Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
26 Apr 2026 ಮನುಜರ ಮೇಲೆ ಬರೆಯುವುದು!

ಬಾಲ್ಯದಲ್ಲಿ ಶಾಲಾ ಪುಸ್ತಕದಲ್ಲಿ ಓದಿದ ಒಂದು ಪ್ರಸಂಗ ಇವತ್ತಿಗೂ ನನ್ನನ್ನು ಕೆಣಕುತ್ತಿರುತ್ತದೆ. ಕನ್ನಡ ಕವಿ ರಾಘವಾಂಕ ಹಿರಿಯ ಕವಿ ಹರಿಹರನ ‌ಸೋದರಳಿಯ. ರಾಘವಾಂಕ ಬರೆಯಲು ಶುರುಮಾಡುವ ಹೊತ್ತಿಗಾಗಲೇ ಹರಿಹರ ತನ್ನ ‘ಬಸವರಾಜ ದೇವರ ರಗಳೆ’, ‘ಮಹಾದೇವಿಯಕ್ಕನ ರಗಳೆ’, ‘ಕುಂಬಾರ ಗುಂಡಯ್ಯನ ರಗಳೆ’ ಕಾವ್ಯಗಳನ್ನು ಬರೆದು ಮುಗಿಸಿದ್ದನೆಂದು ಊಹಿಸಬಹುದು.

ರಾಘವಾಂಕ ತನ್ನ ‘ಹರಿಶ್ಚಂದ್ರ ಕಾವ್ಯ’ವನ್ನು ಬರೆದುಕೊಂಡು ಹೋಗಿ ಹರಿಹರನಿಗೆ ತೋರಿಸಿದ. ಮನುಷ್ಯಮಾತ್ರರಾದ ರಾಜರ ಮೇಲೆ ಏಕೆ ಕಾವ್ಯ ಬರೆದೆ ಎಂದು ಕೋಪಗೊಂಡ ಹರಿಹರ ರಾಘವಾಂಕನ ಕಪಾಳಕ್ಕೆ ಹೊಡೆದ. ಆಗ ಅವನ ಹಲ್ಲುಗಳು ಮುರಿದುಹೋದವು. ಇದು ಆ ಕಾಲದ ದಂತಕತೆ; ‘ದಂತ’ ಕತೆ ಕೂಡ! ಆ ಘಟ್ಟದಲ್ಲಿ ಹರಿಹರ ರಾಘವಾಂಕನಿಗೆ ಹೇಳಿದನೆನ್ನಲಾದ ಮಾತು ಪ್ರಖ್ಯಾತವಾಯಿತು. ಅದು ಪಂಪಾಶತಕದಲ್ಲಿರುವುದನ್ನು ಗೆಳೆಯ ಮೋಹನ್ ಮಿರ್ಲೆ ಹುಡುಕಿಕೊಟ್ಟರು:

ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆಯಕ್ಕಟಾ 
ತನತನಗಿಂದ್ರ ಚಂದ್ರ ರವಿ ಕರ್ಣ ದಧೀಚಿ ಬಲೀಂದ್ರನೆಂದು ಮೇಣ್ 
ಅನವರತಂ ಪೊಗಳ್ದು ಕೆಡಬೇಡಲೆ ಮಾನವ ನೀನಹರ್ನಿಶಂ 
ನೆನೆ ಪೊಗಳರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಂ 

ಹರಿಹರ ಪದ್ಯದ ಕೊನೆಗೆ, ಬರೆದರೆ ಹಂಪೆಯ ವಿರೂಪಾಕ್ಷನ ಬಗ್ಗೆ ಕಾವ್ಯ ಬರೆಯಬೇಕು ಎಂದು ಮೇಲ್ನೋಟಕ್ಕೆ ಹೇಳಿದ್ದರೂ ಅದರ ರೂಪಕಾರ್ಥವನ್ನು ಹೀಗೂ ನೋಡಬಹುದು: ಸಾಧಾರಣ ಮನುಷ್ಯರು ಕಾವ್ಯದ ವಸ್ತುವಾಗಲು ತಕ್ಕವರಲ್ಲ; ಕನಿಷ್ಠರನ್ನು ಇಂದ್ರ, ಚಂದ್ರ, ದಧೀಚಿ ಎಂದೆಲ್ಲ ಹೊಗಳುತ್ತಾ ಕೆಡಬಾರದು;  ಆದರ್ಶವಾದದ್ದನ್ನು ಕುರಿತು ಬರೆ ಎಂಬ ಒಂದು ಸೂಚನೆಯೂ ಇದೆ. ಇತರ ಓದುಗಿಯರಿಗೆ, ಓದುಗರಿಗೆ ಇದರಲ್ಲಿ ಬೇರೆ ಬೇರೆ ಅರ್ಥ ಕಾಣಲೂಬಹುದು. 

‘ಹಾಗಾದರೆ ಹರಿಹರ ‘ಮನುಷ್ಯ’ ಬಸವಣ್ಣನ ಬಗ್ಗೆ ಬರೆದನಲ್ಲ?’ ಎಂದರು ಗೆಳೆಯರು.

‘ಹರಿಹರ ತನ್ನ ಕಾಲದ ‘ಮನುಷ್ಯ’ ಬಸವಣ್ಣನನ್ನು ಆದರ್ಶ ಪಾತ್ರವನ್ನಾಗಿಸಿ ಬರೆದ’ ಎಂದು ತಕ್ಷಣ ಅನ್ನಿಸಿದ್ದನ್ನು ಹೇಳಿದೆ. ಆದರೆ ಕೆಲವು ವರ್ಷಗಳ ಕೆಳಗೆ ’ಮುಂದಣ ಕಥನ’ ನಾಟಕ ಬರೆಯುವಾಗ ವಚನಯುಗದ ಅನೇಕ ಕೃತಿಗಳನ್ನು ಜಾಲಾಡುತ್ತಿದ್ದಾಗ, ಬಸವಣ್ಣನನ್ನು ಪವಾಡಪುರುಷನ್ನಾಗಿ ಮಾಡಿದ ಹರಿಹರ ಬಸವಣ್ಣನ ವೈಚಾರಿಕ ವ್ಯಕ್ತಿತ್ವಕ್ಕೆ ಅನ್ಯಾಯ ಮಾಡಿದ್ದಾನೆ ಎನ್ನಿಸತೊಡಗಿತು. ಬಸವಣ್ಣ ತೀರಿಕೊಂಡ ನಂತರದ ಐವತ್ತು ವರ್ಷಗಳ ಆಸುಪಾಸಿನಲ್ಲಿ ಬದುಕಿದ್ದ ಹರಿಹರ ಬರೆದ ‘ಬಸವರಾಜದೇವರ ರಗಳೆ’ ಓದಲು, ಕೇಳಿಸಿಕೊಳ್ಳಲು ತುಂಬಾ ಸುಂದರವಾದ ಕಾವ್ಯ; ಆದರೆ, ವೈಭವೀಕರಣದತ್ತಲೇ ಎಳೆದೊಯ್ಯುವ ರಗಳೆಯ ಛಂದೋರೂಪದ ಹರಿವು ಈ ಕೃತಿಯ ವಸ್ತುವಿನ್ಯಾಸವನ್ನು  ನಿಯಂತ್ರಿಸಿದಂತಿದೆ ಅನ್ನಿಸುತ್ತಿತ್ತು. ಇದು ಛಂದೋರೂಪಗಳ ಸಾಂಸ್ಕೃತಿಕ ರಾಜಕಾರಣವೂ ಇರಬಹುದು. ಅಕಸ್ಮಾತ್ ಹರಿಹರನ ಕಾಲದಲ್ಲಿ ಬಸವಣ್ಣ ಬದುಕಿದ್ದು, ‘ಬಸವರಾಜ ದೇವರ ರಗಳೆ’ಯನ್ನು ನೋಡಿದ್ದರೆ? ಹರಿಹರನ ದಂತಭಗ್ನ ನಡೆಯದಿದ್ದರೂ, ‘ಬಸವರಾಜ’ ವೈಭವೀಕರಣವನ್ನು ಬಸವಣ್ಣ ಖಂಡಿತಾ ಒಪ್ಪುತ್ತಿರಲಿಕ್ಕಿಲ್ಲ!

ಇದೆಲ್ಲ ನೆನಪಾದದ್ದು ಮೊನ್ನೆ ಪ್ರೊಫೆಸರೊಬ್ಬರು ಕೇಳಿದ ಕುತೂಹಲದ ಪ್ರಶ್ನೆಯ ಹಿನ್ನೆಲೆಯಲ್ಲಿ:

‘ನಾನು ಬದುಕಿದ್ದಾಗಲೇ ನೀನು ಏನು ಬರೀತೀಯ ಅಂತ ತಿಳಿಯುವ ಆಸೆ ನನ್ನದು’ ಎಂದರು ಪ್ರೊಫೆಸರ್‍. ಕೆಲವು ವಾರಗಳ ಕೆಳಗೆ ಇದೇ ಅಂಕಣದಲ್ಲಿ ಪ್ರಕಟವಾದ ‘ಸತ್ತವರ ಸವಿ ನೆರಳು’ ಬರಹ ಓದಿದ ಹಿನ್ನೆಲೆಯಲ್ಲಿ ಈ ಕುತೂಹಲ ಮಾತಿನ ನಡುವೆ ಹೊರಬಿತ್ತು.    

ಈ ಆಸೆ ಕೇಳಿದ ನನಗೂ, ’ನೀಲಿ ಬಾವುಟ’ದ ಅಂಕಣಕಾರ ಕವಿ ಸುಬ್ಬುವಿಗೂ ‘ಕವಿರತ್ನ ಕಾಳಿದಾಸ’ ಎಂಬ ಜನಪ್ರಿಯ ಸಿನಿಮಾದ ಭೋಜರಾಜನ ಆಸೆ ನೆನಪಾಯಿತು. ಇಂಥ ಆಸೆ ಎಲ್ಲರಿಗೂ ಇರಬಹುದೇನೋ. ಸತ್ತಾಗ ಯಾರು, ಹೇಗೆ ಅಳುತ್ತಾರೆ ಎಂದು ಊಹಿಸುವುದು ಜನರ ಸೋಮಾರಿ ಗಳಿಗೆಗಳ ಒಂದು ಕುತೂಹಲಕರ ಪಾಸ್ ಟೈಂ ಆಗಿರಬಲ್ಲದು! ಆದ್ದರಿಂದಲೇ ಕವಿ ಅಥವಾ ಲೇಖಕ ನಮ್ಮ ಆತ್ಮೀಯ ಮಿತ್ರನಾಗಿದ್ದರೆ ನಾವು ತೀರಿಕೊಂಡಾಗ ಆತ ಏನು ಬರೆಯಬಹುದು ಎಂಬ ಕುತೂಹಲ ಸಹಜ!  

ಮೇಲೆ ಹೇಳಿದ ಪ್ರೊಫೆಸರ್ ಬಗ್ಗೆ ಕೆಲವು ದಿನಗಳ ಕೆಳಗೆ ಸಹೋದ್ಯೋಗಿಗಳು ಪದ್ಯವೊಂದನ್ನು ಬರೆದು ಅರ್ಪಿಸಿದ್ದರು. ಅದರಲ್ಲಿ ಸಹೋದ್ಯೋಗಿಗಳ ಪ್ರೀತಿಯೂ ಇರಬಹುದು.  ಈ ನಡುವೆ ಕವಿಯೊಬ್ಬರು ‘ನನ್ನ ಮೇಲೆ ಹಿರಿಯ ಕವಿಯೊಬ್ಬರು ಬರೆದಿರುವ ‘ಬಂಡೆಯಂಥ ಬಲಭೀಮ’ ಎಂಬ ಪದ್ಯವನ್ನು ನೀವು ಓದಲೇಬೇಕು’ ಎಂದರು. ಆ ಕವಿ ಇನ್ನೊಬ್ಬರ ಬಗ್ಗೆ ‘ಚಂದ್ರಕಿರಣದ ಚಂಪಕಮಾಲಾ’ ಎಂಬ ಪದ್ಯವನ್ನೂ ಬರೆದಿರಬಹುದು. ಇವನ್ನೆಲ್ಲ ಬರೆದವರಿಗೆ, ಬರೆಸಿಕೊಂಡವರಿಗೆ ಇದರಿಂದೆಲ್ಲ ಖುಷಿ, ಲಾಭ ಇರಬಹುದು. ಅದೇ ಬೇರೆ ಕತೆ. ಆದರೆ ಅದರಲ್ಲೆಲ್ಲ ಕಾವ್ಯ ಇರುವುದು ಕಷ್ಟ ಅನ್ನಿಸಿ ಓದುವ ಉತ್ಸಾಹ ಮೂಡುವುದಿಲ್ಲ.  

ಮಸಲಾ ವಿಚಾರ: ಯಾವುದೇ ವ್ಯಕ್ತಿಯ ವ್ಯಕ್ತಿತ್ವ, ಕೃತಿಗಳು ಬರೆಯುವರೊಳಗೆ ಆಳವಾಗಿ ಇಳಿಯದಿದ್ದರೆ, ಪ್ರಾಮಾಣಿಕ ಕೃತಿ ಹುಟ್ಟಲಾರದು. ಈ ಮಾತು ಬರೆಯುತ್ತಿರುವಾಗ, ಇಂಗ್ಲಿಷ್ ಕವಿ ಜಾನ್ ಕೀಟ್ಸ್ ತೀರಿಕೊಂಡಾಗ ಅವನ ಕಾಲದ ಕವಿ ಶೆಲ್ಲಿ ಬರೆದ ‘ಅಡೋನಿಸ್’ ಖಂಡ ಕಾವ್ಯ ನೆನಪಾಯಿತು. ಅದರ ಎಳೆ ಮನದಲ್ಲಿ ಉಳಿದಿತ್ತು; ಮತ್ತೆ ಖಂಡ ಕಾವ್ಯ ಓದಿನೋಡಿದೆ. ಜೊತೆಗಾರ ಕವಿಯ ಬಗ್ಗೆ ಪ್ರೀತಿ, ಅವನ ಕೃತಿಗಳ ಬಗ್ಗೆ ಗೌರವ, ಮೋಹ ಇವೆಲ್ಲ ಇದ್ದರೆ ಮಾತ್ರ ಇಂಥ ಅದ್ಭುತ ಶೋಕಗೀತ ಮೂಡಬಲ್ಲದು ಎನ್ನಿಸತೊಡಗಿತು: 

ಇಪ್ಪತ್ತೈದನೇ ವರ್ಷಕ್ಕೆ ತೀರಿಕೊಂಡ ಕೀಟ್ಸ್ ಬಗ್ಗೆ ಬರೆಯಹೊರಟ ಶೆಲ್ಲಿಗೆ ಗ್ರೀಕ್ ಪುರಾಣದ ಅಡೋನಿಸ್ ನೆನಪಾದ. ಅಡೋನಿಸ್ ಗ್ರೀಕ್ ಕತೆಗಳ ಸುರ ಸುಂದರ; ಸೌಂದರ್ಯ ದೇವತೆ ಆಫ್ರೊದಿತಿಯ ಪ್ರಿಯಕರ. ಕೀಟ್ಸ್ ಬರೆದ ‘ಎಂಡೀಮಿಯನ್’ ಕವಿತೆಯನ್ನು ಇಷ್ಟ ಪಡದ ಶೆಲ್ಲಿಗೆ, ಅವನ ‘ಹೈಪೀರಿಯನ್’ ಪದ್ಯ ಓದಿದ ನಂತರ, ಕೀಟ್ಸ್ ಕಾವ್ಯದ ಮಹತ್ವ ಗೊತ್ತಾಗಿತ್ತು. ಕೀಟ್ಸ್‌ಗೆ ಕ್ಷಯರೋಗ ಅಂಟಿಕೊಂಡಾಗ ಇಟಲಿಯ ಪೀಸಾ ನಗರದಲ್ಲಿದ್ದ ಶೆಲ್ಲಿ ಮತ್ತವನ ಪತ್ನಿ ಕೀಟ್ಸ್ ಆರೋಗ್ಯ ಸುಧಾರಿಸಿಕೊಳ್ಳಲು ತಮ್ಮ ಜೊತೆಗಿರುವಂತೆ ಕರೆದರು. ಆಗ ಶೆಲ್ಲಿ, ‘ನನ್ನನ್ನು ಮೀರಿಸುವ ಕವಿಯೊಬ್ಬನನ್ನು ನಾನು ಆರೈಕೆ ಮಾಡಲಿದ್ದೇನೆ ಎಂಬುದು ನನಗೆ ಗೊತ್ತು. ಅದು ಕೂಡ ಅವನನ್ನು ಇಲ್ಲಿಗೆ ಕರೆಯಲು ಕಾರಣ; ಅದು ನನ್ನ ಖುಷಿಯನ್ನು ಹೆಚ್ಚಿಸಿದೆ’ ಎಂದಿದ್ದ. ಶೆಲ್ಲಿಯ ಊರಿಗೆ ಹೊರಟಿದ್ದ ಕೀಟ್ಸ್ ಮಾರ್ಗಮಧ್ಯದಲ್ಲಿ ರೋಮ್‌ನಲ್ಲಿ ತೀರಿಕೊಂಡ. ಆ ಕಾಲದಲ್ಲಿ ಶೆಲ್ಲಿ ಬರೆದ ‘ಅಡೋನಿಸ್’ ಖಂಡಕಾವ್ಯ ‘ಪಾಸ್ಟೊರಲ್ ಎಲಿಜಿ’ ಮಾದರಿಯ ಅಮರ ಕಾವ್ಯವಾಯಿತು.

ಅಡೊನಿಸ್ ತೀರಿಕೊಂಡಿದ್ದಾನೆ; ಬಾ ಯುರೇನಿಯಾ ಶೋಕಿಸು ಎಂದು ದೇವತೆಯನ್ನು ಶೆಲ್ಲಿ ಕರೆಯುತ್ತಾನೆ. ಕೀಟ್ಸನ ಕಾವ್ಯದ ವಸ್ತುವನ್ನು ಕರೆದು ಬಾ ಕವಿಗಾಗಿ ಶೋಕಿಸು ಎನ್ನುತ್ತಾನೆ. ಕಾವ್ಯವಸ್ತು ಬಂದು ಶೋಕಿಸುತ್ತದೆ. ಕೀಟ್ಸ್ ಹಾಡಿಹೊಗಳಿದ ಪ್ರಕೃತಿ ಬಂದು ಶೋಕಿಸುತ್ತದೆ. ಆದರೆ ಪ್ರಕೃತಿಗೆ ಹೊಸ ಜೀವ ಕೊಡುವ ವಸಂತ ಋತು ಕವಿಗೆ ಜೀವ ತುಂಬಲಾರದು. ಯುರೇನಿಯಾ ದೇವಿ ಕವಿಯ ಸಾವಿನ ಕೋಣೆಯವರೆಗೂ ಹೋಗಿ ನಾನು ಸಾವಿನಲ್ಲಿ ನಿನ್ನೊಡನೆ ಸೇರಲಾರೆನಲ್ಲಾ ಎಂದು ಅಳುತ್ತಾಳೆ. ಬೈರನ್, ಶೆಲ್ಲಿ ಥರದ ಜೊತೆಗಾರ ಕವಿಗಳು ಶೋಕಿಸುತ್ತಾರೆ. ಕೀಟ್ಸ್ ಕಾವ್ಯ ಕುರಿತು ‘ಕ್ವಾರ್ಟರ್‍ಲಿ ರಿವ್ಯೂ’ ಪತ್ರಿಕೆಯಲ್ಲಿ ಬಂದ ಅನಾಮಧೇಯ ವಿಮರ್ಶೆ ಕೂಡ ಕವಿಯ ಸಾವಿಗೆ ಕಾರಣ ಎಂದು ಶೆಲ್ಲಿ ತಪ್ಪಾಗಿ ತಿಳಿದ್ದರಿಂದ ಆ ಅನಾಮಧೇಯ ವಿಮರ್ಶಕನೂ ತರಾಟೆಗೆ ಗುರಿಯಾಗುತ್ತಾನೆ. 

‘ಅಡೋನಿಸ್’ ಖಂಡಕಾವ್ಯದ ಕೊನೆಗೆ, ಯಾರೂ ಶೋಕಿಸಬೇಡಿ, ಕೀಟ್ಸ್ ಸತ್ತಿಲ್ಲ ಎನ್ನುತ್ತಾನೆ ಶೆಲ್ಲಿ: ಅವನು ಬದುಕಿದ್ದಾನೆ, ಅವನು ಎದ್ದಿದ್ದಾನೆ. ಸಾವೇ ಸತ್ತು ಹೋಗಿದೆ; ಅವನು ಸತ್ತಿಲ್ಲ. ಅಡೋನಿಸನಿಗಾಗಿ ಶೋಕಿಸದಿರಿ; ಅವನೀಗ ಪ್ರಕೃತಿಯಲ್ಲಿ ಒಂದಾಗಿದ್ದಾನೆ. ಗುಡುಗಿನ ನರಳಿನಿಂದ ಹಿಡಿದು ರಾತ್ರಿಯ ಮಧುರ ಹಕ್ಕಿಯ ಗಾನದವರೆಗೂ ಪ್ರಕೃತಿಯ ಸಂಗೀತದಲ್ಲಿ ಅವನ ದನಿ ಕೇಳಿಸುತ್ತಿದೆ; ಕತ್ತಲಲ್ಲಿ, ಬೆಳಕಿನಲ್ಲಿ ಅವನ ಇರವಿದೆ…ಅವನು ಸತ್ತಿಲ್ಲ; ಬದುಕಿರುವವರೇ ಸತ್ತಿರುವರು ಎನ್ನುತ್ತಾನೆ; ಕೊನೆಗೆ ಸ್ವತಃ ಶೆಲ್ಲಿಗೇ ‘ನಾನೀಗ ಈ ಬದುಕಿನಿಂದ ಹೊರಡಬೇಕು… ಅಮರವಾಗಿ ಉಳಿವವರ ನಡುವೆ ತಾರೆಯಂತೆ ಹೊಳೆವ ಕೀಟ್ಸನ ಕಡೆಗೆ  ತೆರಳಬೇಕು’ ಅನ್ನಿಸುತ್ತದೆ… 

ತನಗೆ ಪ್ರಿಯವಾಗಿದ್ದ 'ಎಂಡೀಮಿಯನ್’ ಪದ್ಯವನ್ನು ಶೆಲ್ಲಿ ಇಷ್ಟಪಡದಿದ್ದುದು ಕೀಟ್ಸನನ್ನು ಬಾಧಿಸಿತ್ತು; ನಂತರದ ’ಹೈಪೀರಿಯನ್’ ಪದ್ಯವನ್ನು ಶೆಲ್ಲಿ ಇಷ್ಟಪಟ್ಟಿದ್ದ. ಆದರೆ ಕೀಟ್ಸ್ ತನ್ನ ಕಾಲದ ದೊಡ್ಡ ಕವಿ ಶೆಲ್ಲಿಯ ಪೂರ್ಣ ಮೆಚ್ಚುಗೆಗಾಗಿ ಕಾತರಿಸುತ್ತಿದ್ದಂತಿತ್ತು. ಆದರೆ ಕೀಟ್ಸ್ ಬದುಕಿದ್ದಾಗಲೇ ಶೆಲ್ಲಿ ಮೆಚ್ಚುಗೆಯ ಕಾವ್ಯ ಬರೆಯುವುದು ಸಾಧ್ಯವಿತ್ತೆ? ಬರೆದಿದ್ದರೆ ಕೀಟ್ಸ್ ಖುಷಿ ಪಡುತ್ತಿದ್ದನೆ? ಆದರೆ ಕೀಟ್ಸ್ ಬದುಕಿದ್ದಾಗ ‘ಅಡೋನಿಸ್’ ಕಾವ್ಯದ ಭಾವ ಉಕ್ಕಿ ಹರಿಯುತ್ತಿತ್ತೆ? ಈ ಥರದ ಪ್ರಶ್ನೆಗಳು ಎದುರಾಗುತ್ತವೆ. 

ಗೆಳೆಯ-ಕತೆಗಾರ ‘ಮೊಗಳ್ಳಿ ಗಣೇಶ್ ಇದ್ದಾಗಲೇ ನೀವು ‘ಮಯೂರದಲ್ಲಿ ಬರೆದ ಬರಹ ಬಂದಿದ್ದರೆ ಬಹಳ ಖುಷಿಪಡುತ್ತಿದ್ದ’ ಎಂದು ಸುಬ್ಬು ಹೇಳಿದ್ದು ನೆನಪಾಯಿತು. ಅದು ನಿಜವಿರಬಹುದು; ಆದರೆ ಯಾವುದೇ ನಿಜವಾದ ಬರಹವನ್ನು ‘ಬರೆಸುವ’ ಭಾವ ಸಹಜವಾಗಿ ‘ಹುಟ್ಟುವ’ ತನಕ ತೀವ್ರವಾಗಿ ಬರೆಯುವುದು ಕಷ್ಟ! ಕೀಟ್ಸ್ ಕುರಿತು ಬರೆಯಬೇಕೆಂದು ಕೀಟ್ಸ್ ಕವಿತೆಗಳೇ ಶೆಲ್ಲಿಯನ್ನು ಬರೆಯುವಂತೆ ಪ್ರೇರೇಪಿಸದವಲ್ಲವೆ! ಇಂಥ ಪ್ರೇರೇಪಣೆ ಕವಿ ಇದ್ದಾಗಲೇ ಹುಟ್ಟುವುದಿಲ್ಲವೆ? ಹಾಗೆ ಹುಟ್ಟಲು ಎಂಥದಾದರೂ ತೀವ್ರ ಭಾವ ಒಳಗಿಂದ ಗುದ್ದಿಕೊಂಡು ಬರಬೇಕಲ್ಲವೆ? 

ಬದುಕಿರುವವರ ಮುಲಾಜಿನಲ್ಲಿ ಮುಕ್ತ, ಸ್ವತಂತ್ರ ಭಾವಗಳು ಹುಟ್ಟುವುದು ಕಷ್ಟವೇನೋ!  ಅವು ಮೂಡಿದ್ದು ಮೂಡಿದ ಹಾಗೆಯೇ ಹುಲು ಮಾನವರು ಬರೆಯಬಲ್ಲರೆ? ಹಾಗೆ ಬರೆದವರಿದ್ದಾರೆ. ಏನನ್ನಾದರೂ ಕಾವ್ಯ ಮಾಡಬಲ್ಲ ಅಪ್ಪಟ ಕವಿ, ಕವಯಿತ್ರಿಯರು ಅಂಥದನ್ನು ಬರೆದಿದ್ದಾರೆ. ಸಾವು, ಅಗಲಿಕೆಯಷ್ಟೇ ತೀವ್ರ ಭಾವ ಹುಟ್ಟಿಸಿದ ಉತ್ಕಟ ಪ್ರೇಮ ಕಾಮ ವಿರಹಗಳ ಸಂದರ್ಭದಲ್ಲಿ ಅಂಥ ಅದ್ಭುತ ಕೃತಿಗಳು ಹುಟ್ಟಿವೆ. ಅಂಥವರ ಸಂತತಿ ಹೆಚ್ಚಲಿ! 
 
ಕೊನೆ ಟಿಪ್ಪಣಿ: ಮತ್ತೆ ಹರಿಶ್ಚಂದ್ರ! 

ಮನುಜರ ಮೇಲೆ ಕಾವ್ಯ ಬರೆವ ಕಷ್ಟ, ಹರಿಶ್ಚಂದ್ರ ಕಾವ್ಯ ಬರೆದ ರಾಘವಾಂಕನ ಕಷ್ಟ… ಇದರ ಬಗ್ಗೆ ಬರೆಯುತ್ತಿರುವಾಗಲೇ ರಾಜಪ್ಪ ದಳವಾಯಿಯವರ ‘ಹರಿಶ್ಚಂದ್ರ’ಕ್ಕೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ಹುಟ್ಟಿದ ಆ ಕ್ಷಣದ ಮೆಚ್ಚುಗೆ:   

‘ಶಿಷ್ಯವತ್ಸಲ’ ಬಿರುದಾಂಕಿತ ಗೆಳೆಯ ರಾಜಪ್ಪ ದಳವಾಯಿ ಮಾಡಿರುವ ‘ಹರಿಶ್ಚಂದ್ರ’ ಕಿರು ಸಿನಿಮಾಕ್ಕೆ ಕೊಚ್ಚಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಬಂದಿದೆ. ಅದರಲ್ಲಿ ಪಾತ್ರ ಮಾಡಿರುವ ಸಂಪತ್ ಮೈತ್ರೇಯ ನನ್ನ ಪ್ರೀತಿಯ ನಟ. ಈ ಗೆಳೆಯರಿಬ್ಬರೂ ನನ್ನೊಳಗೆ ಇರುವವರು. ಆದ್ದರಿಂದಲೋ ಏನೋ, ಈ ಮೆಚ್ಚುಗೆ ಈ ಗಳಿಗೆಯಲ್ಲಿ ತಂತಾನೇ ಹುಟ್ಟಿತು…ಇದು ದಳವಾಯಿಯೊಳಗೆ ನೆಲೆಸಿ ನಿತ್ಯ ಬೆಳೆಯುವ ಸಾವಿರಾರು ಕನ್ನಡ ಸಾಹಿತ್ಯ ಪಠ್ಯಗಳ ವಿಶಿಷ್ಟ ಜ್ಞಾನ; ಸಂಪತ್ ಮೈತ್ರೇಯನ ಅನನ್ಯ ನಟನಾಪ್ರತಿಭೆ- ಇವು ತಂತಾವೇ ಹುಟ್ಟಿಸಿದ ಮೆಚ್ಚುಗೆ ಕೂಡ. 
ಚಿಯರ್‍ಸ್!
 

blog
19 Apr 2026 ಬಿಸಿಲಣ್ಣು ಉಂಡವರು; ಬೆಳದಿಂಗಳು ಹಂಚಿದವರು

‘ಬಿಸಿಲಣ್ಣು ಉಂಡೀದಿ; ಬೆಳದಿಂಗಳ ಕಂಡೀದಿ…’

ಕವಿ ರವೀಂದ್ರನಾಥ ಟ್ಯಾಗೋರರನ್ನು ಬೇಂದ್ರೆ ಬಣ್ಣಿಸುವ ಈ ಪರಿಯನ್ನು ಕೀರಂ ಮೈದುಂಬಿ ಎರಚುತ್ತಿದ್ದರು! ಕವಿರೂಪಕಗಳೇ ಕಣ್ಣಾಗಿರುವ ನನ್ನಂಥವರಿಗೆ ಬಿಸಿಲು ರೇಗುತ್ತಿರುವ ಈ ಕಾಲದಲ್ಲಿ ಈ ಬಣ್ಣನೆ ನೆನಪಾದದ್ದು ಸಹಜವಾಗಿತ್ತು. ಈ ಬಣ್ಣನೆಯ ಜೊತೆಗೇ, ಬಿಸಿಲಣ್ಣು ಉಂಡು, ಬೆಳದಿಂಗಳು ಹಂಚಿದ ಮಹಾನ್ ಗುರುಗಳ ಬಗ್ಗೆ ನಂಜನಗೂಡಿನ ಕಾಲೇಜಿನಲ್ಲಿ ಮಾತಾಡಿದ್ದು, ಅಂಕಣವೊಂದರಲ್ಲಿ ಬರೆದದ್ದು ನೆನಪಾಯಿತು; ಆ ಅಂಕಣವನ್ನು ಗೆಳೆಯ ಜಯಶಂಕರ ಹಲಗೂರ್‍ ನಂಜನಗೂಡಿನ ಪ್ರಥಮದರ್ಜೆ ಕಾಲೇಜಿಗೆ ವರ್ಗವಾದಾಗ ಅಲ್ಲಿನ ಹುಡುಗ ಹುಡುಗಿಯರಿಗೆ ಓದಿ ಹೇಳಿದ್ದು ಕೂಡ… 

ಕುತೂಹಲಕ್ಕೆ ಗಮನಿಸಿ: ಬುದ್ಧ, ಮಹಾವೀರ, ಬಸವಣ್ಣ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಜಗಜೀವನರಾಮ್... ಎಲ್ಲರೂ ಏಪ್ರಿಲ್-ಮೇ ತಿಂಗಳ ನಡುವೆ ಉರಿಬಿಸಿಲಿನ ಕಾಲದಲ್ಲೇ ಹುಟ್ಟಿದ್ದರು. ಆದ್ಯ ವಚನಕಾರ ದಾಸಿಮಯ್ಯ, ಕವಯಿತ್ರಿ ಅಕ್ಕಮಹಾದೇವಿ ಕೂಡ ಬೇಸಗೆಯಲ್ಲೇ ಹುಟ್ಟಿದ್ದರು.

ಏಪ್ರಿಲ್ ೨೦೧೬. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ಐನೂರು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಉರಿಬಿಸಿಲಿಗೆ ಸೆಡ್ಡು ಹೊಡೆದಂತೆ ಹರಡಿಕೊಂಡಿದ್ದ ಒಂದು ಸುಂದರ ಛತ್ರಿಮರದ ಅಡಿ ಸದ್ದು ಮಾಡದೆ ಕೂತಿದ್ದರು. ಆಗ ಆ ಕಾಲೇಜು ನಂಜನಗೂಡಿನ ಜೂನಿಯರ್‍ ಕಾಲೇಜಿನ ಆವರಣದಲ್ಲೇ ನಡೆಯುತ್ತಿತ್ತು. ಕಾಲೇಜು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ‘ಚೈತನ್ಯಕ್ಕೆ ಶರಣು’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಈ ವರ್ಷ ಕೂಡ ತಮ್ಮ ಅಧ್ಯಾಪಕ, ಅಧ್ಯಾಪಕಿಯರ ಜೊತೆ ಕೂತ ಆ ಹೊಸ ತಲೆಮಾರು ಬಿರುಬಿಸಿಲಿನ ಕಾಲದಲ್ಲಿ ಹುಟ್ಟಿದ ಮಹಾನ್ ಗುರುಗಳ ಬಗ್ಗೆ ಅತಿಥಿಗಳು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ಅದು ದೇವನೂರ ಮಹಾದೇವರ ಜೊತೆ ಈ ಅಂಕಣಕಾರನೂ ಮಾತಾಡಿದ ದಿನ.  

ಈ ಮನ ಮುಟ್ಟುವ ದೃಶ್ಯವನ್ನು ನೋಡುತ್ತಿರುವಂತೆ, ನನಗಂತೂ ನೆರಳು ಕೊಡುತ್ತಿದ್ದ ಛತ್ರಿ ಮರ ಅಥವಾ ರೈನ್ ಟ್ರೀ ಒಂದು ಅನನ್ಯ ಸಂಕೇತದಂತೆ ಕಾಣತೊಡಗಿತು. ಕಾರಣ, ಅವತ್ತು ಅಲ್ಲಿದ್ದ ಎಲ್ಲರೂ ನೆನೆಯುತ್ತಿದ್ದ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ವಿವಿಧ ಕಾಲಘಟ್ಟಗಳಲ್ಲಿ ಈ ನೆಲದಲ್ಲಿ ವೈಚಾರಿಕ ಆಸರೆಗಳನ್ನು ಹಬ್ಬಿಸಿ, ಆ ಮರದಂತೆಯೇ ಹಲವು ತಲೆಮಾರುಗಳ ಜನರಿಗೆ ಆಸರೆಯಾಗಿದ್ದರು. ‘ಬಿಸಿಲಣ್ಣು ಉಂಡೀದಿ; ಬೆಳದಿಂಗಳ ಕಂಡೀದಿ’ ಎಂಬ ಗುರುದೇವ ರವೀಂದ್ರರನ್ನು ಕುರಿತ ಬೇಂದ್ರೆಬಣ್ಣನೆ ಈ ನಾಲ್ವರೂ ಚಿಂತಕರಿಗೆ ನಿಖರವಾಗಿ ಹೊಂದಿಕೊಳ್ಳುತ್ತಿತ್ತು. ದಮನಕ್ಕೊಳಗಾದವರಿಗೆ ತಂಪೆರೆಯುವ ಚಿಂತನೆಯ ಫಲಗಳನ್ನು ನೀಡುತ್ತಾ ಬಂದಿದ್ದ ಈ ಚಿಂತಕರು ಈ ನೆಲದಲ್ಲಿ ಕಂದಾಚಾರಿಗಳು ಶತಮಾನಗಳಿಂದ ಸೃಷ್ಟಿಸಿದ್ದ ಅಸಮಾನತೆಗಳ ಖಾಯಂ ಬಿರುಬೇಸಗೆಯನ್ನು ಹೊಡೆದೋಡಿಸುವ ದಾರಿಗಳನ್ನು ಹುಡುಕುತ್ತಿದ್ದರು.  

ನಂಜನಗೂಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಟೀಚರ್‍ ಶೈಲಜಾ, ‘ಕುಸುಮಬಾಲೆ’ ಕಂಠಪಾಟಿ ಶಿವಸ್ವಾಮಿ, ಮೊರಬದ ಮಲ್ಲಿಕಾರ್ಜುನ…ಹೀಗೆ ನಾನು ಬಲ್ಲವರಿದ್ದರು.  ಅವತ್ತಿನ ಕಾರ್ಯಕ್ರಮದ ಚಿಂತನೆ ಮುಖ್ಯವಾಗಿ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಸುತ್ತ ಹರಿಯುತ್ತಿತ್ತು. ಇವತ್ತು ಹಿಂತಿರುಗಿ ನೋಡಿದರೆ, ಬುದ್ಧನ ವೈಚಾರಿಕತೆ ಅನಂತರ ಬೇರೆ ಬೇರೆ ರೀತಿಯಲ್ಲಿ ಇನ್ನುಳಿದ ಮೂವರಲ್ಲೂ ಬೆಳೆದ ರೀತಿಯಲ್ಲೂ ಒಂದು ನಿರಂತರತೆ ಕಾಣುತ್ತದೆ. 

ಎರಡೂವರೆ ಸಾವಿರ ವರ್ಷಗಳ ಕೆಳಗೆ ಗೌತಮ ದುಃಖದ ಕಾರಣಗಳನ್ನು ಹುಡುಕಿ ಹೊರಟ. ಈ ದುಃಖಕ್ಕೆ ಮನುಷ್ಯ ಕಾರಣನೋ ಅಥವಾ ಈ ದುಃಖವು ವ್ಯವಸ್ಥೆಯೇ ಸೃಷ್ಟಿಸಿದ ಭೇದಭಾವಗಳಲ್ಲಿದೆಯೋ ಎಂಬ ಬಗ್ಗೆ ಗಾಢವಾಗಿ ಚಿಂತಿಸಿದ. ಜನರನ್ನು ಒಡೆಯುವ ನಾಲ್ಕು ವರ್ಣಗಳ ಕಟ್ಟಳೆಗಳನ್ನು ಧಿಕ್ಕರಿಸಿ, ಅಸ್ಪೃಶ್ಯರನ್ನೂ ಒಳಗೊಂಡು ಎಲ್ಲರೂ ಒಟ್ಟಿಗೆ ಸೇರುವಂಥ ಸಂಘವನ್ನು, ಧಮ್ಮವನ್ನು ರೂಪಿಸಿದ. ಮೊದಮೊದಲು ಮಹಿಳೆಯರಿಗೆ ಸಂಘದಲ್ಲಿ ಪ್ರವೇಶವಿರಲಿಲ್ಲ; ನಂತರ ಮಹಿಳೆಯರಿಗೆ ಪರಿವ್ರಾಜಕಿಯರಾಗುವ ಅವಕಾಶ ತೆರೆಯಿತು. ಬುದ್ಧನ ಸಂಘದ ಈ ಆರಂಭದ ಹಿಂಜರಿಕೆ ಹನ್ನೆರಡನೆಯ ಶತಮಾನದ ವಚನಯುಗದ ಅನುಭವಮಂಟಪದಲ್ಲಿ ಇರಲಿಲ್ಲ; ಅಮುಗೆ ರಾಯಮ್ಮ, ಅಕ್ಕಮಹಾದೇವಿ, ನೀಲಮ್ಮ, ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಸಂಕವ್ವೆ ಮೊದಲಾದವರು ಅನುಭವಮಂಟಪದಲ್ಲಿ ಕೂತು ಕಾವ್ಯರಚನೆಯಲ್ಲಿ, ಆಧ್ಯಾತ್ಮಿಕ ಚಿಂತನೆಯಲ್ಲಿ, ಸಾಮಾಜಿಕ ವಿಮರ್ಶೆಯಲ್ಲಿ ತೊಡಗಿದ್ದರು. 

ನಂತರ ಹತ್ತೊಂಬತ್ತನೆಯ ಶತಮಾನದಲ್ಲಿ ಜೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಬಾಯಿಗೆ ವಿದ್ಯಾಭ್ಯಾಸ ಕೊಡಿಸಿ, ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು; ಹುಡುಗಿಯರಿಗಾಗಿ ಶಾಲೆಗಳನ್ನು ತೆರೆದರು; ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಸಂಪ್ರದಾಯಸ್ಥರ ನೀಚ ನಡೆನುಡಿಗಳನ್ನು ಪ್ರಶ್ನಿಸಿ, ತಿದ್ದಲೆತ್ನಿಸಿದರು. ಬುದ್ಧ, ಫುಲೆ, ಕಬೀರರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದ ಅಂಬೇಡ್ಕರ್, ಶಿಕ್ಷಣವೂ ಸೇರಿದಂತೆ ಎಲ್ಲ ಹಕ್ಕುಗಳೂ ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಚಿಂತನೆ, ಹೋರಾಟಗಳನ್ನು ರೂಪಿಸಿದರು. ಇವೆಲ್ಲವನ್ನೂ ನೋಡುತ್ತಿದ್ದರೆ, ಇಂಡಿಯಾದ ಬೃಹತ್ ವೈಚಾರಿಕ ಮಹಾವೃಕ್ಷವೊಂದು ಎರಡೂವರೆ ಸಾವಿರ ವರ್ಷಗಳ ಕೆಳಗೆ ಆಳವಾಗಿ ಬೇರೂರಿ, ಹಲವು ಟೊಂಗೆಗಳಾಗಿ, ನಿರಂತರ ಫಲ ಕೊಡುತ್ತಿರುವ ಅದ್ಭುತ ಚಿತ್ರವೊಂದು ಮೂಡತೊಡಗುತ್ತದೆ!         

ಈ ನಾಲ್ವರೂ ಮೊದಲು ವ್ಯಕ್ತಿಗಳಾಗಿ ಬಂಡೆದ್ದವರು. ಕ್ಷತ್ರಿಯ ಗೌತಮ ಅರಮನೆ ಬಿಟ್ಟು ಹೊರಟ. ಇತ್ತ ಬಸವಣ್ಣ, ಕವಿ ಹರಿಹರ ಬಣ್ಣಿಸುವಂತೆ, ‘ಕರ್ಮಲತೆಯಂತಿರ್ದ ಜನಿವಾರಮಂ ಕಿತ್ತು ಬಿಸುಟು’ ಹೊರಟ. ಈ ಇಬ್ಬರಲ್ಲೂ ನಿಜವಾದ ಒಳಬಂಡಾಯ ಹಾಗೂ ಸಮಾಜದ ಮೇಲುಸ್ತರದಲ್ಲಿ ಹುಟ್ಟಿದ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಪಾಪಪ್ರಜ್ಞೆ ಎರಡೂ ಸೇರಿ, ನೊಂದವರ ಬಿಡುಗಡೆಗಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸಿರಬಹುದು. ಆದರೂ, ಸಮಾಜವಾದಿ ಚಿಂತಕ-ನಾಯಕ ಎಂ.ಡಿ. ನಂಜುಂಡಸ್ವಾಮಿಯವರು ಒಂದು ಸಂದರ್ಶನದಲ್ಲಿ ಹೇಳಿದಂತೆ, ‘ಒಂದು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಬೇಕೆಂದರೆ, ಸಮಾಜದ ದೇಹ ಹಾಗೂ ಮನಸ್ಸು ಎರಡನ್ನೂ ಏಕಕಾಲಕ್ಕೆ ಬದಲಿಸಬೇಕು. ಬುದ್ಧ ಹಾಗೂ ಬಸವ ಜನರ ಮನಸ್ಸನ್ನು ಮಾತ್ರ ಬದಲಾಯಿಸಲೆತ್ನಿಸಿದರು; ಆದರೆ ಸಮಾಜದ ದೇಹ ಹಾಗೇ ಉಳಿಯಿತು.’ 

ಭಾರತದ ದೇಹವನ್ನು- ಅಂದರೆ ಸಾಮಾಜಿಕ-ಆರ್ಥಿಕ ರಚನೆಯನ್ನು- ಬದಲಿಸುವುದರ ಅನಿವಾರ್ಯತೆ ಮುಂದೆ ಬಂದ ಫುಲೆ- ಅಂಬೇಡ್ಕರ್‍ ಅವರ ಎದುರಿಗೆ ಇದ್ದವು. ಜಾತಿ ಪದ್ಧತಿಯ ವಿರುದ್ಧ ಚರಿತ್ರೆಯಲ್ಲಿ ನಡೆದ ಮಹತ್ತರ ಹೋರಾಟಗಳ ಮಿತಿಗಳು ಫುಲೆ ಹಾಗೂ ಅಂಬೇಡ್ಕರ್ ಅವರಿಗೆ ಅರ್ಥವಾಗತೊಡಗಿದವು. ಫುಲೆ ತಮ್ಮ ಹೂವಾಡಿಗ ಜಾತಿಯ ಜನರನ್ನು ಮಾತ್ರವಲ್ಲ, ಇಂಥ ಹತ್ತಾರು ಹಿಂದುಳಿದ ಜಾತಿಗಳು ಹಾಗೂ ದಲಿತರನ್ನು ಒಟ್ಟಾಗಿಸಲೆತ್ನಿಸಿದರು. ಅವರ ಮಾನಸಿಕ, ಆರ್ಥಿಕ ಬಿಡುಗಡೆಗೆ, ಅದರಲ್ಲೂ ಕೃಷಿಕ ಸಮುದಾಯದ ಕಷ್ಟಗಳ ಪರಿಹಾರಕ್ಕೆ ಪ್ರಯತ್ನಿಸಿದರು. ಅಂಬೇಡ್ಕರ್ ಸ್ವಂತದ ಅವಮಾನವನ್ನು ಮೀರುವುದಕ್ಕಿಂತ ಮುಖ್ಯವಾಗಿ ಹಲವು ಸಮುದಾಯಗಳ ಅವಮಾನಗಳಿಗೆ ಉತ್ತರ ಹುಡುಕಿದರು. ಹೀಗೆ ಈ ಚಿಂತಕರು ಹುಡುಕಿದ ಉತ್ತರಗಳು ಎಲ್ಲ ಜಾತಿಗಳಿಗೂ ಬಿಡುಗಡೆಯ ಹಾದಿಗಳನ್ನು ತೆರೆದವು. 

ಇಂಡಿಯಾದ ಮನಸ್ಸಿನ ಜಡತೆ ಹಾಗೂ ಗುಲಾಮಗಿರಿಗೆ ಕಾರಣವಾಗಿದ್ದ ವಿಧಿವಾದವನ್ನು ಈ ನಾಲ್ವರೂ ತಿರಸ್ಕರಿಸಿದರು; ಮನುಷ್ಯನ ಸ್ಥಿತಿಯನ್ನು ಮನುಷ್ಯನೇ ಬದಲಿಸಬಹುದು ಎಂಬ ನಂಬಿಕೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಲೆತ್ನಿಸಿದರು. ಜನರ ಮನಸ್ಸನ್ನು ಆಳುತ್ತಿದ್ದ ಶಾಸ್ತ್ರಾಧಾರಗಳನ್ನು ತಿರಸ್ಕರಿಸಿದರು. ಗೌತಮಬುದ್ಧ ‘ಸಂದೇಹ’ವನ್ನು ಒಂದು ನೋಟಕ್ರಮವನ್ನಾಗಿ ಮಾಡಿ, ದೇವರು, ಆತ್ಮ, ಧರ್ಮಗಳ ಸುತ್ತ ಹಬ್ಬಿದ್ದ ಕಟ್ಟುಕತೆಗಳನ್ನು ತಿರಸ್ಕರಿಸಿದರು. ಬಸವಣ್ಣ ‘ಶಾಸ್ತ್ರಕ್ಕೆ ನಿಗಳನಿಕ್ಕುವೆ’ ಎಂದು ದಿಟ್ಟವಾಗಿ ಸಾರಿದರು. ಜೋತಿಬಾ ಫುಲೆ ವಿಧಿವಿಧಾನಗಳ ಕಗ್ಗಂಟುಗಳನ್ನು ಸೃಷ್ಟಿಸಿದ್ದ ಶಾಸ್ತ್ರಗಳನ್ನು ತಿರಸ್ಕರಿಸಿ, ಆಧುನಿಕ ವೈಚಾರಿಕ ವಿದ್ಯೆಯನ್ನು ಕೊಡುವ ಚಳುವಳಿಯನ್ನೇ ಶುರು ಮಾಡಿದರು. ಅಂಬೇಡ್ಕರ್ ‘ಶಾಸ್ತ್ರಗಳನ್ನು ಹೊಸದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಅವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಹೇಳಿದರು. ಮನುಧರ್ಮಶಾಸ್ತ್ರವನ್ನು ಸುಟ್ಟರು. ಆದರೆ ಜನಸಮುದಾಯಕ್ಕೆ ಧರ್ಮದ ಅಗತ್ಯವಿದೆ ಎಂದು ಅವರಿಗೆ ತೀವ್ರವಾಗಿ ಅನ್ನಿಸಿದಾಗ, ಬೌದ್ಧಧರ್ಮವನ್ನು ವೈಚಾರಿಕ ಮನಸ್ಸಿಗೆ ಒಪ್ಪಿಗೆಯಾಗುವಂತೆ ಮರುರೂಪಿಸಿದರು. 

‘ಸ್ವಾತಂತ್ಯ್ರ, ಸಮಾನತೆ ಹಾಗೂ ಸೋದರಿತ್ವ-ಸೋದರತೆಗಳನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಕಲಿಯಲಿಲ್ಲ; ಬದಲಿಗೆ ನನ್ನ ಗುರು ಬುದ್ಧನಿಂದ ಕಲಿತೆ’ ಎಂದ ಅಂಬೇಡ್ಕರ್, ಈ ಮೂರು ಲಕ್ಷಣಗಳುಳ್ಳ ಧರ್ಮ ಮಾತ್ರ ಅನುಸರಿಸಲು ಯೋಗ್ಯ ಎಂದು ಹೇಳಿದರು. ಬಸವಣ್ಣನ ಮಹತ್ವವನ್ನು ಅರಿತಿದ್ದ ಅಂಬೇಡ್ಕರ್ ಕರ್ನಾಟಕದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಬರೆದ ಪತ್ರದಲ್ಲಿ, ಇಂಡಿಯಾದುದ್ದಕ್ಕೂ ಮಹಾನ್ ಚಿಂತಕರಾಗಿ ವಿಕಾಸಗೊಳ್ಳಬಹುದಾಗಿದ್ದ ಬಸವಣ್ಣನವರ ಪ್ರಭಾವವನ್ನು ಲಿಂಗಾಯತರು ಸೀಮಿತಗೊಳಿಸಿದ್ದನ್ನು ಕುರಿತು ಹೇಳಿದ್ದರು.

ಬುದ್ಧನ ಕಾಲದಲ್ಲಿ ಈ ನೆಲದ ನಿಜವಾದ ನಾಗರಿಕತೆಯ ಯುಗ ಶುರುವಾಯಿತು ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದರು. ಎಲ್ಲ ವರ್ಣಗಳೂ ವರ್ಗಗಳೂ ಒಂದೆಡೆ ಕೂತು ತಂತಮ್ಮ ಆಲೋಚನೆಯನ್ನು ಹಂಚಿಕೊಳ್ಳುವ ಬುದ್ಧನ ‘ಸಂಘ’ದ ನಂತರ ಅನುಭವ ಮಂಟಪ, ಸತ್ಯಶೋಧಕ ಸಮಾಜ ಹಾಗೂ ಅನಂತರ ಅಂಬೇಡ್ಕರ್ ರೂಪಿಸಿದ ಸಾಮಾಜಿಕ, ರಾಜಕೀಯ ಸಂಘಟನೆಗಳು ಈ ದೇಶವನ್ನು ಪ್ರಜಾಪ್ರಭುತ್ವಕ್ಕೆ ಅಣಿ ಮಾಡಿದವು. ಈ ಎಲ್ಲ ಚಿಂತಕರೂ ತಮ್ಮ ಚಿಂತನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಸ್ಪಷ್ಟ, ಸರಳ ಭಾಷೆಯನ್ನು ಬಳಸಿದ್ದರು. 

ಈ ನಾಲ್ವರ ಚಿಂತನೆಗಳು ವ್ಯಾಖ್ಯಾನಕಾರರ ನೆರವಿಲ್ಲದೆಯೂ ನಮಗೆ ತಲುಪುತ್ತವೆ ಎಂಬುದು ಕೂಡ ಅವರು ತೆರೆದ ಪರಿವರ್ತನೆಯ ಹಾದಿಯಲ್ಲಿ ಮುಖ್ಯವಾದದ್ದು. ಕಾರ್ಯರೂಪಕ್ಕೆ ತರಬಲ್ಲ ಚಿಂತನೆಯನ್ನು, ಚಿಂತನೆಗೆ ತಕ್ಕ ಭಾಷೆಯನ್ನು ಅವರು ತಂತಮ್ಮ ದೇಶಭಾಷೆಗಳಲ್ಲಿ ರೂಪಿಸಿದರು; ಅಂಬೇಡ್ಕರ್ ಮರಾಠಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನೇರ, ಸರಳ ಗದ್ಯವನ್ನು ಬಳಸಿದರು. ಬುದ್ಧ, ಬಸವರು ಭಾಷೆಯನ್ನು ಬಳಸುವಾಗ ಸದಾ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವ ರೀತಿ; ಪದಗಳ ಬಳಕೆಯಲ್ಲಿ ತೋರುವ ನೈತಿಕ ಎಚ್ಚರ… ಇವೆಲ್ಲವೂ ಮಾತು, ಬರಹಗಳನ್ನು ಬಳಸುವವರಿಗೆ ಎಲ್ಲ ಕಾಲದಲ್ಲೂ ಉತ್ತಮ ಮಾದರಿಗಳಾಗಿವೆ. 

ತಮ್ಮ ಕಾಲದ ಜನಬಳಕೆಯ ಹಾದಿಗಿಂತ ಭಿನ್ನವಾದ ಹಾದಿ ತುಳಿದಿದ್ದರಿಂದ ಎದುರಾದ ಅಡ್ಡಿ, ಆತಂಕಗಳನ್ನು ಈ ಚಿಂತಕರು ಎದುರಿಸಿದ ರೀತಿ ಕೂಡ ನಮಗೆ ಸ್ಫೂರ್ತಿಯಾಗಬಲ್ಲದು. ಅಂಬೇಡ್ಕರ್ ತಮ್ಮ ಜೀವಿತದ ಕೊನೆಗೆ ಹೇಳಿದರು: ‘ನಾನು ಜೀವನದಲ್ಲಿ ಈ ಕೆಲಸಗಳನ್ನು ಮಾಡುವಾಗ, ತೀವ್ರ ಯಾತನೆಗಳನ್ನು, ಕೊನೆಯಿಲ್ಲದ ಕಿರುಕುಳಗಳನ್ನು ಎದುರಿಸುತ್ತಾ, ನನ್ನ ವಿರೋಧಿಗಳ ವಿರುದ್ಧ ಸೆಣಸುತ್ತಾ ಬಂದಿದ್ದೇನೆ.’ ಈ ಮಾತು ಉಳಿದ ಮೂವರು ಚಿಂತಕರಿಗೂ ಅನ್ವಯಿಸುತ್ತದೆ.  ಬಿರು ಬೇಗೆಯನ್ನು ಜೀವನದುದ್ದಕ್ಕೂ ಈ ನಾಲ್ವರು ಚಿಂತಕರೂ ಅನುಭವಿಸಿದರು. ಆದರೆ ಸಾಂಪ್ರದಾಯಿಕ ಸಮಾಜದ ಬೇಗೆ ಅವರನ್ನು ಹಿಮ್ಮೆಟ್ಟಿಸಲಿಲ್ಲ; ಮನೆಯೊಳಗೆ ಕಟ್ಟಿ ಹಾಕಲಿಲ್ಲ. ತಮ್ಮ ಜೀವನಪೂರ್ತಿ ಅವರು ಬಯಲಲ್ಲೇ ಇದ್ದರು.

ಇಂಡಿಯಾದ ಒಂದು ದೊಡ್ಡ ವೈಚಾರಿಕ ಪರಂಪರೆಯ ನಾಲ್ಕು ದೃಢವಾದ ಕಂಬಗಳಂತಿರುವ ಈ ನಾಲ್ವರನ್ನೂ ಕರ್ನಾಟಕದ ದಲಿತ ಚಳುವಳಿ ಸದಾ ಸ್ಮರಿಸುತ್ತಿದ್ದುದು, ಆನಂತರ ಬಹುಜನ ಸಮಾಜ ಪಕ್ಷ ಕರ್ನಾಟಕದಲ್ಲಿ ಅವರನ್ನು ಮುಖ್ಯ ಸಾಂಸ್ಕೃತಿಕ ನಾಯಕರಾಗಿ ಬಿಂಬಿಸಿದ್ದು ನೆನಪಾಗುತ್ತದೆ. ದಲಿತ ಚಳುವಳಿ ಹಾಗೂ ಬಹುಜನ ಸಮಾಜ ಪಕ್ಷ ಈ ಬಗೆಯ ಚಿಂತಕರನ್ನು ಒಟ್ಟಿಗೆ ಬೆಸೆಯಹೊರಟಿದ್ದರ ಹಿಂದೆ ಮಹತ್ತರ ದೂರದೃಷ್ಟಿಇತ್ತು. ಈ ದೂರದೃಷ್ಟಿಯ ಮಹತ್ವ ಇಂಡಿಯಾದ ಅನೇಕ ಬುದ್ಧಿಜೀವಿಗಳಿಗೆ, ರಾಜಕೀಯ ವಿಶ್ಲೇಷಕರಿಗೆ ಕಾಣದೇ ಹೋದದ್ದು ನಿಜಕ್ಕೂ ವಿಚಿತ್ರ. ಕೋಮುವಾದಿಗಳು, ಜಾತಿವಾದಿಗಳು, ಜಾಗತೀಕರಣವಾದಿಗಳು ಬಿಂಬಿಸುತ್ತಿರುವ ಹುಸಿ ‘ಸಾಂಸ್ಕೃತಿಕ’ ನಾಯಕರ ಎದುರು ಇಂಥ ಶ್ರೇಷ್ಠ ಸಾಂಸ್ಕೃತಿಕ ನಾಯಕರನ್ನು ಬಿಂಬಿಸುವ ಈ ಪಾಸಿಟಿವ್ ಸಾಂಸ್ಕೃತಿಕ ರಾಜಕಾರಣಕ್ಕೆ ಚಾರಿತ್ರಿಕ ಮಹತ್ವವಿದೆ. ಇಂಥ ಪ್ರಯತ್ನಗಳಿಂದ ಸೀಮಿತ ಮಟ್ಟದಲ್ಲಾದರೂ ಈ ಚಿಂತನೆಗಳು ಹೊಸ ತಲೆಮಾರುಗಳಲ್ಲಿ ಹಬ್ಬುತ್ತಾ ಹೋಗುತ್ತವೆ.  ಬಿಸಿಲಲ್ಲಿ ಹುಟ್ಟಿ, ಬದುಕಿನಲ್ಲೂ ಬಿಸಿಲಣ್ಣು ಉಂಡು ವೈಚಾರಿಕ ಬೆಳದಿಂಗಳು ಹಂಚಿದ ಈ ಗುರುಗಳಿಗೆ ಭಾರತದ ಪ್ರತಿ ತಲೆಮಾರೂ  ಕೃತಜ್ಞವಾಗಿರಬೇಕಾಗುತ್ತದೆ.

ಕೊನೆ ಮಾತು: ಅವತ್ತು ನನ್ನ ಮಾತಿನ ಕೊನೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎದ್ದು ನಿಂತು ‘ನಾನು ಅಸ್ಪೃಶ್ಯತೆ, ಜಾತೀಯತೆ ಇತ್ಯಾದಿಗಳನ್ನು ಆಚರಿಸುವುದಿಲ್ಲ’ ಎಂದು ಎದ್ದು ನಿಂತು ಕೈ ಮುಂದೆ ಚಾಚಿ ಪ್ರತಿಜ್ಞೆ ಕೈಗೊಂಡರು. ಆ ಅಪರೂಪದ ದೃಶ್ಯ ಕಂಡು ದೇವನೂರ್‍ ಆ ಅಪರೂಪದ ದೃಶ್ಯ ಕಂಡು ಅಪರೂಪಕ್ಕೆ ಥ್ರಿಲ್ಲಾಗಿದ್ದರು.
 


 

blog
12 Apr 2026 ನರಳುವ ಗದ್ಯಕ್ಕೆ ವಚನ ಸಿದ್ಧೌಷಧ!

‘ನಿಮ್ಮ ಗದ್ಯ ವಚನಕಾರರ ಗದ್ಯದಂತಿದೆ’ ಎಂದು ಕವಿ, ಕಾವ್ಯಮೀಮಾಂಸಕರಾದ ಜಿ.ಎಸ್. ಶಿವರುದ್ರಪ್ಪನವರು ತಮ್ಮ ಪಿಎಚ್.ಡಿ. ವಿದ್ಯಾರ್ಥಿ ಡಿ. ಆರ್. ನಾಗರಾಜರಿಗೆ ಒಮ್ಮೆ ಹೇಳಿದ್ದರು. ಜಿ.ಎಸ್.ಎಸ್. ಎಪ್ಪತ್ತರ ದಶಕದಲ್ಲಿ ಡಿ. ಆರ್‍. ನಾಗರಾಜರ ಗೈಡ್ ಆಗಿದ್ದರು. ತರುಣ ಡಿ. ಆರ್. ಬರೆಯುತ್ತಿದ್ದ ಮಹತ್ವಾಕಾಂಕ್ಷೆಯ ಥೀಸಿಸ್ಸಿನ ಅಧ್ಯಾಯಗಳನ್ನು ಓದುತ್ತಾ ಜಿ.ಎಸ್‌. ಎಸ್. ಹೇಳಿರಬಹುದಾದ ಈ ಮಾತನ್ನು ಡಿ. ಆರ್. ಹೆಮ್ಮೆಯಿಂದಲೇ ನೆನೆಯುತ್ತಿದ್ದರು. ಆ ಹೆಮ್ಮೆಗೆ ಕಾರಣವೂ ಇತ್ತು. ಜಿ.ಎಸ್.ಎಸ್. ಈ ಮಾತು ಹೇಳಿದ ನಂತರದಲ್ಲಿ ಡಿ. ಆರ್. ತಿದ್ದಿ ಬರೆದ ‘ಶಕ್ತಿ ಶಾರದೆಯ ಮೇಳ’ ಎಂಬ ಆಧುನಿಕ ಕನ್ನಡ ಕಾವ್ಯದ ಅತ್ಯಂತ ಮಹತ್ವದ ಅಧ್ಯಯನ ಗ್ರಂಥದ ಆಳ, ವಿಸ್ತಾರ, ಎತ್ತರಗಳನ್ನು ನೋಡಿದರೆ ಜಿ.ಎಸ್.ಎಸ್. ಬೆರಗು ಸರಿಯಾಗಿ ಅರಿವಾಗುತ್ತದೆ. 

ಆದರೆ ವಚನ ಸಾಹಿತ್ಯದಲ್ಲಿರುವ ಒಂದು ಮಟ್ಟದ ಸರಳ ತಲುಪುವಿಕೆಯನ್ನು ಡಿ. ಆರ್. ಬರೆದ ಸಂಕೀರ್ಣ ಥಿಯರಿಯ ಥೀಸಿಸ್ಸಿನಲ್ಲಿ ಹುಡುಕಬಾರದು. ಅದು ಮತ್ತೆ ಮತ್ತೆ ಓದಿ ಅರಗಿಸಿಕೊಳ್ಳಬೇಕಾದ ಪುಸ್ತಕ. ಥಿಯರಿಟಿಕಲ್ ಬರವಣಿಗೆ ಸರಳ ಪತ್ರಿಕಾ ಬರಹಗಳಂತಿರುವುದಿಲ್ಲ. ಇವತ್ತು ಕನ್ನಡ ಸಾಹಿತ್ಯದಲ್ಲಿ ಕಾವ್ಯ, ನಾಟಕ, ಕಾದಂಬರಿ ಯಾವುದರ ಬಗೆಗಾದರೂ ಸಂಶೋಧನೆ ಮಾಡುವ ಹುಡುಗ ಹುಡುಗಿಯರು ಇದೊಂದು ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಿದರೂ ಅವರಿಗೆ ತಂತಮ್ಮ ಸಾಹಿತ್ಯಾಧ್ಯಯನದ ಹಲವು ದಾರಿಗಳು ಕಾಣತೊಡಗುತ್ತವೆ; ಸಂಶೋಧನಾ ಬರವಣಿಗೆಗೆ ಹಲವು ಜ್ಞಾನಶಿಸ್ತುಗಳನ್ನು ಬಳಸುವ ಕಸುಬಿನ ಒಂದು ಮಟ್ಟದ ಪರಿಚಯವಾದರೂ ಆಗುತ್ತದೆ; ಆ ಜ್ಞಾನಶಿಸ್ತುಗಳನ್ನು ತಂತಮ್ಮ ನೋಟಕ್ಕೆ ಅತ್ಯಗತ್ಯವಾದ ಹಣತೆಗಳೋ, ಬೆಳಕಿನ ದೊಂದಿಗಳೋ ಆಗುವ ಘಟ್ಟ ಅನಂತರದ್ದು. ಆಗ ನಮ್ಮ ನಮ್ಮ ಒರಿಜಿನಲ್ ನೋಟದ ಎಳೆಗಳು ತಕ್ಕ ಮಟ್ಟಿಗಾದರೂ ವಿಕಾಸಗೊಳ್ಳತೊಡಗುತ್ತವೆ.

ನಿನ್ನೆ ಜಿ.ಎಸ್‌.ಎಸ್. ಮಾತು ನೆನಪಾದದ್ದು ಈಚೆಗೆ ನಾನು ಬೇರೆ ಬೇರೆ ಕಾರಣಕ್ಕೆ ಗಮನಿಸಬೇಕಾಗಿ ಬಂದ ಕೆಲವರು ಗದ್ಯ ಬರೆಯುವ ಪರಿ ನೋಡಿದಾಗ. ಅದರಲ್ಲಿ ಮೂವತ್ತು ವರ್ಷ ಕನ್ನಡ ಟೀಚ್ ಮಾಡಿದ ಪ್ರಾಧ್ಯಾಪಕರು, ಕತೆ ಬರೆಯುವವರು, ಎಂ.ಎ. ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಿಎಚ್.ಡಿ. ಸಂಶೋಧಕ, ಸಂಶೋಧಕಿಯರು ಎಲ್ಲರ ಸೋ ಕಾಲ್ಡ್ ‘ಗದ್ಯ’ ಬರವಣಿಗೆಗಳೂ ಸೇರಿದ್ದವು. ಹೀಗೇ ಈ ಬರವಣಿಗೆಗಳನ್ನು ನೋಡುತ್ತಾ ಅಕಸ್ಮಾತ್ ಕಣ್ಣಿಗೆ ಬಿದ್ದ ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರ ವಚನಗಳನ್ನು ನೋಡಿದೆ. ತಕ್ಷಣ, ನಮ್ಮ ಕಾಲದ ಅನೇಕರ ಗದ್ಯ ಯಾಕೆ ತೋಪಾಗಿದೆ ಎಂಬುದಕ್ಕೆ ಸರಳ ಕಾರಣ ಹೊಳೆಯಿತು: ಕನ್ನಡ ವಚನಕಾರ್ತಿಯರ, ವಚನಕಾರರ ವಚನಗಳನ್ನು ನಿಕಟವಾಗಿ ಓದದ ಯಾರಿಗೂ ಒಳ್ಳೆಯ ಕನ್ನಡ ಗದ್ಯ ಕೈ ಹತ್ತುವುದಿಲ್ಲ.

ಹೀಗೆಂದುಕೊಳ್ಳುತ್ತಾ, ಲಿಂಗಮ್ಮನರ ವಚನಗಳನ್ನು ನೋಡಿದೆ:   

ಹೊತ್ತು ಹೊತ್ತಿಗೆ ಮೆತ್ತ ಹಾಕಿ 
ತಿಪ್ಪೆಯಲ್ಲಿ ಕರ್ಪೂರವನರಸುವನಂತೆ, 
ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,
ನೀವು ಕೇಳಿರೊ, ಹೇಳಿಹೆನು. 
ಆ ಕರ್ತುವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.
ಮೋಡವಿಲ್ಲದ ಚಂದ್ರಮನಂತಿರಬೇಕು. 
ಬೆಳಗಿನ ದರ್ಪಣದಂತಿರಬೇಕು. 
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.

ನಾವು ಸುಮ್ಮನೆ ಮತ್ತೆ ಮತ್ತೆ ಇಂಥ ವಚನಗಳನ್ನು ಸುಮ್ಮನೆ ಓದಿದರೂ ಸಾಕು, ನಮ್ಮ ವಾಕ್ಯಗಳು ಸರಿಯಾಗಬಲ್ಲವು ಎನ್ನಿಸಿತು; ಅಷ್ಟೇ ಯಾಕೆ, ಗದ್ಯ ವಾಕ್ಯದ ಸರಳ ನಿಯಮವನ್ನು ಇದೊಂದು ವಚನದಿಂದಲೇ ಕಲಿಯಬಹುದು ಎನ್ನಿಸಿತು. ಈ ವಚನ ರಚನೆಯ ರೀತಿಯನ್ನು ಹೀಗೆ ಊಹಿಸೋಣ: ವಚನಕಾರ್ತಿಯ ಒಳಗೆ ಒಂದು ಮೂಲ ಐಡಿಯಾ ಇದೆ. ಅದೇನೆಂದರೆ, ‘ಕರ್ತುವನ್ನು ಅಥವಾ ಕರ್ತೃವನ್ನು ಕಾಣುವುದು.’ ಮನಸ್ಸನ್ನು ತಿಪ್ಪೆಯಂತಾಗಿಸಿ ಕೊಂಡವರಿಗೆ ಕರ್ತೃವನ್ನು ಅರಸುವುದಕ್ಕೆ ಆಗದು. ಹಾಗಾದರೆ ಕರ್ತೃವನ್ನು ಅರಸಲು ಚಿತ್ತ ಹೇಗಿರಬೇಕು ಎಂಬುದನ್ನು ವಚನ ಹುಡುಕುತ್ತದೆ; ಈ ಹುಡುಕಾಟದಲ್ಲಿ ವಚನ ಬೆಳೆಯುತ್ತದೆ. 

ಈ ವಚನ ಕುರಿತು ಪ್ರೊಫೆಸರೊಬ್ಬರ ವಿವರಣೆ ಓದಿದೆ. ವಚನದ ವಿವರಗಳನ್ನು ಮರು ವಿವರಿಸಿರುವ ಪ್ರೊಫೆಸರ್, ಚಿತ್ತ ಹೇಗಿರಬೇಕೆಂದು ’ತಮ್ಮದೇ ಆದ’ ಗದ್ಯದಲ್ಲಿ ಬರೆದಿದ್ದರು. ಆದರೆ ಚಿತ್ತ ಯಾಕೆ ಬೆಳಗಿನ ದರ್ಪಣದಂತೆ, ಜಲದೊಳಗಣ ಸೂರ್ಯನ ಪ್ರತಿಬಿಂಬದಂತೆ, ಮೋಡವಿಲ್ಲದ ಚಂದ್ರಮನಂತೆ ಇರಬೇಕು ಎಂಬುದರ ಮೂಲ ಕಾರಣದ ಚರ್ಚೆಯನ್ನೇ ಕೈ ಬಿಟ್ಟು ಆರಾಮಾಗಿ ಮುಂದೆ ಸಾಗಿದ್ದರು! ತನ್ನ ಐಡಿಯಾ ಅಥವಾ ಆಲೋಚನೆಯನ್ನು ಸ್ಪಷ್ಟವಾದ ಗದ್ಯದಲ್ಲಿ ವಿವರಿಸುವ ಲಿಂಗಮ್ಮನವರ ಮಾದರಿಯನ್ನೇ ಮರೆತವರಂತೆ ಈ ವ್ಯಾಖ್ಯಾನಕಾರರು ಹೊರಟಿದ್ದರು. ಈ ಅರೆಮನಸ್ಸಿನ ಬರವಣಿಗೆಯಿಂದಲೂ ಹಲವರ ಅಕಡೆಮಿಕ್ ಗದ್ಯ ತೋಪಾಗುತ್ತದೆ ಎನ್ನಿಸಿತು.

ಈ ವಚನದಲ್ಲಿ ‘ಕರ್ತುವನರಿಯಬೇಕೆಂದರೆ’ ಎಂಬುದರಲ್ಲಿರುವ ಕರ್ತು ಅಥವಾ ಕರ್ತೃ ಎಂಬುದರ ಸರಳ ಅರ್ಥ: ಮಾಡುವವನು, ಸೃಷ್ಟಿ ಮಾಡುವವನು. ಕರ್ತಾರ: ದೇವರು. ಕರ್ತೃ ಎಂಬುದರ ಅರ್ಥಕ್ಕಾಗಿ ಕಿಟ್ಟೆಲ್ ಕೋಶ ನೋಡಿದೆ: a doer, an author, an agent, a creator, a king ಈ ಅರ್ಥಗಳಿದ್ದವು. ಈ ಅರ್ಥಗಳನ್ನು ಕಿಟ್ಟಲ್ ಕನ್ನಡ ಕಾವ್ಯಗಳಲ್ಲಿರುವ ಪದ ಪ್ರಯೋಗಗಳ ಒಳಗಿಂದಲೇ ಕೊಡುತ್ತಾರೆ. ಆದರೂ ಕರ್ತೃ ಎಂಬ ಪದಕ್ಕೆ ಈ ವಚನವನ್ನು ಒಂದು ಕವಿತೆಯನ್ನಾಗಿ ಓದಿದರೆ ಇನ್ನೂ ಅರ್ಥ ಸಾಧ್ಯತೆಗಳಿರಬಹುದು ಎನ್ನಿಸತೊಡಗಿತು. ಕರ್ತೃ ಎಂಬುದಕ್ಕೆ ಕವಿ, ಕವಯಿತ್ರಿ ಎಂಬ ಅರ್ಥವೂ ಇರಬಹುದಲ್ಲವೆ?

ಅದೇನೇ ಇರಲಿ, ನಾವು ನಮ್ಮ ಗದ್ಯ ಬರವಣಿಗೆಯ ಪಾಠಗಳನ್ನು ವಚನಗಳಿಂದ ಕಲಿಯಬೇಕೆಂದರೆ, ಗದ್ಯವನ್ನು ಪ್ರಖರವಾಗಿಸಿಕೊಳ್ಳಬೇಕೆಂದರೆ ಮೊದಲಿಗೆ ವಚನಗಳನ್ನೇ ನೇರವಾಗಿ ಹೊಗುವುದು ಒಳ್ಳೆಯದು. ನಂತರ ಓ.ಎಲ್. ನಾಗಭೂಷಣಸ್ವಾಮಿ, ಶಿವಪ್ರಕಾಶ್, ಡಿ. ಆರ್‍. ನಾಗರಾಜ್, ಸುರೇಶ್ ನಾಗಲಮಡಿಕೆ, ಆಶಾದೇವಿ ಥರದವರ ವ್ಯಾಖ್ಯಾನಗಳಿಗೆ ಹೋಗಿ ಆಳದ ಅರ್ಥಗಳನ್ನು ಹುಡುಕಬಹುದು.  
ಹೀಗೆನ್ನಿಸಲು ಕಾರಣವಿದೆ: ಈವರೆಗೆ, ಯಾವ ಗಳಿಗೆಯಲ್ಲೇ ಆಗಲಿ, ‘ಕವಿಮನದ ಬ್ಯಾಸರ ಹರಿಸಾಕ’ ವಚನ ಸಂಪುಟ ತೆರೆದಾಗಲೆಲ್ಲ ನನಗೆ ನಿರಾಶೆಯಾಗಿಲ್ಲ! ಅಲ್ಲಿ ಒಂದಲ್ಲ ಒಂದು ಕಡೆ ‘ಗೀತ ಮಾತೆಂಬ ಜ್ಯೋತಿ’ ಎದುರಾಗಿ ನನ್ನೆದೆ ಬೆಳಗುತ್ತಲೇ ಇರುತ್ತದೆ. ಹಿಂದೊಮ್ಮೆ ಇದೇ ಅನುಭವ ಕುರಿತು ಬರೆಯುವಾಗ ವಚನ ಎನ್ನುವುದು ‘ನಿತ್ಯ ತೇಜದ ಬೆಳಕು’ ಎಂದು ಬರೆದಿದ್ದು ನೆನಪಾಗಿ ಹಲವು ಕಾರಣಗಳಿಗಾಗಿ ರೋಮಾಂಚನವಾಯಿತು! ಏಳೆಂಟು ವರ್ಷಗಳ ಕೆಳಗೆ ನನ್ನ ಅಂಕಣವೊಂದರಲ್ಲಿ ಬರೆದ ಮಾತುಗಳು: 

‘...ನನ್ನ ನೆಚ್ಚಿನ ಪುಸ್ತಕಗಳ ಗುಂಪಿನಲ್ಲಿರುವ ‘ವಚನ ಕಮ್ಮಟ’ (ಸಂ: ಕಿ.ರಂ.ನಾಗರಾಜ್, ಕೆ.ಮರುಳಸಿದ್ಧಪ್ಪ) ಹಾಗೂ ಕಲಬುರ್ಗಿಯವರು ಸಂಪಾದಿಸಿರುವ ‘ಬಸವಣ್ಣನವರ ವಚನ ಸಂಪುಟ’ಗಳತ್ತ ಕಣ್ಣಾಡಿಸಿದೆ. ಈ ಪುಸ್ತಕಗಳಲ್ಲಿ ಆಗಾಗ್ಗೆ ಓದಿ ಗುರುತು ಹಾಕಿರುವ ನೂರಾರು ವಚನಗಳ ಸಾಲುಗಳು ಕಣ್ಣಿಗೆ ಬೀಳತೊಡಗಿದಂತೆ, ವಚನ ಲೋಕದ ತಂಗಾಳಿ, ಕನ್ನಡ ಭಾಷೆಯ ಅದ್ಭುತ ರೂಪಗಳು, ಕಾವ್ಯಪ್ರಯೋಗಗಳು, ಆರೋಗ್ಯಕರ ನೋಟ ಹಾಗೂ ವಿಮರ್ಶಾತೀಕ್ಷ್ಣತೆ... ಇವೆಲ್ಲ ಎಂದಿನಂತೆ ಮೈಮನಸ್ಸುಗಳ ತುಂಬ ಮಿಂಚು ಮೂಡಿಸತೊಡಗಿದವು. ವಚನದ ಸ್ವರೂಪವನ್ನು ಹೇಳುವ

ಚನ್ನಬಸವಣ್ಣನವರ ವಚನವನ್ನು ನೋಡಿ:
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು 
ಕೂಡಲ ಚನ್ನಸಂಗನ ಶರಣರು.’   

ವಚನದ ಗುಂಗು, ಜಾಡು ಎಂದರೆ ಹೀಗೇ. ಧಾರವಾಡ ವಿಶ್ವವಿದ್ಯಾಲಯದ ತುಂಬ ವಚನ ಸಾಹಿತ್ಯದ ಸಂಶೋಧಕರೇ ತುಂಬಿರುತ್ತಾರೆ ಎಂದು ಹಿಂದೆಲ್ಲ ಆಡಿಕೊಳ್ಳುತ್ತಿದ್ದರು. ಅದು ಸಹಜ ಬೆಳವಣಿಗೆಯೇ ಇರಬಹುದು. ಕಾರಣ, ವಚನಸಂಚಾರ ಮಾಡುವವರಿಗೆ, ಒಮ್ಮೆ ವಚನದ ಜಾಡು ಹಿಡಿದವರಿಗೆ ಬೇರೇನೂ ರುಚಿಸುವುದು ಕಷ್ಟ! ಈ ಮಾತು ಬರೆಯುತ್ತಾ ಬರೆಯುತ್ತಾ, ಲಿಂಗಮ್ಮನವರ ವಚನಗಳು ನನ್ನನ್ನು ಪಟ್ಟಾಗಿ ಹಿಡಿದುಬಿಟ್ಟವು:

ಹೋಗುತ್ತ ಹೋಗುತ್ತ ಹೊಗೆಯ ಕಂಡೆ,
ಹೊಗೆಯೊಳಗೊಂದು ನಗೆಯ ಕಂಡೆ,
ನಗೆ ನಡೆಗೆಡಿಸಿ, ನಾನೆಂಬುದನರಿದು,
ತಾನು ತಾನೆಯಾಗಿ ತಲ್ಲಣವಿಲ್ಲದೆ,
ಎಲ್ಲವೂ ತಾನೆಂದರಿದು ತನ್ಮಯವಾಗಿ
ತರಹದಲ್ಲಿ ನಿಂದು ನೋಡುತ್ತಿರಲು
ಉರಿಯ ಕಂಡೆ; ಉರಿಯೊಳಗೊಂದು ಹೊಳೆವ ಜ್ಯೋತಿಯ ಕಂಡೆ;
ಆ ಜ್ಯೋತಿಯೊಳಗೊಂದು ಚಿಜ್ಜ್ಯೋತಿಯ ಕಂಡೆ
ಆ ಚಿಜ್ಜ್ಯೋತಿಯೊಳಗೊಂದು ಚಿತ್ಪ್ರಕಾಶವ ಕಂಡೆ.
ಆ ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ
ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,
ಆಡಿಯೂ ಆಡದಂತೆ, ನೋಡಿಯೂ ನೋಡದಂತೆ,
ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು,
ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !

ಈ ವಚನವನ್ನು ನೋಡುತ್ತಾ, ವೀರಣ್ಣ ರಾಜೂರ ಸಂಪಾದಿಸಿರುವ ‘ಶಿವಶರಣೆಯರ ವಚನ ಸಂಪುಟದ ಮುನ್ನುಡಿ ಗಮನಿಸಿದೆ. ಲಿಂಗಮ್ಮನವರ ವಚನಗಳನ್ನು ’ಬೋಧೆಯ ವಚನಗಳು’ ಎಂದು ಕರೆಯಲಾಗುತ್ತದೆ ಎಂಬ ಹಳಬರ ಹೇಳಿಕೆಯನ್ನು ರಾಜೂರ ಉಲ್ಲೇಖಿಸಿದ್ದರು. ನಾವು ಯಾರನ್ನು ಉಲ್ಲೇಖಿಸುತ್ತೇವೆ ಎಂಬುದು ನಮ್ಮ ನಿಲುವನ್ನೂ ಹೇಳುತ್ತಿರುತ್ತದೆ. ಲಿಂಗಮ್ಮನಂಥವರ ವಚನಗಳ ಅನಂತಸಾಧ್ಯತೆಗಳನ್ನು ಕೊಲ್ಲಲು ಇಂಥ ಸೀಮಿತ ಹಣೆಪಟ್ಟಿಗಳ ಕತ್ತಿ ಸಾಕಲ್ಲವೆ!  ಈ ತೀರ್ಮಾನದ ನಡುವೆ ಕೂಡ ಲಿಂಗಮ್ಮನವರ ವಚನಗಳ ಸುಂದರ ಚಿತ್ರಗಳು ರಾಜೂರರನ್ನು ಕಾಡದೆ ಬಿಟ್ಟಿಲ್ಲ: ‘ಒಂದು ಹುತ್ತಕ್ಕೆ ಒಂಬತ್ತು ಬಾಗಿಲು’, ‘ಬೆಳಗ ಕಂಡವರಿಗೆ ಕತ್ತಲೆಯ ಹಂಗುಂಟೆ’, ’ಗಾಳಿ ಬೀಸದ ಜಲದಂತೆ’, ‘ಕಾಮನ ಸುಟ್ಟಂಗೆ ಕಳವಳದ ಹಂಗೇಕೋ’…ಇಂಥ ಚಿತ್ರಗಳನ್ನು ರಾಜೂರ ಉಲ್ಲೇಖಿಸಿದ್ದರು. ಲಿಂಗಮ್ಮನ ವಚನಗಳಿರುವಾಗ ರಾಜೂರರ ಹಂಗೇಕೋ ಎಂದುಕೊಂಡು ಮತ್ತೆ  ವಚನಗಳಿಗೇ ಹೋದೆ: 

ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು,
ತನ್ನ ನೆಲೆಯ ತಿಳಿದಿತ್ತು.
ಕತ್ತಲೆಯೊಳಗೆ ನಿಂದು ನೋಡುತ್ತಿರಲು,
ನೋಟ ಹಿಂದಾಯಿತ್ತು; ಆಟವಡಗಿತ್ತು;
ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು.
ಊಟವನುಂಡು ಕೂಟವ ಕೂಡಿ
ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,
ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,
ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.

ಇದನ್ನು ಕೇವಲ ‘ತತ್ವಬೋಧೆ’ಯ ವಚನ ಎನ್ನಲಾಗುವುದೆ? ವಚನಗಳನ್ನು ಸುಮ್ಮನೆ, ಮುಕ್ತವಾಗಿ ಓದುವುದು ಎಷ್ಟೋ ಸಲ ಸರಿಯಾದ ಕ್ರಮ; ನಮಗೆ ಬೇಕಾದ್ದನ್ನು ಪಡೆಯಲು ಅದೇ ಸ್ವತಂತ್ರ ದಾರಿ. ನಮಗೆ ಬರವಣಿಗೆಯ ಬಿಕ್ಕಟ್ಟು ಎದುರಾದಾಗಲೆಲ್ಲ ಒಂದೆರಡು ದಿನ ಎಲ್ಲವನ್ನೂ ಕೈಬಿಟ್ಟು, ಬರೀ ವಚನ ಲೋಕದಲ್ಲಿ ಅಡ್ಡಾಡಿದರೆ ಸಾಕು, ಒಂದಲ್ಲ ಒಂದು ಹಾದಿ ಕಾಣುತ್ತದೆ ಎನ್ನಿಸುತ್ತದೆ. ಅಸಂಬದ್ಧ ಗದ್ಯ ಬರವಣಿಗೆಯನ್ನು ಸರಿಪಡಿಸಿಕೊಳ್ಳಲು ಹಲವು ಮಾರ್ಗಗಳಿರಬಹುದು. ಅದರಲ್ಲಿ ವಚನಗನ್ನಡಿ ನಿಜಕ್ಕೂ ಮಾಯಾಕನ್ನಡಿ; ಸಿದ್ಧೌಷಧ. ಇದು ನನ್ನ ಅನುಭವ.
 



Latest Video


Nataraj Huliyar Official
YouTube Channel

SUBSCRIBE