ನಮ್ಮ ರಾಜಕಾರಣಿಗಳು ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಿರುವ ರೀತಿಗೂ, ತಂತಮ್ಮ ಭಾಷೆಗಳ ಅರ್ಥಪೂರ್ಣ ಸಾಹಿತ್ಯ ಕೃತಿಗಳ ಜೊತೆಗೆ, ಜವಾಬ್ದಾರಿಯುತ ಸಾಹಿತಿಗಳ ಜೊತೆಗೆ ಅವರ ನಂಟು ಕಡಿದು ಹೋಗಿರುವುದಕ್ಕೂ ಸಂಬಂಧ ಇರುವಂತಿದೆ. ಇದು ನಿಮಗೂ ಹೊಳೆದಿರುತ್ತದೆ: ಒಂದು ಕಾಲಕ್ಕೆ ದೇಶದ ಗಂಭೀರ ರಾಜಕಾರಣಿಗಳು ಉತ್ತಮ ಸಾಹಿತ್ಯ-ಸಾಹಿತಿಗಳ ಜೊತೆ ಇರಿಸಿಕೊಂಡಿದ್ದ ಸಂಬಂಧದಿಂದ ರಾಜಕಾರಣ ಹಾಗೂ ಸಾಹಿತ್ಯಸಂಸ್ಕೃತಿ ಎರಡೂ ಪರಸ್ಪರ ಹಲವು ಕೊಡುಗೆಗಳನ್ನು ಪಡೆಯುತ್ತಿದ್ದವು. ಇವತ್ತಿಗೂ ಹೀಗೆ ಪಡೆಯುವುದನ್ನು ಅಪರೂಪಕ್ಕೆ ನೋಡುತ್ತೇನೆ. ಆದರೆ ಅಂಥವರ ಸಂಖ್ಯೆ ಹೆಚ್ಚು ಇಲ್ಲ. ಅಂಥವರು ಕೂಡ ಕೆಳಗಿನ ಕೆಲವು ಉದಾಹರಣೆಗಳಿಂದ ಸ್ಫೂರ್ತಿ ಪಡೆಯಲಿ ಎಂದು ನಿರೀಕ್ಷಿಸೋಣ:
ಕರ್ನಾಟಕದ ಅನನ್ಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಕನ್ನಡ ಲೇಖಕರಾದ ತರಾಸು, ಬಸವರಾಜ ಕಟ್ಟೀಮನಿ, ತೇಜಸ್ವಿ, ಲಂಕೇಶ್, ನಿಸಾರ್ ಅಹಮದ್, ಚಂದ್ರಶೇಖರ ಪಾಟೀಲ, ಅನಂತಮೂರ್ತಿ ಮುಂತಾದವರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಕಾವ್ಯ ಸಂವೇದನೆಯುಳ್ಳ ಗೋಪಾಲಗೌಡರು ಕನ್ನಡ ಕವಿಗಳ ಕವನಗಳ ಸಾಲುಗಳನ್ನೂ, ಆಶಯಗಳನ್ನೂ ತಮ್ಮ ಸಮಾಜವಾದಿ ಚಿಂತನೆ, ಭಾಷಣಗಳಲ್ಲಿ ಬಳಸುತ್ತಿದ್ದರು.
ಹೀಗೆ ಕವಿಸಾಲುಗಳನ್ನು ಬಳಸುತ್ತಿದ್ದ ಗೋಪಾಲಗೌಡರ ಬಗ್ಗೆ ಅಂದಿನ ಲೇಖಕರು ಹೆಮ್ಮೆ ಪಡುತ್ತಿದ್ದರು. ಆದರೆ ಹಾಗೆ ಬಳಸುವುದನ್ನು ಆಕ್ಷೇಪಿಸಿದ ಜನರೂ ಆ ಕಾಲದಲ್ಲಿದ್ದರು ಎಂಬುದನ್ನು ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿ ಕಂಡಾಗ ಅಚ್ಚರಿಯಾಯಿತು. ಈ ಪುಸ್ತಕದ ಅಧ್ಯಾಯವೊಂದರಲ್ಲಿ ಕುತೂಹಲಕರ ವಿವರವೊಂದು ಬರುತ್ತದೆ. ತೇಜಸ್ವಿ ಒಮ್ಮೆ ಕುವೆಂಪು ಜೊತೆ ಕುಪ್ಪಳಿ ಬಳಿಯ ಇಂಗ್ಲಾದಿಗೆ ಹೋಗುತ್ತಾರೆ. ಆಗಿನ್ನೂ ತೇಜಸ್ವಿಯವರಿಗೆ ಗೋಪಾಲಗೌಡರ ಪರಿಚಯ ಇರಲಿಲ್ಲ. ಅವತ್ತು ಗೋಪಾಲಗೌಡರ ಬಗ್ಗೆ ಅಲ್ಲಿ ಒಂದು ‘ದೂರು’ ಕೇಳಿ ಬರುತ್ತದೆ. ಆಗಿನ್ನೂ ಗೋಪಾಲಗೌಡರ ಬಗ್ಗೆ ಹೆಚ್ಚು ಕೇಳಿರದಿದ್ದ ತೇಜಸ್ವಿಗೆ ಈ ವಿಚಿತ್ರ ‘ದೂರು’ ಕೇಳಿ ಅವರ ಬಗ್ಗೆ ಕುತೂಹಲ ಹುಟ್ಟುತ್ತದೆ.
ಈ ಕುರಿತು ತೇಜಸ್ವಿ ಬರೆಯುತ್ತಾರೆ: ‘ಮಾನಪ್ಪನವರೂ, ವಿಜಯದೇವ ಅವರೂ ಅಣ್ಣನ ಜೊತೆ [ಕುವೆಂಪು ಜೊತೆ] ಮಾತಾಡುತ್ತಾ, ಗೋಪಾಲಗೌಡ ಚಳವಳಿಯಲ್ಲಿ ಹಾಗೂ ಇತರೆಡೆಗಳಲ್ಲಿ ಭಾಷಣ ಮಾಡುತ್ತಾ ನಿಮ್ಮ ‘ಕಲ್ಕಿ’, ‘ನೇಗಿಲಯೋಗಿ’ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಇದರಿಂದ ನನಗೆ ಗೋಪಾಲಗೌಡರ ಬಗ್ಗೆ ಕುತೂಹಲವೂ ಸ್ವಲ್ಪ ಸದಭಿಪ್ರಾಯವೂ ಪಾರಂಭವಾಯ್ತು... ಗೋಪಾಲಗೌಡ ಕಥೆ, ಕವನಗಳನ್ನು ಓದುವ ಮನುಷ್ಯನಾದರೆ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಸರಿ ಎಂದು ಅನ್ನಿಸಿತ್ತು.’
ಇದಾದ ನಂತರದ ದಿನಗಳಲ್ಲಿ ತೇಜಸ್ವಿ-ಗೋಪಾಲಗೌಡರ ಗೆಳೆತನ ಬೆಳೆಯಿತು. ಸಮಾಜವಾದಿ ರಾಜಕಾರಣ ಚಿಂತನೆಗಳ ಸಂಗದಲ್ಲಿ ತೇಜಸ್ವಿಯವರ ಬರವಣಿಗೆಯ ದಿಕ್ಕು ಬದಲಾಯಿತು. ‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕನಲಕ್ಕೆ ಬರೆದ ‘ಹೊಸ ದಿಗಂತದೆಡೆಗೆ’ ಎಂಬ ಮುನ್ನುಡಿಯಲ್ಲಿ ಸ್ವತಃ ತೇಜಸ್ವಿ ಈ ಕುರಿತು ಬರೆದದ್ದು ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತ. ಇದೇ ರೀತಿ ಲಂಕೇಶ್ ಶಿವಮೊಗ್ಗದಲ್ಲಿ ಇಂಗ್ಲಿಷ್ ಮೇಷ್ಟರಾಗಿದ್ದಾಗ ಗೋಪಾಲಗೌಡ ಹಾಗೂ ಸಮಾಜವಾದಿಗಳ ಸಂಗ ತಮ್ಮ ನೋಟವನ್ನು ಬದಲಿಸಿದ್ದನ್ನು ಕುರಿತು ತಮ್ಮ ಆತ್ಮಚರಿತ್ರೆ `ಹುಳಿಮಾವಿನಮರ’ದಲ್ಲಿ ಬರೆಯುತ್ತಾರೆ:
‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’
ವ್ಯಕ್ತಿಯ ಅಸ್ವಸ್ಥತೆಗಳನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಿದ್ದ ಲಂಕೇಶರ ಕಥಾಲೋಕ ವ್ಯಕ್ತಿಯ ಮೂಲಕವೇ ಸಮಾಜಪರೀಕ್ಷೆಯತ್ತ ವ್ಯಾಪಕವಾಗಿ ಹೊರಳಿಕೊಂಡ ಘಟ್ಟ ಇದು. ಅದಕ್ಕೆ ಗೋಪಾಲಗೌಡರ ಸಂಗ ಕೂಡ ಕಾರಣವಾಗಿತ್ತು.
ಗೋಪಾಲಗೌಡರು ಅವತ್ತು ಲೇಖಕರನ್ನು ಅಷ್ಟು ಹಚ್ಚಿಕೊಳ್ಳಲು ಕಾರಣವಿತ್ತು: ರಾಜಕಾರಣಿಗಳ ಪತನವನ್ನು ಕಂಡಿದ್ದ ಗೋಪಾಲಗೌಡರಿಗೆ ಸಾಹಿತಿಗಳ ಸಾಮಾಜಿಕ ಜವಾಬ್ದಾರಿಯ ಬಗ್ಗೆ, ಸಾಹಿತ್ಯ ಹಾಗೂ ಸಾಹಿತಿಗಳು ಜನರ ಮೇಲೆ ಬೀರಬಲ್ಲ ಪ್ರಭಾವದ ಬಗೆಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಗೋಪಾಲಗೌಡರೇ ಸ್ವತಃ ಹಾಡಿ ಮಂಡಿಸುತ್ತಿದ್ದ ಕುಮಾರವ್ಯಾಸ ಭಾರತದ ಜೊತೆಗೆ ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯಗಳ ಪರಿಚಯವೂ ಅವರಿಗಿತ್ತು. ಸಾಹಿತ್ಯದ, ಸಾಹಿತಿಗಳ ಪ್ರಭಾವದ ಬಗ್ಗೆ ಗೋಪಾಲಗೌಡರಿಗೆ ಇದ್ದ ನಿರೀಕ್ಷೆ ಕಾದಂಬರಿಕಾರ ತರಾಸು ಜೊತೆ ಅವರು ನಡೆಸಿದ ಒಂದು ಗಂಭೀರ ತಾತ್ವಿಕ ಚಕಮಕಿಯಲ್ಲಿ ವ್ಯಕ್ತವಾಗುತ್ತದೆ. ಈ ಚಕಮಕಿ ಕುರಿತು ತರಾಸು ಬರೆಯುತ್ತಾರೆ:
‘ಗತಿಸಿದ ಮೈಸೂರು ಮಹಾರಾಜರ ಕಲಾಪ್ರಜ್ಞೆಯ ಬಗ್ಗೆ ನಾನು ಮಾತಾಡುತ್ತಿದ್ದೆ. ನಾನು ಈ ಮಾತಾಡುತ್ತಿರುವಾಗ ಗೋಪಾಲಗೌಡರು ಪಿ. ಕಾಳಿಂಗರಾಯರೊಡನೆ ಅಲ್ಲಿಗೆ ಬಂದರು. ರಾಜಶಾಹಿ ಎಂದರೆ ಗೋಪಾಲಗೌಡರ ರಕ್ತ ಕುದಿಯುತ್ತಿತ್ತು. ಅಂಥವರಿಗೆ ನಾನು ಮಹಾರಾಜರ ಬಗ್ಗೆ ಮೆಚ್ಚಿಗೆಯ ಮಾತಾಡಿದ್ದನ್ನು ಕೇಳಿ ವಿಪರೀತ ಸಿಟ್ಟು ಬಂತು. ಎಲ್ಲ ಹಂಗು ಬಿಟ್ಟು ನನ್ನನ್ನು ಮೂದಲಿಸಿದರು. ‘ನೀನೊಬ್ಬ ಹಿಪೋಕ್ರೇಟ್’ ಎನ್ನುವವರೆಗೂ ಮಾತು ಬೆಳೆಯಿತು. ಕೈ ಕೈ ಕಲೆಯಬೇಕಾಗಿತ್ತು. ಮಧ್ಯದ ಸ್ನೇಹಿತರ ಪ್ರಯತ್ನದಿಂದ ಅದು ತಪ್ಪಿ, ನನ್ನ ಮೇಲೆ ಕೋಪ ಮಾಡಿಕೊಂಡೇ ಗೋಪಾಲಗೌಡರು ಶಾಸಕರ ಭವನಕ್ಕೆ ಹೋದರು...’
ಗೋಪಾಲಗೌಡರು ಮಾರನೆಯ ದಿನ ಬೆಳಗ್ಗೆಯೇ ತರಾಸು ಅವರನ್ನು ಹುಡುಕಿಕೊಂಡು ಬಂದರು. ‘ನಿನ್ನೆ ರಾತ್ರಿ ಆದದ್ದನ್ನು ಮರೆತುಬಿಡಿ’ ಎಂದು ತರಾಸುಗೆ ಹೇಳುತ್ತಲೇ ಗೋಪಾಲಗೌಡರು ಹೇಳಿದ ಅವರ ಆಳದ ಮಾತುಗಳು ಎಲ್ಲ ಕಾಲದ ಲೇಖಕ ಲೇಖಕಿಯರಿಗೂ, ಅಧ್ಯಾಪಕ ಅಧ್ಯಾಪಕಿಯರಿಗೂ ಅನ್ವಯವಾಗುವಂತಿವೆ: ‘ಮಾಮೂಲಿ ಜನ ಯಾರ ಬಗ್ಗೆ ಏನು ಮಾತಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಯೋಚನೆ ಇಲ್ಲ. ನೀವು ಸಾಹಿತಿಗಳು. ನಿಮ್ಮ ಮಾತಿಗೆ ಜನ ಬೆಲೆ ಕೊಡುತ್ತಾರೆ. ಹಾಗಿರುವಾಗ ಒಂದು ಕಡೆ ರಾಜಶಾಹಿಯ ವಿರುದ್ಧ ಮಾತನಾಡಿ, ಮತ್ತೊಂದು ಕಡೆ ರಾಜರನ್ನು ಹೊಗಳಿದರೆ ನಮ್ಮ ದಡ್ಡ ಜನ ನೀವು ಹೊಗಳಿದ್ದನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಬೈದುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಈ ಕೆಟ್ಟ ಪದ್ಧತಿಗಳ ಬಗ್ಗೆ ನೀವು ಯಾವತ್ತೂ ಒಳ್ಳೆಯ ಮಾತನ್ನು ಆಡಬಾರದು. ಸತ್ತ ಮೇಲಷ್ಟೇ ಅದಕ್ಕೆ ಬೊಜ್ಜ ಮಾಡಬೇಕು. ನೀವು ಸಾಹಿತಿಗಳು ಭಾರೀ ಅಪಾಯದ ಜನ; ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ನನಗೆ ಎಷ್ಟು ಪ್ರೀತಿಯೋ, ಅಷ್ಟೇ ಭಯ.’
ಗೋಪಾಲಗೌಡರಾಗಲೀ, ಅವರ ಗುರು ರಾಮಮನೋಹರ ಲೋಹಿಯಾ ಆಗಲೀ ಸಾಹಿತಿಗಳು ತಮ್ಮ ಪಕ್ಷದ ಅನುಯಾಯಿಗಳಾಗಬೇಕೆಂದಾಗಲೀ, ಪಕ್ಷದ ತುತ್ತೂರಿ ಊದಬೇಕೆಂದಾಗಲೀ ಎಂದೂ ಕೇಳಿದವರಲ್ಲ. ಲೋಹಿಯಾರಿಂದ ಪ್ರಭಾವಿತರಾದ ಖ್ಯಾತ ಮರಾಠಿ ಲೇಖಕ ಪು.ಲ. ದೇಶಪಾಂಡೆ ಈ ಕುರಿತು ಬರೆಯುವ ಮಾತು: ‘ಲೋಹಿಯಾರ ರಾಜಕೀಯ ಪಕ್ಷದೊಡನೆ ನನಗೆ ಯಾವ ಸಂಬಂಧವೂ ಇರಲಿಲ್ಲ. ಅದು ಇರಬೇಕೆಂದು ಅವರು ತಪ್ಪಿಯೂ ಕೂಡ ಸೂಚಿಸಲಿಲ್ಲ. ಅವರ ಕಲಾಭಿರುಚಿ ಉನ್ನತ ಮಟ್ಟದ್ದಾಗಿತ್ತು. ಆದ್ದರಿಂದ ಕಲಾವಿದರನ್ನು ಪಕ್ಷದ ಕಿನ್ನರಿ ಬಾರಿಸಲು ಹಚ್ಚುವ ಕಲಾಹೀನ ವಿಚಾರ ಅವರ ಮನಸ್ಸನ್ನು ಸೋಕುವುದೂ ಸಾಧ್ಯವಿರಲಿಲ್ಲ.’
ಇಪ್ಪತ್ತನೆಯ ಶತಮಾನದ ಅರವತ್ತರ ದಶಕದ ಹೊತ್ತಿಗಾಗಲೇ ಲೋಹಿಯಾ ದೇಶದ ಮಹತ್ವದ ಚಿಂತಕರಾಗಿ, ಧೀಮಂತ ವಿರೋಧಿ ನಾಯಕರಾಗಿ ರೂಪುಗೊಂಡಿದ್ದರು. ಸಾಮಾಜಿಕ-ರಾಜಕೀಯ ಕಾಳಜಿಗಳ ಚಿಂತಕರು, ಪತ್ರಕರ್ತರು, ಕಲಾವಿದರು, ಲೇಖಕ ಲೇಖಕಿಯರು, ಹೊಸ ತಲೆಮಾರಿನ ರಾಜಕಾರಣಿಗಳು ಲೋಹಿಯಾರ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದರು. ಆಗ ಲೋಹಿಯಾರತ್ತ ತಿರುಗಿದ ಆ ಕಾಲದ ಬಹುಮುಖ್ಯ ಸೃಜನಶೀಲ ಲೇಖಕರಿದ್ದಾರೆ: ಧರ್ಮವೀರ ಭಾರತಿ, ಶ್ರೀಕಾಂತ ವರ್ಮ, ಪು. ಲ. ದೇಶಪಾಂಡೆ, ತೇಜಸ್ವಿ, ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಲೋಹಿಯಾ ವಿವರಿಸುತ್ತಿದ್ದ ಭಾರತೀಯ ಸಮಾಜವಾದದ ಮಾದರಿ ಹಾಗೂ ಬರಹಗಾರರ ಸ್ವಾತಂತ್ರ್ಯದ ಬಗ್ಗೆ ಲೋಹಿಯಾಗಿದ್ದ ಗೌರವ, ನಂಬಿಕೆ; ಲೋಹಿಯಾರ ಸಮಾನತಾವಾದಿ ರಾಜಕಾರಣ, ಉದಾರವಾದಿ ನೋಟ; ಹಾಗೂ ಸಂಸ್ಕೃತಿ, ಸಮಾಜಗಳ ಹೊಸ ವ್ಯಾಖ್ಯಾನಗಳು ಅಂದಿನ ನೂರಾರು ಲೇಖಕ, ಲೇಖಕಿಯರನ್ನು ಅವರತ್ತ ಸೆಳೆದಂತಿದೆ. ಸ್ವತಃ ಲೋಹಿಯಾ ಗಂಭೀರ ಲೇಖಕರಾಗಿದ್ದುದು ಕೂಡ ಈ ಸೆಳೆತಕ್ಕೆ ಮತ್ತೊಂದು ಕಾರಣವಾಗಿತ್ತು.
ಇಂಥ ಸಂಬಂಧದ ಪರಂಪರೆಯಿರುವ ದೇಶದಲ್ಲಿ ಇವತ್ತು ಇಡೀ ಭಾರತದಲ್ಲಿ ರಾಜಕಾರಣಿಗಳು ಇಷ್ಟೊಂದು ಅಸೂಕ್ಷ್ಮವಾಗಿ ಮಾತಾಡುತ್ತಿರುವ ರೀತಿಗೆ ತಂತಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯದಲ್ಲಿ ಭಾಷೆ, ಚಿಂತನೆಗಳು ಬಳಕೆಯಾಗುವ ರೀತಿಯ ಬಗೆಗಿನ ಅವರ ಸಂಪೂರ್ಣ ಅಜ್ಞಾನ ಕೂಡ ಒಂದು ಕಾರಣವಿರಬಹುದು, ಅಲ್ಲವೆ?
ಇಷ್ಟಾಗಿಯೂ, ಈ ಸತ್ಯ ರಾಜಕಾರಣಿಗಳಿಗಷ್ಟೇ ಅನ್ವಯಿಸುತ್ತದೆ ಎಂದು ಪ್ರಲಾಪಿಸಲಾಗದು. ಗಂಭೀರ ಸಾಹಿತ್ಯದ ಸಂಪರ್ಕ ಕಳೆದುಕೊಂಡು ಜಡರಾಗತೊಡಗುವ ಲೇಖಕ ಲೇಖಕಿಯರು, ಅಧ್ಯಾಪಕ ಅಧ್ಯಾಪಕಿಯರು, ಪತ್ರಕರ್ತರು, ಲಾಯರುಗಳು, ಕಲಾವಿದರು ಎಲ್ಲರಿಗೂ ಈ ಸತ್ಯ ಅನ್ವಯಿಸಬಲ್ಲದು. ಹಲವು ಬಗೆಯ ವೃತ್ತಿಗಳಲ್ಲಿ ತೊಡಗಿರುವ ಮಂದಿ ಸುಲಭ ಮನರಂಜನೆಯ ಮೊಬೈಲ್ ಬಿಟ್ಟು ಕೊನೇ ಪಕ್ಷ ರಾತ್ರಿ ಒಂದೇ ಒಂದು ಗಂಟೆ ಕಾಲ ಉತ್ತಮ ಸಾಹಿತ್ಯದ ಸಂಗದಲ್ಲಿದ್ದರೆ ಸಾಕು: ಅದು ಭಾಷೆ, ನಡವಳಿಕೆ, ಚಿಂತನೆಗಳ ಸೂಕ್ಷ್ಮತೆಗಳನ್ನು ಕಲಿಸಬಲ್ಲದು ಎಂಬುದರ ಬಗ್ಗೆ ಅನುಮಾನವಿರಬೇಕಾಗಿಲ್ಲ. ಈ ಸರಳ ಸತ್ಯವನ್ನು ಅನುಮಾನಿಸುವ ಸಿನಿಕತೆ, ವಿತಂಡವಾದಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ!