Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
12 Jan 2025 ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ?

ಅಮೆರಿಕನ್ ಲೇಖಕಿ ಪರ್ಲ್ ಎಸ್. ಬಕ್ ಇಂಡಿಯಾದ ಸಮಾಜವಾದಿ ಚಿಂತಕ-ರಾಜಕಾರಣಿ ರಾಮಮನೋಹರ ಲೋಹಿಯಾರನ್ನು ತಮ್ಮ ಮನೆಗೆ ಊಟಕ್ಕೆ ಕರೆದರು. ತಮ್ಮ ಮೂವತ್ತೆಂಟನೆಯ ವಯಸ್ಸಿನಲ್ಲಿ ಆಕೆ ಬರೆದ 'ದ ಗುಡ್ ಅರ್ತ್’ ಕಾದಂಬರಿ ಜಗತ್ತಿನಾದ್ಯಂತ ಹೆಸರು ಪಡೆದಿತ್ತು. ೧೯೩೨ ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದ ಪರ್ಲ್ ಎಸ್. ಬಕ್, ೧೯೩೮ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಲೇಖಕಿ. ೧೯೫೨ರಲ್ಲಿ ಅಮೆರಿಕಾ ಪ್ರವಾಸದಲ್ಲಿದ್ದ ಲೋಹಿಯಾ ಜೊತೆಗಿನ ಮಾತುಕತೆಯ ನಡುವೆ ಪರ್ಲ್ ಎಸ್. ಬಕ್ ಲೋಹಿಯಾರನ್ನು ಒಂದು ಪ್ರಶ್ನೆ ಕೇಳಿದರು: 

‘Does self ever meet self in your country?'  

ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಈ ಪ್ರಶ್ನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ  ಲೋಹಿಯಾಗೆ ಎದುರಾಯಿತು. ''ನಮ್ಮ 'ಇಗೋ’ ಲೋಕದ ಸಕಲ ಸೆಲ್ಫ್‌ಗಳನ್ನು (ಯೂನಿವರ್ಸಲ್ ಸೆಲ್ಫ್) ಸಂಧಿಸುವುದರ ಬಗ್ಗೆ ಈಕೆ ಕೇಳುತ್ತಿದ್ದಂತಿಲ್ಲ. ಪ್ರಾಯಶಃ ಇಬ್ಬರು ವ್ಯಕ್ತಿಗಳ ನಡುವಣ ಆಳವಾದ ಸಂವಹನವನ್ನು; ಎಲ್ಲ ಜಡ, ಕೃತಕ ಹೊದಿಕೆಗಳನ್ನು ತೊಡೆದು ಹಾಕಿ ಶುಭ್ರವಾದ ಎರಡು ಸೆಲ್ಫ್‌ಗಳು ಸಂಧಿಸುವುದನ್ನು ಕುರಿತು ಆಕೆ ಕೇಳುತ್ತಿರಬಹುದು...’’ ಎಂದು ಲೋಹಿಯಾ ಊಹಿಸಿಕೊಳ್ಳಲೆತ್ನಿಸಿದರು.

ಪರ್ಲ್ ಎಸ್. ಬಕ್ ಪ್ರಶ್ನೆಯನ್ನು ಓದಿದಾಗಿನಿಂದಲೂ ಅಲ್ಲಿರುವ ‘ಸೆಲ್ಫ್’ ಎಂಬ ಪದವನ್ನು ಕನ್ನಡಿಸುವುದು ಎಷ್ಟು ಕಷ್ಟ ಎನ್ನಿಸುತ್ತಲೇ ಇದೆ. 'ಸೆಲ್ಫ್ ಕ್ರಿಟಿಸಿಸಂ’ ಎಂಬುದನ್ನು ‘ಸ್ವ-ವಿಮರ್ಶೆ’ ಎನ್ನುವಂತೆ, ‘ಸೆಲ್ಫ್’ ಎಂಬುದನ್ನು 'ಸ್ವ' ಎಂದು ಅನುವಾದಿಸಿದರೆ, ಪರ್ಲ್ ಎಸ್. ಬಕ್ ಪ್ರಶ್ನೆಯ ಆಳ ಅರ್ಥವಾಗುವುದಿಲ್ಲ. ಈ ಪ್ರಶ್ನೆಯನ್ನು ಕೆದಕುತ್ತಾ ಹೋದಂತೆಲ್ಲ ಈ ಪದ ಎಷ್ಟು ಸಂಕೀರ್ಣ ಎನ್ನಿಸತೊಡಗುತ್ತದೆ. ಸದ್ಯಕ್ಕೆ, ಈ ಪ್ರಶ್ನೆಯನ್ನು 'ಇಂಡಿಯಾದಲ್ಲಿ ಒಬ್ಬ ವ್ಯಕ್ತಿಯ ಆಳದ ಒಳಗು ಮತ್ತೊಬ್ಬನ ಅಥವಾ ಮತ್ತೊಬ್ಬಳ ಆಳದ ಒಳಗನ್ನು ಎಂದಾದರೂ ಸಂಧಿಸುತ್ತದೆಯೆ?’  ಎಂದು ಸರಳವಾಗಿ ವಿವರಿಸಿಕೊಳ್ಳಲೆತ್ನಿಸಿದೆ. 

ಮೊನ್ನೆ ಈ ಪ್ರಶ್ನೆಯನ್ನು ಗಂಭೀರ ಮನಸ್ಸಿನ ಗೆಳೆಯರಿಗೆ ಕೇಳಿದ ತಕ್ಷಣ, 'ಇಲ್ಲ! ಈ ಕಾಲದಲ್ಲಂತೂ ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದನ್ನು ಸಂಧಿಸುವ ಗಳಿಗೆಗಳು ಇಲ್ಲವೇ ಇಲ್ಲ’ ಎಂದರು. ನಿಜಕ್ಕೂ ಅವರಿಗೆ ತಮ್ಮಾಳದಲ್ಲಿ ಹಾಗನ್ನಿಸಿದಂತಿತ್ತು. ಪರ್ಲ್ ಎಸ್. ಬಕ್ ಪ್ರಶ್ನೆ ಸೂಚಿಸುತ್ತಿರುವ ಎರಡು ಸೆಲ್ಫ್‌ಗಳ ಭೇಟಿ ನಿತ್ಯದ ಸಂಬಂಧಗಳಲ್ಲಂತೂ ಸಾಧ್ಯವೇ ಇಲ್ಲದ ಸ್ಥಿತಿ ಇವತ್ತು ಇದೆ ಎಂದು ಅವರಿಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅಚ್ಚರಿಯಲ್ಲ. ಆದರೆ ಒಬ್ಬರ ಒಳಗು ಇನ್ನೊಬ್ಬರಿಗೆ ತಲಪದ ಸ್ಥಿತಿ ಸಾವಿಗೆ ಹತ್ತಿರವಿರಬಲ್ಲದು ಎಂಬುದು ಹೊಳೆದಾಗ ದಿಗ್ಭ್ರಮೆಯಾಗುತ್ತದೆ. 

ಇನ್ನೊಬ್ಬರ ಸೆಲ್ಫನ್ನು ಸಂಧಿಸುವ ಮಾತು ಹಾಗಿರಲಿ; ಬಹುತೇಕ ಸಲ ‘ನಮ್ಮ ಸೆಲ್ಫನ್ನು ನಾವು ಸಂಧಿಸುವ ಗಳಿಗೆಗಳಾದರೂ ಇವೆಯೆ?’ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ! ಕೆಲವರು ತಮ್ಮ ಆತ್ಮಚರಿತ್ರೆಯಲ್ಲಿ ಕೂಡ ತಮ್ಮ ಸೆಲ್ಫನ್ನು ಸಂಧಿಸಿದಂತೆ ಕಾಣುವುದಿಲ್ಲ. ಇನ್ನು ಕತೆ, ಕವಿತೆ, ಪ್ರಬಂಧ, ಭಾಷಣಗಳಲ್ಲಿ ತಮ್ಮ ಸೆಲ್ಫನ್ನು ಸಂಧಿಸಿದ್ದಾರೆಯೆ ಎಂಬ ಮಾತನ್ನಂತೂ ಕೇಳುವಂತೆಯೇ ಇಲ್ಲ!

ಸೆಲ್ಫ್ ಸುತ್ತಣ ಪ್ರಶ್ನೆಗಳು ಇಷ್ಟು ಸೂಕ್ಷ್ಮವಾಗಿರುವುದರಿಂದಲೇ ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಸಾಮಾನ್ಯ ಮಾತುಕತೆಯಲ್ಲಿ ಕೂಡ ಲೋಹಿಯಾ ತಮ್ಮ ಸೆಲ್ಫ್ ನಿಂದ ಹುಟ್ಟದಿರುವ ಉತ್ತರ ಕೊಡುವವರಾಗಿರಲಿಲ್ಲ. ಪ್ರತಿ ಪ್ರಶ್ನೆಗೂ 'ಯೆಸ್’ ಅಥವಾ 'ನೋ’ ಎಂಬ ಉತ್ತರ ಇರುವುದಿಲ್ಲವಲ್ಲ! ಪರ್ಲ್ ಎಸ್. ಬಕ್ ಕೇಳಿದ ಅತಿ ಸೂಕ್ಷ್ಮ ಪ್ರಶ್ನೆಗೆ ವರ್ಷಗಟ್ಟಲೆ ಯೋಚಿಸಿದರೂ ಸ್ಪಷ್ಟ ಉತ್ತರ ಹೊಳೆಯುವುದು ಕಷ್ಟ. ಅದರಲ್ಲೂ ಇಂಡಿಯಾದಲ್ಲಿ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಯಾವಾಗಲಾದರೂ ಸಂಧಿಸುತ್ತದೆಯೇ ಎಂಬ ಪ್ರಶ್ನೆಗಂತೂ ಉತ್ತರ ಹುಡುಕುವುದು ಇನ್ನಷ್ಟು ಕಷ್ಟ. ಇಂಡಿಯಾದಲ್ಲಿ ಎದ್ದು ಕಾಣುವ 'ಬೂಟಾಟಿಕೆ ಹಾಗೂ ಎರಡು ನಾಲಗೆ’ಗಳನ್ನು ಕುರಿತು ಮುಂದೆ ೧೯೫೬ರಲ್ಲಿ ಲೇಖನ ಬರೆದ ಲೋಹಿಯಾಗೆ ಆ ಕಾಲಕ್ಕಾಗಲೇ ಈ ದೇಶದಲ್ಲಿ ಒಂದು ಸೆಲ್ಫ್‌ ಮತ್ತೊಂದು ಸೆಲ್ಫ್ ನಡುವಣ ಭೇಟಿ ಅಸಾಧ್ಯವಾಗತೊಡಗಿದೆ ಎನ್ನಿಸಿತ್ತೇನೋ.

ಲೋಹಿಯಾ ಆ ಹೊತ್ತಿಗೆ ಇಂಡಿಯಾದ ಅತ್ಯಂತ ಸೂಕ್ಷ್ಮ ಚಿಂತಕ-ರಾಜಕಾರಣಿಯಾಗಿ ರೂಪುಗೊಳ್ಳತೊಡಗಿದ್ದವರು. ತಮ್ಮೊಳಗೆ, ತಮ್ಮ ಆಳದಲ್ಲಿ, ತುಡಿಯುತ್ತಿದ್ದುದನ್ನು ಆಪ್ತರ ಜೊತೆಗೆ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಜೊತೆಗೆ, ವಿರೋಧಿಗಳ ಜೊತೆಗೆ ಹಂಚಿಕೊಳ್ಳಬಲ್ಲವರಾಗಿದ್ದರು. ಸ್ವಪರೀಕ್ಷೆಯ ಆತ್ಮಚರಿತ್ರೆಯನ್ನೇ ಬರೆದಿದ್ದ ಗಾಂಧೀಜಿಯ ಒಡನಾಟವಿದ್ದವರು. ಲೋಹಿಯಾ ತಮ್ಮ  ಸಾರ್ವಜನಿಕ ಭಾಷಣಗಳಲ್ಲೂ, ಎಲ್ಲ ಬಗೆಯ ಸಭೆಗಳಲ್ಲೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನೇ ಹೆಚ್ಚು ಮಾತಾಡಲೆತ್ನಿಸುತ್ತಿದ್ದರು. ಅಂದರೆ, ತಮ್ಮ ಸೆಲ್ಫನ್ನು ಇತರರಿಗೂ ತಲುಪಿಸಲೆತ್ನಿಸುತ್ತಾ, ತಾವೂ ಇತರರ ಸೆಲ್ಫನ್ನು ತಲುಪಲೆತ್ನಿಸುತ್ತಿದ್ದರು. ಲೋಕಸಭಾ ಸದಸ್ಯೆ-ಬುದ್ಧಿಜೀವಿ ತಾರಕೇಶ್ವರಿ ಸಿನ್ಹಾ ಇರಲಿ; ಸ್ತ್ರೀವಾದಿ ಚಿಂತಕಿ ಶಕುಂತಲಾ ಶ್ರೀವಾಸ್ತವ ಇರಲಿ; ದಿಲ್ಲಿಯ ಕಾಫೀ ಹೌಸಿನಲ್ಲಿ ಲೋಹಿಯಾ ಕೂತಿದ್ದ ಟೇಬಲ್ಲಿನ ಚರ್ಚೆಗೆ ಬಂದು ಸೇರಿಕೊಳ್ಳುತ್ತಿದ್ದ ವೇಟರುಗಳಿರಲಿ; ಲೋಹಿಯಾರ ಕ್ಷೌರಿಕನಿರಲಿ; ಐದು ವರ್ಷದ ಹುಡುಗಿ ನಂದನಾ ರೆಡ್ಡಿಯಿರಲಿ… ಲೋಹಿಯಾ ಈ ಯಾರ ಜೊತೆ ಮಾತಾಡಿದಾಗಲೂ ಅವರ ಸೆಲ್ಫನ್ನು ಸಹಜವಾಗಿಯೇ ಸಂಧಿಸಲೆತ್ನಿಸುತ್ತಿದ್ದರು ಎಂದು ನನಗನ್ನಿಸಿದೆ. 

ಇದು ಲೋಹಿಯಾರ ಸಾವಿರಾರು ಪುಟಗಳ ಬರಹಗಳನ್ನು ಓದಿದ ಹಿನ್ನೆಲೆಯಲ್ಲಿ ನನ್ನನ್ನು ತಟ್ಟಿರುವ ಸತ್ಯ. ಲೋಹಿಯಾರ ಸೆಲ್ಫ್ ಅವರ ಓದುಗನಾದ ನನ್ನ ಸೆಲ್ಫನ್ನು ಸಂಧಿಸಿದ ರೀತಿಯನ್ನೂ ಗಮನಿಸಿರುವ ಆಧಾರದ ಮೇಲೆ ಈ ಮಾತು ಹೇಳುತ್ತಿರುವೆ. ಲೋಹಿಯಾ ಕುರಿತು ಬರೆದಿರುವ ಸೂಕ್ಷ್ಮ ಮನಸ್ಸಿನ ಬಹುತೇಕರು ಲೋಹಿಯಾರ ಈ ಗುಣವನ್ನು ಮನಗಂಡಂತಿದೆ. ಅವರ ತೀಕ್ಷ್ಣ ವರ್ತನೆಯನ್ನು, ನಿಷ್ಠುರ ನಿಲುವುಗಳನ್ನು ಟೀಕಿಸುವವರಿದ್ದಾರೆ. ಆದರೆ ಲೋಹಿಯಾರ ಸೆಲ್ಫ್ ಉಳಿದವರ ಸೆಲ್ಫನ್ನು ಸಂಧಿಸಲೆತ್ನಿಸುತ್ತಿತ್ತು ಎಂಬುದನ್ನು ಬಿಡಿಸಿ ಹೇಳದಿದ್ದರೂ, ಈ ಬಗ್ಗೆ ಅವರನ್ನು ಬಲ್ಲವರಿಗೆ ಅನುಮಾನವಿದ್ದಂತಿರಲಿಲ್ಲ.

೧೯೫೨ರಲ್ಲಿ ಅಮೆರಿಕದಲ್ಲಿ ಲೋಹಿಯಾಗೆ ಹೊಳೆಯದ ಉತ್ತರ ಬರಬರುತ್ತಾ ಅವರ ಅನುಭವಕ್ಕೆ ಹೊಳೆದಿರಬಹುದು ಎನ್ನಿಸುತ್ತದೆ. ರಮಾ ಮಿತ್ರರ ಸಖ್ಯದಲ್ಲಿ ಲೋಹಿಯಾಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು ಎಂದು 'ಸುಧಾ’ ವಾರಪತ್ರಿಕೆಯಲ್ಲಿ 'ಡಾಕ್ಟರ್ ಸಾಹೇಬ್’ ಧಾರಾವಾಹಿ ಬರೆಯುತ್ತಿದ್ದಾಗ ಊಹಿಸಿದೆ. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಭೂಗತ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಲೋಹಿಯಾ ೧೯೪೩-೪೪ರ ನಡುವೆ ಲಾಹೋರ್ ಜೈಲಿನಲ್ಲಿ ಭೀಕರ ಹಿಂಸೆಯ ಸೆರೆಮನೆವಾಸ ಮುಗಿಸಿ ಕಲ್ಕತ್ತಾಕ್ಕೆ ಬಂದರು. ಆಗ ಹಿಸ್ಟರಿ ಲೆಕ್ಚರರ್ ರಮಾ ಮಿತ್ರ ಲೋಹಿಯಾರನ್ನು ಮೊದಲ ಬಾರಿಗೆ ಭೇಟಿಯಾದರು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಕೆಲವು ಭೂಗತ ಚಳುವಳಿಗಾರರು ಆಗ ಲೇಡೀಸ್ ಹಾಸ್ಟೆಲ್ಲಿನಲ್ಲಿದ್ದ ರಮಾ ಮಿತ್ರರ ಕೊಠಡಿಯನ್ನು ಸ್ಫೋಟಕ ಅಸ್ತ್ರಗಳನ್ನು ಬಚ್ಚಿಡಲು ಕೂಡ ಬಳಸಿಕೊಂಡಿದ್ದರು. 

ರಮಾ-ರಾಮಮನೋಹರರ ಸಖ್ಯ ಗಾಢವಾಯಿತು. ೧೯೫೬ರಿಂದೀಚೆಗೆ ರಮಾಗೆ ಲೋಹಿಯಾ ಬರೆದ ಪತ್ರಗಳನ್ನು ಓದುತ್ತಿದ್ದರೆ, ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ನಿರಂತರವಾಗಿ ಸಂಧಿಸಿದ ಅಪೂರ್ವ ಗಳಿಗೆಗಳು ಕಾಣುತ್ತವೆ. ಈ ಪತ್ರಗಳಿಗೆ ರಮಾ ಮಿತ್ರ ಬರೆದ ಉತ್ತರಗಳಲ್ಲೂ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸಿದ್ದ ಸೂಚನೆಗಳು ಲೋಹಿಯಾರ ಮಾರೋಲೆಗಳಲ್ಲಿವೆ. ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವುದೆಂದರೆ ಅಲ್ಲಿ ಎಲ್ಲ ಭಾವಗಳೂ ಪರಸ್ಪರ ಮುಕ್ತವಾಗಿ ಹರಿದು ತಲುಪುವಂತಿರಬೇಕೇನೋ! ಎರಡು ಸೆಲ್ಫ್‌ಗಳ ಈ ಅಪೂರ್ವ ಭೇಟಿಯ ವಿವರಗಳನ್ನು ಅರಿಯಬಯಸುವವರ ದುರದೃಷ್ಟವೆಂದರೆ, ರಮಾ ಲೋಹಿಯಾಗೆ ಬರೆದ ಪತ್ರಗಳು ಹೈದರಾಬಾದಿನಲ್ಲಿ ಅಚ್ಚಿಗೆ ಸಿದ್ಧವಾಗುವ ಕಾಲದಲ್ಲಿ ಕಳೆದುಹೋದವು.  

ಕಲೆ: ಮೋನಪ್ಪ

ಕಾಲದ ಒತ್ತಾಯದಿಂದಾಗಿ ಬಹುತೇಕ ಕಾಲ ಸಾರ್ವಜನಿಕ ವ್ಯಕ್ತಿಯಾಗಬೇಕಾಗಿ ಬಂದಿದ್ದ ಅಂಬೇಡ್ಕರ್ ಅವರು ಸವಿತಾಗೆ ಬರೆದ ಪತ್ರಗಳಲ್ಲಿ ಹೀಗೆ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳನ್ನು ಈಚೆಗೆ ನೋಡಿದೆ. ಆ ಬಗ್ಗೆ ಮುಂದೊಮ್ಮೆ ಚರ್ಚಿಸೋಣ. ಹೆಣ್ಣು-ಗಂಡಿನ ನಡುವೆ, ಗಂಡು-ಗಂಡಿನ ನಡುವೆ, ಹೆಣ್ಣು-ಹೆಣ್ಣಿನ ನಡುವೆ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳು ನಮ್ಮೊಳಗನ್ನು ಅಥವಾ ಸೆಲ್ಫನ್ನು ಸದಾ ಜೀವಂತವಾಗಿಟ್ಟಿರುತ್ತವೆಂದು ಕಾಣುತ್ತದೆ. ಹಟಾತ್ತನೆ ಎದ್ದು ನಿಲ್ಲುವ ಅಗೋಚರ ಗೋಡೆಗಳ ಈ ಕಾಲದಲ್ಲೂ ಇಂಥದೊಂದು ನಂಬಿಕೆ ಈ ಕಾಲದಲ್ಲೂ ಸಿನಿಕರಾಗದಂತೆ ನಮ್ಮನ್ನು ಪೊರೆಯಬಲ್ಲದೆ?
   

blog
05 Jan 2025 ಬರೆವವರ ಇರುಳು, ನಸುಕು!

ಟಾಲ್‌ಸ್ಟಾಯ್‌ಗೆ ಬರೆಯಲು ನಸುಕಿನ ಸಮಯ ಪ್ರಶಾಂತ ಮತ್ತು ಚಂದ ಅನ್ನಿಸಿತ್ತು; ದಾಸ್ತೋವಸ್ಕಿಗೆ ರಾತ್ರಿ ಬರೆಯುವುದು ಹೆಚ್ಚು ಒಗ್ಗುತ್ತಿತ್ತು! ಈ ಇಬ್ಬರು ಮಹಾನ್ ರಶ್ಯನ್ ಲೇಖಕರ ಬರವಣಿಗೆಯ ಕಾಲದ ಆಯ್ಕೆ ಕುರಿತ ಒಂದು ಅಚ್ಚರಿಯ ಪ್ರಶ್ನೆ ನನ್ನೊಳಗೆ ಹಾಗೇ ಉಳಿದಿದೆ: 'ಟಾಲ್‌ಸ್ಟಾಯ್‌ ಹಾಗೂ ದಾಸ್ತೋವಸ್ಕಿ ಬರೆಯುವ ಹೊತ್ತನ್ನು ಆರಿಸಿಕೊಂಡಿರುವುದಕ್ಕೂ, ಅವರ ಬರವಣಿಗೆಯಲ್ಲಿ ಹಬ್ಬಿಕೊಳ್ಳುವ ಲೋಕಕ್ಕೂ ಸಂಬಂಧವಿರಬಹುದೇ?' 

ಈ ಅಚ್ಚರಿ ಇವರಿಬ್ಬರ ಬರವಣಿಗೆಯ ಬಗ್ಗೆ ಅರೆಸಂಶೋಧಕರಂತೆ ಹುಸಿ ಥಿಯರೈಸ್‌ ಮಾಡುವ ಪ್ರಚೋದನೆಗೂ ನನ್ನನ್ನು ದೂಡಲೆತ್ನಿಸಿದೆ! ಪೂರ್ಣಾವಧಿ ಲೇಖಕರಾದ ಈ ಇಬ್ಬರೂ ಬರೆಯಲು ಆರಿಸಿಕೊಂಡ ಕಾಲ ಅವರ ಬರವಣಿಗೆಯ ರೀತಿಯನ್ನೂ ರೂಪಿಸಿರಬಹುದೆ? ಟಾಲ್‌ಸ್ಟಾಯ್ ಬರವಣಿಗೆಯ ಸ್ಪಷ್ಟತೆಗೂ, ದಾಸ್ತೋವಸ್ಕಿ ಗಂಡು, ಹೆಣ್ಣುಗಳ ಕತ್ತಲಲೋಕವನ್ನು ಅಗೆಯುವುದಕ್ಕೂ ಅವರ ಬರವಣಿಗೆಯ ಕಾಲವೂ ಕಾರಣವಿರಬಹುದೆ? ಇಂಥ ಆಧಾರವಿಲ್ಲದ ಊಹೆಗಳೂ ನನ್ನನ್ನು ಕೆಣಕಿದ್ದಿದೆ! 

ಮೊನ್ನೆ ಈ ಲೇಖಕರ ಇರುಳು, ನಸುಕು ವಿಭಿನ್ನ ಸಂಕೇತ, ರೂಪಕಗಳಂತೆ ಕಾಡತೊಡಗಿ, ಕಾರ್ಲ್ ಯೂಂಗ್ ಮತ್ತಿತರ ಮನೋವಿಜ್ಞಾನಿಗಳು ರಾತ್ರಿ-ಹಗಲುಗಳ ಬಗ್ಗೆ ಹೇಳಿದ್ದ ಮಾತುಗಳೂ ಅದರೊಳಗೆ ಸೇರಿಕೊಳ್ಳತೊಡಗಿದವು. ಆಗಾಗ್ಗೆ ನಾನು ಓದಿದ ಕೆಲವು ಮನೋವಿಜ್ಞಾನಿಗಳ ಗ್ರಹಿಕೆಗಳ ಸಾರ ಹೀಗಿದೆ: ಹಗಲು ಎನ್ನುವುದು ಸ್ಪಷ್ಟ; ರಾತ್ರಿ ಎನ್ನುವುದು ಅಸ್ಪಷ್ಟ. ಅದಕ್ಕೇ ಹಗಲಿನಲ್ಲಿ ಆರಾಮಾಗಿ ಹೋಗುವ ಜಾಗಗಳಿಗೆ ರಾತ್ರಿಯ ಹೊತ್ತು ಹೋಗುವಾಗ ನಮಗೆ ದಿಗಿಲಾಗುತ್ತದೆ. ನಾವು ರಾತ್ರಿಯ ಭಯವನ್ನು ಗೆಲ್ಲಲು ವಿಶಲ್ ಹಾಕುತ್ತಾ ಮುಂದೆ ಸಾಗುತ್ತೇವೆ. ಆದರೆ ಕತ್ತಲಲ್ಲಿ ಶಿಳ್ಳೆ ಹಾಕುವುದರಿಂದ ಯಾವ ಬೆಳಕೂ ಬರುವುದಿಲ್ಲ… ದೊಡ್ಡ ಲೇಖಕ, ಲೇಖಕಿಯರು ಹೆದರದೆ ಬದುಕಿನ ರಾತ್ರಿಯ ಮುಖವನ್ನು ಮುಖಾಮುಖಿಯಾಗಿ ಬರೆಯುತ್ತಾರೆ…ಅವರು ಬದುಕಿನ, ಸಮುದಾಯದ ಅಧೋಲೋಕವನ್ನು, ಅಂದರೆ ಆಳದ ಕತ್ತಲಲೋಕವನ್ನು ಎದುರಾಗುತ್ತಿರುತ್ತಾರೆ…  

ಮನೋವಿಜ್ಞಾನಿಗಳು ಇದನ್ನೆಲ್ಲ ಥಿಯರಿಟಿಕಲ್ ಆಗಿ ಹೇಳುವ ಮೊದಲೇ ಟಾಲ್‌ಸ್ಟಾಯ್, ದಾಸ್ತೋವಸ್ಕಿ ಇಬ್ಬರೂ ಈ ಅಧೋಲೋಕವನ್ನು ಹೊಗಲೆತ್ನಿಸಿದ್ದರು. ಈ ವಿಷಯದಲ್ಲಿ ದಾಸ್ತೋವಸ್ಕಿ ಟಾಲ್‌ಸ್ಟಾಯ್‌ಗಿಂತ ಮುಂದಿದ್ದಂತೆ ಕಾಣುತ್ತದೆ. ಟಾಲ್‌ಸ್ಟಾಯ್‌ನ 'ವಾರ್ ಅಂಡ್ ಪೀಸ್’, ದಾಸ್ತೋವಸ್ಕಿಯ 'ಕ್ರೈಂ ಅಂಡ್ ಪನಿಶ್‌ಮೆಂಟ್’ ಕೃತಿಗಳನ್ನು ಕನ್ನಡಿಸಿರುವ ಓ.ಎಲ್. ನಾಗಭೂಷಣಸ್ವಾಮಿ ಈ ಇಬ್ಬರೂ ಲೇಖಕರು ಕಂಡಿರುವ ಅಧೋಲೋಕಗಳಲ್ಲಿರುವ ವ್ಯತ್ಯಾಸಗಳನ್ನು ಚೆನ್ನಾಗಿ ವಿವರಿಸಬಹುದೇನೋ. 'ಅನ್ನಾಕರೆನಿನಾ’ ಕಾದಂಬರಿಯನ್ನು ಕನ್ನಡಿಸಿರುವ ತೇಜಶ್ರೀ ಅಥವಾ ದಾಸ್ತೋವಸ್ಕಿಯ 'ನೋಟ್ಸ್ ಫ್ರಂ ಅಂಡರ್ ಗ್ರೌಂಡ್’ ಕಾದಂಬರಿಯನ್ನು 'ಅಧೋಲೋಕದ ಟಿಪ್ಪಣಿಗಳು’ ಎಂದು ಕನ್ನಡಿಸಿರುವ ಗೌತಮ್ ಜ್ಯೋತ್ಸ್ನಾ ಕೂಡ ಈ ಅಂಶ ಕುರಿತು ನಿಖರವಾಗಿ ಹೇಳಬಲ್ಲರೇನೋ. ಅನುವಾದಕರು ಮೂಲಪಠ್ಯವನ್ನು ಅತ್ಯಂತ ನಿಕಟವಾಗಿ ಓದುವುದರಿಂದ, ಇದು ಅವರ ಗ್ರಹಿಕೆಗೆ ಹೆಚ್ಚು ಬಂದಿರಬಲ್ಲದು.  

ಅದೇನೇ ಇರಲಿ, ಟಾಲ್‌ಸ್ಟಾಯ್, ದಾಸ್ತೊವಸ್ಕಿ ಥರದವರಿಗೆ ಬರೆಯಲು ಇದ್ದಂಥ ಕಾಲದ ಆಯ್ಕೆ ಎಲ್ಲರಿಗೂ ಇರಲಾರದು. ಸ್ಕೂಲು, ಕಾಲೇಜು, ಮನೆಗಳಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ ಅಧ್ಯಾಪಕಿಗೆ, ಅಥವಾ ಪತ್ರಕರ್ತ, ಪತ್ರಕರ್ತೆಯರಿಗೆ ಬೈಗು, ಬೆಳಗುಗಳಿಗಾಗಿ ಕಾದು ಕೂತು, ಆಲೋಚನೆಗಳನ್ನೆಲ್ಲ ಒಗ್ಗೂಡಿಸಿಕೊಂಡು ಬರೆಯುವ ಲಕ್ಷುರಿ ಇರುವುದಿಲ್ಲ. ಅಂಥವರು ಸಿಕ್ಕ ಸಿಕ್ಕ ಬಿಡುವಿನಲ್ಲಿ ಗೀಚಿಕೊಳ್ಳುತ್ತಿರಬೇಕಾಗುತ್ತದೆ. ಸಣ್ಣಪುಟ್ಟ ಚೀಟಿಗಳಲ್ಲಿ, ನೋಟ್‌ಬುಕ್ಕುಗಳಲ್ಲಿ ಬರೆಯುತ್ತಿರಬೇಕಾಗುತ್ತದೆ. ಮೊಬೈಲ್‌ನಲ್ಲಿ ಟೈಪ್ ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಕಾದಂಬರಿ ಬರವಣಿಗೆಯಿಂದ ಹಿಡಿದು ನನ್ನ ಹತ್ತಾರು ಟಿಪ್ಪಣಿಗಳ ಬರವಣಿಗೆ ಇವತ್ತಿಗೂ ನನ್ನ ಕೀ ಪ್ಯಾಡ್ ಮೊಬೈಲ್‌ನಲ್ಲೂ ನಡೆಯುತ್ತಿರುತ್ತದೆ. 

ಬರೆವ ಸಮಯ ಯಾವುದಾದರೂ ಇರಲಿ, ಒಮ್ಮೆ ಬರವಣಿಗೆಯ ಮೈದುಂಬಿದ ಸ್ಥಿತಿ ಸೃಷ್ಟಿಯಾಯಿತೆಂದರೆ, ಲೋಕವೇ ತಲೆಕೆಳಕಾದರೂ ಗೊತ್ತಾಗದ ಪರವಶ ಸ್ಥಿತಿ ಸೃಷ್ಟಿಯಾಗಬಲ್ಲದು. ರಾಘವೇಂದ್ರಸ್ವಾಮಿಯ ಪಾತ್ರ ಮಾಡುತ್ತಿದ್ದ ನಟ ರಾಜ್‌ಕುಮಾರ್ ಅವರಿಗೆ ತಾವು ಕಣ್ಮುಚ್ಚಿ ಕೂತಿದ್ದೆಡೆಯಲ್ಲೇ ಬೆಂಕಿ ಬಿದ್ದಿದ್ದೇ ತಿಳಿಯದೆ ನಟನೆಯಲ್ಲಿ ತಲ್ಲೀನರಾಗಿದ್ದ ಘಟನೆ ನಿಮಗೆ ಗೊತ್ತಿರಬಹುದು. ಕೆಲ ವರ್ಷಗಳ ಕೆಳಗೆ ಬೆಂಗಳೂರಿನ ಚೌಡಯ್ಯ ಕಲಾಕ್ಷೇತ್ರದಲ್ಲಿ ಭೀಮಸೇನ್ ಜೋಶಿಯವರು ಬೆಳಗಿನ ರಾಗವೊಂದನ್ನು ಹಾಡುತ್ತಿದ್ದಾಗ ವೇದಿಕೆಯ ಮೇಲೆ ತೂಗಾಡುತ್ತಿದ್ದ ವೈರೊಂದು ಶಾರ್ಟ್ ಸರ್‍ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡಿತು. ಅವರ ಸಂಗೀತ ಕೇಳುತ್ತಿದ್ದ ನಾವೆಲ್ಲ ಹೌಹಾರಿದೆವು. ಭೀಮಸೇನ್ ಜೋಶಿ ಮಾತ್ರ ತಮ್ಮ ರಾಗದ ವಿಸ್ತಾರದ ನಡುವೆ ಚಣ ಕತ್ತೆತ್ತಿ ಮತ್ತೆ ರಾಗ ವಿಸ್ತರಿಸತೊಡಗಿದರು…

ಇಂಥ ಅನುಭವ ಬರೆಯುವವರಿಗೂ ಆಗುತ್ತಿರುತ್ತದೆ. ಮನೆಯ ಆಸುಪಾಸಿನಲ್ಲಿ ಬಿಲ್ಡಿಂಗ್ ಕಟ್ಟುವವರು, ಮೈಕ್ ಹಾಕಿಕೊಂಡು ಮಾರುವವವರು, ವಿವಿಧ ಸೇವಾಕಾಂಕ್ಷಿಗಳ ಗಲಾಟೆ… ಇವೆಲ್ಲದರಿಂದ ಎಲ್ಲರಂತೆ ನನಗೂ ರೇಗುತ್ತಿರುತ್ತದೆ. ಆದರೆ ಅದು ಹೇಗೋ ನನ್ನನ್ನು ಹೀರಿಕೊಳ್ಳುವ ಓದು; ತೀವ್ರವಾಗಿ ಒಳಗೆಳೆದುಕೊಳ್ಳುವ ಬರವಣಿಗೆ; ಅಥವಾ ತೊಡಗಿಕೊಳ್ಳುವ ಯಾವುದೇ ಶ್ರಮದ ಕೆಲಸ… ಇವೆಲ್ಲವೂ ನಿತ್ಯದ ಸದ್ದಿನ ಕಿರಿಕಿರಿಗಳಿಂದ ನನ್ನನ್ನು ಪಾರು ಮಾಡುತ್ತಿರುತ್ತವೆ. ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಆಗ ನಿಮ್ಮ ಹೊರಗೇನಾಗುತ್ತಿದೆ ಎಂಬುದೇ ಗೊತ್ತಾಗದಂತೆ ನಿಮ್ಮ ಕೆಲಸಗಳು ಕನಸಿನಲ್ಲಿ ನಡೆದಂತೆ ನಡೆಯುತ್ತಿರುತ್ತವೆ! ಇವತ್ತಿಗೂ ನನ್ನ ಬರವಣಿಗೆ ಅಥವಾ ಕ್ಲಾಸ್ ರೂಂ ಪಾಠಗಳು ಹೀಗೆ ಕನಸಿನಲ್ಲಿ ನಡೆದಂತೆ ನಡೆದರೆ ಮಾತ್ರ ನಾನು ಬಚಾವ್; ಇಲ್ಲದಿದ್ದರೆ, ತಡೆಯಿಲ್ಲದ ಒಳರೋದನ…      

ಬರೆವ ಲೋಕ ಕುರಿತ ಈ ಬರಹ ಈ ದಿಕ್ಕಿನಲ್ಲಿ ಹರಿದಿದ್ದಕ್ಕೆ, 'ಬರುವ ಮಾರ್ಚ್ ೩೧ರ ನಂತರ ಬರೆಯಲು ಶುರು ಮಾಡುತ್ತೇನೆ’ ಎಂದ ಗೆಳೆಯರೊಬ್ಬರ ಪ್ರತಿಜ್ಞೆ ಕೂಡ ಕಾರಣವಾಗಿತ್ತು. ಎಷ್ಟೋ ವರ್ಷಗಳಿಂದ ಬರೆಯುವುದನ್ನು ಮುಂದೂಡುತ್ತಲೇ ಇದ್ದ ಅವರ ಲೇಟೆಸ್ಟ್ ಪ್ರತಿಜ್ಞೆ ಇದು! ಇಂಗ್ಲಿಷ್ ಸಾಹಿತ್ಯದ ಒಳ್ಳೆಯ ಪ್ರೊಫೆಸರ್ ಆಗಿದ್ದ ಹಿರಿಯರೊಬ್ಬರು, 'ಬರೆದರೆ ಹೆನ್ರಿ ಜೇಮ್ಸ್ ಥರದ ದೊಡ್ಡ ಲೇಖಕರ ಥರ ಬರೆಯಬೇಕು…’ ಎನ್ನುತ್ತಾ, ಇವತ್ತಿಗೂ ಬರೆದಂತಿಲ್ಲ. 

ಬರೆವ ಕಾತರವುಳ್ಳ ಹಲವರ ಬಿಕ್ಕಟ್ಟು ಇದು: ಬರೆಯಲು ಶುರು ಮಾಡುವ ತನಕ ಬರವಣಿಗೆ ಕೈ ಹತ್ತುವುದಿಲ್ಲ; ಬರವಣಿಗೆ ಕೈ ಹತ್ತಿದ ನಂತರವೇ ಬರೆಯಲು ಶುರು ಮಾಡುತ್ತೇನೆ ಎಂದರೆ ಅದು ನಡೆಯುವುದಿಲ್ಲ. ಬರವಣಿಗೆ ಕೂಡ ಅಂಬೆಗಾಲಿಟ್ಟು, ಮೇಲೆದ್ದು, ತಡವರಿಸಿ, ತಟ್ಟಾಡುತ್ತಾ, ನಡೆಯಲು ಕಲಿಯುವ ಹಾಗೆಯೇ! ನಿತ್ಯ ಪ್ರಾಕ್ಟೀಸ್ ಮಾಡದೆ ಫೀಲ್ಡಿಗಿಳಿದರೆ ಸಚಿನ್ ತೆಂಡೂಲ್ಕರ್ ಕೂಡ ಒಂದೇ ಬಾಲ್‌ಗೆ ಔಟಾಗುತ್ತಾನೆ. ಬರವಣಿಗೆಯೂ ಹಾಗೆಯೇ! ಆದರೆ ನಿತ್ಯ ಪ್ರಾಕ್ಟೀಸ್ ಮಾಡುವ ವಿರಾಟ್ ಕೊಹ್ಲಿ ಕೂಡ ಒಂದೇ ಒಂದು ರನ್ ಗಳಿಸಲು ಪರದಾಡಬಹುದು. ಹಾಗೆಯೇ, ಬರವಣಿಗೆಯಲ್ಲಿ ನುರಿತವರಿಗೆ ಕೂಡ 'ಇದು ಬರವಣಿಗೆ’ ಎನ್ನಿಸುವ ಒಂದು ಸಾಲು ದಿನಗಟ್ಟಲೆ ಮೂಡದಿರಬಹುದು. ಈ ಅನುಭವವನ್ನು ಬರೆಯುವ ಎಲ್ಲರೂ ಹಾದುಹೋಗುತ್ತಿರುತ್ತಾರೆ.   

ಇಲ್ಲಿ ಮತ್ತೊಂದು ವಿಚಿತ್ರವಿದೆ. ಬರವಣಿಗೆ ಬರುತ್ತದೆ ಎಂದು ನಾವಂದುಕೊಂಡರೂ ಬರೆಯುವುದು ಕಷ್ಟ. ಅನೇಕ ಸಲ ಈ ಅಂಕಣದ ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸುವ ಅಥವಾ ನನಗೆ ನೇರವಾಗಿ ಬರೆಯುವ ಕೆಲವರ ಒಳನೋಟಗಳು ಸ್ಪಷ್ಟವಾಗಿರುತ್ತವೆ; ವಿಶಿಷ್ಟವಾಗಿರುತ್ತವೆ; ನನ್ನ ಆಲೋಚನೆಗಳನ್ನು ಬೇರೆಡೆಗೆ ಒಯ್ಯುತ್ತಿರುತ್ತವೆ. ಅವರಲ್ಲಿ ಕೆಲವರು ತಾವು ಫೇಸ್‌ಬುಕ್ ಇತ್ಯಾದಿ ವೇದಿಕೆಗಳಲ್ಲಿ ಬರೆದ ಪುಟ್ಟ ಬರಹಗಳನ್ನೂ ಕೆಲವೊಮ್ಮೆ ನನಗೆ ಓದಿಸುತ್ತಾರೆ.ಈ ಕ್ಷಿಪ್ರ ಪ್ರತಿಕ್ರಿಯೆಗಳನ್ನು ನೋಡುತ್ತಾ ಕೆಲವು ಸಲ ನನಗನ್ನಿಸಿದೆ: ಇಲ್ಲಿ ಬರವಣಿಗೆಗೆ ಬೇಕಾದ ಪ್ರಾಮಾಣಿಕತೆ ಇದೆ; ಅನ್ನಿಸಿದ್ದನ್ನು ಅತಿ ಅಲಂಕಾರ ಮಾಡದೆ ನೇರವಾಗಿ, ಸರಳವಾಗಿ ಹೇಳುವ ಗುಣವಿದೆ. ಓದಿನಿಂದ, ಚಿಂತನೆಯಿಂದ ಹುಟ್ಟಿದ ಹೊಸ ನೋಟಗಳಿವೆ. ಬರೆವ ಕಾತರವೂ ಇದೆ.  ಜೊತೆಗೆ ಒಂದು ಸಮಸ್ಯೆಯೂ ಇದೆ. ಇಂಥವರು ಕೊಂಚ ಗಂಭೀರವಾದ ವಸ್ತುವನ್ನುಳ್ಳ ದೀರ್ಘ ನಿರೂಪಣೆ ಬರೆಯಹೊರಟಾಗ ಗೊಂದಲ ಮಾಡಿಕೊಳ್ಳುವಂತೆ ಕಾಣುತ್ತದೆ. ಈ ಗೊಂದಲ, ತಡವರಿಕೆ ಕೂಡ ಬರವಣಿಗೆಯ ಭಾಗವೇ ಎನ್ನುವುದನ್ನು ಮರೆತು ಬರಬರುತ್ತಾ ಬರೆಯುವುದನ್ನೇ ಕೈ ಬಿಡುತ್ತಾರೆ. ಬರಹಗಾರ್ತಿಯಾಗಲು, ಬರಹಗಾರರಾಗಲು ಹಿಂಜರಿಯತೊಡಗುತ್ತಾರೆ. 

ಈ ಹಿಂಜರಿಕೆಗೆ ಒಂದು ಕಾರಣ ನಮ್ಮ ಸಾಂಸ್ಕೃತಿಕ ಪರಿಸರದಲ್ಲೇ ಇದೆ. ಇವತ್ತಿಗೂ ಅನೇಕರಿಗೆ ’ನಾನು ಲೇಖಕ ಅಥವಾ ಲೇಖಕಿ’ ಎಂದು ಹೇಳಿಕೊಳ್ಳಲು ಸಂಕೋಚ, ಹಿಂಜರಿಕೆ ಇರುತ್ತದೆ. ಎಷ್ಟೋ ಸಲ ಕೆಲವು ಲೇಖಕರು, ಅದರಲ್ಲೂ 'ರಾಷ್ಟ್ರೀಯ’ ವಿಚಾರ ಸಂಕಿರಣಗಳಲ್ಲಿ ನನಗೆ ಸಿಕ್ಕುವ ವಿಚಿತ್ರ ಆತ್ಮವಿಶ್ವಾಸದ ಲೇಖಕರು, 'ನಾನು ಈಚೆಗೆ ಮೂರು ಕತೆ, ಆರು ಪದ್ಯ ಬರೆದಿದ್ದೇನೆ. ಮೂರು ಪುಸ್ತಕ ಪ್ರಕಟಿಸಿದ್ದೇನೆ; ನೀವೇನು ಬರೆಯುತ್ತಿದ್ದೀರಿ?’ ಎಂದಾಗ, ತಕ್ಷಣ ಉತ್ತರ ಹೊಳೆಯದೆ ನಾನೂ ಪೇಚಾಡಿದ್ದಿದೆ. ಇದು ಕೂಡ ಮೇಲೆ ಹೇಳಿದ ರೀತಿಯ ಸಂಕೋಚದಿಂದಲೇ ಹುಟ್ಟಿರಬಹುದು. 

ಅದೇನೇ ಇರಲಿ. ಈ ಅಂಕಣದ ಓದುಗ ಓದುಗಿಯರಲ್ಲಿ ಹಲವರು ಬರೆವ ಕಾತರ ಉಳ್ಳವರಾದ್ದರಿಂದ, ‘ಎಡವಲಿ, ಬೀಳಲಿ, ಅವರವರ ಬರವಣಿಗೆ ಶುರುವಾಗಲಿ, ಸದಾ ಸಾಗುತ್ತಿರಲಿ’ ಎಂದು ಹೊಸ ವರ್ಷದ ಶುರುವಿನಲ್ಲಿ ಹಾರೈಸಿದರೆ ತಪ್ಪಾಗಲಿಕ್ಕಿಲ್ಲ ಎಂದು ನಂಬುವೆ. 

blog
29 Dec 2024 ನಮ್ಮ ಬನವಾಸಿಯ ಬರ್ತ್‌ಡೇ

ದೇವನೂರ ಮಹಾದೇವರ ಬಗ್ಗೆ ಮಾತಾಡಬೇಕೆಂದು ಮೋಹನ್ ಮಿರ್ಲೆ, ಸಬಿತಾ ಬನ್ನಾಡಿ ಹೇಳಿದ ಆಸುಪಾಸಿನಲ್ಲೇ ಬಂದ ಒಂದು ಇ-ಮೇಲ್, ಇದೇ ಡಿಸೆಂಬರ್ ೨೯ಕ್ಕೆ 'ನಮ್ಮ ಬನವಾಸಿ’ ವೆಬ್‌ಸೈಟಿಗೆ ಹತ್ತು ವರ್ಷವಾಗಲಿದೆ ಎಂದು ನೆನಪಿಸಿತು. ಕನ್ನಡದ ಇಬ್ಬರು ದೊಡ್ಡ ಲೇಖಕರಿಗೆ 'ಬನವಾಸಿ’ ಅಂಟಿಕೊಂಡ ಸೋಜಿಗ ಮತ್ತೆ ಸುಳಿಯಿತು.  

೧೯೭೦ರ ದಶಕದ ಒಂದು ಘಟ್ಟದಲ್ಲಿ ಹೆಚ್ಚುಕಡಿಮೆ ಒಂದೇ ಗುರಿ, ಒಂದೇ ಕಾಳಜಿ ಇದ್ದ ಇಬ್ಬರು ಕನ್ನಡ ಲೇಖಕರು ಹಲವರ ಜೊತೆಗೂಡಿ ದಲಿತ ಚಳುವಳಿಯನ್ನು ರೂಪಿಸುವುದರಲ್ಲಿ ತೊಡಗಿದ್ದರು. ಇಬ್ಬರ ಬರವಣಿಗೆ, ಭಾಷಣ, ಚಳುವಳಿ, ರಾಜಕಾರಣಗಳ ರೀತಿ ಬೇರೆ ಬೇರೆ. ಆದರೆ ಇಬ್ಬರ ಜೊತೆಗೂ ಆದಿಕವಿ ಪಂಪನ ಬನವಾಸಿ ಸೇರಿಕೊಂಡಿರುವುದು ಮಾತ್ರ ಕುತೂಹಲಕರ. ಕವಿ ಸಿದ್ಧಲಿಂಗಯ್ಯನವರ ಬೆಂಗಳೂರು ಮನೆಯ ಹೆಸರು ಬನವಾಸಿ. ಅವರ ಮನೆಯ ಹಜಾರದಲ್ಲಿ ಬನವಾಸಿಯ ಫೋಟೋ ಕೂಡ ಇದೆ. ದೇವನೂರು ತಮ್ಮ ತೋಟಕ್ಕೆ ಬನವಾಸಿ ಎಂಬ ಹೆಸರಿಡುವಾಗ ಪಂಪನ ಬನವಾಸಿಗಿಂತಲೂ 'ಬನವಾಸಿ’ ಮೆಟಫರ್ ಅವರ ತಲೆಯಲ್ಲಿತ್ತೇನೋ ಎಂಬುದು ನನ್ನ ಊಹೆ!  

ದೇವನೂರ ಮಹಾದೇವರ ಮಾತಿರಲಿ, ಬರಹವಿರಲಿ, ಅವನ್ನೆಲ್ಲ ಮೆಟಫಾರಿಕಲ್ ಆಗಿ ಅಥವಾ ರೂಪಕನೋಟದಲ್ಲಿ ನೋಡಿದರೆ ಹಲವು ಸತ್ಯಗಳು ದಕ್ಕುತ್ತವೆ; ಅರ್ಥಗಳು ವಿಸ್ತಾರವಾಗುತ್ತವೆ. ಮಹದೇವರಿಗೆ ವೈಕಂ ಪ್ರಶಸ್ತಿ ಬಂದ ನೆಪದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ಜೊತೆ ದೇವನೂರರ ಸಾಹಿತ್ಯದ ಬಗ್ಗೆ ಮಾತಾಡಿದಾಗ, ಅವರ ಎಲ್ಲ ಬರಹಗಳ ರೂಪಕ ಗುಣಗಳನ್ನು ಚರ್ಚಿಸಿದೆ. ಅದನ್ನು ಒಪ್ಪುತ್ತಾ, ಅಧ್ಯಾಪಕ ಧನಂಜಯಮೂರ್ತಿ ದೇವನೂರರ ’ಎದೆಗೆ ಬಿದ್ದ ಅಕ್ಷರ’ದ ರೂಪಕಾತ್ಮಕ ಬಣ್ಣನೆಯನ್ನು ಓದಿಯೇಬಿಟ್ಟರು: 

'ಗಾಂಧಿ ಕಾಠಿಣ್ಯದ ತಂದೆಯಂತೆ. ಜೆಪಿ ಅಸಹಾಯಕ ತಾಯಿ. ವಿನೋಬಾ ಮದುವೆಯಾಗದ ವ್ರತನಿಷ್ಠ ಅಕ್ಕನಂತೆ. ಲೋಹಿಯಾ ಊರೂರು ಅಲೆಯುವ, ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್‍ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಯ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?’ 

ಆಳವಾದ ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ಅರಿವಿನಿಂದ ಹುಟ್ಟಿದ ಅರ್ಥಪೂರ್ಣ ಉಪಮೆ, ರೂಪಕಗಳಲ್ಲಿ ಚಿಮ್ಮುವ ಇಂಥ ಅಪೂರ್ವ ಒಳನೋಟಗಳು ದೇವನೂರರ ಬರಹಲೋಕದ ತುಂಬ ಇವೆ. ಇಂಥ ಸರ್ವಸ್ವೀಕಾರದ (ಇನ್ಕ್ಲೂಸಿವ್) ಸಮಾಜವಾದಿ ನೋಟಗಳ ಅವರ ಬರಹಲೋಕದಲ್ಲಿ ಸಮುದಾಯಗನ್ನಡಗಳು, ಸಮುದಾಯ ಜ್ಞಾನ, ಲೇಖಕನ ಕಾಲಕಾಲದ ಜ್ಞಾನೋದಯ, ಈ ಬರಹಗಳು ಹಬ್ಬಿಸಬಲ್ಲ ಆರೋಗ್ಯ, ಕಾಳಜಿ, ಸಂವೇದನೆ ಇವೆಲ್ಲವೂ ಇವೆ. ಅವರ ಬರಹಗಳನ್ನು ಕಾವ್ಯ ಓದುವಂತೆ ಹತ್ತಿರದಿಂದ ಓದಿದಾಗ ಕಾಣುವ ಸತ್ಯಗಳನ್ನೂ ಓದುಗ ಓದುಗಿಯರು ವ್ಯವಧಾನದಿಂದ ಅರಿಯುವ ಅಗತ್ಯವಿದೆ; ಟೀಚರುಗಳು ‌ಇವನ್ನು ವಿವರಿಸಿ, ವಿಸ್ತರಿಸಿ ಮಕ್ಕಳಿಗೆ ಮುಟ್ಟಿಸುವ ಕೆಲಸವೂ ಇದೆ. ಇದು ತಲೆತಲೆಮಾರುಗಳು ದೊಡ್ಡ ಲೇಖಕರನ್ನು ಮುಂದೊಯ್ಯವ ರೀತಿ ಕೂಡ.     

ದೇವನೂರರಿಗೆ ವೈಕಂ ಪ್ರಶಸ್ತಿ ಬಂದಾಗ, ಗೆಳೆಯರು ವೈಕಂ ಸತ್ಯಾಗ್ರಹ, ಪೆರಿಯಾರ್, ಗಾಂಧೀಜಿ… ಎಲ್ಲವನ್ನೂ ನೆನೆದಿದ್ದರು. ಅಂಬೇಡ್ಕರ್ ವೈಕಂ ಸತ್ಯಾಗ್ರಹದ ಬಗ್ಗೆ ಮಾತಾಡಿದ್ದು ನೆನಪಾಗಿ, ವಿವರಗಳನ್ನು ಹುಡುಕಿದೆ: 

ಆಗ ಬಾಂಬೆಯಲ್ಲಿದ್ದ ಅಂಬೇಡ್ಕರ್ ವೈಕಂ ಸತ್ಯಾಗ್ರಹದ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಬೆಳಗಾವಿಯ ನಿಪ್ಪಾಣಿಯಲ್ಲಿ ೨೫ ಏಪ್ರಿಲ್ ೧೯೨೫ರಂದು ಮಾಡಿದ ಭಾಷಣದಲ್ಲಿ ಅಂಬೇಡ್ಕರ್ ವೈಕಂ ಸತ್ಯಾಗ್ರಹ 'ವಿಫಲ’ ಎನ್ನುತ್ತಾ, 'ಹಿಂದೂ- ಮುಸ್ಲಿಂ ಏಕತೆ, ಖಾದಿ ಪ್ರಚಾರಗಳಿಗೆ ಕೊಡುತ್ತಿರುವ ಮಹತ್ವವನ್ನು ಗಾಂಧಿ ಅಸ್ಪೃಶ್ಯತೆಯ ನಿವಾರಣೆಗೆ ಕೊಡುತ್ತಿಲ್ಲ’ ಎಂದು ಟೀಕಿಸಿದರು; ಅದರ ಜೊತೆಗೇ, 'ಸಾಮಾಜಿಕ ಅನ್ಯಾಯವನ್ನು ತೊಡೆಯುವುದು ಅತ್ಯಂತ ಮುಖ್ಯ ಕೆಲಸ ಹಾಗೂ ಈ ಕೆಲಸವನ್ನು ಪ್ರತಿಯೊಬ್ಬ ಭಾರತೀಯನೂ ಪವಿತ್ರ ಕರ್ತವ್ಯದಂತೆ ಕೈಗೆತ್ತಿಕೊಳ್ಳುವಂತೆ ಈ ದೇಶದಲ್ಲಿ ಹೇಳಿದ ಮೊದಲ ವ್ಯಕ್ತಿ ಅವರು’ ಎಂದು ಮೆಚ್ಚುತ್ತಾ ಅಂಬೇಡ್ಕರ್ ಹೇಳಿದರು: ’ಯಾರೂ ನಮ್ಮ ಹತ್ತಿರ ಕೂಡ ಬರದಿದ್ದಾಗ ಮಹಾತ್ಮ ಗಾಂಧಿ ತೋರಿಸಿದ ಅನುಕಂಪ ಸಣ್ಣ ಸಂಗತಿಯಲ್ಲ.’ 

ಆ ಕಾಲದಲ್ಲಿ ಸ್ವಾತಂತ್ರ‍್ಯ ಚಳುವಳಿ ಭಾರತದ ಸಾಮಾಜಿಕ ಪ್ರಶ್ನೆಗಳಿಗೆ ಒತ್ತು ಕೊಡಬೇಕೋ, ರಾಜಕೀಯ ಪ್ರಶ್ನೆಗಳಿಗೆ ಒತ್ತು ಕೊಡಬೇಕೋ ಎಂಬ ಚರ್ಚೆ ಕಾಂಗ್ರೆಸ್ಸಿನೊಳಗೆ ನಡೆಯುತ್ತಿತ್ತು. ರಾನಡೆ, 'ಸಮಾಜ ಸುಧಾರಣೆ ಮೊದಲು’ ಅಂದರೆ, ತಿಲಕ್, 'ರಾಜಕೀಯ ಸ್ವಾತಂತ್ರ‍್ಯ ಮೊದಲು’ ಎಂದು ವಾದಿಸಿದ್ದರು. ಗಾಂಧೀಜಿ ಬಂದ ಮೇಲೆ ಸಾಮಾಜಿಕ ಬದಲಾವಣೆಯ ಒತ್ತು ಹೆಚ್ಚಾಯಿತು. ಅಂಬೇಡ್ಕರ್ ವೈಕಂ ಸತ್ಯಾಗ್ರಹದ ವಿಫಲತೆಯ ಬಗ್ಗೆ ಮಾತಾಡುತ್ತಿದ್ದಾಗ, ರಾಜಕೀಯ ಬದಲಾವಣೆಗಿಂತ ಮೊದಲು ಸಾಮಾಜಿಕ ಬದಲಾವಣೆಯಾಗಬೇಕು ಎಂದು ಸೂಚಿಸುತ್ತಿದ್ದರು. 

ಗಾಂಧೀ ನಂತರದ ಕಾಲದಲ್ಲಿ, ಮುಖ್ಯವಾಗಿ ಅಂಬೇಡ್ಕರ್, ಲೋಹಿಯಾ, ಗಾಂಧಿ ಬೆರೆತ ಸ್ವತಂತ್ರ ಭಾರತದಲ್ಲಿ ಕಣ್ಣು ಬಿಟ್ಟ ದೇವನೂರ ಮಹಾದೇವ ಈ ಮೂವರಂತೆ ಸಾಮಾಜಿಕ ಬದಲಾವಣೆ ಮೊದಲು ಎಂದು ಆರಂಭದಲ್ಲಿ ಹೊರಟಂತಿದೆ. ಮುಂದೆ ಅಂಬೇಡ್ಕರ್ ತಮ್ಮ ಸಾಮಾಜಿಕ ಬದಲಾವಣೆಯ ಚಿಂತನೆ-ಹೋರಾಟಕ್ಕೆ ಪೂರಕವಾಗಿ ರಾಜಕೀಯ ಪಕ್ಷ ಮಾಡಬೇಕೆಂದು ಹೊರಟರು. ನಿಷ್ಕರುಣಿ ಕಾಲ ಅದಕ್ಕೆ ಅವಕಾಶ ಕೊಡಲಿಲ್ಲ. ಆದರೆ ಎಪ್ಪತ್ತರ ದಶಕದ ಕಾಲದ ಒತ್ತಾಯದಂತೆ ದಲಿತ ಚಳುವಳಿಯ ಜೊತೆಗೆ ನಡೆದ ಲೇಖಕ ಮಹಾದೇವ ಇಪ್ಪತ್ತೊಂದನೆಯ ಶತಮಾನದಲ್ಲಿ 'ಸರ್ವೋದಯ ಕರ್ನಾಟಕ’ ರಾಜಕೀಯ ಪಕ್ಷದ ಅಧ್ಯಕ್ಷರಾದರು. ಇವೆಲ್ಲವೂ ಕಾಲದ ವಿದ್ಯಮಾನಗಳ ಒತ್ತಡಗಳು ಗಂಭೀರವಾದ ವ್ಯಕ್ತಿತ್ವವೊಂದನ್ನು ರೂಪಿಸುವ ರೀತಿಯನ್ನು ಸೂಚಿಸುತ್ತವೆ. ಲಂಕೇಶ್, ತೇಜಸ್ವಿ ಥರದ ಬರಹಗಾರರಿಗಿಂತ ಹೆಚ್ಚಿನ ರೀತಿಯಲ್ಲಿ ಕಾಲದ ಒತ್ತಡ, ವಿದ್ಯಮಾನಗಳು ಮಹಾದೇವರನ್ನು ರೂಪಿಸಿ, ಅವರ ಮೇಲೆ ಸಮಾಜದ ಜವಾಬ್ದಾರಿಗಳನ್ನು ಹೊರಿಸಿದಂತಿದೆ. ದಲಿತ ಸಮುದಾಯದ ಸ್ಥಿತಿಗತಿಗಳ ಬದಲಾವಣೆಯ ತೀವ್ರ ವೈಯಕ್ತಿಕ ತುಡಿತವೂ ಅದರೊಡನೆ ಸೇರಿಕೊಂಡಿದೆ. 

ಇಷ್ಟಾಗಿಯೂ, ತಾವು ಭಾಗಿಯಾದ ಚಳುವಳಿ, ಬರವಣಿಗೆ, ರಾಜಕಾರಣ, ಮಾತು ಇವೆಲ್ಲವನ್ನೂ ಮಹಾದೇವ ತಮ್ಮ ಆಳದಲ್ಲಿ ಒಪ್ಪಿಯೇ ಮಾಡಿದಂತಿದೆ; ತಮ್ಮ ನೈತಿಕ ನೋಟ, ನಿಲುವು ಏನೆಂಬುದನ್ನು ಹುಡುಕಿಕೊಂಡು, ವಿವರಿಸಿಕೊಂಡೇ ಮುನ್ನಡೆದಂತಿದೆ; ಸೂಕ್ಷ್ಮ, ಆತ್ಮಪರೀಕ್ಷೆಯ ಲೇಖಕನಾಗಿಯೇ ಉಳಿದೆಲ್ಲದರಲ್ಲೂ ತೊಡಗುವ ತುಡಿತ ಅವರ ವ್ಯಕ್ತಿತ್ವವನ್ನು ರೂಪಿಸಿದಂತಿದೆ. 'ಕುಸುಮಬಾಲೆ’ಯ ಚನ್ನನ ಅಪ್ಪನಂತೆ 'ನಮ್ಮ ಕ್ರಿಯಾ ಒಂದು ಸುದ್ದ ಇದ್ರ…’ ಎಂದು, ತಮ್ಮ ಕ್ರಿಯೆಗಳು ’ಇಂದಲ್ಲ ನಾಳೆ ಫಲ ಕೊಡುವು’ದನ್ನು ಕಾಯತ್ತಲೂ ಅವರು ಹೊರಟಂತಿದೆ. ಈ ಎಲ್ಲ ಕ್ರಿಯೆಗಳ ಸೂಕ್ಷ್ಮತೆಗೆ ಅವರ ಲೇಖಕವ್ಯಕ್ತಿತ್ವ ಕೊಟ್ಟ ಕೊಡುಗೆಯನ್ನು ಇವತ್ತು ಬರೆಯಬಯಸುವ ಎಲ್ಲರೂ ಆಳವಾಗಿ ಧ್ಯಾನಿಸಿ ಅರಿಯಬೇಕಾಗಿದೆ. ಮಹಾದೇವ ಬರೆಯಲಿ, ಬರೆಯದಿರಲಿ, ಅವರ ಎಲ್ಲ ಸಾರ್ವಜನಿಕ ಕ್ರಿಯೆ, ಚಿಂತನೆಗಳೂ ಅವರ ಸೂಕ್ಷ್ಮ ಲೇಖಕವ್ಯಕ್ತಿತ್ವದ ವಿಸ್ತರಣೆಯಂತೆಯೇ ಇವೆ. 

ಇವೆಲ್ಲವನ್ನೂ ನೆನೆಯುತ್ತಲೇ ಹತ್ತು ತುಂಬಿದ 'ನಮ್ಮ ಬನವಾಸಿ’ ವೆಬ್‌ಸೈಟ್ ನೋಡಿದರೆ, ಅಲ್ಲಿ ಹದಿಹರೆಯದಲ್ಲಿ ಲೈಬ್ರರಿಯೊಂದರಲ್ಲಿ ನನ್ನ ಕೈಗೆ ಸಿಕ್ಕ 'ದ್ಯಾವನೂರು’ ಕಥಾ ಸಂಕಲನದ ಕಂದು ಬಣ್ಣದ ಕವರ್ ಪೇಜ್, ಅದರ ಮೇಲಿದ್ದ ಕೈ ಬರಹ ಕಂಡು ಪುಳಕ ಹುಟ್ಟಿತು. 'ಖಂಡವಿದು ಕೋ ಮಾಂಸವಿದು ಕೋ’ ಎಂಬ ಗೋವಿನ ಹಾಡಿನ ಸಾಲು ಪುಸ್ತಕದ ಮುಖಪುಟದಲ್ಲಿದ್ದುದು ನೆನಪಾಯಿತು. ಕತೆ ಬರೆಯಲು ಕಾತರಿಸುತ್ತಿದ್ದ ನನಗೆ ಈ ಪುಸ್ತಕ ಹಳ್ಳಿ ಲೋಕ, ದಲಿತ ಲೋಕ ಎಂದರೇನೆಂಬುದನ್ನು ಕಲಿಸತೊಡಗಿತು. 'ದತ್ತ’ ಕತೆಯ ಹುಡುಗನ ಪರಕೀಯತೆ, ಕತೆಯ ವಾತಾವರಣ ಇವತ್ತಿಗೂ ನನ್ನಲ್ಲಿ ಉಳಿದುಬಿಟ್ಟಿವೆ. ಅದೇ ಕಾಲದಲ್ಲಿ ಆಲ್ಬರ್ಟ್‌ ಕಮೂನ 'ದ ಔಟ್‌ಸೈಡರ್’ ಕಾದಂಬರಿಯ ಕನ್ನಡಾನುವಾದ 'ಅನ್ಯ’ದಲ್ಲಿ (ಅನುವಾದ: ಡಿ.ಎ. ಶಂಕರ್) ಕಂಡಿದ್ದ ಪರಕೀಯ ಭಾವವೂ ಇದರೊಡನೆ ಸೇರಿಕೊಂಡಂತಿದೆ.   

ಹತ್ತಿರ ಹತ್ತಿರ ಸಾವಿರ ಪುಟಗಳಷ್ಟು ಬರವಣಿಗೆ, ಮಾತು, ಸ್ಪಂದನ, ಕ್ರಿಯೆಗಳ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ಸುಮಾರು ಐವತ್ತು ವರ್ಷಗಳಿಂದ ಪ್ರಖರ ಹಾಜರಿಯುಳ್ಳ ದೇವನೂರ ಮಹಾದೇವರ ಲೋಕಕ್ಕೆ 'ನಮ್ಮ ಬನವಾಸಿ’ ಎಂಬ ಕಲಾತ್ಮಕ-ಪ್ರೊಫೆಶನಲ್ ವೆಬ್‌ಸೈಟ್ ಮುದ ನೀಡುವ, ದಕ್ಷವಾದ ಕನ್ನಡಿಯಾಗಿದೆ; ಇದು ದೊಡ್ಡ ಲೇಖಕನೊಬ್ಬನಿಗೆ ನಾಡವರು, ಸಂಗಾತಿಗಳು ಸಲ್ಲಿಸಲೇಬೇಕಾದ ಕೃತಜ್ಞತೆಯಂತೆ, ಅಕ್ಕರೆಯ ಕೊಡುಗೆಯಂತೆ, ಕರ್ತವ್ಯದಂತೆಯೂ ಇದೆ. 'ನಮ್ಮ ಬನವಾಸಿ’ಯಲ್ಲಿರುವ ಒಂಬತ್ತು ವಿಭಾಗಗಳಲ್ಲಿ ಮಹಾದೇವಲೋಕದ ಬಹುತೇಕ ದಾಖಲೆಗಳ ಜೊತೆಗೆ, ಅವರ ಸಂವೇದನೆಗೆ ಹತ್ತಿರವಿರುವ ಹತ್ತಾರು ಲೇಖಕ, ಲೇಖಕಿಯರ ಬರಹಗಳ 'ಸಹಪಯಣ’ವೂ ಇದೆ. ಕನ್ನಡ ಓದುಗ, ಓದುಗಿಯರು, ಬೋಧನಾವಲಯ, ರಿಸರ್ಚ್ ವಲಯ ಮತ್ತೆ ಮತ್ತೆ ಭೇಟಿ ಕೊಟ್ಟು ಬಳಸಿಕೊಳ್ಳಬೇಕಾದ ಜಾಲತಾಣ ಇದು.     

ಈ ವೆಬ್‌ಸೈಟ್ ನಡೆಸುವ ಬನವಾಸಿಗರು ಬರೆಯುತ್ತಾರೆ: 'ನಮ್ಮ ಬನವಾಸಿ ಎಂಬ ದೇವನೂರ ಮಹಾದೇವ ಅವರ ಕುರಿತ ಈ ಜಾಲತಾಣ ಕುವೆಂಪು ಜನ್ಮದಿನವಾದ ೨೯.೧೨.೨೦೧೪ರಂದು ಆರಂಭವಾಯಿತು… ಪೂರ್ವಗ್ರಹ ಮತ್ತು ವೈಭವೀಕರಣವಿಲ್ಲದೆ, ಅವರ ಚಿಂತನೆ, ಮನಸು, ಧಾರಣಶಕ್ತಿಯನ್ನು ಯಥಾವತ್ತಾಗಿ ದಾಖಲಿಸುವುದನ್ನು ಕೇಂದ್ರೀಕರಿಸಿ ಈ ಜಾಲತಾಣ ಮುಂದುವರೆಯುತ್ತಿದೆ.’ ಜೊತೆಗೊಂದು ಬಿನ್ನಹವೂ ಇದೆ: 'ಮಹಾದೇವರ ಕುರಿತು ನಿಮ್ಮಲ್ಲಿ ಇರಬಹುದಾದ ವಿಶೇಷವಾದುದನ್ನು ಪ್ರೀತಿಯಿಂದ ನೀಡಿದರೆ ನಮ್ಮ ಬನವಾಸಿಯ (http://www.nammabanavasi.com) ಮೌಲ್ಯ ಹೆಚ್ಚುತ್ತದೆ…ನಾವೆಲ್ಲರೂ ಸೇರಿ ಅದರ ಸೊಬಗನ್ನು ಹೆಚ್ಚಿಸೋಣವೆಂದು ಮನವಿ ಮಾಡುತ್ತಿದ್ದೇವೆ.’  

ಇದೆಲ್ಲವನ್ನೂ ಬರೆಯುವಾಗ ಹಿಂದೊಮ್ಮೆ ಪ್ರಜಾವಾಣಿಯ 'ಕನ್ನಡಿ’ ಅಂಕಣದಲ್ಲಿ ಬರೆದ ಮಾತೊಂದನ್ನು ಮತ್ತೆ ಇಲ್ಲಿ ಕಾಣಿಸಬೇಕೆನ್ನಿಸಿತು: 'ಕಿ.ರಂ. ನಾಗರಾಜ್ ಹಾಗೂ ಮಹಾದೇವರನ್ನು ನೋಡಿದಾಗ ಗಾಂಧೀಜಿ ಇಲ್ಲೇ ಎಲ್ಲೋ ನಡೆದಾಡಿದಂತೆ ಅನ್ನಿಸುತ್ತದೆ.’ ಅವತ್ತು ಈ ಮಾತನ್ನು ಗಮನಿಸಿದ್ದ ದೇವನೂರ್, 'ಒಂಚೂರು ಓವರ್ ಆಯಿತು… ಆ‌…ಆ…’ ಎಂದಿದ್ದರು. ನಂತರ ನನ್ನ ’ಕನ್ನಡಿ’ ಅಂಕಣ ಬರಹಗಳ ಪುಸ್ತಕವನ್ನು 'ಕನ್ನಡ ಬರವಣಿಗೆಯ ದಿಕ್ಕನ್ನು ಬದಲಿಸಿದ ಅನನ್ಯ ಲೇಖಕ-ಚಿಂತಕ-ನಾಯಕ ದೇವನೂರ ಮಹಾದೇವ ಅವರಿಗೆ’ ಅರ್ಪಣೆ ಮಾಡಿದ್ದೆ. ಅದಕ್ಕೆ ದೇವನೂರ್ ಪ್ರತಿಕ್ರಿಯೆ ಏನು ಎಂಬುದು ತಿಳಿಯಲಿಲ್ಲ. ಈ ಬಣ್ಣನೆಯನ್ನು ಅವರು ಥಣ್ಣಗೆ ಒಪ್ಪಿಕೊಂಡಿರಲೂಬಹುದು ಎಂದು ಊಹಿಸುವೆ! ಜೊತೆಗೆ, ದೇವನೂರ ಮಹಾದೇವರನ್ನು ಬಲ್ಲ ಬಹುತೇಕ ಸೂಕ್ಷ್ಮಜ್ಞರು ಹಾಗೂ ಈಗಾಗಲೇ ಹದಿನೈದು ಲಕ್ಷ ಜನ ಭೇಟಿ ಕೊಟ್ಟಿರುವ 'ನಮ್ಮ ಬನವಾಸಿ’ ವೆಬ್‌ಸೈಟ್ ನೋಡುಗರಲ್ಲಿ ಹಲವು ಸಾವಿರ ಜನರಾದರೂ ಈ ಎರಡೂ ಮಾತನ್ನು ಒಪ್ಪುವರೆಂದು ನಂಬುವೆ! 
 



Latest Video


Nataraj Huliyar Official
YouTube Channel

SUBSCRIBE