ಅದು ಹೇಗೋ ಏನೋ ತೀರಿಕೊಂಡ ದೊಡ್ಡವರ ಪುಸ್ತಕಗಳನ್ನು ಎಡಿಟ್ ಮಾಡುವ, ಮತ್ತೆ ರೂಪಿಸುವ, ಅಥವಾ ಅವರ ಬಗ್ಗೆ ಬರೆಯುವ ಕೆಲಸ ಆಗಾಗ್ಗೆ ನನ್ನ ಹೆಗಲ ಮೇಲೆ ಬೀಳುತ್ತಿರುತ್ತದೆ. ಲೋಹಿಯಾ, ಎಂ.ಡಿ. ನಂಜುಂಡಸ್ವಾಮಿ, ಲಂಕೇಶ್, ಕಿ.ರಂ. ನಾಗರಾಜ್, ಡಿ. ಆರ್. ನಾಗರಾಜ್, ಶಾಂತವೇರಿ ಗೋಪಾಲಗೌಡ, ಗಾಂಧೀಜಿ…ಹೀಗೆ. ಇದನ್ನೆಲ್ಲ ಮಾತಾಡುತ್ತಾ, ‘ನಮ್ ಜೊತೆ ಚೆನ್ನಾಗಿದ್ರೆ ನಿಮಗೂ ಒಂದು ಪುಸ್ತಕ ಗ್ಯಾರಂಟಿ; ಆದರೆ ಮರಣಾನಂತರ’ ಎಂದು ಗಟ್ಟಿ ಎದೆಯ ಗೆಳೆಯರನ್ನು ರೇಗಿಸುವುದೂ ಇದೆ!
ಇದೇನೂ ಸ್ವತಃ ನಾನೇ ಹುಡುಕಿಕೊಂಡು ಹೋಗಿ ಮಾಡಿರುವ ಕೆಲಸವಲ್ಲ; ಇವೆಲ್ಲ ಆಗಾಗ್ಗೆ ನನ್ನ ಹಾದಿಯಲ್ಲಿ ಬಂದು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿದ ಕೆಲಸಗಳು:
ಉದಾಹರಣೆಗೆ, ಲಂಕೇಶರು ೧೯೯೭ರಲ್ಲಿ ಒಂದು ರಾತ್ರಿ ಸಣ್ಣ ದನಿಯಲ್ಲಿ, ‘ಆ ಟೀಕೆ ಟಿಪ್ಪಣಿ ಎರಡು, ಮೂರು ವಾಲ್ಯೂಮ್ಸ್ ಮಾಡ್ತೀಯೇನೋ ನೋಡು’ ಅನ್ನುವರು; ಅಥವಾ ಕಾಳೇಗೌಡ ನಾಗವಾರರು ಇದ್ದಕ್ಕಿದ್ದಂತೆ, ‘ಲೋಹಿಯಾ ಅನುವಾದ ಸಮಿತಿಯ ಸದಸ್ಯರಾಗಿ’ ಎಂದು ಕರೆಯುವರು; ಡಾ. ಲಕ್ಷ್ಮೀಪತಿಬಾಬು ಥರದ ಹಿರಿಯ ಗೆಳೆಯರು ತಮ್ಮ ಗುರುಗಳಾದ ಎಂ.ಡಿ. ನಂಜುಂಡಸ್ವಾಮಿಯವರಿಗೆ ಸಲ್ಲಿಸಿದ ‘ನುಡಿನಮನ’ ಕಾರ್ಯಕ್ರಮದ ಮಂಡನೆಗಳನ್ನು ಪುಸ್ತಕ ಮಾಡಿಕೊಡಿ ಎನ್ನುವರು; ‘ನಾನು ಪುಸ್ತಕ ಪ್ರಾಧಿಕಾರದಲ್ಲಿ ಇರೋದರೊಳಗೆ ಕಿರಂ ನಾಗರಾಜರ ಪುಸ್ತಕ ಮಾಡಿಕೊಡಿ! ಗುರುವಂದನೆ’ ಎಂದು ಕವಿ ಸಿದ್ಧಲಿಂಗಯ್ಯನವರು ಮುಗುಳ್ನಗುವರು; ‘ನಾನು ಅಕಾಡೆಮಿ ಬಿಡೋದರೊಳಗೆ ನಮ್ಮ ಗುರು ಡಿ. ಆರ್. ಪುಸ್ತಕ ಮಾಡಿಕೊಡು ಗುರುವೇ’ ಎಂದು ಗೆಳೆಯ ಮಹಾಬಲೇಶ್ವರ್ ಹೇಳುವರು; ‘ನಾನೂ ಶಾಂತವೇರಿ ಗೋಪಾಲಗೌಡರ ನಾಡಿನವನೇ; ನಾನು ನ್ಯಾಶನಲ್ ಬುಕ್ ಟ್ರಸ್ಟ್ ಬಿಡೋದರೊಳಗೆ ಗೋಪಾಲಗೌಡರ ಕಿರುಬಯೋಗ್ರಫಿ ಮುಗಿಸಿಕೊಡಿ’ ಎಂದು ದೆಹಲಿಯಿಂದ ನಾಗರಾಜಪ್ಪ ಹೇಳುವರು…
ಹೀಗೆ ತಂತಾವೇ ಬಂದ ಇವೆಲ್ಲ ಮಾಡಮಾಡುತ್ತಾ ನನ್ನ ಪ್ರಿಯವಾದ ಕೆಲಸಗಳೂ ಆಗತೊಡಗಿದವು; ಆ ಮಾತು ಬೇರೆ.
ಕಳೆದ ಎರಡುಮೂರು ದಿನದಿಂದ ಕನಕದಾಸರ ‘ಮೋಹನ ತರಂಗಿಣಿ’ ಇಂಗ್ಲಿಷ್ ಅನುವಾದದ ಫೈನಲ್ ಎಡಿಟಿಂಗ್ ಹಾಗೂ ಅದರ ಮುನ್ನುಡಿ ಪೂರ್ಣಗೊಳಿಸುವ ಕೆಲಸ (ಅರೆ! ಮತ್ತೆ ಸತ್ತವರ ನೆರಳು! ಆದರೆ ಹಿತವಾದ, ತಂಪು ನೆರಳು!); ಅದರ ಜೊತೆಗೇ ಅಂತರ್ಜಾತೀಯ ವಿವಾಹಿತರ ರಕ್ಷಣೆಗಾಗಿ ಕರ್ನಾಟಕ ವಿಧಾನಸಭೆ ಅಂಗೀಕರಿಸಿರುವ ’ಇವ ನಮ್ಮವ’ ಮಸೂದೆ… ಇವುಗಳಲ್ಲಿ ಮುಳುಗಿದ್ದ ನನಗೆ ಇದನ್ನೆಲ್ಲ ಇವತ್ತು ಇಲ್ಲಿ ಹೇಳಬೇಕೆಂಬ ಇರಾದೆಯೇನೂ ಇರಲಿಲ್ಲ.
ಇದಕ್ಕೆ ಕಾರಣವಾದದ್ದು ಈ ಅಂಕಣ ಬರೆಯುವ ಭಾನುವಾರ ಬೆಳಗ್ಗೆ ಅಕಸ್ಮಾತ್ ಕಂಡ ಪತ್ರ. ಲೇಖಕ, ಭಾವೀ ಸಿನಿಮಾ ನಟ ಹರಿಪ್ರಸಾದ್ ಬೇಸಾಯಿ ಬರೆದ ಈ ಪತ್ರ ನೋಡನೋಡುತ್ತಾ ಮೊದಲ ಪ್ಯಾರಾ ಹುಟ್ಟಿತು. ‘ತೀರಿಕೊಂಡವರ ಬದುಕು ಬದುಕಿ ಉಳಿಯುವವರ ನೆನಪಿನಲ್ಲಿ ಜಾಗ ಪಡೆಯುತ್ತದೆ’ ಎಂಬ ಸಿಸಿರೋ ಮಾತು ತೇಲಿ ಬಂತು. ಜೊತೆಗೆ ನೀಷೆಯೋ, ಇನ್ಯಾರೋ ಹೇಳಿದ ಮಾತು: ‘ತೀರಿಕೊಂಡವರ ಸತ್ವ ಬದುಕಿರುವವರ ಬೆನ್ನ ಹುರಿಯಲ್ಲಿ ಉಳಿದಿರುತ್ತದೆ…’
ಮೊನ್ನೆ ಲಂಕೇಶರ ‘ಟೀಕೆ ಟಿಪ್ಪಣಿ’ ಪುಸ್ತಕಗಳ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೂವತ್ತು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯ ವರದಿಯೊಂದರಲ್ಲಿ ಬಂದಿದ್ದ ಮಾತೊಂದನ್ನು ನೆನೆದಿದ್ದರು. ಆ ಮಾತುಗಳಿರುವ ವಿಡಿಯೋ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ‘ಕುರಿ ಎಣಿಸಲು ಬರದವನು ಹಣಕಾಸು ಮಂತ್ರಿ ಹೇಗಾಗುತ್ತಾನೆ? ಎಂದು ಲಂಕೇಶ್ ಪತ್ರಿಕೆಯವರು ಬರೆದಿದ್ದರು; ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ’ ಎಂದ ಮುಖ್ಯಮಂತ್ರಿಗಳು, ’ನನ್ನ ಜಾತಿಯ ಕಾರಣಕ್ಕೆ ಹಾಗೆ ಬರದಿರಲಿಕ್ಕಿಲ್ಲ’ ಎನ್ನುತ್ತಾ ಮುಂದಿನ ಮಾತಿಗೆ ಸಾಗಿದರು.
ಹರಿಪ್ರಸಾದ್ ಈ ಬಗ್ಗೆ ಬರೆದ ಪತ್ರ ನೋಡಿದಾಗ ತೀರಿಕೊಂಡವರ ಪುಸ್ತಕಗಳ ಕಾಗುಣಿತ ಇತ್ಯಾದಿ ತಪ್ಪುಗಳು, ಆ ಲೇಖಕರನ್ನು ಸಂಪಾದಿಸಿದ ಇನ್ಯಾರೋ ಮಾಡಿದ ತಪ್ಪುಗಳು… ಇವನ್ನೆಲ್ಲ ತಿದ್ದುವುದರ ಜೊತೆಗೆ ಅವರ ನಡೆನುಡಿಗಳ ಐಬುಗಳಿಗೂ ಉತ್ತರ ಕೊಡುವ ಅನಿವಾರ್ಯ ಹೊಣೆಯೂ ನನ್ನ ಪಾಲಿಗಿದೆಯಲ್ಲ ಎನ್ನಿಸಿ ವಿಸ್ಮಯವಾಯಿತು!
ಅದೇನೇ ಇರಲಿ. ನನಗೆ ಸ್ಪಷ್ಟವಾಗಿ ಗೊತ್ತಿರುವಂತೆ ತೊಂಬತ್ತರ ದಶಕದಲ್ಲಿ ಸಿದ್ಧರಾಮಯ್ಯನವರು ಹಣಕಾಸು ಮಂತ್ರಿಯಾಗಿದ್ದಾಗ ಅವರಿಗೆ ಕುರಿ ಎಣಿಸಲು ಕೂಡ ಬರುವುದಿಲ್ಲ ಎಂದು ಲಂಕೇಶರು ಬರೆದಿರಲಿಲ್ಲ. ಅದನ್ನು ಬರೆದಿದ್ದ ವರದಿಗಾರರು ಕೂಡ ನಾನು ಬಲ್ಲಂತೆ ಹಲವು ಹಗರಣಗಳನ್ನು ಬಯಲಿಗೆಳೆದಿದ್ದ ದಿಟ್ಟ, ಜಾತ್ಯತೀತ ವ್ಯಕ್ತಿ. ಅವತ್ತು ಆ ವಾಕ್ಯದ ಬಗ್ಗೆ ಕೆ. ರಾಮದಾಸ್ ಆ ವರದಿಗಾರರ ಜೊತೆ ಜಗಳವಾಡಿದಾಗ ಕೂಡ, ಅದು ಜಾತಿಯನ್ನು ಎತ್ತಿ ಆಡಿದ್ದರಿಂದ ಹುಟ್ಟಿದ ಮಾತು ಎನ್ನಿಸಿರಲಿಲ್ಲ. ಇವತ್ತಿಗೂ ಹಾಗನ್ನಿಸಿಲ್ಲ. ಲಂಕೇಶರು ಕೂಡ ಶ್ವಪಚ, ದೊಂಬರಾಟ ಮುಂತಾದ ಪದಗಳನ್ನು ಆರಾಮಾಗಿ ಬಳಸಿಬಿಡುತ್ತಿದ್ದರು. ತೇಜಸ್ವಿಯವರಲ್ಲಿ ಕೂಡ ಕೊರಮ ಮುಂತಾದ ಪದ ಬಳಕೆಗಳಿದ್ದವು.
ಈ ಥರದ ಜನಬಳಕೆಯ ನುಡಿಗಟ್ಟುಗಳಲ್ಲಿ ಇಣುಕುವ ಜಾತಿ ಪೂರ್ವಗ್ರಹಗಳು, ಜಾತಿನಿಂದನೆಗಳ ಬಗ್ಗೆ ಸೂಕ್ಷ್ಮ ಚರ್ಚೆಗಳು ಶುರುವಾದ ಮೇಲೆ ನಮ್ಮ ಅನೇಕ ಲೇಖಕರು ಈ ಕುರಿತು ಮುಂದೆ ಎಚ್ಚರ ವಹಿಸತೊಡಗಿದರು. ಇದು ಎಲ್ಲರಿಗೂ ಗೊತ್ತಿದೆ. ಸ್ತ್ರೀವಾದ ಎಲ್ಲರಿಗೂ ಪುರುಷನಿರ್ಮಿತ ಭಾಷೆಯ ಪೂರ್ವಗ್ರಹಗಳನ್ನು ಕುರಿತು ಹೇಳಿದ ಮೇಲೆ ಪುರುಷರೂ, ಸ್ತ್ರೀಯರೂ ಗಂಡುಭಾಷೆಯ ಸಲೀಸು ಬಳಕೆಯ ಬಗ್ಗೆ ಎಚ್ಚರ ವಹಿಸತೊಡಗಿದರು. ಇಷ್ಟಾದರೂ ನಮ್ಮ ನಿಮ್ಮೆಲ್ಲರ ಆಡು ಮಾತಿನಲ್ಲಿ ನಿತ್ಯ ಸ್ತ್ರೀವಿರೋಧಿ ಬೈಗುಳಗಳು ಬರುತ್ತಲೇ ಇರುತ್ತವೆ!
'ಲಂಕೇಶರ ದೋಷಗಳನ್ನು ಹೇಳಿ’ ಎಂದರು ಇನ್ನೊಬ್ಬರು. ಅವರಿಗೆ ನನ್ನ ಉತ್ತರ: ’ಅವನ್ನು ನೀವೇ ಓದಿ ಕಂಡುಕೊಳ್ಳಬಹುದು; ಗಾಳಿ ಸುದ್ದಿ ಆಧಾರಿಸಿ ಅಲ್ಲ. ಲಂಕೇಶರ ತಪ್ಪುಗಳು ಎಂದು ನೀವು ಹೇಳುವುದನ್ನೆಲ್ಲ ನಾನೂ ಹೇಳುತ್ತಾ ಹೋದರೆ ಲಂಕೇಶರ ಪದ್ಯದ ಸಾಲು ಬೌನ್ಸ್ ಆಗತೊಡಗುತ್ತದೆ: ‘ಸೂಳೇಮಗನೆ ಎಂದು ನಿನ್ನನ್ನು ಕರೆದರೆ ನನ್ನನ್ನೇ ಕರೆದಂತಾಗುತ್ತದೆ.’
ಈ ಥರದ ವಾದಬರಹದ ಧಾಟಿ ನನಗೆ ಪ್ರಿಯವಲ್ಲ; ತೀರಿಕೊಂಡ ದೊಡ್ಡವರ ದೋಷಗಳಿಂದ ಅಷ್ಟಿಷ್ಟು ಕಲಿತು, ಆ ದೊಡ್ಡವರ ಬರಹ, ಮಾತು, ದರ್ಶನಗಳನ್ನು, ವಿಸ್ಡಂ ಅನ್ನು ಓದುಗ ಓದುಗಿಯರ ನಡುವೆ ಹಬ್ಬಿಸುವುದು ನನ್ನ ಪ್ರಿಯವಾದ ಕಾಯಕಗಳಲ್ಲೊಂದು; ಅದು ಪ್ರಾಯಶಃ ಗಾಂಧೀ ಬರವಣಿಗೆಯಿಂದ ನಾನು ಕಲಿತ ಪುಟ್ಟ ಪಾಠವೂ ಇರಬಹುದು. ನಾವು ಒಪ್ಪುವ ವ್ಯಕ್ತಿಗಳಲ್ಲಿ ತಪ್ಪು ಕಂಡರೆ ಅದನ್ನು ಕಾಣುವ ಕಣ್ಣು ನಮಗಿರಬೇಕು; ಆದರೆ ನಮ್ಮ ನೋಟವನ್ನು ಬ್ಯಾಲೆನ್ಸ್ ಮಾಡಲು ಒಳಿತಿಗೊಂದು ಪ್ಯಾರಾ, ಕೆಡುಕಿಗೊಂದು ಪ್ಯಾರಾ ಬರೆಯುವ ಯಾಂತ್ರಿಕ ವಸ್ತುನಿಷ್ಠತೆಯ ಧಾಟಿ ನನ್ನ ಬರವಣಿಗೆ, ನಿರೂಪಣಾ ಧಾಟಿಗೆ ಒಗ್ಗಿದಂತಿಲ್ಲ. ಹಾಗೆ ನೋಡಿದರೆ ಲಂಕೇಶರಿಗೆ ಕೊಂಚ ಹತ್ತಿರದಲ್ಲಿದ್ದಾಗ ನಾನು ಅವರಲ್ಲಿ ಒಪ್ಪದ ಸಂಗತಿಗಳು ’ನನ್ನ ಇಂತಿ ನಮಸ್ಕಾರಗಳು’ ಪುಸ್ತಕದಲ್ಲಿ ಅಲ್ಲಲ್ಲಿ ದಾಖಲಾದಂತಿವೆ. ಅವು ಕೂಡ ಇವತ್ತು ಅಷ್ಟೇನೂ ಮುಖ್ಯವಲ್ಲವೆನ್ನಿಸಬಹುದು…
ಈ ಬಗ್ಗೆ ಹೆಚ್ಚು ಬರೆಯುವ ಅಗತ್ಯ ಕಾಣುತ್ತಿಲ್ಲ! ಯಾವುದೇ ದೊಡ್ಡವರ ತಪ್ಪು, ದೋಷಗಳನ್ನು ಕುರಿತು ಚಿಂತಿಸುವುದು ಅವನ್ನು ದಾಟುವ, ನಾವೂ ಅದನ್ನು ಪುನರಾವರ್ತಿಸದಿರುವ ದಿಕ್ಕಿನೆಡೆಗಿನ ಪ್ರಯತ್ನವಾಗಿರಬೇಕು ಅನ್ನಿಸುತ್ತಿದೆ.
ಈ ಮಾತುಗಳನ್ನು ಬರೆಯುವಾಗ ೧೯೭೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕುವೆಂಪು ವಿಚಾರ ಸಂಕಿರಣದಲ್ಲಿ ಕುವೆಂಪು ಕುರಿತು ಎದ್ದ ಪ್ರಶ್ನೆಯೊಂದಕ್ಕೆ ಎಂ.ಡಿ. ನಂಜುಂಡಸ್ವಾಮಿಯವರು ಕೊಟ್ಟ ಉತ್ತರ ನೆನಪಾಯಿತು. ಆ ಮಾತನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ:
‘ಕೊನೆಯದಾಗಿ, ಭಾರತದ ರಾಜಕಾರಣದಲ್ಲಿ ಸ್ವಾತಂತ್ಯ್ರ ಸಂಗ್ರಾಮ, ಕರ್ನಾಟಕ ಏಕೀಕರಣ, ಸಂಪೂರ್ಣಕ್ರಾಂತಿ ಇವುಗಳಿಗೆ ನೇರ ಬೆಂಬಲ ನೀಡಿದ ಕುವೆಂಪು ತುರ್ತು ಪರಿಸ್ಥಿತಿಯ ಕಾಲದಲ್ಲಿ ಏಕೆ ಮೌನವಾಗಿದ್ದರು ಎಂದು ಕೇಳುವಾಗಲೂ ನಾವು ರಾಜಕಾರಣದಲ್ಲಿ ಆಗುವ ಸಂರ್ಕೀಣವಾದ ಕ್ರಿಯೆ-ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ತುರ್ತುಪರಿಸ್ಥಿತಿಯ ಕಾಲದಲ್ಲಿ ಪ್ರಶಸ್ತಿಯನ್ನು ತ್ಯಜಿಸಿದ ಕಾರಂತರು, ಜಯಪ್ರಕಾಶರ ಚಳವಳಿಯನ್ನು ಆಷಾಢಭೂತಿಗಳ ಚಳುವಳಿಯೆಂದು ತುರ್ತುಪರಿಸ್ಥಿತಿಗೆ ಬಹಳ ಹಿಂದೆಯೇ ಏಕೆ ಹೇಳಿದರು ಎನ್ನುವ ಪ್ರಶ್ನೆಗಳನ್ನು ಕೇಳುವವರೂ ಇದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಎರಡೂ ಪ್ರಶ್ನೆಗಳನ್ನೂ ಕೇಳಬಾರದು. ಇದಕ್ಕೆ ಉತ್ತರಗಳನ್ನು ಕುವೆಂಪು, ಕಾರಂತರನ್ನು ಬಿಟ್ಟು ಬೇರೆಯವರು ಕೊಡಲೂ ಹೋಗಬಾರದು.’
ನಂಜುಂಡಸ್ವಾಮಿಯವರ ಉತ್ತರದಲ್ಲಿರುವ ಈ ವಿಸ್ಡಂ -ಆಳವಾದ ನೋಟ- ನಾವು ದೊಡ್ಡವರ ಬಗ್ಗೆ ಎತ್ತುವ ಅನೇಕ ಬಗೆಯ ಪ್ರಶ್ನೆಗಳಿಗೆ ಉತ್ತರ ಕಾಣಿಸಬಲ್ಲದು.
ಕೊನೆ ಟಿಪ್ಪಣಿ:
ಇಷ್ಟೆಲ್ಲದರ ನಡುವೆ, ಮೊನ್ನೆ ಟೀಕೆ ಟಿಪ್ಪಣಿ ಪುಸ್ತಕಗಳ ಬಿಡುಗಡೆಯಲ್ಲಿ ಕಂಡ ದೃಶ್ಯ: ಹೊಸ ತಲೆಮಾರಿನ ಹುಡುಗರು, ಇನ್ನೂ ಸಂಬಳವೇ ಬಾರದಿರುವವರು, ಹೊಟ್ಟೆ ಬಟ್ಟೆಗೂ ಕಷ್ಟ ಪಡುವವವರು ಈ ಟೀಕೆ ಟಿಪ್ಪಣಿಗಳನ್ನು ಕೊಂಡು ಹೋಗುತ್ತಿದ್ದುದನ್ನು ಕಂಡು ಎದೆ ತುಂಬಿ ಬಂತು ಎಂಬುದನ್ನು ಇಲ್ಲಿ ಹೇಳಲೇಬೇಕು. ಆ ಹುಡುಗ ಹುಡುಗಿಯರಲ್ಲಿ ಲಂಕೇಶರ ಬರಹ ಆಳವಾಗಿ ಬೆಳೆದು ಅವರೂ ಚೆನ್ನಾಗಿ ಬರೆಯುವಂತಾಗಲಿ ಎಂದಷ್ಟೆ ಹಾರೈಸೋಣ.
ಈ ಪುಸ್ತಕಗಳು ಹೊಸ ತಲೆಮಾರಿಗಂತೂ ಅತ್ಯಗತ್ಯವಾಗಿ ಬೇಕು ಎಂಬುದನ್ನು ಸೂಚಿಸುವ ಮೂರನೆಯ ಸಂಪುಟದ ಮುನ್ನುಡಿಯ ಕೊನೆಮಾತುಗಳು:
‘ಈ ಸಂಪುಟದಲ್ಲಿರುವ ಲಂಕೇಶರ ಕೊನೆಯ ವರ್ಷಗಳ ಬರಹಗಳಲ್ಲೂ ಮನುಷ್ಯನ, ಜಗತ್ತಿನ ಆಶೆ ಹತಾಶೆಗಳ ನಡುವೆಯೇ ಕಟ್ಟುವ, ಬದಲಿಸುವ ಆಶೆ ಹಾಗೂ ಕಾತರಗಳು ಹಾಗೇ ಇವೆ. ಈ ಟೀಕೆ ಟಿಪ್ಪಣಿಗಳಿಂದ ಕಳೆದ ನಲವತ್ತೈದು ವರ್ಷಗಳಲ್ಲಿ ಸಾವಿರಾರು ಲೇಖಕ, ಲೇಖಕಿಯರು ಅಂಕಣ ಬರಹ, ಆತ್ಮೀಯ ಸಂಪಾದಕೀಯ, ಗದ್ಯ, ಸಮಾಜವಿಮರ್ಶೆ, ಸಾಹಿತಿ-ಸಾಹಿತ್ಯಗಳನ್ನು ನೋಡುವ ಬಗೆ; ರಾಜಕೀಯ, ಸಾಮಾಜಿಕ ವಿಶ್ಲೇಷಣೆ; ಪ್ರತಿರೋಧ... ಇತ್ಯಾದಿಯಾಗಿ ಹಲವು ಮಾದರಿಗಳನ್ನು ಕಲಿತಿದ್ದಾರೆ. ಕಾಲದ ಕನ್ನಡಿಯಂತಿರುವ ಈ ಬರಹಗಳನ್ನು ಮತ್ತೆ ಮತ್ತೆ ಓದುವ ಯಾರೇ ಆದರೂ ತೀವ್ರವಾಗಿ ಬರೆಯುವ, ಕಾಳಜಿಯಿಂದ ಯೋಚಿಸುವ, ಒಳ-ಹೊರಗನ್ನು ಬೆಸೆಯುವ ಬರಹದ ಕಲೆಯನ್ನು ಕಲಿಯಬಲ್ಲರು; ಹಾಗೆಯೇ ಬದುಕುವ ಕಲೆಯನ್ನು ಕೂಡ. ಇದು ನನ್ನ ಪ್ರಾಮಾಣಿಕ ನಂಬಿಕೆ.’
ಈ ಟೀಕೆ ಟಿಪ್ಪಣಿಗಳು ಬೆಂಗಳೂರಿನ ಪುಸ್ತಕದ ಮಳಿಗೆಗಳಲ್ಲಿ ದೊರೆಯುತ್ತಿವೆ. ಈ ಮೂರೂ ಸಂಪುಟಗಳನ್ನು ಲಂಕೇಶರ ಕಾಲದಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿದ್ದ ಗೆಳೆಯ ಸತೀಶ್ ಮನೆ ಮನೆಗೂ ತಲುಪಿಸಲು ಸಿದ್ದರಿದ್ದಾರೆ. ಕನ್ನಡದ ಹೆಮ್ಮೆಯಂತಿರುವ ಈ ಕೃತಿಗಳು ನಿಮಗೆ, ನಿಮ್ಮ ಗೆಳೆಯ ಗೆಳತಿಯರಿಗೂ ಬೇಕಾದಲ್ಲಿ ಅವರನ್ನು ಸಂಪರ್ಕಿಸಿ.
Satish MOBILE: 6363990245
ಮೂರೂ ಕೃತಿಗಳಿಗೆ ರೂ.1000 (ಅಂಚೆ ವೆಚ್ಚ ಅಥವಾ ತಲುಪಿಸುವ ವೆಚ್ಚ ಸೇರಿ)
ಬಿಡಿ ಪ್ರತಿ: ರೂ. 350 (ಅಂಚೆ ವೆಚ್ಚ ಅಥವಾ ತಲುಪಿಸುವ ವೆಚ್ಚ ಸೇರಿ)
ಪುಸ್ತಕ ಬೇಕಾದವರು ತಮ್ಮ ಕರಾರುವಾಕ್ಕಾದ ವಿಳಾಸ, ಮೇಲ್ ಐಡಿ, ಫೋನ್ ನಂಬರುಗಳನ್ನು ಈ ಅಂಕಣಕ್ಕೂ ಕಳಿಸಬಹುದು.