Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
16 Mar 2025 ಅಂಬೇಡ್ಕರ್ ತೆರೆದ ಆತ್ಮಕತೆಯ ಹಾದಿ

ಗೆಳೆಯರೊಬ್ಬರು ರಿಸರ್ಚ್ ಪ್ರಾಜೆಕ್ಟಿಗಾಗಿ ದಲಿತ ಆತ್ಮಚರಿತ್ರೆಗಳನ್ನು ಹುಡುಕುತ್ತಿದ್ದರು. ಅವರ ಹುಡುಕಾಟದ ಜಾಡಿನಲ್ಲಿ ಹೊರಟ ನಾನು ದಯಾ ಪವಾರರ ಮರಾಠಿ ಆತ್ಮಚರಿತ್ರೆ ‘ಬಲುತ’ ಭಾರತದ ಮೊದಲ ದಲಿತ ಆತ್ಮಚರಿತ್ರೆ ಎಂದು ದಾಖಲಾಗಿದ್ದನ್ನು ಗಮನಿಸಿದೆ. ‘ಬಲುತ’ಕ್ಕೂ ಮೊದಲು, ಆಧುನಿಕ ಕನ್ನಡದ ಮೊದಲ ದಲಿತ ಸಾಹಿತಿ ಡಿ. ಗೋವಿಂದದಾಸ್ ೧೯೪೦-೪೪ರ ನಡುವೆ ಬರೆದ ಅಪೂರ್ಣ ಆತ್ಮಚರಿತ್ರೆಯ ಪುಟಗಳು ಎಂ.ಎಸ್. ಶೇಖರ್ ಸಂಪಾದಿಸಿರುವ ‘ಡಿ. ಗೋವಿಂದದಾಸ್ ಸಮಗ್ರ ಸಾಹಿತ್ಯ’ ಪುಸ್ತಕದಲ್ಲಿವೆ. ಗೋವಿಂದದಾಸ್ ಅವರ ‘ನನ್ನ ಆತ್ಮಚರಿತೆ’ ಕನ್ನಡದ ಮೊದಲ ದಲಿತ ಆತ್ಮಚರಿತ್ರೆ ಎಂದು ಹೊಂಬಯ್ಯ ಹೊನ್ನಲಗೆರೆ ತಮ್ಮ ಥೀಸಿಸ್ಸಿನಲ್ಲಿ ತೋರಿಸಿಕೊಟ್ಟಿದ್ದು ನೆನಪಾಯಿತು. ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಕನ್ನಡದ ಮೊದಲ ಪೂರ್ಣ ದಲಿತ ಆತ್ಮಕತೆಯೆಂಬುದು ಕೂಡ ಈಗಾಗಲೇ ದಾಖಲಾಗಿದೆ. 

ಅದೇನೇ ಇದ್ದರೂ, ಅಂಬೇಡ್ಕರ್ ಅವರ ‘ವೆಯ್ಟಿಂಗ್ ಫಾರ್ ಎ ವೀಸಾ’ ಎಂಬ ಆತ್ಮಚರಿತ್ರಾತ್ಮಕ ಬರವಣಿಗೆಯ ಮೂವತ್ತು-ನಲವತ್ತು ಪುಟಗಳೇ ಇಂಡಿಯಾದ ಮೊದಲ ದಲಿತ ಆತ್ಮಚರಿತ್ರೆ ಎಂದು ನನಗನ್ನಿಸಿದೆ. ಕಾರಣ, ಮುಂದೆ ಬಂದ ದಲಿತ ಆತ್ಮಚರಿತ್ರೆಗಳಲ್ಲಿ ಆತ್ಮಚರಿತ್ರೆಯೇ ಸಮುದಾಯದ ಪ್ರಾತಿನಿಧಿಕ ಚರಿತ್ರೆಯಾಗಲು ಅಗತ್ಯವಾಗಿದ್ದ ಮೂಲ ಮಾದರಿಗಳು ‘ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳಲ್ಲಿವೆ. ಈ ಮೂಲ ಮಾದರಿಗಳನ್ನು ಹೀಗೆ ಪಟ್ಟಿ ಮಾಡಬಹುದು: 

೧. ದಲಿತ ಲೇಖಕ, ಲೇಖಕಿಯರು ತಮ್ಮ ಅನುಭವವನ್ನು ಪ್ರಾಮಾಣಿಕವಾಗಿ ಹೇಳುತ್ತಲೇ ಅದು ದಲಿತ ಸಮುದಾಯದ ಕತೆಯಾಗುವುದು; ತಮ್ಮ ಕತೆಯ ಜೊತೆಗೇ ತಮ್ಮಂತೆ ಅವಮಾನಕ್ಕೊಳಗಾದ ಇತರರ ಕತೆಯನ್ನೂ ಹೇಳುವುದು.
೨. ದಲಿತ ಬದುಕಿನ ಅವಮಾನದ ಕತೆ ಹೇಳುತ್ತಲೇ ಅದು ಸವರ್ಣೀಯ ಸಮಾಜದ ಕ್ರೌರ್ಯದ ಹಾಗೂ ಭಾರತದ ಸಾವಿರಾರು ವರ್ಷಗಳ ಭೀಕರ ಅಸ್ಪೃಶ್ಯತೆಯ ಚರಿತ್ರೆಯ ದಾಖಲೆಯೂ ಆಗುವುದು. 
೩. ಅತಿ ಆಭರಣಾತ್ಮಕ ಶೈಲಿಯಿಲ್ಲದೆ ನೇರವಾಗಿ ಅನುಭವವನ್ನು ನಿರೂಪಿಸುವುದು. 
೪.ವಾಸ್ತವದ ಕಟು ವಿವರಗಳನ್ನು ಹೇಳುವುದರ ಮೂಲಕವೇ ಶೋಷಕ-ಶೋಷಿತರಿಬ್ಬರನ್ನೂ ಬದಲಾಯಿಸಲೆತ್ನಿಸುವುದು. 
೫. ಎಲಿನಾರ್ ಝೆಲಿಯಟ್ ತಮ್ಮ ‘ಫ್ರಂ ಅನ್‌ಟಚಬಲ್ ಟು ದಲಿತ್’ ಪುಸ್ತಕದಲ್ಲಿ ತೋರಿಸುವಂತೆ ‘ಅಸ್ಪೃಶ್ಯತೆ’ಯಿಂದ ಕುಗ್ಗಿದ ವ್ಯಕ್ತಿತ್ವ ಸ್ವಾಭಿಮಾನದ, ‘ದಲಿತ್ ಐಡೆಂಟಿಟಿ’ಯ ಕಡೆಗೆ ನಡೆಯುವುದನ್ನು ದಾಖಲಿಸುವುದು…
೬. ಇದೆಲ್ಲದರ ಜೊತೆಗೆ ಯಾವುದೇ ದಮನಿತ ಸಮುದಾಯಗಳ ಲೇಖಕ, ಲೇಖಕಿಯರು ಹಾಗೂ ಒಟ್ಟಾರೆಯಾಗಿ ದಮನಿತರು ತಮ್ಮ ಆತ್ಮಚರಿತ್ರೆಯನ್ನು ಬರೆಯುವ ಹಾದಿಯನ್ನೂ ತೋರಿಸುವುದು.

ಇವೆಲ್ಲ ಮಾದರಿಗಳನ್ನೂ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಬಿಡಿಬಿಡಿ ಭಾಗಗಳ ಮೂಲಕ ಸೂಕ್ಷ್ಮವಾಗಿ ಸೂಚಿಸುತ್ತಾ ಭಾರತದ ದಲಿತ ಆತ್ಮಚರಿತ್ರೆಗಳ ಸ್ವರೂಪವನ್ನೂ, ಭಾರತದಲ್ಲಿ ಆವರೆಗೆ ಬರೆಯದ ದಮನಿತರ ಆತ್ಮಚರಿತ್ರೆಗಳ ಮಾದರಿಯನ್ನೂ ರೂಪಿಸಿದಂತಿದೆ. ಇಂಡಿಯಾದ ದಲಿತ ವರ್ಗಗಳ, ಅಂಚಿನ ವರ್ಗಗಳ, ಶೂದ್ರ ವರ್ಗಗಳ ವಿಮೋಚನಾ ಸಿದ್ಧಾಂತಗಳನ್ನು ರೂಪಿಸಿದ ಅಂಬೇಡ್ಕರ್ ದಲಿತ ಸ್ವಾನುಭವವನ್ನು, ದಮನಿತರ ಅನುಭವಗಳನ್ನು ಹೇಗೆ ಬರೆಯಬೇಕು ಎಂದು ಕೂಡ ‘ವೆಯ್ಟಿಂಗ್ ಫಾರ್ ಎ ವೀಸಾ’ದಲ್ಲಿ ತೋರಿಸಿಕೊಟ್ಟಿದ್ದಾರೆಂದು ನನಗನ್ನಿಸಿದೆ. 

ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ಇಂಗ್ಲಿಷಿನಲ್ಲಿ ಬರೆಯಲಾರಂಭಿಸಿದ ಅಂಬೇಡ್ಕರ್, ‘ಸವರ್ಣೀಯ ಹಿಂದೂಗಳು ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ವಿದೇಶೀಯರಿಗೆ ಅಂದಾಜು ಕೊಡುವುದು ತಮ್ಮ ಈ ಬರವಣಿಗೆಯ ಉದ್ದೇಶ’ ಎಂದಿದ್ದರು. ‘ವೆಯ್ಟಿಂಗ್ ಫಾರ್ ಎ ವೀಸಾ’ದ ಎಪ್ಪತ್ತು, ಎಂಬತ್ತು ಪುಟಗಳಲ್ಲಿ ಅನೇಕ ಪುಟಗಳು ಕಾಣೆಯಾಗಿವೆ ಎಂಬ ಅಸ್ಪಷ್ಟ ಮಾಹಿತಿಯೂ ಇದೆ.  ಈ ಆತ್ಮಚರಿತ್ರೆಯ ಕೊನೆಯ ಭಾಗದಲ್ಲಿ ೧೯೩೮ರ ಮಾರ್ಚ್ ೬ರಂದು ಬಾಂಬೆಯ ದಾದರ್ ನಲ್ಲಿ ನಡೆದ ಭಂಗಿ ಸಮುದಾಯದ ಸಭೆಯಲ್ಲಿ ಭಂಗಿ ಹುಡುಗ ಪರ್ಮಾರ್ ಕಾಳಿದಾಸ್ ಶಿವರಾಂ ತಾನು ‘ತಲಾಟಿ’ಯಾಗಿ ನೌಕರಿಗೆ ಸೇರಿದ ಕಾರಣದಿಂದಾಗಿ ಪಟ್ಟ ದಾರುಣ ಅನುಭವಗಳನ್ನು ಹೇಳಿಕೊಂಡಿದ್ದನ್ನು ಅಂಬೇಡ್ಕರ್ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದಿಂದ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ೧೯೩೮ರಿಂದಲೋ, ಅನಂತರವೋ ಬರೆದಿರಬಹುದು ಎಂದು ಊಹಿಸಬಹುದು; ಅಥವಾ ಬಿಡಿಬಿಡಿ ಭಾಗಗಳನ್ನು ಈ ಹಿಂದೆಯೂ ಆಗಾಗ್ಗೆ ಬರೆದಿರಬಹುದು. ಅಂಬೇ‌ಡ್ಕರ್ ನಿರ್ಗಮನದ ನಂತರ ಈ ಭಾಗಗಳು ಪ್ರಕಟವಾದವು.  

ಕುತೂಹಲಕರ ವಿಚಾರವೆಂದರೆ, ಅಂಬೇ‌ಡ್ಕರ್ `ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳನ್ನು ಬರೆದ ನಂತರದ ಕಾಲದಲ್ಲಿ, ೧೯೪೦ರಲ್ಲಿ, ಕನ್ನಡ ಲೇಖಕ ಡಿ. ಗೋವಿಂದದಾಸ್ ತಮ್ಮ ಆತ್ಮಚರಿತ್ರೆಯ ‘ನಾಲ್ಕು ಪಂಕ್ತಿಗಳನ್ನು’ ಬರೆದು ಸುಮ್ಮನಾದರು. ೧೯೪೪ರಲ್ಲಿ ಮತ್ತೆ ಬರವಣಿಗೆ ಮುಂದುವರಿಸಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಮ್ಮನಿಂಗಳ ಗ್ರಾಮದ ಡಿ. ಗೋವಿಂದದಾಸರ ಆತ್ಮಕತೆ ಕೂಡ ಅಪೂರ್ಣವಾಗಿದೆ. ಈ ಪುಟಗಳನ್ನು ಬರೆದು ಕೈಬಿಟ್ಟ ಗೋವಿಂದದಾಸ್ ೮ ಆಗಸ್ಟ್ ೧೯೮೬ರವರೆಗೂ ಬದುಕಿದ್ದರು ಎಂದು ಗೋವಿಂದದಾಸರ ಮಗ ರಾಜಬಾನು ಈಚೆಗೆ ಹೇಳಿದರು. ಆ ನಡುವೆ ಅಂಬೇಡ್ಕರ್ ಬರಹಗಳನ್ನು ಓದಿದ್ದ ಗೋವಿಂದದಾಸರ ಆತ್ಮಕತೆ ಮುಂದುವರಿದಿದ್ದರೆ ಆ ಕಾಲದ ಕರ್ನಾಟಕದ ದಲಿತ ಹಾಗೂ ಸವರ್ಣೀಯ ಸಮಾಜಗಳ ಚರಿತ್ರೆ ಇನ್ನಷ್ಟು ವಿವರವಾಗಿ ದಾಖಲಾಗುತ್ತಿತ್ತು. ಈ ಬರವಣಿಗೆ ಅರ್ಧದಲ್ಲೇ ನಿಂತಿದ್ದು ವಿಷಾದ ಹುಟ್ಟಿಸುತ್ತದೆ. 

ಅಂಬೇಡ್ಕರ್ ಆತ್ಮಚರಿತ್ರೆಯ ಸಿಕ್ಕದ ಪುಟಗಳು ಅಥವಾ ಬರೆಯದ ಪುಟಗಳು ಇನ್ನಷ್ಟು ಆಳವಾದ ವಿಷಾದ ಹುಟ್ಟಿಸುತ್ತವೆ. ಕಾರಣ, ಪ್ರಖರ ವಿದ್ವಾಂಸರಾಗಿದ್ದ ಅಂಬೇಡ್ಕರ್‍ ಅವರ ಪ್ರಾಮಾಣಿಕ ಬರವಣಿಗೆಯಲ್ಲಿ ಆವರೆಗೆ ದಾಖಲಾಗದಿದ್ದ ದಲಿತ ಸಮುದಾಯದ ಅಧಿಕೃತ ಚರಿತ್ರೆ ಬಿಚ್ಚಿಕೊಳ್ಳತೊಡಗಿತ್ತು. ಅಂಬೇಡ್ಕರ್ ಈ ಬರವಣಿಗೆಯನ್ನು ಮುಂದುವರಿಸಲಿದ್ದ ಸೂಚನೆಗಳಿದ್ದವು. ಇದಕ್ಕೂ ಮೊದಲು ಅಂಬೇಡ್ಕರ್ ಲಂಡನ್ನಿನ ದುಂಡುಮೇಜಿನ ಪರಿಷತ್ತಿನ ಸಭೆಗೆ ಹೊರಟಾಗ ಅವರ ಶಾಲಾ ಮೇಷ್ಟರು ಪ್ರೀತಿಯಿಂದ ಪತ್ರ ಬರೆದಿದ್ದರು. ಅದನ್ನು ನೆನೆಯುತ್ತಾ ಅಂಬೇಡ್ಕರ್ ಬರೆಯುತ್ತಾರೆ: ‘ನಾನು ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್‌ಗೆ ಹೊರಟಾಗ ಅವರು ಪ್ರೀತಿಯ ಪತ್ರವೊಂದನ್ನು ಬರೆದಿದ್ದರು. ಮುಂದೊಮ್ಮೆ ನಾನೇನಾದರೂ ಆಟೋಬಯಾಗ್ರಫಿ ಬರೆದರೆ ಆ ಪತ್ರವನ್ನು ಪ್ರಕಟಿಸುತ್ತೇನೆ'. ಅಂದರೆ, ೧೯೩೦ ಅಥವಾ ೧೯೩೨ರ ನಂತರ ಅಂಬೇಡ್ಕರ್ ತಮ್ಮ ಆತ್ಮಚರಿತ್ರಾತ್ಮಕ ಘಟನೆಗಳನ್ನು ಬರೆಯಲಾರಂಭಿಸಿರಬಹುದು. ಸಿದ್ಧಾರ್ಥ ಕಾಲೇಜಿನ ಲೈಬ್ರರಿಯನ್ ಎಸ್. ಎಸ್. ರೇಗೆಯವರಿಗೆ ಸಿಕ್ಕ ಟಿಪ್ಪಣಿಗಳು ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯನ್ನು ಮೂರು ಭಾಗಗಳಲ್ಲಿ ಬರೆಯಹೊರಟಿದ್ದರು ಎಂದು ಸೂಚಿಸುತ್ತವೆ.

ನಿಷ್ಕರುಣಿ ಕಾಲ ಅಂಬೇಡ್ಕರ್ ಅವರಿಗೆ ಸಮಯಾವಕಾಶ ಕೊಡಲಿಲ್ಲ. ಅಂಬೇಡ್ಕರ್ ಬದುಕಿದ್ದಾಗಲೇ ಅವರ ಸಂಬಂಧಿ ಖೈರ್ಮೋಡೆ ಅಂಬೇಡ್ಕರ್ ಜೀವನಚರಿತ್ರೆಯನ್ನು ಬರೆಯಹೊರಟರು. ಖೈರ್ಮೋಡೆಯವರ ನಿರೂಪಣೆಯ ಮೊದಲ ಸಂಪುಟದ ವಿವರಗಳನ್ನು ಅಂಬೇಡ್ಕರ್ ಗಮನಿಸಿದಂತಿದೆ. ಧನಂಜಯ್ ಕೀರ್ ಅಂಬೇಡ್ಕರ್ ಜೀವನಚರಿತ್ರೆ ಬರೆಯಹೊರಟಾಗ ಅಂಬೇಡ್ಕರ್ ತಮ್ಮ ಜೀವನದ ಕೆಲವು ವಿವರಗಳನ್ನು ಹೇಳಿದಂತಿದೆ. ಆದರೆ ಧನಂಜಯ ಕೀರ್ ಬರೆದ ‘ಡಾ. ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಜೀವನಚರಿತ್ರೆಯಲ್ಲಿ ಅನೇಕ ದೋಷಗಳು ಕಾಣುತ್ತವೆ. ಸಾವರ್ಕರ್ ಜೀವನಚರಿತ್ರೆಯನ್ನೂ ಬರೆದಿರುವ ಕೀರ್ ಅವರ ಸೈದ್ಧಾಂತಿಕ ಗೊಂದಲಗಳು ಹಲವೆಡೆ ಎದ್ದು ಕಾಣುತ್ತವೆ. ಆದರೂ ಅಂಬೇಡ್ಕರ್ ಕುರಿತು ಹೆಚ್ಚಿನ ವಿವರಗಳೇ ಇಲ್ಲದಿದ್ದ ಕಾಲದಲ್ಲಿ ಕೀರ್ ಬರೆದ ಜೀವನಚರಿತ್ರೆಗೆ ಒಂದು ಮಟ್ಟದ ಮಹತ್ವವಿದೆ. ಆದರೆ ಕೀರ್ ಮಾಡುವ ಕೆಲ ಬಗೆಯ ವಿಶ್ಲೇಷಣೆ, ವ್ಯಾಖ್ಯಾನಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಗತ್ಯವಿದೆ. 

ನಂತರ ಅಂಬೇಡ್ಕರ್ ಅವರ ಹಲ ಬಗೆಯ ಜೀವನಚರಿತ್ರೆಗಳು ಬಂದವು: ಖೈರ್ಮೋಡೆಯವರ ‘ಬಾಬಾಸಾಹೇಬ್ ಡಾ. ಅಂಬೇಡ್ಕರ್: ಜೀವನ್ ಔರ್ ಚಿಂತನ್’ ಎಂಬ ಮರಾಠಿ, ಹಿಂದಿ ಸಂಪುಟಗಳು; ವಸಂತ ಮೂನ್ ಬರೆದ Dr. Babasaheb Ambedkar; ಅಶೋಕ್ ಗೋಪಾಲ್ ಅವರ A Part Apart: The Life and Thought of B.R. Ambedkar; ಶಶಿ ಥರೂರ್ ಬರೆದ Ambedkar: A Life; ಆನಂದ್ ತೇಳ್‌ತುಂಬ್ಡೆಯವರ The Iconoclast: Reflective Biography of Dr. Babasaheb Ambedkar ಇತ್ಯಾದಿ. 

ಇವೆಲ್ಲವನ್ನೂ ಕುರಿತು ಟಿಪ್ಪಣಿ ಮಾಡುತ್ತಿರುವಾಗಲೇ ತುಂಬಾಡಿ ರಾಮಯ್ಯನವರ ಆತ್ಮಚರಿತ್ರೆ ‘ಮಣೆಗಾರ’ಕ್ಕೆ ಇಪ್ಪತ್ತೈದು ವರ್ಷ ತುಂಬಿತೆಂದು ಗೆಳೆಯರು ಹೇಳಿದರು. ‘ಮಣೆಗಾರ’ ಕುರಿತು ಇಪ್ಪತ್ತೈದು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾದ ’ಗಾಳಿ ಬೆಳಕು’ ಅಂಕಣದ ಬರಹವನ್ನು ಗೆಳೆಯರಾದ ಚಂದ್ರಶೇಖರ ಐಜೂರ್, ಶ್ರೀಧರ್ ತಮ್ಮ ‘ಫೇಸ್ ಬುಕ್’ನಲ್ಲಿ ಪ್ರಕಟಿಸಿ ಮತ್ತೆ ಲೋಕಕ್ಕೆ ತಲುಪಿಸಿದ್ದರು. ಈ ನೆಪದಲ್ಲಿ ಅಂಬೇಡ್ಕರ್ ಆತ್ಮಚರಿತ್ರೆ ಪ್ರೇರೇಪಿಸಿದ ನನ್ನ ಈಚಿನ ಟಿಪ್ಪಣಿಗಳ ಭಾಗಗಳನ್ನು ಇಲ್ಲಿ ಕೊಟ್ಟಿರುವೆ. ಈ ಟಿಪ್ಪಣಿಗಳು ತುಂಬಾಡಿ ರಾಮಯ್ಯನವರ ‘ಮಣೆಗಾರ’ದವರೆಗೂ ಚಾಚಿಕೊಳ್ಳಬಲ್ಲವು ಎಂದು ಊಹಿಸುವೆ. ‘ಮಣೆಗಾರ’ದ ಬರವಣಿಗೆ ರಾಮಯ್ಯನವರ ಮುಂದಿನ ಪುಸ್ತಕಗಳನ್ನೂ ಬರೆಸಿದಂತಿದೆ.  

ಅಂದರೆ, ಆತ್ಮಚರಿತ್ರೆಯ ಬರವಣಿಗೆಯ ಪ್ರಯತ್ನ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಬರೆಯುವುದು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮುಂದೆ ಸಾಗುವುದಿಲ್ಲವೆಂದು ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹರಿದರೂ ಹರಿಯಬಹುದು! ಆದರೆ ಅಂಥ ಬರವಣಿಗೆಯ ಸುಳ್ಳು, ನಿಜ, ಉತ್ಪ್ರೇಕ್ಷೆಗಳ ಸ್ವ-ಪರೀಕ್ಷೆ ಕೂಡ ಬರವಣಿಗೆಯ ಅತ್ಯಗತ್ಯ ಭಾಗವಾಗಿರಬೇಕಾಗುತ್ತದೆ. 

ಇಂಥ ಸ್ವ-ಪರೀಕ್ಷೆ ಎಲ್ಲ ಜಾತಿ, ವರ್ಗ, ಸಮುದಾಯಗಳ ಲೇಖಕ, ಲೇಖಕಿಯರ ಆತ್ಮಚರಿತ್ರೆಗಳ ಪ್ರಾಥಮಿಕ ಅಗತ್ಯವಾಗಿರಬೇಕು ಹಾಗೂ ಮೂಲ ತುಡಿತವಾಗಿರಬೇಕು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ದಲಿತ ಆತ್ಮಕತೆಯಿರಲಿ, ಮಹಿಳಾ ಆತ್ಮಕತೆಯಿರಲಿ, ಯಾರದೇ ಆತ್ಮಕತೆಯಿರಲಿ, ಬರೆವವರಲ್ಲಿ ನಿಷ್ಠುರ ಸ್ವ-ಪರೀಕ್ಷೆಯಿಲ್ಲದಿದ್ದರೆ ಅವು ಸಾರ್ವಜನಿಕ ಭಾಷಣಗಳಾಗುತ್ತವೆ. ಆತ್ಮಕತೆ ’ಆತ್ಮಕಹಳೆ’ಯಾಗದಂತೆ ಅಂಬೇಡ್ಕರ್ ಅಪೂರ್ಣ ಆತ್ಮಚರಿತ್ರೆಯ ಪುಟಗಳು ನಮ್ಮನ್ನು ಎಚ್ಚರಿಸುತ್ತಿರಲಿ!

blog
09 Mar 2025 ನಾಟಕಕಾರ್ತಿಯರು, ಅನುವಾದಕಿಯರು

‘ನಾನು ಬರೆಯಹೊರಟ ಪುಸ್ತಕ ಇದಲ್ಲ. ನನ್ನ ರಿಸರ್ಚಿನ ಅರ್ಧ ಹಾದಿಯಲ್ಲಿ ನಾನು ಮನಸ್ಸು ಬದಲಿಸಿದೆ’.

ಇದು ಡೇಲ್ ಸ್ಪೆಂಡರ್ ಅವರ ‘ಮದರ್‍ಸ್ ಆಫ್ ದಿ ನಾವೆಲ್’ ಪುಸ್ತಕದ ಮುನ್ನುಡಿಯ ಮೊದಲ ಸಾಲು. ಸ್ತ್ರೀವಾದಿ ಚಿಂತಕಿ ಡೇಲ್ ಸ್ಪೆಂಡರ್ ಬರೆಯಲು ಹೊರಟದ್ದು ಆರಂಭದ ಕಾದಂಬರಿಕಾರ್ತಿಯರ ಬಗ್ಗೆ; ಕಾದಂಬರಿಗೂ ಮಹಿಳೆಯರಿಗೂ ಇರುವ ಸಂಬಂಧದ ಬಗ್ಗೆ. ಕೊನೆಗೆ ಅವರು ಬರೆದದ್ದೇ ಬೇರೆ ಪುಸ್ತಕ!

ಕಳೆದ ಭಾನುವಾರ ಹಿಸ್ಟರಿ ಲಿಟರೇಚರ್ ಫೆಸ್ಟಿವಲ್‌ನಲ್ಲಿ ’ಕನ್ನಡ ನಾಟಕ, ರಂಗಭೂಮಿ ಮತ್ತು ಪಶ್ಚಿಮದ ಸಂಬಂಧ’ ಕುರಿತು ಮಾತಾಡಲು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ನನಗೂ ನಾನು ಹೇಳಬೇಕಾದ ಮಾತುಗಳು ಇವಲ್ಲ ಎನ್ನಿಸತೊಡಗಿದವು. ಅದಕ್ಕೆ ಮೇಲೆ ಕೊಟ್ಟಿರುವ ಡೇಲ್ ಸ್ಪೆಂಡರ್ ಮಾತು ಕಾರಣವಾಗಿರಲಿಲ್ಲ; ಬದಲಿಗೆ ಅವರಂಥ ಸ್ತ್ರೀವಾದಿಗಳು ಕಳೆದ ಕೆಲವು ದಶಕಗಳಿಂದ ನನ್ನಂಥವರಿಗೆ ಕಲಿಸಿದ್ದ ಎಚ್ಚರ ಕಾರಣವಾಗಿತ್ತು. ಆ ಎಚ್ಚರದ ಫಲವಾಗಿ, ಕನ್ನಡ ನಾಟಕ ಚರಿತ್ರೆಯ ಎರಡು ಪುಸ್ತಕಗಳನ್ನು ಮತ್ತೆ ಮತ್ತೆ ಗಮನಿಸಿದೆ. ಎರಡರಲ್ಲೂ ನಾಟಕಕಾರ್ತಿಯರ ಬಗ್ಗೆ ಹೆಚ್ಚಿನ ಉಲ್ಲೇಖವಿರಲಿಲ್ಲ. ಮೊದಲನೆಯದು, ತ.ಸು. ಶಾಮರಾಯರ ‘ಕನ್ನಡ ನಾಟಕ’. ಎರಡನೆಯದು, ಕೆ. ಮರುಳಸಿದ್ದಪ್ಪನವರ ‘ಆಧುನಿಕ ಕನ್ನಡ ನಾಟಕ’. ಇದೇನು ಈ ಕತೆ… ಎಂದುಕೊಂಡು ಅಕ್ಕಮಹಾದೇವಿ ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿರುವ ನಾಟಕ ಸಂಪುಟ ನೋಡಿದೆ. ಅಲ್ಲಿ ನೂರಾರು ನಾಟಕಕಾರ್ತಿಯರ ಹೆಸರುಗಳಿದ್ದವು. ನೂರಾರು ನಾಟಕಗಳ ಉಲ್ಲೇಖಗಳಿದ್ದವು.

‘ಇದೇಕೆ ಹೀಗೆ?’ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿತ್ತು: ಮಹಿಳೆಯರು ಬರೆದ ನಾಟಕ ಚರಿತ್ರೆಯಲ್ಲಿ ನಾಟಕಕಾರ್ತಿಯರ ಸಾಧನೆಗಳಿವೆ; ಪುರುಷರು ಬರೆದ ನಾಟಕ ಚರಿತ್ರೆಗಳಲ್ಲಿ ಬಹುತೇಕವಾಗಿ ನಾಟಕಕಾರರ ಚರ್ಚೆಯೇ ಇದೆ. ಈ ಸಮಸ್ಯೆ ಇಂಗ್ಲಿಷ್ ಸಾಹಿತ್ಯ ಚರಿತ್ರೆ ಬರೆದ ಪುರುಷ ಚರಿತ್ರಕಾರರಲ್ಲೂ ಇತ್ತು. ಆ ಸಾಹಿತ್ಯ ಚರಿತ್ರಕಾರರು ಹೇಳಿದ್ದನ್ನೇ ತಲೆಯಲ್ಲಿಟ್ಟುಕೊಂಡು ಡೇಲ್ ಸ್ಪೆಂಡರ್ ಕೂಡ ಹತ್ತೊಂಬತ್ತನೇ ಶತಮಾನದ ಮುಖ್ಯ ಇಂಗ್ಲಿಷ್ ಕಾದಂಬರಿಕಾರ್ತಿ ಜೇನ್ ಆಸ್ಟಿನ್‌‌ ಅವರಿಗಿಂತ ಮೊದಲು ಹೇಳಿಕೊಳ್ಳುವಂಥ ಕಾದಂಬರಿಕಾರ್ತಿಯರಿರಲಾರರು ಎಂದುಕೊಂಡೇ ಮಹಿಳಾ ಕಾದಂಬರಿಗಳ ಬಗ್ಗೆ ಸಂಶೋಧನೆ ಶುರು ಮಾಡಿದರು. ಆದರೆ ಕೊನೆಗೆ, ಜೇನ್ ಆಸ್ಟಿನ್ ೧೮೧೧ರಲ್ಲಿ ಪ್ರಕಟಿಸಿದ ’ಸೆನ್ಸ್ ಅಂಡ್ ಸೆನ್ಸಿಬಲಿಟಿ’ ಕಾದಂಬರಿ ಬರುವುದಕ್ಕಿಂತ ೧೯೦ ವರ್ಷಗಳ ಮೊದಲೇ Lady Mary Wroath ಬರೆದ Urania ಮೊದಲ ಇಂಗ್ಲಿಷ್ ಕಾದಂಬರಿಯೆಂಬುದನ್ನು ಕಂಡುಕೊಂಡರು. ಕೊನೆಗೆ ಹದಿನೇಳನೆಯ ಶತಮಾನದಿಂದಲೇ ಕಾದಂಬರಿಗಳನ್ನು ಬರೆದ ಹಳೆಯ ಕಾದಂಬರಿಕಾರ್ತಿಯರ ಬಗ್ಗೆ ಬರೆದು ’ಮದರ್‍ಸ್ ಆಫ್ ದ ನಾವೆಲ್’ ಪುಸ್ತಕ ಬರೆದು ಮುಗಿಸಿದರು.  ಸ್ತ್ರೀವಾದಿ ಚಿಂತಕಿ ಎಲ್. ಜಿ. ಮೀರಾ ಅವರ ಸಹಿಯಿರುವ ಈ ಪುಸ್ತಕ ನನ್ನ ಕೈ ಸೇರಿದ್ದು ಕೂಡ ತಮಾಷೆಯಾಗಿದೆ. ಅದೆಲ್ಲ ಇಲ್ಲಿ ಅನಗತ್ಯ!

’ಮದರ್‍ಸ್ ಆಫ್ ದಿ ನಾವೆಲ್’ನಲ್ಲಿ ಡೇಲ್ ಸ್ಪೆಂಡರ್ ಶೋಧಿಸಿದ ಹತ್ತಾರು ಕಾದಂಬರಿಕಾರ್ತಿಯರಿಗಿಂತ ಮೊದಲು ಜಪಾನಿನ ಲೇಡಿ ಮರಸಕಿ ಶಿಕಿಬು ಬರೆದ ’ದ ಟೇಲ್ ಆಫ್ ಗೆಂಜಿ’ (೧೦೧೧) ಜಗತ್ತಿನ ಮೊದಲ ಕಾದಂಬರಿ ಎಂದು ನಂತರದ ಸಂಶೋಧನೆಗಳು ಹೇಳುತ್ತವೆ. ಅಂದರೆ, ಕಾದಂಬರಿಯ ತಾಯಿ ಹೆಣ್ಣೇ ಎಂದಂತಾಯಿತು. ನನ್ನ ಪ್ರಕಾರ ಕಾದಂಬರಿ ನಿಜಕ್ಕೂ ಹೆಣ್ಣು ಪ್ರಕಾರವೇ.

ಇದೆಲ್ಲದರ ಹಿನ್ನೆಲೆಯಲ್ಲಿ ಮೊನ್ನೆ ಕನ್ನಡ ರಂಗಭೂಮಿ ಮತ್ತು ಪಶ್ಚಿಮದ ಬಗ್ಗೆ ಟಿಪ್ಪಣಿ ಮಾಡುತ್ತಿದ್ದಾಗ ಮಹಿಳೆಯರ ನಾಟಕಗಳ ಸಾಮಾಜಿಕ-ಸಾಂಸ್ಕೃತಿಕ ಮಹತ್ವದ ಅರಿವು ಸಾಹಿತ್ಯ ಚರಿತ್ರಕಾರರಿಗೆ ಅಗತ್ಯವಾಗಿ ಇರಬೇಕಾಗಿತ್ತು ಎಂದು ನನಗನ್ನಿಸಿದ್ದು ಸಹಜವಾಗಿತ್ತು. ಈ ಎರಡೂ ನಾಟಕ ಚರಿತ್ರೆಗಳಲ್ಲಿ ಮಹಿಳಾ ನಾಟಕ-ರಂಗಭೂಮಿ ಕುರಿತ ಅಧ್ಯಾಯವೊಂದು ಇರಲೇಬೇಕಾಗಿತ್ತು. ಸ್ತ್ರೀವಾದಿ ವಿಮರ್ಶೆಯ ಆರಂಭ ಘಟ್ಟದ ಒಂದು ಗುರಿಯೆಂದರೆ, ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದ ಮಹಿಳೆಯರ ಕೃತಿಗಳನ್ನು ಹುಡುಕಿ ದಾಖಲಿಸುವುದು; ಆ ಕೃತಿಗಳನ್ನು ಮರುಜೀವಗೊಳಿಸುವುದು. ಕನ್ನಡ ಸ್ತ್ರೀವಾದಿಗಳು, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟಗಳ ಲೇಖಕಿಯರು ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಮಹಿಳಾ ನಾಟಕ, ಮಹಿಳಾ ರಂಗಭೂಮಿ ಕುರಿತು ಡಾ. ಕಾವ್ಯಶ್ರೀ, ಡಾ. ಗೀತಾ ಸಿದ್ದಿ ಬರೆದಿರುವ ಪಿಎಚ್.ಡಿ. ಥೀಸಿಸ್‌ಗಳು ಈ ಕೆಲಸ ಮಾಡಲೆತ್ನಿಸಿವೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕೂಡ ಇಂಥದೊಂದು ಸಂಶೋಧನೆ ನಡೆದಿತ್ತೆಂದು ಕೇಳಿರುವೆ.

ಮಾರ್ಚ್ ೮ರ ಮಹಿಳಾ ದಿನಾಚರಣೆಯ ಮುನ್ನಾ ದಿನ ಬರೆಯುತ್ತಿರುವ ಈ ಟಿಪ್ಪಣಿಗೆ ಸ್ತ್ರೀವಾದಿ ದನಿ ತಂತಾನೇ ಬಂದಿದ್ದು ಅಚ್ಚರಿಯಲ್ಲ! ಈ ಅಂಕಣದ ಶುರುವಿನಲ್ಲಿ ಹೇಳಿದ ಭಾಷಣದ ಟಿಪ್ಪಣಿಗಳಿಗಾಗಿ ಇಂಗ್ಲಿಷಿನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮಹಿಳೆಯರ ವಿವರಗಳನ್ನೂ ಹುಡುಕಿದೆ. ವಾಸಂತಿ ಪಡುಕೋಣೆ ೧೯೩೪ರಲ್ಲೇ ರಷ್ಯಾದ ಆಂಟನ್ ಚೆಕಾಫನ ’ಅಂಕಲ್ ವ್ಯಾನ್ಯಾ’ ನಾಟಕವನ್ನು ‘ವೇಣು ಮಾವ’ ಎಂದು ಅನುವಾದಿಸಿದ್ದರು. ಹೀಗೇ ಹುಡುಕುತ್ತಾ ಹೋದಂತೆಲ್ಲ ಮಹಿಳೆಯರು ಅನುವಾದಿಸಿದ ನೂರಾರು ನಾಟಕಗಳು ಕಂಡವು. ತೇಜಸ್ವಿನಿ ನಿರಂಜನ, ವೈದೇಹಿ ಮೊದಲಾದವರು ಶೇಕ್‌ಸ್ಪಿಯರನ ನಾಟಕಗಳನ್ನು ಕನ್ನಡಿಸಿದ್ದರು. ಇಂಗ್ಲಿಷಿನ ಮೊದಲ ಮಹಿಳಾ ವಿಮೋಚನೆಯ ನಾಟಕ ಎನ್ನಲಾದ ಇಬ್ಸನ್‌ನ ’ಡಾಲ್ಸ್ ಹೌಸ್’ ನಾಟಕವನ್ನು ಎಸ್. ಮಾಲತಿ ’ವಾಸಂತಿ’ ಎಂದು ಅನುವಾದಿಸಿದರು; ಮೀರಾಮೂರ್ತಿ ’ಬೊಂಬೆ ಮನೆ’ ಎಂದು ಅನುವಾದಿಸಿದದರು. ಮಾಲತಿ ಬ್ರೆಕ್ಟ್ ನಾಟಕವನ್ನು ಅನುವಾದಿಸಿದರು. ಹೀಗೇ ನೂರಾರು ಅನುವಾದಗಳ ಪಟ್ಟಿ ಬೆಳೆಯುತ್ತದೆ.

ಕನ್ನಡ ಲೇಖಕಿಯರು ಪಶ್ಚಿಮದಿಂದ ಕನ್ನಡಕ್ಕೆ ತಂದ ಈ ನಾಟಕಗಳನ್ನು ಗಮನಿಸುತ್ತಿರುವಾಗ ಒಂದು ಅಂಶ ನನ್ನನ್ನು ಚಕಿತಗೊಳಿಸಿತು: ಈ ಅನುವಾದಕಿಯರು ಬಹುತೇಕ ಪಶ್ಚಿಮದ ಗಂಡಸರ ನಾಟಕಗಳನ್ನೇ ಅನುವಾದಿಸಿದ್ದಾರಲ್ಲ! ತಂತಮ್ಮ ಕಾಲದಲ್ಲಿ ಪಶ್ಚಿಮದ ಯಾವ ನಾಟಕಗಳು ಪ್ರಸಿದ್ಧವಾಗಿವೆಯೋ ಅವನ್ನು ಈ ಲೇಖಕಿಯರು ಕನ್ನಡಿಸಿರುವುದು ಸಹಜ. ಬಂಗಾಳಿಯ ಮಹಾಶ್ವೇತಾದೇವಿಯವರ ’ರುಡಾಲಿ’ ಕತೆಯನ್ನು ದೀಪಾ ಗಣೇಶ್ ನಾಟಕರೂಪ ಮಾಡಿದ್ದು, ಸಿ.ಜಿ.ಕೆ. ನಿರ್ದೇಶಿಸಿದ್ದು; ದ್ರೌಪದಿ ಕುರಿತ ಶಾವೊಲಿ ಮಿತ್ರರ ’ನಾಥವತಿ ಅನಾಥವತ್’ ನಾಟಕವನ್ನು ಮೀರಾ ಚಕ್ರವರ್ತಿ ಹಾಗೂ ಮುಕುಂದರಾಜ್ ’ನಾಥರಿದ್ದೂ ಅನಾಥೆ’ ಎಂದು ನನ್ನದೊಂದು ನಾಟಕ ಸಂಪುಟಕ್ಕೆ ಅನುವಾದಿಸಿದ್ದು ನೆನಪಾಯಿತು.

ಭಾರತೀಯ ಮಹಿಳಾ ನಾಟಕಗಳ ಇನ್ನಿತರ ಕನ್ನಡಾನುವಾದಗಳೂ, ರಂಗರೂಪಗಳೂ ನೆನಪಾದವು. ಆದರೆ ಪಶ್ಚಿಮದ ನಾಟಕಕಾರ್ತಿಯರ ನಾಟಕಗಳನ್ನು ನಮ್ಮ ಲೇಖಕಿಯರು ಅನುವಾದಿಸಿರುವ ವಿವರಗಳು ಸಿಗಲಿಲ್ಲ. ಈ ಬಗ್ಗೆ ನಾಟಕ, ರಂಗಭೂಮಿಗಳಲ್ಲಿ ತೊಡಗಿರುವ ಲೇಖಕಿಯರಾದ ಹೆಚ್.ಎಲ್. ಪುಷ್ಪ, ಮಮತಾ ಅರಸೀಕೆರೆಯವರನ್ನು ಕೇಳಿದೆ. ತಕ್ಷಣ ಅವರಿಗೂ ವಿವರಗಳು ಹೊಳೆಯಲಿಲ್ಲ. ಈ ಅಂಕಣದ ಗಂಭೀರ ಓದುಗಿ-ಓದುಗರಿಗೆ ಈ ಪ್ರಶ್ನೆಯನ್ನು ದಾಟಿಸಿ, ಉತ್ತರಕ್ಕಾಗಿ ಕಾಯುವೆ.

‘ಮಾಡುವುದು ಮಾಡುವುದು ಮನ ಮುಟ್ಟಿ’ ಎಂದು ಯಾವುದನ್ನೇ ಆಗಲಿ ಮಾಡಿದರೆ ಅಷ್ಟಿಷ್ಟಾದರೂ ಅರ್ಥಪೂರ್ಣವಾದ ಹಾದಿಗಳು ತೆರೆಯುತ್ತವೆ ಎಂಬುದು ನನ್ನ ನಿತ್ಯದ ಅನುಭವ. ಮೊನ್ನೆಯ ಸೆಮಿನಾರ್ ಹುಡುಕಾಟದಲ್ಲಿ ಎದ್ದು ಕಂಡ ಒಂದು ವಿವರ ನಮ್ಮ ಸ್ತ್ರೀವಾದಿಗಳ ಅಗತ್ಯ ಗಮನಕ್ಕೆ ಅರ್ಹವಾಗಿದೆ. ಅದೇನೆಂದರೆ, ಕನ್ನಡದಲ್ಲಿ ಸ್ತ್ರೀವಾದ ಭದ್ರವಾಗಿ ಗಟ್ಟಿಯಾಗಿ ವಿಕಾಸಗೊಳ್ಳುವ ಮೊದಲೇ ಇಳಾ ವಿಜಯಾ ಅವರ ’ಎಲ್ಲಿದ್ದೀರಿ ನೀವು ಎಲ್ಲಿದ್ದೀರಿ’ ಮತ್ತು ಮಾಲತಿಯವರ ’ಕೂಲಿ ಹೆಣ್ಣು’ ಎಂಬ ಬೀದಿ ನಾಟಕಗಳು ಸ್ತ್ರೀನೋಟದಿಂದ ಸಮಾಜವನ್ನು ವಿಶ್ಲೇಷಿಸುವ ಆರಂಭದ ಮುಖ್ಯ ಪ್ರಯತ್ನಗಳಾಗಿವೆ. ಈ ನಾಟಕಗಳ ಸ್ತ್ರೀಪರ ನೋಟದ ಹಿಂದೆ ಸ್ತ್ರೀವಾದವಿದೆ; ಅದಕ್ಕೆ ಪೂರಕವಾಗಿ ಸಮಾಜವಾದ, ಮಾರ್ಕ್ಸ್‌ವಾದ, ಸಮುದಾಯ, ಬೀದಿ ನಾಟಕಗಳ ತಾತ್ವಿಕತೆ…ಇವು ಕೂಡ ಕೆಲಸ ಮಾಡಿವೆ; ಇವೆಲ್ಲವೂ ಸ್ತ್ರೀ ದೃಷ್ಟಿಕೋನದಿಂದ ಸಮಾಜವನ್ನು ನೋಡುವಂತೆ ಈ ಇಬ್ಬರೂ ಆಕ್ಟಿವಿಸ್ಟ್-ನಾಟಕಕಾರ್ತಿಯರನ್ನು ಪ್ರೇರೇಪಿಸಿವೆ. ೧೯೭೫ರಿಂದ-೧೯೮೫ರ ನಡುವಣ ದಶಕವನ್ನು ಇಡೀ ಜಗತ್ತಿನಲ್ಲಿ ಮಹಿಳಾ ದಶಕವೆಂದು ಘೋಷಿಸಿದ್ದು ಕೂಡ ಇಲ್ಲಿ ನೆನಪಾಗುತ್ತದೆ.

ಇದಕ್ಕೂ ಮುನ್ನ ತಿರುಮಲಾಂಬ, ಕಲ್ಯಾಣಮ್ಮ ಅವರಿಂದ ಹಿಡಿದು ಸುನಂದಮ್ಮ, ಎಸ್, ಸಂಧ್ಯಾ, ಮಲ್ಲಿಕಾ ಘಂಟಿ, ವೈದೇಹಿ, ಹೇಮಾ, ದು. ಸರಸ್ವತಿ, ಎಚ್. ಎಲ್. ಪುಷ್ಪ, ಮಮತಾ ಸಾಗರ ಮುಂತಾದ ಹತ್ತಾರು ನಾಟಕಕಾರ್ತಿಯರು ಬಂದಿದ್ದಾರೆ. ಜಯಶ್ರೀ, ಪ್ರೇಮಾ ಕಾರಂತ, ಮಂಗಳಾ, ದಾಕ್ಷಾಯಿಣಿ ಭಟ್, ವಿದ್ಯಾ, ಸುಮತಿ, ಚಂಪಾ ಶೆಟ್ಟಿ, ಛಾಯಾ ಭಾರ್ಗವಿ, ಸುಮತಿ, ಗಿರಿಜಾ ಸಿದ್ದಿ ಮೊದಲಾದ ವಿಶಿಷ್ಟ ರಂಗ ನಿರ್ದೇಶಕಿಯರು ಕನ್ನಡ ರಂಗಭೂಮಿಯನ್ನು ರೂಪಿಸಿದ್ದಾರೆ.

ಇವನ್ನೆಲ್ಲ ಕುರಿತು ವ್ಯವಸ್ಥಿತವಾಗಿ, ಸಮಗ್ರವಾಗಿ, ವಸ್ತನಿಷ್ಠವಾಗಿ ಚಿಂತಿಸಲು ಈ ಸಲದ ಮಹಿಳಾ ದಿನ ಎಲ್ಲರಿಗೂ ಪ್ರೇರಣೆಯಾಗಲಿ. ಕೊನೆಯ ಪಕ್ಷ ಮುಂದಿನ ವರ್ಷದ ಹೊತ್ತಿಗೆ ಈ ಕುರಿತ ಗಂಭೀರ ಅಧ್ಯಯನಗಳು, ಪುಸ್ತಕಗಳು ಹೊರಬರುವಂತಾಗಲಿ! ನಾಟಕಕಾರ್ತಿಯರು, ಅನುವಾದಕಿಯರು, ಕೃತಿಗಳು, ರಂಗನಿರ್ದೇಶಕಿಯರು, ನಟಿಯರು ಇವೆಲ್ಲದರ ಒಂದು ಸುದೀರ್ಘ, ಸಮಗ್ರ ಸಮಕಾಲೀನ ಪಟ್ಟಿಯಾದರೂ ಮೊದಲು ಬರಲಿ. ಈ ಪಟ್ಟಿ ಡಿಜಿಟಲೈಸ್ ಆಗಿ ಸದಾ ಅಪ್ ಡೇಟ್ ಆಗುತ್ತಿರಲಿ. 

blog
02 Mar 2025 ಬಾನು-ದೀಪಾ ಜೋಡಿಯ ಬುಕರ್ ಜಿಗಿತ!

ಕನ್ನಡ ಲೇಖಕಿ ಬಾನು ಮುಷ್ತಾಕ್ ಹೆಸರು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ದೀಪಾ ಭಸ್ತಿ ಮಾಡಿದ ಬಾನು ಮುಷ್ತಾಕ್ ಅವರ ಹನ್ನೆರಡು ಕತೆಗಳ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್’ ೨೦೨೫ರ ಬುಕರ್ ಪ್ರಶಸ್ತಿಯ ಅಂತಿಮ ಹದಿಮೂರು ಪುಸ್ತಕಗಳ ‘ಲಾಂಗ್ ಲಿಸ್ಟ್‌’ಗೆ ಜಿಗಿದಿದೆ. ಈ ಜಿಗಿತ ಕುರಿತ ಖುಷಿಯನ್ನು ಲೇಖಕಿ ಶಾಕಿರಾ ಖಾನುಂ ಜೊತೆ ಮಾತಾಡುತ್ತಿದ್ದರೆ, ಅವರ ಸಂಭ್ರಮ ನನ್ನ ಖುಷಿಗಿಂತ ಜೋರಾಗಿತ್ತು. ಕಾರಣ, ಅವರು ಬರೆಯಬಹುದಾಗಿದ್ದ ಕತೆಗಳನ್ನು ಬಾನು ಬರೆದಿದ್ದರು. ತಮ್ಮ ಪುಸ್ತಕವನ್ನು ಪ್ರಶಸ್ತಿಗೆ ಕಳಿಸಿದ್ದು ಕೂಡ ಗೊತ್ತಿರದ ಬಾನು ಅವರಿಗೆ ಇದೆಲ್ಲ ಅಚ್ಚರಿ ತಂದಂತಿತ್ತು. 

ದೆಹಲಿಯ ಪ್ರಕಾಶನ ಸಂಸ್ಥೆಯ ಗೆಳೆಯರೊಬ್ಬರು ಬಾನು ಮುಷ್ತಾಕರ ಕತೆಗಳ ಬಗ್ಗೆ ನನ್ನನ್ನು ಕೇಳಿದಾಗ, ಹಿಂದೊಮ್ಮೆ ಓದಿದ್ದ ಅವರ ಕತೆಗಳಲ್ಲಿರುವ ಬಂಡಾಯದ ಸಹಜತೆ, ಅನಿವಾರ್ಯತೆ, ಪ್ರಾಮಾಣಿಕತೆ ಎಲ್ಲವೂ ನೆನಪಾದವು. ಬಾನು ಕತೆಗಳಲ್ಲಿ ಬರುವ ಮುಸ್ಲಿಂ ಸಮುದಾಯದ ಕಷ್ಟ ಸುಖ, ಆಧುನಿಕ ಮುಸ್ಲಿಂ ಹೆಣ್ಣುಗಳ ತಳಮಳಕ್ಕೆ ಅವರು ದನಿಯಾಗಿದ್ದು ಇವೆಲ್ಲದರ ಬಗ್ಗೆ ಅವರಿಗೆ ಹೇಳಿದೆ. ಆ ಕತೆಗಳನ್ನು ಈಗ ಓದಿದರೆ ಅವುಗಳ ಕಲಾತ್ಮಕ ಮಹತ್ವದ ಬಗ್ಗೆ ಏನನ್ನಿಸಬಹುದು ಎಂಬ ಬಗ್ಗೆ ನನಗೆ ಗ್ಯಾರಂಟಿಯಿರಲಿಲ್ಲ. ಆದರೆ ಈ ಕತೆಗಳಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿರುವ ಸಾಂಸ್ಕೃತಿಕ-ಸಾಮಾಜಿಕ ಮಹತ್ವದ ಬಗ್ಗೆ ಖಾತ್ರಿಯಿದೆ ಎಂಬುದನ್ನು ಅವರಿಗೆ ಒತ್ತಿ ಹೇಳಿದೆ. 

ಬಾನು ಮುಷ್ತಾಕ್ ಈ ಕತೆಗಳ ಹೊರಗೆ ಮಾಡಿರುವ ಹೋರಾಟಗಳು, ಲಾಯರ್ ಆಗಿ ಅವರು ಮಾಡಿರುವ ಸಮುದಾಯದ ಕೆಲಸಗಳು, ಅವರು ಎದುರಿಸಿರುವ ಮೂಲಭೂತವಾದಿಗಳ ಕಿರಿಕಿರಿಗಳು… ಇವೆಲ್ಲವೂ ಅವರನ್ನು ಕನ್ನಡದ ಅನನ್ಯ ಆಕ್ಟಿವಿಸ್ಟ್-ಲೇಖಕಿಯಾಗಿಸಿವೆ. ಅದರಲ್ಲೂ ಮುಸ್ಲಿಂ ಸಮುದಾಯದ ಹೆಣ್ಣೊಬ್ಬಳು ಲೇಖನಿ ಹಿಡಿಯುವುದೇ ಒಂದು ‘ಆಕ್ಟಿವಿಸಂ’ ಎನ್ನುವಂತಿದ್ದ ಇಪ್ಪತ್ತನೆಯ ಶತಮಾನದ ಎಂಬತ್ತು-ತೊಂಬತ್ತರ ದಶಕದ ಕಾಲದಲ್ಲಿ ಬಾನು ದಿಟ್ಟವಾದ ಕತೆ, ವರದಿ, ವಿಶ್ಲೇಷಣೆಗಳನ್ನು ಬರೆದ ರೀತಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಾಗಲು ಅತ್ಯಂತ ಅರ್ಹವಾಗಿದೆ.

ಒಂದು ಪುಸ್ತಕ ಬರೆದ ನಂತರ ಅಥವಾ ಅದು ಇಂಗ್ಲಿಷಿಗೆ ಅನುವಾದವಾದ ನಂತರ ಅದಕ್ಕೆ ಸ್ಪಂದಿಸುವ ಓದುಗ, ಓದುಗಿಯರನ್ನು ಹುಡುಕುವುದನ್ನು ಬಿಟ್ಟು ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಜಾಡು ಹುಡುಕುವ ಲೇಖಕ, ಲೇಖಕಿಯರು ಜಗತ್ತಿನ ಎಲ್ಲೆಡೆ ಇರುತ್ತಾರೆ.  ಕನ್ನಡ ಪುಸ್ತಕಗಳ ಇಂಗ್ಲಿಷ್ ಪರಕಾಯ ಪ್ರವೇಶದ ಬಗ್ಗೆ ಈಚೆಗೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನದೊಂದು ಲೇಖನ ಕೆಲವರಿಗೆ ವಿನಾಕಾರಣ ಕಿರಿಕಿರಿ ಹುಟ್ಟಿಸಿದ್ದನ್ನು ನೀವು ಗಮನಿಸಿರಬಹುದು. ಒಂದು ಪ್ರಶಸ್ತಿಗೆ ಯಾವ ಥರದ ಪುಸ್ತಕಗಳು ಸೂಟಾಗುತ್ತವೆ; ಈ ಪ್ರಶಸ್ತಿ ಪಡೆಯಲು ಇತ್ತೀಚಿನ ವರ್ಷಗಳಲ್ಲಿ ತನ್ನ ‌‌‌ವ್ಯಕ್ತಿತ್ವ ಹೇಗೆಲ್ಲ ಬಿಂಬಿತವಾಗಿರಬೇಕು ಎಂದು ‘ರಿಸರ್ಚ್’ ಮಾಡುವ ಲೇಖಕ, ಲೇಖಕಿಯರೂ ಲೋಕದಲ್ಲಿರುತ್ತಾರೆ! ಒಂದು ಅಂತರ್ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಲು ‘ಪರಿಸರವಾದಿ’ ಎಂದು ಕೂಡ ಪರಿಚಿತವಾಗಿರಬೇಕು ಎಂದು ಲೇಖಕರೊಬ್ಬರಿಗೆ ಯಾರೋ ಹೇಳಿದರು. ಸರಿ, ಅವರು ಮೇಧಾ ಪಾಟ್ಕರ್ ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧ ಹೋರಾಡುತ್ತಿದ್ದ ಜಾಗಕ್ಕೆ ಹೋಗಿ ಅವರನ್ನು ಬೆಂಬಲಿಸಿ ಕೂತರು. ಆದರೆ ಅಲ್ಲಿ ಹಲವು ವರ್ಷಗಳಿಂದ ಹೋರಾಡುತ್ತಿದ್ದವರು ಈ ಇನ್ಸ್ಟಂಟ್ ಪರಿಸರವಾದಿಯನ್ನು 'ದಯಮಾಡಿ ಹೊರಡಿ' ಎಂದ ಮೇಲೆ ಆ ಮಹನೀಯರು ಅಲ್ಲಿಂದ ಹೊರಡಲೇಬೇಕಾಯಿತು! 

ಆದರೆ ಬಾನು-ದೀಪಾ ಜೋಡಿಯ ‘ಹಾರ್ಟ್ ಲ್ಯಾಂಪ್’ ಕತೆಗಳ ಈ ಸಹಜ ಸೀಮೋಲ್ಲಂಘನದ ಹಿಂದೆ ಇಂಥ ಯಾವ ಸರ್ಕಸ್ಸುಗಳೂ ಇರಲಿಲ್ಲ! ಅಥವಾ ಆ ಥರದ ತಲುಬುಗಳಿಗೆಲ್ಲ ಬಾನು ಥರದ ಲೇಖಕಿಯರಿಗೆ ಎಂದೂ ಸಮಯವಿರಲಿಲ್ಲ. ಬಾನು ಹೆಣ್ಣಾಗಿ, ಒಬ್ಬ ಮುಸ್ಲಿಂ ಹೆಣ್ಣಾಗಿ ತಮ್ಮ ತಳಮಳ ಹಾಗೂ ಸುತ್ತಮುತ್ತಲಿನ ಮುಸ್ಲಿಮರ ಕಷ್ಟಗಳ ಬಗ್ಗೆ ಮಾತು ಕೊಡಲು ಕತೆ ಬರೆದವರು. ಅವರು ಬರೆಯುವ ಹೊತ್ತಿಗೆ ಲಂಕೇಶರು ಮುಸ್ಲಿಂ ದನಿಗಳಿಗೆ ತಮ್ಮ ‘ಲಂಕೇಶ್ ಪತ್ರಿಕೆ’ಯಲ್ಲಿ ಹೆಚ್ಚು ಜಾಗ ಕೊಡತೊಡಗಿದ್ದರು. ಸಾರಾ ಅಬೂಬಕರ್, ಬಾನು ಮೊದಲಾದವರು ಇಲ್ಲಿ ಬರೆಯತೊಡಗಿದರು. ಮುಸ್ಲಿಂ ಮಹಿಳಾ ಲೋಕದ ಬನಿ ಕರ್ನಾಟಕದ ತುಂಬ ಹಬ್ಬತೊಡಗಿತು. ಹೀಗೆ ತಮ್ಮ ಪತ್ರಿಕೆಯಲ್ಲಿ ಮುಸ್ಲಿಂ ಲೋಕವನ್ನು ಮಂಡಿಸುವುದಕ್ಕೆ ಒತ್ತು ಕೊಡಲು ಲಂಕೇಶರ ಲೋಹಿಯಾವಾದಿ-ಸಮಾಜವಾದಿ ದೃಷ್ಟಿಕೋನವೂ ಕಾರಣವಾಗಿತ್ತು. ಉದಾರವಾದಿ ರಾಜಕಾರಣಿ ನಜೀರ್ ಸಾಬ್ ಕರ್ನಾಟಕದ ಮುಖ್ಯ ಮಂತ್ರಿಯಾಗಬೇಕು ಎಂದು ಲಂಕೇಶ್ ಮತ್ತೆ ಮತ್ತೆ ಬರೆಯತೊಡಗಿದ್ದರ ಹಿಂದೆ ಈ ಸಮಾಜವಾದಿ ನೋಟವೂ ಇತ್ತು. 

ಎಂಬತ್ತರ ದಶಕದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯದ ವಿಮರ್ಶಾ ಚೌಕಟ್ಟುಗಳು ಕೂಡ ಬಾನು ಮುಷ್ತಾಕರ ರೀತಿಯ ಕತೆಗಳು ಕನ್ನಡ ಸಂಸ್ಕೃತಿಯಲ್ಲಿ ಹೆಚ್ಚು ಸ್ವೀಕಾರವಾಗುವಂತೆ ಮಾಡತೊಡಗಿದವು. ನನ್ನ ತುಮಕೂರು ಗೆಳೆಯರಾದ ಸಯೀದ್, ನವೀದ್ ಪ್ರತಿವಾರ ‘ಲಂಕೇಶ್ ಪತ್ರಿಕೆ’ ಓದುತ್ತಾ ಬಾನು ಮುಷ್ತಾಕ್ ಥರದವರ ನಿಲುವುಗಳನ್ನು ಬೆಂಬಲಿಸುತ್ತಾ, ಅಲ್ಲಿನ ಮಸೀದಿಯ ಕೆಲವರ ಕೆಂಗಣ್ಣಿಗೂ ಗುರಿಯಾದರು. ಹೀಗೆ ಬಾನು ಮುಷ್ತಾಕರ ಬರಹಗಳು ಅವರಿಗೆ ಅರಿವಿಲ್ಲದೆಯೇ ಕರ್ನಾಟಕದ ಆಧುನಿಕ ಮನಸ್ಸಿನ ಮುಸ್ಲಿಮರ ಚರಿತ್ರೆಯ ಚಕ್ರವನ್ನು ಬದಲಿಸತೊಡಗಿದ್ದವು. ಬಾನುವಿನ ದನಿಯಿಂದ ಕೂಡ ಕರ್ನಾಟಕದ ಸಾಂಸ್ಕೃತಿಕ ಬಾನಿನಲ್ಲಿ ಅಲ್ಲಲ್ಲಿ ಬಂಡಾಯದ ಚುಕ್ಕಿಗಳು ಮೂಡತೊಡಗಿದವು. ನೆನಪಿರಲಿ, ಹೀಗೆ ಮೂಡಿದ ಹೆಣ್ಣು ಚುಕ್ಕಿಗಳು ಕೇವಲ ಮುಸ್ಲಿಂ ಸಮುದಾಯದ ಕತ್ತಲಿನಿಂದ ಮಾತ್ರ ಬರದೆ, ಹಿಂದೂ ಸಮಾಜದ ವಿವಿಧ ಜಾತಿಗಳಿಂದಲೂ ಬರತೊಡಗಿದ್ದವು. ಆಳವಾದ ಚಡಪಡಿಕೆಯ ಆಧುನಿಕ ಮನಸ್ಸಿನ ಮಹಿಳೆಯೊಬ್ಬರ ಕತೆಗಳು ಮೆಲ್ಲಗೆ, ಸದ್ದಿಲ್ಲದೆ ಕ್ರಾಂತಿ ಮಾಡತೊಡಗಿದ್ದವು. 

ಇದೆಲ್ಲದರ ಜೊತೆಗೆ, ಪತಿ ಮುಷ್ತಾಕ್ ಗಟ್ಟಿಯಾಗಿ ಬಾನುವಿನ ಬೆಂಬಲಕ್ಕೆ ನಿಂತಿದ್ದರ ಮಹತ್ವ ಕೂಡ ನನಗೆ ನೆನಪಾಗುತ್ತದೆ. ಬಾನು ಅವರ ಕತೆಗಳು ಪಠ್ಯವಾದಾಗ ಅವು ಹುಡುಗ, ಹುಡುಗಿಯರ ಪ್ರಜ್ಞೆಯನ್ನೂ ಬದಲಿಸತೊಡಗಿದವು. ಮುಸ್ಲಿಂ ಲೋಕವನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳದೆ ಕೋಮುವಾದದ ವಿಕಾರಕ್ಕೆ ಒಳಗಾಗುತ್ತಿದ್ದ ಕನ್ನಡಿಗರನ್ನು ಬದಲಾಯಿಸಲು ಬಾನು, ಸಾರಾ ಥರದವರ ಕತೆ, ಕಾದಂಬರಿಗಳು ಮಾಡಿರುವ ಕೆಲಸದ ಸಾಮಾಜಿಕ-ಸಾಂಸ್ಕೃತಿಕ ಮಹತ್ವವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕಾಗಿದೆ. ಜಾತ್ಯತೀತ ಕರ್ನಾಟಕದ ಸೃಷ್ಟಿಯಲ್ಲಿ ಇಂಥ ನೂರಾರು ಪ್ರಯತ್ನಗಳು ಕೊಟ್ಟಿರುವ ಕೊಡುಗೆಗಳನ್ನು ನೆನೆದರೆ ಹೆಮ್ಮೆಯಾಗುತ್ತದೆ.  

ಬಾನು ಮುಷ್ತಾಕರ ಕತೆಗಳ ಅನುವಾದದ ಪುಸ್ತಕ ‘ಹಾರ್ಟ್ ಲ್ಯಾಂಪ್’ನಲ್ಲಿರುವ ದೀಪಾ ಭಸ್ತಿಯವರ ‘ರೆಡ್ ಲುಂಗಿ’ ಕತೆಯ ಒಂದು ಭಾಗವನ್ನು ‘ಪ್ಯಾರಿಸ್ ರಿವ್ಯೂ’ನಲ್ಲಿ ಓದಿದೆ. ಹಿಂದೆ ಬಾನು ಅವರ ಕನ್ನಡ ಕತೆಗಳನ್ನು ಓದಿದ್ದಂತೆಯೇ ಈ ಸಹಜ ಇಂಗ್ಲಿಷ್ ಮರುಸೃಷ್ಟಿಯನ್ನೂ ಆರಾಮಾಗಿ ಓದಿದೆ. ದೀಪಾ ಈ ಕತೆಗಳನ್ನು ಅನುವಾದಿಸುವ ಮೊದಲು ಅರೇಬಿಕ್ ಕಲಿತಿದ್ದು ಕೂಡ ಕುತೂಹಲಕರ. ಹವ್ಯಕ ಮಾತೃಭಾಷೆಯ ದೀಪಾ, ದಖನಿಗೆ ಹತ್ತಿರವಿರುವ ಭಾಷೆಯ ಬಾನು ಈ ಇಬ್ಬರ ಜೋಡಿ ಕನ್ನಡ ಸಂಸ್ಕೃತಿಯ ವಿಶಿಷ್ಟ ಅನುಭವಗಳನ್ನು ಜಗತ್ತಿಗೆ ತಲುಪಿಸುವ ಚಾರಿತ್ರಿಕ ಕೆಲಸ ಮಾಡಿದೆ. ‘ಪ್ಯಾರಿಸ್ ರಿವ್ಯೂ’ವರೆಗೆ ಪಯಣಿಸಿದ ದೀಪಾ ಅವರ ಕಥಾನುವಾದದ ಟಿಪ್ಪಣಿ ಹಾಗೂ ‘ರೆಡ್ ಲುಂಗಿ’ ಕತೆ ಈಗಾಗಲೇ ಇಬ್ಬರನ್ನೂ ಜಗತ್ತಿನ ಸಾಂಸ್ಕೃತಿಕ ಭೂಪಟದಲ್ಲಿ ಮೂಡಿಸಿದೆ. ‘ಹಾರ್ಟ್ ಲ್ಯಾಂಪ್’ ಕೂಡ ಹೀಗೇ ಮುನ್ನಡೆದು ಗುರಿ ಮುಟ್ಟಲಿ ಎಂದು ಹಾರೈಸೋಣ.

ಸಾಹಿತ್ಯದ ವಿದ್ಯಾರ್ಥಿಯಾಗಿ ನಾನು ಗಮನಿಸಿದಂತೆ ಬದಲಾಗುವ ಪಶ್ಚಿಮದ ವಿಮರ್ಶೆಗಳ ಮಾನದಂಡಗಳು ವಿಚಿತ್ರ. ಈ ಮಾನದಂಡಗಳು ಯಾವ ಕಾರಣಕ್ಕೆ ಯಾವ ಕೃತಿಯನ್ನು ಎತ್ತಿ ಹಿಡಿಯುತ್ತವೋ ಹೇಳುವುದು ಕಷ್ಟ. ಕಳೆದ ವರ್ಷ ಹಾನ್ ಕಾಂಗ್‌ರ ಸಮಗ್ರ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಘೋಷಿಸಿದ ಆಯ್ಕೆ ಸಮಿತಿ ಆಕೆಯ ’ಕಾವ್ಯಾತ್ಮಕ ಗದ್ಯ’ವನ್ನು ವಿಶೇಷವಾಗಿ ಗುರುತಿಸಿತ್ತು. ಹಾನ್ ಕಾಂಗ್‌ಗೆ ನೊಬೆಲ್ ಬಂದಾಗ ಅವರ ’ದ ವೆಜಿಟೇರಿಯನ್’ ಕಾದಂಬರಿ ಹಿಂದೊಮ್ಮೆ ಬುಕರ್ ಪ್ರಶಸ್ತಿ ಪಡೆದಿದ್ದನ್ನು ಗಮನಿಸಿದೆ; ಆ ಕಾದಂಬರಿಯನ್ನು ಅಂದೇ ಓದಲು ಅಂಗಡಿಯಿಂದ ತರಿಸಿದ ನಾನು ಅದರಲ್ಲಿ ಸಸ್ಯಾಹಾರದ ಕಡೆಗೆ ತಿರುಗಿದ ಹೆಣ್ಣೊಬ್ಬಳ ಮೇಲೆ ನಡೆಯುವ ವಿಚಿತ್ರ ಮಾನಸಿಕ ಹಲ್ಲೆಗಳವರೆಗೂ ಓದಿ, ಬೆಚ್ಚಿ, ಎತ್ತಿಟ್ಟೆ. 

ಅವತ್ತು ಬೆಳಗ್ಗೆಯೇ ಜ್ವರ ಬರುವಂತೆ ಕಾಣುತ್ತಿದ್ದ ನನಗೆ ‘ದ ವೆಜಿಟೇರಿಯನ್’ ಕಾದಂಬರಿಯ ಈ ಹಿಂಸೆಗಳ ಭಾಗಕ್ಕೆ ಬರುವ ಹೊತ್ತಿಗೆ ಜ್ವರ ಏರಿಯೇ ಬಿಟ್ಟಿತು! ಮೈ ಸರಿಯಿಲ್ಲದಿರುವಾಗ ಯಾವುದನ್ನು ಓದಬಾರದು ಎಂದು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ವಿಮರ್ಶಕ ವಾಲ್ಟರ್ ಬೆಂಜಮಿನ್‌ಗೆ ಹೇಳಿದ್ದರ ಬಗ್ಗೆ ಹಿಂದೊಮ್ಮೆ ನಾನೇ ಬರೆದಿದ್ದು ನೆನಪಾಯಿತು. ಅದರಲ್ಲೂ ಜ್ವರ ಬಂದಾಗ ದಾಸ್ತೋವಸ್ಕಿಯ ತಂಟೆಗಂತೂ ಹೋಗಲೇಬೇಡ ಎನ್ನುತ್ತಾನೆ ಬ್ರೆಕ್ಟ್!

ಇದೀಗ, ಈ ಅಂಕಣ ಬರೆಯುವ ಮೊದಲೇ ಜ್ವರ ತಾನು ಬರಲಿದ್ದೇನೆಂದು ಹೆದರಿಸುತ್ತಿತ್ತು! ಆ ಹೆದರಿಕೆಯನ್ನು ಒದ್ದೋಡಿಸುವಂತೆ ಬಾನುಮುಷ್ತಾಕರ ಅನುವಾದಿತ ಕತೆ ‘ರೆಡ್ ಲುಂಗಿ’, ಅನುವಾದಕಿ ದೀಪಾ ಅವರ ‘ಅಂತೆ' ಟಿಪ್ಪಣಿ ಎರಡೂ ಸಿಕ್ಕವು. ಶನಿವಾರ ಸಂಜೆಯವರೆಗೂ ಏನು ಬರೆಯಬೇಕೆಂದು ಯೋಚಿಸುತ್ತಿದ್ದವನಿಗೆ ಬಾನು-ದೀಪಾ ಜೋಡಿಯ ಸಾಹಸದ ಬಗ್ಗೆ ಬರೆಯಲೇಬೇಕೆಂಬ ಅಸಲಿ ಒತ್ತಡ ಮೂಡತೊಡಗಿತು.

ಬರುವ ಮೇ ತಿಂಗಳಲ್ಲಿ ಬುಕರ್ ಪ್ರಶಸ್ತಿಯ ಘೋಷಣೆ ಆಗುವವರೆಗೂ ಕಾಯುವ ಸೋಮಾರಿತನಕ್ಕಿಳಿಯದೆ, ಬಾನು ಮುಷ್ತಾಕರ ಕನ್ನಡ ಕತೆಗಳನ್ನೂ, ಅವರ ಇಂಗ್ಲಿಷ್ ಕತೆಗಳನ್ನೂ ಮೊದಲೇ ಓದಿ, ಚರ್ಚಿಸಿ ಎಂದು ಓದುಗಿಯರಿಗೂ, ಓದುಗರಿಗೂ ಪ್ರೀತಿಯಿಂದ ಹೇಳಬಯಸುವೆ.



Latest Video


Nataraj Huliyar Official
YouTube Channel

SUBSCRIBE