Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
24 May 2026 ಅಲ್ಲಮ ಜೋಗಿಯ ಹಿಂದೆ ಡಿ. ಆರ್- ಗುಂಡೂರ್!

ಅಲ್ಲಮನ ಗುಂಗೇ ಹಾಗೆ! ಒಮ್ಮೆ ಅವನ ವಚನಲೋಕ ಹೊಕ್ಕೆವೆಂದರೆ ಮುಗಿಯಿತು: ಆ ವಚನಗಳ ಸೀಳುತೀಕ್ಷ್ಣತೆ, ಸೋಜಿಗದ ಪ್ರತಿಮಾವಳಿ, ಕನ್ನಡ ಭಾಷೆಯ ಮಾಯೆ, ವಿಸ್ಮಯಗೊಳಿಸುವ ಗೂಢ-ನಿಗೂಢ, ಕಾವ್ಯಶಕ್ತಿ, ಕಾವ್ಯಸತ್ಯ, ಫಟ್ಟಂತ ಚಿಮ್ಮುವ ಫಿಲಾಸಫಿ, ಹಿಂದೆಂದೂ ಕಂಡಿರದ ಒಳನೋಟ, ಹೊಸ ಸತ್ಯ…ಇತ್ಯಾದಿಗಳು ನಮ್ಮನ್ನು ಅವುಗಳೊಳಗೇ ಇರುವಂತೆ ಸೆಳೆದು, ಹೀರಿಕೊಳ್ಳುತ್ತಲೇ ಇರುತ್ತವೆ. 

ತಮ್ಮ ಮೂವತ್ತನೆಯ ವಯಸ್ಸಿನಿಂದಾಚೆಗೆ ಅಲ್ಲಮನ ಬೆನ್ನು ಹತ್ತಿರಬಹುದಾದ ಡಿ. ಆರ್. ನಾಗರಾಜ್ (೧೯೫೪-೧೯೯೮) ಇಪ್ಪತ್ತೆಂಟು ವರ್ಷಗಳ ಕೆಳಗೆ ‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’ಯ ಅಪೂರ್ಣವೆನ್ನಬಹುದಾದ ಹಸ್ತಪ್ರತಿಯನ್ನು ಬಿಟ್ಟು ಹಟಾತ್ತನೆ ನಿರ್ಗಮಿಸಿದರು. ಅದನ್ನು ಅಚ್ಚಿಗೆ ಸಿದ್ಧಪಡಿಸುವ ಮಹತ್ತರ ಹೊಣೆ ಎಂ.ಎಸ್. ಆಶಾದೇವಿ, ಕಿ.ರಂ. ನಾಗರಾಜ್, ವೆಂಕಟ್ರಮಣ ಐತಾಳ ಮೊದಲಾದವರ ಮೇಲೆ ಬಿತ್ತು. ಕೆ.ವಿ. ಸುಬ್ಬಣ್ಣ ತಮ್ಮ ಅಕ್ಷರ ಪ್ರಕಾಶನದಲ್ಲಿ ಈ ಪುಸ್ತಕ ಪ್ರಕಟಿಸಿ ಚಾರಿತ್ರಿಕ ಕರ್ತವ್ಯ ಮಾಡಿದರು. ನಂತರ, ಕನ್ನಡ ಸಂಸ್ಕೃತಿಯ ಕೇಂದ್ರಪಠ್ಯಗಳಲ್ಲೊಂದಾಗಿ ಹಬ್ಬಿದ ಈ ಪುಸ್ತಕದ ಬಗ್ಗೆ ಡಿ. ಆರ್. ಕುರಿತ ನನ್ನ ಎರಡು ಪುಸ್ತಕಗಳಲ್ಲಿ ಬರೆದ ಕೆಲವು ಮಾತುಗಳು: 

‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕವನ್ನು ಓದುತ್ತಿರುವಾಗ ಅಮೆರಿಕನ್ ವಿಮರ್ಶಕ ಹೆರಾಲ್ಡ್ ಬ್ಲೂಮ್ ಜಗತ್ತಿನ ಮಹಾಪ್ರತಿಭೆಗಳನ್ನು ಕುರಿತು ಬರೆದ ‘ಜೀನಿಯಸ್’ ಪುಸ್ತಕದ ಕೇಂದ್ರ ಗ್ರಹಿಕೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಬರಹಗಾರನೊಬ್ಬ ತನ್ನ ಆಳದಿಂದ ಸಂಧಿಸಿ, ತೀವ್ರವಾಗಿ ತನ್ಮಯವಾಗುವ ವಸ್ತುವಿಗೆ ಎದುರಾದಾಗ ಅವನ ಜೀನಿಯಸ್ ಉಕ್ಕಿ ಹರಿಯುತ್ತದೆ ಎಂಬುದನ್ನು ಬ್ಲೂಮ್ ಈ ಪುಸ್ತಕದುದ್ದಕ್ಕೂ ತೋರಿಸಿಕೊಡುತ್ತಾನೆ. ಅಲ್ಲಮಲೋಕವನ್ನು ಸಂಧಿಸಿದಾಗ ಡಿ.ಆರ್. ಜೀನಿಯಸ್ ಹಾಗೆ ಉಕ್ಕಿ ಹರಿದಿರುವುದು ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯುದ್ದಕ್ಕೂ ಕಾಣುತ್ತದೆ.

ನನ್ನ ತಿಳಿವಳಿಕೆಯ ಪ್ರಕಾರ, ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕನ್ನಡದ ಅತ್ಯಂತ ಮಹತ್ವದ ಸಾಂಸ್ಕೃತಿಕ ಅಧ್ಯಯನ ಹಾಗೂ ಪ್ರಾಯಶಃ ಕನ್ನಡದ ಮೊದಲ ಪೂರ್ಣ ಪ್ರಮಾಣದ ಲಿಟರರಿ ಥಿಯರಿಯ ಪುಸ್ತಕ. ಇಲ್ಲಿ ಡಿ.ಆರ್. ಸಾಧಿಸಿರುವ ಥಿಯರೈಸೇಶನ್‌ನ ವ್ಯಾಪ್ತಿ; ಸಾಹಿತ್ಯಕೃತಿಗಳ ವ್ಯಾಖ್ಯಾನಗಳು; ದಾರ್ಶನಿಕ ವಾಗ್ವಾದಗಳ ಗ್ರಹಿಕೆ; ಕಾವ್ಯಮೀಮಾಂಸೆಗಳ ಸಂಘರ್ಷಗಳು ಕ್ರಮೇಣ ಸಾಮಾಜಿಕ ಸಂಘರ್ಷಗಳಾಗುವುದನ್ನು ವ್ಯಾಖ್ಯಾನಿಸುವ ಕ್ರಮ; ಅಲ್ಲಮಕಿಟಕಿಯ ಮೂಲಕ ವಿಶ್ವಸಾಹಿತ್ಯದ ಗ್ರಹಿಕೆಗಳು; ವಚನ ಸಾಹಿತ್ಯ-ಶೂನ್ಯ ಸಂಪಾದನೆ-ಮಂಟೇಸ್ವಾಮಿ ಕಾವ್ಯ- ಈ ಎಲ್ಲ ಪಠ್ಯಗಳ ನಡುವಿನ ಕೊಂಡಿಗಳು ಹಾಗೂ ಭಿನ್ನತೆಗಳು; ಒಟ್ಟಾರೆಯಾಗಿ ಕಾವ್ಯ ಕುರಿತ ವ್ಯಾಪಕ ವ್ಯಾಖ್ಯಾನಗಳು ಮತ್ತು ಅದ್ಭುತವಾದ ಓದಿನ ಕ್ರಮಗಳು- ಈ ಎಲ್ಲದರಲ್ಲೂ ಡಿ.ಆರ್. ತಲುಪಿರುವ ಎತ್ತರ ಕನ್ನಡದ ಮಟ್ಟಿಗಂತೂ ಅಪೂರ್ವವಾಗಿದೆ. ಡಿ.ಆರ್. ಈ ಪುಸ್ತಕ ಬರೆಯುವ ಮೊದಲೇ ಜಗತ್ತಿನ ನಿರ್ವಸಾಹತೀಕರಣ ಚಿಂತಕರನ್ನು ಹಾಗೂ ಭಾರತದ ವಿವಿಧ ಭಾಷೆಗಳ ಬಗೆಬಗೆಯ ಸಂಸ್ಕೃತಿ ಚಿಂತಕರನ್ನು ಮುಖಾಮುಖಿಯಾಗಿದ್ದರು. ಸ್ವತಃ ತಾವೇ ಇಂಡಿಯಾದ ಮಹತ್ವದ ನಿರ್ವಸಾಹತೀಕರಣ ಚಿಂತಕರಾಗಿ ರೂಪುಗೊಂಡಿದ್ದರು…’

ಡಿ. ಆರ್. ನಾಗರಾಜರನ್ನು ಹಿಡಿದ ಅಲ್ಲಮ ಗುಂಗು ಗೆಳೆಯ ಎನ್. ಎಸ್. ಗುಂಡೂರರನ್ನು ಐದಾರು ವರ್ಷಗಳ ಕೆಳಗೆ ಅಮರಿಕೊಂಡಿತು. 'ಅಲ್ಲಮಪ್ರಭು ಮತ್ತು ಶೈವಪ್ರತಿಭೆ' ಅನುವಾದಕ್ಕಾಗಿ ‘ನ್ಯೂ ಇಂಡಿಯಾ ಟ್ರಾನ್ಸ್‌ಲೇಶನ್ ಫೆಲೋಶಿಪ್’ ಸಿಕ್ಕಿದ ಮೇಲೆ ಗುಂಡೂರ್ ಹಗಲೂರಾತ್ರಿ ಈ ಪಠ್ಯದೊಂದಿಗೆ ಸೆಣಸುತ್ತಿದ್ದರು. ಆಗಿನ ಒಂದು ಸಂಜೆಯ ಟೆಲಿಫೋನ್ ಮಾತುಕತೆಯಲ್ಲಿ 'ನೀವು ಎಷ್ಟರಮಟ್ಟಿಗೆ ಈ ಪುಸ್ತಕವನ್ನು ಇಂಗ್ಲಿಷಿನಲ್ಲಿ ಹಿಡಿಯುತ್ತೀರೋ ಗೊತ್ತಿಲ್ಲ... ಆದರೆ ಈ ಬೌದ್ಧಿಕ ಸಾಹಸದಲ್ಲಿ ಮುಳುಗಿದಷ್ಟೂ, ನೀವು ಈ ಥಿಯರಿಟಿಕಲ್ ಪಠ್ಯದ ಜೊತೆಗೆ ಸೆಣಸಿದಷ್ಟೂ, ನಿಮ್ಮ ಅಕಡೆಮಿಕ್-ಇಂಟಲೆಕ್ಚುಯಲ್ ವ್ಯಕ್ತಿತ್ವಕ್ಕೆ ಅಪಾರ ಅನುಕೂಲವಾಗುತ್ತದೆ...' ಮುಂತಾಗಿ ಹೇಳಿದ ನೆನಪು. ಸರಿ! ನೋಡನೋಡುತ್ತಿರುವಂತೆಯೇ, ಗುಂಡೂರ್ ಒಂಥರದ ವಚನಜೀವಿಯಾದರು. ತಲೆಕೂದಲು ಬೆಳೆಯುತ್ತ ಬೆಳೆಯುತ್ತ ಜಟೆಯಾಗುವ ಹಂತ ಮುಟ್ಟಿತು. ಪ್ಯಾಶನೇಟ್ ಮೇಷ್ಟರಾದರು. ನಿದ್ದೆ ಎಚ್ಚರಗಳಲ್ಲಿ ಅಲ್ಲಮ…  

ಕಳೆದ ಐದು ವರ್ಷಗಳ ಶ್ರಮದ ಫಲವಾಗಿ 'ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ'ಯ ಇಂಗ್ಲಿಷ್ ಮರುಜನ್ಮ Allama Prabhu and the Shaiva Imagination (ಪರ್ಮನೆಂಟ್ ಬ್ಲಾಕ್, ರೂ ೧೨೫೦) ಪುಸ್ತಕ ನನ್ನೆದುರಿಗಿದೆ. ೧೯೯೭-೯೮ರ ನಡುವೆ ಡಿ.ಆರ್. ನಾಗರಾಜ್ ಆಗಾಗ ಬರೆದ ಪುಸ್ತಕ ೨೦೨೬ರಲ್ಲಿ ಇಂಗ್ಲಿಷಿನಲ್ಲಿ ಮರುಹುಟ್ಟು ಪಡೆದಿದೆ. ಇದು ಮರುಹುಟ್ಟು ಎನ್ನಲು ಕಾರಣವಿದೆ. ಇದು ಅನುವಾದವಲ್ಲ; ಒಂದರ್ಥದಲ್ಲಿ ಮರುರಚನೆ. ಡಿ. ಆರ್‍. ಗೆ ಪ್ರಿಯವಾದ ‘ಕಥನ’ ಎಂಬ ಪದವನ್ನೇ ಬಳಸಿ ಹೇಳುವುದಾದರೆ, ಇದು ‘ಮರುಕಥನ’. ಇದನ್ನು ಕೇವಲ ‘ಎಡಿಟೆಡ್ ಅಂಡ್ ಟ್ರಾನ್ಸ್ಲೇಟೆಡ್’ ಪುಸ್ತಕ ಎಂದೋ, ‘ಅನ್ನೋಟೇಟೆಡ್ ಎಡಿಶನ್’ ಎಂದೋ ಹೇಳಿದರೆ ಸರಿಯಾಗದು. ಇದು ಸ್ವತಃ ಡಿ. ಆರ್‍. ವಿವರಿಸಬೇಕಾಗಿದ್ದ ಹಲವು ಭಾಗಗಳನ್ನು ವಿವರಿಸಿದೆ. ಪಠ್ಯವನ್ನು ಅಲ್ಲಲ್ಲಿ ಮುರಿದು ಕಟ್ಟಿದೆ. ಓದಲು ತಕ್ಕ ರೆಫರೆನ್ಸುಗಳನ್ನು ಕೊಟ್ಟು, ಇಂಗ್ಲಿಷ್ ಓದುಗ ಓದುಗಿಯರ ಓದಿಗೆ ನೆರವಾಗಿದೆ. ಈ ಪುಸ್ತಕವನ್ನು ಮತ್ತೆ ಕನ್ನಡದಲ್ಲಿ ಮರುಮುದ್ರಿಸುವವರು ಈ ಪುಸ್ತಕದ ಮಾದರಿಯನ್ನು ಅನುಸರಿಸಿದರೆ, ಈ ಮಹತ್ವದ ಕನ್ನಡ ಪುಸ್ತಕ ಇನ್ನಷ್ಟು ಸ್ಪಷ್ಟವಾಗಿ ಓದುಗಿ-ಓದುಗರ ದಕ್ಕಬಲ್ಲದು. ಗುಂಡೂರ್ ಮುನ್ನುಡಿ ಅಲ್ಲಮ-ಡಿ.ಆರ್. ಸಂಬಂಧವನ್ನು ಸಮರ್ಥವಾಗಿ, ವಿಸ್ತೃತವಾಗಿ ವಿವರಿಸಿದೆ. ಈ ಕೃತಿ ಮೈದಾಳುವ ಕಾಲದಲ್ಲೇ ಇಲ್ಲಿನ ಕೆಲವು ಭಾಗಗಳನ್ನು ಓದಿದ್ದ ನಾನು ಈಗ ಕೃತಿಯ ಸ್ವರೂಪದ ಬಗೆಗಷ್ಟೇ ಹೇಳಿದ್ಧೇನೆ. ಕೃತಿಯ ಒಳಹೂರಣ ಕುರಿತು ವಿವರವಾಗಿ ಬರೆಯುವ ಹೊಣೆ ಈ ಕ್ಷೇತ್ರದಲ್ಲಿ ನುರಿತ ವಿದ್ವಾಂಸರದು.

ಈ ಕಾಲದ ದೊಡ್ಡ ವಿದ್ವಾಂಸ ಶೆಲ್ಡನ್ ಪೊಲಾಕ್ ಈ ಪುಸ್ತಕ ಬರುವ ಮುನ್ನವೇ ಇದರ ಕರಡು ಪ್ರತಿ ಓದಿ ಉತ್ಸಾಹದಿಂದ ಬರೆದದ್ದರ ಸಾರಾಂಶ: 

‘೧೯೯೮ರಲ್ಲಿ ಡಿ. ಆರ್. ನಾಗರಾಜ್ ತಮ್ಮ ನಲವತ್ತನೆಯ ವಯಸ್ಸಿನಲ್ಲಿ ತೀರಿಕೊಂಡಾಗ ಇಂಡಿಯಾ ಮತ್ತು ಈ ಜಗತ್ತು ಒರಿಜಿನಾಲಿಟಿ, ಒಳನೋಟ, ಸೂಕ್ಷ್ಮತೆಗಳ ಒಬ್ಬ ಅತಿವಿಶಿಷ್ಟ ಚಿಂತಕನನ್ನು ಕಳೆದುಕೊಂಡಿತು.  ‘ಏಕಕಾಲಕ್ಕೆ ಬರ್ಬರತೆಯ ದಾಖಲೆಯೂ ಆಗಿರದ ಒಂದು ನಾಗರಿಕತೆಯ ದಾಖಲೆಯೇ ಇರಲಾರದು’ ಎಂದಿದ್ದ ವಾಲ್ಟರ್ ಬೆಂಝಮಿನ್‌ನಷ್ಟೇ ಆಳವಾಗಿ ಈ ಅಂಶವನ್ನು ಡಿ. ಆರ್. ಕೂಡ ಅರಿತಿದ್ದರು. ಜಾತೀಯ ಹಿಂಸೆಯ ಆಳ ಹಾಗೂ ಕಾವ್ಯ, ಫಿಲಾಸಫಿಗಳ ಎತ್ತರ ಎರಡನ್ನೂ ಓದುಗರ ಎದೆಗೆ ಮುಟ್ಟಿಸುವಲ್ಲಿ ಡಿ.ಆರ್.ಗೆ ತನ್ನದೇ ಆದ ಮಾರ್ಗವೂ ಇತ್ತು. ವೀರಶೈವ ಮಾಸ್ಟರುಗಳಲ್ಲಿ ಅತ್ಯಂತ ಮುಖ್ಯನಾದ, ಅತ್ಯಂತ ನಿಗೂಢನಾದ ಅಲ್ಲಮ ಕೊನೆಗೂ ಇಂಗ್ಲಿಷ್ ಓದುಗರಿಗೆ ದೊರೆತಿರುವುದು ಒಂದು ಬೆಲೆಬಾಳುವ ಉಡುಗೊರೆಯಾಗಿದೆ; ಈ ಕಾರಣಕ್ಕಾಗಿ ನಾವು ಎನ್ ಎಸ್ ಗುಂಡೂರ್‍ ಅವರಿಗೆ ಆಳದಲ್ಲಿ ಕೃತಜ್ಞರಾಗಿದ್ದೇವೆ. ಅವರ ಈ ಎಡಿಶನ್-ಟ್ರಾನ್ಸಲೇಶನ್ ಕೇವಲ ಹೋಮೇಜ್ ಅಥವಾ ಗೌರವಾರ್ಪಣೆ ಮಾತ್ರವಲ್ಲ, ಅದು ತಂತಾನೇ ಸಾಹಿತ್ಯಕ ಮತ್ತು ಚಾರಿತ್ರಿಕ ವಿದ್ವಾಂಸಲೋಕಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.’ 

ಈ ಅಂಕಣಕ್ಕೆ ಟಿಪ್ಪಣಿ ಮಾಡುವ ದಿನ ಡಿ. ಆರ್. ನಾಗರಾಜರ ಮಿತ್ರರೂ ಆಗಿದ್ದ ಸಂಸ್ಕೃತಿ ಚಿಂತಕ ಯೋಗೇಂದ್ರ ಯಾದವ್ ‘ಇಂಡಿಯನ್ ಎಕ್ಸ್‌ಪ್ರೆಸ್’ ಮಾತುಕತೆಯ ವಿಡಿಯೋದಲ್ಲಿ ಪುಸ್ತಕದ ಮಹತ್ವ ಕುರಿತು ಉತ್ಸಾಹದಿಂದ ಮಾತಾಡಿದರು. ತಮ್ಮ ಅಂಕಣದಲ್ಲೂ ಈ ಬಗ್ಗೆ ಬರೆದರು. ಈ ಕೃತಿಗೆ ಗುಂಡೂರ್‍ ಬರೆದಿರುವ ವಿಸ್ತೃತ, ಗಂಭೀರ ಮುನ್ನುಡಿ ಅವಶ್ಯವಾಗಿ ಕನ್ನಡಕ್ಕೆ ಬರಬೇಕು; ಮುಂದೆ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕ ಪ್ರಕಟವಾಗುವಾಗ ಈ ಕನ್ನಡ ರೂಪವೂ ಅದರ ಜೊತೆಗಿದ್ದರೆ ಡಿ. ಆರ್‍. ಪುಸ್ತಕವನ್ನು ಇನ್ನಷ್ಟು ಚೆನ್ನಾಗಿ ಅರಿಯಲು ಹೊಸ ಹೊಸ ತಲೆಮಾರುಗಳಿಗೆ ನೆರವಾಗಬಲ್ಲದು.  

ಕಳೆದ ವಾರ ಸಿಕ್ಕ ಈ ಇಂಗ್ಲಿಷ್ ಪುಸ್ತಕದ ಸುಂದರ ಪ್ರೊಡಕ್ಷನ್ನನ್ನು ತಿರುವಿ ಹಾಕುತ್ತಾ ನೇವರಿಸುತ್ತಿದ್ದಾಗ (ಈ ಕೋಮಲ ವರ್ಣನೆ ಸೂಕ್ಷ್ಮಾತಿಸೂಕ್ಷ್ಮ ಓದುಗಿಯರಲ್ಲಿ ನಗೆ ಉಕ್ಕಿಸದಿರಲಿ!) ವಿಷಾದದ ಮಾತೊಂದು ಥಟ್ಟನೆ ನನ್ನಲ್ಲಿ ಉಕ್ಕಿತು: 'ಅಯ್ಯೋ! ಡಿ.ಆರ್. ಇದ್ದಿದ್ದರೆ ಈ ಪುಸ್ತಕ ನೋಡಿ ಎಷ್ಟು ಆನಂದ ಪಡುತ್ತಿದ್ದರೋ!’ ಮನ ಪೆಚ್ಚಾಯಿತು.  ಎಂಬತ್ತು-ತೊಂಬತ್ತರ ದಶಕದಲ್ಲಿ ಅಶೀಶ್ ನಂದಿ ಥರದವರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ 'ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್'ನ ಪ್ರೊಡಕ್ಷನ್ನುಗಳನ್ನು ಇಷ್ಟಪಡುತ್ತಿದ್ದ ಡಿ.ಆರ್. ಪರ್ಮನೆಂಟ್ ಬ್ಲಾಕಿನ ಈ ದಕ್ಷ ಪ್ರಕಟಣೆಯನ್ನು ಸಂಭ್ರಮದಿಂದ ಸೆಲೆಬ್ರೇಟ್ ಮಾಡುತ್ತಿದ್ದರು ಎಂದು ಸಕಾರಣವಾಗಿ ಊಹಿಸುವೆ. ತೀರಿಕೊಂಡ ದೊಡ್ಡ ಕನ್ನಡ ವಿದ್ವಾಂಸ-ಲೇಖಕರೊಬ್ಬರಿಗೆ ಅನಂತರದ ವಿದ್ವಾಂಸರು ಮಾಡಬೇಕಾದ ಕರ್ತವ್ಯ ಎಂಥದು ಎಂಬುದಕ್ಕೂ ಈ ಪುಸ್ತಕ ಅನುಕರಣಾರ್ಹ ಮಾದರಿಯಂತಿದೆ. ಇಂಥ ಮಹತ್ತರ ಕೆಲಸಗಳು ಫೆಲೋಶಿಪ್ಪುಗಳ ಮರ್ಜಿಗಳನ್ನು ಕಾಯದೆಯೂ ನಡೆಯುತ್ತಿರಬೇಕು ಎಂದಷ್ಟೇ ಸೂಚಿಸಬಯಸುವೆ!

ಇದೆಲ್ಲವನ್ನೂ ಕುರಿತು ಬರೆಯುತ್ತಿರುವಾಗ ಯಾಕೋ ಬಸವಣ್ಣನ ವಚನವೊಂದು ನೆನಪಾಯಿತು:

ಓದಿನ ಹಿರಿಯರು ವೇದದ ಹಿರಿಯರು 
ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು 
ವೇಷದ ಹಿರಿಯರು ಭಾಷೆಯ ಹಿರಿಯರು 
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ; 
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ 
ನಮ್ಮ ಕೂಡಲಸಂಗಮದೇವರು.

ಲೇಖಕನೊಬ್ಬ ತೀರಿಕೊಂಡ ನಂತರ ಅವನನ್ನು ಕುರಿತು ಬರೆಯುವ ಓದಿನ ಹಿರಿಯರು, ಭಾಷೆಯ ಹಿರಿಯರು, ಶಾಸ್ತ್ರದ ಹಿರಿಯರು ಅವನ ಮಹತ್ವದ ಪುಸ್ತಕಗಳನ್ನು ಮುನ್ನೆಲೆಗೆ ತರುವ, ಒಳ್ಳೆಯ ಅರ್ಥದಲ್ಲಿ ‘ಮೆರೆಸ’ಬೇಕಾದದ್ದನ್ನು ಕುರಿತ ಸೂಚಿತಾರ್ಥವನ್ನೂ ಈ ವಚನ ನನ್ನಲ್ಲಿ ಹೊರಡಿಸುತ್ತಿರುತ್ತದೆ. ಈ ಸುಂದರ ಕೆಲಸವನ್ನೂ ಗುಂಡೂರ್‍ ಮಾಡಿದ್ದಾರೆ. ಈ ಪುಸ್ತಕದ ರಚನೆಯ ಜೊತೆಗೆ ಡಿ. ಆರ್‍. ಅವರ ಸಮಸ್ತ ಬರವಣಿಗೆಯನ್ನೂ ಪರಿಚಯಿಸಿಕೊಂಡಿರುವಂತೆ ತೋರುವ ಗುಂಡೂರ್‍‌ಗೆ ಡಿ. ಆರ್‍. ಅವರ ವಿದ್ವಾಂಸ ವ್ಯಕ್ತಿತ್ತ್ವದ ವಿದ್ವತ್ತು, ತಾತ್ವಿಕ ಸ್ಪಷ್ಟತೆ, ಸಿದ್ಧಾಂತಗಳ ತಳಹದಿ, ನಿಷ್ಠುರ ಶೋಧನೆಯ ಆಳ ಅಗಲ, ಸಾಹಿತ್ಯದ ತೀವ್ರ ಓದಿನಿಂದ  ಡಿ. ಆರ್.ಗೆ ಸಿಕ್ಕ ತೀವ್ರತೆ ಇವೆಲ್ಲವೂ ದಕ್ಕುವಂತಾಗಲಿ. ಈ ಪುಸ್ತಕ ಗುಂಡೂರ್‍ ವ್ಯಕ್ತಿತ್ವಕ್ಕೆ ಗಟ್ಟಿತನ ತರಲಿ ಎಂದು ಪ್ರೀತಿಯಿಂದ ಹಾರೈಸುವೆ. ಅದರ ಜೊತೆಗೇ, ಇದೇ ಅಂಕಣದಲ್ಲಿ ಹಿಂದೊಮ್ಮೆ ಉಲ್ಲೇಖಿಸಿದ ಹರಿಹರನ ‘ಮನುಜರ ಮೇಲೆ ಸಾವವರ ಮೇಲೆ’ ಬರೆಯುವ ಕುರಿತಾದ ಎಚ್ಚರದ ಹಿನ್ನೆಲೆಯಲ್ಲಿ, ಕೃತಜ್ಞತೆಯ ಹುಸಿ-ನಿಜ ವಿಶೇಷಣಗಳ ಹೆಣಭಾರದಲ್ಲಿ ಈ ಇಂಗ್ಲಿಷ್ ಪ್ರೊಫೆಸರ್ ನೊಗ ಮುರಿಯದಿರಲಿ ಎಂದು ಕೂಡ ಕಿವಿಮಾತು ಹೇಳುವೆ! 
  
 

blog
17 May 2026 ಬಾಬಾಸಾಹೇಬರ ಯುಗ ಪ್ರವರ್ತಕ ಕೃತಿಗೆ ೯೦ ವರ್ಷ!

ಈ ಸಲ ಬರೆಯಹೊರಟಿದ್ದು ಸಮಾಜವನ್ನು ಕದಲಿಸಲೆತ್ನಿಸಿದ ಅಪ್ಪಟ ಕವಿಯೊಬ್ಬನ ಬಗ್ಗೆ; ಆದರೆ ಇದ್ದಕ್ಕಿದ್ದಂತೆ ಗೆಳೆಯರು ಭಾರತೀಯ ಸಮಾಜವನ್ನು ನಿರ್ಣಾಯಕವಾಗಿ ಬದಲಿಸಿದ ಅಂಬೇಡ್ಕರ್ ಅವರ ‘ಆನ್ನಿಹಿಲೇಶನ್ ಆಫ್ ಕ್ಯಾಸ್ಟ್’ ಪುಸ್ತಕಕ್ಕೆ ಮೊನ್ನೆ ಮೇ ೧೫ಕ್ಕೆ ತೊಂಬತ್ತು ವರ್ಷ ತುಂಬಿತು ಎಂದು ನೆನಪಿಸಿದಾಗ, ಅಂಕಣದ ವಸ್ತು ಬದಲಾಯಿತು! ೧೯೯೦ರಲ್ಲಿ ಒಂದು ಸಂಜೆ ಪೊಲೀಸ್ ಆಫೀಸರ್ ಎಸ್. ಮರಿಸ್ವಾಮಿಯವರು ನಡೆಸುತ್ತಿದ್ದ ಮೀಟಿಂಗಿಗೆ ಕವಿ ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್ ನನ್ನನ್ನೂ ಕರೆದೊಯ್ದ ಚಿತ್ರ ಕಣ್ಣೆದುರು ಬಂತು.

ಅದು ಅಂಬೇಡ್ಕರ್ ಶತಮಾನೋತ್ಸವದ ಅಂಗವಾಗಿ ಕೆ. ಮರಿಸ್ವಾಮಿಯವರು ವರ್ಷಾದ್ಯಂತ ರೂಪಿಸಲು ಹೊರಟಿದ್ದ ಕಾರ್ಯಕ್ರಮಗಳ ಮೀಟಿಂಗ್. ಅಲ್ಲೇ ಕೂತ ಕವಿಗಳು ಜಾಥಾಕ್ಕಾಗಿ ‘ದಲಿತರ ನಡಿಗೆ ಹೊಸ ಬಾಳಿನ ಕಡೆಗೆ’ ಎಂಬ ಘೋಷವಾಕ್ಯ ರೂಪಿಸಿದ್ದನ್ನು ಕಂಡು ವಿಸ್ಮಯಗೊಂಡೆ. ಆ ಘೋಷವಾಕ್ಯ ಆಗ ಹೊಸದು. ನಂತರ ಈ ಘೋಷಣೆಯನ್ನು ಹಲವರು ಹಲವು ರೀತಿ ಬಳಸಿ ಅಗ್ಗವಾಗಿಸಿದ್ದನ್ನು ಕಂಡೆ.

ಅಂಬೇಡ್ಕರ್ ಶತಮಾನೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳ ಕಿರು ಪುಸ್ತಕಗಳ ಸರಣಿಯನ್ನು ಡಿ. ಆರ್. ನಾಗರಾಜ್  ರೂಪಿಸಿದರು. ಹಾಗೆ ನೋಡಿದರೆ, ಅದು ನನ್ನ ಮೊದಲ ಪೂರ್ಣಾವಧಿ ಅನುವಾದ. ಅಂಬೇಡ್ಕರ್ ಅವರ ‘ಕ್ಯಾಸ್ಟ್ಸ್ ಇನ್ ಇಂಡಿಯಾ’ …ಹಾಗೂ ‘ಅನ್ನಿಹಿಲೇಶನ್ ಆಫ್ ಕ್ಯಾಸ್ಟ್’ ಹಾಗೂ ಇನ್ನಿತರ ಪುಸ್ತಕಗಳ ಬರಹಗಳನ್ನು ಕೊಟ್ಟ ಡಿ. ಆರ್. ‘ನಿಮಗೆ ಯಾವುದು ಮುಖ್ಯ ಅನ್ನಿಸುತ್ತದೋ ಆ ಭಾಗಗಳನ್ನು ಅನುವಾದಿಸಿ’ ಎಂದರು. ಕೆಲವೆಡೆ ಡಿ. ಆರ್. ಪೆನ್ಸಿಲ್ಲಿನಲ್ಲಿ ಮಾರ್ಕ್ ಮಾಡಿದ್ದ ಭಾಗಗಳಿದ್ದವೆಂದು ಕಾಣುತ್ತದೆ. ಒಂದೆರಡು ವಾರದಲ್ಲಿ ನಾನು ಸಂಗ್ರಹಾನುವಾದ ಮಾಡಿದ ಈ ಪುಟ್ಟ ಪುಸ್ತಕ ‘ಅಸ್ಪೃಶ್ಯರ ವಿಮೋಚನೆ’ಎಂಬ ಹೆಸರಿನಲ್ಲಿ ಡಿ.ಟಿ.ಪಿ- ಅದು ಡಿಟಿಪಿ ಬಂದ ಹೊಸದು- ಆಗಿ ಪ್ರೆಸ್ಸಿನಲ್ಲಿ ಮುದ್ರಣವಾಗುತ್ತಿತ್ತು. ಈ ಸರಣಿಯ ಪುಸ್ತಕಗಳು ಬರುವವರೆಗೂ ಹಗಲೂ ರಾತ್ರಿ ಚಾಮರಾಜಪೇಟೆಯ  ಸತ್ಯಶ್ರೀ ಮುದ್ರಣಾಲಯಕ್ಕೆ ಹೋಗುತ್ತಿದ್ದ ಥ್ರಿಲ್ ನೆನಪಿದೆ. ಇಂದೂಧರ ಹೊನ್ನಾಪುರ ಅಂಬೇಡ್ಕರ್ ಅವರ ಅಪರೂಪದ ಫೋಟೋವೊಂದನ್ನು ಈ ಸರಣಿಯ ಮುಖಪುಟಕ್ಕಾಗಿ ತಂದಿದ್ದರು. ಈ ಸರಣಿಗೆ ಎಲ್ಸಿ ನಾಗರಾಜ್, ಬಿ. ಗಂಗಾಧರಮೂರ್ತಿ ಕೂಡ ಕೆಲವು ಕಿರುಪುಸ್ತಕಗಳನ್ನು ಅನುವಾದಿಸಿದ್ದರು. 

ಮುಂದೆ ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ‘ಜಾತಿವಿನಾಶ’ ಕೃತಿಯ ಜೊತೆಗೆ ಪೂರ್ಣತೇಜಸ್ವಿಯವರ ಪ್ರಭಾವಶಾಲಿ ಕಾದಂಬರಿ ’ಚಿದಂಬರ ರಹಸ್ಯ’ವನ್ನು ತೌಲನಿಕವಾಗಿ ನೋಡಿ ಸಾಂಸ್ಕೃತಿಕ ಅಧ್ಯಯನಕ್ಕೆ ಒಳಪಡಿಸುವ ಸಂದರ್ಭವೂ ಬಂತು. ಅಂಬೇಡ್ಕರ್ ಅವರ ‘ಜಾತಿವಿನಾಶ’ ಪಠ್ಯ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪಠ್ಯವಾಗಲು ನಾನು ಕೂಡ ನಿಮಿತ್ತಮಾತ್ರನಾದೆ ಎಂಬ ಹೆಮ್ಮೆ ಇವತ್ತಿಗೂ ಹಾಗೇ ಇದೆ. ಹಾಗೆಯೇ ‘ಜಾತಿ ಪಥ ತೋಡಕ್ ಮಂಡಲ್’ ಸಮಾವೇಶಕ್ಕಾಗಿ ಒಂದು ಮಹಾನ್ ಥೀಸಿಸ್ಸಿಗೆ ಸಮನಾದ ಭಾಷಣ ಸಿದ್ಧಪಡಿಸಿದ ಅಂಬೇಡ್ಕರ್ ಬೌದ್ಧಿಕ ಸಾಹಸ ಇವತ್ತಿಗೂ ರೋಮಾಂಚನ ಉಂಟು ಮಾಡುತ್ತದೆ; ಸ್ಫೂರ್ತಿ ಹುಟ್ಟಿಸುತ್ತದೆ. ಸಮಾವೇಶ ಏರ್ಪಡಿಸಿದ್ದ ಮಂಡಲ ಈ ಭಾಷಣದ ಕೆಲವು ಭಾಗಗಳ ಬಗ್ಗೆ ಅಸಮ್ಮತಿ ಸೂಚಿಸಿತು. ಅವನ್ನು ಬದಲಿಸಲು ಒಪ್ಪದ ಅಂಬೇಡ್ಕರ್ ಅಲ್ಲಿ ಪ್ರಬಂಧ ಮಂಡಿಸಲಿಲ್ಲ. ಕೊನೆಗೆ ತಾವೇ ಈ ಪುಸ್ತಕವನ್ನು ಪ್ರಕಟಿಸಿದರು. ಈ ಪುಸ್ತಕದ ಹಲವು ಅನುವಾದಗಳು ಈಗ ಕನ್ನಡಿಗರಿಗೂ ಪರಿಚಿತವಾಗಿವೆ. ಈ ಪುಸ್ತಕ ಲೋಕದಾದ್ಯಂತ ಮಹತ್ತರ ಕ್ರಾಂತಿಕಾರಕ ಪಠ್ಯವಾಗಿ ಹಬ್ಬಿದೆ.

ಬಾಬಾಸಾಹೇಬರ ಈ ಕೃತಿಯ ಕೆಲವು ಭಾಗಗಳನ್ನು ಇಪ್ಪತ್ತಾರು ವರ್ಷಗಳ ಕೆಳಗೆ ಅನುವಾದಿಸಿದ ನಂತರ, ಅವುಗಳನ್ನು ಒಳಗೊಂಡ ವಿಶ್ಲೇಷಣೆಯ ಹತ್ತಾರು ಬರಹ-ಭಾಷಣಗಳನ್ನು ಆಗಾಗ್ಗೆ ಮಂಡಿಸಿರುವೆ. ಆ ಬರಹ-ಮಾತುಗಳ ಕೆಲವು ಭಾಗಗಳನ್ನು ಹೊಸ ಓದುಗಿ-ಓದುಗರಿಗಾಗಿ ಮುಂದಿನ ಭಾಗದಲ್ಲಿ ಕೊಟ್ಟಿರುವೆ:

                                                                                                                               ೨

ಇಪ್ಪತ್ತನೆಯ ಶತಮಾನದ ಜಾತಿಪದ್ಧತಿಯ ಅಧ್ಯಯನಕಾರರು ಜನಾಂಗೀಯವಾದ, ಮೈಬಣ್ಣ ಮುಂತಾದವುಗಳ ಆಧಾರದ ಮೇಲೆ ಜಾತಿಪದ್ಧತಿಯನ್ನು ವಿವರಿಸಿದ ಕ್ರಮಗಳನ್ನು ಅಂಬೇಡ್ಕರ್ ತಿರಸ್ಕರಿಸಿದರು. ಅನುಕರಣೆ ಹಾಗೂ ಬಹಿಷ್ಕಾರಗಳಿಂದ ಜಾತಿಗಳು ಬೆಳೆದ ರೀತಿಯನ್ನು ಕಂಡುಕೊಂಡ ಅಂಬೇಡ್ಕರ್ ಅವರು ‘ಜಾತಿ ಎನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ’ ಎಂದು ಆಧಾರಸಹಿತ ತೋರಿಸಿದರು. ಜಾತಿಪದ್ಧತಿಯನ್ನು ಶ್ರಮದ ವಿಭಜನೆ ಎಂದು ವಿದೇಶಿ ಅಧ್ಯಯನಗಳು ಗ್ರಹಿಸಿದ್ದವು. ‘ಜಾತಿಪದ್ಧತಿ ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ. ಅದ್ದರಿಂದಲೇ ಭಾರತದಲ್ಲಿ ಕಾರ್ಮಿಕರು ಕೂಡ ಒಗ್ಗೂಡಿ ಬದಲಾವಣೆಗೆ ಯತ್ನಿಸದಂತೆ ಜಾತಿಪದ್ಧತಿ ಅಡ್ಡಿಯಾಗಿದೆ’ ಎಂಬ ಸತ್ಯವನ್ನು ಅಂಬೇಡ್ಕರ್ ಕಾಣಿಸಿದರು. ಜಾತಿಪದ್ಧತಿ ಏಕಕಾಲಕ್ಕೆ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಹಾಗೂ ವಿವಿಧ ಬಗೆಯ ವಿಕಾರಗಳನ್ನು, ಭೇದಭಾವಗಳನ್ನು ಸೃಷ್ಟಿಸುವ ರೀತಿಯನ್ನು  ಭಾರತದ ಭೂತ-ವರ್ತಮಾನಗಳೆರಡನ್ನೂ ಶೋಧಿಸುವುದರ ಮೂಲಕ ತೋರಿಸಿಕೊಟ್ಟರು.

ಧಾರ್ಮಿಕ ಮೂಲಗಳೂ ಸೇರಿದಂತೆ ವಿವಿಧ ಮೂಲಗಳಿಂದ ಜಾತಿಪದ್ಧತಿ ತನ್ನ ಅಸ್ತಿತ್ವಕ್ಕೆ ನ್ಯಾಯಬದ್ಧತೆಯನ್ನು ಸೃಷ್ಟಿಸಿಕೊಂಡಿರುವ ರೀತಿಯನ್ನು ಹಾಗೂ ಅದು ಬಗೆಬಗೆಯ ಅಧಿಕಾರಗಳನ್ನು ಗಳಿಸಿಕೊಂಡ ರೀತಿಯನ್ನು ಅಂಬೇಡ್ಕರ್ ತೋರಿಸಿದರು. ಸಮಾಜದ ಮೂಲಭೂತ ಬದಲಾವಣೆಗೆ ಜಾತಿ ಅಡ್ಡಿಯಾಗಿರುವುದನ್ನು, ಕೆಳಜಾತಿಗಳ ಪ್ರಗತಿಗೆ ಮೇಲುಜಾತಿಗಳು ಅಡ್ಡಿಯಾಗಿರುವ ರೀತಿಯನ್ನು ಅಂಬೇಡ್ಕರ್ ಗುರುತಿಸಿದರು. ಸಮೂಹದ ಸರ್ವಾಧಿಕಾರವನ್ನು ಹೇರುವ ಜಾತಿಪದ್ಧತಿ ವ್ಯಕ್ತಿಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗಿದೆ; ಜಾತಿ ಮೂಲತಃ ‘ಒಂದು ನಕಾರಾತ್ಮಕ ವ್ಯವಸ್ಥೆ’ (ಅಂದರೆ, ಇದನ್ನು ಮಾಡಬೇಡ, ಅದನ್ನು ಮಾಡಬೇಡ ಎಂಬುದನ್ನೇ ಆಜ್ಞಾಪಿಸುವ ವ್ಯವಸ್ಥೆ) ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟರು.

ಆ ಕಾಲದ ಜಾತಿಪದ್ಧತಿಯ ಸಮರ್ಥಕರು ‘ಉತ್ತಮ ತಳಿ’ ಮುಂತಾದ ಸಿದ್ಧಾಂತಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ವರ್ಣ ಹಾಗೂ ಜಾತಿಗಳು ಬೇರೆ ಬೇರೆ ಎಂದು ವಾದಿಸುತ್ತಿದ್ದರು.  ವರ್ಣ ಹಾಗೂ ಜಾತಿಗಳ ನಡುವೆ ಇರುವ ಅನೇಕ ಸಾಮಾನ್ಯ ಅಂಶಗಳನ್ನು ಅಂಬೇಡ್ಕರ್ ಸ್ಪಷ್ಟವಾಗಿ ತೋರಿಸಿದರು. ‘ಶಾಸ್ತ್ರಗಳನ್ನು ಹೊಸದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ. ಅವುಗಳನ್ನು ಜನ ಹೇಗೆ ಅರ್ಥ ಮಾಡಿಕೊಂಡಿದ್ದಾರೆಂಬುದೇ ಮುಖ್ಯ’ ಎಂದ ಅಂಬೇಡ್ಕರ್, ಜಾತಿಪದ್ಧತಿಯನ್ನು ವಿನಾಶ ಮಾಡುವುದೊಂದೇ ಜಾತಿಯಿಂದ ಬಿಡುಗಡೆಗೊಳ್ಳುವ ಮಾರ್ಗ ಎಂದು ನಂಬಿದ್ದರು.

ಜಾತಿಗಳು ರೂಪುಗೊಂಡದ್ದನ್ನು ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಹೇಳುತ್ತಾರೆ: ‘ನನ್ನ ಪ್ರಕಾರ, ಜಾತಿ ಎಂಬ ಒಂದು ಗುಂಪಿರುವುದಿಲ್ಲ. ಇದ್ದರೆ ಹಲವು ಜಾತಿಗಳೇ ಇರುತ್ತವೆ. ಹೀಗೆ ಸೃಷ್ಟಿಗೊಂಡ ಜಾತಿಗಳಲ್ಲಿನ ಸದಸ್ಯನ ಯಾವುದೇ ಬಗೆಯ ಹೊಸ ಹೆಜ್ಜೆ ಜಾತಿಯ ನಿಯಮಗಳಿಗೆ ವಿರೋಧಿಯಾದರೆ, ಅವನು ಆ ಜಾತಿಯಿಂದ ಹೊರಗೆಸೆಯಲ್ಪಡುತ್ತಾನೆ. ಹೀಗೆ ಹೊರಗೆಸೆಯಲ್ಪಟ್ಟವನಿಗೆ ಮತ್ತೊಂದು ಜಾತಿಯ ಬಾಗಿಲುಗಳು ಮುಚ್ಚಿರುತ್ತವೆ. ಈ ಬಗೆಯ ಬಹಿಷ್ಕೃತರಿಂದ ಹೊಸ ಜಾತಿಗಳು ಹುಟ್ಟುತ್ತವೆ. ಈ ಬಗೆಯಲ್ಲಿ ಜಾತಿಗಳನ್ನು ಹುಟ್ಟು ಹಾಕಿಕೊಳ್ಳಲೇಬೇಕೆನ್ನುವುದು ಒಂದು ಮನಸ್ಥಿತಿಯೇನೂ ಅಲ್ಲ. ಜಾತಿಗಳು ಮುಚ್ಚಿದ ಗುಂಪುಗಳಾದ್ದರಿಂದ ಹೀಗೆ ಹೊಸ ಜಾತಿಗಳು ತಾವಾಗಿಯೇ ಹುಟ್ಟುತ್ತವೆ.’

‘ಇವತ್ತು ಕೂಡ ಜಾತಿಯ ಸಮರ್ಥಕರಿರುವುದು ಕರುಣಾಜನಕ’ ಎನ್ನುವ ಅಂಬೇಡ್ಕರ್‍, ‘ಜಾತಿವ್ಯವಸ್ಥೆಯೆಂದರೆ ಶ್ರಮದ ವಿಭಜನೆ ಮಾತ್ರ’ ಎನ್ನುವವರಿಗೆ ಹೀಗೆ ಹೇಳಿದರು: ‘ಜಾತಿ ಕೇವಲ ಶ್ರಮದ ವಿಭಜನೆಯಲ್ಲ; ಅದು ಶ್ರಮಜೀವಿಗಳ ವಿಭಜನೆ ಕೂಡ. ಇದು ವಿಭಜನೆಯಷ್ಟೇ ಅಲ್ಲ; ಈ ವಿಭಜನೆಗಳನ್ನು ಒಂದರ ಕೆಳಗೊಂದು ಜೋಡಿಸಿರುವ ಶ್ರೇಣೀಕೃತ ವ್ಯವಸ್ಥೆ. ಯಾವ ದೇಶದಲ್ಲೂ ಕಾಣದ ಶ್ರೇಣೀಕರಣವಿದು. ಈ ಶ್ರೇಣೀಕರಣ ವ್ಯಕ್ತಿಯ ಸ್ವಂತ ಸಾಮರ್ಥ್ಯದ ಮೇಲೆ ನಿರ್ಧಾರವಾದದ್ದಲ್ಲ. ವ್ಯಕ್ತಿಯ ತಂದೆ, ತಾಯಂದಿರ ಸಾಮಾಜಿಕ ಸ್ಥಾನದ ಮೇಲೆ ನಿರ್ಧಾರವಾದದ್ದು. ಉದ್ಯೋಗಗಳ ಪುನರ್‌ಹೊಂದಾಣಿಕೆಯನ್ನೇ ಮಾಡದ ಜಾತಿ ನಿರುದ್ಯೋಗದ ಮೂಲವೂ ಹೌದು. ಜಾತಿಯ ಕಾರಣಕ್ಕಾಗಿಯೇ ಕೀಳೆಂದು ಕಾಣಲಾಗುವ ಎಷ್ಟೋ ಕಸುಬುಗಳು ಇಂಡಿಯಾದಲ್ಲಿವೆ. ಇಂಥ ಕಸುಬುಗಳಿಂದ ತಪ್ಪಿಸಿಕೊಳ್ಳುವ ಬಯಕೆ ಮಾನವರಲ್ಲಿ ನಿರಂತರವಾಗಿರುತ್ತದೆ. ಆದ್ದರಿಂದ ಮನಸ್ಸೂ ಬುದ್ಧಿಯೂ ತೊಡಗಲಾರದ ಕಸುಬುಗಳಲ್ಲಿ ಎಂಥ ಸಾಮರ್ಥ್ಯವೂ ವ್ಯಕ್ತವಾಗಲಾರದು. ಹೀಗಾಗಿಯೇ ಆರ್ಥಿಕ ವ್ಯವಸ್ಥೆಯಾಗಿ ಕೂಡ ಜಾತಿ ಒಂದು ಹಾನಿಕಾರಕ ಸಂಸ್ಥೆಯಾಗಿದೆ.’

ಅಂಬೇಡ್ಕರ್ ಪ್ರಕಾರ, ‘ಹಿಂದೂ ಸಮಾಜವೆನ್ನುವುದು ಒಂದು ‘ಮಿಥ್’. ಇರುವುದೇನಿದ್ದರೂ ಜಾತಿಗಳ ಒಂದು ಸಮೂಹ. ಇಲ್ಲಿ ಪ್ರತಿ ಜಾತಿಯೂ ತನ್ನ ಅಸ್ತಿತ್ವದ ಬಗ್ಗೆ ಜಾಗೃತವಾಗಿರುತ್ತದೆ. ಒಂದು ಜಾತಿಗೂ ಇನ್ನೊಂದು ಜಾತಿಗೂ ಸಂಪರ್ಕ ಉಂಟಾಗುವುದು ಹಿಂದೂ-ಮುಸ್ಲಿಂ ಜಗಳಗಳಾದಾಗ ಮಾತ್ರ.  ರಾಷ್ಟ್ರೀಯವಾದಿಗಳು ಭಿನ್ನತೆಯಲ್ಲೂ ಇರುವ ಸಾಮ್ಯತೆ ಹಾಗೂ ಏಕತೆಯನ್ನು ತೋರಿಸುತ್ತಾರೆ. ಆದರೆ ಈ ಸಾಮರ್ಥ್ಯಗಳ ಆಧಾರದ ಮೇಲೆ ಹಿಂದೂಗಳನ್ನು ಸಂವಿಧಾನಿಕ ಸಮಾಜ ಎನ್ನಲಾಗದು. ಈ ಬಗೆಯ ಸಾಮ್ಯತೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಇಟ್ಟಿಗೆಯಂತೆ ಸಾಗಿರಬಹುದು, ಅಷ್ಟೆ. ಸಂಸ್ಕೃತಿ ಪ್ರಸರಣದಿಂದಾಗಿ ಎಷ್ಟೋ ಬುಡಕಟ್ಟುಗಳ ನಡುವೆ ಸಾಮ್ಯವಿದೆ. ಆದರೆ ಈ ಕಾರಣದಿಂದಲೇ ಅವು ಸಮಾಜವೊಂದನ್ನು ರೂಪಿಸಲಾರವು. ಹಾಗೆ ನೋಡಿದರೆ ಹಬ್ಬಗಳಲ್ಲಿರುವ ಸಾಮ್ಯತೆಗಳು ವಿವಿಧ ಜಾತಿಗಳನ್ನು ಎಂದೋ ಒಂದಾಗಿ ಬೆಸೆಯಬೇಕಾಗಿತ್ತು. ಇಂಥ ಪರಸ್ಪರ ಸಮಾನವಾದ ಚಟುವಟಿಕೆಗಳಿಗೆ ಜಾತಿ ಅಡ್ಡಿಯಾಗಿರುವದರಿಂದಲೇ ಹಿಂದೂಗಳು ಒಂದು ಸಮಾಜವಾಗದೇ ಹೋಗಿರುವುದು.’

‘ಜಾತಿ ಒಂದು ನಕರಾತ್ಮಕ ವ್ಯವಸ್ಥೆ’ ಎನ್ನುವುದನ್ನು ಅಂಬೇಡ್ಕರ್ ಚರಿತ್ರೆಯುದ್ದಕ್ಕೂ ಗುರುತಿಸುತ್ತಾರೆ: ‘ಅನಾಗರಿಕರನ್ನು ಸುಧಾರಿಸುವುದಿರಲಿ, ಹಿಂದೂ ವಲಯದೊಳಗೇ ಕೆಳಜಾತಿಯ ಹಿಂದೂಗಳು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರದಂತೆ ಮೇಲು ಜಾತಿಯ ಹಿಂದೂಗಳು ತಡೆದಿದ್ದಾರೆ. ಉದಾಹರಣೆಗೆ, ಬ್ರಾಹ್ಮಣರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲೆತ್ನಿಸಿದ ಪಥಾರೆ ಪ್ರಭು ಹಾಗೂ ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಳ್ಳಲಾರಂಭಿಸಿದರು. ಬ್ರಾಹ್ಮಣರ ಉಡುಗೆಗಳನ್ನೂ ನಡವಳಿಕೆಗಳನ್ನೂ ಅನುಸರಿಸಲಾರಂಭಿಸಿದರು. ಅವರು ಹಾಗೆ ಅನುಸರಿಸಿದ ಕೆಲವೇ ದಿನಗಳಲ್ಲಿ ಅವರ ಈ ಪ್ರಯತ್ನವನ್ನು ಬ್ರಾಹ್ಮಣರು ಪೇಶ್ವೆಗಳ ಅಧಿಕಾರವನ್ನು ಉಪಯೋಗಿಸಿಕೊಂಡು ಮುರಿದರು. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಸೋನಾರರ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಿದರು.’

‘ಚಾತುರ್ವರ್ಣದ ಪ್ರತಿಪಾದಕರ ವಾದಗಳು ವಿಚಿತ್ರವಾಗಿವೆ’ ಎನ್ನುವ ಅಂಬೇಡ್ಕರ್, ಚಾತುರ್ವರ್ಣ ಪ್ರತಿಪಾದಕರ ವಾದಗಳನ್ನು ತಾರ್ಕಿಕವಾಗಿ ಮುಖಾಮುಖಿಯಾಗುತ್ತಾರೆ: ‘ಇತರ ಮೂರು ವರ್ಣಗಳು ಶೂದ್ರನನ್ನು ನೋಡಿಕೊಳ್ಳುವಾಗ ಶೂದ್ರನೇಕೆ ಸಂಪತ್ತನ್ನು ಸಂಪಾದಿಸಬೇಕು ಎಂಬ ಚಾತುರ್ವರ್ಣ ಪ್ರತಿಪಾದಕರ ವಾದವೇನೋ ಹಿತವಾಗಿ ಕೇಳಿಸುತ್ತದೆ. ಆದರೆ ವಾಸ್ತವವಾಗಿ ಈ ಮೂರೂ ವರ್ಣಗಳು ಪರಸ್ಪರ ಒಂದಾಗಿ ಸೇರಿ ಶೂದ್ರ ತಲೆಯೆತ್ತದಂತೆ ಮಾಡಿವೆ. ಶೂದ್ರನಿಗೆ ಜ್ಞಾನ ಸಂಪಾದನೆಗೆ ಅವಕಾಶವೇ ಇರದಿದ್ದುದರಿಂದ ತನ್ನ ಹಿತಗಳೇನೆಂದು ಅವನಿಗೆ ಅರಿವೇ ಆಗಲಿಲ್ಲ. ಅಧಿಕಾರದ ವಿರುದ್ಧ ಉಸಿರೆತ್ತಲು ಅವನಲ್ಲಿ ಅಸ್ತ್ರಗಳಿರಲಿಲ್ಲ. ಜಗತ್ತಿನ ಎಲ್ಲೆಡೆ ಕ್ರಾಂತಿಯಾದರೂ ಇಂಡಿಯಾದಲ್ಲಿ ಆಗದೇ ಹೋದುದಕ್ಕೆ ಕೆಳಜಾತಿಯ ಹಿಂದೂಗಳು ಚಾತುರ್ವರ್ಣ ಪದ್ಧತಿಯಿಂದಾಗಿ ದುರ್ಬಲರಾಗಿರುವುದೇ ಕಾರಣ. ಶೂದ್ರರು ಅಧಿಕಾರದಲ್ಲಿದ್ದ ಮೌರ್ಯರ ಕಾಲ ಬಿಟ್ಟರೆ, ಉಳಿದೆಲ್ಲಾ ಘಟ್ಟದಲ್ಲಿ ಈ ದೇಶ ಸೋಲು ಮತ್ತು ಕತ್ತಲೆಯಲ್ಲಿ ನರಳಿದೆ. ಮುಸ್ಲಿಮರು, ಕ್ರಿಶ್ಚಿಯನ್ನರಲ್ಲಿ ಕೂಡ ಜಾತಿಗಳಿವೆ ಎಂದು ಹಿಂದೂಗಳು ಸಮಾಧಾನ ತಳೆಯುತ್ತಾರೆ. ಆದರೆ ಇದರಲ್ಲಿ ವ್ಯತ್ಯಾಸಗಳಿವೆ. ವಿವಿಧ ಜಾತಿಗಳನ್ನು ಒಟ್ಟಿಗೇ ಹಿಡಿದಿಡುವ ಕಟ್ಟುಗಳು ಹಿಂದೂಗಳಲ್ಲಿಲ್ಲ. ಹಿಂದೂ ನಾಗರಿಕತೆ ಸಹಸ್ರಾರು ವರ್ಷಗಳಿಂದ ಬದುಕಿ ಉಳಿದು ಬಂದಿದೆಯೆಂದು ಡಾ.ರಾಧಾಕೃಷ್ಣನ್‌ರಂಥವರು ಹೆಮ್ಮೆಯಿಂದ ಹೇಳುತ್ತಾರೆ. ಆದರೆ ‘ಬದುಕುವುದಕ್ಕೂ’ ‘ಸಾರ್ಥಕವಾಗಿ ಬದುಕುವುದಕ್ಕೂ’ ವ್ಯತ್ಯಾಸವಿಲ್ಲವೆ?’

                                                                                                                                                 ೩

ತಮ್ಮ ಪ್ರಕಾರ ಧರ್ಮದ ನಾಶ ಎಂದರೇನು ಎಂಬ ಬಗ್ಗೆ ಅಂಬೇಡ್ಕರ್ ವಿವರಿಸುತ್ತಾ ‘ಯಾವಾಗ ಜನರಿಗೆ ಇದು ಧರ್ಮವಲ್ಲ, ಬರೀ ನಿಯಮ ಎಂದು ಮನವರಿಕೆಯಾಗುತ್ತದೋ ಆ ಗಳಿಗೆಯೇ ಆ ನಿಯಮವನ್ನು ಬದಲಿಸಲು ಅವರು ಸಿದ್ಧರಾಗುತ್ತಾರೆ’ ಎನ್ನುತ್ತಾರೆ. ‘ಇದರರ್ಥ ಧರ್ಮದ ಅಗತ್ಯವೇ ಇಲ್ಲ ಎಂದಲ್ಲ’ ಎನ್ನುವ ಅಂಬೇಡ್ಕರ್, ‘ಆದರೆ ಅದು ತತ್ವಗಳ ಧರ್ಮವಾಗಿರಬೇಕು’ ಎನ್ನುತ್ತಾರೆ.  ಈ ಹಿನ್ನೆಲೆಯಲ್ಲಿ ‘ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವುದು ಹೇಗೆ? ಜಾತಿವಿನಾಶ ಹೇಗೆ?’ ಎಂಬುದನ್ನು ಕುರಿತು ಅಂಬೇಡ್ಕರ್ ಬರೆಯುತ್ತಾರೆ: ‘ಅಂತರ್ಜಾತೀಯ ವಿವಾಹ ಮಾತ್ರ ಜಾತಿವಿನಾಶಕ್ಕೆ ಸೂಕ್ತ ಕಾರ್ಯಕ್ರಮ. ರಕ್ತದ ಬೆರೆಯುವಿಕೆ ಮಾತ್ರ ತನ್ನವರೆಂಬ ಭಾವನೆ ಹುಟ್ಟು ಹಾಕಬಲ್ಲದು. ಛಿದ್ರಗೊಂಡ ಸಮಾಜದಲ್ಲಿ ವಿವಾಹ ಒಟ್ಟುಗೂಡಿಸುವ ಶಕ್ತಿಯಾಗಿ ಕೆಲಸ ಮಾಡುತ್ತದೆ. ಯಾಕೆಂದರೆ ಜಾತಿಯೆನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ. ಅಸ್ಪೃಶ್ಯತೆಯನ್ನು ತೊಡೆಯಲೆತ್ನಿಸುತ್ತಿರುವ ಗಾಂಧಿಯವರಂಥವರು ಅರಿಯಬೇಕಾಗಿರುವುದು ಏನೆಂದರೆ, ಜನರ ಕ್ರಿಯೆಗಳು ಅವರು ನಂಬುವ ಶಾಸ್ತ್ರಗಳಿಂದ ನಿಯಂತ್ರಿಸಲ್ಪಟ್ಟಿರುತ್ತವೆ. ಆ ಶಾಸ್ತ್ರಗಳಲ್ಲಿನ ನಂಬಿಕೆ ನಾಶವಾಗುವ ತನಕ ಅವರು ಬದಲಾಗುವುದಿಲ್ಲ.  ಕಡೆಯದಾಗಿ, ಜಾತಿ ಹಿಂದೂಗಳ ಉಸಿರು ನಿಜ. ಆದರೆ ಈ ಉಸಿರು ಇಡೀ ಪರಿಸರವನ್ನೇ ಮಲಿನಗೊಳಿಸಿದೆ. ಕ್ರೈಸ್ತರು, ಸಿಖ್ಖರು, ಮುಸ್ಲಿಮರನ್ನು ಕೂಡ ಅದು ಮಲಿನಗೊಳಿಸಿದೆ. ಆದ್ದರಿಂದಲೇ ಈ ಜಾತಿವಿನಾಶ ಕಾರ್ಯಕ್ಕಾಗಿ ಉಳಿದವರೂ ಒಂದಾಗಬೇಕಾಗಿದೆ. ಜಾತಿರಹಿತವಾದ ಈ ಬಗೆಯ ಆಂತರಿಕ ಶಕ್ತಿ ಇಲ್ಲದಿದ್ದರೆ ಹಿಂದೂಗಳ ಸ್ವರಾಜ್ಯ ಕೂಡ ಗುಲಾಮಗಿರಿಯೆಡೆಗೆ ಇನ್ನೊಂದು ಹೆಜ್ಜೆಯಷ್ಟೇ ಆಗಿಬಿಡುತ್ತದೆ.’                        

ಜಾತಿಪದ್ಧತಿಯನ್ನು ಕುರಿತು ಈ ಗಂಭೀರ ವಿಶ್ಲೇಷಣೆಗಳನ್ನು ಮಂಡಿಸಿ, ನಿರಂತರವಾಗಿ ಜಾತಿವಿನಾಶದ ಕಾರ‍್ಯಕ್ರಮಗಳನ್ನು ರೂಪಿಸಿದ ಅಂಬೇಡ್ಕರ್ ಅವರಿಗೆ ಹಿಂದೂ ಧರ್ಮದ ಒಳಗಿದ್ದುಕೊಂಡು ಜಾತಿವಿನಾಶ ಅಸಾಧ್ಯ ಎಂಬುದು ಸ್ಪಷ್ಟವಾದದ್ದರಿಂದ ಅವರು ಬೌದ್ಧ ಧರ್ಮವನ್ನು ಹೊಸ ರೀತಿಯಲ್ಲಿ ವಿವರಿಸಿ, ಬೌದ್ಧಧರ್ಮವನ್ನು ಜಾತಿವಿನಾಶದ ಮುಖ್ಯ ಸಾಧನವಾಗಿ ಕಂಡರು ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸಿದರು. 

ಇವತ್ತಿಗೂ ಅಂಬೇಡ್ಕರ್ ಅವರ ೧೯೩೬ರಲ್ಲಿ ಬಂದ ‘ಜಾತಿ ವಿನಾಶ’ ಹಾಗೂ  ಐವತ್ತರ ದಶಕದ ಕೊನೆಗೆ ಬಂದ ಲೋಹಿಯಾ ಅವರ ‘ಜಾತಿ ಪದ್ಧತಿ’ ಈ ಎರಡೂ ಪುಸ್ತಕಗಳು ಜಾತಿ ಪದ್ಧತಿಯನ್ನು ಅರಿಯಲು ಹಾಗೂ ಹಂತಹಂತವಾಗಿ ನಿರ್ಮೂಲನ ಮಾಡಲು ಚಿಂತನೆಗೆ, ಕ್ರಿಯೆಗೆ ತೊಡಗಿಸುವ ಕೇಂದ್ರ ಪಠ್ಯಗಳಾಗಿ ಭಾರತದಲ್ಲಿ ಉಳಿದಿವೆ. ಕನ್ನಡ ಸಾಹಿತ್ಯದ ದೊಡ್ಡ ಲೇಖಕರಾದ ಕುವೆಂಪು, ಚಂದ್ರಶೇಖರ ಪಾಟೀಲ, ಸಿದ್ಧಲಿಂಗಯ್ಯ, ತೇಜಸ್ವಿ, ಲಂಕೇಶ್, ದೇವನೂರ ಮಹಾದೇವ ಮೊದಲಾದ ನೂರಾರು ಲೇಖಕರು; ದಲಿತ ಚಳುವಳಿ, ಪ್ರಗತಿಪರ ಚಳುವಳಿಗಳ ನೂರಾರು ನಾಯಕರು ಸಾವಿರಾರು ಕಾರ್ಯಕರ್ತರು ಈ ಎರಡೂ ಪುಸ್ತಕಗಳ ಆಶಯಗಳನ್ನು ನಿರಂತರವಾಗಿ ಹಬ್ಬಿಸುತ್ತಾ ಬಂದಿದ್ದಾರೆ. ಬಾಬಾಸಾಹೇಬರ ಯುಗ ಪ್ರವರ್ತಕ ಕೃತಿಗೆ ತೊಂಬತ್ತು ವರ್ಷ ತುಂಬಿದ ಈ ಗಳಿಗೆಯಲ್ಲಿ ಈ ಪುಸ್ತಕದ ಜೊತೆಗೇ ಈ ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯೋಣ; ಈ ಕೃತಿಯನ್ನು ನಿರಂತರವಾಗಿ ಹಬ್ಬಿಸುತ್ತಾ, ವಿಸ್ತರಿಸುತ್ತಿರೋಣ.

 

 

 

blog
10 May 2026 ಸ್ಟೂಡೆಂಟುಗಳ ಸ್ವತಂತ್ರ ಮನ!

 ಬಹುಕಾಲದಿಂದ ನನ್ನಲ್ಲಿ ಉಳಿದಿರುವ ಒಂದು ವಿಸ್ಮಯಕರ ಅಕಡೆಮಿಕ್ ಚಿತ್ರ ಇದು: 

ಈ ಪ್ರಸಂಗ ನಡೆದಿದ್ದು ೧೯೨೯ರಲ್ಲಿ. ತತ್ವಜ್ಞಾನಿ ಲುಡ್ವಿಗ್ ವಿಟ್‌ಗನ್ ಸ್ಟೈನ್ ಕೇವಲ ಇಪ್ಪತ್ತೇಳು ಪುಟದ ಥೀಸಿಸ್ ಬರೆದ. ಅವನ ಥೀಸಿಸ್ಸಿನ ಮೌಲ್ಯಮಾಪಕರು ಆ ಕಾಲದ ಇಂಗ್ಲಿಷ್ ಫಿಲಾಸಫರ್ ಜಿ.ಇ. ಮೂರ್ ಹಾಗೂ ವಿಟಗನ್ ಸ್ಟೈನನ ಡಾಕ್ಟರಲ್ ಗೈಡ್ ಆಗಿದ್ದ ತತ್ವಜ್ಞಾನಿ ಬರ್ಟ್ರಂಡ್ ರಸೆಲ್.  

ಒಂದು ಕಾಲಕ್ಕೆ ಅಕಡೆಮಿಕ್ ವಲಯಗಳ ಪರಿಚಿತ ಪ್ರಸಂಗ ಇದು: ಥೀಸಿಸ್ಸಿನ ಮೌಖಿಕ ಪರೀಕ್ಷೆಯ ದಿನ ವಿಟ್‌ಗನ್ ಸ್ಟೈನ್ ಮೌಲ್ಯಮಾಪಕರ ಭುಜ ತಟ್ಟುತ್ತಾ ಹೇಳಿದ: ‘ಡೋಂಟ್ ವರಿ. ಐ ನೋ ಯು ವಿಲ್ ನೆವರ್ ಅಂಡರ್ ಸ್ಟ್ಯಾಂಡ್ ಇಟ್.’ (ತಲೆ ಕೆಡಿಸ್ಕೋಬೇಡಿ. ಇದು ನಿಮಗೆ ಎಂದೂ ಅರ್ಥವಾಗಲ್ಲ ಅಂತ ನಂಗೊತ್ತು.’) 

ಈ ಮೌಲ್ಯಮಾಪಕರ ಬಗ್ಗೆ ವಿಟ್‌ಗನ್ ಸ್ಟೈನನನಿಗೆ ಗೌರವವಿರಲಿಲ್ಲ ಎಂದಲ್ಲ. ಆಗ ಚಾಲ್ತಿಯಲ್ಲಿದ್ದ ತತ್ವಜ್ಞಾನದ ಥಿಯರಿಗಳನ್ನು ಮಾತ್ರ ಬಲ್ಲ ಅವರಿಗೆ ತನ್ನ ‘ಪಿಕ್ಚರ್ ಥಿಯರಿ ಅಪ್ರೋಚ್’ ಗ್ರಹಿಸಲು ಸಾಧ್ಯವಿರಲಿಲ್ಲ ಎಂಬುದು ಅವನ ನಿಲುವಾಗಿತ್ತು. 

ಇದಕ್ಕೂ ಮೊದಲು, ಬರ್ಟ್ರಂಡ್ ರಸೆಲ್ ತನ್ನ ಡಾಕ್ಟರಲ್ ಗೈಡ್ ಆದ ಕೆಲವೇ ವಾರಗಳಲ್ಲಿ ವಿಟ್‌ಗನ್ ಸ್ಟೈನನಿಗೆ ತಾನು ರಸೆಲ್‌ನಿಂದ ಕಲಿಯುವುದು ಏನೂ ಇಲ್ಲ ಎನ್ನಿಸಿತ್ತು. ಈ ಮಾತನ್ನು ಹಿಂದೊಮ್ಮೆ ರೇಮಾಂಕ್ ಬರೆದ ವಿಟ್‌ಗನ್ ಸ್ಟೈನನ ಜೀವನ ಚರಿತ್ರೆ ‘ಡ್ಯೂಟಿ ಆಫ್ ಎ ಜೀನಿಯಸ್’ನಲ್ಲಿ ಓದಿದ್ದು ನೆನಪಾಯಿತು. 

ಮೇಲೆ ಹೇಳಿದ ಮೌಖಿಕ ಪರೀಕ್ಷೆಯ ನಂತರ ಪ್ರೊಫೆಸರ್‍ ಮೂರ್ ಟಿಪ್ಪಣಿ ಬರೆದ: ‘ಪಿಎಚ್.ಡಿ.ಯ ಸಾಮಾನ್ಯ ಅಗತ್ಯಗಳನ್ನು ಇದು ಪೂರೈಸದಿದ್ದರೂ ಇದು ಒಬ್ಬ ಜೀನಿಯಸ್‌ನ ಕೃತಿ.’ ಮೌಖಿಕ ಪರೀಕ್ಷೆಯ ನಂತರವೂ ಮೂರ್‍ ಹಾಗೂ ರಸೆಲ್ ಜೊತೆ ವಿಟ್‌ಗನ್ ಸ್ಟೈನ್ ಸಂಬಂಧ ಆರಾಮಾಗೇ ಇತ್ತು.  

ಅವತ್ತು ವಿಟ್‌ಗನ್ ಸ್ಟೈನ್ ಡಾಕ್ಟರೇಟ್ ಪಡೆದ. ಇವತ್ತು ಲೋಕದ ದೊಡ್ಡ ಆಧುನಿಕ ಫಿಲಾಸಫರುಗಳ ಜೊತೆಗೆ ಅವನೂ ಇದ್ದಾನೆ. ಅವತ್ತು ಚರ್ಚೆಯಲ್ಲಿದ್ದ ಇಪ್ಪತ್ತೇಳು ಪುಟದ Tractatus Logico-Philosophicus ಈ ಪರೀಕ್ಷೆಗಿಂತ ಏಳು ವರ್ಷಗಳ ಮೊದಲೇ ಪ್ರಕಟವಾಗಿತ್ತು. ಅದು ಪಿಎಚ್.ಡಿ. ಪೂರ್ವ ಡಿಸರ್ಟೇಶನ್ನೋ ಅಥವಾ ಥೀಸಿಸ್ಸೋ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳೂ ಇವೆ. 
ಪಶ್ಚಿಮದಲ್ಲಿ ಇಂಥ ಘಟನೆಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಒಂದು ಕಾಲಕ್ಕೆ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡನಿಂದ ಕಲಿತಿದ್ದ ಕಾರ್ಲ್ ಯೂಂಗ್ ಫ್ರಾಯ್ಡ್‌ನ ಥಿಯರಿಗಳನ್ನು ವಿಮರ್ಶಿಸಿ ಮುಂದೆ ಪ್ರಕಟಿಸಿದ ಶೋಧನೆಗಳು ಫ್ರಾಯ್ಡನನ್ನು ಕಂಗೆಡಿಸಿದವು. ಇಂಥ ಪ್ರಸಂಗಗಳು ಎಲ್ಲ ಕಡೆಯೂ ಇರಬಹುದು. 

ಇವೆಲ್ಲ ಮೊನ್ನೆ ನೆನಪಾಗಲು ಕಾರಣವಿತ್ತು: ಈಚಿನ ಒಂದು ಸಂಧ್ಯಾಭೇಟಿಯಲ್ಲಿ ಚಿಕ್ಕನಾಯಕನಹಳ್ಳಿಯ ಕಡೆಯ ಗೆಳೆಯನೊಬ್ಬ ತನ್ನ ಎಂ.ಎ. ಕ್ಲಾಸ್ ರೂಮ್ ಅನುಭವ ಹೇಳತೊಡಗಿದಂತೆ, ಈ ಅಂಕಣಕಾರನ ಅಲೆಯುವ ಮನ ಕ್ಲಾಸುರೂಮುಗಳ ಅನುಭವದ ಸುತ್ತ ಅಡ್ಡಾಡತೊಡಗಿತು; ವಿಟ್‌ಗನ್ ಸ್ಟೈನ್ ಪ್ರಸಂಗ ನೆನಪಾಯಿತು. 

ಅವತ್ತು ಗೆಳೆಯ ಹೇಳಿದ ಅನುಭವ ಇದು:

ಎಂ.ಎ.ತರಗತಿಯಲ್ಲಿ ಮೇಷ್ಟ್ರು ಉತ್ಸಾಹದಿಂದ ಅದೇ ಆಗ ಆ ಜನಪದ ತ್ರಿಪದಿಯೊಂದರ ಹೊಸ ವ್ಯಾಖ್ಯಾನ ಹೊಳೆದವರಂತೆ ವರ್ಣಿಸುತ್ತಿದ್ದರು. ಅದೊಂದು ಚಿರಪರಿಚಿತ ತ್ರಿಪದಿ:  
ಬಾಲಕರಿಲ್ಲದ ಬಾಲೀದ್ಯಾತರ ಜನ್ಮ 
ಬಾಡೀಗಿ ಎತ್ತು ದುಡಿದ್ಹಾಂಗI
ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಾಂಗ 

ಈ ಪದ್ಯ ಉಲ್ಲೇಖಿಸಿದ ಮೇಷ್ಟ್ರು ಹೇಳಿದರು: ‘ನೋಡಿ, ಈ ಜನಪದ ಮನಸ್ಸು ಹೇಗಿದೆ ಅಂದರೆ, ಗಂಡು ಮಗುವಾದರೆ ಮಾತ್ರ ಜೀವನ ಸಾರ್ಥಕ ಎಂದು ಈ ತ್ರಿಪದಿ ಹೇಳುತ್ತಿದೆ. ಅಂದರೆ ಹೆಣ್ಣು ಮಗುವಿನ ಬಗ್ಗೆ, ಒಟ್ಟಾರೆ ಹೆಂಗಸರ ಬಗ್ಗೆ, ಜನಪದರ ಧೋರಣೆ ಇಲ್ಲಿ ವ್ಯಕ್ತವಾಗುತ್ತಿದೆ…’ 

ಆಗ, ಮೇಲೆ ಪ್ರಸ್ತಾಪಿಸಿದ ಗೆಳೆಯ ಮೇಲೆದ್ದು ತನ್ನದೊಂದು ರೀಡಿಂಗ್ ಕೊಟ್ಟ: 
‘ಸಾರ್, ಜನಪದರಿಗೆ ಸಾಮಾನ್ಯವಾಗಿ ಮಹಿಳೆಯರ ಬಗ್ಗೆ ಗೌರವ ಇರುತ್ತದೆ. ಮಹಿಳೆಯರ ಕಷ್ಟಗಳ ಬಗೆಗೆ ಜನಪದರು ಹತ್ತಾರು ಕಡೆ ಬರೆದಿದ್ದಾರೆ. ಇಲ್ಲಿ ‘ಬಾಲಕ’ ಎಂದರೆ ಒಟ್ಟಾರೆಯಾಗಿ ‘ಮಕ್ಕಳು’ ಎಂಬರ್ಥದಲ್ಲಿ ಹೇಳಿರುವ ಸಾಧ್ಯತೆಯೂ ಇದೆ. ‘ಮಕ್ಕಳಿಲ್ಲದವರ ಜನ್ಮ ಸಾರ್ಥಕವಾಗದು’ ಎಂಬ ಸಾಮಾನ್ಯ ಅರ್ಥವೂ ಇಲ್ಲಿದೆ. ಬಾಲಕ, ಬಾಳು, ಬಾಳೆಲೆ ಬಾಡಿಗೆ…ಹೀಗೆ ‘ಬಾ’ ದ ಅನುಪ್ರಾಸದ ಮೋಹವೂ ಇಲ್ಲಿದೆ…ನಮ್ಮ ಜನಪದರ ಭಾಷೆಯಲ್ಲಿ ‘ಮನುಷ್ಯ’ ಎಂದರೆ ಗಂಡು, ಹೆಣ್ಣು ಎರಡೂ ಸೇರಿರುತ್ತವೆ… ಆದ್ದರಿಂದ ಈ ತ್ರಿಪದಿಯಲ್ಲಿ ಬಾಲಕ ಎಂದರೆ ಬಾಲಕಿಯೂ ಅದರೊಳಗೆ ಸೇರಿದ್ದಾಳೆ ಎಂಬ ಸ್ಥೂಲ ಗ್ರಹಿಕೆಯಿಂದಲೂ ಈ ತ್ರಿಪದಿಯಲ್ಲಿ ‘ಬಾಲಕರಿಲ್ಲಾದ’ ಎಂಬ ಬಣ್ಣನೆ ಬಂದಿರಬಹುದು.’

ಮೇಷ್ಟರಿಗೆ ಈ ವಿಭಿನ್ನ ಓದು ಹಿಡಿಸಲಿಲ್ಲ. 

ಮೇಷ್ಟ್ರು: ಯಾವೂರು ತಮ್ಮದು?

ವಿದ್ಯಾರ್ಥಿ: ಚಿಕ್ಕನಾಯಕನಹಳ್ಳಿ

‘ಮತ್ತೇನು! ದೊಡ್ಡನಾಯಕನ ಹಳ್ಳಿಯವರ ಥರ ಮಾತಾಡುತ್ತಿದ್ದೀರಲ್ಲ!’ ಎಂದು ಮೇಷ್ಟ್ರು ವ್ಯಂಗ್ಯವಾಡಿ, ನಕ್ಕು ನಗಿಸಲೆತ್ನಿಸಿದರು. 

ಮೇಷ್ಟರ ರೀಡಿಂಗಿನಲ್ಲಿ ಅಂಥ ತಪ್ಪಿರಲಿಲ್ಲ. ಮೇಲುನೋಟಕ್ಕೆ ತ್ರಿಪದಿ ಅವರು ಹೇಳುತ್ತಿರುವ ಆರ್ಥವನ್ನೇ ಕೊಡುತ್ತದೆ. ಕ್ಲಾಸಿನಲ್ಲಿ ಫೆಮಿನಿಸ್ಟ್ ಥಿಯರಿಗಳನ್ನು ಪಾಠ ಮಾಡುವಾಗ ಈ ಅಂಕಣಕಾರನೂ ಆ ತ್ರಿಪದಿಯನ್ನು ಹಾಗೇ ಓದಿದ್ದ. ಆದರೂ ವಿದ್ಯಾರ್ಥಿಯೊಬ್ಬ ಕೊಟ್ಟ ಮೇಲಿನ ವ್ಯಾಖ್ಯಾನ ಕುತೂಹಲಕರವಾಗಿತ್ತು. ಮೇಷ್ಟರು ಅದನ್ನೂ ಚರ್ಚೆಗೆ ಕೈಗೆತ್ತಿಕೊಳ್ಳಬಹುದಾಗಿತ್ತು. ಆಗ ಅವರೂ ಬೆಳೆದು, ವಿದ್ಯಾರ್ಥಿಯನ್ನೂ ಬೆಳೆಸುವ ಸಾಧ್ಯತೆಯಿತ್ತು! 

ಅಷ್ಟಿಷ್ಟು ಬುದ್ಧಿ ಬಂದ ಕಾಲದಿಂದ ಇವತ್ತಿನವರೆಗೂ ಕ್ಲಾಸ್ ರೂಂ, ಸ್ಟೂಡೆಂಟ್ಸ್, ಟೀಚಿಂಗ್  ಇವುಗಳ ಲೋಕದಲ್ಲೇ ಇರುವ ನನಗಂತೂ ಸ್ಟೂಡೆಂಟುಗಳ ಸ್ವತಂತ್ರ ವ್ಯಾಖ್ಯಾನಗಳು ಚಕಿತಗೊಳಿಸುತ್ತಲೇ ಇರುತ್ತವೆ. ನನ್ನನ್ನು ಬೆಳೆಸುತ್ತಲೇ ಇರುತ್ತವೆ. ಒಮ್ಮೆ ಸುಜನಾ ಅವರು ಸುಂದರವಾಗಿ ಕನ್ನಡಿಸಿರುವ ಸೊಫೋಕ್ಲಿಸನ ‘ಎಜಾಕ್ಸ್’ ಹಾಗೂ ಬಿಎಂಶ್ರೀಯವರ ‘ಅಶ್ವತ್ಥಾಮನ್’ ನಾಟಕಗಳನ್ನು ತೌಲನಿಕವಾಗಿ ಪಾಠ ಮಾಡುತ್ತಿದ್ದ ಕಾಲದಲ್ಲಿ ಟ್ರ್ಯಾಜಿಡಿ, ದುರಂತ ನಾಟಕ ಇತ್ಯಾದಿಗಳ ಬಗ್ಗೆಯೆಲ್ಲಾ ಹೇಳಿ ವಿಶ್ಲೇಷಣೆ ಮುಂದುವರಿಸಿದ್ದೆ. ಒಂದೆರಡು ಮೂರು ಕ್ಲಾಸುಗಳ ನಂತರ ಜಾಣ ಹುಡುಗಿ ಧನಲಕ್ಮಿ, ‘ಸಾರ್‍! ಸುಜನಾ ಅವರ ಅನುವಾದದಲ್ಲಿ ಈ ದುರಂತ ನಾಟಕದ ಕೊನೆಗೆ ‘ಮಂಗಳಂ’ ಹಾಕಿದ್ದಾರಲ್ಲ!’ ಎಂದಳು. ಅಸಲಿಗೆ ಆ ನಾಟಕ ಓದಿ ಟೀಚ್ ಮಾಡುತ್ತಿದ್ದ ನಾನೇ ಅದನ್ನು ಗಮನಿಸಿರಲಿಲ್ಲ. ತಕ್ಷಣ ಉತ್ತರ ಹೊಳೆಯಲಿಲ್ಲ. ಆಮೇಲೆ, ಭಾರತೀಯ, ಕನ್ನಡ ನಾಟಕಗಳ ಕೊನೆಗೆ ‘ಮುಕ್ತಾಯ’ ಎಂಬುದಕ್ಕೆ ‘ಮಂಗಳಂ’ ಬಳಸುವುದರಿಂದ ಸುಜನಾ ಆ ಅರ್ಥದಲ್ಲಿ ಬಳಸಿರಬಹುದು ಎಂದ ನೆನಪು.   

ಮುಂದೊಮ್ಮೆ ಈ ಬಗ್ಗೆ ಯೋಚಿಸುತ್ತಿದ್ದಾಗ ‘ಟ್ರ್ಯಾಜಿಡಿ’ ಎಂಬ ಪದಕ್ಕೆ ಕನ್ನಡದ ದುರಂತ, ದುಃಖಾಂತ ಸರಿಯಾದ ಸಂವಾದಿ ಪದಗಳಲ್ಲ ಎನ್ನಿಸಿದೆ. ಈ ಬಗ್ಗೆ ಹಿಂದಿನ ಅಂಕಣವೊಂದರಲ್ಲಿ ಬರೆದ 'ಟ್ರ್ಯಾಜಿಡಿಯ ದೇಶೀ ಸ್ವೀಕಾರ’ ಎಂಬ ಲೇಖನದ ವಿವರಗಳು ನಿಮಗೆ ನೆನಪಿರಬಹುದು: 

'ಟ್ರ್ಯಾಜಿಡಿ’ ಎಂಬ ಪದ ಗ್ರೀಕ್ ಭಾಷೆಯ 'ಟ್ರ್ಯಾಗೋಡಿಯಾ’ ಎಂಬ ಪದದಿಂದ ಹುಟ್ಟಿದೆ. 'ಟ್ರ್ಯಾಗೋಡಿಯಾ’ ಎಂಬ ಪದ 'ಸಾಂಗ್ ಆಫ್ ದ ಗೋಟ್’ ಎಂಬುದರಿಂದ ಹುಟ್ಟಿದೆ. 'ಸಾಂಗ್ ಆಫ್ ದ ಗೋಟ್’ನ ಹಿನ್ನೆಲೆ ಇದು: ಗ್ರೀಕರು ಕಾಳ ಶಕ್ತಿಗಳ ದೇವತೆ ಡಯೋನಿಸಿಸ್‌ನ ಪೂಜೆಯಲ್ಲಿ ಒಂದು ಗೋಟ್ (ಆಡು) ಬಲಿಕೊಡುತ್ತಿದ್ದರು. ಬಲಿಯಾಗುವ ಆಡಿನ ಆಕ್ರಂದನವೇ 'ಟ್ರ್ಯಾಗೋಡಿಯಾ’ ಆಯಿತು. ಇದು ನಾಟಕ ಪ್ರಕಾರವಾದಾಗ 'ಟ್ರ್ಯಾಜಿಡಿ’ ಆಯಿತು 'ಟ್ರ್ಯಾಗೋಡಿಯಾ’ದ ಅಕ್ಷರಶಃ ಕನ್ನಡಾನುವಾದ: 'ಆಡಿನ ಹಾಡು.’ 

ಈ ಹಿನ್ನೆಲೆಯಲ್ಲಿ 'ಟ್ರ್ಯಾಜಿಡಿ’ ಪದದ ಅನುವಾದದ ಅಪೂರ್ಣತೆಯ ಪ್ರಶ್ನೆ ಹಾಗೇ ಉಳಿಯುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಭಾಷೆಗಳಲ್ಲಿ 'ಟ್ರ್ಯಾಜಿಡಿ’ಗೆ ಕೊಟ್ಟಿರುವ ಸಂವಾದಿ ಪದಗಳು ನಾಟಕದ ಅಂತ್ಯವನ್ನೇ ಹೆಚ್ಚು ಸೂಚಿಸುವಂತಿರುವುದರಿಂದ ಕೂಡ ಈ ಅಪೂರ್ಣತೆ ಎದ್ದು ಕಾಣುತ್ತದೆ. ಆದರೆ ಒಂದು ಶತಮಾನದಷ್ಟು ದೀರ್ಘ ಕಾಲ ಸಂಸ್ಕೃತಿಗಳಲ್ಲಿ ಉಳಿದು, ಬೇರು ಬಿಟ್ಟ ಪದಗಳನ್ನು ಕದಲಿಸುವುದು, ಬದಲಿಸುವುದು ಕಷ್ಟ. ಆದ್ದರಿಂದ ’ಟ್ರ್ಯಾಜಿಡಿ’ ಎನ್ನುವುದು ದುಃಖಮಯ ಅಂತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಜೀವನವನ್ನು, ಅದರಲ್ಲೂ ದುಃಖವನ್ನು, ಗಂಭೀರವಾಗಿ ನೋಡುವ, ಅರಿಯುವ ಕ್ರಮ ಎಂಬುದನ್ನು ಕ್ಲಾಸುಗಳಲ್ಲಿ, ರಂಗಭೂಮಿಯಲ್ಲಿ, ಸಾಂಸ್ಕೃತಿಕ ಚರ್ಚೆಗಳಲ್ಲಿ ಹೊಸ ಹೊಸ ತಲೆಮಾರುಗಳಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಲೇ ಇರಬೇಕಾಗುತ್ತದೆ.
ಇದೆಲ್ಲ ತಡವಾಗಿ ಬಂದ ಬೆಳಕು! ಅವತ್ತು ಆ ಹುಡುಗಿ ಪ್ರಶ್ನೆ ಕೇಳಿದ ನಂತರ ಎನ್.ಎಸ್.ಡಿ.ಯಲ್ಲಿ ನಾಟಕದ ಕೋರ್ಸ್ ಕೋಡುತ್ತಿರುವಾಗ ರಂಗಭೂಮಿಯ ನವ ನಟಿ-ನಟರ ಜೊತೆ ಮಾತಾಡುತ್ತಾ ಹುಟ್ಟಿದ ಯೋಚನೆಗಳು. ಟೀಚಿಂಗ್ ಎಂದರೆ ಕಲಿಕೆ ಎಂಬ ನನ್ನ ಪುಟ್ಟ ಜ್ಞಾನೋದಯ ಕೂಡ ಹೀಗೇ ನಡೆಯುವಾಗ ಎಡವಿ ಆದದ್ದು! 

ಈ ಥರ ಕ್ಲಾಸ್‌ರೂಮಿನಲ್ಲಿ ಪಡೆದ ಈ ನಡುವೆ ಕೂಡ ಮೇಲೆ ಹೇಳಿದ ಮೇಷ್ಟರಂತೆ ತಕ್ಷಣದ ಠೇಂಕಾರದಲ್ಲಿ ನಾನೂ ಸ್ಟೂಡೆಂಟುಗಳ ಸ್ವತಂತ್ರ ವ್ಯಾಖ್ಯಾನಗಳನ್ನು ಉಪೇಕ್ಷಿಸಿರಬಹುದು! ಅಂಥ ಎಡಹುಗಳಿದ್ದರೆ ಮಾಫಿ ಇರಲಿ; ‘ಸರ್ವರೊಳಗೊಂದೊಂದು ನುಡಿ ಕಲಿ’ಯಲು ಇನ್ನೂ ಟೈಮಿದೆ!

ಕೊನೆ ಟಿಪ್ಪಣಿ: ಪಠ್ಯ ವಿಸ್ತರಣಾ ಪ್ರತಿಭೆ!

ಕಲಿಸು ಬಾಗುವುದನ್ನು; ಬಾಗದೆ ಸೆಟೆವುದನ್ನು …
ಆದರು ಕಲಿತಿಲ್ಲವೆಂಬ ನೆನಪುಳಿಸು 

ಇದು ಗೋಪಾಲ ಕೃಷ್ಣ ಅಡಿಗರ ‘ಪ್ರಾರ್ಥನೆ’ ಪದ್ಯದ ನನ್ನ ಮೆಚ್ಚಿನ ಸಾಲುಗಳಲ್ಲೊಂದು. ಕಳೆದ ವಾರ ಈ ಅಂಕಣದಲ್ಲಿ ಬರೆದ ‘ಓದದ ಪುಸ್ತಕಗಳ ಭಯ’ ಲೇಖನಕ್ಕೆ ಬಂದ ಹಲ ಬಗೆಯ ವಿಸ್ತಾರಗಳು ಅಡಿಗರ ಸಾಲನ್ನು ನೆನಪಿಸಿದವು: ಓದದ ಪುಸ್ತಕಗಳ ಬಗೆಗಿನ ಐಡಿಯಾಗಳನ್ನು ವಿಸ್ತಾರ ಮಾಡಿದ ಎಂ.ಎ. ಇಂಗ್ಲಿಷ್ ವಿದ್ಯಾರ್ಥಿ ಚರಣ್, ಪಿ.ಎಚ್.ಡಿ. ವಿದ್ಯಾರ್ಥಿ ಸೋಮಶಂಕರ ಸುಣ್ಣಂಗೂರು, ಗುಲಬರ್ಗಾ ಸೆಂಟ್ರಲ್ ಯೂನಿವರ್ಸಿಟಿಯ ನನ್ನ ವಿದ್ಯಾರ್ಥಿನಿ-ಈಗಿನ ಇಂಗ್ಲಿಷ್ ಮೇಡಂ- ಮಹಾಂತ, ಕವಯಿತ್ರಿ ಪುಷ್ಪ…ಇವರಿಂದ ಶುರುವಾಗಿ ಗೆಳೆಯರಾದ ಜೆ. ಶಾಮರಾವ್, ಕೆ.ಪುಟ್ಟಸ್ವಾಮಿ, ಕಾಮ್ರೇಡ್ ಬಿ. ಸುರೇಶ್, ಗುರುಪ್ರಸಾದ್ ಕಂಟಲಗೆರೆ, ಗುರು ಜಗಳೂರು, ನಿರಂಜನ್, ಬಂಜಗೆರೆ ಜಯಪ್ರಕಾಶ್, ವಿಶುಕುಮಾರ್‍ ಈ ಎಲ್ಲರೂ ಕೊಟ್ಟ ಚುರುಕು ನೋಟಗಳಿಗೆ; ಈ ಎಲ್ಲರ ಪಠ್ಯ ವಿಸ್ತರಣಾಪ್ರತಿಭೆಗೆ ಶರಣು!  
ಈ ಹಿಂದೆ ಹಲವು ಸಲ ನೆನೆದಂತೆ ‘ನೀನು ಬೆಳೆದರೆ ನಾನು ಬೆಳೆವೆ'! 

 



Latest Video


Nataraj Huliyar Official
YouTube Channel

SUBSCRIBE