Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
12 Jul 2026 ಮತ್ತೆ ನೆರೂಡನ ಜೊತೆ

ಪ್ರಿಯರ ಬಗ್ಗೆ ಮಾತಾಡಲು ಒಂದು ನೆವ ಬೇಕಷ್ಟೆ! ಅದು ಹೇಗೆಂದರೆ, ಪ್ರೀತಿಸಿದ ಹೊಸದರಲ್ಲಿ ಏನಾದರೂ ನೆವ ತೆಗೆದು ಅವನ ಅಥವಾ ಅವಳ ಬಗ್ಗೆ ಏನನ್ನಾದರೂ ಮೆಚ್ಚಿಕೊಂಡು, ಹೇಳಿಕೊಂಡು ಆನಂದಿಸುವ ಹಾಗೆ! ಈ ಅಂಕಣ ಪ್ರಕಟವಾಗುವ ದಿನ (ಜುಲೈ ೧೨) ಚಿಲಿಯ ಕವಿ ಪಾಬ್ಲೋ ನೆರೂಡ (೧೯೦೪-೧೯೭೩) ಹುಟ್ಟುಹಬ್ಬ ಎಂಬುದು ಮೊನ್ನೆ ನೆನಪಾದಾಗ, ಇವತ್ತಿಗೂ ಲೋಕದ ಪ್ರಗತಿಪರ ಕವಿಗಳ ಕಣ್ಮಣಿಯಂತಿರುವ ನೆರೂಡನ ಬಗ್ಗೆ ಆಗಾಗ ಬರೆದ ಟಿಪ್ಪಣಿಗಳನ್ನು ಮತ್ತೆ ಕೊಡುವ ಉಮೇದು ಹುಟ್ಟಿತು:

ನಮ್ಮ ಹದಿಹರೆಯದ ಕಾವ್ಯೋತ್ಸಾಹದಲ್ಲಿ ಪಾಬ್ಲೋ ನೆರೂಡ ಎಂಬ ಕವಿಯ ಕಮ್ಯುನಿಸ್ಟ್ ವ್ಯಕ್ತಿತ್ವದ ಬಗ್ಗೆ ಕೇಳಿಯೇ ರೋಮಾಂಚನವಾಗುತ್ತಿತ್ತು. ಹದಿನಾರು ವರ್ಷದವನಾಗಿದ್ದಾಗಲೇ ಯಾವುದೇ ಸಂಕೋಚವಿಲ್ಲದೆ 'ನಾನು ಕವಿ' ಎಂದು ಘೋಷಿಸಿಕೊಂಡ ಅವನ ಧೈರ್ಯ ಕಂಡು ಅಚ್ಚರಿ ಆಗುತ್ತಿತ್ತು. 'ಬಾ ಬೀದಿಯ ಮೇಲೆ ಚೆಲ್ಲಿದ ನೆತ್ತರು ನೋಡು' ಎಂಬ ಅವನ ಕಾವ್ಯದ ಕರೆಯನ್ನು ಕನ್ನಡದ ಎಡಪಂಥೀಯ ಕವಿಗಳು ದಾಸ್ ಕ್ಯಾಪಿಟಲ್ಲಿನ ವಾಕ್ಯದಂತೆ ಒಪ್ಪಿಸುತ್ತಿದ್ದರು. 'ಕವಿಯೊಬ್ಬನಿಗೆ ರಾಜಕೀಯ ಬದ್ಧತೆಯಿದ್ದರೂ ಅವನ ಕಾವ್ಯ ಮುಕ್ಕಾಗುವುದಿಲ್ಲ ನೋಡಿ' ಎಂದು ಬಂಡಾಯ ಕವಿಗಳು ನೆರೂಡನನ್ನೋ ಬ್ರೆಕ್ಟನನ್ನೋ ಗುರಾಣಿಯಂತೆ ಬಳಸುತ್ತಿದ್ದರು. ಅತ್ತ ನೆರೂಡನ ಚಿಲಿಯಲ್ಲಿ ಅವನ ಪ್ರೇಮಪದ್ಯಗಳ ಸಾಲುಗಳನ್ನು ಜನ ಗಾದೆ ಮಾತುಗಳಂತೆ ಬಾಯಾಡಿಸುತ್ತಿದ್ದರೆಂಬ ಕತೆಗಳಿದ್ದವು. ಎಡಪಂಥೀಯ ಕ್ರಾಂತಿಕಾರಿಗಳ ಹೆಗಲು ಚೀಲಗಳಲ್ಲಿ ನೆರೂಡನ ಪದ್ಯಗಳು ಇರುತ್ತಿದ್ದವೆಂಬ ಸುದ್ದಿ ಕೇಳಿಬರುತ್ತಿತ್ತು...  ಭಾರತದಂಥ ಸನ್ನಿವೇಶಗಳಲ್ಲಿ ನೆರೂಡನ ಕಾವ್ಯ ಹಾಗೂ ಕಾವ್ಯ ಸಿದ್ಧಾಂತ ಇವತ್ತಿಗೂ ಅತ್ಯಂತ ಜೀವಂತವಾಗಿಯೇ ಇವೆ.

ಕವಿಯೊಬ್ಬನ ಆರಂಭದ ತೀವ್ರ ಎಳೆಯೊಂದು ಅವನ ಕೊನೆಯವರೆಗೂ ಕಂಡೋ, ಕಾಣದೆಯೋ ಉಳಿದೇಬಿಡುತ್ತದೆಯೆ? ನೆರೂಡನ ಕಾವ್ಯದ ರೊಮ್ಯಾಂಟಿಕ್ ತೀವ್ರತೆ; ಬೋದಿಲೇರ್‌ ಮುಖಾಮುಖಿಯಾದ ಪಾಪ; ಅಥವಾ ಎಲಿಯಟ್‌ನ ವಿಷಣ್ಣತೆ ಇವೆಲ್ಲವೂ ಈ ಕವಿಗಳ ಕಾವ್ಯದ ಕೊನೆಯವರೆಗೂ ಹರಿದಿರುವುದನ್ನು ನೋಡಿದರೆ ಹಾಗೆನ್ನಿಸುತ್ತದೆ. ತನ್ನ ಇಪ್ಪತ್ತರ ವಯಸ್ಸಿಗೆ ತಕ್ಕ ಹಾಗೆ ‘ಇಪ್ಪತ್ತು ಪ್ರೇಮ ಪದ್ಯಗಳು ಮತ್ತು ಒಂದು ನಿರಾಶೆಯ ಹಾಡು' ರೂಪಿಸಿದ ನೆರೂಡನ ಕಾವ್ಯದ ಹುಡುಗ, 'ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು; ಬೇಕಾದರೆ ಬರೆಯಬಲ್ಲೆ- ರಾತ್ರಿ ತತ್ತರಿಸಿಹೋಗಿದೆ, ದೂರದಲ್ಲಿ ನೀಲಿ ಚುಕ್ಕಿಗಳು ನಡುಗುತ್ತವೆ' ಎಂದು ಅಲವತ್ತುಕೊಳ್ಳುತ್ತಾನೆ; 'ಪ್ರೀತಿ ಎಷ್ಟೊಂದು ಬೇಗ ಮುಗಿಯುತ್ತದೆ; ಅದನ್ನು ಮರೆಯುವುದು ಮಾತ್ರ ಎಷ್ಟೋ ಕಾಲ ತೆಗೆದುಕೊಳ್ಳುತ್ತದೆ' ಎಂದು ನಿಟ್ಟುಸಿರುಬಿಡುತ್ತಾನೆ. 'ದಿನದಿನವೂ ನೀನು ಜಗದ ಬೆಳಕಿನೊಡನಾಡುತ್ತೀಯ, ಕಂಡೂ ಕಾಣದ ಅತಿಥಿಯೆ, ನೀನು ಹೂವಲ್ಲಿ, ನೀರಲ್ಲಿ ಹಣಿಕಿಕ್ಕುತ್ತೀಯ' ಎಂದು ಸಂಭ್ರಮಗೊಳ್ಳುತ್ತಾನೆ, 'ಬೆಚ್ಚಿಬಿದ್ದವಳಂತೆ ನನಗೆ ತೆಕ್ಕೆ ಬೀಳು' ಎಂದು ಕೂಗಿ ಕರೆಯುತ್ತಾ ರಮ್ಯ ಚಿತ್ರಗಳನ್ನು ಚೆಲ್ಲುತ್ತಾನೆ.

ಮೊದಲ ಘಟ್ಟದ ಈ ರೊಮ್ಯಾಂಟಿಕ್ ತೀವ್ರತೆ ನೆರೂಡನ ವ್ಯಕ್ತಿತ್ವ ಮತ್ತು ಕಾವ್ಯದಿಂದ ಕೊನೆತನಕ ಮಾಯವಾಗಲಿಲ್ಲ. ‘ವಸಂತು ಋತು ಚೆರ್‍ರಿ ಮರಗಳಿಗೆ ಮಾಡುವುದನ್ನು ನಿನ್ನೊಡನೆ ಮಾಡುವಾಸೆ’ ಎಂದು ಮುಂದಿನ ಪದ್ಯವೊಂದರಲ್ಲಿ ಬರೆದ. 

ಕಾಲ ಕಾಲಕ್ಕೆ ಬೇರೆ ಬೇರೆ ಹೆಣ್ಣುಗಳ ಜೊತೆ ಪ್ರೇಮದಲ್ಲಿ ಮುಳುಗಿದ ನೆರೂಡ ನಡುವಯಸ್ಸಿನಲ್ಲಿ ಬರ್ಮಾದಲ್ಲಿದ್ದಾಗ ಪ್ರೀತಿಸಿದ ಹೆಣ್ಣನ್ನು ತನ್ನ ಕವನಗಳಲ್ಲಿ 'ಜೋಸಿ ಬ್ಲಿಸ್' ಎಂದು ಕರೆಯುತ್ತಾ, ಆ ಘಟ್ಟದ ತನ್ನ ಪ್ರೀತಿಯ ರೀತಿಯನ್ನೂ ತೋಡಿಕೊಂಡ. ಆಕೆ ತನ್ನನ್ನೂ ತನ್ನ ಕಾವ್ಯವನ್ನೂ ಮುಗಿಸಿಬಿಡುತ್ತಾಳೆ ಎಂಬ ಭಯದಿಂದ ಅವಳನ್ನು ಬಿಟ್ಟು ಓಡಬೇಕಾಗಿ ಬಂದದ್ದನ್ನು ಕುರಿತು ತನ್ನ ಮೆಮೈರ್‍ಸ್ (ನೆನಪುಗಳು) ಪುಸ್ತಕದಲ್ಲಿ ಹುಡುಗುಹುಡುಗಾಗಿ ಬರೆದುಕೊಂಡ: ‘ನನ್ನ ಕನಸಿನಲ್ಲಿ ಜೋಸಿ ಕತ್ತಿ ಝಳಪಿಸುತ್ತಾ ನನ್ನನ್ನು ಕೊಲ್ಲಲೋ ಬೇಡವೋ ಎಂದು ಸುತ್ತುತ್ತಿದ್ದಳು. ಬೆಳಗ್ಗೆ ಎದ್ದ ಮೇಲೆ ನಾನು ಅವಳಿಗೆ ನಿಷ್ಠನಾಗಿ ಉಳಿಯುವಂತೆ ನಿಗೂಢ ಆಚರಣೆಗಳನ್ನು ಮಾಡುತ್ತಿದ್ದಳು.’ ಅವಳನ್ನು ತೊರೆದ ಗಳಿಗೆಗಳನ್ನು ಪದ್ಯವೊಂದರಲ್ಲಿ ನೆನೆದ ನೆರೂಡ, 'ಈ ಮಧ್ಯಾಹ್ನ ಒಬ್ಬಳೇ ಟೀ ಕುಡಿಯುತ್ತಾ, ಇನ್ನು ಎಂದೆಂದಿಗೂ ಖಾಲಿಯಾಗಿರುವ ಆ ನನ್ನ ಶೂಗಳನ್ನು ನೋಡುತ್ತಿರುವ ನಿನ್ನ ಕಣ್ಣು' ಎಂಬಂಥ ಬೆಚ್ಚಿಸುವ ಚಿತ್ರ ಕೊಟ್ಟ. 

ನೆರೂಡನ ಕಾವ್ಯದಲ್ಲಿ ಪ್ರೀತಿ, ವಿರಹ, ವಿದಾಯದ ಭಾವಗಳನ್ನು ಉಕ್ಕಿಸಿದ ರೊಮ್ಯಾಂಟಿಕ್ ಎಳೆಯೇ ಅವನು ಕ್ರಾಂತಿಯ ಕನಸು ಕಂಡ ಪದ್ಯಗಳಲ್ಲೂ ಇತ್ತು. ತನ್ನ ನಾಡಿನ ಜನರನ್ನು ಪ್ರೀತಿಯಿಂದ ನೋಡುವವನು, ಚರಿತ್ರೆಗೆ ಹಿಂತಿರುಗುವವನು ಈ ಬಗೆಯ ರಮ್ಯ ತೀವ್ರತೆಯಿಲ್ಲದೆ ನೋಡಲಾರ. ಸಾಹಿತ್ಯಕ ವಲಯದಿಂದ ಆಚೆ ಇರುವ ಸಾವಿರಾರು ಜನರ ಕಿವಿಗೆ ಬೀಳುವ ಕಾತುರದಿಂದ ಅವನು ’ಓದು ಕಾವ್ಯ'ವನ್ನು ರೂಪಿಸಿದಾಗಲೂ ಇಂಥದೇ ಭಾವವಿತ್ತು. ಹೊರಗೆ ಓದಲೆಂದೇ ಹುಟ್ಟಿದಂತಿದ್ದ ಪದ್ಯಗಳನ್ನೂ ತನ್ನೊಳಗೇ ಹಾಗೂ ತನ್ನ ಆತ್ಮಚರಿತ್ರೆಯಂತೆಯೇ ಬರೆದುಕೊಂಡಿದ್ದ. 'ನೀವು ನನ್ನ ಕಾವ್ಯವನ್ನು ಕೇಳಿ, ಅದು ನಾನು ಯಾರು ಎಂಬುದನ್ನು ಹೇಳುತ್ತದೆ' ಎಂದ. 'ಕವಿ ಕಸರತ್ತು ಮಾಡುತ್ತಾ ಕೂರಬಾರದು; ಬದುಕನ್ನು ಸೀಳಿ ಒಳಗಿಳಿಯಬೇಕು ಎಂದು ಅವನಿಗೆ ಜನಾದೇಶವಿದೆ' ಎಂದು ಅವನು 'ನಿರುದ್ದೇಶ ಕಾವ್ಯಪ್ರಯೋಗ ಪರಿಣತಮತಿ'ಗಳಾಗಿದ್ದ ಆ ಕಾಲದ ಕವಿಗಳನ್ನು ತಿವಿದ; ಆದರೆ, ತನ್ನ ಕಾವ್ಯವನ್ನು ಅಸಲು ಕಸುಬುದಾರನಂತೆಯೇ ಕಟ್ಟಿದ. ಅವನ ಕಾವ್ಯದ ಸಾಮಾಜಿಕ ದನಿ ಅವನ ಖಾಸಗಿ ದನಿಯೊಳಗೆ ಬೆಸುಗೆಯರಿಯದ ಹಾಗೆ ಬೆರೆತು ಹೋಗಿತ್ತು.

ಹೊರಗಿನ ಪ್ರಕೃತಿಯನ್ನು ಆರಾಧಿಸುತ್ತಾ, ಒಳಗೊಳಗೇ ಸುತ್ತಿದ ಕವಿಗಳ ಹಾಗೆಯೇ ಕ್ರಾಂತಿಯನ್ನು ಪ್ರೀತಿಸುತ್ತಾ ತಮ್ಮೊಳಗೇ ಕಳೆದು ಹೋದ ಕವಿಗಳೂ ಇದ್ದಾರೆ. ಪ್ರೀತಿ, ಪ್ರಕೃತಿ, ಕ್ರಾಂತಿಗಳನ್ನು ಕುರಿತು ಬರೆದ ನೆರೂಡನಿಗೆ ಹಾಗಾಗದೇ ಹೋದದ್ದು ಅವನು ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಗ್ರಹಿಸಿದ ಒಂದು ವಿಶಿಷ್ಟ ಕ್ರಮದಿಂದಾಗಿ. ಚಿಲಿಯ ಕಮ್ಯುನಿಸ್ಟ್ ಪಕ್ಷದ ಸದಸ್ಯ, ರಾಯಭಾರಿ, ಸೆನೆಟರ್ ಆಗಿದ್ದ ನೆರೂಡ, ಮಾರ್ಕ್ಸ್‌ವಾದವನ್ನು ಚರಿತ್ರೆಯ ಸಂಘರ್ಷಗಳನ್ನು ಅರಿಯುವ ಚೌಕಟ್ಟನ್ನಾಗಿ ಮಾತ್ರ ಬಳಸಲಿಲ್ಲ; ತನ್ನ ಕಾಲದ ಕಾವ್ಯಪ್ರಪಂಚದ ಸೀಮಿತ 'ಅ-ಸಾಮಾಜಿಕ ಜಗತ್ತನ್ನು ವಿಸ್ತರಿಸುವ ಕಣ್ಣಾಗಿ ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಬಳಸಿದ.

ಮಾರ್ಕ್ಸ್ ಯಾವ ಸಾಮಾನ್ಯ ಜನರ ಬಗೆಗಿನ ಆಳದ ಕಾಳಜಿಯಿಂದ ತನ್ನ ಸಿದ್ಧಾಂತವನ್ನು ರೂಪಿಸಿದನೋ ಅಂಥ ಜನರ ಅಸಲಿ ಜಗತ್ತನ್ನು ನೆರೂಡ ತನ್ನ ಕಾವ್ಯಕ್ಕೆ ತಂದ. ಆದ್ದರಿಂದಲೇ ‘ನನ್ನ ಪಾರ್ಟಿಗೆ' ಎಂಬ ಪದ್ಯದಲ್ಲಿ ನಾನು ನನ್ನೊಳಗೆ ಮುಗಿದು ಹೋಗದೆ ಎಂದೆಂದಿಗೂ ಉಳಿಯುವಂತೆ ಮಾಡಿದ್ದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿಗೆ ಅವನು ಕೃತಜ್ಞತೆ ಹೇಳುತ್ತಾನೆ. ಅನ್ಯರನ್ನು ಅರಿಯುವ, ತನ್ನನ್ನು ಮೀರಿ ಅನುಭವವನ್ನು ನೋಡುವ ಕಲೆಯನ್ನು ಕಮ್ಯುನಿಸ್ಟ್ ಪಾರ್ಟಿ ಅವನ ಕಾವ್ಯಕ್ಕೆ ಕಲಿಸಿತು. ತನ್ನ ದೇಶದ ಸರ್ಕಾರದಿಂದಲೇ ಬಂಧನಕ್ಕೊಳಗಾಗುವ ಅಪಾಯ ಬಂದಾಗ ಅವನನ್ನು ಕಾಪಾಡಿದ ಮನೆಗಳು, ಕಾರ್ಮಿಕರು, ಹಳ್ಳಿಗರು ಕೂಡ ಅವನ ಕಾವ್ಯದಲ್ಲಿರುವ ಸಮೂಹಪ್ರಜ್ಞೆಯನ್ನು ವಿಸ್ತರಿಸಿದಂತಿದೆ.

ನೆರೂಡನ ಕಾವ್ಯಕ್ಕೆ ವಿಶ್ವಕೋಶದ ವಿಸ್ತಾರ ಕೊಟ್ಟ 'ಕ್ಯಾಂಟೋ ಜನರಲ್' ಮಹಾಕಾವ್ಯದ ಭಾಗಗಳು ನೆರೂಡ ಮಾರ್ಕ್ಸ್‌ವಾದದ ಒಳ ಸತ್ವಗಳಿಂದ ಸ್ಫೂರ್ತಿ ಪಡೆದ ರೀತಿಯನ್ನು ಹೇಳುತ್ತದೆ. ನೆರೂಡ ಮಾರ್ಕ್ಸ್‌ನನ್ನು ಸಿದ್ಧಾಂತದಿಂದ ಕಾವ್ಯಕ್ಕೆ ಒಯ್ದ ದೊಡ್ಡ ಕವಿ ಎಂದು ವಿಮರ್ಶಕರು ಹೇಳುತ್ತಾರೆ. 'ನಾನು ಚರಿತ್ರೆಯನ್ನು ಕತೆ ಮಾಡಿ ಹೇಳಲು ಇಲ್ಲಿದ್ದೇನೆ' ಎಂಬ ಆತ್ಮವಿಶ್ವಾಸದಿಂದ ಶುರುವಾಗುವ 'ಕ್ಯಾಂಟೋ ಜನರಲ್' ಮಾನವನ ಆರಂಭದ ಘಟ್ಟದಿಂದ ಕಣ್ಣೆದುರಿನ ಭವಿಷ್ಯದವರೆಗೂ ಚಾಚುತ್ತದೆ.

ಚರಿತ್ರೆ-ವರ್ತಮಾನಗಳ ನಡುವೆ ಚಲಿಸುತ್ತಾ, ಚರಿತ್ರೆಯನ್ನು ಬರೆಯುವ ಸಿದ್ಧ ಮಾದರಿಗಳಿಗಿಂತ ಭಿನ್ನವಾಗಿ ಅಂಚಿನ ಜನರ ನೋಟದ ಮೂಲಕ ಚರಿತ್ರೆ ಬರೆಯುವ ಬಗೆಯನ್ನು ನೆರೂಡ ರೂಢಿಸಿಕೊಂಡ. ಕಳೆದು ಹೋದ ಕಾಲಕ್ಕೆ ವಾಪಸಾಗುತ್ತಲೇ, 'ಹಿಂದುಹಿಂದಕ್ಕೆ ನಡೆಯುವುದು ಅಪಾಯಕರ. ಏಕೆಂದರೆ ಹಠಾತ್ತನೆ ಭೂತಕಾಲ ಸೆರೆಮನೆಯಾಗಿಬಿಡುವುದು' ಎಂಬ ಎಚ್ಚರದ ಮಾತನ್ನು ತನಗೆ ತಾನೇ ಹೇಳಿಕೊಂಡ. ಆದರೆ, ಅದೇ ವೇಳೆಗೆ ಸಮಕಾಲೀನ ಬದುಕನ್ನೇ ಮಂಡಿಸಬೇಕೆಂಬ ತವಕದಲ್ಲಿ ಮನುಷ್ಯರನ್ನು ವರ್ಗಗಳಾಗಿ, ಟೈಪ್‌ಗಳಾಗಿ ಕಾಣಿಸುತ್ತಿದ್ದ ಸರಳ ಎಡಪಂಥೀಯ ಕಾವ್ಯದ ಎದುರು, ಚರಿತ್ರೆಯನ್ನು ರೂಪಿಸುವ ಜನರನ್ನು, ಅವರ ದನಿಗಳನ್ನು, ತಾಣಗಳನ್ನು ಕಾವ್ಯಕ್ಕೆ ತಂದ, ದರ್ಜಿಯ ಅಂಗಡಿಗಳು, ಕ್ಷೌರದ ಸಲೂನುಗಳ ವಾಸನೆಯನ್ನು, ಸುಕುಮಾರ ಕಾವ್ಯಲೋಕ ಹೊರಗಿಟ್ಟ 'ಅಶುದ್ಧ ವಾಸನೆ’ಗಳನ್ನು ಪದ್ಯದ ಪದಗಳಿಗೆ ತಂದ.

ರೆಡಿಮೇಡ್ ಪ್ರತಿಮೆಗಳನ್ನು ಬಿಟ್ಟು, ದೈನಂದಿನ ತಾಜಾ ಚಿತ್ರಗಳನ್ನು ಕಾವ್ಯ ಪ್ರತಿಮೆಗಳನ್ನಾಗಿಸುವುದು ಹೇಗೆಂದು ನೆರೂಡ ನೋಡುತ್ತಿದ್ದ. ಅವನ ಕಾವ್ಯದಲ್ಲಿ ತಂತಿಯ ಮೇಲೆ ಒಣಗಲು ಹಾಕಿದ ಬಟ್ಟೆಗಳು ತಲೆ ಕೆಳಗಾಗಿ ತೂಗುಬಿದ್ದ ನೊಂದ ದೇಹಗಳಂತೆ, ಆ ಬಟ್ಟೆಗಳಿಂದ ತೊಟ್ಟಿಕ್ಕುವ ನೀರು ಕಣ್ಣೀರಿನಂತೆ ಓದುಗರಿಗೆ ಕಂಡದ್ದು ಆಶ್ಚರ್ಯವಲ್ಲ. ತನ್ನ ಮೇಲೆ ಬಿದ್ದ ಮಳೆ ಈ ಸತ್ತ ಜಗತ್ತಿನಲ್ಲಿ ತನ್ನಂತೆಯೇ ಒಂಟಿಯಾಗಿದೆ ಎಂದು ಕವಿಗೆ ಅನ್ನಿಸುತ್ತದೆ! ನೆರೂಡ ಕಾಲಚಕ್ರವನ್ನು ವರ್ಣಿಸುವಾಗ ಅಮೂರ್ತವಾದ ಋತುಗಳ ಪ್ರತಿಮೆಗಳನ್ನು ಬಳಸದೆ, 'ಸೋಮವಾರದ ಬೆಳಗು ಎಣ್ಣೆಯ ಹಾಗೆ ಹತ್ತಿ ಉರಿಯುತ್ತಿದೆ' ಎಂಬ ಪರಿಚಿತ ಚಿತ್ರವನ್ನೇ ಹೊಸ ಕಾಲಘಟ್ಟದ ಪ್ರತಿಮೆಯನ್ನಾಗಿಸಿದ. 'ಚಕ್ರಗತಿಯ ಕವಿ'ಯಾದ ನೆರೂಡ ತನ್ನ ಕಾವ್ಯದಲ್ಲಿ ಆ ಚಕ್ರದ ಚಲನೆ ಕ್ಷಣವನ್ನು ಮೀರಿ ವಿಶಾಲ ಅನಂತದೆಡೆಗೆ ಚಲಿಸಬೇಕು' ಎಂದು ಆಶಿಸಿದ; ಅವನ ಆಸೆಯನ್ನು ಅವನ ಕಾವ್ಯಜಗತ್ತು ಹಲವು ಘಟ್ಟಗಳಲ್ಲಿ ಈಡೇರಿಸಿದ್ದರಿಂದಲೇ ಅವನು ಎಲ್ಲ ಕಾಲಕ್ಕೂ ಸಲ್ಲುವ ಕವಿಯಾದ.

ರಾಯಭಾರಿಯಾಗಿ ದೇಶ ವಿದೇಶಗಳನ್ನು ಸುತ್ತುತ್ತಿದ್ದ ನೆರೂಡನಿಗೆ ಕವಿಯೊಬ್ಬ ತನ್ನ ಭಾಷೆಯ ಆಡುಮಾತಿನ ವಾತಾವರಣದಿಂದ ದೂರವಾಗುವುದು ಆತ್ಮಹತ್ಯೆಯ ಹಾದಿ ಎಂಬುದು ಅರಿವಿಗೆ ಬರತೊಡಗಿತು. ಒಮ್ಮೆ ತನ್ನ ಸ್ಪ್ಯಾನಿಷ್ ಭಾಷೆ ಕಿವಿಗೇ ಬೀಳದ ಬರ್ಮಾದಲ್ಲಿದ್ದ ನೆರೂಡ, 'ತಕ್ಷಣ ಒಂದು ಸ್ಪ್ಯಾನಿಷ್ ನಿಘಂಟು ಕಳಿಸಿಕೊಡು, ಇಲ್ಲದಿದ್ದರೆ ನನ್ನ ಭಾಷೆಯೇ ಮರೆತುಹೋಗಿಬಿಡಬಹುದು' ಎಂದು ಕವಿಮಿತ್ರನೊಬ್ಬನಿಗೆ ಪತ್ರ ಬರೆದ. ಕವಿಯೊಬ್ಬ ಜಗತ್ತಿನ ಯಾವುದೇ ದಿಕ್ಕಿನಿಂದ ಏನನ್ನು ಪಡೆದರೂ ಕೊನೆಗೆ ಅದನ್ನೆಲ್ಲ ತನ್ನ ಮಣ್ಣಿನ ಮಾತುಗಳ ಲಯಗಳಲ್ಲಿ ಮಾತ್ರ ಕಾವ್ಯವಾಗಿಸಬಲ್ಲ! 'ನಾನು ನನ್ನ ನಾಡಿನಲ್ಲಿ ಮಾತ್ರ ಜೀವಿಸಬಲ್ಲೆ. ನನ್ನ ಕಾಲು, ಕೈಗಳನ್ನು ಈ ನೆಲದ ಮೇಲಿಡದೆ, ಈ ನೆಲಕ್ಕೆ ಕಿವಿಗೊಡದೆ, ಈ ನೀರಿನ ಚಲನೆ ಹಾಗೂ ನೆರಳುಗಳಿಲ್ಲದೆ ನಾನು ಬದುಕಲಾರೆ' ಎಂದು ನೆರೂಡ ತನ್ನೂರಿಗೆ ಮರಳುವಾಗ ಬರೆದ. 

ಇಂಥ ಒಂದು ಮರುಪ್ರಯಾಣದಲ್ಲಿ ಗತಕಾಲದ ಸಂಕೇತವಾದ ಮಾಚ್ಚುಪಿಚ್ಚು ಶಿಖರಗಳ ಅವಶೇಷಗಳ ನಡುವೆ ತನ್ನ ಕಾವ್ಯ ಹೊಸ ನಂಬಿಕೆಯನ್ನು ಕಂಡುಕೊಂಡದ್ದನ್ನು ನೆರೂಡ ನೆನೆಸಿಕೊಳ್ಳುತ್ತಾನೆ: 
'ಒಂದಾನೊಂದು ಕಾಲದಲ್ಲಿ ಈ ನೆಲವನ್ನು ನಾನೇ ಕೈಯಾರೆ ಅಗೆದ ಹಾಗೆ, ಈ ಬಂಡೆಗಳನ್ನು ಕೆತ್ತಿ ನುಣುಪಾಗಿಸಿದ ಹಾಗೆ ಅನ್ನಿಸತೊಡಗಿತು. ನಾನು ಚಿಲಿಯವನು, ನಾನು ಪೆರುವಿನವನು ಎಂಬ ಭಾವ ಮುತ್ತತೊಡಗಿತು. ಆ ಕಠಿಣ ಶಿಖರಗಳಲ್ಲಿ, ಚೆಲ್ಲಾಪಿಲ್ಲಿಯಾದ ಆ ಭವ್ಯ ಅವಶೇಷಗಳ ನಡುವೆ ನಿಂತಾಗ ನನ್ನ ಕಾವ್ಯವನ್ನು ಮುಂದುವರಿಸಲು ಬೇಕಾದ ನಂಬಿಕೆಯ ತತ್ವಗಳು ನನಗೆ ಸಿಕ್ಕವು.'

ಈ ಹಿನ್ನೆಲೆಯಲ್ಲಿ ಹುಟ್ಟಿದ ನೆರೂಡನ ‘ಮಾಚ್ಚುಪಿಚ್ಚು ಶಿಖರಗಳು' ಖಂಡಕಾವ್ಯದಲ್ಲಿ ಅಲ್ಲಿನ ಕಲ್ಲುಗಳು ತಮ್ಮನ್ನು ಕುಟ್ಟಿ ಕಟ್ಟಿದವರನ್ನು ಕುರಿತು ಮಾತನಾಡುತ್ತವೆ. ಕವಿ ತಾನೇ ಒಂದು ಪಾತ್ರವಾಗಿ ಇದಕ್ಕೆಲ್ಲಾ ಸಾಕ್ಷಿಯಾಗಿ ನಿಂತು ನೋಡಿದವನಂತೆ, ಚರಿತ್ರೆಯ ಸತ್ಯವನ್ನು ಎಲ್ಲರಿಗೂ ತಲುಪಿಸುವವನಂತೆ ಕಾವ್ಯದಲ್ಲಿ ನಾಟಕೀಯವಾಗಿ ಪ್ರವೇಶಿಸುತ್ತಾನೆ. ಹೀಗೆ ಏರಿದ ಎತ್ತರ, ಪತನ, ಕಟ್ಟುವ ಕನಸು ಎಲ್ಲವನ್ನೂ ನೋಡಲೆತ್ನಿಸಿದ ನೆರೂಡ ಕೊನೆಗಾಲದಲ್ಲಿ ಪ್ರೋಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದಾಗ ತನ್ನ ದೇಶದ ಸರ್ವಾಧಿಕಾರಿ ಆಡಳಿತದ ಸೈನಿಕರು ತನ್ನ ಮನೆಯ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ತೀರಿಕೊಂಡ. ಕೇವಲ ಎರಡು ವರ್ಷದ ಹಿಂದಷ್ಟೇ ನೊಬೆಲ್ ಪ್ರಶಸ್ತಿ ಪಡೆದು ಜಗತ್ತಿನ ಕಾವ್ಯಚರಿತ್ರೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬನೆಂದು ಮಾನ್ಯನಾಗಿದ್ದ ಕವಿ, ಚರಿತ್ರೆಯ ಸಂಚಿಗೆ ಬಲಿಯಾಗಿದ್ದ. ಸರ್ವಾಧಿಕಾರಿ ಪಿನೋಚೆಟ್ ಕಡೆಯವರು ಆಸ್ಪತ್ರೆಯಲ್ಲಿ ವಿಷ ಉಣಿಸಿರುವ ಸಾಧ್ಯತೆಯಿದೆಯೆಂದು ನಂತರದ ತನಿಖೆಯೊಂದು ಆಧಾರಗಳನ್ನು ಕೊಡಲೆತ್ನಿಸಿತು.

ಹರೆಯದಲ್ಲಿ ಶುರು ಮಾಡಿ, ಕೊನೆತನಕ ಕವಿತೆ ಬರೆಯುತ್ತಲೇ ಇದ್ದ ನೆರೂಡ ೧೯೭೩ರ ಸೆಪ್ಟೆಂಬರ್‍  ೨೩ರಂದು ತೀರಿಕೊಳ್ಳುವ ಮುನ್ನ, ತನ್ನ ಪತ್ನಿ ಮೆಟಿಲ್ಡೆಗೆ ಹಾಸಿಗೆಯ ಮೇಲೊರಗಿ ಪದ್ಯ ಬರೆದ. ಮೆಟಿಲ್ಡೆಗಾಗಿಯೇ ನೆರೂಡ ಸ್ಯಾಂಟಿಯಾಗೋದಲ್ಲಿ ಮನೆ ಕಟ್ಟಿದ್ದ. ಆ ಮನೆಯಲ್ಲಿ ನೆರೂಡನ ಕಲಾವಿದ ಗೆಳೆಯ ಡಿಯೆಗೋ ರಿವೆರಾ ಚಿತ್ರಿಸಿದ ಎರಡು ಮುಖದ ಮೆಟಿಲ್ಡೆಯ ಭಾವಚಿತ್ರವಿತ್ತು.  ಅವನ ಕೊನೆಯ ಪದ್ಯ ’ಫಿನಾಲೆ’ (ಕೊನೆಯಾಟ) ‘ಮೆಟಿಲ್ಡೆ’ ಎಂದು ಶುರುವಾಗುತ್ತದೆ. ನೆರೂಡನ ಕೊನೆಯ ಪದ್ಯದ ಕೊನೆಯ ಸಾಲುಗಳು:

ನೀ ಜೀವ ತುಂಬಿ ಇರುವಾಗ
ಬದುಕುವುದು ಎಷ್ಟೊಂದು ಚಂದವಿತ್ತು! 
ನಿನ್ನ ಪುಟ್ಟ ತೋಳುಗಳಲ್ಲಿ 
ಇಡಿಯಾಗಿ ಮೈ ಚಾಚಿ ಗಾಢವಾಗಿ ಮಲಗಿರುವಾಗ
ಈ ಲೋಕ ಕಡು ನೀಲಿಯಾಗಿದೆ,
ಈ ರಾತ್ರಿ ಅದು ಈ ಭುವಿಯ ವಶವಾಗಿದೆ.

ಹುಟ್ಟುಕವಿ ನೆರೂಡನ ಹುಟ್ಟುಹಬ್ಬದ ದಿನ ನೆರೂಡನನ್ನು ಕನ್ನಡದವನನ್ನಾಗಿಸಿದ ಕವಿ ಕವಯಿತ್ರಿಯರು, ಓದುಗ ಓದುಗಿಯರು  ಈ ಪ್ರೀತಿ ಮತ್ತು ಕ್ರಾಂತಿಯ ಕವಿಯೆಡೆಗೆ ಮತ್ತೆ ತಿರುಗಲಿ ಎಂಬ ಆಶಯದಿಂದ ಈ ಮರು ಟಿಪ್ಪಣಿ.
 

blog
05 Jul 2026 ದೇವರ ಸರ್ವಾಧಿಕಾರಕ್ಕೆ ಸವಾಲ್!

ಈಸ್ಕಿಲಸ್‌ನ ‘ಪ್ರೊಮಿಥ್ಯೂಸ್ ಬೌಂಡ್’ ನಾಟಕ ನೆನಪಾದಾಗಲೆಲ್ಲ ಕನ್ನಡದ ಹಳೆಯ ಸಿನಿಮಾ ‘ದೇವರ ಗೆದ್ದ ಮಾನವ’ ನೆನಪಾಗುತ್ತಿತ್ತು. ಆ ಸಿನಿಮಾದ ಪೋಸ್ಟರ್‌ನಲ್ಲಿ ರಾಜ್‌ಕುಮಾರ್ ಫೋಟೊ ನೋಡಿದ ನೆನಪು. ಮೊನ್ನೆ ಕುತೂಹಲದಿಂದ ಯೂಟ್ಯೂಬಿನಲ್ಲಿ ಹತ್ತು ನಿಮಿಷ ಈ ಸಿನಿಮಾ ನೋಡಿದರೆ, ಅದು ಎಂದಿನಂತೆ ದೇವರು ಮನುಷ್ಯನನ್ನು ಪರಿವರ್ತಿಸುವ ಹಳಸಲು ಕತೆಯಂತೆಯೇ ಕಾಣತೊಡಗಿತು. ಇದರ ತಂಟೆಯೇ ಬೇಡವೆಂದು ದೇವರಿಗೆ ಸವಾಲೆಸೆದ ‘ಪ್ರೊಮಿಥ್ಯೂಸ್ ಬೌಂಡ್’ ನಾಟಕ ಓದಲು ಶುರು ಮಾಡಿದೆ. ಮತ್ತೆ ಈ ಹಿಂದೆ ಪ್ರೊಮಿಥ್ಯೂಸ್ ಕತೆ ಕೇಳಿದಾಗ ಹುಟ್ಟಿದ ಅದೇ ರೋಮಾಂಚನ! ಸ್ಯೂಸ್ ದೇವನಿಗೆ ಸವಾಲೆಸೆವ ಪ್ರೊಮಿಥ್ಯೂಸನ ಒಂದೊಂದು ಬಂಡಾಯದ ಡೈಲಾಗಿಗೂ ಅದೇ ಮುಗ್ಧ ಪುಳಕ!

‘ಪ್ರೊಮಿಥ್ಯೂಸ್ ಬೌಂಡ್’ ಎರಡೂವರೆ ಸಾವಿರ ವರ್ಷಗಳ ಕೆಳಗೆ ಹುಟ್ಟಿದ ಗ್ರೀಕ್ ನಾಟಕ. ಈ ನಾಟಕಕ್ಕೆ ಮೂಲವಾದ ಪುರಾಣವನ್ನು ಗ್ರೀಕ್ ಜಾನಪದ ಈ ಮೊದಲೇ ಸೃಷ್ಟಿಸಿತ್ತು. ಲೋಕದ ಶ್ರೇಷ್ಠ ಪ್ರಾಚೀನ ದುರಂತನಾಟಕಕಾರರಲ್ಲಿ ಮುಂಚೂಣಿಯಲ್ಲಿರುವ ಈಸ್ಕಿಲಸ್ ಬರೆದ ಪೂರ್ತಿ ನಾಟಕ ಸಿಕ್ಕಿಲ್ಲ. ಈಗ ಸಿಕ್ಕಿರುವ ನಾಟಕ ಭಾಗ ಇದ್ದಕ್ಕಿದ್ದಂತೆ ನಿಂತಂತಿದೆ. ಜಗತ್ತಿನ ಸಾಹಿತ್ಯ ಕೃತಿಗಳಲ್ಲಿ ನನ್ನ ಅತ್ಯಂತ ಪ್ರಿಯವಾದ ಪಾತ್ರಗಳಲ್ಲಿ ಒಬ್ಬನಾದ ಪ್ರೊಮಿಥ್ಯೂಸ್ ನಮ್ಮೆಲ್ಲರ ಒಳಗಿರುವ, ನಾವು ಅದುಮಿಡಬಯಸುವ, ಅದುಮಿಟ್ಟಿರುವ, ಅಕಸ್ಮಾತ್ ಹೊರ ಚೆಲ್ಲುವ ಒಬ್ಬ ಬಂಡುಕೋರ. ಪ್ರೊಮಿಥ್ಯೂಸ್ ಕಾರ್ಲ್ ಮಾರ್ಕ್ಸ್‌ಗೆ ಪ್ರಿಯವಾಗಿದ್ದ ಪಾತ್ರ ಎಂಬುದನ್ನು ಹಿಂದೊಮ್ಮೆ ಈ ಅಂಕಣದಲ್ಲಿ ಹೇಳಿರುವೆ.

ಪ್ರೊಮಿಥ್ಯೂಸ್ ಗ್ರೀಕ್ ದೇವತೆ. ಸ್ವತಂತ್ರ ಮನಸ್ಸಿನ ಬಂಡುಕೋರ. ಗ್ರೀಕ್ ಪುರಾಣಗಳಲ್ಲಿ ಭಾರತೀಯ ಪುರಾಣಗಳ ದೇವೇಂದ್ರನಂತೆ ‘ದೇವತೆಗಳ ಹೆಡ್ ಆಫ್ ದಿ ಡಿಪಾರ್ಟ್‌ಮೆಂಟ್’ ಆಗಿರುವ ದೇವತೆ ಸ್ಯೂಸ್. ಇಂದ್ರನ ಹಾಗೆಯೇ ಕಂಡ ಕಂಡ ಹೆಣ್ಣುಗಳ ಮೇಲೆ ಕಣ್ಣು ಹಾಕುವವನು! ಪ್ರೊಮಿಥ್ಯೂಸ್ ಸ್ಯೂಸನ ಸರ್ವಾಧಿಕಾರಕ್ಕೆ ಕೇರ್ ಮಾಡುವವನಲ್ಲ.  ಮಾನವಜೀವಿಗಳನ್ನು ಕಂಡರೆ ಪ್ರೀತಿ, ಕಾಳಜಿಯುಳ್ಳ ಪ್ರೊಮಿಥ್ಯೂಸ್‌ಗೆ ಮಾನವರ ಸಹಾಯಕ್ಕೆ ಧಾವಿಸುವುದು ಪ್ರಿಯವಾದ ಕೆಲಸ. ಆದರೆ ‘ಮಾನವರಿಗೆ ಸವಲತ್ತು ಕೊಟ್ಟರೆ ಅವರು ದೇವರಿಗೆ ವಿಧೇಯರಾಗಿರುವುದಿಲ್ಲ; ತಮಗೆ ಪೂಜೆ ಮಾಡುವುದಿಲ್ಲ’ ಎಂಬುದು ಸ್ಯೂಸ್ ಹಾಗೂ ಇನ್ನಿತರ ದೇವತೆಗಳ ಧೋರಣೆ. 

ಇದೇ ಧೋರಣೆಯನ್ನು ಲೋಕದ ಲಕ್ಷಾಂತರ ಸಾಮಾಜಿಕ- ರಾಜಕೀಯ ನಾಯಕರುಗಳು ಕೂಡ ಅನುಸರಿಸುತ್ತಾ ಬಂದಿದ್ದಾರೆ! ಅಂದರೆ, ಮಾನವರನ್ನು ಕುರಿತ ಈ ಉಪೇಕ್ಷೆಗೆ ದೈವ ಪ್ರೇರಣೆಯೂ ಇದ್ದಂತಿದೆ! ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಸ್ಯೂಸ್ ಪ್ರೊಮಿಥ್ಯೂಸ್‌ಗೆ ಆಜ್ಞೆ ಮಾಡುತ್ತಾನೆ. ಆದರೆ ಮಾನವರಿಗೆ ಸಹಾಯ ಮಾಡಲು ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಟಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಸ್ಯೂಸ್ ಪ್ರೊಮಿಥ್ಯೂಸನಿಗೆ ಕ್ರೂರ ಶಿಕ್ಷೆಯನ್ನು ಆದೇಶಿಸುತ್ತಾನೆ. ಸ್ಯೂಸನ ಅಂತ್ಯ ಯಾರಿಂದ ಆಗುತ್ತದೆ ಎಂಬ ಗುಟ್ಟು ಪ್ರೊಮಿಥ್ಯೂಸ್‌ಗೆ ತಿಳಿದಿದೆ; ಅವನನ್ನು ಹಿಂಸಿಸಿ ಅವನ ಬಾಯಿ ಬಿಡಿಸಬೇಕು ಎಂಬ ಸ್ಯೂಸನ ಕಿಡಿಗೇಡಿ ಸ್ವಾರ್ಥದಿಂದ ಕೂಡ ಈ ಶಿಕ್ಷೆ ಘೋಷಣೆಯಾಗಿದೆ.

‘ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಆರಂಭದಲ್ಲಿ ಸ್ಯೂಸನ ಆಜ್ಞೆಯಂತೆ ಪ್ರೊಮಿಥ್ಯೂಸನನ್ನು ಮರುಭೂಮಿಯಲ್ಲಿ ಕೋಡುಗಲ್ಲಿಗೆ ಕಟ್ಟಿಹಾಕಲು ಬಂದಿರುವ ಇಬ್ಬರು ದೂತರಲ್ಲಿ ಒಬ್ಬ ‘ಸ್ಯೂಸ್ ಮನಸ್ಸು ಬದಲಿಸಬಹುದೆ?’ ಎಂದು ಕೇಳುತ್ತಾನೆ. 
ಅದಕ್ಕೆ ಮತ್ತೊಬ್ಬನ ಉತ್ತರ:

‘ಸ್ಯೂಸನ ಮನ ಬದಲಾಗುವ ಮಾತೇ ಇಲ್ಲ 
ಹೊಸದಾಗಿ ಅಧಿಕಾರ ಪಡೆದವರ ಆಳ್ವಿಕೆಯಲ್ಲಿ ಹೃದಯವೆಂಬುದೇ ಇಲ್ಲ.’ 

ಇನ್ನು ಮುಂದೆ ತಾನು ಸಾವಿರ ವರ್ಷ ಇಲ್ಲೇ ಕೊಳೆಯಬೇಕು ಎಂಬ ಬೆದರಿಕೆ-ವಾಸ್ತವ ಎದುರಿಗಿದ್ದರೂ ಪ್ರೊಮಿಥ್ಯೂಸ್‌ಗೆ, ತಾನು ಮನುಷ್ಯನಿಗೆ ನಾಗರಿಕತೆಯ ಮೂಲವಾದ ಬೆಂಕಿ ಕೊಟ್ಟವನು; ಎಲ್ಲ ಕಲೆಗಳನ್ನೂ ಕಲಿಸಿಕೊಟ್ಟವನು ಎಂಬ ಸಾರ್ಥಕ ಭಾವ ಹಾಗೇ ಇದೆ. ‘ಸ್ಯೂಸನ ರಾಜ್ಯಭಾರಕ್ಕೆ ಕೊನೆ ಎಂಬುದೇ ಇಲ್ಲ, ಸ್ಯೂಸನಿಗೆ ಶರಣಾಗು’ ಎಂದು ಮೇಳದ ಮಂದಿ ಪ್ರೊಮಿಥ್ಯೂಸನಿಗೆ ಕಿವಿಮಾತು ಹೇಳುತ್ತಾರೆ. ದೇವರ ಸರ್ವಾಧಿಕಾರಕ್ಕೂ ಅಂತ್ಯವಿದೆ ಎನ್ನುತ್ತಾನೆ ಪ್ರೊಮಿಥ್ಯೂಸ್.  ಸ್ಯೂಸನ ಸಕಲ ಶಸ್ತ್ರಾಸ್ತ್ರಗಳು ಒಟ್ಟಾದರೂ ಅವನ ನಾಚಿಕೆಗೇಡಿ ಅಂತ್ಯವನ್ನು, ಕೊನೆಯಿಲ್ಲದ ಪತನವನ್ನು ತಡೆಯಲಾರವು. ಇದು ಸ್ಯೂಸನಿಗೆ ಹುಟ್ಟಿದ ಮಗುವೇ ಅವನನ್ನು ಮುಗಿಸುತ್ತದೆಂಬ ಗುಟ್ಟು ಬಲ್ಲ ಪ್ರೊಮಿಥ್ಯೂಸನ ಖಚಿತ ನಂಬಿಕೆ. ಆದ್ದರಿಂದ ಅವನು ಎಲ್ಲದಕ್ಕೂ ಸಿದ್ಧ; ಸ್ಯೂಸನನ್ನು ಎದುರಿಸಲು ಬದ್ಧ. 

ಕೊನೆಗೆ, ಸ್ಯೂಸನ ಸಂದೇಶ ತರುವ ಹರ್ಮಿಸ್, ‘ಸ್ಯೂಸನನ್ನು ಕೊನೆಗಾಣಿಸುವ ಮಗು ಯಾರು ಹೇಳಿಬಿಡು. ನಿನ್ನ ಪ್ರಾಣ ಉಳಿಸಿಕೊ’ ಎಂದು ಬುದ್ಧಿ ಹೇಳುತ್ತಾನೆ. ‘ಸ್ಯೂಸ್ ನಿರ್ದಯ. ಅವನಿಗೆ ‘ಅಯ್ಯೋ’ ಎಂಬ ಪದವೇ ಗೊತ್ತಿಲ್ಲ’ ಎಂದು ಎಚ್ಚರಿಸುತ್ತಾನೆ. ಆದರೆ ಪ್ರೊಮಿಥ್ಯೂಸ್ ‘ಕಾಲ ಎಲ್ಲವನ್ನೂ ಕಲಿಸುತ್ತದೆ’ ಎಂದು ದೃಢವಾಗಿ ಹೇಳುತ್ತಾನೆ.  ನನ್ನ ಎದೆಯಲ್ಲಿರುವ ಗುಟ್ಟನ್ನು ಅವನಿಗೆ ಹೇಳಲು ‘ನಾನೇನು ಅವನ ಸಾಲಗಾರನೆ?’ ಎಂದು ಸವಾಲೆಸೆಯುತ್ತಾನೆ. ‘ಬೇಡಾ ನೋಡು, ಸ್ಯೂಸ್ ತನ್ನ ಸಿಡಿಲಿನಿಂದ ನಿನಗೆ ಬಾರಿಸುತ್ತಾನೆ. ಅವನ ಹದ್ದು ಬಂದು ನಿನ್ನ ಮೈಯ ಖಂಡಖಂಡಗಳನ್ನು ಕುಕ್ಕುತ್ತಲೇ ಇರುತ್ತದೆ’ ಎಂದು ಹರ್ಮಿಸ್ ಎಚ್ಚರಿಸುತ್ತಾನೆ.

ಅದಕ್ಕೆ ಪ್ರೊಮಿಥ್ಯೂಸನ ಉತ್ತರ: 

ನಾನವನ ಶತ್ರು ಅವನು ನನಗೆ ಶತ್ರು
ಅವನ ಮಿಂಚಿನ ಕವಲುಗಳು ಮಿಂಚಲಿ
ಅವನ ಸ್ವರ್ಗದಿಂದ ಎರಗುವ ಸೀಳುವ ಸಿಡಿಲುಗಳು ನನ್ನ ಸೀಳಲಿ
ಭೀಕರ ಬಿರುಗಾಳಿ ಬೀಸಿ ಬರಲಿ, ಭೂಮಿಯ ತಳವೇ ಅಳ್ಳಾಡಲಿ        
ರೊಚ್ಚಿಗೆದ್ದ ಅಲೆಗಳು ಮೇಲೇರಿ ತಾರೆಗಳ ತೋಯಿಸಲಿ
ನನ್ನ ಈ ಅಸಹಾಯಕ ಮೈ ರಸಾತಳಕ್ಕೆ ಎಸೆಯಲ್ಪಡಲಿ.
ಅಷ್ಟೇ! 
ಅಲ್ಲಿಗೆ ಅವನ ಶಕ್ತಿ ಕೊನೆಯಾಗುತ್ತದೆ. 
ನಾನಂತೂ ಸಾಯುವುದಿಲ್ಲ.

ಪ್ರೊಮಿಥ್ಯೂಸನನ್ನು ಬಗ್ಗಿಸಲಾಗದೆ ಹರ್ಮಿಸ್ ಹೊರಡುತ್ತಾನೆ. ಭೂಮಿ ಗರಗರ ತಿರುಗುತ್ತದೆ. ಸ್ವರ್ಗದಿಂದ ಸಿಡಿಲು ಎರಗುತ್ತದೆ. ದಶದಿಕ್ಕುಗಳಿಂದಲೂ ಗಾಳಿ ಮೊರೆಯುತ್ತದೆ. ಇವೆಲ್ಲವನ್ನೂ ನೋಡುವ ಪ್ರೊಮಿಥ್ಯೂಸ್ ತನ್ನ ಮೇಲೆರಗುವ ಶಕ್ತಿಗಳನ್ನು ನೋಡನೋಡುತ್ತಾ ಹೇಳುತ್ತಾನೆ: ‘ಓ ಪವಿತ್ರ ಮಾತೆಯೇ, ನೋಡು ನೋಡು! ಓ ಬೆಳಕಿನ ದೇವತೆಯೇ ನೋಡಲ್ಲಿ- ನ್ಯಾಯವನ್ನು ಅಧಿಕಾರ ಶಕ್ತಿ ನುಂಗಲು ಬರುತ್ತಿದೆ...’

ನಾಟಕ ಇದ್ದಕ್ಕಿದ್ದಂತೆ ಇಲ್ಲಿಗೆ ಕೊನೆಯಾಗುತ್ತದೆ. ಇದರಾಚೆಗೂ ನಾಟಕ ಇದ್ದಂತಿದೆ; ಆದರೆ ಆ ಪುಟಗಳು ಸಿಕ್ಕಿಲ್ಲ. ಆದರೆ ಕೆಲವೇ ಪುಟಗಳಲ್ಲಿ ಈ ನಾಟಕ ದೇವರ ಸರ್ವಾಧಿಕಾರದ ವಿರುದ್ಧ ಪ್ರೊಮಿಥ್ಯೂಸನ ಬಂಡಾಯದ ರೋಮಾಂಚಕ ಕತೆ ಹೇಳುತ್ತದೆ; ತನ್ನ ಕಾಲದ ರಾಜರ ಸರ್ವಾಧಿಕಾರದ ವಿರುದ್ಧದ ಬಂಡಾಯವನ್ನೂ, ಎಲ್ಲ ಕಾಲದಲ್ಲೂ ಸರ್ವಾಧಿಕಾರಗಳಿಗೆ ಮಣಿಯದ ಮಾನವನ ಅದಮ್ಯ ಚೈತನ್ಯವನ್ನೂ ಬಿಂಬಿಸುತ್ತದೆ.

ಈಸ್ಕಿಲಸ್‌ನ ನಾಟಕಗಳ ಸಂಪುಟಕ್ಕೆ ಮುನ್ನುಡಿ ಬರೆದ ಸಂಪಾದಕನೊಬ್ಬ ‘ದೈವಭಕ್ತ ಈಸ್ಕಿಲಸ್ ಈ ದೈವವಿರೋಧದ ನಾಟಕವನ್ನು ಹೇಗೆ ಬರೆದ!’ ಎಂದು ಅಚ್ಚರಿಪಡುತ್ತಾನೆ. ಪರವಾಯಿಲ್ಲ! ಕೃತಿಯ ವಸ್ತು-ವಸ್ತುವಿನ್ಯಾಸಕ್ಕೂ, ಲೇಖಕರಿಗೂ ಊಹೆಯ ಸಂಬಂಧ ಕಲ್ಪಿಸಿ ಬರೆಯುವುದು ತಪ್ಪು ಎಂಬ ನಿಟ್ಟಿನಲ್ಲಿ ಆಧುನಿಕ ವಿಮರ್ಶೆ ಹಲವು ಪಾಠಗಳನ್ನು ಕಲಿಸಿದ್ದರೂ, ಭಾರತದಂತೆಯೇ ಪಶ್ಚಿಮದಲ್ಲೂ ಹೀಗೆ ಸೋಮಾರಿ ಊಹೆಗಳನ್ನು ಮಾಡುವ ದಡ್ಡ ಸಂಪಾದಕರು, ದಡ್ಡ ವಿಮರ್ಶಕರು ಇದ್ದೇ ಇರುತ್ತಾರೆ! 

ಇಲ್ಲಿ ನೆನಪಿಡಬೇಕಾದ ಮಾತು: ಲೇಖಕಿ ಅಥವಾ ಲೇಖಕ ಎರಡೂವರೆ ಸಾವಿರ ವರ್ಷದ ಹಿಂದೆಯೇ ಬರೆಯಲಿ, ಇಪ್ಪತ್ತೊಂದನೆಯ ಶತಮಾನದಲ್ಲೇ ಬರೆಯಲಿ, ಅವರು ತಮ್ಮ ಚರ್ಮ ಮೀರಿ ಬರೆದಾಗ ಮಾತ್ರ, ತಮ್ಮ ಮೇಲೆ ಹೇರಲಾದ ಪರಂಪರಾಗತ ನಂಬಿಕೆಗಳ ಸರ್ವಾಧಿಕಾರವನ್ನು ಮೀರಿ, ಪ್ರಶ್ನಿಸಿ ಬರೆದಾಗ ಮಾತ್ರ ಸ್ವತಂತ್ರ ಬರವಣಿಗೆ ಹುಟ್ಟುವುದು! ಅದು ದೈವ ಸರ್ವಾಧಿಕಾರವಿರಲಿ, ದೇಶದ ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರದೇ ಸರ್ವಾಧಿಕಾರವಿರಲಿ, ಕೊನೇ ಪಕ್ಷ ಲೇಖಕನಿಗೆ, ಲೇಖಕಿಗೆ ತನ್ನ ಮನದಾಳದಲ್ಲಾದರೂ ಅದಕ್ಕೆ ವಿರೋಧವಿರದಿದ್ದರೆ ನಿಜವಾದ ಬರವಣಿಗೆ ಹೇಗೆ ಹುಟ್ಟೀತು?  ನಾಟಕಕಾರ ಅಥವಾ ಲೇಖಕಿ ತನ್ನ ಕಾಲದ ಜಡ-ಸಿದ್ಧ, ಜನಜನಿತ ನಂಬಿಕೆಗಳನ್ನು ಮೀರಿ ಬರೆದರೆ ತಾನೇ ಸತ್ಯಶೋಧಕರಾಗುವುದು! ಪಿತೃ ಸರ್ವಾಧಿಕಾರವನ್ನು ವಿರೋಧಿಸುವ ಸ್ತ್ರೀವಾದಿಗೆ ದೈವ ಸರ್ವಾಧಿಕಾರದ ಬಗ್ಗೆ ವಿರೋಧವಿರದಿದ್ದರೆ ಸ್ವತಂತ್ರ ಸ್ತ್ರೀಪ್ರಜ್ಞೆ ‌ಎಲ್ಲಿಂದ ಹುಟ್ಟೀತು? ಧಾರ್ಮಿಕ ಲೋಕದಲ್ಲಿರುವುದೂ ಪುರುಷ ದೈವದ ಸರ್ವಾಧಿಕಾರದ ಅಬ್ಬರವೇ ತಾನೆ!    

ಹೀಗೆ ದೇವರ ಸರ್ವಾಧಿಕಾರವನ್ನು, ದುರಂತ ನಾಟಕಗಳಲ್ಲಿ ರಾಜರ ಹಮ್ಮು, ಬಿಮ್ಮು, ಪತನ, ದುರಂತಗಳ ಕತೆಯನ್ನು; ವಿನೋದ ನಾಟಕಗಳಲ್ಲಿ ರಾಜರ ಕೊಬ್ಬಿನ ಅಣಕವನ್ನು ಮಾಡಿದ ಗ್ರೀಕ್ ನಾಟಕಕಾರರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತತೊಡಗಿದ್ದರು. ದೇವರ ವಿರುದ್ಧದ ಬಂಡಾಯಕ್ಕೂ, ಪ್ರತ್ಯಕ್ಷ ದೇವತೆಗಳೆಂದು ಮೆರೆಯುತ್ತಿದ್ದ ರಾಜರ ವಿರುದ್ಧ ಬಂಡಾಯಕ್ಕೂ, ಪಶ್ಚಿಮದ ಡೆಮಾಕ್ರೆಸಿಯ ಹುಟ್ಟಿಗೂ ಸಂಬಂಧವಿದೆ. ಅಂದರೆ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾಗಿ ಯಾವುದೇ ಬಗೆಯ ಅಥಾರಿಟಿಯನ್ನು ಪ್ರಶ್ನಿಸುವ ಬಂಡಾಯಕ್ಕೂ, ಡೆಮಾಕ್ರೆಸಿಯ ಹುಟ್ಟಿಗೂ ಸಂಬಂಧವಿದೆ. ಚರಿತ್ರೆಯ ಈ ಮಹತ್ವದ ತಿರುವುಗಳನ್ನು, ಸತ್ಯಗಳನ್ನು, ಮೈಲಿಗಲ್ಲುಗಳನ್ನು ನಾವು ಮರೆಯಬಾರದು. 

ಗ್ರೀಕ್ ದುರಂತ ನಾಟಕಗಳು ದೇವರ, ರಾಜರ ಕತೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹೇಳುತ್ತಾ, ವಿಧಿಯ ಕೈವಾಡ ಸೂಚಿಸುತ್ತಿದ್ದರೂ, ಜನರ ವಿವೇಚನೆಯನ್ನು ಬಡಿದೆಬ್ಬಿಸುವ ಪ್ರಶ್ನೆಗಳನ್ನು ಸೃಷ್ಟಿಸುತ್ತಿದ್ದವು. ಈ ಥರದ ಪ್ರಾಚೀನ ನಾಟಕಗಳಿಗೂ ಧಾರ್ಮಿಕ ಕತೆಗಳ ಮೂಲಕ ಜನರನ್ನು ಮಾನಸಿಕ ಗುಲಾಮಗಿರಿಗೆ ತಳ್ಳಿದ ಪ್ರಾಚೀನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ಅಂಬೇಡ್ಕರ್, ಪೆರಿಯಾರ್ ಈ ಅಂಶಗಳನ್ನು ಖಚಿತವಾಗಿ ಗುರುತಿಸಿ ವೈಚಾರಿಕತೆಯ ಘಟ್ಟವನ್ನು ಉದ್ಘಾಟಿಸಿದರು. ಈಚಿನ ವರ್ಷಗಳ ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯಾಧ್ಯಯನಗಳ ಕೆಲವು ಧಾರೆಗಳು ಹಿಮ್ಮುಖಿಯಾಗಿ ಚಲಿಸುತ್ತಾ ಜನಪದ ದೇವತೆಗಳು, ಸುಡುಗಾಡು ಸಿದ್ಧರ ಕೀರ್ತನೆಯಲ್ಲಿ ತೊಡಗಿ ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದ ಅಷ್ಟಿಷ್ಟು ವೈಚಾರಿಕತೆಯನ್ನೂ ಹಿನ್ನೆಲೆಗೆ ಸರಿಸತೊಡಗಿವೆ ಎಂದು ನನಗನ್ನಿಸುತ್ತಿದೆ.

ಪ್ರೊಮಿಥ್ಯೂಸ್ ಕತೆ ಈ ಥರದ ಪ್ರಶ್ನೆಗಳನ್ನು ಮೂಡಿಸುತ್ತದೆ. ಕ್ಯಾಪಿಟಲಿಸಂ ಹಾಗೂ ಜಮೀನ್ದಾರಿ ಪ್ರವೃತ್ತಿಗಳ ಅಥಾರಿಟಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ವಿರೋಧಿಸಿದ ಮಾರ್ಕ್ಸ್‌ಗೆ, ಎಂಥ ಅಪಾಯ ಎದುರಾದರೂ ಅಸಹಾಯಕ ಮಾನವರ ನೆರವಿಗೆ ಬರುವ ಧೀಮಂತ ಪ್ರೊಮಿಥ್ಯೂಸನ ಕಾಳಜಿ ಪ್ರಿಯವಾಗಿದ್ದಂತಿತ್ತು; ಪ್ರೊಮಿಥ್ಯೂಸ್ ದೈವದ ಸರ್ವಾಧಿಕಾರವನ್ನು ವಿರೋಧಿಸಿದ್ದ ಅಂಶ ಕೂಡ ನಾಸ್ತಿಕ ಮಾರ್ಕ್ಸ್‌ಗೆ ಪ್ರಿಯವಾಗಿರಬಹುದು.  ಮಾರ್ಕ್ಸ್‌ನನ್ನು ಪ್ರೊಮೀಥಿಯಸ್ ಆಗಿ ತೋರಿಸುವ ೧೮೪೩ರ ಪೇಂಟಿಂಗ್ ಮಾರ್ಕ್ಸ್‌ನಲ್ಲಿ ಕೂಡ ಪ್ರೊಮೀಥಿಯಸ್ ಎಳೆ ಇತ್ತು ಎಂಬುದನ್ನು ಒಡೆದು ಹೇಳುತ್ತದೆ. 

ಈ ಟಿಪ್ಪಣಿ ಬರೆಯುತ್ತಿರುವಾಗ ನನ್ನ ಹದಿಹರೆಯದಲ್ಲಿ ನಮ್ಮೂರಿನ ಬಳಿಯ ಕೆಂಕೆರೆ ಎಂಬ ಪುಟ್ಟ ಊರಿನ ಲೈಬ್ರರಿಯಲ್ಲಿ ’ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಅನುವಾದ ‘ಬದ್ಧ ಪ್ರೊಮಿಥ್ಯೂಸ್’ ಎಂಬ ಪುಸ್ತಕ ನೋಡಿದ್ದು ನೆನಪಾಯಿತು. ಅದರ ಶೀರ್ಷಿಕೆ ಮನಸ್ಸಿಗೆ ಹಿಡಿಯದೆ ಅದನ್ನು ಆಗ ಓದಿರಲಿಲ್ಲವೇನೋ! ಈಸ್ಕಿಲಸ್ ನಂತರ, ಹತ್ತೊಂಬತ್ತನೇ ಶತಮಾನದಲ್ಲಿ ಇಂಗ್ಲಿಷ್ ಕವಿ ಶೆಲ್ಲಿ ’ಪ್ರೊಮಿಥ್ಯೂಸ್ ಅನ್‌ಬೌಂಡ್’ ನಾಟಕ ಬರೆದ; ಅಲ್ಲಿ ಪ್ರೊಮಿಥ್ಯೂಸನ ಶಿಕ್ಷೆಯ ನಂತರ ಅವನು ಜ್ಯೂಪಿಟರನನ್ನು (ರೋಮನ್ ಸಂಸ್ಕೃತಿಯಲ್ಲಿ ಸ್ಯೂಸನೇ ಜೂಪಿಟರ್‍) ಕ್ಷಮಿಸುವ ಕತೆ ಇತ್ಯಾದಿ ಇದೆ. 

ಈ ಟಿಪ್ಪಣಿ ಮುಗಿಸುತ್ತಿರುವಾಗ, ಎಷ್ಟೋ ದಶಕಗಳ ಕೆಳಗೇ ಕನ್ನಡದ ಹಿರಿಯ ವಿದ್ವಾಂಸರಾದ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಈಸ್ಕಿಲಸ್ಸಿನ ಮೂಲ ಗ್ರೀಕ್ ನಾಟಕವನ್ನು ಕನ್ನಡಿಸಿದ್ದರ ಬಗ್ಗೆ ಕೃತಜ್ಞತೆ ಹುಟ್ಟಿತು. ’ಕಟ್ಟಿ ಹಾಕಲ್ಪಟ್ಟ’ ಪ್ರೊಮಿಥ್ಯೂಸ್ ಹಾಗೂ ‘ಕಮಿಟೆಡ್’ ಪ್ರೊಮಿಥ್ಯೂಸ್ ಎರಡೂ ಅರ್ಥವನ್ನು ‘ಬದ್ಧ’ ಪ್ರೊಮಿಥ್ಯೂಸ್ ಹೆಸರು ಸೂಚಿಸುತ್ತದೆ ಎಂಬುದು ಈಗ ಹೊಳೆಯುತ್ತಿದೆ. 

‘ತಡವಾಗಿ ಬಂದ ಬೆಳಕೇ!’ ಎಂದು ರಾಮಚಂದ್ರ ಶರ್ಮರ ಕವಿತೆಯ ಸಾಲು ಕೆಣಕುತ್ತಿದೆ!

blog
28 Jun 2026 ಸವಾಲು, ಜವಾಬ್ದಾರಿ, ಐಡೆಂಟಿಟಿ

ಮೊನ್ನೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಒಂದು ‘ಸ್ತ್ರೀಪುರುಷ’ ವ್ಯಕ್ತಿತ್ವದ ಅನನ್ಯ ಜೀವನಗಾಥೆ ಓದಿದ ಮೇಲೆ, ಈ ಸಲ ಈ ಅಂಕಣದಲ್ಲಿ ಬರೆಸಿಕೊಳ್ಳಲು ಮನಸ್ಸಿನಲ್ಲಿ ಸುತ್ತುತ್ತಿದ್ದ ಉಳಿದೆಲ್ಲ ವಸ್ತುಗಳೂ ಕಣ್ಮರೆಯಾದವು. ಈ ಜೀವನಗಾಥೆ ಬರೆದವರ ಹೆಸರು ನೋಡಿದೆ. ಇರಲಿಲ್ಲ. ಬರೆದವರ ಬಗ್ಗೆ ಹಾಗೂ ಬರೆಸಿಕೊಂಡವರ ಬಗ್ಗೆ ಅಪಾರ ಕೃತಜ್ಞತೆ ಹುಟ್ಟಿತು. ಶೇಕ್‌ಸ್ಪಿಯರನ ‘ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಪೋರ್ಷಿಯಾ ಹೇಳುವ ಮಾತು ನೆನಪಾಯಿತು: ‘ಕರುಣೆ ಇಬ್ಬಗೆಯಲ್ಲಿ ಹರಸುವುದು- ಕೊಡುವವರನ್ನೂ ಪಡೆಯುವವರನ್ನೂ.’  ಹೀಗೆ ಇಬ್ಬಗೆ ಕೃತಜ್ಞತೆ ಹುಟ್ಟಿಸಿದ ಜೀವನಗಾಥೆಯ ಸಾರ: 

ತಮಿಳುನಾಡಿನ ಹಳ್ಳಿಯೊಂದರಲ್ಲಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ, ಆಗೀಗ ಬೀಡಿ ಸೇದುವ ಮುತ್ತುಮಾಸ್ತರ್ ವಾಸಿಸುವ ಪುಟ್ಟ ಮನೆ ಊರ ದೇವರಗುಡಿಯ ಹತ್ತಿರ ಇದೆ. ಒಬ್ಬಂಟಿಯಾಗಿರುವ ಮುತ್ತುವನ್ನು ಜನ ‘ಅಣ್ಣಾಚಿ’ ಅನ್ನುತ್ತಾರೆ. 

ಸುಮಾರು ಮೂವತ್ತೈದು ವರ್ಷಗಳ ಕೆಳಗೆ ಬಿಳಿ ಶರಟು, ಬಿಳಿ ಪಂಚೆ ತೊಡಲು ಶುರು ಮಾಡಿದ ಮುತ್ತು ‘ಈ ಉಡುಪು ನನಗೆ ಒಂದು ಥರದ ಡಿಗ್ನಿಟಿ ತಂದುಕೊಟ್ಟಿದೆ. ನನ್ನ ಮಗಳನ್ನು ಬೆಳೆಸಲು ನನಗೆ ನೆರವಾಗಿದೆ’ ಎಂದು ಸದರಿ ಪತ್ರಿಕೆಯ ರಿಪೋರ್ಟರ್ ಜೊತೆ ಮಾತಾಡುತ್ತಾ ಹೇಳಿದರು. ವಿಶೇಷವೆಂದರೆ, ಮುತ್ತು ತಮ್ಮ ಜೀವನದ ಒಂದು ಘಟ್ಟದಲ್ಲಿ ಒಂದು ವಿಶೇಷ ಕಾರಣಕ್ಕಾಗಿ ಸೇದಲು ಕೈಗೆತ್ತಿಕೊಂಡ ಬೀಡಿ ಕೂಡ ಅವರ ವ್ಯಕ್ತಿತ್ವಕ್ಕೆ ನೆರವಾಗಿದೆ.   

ಈ ಅನುಭವವನ್ನು ಓದುತ್ತಿರುವಾಗ ಈ ಭವ್ಯಭಾರತದ ಪರಂಪರಾಗತ ದಮನಗಳು ಹಾಗೂ ಅವುಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸೆಣಸಿದ ಮುತ್ತುವಿನ ಬದುಕು ರೋಮಾಂಚನ ಹುಟ್ಟಿಸತೊಡಗಿತು. ಮಗಳಿಗೆ ತಾಯಿಯೂ, ತಂದೆಯೂ ಎರಡೂ ಆಗುವ ಪ್ರಸಂಗಗಳನ್ನು ನಾವು ಸುತ್ತಮುತ್ತ ನೋಡುತ್ತಲೇ ಇರುತ್ತೇವೆ. ಈ ಪರಿಚಿತ ಸಾಹಸಗಾಥೆಗಳ ನಡುವೆ ಮುತ್ತುವಿನ ಬದುಕು ಅನನ್ಯವಾಗಿ ಕಾಣುತ್ತದೆ: 
ಮೂವತ್ತೇಳು ವರ್ಷಗಳ ಕೆಳಗೆ ಇಪ್ಪತ್ತರ ಹರೆಯದ ‘ಶೆಣ್ಬಗಂ’ ಎಂಬಾಕೆ ಸಿವ ಎಂಬ ತರುಣನನ್ನು ಮದುವೆಯಾದಳು. ಮದುವೆಯಾದ ಹದಿನೈದೇ ದಿನಕ್ಕೆ ಗಂಡ ಹೃದಯಾಘಾತದಿಂದ ತೀರಿಕೊಂಡ. ಅಷ್ಟೊತ್ತಿಗಾಗಲೇ ಶೆಣ್ಬಗಂ ಗರ್ಭಿಣಿ. ಹೆಣ್ಣು ಮಗು ಹುಟ್ಟಿತು. ಹೊಟ್ಟೆಪಾಡಿಗಾಗಿ ಕಲ್ಲಿದ್ದಲು ಫ್ಯಾಕ್ಟರಿಯಲ್ಲಿ ಕೆಲಸ ಮಾಡತೊಡಗಿದಳು. 

ಇಪ್ಪತ್ತೊಂದು ವರ್ಷದ ಶೆಣ್ಬಗಂ ಎಂಬ ಹೆಣ್ಣಿನ ಸುದೀರ್ಘ ಬವಣೆಯ ಬದುಕು ಹೀಗೆ ಶುರುವಾಯಿತು. ಒಂದು ಸಂಜೆ ಶೆಣ್ಬಗಂ ಫ್ಯಾಕ್ಟರಿಯ ರಾತ್ರಿ ಪಾಳಿಗೆ ಹೋಗುತ್ತಿದ್ದಾಗ, ಡ್ರೈವರೊಬ್ಬ ಲಾರಿ ನಿಲ್ಲಿಸಿ, ‘ಲಾರಿ ಹತ್ತು’ ಎಂದು ಒತ್ತಾಯಿಸಿದ.  ಶೆಣ್ಬಗಂ ಒಪ್ಪದಿದ್ದಾಗ ಡ್ರೈವರ್ ಅವಳನ್ನು ಬೈಯುತ್ತಾ ಹೊರಟುಹೋದ. ಶೆಣ್ಬಗಂ ನಡುಗಿ ಹೋದಳು. ಅವತ್ತಿನ ಪಾಳಿಯ ಕೆಲಸದ ರಾತ್ರಿಯಿಡೀ ಈ ಘಟನೆ ಅವಳನ್ನು ಮುತ್ತಿ ಕಾಡತೊಡಗಿತು. 

ಮಾರನೆಯ ದಿನ ಶೆಣ್ಬಗಂ ಒಂದು ಶರ್ಟ್, ಒಂದು ಪಂಚೆ ತಂದಳು. ತಿರುಚೆಂಡೂರಿಗೆ ಹೋಗಿ ತಲೆ ಬೋಳಿಸಿಕೊಂಡಳು. ಹೆಣ್ಣಿನ ಅವತಾರದಲ್ಲಿ ಕೊನೆಯ ಬಾರಿಗೆ ದೇವಸ್ಥಾನಕ್ಕೆ ಹೋದಳು. ಹೊರ ಬಂದಾಗ ಗಂಡಿನ ಉಡುಗೆಯಲ್ಲಿ ಹೊರ ಬಂದಳು. ‘ಮುತ್ತು’ ಎಂಬ ಹೊಸ ಹೆಸರು ಇಟ್ಟುಕೊಂಡಳು.

ಈ ಮುತ್ತು ‘ಮುತ್ತು ಮಾಸ್ತರ್’ ಆದದ್ದು ತೂತ್ತುಕುಡಿಯ ಹೋಟೆಲೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದಾಗ. ಕೆಲವು ವರ್ಷ ಹೋಟೆಲಿನಲ್ಲಿ ಅಡುಗೆ ಕೆಲಸ ಮಾಡಿದ ಮುತ್ತು ಮಾಸ್ತರ್ ಚೆನ್ನೈ ಸೇರಿ, ನಂತರ ಮೂರು ವರ್ಷಗಳ ನಂತರ, ಹತ್ತು ವರ್ಷದ ಹೆಣ್ಣು ಮಗುವಿನ ಜೊತೆಗೆ ತೂತ್ತುಕುಡಿ ಜಿಲ್ಲೆಯ ಹಳ್ಳಿಯೊಂದಕ್ಕೆ ತಲುಪಿದ್ದಾಯಿತು. ಅಲ್ಲಿ ಯಾರೂ ಗುರುತು ಪರಿಚಯದವರಿರಲಿಲ್ಲ. ಈ ಹಳ್ಳಿಯಲ್ಲಿ ಮುತ್ತು ಮಾಸ್ತರ್ ಕೃಷಿ ಕಾರ್ಮಿಕನ ಕೆಲಸ ಶುರುವಾಯಿತು. ಗುದ್ದಲಿ, ಕೊಡಲಿ ಹಿಡಿದು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಮುತ್ತು ಮಾಸ್ತರನ್ನು ಜನ ಕೆಲಸಕ್ಕೆ ಕರೆಯುತ್ತಿದ್ದರು. ಮುತ್ತು ಮಾಸ್ತರ್ ಬಗ್ಗೆ ಎಲ್ಲರಿಗೂ ಗೌರವ.  

ಹೀಗೇ ಹಲವು ವರ್ಷ ನಡೆಯಿತು. ನಡುನಡುವೆ ಹಲವು ಥರದ ಕಷ್ಟಗಳಿದ್ದವು. ಪಬ್ಲಿಕ್ ಟಾಯ್ಲೆಟ್ಟುಗಳು, ಋತು ಚಕ್ರದ ಕಷ್ಟ, ಆ ದಿನಗಳ ನೋವು... ಹೀಗೆ ಹಲವು ಕೋಟಲೆಗಳು. ಪ್ರತಿ ತಿಂಗಳೂ ಋತುಚಕ್ರದ ದಿನ ಬಂದಾಗ ಮುತ್ತು ನೋವುನಿವಾರಕ ಮಾತ್ರೆಗಳ ಮೊರೆ ಹೋಗುವುದು; ನೋವು ಮರೆಯಲು ಕೆಲಸದಲ್ಲಿ ಅತಿಯಾಗಿ ತೊಡಗಿಬಿಡುವುದು ಶುರುವಾಯಿತು. ‘ಒಂದು ಥರದ ಜೀವನವನ್ನು ಆರಿಸಿಕೊಂಡ ಮೇಲೆ ಅದು ಒತ್ತಾಯಿಸುವ ಎಲ್ಲವನ್ನೂ ಪೂರೈಸಲು ಸಿದ್ಧವಾಗಿರಲೇಬೇಕಲ್ಲ!’ ಇದು ಮುತ್ತುವಿನ ಅನುಭವವೇ ಹೊಮ್ಮಿಸಿದ ಜೀವನದೃಷ್ಟಿ. ಅದೃಷ್ಟವೆಂಬಂತೆ ನಲವತ್ತನೆಯ ವಯಸ್ಸಿಗೆ ಋತುಚಕ್ರದ ಸಮಸ್ಯೆ ನಿಂತು ಹೋಯಿತು. 

ತನ್ನ ಈ ‘ಸ್ತ್ರೀಪುರುಷ’ ಬದುಕಿನಲ್ಲಿ ಬೀಡಿ ಕೊಟ್ಟ ರಕ್ಷಣೆ, ಅದು ಕೊಟ್ಟ ಗಂಡು ಇಮೇಜಿನ ಬಗೆಗೂ ಮುತ್ತುವಿಗೆ ಕೃತಜ್ಞತೆಯಿತ್ತು. ಒಮ್ಮೆ ಕುಡಿದ ಮತ್ತಿನಲ್ಲಿದ್ದ ಆಸಾಮಿಯೊಬ್ಬನಿಗೆ ಈ ಮುತ್ತು ಒಬ್ಬ ಹೆಂಗಸು ಎಂಬ ಅನುಮಾನ ಬಂತೋ ಏನೋ, ಮುತ್ತುವಿನ ಬಳಿ ಬರಲೆತ್ನಿಸಿದ. ಇದರಿಂದ ಪಾರಾಗಲು ಮುತ್ತು ಬೀಡಿ ಹಚ್ಚಲು ಕಡ್ಡಿ ಗೀರಿದ ತಕ್ಷಣ, ಆತ ‘ಅಣ್ಣಾ, ಮ್ಯಾಚ್ ಬಾಕ್ಸ್ ಕೊಡ್ತೀಯಾ’ ಅಂದ! ಬೀಡಿಯ ಹೊಗೆ ಒಳಗೆ ಹಬ್ಬಿಸುವ ಬಿಸಿ, ದಂ ಎಳೆದಾಗ ಹುಟ್ಟುವ ಲಹರಿ, ಅದು ಸೃಷ್ಟಿಸಿದ ಖಾಸಗಿ ಸ್ಪೇಸ್ ಕೂಡ ಮುತ್ತುವಿಗೆ ಏಕಾಕಿತನ ಮೀರಲು ನೆರವಾಗಿರಬಹುದು ಎಂದು ನಾವು ಊಹಿಸಬಹುದು.

ಈ ನಡುವೆ ಮುತ್ತುವಿನ ಪ್ರೇಮ-ಕಾಮದ ಲೋಕಗಳ ಒತ್ತಡಗಳು, ತಳಮಳಗಳು ಹೇಗಿದ್ದವೋ ಏನೋ ಯಾರಿಗೂ ತಿಳಿಯದು. ಆದರೆ ತನ್ನಂತವರಿಗೆ ಯಾವ ರಕ್ಷಣೆಯೂ ಇರದ ಸಮಾಜದಲ್ಲಿ, ಮಗಳಿಗಾಗಿ ನಾನು ಹೀಗೇ ಮುಂದುವರಿಯಲು ನಿರ್ಧರಿಸಿದೆ ಎಂಬ ಬಗ್ಗೆ ಮುತ್ತುವಿಗೆ ಖಚಿತತೆಯಿತ್ತು. ಹತ್ತು ವರ್ಷವಾಗುವವರೆಗೂ ಮುತ್ತುವಿನ ಮಗಳು ತನ್ನ ಚಿಕ್ಕಮ್ಮ ಲಕ್ಷ್ಮಿಯ ಬಳಿಯಿದ್ದಳು; ಅಷ್ಟೇ ಅಲ್ಲ, ಲಕ್ಷ್ಮಿಯನ್ನೇ ತಮ್ಮಮ್ಮ ಎಂದುಕೊಂಡಿದ್ದಳು. ಮುತ್ತು ಮಾಸ್ತರ್ ಕೂಡ ತನ್ನಂತೆಯೇ ಹೆಣ್ಣು ಎಂದು ಮಗಳಿಗೆ ಗೊತ್ತಾದದ್ದು ತನ್ನ ಏಳನೆಯ ವಯಸ್ಸಿನಲ್ಲಿ. ಲಕ್ಷ್ಮಿ ತೀರಿಕೊಂಡಾಗ ಅವಳಿಗೆ ಹತ್ತು ವರ್ಷ. ಅದಾದ ಮೇಲಷ್ಟೇ ಮುತ್ತು ತಮ್ಮಮ್ಮ ಎಂಬುದು ಅವಳಿಗೆ ಗೊತ್ತಾಗಿದ್ದು. ಲಕ್ಷ್ಮಿ ತೀರಿಕೊಂಡ ಮೇಲೆ ಮಗಳು ಮುತ್ತು ಇದ್ದ ಊರಿಗೇ ಬರಬೇಕಾಯಿತು. ಮಗಳು ಕೂಡ ಅಮ್ಮನನ್ನು ಮುತ್ತು ಮಾಸ್ತರ್ ಎಂದು ಕರೆಯುತ್ತಿದ್ದಳು. ಅಮ್ಮ-ಮಗಳು ಇಬ್ಬರೂ ‘ಶೆಣ್ಬಗಂ’ ಗುರುತನ್ನು ಮರೆಯಲ್ಲೇ ಇಟ್ಟಿದ್ದರು. ತೀರಾ ಹತ್ತಿರದ ಸಂಬಂಧಿಕರಿಗೆ ಮಾತ್ರ ಇದು ಗೊತ್ತಿತ್ತು. ಮಗಳು ಮದುವೆಯಾಗಿ ಹೋದ ಮೇಲೆ ಮುತ್ತುವಿನ ಒಂಟಿ ಬದುಕು, ಕೆಲಸ, ಬೀಡಿ ಎಲ್ಲವೂ ಹಾಗೇ ಮುಂದುವರಿದವು.

ಒಬ್ಬಳೇ ಬದುಕುವ, ಬದುಕಬಯಸುವ, ಬದುಕಲೇಬೇಕಾದ ಹೆಣ್ಣಿನ ವಿಚಿತ್ರ ಛಲದ ಲೋಕವನ್ನು ಹೇಳುವ ಈ ಕತೆಯನ್ನು ಆ ಇಂಗ್ಲಿಷ್ ಪತ್ರಿಕೆ ಪರಿಚಯಿಸಿದ್ದು, ಬಹಿರಂಗ ಪಡಿಸಿದ್ದು ಸರಿಯೋ ತಪ್ಪೋ ಎಂಬ ಸಂಕೀರ್ಣ ನೈತಿಕ ಪ್ರಶ್ನೆ ಕೂಡ ಈ ಬರಹ ಬರೆಯುವಾಗ ಎದುರಾಗತೊಡಗಿತು. ಅದಕ್ಕೇ ಇಲ್ಲಿ ಕೇಂದ್ರ ಪಾತ್ರದ ಹೆಸರು, ಊರು ಬದಲಿಸಿದೆ. ಆದರೆ ಇದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದ್ದನ್ನೂ ಈ ಬರಹ ಮುಗಿಸುವಾಗ ಗಮನಿಸಿದೆ. ಮೂಲ ಬರಹ ಬರೆದವರ ನಿಜವಾದ ಕಳಕಳಿಯ ಬಗ್ಗೆ ಮೆಚ್ಚುಗೆಯ ಜೊತೆಗೇ ಇದನ್ನು ಒಬ್ಬ ಆಧುನಿಕ ಮನಸ್ಸಿನ ವರದಿಗಾರ್ತಿ ಅಥವಾ ಸ್ತ್ರೀವಾದಿ ದೃಷ್ಟಿಕೋನದ ವರದಿಗಾರ್ತಿ ಅಥವಾ ಹೆಣ್ಣು ಮನಸ್ಸಿನ ವರದಿಗಾರ ಬರೆದಿರಬಹುದು ಎಂದು ಊಹಿಸಿದೆ. ಪುರುಷನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಗಂಡಾದ ಈ ಕತೆಯನ್ನು ಸ್ತ್ರೀವಾದಿ ದೃಷ್ಟಿಕೋನದ ಮೂಲಕ ಇನ್ನಷ್ಟು ಆಳವಾಗಿ ನೋಡಬೇಕೆನ್ನಿಸಿತು. 

ಮಕ್ಕಳಿಗಾಗಿ ತಂದೆ, ತಾಯಿ ಎರಡೂ ಆಗುವ ದಿಟ್ಟ ಮಹಿಳೆಯರ ಬದುಕಿನ ಅಚಲವಾದ ಏಕೋದ್ದೇಶ, ಸಂಕಷ್ಟ, ಛಲಗಳನ್ನು ಹತ್ತಿರದಿಂದ ಕಂಡಿರುವ ನನ್ನಂಥವರಿಗೆ ಹಲ್ಲುಕಚ್ಚಿ ಬದುಕಿ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವ ಇಂಥ ಮಹಿಳೆಯರ ಬದುಕು ಅಪಾರ ಕೃತಜ್ಞತೆ, ಹೆಮ್ಮೆ ಮೂಡಿಸುತ್ತಲೇ ಇರುತ್ತದೆ. ನಾಲ್ಕು ಮಕ್ಕಳನ್ನು ತನ್ನ ಏಕಾಂಗಿ ಬದುಕಿನ ಹೋರಾಟದ ಮೂಲಕವೇ ಬೆಳೆಸಿದ ಸಾರ್ಥಕ ಬದುಕಿನ ತಾಯಿಯನ್ನು ಮನೆಯಲ್ಲೇ ಕಂಡ ನನ್ನಂಥವರಿಗೆ ಇಂಥ ಜೀವನಗಾಥೆಗಳು ನನ್ನ ಅನುಭವದ, ಒಳಗಿನ ಕತೆಗಳೇ ಅನ್ನಿಸುವುದು, ಈ ಕುರಿತು ಬರೆಯುವಂತೆ ಪ್ರೇರೇಪಿಸುವುದು ಸಹಜ. 

ಕೊನೆ ಟಿಪ್ಪಣಿ 
ನಟರಾಜ ಹೊನ್ನವಳ್ಳಿ: ಹೊಸ ನೋಟದ ಓಟ!

ನಿನ್ನೆ ಶನಿವಾರ (೨೮ ಜೂನ್ ೨೦೨೬) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಮೊಗ್ಗ ‘ರಂಗಾಯಣ’ ರೂಪಿಸಿದ, ಗೆಳೆಯ ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ, ’ಸ್ವಾತಂತ್ರ್ಯದ ಓಟ’   ಭಾರತದ ವಿಭಜನೆಯ ಕಾಲದ ಚರಿತ್ರೆಯನ್ನು ರಂಗದ ಮೇಲೆ ತಂದ ರೀತಿ ನೋಡುಗ, ನೋಡುಗಿಯರನ್ನು ನಿಧಾನವಾಗಿ ಆವರಿಸಿಕೊಳ್ಳತೊಡಗಿತು. ಈ ನಾಟಕದ ಶುರುವಿನಲ್ಲೇ ಹೊನ್ನವಳ್ಳಿಯವರ ಸಿಗ್ನೇಚರ್‍ ಸ್ಟೈಲಿನ ನಿಧಾನ ನಡಿಗೆಯ ಕಾರವಾನ್ ಪ್ರೇಕ್ಷಕ, ಪ್ರೇಕ್ಷಕಿಯರನ್ನು ಭಾರತದ ಈ ಕಾಲಘಟ್ಟದ ಚರಿತ್ರೆಯನ್ನು ಸಾವಧಾನದಿಂದ, ಪೂರ್ವಗ್ರಹ ಬಿಟ್ಟು ನೋಡಲು ಸೂಚಿಸತೊಡಗಿತು. 

ಹೀಗಾಗಿ ಪರಕೀಯಭಾವ, ಪಲ್ಲಟದ ಭೀಕರ ಅನುಭವ, ಭಾವನಾತ್ಮಕತೆ, ಹಿಂಸೆ ಎಲ್ಲವೂ ಇರುವ ಚರಿತ್ರೆಯನ್ನು ವಸ್ತುನಿಷ್ಠವಾಗಿ-ಆರೋಗ್ಯಕರವಾಗಿ-ವೈಚಾರಿಕವಾಗಿ ನೋಡುವ ಧ್ವನಿ ಶುರುವಿನಿಂದಲೇ ರಂಗದ ಮೇಲೆ ಹಾಗೂ ಇಡೀ ಕಲಾಕ್ಷೇತ್ರದಲ್ಲಿ ದಟ್ಟವಾಗಿ ವ್ಯಾಪಿಸತೊಡಗಿತು. ಪ್ರೊಫೆಸರ್ ಮಂಜುನಾರಾಯಣರ ಗಾಢ ಕತ್ತಲು-ಬೆಳಕಿನ ಚಳಕ, ನಟನೆ, ಸಂಗೀತ ಎಲ್ಲವೂ ಸೇರಿದ ಕೆಲವು ದೃಶ್ಯಗಳ ಆಳದ ಪರಿಣಾಮ ಹೇಗಿತ್ತೆಂದರೆ, ಸಾಮಾನ್ಯವಾಗಿ ಪರಿಣಾಮಕಾರಿ ದೃಶ್ಯಗಳಿಗೆ ಚಪ್ಪಾಳೆ ಹೊಡೆಯುವ ನೋಡುಗ ಬಳಗ ಸ್ತಬ್ಧವಾಗಿ, ಮುಂದಿನ ದೃಶ್ಯಕ್ಕಾಗಿ ಕಾಯತೊಡಗುತ್ತಿತ್ತು. ಅತ್ಯಂತ ಸೂಚ್ಯವಾಗಿ, ಎದೆ ಕರಗಿಸುವಂತೆ ಮಂಡಿಸಿದ ಗಾಂಧೀ ಹತ್ಯೆಯ ನಂತರ ಇನ್ನೇನನ್ನೂ ನೋಡಲಾರದಷ್ಟು ಈ ನಾಟಕದ ಫ್ರೇಮುಗಳು, ಕಾಲದ ದುರಂತ ಇವೆಲ್ಲವೂ ನನ್ನ ತುಂಬ ತುಂಬಿಕೊಂಡಿದ್ದವು… 

ನಟರಾಜ ಹೊನ್ನವಳ್ಳಿ ನಮ್ಮ ಕಾಲದ ಕೆಲವೇ ಸೂಕ್ಷ್ಮ-ಜೀವಂತ ನಿರ್ದೇಶಕರಲ್ಲಿ ಒಬ್ಬರು ಎಂಬುದನ್ನು ಅವರು ವ್ಯಕ್ತಿಗಳು, ದೃಶ್ಯಗಳನ್ನು ಹ್ಯಾಂಡಲ್ ಮಾಡುವ ರೀತಿ ಮತ್ತೆ ಮತ್ತೆ ಸೂಚಿಸುತ್ತಿತ್ತು. ಇದೀಗ ಅವರ ಈ ಹೊಸ ನೋಟದ ಸ್ವತಂತ್ರ ಓಟಕ್ಕೆ ರಂಗಾಯಣದ ಪ್ರಸನ್ನ ಡಿ. ಸಾಗರ್ ಜೊತೆಗೆ ಜೋಡಿಯಾದ ರಂಗಾಯಣದ ಕಮಿಟೆಡ್ ತಂಡಕ್ಕೆ ಕನ್ನಡನಾಡಿನ ಕೃತಜ್ಞತೆಗಳು.  

‘ಸ್ವಾತಂತ್ರ್ಯದ ಓಟ’ದ ಮೂಲ ಕೃತಿ: ಬೊಳುವಾರು ಮಹಮ್ಮದ್ ಕುಂಞಯವರ ಕಾದಂಬರಿ. ರಂಗರೂಪ: ಮಂಜುನಾಥ ಗೋಮಾರನಹಳ್ಳಿ, ಸಂಗೀತ: ರಾಘವ ಕಮ್ಮಾರ. ಬೆಳಕು: ಮಂಜುನಾರಾಯಣ್.



Latest Video


Nataraj Huliyar Official
YouTube Channel

SUBSCRIBE