ಮೊನ್ನೆ ಮೇ ೧೫, ೨೦೨೬ ರ ಸಂಜೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನಕದಾಸರ ಬಹುಭಾಷಾ ಅನುವಾದಗಳ ಸಂಪುಟಗಳನ್ನು ಬಿಡುಗಡೆ ಮಾಡುತ್ತಾ, ತಮ್ಮ ಮಾತಿನ ಕೊನೆಗೆ ವಿಚಿತ್ರವಾದ ಗಟ್ಟಿ ದನಿಯಲ್ಲಿ ಹೇಳಿದ ಮಾತು: ‘ಇಲ್ಲಿಂದ ನಿರ್ಗಮಿಸ್ತೇನೆ.’
ಅದು ಯಾಕೋ, ಈ ನಿರ್ಗಮನದ ರೂಪಕ ಧಡ್ಡಂತ ನನ್ನೆದೆಗೆ ಹೊಡೆದಂತಾಯಿತು. ಗೆಳೆಯ ದಂಡಪ್ಪನವರಿಗೆ ‘ಕೇಳಿಸಿಕೊಂಡ್ರಾ?’ ಅಂದೆ. ‘ಹೂಂ ಗುರೂಜಿ! ನನಗೂ ಯಾಕೋ ಒಂಥರಾ ಅನ್ನಿಸ್ತು’ ಎಂದರು.
ಅವತ್ತು ಬಿಡುಗಡೆಯಾದ ಸಂಪುಟಗಳಲ್ಲಿ ನಾನು ಸಂಪಾದಿಸಿದ ‘ಮೋಹನ ತರಂಗಿಣಿ’ಯ ಇಂಗ್ಲಿಷ್ ಅನುವಾದವೂ ಇತ್ತು. ಅವತ್ತಿನ ಭಾಷಣದಲ್ಲಿ ಸಿದ್ಧರಾಮಯ್ಯನವರು ಬಸವಣ್ಣನವರ ಚಿರಪರಿಚಿತ ರೂಪಕವನ್ನು ಮತ್ತೆ ನೆನಪಿಸಿದ್ದರು:
ಇವನಾರವ
ಇವನಾರವ
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಈ ವಚನವನ್ನು ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಪುಟ್ಟ ಅಭಿನಯದ ಮೂಲಕವೂ ಸಾವಿರಾರು ಸಲ ಹೇಳಿದ್ದಾರೆ. ಸುಳ್ಳನ್ನು ಸಾವಿರ ಸಲ ಹೇಳಿ ನಿಜ ಮಾಡುವ ಜಾತಿಪೀಡಿತ-ಕೋಮುಪೀಡಿತ ರಾಜಕಾರಣದಲ್ಲಿ ಸದಾಶಯದ ರೂಪಕವನ್ನು ಮತ್ತೆ ಮತ್ತೆ ಹೇಳಿ ಜನರನ್ನು ತಿದ್ದುವ ಈ ಸಕಾರಾತ್ಮಕ ರಾಜಕಾರಣ ಕೂಡ ಗೆದ್ದಿದೆ. ಅನೇಕ ಸ್ವಾಮೀಜಿಗಳು ಇದೇ ವಚನವನ್ನು ಬಹುತೇಕ ತಮ್ಮದೇ ಜಾತಿಯ ಜನಗಳಿಗೆ ತುಟಿಯಂಚಿನಲ್ಲಿ ಹೇಳಿ ಮಾಡಲಾಗದ ಪರಿಣಾಮವನ್ನು ಸಿದ್ದರಾಮಯ್ಯನವರ ವಚನ ಮಂಡನೆ ಸಾಧಿಸಿದಂತಿದೆ. ಯಾಕೆಂದರೆ ಅವರ ರಾಜಕಾರಣದಲ್ಲಿ, ಯೋಜನೆಗಳಲ್ಲಿ ‘ಇವ ನಮ್ಮವ’ದ ಸರ್ವಸ್ವೀಕಾರ ರಾಜಕಾರಣ (ಇನ್ಕ್ಲೂಸಿವ್ ಪಾಲಿಟಿಕ್ಸ್) ನಿರಂತರವಾಗಿದೆ. ವಿವಿಧ ಜಾತಿಗಳ ಜನ, ಅಧಿಕಾರಿಗಳು, ಕಾರ್ಯಕರ್ತರು ಅವರಿಗೆ ಸ್ಪಂದಿಸುತ್ತಿದ್ದ ರೀತಿಯೇ ‘ಇವ ನಮ್ಮವ’ ರೂಪಕ ಅವರ ಆಳಕ್ಕೆ ಇಳಿದು ಪ್ರತಿಫಲಿಸಿದ್ದನ್ನು ತೋರಿಸುವಂತಿತ್ತು.
ಇದು ಅಪ್ಪಟ ಕನ್ನಡ ನೆಲದ, ಕನ್ನಡ ಪದಗಳೇ ತುಂಬಿದ, ವಚನ ರೂಪಕದ ಅನನ್ಯ ಪ್ರಭಾವ, ಸಾಧನೆ ಎಂದು ಸಾಹಿತ್ಯದ ಶಕ್ತಿಯಲ್ಲಿ ನಂಬಿಕೆಯಿರುವವರಾದರೂ ನಂಬಬೇಕಾಗುತ್ತದೆ.
ಈ ಅಂಕಣದಲ್ಲಿ ರಾಜ್ಯ-ರಾಷ್ಟ್ರ ರಾಜಕಾರಣವನ್ನು ಪೂರ್ಣಾವಧಿ ವಸ್ತುವನ್ನಾಗಿಸಿ ಬರೆಯುವುದು ಕಡಿಮೆ. ಆದರೆ ಈ ಸಲ ತನ್ನ ತಲೆಯಲ್ಲಿ ಅಡ್ಡಾಡುತ್ತಿರುವ ‘ಇವ ನಮ್ಮವ’ ಬಿಟ್ಟು ಬೇರೇನೂ ಬರೆಯಲು ಕೈಯೇ ಬರಲಿಲ್ಲ!
ನಿನ್ನೆ ಶನಿವಾರ (೩೦ ಜೂನ್ ೨೦೨೬) ಪ್ರಜಾವಾಣಿಯಲ್ಲಿ ಪ್ರಕಟವಾದ ‘ಸಿದ್ಧರಾಮಯ್ಯ: ಇವ ನಮ್ಮವ’ ಲೇಖನ ಓದಿದ ಗೆಳೆಯ ಗಂಗರಾಜು ತಾತಗುಣಿ ನನ್ನ ೨೦೧೩ರ ಪ್ರಜಾವಾಣಿ ಲೇಖನವನ್ನು ನೆನಪಿಸಿದರು. ಇಲ್ಲಿ ಪ್ರಜಾವಾಣಿ ನನಗಾಗಿ ಸೃಷ್ಟಿಸಿದ ಪುಟ್ಟ ‘ಚಾರಿತ್ರಿಕ ಅವಕಾಶ’ದ ವೈಶಿಷ್ಟ್ಯವನ್ನೂ ಹೇಳಬೇಕು:
೧೧ ಮೇ ೨೦೧೩. ಪ್ರಜಾವಾಣಿಯ ಸಹಸಂಪಾದಕರಾಗಿದ್ದ ಸಿ.ಜಿ. ಮಂಜುಳಾ ‘ನೀವು ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಕ್ಕಾಗಿ ಲೇಖನ ಬರೆಯಬೇಕು?’ ಎಂದರು.
ಚಣ ಹಿಂಜರಿದರೂ ಸಂಜೆಯ ಹೊತ್ತಿಗೆ ಬರೆದೆ. ಆ ಲೇಖನದ ಶೀರ್ಷಿಕೆ: ‘ಹೊಸ ಸರ್ಕಾರ; ಹೊಸ ಕನಸು’.
ನಂತರ ಸಿದ್ಧರಾಮಯ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಬರೆದ ಲೇಖನದ ಹೆಸರು: ‘ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು’. ಲೇಖನದ ಇಂಟ್ರೊ: ‘ತನ್ನ ಕಾರ್ಯವೈಖರಿಯನ್ನು ತೀವ್ರಪರೀಕ್ಷೆಗೆ ಒಡ್ಡಿಕೊಳ್ಳದಿದ್ದರೆ ಈ ಸರ್ಕಾರಕ್ಕೆ ಭವಿಷ್ಯವಿಲ್ಲ…’
ಈ ಲೇಖನ ಬಂದಾಗ ಸಿದ್ಧರಾಮಯ್ಯನವರು ದೆಹಲಿಯ ಕರ್ನಾಟಕ ಭವನದಲ್ಲಿದ್ದರು. ಈ ಲೇಖನವನ್ನು ಮುಖ್ಯಮಂತ್ರಿಗಳು ಬಿಡುವಾಗಿ ಓದಿದರೆಂದು ಗೆಳೆಯರು ಹೇಳಿದರು.
೨೦೨೩ರಲ್ಲಿ ಮತ್ತೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದಾಗ ಸಹ ಸಂಪಾದಕರಾಗಿದ್ದ ಉದಯಕುಮಾರ್ ಲೇಖನ ಬರೆಯಲು ಹೇಳಿದರು. ಆಗ ಬರೆದ ಲೇಖನದ ತಲೆಬರಹ: ‘ಕಾಂಗ್ರೆಸ್ ಪುನರಾಗಮನ: ನಿರೀಕ್ಷೆ ಸವಾಲು.’ ಅದರ ಇಂಟ್ರೊ: ‘ಜಾಗೃತ ಮತದಾರರು, ಅತಿ ನಿರೀಕ್ಷೆ ಹಾಗೂ ಲೋಕಸಭಾ ಚುನಾವಣೆಯ ನೆರಳಲ್ಲಿ ಹೊಸ ಸರ್ಕಾರ…’
ಮೊನ್ನೆ ೨೮ರಂದು ಬಕ್ರೀದ್ ಹಬ್ಬದ ದಿನ ಸಿದ್ಧರಾಮಯ್ಯನವರು ರಾಜಿನಾಮೆ ಕೊಟ್ಟ ಸಂಜೆ ಗೆಳೆಯರಾದ ಗುರುಪ್ರಸಾದ್ ಕಂಟಲಗೆರೆ, ಭಗತ್ ಸಿಂಗ್ ಕುಂದೂರು, ಕಲಾವಿದ ಸಂತೋಷ್, ಶೋಯಿಂಕಾ ಜೊತೆಯಲ್ಲಿ ಕಂಟಲಗೆರೆಯಲ್ಲಿದ್ದೆ. ಬೆಂಗಳೂರಿಗೆ ಬರುವ ಹಾದಿಯಲ್ಲಿ ಸಿದ್ಧರಾಮಯ್ಯನವರ ಚಿತ್ರಗಳು ಮೂಡತೊಡಗಿದವು. ಭಗತ್ ಸಿಂಗ್ ಸಿದ್ಧರಾಮಯ್ಯನವರು ಪಂಚೆಯನ್ನು ಕೊಂಚ ಹರಡಿಕೊಂಡು ಬಿಡುಬೀಸಾಗಿ ಕೂರುವ ಗತ್ತನ್ನು ವರ್ಣಿಸಿದ್ದು ನೆನಪಾಯಿತು. ರಾತ್ರಿ ಎಂಟೂವರೆಗೆ, ಪ್ರಜಾವಾಣಿಯ ಸಹ ಸಂಪಾದಕ ಚ.ಹ. ರಘುನಾಥರಿಗೆ ನಾನೇ ಬರೆಯುವೆನೆಂದು ಹೇಳಿದೆ.
ಈ ಒಂದೂವರೆ ದಶಕದಲ್ಲಿ ಸಿದ್ಧರಾಮಯ್ಯ ಕರ್ನಾಟಕದ ಅಪರೂಪದ ನಾಯಕರಾಗಿ ಬೆಳೆದಿದ್ದರು. ಕೆಲವೇ ಗಂಟೆಗಳಲ್ಲಿ ಬರೆದ ಈ ಲೇಖನಕ್ಕೆ ಹಲವು ತಲೆಬರಹಗಳನ್ನು ಪ್ರಯತ್ನಿಸಿದೆ: ‘ಸಿದ್ಧರಾಮಯ್ಯನವರ ಪಾಸಿಟಿವ್ ಪಾಲಿಟಿಕ್ಸ್’; ‘ಸಿದ್ಧರಾಮಯ್ಯನವರ ಸರ್ವಸ್ವೀಕಾರ ರಾಜಕಾರಣ’ (ಇನ್ಕ್ಲೂಸಿವ್ ಪಾಲಿಟಿಕ್ಸ್); ‘ಸಿದ್ಧರಾಮಯ್ಯನವರ ಸಕಾರಾತ್ಮಕ ರಾಜಕಾರಣ’… ಹೀಗೆ.
ಕೊನೆಗೆ ರಘು, ‘ಸಿದ್ಧರಾಮಯ್ಯ: ಇವ ನಮ್ಮವ’ ಎಂದರು.
‘ಎಡಿಟೋರಿಯಲ್ ಸ್ಮಾರ್ಟಿ!’ ಎಂದೆ.
೨೦೨೬ರ ಮಾರ್ಚ್ ತಿಂಗಳಲ್ಲಿ ಅಂತರ್ಜಾತೀಯ ವಿವಾಹಿತರಿಗೆ ರಕ್ಷಣೆ ನೀಡುವ ‘ಇವ ನಮ್ಮವ’ ಚಾರಿತ್ರಿಕ ಮಸೂದೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಂಡಿಸಿದಾಗಲೂ ಇದೇ ಅಂಕಣದಲ್ಲಿ ಬರೆದಿದ್ದೆ. ವಚನಯುಗದ ‘ಇವ ನಮ್ಮವ’ ಆದರ್ಶ ರೂಪಕ ಐದು ಜನ ಲಿಂಗಾಯತರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಕರ್ನಾಟಕದಲ್ಲಿ ಹೀಗೆ ಅರ್ಥಪೂರ್ಣ ಪ್ರತಿಧ್ವನಿ ಪಡೆದಿರಲಿಲ್ಲ. ಯಾಕೆಂದರೆ, ಈ ರೂಪಕವನ್ನು ‘ಇನ್ಕ್ಲೂಸೀವ್ ರಾಜಕಾರಣ’ ಅಥವಾ ‘ಸರ್ವಸ್ವೀಕಾರ ರಾಜಕಾರಣ’ದ ಮೂಲಕ ಎಲ್ಲ ಜಾತಿ, ವರ್ಗಗಳ ಧರ್ಮಗಳ ಜನರನ್ನೂ ಒಳಗೊಳ್ಳುವ ರೂಪಕವಾಗಿಸುವ ಬಯಕೆ, ಬದ್ಧತೆ, ವಿಶಾಲ ದೃಷ್ಟಿ ಆ ಮುಖ್ಯಮಂತ್ರಿಗಳಲ್ಲಿ ಯಾರಿಗೂ ಇರಲಿಲ್ಲ.
ಸಿದ್ಧರಾಮಯ್ಯನವರ ‘ಇವ ನಮ್ಮವ’ದ ಜಾತ್ಯತೀತ, ಪ್ರೋಗ್ರೆಸೀವ್ ವ್ಯಕ್ತಿತ್ವದ ವಿಕಾಸದ ಯಶಸ್ಸು ಅವರಿಗಷ್ಟೇ ಅಲ್ಲದೆ, ಕರ್ನಾಟಕದ ಸಾವಿರಾರು ತೆರೆಮರೆಯ ಉತ್ಸಾಹಿ ಸೋಶಿಯಲ್ ಮೀಡಿಯಾದ ತರುಣ ತರುಣಿಯರಿಗೆ, ಅಸಂಖ್ಯಾತ ದಲಿತ ಬಹುಜನ ಲೇಖಕ ಲೇಖಕಿಯರಿಗೆ ಸಲ್ಲುತ್ತದೆ; ಸಣ್ಣಪುಟ್ಟ ಕುರ್ಚಿಗಳಿಗಾಗಿ ಸಿದ್ಧರಾಮಯ್ಯನವರ ಸುತ್ತ ಸುಳಿದ ಪರಪುಟ್ಟ ಲೇಖಕ, ಲೇಖಕಿಯರಿಗಿಂತ ಇಂಥ ಕಾಳಜಿಯ ಹೊಸ ತಲೆಮಾರು ಸ್ವಯಂಪ್ರೇರಣೆಯಿಂದ, ಯಾವ ಲಾಭದ ಆಸೆಯೂ ಇಲ್ಲದೆ ಕಟ್ಟಿದ ಸಿದ್ಧರಾಮಯ್ಯನವರ ವ್ಯಕ್ತಿತ್ವ, ಹಬ್ಬಿಸಿದ ವಿಡಿಯೋಗಳ ಕೆಲಸ ಅತ್ಯಂತ ಚಾರಿತ್ರಿಕವಾದುದು. ಸದ್ದಿಲ್ಲದೆ ಅವರ ಭಾಷಣಗಳು, ಟ್ವೀಟುಗಳನ್ನು ವರದಿಗಳನ್ನು ರೂಪಿಸಿದ ಕಾಳಜಿಯ, ಜವಾಬ್ದಾರಿಯುತ ಮನಸ್ಸುಗಳಿಗೂ ಈ ಕ್ರೆಡಿಟ್ ಸಲ್ಲುತ್ತದೆ. ನಾನೇ ಬಲ್ಲಂತೆ ಲೇಖಕ-ಅಧಿಕಾರಿ ವೆಂಕಟೇಶಯ್ಯ, ಪತ್ರಕರ್ತರಾದ ದಿನೇಶ್ ಅಮೀನ ಮಟ್ಟು, ಕೆ.ವಿ. ಪ್ರಭಾಕರ್, ಗಿರೀಶ್ ಕೋಟೆ ಈ ಕೆಲಸವನ್ನು ತಮ್ಮ ಕರ್ತವ್ಯವೆಂಬಂತೆ ಹಗಲೂರಾತ್ರಿ ಮಾಡಿದ್ದಾರೆ. ಬೇರೆ ಬೇರೆ ಪತ್ರಿಕೆಗಳು, ಮಾಧ್ಯಮಗಳ ಅಸಂಖ್ಯಾತ ಸಮಾನತೆಯ ಆಶಯದ ನೂರಾರು ಪತ್ರಕರ್ತ, ಪತ್ರಕರ್ತೆಯರು ಕರ್ನಾಟಕ ಕೋಮುವಾದಿಗಳ ಪಾಲಾಗಬಾರದೆಂಬ ಆಶಯದಿಂದ ಕೂಡ ಸಿದ್ಧರಾಮಯ್ಯನವರ ವ್ಯಕ್ತಿತ್ವವನ್ನು ನಿರಂತರ ಹಬ್ಬಿಸಿದ್ದಾರೆ.
ಅಂದರೆ, ‘ಇವ ನಮ್ಮವ’ ರೂಪಕ ಹಬ್ಬಿಸಿದ ಭಾವ ಈ ಎಲ್ಲರೊಳಗೆ ಸಹಜವಾಗಿ ಉಕ್ಕಿದ್ದರಿಂದ ಕೂಡ ಇದೆಲ್ಲ ಆಗಿದೆ. ಇಂಥ ಭಾವನೆಯನ್ನು ಕರ್ನಾಟಕದಲ್ಲಿ ಈಚಿನ ದಶಕಗಳಲ್ಲಿ ಯಾವ ರಾಜಕಾರಣಿಯೂ ಉಕ್ಕಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಇಂಥ ರಾಜಕಾರಣಿಯೊಬ್ಬ ರೂಪುಗೊಳ್ಳುವ ಸೂಚನೆಗಳು ಇವತ್ತಂತೂ ಕಾಣುತ್ತಿಲ್ಲ. ನಿನ್ನೆ ಶನಿವಾರ ಮಧ್ಯಾಹ್ನ ಗೆಳೆಯರೊಬ್ಬರ ಫೋನಿನಲ್ಲಿ ಸ್ವತಃ ಸಿದ್ಧರಾಮಯ್ಯನವರೇ ‘ ನಟರಾಜ್, ಲೇಖನ ಚೆನ್ನಾಗಿದೆ. ಥ್ಯಾಂಕ್ಸ್ ’ ಎಂದರು; ನನಗೆ ಮಾತೇ ಹೊರಡಲಿಲ್ಲ.
೨
ಮೇಲಿನ ಟಿಪ್ಪಣಿಗಳನ್ನು ಬರೆದ ನಂತರ ಮತ್ತೆ ಮೊನ್ನೆಯ ಸಿದ್ಧರಾಮಯ್ಯನವರ ಅಧಿಕಾರ ವಿದಾಯದ ಚಿತ್ರಗಳು ಎದುರು ಬರುತ್ತವೆ: ಹಟಾತ್ತನೆ ಎರಗಿದ ಹೈಕಮ್ಯಾಂಡ್ ಆದೇಶದಿಂದ ಕೆಲವು ಗಂಟೆಗಳ ಕಾಲ ಸಿದ್ಧರಾಮಯ್ಯ ವಿಚಲಿತರಾದರೂ ಘನತೆಯಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟು ಹೊರ ಬಂದದ್ದು ಕೂಡ ಬಹುಕಾಲ ನೆನಪಿನಲ್ಲಿ ಉಳಿಯುವ ಚಾರಿತ್ರಿಕ ಚಿತ್ರವೇ ಆಗಿದೆ. ಅದರಲ್ಲೂ ಇಡೀ ಪ್ರಕರಣವನ್ನು ವಾರಗಟ್ಟಲೆ ಹಿಂಜಿ, ಬಾಯಿಗೆ ಬಂದದ್ದು ಚೀರಿ, ಜನರಿಗೆ ಉಚಿತ ಮನರಂಜನೆ ಕೊಡಲು ಹೊಂಚುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಕಿಂಚಿತ್ ಆಹಾರವನ್ನೂ ಕೊಡದೆ ಸಿದ್ಧರಾಮಯ್ಯ ಘನತೆಯಿಂದ ನಿರ್ಗಮಿಸಿದ್ದಾರೆ.
ಈ ಅಂಕಣ ಸಂದರ್ಭ, ಸನ್ನಿವೇಶಗಳನ್ನು ಸಾಹಿತ್ಯದ ಕಾಣ್ಕೆಗಳ ಮೂಲಕ ನೋಡುವುದರಿಂದ, ಹಿಂದೊಮ್ಮೆ ಇಲ್ಲಿ ಉಲ್ಲೇಖಿಸಿದ ತತ್ವಜ್ಞಾನಿ ನೀಷೆ ’ವಿದಾಯ’ ಕುರಿತು ಹೇಳಿದ ಮಾತೊಂದನ್ನು ಈ ವಿದಾಯದ ಸನ್ನಿವೇಶದಲ್ಲಿ ಮತ್ತೆ ನೆನಪಿಸುವ ಕಾತರ ಹುಟ್ಟುತ್ತಿದೆ. ಗ್ರೀಕ್ ಮಹಾಕಾವ್ಯ ‘ಓಡಿಸ್ಸಿ’ಯ ಸನ್ನಿವೇಶವೊಂದನ್ನು ವ್ಯಾಖ್ಯಾನಿಸುತ್ತಾ ನೀಷೆ ‘ವಿದಾಯ’ ಕುರಿತ ಅಪೂರ್ವ ಫಿಲಸಾಫಿಕಲ್ ಹೊಳಹನ್ನು ಕೊಡುವ ಪ್ರಸಂಗ ಇದು:
ಟ್ರೋಜನ್ ಯುದ್ಧ ಮುಗಿದು ಎಷ್ಟೋ ವರ್ಷ ಕಾಲ ಮರಳಿ ಮನೆ ಸೇರಲಾರದೆ ಓಡಿಸ್ಯೂಸ್ ಅನಾಥನಂತೆ ಕಡಲ ತಡಿಯಲ್ಲಿ ಬೀಳುತ್ತಾನೆ. ಯೂಲಿಸಿಸನನ್ನು ಕಂಡು ಮೋಹಗೊಂಡ ಆಲ್ಸಿನೌಸಿನ ರಾಜಕುಮಾರಿ ಓಡಿಸ್ಯೂಸ್ನನ್ನು ತನ್ನ ಅರಮನೆ ತಲುಪುವಂತೆ ಮಾಡುತ್ತಾಳೆ. ಆಲ್ಸಿನೌಸಿನ ರಾಜನ ಅತಿಥಿಯಾಗಿ ನೆಮ್ಮದಿಯಿಂದ ಕೆಲ ಕಾಲ ಕಳೆದ ಒಡಿಸ್ಯೂಸ್, ನಂತರ ತನ್ನೂರು ಇಥಕದ ಕಡೆಗೆ ಹೊರಡಲು ಅಣಿಯಾಗುತ್ತಾನೆ. ಆ ಗಳಿಗೆಯಲ್ಲಿ ಹೋಮರ್ ಸೃಷ್ಟಿಸುವ ಕೋಮಲ ಸನ್ನಿವೇಶವನ್ನು ಕವಿಯ ಬಣ್ಣನೆಯಲ್ಲೇ ಕೇಳಿ:
ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ
ಓಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರ್ರನೆ ಮೆಲುನುಡಿದಳು:
‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು ನೆನೆದುಕೋ
ನೆನೆನೆನೆದು ಹಾಯೆಂದುಕೋ.’
ನೌಸಿಕಾಳ ಮೆಲುನುಡಿ ಕೇಳಿ ಒಡಿಸ್ಯೂಸ್ ಮರುನುಡಿದನು:
‘ನೌಸಿಕಾ, ಆಲ್ಸಿನೌಸನ ಮಗಳೆ,
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ;
ಆ ನೆಲದಲ್ಲಿ ಆ ಗಳಿಗೆಯಲ್ಲಿ
ಮತ್ತು ಆಹೊತ್ತಿನಿಂದ ಅನುದಿನವು
ನನ್ನ ಕಟ್ಟ ಕಡೆಯ ಉಸಿರಿರುವ ತನಕ,
ನನ್ನ ಜೀವ ಉಳಿಸಿದ ರಾಜಕುವರಿಯೇ,
ದೇವಿಯೊಬ್ಬಳ ನೆನೆದಂತೆ
ನಾ ನಿನ್ನ ನೆನೆಯುವಂತಾಗಲಿ.’
ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.
ನೀಷೆಯಂಥ ಮಹಾನ್ ತತ್ವಜ್ಞಾನಿ ಈ ವಿದಾಯ ಸನ್ನಿವೇಶವನ್ನು ದಾರ್ಶನಿಕ ರೂಪಕವಾಗಿ ಓದುತ್ತಿರುವಾಗ, ನಾವು ಬದುಕಿನಿಂದ ಅಥವಾ ಯಾವುದೇ ಗಾಢ ಸನ್ನಿವೇಶದಿಂದ ಹೇಗೆ ನಿರ್ಗಮಿಸಬೇಕೆಂಬುದರ ಬಗ್ಗೆ ಪ್ರಬುದ್ಧ ಜೀವನದರ್ಶನ ಹೊರಹೊಮ್ಮುತ್ತದೆ:
‘ಒಡಿಸ್ಯೂಸ್ ಒಂದು ಘಟ್ಟದಲ್ಲಿ ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಅರಮನೆಯಿಂದ ಹೊರಡುತ್ತಾನಲ್ಲಾ, ಹಾಗೆ ಬದುಕಿನಿಂದ ತೆರಳಬೇಕು- ಶುಭ ಕೋರುತ್ತಾ...ಬದುಕಿನ ಬಗೆಗಿನ ತೀವ್ರ ಮೋಹವನ್ನು ತೊರೆಯುತ್ತಾ.’
ನನ್ನ ಮಟ್ಟಿಗಂತೂ, ಯಾವುದಕ್ಕಾದರೂ, ಯಾರಿಗಾದರೂ ವಿದಾಯ ಹೇಳಲೇಬೇಕಾಗಿ ಬಂದಾಗ ಓಡಿಸ್ಯೂಸನ ವಿದಾಯವನ್ನು ರೂಪಕವಾಗಿ ಓದುತ್ತಾ ನೀಷೆ ಕಂಡುಕೊಂಡ ಸತ್ಯ ಯಾವುದೇ ಬಗೆಯ ವಿದಾಯದ ವಿಷಣ್ಣಭಾವದಿಂದ ತಕ್ಷಣ ಹೊರಬರಲು ನನಗೆ ನೆರವಾಗುತ್ತಿರುತ್ತದೆ.
ಸಾಹಿತ್ಯವನ್ನು ಅರಿಯುವವರನ್ನು ಕೈಹಿಡಿದು ನಡೆಸುವ ರೂಪಕಗಳ ಹಾಗೆಯೇ ಸಿದ್ಧರಾಮಯ್ಯನವರಂಥ ಸೂಕ್ಷ್ಮ ರಾಜಕಾರಣಿಯನ್ನು ‘ಇವ ನಮ್ಮವ’ ಎಂಬ ಆದರ್ಶ ರೂಪಕ ಸದಾ ಪೊರೆಯುತ್ತಾ ಬಂದಿದೆ ಎಂದು ನಂಬಲು ನನಗೆ ಇಷ್ಟ.
ಕೊನೆಯದಾಗಿ, ಈ ಅಂಕಣದ ತಲೆಬರಹಕ್ಕೆ ಪ್ರೇರಣೆಯಾದ ‘ಕೈ ಹಿಡಿದು ನಡೆಸೆನ್ನನು’ ರೂಪಕ ಬಿಎಂಶ್ರೀಯವರ ಸೃಷ್ಟಿ. ಜಾನ್ ಹೆನ್ರಿ ನ್ಯೂಮನ್ ಪದ್ಯದಲ್ಲಿ Lead kindly light/ amid the encircling gloom/ lead thou me on’ ಎಂಬ ಸಾಲಿನ ಆಶಯ ಬಿಎಂಶ್ರೀಯವರಲ್ಲಿ ‘ಕೈ ಹಿಡಿದು ನಡೆಸೆನ್ನನು’ ಎಂಬ ರೂಪಕವಾಯಿತು…