Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
14 Jun 2026 ಕವಿ ಎಂಬ ಕಾಲದ ವಿದ್ಯಮಾನ

ದೊಡ್ಡ ಲೇಖಕ ಅಥವಾ ಲೇಖಕಿ ಬರಬರುತ್ತಾ ಕೇವಲ ಲೇಖಕರಾಗಿ ಉಳಿಯದೆ ಕಾಲದ ವಿದ್ಯಮಾನ ಅಥವಾ Phenomenon ಆಗಿ ಕಾಣತೊಡಗುವ ಬಗೆಯನ್ನು ಈ ಅಂಕಣದಲ್ಲಿ ಆಗಾಗ ಚರ್ಚಿಸಿರುವೆ. ಮೊನ್ನೆ ಜೂನ್ ೧೧ಕ್ಕೆ ಕವಿ ಸಿದ್ಧಲಿಂಗಯ್ಯನವರು ನಮ್ಮನ್ನಗಲಿ ಐದು ವರ್ಷವಾದದ್ದನ್ನು ಗೆಳೆಯರು ನೆನಸಿಕೊಂಡರು. ೨೦೨೧ರಲ್ಲಿ ಹಿರಿಯ ಚಿಂತಕ ಗೋಪಾಲಗುರು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಸಿದ್ಧಲಿಂಗಯ್ಯನವರನ್ನು ಕುರಿತು ಬರೆಯಲು ಹೇಳಿದ್ದರು; ‘ಮಯೂರ’ದ ಸಂಪಾದಕರಾಗಿದ್ದ ಗೆಳೆಯ ಸಂದೀಪ್ ನಾಯಕ್ ಸಿದ್ಧಲಿಂಗಯ್ಯನವರನ್ನು ಕುರಿತು ಸುದೀರ್ಘ ಲೇಖನ ಬರೆಯಲು ಪ್ರೇರೇಪಣೆಯಾದರು. ಈ ಸಲ ಈ ಎರಡೂ ಲೇಖನಗಳ ಆಯ್ದ ಭಾಗಗಳನ್ನು ಕೊಡುತ್ತಾ, ಕನ್ನಡದ ಮುಖ್ಯ ಕವಿಯೊಬ್ಬರು ಕಾಲದ ವಿದ್ಯಮಾನವಾಗಿ ಅರಳಿದ ಬಗೆಯನ್ನು ಒಂದು ಚೌಕಟ್ಟಿನಲ್ಲಿ ನೋಡಲೆತ್ನಿಸಿದೆ: 

೧೯೬೦ರ ದಶಕದಲ್ಲಿ ಒಂದು ದಿನ ಬೆಂಗಳೂರಿಗೆ ಐವತ್ತು ಕಿಲೋಮೀಟರ್ ದೂರದಲ್ಲಿರುವ ಮಾಗಡಿ ಬಳಿಯ ಐನೋರ ಹೊಲವನ್ನು ಇಬ್ಬರು ಗಂಡಾಳುಗಳು ನೇಗಿಲ ನೊಗ ಹೊತ್ತು ಎತ್ತುಗಳಂತೆ ಉಳುತ್ತಿದ್ದರು. ಈ ದೃಶ್ಯವನ್ನು ದಲಿತಕೇರಿಯ ಪುಟ್ಟ ಹುಡುಗರು ತಮಾಷೆಯೆಂಬಂತೆ ನೋಡುತ್ತಿದ್ದರು. ಆ ಇಬ್ಬರಲ್ಲಿ ತನ್ನ ಅಪ್ಪ ದೇವಯ್ಯನೂ ಇರುವುದನ್ನು ಕಂಡ ಆ ಗುಂಪಿನಲ್ಲಿದ್ದ ಹುಡುಗ ಸಿದ್ಧಲಿಂಗಯ್ಯನಿಗೆ ವಿಚಿತ್ರ ಸಂಕಟ ಶುರುವಾಯಿತು.  

ಕೆಲ ವರ್ಷಗಳ ನಂತರ ದೇವಯ್ಯ ಮಾಗಡಿ ಬಳಿಯ ಮಂಚನಬೆಲೆ ಬಿಟ್ಟು, ಹೆಂಡತಿ, ಮತ್ತು ಆರು ಮಕ್ಕಳೊಂದಿಗೆ ಬೆಂಗಳೂರಿನ ಶ್ರೀರಾಂಪುರದ ಗೋಪಾಲಸ್ವಾಮಿ ಅಯ್ಯರ್ ಕಾಲನಿಯ ಪುಟ್ಟ ಮನೆಯೊಂದರಲ್ಲಿ ಬಿಡಾರ ಹೂಡಿದರು. ಜಾಣ ಹುಡುಗ ಸಿದ್ಧಲಿಂಗಯ್ಯ ಹೈಸ್ಕೂಲಿನಲ್ಲಿದ್ದಾಗಲೇ ತನ್ನ ಎಕ್ಸರ್‌ಸೈಸ್ ನೋಟ್ ಬುಕ್ಕಿನ ಒಳಗೆ ತನ್ನ ಸಿಟ್ಟು, ಅಸಹನೆ, ದುಗುಡಗಳನ್ನೆಲ್ಲ ಪದ್ಯಗಳ ರೂಪದಲ್ಲಿ ಗೀಚಿಡುತ್ತಿದ್ದ. ಒಮ್ಮೆ ಈ ಹುಡುಗನ ಚಿಕ್ಕಪ್ಪನ ಮಗ ಆ ಪದ್ಯಗಳನ್ನೆಲ್ಲ ನೋಡಿ ದಿಗಿಲುಗೊಂಡ. ‘ಇಷ್ಟರಲ್ಲೇ ನಿನ್ನ ಮಗನ್ನ ಪೋಲೀಸೋರು ಇಡ್ಕಂಡೋಗ್ತರೆ’ ಎಂದು ಈ ಪದ್ಯಗಳ ಪರಿಣಾಮದ ಬಗ್ಗೆ ಈತ ದೇವಯ್ಯನವರನ್ನು ಹೆದರಿಸಿದ. ಹೆದರಿದ ದೇವಯ್ಯ ಆ ನೋಟ್ ಬುಕ್ಕನ್ನು ಒಲೆಗೆ ಹಾಕಿ, ಮಗನನ್ನು ಪೊಲೀಸರಿಂದ ಬಚಾವು ಮಾಡಿದೆ ಎಂದು ನೆಮ್ಮದಿಗೊಂಡರು. ಹುಡುಗ-ಕವಿ ರೇಗಿ, ಗೊಣಗಿ ಸುಮ್ಮನಾದರೂ ಕವಿತೆ ಮಾತ್ರ ಅವನ ಕೈ ಬಿಡಲಿಲ್ಲ.  

ಹುಡುಗ ಸಿದ್ಧಲಿಂಗಯ್ಯ ಬರೆದ ಆರಂಭದ ಪದ್ಯಗಳು ಸುಟ್ಟು ಹೋದರೂ ಆ ಪದ್ಯಗಳಲ್ಲಿ ಚಿಮ್ಮುತ್ತಿದ್ದ ಭಾವ ಕವಿಪ್ರಜ್ಞೆಯನ್ನು ರೂಪಿಸುತ್ತಲೇ ಇತ್ತು. ಕಿಕ್ಕಿರಿದ ಪುಟ್ಟ ಮನೆಯಲ್ಲಿ ಎಷ್ಟೋ ಸಲ ನಿಲ್ಲಲು ಕೂಡ ಜಾಗವಿಲ್ಲದ ಕವಿ ಒಮ್ಮೆ ಸುಮ್ಮನೆ ನಡೆಯುತ್ತಾ ಹೋದಾಗ ಶ್ರೀರಾಂಪುರಕ್ಕೆ ಹೊಂದಿಕೊಂಡಿದ್ದ ಹರಿಶ್ಚಂದ್ರ ಸ್ಮಶಾನ ಕಾಣಿಸಿತು. ಅಂದಿನಿಂದ ಕವಿಗೆ ಸ್ಮಶಾನವೇ ಓದುವ, ಬರೆಯುವ, ತನ್ನ ಪಾಡಿಗೆ ಇರುವ ತಾಣವಾಯಿತು. ಹದಿಹರೆಯದಲ್ಲಿ ಭಾಷಣ ಮಾಡುವ ಕಲೆಯೂ ಕವಿಯಲ್ಲಿ ಬೆಳೆಯಿತು. ಮಂಟೇಸ್ವಾಮಿ ಒಕ್ಕಲಿನ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ಕವಿ ಅಂಬೇಡ್ಕರ್ ಬಗ್ಗೆ ಕಟ್ಟಿದ ಅರೆಸತ್ಯ-ಅರೆಕಲ್ಪನೆ ಬೆರೆತ ಕಥಾಪ್ರಸಂಗ ಸುತ್ತಮುತ್ತಲ ಕೇಳುಗರ ನಡುವೆ ಜನಪ್ರಿಯವಾಯಿತು. ಅಂಬೇಡ್ಕರ್ ಚಿಂತನೆಗಳನ್ನು ಅರಿಯುವ ಮೊದಲೇ ಅಂಬೇಡ್ಕರ್ ವ್ಯಕ್ತಿತ್ವ ಕವಿಯ ಭಾವಲೋಕದೊಳಗೆ ಇಳಿದಿತ್ತು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ದಲಿತಪರ ಚಟುವಟಿಕೆಗಳು ಕೂಡ ಕವಿಯನ್ನು ಅಂಬೇಡ್ಕರ್ ಚಿಂತನೆಗಳತ್ತ ಕರೆದೊಯ್ದವು.    
ಹೀಗೆ ಡಾ. ಸಿದ್ಧಲಿಂಗಯ್ಯನವರು ಒಂದು ಕಾಲಘಟ್ಟದ ಹಲಬಗೆಯ ನಿರ್ಣಾಯಕ ವಿದ್ಯಮಾನಗಳ ಫಲವಾಗಿ ವಿಕಾಸಗೊಳ್ಳುತ್ತಾ ತಾವೇ ಒಂದು ಅಪೂರ್ವ ವಿದ್ಯಮಾನವಾದ ಕವಿ. ಇಂಥ ಕವಿಯನ್ನು ವ್ಯಕ್ತಿಪ್ರತಿಭೆಯಾಗಿ ನೋಡುವುದರ ಜೊತೆಗೇ, ಈ ಕವಿಯನ್ನು ಸೃಷ್ಟಿಸಿದ ಕಾಲಘಟ್ಟ, ವೈಚಾರಿಕ, ರಾಜಕೀಯ, ಸಾಮಾಜಿಕ ಪರಿಸರ, ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣಗಳ ಹಿನ್ನೆಲೆಯಲ್ಲಿ ನೋಡಿದರೆ ಹಲವು ಸತ್ಯಗಳು ಕಾಣುತ್ತವೆ: 

ಎಪ್ಪತ್ತರ ದಶಕದ ಶುರುವಿನಲ್ಲಿ ಕಾಂಗ್ರೆಸ್ ರಾಜಕಾರಣ ಯಥಾಸ್ಥಿತಿವಾದಿಯಾಗಿ ಬಸವಳಿಯುತ್ತಿತ್ತು. ಆದರೆ ಕಾಂಗ್ರೆಸ್ಸಿನ ಕಾರ್ಯಕ್ರಮಗಳಿಂದಾಗಿ ಶೂದ್ರ, ದಲಿತ ತಲೆಮಾರುಗಳು ಹೊಸ ಶಿಕ್ಷಣವನ್ನೂ ಪಡೆಯುತ್ತಿದ್ದವು. ಪುರೋಹಿತಶಾಹಿಯನ್ನು, ಜಮೀನ್ದಾರಿಕೆಯನ್ನು, ಅಸ್ಪೃಶ್ಯತೆಯನ್ನು ಪ್ರಶ್ನಿಸಬಲ್ಲ ಹೊಸ ಹುಡುಗರು ಸಿದ್ಧವಾಗುತ್ತಿದ್ದರು. ಅದೇ ಆಗ ವಕೀಲರಾಗಿ, ಹರಿಹರದ ಹಳ್ಳಿಹಳ್ಳಿಗಳಿಗೆ ಸೈಕಲ್ಲಿನಲ್ಲಿ ಹೋಗಿ ದಲಿತರಲ್ಲಿ ಎಚ್ಚರ ಮೂಡಿಸುತ್ತಿದ್ದ ಬಿ. ಬಸವಲಿಂಗಪ್ಪ ರಾಜಕೀಯ ಪ್ರವೇಶಿಸಿದ್ದರು; ಆವರೆಗಿನ ವಿನಮ್ರ ದಲಿತ ರಾಜಕಾರಣದ ಭಾಷೆಗಿಂತ ಭಿನ್ನವಾದ ಸ್ವಾಭಿಮಾನದ ಭಾಷೆಯನ್ನು ಬಸವಲಿಂಗಪ್ಪ ಬಳಸಲಾರಂಭಿಸಿದ್ದರು; ದಲಿತ ಸಮುದಾಯಕ್ಕೆ ಛಲ, ಘನತೆ, ದಿಟ್ಟತನಗಳ ಹಾದಿ ತೋರಿಸುತ್ತಿದ್ದರು. 

ಇತ್ತ ಸಾಹಿತ್ಯಲೋಕದಲ್ಲಿ ನವ್ಯ ಲೇಖಕರಾಗಿ ಶುರು ಮಾಡಿದ್ದ ತೇಜಸ್ವಿ, ಲಂಕೇಶ್, ಚಂದ್ರಶೇಖರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ ಥರದವರು ನವ್ಯ ಮಾರ್ಗ ತೊರೆದು ಶೂದ್ರ ಬರಹಗಾರರ ಒಕ್ಕೂಟವನ್ನು ರೂಪಿಸಿಕೊಂಡಿದ್ದರು. ಅಷ್ಟು ಹೊತ್ತಿಗಾಗಲೇ ಹಾಸ್ಟೆಲ್ ಸೇರಿದ್ದ ಸಿದ್ಧಲಿಂಗಯ್ಯ ದಲಿತ ವಿದ್ಯಾರ್ಥಿಗಳ ಪ್ರತಿಭಟನೆಯ ನೇತೃತ್ವ ವಹಿಸಿ ನಾಯಕರಾಗಿದ್ದರು. ವಿಧಾನಸೌಧದ ಗ್ಯಾಲರಿಯಿಂದ ಕರಪತ್ರ ತೂರಿದ್ದರು. ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಮಾಡುವ ಕಾಲಕ್ಕೆ ಸ್ಪಷ್ಟ ವೈಚಾರಿಕತೆಯ, ನಿರ್ಭಯ ನಿಲುವಿನ ಚರ್ಚಾಪಟುವೂ ಆಗಿದ್ದರು. ದೇವರ ಅಸ್ತಿತ್ವ ಕುರಿತು ಎ.ಪಿ.ಎಸ್. ಕಾಲೇಜಿನಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ಸ್ಟೇಜಿನ ಮೇಲೆ ಉರಿಯುತ್ತಿದ್ದ ದೀಪವನ್ನು ದೇವರ ಅವತಾರವೆಂದು ಪ್ರತಿಸ್ಪರ್ಧಿಗಳು ಮತ್ತೆ ಮತ್ತೆ ಹೇಳುತ್ತಿದ್ದುದನ್ನು ಕೇಳಿ ಸಿದ್ಧಲಿಂಗಯ್ಯನವರಿಗೆ ರೇಗಿಹೋಗಿತ್ತು. ತಮ್ಮ ಸರದಿ ಬಂದಾಗ ಸ್ಟೇಜು ಹತ್ತಿದ ಅವರು ಇದ್ದಕ್ಕಿದ್ದಂತೆ ದೀಪ ಉರುಬಿ ಆರಿಸಿ, ‘ನಿಮ್ಮ ದೇವರು ಇದ್ದ ಪಕ್ಷದಲ್ಲಿ ನಾನು ಮಾತಾಡುವುದನ್ನು ನಿಲ್ಲಿಸಲಿ’ ಎಂದು ವಿರೋಧಿಗಳಿಗೆ ಸವಾಲು ಹಾಕಿದರು!  

1973ರಲ್ಲಿ ಬಸವಲಿಂಗಪ್ಪನವರು ಇಡೀ ಕನ್ನಡ ಸಾಹಿತ್ಯವನ್ನೇ ‘ಬೂಸಾ’ ಎಂದರೆಂದು ಮೇಲುಜಾತಿಗಳ ಅಪಪ್ರಚಾರ ಶುರುವಾಗಿ, ಅವರ ರಾಜೀನಾಮೆಗಾಗಿ ಒತ್ತಾಯ ಎದ್ದಿತು.  ಸಿದ್ಧಲಿಂಗಯ್ಯ ಬಸವಲಿಂಗಪ್ಪನವರ ಪರ ನಿಂತರು. 3000 ಹುಡುಗರ ಪ್ರತಿಭಟನಾ ಪ್ರದರ್ಶನವನ್ನೂ ಸಂಘಟಿಸಿದರು. ಆಗ ಕರ್ನಾಟಕದ ಅನೇಕ ಪ್ರಗತಿಪರರಿಗೆ ಮೇಷ್ಟರಾಗಿದ್ದ ಜಿ. ರಾಮಕೃಷ್ಣ ನಡೆಸುತ್ತಿದ್ದ ‘ಸರ್ಕಲ್ ಫಾರ್ ದಿ ಸ್ಟಡಿ ಆಫ್ ಡಯಲೆಕ್ಟಿಕಲ್ ಮೆಟೀರಿಯಲಿಸಂ’ ಸಿದ್ಧಲಿಂಗಯ್ಯನವರಿಗೆ ಸೈದ್ಧಾಂತಿಕ ಸ್ಪಷ್ಟನೆ ನೀಡತೊಡಗಿತ್ತು. ಅವರು ಒಂದೆರಡು ವರ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದ ಸದಸ್ಯರೂ ಆಗಿದ್ದರು. 

ಇದೆಲ್ಲದರ ಫಲವಾಗಿ, 1970ರ ದಶಕದ ಕರ್ನಾಟಕದ ನಕಾಶೆಯಲ್ಲಿ ಹೊಸ ಕವಿ-ನಾಯಕನೊಬ್ಬ ಹಠಾತ್ತನೆ ಮೂಡಿಬಂದಿದ್ದ. ಒಂದು ಕಾಲದ ವೈಚಾರಿಕ ಪ್ರೇರಣೆಗಳು, ಒತ್ತಡಗಳು, ವಿದ್ಯಮಾನಗಳು, ತಿರುವುಗಳು ಹಾಗೂ ವ್ಯಕ್ತಿಯ ಚಡಪಡಿಕೆಗಳು ಹೇಗೆ ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ಸೃಷ್ಟಿಸುತ್ತವೆ ಎಂಬುದನ್ನೂ ಈ ವಿದ್ಯಮಾನಗಳು ಹೇಳುತ್ತವೆ. ಈ ಹಿನ್ನೆಲೆಯ ಕವಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಸೇರಿ, ಜ್ಞಾನಭಾರತಿಯ ಮರಗಳಡಿ ತನ್ನ ಸಿಟ್ಟಿನ ಕವಿತೆಗಳನ್ನು ಓದಿದಾಗ ಅಲ್ಲಿದ್ದ ಖ್ಯಾತ ಅಧ್ಯಾಪಕ-ಲೇಖಕರು ಅಚ್ಚರಿಗೊಂಡು 'ಹೊಲೆ ಮಾದಿಗರ ಹಾಡುಗಳು' ಸಂಕಲನ ಪ್ರಕಟಿಸಿದರು. ಈ ಸಂಕಲನದ ‘ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ’ ಎಂಬ ಸ್ಫೋಟ ಹುಟ್ಟಿದ ಹಿನ್ನೆಲೆಯ ಬಗ್ಗೆ ಸಿದ್ಧಲಿಂಗಯ್ಯನವರೇ  ಹೇಳಿದ ಅಂಶಗಳು ಕುತೂಹಲಕರವಾಗಿವೆ:

ಆಗ ಭರತ್ ಜುಂಝನ್ವಾಲ ಎಂಬ ಸಮಾಜವಿಜ್ಞಾನಿ ಬೆಂಗಳೂರಿನ ಸ್ಲಮ್ಮೊಂದರಲ್ಲೇ ವಾಸಿಸುತ್ತಾ, ಅಲ್ಲಿನ ಸ್ಥಿತಿಗತಿಗಳನ್ನು ಅರಿಯುತ್ತಾ, ಅಲ್ಲಿಗೆ ಲೇಖಕರನ್ನೂ ಚಿಂತಕರನ್ನೂ ಕರೆಯುತ್ತಿದ್ದರು. ಅವರೊಮ್ಮೆ ಡಿ. ಆರ್. ನಾಗರಾಜ್, ಶೂದ್ರ ಶ್ರೀನಿವಾಸ್, ಸಿದ್ಧಲಿಂಗಯ್ಯ ಮೊದಲಾದವರನ್ನು ಕರೆದುಕೊಂಡು ತಮಿಳುನಾಡಿನ ಹಳ್ಳಿಯೊಂದಕ್ಕೆ ಹೋದರು; ಅವರೆಲ್ಲಾ ಆ ಹಳ್ಳಿಯಲ್ಲೇ ಇದ್ದು ಅಲ್ಲಿನ ಸ್ಥಿತಿಗತಿಗಳನ್ನು ಹತ್ತಿರದಿಂದ ಅಧ್ಯಯನ ಮಾಡಬೇಕಾಗಿತ್ತು. ಈ ಕ್ಯಾಂಪಿಗೆ ಒಂದು ದಿನ ತಮಿಳುನಾಡಿನ ದಲಿತ ಸಮುದಾಯದ ಜನ ಬಂದು ತಮ್ಮ ದಾರುಣ ಸ್ಥಿತಿಗತಿಗಳನ್ನೂ, ತಮ್ಮ ಮೇಲೆ ಮೇಲುಜಾತಿಗಳು ನಡೆಸುತ್ತಿದ್ದ ಹಲ್ಲೆಗಳನ್ನೂ ಕುರಿತು ಹೇಳಿಕೊಳ್ಳಲಾರಂಭಿಸಿದರು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಸಿದ್ಧಲಿಂಗಯ್ಯನವರಿಗೆ ತಮ್ಮ ಸಮುದಾಯದ ಜನರ ಮೇಲೆ ನಡೆಯುತ್ತಿದ್ದ ಹಲ್ಲೆ ಕುರಿತು ಒಳಗಿನಿಂದ ಒದ್ದುಕೊಂಡು ಬರುತ್ತಿದ್ದ ಸಿಟ್ಟು; ಆ ಹಲ್ಲೆಗೆ ಪ್ರತಿಯಾಗಿ ಏನೂ ಮಾಡಲಾಗದ ಅಸಹಾಯಕತೆ- ಎರಡೂ ಸೇರಿ ‘ಇಕ್ರಲಾ ವದೀರ್ಲಾ…’ ಸ್ಫೋಟ ಹುಟ್ಟಿತು. ಕನ್ನಡ ಕಾವ್ಯಕ್ಕೆ ‘ಅಕಾವ್ಯ’ ಭಾಷೆಯನ್ನು ಪರಿಚಯಿಸಿದ ಖ್ಯಾತಿ ಪಡೆದ ಈ ಪದ್ಯದ ಅರ್ಥಗಳು, ಸಂದೇಶಗಳು ತಲೆಮಾರಿನಿಂದ ತಲೆಮಾರುಗಳಿಗೆ ಹಬ್ಬುತ್ತಲೇ ಇವೆ. ನೂರಾರು ಕವಿಗಳಿಂದ ಹೊಸ ಕವಿತೆಗಳನ್ನು ಬರೆಸಿವೆ, ಬರೆಸುತ್ತಲೇ ಇವೆ. 

1974ರಿಂದಾಚೆಗೆ ದಲಿತ ಚಳುವಳಿಯ ಸಭೆಗಳಲ್ಲಿ ಸಿದ್ಧಲಿಂಗಯ್ಯನವರು ಸ್ಟಾರ್ ಭಾಷಣಕಾರರಾದರು. ಸಿಟ್ಟಿನ ನೇರ, ಪುಟ್ಟ ವಾಕ್ಯಗಳು, ಸಂದರ್ಭಕ್ಕಾಗಿ ಸಜ್ಜುಗೊಂಡ ಪ್ರಸಂಗಗಳು, ಅನಿರೀಕ್ಷಿತ ಪಂಚ್ ಲೈನ್‌ಗಳು, ಮೆಲ್ಲಗೆ ಹೊರಬರುವ ಕಿಲಾಡಿ ಹಾಸ್ಯ, ತಿವಿಯುವ ವ್ಯಂಗ್ಯ… ಎಲ್ಲವೂ ಸೇರಿದ ಅವರ ನೇರ, ಜೀವಂತ ಭಾಷಣಗಳು ಚಳುವಳಿಗೆ ಹೊಸ ಹೊಸ ಹುಡುಗರನ್ನು ಆಕರ್ಷಿಸಿದವು. ದಲಿತ ಚಳುವಳಿಯಲ್ಲಿ ಮಾತ್ರವಲ್ಲದೆ, ಕಮ್ಯುನಿಸ್ಟ್ ಚಳುವಳಿ, ಬಂಡಾಯ ಸಂಘಟನೆ, ವೈಚಾರಿಕ ಸಭೆಗಳು…ಹೀಗೆ ಎಲ್ಲ ಕಡೆ ಈ ಹುಡುಗರು ಕಾಣತೊಡಗಿದರು. ಸಿದ್ಧಲಿಂಗಯ್ಯನವರ ಪದ್ಯಗಳು ಯಾರ ವಿವರಣೆಯನ್ನೂ ಬೇಡದೆ ನೇರವಾಗಿ ಹಸಿವಿನಿಂದ ಸತ್ತೋರ ಸಮುದಾಯಗಳನ್ನು, ಸೈಜುಗಲ್ಲು ಹೊತ್ತೋರ ಮಕ್ಕಳನ್ನು, ‘ನನ್ನ ಜನಗಳ’ನ್ನು ತಲುಪುತ್ತಿದ್ದವು. ಹೊಸ ತಲೆಮಾರಿನ ವೈಚಾರಿಕ ಹುಡುಗ, ಹುಡುಗಿಯರು ಕಾಲೇಜುಗಳಲ್ಲಿ, ಕ್ಯಾಂಪಸ್ಸುಗಳಲ್ಲಿ ತಲೆಯೆತ್ತಿ ಓಡಾಡಲು ದಲಿತ ಚಳುವಳಿಯೂ ಕಾರಣವಾಗಿತ್ತು; ಸಿದ್ಧಲಿಂಗಯ್ಯನವರ ಹಾಡುಗಳನ್ನು ಟ್ಯೂನ್ ಮಾಡಿದ ಜನ್ನಿ, ಪಿಚ್ಚಳ್ಳಿ ಶ್ರೀನಿವಾಸರ ಹಾದಿಯಲ್ಲಿ ಹೋರಾಟದ ಹಾಡುಗಳನ್ನು ಹಾಡುವ ಸಾವಿರಾರು ಗಾಯಕರು ಕರ್ನಾಟಕದ ತುಂಬ ಹುಟ್ಟಿಕೊಂಡರು. ಆ ಗಾಯಕ ಪಡೆ ಇವತ್ತಿಗೂ ಬೆಳೆಯುತ್ತಲೇ ಇದೆ. 

‘ಸಮುದಾಯ’ ಜಾಥಾದಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಕರ್ನಾಟಕದ ಎಲ್ಲೆಡೆ ತಲುಪಿದವು. ‘ನನ್ನ ಜನದ ಜೊತೆ ನಾನಾಡುವ ಮಾತು…ನಾನು ಕೊಡುವ ಕವನ’ ಎಂಬ ಕಾವ್ಯತತ್ವವನ್ನು ರೂಪಿಸಿಕೊಂಡು ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ, ದಲಿತರ ಸ್ಥಿತಿಗತಿಗಳನ್ನು ನೇರವಾಗಿ ತಲುಪಿಸುವ ‘ಪಂಚಮ’ ‘ನೆಲಸಮ’ ಬೀದಿ ನಾಟಕಗಳನ್ನು ಬರೆದರು; ಇವು ಸಾವಿರಾರು ಪ್ರದರ್ಶನಗಳನ್ನು ಕಂಡವು. ಬ್ರೆಕ್ಟ್ ನಾಟಕಗಳಿಂದ ಶುರು ಮಾಡಿ ರಂಗಭೂಮಿಗೂ ವೈಚಾರಿಕ ಹಾಡುಗಳನ್ನು ಬರೆದ ಸಿದ್ಧಲಿಂಗಯ್ಯ ಮುಂದೆ ಪೂರ್ಣ ಪ್ರಮಾಣದ ‘ಏಕಲವ್ಯ’ ನಾಟಕ ಬರೆದರು. ಸಿದ್ಧಲಿಂಗಯ್ಯನವರ ಏಕಲವ್ಯ ದ್ರೋಣಾರ್ಜುನರ ಸಂಚಿಗೆ ಬಲಿಯಾಗಿ ಬಲಗೈ ಹೆಬ್ಬೆರಳನ್ನು ಕೊಟ್ಟರೂ, ಎಡಗೈಯಲ್ಲಿ ಬಿಲ್ವಿದ್ಯೆ ಕಲಿಯಲು ಶುರು ಮಾಡುತ್ತಾನೆ. ಆ ಮೂಲಕ ಹೊಸ ಏಕಲವ್ಯ ಬುಡಕಟ್ಟು ಸಮುದಾಯಗಳ, ಹಾಗೂ ಶಿಕ್ಷಣದಿಂದ ವಂಚಿತರಾದ ಎಲ್ಲ ಸಮುದಾಯಗಳ ಹೊಸ ಕಾಲದ ಛಲವನ್ನು ಸಾರುತ್ತಾನೆ. ಸಿದ್ಧಲಿಂಗಯ್ಯನವರ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಸಾಲು ಮೊದಲು ಘೋಷಣೆಯಂತೆ ಕಂಡಿದ್ದರೂ ನಂತರ ಅದು ಎಲ್ಲೆಡೆ ಪ್ರತಿಧ್ವನಿಸಿ ದಲಿತ ಸಮುದಾಯದ ಖಡಕ್ಕಾದ ರಾಜಕೀಯ ಪ್ರತಿಪಾದನೆಯೇ ಆಯಿತು. ಕವಿತೆಯೊಂದರ ಸಾಲು ರಾಜಕಾರಣದಲ್ಲಿ, ಅಸಮಾನತೆಯ ಸಮಾಜದಲ್ಲಿ ಸಾಕಾರವಾದ ಕಾಲ ಅದು. ಅಂದರೆ ನಾಡಿನ ಗೋಡೆಗಳ ಮೇಲಿನ ಬರಹ ನಾಡಿನಲ್ಲಿ ಜಾರಿಯಾಗತೊಡಗಿತ್ತು:  

ಸಿದ್ಧಲಿಂಗಯ್ಯನವರ ಕಾವ್ಯ ದಲಿತ ಕಾವ್ಯಮಾರ್ಗವನ್ನು ಉದ್ಘಾಟಿಸಿದಂತೆ ಬಂಡಾಯ ಸಾಹಿತ್ಯಕ್ಕೂ ಒಂದು ಪ್ರೇರಣೆಯಾಯಿತು. ಬಂಡಾಯದ ‘ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಧ್ಯೇಯವಾಕ್ಯಕ್ಕೆ ಮಾರ್ಕ್ಸ್‌ವಾದಿ ಸಾಹಿತ್ಯ ತತ್ವದ ಹಿನ್ನೆಲೆಯೂ ಇತ್ತು; ಈ ಘೋಷಣೆಗೆ ಸಿದ್ಧ ಪುರಾವೆಯಾಗಿ ಸಿದ್ಧಲಿಂಗಯ್ಯನವರ ಕಾವ್ಯವೂ ಜೊತೆಗಿತ್ತು. ದಲಿತ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯಗಳೆರಡೂ ಕರ್ನಾಟಕದ ದಲಿತ ,ಶೂದ್ರ, ಮುಸ್ಲಿಂ, ಮಹಿಳಾ ಲೋಕಗಳ ಸಿಟ್ಟಿನ, ಕಾಳಜಿಯ ತರುಣ, ತರುಣಿಯರ ಕ್ರಿಯಾಶೀಲತೆ ಉಕ್ಕಿ ಹೊರಚೆಲ್ಲುವಂತೆ ಮಾಡಿದವು. ಪು.ತಿ.ನ.ರಂಥ ನವೋದಯ ಕವಿಯೂ ಸಿದ್ಧಲಿಂಗಯ್ಯನವರ ಧಾಟಿಯಲ್ಲಿ ‘ಹೆಸರೆ ಇಲ್ಲದವರು’ ಎಂಬ ಪದ್ಯ ಬರೆದರು. ಅಡಿಗರೂ, ಕಂಬಾರರೂ ಅಂಬೇಡ್ಕರ್ ಕುರಿತ ಕವಿತೆ ಬರೆಯುವ ಕಾಲವೂ ಬಂತು. ಸಿದ್ಧಲಿಂಗಯ್ಯನವರು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕವಿಯಾಗಿ ರೂಪುಗೊಂಡಿದ್ದು ಹೀಗೆ. ಅಸಲಿ ಕವಿಯ ಹೊಸ ಭಾಷೆ ಸ್ವೀಕಾರವಾಗಲು ಹೀಗೆ ಕಾಲದ ಸಿದ್ಧತೆಯೂ ಮುಖ್ಯ. ಇಂಥ ಮುಕ್ತ ಸ್ವೀಕಾರದ ಕಾಲದಲ್ಲಿ ಬರೆದ ಸಿದ್ಧಲಿಂಗಯ್ಯ ಎಲ್ಲ ಬಗೆಯ ಬಿಡುಗಡೆಯ ಚಳುವಳಿಗಳ ನಾಯಕರಿಗೆ, ಕಾರ್ಯಕರ್ತರಿಗೆ, ಸಂಘಟನೆಗಳಿಗೆ ಪ್ರಿಯರಾಗುತ್ತಾ ಹೋದರು.  

ದೇಶದ ರಾಜಕೀಯದಲ್ಲಿ ದಲಿತ ಪ್ರವಾಹ ಉಕ್ಕತೊಡಗಿದ್ದ ಈ ಘಟ್ಟದಲ್ಲಿ ಸಿದ್ಧಲಿಂಗಯ್ಯನವರ ಜನಪ್ರಿಯತೆ, ಪ್ರಭಾವ ಹಾಗೂ ಅವರಿಗಿದ್ದ ಅನುಯಾಯಿಗಳ ಲೋಕವನ್ನು ಗಮನಿಸುತ್ತಿದ್ದ ಕರ್ನಾಟಕದ ಅಧಿಕಾರ ರಾಜಕಾರಣ ಸಿದ್ಧಲಿಂಗಯ್ಯನವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಲೇ ಇತ್ತು. ದಲಿತ ವೋಟುಗಳ ಮೇಲೂ ಒಂದು ಕಣ್ಣಿಟ್ಟ ರಾಮಕೃಷ್ಣ ಹೆಗಡೆ ಸರ್ಕಾರ ಸಿದ್ಧಲಿಂಗಯ್ಯನವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಿತು. ಈ ವಿದ್ಯಮಾನ ಕರ್ನಾಟಕದ ಸೈದ್ಧಾಂತಿಕ ವಲಯದಲ್ಲಿ ದೊಡ್ಡ ಚರ್ಚೆಯ ವಸ್ತುವೇ ಆಯಿತು. ಇದು ಕ್ರಾಂತಿಕಾರಿ ಕವಿಯೊಬ್ಬ ಪ್ರಭುತ್ವದೊಂದಿಗೆ ರಾಜಿಯಾದ ಬೆಳವಣಿಗೆಯಂತೆ ಕಂಡದ್ದು ಸಹಜವಾಗಿತ್ತು. ಆ ಸಂದಿಗ್ಧ ಪರಿಸ್ಥಿತಿಯನ್ನು ಸಿದ್ಧಲಿಂಗಯ್ಯ ಸಹಜ ಜಾಣ್ಮೆಯಿಂದಲೂ, ತಮ್ಮ ಮೂಲ ಕಾಳಜಿಗಳನ್ನು ಸದನದ ಚರ್ಚೆಗಳಲ್ಲಿ ತರುವುದರ ಮೂಲಕವೂ ನಿಭಾಯಿಸಿದ್ದು ಕೂಡ ಅಷ್ಟೇ ಮುಖ್ಯವಾಗಿದೆ. ಕೊರಗ ಸಮುದಾಯದ ಮೇಲೆ ಹೇರಲಾಗಿದ್ದ ಅಜಲು ಪದ್ಧತಿ, ಕಣಿಯ ಜನಾಂಗದ ಸಂಕಷ್ಟಗಳು, ದಲಿತರ ಮೇಲಿನ ಹಲ್ಲೆಗಳು, ಅಗ್ನಿಶಾಮಕ ದಳದ ದಯನೀಯ ಸ್ಥಿತಿ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಸ್ಪೃಶ್ಯತೆಯ ವಿವಿಧ ರೂಪಗಳು... ಇಂಥ ಸಮಸ್ಯೆಗಳನ್ನು ಬಡವರ ವಕೀಲನಂತೆ ಸದನದಲ್ಲಿ ಮಂಡಿಸಿದ ಅವರು ಸರ್ಕಾರಗಳು ಪರಿಹಾರ ರೂಪಿಸುವಂತೆಯೂ ಮಾಡಿದರು.    

‘ಕ್ರಾಂತಿಯ ಬಿರುಗಾಳಿ’ ಎಬ್ಬಿಸಿದ ಕವಿ ಮುಂದೆ ಜನಪ್ರಿಯತೆಯ ಸುಳಿಗಾಳಿಯಲ್ಲಿ ಸಿಕ್ಕಿಕೊಂಡ ಕಾಲವೂ ಬಂತು. ಸಿದ್ಧಲಿಂಗಯ್ಯನವರು ಹೆಚ್ಚು ಹೆಚ್ಚು ಸಾರ್ವಜನಿಕ ವ್ಯಕ್ತಿಯಾಗುತ್ತಾ, ಅವರ ಕಾವ್ಯ ಹೊಸ ಧಾಟಿಯ ಹಾಡುಗಳತ್ತ ತಿರುಗುತ್ತಿದ್ದ ಕಾಲದಲ್ಲಿ ಸಿನಿಮಾಲೋಕವೂ ಅವರನ್ನು ಕರೆಯಿತು. ಪುಟ್ಟಣ್ಣ ಕಣಗಾಲರ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಕ್ಕೆ ಅವರು ಬರೆದ ಹಾಡುಗಳಲ್ಲಿ, ‘ಗೆಳತಿ ಓ ಗೆಳತಿ, ಅಪ್ಪಿಕೋ ಎನ್ನ ಅಪ್ಪಿಕೋ, ಬಾಳೆಲ್ಲ ಹೀಗೆ ತಬ್ಬಿಕೋ’ ಹಾಡು ಅತ್ಯಂತ ಜನಪ್ರಿಯವಾಯಿತು; ಈ ಹಾಡಿನಿಂದಾಗಿ ತಮ್ಮ ಹಳೆಯ ಓದುಗರ ಕಟು ಟೀಕೆಯನ್ನೂ ಕವಿ ಎದುರಿಸಬೇಕಾಯಿತು!  ಕಾಲದ ಓಟದಲ್ಲಿ ಕವಿಯ ಕಾವ್ಯತತ್ವ ಬದಲಾಗಿತ್ತು; ಕವಿತೆಯ ಭಾಷೆಯೂ, ಪ್ರತಿಮೆಗಳೂ ಬದಲಾಗಿದ್ದವು. ಅವರ ಹಿಂದಿನ ಕವಿತೆಯಲ್ಲಿ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’ ಎಂಬ ಕ್ರಾಂತಿಚಿತ್ರವಿತ್ತು; ಮುಂದಿನ ಘಟ್ಟದ ಕವಿತೆಯಲ್ಲಿ, ‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಎಂಬ ರಮ್ಯ ನೇವರಿಕೆಯಿತ್ತು. ‘ಕ್ರಾಂತಿಯ ಬಿರುಗಾಳಿಯಲ್ಲಿ’ ಹುಟ್ಟಿದ್ದ ಅವರ ವ್ಯಗ್ರ ಭಾವಗೀತೆ ಈಗ ಸರಳ ಕೋಮಲ ಭಾವಗೀತೆಯಾಗಿತ್ತು. ತಮ್ಮ ಸಂಶೋಧಕ ಘಟ್ಟದಲ್ಲಿ ಅವರು ಗ್ರಾಮ ದೇವತೆಗಳನ್ನು ಕುರಿತು ಬರೆದ ‘ಅವತಾರಗಳು’ ಕೃತಿಯಲ್ಲಿ ಕಂಡುಕೊಂಡ ತಮ್ಮ ವ್ಯಕ್ತಿತ್ವದ ಕಾಮಿಕ್ ಆಯಾಮವನ್ನು ಮುಂದೆ ಅವರು ‘ಟ್ರ್ಯಾಜಿಕಾಮಿಕ್’ ಗದ್ಯದ ಮೂಲಕ ವಿಸ್ತರಿಸಿಕೊಂಡರು. ಅವರ ಆತ್ಮಕತೆ ‘ಊರು ಕೇರಿ’ ಮತ್ತೆ ಅವರನ್ನು ಕನ್ನಡ ಸಾಹಿತ್ಯ ಸಂಸ್ಕೃತಿಯ ಕೇಂದ್ರಕ್ಕೆ ತಂದು ನಿಲ್ಲಿಸಿತು.    

ಸಿದ್ಧಲಿಂಗಯ್ಯನವರು ನೋಡನೋಡುತ್ತಿದ್ದಂತೆಯೇ, ೨೦೨೦ರ ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳಿಂದ ಊರಿಗೆ ಮರಳುತ್ತಿದ್ದ ನೊಂದ ಕಾರ್ಮಿಕರ ವಿಡಿಯೋ ತುಣುಕುಗಳ ಜೊತೆಗೆ ‘ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು’ ಸಾಲುಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರತೊಡಗಿದವು; ತಮ್ಮ ಕಾವ್ಯದ ಕಾಳಜಿಗಳು ಮುಂದೆಯೂ ತಮ್ಮ ಕೈ ಹಿಡಿಯಬಹುದೆಂಬ ಆಶಾಕಿರಣ ಆಗ ಅವರಲ್ಲಿ ಕಾಣಿಸಿಕೊಂಡಂತಿತ್ತು. ಅವರ ‘ಸಾವಿರಾರು ನದಿಗಳು’ ‘ಕಪ್ಪು ಕಾಡಿನ ಹಾಡು’ ‘ಕುದಿವ ನೀಲಿಯ ಕಡಲು’ ‘ಊರು ಸಾಗರವಾಗಿ’ ಸಂಕಲನಗಳಲ್ಲಿ ನದಿ, ಕಡಲು, ಸಾಗರ ಹಾಗೂ ಕಾಡಿನ ಪ್ರತಿಮೆಗಳು ಅವರ ಕಾವ್ಯ ಕೇಂದ್ರದ ನಿರಂತರತೆಯನ್ನು ಸೂಚಿಸುತ್ತವೆ; ಅವರ ಕಾವ್ಯದ ದುರ್ಬಲ ಭಾಗಗಳ ಜೊತೆಗೇ ಕಾವ್ಯದ ಮೂಲ ಕಾಳಜಿ ಹಾಗೂ ಕಾವ್ಯತತ್ವ ಕೊನೆಯವರೆಗೂ ಹೆಚ್ಚುಕಡಿಮೆ ಒಂದೇ ಆಗಿದೆ. ಆದರೆ ಅವರ ‘ಊರು ಸಾಗರವಾಗಿ’ ಎಂಬ ಕೊನೆಯ ಸಂಕಲನದ ಕೊನೆಯ ಪದ್ಯ ‘ಕೊಳಲು ಮತ್ತು ಖಡ್ಗ’ದಲ್ಲಿ ಖಡ್ಗದಿಂದ ಕೊಳಲಿಗೆ ಹೊರಳುವ ಸರಳ ಕಾತರವಿತ್ತು. ‘ಖಡ್ಗವಾಗಲಿ ಕಾವ್ಯ’ ಎಂಬ ಆಶಯಕ್ಕೆ ಸ್ಫೂರ್ತಿಯಾಗಿದ್ದ ಕವಿಯ ಕಾವ್ಯತತ್ವ ಬೇರೊಂದು ದಿಕ್ಕಿಗೆ ಹೊರಳಲು ಬಯಸಿತ್ತೆ? ನಿರ್ದಯ ಕಾಲ ಅವರ ಕಾವ್ಯದ ಈ ದಿಕ್ಕಿಗೆ ಕಾಲಾವಕಾಶ ಕೊಡಲು ಸಿದ್ಧವಿರಲಿಲ್ಲ…

ನಾನು ಸಿದ್ಧಲಿಂಗಯ್ಯನವರ ಮನೆಗೆ ಹೋದಾಗಲೆಲ್ಲ ಅವರ ಮನೆಯ ಪಡಸಾಲೆಯ ಗೋಡೆಯ ಮೇಲೆ, ಗೋಡೆಯ ಗೂಡುಗಳಲ್ಲಿ ಥರಂಥರದ ಬುದ್ಧ ಚಿತ್ರಗಳು, ಬುದ್ಧ ಮೂರ್ತಿಗಳಿದ್ದುದು ನೆನಪಾಗುತ್ತದೆ. ಅಷ್ಟೊಂದು ಬುದ್ಧರುಗಳ ಹಿನ್ನೆಲೆಯಲ್ಲಿ ವಿರಾಮವಾಗಿ, ಹಲ ಬಗೆಯ ಕಹಿ ಮರೆತು, ತಮ್ಮ ಸಹಜ ತುಂಟತನವನ್ನು ಅದುಮಿಡಲಾಗದೆ ಕೂತ ಕವಿಯ ಚಿತ್ರ ನನ್ನೆದುರು ಸುಳಿಯುತ್ತದೆ. ದುಡಿಯವ ಜನರ ಸಿಟ್ಟನ್ನು, ಶಕ್ತಿಯನ್ನು ಒಂದೇ ಗಳಿಗೆಯಲ್ಲಿ   ತೋರಿಸಿಕೊಟ್ಟ ಅವರ ‘ನೆನ್ನೆ ದಿನ ನನ್ನ ಜನ…’ ಹಾಡು ನನ್ನ ವಿದ್ಯಾರ್ಥಿ ದೆಸೆಯಲ್ಲಿ ಹುಟ್ಟಿಸಿದ ಮಿಂಚು ಮತ್ತೆ ಸುಳಿಯುತ್ತದೆ. ಆ ಕಾಲದಲ್ಲಿ ನಟರಾಜ ಹೊನ್ನವಳ್ಳಿ, ಈ ಅಂಕಣಕಾರ, ಧಮೇಂದ್ರ ಅರಸು, ಅಚ್ಯುತಕುಮಾರ್‍ ಮಾಡಿದ, ಕುಂವೀರಭದ್ರಪ್ಪನವರ ಕತೆಗಳನ್ನಾಧರಿಸಿದ, ‘ಕತ್ತಲನು ತ್ರಿಶೂಲ ಹಿಡಿದ ಕತೆ’ ನಾಟಕದಲ್ಲಿ ‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ’ ಹಾಗೂ ‘ಕ್ವರುಗ್ತಿನಿ, ಕ್ವನೆಗೊಂದ್ಸಲ ಕೂಗ್ತಿನಿ, ಬಡ್ಡೀ ದುಡ್ನೋನ್ ಬಂಗ್ಲೆ ಕ್ಯಳ್ಗೆ ತಳಾದೀಗ್ ಸಿಕ್ಕಂಡಿರೋ ಮೂಳೆ… ನಾ ಕೂಗ್ತಿನಿ, ಸಿಡಿತಿನಿ…’ ಸಾಲುಗಳನ್ನು ಹಾಡುತ್ತಿದ್ದೆವು; ಹಾಗೆ ಹಾಡ ಹಾಡುತ್ತಾ, ಈ ಸಾಲುಗಳು ನಮ್ಮೆಲ್ಲರ ಪ್ರಜ್ಞೆಯನ್ನೇ ಬದಲಿಸಿದ ರೀತಿಗೆ ಕೃತಜ್ಞತೆ ಹುಟ್ಟುತ್ತದೆ. ಸಿದ್ದಲಿಂಗಯ್ಯನವರ ನಿರ್ಗಮನದಿಂದಾಗಿ ಕರ್ನಾಟಕ ಸಂಸ್ಕೃತಿಯ ಜಾತ್ಯತೀತ ಯುಗದ ಒಂದು ಮಹಾಸ್ತಂಭವೇ ಸರಿದು ಹೋಯಿತು ಎಂಬ ದುಗುಡ ಮುತ್ತುತ್ತದೆ…                    
          

blog
07 Jun 2026 ಹೋಮ ಹವನದ ಹೊಗೆ ನಡುವೆ

ನಾವೆಲ್ಲ ಹೈಸ್ಕೂಲ್ ಬಿಟ್ಟು ಕಾಲೇಜಿಗೆ ಹೊರಡುತ್ತಿದ್ದ ಕಾಲದಲ್ಲಿ ಅಬ್ರಹಾಂ ಕೊವೂರ್ ಎಂಬ ಹೆಸರು ನಮ್ಮ ಕಿವಿಯ ಮೇಲೆ ಬೀಳತೊಡಗಿತ್ತು. ಕೊಂಚ ಕಣ್ಣು ಬಿಟ್ಟ ಮೇಲೆ ಪ್ರೊಫೆಸರ್ ಅಬ್ರಹಾಂ ಕೊವೂರ್ ಶ್ರೀಲಂಕಾದ ಖ್ಯಾತ ವಿಚಾರವಾದಿ ಎಂಬುದು ತಿಳಿಯಿತು. ಅವರನ್ನು ಸಮಾಜವಾದಿ ಯುವಜನಸಭಾದ ನಾಯಕ ಎಂ.ಡಿ. ನಂಜುಡಸ್ವಾಮಿ ಕರ್ನಾಟಕಕ್ಕೂ ಆಹ್ವಾನಿಸಿದರು. ವಿಚಾರವಾದ, ವೈಚಾರಿಕತೆಗಳನ್ನು ಹಬ್ಬಿಸುತ್ತಾ, ಪವಾಡ ಪುರುಷರ ಮೋಸಗಳನ್ನು ಬಯಲು ಮಾಡುತ್ತಿದ್ದ ಕೋವೂರರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಎಂ.ಡಿ.ಎನ್. ಹೊಸ ತಲೆಮಾರಿನ ಹುಡುಗರನ್ನು ವಿಚಾರವಂತರನ್ನಾಗಿ ಮಾಡುತ್ತಿದ್ದರು. ಅವುಗಳಲ್ಲಿ ಭಾಗಿಯಾಗುತ್ತಿದ್ದ ಕವಿ ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಥರದವರು ಈ ಕುರಿತು ಮುಂದೆ ನಮ್ಮಂಥವರಿಗೆ ಹೇಳುತ್ತಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಎಚ್. ನರಸಿಂಹಯ್ಯನವರು ಕರ್ನಾಟಕದಲ್ಲಿ ಅಬ್ರಹಾಂ ಕೊವೂರರ ಭಾಷಣಗಳನ್ನು, ಪವಾಡ ಬಯಲು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ತೇಜಸ್ವಿ, ಲಂಕೇಶ್ ಥರದವರ ವೈಚಾರಿಕ ಪ್ರಜ್ಞೆ ಕೂಡ ಈ ಕಾಲದ ಈ ಚಟುವಟಿಕೆಗಳಲ್ಲಿ ರೂಪುಗೊಂಡಿತು. ಈ ವೈಚಾರಿಕ ಪರಂಪರೆಯನ್ನು ಬೆಳೆಸಿದ ಕೆ. ರಾಮದಾಸ್, ಬರಗೂರು ರಾಮಚಂದ್ರಪ್ಪ, ಶ್ರೀಕಂಠ ಕೂಡಿಗೆ, ಎಸ್. ಎಸ್. ಹಿರೇಮಠ್ ಥರದ ಸಾವಿರಾರು ಮೇಷ್ಟರು ಕರ್ನಾಟಕದಲ್ಲಿದ್ದರು; ಈಗಲೂ ಅಂಥವರು ಇದ್ದಾರೆ. ಇಂಥ ನೂರಾರು ಹೆಸರುಗಳನ್ನು ನೀವು ನೆನಪಿಸಿಕೊಳ್ಳಬಹುದು. ದೂರದ ಸಣ್ಣ ಪುಟ್ಟ ಊರುಗಳಲ್ಲಿದ್ದ ನಮ್ಮಂಥ ಸಾವಿರಾರು ಹುಡುಗರು ಇದೆಲ್ಲದರಿಂದ ಸ್ಫೂರ್ತಿಗೊಂಡು ತಕ್ಕ ಮಟ್ಟಿನ ವಿಚಾರವಂತರೂ, ಲೇಖಕರೂ ಆದದ್ದು ಕೂಡ ಕರ್ನಾಟಕದಲ್ಲಿ ನಡೆಯುತ್ತಾ ಬಂದಿದೆ.
ಅಬ್ರಹಾಂ ಕೊವೂರ್ ಐವತ್ತು ವರ್ಷಗಳ ಕೆಳಗೆ ಜ್ಯೋತಿಷಿಗಳಿಗೆ ಹಾಕಿದ ಒಂದು ಸವಾಲು ಆಗ ಎಲ್ಲೆಡೆ ವೈಚಾರಿಕ ಕಂಪನವನ್ನೆಬ್ಬಿಸಿತು: 

ನಾವು ಒದಗಿಸುವ ಜಾತಕ ಅಥವಾ ಹಸ್ತರೇಖೆಯ ಮುದ್ರಿತ ಪ್ರತಿಯ ಆಧಾರದ ಮೇಲೆ ಜ್ಯೋತಿಷಿಗಳು ಎರಡು ಪ್ರಶ್ನೆಗಳಿಗೆ ಖಚಿತವಾದ ಉತ್ತರ ನೀಡಬೇಕು: 

೧.ಈ ವ್ಯಕ್ತಿ ಗಂಡೋ, ಹೆಣ್ಣೋ?
೨.ಈ ವ್ಯಕ್ತಿ ಬದುಕಿದ್ದಾರೋ? ತೀರಿಕೊಂಡಿದ್ದಾರೋ? 

ಈ ಅಂಶಗಳನ್ನು ನಿರ್ಣಯಿಸಿ ಹೇಳಲು ಜ್ಯೋತಿಷಿಗಳಿಗೆ ಹತ್ತು ಜಾತಕಗಳು ಹಾಗೂ ಹತ್ತು ಹಸ್ತರೇಖೆಗಳ ಮುದ್ರಿತ ಪ್ರತಿಗಳನ್ನು ಒಸಗಿಸಲಾಗುವುದು: ಇವುಗಳ ಜೊತೆಗೆ ಕೆಳಕಂಡ ವಿವರಗಳ ಆಧಾರಗಳನ್ನು ಕೂಡ ಒದಗಿಸಲಾಗುವುದು: 

೧. ಮಗು ಹುಟ್ಟಿದ ಖಚಿತ ನಿಮಿಷ.
೨.ಮಗು ಹುಟ್ಟಿದ ಸ್ಥಳ ಹಾಗೂ ಹುಟ್ಟಿದ ಸರಿಯಾದ ದಿಕ್ಕುಗಳ ವಿವರಗಳನ್ನು ಒದಗಿಸಲಾಗುವುದು.    

ಈ ಸವಾಲನ್ನು ಸ್ವೀಕರಿಸಿ ಸರಿಯಾದ ಉತ್ತರ ಹೇಳಿದವರಿಗೆ ೧೯೭೦ರ ದಶಕದಲ್ಲಿ ಕೊವೂರ್ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು. ಅಂದಿನ ಒಂದು ಲಕ್ಷ ರೂಪಾಯಿ ಇಂದಿನ ಎಷ್ಟು ಲಕ್ಷ ರೂಪಾಯಿಗೆ ಸಮ ಎಂಬುದನ್ನು ಅರ್ಥಶಾಸ್ತ್ರಜ್ಞರು ಲೆಕ್ಕ ಹಾಕಿ ಹೇಳಬೇಕು. ಕೊವೂರ್ ಈ ಬಹುಮಾನ ಘೋಷಿಸಿದಾಗ ಜ್ಯೋತಿಷಿಗಳಿಗೆ ಕೆಲವು ರಿಯಾಯಿತಿಗಳನ್ನೂ ಕೊಟ್ಟರು: ಈ ಬಹುಮಾನ ಪಡೆಯಲು ಜ್ಯೋತಿಷಿಗಳು ಸದರಿ ವ್ಯಕ್ತಿಗಳ ಭವಿಷ್ಯ ಕುರಿತು ಹೇಳಬೇಕಾಗಿಲ್ಲ; ಇವರಿಗೆ ಸಿಗಬಹುದಾದ ಪದವಿ, ಹುದ್ದೆ, ಮುಂದಿನ ಘಟನಾವಳಿಗಳ ಬಗ್ಗೆ ಏನೂ ಹೇಳಬೇಕಾಗಿಲ್ಲ. ಈ ಹತ್ತೂ ವ್ಯಕ್ತಿಗಳ ಬಗ್ಗೆ ಮೇಲೆ ಕೇಳಿದ ಎರಡು ವಿಷಯಗಳಿಗೆ ಉತ್ತರ ಕೊಟ್ಟರೆ ಸಾಕು. 

ಕೊವೂರ್ ೧೯೭೮ರಲ್ಲಿ ತೀರಿಕೊಂಡರು. ಅವರ ಜೀವಿತಕಾಲದಲ್ಲಿ ಹಾಗೂ ಅನಂತರವೂ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಇಂಡಿಯನ್ ರ‍್ಯಾಷನಲಿಸ್ಟ್ ಅಸೋಸಿಯೇಶನ್ ಈ ಸವಾಲನ್ನು, ಬಹುಮಾನವನ್ನು ಇವತ್ತಿಗೂ ಹಾಗೇ ಮುಂದುವರಿಸಿದೆ. ಇನ್ನೂ ಯಾರೂ ಬಹುಮಾನ ಪಡೆದಿಲ್ಲ. 

ಇದೆಲ್ಲವನ್ನೂ ಕಂಡುಂಡ ಕರ್ನಾಟಕದ ಈ ವೈಚಾರಿಕ ಯಗದಲ್ಲಿ ಮೂಡಿದ ಬಸವಲಿಂಗಪ್ಪನವರು ದಿಟ್ಟ ವಿಚಾರವಾದಿ ರಾಜಕಾರಣಿಯಾಗಿ ಆ ಮಾರ್ಗವನ್ನು ಸಮಾಜದಲ್ಲೂ ಹಬ್ಬಿಸಿದರು. ಕರ್ನಾಟಕದ ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡ, ಕೃಷ್ಣನ್, ಪಂಪಾಪತಿ, ಕೆ.ಎಚ್. ರಂಗನಾಥ್, ಎಂ.ಡಿ. ನಂಜುಂಡಸ್ವಾಮಿ ಥರದವರು; ವಿಧಾನ ಪರಿಷತ್ತಿನಲ್ಲಿ ಎಚ್. ನರಸಿಂಹಯ್ಯ, ಸಿದ್ಧಲಿಂಗಯ್ಯ, ಎಲ್ ಹನುಮಂತಯ್ಯ ಮೊದಲಾದ ಹಲವರು ಪ್ರಖರ ವೈಚಾರಿಕ ವಿಷಯಗಳನ್ನು ಮಂಡಿಸಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟ ಸಿದ್ಧರಾಮಯ್ಯನವರು ಕೂಡ ಬಹುತೇಕವಾಗಿ ಸಾರ್ವಜನಿಕ ಜೀವನದಲ್ಲಿ ವೈಚಾರಿಕ ಭಾಷೆಯನ್ನು ಬಳಸುತ್ತಲೇ ಬಂದಿದ್ದಾರೆ.     

ಇಂಥದೊಂದು ಕರ್ನಾಟಕ ಇರುವುದನ್ನೇ ಮರೆತಂತಿರುವ ಇಂದಿನ ನಾಯಕರಿಗೆ, ಸಾರ್ವಜನಿಕ ವ್ಯಕ್ತಿಗಳಿಗೆ ಇದನ್ನು ಮತ್ತೆ ಗಟ್ಟಿಯಾಗಿ ನೆನಪಿಸುವ ಕಾಲ ಈಗ ಇದ್ದಕ್ಕಿದ್ದಂತೆ ಬಂದಿದೆ: 
ಮೊನ್ನೆ ಕರ್ನಾಟಕದ ರಾಜಕಾರಣದಲ್ಲಿ ಕ್ಷಿಪ್ರ ಬದಲಾವಣೆಗಳು ನಡೆದ ದಿನ, ಹೊಸ ಮುಖ್ಯಮಂತ್ರಿಯ ಹೆಸರು ಪ್ರಕಟವಾಗುವ ಮುನ್ನ, ಬಂದ ವರದಿಗಳು ಹೀಗಿದ್ದವು: 

೧. ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಜಿ. ಪರಮೇಶ್ವರ್ ಹೋಮ-ಹವನ ಮುಗಿಸಿ ಮನೆಯಿಂದ ಹೊರ ಬಂದರು. 
೨. ಮುಖ್ಯಮಂತ್ರಿ ಪದವಿ ನಿಕ್ಕಿಯಾಗಿದ್ದ ಡಿ. ಕೆ. ಶಿವಕುಮಾರರ ದಿಕ್ಕು ದೆಸೆ ತಿರುಗುವ ಮೊದಲೇ ಅವರ ಪ್ರೈವೇಟ್ ರಾಜಗುರುಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಬಾಗಿಲಿನ ದಿಕ್ಕು, ಕುರ್ಚಿಯ ದಿಕ್ಕುಗಳನ್ನು ಕ್ಷಿಪ್ರವಾಗಿ ತಿರುಗಿಸುತ್ತಿದ್ದರು.

ಡಾ. ಪರಮೇಶ್ವರ್ ಕೃಷಿ ವಿಜ್ಞಾನದಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪಡೆದವರು. ಡಿ.ಕೆ. ಶಿವಕುಮಾರ್ ಪೊಲಿಟಿಕಲ್ ಸೈನ್ಸ್ ಎಂ.ಎ. ಪದವಿ ಪಡೆದವರು ಎಂಬುದು ನೆನಪಾಗುತ್ತದೆ. ಮೈ ತುಂಬ ನಿಂಬೆ ಹಣ್ಣು, ಮಣಿಕಟ್ಟಿನ ತುಂಬ ಬಣ್ಣದ ದಾರಗಳನ್ನು ಕಟ್ಟಿಕೊಂಡವರ ಕುಟುಂಬದ ಮೇಲೆರಗಿದ ಭೀಕರ ‘ದುರಿತಗಳ ಬಲ್ಲುಲಿ’ (ಇದು ಕವಿ ಜನ್ನನ ಬಣ್ಣನೆ) ಹೇಳಿದವರು ಯಾರೂ ಇಲ್ಲ ಎಂಬ ವಾಸ್ತವ ಸತ್ಯ ನಮ್ಮ ಕಣ್ಣ ಮುಂದೇ ಇದೆ. ‘ವಾಸ್ತವ ಸ್ಥಿತಿ’ ಮರೆತು ‘ವಾಸ್ತು ಸ್ಥಿತಿ’ಗೆ ಆತುಕೊಳ್ಳುವವರು ಈ ಸತ್ಯಗಳನ್ನು ಕಣ್ಣು ಬಿಟ್ಟು ನೋಡಬೇಕು.

ಈ ಥರದ ‘ಧರ್ಮಕಾರಣ’ ಕಂಡ ಆಧುನಿಕ ಮನಸ್ಸಿನವರಿಗೆ ’ಭಯವೇ ಧರ್ಮದ ಮೂಲವಯ್ಯ’ ಎನ್ನಿಸಿದರೆ ಅಚ್ಚರಿಯಲ್ಲ. ಇಂದಿನ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಈ ಬಗೆಯ ಬಹಿರಂಗ ಸಂದೇಶ ಕೊಡುತ್ತಿರುವಾಗ ರಾಜ್ಯದ ಯಾವ್ಯಾವ ಥರದ ಕುರ್ಚಿ ಆಕಾಂಕ್ಷಿಗಳು ಯಾವ್ಯಾವ ಜೋತಿಷ್ಯ, ಹಲ್ಲಿ ಶಕುನ, ಗಿಳಿಶಾಸ್ತ್ರ, ಮಾಟ ಮಂತ್ರಗಳ ಮೊರೆ ಹೋಗುತ್ತಿರಬಹುದು ಎಂಬುದನ್ನು ನೀವೇ ಊಹಿಸಬಹುದು.  ಮೇಲೆ ಕೊಟ್ಟಿರುವ ಬಿಡಿ ಬಿಡಿ ಚಿತ್ರಗಳ ಅರ್ಥಗಳನ್ನು ಈ ಅಂಕಣದ ಓದುಗ ಓದುಗಿಯರಿಗೆ ಬಿಡಿಸಿ ಹೇಳಬೇಕಾಗಿಲ್ಲ.

ಇಂಥ ಕರ್ನಾಟಕದ ಎದುರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೇವಲ ಏಳೆಂಟು ವರ್ಷಗಳ ಕೆಳಗೆ ಎಂ.ಎ. ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳು ಒಂದು ಸೂರ್ಯಗ್ರಹಣದ ದಿನ ನನ್ನ ಕ್ಲಾಸಿಗೆ ಬಂದಿದ್ದ ಗಳಿಗೆಯನ್ನು ಹೆಮ್ಮೆಯಿಂದ ನೆನೆಯುತ್ತೇನೆ. ಆ ಸಲ ಸೂರ್ಯಗ್ರಹಣದ ದಿನ ಜನ ಹೊರಗೆ ಸುಳಿಯಬಾರದೆಂದು ಕಂದಾಚಾರಿಗಳು ಭಾರೀ ಗಾಳಿ ಸುದ್ದಿ ಹಬ್ಬಿಸಿದ್ದರು. ಇದೇ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಹಲವು ಮೇಷ್ಟ್ರುಗಳು, ಮೇಡಂಗಳು ಕೂಡ ಅವತ್ತು ಹತ್ತು ಗಂಟೆಯ ಸುಮಾರಿಗೆ ಕ್ಯಾಂಪಸ್ಸಿಗೆ ಕಾಲಿಟ್ಟಿರಲಿಲ್ಲ! 

ಇವತ್ತು ಕ್ಲಾಸು ತಪ್ಪಿದರೂ ತಪ್ಪಬಹುದು ಎಂಬ ಒಳಾಸೆಯಿಂದಲೇ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರ್‌ಗೆ ಅಡಿಯಿಟ್ಟ ನನಗೆ ಹುಡುಗ ಹುಡುಗಿಯರು ಧಡ ಧಡ ಕ್ಲಾಸ್ ರೂಮಿನತ್ತ ಹೋಗುತ್ತಿದ್ದ ದೃಶ್ಯ ಕಂಡು ಬಂತು. ಅವತ್ತು ಕ್ಲಾಸಿಗೆ ಹೋಗಿ ಯಾವ ಪಾಠ ಮಾಡಿದೆ ಎಂಬುದು ಮರೆತು ಹೋಗಿದೆ. ಆದರೆ ಅವತ್ತು ನಿಜಕ್ಕೂ ಹೃದಯ ತುಂಬಿಬಂದು, ‘ನಿಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ ಅಭಿಮಾನ ಎನ್ನಿಸುತ್ತಿದೆ’ ಎಂದು ಆ ಹುಡುಗ ಹುಡುಗಿಯರಿಗೆ ಬಾಯ್ತುಂಬ ಹೇಳಿದ್ದು ಸ್ಪಷ್ಟವಾಗಿ ನೆನಪಿದೆ. ಆ ಪ್ರಾಮಾಣಿಕ ಮೆಚ್ಚುಗೆ ಅವರ  ವೈಚಾರಿಕ ನೋಟವನ್ನು ಇನ್ನಷ್ಟು ಗಟ್ಟಿಗೊಳಿಸಿರಬಹುದು ಎಂದು ನಂಬುವೆ.     

ಇದೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲವೇ ದಶಕಗಳ ಕೆಳಗೆ ಜಿ.ಎಸ್. ಶಿವರುದ್ರಪ್ಪ, ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಬರಗೂರು ರಾಮಚಂದ್ರಪ್ಪ ಥರದವರು ಪಾಠ ಮಾಡಿದ್ದಕ್ಕೆ ಸಾಕ್ಷಿಯೆಂಬಂತೆ; ಗಂಭೀರವಾದ ಕನ್ನಡ ಸಾಹಿತ್ಯಾಧ್ಯಯನವೇ ಕಲಿಸಿದ ಸ್ಪಷ್ಟ ವೈಚಾರಿಕ ನೋಟಗಳಿಗೆ ಪುರಾವೆಯೆಂಬಂತೆ ಆ ಹೊಸ ಕಾಲದ ಹುಡುಗ ಹುಡುಗಿಯರ ಅವತ್ತಿನ ನಡೆಯಿತ್ತು. ಇದೇ ಅಧ್ಯಯನ ಕೇಂದ್ರದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಹುಟ್ಟಿನ ಕಾಲದಲ್ಲಿ ನಡೆದ ತೀಕ್ಷ್ಣ ಚರ್ಚೆಗಳು ಸಾಹಿತ್ಯ ಕೃತಿಗಳ ಆಳವಾದ ವಿಶ್ಲೇಷಣೆಗಳು ಎಲ್ಲವೂ ಅಂತರಗಂಗೆಯಂತೆ ಅಲ್ಲಿ ಹರಿಯುತ್ತಲೇ ಇದ್ದಂತಿತ್ತು. ಇದೆಲ್ಲರ ಫಲವಾಗಿ ಮೂಡಿದ ಹೊಸ ಕಾಲದ ಗ್ರೂಪ್ ಫೋಟೋದಂತೆ ಅವತ್ತಿನ ಕ್ಲಾಸ್ ರೂಂ ಚಿತ್ರ ನನ್ನ ಚಿತ್ತದಲ್ಲಿ ನೆಲೆಸಿ ಹೆಮ್ಮೆ ಮೂಡಿಸುತ್ತಲೇ ಇರುತ್ತದೆ. 

ನಾನು ಇವತ್ತಿಗೂ ನಂಬಿಕೆಯಿಟ್ಟಿರುವುದು ಇಂಥ ಹೊಸ ತಲೆಮಾರುಗಳಲ್ಲಿ; ತಮ್ಮದೇ ರೀತಿಯಲ್ಲಿ ಕರ್ನಾಟಕದ ವೈಚಾರಿಕ ಪರಂಪರೆಯನ್ನು ಗಟ್ಟಿಗೊಳಿಸುವ, ಹೆಚ್ಚಿನ ಸ್ವಾರ್ಥವಿಲ್ಲದ ಹುಡುಗ ಹುಡುಗಿಯರ ತಂಡಗಳಲ್ಲಿ ಹಾಗೂ ಬಿಡಿ ಬಿಡಿ ವ್ಯಕ್ತಿಗಳಲ್ಲಿ. ‘ಹಸಿವು ಮುಕ್ತ ಕರ್ನಾಟಕ’ ದ ಕನಸು ‘ಹವನಯುಕ್ತ ಕರ್ನಾಟಕ’ದ ದುಸ್ವಪ್ನವಾಗದಂತೆ; ಈಗ ರಾಜ್ಯದಲ್ಲಿರುವ ‘ಗ್ಯಾರಂಟಿ’ ‘ಭಾಗ್ಯ’ಗಳ ಬದಲಿಗೆ ನಿಂಬೆಹಣ್ಣು, ಮಣಿಕಟ್ಟಿನ ದಾರಗಳ ಉಚಿತ ಭಾಗ್ಯದತ್ತ ಕರ್ನಾಟಕ ಹೊರಳುವ ಮುನ್ನ ಕನ್ನಡ ಹೊಸ ತಲೆಮಾರು ಖಚಿತ ದನಿ ಎತ್ತತೊಡಗಿದೆ. 

ಹೋಮ-ಹವನಗಳು ಎಬ್ಬಿಸುವ ಹೊಗೆಯಲ್ಲಿ ಬಡವರ, ನೊಂದವರ ಮುಖಗಳು ಕಣ್ಮರೆಯಾಗುತ್ತವೆ ಎಂಬ ಸರಳ ಸತ್ಯ ಈ ಹುಡುಗ ಹುಡುಗಿಯರಿಂದಲಾದರೂ ನಮ್ಮ ನಾಯಕರ ಮಬ್ಬುಗಣ್ಣುಗಳಿಗೆ ಕಾಣುವಂತಾಗಲಿ.

blog
31 May 2026 ಕೈ ಹಿಡಿದು ನಡೆಸುವ ಕರುಣಾಳು ರೂಪಕ

ಮೊನ್ನೆ ಮೇ ೧೫, ೨೦೨೬ ರ ಸಂಜೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನಕದಾಸರ ಬಹುಭಾಷಾ ಅನುವಾದಗಳ ಸಂಪುಟಗಳನ್ನು ಬಿಡುಗಡೆ ಮಾಡುತ್ತಾ, ತಮ್ಮ ಮಾತಿನ ಕೊನೆಗೆ ವಿಚಿತ್ರವಾದ ಗಟ್ಟಿ ದನಿಯಲ್ಲಿ ಹೇಳಿದ ಮಾತು: ‘ಇಲ್ಲಿಂದ ನಿರ್ಗಮಿಸ್ತೇನೆ.’  

ಅದು ಯಾಕೋ, ಈ ನಿರ್ಗಮನದ ರೂಪಕ ಧಡ್ಡಂತ ನನ್ನೆದೆಗೆ ಹೊಡೆದಂತಾಯಿತು. ಗೆಳೆಯ ದಂಡಪ್ಪನವರಿಗೆ ‘ಕೇಳಿಸಿಕೊಂಡ್ರಾ?’ ಅಂದೆ. ‘ಹೂಂ ಗುರೂಜಿ! ನನಗೂ ಯಾಕೋ ಒಂಥರಾ ಅನ್ನಿಸ್ತು’ ಎಂದರು.
ಅವತ್ತು ಬಿಡುಗಡೆಯಾದ ಸಂಪುಟಗಳಲ್ಲಿ ನಾನು ಸಂಪಾದಿಸಿದ ‘ಮೋಹನ ತರಂಗಿಣಿ’ಯ ಇಂಗ್ಲಿಷ್ ಅನುವಾದವೂ ಇತ್ತು. ಅವತ್ತಿನ ಭಾಷಣದಲ್ಲಿ ಸಿದ್ಧರಾಮಯ್ಯನವರು ಬಸವಣ್ಣನವರ ಚಿರಪರಿಚಿತ ರೂಪಕವನ್ನು ಮತ್ತೆ ನೆನಪಿಸಿದ್ದರು: 

ಇವನಾರವ 
ಇವನಾರವ
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ 

ಈ ವಚನವನ್ನು ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಪುಟ್ಟ ಅಭಿನಯದ ಮೂಲಕವೂ ಸಾವಿರಾರು ಸಲ ಹೇಳಿದ್ದಾರೆ. ಸುಳ್ಳನ್ನು ಸಾವಿರ ಸಲ ಹೇಳಿ ನಿಜ ಮಾಡುವ ಜಾತಿಪೀಡಿತ-ಕೋಮುಪೀಡಿತ ರಾಜಕಾರಣದಲ್ಲಿ ಸದಾಶಯದ ರೂಪಕವನ್ನು ಮತ್ತೆ ಮತ್ತೆ ಹೇಳಿ ಜನರನ್ನು ತಿದ್ದುವ ಈ ಸಕಾರಾತ್ಮಕ ರಾಜಕಾರಣ ಕೂಡ ಗೆದ್ದಿದೆ. ಅನೇಕ ಸ್ವಾಮೀಜಿಗಳು ಇದೇ ವಚನವನ್ನು ಬಹುತೇಕ ತಮ್ಮದೇ ಜಾತಿಯ ಜನಗಳಿಗೆ ತುಟಿಯಂಚಿನಲ್ಲಿ ಹೇಳಿ ಮಾಡಲಾಗದ ಪರಿಣಾಮವನ್ನು ಸಿದ್ದರಾಮಯ್ಯನವರ ವಚನ ಮಂಡನೆ ಸಾಧಿಸಿದಂತಿದೆ. ಯಾಕೆಂದರೆ ಅವರ ರಾಜಕಾರಣದಲ್ಲಿ, ಯೋಜನೆಗಳಲ್ಲಿ ‘ಇವ ನಮ್ಮವ’ದ ಸರ್ವಸ್ವೀಕಾರ ರಾಜಕಾರಣ (ಇನ್‌ಕ್ಲೂಸಿವ್ ಪಾಲಿಟಿಕ್ಸ್) ನಿರಂತರವಾಗಿದೆ. ವಿವಿಧ ಜಾತಿಗಳ ಜನ, ಅಧಿಕಾರಿಗಳು, ಕಾರ್ಯಕರ್ತರು ಅವರಿಗೆ ಸ್ಪಂದಿಸುತ್ತಿದ್ದ ರೀತಿಯೇ ‘ಇವ ನಮ್ಮವ’ ರೂಪಕ ಅವರ ಆಳಕ್ಕೆ ಇಳಿದು ಪ್ರತಿಫಲಿಸಿದ್ದನ್ನು ತೋರಿಸುವಂತಿತ್ತು.

ಇದು ಅಪ್ಪಟ ಕನ್ನಡ ನೆಲದ, ಕನ್ನಡ ಪದಗಳೇ ತುಂಬಿದ, ವಚನ ರೂಪಕದ ಅನನ್ಯ ಪ್ರಭಾವ, ಸಾಧನೆ ಎಂದು ಸಾಹಿತ್ಯದ ಶಕ್ತಿಯಲ್ಲಿ ನಂಬಿಕೆಯಿರುವವರಾದರೂ ನಂಬಬೇಕಾಗುತ್ತದೆ.

ಈ ಅಂಕಣದಲ್ಲಿ ರಾಜ್ಯ-ರಾಷ್ಟ್ರ ರಾಜಕಾರಣವನ್ನು ಪೂರ್ಣಾವಧಿ ವಸ್ತುವನ್ನಾಗಿಸಿ ಬರೆಯುವುದು ಕಡಿಮೆ. ಆದರೆ ಈ ಸಲ ತನ್ನ ತಲೆಯಲ್ಲಿ ಅಡ್ಡಾಡುತ್ತಿರುವ ‘ಇವ ನಮ್ಮವ’ ಬಿಟ್ಟು ಬೇರೇನೂ ಬರೆಯಲು ಕೈಯೇ ಬರಲಿಲ್ಲ!

ನಿನ್ನೆ ಶನಿವಾರ (೩೦ ಜೂನ್ ೨೦೨೬) ಪ್ರಜಾವಾಣಿಯಲ್ಲಿ ಪ್ರಕಟವಾದ ‘ಸಿದ್ಧರಾಮಯ್ಯ: ಇವ ನಮ್ಮವ’ ಲೇಖನ ಓದಿದ ಗೆಳೆಯ ಗಂಗರಾಜು ತಾತಗುಣಿ ನನ್ನ ೨೦೧೩ರ ಪ್ರಜಾವಾಣಿ ಲೇಖನವನ್ನು ನೆನಪಿಸಿದರು. ಇಲ್ಲಿ ಪ್ರಜಾವಾಣಿ ನನಗಾಗಿ ಸೃಷ್ಟಿಸಿದ ಪುಟ್ಟ ‘ಚಾರಿತ್ರಿಕ ಅವಕಾಶ’ದ ವೈಶಿಷ್ಟ್ಯವನ್ನೂ ಹೇಳಬೇಕು: 

೧೧ ಮೇ ೨೦೧೩. ಪ್ರಜಾವಾಣಿಯ ಸಹಸಂಪಾದಕರಾಗಿದ್ದ ಸಿ.ಜಿ. ಮಂಜುಳಾ ‘ನೀವು ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಕ್ಕಾಗಿ ಲೇಖನ ಬರೆಯಬೇಕು?’ ಎಂದರು.
ಚಣ ಹಿಂಜರಿದರೂ ಸಂಜೆಯ ಹೊತ್ತಿಗೆ ಬರೆದೆ. ಆ ಲೇಖನದ ಶೀರ್ಷಿಕೆ: ‘ಹೊಸ ಸರ್ಕಾರ; ಹೊಸ ಕನಸು’.

ನಂತರ ಸಿದ್ಧರಾಮಯ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಬರೆದ ಲೇಖನದ ಹೆಸರು: ‘ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು’. ಲೇಖನದ ಇಂಟ್ರೊ: ‘ತನ್ನ ಕಾರ್ಯವೈಖರಿಯನ್ನು ತೀವ್ರಪರೀಕ್ಷೆಗೆ ಒಡ್ಡಿಕೊಳ್ಳದಿದ್ದರೆ ಈ ಸರ್ಕಾರಕ್ಕೆ ಭವಿಷ್ಯವಿಲ್ಲ…’

ಈ ಲೇಖನ ಬಂದಾಗ ಸಿದ್ಧರಾಮಯ್ಯನವರು ದೆಹಲಿಯ ಕರ್ನಾಟಕ ಭವನದಲ್ಲಿದ್ದರು. ಈ ಲೇಖನವನ್ನು ಮುಖ್ಯಮಂತ್ರಿಗಳು ಬಿಡುವಾಗಿ ಓದಿದರೆಂದು ಗೆಳೆಯರು ಹೇಳಿದರು.

೨೦೨೩ರಲ್ಲಿ ಮತ್ತೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದಾಗ ಸಹ ಸಂಪಾದಕರಾಗಿದ್ದ ಉದಯಕುಮಾರ್‍ ಲೇಖನ ಬರೆಯಲು ಹೇಳಿದರು. ಆಗ ಬರೆದ ಲೇಖನದ ತಲೆಬರಹ: ‘ಕಾಂಗ್ರೆಸ್ ಪುನರಾಗಮನ: ನಿರೀಕ್ಷೆ ಸವಾಲು.’ ಅದರ ಇಂಟ್ರೊ: ‘ಜಾಗೃತ ಮತದಾರರು, ಅತಿ ನಿರೀಕ್ಷೆ ಹಾಗೂ ಲೋಕಸಭಾ ಚುನಾವಣೆಯ ನೆರಳಲ್ಲಿ ಹೊಸ ಸರ್ಕಾರ…’     

ಮೊನ್ನೆ ೨೮ರಂದು ಬಕ್ರೀದ್ ಹಬ್ಬದ ದಿನ ಸಿದ್ಧರಾಮಯ್ಯನವರು ರಾಜಿನಾಮೆ ಕೊಟ್ಟ ಸಂಜೆ   ಗೆಳೆಯರಾದ ಗುರುಪ್ರಸಾದ್ ಕಂಟಲಗೆರೆ, ಭಗತ್ ಸಿಂಗ್ ಕುಂದೂರು, ಕಲಾವಿದ ಸಂತೋಷ್, ಶೋಯಿಂಕಾ ಜೊತೆಯಲ್ಲಿ ಕಂಟಲಗೆರೆಯಲ್ಲಿದ್ದೆ. ಬೆಂಗಳೂರಿಗೆ ಬರುವ ಹಾದಿಯಲ್ಲಿ ಸಿದ್ಧರಾಮಯ್ಯನವರ ಚಿತ್ರಗಳು ಮೂಡತೊಡಗಿದವು. ಭಗತ್ ಸಿಂಗ್ ಸಿದ್ಧರಾಮಯ್ಯನವರು ಪಂಚೆಯನ್ನು ಕೊಂಚ ಹರಡಿಕೊಂಡು ಬಿಡುಬೀಸಾಗಿ ಕೂರುವ ಗತ್ತನ್ನು ವರ್ಣಿಸಿದ್ದು ನೆನಪಾಯಿತು. ರಾತ್ರಿ ಎಂಟೂವರೆಗೆ, ಪ್ರಜಾವಾಣಿಯ ಸಹ ಸಂಪಾದಕ ಚ.ಹ. ರಘುನಾಥರಿಗೆ ನಾನೇ ಬರೆಯುವೆನೆಂದು ಹೇಳಿದೆ. 

ಈ ಒಂದೂವರೆ ದಶಕದಲ್ಲಿ ಸಿದ್ಧರಾಮಯ್ಯ ಕರ್ನಾಟಕದ ಅಪರೂಪದ ನಾಯಕರಾಗಿ ಬೆಳೆದಿದ್ದರು. ಕೆಲವೇ ಗಂಟೆಗಳಲ್ಲಿ ಬರೆದ ಈ ಲೇಖನಕ್ಕೆ ಹಲವು ತಲೆಬರಹಗಳನ್ನು ಪ್ರಯತ್ನಿಸಿದೆ: ‘ಸಿದ್ಧರಾಮಯ್ಯನವರ ಪಾಸಿಟಿವ್ ಪಾಲಿಟಿಕ್ಸ್’; ‘ಸಿದ್ಧರಾಮಯ್ಯನವರ ಸರ್ವಸ್ವೀಕಾರ ರಾಜಕಾರಣ’ (ಇನ್ಕ್ಲೂಸಿವ್ ಪಾಲಿಟಿಕ್ಸ್); ‘ಸಿದ್ಧರಾಮಯ್ಯನವರ ಸಕಾರಾತ್ಮಕ ರಾಜಕಾರಣ’… ಹೀಗೆ. 
ಕೊನೆಗೆ ರಘು, ‘ಸಿದ್ಧರಾಮಯ್ಯ: ಇವ ನಮ್ಮವ’ ಎಂದರು. 

‘ಎಡಿಟೋರಿಯಲ್ ಸ್ಮಾರ್ಟಿ!’ ಎಂದೆ. 

೨೦೨೬ರ ಮಾರ್ಚ್ ತಿಂಗಳಲ್ಲಿ ಅಂತರ್ಜಾತೀಯ ವಿವಾಹಿತರಿಗೆ ರಕ್ಷಣೆ ನೀಡುವ ‘ಇವ ನಮ್ಮವ’ ಚಾರಿತ್ರಿಕ ಮಸೂದೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಂಡಿಸಿದಾಗಲೂ ಇದೇ ಅಂಕಣದಲ್ಲಿ ಬರೆದಿದ್ದೆ. ವಚನಯುಗದ ‘ಇವ ನಮ್ಮವ’ ಆದರ್ಶ ರೂಪಕ ಐದು ಜನ ಲಿಂಗಾಯತರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಕರ್ನಾಟಕದಲ್ಲಿ ಹೀಗೆ ಅರ್ಥಪೂರ್ಣ ಪ್ರತಿಧ್ವನಿ ಪಡೆದಿರಲಿಲ್ಲ. ಯಾಕೆಂದರೆ, ಈ ರೂಪಕವನ್ನು ‘ಇನ್ಕ್ಲೂಸೀವ್ ರಾಜಕಾರಣ’ ಅಥವಾ ‘ಸರ್ವಸ್ವೀಕಾರ ರಾಜಕಾರಣ’ದ ಮೂಲಕ ಎಲ್ಲ ಜಾತಿ, ವರ್ಗಗಳ ಧರ್ಮಗಳ ಜನರನ್ನೂ ಒಳಗೊಳ್ಳುವ ರೂಪಕವಾಗಿಸುವ ಬಯಕೆ, ಬದ್ಧತೆ, ವಿಶಾಲ ದೃಷ್ಟಿ ಆ ಮುಖ್ಯಮಂತ್ರಿಗಳಲ್ಲಿ ಯಾರಿಗೂ ಇರಲಿಲ್ಲ.  

ಸಿದ್ಧರಾಮಯ್ಯನವರ ‘ಇವ ನಮ್ಮವ’ದ ಜಾತ್ಯತೀತ, ಪ್ರೋಗ್ರೆಸೀವ್ ವ್ಯಕ್ತಿತ್ವದ ವಿಕಾಸದ ಯಶಸ್ಸು ಅವರಿಗಷ್ಟೇ ಅಲ್ಲದೆ, ಕರ್ನಾಟಕದ ಸಾವಿರಾರು ತೆರೆಮರೆಯ ಉತ್ಸಾಹಿ ಸೋಶಿಯಲ್ ಮೀಡಿಯಾದ ತರುಣ ತರುಣಿಯರಿಗೆ, ಅಸಂಖ್ಯಾತ ದಲಿತ ಬಹುಜನ ಲೇಖಕ ಲೇಖಕಿಯರಿಗೆ ಸಲ್ಲುತ್ತದೆ; ಸಣ್ಣಪುಟ್ಟ ಕುರ್ಚಿಗಳಿಗಾಗಿ ಸಿದ್ಧರಾಮಯ್ಯನವರ ಸುತ್ತ ಸುಳಿದ ಪರಪುಟ್ಟ ಲೇಖಕ, ಲೇಖಕಿಯರಿಗಿಂತ ಇಂಥ ಕಾಳಜಿಯ ಹೊಸ ತಲೆಮಾರು ಸ್ವಯಂಪ್ರೇರಣೆಯಿಂದ, ಯಾವ ಲಾಭದ ಆಸೆಯೂ ಇಲ್ಲದೆ ಕಟ್ಟಿದ ಸಿದ್ಧರಾಮಯ್ಯನವರ ವ್ಯಕ್ತಿತ್ವ, ಹಬ್ಬಿಸಿದ ವಿಡಿಯೋಗಳ ಕೆಲಸ ಅತ್ಯಂತ ಚಾರಿತ್ರಿಕವಾದುದು. ಸದ್ದಿಲ್ಲದೆ ಅವರ ಭಾಷಣಗಳು, ಟ್ವೀಟುಗಳನ್ನು ವರದಿಗಳನ್ನು ರೂಪಿಸಿದ ಕಾಳಜಿಯ, ಜವಾಬ್ದಾರಿಯುತ ಮನಸ್ಸುಗಳಿಗೂ ಈ ಕ್ರೆಡಿಟ್ ಸಲ್ಲುತ್ತದೆ. ನಾನೇ ಬಲ್ಲಂತೆ ಲೇಖಕ-ಅಧಿಕಾರಿ ವೆಂಕಟೇಶಯ್ಯ, ಪತ್ರಕರ್ತರಾದ ದಿನೇಶ್ ಅಮೀನ ಮಟ್ಟು, ಕೆ.ವಿ. ಪ್ರಭಾಕರ್, ಗಿರೀಶ್ ಕೋಟೆ ಈ ಕೆಲಸವನ್ನು ತಮ್ಮ ಕರ್ತವ್ಯವೆಂಬಂತೆ ಹಗಲೂರಾತ್ರಿ ಮಾಡಿದ್ದಾರೆ. ಬೇರೆ ಬೇರೆ ಪತ್ರಿಕೆಗಳು, ಮಾಧ್ಯಮಗಳ ಅಸಂಖ್ಯಾತ ಸಮಾನತೆಯ ಆಶಯದ ನೂರಾರು ಪತ್ರಕರ್ತ, ಪತ್ರಕರ್ತೆಯರು ಕರ್ನಾಟಕ ಕೋಮುವಾದಿಗಳ ಪಾಲಾಗಬಾರದೆಂಬ ಆಶಯದಿಂದ ಕೂಡ ಸಿದ್ಧರಾಮಯ್ಯನವರ ವ್ಯಕ್ತಿತ್ವವನ್ನು ನಿರಂತರ ಹಬ್ಬಿಸಿದ್ದಾರೆ.  

ಅಂದರೆ, ‘ಇವ ನಮ್ಮವ’ ರೂಪಕ ಹಬ್ಬಿಸಿದ ಭಾವ ಈ ಎಲ್ಲರೊಳಗೆ ಸಹಜವಾಗಿ ಉಕ್ಕಿದ್ದರಿಂದ ಕೂಡ ಇದೆಲ್ಲ ಆಗಿದೆ. ಇಂಥ ಭಾವನೆಯನ್ನು ಕರ್ನಾಟಕದಲ್ಲಿ ಈಚಿನ ದಶಕಗಳಲ್ಲಿ ಯಾವ ರಾಜಕಾರಣಿಯೂ ಉಕ್ಕಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಇಂಥ ರಾಜಕಾರಣಿಯೊಬ್ಬ ರೂಪುಗೊಳ್ಳುವ ಸೂಚನೆಗಳು ಇವತ್ತಂತೂ ಕಾಣುತ್ತಿಲ್ಲ. ನಿನ್ನೆ ಶನಿವಾರ ಮಧ್ಯಾಹ್ನ ಗೆಳೆಯರೊಬ್ಬರ ಫೋನಿನಲ್ಲಿ ಸ್ವತಃ ಸಿದ್ಧರಾಮಯ್ಯನವರೇ ‘ ನಟರಾಜ್, ಲೇಖನ ಚೆನ್ನಾಗಿದೆ. ಥ್ಯಾಂಕ್ಸ್ ’ ಎಂದರು; ನನಗೆ ಮಾತೇ ಹೊರಡಲಿಲ್ಲ. 

ಮೇಲಿನ ಟಿಪ್ಪಣಿಗಳನ್ನು ಬರೆದ ನಂತರ ಮತ್ತೆ ಮೊನ್ನೆಯ ಸಿದ್ಧರಾಮಯ್ಯನವರ ಅಧಿಕಾರ ವಿದಾಯದ ಚಿತ್ರಗಳು ಎದುರು ಬರುತ್ತವೆ: ಹಟಾತ್ತನೆ ಎರಗಿದ ಹೈಕಮ್ಯಾಂಡ್ ಆದೇಶದಿಂದ ಕೆಲವು ಗಂಟೆಗಳ ಕಾಲ ಸಿದ್ಧರಾಮಯ್ಯ ವಿಚಲಿತರಾದರೂ ಘನತೆಯಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟು ಹೊರ ಬಂದದ್ದು ಕೂಡ ಬಹುಕಾಲ ನೆನಪಿನಲ್ಲಿ ಉಳಿಯುವ ಚಾರಿತ್ರಿಕ ಚಿತ್ರವೇ ಆಗಿದೆ. ಅದರಲ್ಲೂ ಇಡೀ ಪ್ರಕರಣವನ್ನು ವಾರಗಟ್ಟಲೆ ಹಿಂಜಿ, ಬಾಯಿಗೆ ಬಂದದ್ದು ಚೀರಿ, ಜನರಿಗೆ ಉಚಿತ ಮನರಂಜನೆ ಕೊಡಲು ಹೊಂಚುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಕಿಂಚಿತ್ ಆಹಾರವನ್ನೂ ಕೊಡದೆ ಸಿದ್ಧರಾಮಯ್ಯ ಘನತೆಯಿಂದ ನಿರ್ಗಮಿಸಿದ್ದಾರೆ. 

ಈ ಅಂಕಣ ಸಂದರ್ಭ, ಸನ್ನಿವೇಶಗಳನ್ನು ಸಾಹಿತ್ಯದ ಕಾಣ್ಕೆಗಳ ಮೂಲಕ ನೋಡುವುದರಿಂದ, ಹಿಂದೊಮ್ಮೆ ಇಲ್ಲಿ ಉಲ್ಲೇಖಿಸಿದ ತತ್ವಜ್ಞಾನಿ ನೀಷೆ ’ವಿದಾಯ’ ಕುರಿತು ಹೇಳಿದ ಮಾತೊಂದನ್ನು ಈ ವಿದಾಯದ ಸನ್ನಿವೇಶದಲ್ಲಿ ಮತ್ತೆ ನೆನಪಿಸುವ ಕಾತರ ಹುಟ್ಟುತ್ತಿದೆ. ಗ್ರೀಕ್ ಮಹಾಕಾವ್ಯ ‘ಓಡಿಸ್ಸಿ’ಯ ಸನ್ನಿವೇಶವೊಂದನ್ನು ವ್ಯಾಖ್ಯಾನಿಸುತ್ತಾ ನೀಷೆ ‘ವಿದಾಯ’ ಕುರಿತ ಅಪೂರ್ವ ಫಿಲಸಾಫಿಕಲ್ ಹೊಳಹನ್ನು ಕೊಡುವ ಪ್ರಸಂಗ ಇದು:

ಟ್ರೋಜನ್ ಯುದ್ಧ ಮುಗಿದು ಎಷ್ಟೋ ವರ್ಷ ಕಾಲ ಮರಳಿ ಮನೆ ಸೇರಲಾರದೆ ಓಡಿಸ್ಯೂಸ್ ಅನಾಥನಂತೆ ಕಡಲ ತಡಿಯಲ್ಲಿ ಬೀಳುತ್ತಾನೆ. ಯೂಲಿಸಿಸನನ್ನು ಕಂಡು ಮೋಹಗೊಂಡ ಆಲ್ಸಿನೌಸಿನ ರಾಜಕುಮಾರಿ ಓಡಿಸ್ಯೂಸ್‌ನನ್ನು ತನ್ನ ಅರಮನೆ ತಲುಪುವಂತೆ ಮಾಡುತ್ತಾಳೆ. ಆಲ್ಸಿನೌಸಿನ ರಾಜನ ಅತಿಥಿಯಾಗಿ  ನೆಮ್ಮದಿಯಿಂದ ಕೆಲ ಕಾಲ ಕಳೆದ ಒಡಿಸ್ಯೂಸ್, ನಂತರ   ತನ್ನೂರು ಇಥಕದ ಕಡೆಗೆ ಹೊರಡಲು ಅಣಿಯಾಗುತ್ತಾನೆ. ಆ ಗಳಿಗೆಯಲ್ಲಿ ಹೋಮರ್ ಸೃಷ್ಟಿಸುವ ಕೋಮಲ ಸನ್ನಿವೇಶವನ್ನು ಕವಿಯ ಬಣ್ಣನೆಯಲ್ಲೇ ಕೇಳಿ: 

ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ
ಓಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರ‍್ರನೆ ಮೆಲುನುಡಿದಳು:
‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು ನೆನೆದುಕೋ 
ನೆನೆನೆನೆದು ಹಾಯೆಂದುಕೋ.’

ನೌಸಿಕಾಳ ಮೆಲುನುಡಿ ಕೇಳಿ ಒಡಿಸ್ಯೂಸ್ ಮರುನುಡಿದನು:

‘ನೌಸಿಕಾ, ಆಲ್ಸಿನೌಸನ ಮಗಳೆ,    
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ;
ಆ ನೆಲದಲ್ಲಿ ಆ ಗಳಿಗೆಯಲ್ಲಿ 
ಮತ್ತು ಆಹೊತ್ತಿನಿಂದ ಅನುದಿನವು 
ನನ್ನ ಕಟ್ಟ ಕಡೆಯ ಉಸಿರಿರುವ ತನಕ, 
ನನ್ನ ಜೀವ ಉಳಿಸಿದ ರಾಜಕುವರಿಯೇ, 
ದೇವಿಯೊಬ್ಬಳ ನೆನೆದಂತೆ 
ನಾ ನಿನ್ನ ನೆನೆಯುವಂತಾಗಲಿ.’  

ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.

ನೀಷೆಯಂಥ ಮಹಾನ್ ತತ್ವಜ್ಞಾನಿ ಈ ವಿದಾಯ ಸನ್ನಿವೇಶವನ್ನು ದಾರ್ಶನಿಕ ರೂಪಕವಾಗಿ ಓದುತ್ತಿರುವಾಗ, ನಾವು ಬದುಕಿನಿಂದ ಅಥವಾ ಯಾವುದೇ ಗಾಢ ಸನ್ನಿವೇಶದಿಂದ ಹೇಗೆ ನಿರ್ಗಮಿಸಬೇಕೆಂಬುದರ ಬಗ್ಗೆ ಪ್ರಬುದ್ಧ ಜೀವನದರ್ಶನ ಹೊರಹೊಮ್ಮುತ್ತದೆ: 

‘ಒಡಿಸ್ಯೂಸ್ ಒಂದು ಘಟ್ಟದಲ್ಲಿ ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಅರಮನೆಯಿಂದ ಹೊರಡುತ್ತಾನಲ್ಲಾ, ಹಾಗೆ ಬದುಕಿನಿಂದ ತೆರಳಬೇಕು- ಶುಭ ಕೋರುತ್ತಾ...ಬದುಕಿನ ಬಗೆಗಿನ ತೀವ್ರ ಮೋಹವನ್ನು ತೊರೆಯುತ್ತಾ.’  

ನನ್ನ ಮಟ್ಟಿಗಂತೂ, ಯಾವುದಕ್ಕಾದರೂ, ಯಾರಿಗಾದರೂ ವಿದಾಯ ಹೇಳಲೇಬೇಕಾಗಿ ಬಂದಾಗ ಓಡಿಸ್ಯೂಸನ ವಿದಾಯವನ್ನು ರೂಪಕವಾಗಿ ಓದುತ್ತಾ ನೀಷೆ ಕಂಡುಕೊಂಡ ಸತ್ಯ  ಯಾವುದೇ ಬಗೆಯ ವಿದಾಯದ ವಿಷಣ್ಣಭಾವದಿಂದ ತಕ್ಷಣ ಹೊರಬರಲು ನನಗೆ ನೆರವಾಗುತ್ತಿರುತ್ತದೆ. 

ಸಾಹಿತ್ಯವನ್ನು ಅರಿಯುವವರನ್ನು ಕೈಹಿಡಿದು ನಡೆಸುವ ರೂಪಕಗಳ ಹಾಗೆಯೇ ಸಿದ್ಧರಾಮಯ್ಯನವರಂಥ ಸೂಕ್ಷ್ಮ ರಾಜಕಾರಣಿಯನ್ನು ‘ಇವ ನಮ್ಮವ’ ಎಂಬ ಆದರ್ಶ ರೂಪಕ ಸದಾ ಪೊರೆಯುತ್ತಾ ಬಂದಿದೆ ಎಂದು ನಂಬಲು ನನಗೆ ಇಷ್ಟ. 

ಕೊನೆಯದಾಗಿ, ಈ ಅಂಕಣದ ತಲೆಬರಹಕ್ಕೆ ಪ್ರೇರಣೆಯಾದ ‘ಕೈ ಹಿಡಿದು ನಡೆಸೆನ್ನನು’ ರೂಪಕ ಬಿಎಂಶ್ರೀಯವರ ಸೃಷ್ಟಿ. ಜಾನ್ ಹೆನ್ರಿ ನ್ಯೂಮನ್ ಪದ್ಯದಲ್ಲಿ Lead kindly light/ amid the encircling gloom/ lead thou me on’ ಎಂಬ ಸಾಲಿನ ಆಶಯ ಬಿಎಂಶ್ರೀಯವರಲ್ಲಿ ‘ಕೈ ಹಿಡಿದು ನಡೆಸೆನ್ನನು’ ಎಂಬ ರೂಪಕವಾಯಿತು…



Latest Video


Nataraj Huliyar Official
YouTube Channel

SUBSCRIBE