Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
08 Mar 2026 ಟೀಕೆ ಟಿಪ್ಪಣಿಗಳ ಹೊಸ ಮುದ್ರಣ...

 ನಾವೆಷ್ಟು ನಿಧಾನಜೀವಿಗಳೆಂದರೆ, ನಾವೆಲ್ಲ ಲಂಕೇಶರು ಚಿರಂಜೀವಿ ಎಂದುಕೊಂಡಿದ್ದೆವು. ೧೯೯೭ರ ಸುಮಾರಿಗೆ ಲಂಕೇಶರು ಸಂಜೆಯ ಮಾತಿನ ನಡುವೆ ಅವರ ಟೀಕೆ ಟಿಪ್ಪಣಿಗಳನ್ನು ಆಯ್ದು ಎರಡು ಮೂರು ಸಂಪುಟಗಳಲ್ಲಿ ಜೋಡಿಸಲು ನನಗೆ ಹೇಳಿದ ನಂತರ, ಮೊದಲ ಎರಡು ಸಂಪುಟಗಳು ೧೯೯೮, ೧೯೯೯ರಲ್ಲಿ ಸಿದ್ಧವಾದವು. 

೧೯೯೯ರ ಕೊನೆಗೆ ಟೀಕೆ ಟಿಪ್ಪಣಿಯ ಮೂರನೆಯ ಸಂಪುಟದ ಬರಹಗಳನ್ನು ಎಂದಿನಂತೆ ಬಸವರಾಜ್, ಸತೀಶ್, ಈ. ಚಂದ್ರ ತಾಳಿಕಟ್ಟೆ ಮುಂತಾದ ‘ಲಂಕೇಶ್ ಪತ್ರಿಕೆ’ಯ ಕಟ್ಟಾಳುಗಳು ಸಜ್ಜುಗೊಳಿಸಿದ್ದರು. ಪುಸ್ತಕ ಮುದ್ರಣಕ್ಕೆ ಸಿದ್ಧವಾಗಿ ನನ್ನ ಪ್ರಸ್ತಾವನೆಯ ಟಿಪ್ಪಣಿಯೂ ತಯಾರಾಗತೊಡಗಿತ್ತು. ಟೀಕೆ ಟಿಪ್ಪಣಿಯ ಮೂರನೇ ಸಂಪುಟ ಈ ಘಟ್ಟದಲ್ಲಿದ್ದಾಗ ಲಂಕೇಶರು ೨೪ ಜನವರಿ ೨೦೦೦ದ ರಾತ್ರಿ ನಿರ್ಗಮಿಸಿದರು. ಮೂರನೇ ಸಂಪುಟ ಅವರಿದ್ದಾಗಲೇ ಬರದೇ ಹೋದುದಕ್ಕೆ, ಮಾತಿಗೆ ತಪ್ಪಿದ್ದಕ್ಕೆ, ಪೆಚ್ಚೆನ್ನಿಸುತ್ತಲೇ ಇರುತ್ತದೆ. ಅವತ್ತು ಕಂದು ಹಾಳೆಗಳಲ್ಲಿ ಬರೆದ ಮೂರನೆಯ ಮುದ್ರಣದ ಪ್ರಸ್ತಾವನೆ ಕೂಡ ಎಲ್ಲೋ ಹಳೆಯ ಕಡತಗಳಲ್ಲಿದೆ. 

ಕೆಲವು ತಿಂಗಳ ಕೆಳಗೆ ಕವಿತಾ ಲಂಕೇಶ್, ಗೆಳೆಯ ಸತೀಶ್ ‘ಟೀಕೆ ಟಿಪ್ಪಣಿ’ಯ ಮೂರೂ ಸಂಪುಟಗಳನ್ನು ಮತ್ತೆ ಮುದ್ರಿಸುವ ಮಾತಾಡಿದ ಮೇಲೆ ಮತ್ತೆ ಲಂಕೇಶರ ಬರಹಗಳಿಗೆ ಮರಳಿದೆ; ’ಮರಳಿದೆ’ ಎಂಬ ಮಾತೇ ಅಸಂಗತ; ೧೯೮೦ರಲ್ಲಿ ಈ ಟೀಕೆ ಟಿಪ್ಪಣಿಗಳು ಪ್ರಕಟವಾಗಲು ಶುರು ಮಾಡಿದ ಕಾಲದಿಂದಲೂ ಅವುಗಳ ಜೊತೆಗೇ ಇರುವೆ!

ಮೊದಲ ಎರಡು ಸಂಪುಟಗಳ ತಯಾರಿಯಲ್ಲಿ ‘ಇದನ್ನು ಹಾಕು’, ‘ಇದನ್ನು ಹಾಕಬೇಡ’ ಎಂದು ಯಾವತ್ತೂ ಹೇಳದಿದ್ದ; ‘ಇದು ಬೇಡ, ಬಿಡೋಣ ಸಾರ್‍’ ಎಂದರೆ, ‘ಓಕೇ ಓಕೇ’ ಎನ್ನುತ್ತಿದ್ದ ಲಂಕೇಶರು ಮೂರನೆಯ ಸಂಪುಟದ ಆಯ್ಕೆಗಳನ್ನೂ ಒಪ್ಪುತ್ತಿದ್ದರು ಎಂಬುದು ನನ್ನ ನಂಬಿಕೆ. ಆದರೂ, ಟೀಕೆಟಿಪ್ಪಣಿಗಳ ಮೊದಲ ಎರಡು ಸಂಪುಟಗಳ ಮುದ್ರಣಕ್ಕೆ ಮುನ್ನ ಅವರು ಕೆಲವೇ ಗಳಿಗೆಗಳಲ್ಲಿ ಬರೆದಿದ್ದ ಆ ಕ್ಷಣದ ಆರಂಭದ ಮಾತುಗಳಿಲ್ಲದ ಮೂರನೆಯ ಸಂಪುಟದ ಮೊದಲ ಪುಟಗಳನ್ನು ಇವತ್ತು ನೋಡುತ್ತಿದ್ದರೆ ವಿಚಿತ್ರ ಖಾಲಿ ಅನುಭವ… 

ಇದೀಗ ಎರಡು ಸಂಪುಟಗಳ ಮುದ್ರಣ ಮುಗಿದಂತೆ ಮೂರನೆಯ ಸಂಪುಟದ ಬರಹಗಳನ್ನು ಕೂಡ ಗೆಳೆಯ ಕಿಶೋರ್‍ ವಿನ್ಯಾಸ ಮಾಡಿ ಒಗ್ಗೂಡಿಸಿಕೊಟ್ಟರು. ಹೊಸ ತಲೆಮಾರಿನ ಲೇಖಕ ಮೋಹನ್ ಮಿರ್ಲೆ, ಲೇಖಕಿ ಕಾವ್ಯಶ್ರೀ ಈ ಸಂಪುಟಗಳ ಬರಹಗಳನ್ನು ಓದಿ ಬಹುತೇಕ ತಪ್ಪುಗಳನ್ನು ಸರಿಪಡಿಸಿದ್ದರು. ಮೂರನೆಯ ಸಂಪುಟವನ್ನು ಅಚ್ಚಿಗೆ ಕಳಿಸುವಾಗ ಲಂಕೇಶರ ಕೊನೆಯ ಸಂಚಿಕೆಯ ಬರಹ ನೆನಪಾಯಿತು. ಆದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಜೋಪಾನವಾಗಿಟ್ಟುಕೊಂಡಿದ್ದ ಸಂಚಿಕೆಯಲ್ಲಿ ಆ ಬರಹವೇ ಮಿಸ್ಸಾಗಿತ್ತು! ಗೆಳೆಯ ಈ. ಚಂದ್ರ ಕಳಿಸಿದ ‘ಈ ಸಂಚಿಕೆ’ಯ ಅಂಕಣದಲ್ಲಿ ಬರುವ ಸಾಲು: ‘ಇದನ್ನೆಲ್ಲ ನಾನು ಒಂದು ರೀತಿಯ ಪ್ರಜ್ಞಾಪ್ರವಾಹ ರೂಪದಲ್ಲಿ ಹೇಳುತ್ತಿದ್ದೇನೆ...’ 

ಇದು ಲಂಕೇಶರು ೨೦೦೦ನೇ ಇಸವಿಯ ೨೪ನೇ ತಾರೀಕು ತಮ್ಮ ಕೊನೆಯ ಸಂಜೆ, ೬-೭ ಗಂಟೆಯ ನಡುವೆ ಬರೆದ ಮಾತು. ಇದು ಒಂದರ್ಥದಲ್ಲಿ ಅವರ ಇಡೀ ಜೀವಮಾನದ ಬರವಣಿಗೆಯ ರೀತಿಯನ್ನೇ ಸೂಚಿಸಿದಂತಿದೆ.  ಹತ್ತಿರ ಹತ್ತಿರ ಇಪ್ಪತ್ತು ವರ್ಷ ಕಾಲ ತಮ್ಮ ಪತ್ರಿಕೆಯಲ್ಲಿ ಹಲ ಬಗೆಯ ಅಂಕಣಗಳನ್ನು ಬರೆದ ಲಂಕೇಶರ ಗದ್ಯದಲ್ಲಿ ಈ ಪ್ರಜ್ಞಾಪ್ರವಾಹದ ಅಂಶ ಸದಾ ಇತ್ತು. ಟೀಕೆ ಟಿಪ್ಪಣಿಯ ಎರಡನೇ ಸಂಪುಟ ಪ್ರಕಟವಾಗುವ ಹೊತ್ತಿಗೆ ಅವರು ‘ಈ ಸಂಚಿಕೆ’ಯಲ್ಲಿ ಪತ್ರಿಕೆ ಅಚ್ಚಿಗೆ ಹೋಗುವ ಮುನ್ನ ಆ ಕ್ಷಣದ ಅನ್ನಿಸಿಕೆಗಳನ್ನು ಬರೆಯತೊಡಗಿದ್ದರು. ಅಲ್ಲಂತೂ ಈ ಪ್ರಜ್ಞಾಪ್ರವಾಹ ತುಸು ಹೆಚ್ಚೇ ಹರಿಯತೊಡಗಿತ್ತು.  

ಬರೆಯುವ ಮನುಷ್ಯನೊಬ್ಬನ ವ್ಯಕ್ತಿತ್ವ-ಸಂವೇದನೆ ಅವನು ಬಳಸುವ ಎಲ್ಲ ಪ್ರಕಾರಗಳಲ್ಲೂ ಹೆಚ್ಚು ಕಡಿಮೆ ಥರದಲ್ಲಿ ಒಂದೇ ರೀತಿಯಲ್ಲಿ ಹರಿಯತೊಡಗುತ್ತದೆ ಎಂಬುದು ನನ್ನ ನಂಬಿಕೆ. ಲಂಕೇಶರ ಕೊನೆಯ ಕತೆಗಳಾದ ‘ರೆಡ್ ಏಂಜೆಲ್’ ಮುಂತಾದ ಕತೆಗಳ ಈ ಮುಕ್ತ ಹರಿವಿನ ಗುಣ ಅವರ ನೀಲು ಪದ್ಯಗಳಲ್ಲಿ, ‘ಟೀಕೆ ಟಿಪ್ಪಣಿ’ಗಳಲ್ಲಿ ‘ಈ ಸಂಚಿಕೆ’ಯಲ್ಲಿ; ‘ಇಂಥವರು’  ವ್ಯಕ್ತಿಚಿತ್ರಗಳಲ್ಲಿ, ಸಂಜೆಯ ಮಾತುಕತೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಈ ಮಾತನ್ನು ೧೯೮೦ರಿಂದ ೨೦೦೦ನೇ ಇಸವಿಯ ಮೊದಲ ತಿಂಗಳವರೆಗೂ ಲಂಕೇಶರು ಬರೆದ ಹತ್ತಿರ ಹತ್ತಿರ ೯೫೦ ಟೀಕೆ ಟಿಪ್ಪಣಿಗಳನ್ನು ಕಾಲಕಾಲಕ್ಕೆ ಓದಿರುವ ಆಧಾರದ ಮೇಲೆ ಹೇಳುತ್ತಿದ್ದೇನೆ. 

ಲಂಕೇಶರ ನಿರ್ಗಮನದ ನಂತರದ ಇಪ್ಪತ್ತಾರು ವರ್ಷಗಳ ನಂತರವೂ ಈ ಟೀಕೆ ಟಿಪ್ಪಣಿಗಳು ಹೊಸ ಹೊಸ ತಲೆಮಾರುಗಳ ಸಂಗಾತಿಯಾಗಿ ಮುಂದುವರಿದಿವೆ. ಲಂಕೇಶರು ನಿರ್ಗಮಿಸಿದ ವಾರ ‘ಅಭಿನವ ಬೋದಿಲೇರ್’, ಕವಿ ವಿ. ಎಂ. ಮಂಜುನಾಥ್ ‘ಕ್ರೈಸ್ಟ್’ ಎಂಬ ಹೆಸರಿನಲ್ಲಿ ಬರೆದ ಈ ‘ಸಂತನೂ’ ಎಂಬ ನೀಲು ಮಾದರಿಯ ಆಕ್ಷಣದ ಸ್ಪಂದನ ಮೊನ್ನೆ ಮತ್ತೆ ಸಿಕ್ಕಿತು. ಈ ಪದ್ಯ ಲಂಕೇಶರಿಂದ ಹಲವು ಕನ್ನಡ ತಲೆಮಾರುಗಳು ಕಲಿತದ್ದನ್ನು, ಮುಂದಿನ ತಲೆಮಾರು ಅವರನ್ನು ಓದಲಿರುವ ರೀತಿಯನ್ನು ಸೂಚಿಸುವಂತಿತ್ತು:  

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಗಾಂಧಿ ಎಲಿಯಟ್ 
ಬರ್ಗಮನ್ ಬೋದಿಲೇರ್ 
ಪುಷ್ಕಿನ್ ಶೇಕ್‌ಸ್ಪಿಯರ್ 
ಅವರೊಡನೆ ಸಂಧಿಸಿ
ತಬ್ಬಿಬ್ಬಾಗಿಸುವ ಚಾಲಾಕು 
ಆ ಧಿಮಾಕಿನ ಜೀವದ್ದು. 

ಲಂಕೇಶರ ಟೀಕೆ ಟಿಪ್ಪಣಿಗಳನ್ನು ೨೦೨೫-೨೬ರಲ್ಲಿ ಮತ್ತೆ ಇಡಿಯಾಗಿ ಓದುವಾಗಲೂ ಅವು ಎಂದಿನಂತೆಯೇ ಆತ್ಮೀಯವಾಗಿ ಕಾಣತೊಡಗಿದವು. ಬರಹಗಳ ಬನಿ ಹಿಂಗಿಲ್ಲ; ಜೀವಂತಿಕೆ ಮುಕ್ಕಾಗಿಲ್ಲ. ಸಮಕಾಲೀನ ಅರ್ಥ ಹೊರಡುತ್ತಲೇ ಇದೆ. ಈ ಸಂಪುಟದಲ್ಲಿರುವ ಹಲವು ಬರಹಗಳನ್ನು ಬರೆಯುವ ಕಾಲಕ್ಕೆ ಲಂಕೇಶ್ ಮಿದುಳಿನ ಸ್ಟ್ರೋಕಿನಿಂದ ಚೇತರಿಸಿಕೊಳ್ಳುತ್ತಿದ್ದರು; ದೇಹ ಶಿಥಿಲವಾಗತೊಡಗಿತ್ತು. ಒಂದು ಕಣ್ಣು ಮುಚ್ಚಿಕೊಂಡಿತ್ತು. ಮತ್ತೊಂದು ಕಣ್ಣು ಯಾವಾಗ ಮುಚ್ಚಿಕೊಳ್ಳುತ್ತದೋ ಎಂಬ ಆತಂಕವಿತ್ತು. ದೇಹದ ಶಿಥಿಲತೆ ಹಾಗೂ ಸಾವಿನ ಆತಂಕವನ್ನು ಮುಖಾಮುಖಿಯಾಗುವ ಏಕಮಾತ್ರ ಸಾಧನವೆಂಬಂತೆ ಅವರು ತೊಡಗಿದ ಬರವಣಿಗೆ ಅವರಿಗೆ ತೀವ್ರ ಸ್ವ-ಪರೀಕ್ಷೆಯ ಸಾಧನವಾಯಿತು. 

ಲಂಕೇಶರ ‘ಫಿಲಾಸಫಿ’ ಎನ್ನುವುದು ‘ಅನುದಿನದ ಫಿಲಾಸಫಿ’ ಎಂದು ಈಚೆಗೆ ಅವರ ಹೊಸ ಮುದ್ರಣಗಳಿಗೆ ಮುನ್ನುಡಿ ಬರೆಯುವಾಗ ಮತ್ತೆ ಮತ್ತೆ ಅನ್ನಿಸುತ್ತಿತ್ತು. ಅವರ ಕೊನೆಯ ವರ್ಷಗಳ ಬರಹಗಳ ಈ ಅನುದಿನದ ಫಿಲಾಸಫಿಗೆ ಕಾಯಿಲೆ, ದೇಹ, ಮನಸ್ಸು, ಆರೋಗ್ಯದ ಅನುದಿನದ ಸವಾಲುಗಳು ಹೆಚ್ಚು ಹೆಚ್ಚು ಸೇರಿಕೊಂಡವು; ಎಂಥ ಸ್ಥಿತಿಯಲ್ಲೂ ಬದುಕುವ ದಾಹ, ಬದುಕುವ ಕಲೆ, ಹಲ್ಲು ಕಚ್ಚಿ ಬದುಕಿದವರ, ಬದುಕಬಯಸುವವರ ಅನುಭವಗಳು ಸೇರಿಕೊಳ್ಳತೊಡಗಿದವು. ಈ ಬರಹಗಳು ಖಾಸಗಿ ಎಂದರೆ ಖಾಸಗಿ; ಸಾರ್ವಜನಿಕ ಎಂದರೆ ಸಾರ್ವಜನಿಕ. ಕಾರಣ, ಖಾಸಗಿ ಎನ್ನಬಹುದಾದ ಬರಹಗಳಲ್ಲಿ ಕೂಡ ಲಂಕೇಶ್ ಓದುಗ ಓದುಗಿಯರ ನಿತ್ಯದ ಕಷ್ಟ ಸುಖಗಳಿಗೆ ದನಿಯಾಗುತ್ತಲೇ ಇರುತ್ತಾರೆ. ಆದ್ದರಿಂದ ಇವು ಸಾರ್ವತ್ರಿಕ. 

ತಮ್ಮ ಬದುಕಿನ ಕೊನೆಯ ಸಂಜೆ ಅವರು ಬರೆದ ‘ಈ ಸಂಚಿಕೆ’ ಅಂಕಣಕ್ಕೆ ಕೊಟ್ಟ ತಲೆ ಬರಹ: ‘ಶ್ರೇಷ್ಠ ಗದ್ಯ ಎಂಬ ಶ್ರೇಷ್ಠ ಕಲೆ’. ಲಂಕೇಶರಿಗೆ ಉಳಿದಿದ್ದ ಕೊನೆಯ ಗಂಟೆಗಳ ಈ ಬರಹದಲ್ಲಿ ಅವರ ಇಡೀ ಬದುಕಿನ, ಇಪ್ಪತ್ತು ವರ್ಷದ ಪತ್ರಿಕೋದ್ಯಮದ, ಹಾಗೂ ಇಪ್ಪತ್ತು ವರ್ಷ ಬರೆದ ಟೀಕೆ-ಟಿಪ್ಪಣಿಯ ಮೂಲ ಕಾಳಜಿಗಳ ತುಣುಕುಗಳಿವೆ.  ಅವತ್ತಿನ ’ಈ ಸಂಚಿಕೆ’ ಅಂಕಣದಲ್ಲಿರುವ ಒಂದು ನೋಟ:  
‘ನಾವೆಲ್ಲ ಮಹಾ ಸಿಟ್ಟಿನ, ತಪ್ಪು ತಿಳಿಯುವ, ಗೊಂದಲದ ಮನುಷ್ಯರು ಎಂದು ನಾನು ಬಲ್ಲೆ. ಆದ್ದರಿಂದಲೇ ನಾವು ಸಾಂಸ್ಕೃತಿಕವಾಗಿ ಮುಖ್ಯವಾದವರ ಬಗ್ಗೆ ಮಾತಾಡುವಾಗ ಗಾಢವಾಗಿ ಚಿಂತಿಸಬೇಕು. ನಮ್ಮನ್ನು ಹೊಗಳುವವರನ್ನೆಲ್ಲ ಹೊಗಳುತ್ತಾ ಕೂರಬಾರದು… ಎಂಥೆಂಥ ಜನ ಇದ್ದಾರೆ ನೋಡಿ! ಅವರು ಎಂದೂ ಏನನ್ನೂ ಓದುವುದಿಲ್ಲ… ನಾವು ನಮ್ಮ ಸಮಕಾಲೀನರಲ್ಲಿ ಯಾರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿಬಿಡಬೇಕು. ಅವರ ಸಾಧನೆಯ ಬಗ್ಗೆ, ತಾತ್ಸಾರ ಪಡಕೂಡದು.’ 

ಕನ್ನಡದ ಶ್ರೇಷ್ಠ ಲೇಖಕನೊಬ್ಬನ ಆರಂಭದ ಕಾಳಜಿಗಳು ಮಾಗಿ ಕೊನೆಯ ಸಂಜೆಯವರೆಗೂ ಜೀವಂತವಾಗಿದ್ದುದನ್ನು ಈ ಕೊನೆಯ ಟಿಪ್ಪಣಿಯೂ ಸೂಚಿಸುತ್ತದೆ. ಮೇಷ್ಟ್ರು, ಕತೆಗಾರ, ಕವಿ ನಾಟಕಕಾರ, ವಿಮರ್ಶಕ, ಸಂಪಾದಕ ಮುಂತಾದ ಹಲವು ಪಾತ್ರಗಳು ಬೆರೆತ ಸಂಕೀರ್ಣ ವ್ಯಕ್ತಿತ್ವದಿಂದ ಮೈದಾಳಿದ ಈ ಕಾಳಜಿಗಳು ಕೊನೆತನಕ ಗಾಢವಾಗಿದ್ದವು. ಅವರು ಸಂಪಾದಿಸಿದ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಪ್ರಕಟವಾದ ‘ನೀಲು’ ಪದ್ಯ:  

ಸಾಧು ಸಂತರು ಜಂಗಮರು ಗುರುಗಳು
ತಾವು ಕಟ್ಟಿಕೊಂಡು ಹುಟ್ಟಿದ
ಲೈಂಗಿಕ ಭಾಗ್ಯದ ಬಗ್ಗೆ 
ಆಶೆ, ಹತಾಶೆಯಲ್ಲಿ ನರಳುವರು. 

ಈ ನೀಲು ಪದ್ಯ ಸೂಚಿಸುತ್ತಿರುವ ಆಶೆ ಹತಾಶೆಗಳ ಶೋಧನೆಗಳ ನಡುವೆಯೇ ಕಟ್ಟುವ, ಬದಲಿಸುವ, ಬದಲಾಗುವ ನೈತಿಕ ಕಾಳಜಿಗಳು ಲಂಕೇಶರ ಕೊನೆಯ ಬರಹದವರೆಗೂ ಇದ್ದವು. ಕಳೆದ ನಲವತ್ತು ವರ್ಷಗಳಲ್ಲಿ ಈ ಟೀಕೆ ಟಿಪ್ಪಣಿಗಳಿಂದ ಸಾವಿರಾರು ಜನ ಲೇಖಕ, ಲೇಖಕಿಯರು ಅಂಕಣ, ಸಂಪಾದಕೀಯ, ಗದ್ಯ, ಸಮಾಜವಿಮರ್ಶೆ, ಸಾಹಿತಿ-ಸಾಹಿತ್ಯಗಳನ್ನು ನೋಡುವ ಬಗೆಗಳು, ರಾಜಕೀಯ ವಿಶ್ಲೇಷಣೆಗಳು...ಮುಂತಾದವುಗಳ ಹಲವು ಮಾದರಿಗಳನ್ನು ಅರಿವಿದ್ದೋ ಅರಿವಿಲ್ಲದೆಯೋ ಕಲಿತಿದ್ದಾರೆ. ಚಿಂತಕ, ಚಿಂತಕಿಯರು ಸಮಾಜವಾದಿ ಚಿಂತನೆಯ ಹೊಸ ರೂಪಗಳನ್ನು ಅರಿತಿದ್ದಾರೆ. ಲಂಕೇಶರನ್ನು ತೆಳುವಾಗಿ ಅನುಕರಿಸಿ ಕನ್ನಡ ಮನಸ್ಸಿನ ಅಭಿರುಚಿ ಕೆಡಿಸಿದವರೂ ಇದ್ದಾರೆ. ಅದೇನೇ ಇದ್ದರೂ, ಕಾಲದ ಕನ್ನಡಿಯಂತಿರುವ ಈ ಬರಹಗಳನ್ನು ಮತ್ತೆ ಮತ್ತೆ ಓದುವ ಯಾರೇ ಆದರೂ ತೀವ್ರವಾಗಿ ಯೋಚಿಸುವ, ಒಳಹೊರಗನ್ನು ಬೆಸೆಯುವ ಬರಹದ ಕಲೆಯನ್ನು, ಬದುಕುವ ಕಲೆಯನ್ನು ಕಲಿಯಬಲ್ಲರು ಎಂಬುದು ನನ್ನ ನಂಬಿಕೆ.

ಟೀಕೆ ಟಿಪ್ಪಣಿಯ ಮೂರನೆಯ ಸಂಪುಟದ ಮುನ್ನುಡಿ ಬರೆದು ಮುಗಿಸಿದ ಇವತ್ತು ೮ ಮಾರ್ಚ್. ಲಂಕೇಶರ ಹುಟ್ಟು ಹಬ್ಬ. ಈ ಟಿಪ್ಪಣಿಯ ಮೂಡುಗಳನ್ನು ಇಲ್ಲಿ ಕೊಡಲು ಕಾರಣ: ಇದೇ ೧೫ ಮಾರ್ಚ್ ೨೦೨೬ರ ಭಾನುವಾರ ಮೂರೂ ಟೀಕೆ ಟಿಪ್ಪಣಿಗಳ ಪರಿಷ್ಕೃತ ಮುದ್ರಣಗಳ ಬಿಡುಗಡೆ. ಸ್ಥಳ: ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣ, ಬೆಂಗಳೂರು. ಬೆಳಗ್ಗೆ ೧೧ ಗಂಟೆ. 
ಬಿಡುವು ಮಾಡಿಕೊಂಡು ಬನ್ನಿ. ಅಳಿದುಳಿದ ಲಂಕೇಶರ ‘ಟೀಕೆ ಟಿಪ್ಪಣಿ’, ‘ಈ ಸಂಚಿಕೆ’ಯ ಬರಹಗಳನ್ನು ಪ್ರಕಟಿಸುವ ಬಗ್ಗೆ ಸಂಬಂಧಪಟ್ಟವರು ಮುಂದೆ ಯೋಚಿಸಬಹುದು.

blog
01 Mar 2026 ಬುಕರ್ ಬಾನು ಮುಷ್ತಾಕರ ಬುಕ್ ಕವರ್‍ಸ್!

ನಮ್ಮಲ್ಲಿ ಪುಸ್ತಕ ಓದುವ ಎಷ್ಟು ಜನ ಪುಸ್ತಕದ ಕವರುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೋ ಗೊತ್ತಿಲ್ಲ. ಯಾವುದೇ ಪುಸ್ತಕ ಕೈಗೆತ್ತಿಕೊಂಡಾಗ ಸಾಮಾನ್ಯವಾಗಿ ಎಲ್ಲರೂ ನೋಡುವುದು ಮುಖಪುಟವನ್ನೇ; ಆದರೆ ಈ ಮುಖಪುಟ ಕಲಾವಿದರು ಮೂಲತಃ ಸೃಜನಶೀಲ ಲೇಖಕ, ಲೇಖಕಿಯರಷ್ಟೇ ಸೂಕ್ಷ್ಮಜೀವಿಗಳು, ಪ್ರತಿಭಾವಂತರು ಎಂಬುದನ್ನು ನಾವು ಸರಿಯಾಗಿ ಯೋಚಿಸಿರುವುದಿಲ್ಲ. 

ಅದೇನೇ ಇರಲಿ, ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ (ಅನುವಾದ: ದೀಪ ಬಾಸ್ತಿ) ಅನುವಾದಿತ ಕೃತಿಗೆ ಹಲ ಬಗೆಯ ರಕ್ಷಾಪುಟಗಳನ್ನು ಮಾಡಿದ ಕಲಾವಿದ ಅಹ್ಲಾವತ್ ಗುಂಜನ್ ಅವರ ಸಂದರ್ಶನ ಮುಖಪುಟ ವಿನ್ಯಾಸದ ಕಲೆ ಕುರಿತು ನನ್ನ ಕಣ್ಣನ್ನಂತೂ ತೆರೆಸಿತು. ಅಹ್ಲಾವತ್ ರಕ್ಷಾಪುಟ ಮಾಡಿದ ‘ಹಾರ್ಟ್ ಲ್ಯಾಂಪ್’, ಗೀತಾಂಜಲಿ ಶ್ರೀಯವರ, ‘ಟೂಂಬ್ ಆಫ್ ಸ್ಯಾಂಡ್’ ಬುಕರ್ ಪ್ರಶಸ್ತಿ ಗಳಿಸಿವೆ.
ಸಂದರ್ಶನದ ಶುರುವಿಗೇ ಅಹ್ಲಾವತ್, ‘ಪುಸ್ತಕ ವಿನ್ಯಾಸ ಒಂದು ‘ಸರ್ವಿಸ್’ ಎಂದ ತಕ್ಷಣ, ಸರ್ವಿಸ್ ಎಂಬ ಪದಕ್ಕಿರುವ ವಿಶಾಲ ಅರ್ಥಗಳು ನನ್ನನ್ನು ತಟ್ಟಿದವು. ಈ ಸರ್ವಿಸ್-  ಪುಸ್ತಕಕ್ಕೆ, ಪುಸ್ತಕ ಬರೆದವರಿಗೆ, ಪುಸ್ತಕದ ಸೂಕ್ಷ್ಮ ವಿವರಗಳಿಗೆ, ವಸ್ತುವಿಗೆ, ನಿರೂಪಣೆಗೆ, ಪುಸ್ತಕ ಸಂಸ್ಕೃತಿಗೆ, ಒಟ್ಟಾರೆ ಸಂಸ್ಕೃತಿಗೆ, ಓದುಗ ಓದುಗಿಯರಿಗೆ, ಪುಸ್ತಕ ಪ್ರಕಾಶಕರಿಗೆ...ಹೀಗೆ ಅಹ್ಲಾವತ್ ಹೇಳುವ ‘ಸರ್ವಿಸ್’ ಎಂಬುದರ ಅರ್ಥಗಳು ವಿಸ್ತಾರವಾಗುತ್ತಾ ಹೋದವು. 

ಅಹ್ಲಾವತ್ ಪ್ರಕಾರ, ಪುಸ್ತಕ ವಿನ್ಯಾಸಕಾರನ ಈ ಸರ್ವಿಸ್ ಎಂಥದೆಂದರೆ, ‘ಅದು ಕೃತಿಗೆ, ಪಠ್ಯಕ್ಕೆ ನಿಷ್ಠೆ. ನನ್ನ ಪಾತ್ರ ಏನು ಅಂದರೆ, ಪದಗಳ ಮೂಲಸತ್ವವನ್ನು ಒಂದು ರೂಪಕ್ಕೆ, ಆಕಾರಕ್ಕೆ -ಫಾರ್ಮ್‌ಗೆ- ಭಟ್ಟಿ ಇಳಿಸುವುದು. ಆ ರೂಪ ನೋಡಿದ ತಕ್ಷಣ ನೋಡಿದವರಿಗೆ ಅರ್ಥ ಎಟುಕಬೇಕು, ಸಂದರ್ಭ ಕರಾರುವಾಕ್ಕಾಗಿರಬೇಕು; ಸೌಂದರ್ಯದ ದೃಷ್ಟಿಯಿಂದ ಅದು ನೋಡಲೇಬೇಕು ಎನ್ನಿಸುವಂತಿರಬೇಕು.’

‘ಅಂದರೆ, ಬರೆಯುವವರಿಗೆ ಇಲ್ಲದ ಒತ್ತಡ, ಆಹ್ವಾನ ಪುಸ್ತಕ ಕಲಾವಿದನ ಸೃಜನಶೀಲ ನೋಟಕ್ಕೆ ಇರುತ್ತದೆ: ಈ ಕಣ್ಣು ಕೃತಿಯ ಒಳಗೆ ನೋಡಬೇಕು; ಕೃತಿಯಲ್ಲಿ ಕೇಂದ್ರ ಅರ್ಥ ಹೊಮ್ಮಿಸುವ ವಿವರಗಳನ್ನು, ಪ್ರತಿಮೆಗಳನ್ನು ಹುಡುಕಬೇಕು; ಓದುಗಿ-ಓದುಗರನ್ನೂ ಗಮನದಲ್ಲಿಟ್ಟುಕೊಳ್ಳಬೇಕು.’ ಇದು ಅಹ್ಲಾವತ್ ಗ್ರಹಿಕೆ.  

‘ಹಾರ್ಟ್ ಲ್ಯಾಂಪ್’ ಕೃತಿಗೆ ಬುಕರ್ ಅವಾರ್ಡ್ ಬಂದ ಕಾಲಕ್ಕೆ ಪುಸ್ತಕ ಹಾಗೂ ಅದರ ಅನುವಾದ ಕುರಿತು ವಿಧಾನಸಭೆಯಲ್ಲಿ ನಡೆದ ಅಭಿನಂದನೆಯ ಸಂದರ್ಭದಲ್ಲಿ ಹತ್ತು ನಿಮಿಷ ಮಾತಾಡುವ ಸಂದರ್ಭ ನನಗೆ ಬಂದಿತ್ತು. ಆಗ ಈ ಪುಸ್ತಕದ ಕವರ್ ಕುರಿತು ಸರಿಯಾಗಿ ಯೋಚಿಸಿರಲೇ ಇಲ್ಲ. ಮನಸೆಲ್ಲ ಇದ್ದ ಒಂದೇ ದಿನದಲ್ಲಿ ಪುಸ್ತಕ ಓದಿ ಮಾತಾಡುವುದರ ಕಡೆಗೇ! ಮೊನ್ನೆ ಅಹ್ಲಾವತ್ ಈ ಕತೆಗಳನ್ನು ಓದಿದ ಕ್ರಮ ನನ್ನನ್ನು ಅಚ್ಚರಿಗೊಳಿಸಿತು. 

‘ಡಿಸೈನರ್ ಒಬ್ಬ ಟ್ರಾನ್ಸ್ಲೇಟರ್' ಎನ್ನುವ ಅಹ್ಲಾವತ್‌ಗೆ, ‘ಡಿಸೈನರ್ ಕೇವಲ ಅಲಂಕಾರಪಟುವಲ್ಲ’ ಎಂಬ ನಂಬಿಕೆ. ಬಾನು ಮುಷ್ತಾಕರ ಕತೆಗಳನ್ನು ಅನುವಾದಿಸಿದ ದೀಪಾ ಭಾಸ್ತಿ ಒಮ್ಮೆ ಅಹ್ಲಾವತ್ ತಲೆಯಲ್ಲಿ ಬಿತ್ತಿದ ದಾಳಿಂಬೆ ಬೀಜಗಳ ಐಡಿಯಾ ಅವರ ಕಲಾವಿದ ಪ್ರತಿಭೆಯಲ್ಲಿ ಮೊಳೆಯತೊಡಗಿತು: ‘ಹಾರ್ಟ್ ಲ್ಯಾಂಪ್’ನ ಕತೆಗಳು ನನ್ನಲ್ಲಿ ಉಳಿದವು: ಅವುಗಳ ಸದ್ದಿಲ್ಲದ ಶಕ್ತಿ, ಅವು ಸ್ತ್ರೀತನವನ್ನು ಶೋಧಿಸುವ ರೀತಿ, ಪ್ರೀತಿ, ಕಳೆದುಕೊಂಡ ಸಂಗತಿಗಳು, ಸಂಪ್ರದಾಯದ ಭಾರ… ಎಲ್ಲವೂ ನನ್ನೊಳಗೆ ಉಳಿದವು. ಪ್ರತಿದಿನ ಕಾಣುವ ಚಿತ್ರಗಳ ಬಗ್ಗೆ ಬಾನು ಮುಷ್ತಾಕ್ ಕತೆಗಳಲ್ಲಿ ಎಷ್ಟೊಂದು ಕೋಮಲತೆಯಿತ್ತು; ಅವರ ಪಾತ್ರಗಳ ಮೌನದಲ್ಲಿ ಎಷ್ಟೊಂದು ಶಕ್ತಿಯಿತ್ತು! ನನ್ನ ಮನಸ್ಸು ಮತ್ತೆ ಮತ್ತೆ ದಾಳಿಂಬೆಯ ಪ್ರತಿಮೆಗೆ ಮರಳುತ್ತಿತ್ತು. ಅವುಗಳ ದಿಟ್ಟ, ಪೂರ್ಣ ಜೀವಂತಿಕೆ, ಆದರೆ ಅದೇ ವೇಳೆಗೆ ಅವುಗಳ ತಾತ್ಕಾಲಿಕತೆ, ನಶ್ವರತೆ...’ 

ಅಹ್ಲಾವತ್ ನೋಟಗಳು ಲೇಖಕ-ಲೇಖಕಿ-ಕಲಾವಿದ-ಕಲಾವಿದೆ-ಪ್ರಕಾಶಕ-ಪ್ರಕಾಶಕಿ-ಓದುಗ-ಓದುಗಿ ಎಲ್ಲರನ್ನೂ ಎಜುಕೇಟ್ ಮಾಡಬಲ್ಲವು:

‘ಬುಕ್ ಕವರ್ ಬರಿ ಪ್ಯಾಕೇಜಿಂಗ್ ಅಂತ ನಾನು ತಿಳಿದಿಲ್ಲ. ಅದು ತನ್ನದೇ ಆದ ಸ್ಟ್ರಕ್ಚರ್-ಐಡೆಂಟಿಟಿ ಇರುವ ಪ್ರಕ್ರಿಯೆ. ಇವೆರಡೂ ಸೇರಿ ಕೃತಿ ಬರೆದವರ ಅರ್ಥ, ಸಂದೇಶಗಳಿಗೆ ಆಕಾರ ಕೊಟ್ಟು, ಕೃತಿಯೊಳಗಿನ ಶಬ್ದಗಳಿಗೆ ಒಂದು ಮುಖ ಕೊಡುತ್ತವೆ. ಇದು ನಾವು ಪುಸ್ತಕ ತೆರೆಯುವ ಮೊದಲೇ ಕಾಣುವ ಮುಖ. ಪುಸ್ತಕ ತೆರೆಯುವ ಆ ಗಳಿಗೆಯಲ್ಲಿ ಮಖಪುಟಕ್ಕೆ ನಿರ್ಣಾಯಕ ಪಾತ್ರವಿದೆ. ಅದು ಪುಸ್ತಕ ಓದುವವರಲ್ಲಿ ಪ್ರತಿಧ್ವನಿ ಪಡೆಯಬೇಕು. ಆಹ್ವಾನಿಸಬೇಕು. ಪುಸ್ತಕ ಓದಲು ಒತ್ತಾಯಿಸಬೇಕು. ಎಲ್ಲವೂ ಪುನರಾವರ್ತನೆಯಾಗುವ ಈ ಕಾಲದಲ್ಲಿ ವಿನ್ಯಾಸಕಾರ ಅತ್ಯಂತ ವಿಭಿನ್ನವಾಗಿಯೇ ಯೋಚಿಸಬೇಕಾಗುತ್ತದೆ; ತನ್ನೊಳಗಿನ ಪಿಸುದನಿಯನ್ನು ಕೇಳಿಸಿಕೊಂಡು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಓದುವವರ ನಿರೀಕ್ಷೆಗೆ ಮೀರಿದ್ದನ್ನು ಕೊಡುವುದು ಅನಿವಾರ್ಯ.’

`ಹಾರ್ಟ್ ಲ್ಯಾಂಪ್’ ಕೃತಿ ಮರುಮುದ್ರಣವಾದಾಗಲೆಲ್ಲ ಅಹ್ಲಾವತ್ ಮೂಲದ ದಾಳಿಂಬೆ ಪ್ರತಿಮೆಯನ್ನು ಬೇರೆ ಬೇರೆ ಥರದಲ್ಲಿ ಬಳಸಿದರು: ‘ಒಂದು ಪ್ರಕಾಶನ ಸಂಸ್ಥೆಯಲ್ಲಿ ಮುಖಪುಟ ವಿನ್ಯಾಸ ಎನ್ನುವುದು ಹಲವರು ಸೇರಿ ಮಾಡುವ ಕೆಲಸ.  ಎಡಿಟರುಗಳು, ಮಾರಾಟ ವಿಭಾಗ, ಕೃತಿ ಬರೆದವರು ಅನುವಾದಿಸಿದವರು... ಎಲ್ಲರ ಜೊತೆಗೂ ನಾವು ಕೆಲಸ ಮಾಡಬೇಕಾಗುತ್ತದೆ. ‘ಹಾರ್ಟ್ ಲ್ಯಾಂಪ್’ ಕೃತಿಯ ವಿನ್ಯಾಸದ ಸಂದರ್ಭದಲ್ಲಿ ದೀಪಾ ಭಾಸ್ತಿ ದಾಳಿಂಬೆ ಬೀಜದ ಐಡಿಯಾ ಸೂಚಿಸಿದ ಮೇಲೆ, ಕಥಾ ಸಂಕಲನದ ಹಸ್ತಪ್ರತಿ ಓದಿದಾಗ ಈ ಸಲಹೆಯ ಅರ್ಥ ಹಾಗೂ ಸೌಂದರ್ಯ ನನ್ನೊಳಗೆ ಇಳಿಯತೊಡಗಿದವು.’

‘ಹಾರ್ಟ್ ಲ್ಯಾಂಪ್ ಮುಖಪುಟ ಬಾನು ಮುಷ್ತಾಕರ ಲೋಕಕ್ಕೆ ನನ್ನ ಸ್ಪಂದನ. ಈ ಕತೆಗಳಂತೆ ಈ ಮುಖಪುಟ ಕೂಡ ಓದುಗ ಓದುಗಿಯರನ್ನು ಮೆಲ್ಲಗೆ ಹಾಗೂ ಬಲವಾಗಿ ಆಹ್ವಾನಿಸುತ್ತದೆ ಎಂಬುದು ನನ್ನ ನಿರೀಕ್ಷೆ’ ಎನ್ನುವ ಆಹ್ಲಾವತ್, ನಂತರ ‘ಹಾರ್ಟ್ ಲ್ಯಾಂಪ್’ನ ಹತ್ತಾರು ಮುದ್ರಣಗಳಿಗೆ ಬಗೆಬಗೆಯ ಬಣ್ಣಗಳ ಕವರುಗಳನ್ನು ಮಾಡುತ್ತಲೇ ಇದ್ದಾರೆ.

ವಿನ್ಯಾಸ ಕಲಾವಿದ ಒಳ್ಳೆಯ ರೀಡರ್ ಕೂಡ ಆಗಿದ್ದರೆ ಅದು ಇನ್ನೂ ಚಂದ: ಆಗ ಇಡೀ ಕೆಲಸ ಆಳವಾಗಿ ತೊಡಗುವ, ಒಳ್ಳೆಯ ಫಲ ಕೊಡುವ, ಆನಂದದ ಕೆಲವಾಗುತ್ತದೆ. ಕಲಾವಿದ ಪುಸ್ತಕ ಓದಿದ್ದರೆ, ಇಡೀ ವಿನ್ಯಾಸ ರಚನೆಯ ಪಯಣದಲ್ಲಿ ನಡೆಯುವ ಚರ್ಚೆಗಳು, ಆಲೋಚನೆಗಳು ತೀರ್ಮಾನಗಳು, ಅರ್ಥಪೂರ್ಣವಾಗುತ್ತವೆ... ಇವೆಲ್ಲದರ ಬಗ್ಗೆ ಅಹ್ಲಾವತ್ ಸ್ಪಷ್ಟವಾಗಿದ್ದರು. 

ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’  

ಈ ಮಾತುಕತೆಯ ಕೊನೆಗೆ ಐಶ್ವರ್ಯ ಖೋಸ್ಲಾ ಕೇಳಿದರು: ‘ನೀವು ಮಾಡಿದ ಕವರುಗಳಲ್ಲಿ ನಿಮಗೆ ಪ್ರಿಯವಾದ ಮೂರು ಕವರುಗಳನ್ನು ಹೇಳಿ.’ 
ಅಹ್ಲಾವತ್ ಆಯ್ಕೆಯ ಮೂರು ಕವರುಗಳು: ರಂಜಿತ್ ಹೊಸಕೋಟೆಯವರ ‘ಮೀರ್ ತಖೀ ಮೀರ್‍’. ಅರುಂಧತಿ ರಾಯ್ ಅವರ ನಾನ್ ಫಿಕ್ಷನ್ ಬಾಕ್ಸ್ ಸೆಟ್. ಅಮಿತಾವ್ ಘೋಷ್ ಅವರ ‘ಗನ್ ಐಲ್ಯಾಂಡ್.’

ಐಶ್ವರ್ಯ ಖೋಸ್ಲಾ: ನಿಮಗೆ ತುಂಬ ಇಷ್ಟವಾದ ಬೇರೆ ವಿನ್ಯಾಸಕಾರರ ಮೂರು ಕವರುಗಳನ್ನು ಹೇಳಿ.  

ಅಹ್ಲಾವತ್ ಗುಂಜನ್: ಸಿಮನ್ ದ ಬೋವಾ ಅವರ ‘ದ ವುಮನ್ ಡೆಸ್ಟ್ರಾಯ್ಡ್’; ಮುಖಪುಟ ವಿನ್ಯಾಸ: ಪೀಟರ್ ಮೆಂಡಲ್ಸಡ್.  ಝೇಡಿ ಸ್ಮಿತ್ ಅವರ ‘ದ ಫ್ರಾಡ್; ಮುಖಪುಟ ವಿನ್ಯಾಸ: ಜಾನ್ ಗ್ರೇ. ಮ್ಯಾಕ್ಸ್ ಪೋರ್ಟರ್ ಅವರ ‘ಗ್ರೀಫ್ ಈಸ್ ದಿ ಥಿಂಗ್ ವಿತ್ ದ ಫೆದರ್‍ಸ್’; ಮುಖಪುಟ ವಿನ್ಯಾಸ: ಎಲಿನಾರ್ ಕ್ರೋ.  

ಒಬ್ಬ ಗಂಭೀರ ಹೆಣ್ಣು ಅಥವಾ ಗಂಡು ಸಂಗೀತ, ಸಾಹಿತ್ಯ, ನಟನೆ, ಚಿತ್ರಕಲೆ... ಹೀಗೆ ಯಾವುದೇ ರಂಗದಲ್ಲಿರಲಿ, ಅವರು ಮನದಾಳದಿಂದ ಪ್ರಾಮಾಣಿಕವಾಗಿ ಮಾತಾಡಿದಾಗ, ಗಂಭೀರವಾಗಿ ಸ್ಪಂದಿಸಿದಾಗ ಎಂಥ ತೂಕವಿರುತ್ತದೆ ಎಂಬುದನ್ನು ಅಹ್ಲಾವತ್ ಮಾತುಗಳು ಕೂಡ ಸೂಚಿಸುತ್ತವೆ. ಹಾಗೆಯೇ ಅವರ ಜೊತೆ ಅಷ್ಟೇ ತೂಕವಾಗಿ ಮಾತಾಡಿದ ಐಶ್ವರ್ಯ ಖೋಸ್ಲಾರ ಪ್ರಬುದ್ಧತೆ, ಸಿದ್ಧತೆ...

ನಮ್ಮ ಕನ್ನಡ ಪತ್ರಿಕೆಗಳಲ್ಲಿ ಇಂಥದ್ದಕ್ಕೆಲ್ಲ ಜಾಗವಿರದಿದ್ದರೆ ಹೋಗಲಿ, ಅವುಗಳ ಡಿಜಿಟಲ್ ಮಾಧ್ಯಮದಲ್ಲಾದರೂ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಇಂಥ ತೂಕದ ಮಾತುಕತೆಗಳು ಬಂದರೆ ಸಂಸ್ಕೃತಿಗಳ ವಿಕಾಸಕ್ಕೆ ಘನತೆ ಬರಬಲ್ಲದು.

ಅಂದ ಹಾಗೆ, ಮುಖಪುಟದ ಕೊನೇ ಗಳಿಗೆಯ ಕೆತ್ತನೆಯಲ್ಲಿ ತೊಡಗುವ ಕಲಾವಿದ-ಲೇಖಕ-ಪ್ರಕಾಶಕ ಬಳಗ; ಕಲಾವಿದರ ಸಂಭಾವನೆಯನ್ನು ಏರಿಸದೆ ಇಪ್ಪತ್ತು ವರ್ಷಗಳ ಹಿಂದಿನ ಸಂಭಾವನೆಯನ್ನೇ ಕೊಸರಾಡಿ ಕೊಡುವ ಜನ; ಅಥವಾ ಪುಸ್ತಕದ ಮೇಲೆ ಕಣ್ಣಾಡಿಸದೇ ಮುಖಪುಟ ಮಾಡುವ ಮಂದಿ, ತಮ್ಮ ಐಡಿಯಾವನ್ನೇ ವಿನ್ಯಾಸಕಾರರ ಮೇಲೆ ಹೇರುವವರು ...ಎಲ್ಲರೂ ಅಹ್ಲಾವತ್ ಅವರ ಒಳನೋಟದ ನಿವೇದನೆಗಳನ್ನು, ತನಗೆ ತಾನೇ ಆಡಿಕೊಂಡಂತಿರುವ ಪಿಸುದನಿಗಳನ್ನು ಗಮನವಿಟ್ಟು ಕೇಳಿಸಿಕೊಂಡರೆ ಒಳ್ಳೆಯದಾಗುತ್ತದೆ. 

ಎರಡು ವಾರಗಳ ಕೆಳಗೆ ಇಂಡಿಯನ್ ಎಕ್ಸ್‌ಪ್ರೆಸ್ ಡಿಜಿಟಲ್ ಆವೃತ್ತಿಯಲ್ಲಿ ಬಂದ ಈ ಸಂದರ್ಶನವನ್ನು ಬಾನು ಮುಷ್ತಾಕ್ ನೋಡಿರಲಿಕ್ಕಿಲ್ಲ ಎಂದು ಬೆಳಬೆಳಗ್ಗೆಯೇ ಫೋನ್ ಮಾಡಿ, ‘ಅಕ್ಕಾವ್ರಾ?’ ಎಂದೆ. 
ಅಷ್ಟೊತ್ತಿಗಾಗಲೇ ಬಾನು ಮುಷ್ತಾಖ್ ಅಹ್ಲಾವತ್ ಮಾತುಗಳನ್ನು ಓದಿದ್ದರು.

‘ಅಹ್ಲಾವತ್ ಗುಂಜನ್ ನಿಮ್ಮ ಕತೆಗಳನ್ನ ಓದಿರೋ ರೀತಿಯೇ ಬೇರೆ! ನಾನು ಮೊದಲ ಸಲ ಈ ಪುಸ್ತಕ ನೋಡಿದಾಗ ಇದ್ಯಾಕೆ ಈ ದಾಳಿಂಬೆ ಬೀಜ... ಅಂದುಕೊಂಡು ಸುಮ್ಮನಾಗಿದ್ದೆ. ಈಗ ನೋಡಿದರೆ ಈ ಕವರ್ ಪೇಜಿನ ಪ್ರತಿಮೆಗಳು ಎಷ್ಟೊಂದು ಅರ್ಥಪೂರ್ಣ ಅನ್ನಿಸುತ್ತಿವೆ!’ ಎಂದೆ. 

‘ಹೂಂ’ ಎಂದ ಬಾನು ಕೂಡ ಅಹ್ಲಾವತ್ ತಮ್ಮ ಕತೆಗಳನ್ನು ಓದಿದ ರೀತಿಗೆ ವಿಸ್ಮಯಗೊಂಡಿದ್ದರು.

ಒಂದು ಪ್ರತಿಭೆ ಮತ್ತೊಂದು ಪ್ರತಿಭೆಯನ್ನು ಭೇಟಿ ಮಾಡುವುದೆಂದರೆ ಇದೇ; ‘ಕವಿಗೆ ಕವಿ ಮಣಿವಂ’ ಎಂದು ನಮ್ಮ ಹಿರಿಯ ಕವಿಗಳು ಹೇಳಿದ್ದೂ ಇದೇ!  

blog
22 Feb 2026 ’ಓದುಪ್ರತಿಭೆ’ಯ ಸೃಜನಶೀಲ ಆಟ!

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕವಿಯದು ‘ಕಾರಯಿತ್ರಿ ಪ್ರತಿಭೆ’ ಹಾಗೂ ಸಹೃದಯನದು 'ಭಾವಯಿತ್ರಿ ಪ್ರತಿಭೆ’ ಎಂದು ವಿಭಾಗ ಮಾಡಿರುವ ರೀತಿ ನಿಮ್ಮಲ್ಲಿ ಹಲವರಿಗೆ ಗೊತ್ತಿರುತ್ತದೆ. ಇಂಥ ಕಟ್ಟುನಿಟ್ಟಿನ ವಿಭಾಗೀಕರಣ ಅಷ್ಟು ಸರಿಯಲ್ಲ ಎಂದು ಬಹಳ ವರ್ಷಗಳಿಂದ ಅನಿಸುತ್ತಲೇ ಇತ್ತು. ಓದುವುದು ಕೂಡ ಕಾರಯಿತ್ರಿ- ಅಂದರೆ ಕ್ರಿಯೇಟಿವ್- ಪ್ರತಿಭೆ-ಸೃಜನಶೀಲ ಪ್ರತಿಭೆ- ಎಂದೇ ನಂಬಿಕೊಂಡು ಬಂದ ನನ್ನಂಥವರು ಹಲವರಿರಬಹುದು. 

ಈ ನಂಬಿಕೆ ಕೃತಿ ರಚನೆಯ ನಂತರ, ‘the author dies and the reader is born’ (ಕೃತಿಕಾರ-ಕೃತಿಕಾರ್ತಿ ಸಾಯುತ್ತಾರೆ; ಓದುಗ-ಓದುಗಿ ಹುಟ್ಟುತ್ತಾರೆ) ಎಂಬ ರೋಲಾ ಬಾರ್ತ್ ಮಾತು ಕೇಳಿದ ಮೇಲಂತೂ ಇನ್ನಷ್ಟು ಗಾಢವಾಗತೊಡಗಿತು. ‘ನೀನು ಬೆಳೆದರೆ ನಾನು ಬೆಳೆವೆ’ ಎಂಬ ಕುವೆಂಪು ಸಾಲಿನಲ್ಲಿ ಕೃತಿಯೊಂದು ಓದುಗ, ಓದುಗಿಗೆ ಮಾಡುವ ಬಿನ್ನಹ ಅಥವಾ ಅವರಿಗೆ ಹಾಕುವ ಅವ್ಯಕ್ತ ಸವಾಲ್ ಕೂಡ ಇದೆ ಎಂದು ನನಗನ್ನಿಸಿದ್ದು ಅನಂತರ. ‘ಓದು ಎನ್ನುವುದು ಅರ್ಥದ ನಿರಂತರ ವಿಸ್ತರಣೆ’ ಎಂಬ ಡೆರಿಡಾ ಮಾತು ಓದಿದ ಮೇಲಂತೂ ಪ್ರತಿ ಓದೂ ಅರ್ಥದ ನಿರಂತರ ವಿಸ್ತರಣೆ ಎಂಬ ನಂಬಿಕೆ ಗಾಢವಾಗಿಯೇ ಬೆಳೆಯಿತು. 

ಈ ಥರದ ವಿಸ್ತರಣೆ ಕೂಡ ‘ಹೀಗೆ ಅರ್ಥ ವಿಸ್ತರಣೆ ಮಾಡಲೇಬೇಕು’ ಎಂಬ ಪ್ರಜ್ಞಾಪೂರ್ವಕವಾದ ಒತ್ತಾಯದಿಂದ ಆಗಬೇಕಿಲ್ಲ; ಈ ಅರ್ಥದ ವಿಸ್ತರಣೆಯನ್ನು ಒಂದು ವ್ರತದಂತೆ ಹೇರಿಕೊಂಡೋ ಅಥವಾ ಕೆಟ್ಟ ಹಟಕ್ಕೆ ಬಿದ್ದಂತೆಯೋ ‘ಹೊಸ ಅರ್ಥ ಸಾಧಿಸಲು’ ಮಾಡಿದ ಕಸರತ್ತಿನಂತೆ ನಡೆಸಬೇಕಿಲ್ಲ. ಹೀಗೆ ಮಾಡಲು ಹೋಗಿ ಪೋಲಂಕಿ ರಾಮಮೂರ್ತಿಯವರು ’ಸೀತಾಯಣ’ದಲ್ಲಿ ಎಷ್ಟೊಂದು ಓವರ್‍‌ರೀಡಿಂಗ್ ಮಾಡಿದ್ದರಲ್ಲವೇ ಎಂದು ಇವತ್ತೂ ಅನ್ನಿಸುತ್ತದೆ.  ಎಲ್ಲ ವಾಚ್ಯಾರ್ಥಗಳಿಗೂ ಧ್ವನ್ಯಾರ್ಥವಿರಬಹುದು; ಆದರೆ ಸದಾ ಎಲ್ಲ ಮಾತುಗಳಿಗೂ ಎಲ್ಲ ಬಗೆಯ ಧ್ವನ್ಯಾರ್ಥಗಳನ್ನೂ ಆರೋಪಿಸುವುದು ಸರಿಯಾಗದು!

ಈ ಸಲ ಇಷ್ಟೆಲ್ಲ ಪೀಠಿಕೆ ಬರೆಯುವ ಲಹರಿಗೆ ಕರೆದೊಯ್ದವರು ಈ ಅಂಕಣ ಓದುವ ಗೆಳೆಯ ಗೆಳತಿಯರು. ಈ ಅಂಕಣ ಬರೆಯಲು ಶುರುಮಾಡಿದ ದಿನದಿಂದಲೂ ಗೆಳೆಯ, ಗೆಳತಿಯರ, ಓದುಗ ಓದುಗಿಯರ ಸೃಜನಶೀಲ ಪ್ರತಿಕ್ರಿಯೆಗಳು ಈ ಅಂಕಣದ ಹಲವು ವಸ್ತುಗಳನ್ನು ಬೆಳೆಸುತ್ತಲೇ ಇರುವ ವಿಸ್ಮಯವನ್ನು ನೋಡುತ್ತಾ ಅನುಭವಿಸುತ್ತಾ ಬಂದಿದ್ದೇನೆ. ಅವರಿವರ ಜೊತೆ ಓದುವ ಈ ಆಟ, ಡೆರಿಡಾ ಹೇಳಿದ ಅರ್ಥದ ನಿರಂತರ ವಿಸ್ತರಣೆ, ನನ್ನ ಹಲವು ಪ್ರಿಯವಾದ ತೊಡಗುವಿಕೆಗಳಲ್ಲಿ ಒಂದು; ಈ ಓದಿನ ಆಟದ ಖುಷಿಗೆ ಕಿ.ರಂ. ನಾಗರಾಜ್ ಡಿ. ಆರ್‍. ನಾಗರಾಜ್ ಥರದ ದೊಡ್ಡವರ ಸಂಗವೂ ಒಂದು ಪ್ರೇರಣೆ; ಹಾಗೆಯೇ ನನ್ನ ತರಗತಿಗಳಲ್ಲಿ ಎದುರಾದ ಸಾವಿರಾರು ವಿದ್ಯಾರ್ಥಿನಿ-ವಿದ್ಯಾರ್ಥಿಗಳು ಕೂಡ ಇಂಥ ಆಟವನ್ನು ಪ್ರೇರೇಪಿಸಿದ್ದಾರೆ. ಆ ಅನುಭವ ಈ ಅಂಕಣದಲ್ಲೂ ಮುಂದುವರಿದಿದೆ.

ಓದುವ ಆಟದ ಸೃಜನಶೀಲತೆ ಕೈಬಿಟ್ಟು ಕ್ಲಾಸ್ ರೂಮುಗಳು ಜಡವಾಗತೊಡಗುವ ಅನುಭವವನ್ನು ನಿಮ್ಮಲ್ಲನೇಕರು ಹಾದು ಬಂದಿರಬಹುದು ಅಥವಾ ಈಗಲೂ ಹಾದು ಬರುತ್ತಿರಲೂಬಹುದು. ಇಂಥ ಜಡತೆಯನ್ನು ಇಲ್ಲವಾಗಿಸಬಲ್ಲ ಕ್ರಿಯೇಟಿವ್ ಮಂದಿಯನ್ನೂ ನೀವು ಬಲ್ಲಿರಿ. ‘ಕೃತಿ ರಚನೆಯ ನಂತರ ಕೃತಿಕಾರ, ಕೃತಿಕಾರ್ತಿ ಸಾಯುತ್ತಾರೆ; ಓದುಗ, ಓದುಗಿ ಹುಟ್ಟುತ್ತಾರೆ’ ಎಂಬ ರೋಲಾ ಬಾರ್ತ್ ಮಾತು ಕೇಳದಿದ್ದವರು ಕೂಡ ಈ ಓದಿನ ಸ್ವಾಯತ್ತತೆಯ ಸ್ಪಿರಿಟ್ಟನ್ನು ಸಹಜವಾಗಿಯೇ ಚಲಾಯಿಸುತ್ತಲೇ ಇರುತ್ತಾರೆ.  

ಹಿಂದಿನ ಅಂಕಣಗಳಲ್ಲಿ ಓದುಗ, ಓದುಗಿಯರ ವ್ಯಾಖ್ಯಾನ ಪ್ರತಿಭೆಯ ಬಗ್ಗೆ ಆಗಾಗ್ಗೆ ಬೆರಗಾಗಿ ಬರೆದಿರುವುದನ್ನು ನೀವು ಗಮನಿಸಿರಬಹುದು. ಕಳೆದ ವಾರ ಈ ಅಂಕಣದಲ್ಲಿ ಬರೆದ ಪಾಲೋ ಕೊಯ್ಲೋನ ಚಮಚದಲ್ಲಿನ ಎರಡು ಹನಿ ಎಣ್ಣೆಯ ಕತೆಯ ಬಗ್ಗೆ ಬಂದ ಕೆಲವು ವ್ಯಾಖ್ಯಾನಗಳು ವಿಶೇಷವಾಗಿದ್ದವು. ಅವುಗಳ ಸುತ್ತ ಕೆಲವು ಮಾತು:  

‘ಆನಂದದ ನಿಗೂಢ ಒರತೆಗಳು’ ಲೇಖನ ಓದಿ ‘ಸುಮ್ಮನೆ ಖುಷಿಖುಷಿಯಾಗಿರಬೇಕಾದ ಅವಶ್ಯಕತೆ’ ಪ್ರೊಫೆಸರ್‍ ವತ್ಸಲಾಗೆ ಕಂಡದ್ದು ಕುತೂಹಲಕರ. ‘ಸುಖೀನಾಡುಗಳ ಸಮೀಕ್ಷೆ’ ಎಷ್ಟೇ ಯಾಂತ್ರಿಕವಾಗಿರಲಿ ಅಥವಾ ಪಶ್ಚಿಮದ ಆಟವಾಗಿರಲಿ, ಅದು ವತ್ಸಲಾಗೆ ‘ಪಕ್ಕದ ಭೂತಾನ್ ಹಲವು ಕೊರತೆಗಳ ನಡುವೆಯೂ ತೃಪ್ತ ದೇಶ ಎಂಬ ಸಮೀಕ್ಷೆಯೊಂದು ಕೆಲವರ್ಷಗಳ ಹಿಂದೆ ಬಹಳ ವೈರಲ್ ಆಗಿತ್ತು’ ಎಂಬುದನ್ನು ನೆನಪಿಸಿತು.  ಪಾಲೋ ಹೇಳಿದ ಕತೆ ಕೇಳಿದ ವತ್ಸಲಾಗೆ, ಟಾಲ್ ಸ್ಟಾಯ್ ಬರೆದ ‘ಒಬ್ಬನಿಗೆ ಎಷ್ಟು ಭೂಮಿ ಬೇಕು?’  ನೆನಪಾಯಿತು. 

ವತ್ಸಲಾ ಉಲ್ಲೇಖ ’ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್?’ ಎಂಬ ಟಾಲ್‌ಸ್ಟಾಯ್ ನ ಎಲ್ಲ ಕಾಲದ ಶ್ರೇಷ್ಠ ಕತೆ ೧೯೪೭ರ ಸುಮಾರಿಗೆ ಕೊನಗವಳ್ಳಿಯ ಹುಡುಗ ಲಂಕೇಶಪ್ಪನಿಗೆ ಸಿಕ್ಕ ಗಳಿಗೆಗೆ ಕನೆಕ್ಟಾಯಿತು! ಆ ಹುಡುಗನಿಗೆ ಆ ಕತೆಯ ಕನ್ನಡಾನುವಾದ ಅಲ್ಲಿನ ವಯಸ್ಕರ ಶಿಕ್ಷಣ ಶಾಲೆಯಲ್ಲಿ ಸಿಕ್ಕಿತ್ತು. ಆಗ ಪಿ. ಲಂಕೇಶ್ ಇನ್ನೂ ಲಂಕೇಶಪ್ಪ ಆಗಿದ್ದರು; ಹೆಚ್ಚುಕಡಿಮೆ ‘ಉಮಾಪತಿಯ ಸ್ಕಾಲರ್‍‌ಶಿಪ್ ಯಾತ್ರೆ’ಯ ಉಮಾಪತಿಯಂತೆ ಶಾಣ್ಯಾ ಹಾಗೂ ಗೊಂದಲಗಳ ಹುಡುಗನಾಗಿದ್ದರು ಎಂದು ಅವರ ‘ಹುಳಿಮಾವಿನ ಮರ’ ಆತ್ಮಕತೆ ಸೂಚಿಸುತ್ತದೆ. 

ಈ ಮಾತು ಬರೆಯುವಾಗ ಇದ್ದಕ್ಕಿದ್ದಂತೆ ಹೀಗನ್ನಿಸಿತು: ಗೊರೂರು ರಾಮಸ್ವಾಮಿ ಅಯ್ಯಂಗಾರ್‍ ಕನ್ನಡಿಸಿದ ಈ ಕತೆಯ ಓದು ಹುಡುಗ ಲಂಕೇಶನಲ್ಲಿ ಹುದುಗಿದ್ದ ಕತೆಗಾರನನ್ನು ಹೊರತಂದಿರಬಹುದು. ಅಂದರೆ, ಒಂದು ಕತೆಯ ಆಕಸ್ಮಿಕ ಓದು ಕೊನಗವಳ್ಳಿಯ ಹದಿಹರೆಯದ ಹುಡುಗನ ಸೃಜನಶೀಲತೆಯ ಉಕ್ಕುವಿಕೆಗೆ, ಸ್ಫೋಟಕ್ಕೆ ಕಾರಣವಾಗಿರಬಹುದಾದದ್ದು ಹೀಗೆ. ಅಥವಾ ಬಾಡದ ಕನಕದಾಸ ಎಲ್ಲೋ ಕೇಳಿಸಿಕೊಂಡ ಪುರಾಣ ಕತೆಗಳು ಅನನ್ಯವಾದ ಶೃಂಗಾರ ರಸ ಉಕ್ಕಿ ಹರಿಯುವ ‘ಮೋಹನ ತರಂಗಿಣಿ’ ಎಂಬ ಮಹಾಕಾವ್ಯವಾಗುವುದು ಪ್ರಾಯಶಃ ಹೀಗೆ; ಅಥವಾ, ಗದುಗಿನ ನಾರಣಪ್ಪನ ಕಿವಿಗೆ ಬಿದ್ದ ವ್ಯಾಸಭಾರತ ಕುಮಾರವ್ಯಾಸನ ಗದುಗಿನ ಭಾರತವಾಗುವುದು ಹೀಗೆ; ಅಥವಾ, ಗ್ರೀಕ್ ನಾಡಿನ ಸಮೂಹ ಜ್ಞಾನವನ್ನೆಲ್ಲ ಹೊತ್ತು ತಂದ ಹತ್ತಾರು ಕತೆಗಳ ತೊರೆ, ನದಿ, ಹೊಳೆ ಹರಿದು ಬಂದು ಹೋಮರ್‍‌ನ ’ಇಲಿಯಡ್’ ಮಹಾಕಾವ್ಯವಾಗುವುದು ಹೀಗೆ. ಹೋಮರನ ’ಇಲಿಯಡ್’ ‘ಒಡಿಸ್ಸಿ’ ಕಾವ್ಯಗಳ ಇಪ್ಪತ್ತನೆಯ ಶತಮಾನದ ಓದು ಜೇಮ್ಸ್ ಜಾಯ್ಸನ ‘ಯೂಲಿಸಿಸ್’ ಎಂಬ ಮಹಾನ್ ನವ್ಯ ಕಾದಂಬರಿ ಬರೆಸುವುದು ಹೀಗೆ! 

ಇವೆಲ್ಲದರ ಹಿಂದೆ ’ಓದು’ ಅಥವಾ ’ರೀಡಿಂಗ್’ ಎನ್ನುವ ಭಾವಯಿತ್ರಿ ಪ್ರತಿಭೆ ಇದ್ದೇ ಇದೆ. ಆದರೆ ಭಾವಯಿತ್ರೀ ಪ್ರತಿಭೆಯ ಸೃಜನಶೀಲ ಓದು ಕಾರಯಿತ್ರೀ ಪ್ರತಿಭೆಯ ಮೂಲಗಳಲ್ಲೊಂದು ಎಂದರೆ ಯಾರೂ ಅಚ್ಚರಿಪಡಬೇಕಾಗಿಲ್ಲ. 

ಕಳೆದ ಸಲದ ಅಂಕಣದಲ್ಲಿ ಪಾಲೋ ಕೊಯ್ಲೋ ಕತೆಯನ್ನು ಅವರವರ ಭಾವಕ್ಕೆ ಅವರವರ ಅರ್ಥಕ್ಕೆ ಬಿಟ್ಟಿದ್ದೆನಲ್ಲ, ಆ ಕತೆಯ ಮೊದಲ ಓದಿನಲ್ಲಿ ಹಲವರು ಕೊಟ್ಟ ಆ ಕ್ಷಣದ ಹೊಸ ಓದುಗಳನ್ನು ಕೆಳಗೆ ಕೊಟ್ಟಿರುವೆ: 

ಪಾಲೋ ಕತೆ ಓದಿದ ಗೆಳೆಯ ಜೆ. ಶಾಮರಾವ್ ಬರೆದರು: ‘ಆನಂದದ ನಿಗೂಢ ಒರತೆಗಳು ನೂರೋ ಸಾವಿರವೋ ಇದ್ದಾವು. ಆದರೂ ಈ ಕತೆ, ‘ಎಣ್ಣೆ ಚೆಲ್ಲುವ ಕುರಿತು ಕಾಳಜಿ ಬೇಡ, ಸುತ್ತಲಿನ ಸೊಬಗು ನೋಡಿ ಆನಂದಿಸು’ ಎಂದಂತಿದೆ!’

ಕನ್ನಡ ಅಧ್ಯಾಪಕಿ ಕುಸುಮ ವಡ್ಡಾರಾಧನೆಯ ಕತೆಯ ನಂದಿಮಿತ್ರನನ್ನು ನೆನಪಿಸಿದರು: ‘ವಡ್ಡಾರಾಧನೆ’ಯಲ್ಲಿ ಬರುವ ನಂದಿಮಿತ್ರ ಎಂಬ ಮುನಿಯ ಕಥೆ ವಿಶೇಷವಾಗಿದೆ. ಊಟದ ಸವಿಯಲ್ಲಿ ಸುಖ ಕಾಣುವ ಅವನು ಅದಕ್ಕಾಗಿಯೇ ತಪಸ್ವಿಯಾಗುತ್ತಾನೆ. ನಂತರದಲ್ಲಿ ಆ ಊಟದ ಆಸೆಯನ್ನು ಮೀರುವಲ್ಲಿ ಸುಖ ಅನುಭವಿಸುತ್ತಾನೆ. ಅಂದರೆ, ಸುಖ ಎಂಬ ಕಲ್ಪನೆಯೇ ಕ್ಷಣಿಕವೋ? ಕಟ್ಟುಕಥೆಯೋ? ಭ್ರಮೆಯೋ? ಅಥವಾ ನಮ್ಮ ನಂಬಿಕೆಯೋ ಎನಿಸಿತು. ಭೋಗಸಂಸ್ಕೃತಿ ಎಂಬುದರ ನಿಜ ಅರ್ಥವನ್ನು ಇನ್ನೂ ತಿಳಿಯಬೇಕಿದೆ .’

ಲೇಖಕಿ, ಪ್ರೊಫೆಸರ್ ಶಾಕಿರ ಖಾನುಂ ಕೊಟ್ಟ ವ್ಯಾಖ್ಯಾನ: ‘ಆನಂದದ ಗುಟ್ಟು ಏನು ಎಂದು ತಿಳಿಯಲು ಹೋದ ತರುಣನಿಗೆ ಸಂತ-ಜ್ಞಾನಿ ಎರಡು ಹನಿ ಎಣ್ಣೆಯ ಚಮಚ ಕೊಟ್ಟು, ಅದನ್ನು ಚೆಲ್ಲದಂತೆ ಅರಮನೆ ಸುತ್ತಾಡಿ ಬರಲು ಹೇಳುತ್ತಾನೆ. ಮೊದಲು ತರುಣ ಎಣ್ಣೆಯ ಚಿಂತೆಯಲ್ಲೇ ಅರಮನೆಯ ಸೊಬಗನ್ನು ನೋಡದೆ ಹಿಂತಿರುಗುತ್ತಾನೆ. ಮತ್ತೆ ಎಣ್ಣೆಯ ಚಮಚ ಕೊಟ್ಟು ಅರಮನೆ ಸುತ್ತಾಡಲು ಹೇಳಿದಾಗ, ತರುಣ ಅರಮನೆಯ ಸೊಬಗನ್ನು ನೋಡಿ, ಎಣ್ಣೆ ಚೆಲ್ಲಿದ್ದನ್ನು ಗಮನಿಸಿ, ಆನಂದದ ಗುಟ್ಟನ್ನು ಅರಿಯುತ್ತಾನೆ. ಅಂದರೆ, ಸುಖ-ದುಃಖಗಳನ್ನು ಸಮತೂಕದಲ್ಲಿ ಇರಿಸಿಕೊಂಡು ಜೀವನವನ್ನು ಆನಂದಿಸುವುದು ಎಂದರ್ಥ- ವಿಷ್ಣು ನಾರದನ ಭಕ್ತಿಯನ್ನು ರೈತನ ಭಕ್ತಿಗೆ ಹೋಲಿಸಿದಂತೆ.’

ಪಾಲೋ ಕೊಯ್ಲೋ ಕತೆ ಓದಿದ ಲೇಖಕ ಹಳೆಮನೆ ರಾಜಶೇಖರ ಅವರಿಗೆ, ‘ತತ್ವಪದಗಳಲ್ಲಿ ವ್ಯಕ್ತವಾದ ಆನಂದದ ಸ್ಥಿತಿ ನೆನಪಾಯಿತು. ಲೋಕದ ಸೊಗಸು ಮತ್ತು ಕೇಡಿನ ಜೊತೆ ಅಂತರಂಗದ ತನ್ಮಯತೆಯಿಂದ ಅನುಸಂಧಾನಗೊಳ್ಳುತ್ತಲೇ ಇರುವುದು ಆನಂದದ ಒಂದು ಒರತೆಯಾಗುತ್ತದೆ’ ಎನ್ನಿಸಿತು.  

ಪಾಲೋ ಕೊಯ್ಲೋನ ‘ಆಲ್ಕೆಮಿಸ್ಟ್’ ಕಾದಂಬರಿಯನ್ನು ಓದಿ ಬಹುವಾಗಿ ಮೆಚ್ಚಿರುವ ಪದ್ಮಾಕ್ಷಿಯವರು ಆ ಕಾದಂಬರಿಯ ಹಲವು ಸಾಲುಗಳನ್ನು ಮೆಲುಕು ಹಾಕುತ್ತಾ ಸದಾ ಕಾಡುವ ಸಾಲೊಂದನ್ನು ಬರೆದರು: ‘ರಾತ್ರಿಯ ಕಗ್ಗತ್ತಲ ಗಂಟೆ ಇನ್ನೇನು ಬೆಳಗು ಮೂಡುವ ಮುನ್ನ ಬರುತ್ತದೆ.’ ಈ ಸಾಲಿನ ನಿರಂತರ ಆಶಾವಾದ (ಅಥವಾ ವಿಚಿತ್ರ ವಿಷಾದ?) ನನ್ನನ್ನು ಚಣ ಹಿಡಿದು ನಿಲ್ಲಿಸಿತು.

ಕವಿ ರಮೇಶ್ ಅರೋಲಿಗೆ ಜಪಾನಿನ ಆಚರಣೆಯೊಂದು ನೆನಪಾಯಿತು: ‘ಅಲ್ಲಿ ಜನ ಪ್ರಾರ್ಥನಾ ಮಂದಿರಕ್ಕೆ ಹೋದಾಗ ಅಲ್ಲಿ ಖಾಲಿ ಮಡಕೆಯಲ್ಲಿ ತಮ್ಮ ಬಯಕೆಯನ್ನು ಉಸುರುತ್ತಾರೆ ಹಾಗೂ ಆಮೇಲೆ ಮುಚ್ಚಳ ಮುಚ್ಚಿ ಇಡುತ್ತಾರೆ.’ 

ಈ ಅಂಕಣ ಬಾನೇರುವಾಗ ಗುರು ಜಗಳೂರು ಬರೆದರು: ‘ಕೆ.ಎಸ್.ನ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಎನ್ನುವುದರ ಅರ್ಥ ಇದೇ ಅಲ್ಲವೇ?’

ಈ ಬಗೆಯ ಓದಿನ ಆಟ ನಮ್ಮೆಲ್ಲರನ್ನೂ ಲವಲವಿಕೆಯಲ್ಲಿಟ್ಟಿರಲಿ!  
 



Latest Video


Nataraj Huliyar Official
YouTube Channel

SUBSCRIBE