆಯಾಗಲೀ ಇಲ್ಲದ ಧರ್ಮ. ಧಾರ್ಮಿಕ ನಾಯಕರಲ್ಲಿ ಅಲೌಕಿಕ ಶಕ್ತಿಯಿದೆಯೆಂದು ಬೌದ್ಧ ಧಮ್ಮ ಬಿಂಬಿಸುವುದಿಲ್ಲ.
೭.ಸಮಾನತೆಯ ಆಶಯವನ್ನು ಪ್ರತಿಪಾದಿಸಲು, ರಾಜಕೀಯ ಕ್ರಾಂತಿಗೆ ಪೂರಕವಾಗಬಲ್ಲ ಧಾರ್ಮಿಕ ಕ್ರಾಂತಿಯನ್ನು ರೂಪಿಸಲು ಬೌದ್ಧ ಧಮ್ಮ ನೆರವಾಗಬಲ್ಲದು.
೮.ಬುದ್ಧನ ಪ್ರಕಾರ ‘ಧಮ್ಮ’ಎನ್ನುವುದು ಮೂಲತಃ ನ್ಯಾಯ ಹಾಗೂ ಸಾಮಾಜಿಕ ನೈತಿಕತೆ. ಈ ಧಮ್ಮದಲ್ಲಿ ತೀರ್ಥಯಾತ್ರೆ, ಬಲಿ ಇತ್ಯಾದಿಗಳಿಗೆ ಅವಕಾಶವಿಲ್ಲ.
೯.ಚರಿತ್ರೆಯುದ್ದಕ್ಕೂ ಧರ್ಮಗಳು ಯಾಜಮಾನ್ಯದ ರಾಜಕಾರಣ ಹಾಗೂ ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಲಾಭಕೋರ ರಾಜಕಾರಣದ ಮುಖವಾಡಗಳಾಗಿ ಬಳಕೆಯಾಗುತ್ತಾ ಬಂದಿವೆ. ಇದನ್ನು ಮನಗಂಡಿದ್ದ ಅಂಬೇಡ್ಕರ್ ‘ನನಗೆ ಧರ್ಮದ ಅಗತ್ಯವಿದೆಯೇ ಹೊರತು ಧರ್ಮದ ಹೆಸರಿನಲ್ಲಿ ಗೋಸುಂಬೆತನವಲ್ಲ’ಎಂದು ಹೇಳಿದರು. ಒಂದು ಉತ್ತಮ ಜೀವನಮಾರ್ಗವಾಗಿ ಕೂಡ ಅವರು ಬೌದ್ಧ ಮಾರ್ಗವನ್ನು ಒಪ್ಪಿಕೊಂಡರು. 
೧೦.ಬೌದ್ಧ ಧಮ್ಮ ವೈದಿಕವಾದ, ಬ್ರಾಹ್ಮಣವಾದಗಳ ವಿರುದ್ಧ ಹೋರಾಡುತ್ತಾ ಅಸ್ಪೃಶ್ಯತೆಯನ್ನು ದೃಢವಾಗಿ ವಿರೋಧಿಸಿತ್ತು ಹಾಗೂ ಅಸ್ಪೃಶ್ಯರನ್ನು ತನ್ನ ತೆಕ್ಕೆಗೆ ಸ್ವೀಕರಿಸಿತ್ತು. ಈ ತಾತ್ವಿಕ ಹಾಗೂ ಧಾರ್ಮಿಕ ಬುನಾದಿ ಅಂಬೇಡ್ಕರ್ ವೈದಿಕ ವಿಕಾರಗಳ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಪೂರಕವಾಗಿತ್ತು.

ಅಂಬೇಡ್ಕರ್‌ ಚಿಂತನೆ ಹಾಗೂ ಅವರ ಬೌದ್ಧ ವ್ಯಾಖ್ಯಾನಗಳೆರಡೂ ಇಂದಿನ ಭಾರತೀಯ ಚಿಂತನೆಯ ಬಹುಮುಖ್ಯ ಧಾರೆಯನ್ನು ರೂಪಿಸತೊಡಗಿವೆ.  ಭಾರತದ ದಲಿತ ಚಳುವಳಿಯಲ್ಲಿ ಅಂಬೇಡ್ಕರ್‌ವಾದ ಹಾಗೂ ಬೌದ್ಧ ಧಮ್ಮಗಳು ಪರಸ್ಪರ ಬೆರೆತುಹೋಗಿವೆ. ದಲಿತರು ತಮ್ಮ ಮೇಲೆ ಹೇರಲಾದ ಕೀಳರಿಮೆಯನ್ನು ಬೌದ್ಧ ಧಮ್ಮದ ಮೂಲಕ ಮೀರಲೆತ್ನಿಸಿದ್ದಾರೆ. ಅಸ್ಪೃಶ್ಯತೆಯ ಅವಮಾನದಿಂದ ಕುಗ್ಗಿಹೋದ ದಲಿತರ ದೇಹ ಹಾಗೂ ಚೈತನ್ಯಗಳನ್ನು ಬಿಡುಗಡೆಗೊಳಿಸದಿದ್ದರೆ ಆ ಮನಸ್ಸುಗಳಲ್ಲಿ ಯಾವ ಉತ್ಸಾಹವೂ ಹುಟ್ಟುವುದಿಲ್ಲ; ಮನಸ್ಸಿನಲ್ಲಿ ಉತ್ಸಾಹ ಉಕ್ಕದೆ ಪ್ರಗತಿಯಿಲ್ಲ ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗ್ರಹಿಸಿದ್ದರು. ಮಹಾರಾಷ್ಟ್ರದಲ್ಲಿ ಸ್ವಾತಂತ್ರೋತ್ತರ ದಲಿತ ತಲೆಮಾರುಗಳ ಮೇಲೆ ಬುದ್ಧ ತತ್ವಗಳ ಪ್ರಭಾವವನ್ನು ಕುರಿತು ಅಧ್ಯಯನ ಮಾಡಿರುವ ಅರುಣ್‌ಸಾಧು ತಾವು ಕಂಡ ಬೌದ್ಧಬೆಳವಣಿಗೆಯನ್ನು ಹೀಗೆ ದಾಖಲಿಸುತ್ತಾರೆ:

‘ಬೌದ್ಧ ಧಮ್ಮದಿಂದಾಗಿ ದಲಿತರಲ್ಲಿ ಹೊಸ ಐಡೆಂಟಿಟಿ ಹಾಗೂ ಆತ್ಮವಿಶ್ವಾಸ ಕಾಣುತ್ತಿದೆ. ಬೌದ್ಧರಾಗಿರುವ ಯುವಕರು ಪೂರ್ವಜನ್ಮದ ಕರ್ಮದ ಸಿದ್ಧಾಂತವನ್ನಾಗಲೀ ಹಳೆಯ ಆಚರಣೆಗಳನ್ನಾಗಲೀ ನಂಬುವುದಿಲ್ಲ. ಮೇಲುಜಾತಿಯ ಹಿಂದೂ ತರುಣ ತರುಣಿಯರಿಗಿಂತ ಇವರಲ್ಲಿ ಹೆಚ್ಚಿನ ದೃಢತೆ, ವೈಜ್ಞಾನಿಕತೆ ಹಾಗೂ ಪ್ರಗತಿಪರತೆ ಕಂಡುಬರುತ್ತಿವೆ. ಅವರು ಕುರುಡು ನಂಬಿಕೆಗಳನ್ನು ಬಿಟ್ಟು ವೈಚಾರಿಕತೆಯ ಕಡೆಗೆ ನಡೆದಿರುವುದರಿಂದ, ಅವರಲ್ಲಿ ಶಿಕ್ಷಣದ ಹಸಿವು ಹಾಗೂ ಜ್ಞಾನದ ಹಸಿವು ಹೆಚ್ಚಿದೆ. ಅವರ ಆರ್ಥಿಕ ಪ್ರಗತಿಗೆ ಇದೂ ಕೂಡ ಮುಖ್ಯ ಕಾರಣವಾಗಿದೆ.’
ಅವತ್ತು ಅಂಬೇಡ್ಕರ್ ಆರಂಭಿಸಿದ ಚರಿತ್ರೆಯ ಚಕ್ರದ ಓಟದ ಫಲಗಳನ್ನು ಇವತ್ತು ಭಾರತದ ದಲಿತ, ಹಿಂದುಳಿದ ಜಾತಿಗಳ ಬಹುಜನರು ಹಾಗೂ ಮಹಿಳೆಯರು ಪಡೆಯಲಾರಂಭಿಸಿದ್ದಾರೆ. ಅಂಬೇಡ್ಕರ್ ವ್ಯಾಖ್ಯಾನಿಸಿ ರೂಪಿಸಿಕೊಟ್ಟ ಬೌದ್ಧಧಮ್ಮದಿಂದಲೂ ಆಧುನಿಕ ಭಾರತದ ಅಸಲಿ ಪುನರುಜ್ಜೀವನ ಶುರುವಾಯಿತು. ಈ ಪುನರುಜ್ಜೀವನದ ಅರ್ಥವನ್ನು ನಿತ್ಯ ಹಬ್ಬಿಸುವ ಕರ್ತವ್ಯ ಕೂಡ ನಮ್ಮೆದುರಿಗಿದೆ. 

ಹೀಗೆಂದುಕೊಳ್ಳುತ್ತಿರುವಾಗ… ಗ್ಯಾಂಗ್‌ಟಕ್‌ನಲ್ಲಿ ಹಿಂದೊಮ್ಮೆ ಕೊಂಡಿದ್ದ ಮಂಡಿಯ ಮೇಲೆ ಮುಖವಿಟ್ಟ ಪುಟ್ಟ ಬುದ್ಧ ವಿಗ್ರಹ ನೆನಪಾಗುತ್ತದೆ. ಕಾಯಿಲೆಗಳ ಭಾರಕ್ಕೆ ಸೋತು ಖಿನ್ನಳಾಗಿ ಮಂಡಿಯ ಮೇಲೆ ಮುಖವಿಟ್ಟು ಕೂತಿದ್ದ ವಿದ್ಯಾರ್ಥಿನಿಯೊಬ್ಬಳು ನೆನಪಾಗಿ, ಕೊಂಡ ಪ್ರತಿಮೆ ಅದು…ಆಕೆಯ ಮುಖ ಮಸುಕಾಗಿದೆ; ಆದರೆ ದುಃಖವನ್ನು, ದುಃಖಿಗಳನ್ನು ನೋಡುವ ರೀತಿ ಹೇಳಿಕೊಟ್ಟ ಬುದ್ಧನ ಅನಂತ ಕರುಣೆಯ ಪಾಠಗಳು ತೀರಾ ಮಸುಕಾಗಿಲ್ಲ. ಬುದ್ಧ ಪೂರ್ಣಿಮೆಯ ನೆಪದಲ್ಲಿ ಅಂಬೇಡ್ಕರ್ ಬುದ್ಧ ಮಾರ್ಗದಲ್ಲಿ ಹಬ್ಬಿಸಿದ ಹೊಸ ವೈಚಾರಿಕ ಬೆಳಕು ಮುಸುಕಿದೀ ಮಬ್ಬಿನಲಿ ನಮ್ಮ ಕೈ ಹಿಡಿದು ನಡೆಸುವಂತಾಗಲಿ! 

ಹ್ಯಾಪಿ ಬುದ್ಧ ಪೂರ್ಣಿಮಾ! ಈ ಅಂಕಣ ಬರೆಯುವ ಮೇ೧೧ನೆಯ ತಾರೀಕು ಮದರ್‍ಸ್ ಡೇ! ಬುದ್ಧನಂತೆ ನಮ್ಮನ್ನೆಲ್ಲ ಪೊರೆಯುವ ಎಲ್ಲ ಬಗೆಯ ತಾಯಂದಿರಿಗೂ ನಮ್ಮ ಕೃತಜ್ಞತೆಯಿರಲಿ.  ಒಂದು ಚಣ ನಮ್ಮ ಕಣ್ಣಲ್ಲಿ ಬುದ್ಧ ಪ್ರತಿಮೆ-ತಾಯಿ ಪ್ರತಿಮೆ ಬೆರೆಯತೊಡಗಿವೆ… ಎನ್ನಿಸಿದರೆ ಅದೇನೂ ಮಾಂತ್ರಿಕವಾಸ್ತವ ಅಲ್ಲ; ಅದು ನಾವು ಕಂಡುಂಡ ನಿತ್ಯದ ವಾಸ್ತವ ಕೂಡ! 
 

blog
04 May 2025 ರಿಸರ್ಚ್ ಜೀತ ಪದ್ಧತಿ!

ಪೂರ್ಣಚಂದ್ರ ತೇಜಸ್ವಿಯವರ ರಿಸರ್ಚ್ ಮನೋಭಾವ ಕುರಿತು ಮಾತಾಡುತ್ತಾ, ‘ಸಂಶೋಧನಾ ಜೀತ ಪದ್ಧತಿ ಎಂಬ ನುಡಿಗಟ್ಟು ಅದು ಹೇಗೋ ಯಾಕೋ ನನ್ನ ಬಾಯಿಂದ ಹೊರಬಿತ್ತು. ಈ ಮಾತು ಕೇಳಿ ಅಲ್ಲಿದ್ದ ಕೆಲವು ಸಂಶೋಧಕ, ಸಂಶೋಧಕಿಯರು ನಕ್ಕರು.  ಇದಾದದ್ದು ಮೊನ್ನೆ ‘ಪೂರ್ಣಚಂದ್ರ’ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ. ಗಾಂಧಿಯನ್ ಎಂ.ಸಿ. ನರೇಂದ್ರರ ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಗೊಟ್ಟಿಗೆರೆಯ ವಿಶಿಷ್ಟ ರಾಗಿ ಕಣವನ್ನೊಳಗೊಂಡ ತೋಟದಲ್ಲಿದೆ; ಇಲ್ಲಿನ ಸಹ್ಯಾದ್ರಿವನದ ‘ಸಂಧ್ಯಾಸ್ಮೃತಿ’ ಕ್ಯಾಂಪಸ್ಸಿನಲ್ಲಿ ಹುಲ್‌ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಟ್ರಸ್ಟ್ ಜೊತೆಗೂಡಿ ನರೇಂದ್ರ, ಗೆಳೆಯ ಶಿವಾರೆಡ್ಡಿ, ವಿದ್ಯಾರ್ಥಿ ಮಿತ್ರ ಕಿಶೋರ್ ಮುಂತಾದ ಹಲವರ ಶ್ರಮದಿಂದ ‘ಪೂರ್ಣಚಂದ್ರ’ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮೈದಾಳಿದೆ.

ಈ ಅಂಕಣ ಬರೆಯುವ ಶನಿವಾರ ಅವತ್ತಿನ ನಗುವಿನ ಗಳಿಗೆ ನೆನಪಾಯಿತು; ಆ ಸಂಶೋಧಕಿಯರು-ಸಂಶೋಧಕರು ಯಾಕೆ ನಕ್ಕಿರಬಹುದು? ಅವರ ನಗುವಿನ ಅರ್ಥ ಏನಿರಬಹುದು ಎಂದುಕೊಂಡೆ. ತಕ್ಷಣ, ದೇವನೂರ ಮಹಾದೇವರ ‘ಮಾರಿಕೊಂಡವರು’ ಕತೆಯ ಕೊನೆಯ ಎರಡು ಸಾಲುಗಳು ನೆನಪಾದವು:

ಯಾತಕ್ಕೊ ಕಿಟ್ಟಪ್ಪ ನಕ್ಕ 
ಬೀರನೂ ನಕ್ಕನು. 

ಕತೆಯ ಕೊನೆಗೆ ಬರುವ ಈ ಎರಡು ಚಿತ್ರಗಳ ಸಂದಿಗ್ಧಾರ್ಥವನ್ನು- ಅಂದರೆ ಬಹು ಅರ್ಥಗಳನ್ನು- ಕ್ಲಾಸುಗಳಲ್ಲಿ ಚರ್ಚಿಸಿದ್ದು ನೆನಪಾಯಿತು. ಆ ಬಗ್ಗೆ ಮುಂದೆಂದಾದರೂ ಬರೆಯಬಹುದು. ಆ ಜಾಡಿಗೆ ಹೋಗಿ ಅವತ್ತಿನ ಸಂಶೋಧಕಿಯರ, ಸಂಶೋಧಕರ ನಗುವಿನ ಹಿಂದಿನ ಮನಸ್ಥಿತಿಯನ್ನು ಅರ್ಥೈಸಬಹುದು ಎನ್ನಿಸಿ, ಅಲ್ಲಿದ್ದ ಕೆಲವರನ್ನು ಅನಂತರ ಕೇಳಿದೆ: 

‘ಸಂಶೋಧನಾ ಜೀತಪದ್ಧತಿ ಎಂಬ ಹೊಸ ನುಡಿಗಟ್ಟು ಹೇಗಿದೆ?!’ 

ಈ ನುಡಿಗಟ್ಟಿನಲ್ಲಿರುವ ಸತ್ಯದ ಬಗ್ಗೆ ಯಾರಿಗೂ ತಕರಾರಿದ್ದಂತಿರಲಿಲ್ಲ! ಸಂಶೋಧನೆಯ ಬಗೆಬಗೆಯ ಜೀತಗಳನ್ನು ಅವರೆಲ್ಲ ಕಂಡವರೇ. ಆ ಜೀತ ಫ್ಯೂಡಲ್ ಗೈಡುಗಳ ಜೀತದಿಂದ ಹಿಡಿದು, ಕೊನೆಗೆ ರಿಸರ್ಚರುಗಳು ಆರಿಸಿಕೊಂಡ ವಸ್ತುವಿನ ಹುಡುಕಾಟದಲ್ಲಿ ಆನಂದ ಸಿಗದೆ, ಆ ವಸ್ತು ಕುರಿತ ಜೀತ ಪದ್ಧತಿಯ ತನಕ ಮುಟ್ಟುತ್ತದೆ! ಈ ಬಗೆಯ ಜೀತ ಪದ್ಧತಿಯ ಮಾತಾಡಿದ ಐದಾರು ದಿನಗಳಾದ ಮೇಲೆ ‘ವರ್ಕರ್’ ಮತ್ತು ‘ವರ್ಕ್’ ಬಗ್ಗೆ ಕಾರ್ಲ್ ಮಾರ್ಕ್ಸ್ ಹೇಳಿದ ಮಾತೊಂದು ಕಣ್ಣಿಗೆ ಬಿತ್ತು:

‘ಕಾರ್ಮಿಕನಿಗೆ ‘ಕೆಲಸ’ ಎನ್ನುವುದು ಅವನ ವ್ಯಕ್ತಿತ್ವದಿಂದ ಹೊರಗಿರುವಂಥದು. ಅದು ಅವನ ಸಹಜ ಸ್ವಭಾವದ ಭಾಗವಲ್ಲ. ಅದರ ಪರಿಣಾಮವಾಗಿ ಅವನು ಮಾಡುವ ಕೆಲಸದಲ್ಲಿ ಅವನಿಗೆ ಸಾರ್ಥಕ್ಯ ಭಾವ ಹುಟ್ಟುವುದಿಲ್ಲ; ಬದಲಿಗೆ ನಿರಾಕರಣೆಯ ಭಾವವೇ ಹುಟ್ಟುತ್ತದೆ. ಆದ್ದರಿಂದ ಕಾರ್ಮಿಕನೊಬ್ಬ ಬಿಡುವಿನ ವೇಳೆಯಲ್ಲಿ ಹೆಚ್ಚು ನೆಮ್ಮದಿಯಲ್ಲಿರುತ್ತಾನೆ; ಆದರೆ ಕೆಲಸ ಮಾಡುವಾಗ ಅವನನ್ನು ಅನಾಥಭಾವ ಕಾಡುತ್ತದೆ.’ ಕಾರ್ಮಿಕರ ಮನೋಲೋಕ ಕುರಿತು ಕಾರ್ಲ್ ಮಾರ್ಕ್ಸ್ ಹೇಳಿದ ಮಾತು ಅವನ ಏಲಿಯನೇಶನ್ ಥಿಯರಿಯ ಭಾಗ ಕೂಡ. 

ಕಾರ್ಲ್ ಮಾರ್ಕ್ಸ್ ಕಾರ್ಮಿಕರ ಬಗ್ಗೆ ಹೇಳಿದ ಮಾತನ್ನು ಓದುತ್ತಾ, ನಮ್ಮ ಸಂಶೋಧಕ, ಸಂಶೋಧಕಿಯರು ಕೂಡ ಕಳೆದ ಕೆಲವು ದಶಕಗಳಲ್ಲಿ ‘ವರ್ಕರ್’ ರೀತಿಯಲ್ಲಿ ‘ರಿಸರ್ಚ್…ಅಬ್ಬಾ ಸದ್ಯ ಮುಗೀತು! ಕೊನೆಗೂ ಮುಗೀತು!’ ಈ ಥರದ ಉದ್ಗಾರಗಳನ್ನೇ ಹೊರಡಿಸಿರುವುದು ನೆನಪಾಯಿತು. ಡಿ. ಆರ್. ನಾಗರಾಜರಂಥ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನದಲ್ಲಿ ರಿಸರ್ಚ್ ಮಾಡುತ್ತಾ, ಕೊನೆಯ ಎರಡು ವರ್ಷ ಸತತವಾಗಿ ಬರೆದು, ಮತ್ತೆ ಮತ್ತೆ ಬರೆದು, ಕೆಲಸ ಮಾಡಿದ ನನಗೂ ‘ಸದ್ಯ ಮುಗೀತು’ ಎನ್ನಿಸಿದ್ದು ನಿಜ; ನಂತರ ಅದನ್ನು ಪುಸ್ತಕ ರೂಪದಲ್ಲಿ ಬರೆಯುವಾಗ ಇನ್ನಷ್ಟು ಕೆಲಸ ಮಾಡಬೇಕಾಗಿತ್ತು ಎಂದು ವಿಷಾದ ಹುಟ್ಟಿ, ಮತ್ತಷ್ಟು ಕೆಲಸ ಮಾಡಿದ್ದೂ ನಿಜ. ಆದರೂ ನನ್ನ ‘ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ಸಂಶೋಧನಾ ಕೃತಿಯ ಲೇಖಕನ ಮಾತುಗಳ ಕೊನೆಯ ಸಾಲಿನಲ್ಲಿರುವ ‘ಜ್ಞಾನೋದಯ’ ಇದು: 

‘ಈ ಸಂಶೋಧನಾಬರಹದ ಕೊನೆಗೆ ಹೇಳಬೇಕಾದ ಮುಖ್ಯವಾದ ಮಾತೊಂದಿದೆ: ಅದೇನೆಂದರೆ, ಈ ಅಧ್ಯಯನ ಈಗ ಆರಂಭವಾಗಿದೆ…’

ಗೋಪಾಲಕೃಷ್ಣ ಅಡಿಗರ ಪ್ರಾರ್ಥನೆ ಪದ್ಯದ ‘ಆದರು ಕಲಿತಿಲ್ಲವೆಂಬ ನೆನಪುಳಿಸು…’ ಎಂಬ ವಿವೇಕ ಕೂಡ ನನ್ನ ಪುಸ್ತಕದ ಕೊನೆಯ ಸಾಲನ್ನು ಪ್ರೇರೇಪಿಸಿರಬಹುದು! ಅದೆಲ್ಲ ಇರಲಿ, ತೇಜಸ್ವಿ ಯಾವ ಡಾಕ್ಟರೇಟಿನ ತಂಟೆಗೂ ಹೋಗದೆ, ಸರ್ಕಾರಿ ಕೆಲಸಕ್ಕೂ ಹೋಗದೆ, ಕತೆ, ಕಾದಂಬರಿ, ಫಿಲಾಸಫಿ, ಇನ್ನಿತರ ಪುಸ್ತಕಗಳನ್ನು ಬರೆಯಲು ತಮ್ಮ ಪಾಡಿಗೆ ತಾವು ರಿಸರ್ಚ್ ಮಾಡುತ್ತಾ, ಬರೆಯುತ್ತಾ ಹೋದ ಮಾದರಿ ಅವರೇ ಕಂಡುಕೊಂಡ ಶೋಧದ ಮಾದರಿಯಾಗಿತ್ತು. ಆದರೆ ತೇಜಸ್ವಿ ಅಸಾಮಾನ್ಯ ಕತೆಗಾರರಾದ್ದರಿಂದ ರಿಸರ್ಚ್ ಎಲ್ಲೂ ಹೊರೆಯಾಗದೆ ಅದನ್ನು ಕತೆಯಾಗಿಸುವ ಕಲೆ ಅವರಿಗೆ ಒಲಿದುಬಿಟ್ಟಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಒಬ್ಬ ರಿಸರ್ಚರ್ ಗೆ ಇರಬೇಕಾದ ’ನಿರ್ಭಯ’ ಅಕಡೆಮಿಕ್ ಗುಣ- ’ವೇರ್ ದ ಮೈಂಡ್ ಈಸ್ ವಿಥೌಟ್ ಫಿಯರ್’ ಮನಸ್ಥಿತಿ- ತೇಜಸ್ವಿಯವರ ಸ್ವತಂತ್ರ ವ್ಯಕ್ತಿತ್ವದಲ್ಲಿತ್ತು. ಯಾರ ನೇರ ಮಾರ್ಗದರ್ಶನವೂ ಇಲ್ಲದೆ, ತಾವು ಇಷ್ಟಪಟ್ಟು ಓದಿದ ಪುಸ್ತಕಗಳು; ತಾವು ಮುಕ್ತವಾಗಿ ನೋಡಲೆತ್ನಿಸುತ್ತಿದ್ದ ಜನಜೀವನ; ಲೋಹಿಯಾವಾದದ ಕಣ್ಣಿನ ಮೂಲಕ ಗ್ರಹಿಸಿದ ಚರಿತ್ರೆ ಹಾಗೂ ಸಮಕಾಲೀನ ಭಾರತ…ಇವೆಲ್ಲವನ್ನೂ ಅರಿತು ತೇಜಸ್ವಿ ಬರೆಯುತ್ತಾ ಹೋದರು. ತಮ್ಮ ಹುಡುಕಾಟದ ಭಾಗವಾಗಿಯೇ ಹಲವು ಶಿಸ್ತುಗಳ ಬೆನ್ನು ಹತ್ತಿದರು…ಅದು ಎಂದೂ ಅವರಿಗೆ ಜೀತವಾಗಲಿಲ್ಲ!

ಇಷ್ಟಾಗಿಯೂ. ಮಾನವಿಕ ವಿಜ್ಞಾನಗಳ ಅಥವಾ ಸಾಹಿತ್ಯ ಕ್ಷೇತ್ರಗಳ ಸಂಶೋಧಕ, ಸಂಶೋಧಕಿಯರಿಗೆ ತೇಜಸ್ವಿ ಮಾರ್ಗದ ಜೊತೆಗೇ ಹಲವು ಮಾರ್ಗಗಳಿವೆ. ಅವರ ಎದುರು ಡಿ. ಆರ್. ನಾಗರಾಜರಂತೆ ಪಠ್ಯದ ನಿಕಟ ಓದು ಮತ್ತು ಫಿಲಸಾಫಿಕಲ್, ಐಡಿಯಲಾಜಿಕಲ್, ಥಿಯರಿಟಿಕಲ್ ಗ್ರಹಿಕೆಗಳ ಮಾರ್ಗವಿದೆ; ಎಡ್ವರ್ಡ್ ಸೈದ್ ಅವರಂತೆ ಪಠ್ಯಗಳನ್ನು ಸೃಷ್ಟಿಸುವ ಕಾಲಘಟ್ಟಗಳು, ಆ ಕಾಲಘಟ್ಟಗಳ ತಾತ್ವಿಕತೆಗಳು ಇವೆಲ್ಲ ಸೇರಿ ಕೆಲ ಬಗೆಯ ಸತ್ಯಗಳನ್ನು ಬರೆಸುವ ರೀತಿಯನ್ನು ಅಧ್ಯಯನ ಮಾಡುವ ಮಾರ್ಗವಿದೆ; ನೋಮ್ ಚಾಮ್‌ಸ್ಕಿಯವರಂತೆ ಪ್ರತಿದಿನದ ರಾಜಕಾರಣದ ಹಿಂದೆ ಕೆಲಸ ಮಾಡುತ್ತಿರುವ ಜಾಗತಿಕ ಯಜಮಾನಿ ಶಕ್ತಿಗಳನ್ನು ಗ್ರಹಿಸುವ ತೀಕ್ಷ್ಣ ಮಾರ್ಗವಿದೆ. ಇವೆಲ್ಲಕ್ಕೆ ಮೂಲ ಸ್ಫೂರ್ತಿಯಂತೆ ೨೦೭ ವರ್ಷಗಳ ಕೆಳಗೆ ೧೮೧೮ರ ಮೇ ೫ ರಂದು ಹುಟ್ಟಿದ ಕಾರ್ಲ್ ಮಾರ್ಕ್ಸ್ ಅಪಾರ ಬಡತನವನ್ನು ಸಹಿಸಿಕೊಂಡು, ಚರಿತ್ರೆ, ಫಿಲಾಸಫಿ, ಅರ್ಥಶಾಸ್ತ್ರ, ಸಾಹಿತ್ಯ ಎಲ್ಲವನ್ನೂ ಆಳವಾಗಿ ಓದಿ, ವಿಶ್ವವಿಮೋಚನೆಗಾಗಿ ಮಾಡಿದ ಅನನ್ಯ ಸಂಶೋಧನೆಯ ಮಾರ್ಗವಿದೆ… ಇವು ತಕ್ಷಣಕ್ಕೆ ಹೊಳೆದ ಉದಾಹರಣೆಗಳಷ್ಟೆ…

ಇದೆಲ್ಲ ಆಗುವುದು ಎಲ್ಲ ಬಗೆಯ ಬೌದ್ಧಿಕ ಕೆಲಸವೂ ನಿಜಕ್ಕೂ ನಾವು ತೊಡಗುವ ಸೃಜನಶೀಲ ಆಟ ಹಾಗೂ ಮಹಾಜವಾಬ್ದಾರಿಯ ಕಾಯಕ ಎಂದು ನಮ್ಮ ಆಳದಲ್ಲಿ ಅನ್ನಿಸಿದಾಗ ಮಾತ್ರ. ಆಗ ಮಾತ್ರವೇ ಗಂಟೆಗಟ್ಟಲೆ ಅನ್ನ, ನೀರು, ಹೊರಗಿನ, ಒಳಗಿನ ಕಿರಿಕಿರಿ ಯಾವುದರ ನೆದರೂ ಇಲ್ಲದೆ ನಾವು ನಮ್ಮ ಲೋಕದಲ್ಲಿ ಮುಳುಗುವುದು. ಮಾನವಜೀವಿಯ ದುರದೃಷ್ಟ: ಅಂಥ ಸ್ಥಿತಿ ಸದಾ ದಕ್ಕುವುದಿಲ್ಲ. ಆದರೆ ಒಮ್ಮೆ ಈ ಜೀವನಮಾರ್ಗ ಅಥವಾ ಸ್ಥಿತಿ ರೂಢಿಯಾಯಿತೆಂದರೆ, ಯಾವುದೂ ನಮ್ಮನ್ನು ಈ ತಪಸ್ಸಿನಿಂದ ಕದಲಿಸಲಾಗದು. ಎಂಥ ನುರಿತ ಆಟಗಾರ್ತಿಯೂ ಕೂಡ ಕೆಲವು ದಿನ ಪ್ರಾಕ್ಟೀಸ್ ಬಿಟ್ಟರೆ ಅವಳ ಆಟ ತನ್ನ ಖದರ್ ಕಳೆದುಕೊಳ್ಳುತ್ತದೆ; ಹಾಗೇ ಸಂಶೋಧನೆ ಕೂಡ.

ತೇಜಸ್ವಿ ರಿಸರ್ಚನ್ನು ಎಂದೂ ತಮ್ಮ ಹೊರಗೆ ಇರುವ ಕೆಲಸ ಅಂದುಕೊಂಡಂತಿಲ್ಲ; ಹಾಗಾಗಿಯೇ ಅವರಿಗೆ ಅದು ಜೀವನವಿಧಾನ ಆದಂತಿದೆ; ಒಮ್ಮೆ ಅದೊಂದು ಜೀವನವಿಧಾನ ಆದ ನಂತರ, ಇಲ್ಲಿಂದ ಹೊರಬೀಳಬೇಕು, ಇಲ್ಲಿಂದ ಓಡಿಹೋಗಬೇಕು ಎಂಬ ತಹತಹವೇ ಹುಟ್ಟಲಾರದು. ಅದು ಕೂಡ ‘ವರ್ಕ್’. ಆಗ ಈ ’ವರ್ಕ್’ ಮಾರ್ಕ್ಸ್ ಹೇಳುತ್ತಿರುವ ‘ವರ್ಕರ್’ನ ಅನುಭವದಂತೆ ಅನಾಥ ಭಾವ ಹುಟ್ಟಿಸುವುದಿಲ್ಲ. ಮಾರ್ಕ್ಸ್ ಹೇಳುತ್ತಿರುವ ಬಂಡವಾಳಶಾಹಿ ಲೋಕದ ‘ವರ್ಕರ್’ನ ಅನುಭವವು ಸ್ವತಂತ್ರನಾದ, ತನ್ನ ಕೆಲಸವನ್ನು ಇಷ್ಟ ಪಡುವ ಬಡಗಿಗೆ, ಮೆಕ್ಯಾನಿಕ್ಕಿಗೆ ಪೂರಾ ಅನ್ವಯಿಸಲಾರದು. ವಿಮರ್ಶಕನೊಬ್ಬ 'ವರ್ಕ್ಸ್ ಆಫ್ ಶೇಕ್‌ಸ್ಪಿಯರ್’ ಎಂದರೆ ಕೇವಲ ‘ಶೇಕ್‌ಸ್ಪಿಯರ್ ಕೃತಿಗಳು’ ಎಂದು ಅರ್ಥವಲ್ಲ; ಬದಲಿಗೆ, ಶೇಕ್‌ಸ್ಪಿಯರನ 'ಕೆಲಸ’; ಅವನು ನಾಟಕವೊಂದರ ಮೇಲೆ ವರ್ಕ್ ಮಾಡುತ್ತಿದ್ದ ರೀತಿ; ಅವನು ಪಡುತ್ತಿದ್ದ ಶ್ರಮ… ಇವನ್ನೆಲ್ಲ ‘ವರ್ಕ್ಸ್’ ಸೂಚಿಸುತ್ತದೆ; ಇವೆಲ್ಲ ಕಾರಣಗಳಿಂದಾಗಿ ಇವು 'ವರ್ಕ್ಸ್ ಆಫ್ ಶೇಕ್‌ಸ್ಪಿಯರ್’ ಎಂದಿದ್ದ. ಈ ವಿವರಣೆಯ ಬಗ್ಗೆ ಮೊದಲು ನನ್ನ ಗಮನ ಸೆಳೆದವರು ಹಿರಿಯರಾದ ಕಿ.ರಂ. ನಾಗರಾಜ್. 

ಈ ಮಾತು ಬರೆಯುತ್ತಿರುವಾಗ ಕಿ.ರಂ. ಒಮ್ಮೆ ಕುಮಾರವ್ಯಾಸನ ಕೃಷ್ಣನ ಬಗ್ಗೆ ಪಾಠ ಮಾಡಲು ಮಾಡಿದ ರಿಸರ್ಚ್ ನೆನಪಾಯಿತು. ಅವರದೇ ಮಾತಿನಲ್ಲಿ ಕೇಳಿಸಿಕೊಳ್ಳಿ: ‘ಏನ್ಸಾರ್! ಆಗಿನ್ನೂ ಹೊಸದಾಗಿ ಎಂ.ಎ. ಕ್ಲಾಸಿಗೆ ಪಾಠ ಹೇಳ್ತಾ ಇದ್ದೆ… ಆ ಕ್ಲಾಸಲ್ಲಿ ಅಗ್ರಹಾರ ಕೃಷ್ಣಮೂರ್ತಿ…ಈ ಥರದ ಶಾರ್ಪ್ ಹುಡುಗರು…ನಾನು ಏನಾದ್ರೂ ಹೊಸದಾಗಿ ಹೇಳಬೇಕಲ್ಲ ಅಂತ ಯೋಚನೆ ಮಾಡ್ದೆ…ಇದ್ದಕ್ಕಿದ್ದಂತೆ ಲೋಹಿಯಾ ಸಾಹೇಬರ 'ರಾಮ ಕೃಷ್ಣ ಶಿವ’ ಲೇಖನ ತಗೊಂಡು ರಾತ್ರಿಯೆಲ್ಲ ಓದಿದೆ…ನಾಳೆ ಕ್ಲಾಸಲ್ಲಿ ಕೃಷ್ಣಾ ಕ್ಯಾರಕ್ಟರ್‍ ಬೇರೆ ಥರ ಎಮರ್ಜ್‌ ಆಯ್ತು…’

ಇದಾದ ಹಲ ವರ್ಷಗಳ ನಂತರ ಇದನ್ನೆಲ್ಲ ನೆನಸಿಕೊಂಡು ಹೇಳುತ್ತಿದ್ದ ಕಿ.ರಂ. ಮೋರೆಯಲ್ಲಿ ದಶಕಗಳ ಹಿಂದಿನ ‘ಪಾಠರತಿ’ಯ ರಂಗು ಹಾಗೇ ಏರಿದಂತಿತ್ತು! ಅದನ್ನು ಒಮ್ಮೆ ‘ಪಾಠರತಿ’ ಎಂದು ಕರೆದವರು ಲಕ್ಷ್ಮಿನಾರಾಯಣ ಭಟ್ಟರು! ತರುಣ ಕಿ.ರಂ. ಕುಮಾರವ್ಯಾಸ ಅಥವಾ ಲೋಹಿಯಾ ಲೇಖನವನ್ನು ಜೀತದಂತೆ ಓದಿರಲಿಲ್ಲ…ಆಟದಂತೆ ಓದಿದ್ದರು…ಆದ್ದರಿಂದಲೇ ಅವರ ಓದಿನ ಆಟ ಸದಾ ಸೃಜನಶೀಲವಾಗಿತ್ತು…ನಾವು ಮಾಡುವ ಕೆಲಸ ಹೀಗೆ ಆಟವಾಗುವ ಗಳಿಗೆಗಳು ಹೆಚ್ಚುತ್ತಿರಲಿ! 

ಇವೆಲ್ಲ ಬರೆಯುವಾಗ ಇದೇ ಐಡಿಯಾ ಕುರಿತ ಲಂಕೇಶರ ನೀಲು ಪದ್ಯ ತಲೆಯೊಳಗೆ- ಛೆ! ಛೆ! ನೀಲು ಪದ್ಯವಾದ್ದರಿಂದ ಮೈಯೊಳಗೆ- ಸುತ್ತುತ್ತಿತ್ತು. ಅದನ್ನು ಹುಡುಕಲು ನೂರಾರು ನೀಲು ಪದ್ಯಗಳನ್ನು ಹುಡುಕುತ್ತಾ, ಗಂಟೆಗಟ್ಟಲೆ ನೀಲು ಮಿಂಚುಕಾವ್ಯಲೋಕದಲ್ಲಿ ಕಳೆದು ಹೋದೆ. ಲಂಕೇಶ್ ತಮ್ಮ ಪ್ರತಿ ಬರವಣಿಗೆಯಲ್ಲೂ ಈ ಆಟದ ಆನಂದ ಅನುಭವಿಸಿರುವುದು ನನ್ನ ಅನುಭವಕ್ಕೂ ಬರತೊಡಗಿತು. ಆದರೆ ಆ ನೀಲು ಮಿಂಚುಕಾವ್ಯ ಮಾತ್ರ ಸಿಕ್ಕಲಿಲ್ಲ. ಅದು ಕೊನೆಗೆ ಗೆಳೆಯ ಐಜೂರ್ ಬಾಯಲ್ಲೇ ಇತ್ತು: 

ನನ್ನ ಕೆಲಸ ನನಗೆ 
ನನ್ನಹೃದಯದ ಪ್ರೀತಿಯಂತೆ
ಹರ್ಷ ಕೊಡದಿದ್ದರೆ 
ಅದು ಜೀತ.
                -ನೀಲು



Latest Video


Nataraj Huliyar Official
YouTube Channel

SUBSCRIBE