Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
08 Feb 2026 ಸಾಹಿತಿಗಳಿಗೆ ಶಾಂತವೇರಿ ಪಾಠ

ನಮ್ಮ ರಾಜಕಾರಣಿಗಳು ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಿರುವ ರೀತಿಗೂ, ತಂತಮ್ಮ ಭಾಷೆಗಳ ಅರ್ಥಪೂರ್ಣ ಸಾಹಿತ್ಯ ಕೃತಿಗಳ ಜೊತೆಗೆ, ಜವಾಬ್ದಾರಿಯುತ ಸಾಹಿತಿಗಳ ಜೊತೆಗೆ ಅವರ ನಂಟು ಕಡಿದು ಹೋಗಿರುವುದಕ್ಕೂ ಸಂಬಂಧ ಇರುವಂತಿದೆ. ಇದು ನಿಮಗೂ ಹೊಳೆದಿರುತ್ತದೆ: ಒಂದು ಕಾಲಕ್ಕೆ ದೇಶದ ಗಂಭೀರ ರಾಜಕಾರಣಿಗಳು ಉತ್ತಮ ಸಾಹಿತ್ಯ-ಸಾಹಿತಿಗಳ ಜೊತೆ ಇರಿಸಿಕೊಂಡಿದ್ದ ಸಂಬಂಧದಿಂದ ರಾಜಕಾರಣ ಹಾಗೂ ಸಾಹಿತ್ಯಸಂಸ್ಕೃತಿ ಎರಡೂ ಪರಸ್ಪರ ಹಲವು ಕೊಡುಗೆಗಳನ್ನು ಪಡೆಯುತ್ತಿದ್ದವು. ಇವತ್ತಿಗೂ ಹೀಗೆ ಪಡೆಯುವುದನ್ನು ಅಪರೂಪಕ್ಕೆ ನೋಡುತ್ತೇನೆ. ಆದರೆ ಅಂಥವರ ಸಂಖ್ಯೆ ಹೆಚ್ಚು ಇಲ್ಲ. ಅಂಥವರು ಕೂಡ ಕೆಳಗಿನ ಕೆಲವು ಉದಾಹರಣೆಗಳಿಂದ ಸ್ಫೂರ್ತಿ ಪಡೆಯಲಿ ಎಂದು ನಿರೀಕ್ಷಿಸೋಣ:

ಕರ್ನಾಟಕದ ಅನನ್ಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಕನ್ನಡ ಲೇಖಕರಾದ ತರಾಸು, ಬಸವರಾಜ ಕಟ್ಟೀಮನಿ, ತೇಜಸ್ವಿ, ಲಂಕೇಶ್, ನಿಸಾರ್ ಅಹಮದ್, ಚಂದ್ರಶೇಖರ ಪಾಟೀಲ, ಅನಂತಮೂರ್ತಿ ಮುಂತಾದವರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಕಾವ್ಯ ಸಂವೇದನೆಯುಳ್ಳ ಗೋಪಾಲಗೌಡರು ಕನ್ನಡ ಕವಿಗಳ ಕವನಗಳ ಸಾಲುಗಳನ್ನೂ, ಆಶಯಗಳನ್ನೂ ತಮ್ಮ ಸಮಾಜವಾದಿ ಚಿಂತನೆ, ಭಾಷಣಗಳಲ್ಲಿ ಬಳಸುತ್ತಿದ್ದರು.

ಹೀಗೆ ಕವಿಸಾಲುಗಳನ್ನು ಬಳಸುತ್ತಿದ್ದ ಗೋಪಾಲಗೌಡರ ಬಗ್ಗೆ ಅಂದಿನ ಲೇಖಕರು ಹೆಮ್ಮೆ ಪಡುತ್ತಿದ್ದರು. ಆದರೆ ಹಾಗೆ ಬಳಸುವುದನ್ನು ಆಕ್ಷೇಪಿಸಿದ ಜನರೂ ಆ ಕಾಲದಲ್ಲಿದ್ದರು ಎಂಬುದನ್ನು ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿ ಕಂಡಾಗ ಅಚ್ಚರಿಯಾಯಿತು. ಈ ಪುಸ್ತಕದ ಅಧ್ಯಾಯವೊಂದರಲ್ಲಿ ಕುತೂಹಲಕರ ವಿವರವೊಂದು ಬರುತ್ತದೆ. ತೇಜಸ್ವಿ ಒಮ್ಮೆ ಕುವೆಂಪು ಜೊತೆ ಕುಪ್ಪಳಿ ಬಳಿಯ ಇಂಗ್ಲಾದಿಗೆ ಹೋಗುತ್ತಾರೆ. ಆಗಿನ್ನೂ ತೇಜಸ್ವಿಯವರಿಗೆ ಗೋಪಾಲಗೌಡರ ಪರಿಚಯ ಇರಲಿಲ್ಲ. ಅವತ್ತು ಗೋಪಾಲಗೌಡರ ಬಗ್ಗೆ ಅಲ್ಲಿ ಒಂದು ‘ದೂರು’ ಕೇಳಿ ಬರುತ್ತದೆ. ಆಗಿನ್ನೂ ಗೋಪಾಲಗೌಡರ ಬಗ್ಗೆ ಹೆಚ್ಚು ಕೇಳಿರದಿದ್ದ ತೇಜಸ್ವಿಗೆ ಈ ವಿಚಿತ್ರ ‘ದೂರು’ ಕೇಳಿ ಅವರ ಬಗ್ಗೆ ಕುತೂಹಲ ಹುಟ್ಟುತ್ತದೆ. 

ಈ ಕುರಿತು ತೇಜಸ್ವಿ ಬರೆಯುತ್ತಾರೆ: ‘ಮಾನಪ್ಪನವರೂ, ವಿಜಯದೇವ ಅವರೂ ಅಣ್ಣನ ಜೊತೆ [ಕುವೆಂಪು ಜೊತೆ] ಮಾತಾಡುತ್ತಾ, ಗೋಪಾಲಗೌಡ ಚಳವಳಿಯಲ್ಲಿ ಹಾಗೂ ಇತರೆಡೆಗಳಲ್ಲಿ ಭಾಷಣ ಮಾಡುತ್ತಾ ನಿಮ್ಮ ‘ಕಲ್ಕಿ’, ‘ನೇಗಿಲಯೋಗಿ’ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಇದರಿಂದ ನನಗೆ ಗೋಪಾಲಗೌಡರ ಬಗ್ಗೆ ಕುತೂಹಲವೂ ಸ್ವಲ್ಪ ಸದಭಿಪ್ರಾಯವೂ ಪಾರಂಭವಾಯ್ತು... ಗೋಪಾಲಗೌಡ ಕಥೆ, ಕವನಗಳನ್ನು ಓದುವ ಮನುಷ್ಯನಾದರೆ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಸರಿ ಎಂದು ಅನ್ನಿಸಿತ್ತು.’  

ಇದಾದ ನಂತರದ ದಿನಗಳಲ್ಲಿ ತೇಜಸ್ವಿ-ಗೋಪಾಲಗೌಡರ ಗೆಳೆತನ ಬೆಳೆಯಿತು. ಸಮಾಜವಾದಿ ರಾಜಕಾರಣ ಚಿಂತನೆಗಳ ಸಂಗದಲ್ಲಿ ತೇಜಸ್ವಿಯವರ ಬರವಣಿಗೆಯ ದಿಕ್ಕು ಬದಲಾಯಿತು. ‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕನಲಕ್ಕೆ ಬರೆದ ‘ಹೊಸ ದಿಗಂತದೆಡೆಗೆ’ ಎಂಬ ಮುನ್ನುಡಿಯಲ್ಲಿ ಸ್ವತಃ ತೇಜಸ್ವಿ ಈ ಕುರಿತು ಬರೆದದ್ದು ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತ. ಇದೇ ರೀತಿ ಲಂಕೇಶ್ ಶಿವಮೊಗ್ಗದಲ್ಲಿ ಇಂಗ್ಲಿಷ್ ಮೇಷ್ಟರಾಗಿದ್ದಾಗ ಗೋಪಾಲಗೌಡ ಹಾಗೂ ಸಮಾಜವಾದಿಗಳ ಸಂಗ ತಮ್ಮ ನೋಟವನ್ನು ಬದಲಿಸಿದ್ದನ್ನು ಕುರಿತು ತಮ್ಮ ಆತ್ಮಚರಿತ್ರೆ `ಹುಳಿಮಾವಿನಮರ’ದಲ್ಲಿ ಬರೆಯುತ್ತಾರೆ:

‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’ 

ವ್ಯಕ್ತಿಯ ಅಸ್ವಸ್ಥತೆಗಳನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಿದ್ದ ಲಂಕೇಶರ ಕಥಾಲೋಕ ವ್ಯಕ್ತಿಯ ಮೂಲಕವೇ ಸಮಾಜಪರೀಕ್ಷೆಯತ್ತ ವ್ಯಾಪಕವಾಗಿ ಹೊರಳಿಕೊಂಡ ಘಟ್ಟ ಇದು. ಅದಕ್ಕೆ ಗೋಪಾಲಗೌಡರ ಸಂಗ ಕೂಡ ಕಾರಣವಾಗಿತ್ತು. 

ಗೋಪಾಲಗೌಡರು ಅವತ್ತು ಲೇಖಕರನ್ನು ಅಷ್ಟು ಹಚ್ಚಿಕೊಳ್ಳಲು ಕಾರಣವಿತ್ತು: ರಾಜಕಾರಣಿಗಳ ಪತನವನ್ನು ಕಂಡಿದ್ದ ಗೋಪಾಲಗೌಡರಿಗೆ ಸಾಹಿತಿಗಳ ಸಾಮಾಜಿಕ ಜವಾಬ್ದಾರಿಯ ಬಗ್ಗೆ, ಸಾಹಿತ್ಯ ಹಾಗೂ ಸಾಹಿತಿಗಳು ಜನರ ಮೇಲೆ ಬೀರಬಲ್ಲ ಪ್ರಭಾವದ ಬಗೆಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಗೋಪಾಲಗೌಡರೇ ಸ್ವತಃ ಹಾಡಿ ಮಂಡಿಸುತ್ತಿದ್ದ ಕುಮಾರವ್ಯಾಸ ಭಾರತದ ಜೊತೆಗೆ ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯಗಳ ಪರಿಚಯವೂ ಅವರಿಗಿತ್ತು. ಸಾಹಿತ್ಯದ, ಸಾಹಿತಿಗಳ ಪ್ರಭಾವದ ಬಗ್ಗೆ ಗೋಪಾಲಗೌಡರಿಗೆ ಇದ್ದ ನಿರೀಕ್ಷೆ ಕಾದಂಬರಿಕಾರ ತರಾಸು ಜೊತೆ ಅವರು ನಡೆಸಿದ ಒಂದು ಗಂಭೀರ ತಾತ್ವಿಕ ಚಕಮಕಿಯಲ್ಲಿ ವ್ಯಕ್ತವಾಗುತ್ತದೆ. ಈ ಚಕಮಕಿ ಕುರಿತು ತರಾಸು ಬರೆಯುತ್ತಾರೆ: 

‘ಗತಿಸಿದ ಮೈಸೂರು ಮಹಾರಾಜರ ಕಲಾಪ್ರಜ್ಞೆಯ ಬಗ್ಗೆ ನಾನು ಮಾತಾಡುತ್ತಿದ್ದೆ. ನಾನು ಈ ಮಾತಾಡುತ್ತಿರುವಾಗ ಗೋಪಾಲಗೌಡರು ಪಿ. ಕಾಳಿಂಗರಾಯರೊಡನೆ ಅಲ್ಲಿಗೆ ಬಂದರು. ರಾಜಶಾಹಿ ಎಂದರೆ ಗೋಪಾಲಗೌಡರ ರಕ್ತ ಕುದಿಯುತ್ತಿತ್ತು. ಅಂಥವರಿಗೆ ನಾನು ಮಹಾರಾಜರ ಬಗ್ಗೆ ಮೆಚ್ಚಿಗೆಯ ಮಾತಾಡಿದ್ದನ್ನು ಕೇಳಿ ವಿಪರೀತ ಸಿಟ್ಟು ಬಂತು. ಎಲ್ಲ ಹಂಗು ಬಿಟ್ಟು ನನ್ನನ್ನು ಮೂದಲಿಸಿದರು. ‘ನೀನೊಬ್ಬ ಹಿಪೋಕ್ರೇಟ್’ ಎನ್ನುವವರೆಗೂ ಮಾತು ಬೆಳೆಯಿತು. ಕೈ ಕೈ ಕಲೆಯಬೇಕಾಗಿತ್ತು. ಮಧ್ಯದ ಸ್ನೇಹಿತರ ಪ್ರಯತ್ನದಿಂದ ಅದು ತಪ್ಪಿ, ನನ್ನ ಮೇಲೆ ಕೋಪ ಮಾಡಿಕೊಂಡೇ ಗೋಪಾಲಗೌಡರು ಶಾಸಕರ ಭವನಕ್ಕೆ ಹೋದರು...’  

ಗೋಪಾಲಗೌಡರು ಮಾರನೆಯ ದಿನ ಬೆಳಗ್ಗೆಯೇ ತರಾಸು ಅವರನ್ನು ಹುಡುಕಿಕೊಂಡು ಬಂದರು. ‘ನಿನ್ನೆ ರಾತ್ರಿ ಆದದ್ದನ್ನು ಮರೆತುಬಿಡಿ’ ಎಂದು ತರಾಸುಗೆ ಹೇಳುತ್ತಲೇ ಗೋಪಾಲಗೌಡರು ಹೇಳಿದ ಅವರ ಆಳದ ಮಾತುಗಳು ಎಲ್ಲ ಕಾಲದ ಲೇಖಕ ಲೇಖಕಿಯರಿಗೂ, ಅಧ್ಯಾಪಕ ಅಧ್ಯಾಪಕಿಯರಿಗೂ ಅನ್ವಯವಾಗುವಂತಿವೆ: ‘ಮಾಮೂಲಿ ಜನ ಯಾರ ಬಗ್ಗೆ ಏನು ಮಾತಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಯೋಚನೆ ಇಲ್ಲ. ನೀವು ಸಾಹಿತಿಗಳು. ನಿಮ್ಮ ಮಾತಿಗೆ ಜನ ಬೆಲೆ ಕೊಡುತ್ತಾರೆ. ಹಾಗಿರುವಾಗ ಒಂದು ಕಡೆ ರಾಜಶಾಹಿಯ ವಿರುದ್ಧ ಮಾತನಾಡಿ, ಮತ್ತೊಂದು ಕಡೆ ರಾಜರನ್ನು ಹೊಗಳಿದರೆ ನಮ್ಮ ದಡ್ಡ ಜನ ನೀವು ಹೊಗಳಿದ್ದನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಬೈದುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಈ ಕೆಟ್ಟ ಪದ್ಧತಿಗಳ ಬಗ್ಗೆ ನೀವು ಯಾವತ್ತೂ ಒಳ್ಳೆಯ ಮಾತನ್ನು ಆಡಬಾರದು. ಸತ್ತ ಮೇಲಷ್ಟೇ ಅದಕ್ಕೆ ಬೊಜ್ಜ ಮಾಡಬೇಕು. ನೀವು ಸಾಹಿತಿಗಳು ಭಾರೀ ಅಪಾಯದ ಜನ; ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ನನಗೆ ಎಷ್ಟು ಪ್ರೀತಿಯೋ, ಅಷ್ಟೇ ಭಯ.’ 

ಗೋಪಾಲಗೌಡರಾಗಲೀ, ಅವರ ಗುರು ರಾಮಮನೋಹರ ಲೋಹಿಯಾ ಆಗಲೀ ಸಾಹಿತಿಗಳು ತಮ್ಮ ಪಕ್ಷದ ಅನುಯಾಯಿಗಳಾಗಬೇಕೆಂದಾಗಲೀ, ಪಕ್ಷದ ತುತ್ತೂರಿ ಊದಬೇಕೆಂದಾಗಲೀ ಎಂದೂ ಕೇಳಿದವರಲ್ಲ. ಲೋಹಿಯಾರಿಂದ ಪ್ರಭಾವಿತರಾದ ಖ್ಯಾತ ಮರಾಠಿ ಲೇಖಕ ಪು.ಲ. ದೇಶಪಾಂಡೆ ಈ ಕುರಿತು ಬರೆಯುವ ಮಾತು: ‘ಲೋಹಿಯಾರ ರಾಜಕೀಯ ಪಕ್ಷದೊಡನೆ ನನಗೆ ಯಾವ ಸಂಬಂಧವೂ ಇರಲಿಲ್ಲ. ಅದು ಇರಬೇಕೆಂದು ಅವರು ತಪ್ಪಿಯೂ ಕೂಡ ಸೂಚಿಸಲಿಲ್ಲ. ಅವರ ಕಲಾಭಿರುಚಿ ಉನ್ನತ ಮಟ್ಟದ್ದಾಗಿತ್ತು. ಆದ್ದರಿಂದ ಕಲಾವಿದರನ್ನು ಪಕ್ಷದ ಕಿನ್ನರಿ ಬಾರಿಸಲು ಹಚ್ಚುವ ಕಲಾಹೀನ ವಿಚಾರ ಅವರ ಮನಸ್ಸನ್ನು ಸೋಕುವುದೂ ಸಾಧ್ಯವಿರಲಿಲ್ಲ.’

ಇಪ್ಪತ್ತನೆಯ ಶತಮಾನದ ಅರವತ್ತರ ದಶಕದ ಹೊತ್ತಿಗಾಗಲೇ ಲೋಹಿಯಾ ದೇಶದ ಮಹತ್ವದ ಚಿಂತಕರಾಗಿ, ಧೀಮಂತ ವಿರೋಧಿ ನಾಯಕರಾಗಿ ರೂಪುಗೊಂಡಿದ್ದರು. ಸಾಮಾಜಿಕ-ರಾಜಕೀಯ ಕಾಳಜಿಗಳ ಚಿಂತಕರು, ಪತ್ರಕರ್ತರು, ಕಲಾವಿದರು, ಲೇಖಕ ಲೇಖಕಿಯರು, ಹೊಸ ತಲೆಮಾರಿನ ರಾಜಕಾರಣಿಗಳು ಲೋಹಿಯಾರ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದರು. ಆಗ ಲೋಹಿಯಾರತ್ತ ತಿರುಗಿದ ಆ ಕಾಲದ ಬಹುಮುಖ್ಯ ಸೃಜನಶೀಲ ಲೇಖಕರಿದ್ದಾರೆ: ಧರ್ಮವೀರ ಭಾರತಿ, ಶ್ರೀಕಾಂತ ವರ್ಮ, ಪು. ಲ. ದೇಶಪಾಂಡೆ, ತೇಜಸ್ವಿ, ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಲೋಹಿಯಾ ವಿವರಿಸುತ್ತಿದ್ದ ಭಾರತೀಯ ಸಮಾಜವಾದದ ಮಾದರಿ ಹಾಗೂ ಬರಹಗಾರರ ಸ್ವಾತಂತ್ರ್ಯದ ಬಗ್ಗೆ ಲೋಹಿಯಾಗಿದ್ದ ಗೌರವ, ನಂಬಿಕೆ; ಲೋಹಿಯಾರ ಸಮಾನತಾವಾದಿ ರಾಜಕಾರಣ, ಉದಾರವಾದಿ ನೋಟ; ಹಾಗೂ ಸಂಸ್ಕೃತಿ, ಸಮಾಜಗಳ ಹೊಸ ವ್ಯಾಖ್ಯಾನಗಳು ಅಂದಿನ ನೂರಾರು ಲೇಖಕ, ಲೇಖಕಿಯರನ್ನು ಅವರತ್ತ ಸೆಳೆದಂತಿದೆ. ಸ್ವತಃ ಲೋಹಿಯಾ ಗಂಭೀರ ಲೇಖಕರಾಗಿದ್ದುದು ಕೂಡ ಈ ಸೆಳೆತಕ್ಕೆ ಮತ್ತೊಂದು ಕಾರಣವಾಗಿತ್ತು.  

ಇಂಥ ಸಂಬಂಧದ ಪರಂಪರೆಯಿರುವ ದೇಶದಲ್ಲಿ ಇವತ್ತು ಇಡೀ ಭಾರತದಲ್ಲಿ ರಾಜಕಾರಣಿಗಳು ಇಷ್ಟೊಂದು ಅಸೂಕ್ಷ್ಮವಾಗಿ ಮಾತಾಡುತ್ತಿರುವ ರೀತಿಗೆ ತಂತಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯದಲ್ಲಿ ಭಾಷೆ, ಚಿಂತನೆಗಳು ಬಳಕೆಯಾಗುವ ರೀತಿಯ ಬಗೆಗಿನ ಅವರ ಸಂಪೂರ್ಣ ಅಜ್ಞಾನ ಕೂಡ ಒಂದು ಕಾರಣವಿರಬಹುದು, ಅಲ್ಲವೆ?

ಇಷ್ಟಾಗಿಯೂ, ಈ ಸತ್ಯ ರಾಜಕಾರಣಿಗಳಿಗಷ್ಟೇ ಅನ್ವಯಿಸುತ್ತದೆ ಎಂದು ಪ್ರಲಾಪಿಸಲಾಗದು. ಗಂಭೀರ ಸಾಹಿತ್ಯದ ಸಂಪರ್ಕ ಕಳೆದುಕೊಂಡು ಜಡರಾಗತೊಡಗುವ ಲೇಖಕ ಲೇಖಕಿಯರು, ಅಧ್ಯಾಪಕ ಅಧ್ಯಾಪಕಿಯರು, ಪತ್ರಕರ್ತರು, ಲಾಯರುಗಳು, ಕಲಾವಿದರು ಎಲ್ಲರಿಗೂ ಈ ಸತ್ಯ ಅನ್ವಯಿಸಬಲ್ಲದು. ಹಲವು ಬಗೆಯ ವೃತ್ತಿಗಳಲ್ಲಿ ತೊಡಗಿರುವ ಮಂದಿ ಸುಲಭ ಮನರಂಜನೆಯ ಮೊಬೈಲ್ ಬಿಟ್ಟು ಕೊನೇ ಪಕ್ಷ ರಾತ್ರಿ ಒಂದೇ ಒಂದು ಗಂಟೆ ಕಾಲ ಉತ್ತಮ ಸಾಹಿತ್ಯದ ಸಂಗದಲ್ಲಿದ್ದರೆ ಸಾಕು: ಅದು ಭಾಷೆ, ನಡವಳಿಕೆ, ಚಿಂತನೆಗಳ ಸೂಕ್ಷ್ಮತೆಗಳನ್ನು ಕಲಿಸಬಲ್ಲದು ಎಂಬುದರ ಬಗ್ಗೆ ಅನುಮಾನವಿರಬೇಕಾಗಿಲ್ಲ. ಈ ಸರಳ ಸತ್ಯವನ್ನು ಅನುಮಾನಿಸುವ ಸಿನಿಕತೆ, ವಿತಂಡವಾದಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ! 

blog
01 Feb 2026 ಕೊಂದವರುಳಿಯುವರೆ?

 ಭಾಗ: ೧

ಬರೆವ ಬದುಕಿನ ವ್ಯಕ್ತಿಯೊಬ್ಬ ಮತ್ತೆ ಮತ್ತೆ ಕೆಲವು ವಸ್ತುಗಳಿಗೆ ಮರಳುವುದು ಸಾಮಾನ್ಯ. ಕತೆ, ಅಂಕಣ, ನಾಟಕ, ಕಾವ್ಯ, ರಾಜಕೀಯ ವಿಶ್ಲೇಷಣೆ… ಹೀಗೆ ಹಲವು ಪ್ರಕಾರಗಳ ಮೋಹನ ಮುರಳಿಗಳು ಕರೆಯುವ ನನ್ನಂಥವನಿಗಂತೂ ಈ ಅನುಭವ ಇನ್ನಷ್ಟು ಸಾಮಾನ್ಯ. ನನ್ನ ಕೆಲವು ಕತೆಗಳು ಪ್ರಕಟವಾದ ಹತ್ತಾರು ವರ್ಷಗಳ ನಂತರ ಕೂಡ ಈ ಕತೆಗಳು ಬೆಳೆದ ವಿಸ್ಮಯವನ್ನು ನನ್ನ ೨೦೨೩ರ ಕಥಾಸಂಕಲನ (ಪಲ್ಲವ ಪ್ರಕಾಶನ) ‘ಕಥಾನಂತರ’ದಲ್ಲಿ ಶೋಧಿಸಲೆತ್ನಿಸಿದ್ದೆ…

ಇದನ್ನೆಲ್ಲ ಹೇಳಬೇಕಾಗಿ ಬಂದಿದ್ದು ಈಚೆಗೆ ಎರಡು ಹಳೆಯ ಪ್ರಶ್ನೆಗಳು-ಎರಡು ಹಳೆಯ ವಸ್ತುಗಳು- ಮತ್ತೆ ನನ್ನೊಳಗೆ ಸುತ್ತತೊಡಗಿದ್ದರಿಂದ.

ಒಂದು:  ನಮ್ಮ ಅರಿವು, ಜ್ಞಾನ, ತಿಳಿವಳಿಕೆ ಇವೆಲ್ಲ ಸದಾ ಯಾಕೆ ನಮ್ಮ ನೆನಪಿಗೆ ಬಂದು ನಮ್ಮ ಕೈ ಹಿಡಿಯುವುದಿಲ್ಲ?  

ಎರಡು: ನಾವು ಮಾತಾಡುವಾಗ ಅನೇಕ ಸಲ ಮಾತಾಡುವಾಗ ನ್ಯಾಯವಾದ ಅಭಿಪ್ರಾಯ ಹೇಳದೆ ನಮ್ಮ ಪೂರ್ವಗ್ರಹಗಳನ್ನೇ ಬಿತ್ತುತ್ತಿರುತ್ತೇವೆಯೆ? ನಾವು ನಮ್ಮೆದುರಿಗಿರುವ ಮಾನವಜೀವಿಯೊಂದು ಕಸದ ಬುಟ್ಟಿ ಎಂದುಕೊಂಡು ಅವಳ ಅಥವಾ ಅವನ ತಲೆಗೆ ನಮ್ಮ ತಲೆಯ ಕಸವನ್ನು ತುಂಬುತ್ತಿರುತ್ತೇವೆಯೇ? ಶೇಕ್‌ಸ್ಪಿಯರನ ‘ಒಥೆಲೊ’ ನಾಟಕದ ಇಯಾಗೊ  ಇಂಥವರ ಮೂಲ ಮಾದರಿಯಲ್ಲವೆ! 

ಈ ಥರದ ಪ್ರಶ್ನೆಗಳು ಈಚೆಗೆ ಇಂಥ ಪೂರ್ವಗ್ರಹ ಬಿತ್ತನೆಗಾರನೊಬ್ಬ ಕಣ್ಮುಂದೆ ಬಂದಾಗ ಮತ್ತೆ ಎದುರಾದವು. ಈ ಥರದ ‘ಪೂರ್ವಗ್ರಹ ಬಿತ್ತನೆಯ ಕಾಯಂ ಕಾರ್ಮಿಕ’ನ ಬಗ್ಗೆ ನಾನು ೧೯೯೯ರಲ್ಲಿ ‘ಲಂಕೇಶ್ ಪತ್ರಿಕೆ’ಯ ಅಂಕಣದಲ್ಲಿ ‘ಅವರ ಹೊರೆ’ ಎಂಬ ಟಿಪ್ಪಣಿ ಬರೆದಿದ್ದು ಕೂಡ ನೆನಪಾಯಿತು.  ಅದು ಹಲವು ವ್ಯಕ್ತಿಗಳ ಎಳೆಗಳು ಸೇರಿ ಮೂಡಿದ್ದ ಒಂದು ಸಂಕೀರ್ಣ ವ್ಯಕ್ತಿತ್ವ ಕೂಡ. ಇದನ್ನು ಆಗ ಓದಿದ ಗೆಳೆಯನೊಬ್ಬ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಅತಿಯಾಗಿ ತಲೆದೂಗಿ ಮೆಚ್ಚಿದ್ದ. ಈ ಮೆಚ್ಚುಗೆಯ ನಂತರ ಏನಾಯಿತು ಎಂಬ ಕತೆ ಹೇಳುವ ಮುನ್ನ ’ಲಂಕೇಶ್ ಪತ್ರಿಕೆ’ಗೆ ಬರೆದ ಟಿಪ್ಪಣಿಯಲ್ಲಿದ್ದ ಕೇಂದ್ರ ವ್ಯಕ್ತಿಯ ಜೊತೆಗಿನ ಪ್ರಶ್ನೋತ್ತರಗಳ ಸ್ಯಾಂಪಲ್‌ಗಳನ್ನು, ಗ್ರಹಿಕೆಗಳನ್ನು ಮುಂದಿನ ಭಾಗದಲ್ಲಿ ಕೊಟ್ಟಿರುವೆ:

ಭಾಗ: ೨

‘ಬಾಲ್ಯಕಾಲದ ಗೆಳೆಯ ರಾಮಚಂದ್ರ ಸಿಕ್ಕಿದ್ದನೆ?’
 ‘ಕಳ್ಳ! ಅವನೆಲ್ಲಿ ಸಿಗುತ್ತಾನೆ?' 
‘ನಮ್ಮ ಮ್ಯಾಥಮ್ಯಾಟಿಕ್ಸ್ ಮೇಷ್ಟರ ಮನೆ ಈಗ ಎಲ್ಲಿದೆ?’
 ‘ಆ ಖದೀಮ ಅವರಿವರ ದುಡ್ಡು ಹೊಡೆದು ಊರ ಹೊರಗೆ ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ!’ 
‘ಊರಲ್ಲಿ ಉಳಿದವರು ಹೇಗಿದ್ದಾರೆ?'  
ಈ ಪ್ರಶ್ನೆಗಂತೂ ಅವನು ಪ್ರತಿಯೊಬ್ಬನಿಗೂ ‘ದುಷ್ಟ’, ‘ಕೇಡಿ’, ‘ನೀಚ’ ಹರಾಮ್’ ಮುಂತಾದ ವಿಶೇಷಣಗಳನ್ನು ಕೊಟ್ಟೇ ಅವರ ಕತೆ ಹೇಳಲು ಶುರು ಮಾಡುತ್ತಿದ್ದ!

ಬಹುಕಾಲ ಕಾಣೆಯಾಗಿದ್ದ ಈ ವ್ಯಕ್ತಿ ಮತ್ತೆ ಪ್ರತ್ಯಕ್ಷನಾದಾಗ ಮೇಲೆ ಹೇಳಿದ್ದೆಲ್ಲ ನನ್ನೆದುರು ಫ್ಲ್ಯಾಷ್‌ಬ್ಯಾಕಿನಂತೆ ಮೂಡತೊಡಗಿತು: ‘ಊರಲ್ಲೇನು ವಿಶೇಷ?' ಎಂದು ನಾನು ಕೇಳುವುದನ್ನೇ ಕಾದು ಕೂತಿದ್ದವನಂತೆ, ‘ಎಲ್ಲರೂ ಕಳ್ಳರು ಕಣಯ್ಯ!’ ಎಂದು ಅವನು ಶುರು ಮಾಡಿದ. ನನಗೆ ಭಯ ಶುರುವಾಯಿತು. ಕಾರಣ, ಹತ್ತಾರು ವರ್ಷ ಕಾಲ ಅವನು ಕೊಟ್ಟ ಕನ್ನಡಕದ ಮೂಲಕ ನೂರಾರು ಜನರನ್ನು ನೋಡಿ, ಅವರೆಲ್ಲ ಖಳರೆಂದು ತೀರ್ಮಾನಿಸಿದ್ದೆ; ಇದು ನನಗೆ ಹೊಳೆದದ್ದು ನಂತರದ ವರ್ಷಗಳಲ್ಲಿ. ಆದರೆ ಕಳೆದ ಇಪ್ಪತೈದು ವರ್ಷಗಳಿಂದ ಅವನು ಮಾತ್ರ ಬದಲಾದಂತಿಲ್ಲ. ‘ಪೂರ್ವಗ್ರಹ ಬಿತ್ತನೆ’ಯ ತನ್ನ ಕಾಯಂ ಕೆಲಸವನ್ನು ಅವನು ಆರಾಮಾಗಿ ಮುಂದುವರಿಸಿದ್ದ!

ದುರಂತವೆಂದರೆ, ಅವನ ಪೂರ್ವಗ್ರಹ ಬಿತ್ತನೆಯ ಕಾಯಂ ಕಸುಬು ನನಗೆ ಗೊತ್ತಾಗುವ ಹೊತ್ತಿಗೆ ಹತ್ತಾರು ವರ್ಷಗಳು ಉರುಳಿದ್ದವು! ಅದು ತಿಳಿದದ್ದು ಕೂಡ ಆಕಸ್ಮಿಕ;  ಅದೂ ‘ದುಡ್ಡು ಹೊಡೆದು ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ’ ಎಂದು ಅವನು ವರ್ಣಿಸಿದ್ದ ಮ್ಯಾಥಮ್ಯಾಟಿಕ್ಸ್ ಮೇಷ್ಟ್ರು ಪುಟ್ಟ ಮನೆಯಲ್ಲಿ ತೀರಾ ಸಾಧಾರಣವಾಗಿ ಬದುಕುತ್ತಿದ್ದನ್ನು ನಾನೇ ಕಣ್ಣಾರೆ ಕಂಡ ನಂತರ. ಈ ನಡುವೆ ಅವನ ಪೂರ್ವಗ್ರಹ ಬಿತ್ತನೆಯಿಂದಾಗಿ ಎಷ್ಟೊಂದು ಜನ ನನಗೆ ವಿಕೃತರಾಗಿ ಕಂಡಿದ್ದರು; ಎಷ್ಟೊಂದು ಜನರ ಬಗ್ಗೆ ನನ್ನೊಳಗೇ ಅನಗತ್ಯ ಅಸಹ್ಯ ಮೂಡಿ ಅವರನ್ನು ಸುಮ್ಮ ಸುಮ್ಮನೆ ಹೀಗಳೆದಿದ್ದೆ!

ಪೂರ್ವಗ್ರಹ ಬಿತ್ತನೆಯ ವಿಕೃತರು ನಮಗರಿವಿಲ್ಲದಂತೆಯೇ ನಮ್ಮ ಜೀವಕೋಶಗಳಿಗೆ ಎಂಥ ಮಾರಕಹಾನಿ ಮಾಡಿಬಿಟ್ಟಿರುತ್ತಾರೆ ಎಂಬುದು ನನಗೆ ಸರಿಯಾಗಿ ಅರ್ಥವಾದದ್ದು ಮರಣಶಯ್ಯೆಯಲ್ಲಿದ್ದ ಸಾಹಿತಿಯೊಬ್ಬರನ್ನು ಕಂಡಾಗ. ‘ಮರಣಶಯ್ಯೆ' ಎಂದರೇನೆಂಬುದು ಸರಿಯಾಗಿ ಅರಿವಿಗೆ ಬಂದದ್ದು ಕೂಡ ಆಗಲೇ. ಆ ಸಾಹಿತಿ ಮುದುಡಿಕೊಂಡು ಹಿಡಿಯಷ್ಟಾಗಿ ಮಲಗಿದ್ದರು. ಅವರನ್ನು ಈಚಿನ ವರ್ಷಗಳಲ್ಲಿ ಭೇಟಿಯಾಗಿರಲಿಲ್ಲ. ಭೇಟಿಯಾಗದಿರಲು ವಿಚಿತ್ರ ಕಾರಣಗಳಿದ್ದವು. ಈತ ಮಹಾ ಹೊಟ್ಟೆಕಿಚ್ಚಿನ ಮನುಷ್ಯನೆಂದು ಮಿತ್ರರೊಬ್ಬರು ಹೇಳಿದ್ದರು. ಅವನು ಯಾರ‍್ಯಾರದೋ ಪುಸ್ತಕಗಳನ್ನು ತನ್ನ ಹೆಸರಲ್ಲಿ ಅಚ್ಚು ಹಾಕಿಸಿಕೊಳ್ಳುತ್ತಾನೆಂದೂ ಹೇಳಿದ್ದರು. ಈತ ಫೋರ್ಜರಿ ಮಾಡಿದ್ದಾನೆಂದು ಕೂಡ ಅವರೇ ವದಂತಿ ಹಬ್ಬಿಸಿದ್ದರು. ಇವತ್ತು ಮರಣಶಯ್ಯೆಯಲ್ಲಿದ್ದ, ನೆರೆತ ಗಡ್ಡದ ಆ ಮುಖದಲ್ಲಿ ಆ ಯಾವುದರ ಕಲೆಯೂ ಕಾಣುವಂತಿರಲಿಲ್ಲ...

ಸಾವಿನ ಹಾಸಿಗೆಯಲ್ಲಿ ಮಲಗಿದವರ ಎದುರಿಗೆ ಕೂತಾಗ ಕೆಲವು ಭೀಕರ ಸತ್ಯಗಳು ಕಾಣತೊಡಗುತ್ತವೇನೋ. ಆಗ ಥಟ್ಟನೆ, ಈ ವ್ಯಕ್ತಿಯ ಬಗ್ಗೆ ಈ ತನಕ ನಾನು ಮತ್ತೊಬ್ಬನಿಂದ ಕೇಳಿರುವ ಮಾತುಗಳು ಸುಳ್ಳಾಗಿದ್ದರೆ... ಎನ್ನಿಸಿ ಕಸಿವಿಸಿ ಮುತ್ತಿಕೊಳ್ಳತೊಡಗಿತು. ಅವೆಲ್ಲ ಸುಳ್ಳಾಗಿದ್ದರೂ, ನಿಜವಾಗಿದ್ದರೂ, ಸಾಯುತ್ತಿರುವ ವ್ಯಕ್ತಿಗೆ ಅದರಿಂದೆಲ್ಲ ಏನೂ ಆಗಬೇಕಿರಲಿಲ್ಲ. ಆದರೆ ಪಾಪಪ್ರಜ್ಞೆ ಕಾಡತೊಡಗಿದ್ದು ನನಗೆ; ಈ ವ್ಯಕ್ತಿಯ ಬಗ್ಗೆ ಯಾರೋ ಹೊರಿಸಿದ ಹೊರೆಯನ್ನೇ ಹೊತ್ತು, ಅದನ್ನು ಹೆಗಲಿನಿಂದ ಕೆಳಗಿಳಿಸದೆ ಇಷ್ಟು ವರ್ಷ ಓಡಾಡಿರುವ ನನಗೆ; ನನ್ನಿಡೀ ಜೀವನದಲ್ಲಿ ಈ ವ್ಯಕ್ತಿಯ ಜೊತೆ ಸರಿಯಾಗಿ ಅರ್ಧ ಗಂಟೆ ಕೂಡ ಮಾತಾಡದೆ ಯಾರೋ ಎಳೆದುಕೊಟ್ಟ ಗೆರೆಗಳನ್ನೆಲ್ಲ ಕೂಡಿಸಿಕೊಂಡು ಈ ವ್ಯಕ್ತಿಯೊಬ್ಬ ಖಳನೆಂಬಂತೆ ಚಿತ್ರಿಸಿಕೊಂಡಿದ್ದ ನನಗೆ...

ನನಗೆ ನಿಜಕ್ಕೂ ಶಾಕ್ ಆದದ್ದು- ನಾವು ಹತ್ತಾರು ವರ್ಷ ಬೇರೆಯವರು ಕೊಟ್ಟ ಎರಕದಲ್ಲೇ ಇತರರ ವ್ಯಕ್ತಿತ್ವಗಳ ಅಚ್ಚುಗಳನ್ನು ಕಣ್ಣುಮುಚ್ಚಿಕೊಂಡು ತೆಗೆಯುತ್ತಿರುತ್ತೇವೆ ಅನ್ನಿಸಿದಾಗ; ಹಿಂದೆ ಮುಂದೆ ನೋಡದೆ ಅದನ್ನೇ ಸತ್ಯವೆಂದು ಇನ್ನೊಬ್ಬರಿಗೂ ಹಂಚುತ್ತಿರುತೇವೆ ಎಂಬುದು ಹೊಳೆದಾಗ. ಬಂಡಾಯ ಸಾಹಿತಿಯೊಬ್ಬರ ಅನುಯಾಯಿಯೊಬ್ಬ ಸುಮಾರು ಇಪ್ಪತ್ತು ವರ್ಷಗಳ ಕಾಲ ಅನಂತಮೂರ್ತಿಯವರ ಪುಸ್ತಕಗಳನ್ನೇ ಓದಿರಲಿಲ್ಲವಂತೆ. ಕಾರಣ: ಅವನ ಬಂಡಾಯ ಗುರುಗಳು ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಇಷ್ಟಪಡುತ್ತಿರಲಿಲ್ಲ. ಕನ್ನಡ ನಾಟಕಗಳ ಬಗ್ಗೆ ಡಾಕ್ಟರೇಟ್ ಪ್ರಬಂಧ ಬರೆದ ವಿದ್ಯಾರ್ಥಿಯೊಬ್ಬ ತನ್ನ ಥೀಸಿಸ್ಸಿನಲ್ಲಿ ಎಲ್ಲೂ ಲಂಕೇಶರ ನಾಟಕಗಳನ್ನೇ ಚರ್ಚಿಸದ ಹಾಗೆ ಆತನ ಗೈಡ್ ಬಹಳ ಜಾಗರೂಕತೆಯಿಂದ ‘ಮಿಸ್‌ಗೈಡ್’ ಮಾಡಿರುವುದನ್ನು ಕುರಿತು ಆ ಥೀಸಿಸ್ ಮೌಲ್ಯಮಾಪನ ಮಾಡಿದ ಪ್ರೊಫೆಸರೊಬ್ಬರು ಹೇಳಿದ್ದರು. ನಾನೇ ನೋಡಿದಂತೆ, ಎಷ್ಟೋ ಜನ ಮೇಷ್ಟ್ರುಗಳು, ನಾಯಕರು ತಮ್ಮ ಅನುಯಾಯಿಗಳೆಂದರೆ ತಮ್ಮ ವಿಷ, ಪೂರ್ವಗ್ರಹಗಳನ್ನು ತುಂಬುವ ಕಸದ ಬುಟ್ಟಿಗಳೆಂದು ಖಚಿತವಾಗಿ ನಂಬಿಕೊಂಡಂತೆ ಕಾಣುತ್ತದೆ.

ದಿನನಿತ್ಯದ ಚಟುವಟಿಕೆಗಳಲ್ಲೇ ಹೀಗೆ ಅವರಿವರ ಹೊರೆ ಹೊತ್ತು ಜೀವಮಾನ ಸವೆಸುವ ನಾವು ಎಂಥ ಹೊರಬರಲಾಗದ ಜಾಲದಲ್ಲಿ ಸಿಕ್ಕಿದ್ದೇವೆ ಎನ್ನುವುದು ಸರಿಯಾಗಿ ಗೊತ್ತಾಗುವುದು ನಮ್ಮ ಟೆಲಿವಿಷನ್, ಪತ್ರಿಕೆಗಳು ಹಾಗೂ ಧಾರ್ಮಿಕ, ರಾಜಕೀಯ ನಾಯಕರನ್ನು ಕಂಡಾಗ. ತಮ್ಮ ಬಾಯಿಗೆ ಬಂದದ್ದನ್ನೇ ಶಾಶ್ವತ ಸತ್ಯವೆಂಬಂತೆ ಘೋಷಿಸುವ ಟೆಲಿವಿಷನ್ ಮಾತುಗಾರರು, ಸುಳ್ಳು ಬರೆಯುವುದನ್ನೇ ರೂಢಿ ಮಾಡಿಕೊಂಡ ಪತ್ರಕರ್ತರು, ತಮ್ಮನ್ನು ಹೊಗಳದವರನ್ನು, ಪ್ರಶಸ್ತಿ ಕೊಡದವರನ್ನು ಬಯ್ಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಲೇಖಕರು.... ಸದಾ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವುದನ್ನೇ ಜೀವನವಾಗಿಸಿಕೊಂಡಿರುವ ಕೋಮುವಾದಿಗಳು, ಜಾತಿವಾದಿಗಳು... 

ಇಂಥವರೆಲ್ಲ ಸೇರಿ ಜನರಲ್ಲಿ ರೂಪಿಸಿರಬಹುದಾದ ಅಭಿಪ್ರಾಯಲೋಕ ಎಷ್ಟು ನರಕಸದೃಶವಾದುದು ಎಂಬುದನ್ನು ನೆನೆದರೆ ದಿಗ್ಭ್ರಮೆಯಾಗುತ್ತದೆ. ಅದಕ್ಕಿಂತ ಹೆಚ್ಚು ದಿಗ್ಭ್ರಮೆಯಾಗುವುದು ‘ಪೂರ್ವಗ್ರಹ ಬಿತ್ತನೆ’ಯನ್ನೇ ತಮ್ಮ ಜೀವಮಾನವಿಡೀ ಮಾಡುವ ವ್ಯಕ್ತಿಗಳು ತಮ್ಮೊಳಗೇ ಸೃಷ್ಟಿಸಿಕೊಂಡಿರುವ ಭೀಕರ ನರಕ ಎಂಥದೆಂಬುದನ್ನು ನೆನೆಸಿಕೊಂಡಾಗ! 
-ಇವು ಮೇಲೆ ಹೇಳಿದ ೧೯೯೮ರ ಲೇಖನದ ಕೆಲವು ಭಾಗಗಳು. 

ಭಾಗ:೩

ಅಪ್ ಡೇಟ್:  ಸದರಿ ಲೇಖನವನ್ನು ಓದಿದ್ದ ಗೆಳೆಯನೊಬ್ಬ ಅದರಲ್ಲಿದ್ದ ಪೂರ್ವಗ್ರಹಬಿತ್ತನೆ ಕುರಿತ ಗ್ರಹಿಕೆಗಳನ್ನು ಬಹುವಾಗಿ ಒಪ್ಪಿದ್ದನೆಂದು ಹೇಳಿದೆನಷ್ಟೆ? ‘ಅದು ನನ್ನ ಕಣ್ಣು ತೆರೆಸಿತು’ ಎಂದು ಕೂಡ ಆತ ಹೇಳಿದ್ದ. ಅದೆಲ್ಲ ನಿಜವಿರಬಹುದು. ವಿಚಿತ್ರವೆಂದರೆ, ಈತ ಕೂಡ ಮುಂದೆ ಬಹು ಕಾಲ ನಮ್ಮ ಅನೇಕ ಮಿತ್ರರ ಬಗ್ಗೆ ಇದೇ ಬಗೆಯ ಪೂರ್ವಗ್ರಹ ಬಿತ್ತನೆಯ ಕೆಲಸ ಮಾಡಿದ್ದು ಈಚೆಗೆ ಕಂಡು ಬಂದಾಗ ಬೆಚ್ಚಿದೆ.

ಇದು ನಿಜಕ್ಕೂ ನನ್ನಲ್ಲಿ ವಿಚಿತ್ರ ತಳಮಳ ಹುಟ್ಟಿಸಿತು. ಪೂರ್ವಗ್ರಹಗಳನ್ನು ಬಿತ್ತುವವರ ಬಗ್ಗೆ ಒಂದು ‘ತಾತ್ವಿಕ’ ಲೇಖನ ಬರೆದವನಿಗಾಗಲೀ, ಆ ಲೇಖನದ ಗ್ರಹಿಕೆಗಳನ್ನು ಒಪ್ಪಿ ಮೆಚ್ಚಿದವನಿಗಾಗಲೀ ‘ಜ್ಞಾನೋದಯ’ ಎನ್ನುವುದು ಅಷ್ಟು ಸುಲಭವಲ್ಲ ಎಂಬ ಹೊಸ ಜ್ಞಾನೋದಯ ಈ ಅನುಭವದಿಂದ ಮೂಡತೊಡಗಿತು! 

ಮೊನ್ನೆ ಈ ಥರದ ಪೂರ್ವಗ್ರಹ ಬಿತ್ತನೆಯ ಬಗ್ಗೆ ಕತೆಗಾರ ಮಿತ್ರರೊಬ್ಬರ ಜೊತೆ ಮಾತಾಡುತ್ತಿದ್ದಾಗ, ಇಂಥ ಮತ್ತೊಬ್ಬ ಪೂರ್ವಗ್ರಹ ಬಿತ್ತನೆಕಾರನ ಉದಾಹರಣೆ ಎದುರಾಯಿತು! ಈ ಸಲ ಏನಾಯಿತೆಂದರೆ, ನಾನೂ, ಈ ಕತೆಗಾರ ಮಿತ್ರರೂ ಆ ಪೂರ್ವಗ್ರಹ ಬಿತ್ತನೆಯ ಹೊಸ ವ್ಯಕ್ತಿಯ ಮಿಕಗಳಾಗಿದ್ದೆವು! ಅಂದರೆ, ಲೋಕದಲ್ಲಿ ಇಂಥ ಮಹನೀಯರದೇ ಒಂದು ಸಿದ್ಧ ಮಾದರಿ ಇರುವಂತಿದೆ. ಯಾವುದೇ ಘಟನೆ ಇರಲಿ, ವ್ಯಕ್ತಿಯಿರಲಿ, ಇವರ ವರ್ಷನ್ ಸದಾ ಸಿದ್ಧವಿರುತ್ತದೆ! ಅದೂ ನಿಜದ ತಲೆಯ ಮೇಲೆ ಹೊಡೆದಂತೆ! 

ಅದೇನೇ ಇರಲಿ, ಪೂರ್ವಗ್ರಹ ಬಿತ್ತನೆಗಾರರು ಸೃಷ್ಟಿಸುವ ನರಕಕ್ಕಿಂತ ಅವರೊಳಗೆ ಸೃಷ್ಟಿಯಾಗಿರುವ ನರಕ ನಿಜಕ್ಕೂ ಭೀಕರವಾಗಿರಬಲ್ಲದು! ‘ಕೊಂದವರುಳಿಯುವರೇ ಕೂಡಲ ಸಂಗಮದೇವಾ?’ ಎಂದು ಬಸವಣ್ಣ ತನ್ನ ಸುತ್ತ ಮುತ್ತ ನೋಡಿ, ಆಳವಾಗಿ ಯೋಚಿಸಿ, ನಿಜಕ್ಕೂ ಮರುಕದಿಂದ ಹೇಳಿದ್ದನೆಂಬುದು ನನ್ನ ಊಹೆ!

blog
25 Jan 2026 ಪಡೆವ, ಕೊಡುವ ಮುಕ್ತತೆ

ಶತಮಾನಗಳ ಕೆಳಗೆ ಸರ್ವಜ್ಞ ಹೇಳಿದ ವಿನಯದ ಮಾತು ಎಲ್ಲರಿಗೂ ಆಗಾಗ ಅನುಭವಕ್ಕೆ ಬರುತ್ತಿರುತ್ತದೆ: ‘ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ.’ ವಿನಯಶೀಲ, ಮುಕ್ತ ಮನಸ್ಸುಗಳಲ್ಲಿ ನಡೆಯುವ ಈ ನಿರಂತರ ಪ್ರಕ್ರಿಯೆ ಸಂಸ್ಕೃತಿಗಳಲ್ಲೂ ಆಗುತ್ತಿರುತ್ತದೆ; ಮುಕ್ತವಾಗಿರುವ ಸಂಸ್ಕೃತಿಗಳು ‘ಸರ್ವರೊಳಗೊಂದೊಂದು’ ಎಳೆಯನ್ನು ಗಳಿಸುತ್ತಿರುತ್ತವೆ. 

ದೇಶಗಳ ಆಳುವ ವರ್ಗಗಳು, ಸಂಕುಚಿತ ರಾಜಕಾರಣಿಗಳು, ಆಕ್ರಮಣಕಾರಿಗಳು ಏನಾದರೂ ಹೇಳುತ್ತಿರಲಿ, ಎಲ್ಲ ಸಂಸ್ಕೃತಿಗಳಲ್ಲೂ ಕಲಾವಿದರು, ಸೂಕ್ಷ್ಮಜೀವಿಗಳು ಇತರ ಸಂಸ್ಕೃತಿಗಳಿಂದ ಪ್ರೇರಣೆಗಳನ್ನು ಪಡೆಯುತ್ತಲೇ ಇರುತ್ತಾರೆ. ಯುರೋಪಿನ ಕಲಾಪ್ರಕಾರಗಳನ್ನು ದಕ್ಷವಾಗಿ ಬಳಸುತ್ತಿದ್ದ ಕೆಲವು ದೊಡ್ಡ ಕಲಾವಿದರು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಆಫ್ರಿಕಾದ ಬುಡಕಟ್ಟುಗಳ ಜನ ರೂಪಿಸುತ್ತಿದ್ದ ಮುಖವಾಡಗಳು ಹಾಗೂ ಶಿಲ್ಪಗಳ ಸಾಂಕೇತಿಕ ಅರ್ಥಗಳನ್ನು ನೋಡಿ ಚಕಿತರಾದರು; ಅವನ್ನು ಅಭ್ಯಾಸ ಮಾಡಿ ‘ಕ್ಯೂಬಿಸಂ’ ಎಂಬ ಕಲಾಮಾದರಿಯನ್ನು ಬೆಳೆಸಿದರು. ಯುರೋಪಿನ ವಸಾಹತುಕಾರ ಥಿಯರಿಸ್ಟರು ಆಫ್ರಿಕಾವನ್ನು ‘ಅನಾಗರಿಕ’, ‘ಹಿಂದುಳಿದ’ ಖಂಡ ಎಂದು ಬಣ್ಣಿಸಿದ್ದನ್ನು ಅವರು ತಮ್ಮ ತಲೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ. 

‘ಆಫ್ರಿಕನ್ ನಾಡುಗಳನ್ನು ನಾಗರೀಕೀಕರಣಗೊಳಿಸುತ್ತೇವೆ’ ಎಂಬ ಪಿಳ್ಳೆ ನೆವದಲ್ಲಿ ಇಡೀ ಖಂಡವನ್ನು ಆಕ್ರಮಿಸಿಕೊಂಡ ಬಿಳಿಯರ ಕಣ್ಣು ಆಫ್ರಿಕಾದ ವಜ್ರಗಳ ಮೇಲೆ, ದಂತಗಳ ಮೇಲೆ ನೆಟ್ಟಿತ್ತು. ಬಿಟ್ಟಿ ದುಡಿಯಲು ಆಫ್ರಿಕಾದ ಗುಲಾಮರೂ ಬಿಳಿಯರಿಗೆ ಬೇಕಾಗಿದ್ದರು. ಬರಬರುತ್ತಾ ಯುರೋಪಿನಲ್ಲಿ ಕೆಲಸ ಸಿಕ್ಕದೆ ಆಫ್ರಿಕಾಕ್ಕೆ ಹೋದ ವಸಾಹತು ಅಧಿಕಾರಿಗಳು, ಸೇನೆಯವರು ಅಲ್ಲಿ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ವಾಪಸ್ ಬರುತ್ತಿದ್ದರು. ಅವರಲ್ಲಿ ಕೆಲವರು ಆಫ್ರಿಕಾದ ಕಲಾಕೃತಿಗಳನ್ನೂ ಹಡಗಿನಲ್ಲಿ ಹೇರಿಕೊಂಡು ಬರುತ್ತಿದ್ದರು. ಕೆಲವು ಫ್ರೆಂಚ್ ಆಡಳಿತಗಾರರು ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್ಸಿಗೂ ಹೊತ್ತೊಯ್ದಿದ್ದರು. 

ಯುರೋಪಿನ ಸೂಕ್ಷ್ಮ ಕಲಾವಿದರು ತಮ್ಮ ದೇಶದ ಲಾಭಕೋರ ವ್ಯಾಪಾರಿಗಳಂತೆ, ಆಕ್ರಮಣಕಾರಿ ವಸಾಹತುಕಾರರಂತೆ ಆಫ್ರಿಕಾದತ್ತ ನೋಡದೆ, ಅಲ್ಲಿನ ಆದಿಮ ಕಲೆಯ ದಿವ್ಯ ಸ್ಫೂರ್ತಿಗಾಗಿ ಆಫ್ರಿಕಾದತ್ತ ತಿರುಗಿದರು. ಸ್ಪೇನಿನ ಮಹಾನ್ ಕಲಾವಿದ ಪಾಬ್ಲೋ ಪಿಕಾಸೋಗೆ ಒಂದು ಘಟ್ಟದಲ್ಲಿ ತಾನು ಬಳಸುತ್ತಿದ್ದ ಪಶ್ಚಿಮದ ವಾಸ್ತವವಾದಿ ಕಲೆ ಯಾಕೋ ಮಾನವ ಸತ್ಯಗಳನ್ನು, ಮನುಷ್ಯರ ಒಳಮುಖಗಳನ್ನು ಹಿಡಿದಿಡಲು ಸಾಲದು ಎನ್ನಿಸತೊಡಗಿದಂತಿದೆ. ಹೀಗೇ ಒಂದು ದಿನ ಪಿಕಾಸೋ ಪ್ಯಾರಿಸ್ಸಿನ ಮ್ಯೂಸಿಯಂಗೆ ಭೇಟಿ ಕೊಟ್ಟ ಗಳಿಗೆ ಅವನ ಕಲೆಗೆ ಹೊಸ ತಿರುವನ್ನೇ ಕೊಟ್ಟಿತು. ಯಾರೋ ಸದಭಿರುಚಿಯ ಫ್ರೆಂಚ್ ಅಧಿಕಾರಿಯೊಬ್ಬ ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ತಂದು ಪ್ಯಾರಿಸ್ ಮ್ಯೂಸಿಯಂನಲ್ಲಿ ತಂದಿಟ್ಟಿದ್ದ. ಪಿಕಾಸೋ ಈ ಆಫ್ರಿಕಾದ ಮುಖವಾಡಗಳನ್ನು ನೋಡುತ್ತಾ, ಹೊಸ ಕಲೆಯ ಸಾಧ್ಯತೆಯನ್ನು ಅರಿಯತೊಡಗಿದ.  

ಪಿಕಾಸೋ ಹಾಗೂ ಅವನ ವಾರಗೆಯ ಕಲಾವಿದರು ಪಶ್ಚಿಮ ಆಫ್ರಿಕಾ ಹಾಗೂ ಸೆಂಟ್ರಲ್ ಆಫ್ರಿಕಾದ ಮುಖವಾಡಗಳು ಹಾಗೂ ಶಿಲ್ಪಗಳನ್ನು ಆಳವಾಗಿ ಸ್ಟಡಿ ಮಾಡತೊಡಗಿದರು. ಪಿಕಾಸೋನಂಥ ಮಹಾಪ್ರತಿಭೆಯ ನೋಟ, ಸಂವೇದನೆ ಹಾಗೂ ಕೈಗಳಲ್ಲಿ ಪಶ್ಚಿಮದಲ್ಲಿ ‘ಕ್ಯೂಬಿಸಂ’ ಎಂಬ ಕಲಾ ಚಳುವಳಿಯೇ ಶುರುವಾಯಿತು. ವಸ್ತುಗಳನ್ನು ಬೇರೆ ಬೇರೆ ಕೋನಗಳಿಂದ ಮಂಡಿಸುವ ಕ್ಯೂಬಿಸಂ ಕಲೆ ಹುಟ್ಟಿದ್ದು ಆಫ್ರಿಕನ್ ಕಲೆಯ ಪ್ರೇರಣೆಯಿಂದ. ಆಫ್ರಿಕಾದ ನಾಗರಿಕತೆಯ ಬಗ್ಗೆ ಬಿಳಿಯರ ಪೂರ್ವಗ್ರಹಗಳಿಂದ ಬಿಡಿಸಿಕೊಂಡು, ಕಲಾವಿದರು ಮುಕ್ತವಾಗಿ ಆಫ್ರಿಕನ್ ಸಂಸ್ಕೃತಿಯನ್ನು ನೋಡಿದ್ದರಿಂದ ಪಶ್ಚಿಮದ ಕಲೆಯ ದಿಕ್ಕೇ ಬದಲಾಯಿತು. ಆಫ್ರಿಕಾದ ಕಾಂಗೋ ನದಿಯ ದಂಡೆಯ ಶಿಲ್ಪ ಕಲೆಯಿಂದ ಯುರೋಪಿಯನ್ ಶಿಲ್ಪಕಲೆ ಮರುಜೀವ ಪಡೆಯತೊಡಗಿತು.

ಚರಿತ್ರೆಯ ಈ ಘಟನೆಗಳು ಸೂಚಿಸುತ್ತಿರುವ ಸತ್ಯ ಇದು: ಕಲಾವಿದರು, ಸೂಕ್ಷ್ಮಜೀವಿಗಳು, ಲೇಖಕರು, ಪತ್ರಕರ್ತರು, ಒಟ್ಟಾರೆಯಾಗಿ ಆರೋಗ್ಯಕರ ಮನಸ್ಸುಳ್ಳವರು ದೇಶದೇಶಗಳ ನಡುವಣ ಸಂಬಂಧ ಕುರಿತಂತೆ ಅಧಿಕಾರಸ್ಥರ ಕಾಲಕಾಲದ ನಿಲುವುಗಳನ್ನು ಮೀರಿ, ವಿಭಿನ್ನವಾಗಿ ನೋಡುತ್ತಿರಬೇಕಾಗುತ್ತದೆ. ಆಗ್ರಾದ ಮಹಾನ್ ಕಲಾಸ್ಮಾರಕ ತಾಜ್‌ಮಹಲ್ ಕಳೆಗುಂದಿ, ಒಮ್ಮೊಮ್ಮೆ ಹಳದಿ ಬಣ್ಣಕ್ಕೆ ತಿರುಗುವ ಸುದ್ದಿಯನ್ನು ನೀವು ಕೇಳಿರಬಹುದು. ತಾಜ್ ಮಹಲಿನ ಅಮೃತಶಿಲೆ ಹಳದಿ ಬಣ್ಣಕ್ಕೆ ತಿರುಗಿದಾಗಲೆಲ್ಲ ಅದಕ್ಕೊಂದು ಚಿಕಿತ್ಸೆ ಕೊಡುತ್ತಾರೆ. ಆ ಚಿಕಿತ್ಸೆಯ ಹೆಸರು ಮುಲ್ತಾನಿ ಮಿಟ್ಟಿ ಚಿಕಿತ್ಸೆ. 
೧೯೯೪, ೨೦೦೧, ೨೦೦೮ರಲ್ಲಿ ತಾಜ್‌ಮಹಲ್‌ಗೆ ಈ ಮುಲ್ತಾನಿ ಮಣ್ಣಿನ ಚಿಕಿತ್ಸೆ ಕೊಡಿಸಲಾಗಿತ್ತು. ೨೦೨೨ರ ಸುಮಾರಿನಲ್ಲಿ ಈ ಚಿಕಿತ್ಸೆ ನಡೆಯಿತು. ಮುಲ್ತಾನಿ ಮಣ್ಣಿನ ಚಿಕಿತ್ಸೆ ಪಡೆಯಲು ತಾಜ್‌ಮಹಲ್ ಆಗಾಗ ಸಿದ್ಧವಾಗುತ್ತಿರುತ್ತದೆ. 

ಮುಲ್ತಾನಿ ಮಣ್ಣಿನ ಚಿಕಿತ್ಸೆಯ ವಿವರಗಳು ೧೬ನೆಯ ಶತಮಾನದ Ain-i-Akbary ಎಂಬ ಮೊಗಲ್ ಜರ್ನಲ್‌ನಲ್ಲಿದ್ದವು ಎಂದು ‘ಸಂಡೇ ಟೆಲಿಗ್ರಾಫ್’ ವರದಿ ಸೂಚಿಸುತ್ತದೆ. ಮುಲ್ತಾನಿ ಪಾಕಿಸ್ತಾನದ ಚಿನಾಬ್ ನದಿ ದಂಡೆಯಲ್ಲಿರುವ ನಗರ. ಸೂಫಿ ಸಂತರ ನಗರ ಎಂದು ಕೂಡ ಈ ನಗರ ಖ್ಯಾತವಾಗಿದೆ. ಮುಲ್ತಾನಿಯಲ್ಲಿ ದೊರಕುವ ಮಣ್ಣಿನಲ್ಲಿ ಸುಣ್ಣದ ಅಂಶ ಇರುತ್ತದೆ. ಮುಖದ ಸೌಂದರ‍್ಯವನ್ನು ಕಾಪಾಡಲು ಮುಲ್ತಾನಿಯ ಮಹಿಳೆಯರು ಮನೆಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರುಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಈ ಮಣ್ಣಿಗೆ ಕೊಳೆ ತೊಳೆಯುವ ಗುಣವಿದೆ. ತಾಜ್‌ಮಹಲ್ ಎಲ್ಲೆಲ್ಲಿ ಹಳದಿ ಬಣ್ಣಕ್ಕೆ ತಿರುಗಿದೆಯೋ ಅಲ್ಲೆಲ್ಲ ಎರಡು ಮಿಲಿಮೀಟರ್ ದಪ್ಪಕ್ಕೆ ಮುಲ್ತಾನಿ ಮಣ್ಣನ್ನು ಮೆತ್ತಲಾಗುತ್ತದೆ. ಇದು ತಾಜಮಹಲಿಗೊಂದು ಫೇಸ್ ಪ್ಯಾಕ್! ಹೀಗೆ ಈ ತಾಜ್ ಮಹಲ್ ಚಿಕಿತ್ಸೆ ನಡೆಯುತ್ತದೆ. 

ಈ ಚಿಕಿತ್ಸೆ ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್ ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದು ನಾಲ್ಕು ಶತಮಾನಗಳ ನಂತರ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮಣ್ಣಿನಿಂದ!  ೨೦೨೨ರ ಸುಮಾರಿನಲ್ಲಿ ತಾಜ್ ಮಹಲಿಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತಿದ್ದಾಗ ಪಾರಂಪಾರಿಕ ಕಟ್ಟಡಗಳ ಸಂರಕ್ಷಣೆ ಮಾಡುವ ರೋಮ್ ಸಂಸ್ಥೆಯೊಂದರ ವಿಜ್ಞಾನಿಗಳು ಆಗ್ರಾಕ್ಕೆ ಬಂದರು; ಈ ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆಂದು ನೋಡಿದರು. ಇಟಲಿಯಲ್ಲಿ ಕಪ್ಪಾಗುತ್ತಿರುವ ಅಮೃತಶಿಲೆಯ ಪ್ರತಿಮೆಗಳಿಗೆ ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಕೊಡುವ ಕಲೆಯನ್ನು ಭಾರತದಲ್ಲಿ ಕಲಿಯತೊಡಗಿದರು. ನಾಲ್ಕು ವರ್ಷಗಳ ಕೆಳಗೆ ತಾಜಮಹಲಿನ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಆಗ್ರಾದ ಹಲ ಬಗೆಯ ಮಾಲಿನ್ಯಗಳಿಂದ ತಾಜಮಹಲನ್ನು ರಕ್ಷಿಸಿದ್ದನ್ನು ಕಂಡ ತಾಜಮಹಲಿನ ಉಸ್ತುವಾರಿಗಳು ನೆಮ್ಮದಿಗೊಂಡರು. 

ಸಂಸ್ಕೃತಿಗಳ ನಡುವಣ ಸ್ವೀಕಾರಗಳ ಬಗ್ಗೆ ನಾವು ನಾಡುಗಳ ಗಡಿಗಳ ಸಂಕುಚಿತ ಗೆರೆಗಳನ್ನು ದಾಟಿ ಯೋಚಿಸಬೇಕಾಗುತ್ತದೆ. ಜಗತ್ತಿನ ವಿವಿಧ ದಿಕ್ಕುಗಳಿಂದ ಸಂಗೀತ ಕಲೆ, ಆಟ, ಊಟ ಎಲ್ಲವನ್ನೂ ಪಡೆದು ಆನಂದಿಸುವ ನಾವು ದೇಶದೇಶಗಳ ಮನುಷ್ಯ ಮನುಷ್ಯರ ನಡುವೆ ಕೃತಕ ಗೋಡೆಗಳನ್ನು ನಿರ್ಮಿಸಲು ಹೊರಡುತ್ತೇವೆ; ಒಂದು ಸಂಸ್ಕೃತಿ ಮತ್ತೊಂದರಿಂದ ಪಡೆದು ಸಮೃದ್ಧವಾಗುವ ಸಾಧ್ಯತೆಯನ್ನು ಕೈಬಿಟ್ಟು ಪೂರ್ವಗ್ರಹಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಪಶ್ಚಿಮದ ಸಂಗೀತ ಏಕತಾನತೆಯಿಂದ ದಣಿದಿದ್ದಾಗ ಅದು ಆಫ್ರಿಕಾದ ಬುಡಕಟ್ಟು ಸಂಗೀತದಿಂದ ಹೊಸ ಜೀವ ಪಡೆಯಿತು. ಇವತ್ತು ನಾವು ಕೇಳುವ ಜಾಸ್ ಸಂಗೀತ ಆಫ್ರಿಕನ್ ಮೂಲದಿಂದ ಬಂದದ್ದು. 

ನಮ್ಮ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನರ ಸಿನಿಮಾ ಸಂಗೀತ ಒಮ್ಮೆ ಪುನರಾವರ್ತನೆಯ ಜಾಡಿಗೆ ಬಿದ್ದಾಗ ಅವರು ಭಾರತದ ವಿವಿಧ ಭಾಗಗಳ ಗುಡ್ಡಗಾಡುಗಳ ಸಂಗೀತದ ಮಟ್ಟುಗಳನ್ನು ಹುಡುಕಿಕೊಂಡು ಹೋದರು; ಅವನ್ನು ಬಳಸಿ ಜನಪ್ರಿಯ ಸಂಗೀತದ ಹೊಸ ಲಯಗಳನ್ನು ರೂಪಿಸಿದರು; ಅದರ ಜೊತೆಗೆ ಪಶ್ಚಿಮದ ಸಂಗೀತದಿಂದಲೂ ರೆಹಮಾನ್ ಅನೇಕ ಅಂಶಗಳನ್ನು ಬೆಸೆಯುತ್ತಾ ಬಂದರು. ನಮ್ಮ ಹೆಮ್ಮೆಯ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಸಂಗೀತಕ್ಕೆ ಹೊಸ ಜೀವ ತುಂಬಲು ಕನ್ನಡನಾಡಿನ ಮೂಲೆ ಮೂಲೆಗಳ ದೇಶಿ ಮಟ್ಟುಗಳನ್ನು ಹುಡುಕಿಕೊಂಡು ಹೋದರು. ಇದರಿಂದ ದೇಶಿ ಸಂಗೀತವೂ ಮರುಜೀವ ಪಡೆಯಿತು; ಆ ದೇಶಿ ಮಟ್ಟುಗಳಿಂದ ಹಂಸಲೇಖರು ಸೃಷ್ಟಿಸುವ ಸಂಗೀತಕ್ಕೂ ಹೊಸ ಜೀವ ಬಂತು. 

ದೇಶಿಯರಲಿ, ವಿದೇಶಿಯಿರಲಿ, ನಮ್ಮ ಸಂಸ್ಕೃತಿಯ ಆರೋಗ್ಯಕ್ಕೆ ಬೇಕಾದದ್ದೇನು ಎಂಬ ಬಗ್ಗೆ ನಾವು ತೆರೆದ ಮನಸ್ಸಿನಿಂದ ನೋಡುತ್ತಿರಬೇಕು ಎಂದು ಈ ಉದಾಹರಣೆಗಳು ಸೂಚಿಸುತ್ತವೆ. ತಾಜ್‌ಮಹಲ್ ಕಳೆಗುಂದಿದಾಗ ಅದು ಪಾಕಿಸ್ತಾನದ ಸೂಫಿ ಸಂತರ ನಗರ ಮುಲ್ತಾನಿಯ ಮಣ್ಣಿನಿಂದ ಹೊಸ ಖಳೆ ಪಡೆಯುತ್ತದೆ ಎಂಬುದು ಹಲವು ಆರೋಗ್ಯಕರ ಅರ್ಥಗಳನ್ನು  ಹೊರಡಿಸಬಲ್ಲದು.   
ಮುಕ್ತ ಸಂಸ್ಕೃತಿಗಳಂತೆ ಹುಲುಮಾನವರು ಕೂಡ ಮುಕ್ತ ಮನಸ್ಸಿನಿಂದ ಪಡೆಯುವ, ಬೆಳೆಯುವ, ಉಳಿಯುವ ಕಲೆಯನ್ನು ನಿತ್ಯ ನವೀಕರಿಸಿಕೊಂಡರೆ ಎಷ್ಟು ಚಂದ! 

ಕೊನೆ ಟಿಪ್ಪಣಿ: ಕೊಡುವ, ಪಡೆವ ಗಾಳಿ ಬೆಳಕು!

ಕಳೆದ ವಾರ ಈ ಅಂಕಣದಲ್ಲಿ ಹಾಗೂ ವಾರ್ತಾಭಾರತಿಯಲ್ಲಿ ‘ಡಿಜಿಟಲ್ ಯುಗದಲ್ಲಿ ಪ್ರೂಫ್ ರೀಡಿಂಗ್’ ಎಂಬ ಬರಹದ ಒಂದು ಪುಟ್ಟ ಇಂಪ್ಯಾಕ್ಟ್ ಬಗ್ಗೆ ಇಲ್ಲಿ ಹೇಳಬೇಕು: 

ಕನ್ನಡಕ್ಕೊಂದು ಸ್ಪೆಲ್ ಚೆಕ್ ಬೇಕು ಎಂಬ ಈ ಅಂಕಣದ ತುಡಿತ ಹಲವು ಓದುಗ ಓದುಗಿಯರಲ್ಲಿ ಸ್ಪಂದನ ಹುಟ್ಟಿಸಿದ್ದನ್ನು ಪತ್ರಗಳು, ಟೆಲಿಫೋನ್ ಕರೆಗಳು ಹೇಳುತ್ತವೆ. ಆ ನಿಟ್ಟಿನ ಒಂದು ಮಹತ್ವದ ಹೆಜ್ಜೆ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರೂ ಆಗಿರುವ ಗೆಳೆಯ-ಲೇಖಕ ರವಿಕುಮಾರ್‍ ನೀಹಾ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜೊತೆ ಈ ಕುರಿತು ಚರ್ಚಿಸಿದರು. ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರೂ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿದ್ದಾರೆ. ಗೆಳೆಯರಾದ ಇಸ್ಮಾಯಿಲ್- ರವಿ ನೀಹಾ- ಬಿಳಿಮಲೆ ಎಲ್ಲರೂ ಸೇರಿ ಕನ್ನಡ ಸ್ಪೆಲ್ ಚೆಕ್ ರೂಪಿಸಿಕೊಟ್ಟರೆ ಕನ್ನಡ ಸಂಶೋಧಕ, ಸಂಶೋಧಕಿಯರ ನಿತ್ಯದ ಅಳಲು ಅಷ್ಟಿಷ್ಟಾದರೂ ಕಡಿಮೆಯಾಗಬಲ್ಲದು. 

ಸುತ್ತ ಮುತ್ತಿರುವ ಸಿನಿಕತೆಯ ನಡುವೆ ಹೀಗೆ ಪಾಸಿಟಿವ್ ಆಗಿ ಯೋಚಿಸುವ ಮನಸ್ಸುಗಳಿಗೆ ಕೃತಜ್ಞತೆಗಳು. 
 



Latest Video


Nataraj Huliyar Official
YouTube Channel

SUBSCRIBE