‘ನಿಮ್ಮ ಗದ್ಯ ವಚನಕಾರರ ಗದ್ಯದಂತಿದೆ’ ಎಂದು ಕವಿ, ಕಾವ್ಯಮೀಮಾಂಸಕರಾದ ಜಿ.ಎಸ್. ಶಿವರುದ್ರಪ್ಪನವರು ತಮ್ಮ ಪಿಎಚ್.ಡಿ. ವಿದ್ಯಾರ್ಥಿ ಡಿ. ಆರ್. ನಾಗರಾಜರಿಗೆ ಒಮ್ಮೆ ಹೇಳಿದ್ದರು. ಜಿ.ಎಸ್.ಎಸ್. ಎಪ್ಪತ್ತರ ದಶಕದಲ್ಲಿ ಡಿ. ಆರ್. ನಾಗರಾಜರ ಗೈಡ್ ಆಗಿದ್ದರು. ತರುಣ ಡಿ. ಆರ್. ಬರೆಯುತ್ತಿದ್ದ ಮಹತ್ವಾಕಾಂಕ್ಷೆಯ ಥೀಸಿಸ್ಸಿನ ಅಧ್ಯಾಯಗಳನ್ನು ಓದುತ್ತಾ ಜಿ.ಎಸ್. ಎಸ್. ಹೇಳಿರಬಹುದಾದ ಈ ಮಾತನ್ನು ಡಿ. ಆರ್. ಹೆಮ್ಮೆಯಿಂದಲೇ ನೆನೆಯುತ್ತಿದ್ದರು. ಆ ಹೆಮ್ಮೆಗೆ ಕಾರಣವೂ ಇತ್ತು. ಜಿ.ಎಸ್.ಎಸ್. ಈ ಮಾತು ಹೇಳಿದ ನಂತರದಲ್ಲಿ ಡಿ. ಆರ್. ತಿದ್ದಿ ಬರೆದ ‘ಶಕ್ತಿ ಶಾರದೆಯ ಮೇಳ’ ಎಂಬ ಆಧುನಿಕ ಕನ್ನಡ ಕಾವ್ಯದ ಅತ್ಯಂತ ಮಹತ್ವದ ಅಧ್ಯಯನ ಗ್ರಂಥದ ಆಳ, ವಿಸ್ತಾರ, ಎತ್ತರಗಳನ್ನು ನೋಡಿದರೆ ಜಿ.ಎಸ್.ಎಸ್. ಬೆರಗು ಸರಿಯಾಗಿ ಅರಿವಾಗುತ್ತದೆ.
ಆದರೆ ವಚನ ಸಾಹಿತ್ಯದಲ್ಲಿರುವ ಒಂದು ಮಟ್ಟದ ಸರಳ ತಲುಪುವಿಕೆಯನ್ನು ಡಿ. ಆರ್. ಬರೆದ ಸಂಕೀರ್ಣ ಥಿಯರಿಯ ಥೀಸಿಸ್ಸಿನಲ್ಲಿ ಹುಡುಕಬಾರದು. ಅದು ಮತ್ತೆ ಮತ್ತೆ ಓದಿ ಅರಗಿಸಿಕೊಳ್ಳಬೇಕಾದ ಪುಸ್ತಕ. ಥಿಯರಿಟಿಕಲ್ ಬರವಣಿಗೆ ಸರಳ ಪತ್ರಿಕಾ ಬರಹಗಳಂತಿರುವುದಿಲ್ಲ. ಇವತ್ತು ಕನ್ನಡ ಸಾಹಿತ್ಯದಲ್ಲಿ ಕಾವ್ಯ, ನಾಟಕ, ಕಾದಂಬರಿ ಯಾವುದರ ಬಗೆಗಾದರೂ ಸಂಶೋಧನೆ ಮಾಡುವ ಹುಡುಗ ಹುಡುಗಿಯರು ಇದೊಂದು ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಿದರೂ ಅವರಿಗೆ ತಂತಮ್ಮ ಸಾಹಿತ್ಯಾಧ್ಯಯನದ ಹಲವು ದಾರಿಗಳು ಕಾಣತೊಡಗುತ್ತವೆ; ಸಂಶೋಧನಾ ಬರವಣಿಗೆಗೆ ಹಲವು ಜ್ಞಾನಶಿಸ್ತುಗಳನ್ನು ಬಳಸುವ ಕಸುಬಿನ ಒಂದು ಮಟ್ಟದ ಪರಿಚಯವಾದರೂ ಆಗುತ್ತದೆ; ಆ ಜ್ಞಾನಶಿಸ್ತುಗಳನ್ನು ತಂತಮ್ಮ ನೋಟಕ್ಕೆ ಅತ್ಯಗತ್ಯವಾದ ಹಣತೆಗಳೋ, ಬೆಳಕಿನ ದೊಂದಿಗಳೋ ಆಗುವ ಘಟ್ಟ ಅನಂತರದ್ದು. ಆಗ ನಮ್ಮ ನಮ್ಮ ಒರಿಜಿನಲ್ ನೋಟದ ಎಳೆಗಳು ತಕ್ಕ ಮಟ್ಟಿಗಾದರೂ ವಿಕಾಸಗೊಳ್ಳತೊಡಗುತ್ತವೆ.
ನಿನ್ನೆ ಜಿ.ಎಸ್.ಎಸ್. ಮಾತು ನೆನಪಾದದ್ದು ಈಚೆಗೆ ನಾನು ಬೇರೆ ಬೇರೆ ಕಾರಣಕ್ಕೆ ಗಮನಿಸಬೇಕಾಗಿ ಬಂದ ಕೆಲವರು ಗದ್ಯ ಬರೆಯುವ ಪರಿ ನೋಡಿದಾಗ. ಅದರಲ್ಲಿ ಮೂವತ್ತು ವರ್ಷ ಕನ್ನಡ ಟೀಚ್ ಮಾಡಿದ ಪ್ರಾಧ್ಯಾಪಕರು, ಕತೆ ಬರೆಯುವವರು, ಎಂ.ಎ. ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಿಎಚ್.ಡಿ. ಸಂಶೋಧಕ, ಸಂಶೋಧಕಿಯರು ಎಲ್ಲರ ಸೋ ಕಾಲ್ಡ್ ‘ಗದ್ಯ’ ಬರವಣಿಗೆಗಳೂ ಸೇರಿದ್ದವು. ಹೀಗೇ ಈ ಬರವಣಿಗೆಗಳನ್ನು ನೋಡುತ್ತಾ ಅಕಸ್ಮಾತ್ ಕಣ್ಣಿಗೆ ಬಿದ್ದ ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರ ವಚನಗಳನ್ನು ನೋಡಿದೆ. ತಕ್ಷಣ, ನಮ್ಮ ಕಾಲದ ಅನೇಕರ ಗದ್ಯ ಯಾಕೆ ತೋಪಾಗಿದೆ ಎಂಬುದಕ್ಕೆ ಸರಳ ಕಾರಣ ಹೊಳೆಯಿತು: ಕನ್ನಡ ವಚನಕಾರ್ತಿಯರ, ವಚನಕಾರರ ವಚನಗಳನ್ನು ನಿಕಟವಾಗಿ ಓದದ ಯಾರಿಗೂ ಒಳ್ಳೆಯ ಕನ್ನಡ ಗದ್ಯ ಕೈ ಹತ್ತುವುದಿಲ್ಲ.
ಹೀಗೆಂದುಕೊಳ್ಳುತ್ತಾ, ಲಿಂಗಮ್ಮನರ ವಚನಗಳನ್ನು ನೋಡಿದೆ:
ಹೊತ್ತು ಹೊತ್ತಿಗೆ ಮೆತ್ತ ಹಾಕಿ
ತಿಪ್ಪೆಯಲ್ಲಿ ಕರ್ಪೂರವನರಸುವನಂತೆ,
ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,
ನೀವು ಕೇಳಿರೊ, ಹೇಳಿಹೆನು.
ಆ ಕರ್ತುವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.
ಮೋಡವಿಲ್ಲದ ಚಂದ್ರಮನಂತಿರಬೇಕು.
ಬೆಳಗಿನ ದರ್ಪಣದಂತಿರಬೇಕು.
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
ನಾವು ಸುಮ್ಮನೆ ಮತ್ತೆ ಮತ್ತೆ ಇಂಥ ವಚನಗಳನ್ನು ಸುಮ್ಮನೆ ಓದಿದರೂ ಸಾಕು, ನಮ್ಮ ವಾಕ್ಯಗಳು ಸರಿಯಾಗಬಲ್ಲವು ಎನ್ನಿಸಿತು; ಅಷ್ಟೇ ಯಾಕೆ, ಗದ್ಯ ವಾಕ್ಯದ ಸರಳ ನಿಯಮವನ್ನು ಇದೊಂದು ವಚನದಿಂದಲೇ ಕಲಿಯಬಹುದು ಎನ್ನಿಸಿತು. ಈ ವಚನ ರಚನೆಯ ರೀತಿಯನ್ನು ಹೀಗೆ ಊಹಿಸೋಣ: ವಚನಕಾರ್ತಿಯ ಒಳಗೆ ಒಂದು ಮೂಲ ಐಡಿಯಾ ಇದೆ. ಅದೇನೆಂದರೆ, ‘ಕರ್ತುವನ್ನು ಅಥವಾ ಕರ್ತೃವನ್ನು ಕಾಣುವುದು.’ ಮನಸ್ಸನ್ನು ತಿಪ್ಪೆಯಂತಾಗಿಸಿ ಕೊಂಡವರಿಗೆ ಕರ್ತೃವನ್ನು ಅರಸುವುದಕ್ಕೆ ಆಗದು. ಹಾಗಾದರೆ ಕರ್ತೃವನ್ನು ಅರಸಲು ಚಿತ್ತ ಹೇಗಿರಬೇಕು ಎಂಬುದನ್ನು ವಚನ ಹುಡುಕುತ್ತದೆ; ಈ ಹುಡುಕಾಟದಲ್ಲಿ ವಚನ ಬೆಳೆಯುತ್ತದೆ.
ಈ ವಚನ ಕುರಿತು ಪ್ರೊಫೆಸರೊಬ್ಬರ ವಿವರಣೆ ಓದಿದೆ. ವಚನದ ವಿವರಗಳನ್ನು ಮರು ವಿವರಿಸಿರುವ ಪ್ರೊಫೆಸರ್, ಚಿತ್ತ ಹೇಗಿರಬೇಕೆಂದು ’ತಮ್ಮದೇ ಆದ’ ಗದ್ಯದಲ್ಲಿ ಬರೆದಿದ್ದರು. ಆದರೆ ಚಿತ್ತ ಯಾಕೆ ಬೆಳಗಿನ ದರ್ಪಣದಂತೆ, ಜಲದೊಳಗಣ ಸೂರ್ಯನ ಪ್ರತಿಬಿಂಬದಂತೆ, ಮೋಡವಿಲ್ಲದ ಚಂದ್ರಮನಂತೆ ಇರಬೇಕು ಎಂಬುದರ ಮೂಲ ಕಾರಣದ ಚರ್ಚೆಯನ್ನೇ ಕೈ ಬಿಟ್ಟು ಆರಾಮಾಗಿ ಮುಂದೆ ಸಾಗಿದ್ದರು! ತನ್ನ ಐಡಿಯಾ ಅಥವಾ ಆಲೋಚನೆಯನ್ನು ಸ್ಪಷ್ಟವಾದ ಗದ್ಯದಲ್ಲಿ ವಿವರಿಸುವ ಲಿಂಗಮ್ಮನವರ ಮಾದರಿಯನ್ನೇ ಮರೆತವರಂತೆ ಈ ವ್ಯಾಖ್ಯಾನಕಾರರು ಹೊರಟಿದ್ದರು. ಈ ಅರೆಮನಸ್ಸಿನ ಬರವಣಿಗೆಯಿಂದಲೂ ಹಲವರ ಅಕಡೆಮಿಕ್ ಗದ್ಯ ತೋಪಾಗುತ್ತದೆ ಎನ್ನಿಸಿತು.
ಈ ವಚನದಲ್ಲಿ ‘ಕರ್ತುವನರಿಯಬೇಕೆಂದರೆ’ ಎಂಬುದರಲ್ಲಿರುವ ಕರ್ತು ಅಥವಾ ಕರ್ತೃ ಎಂಬುದರ ಸರಳ ಅರ್ಥ: ಮಾಡುವವನು, ಸೃಷ್ಟಿ ಮಾಡುವವನು. ಕರ್ತಾರ: ದೇವರು. ಕರ್ತೃ ಎಂಬುದರ ಅರ್ಥಕ್ಕಾಗಿ ಕಿಟ್ಟೆಲ್ ಕೋಶ ನೋಡಿದೆ: a doer, an author, an agent, a creator, a king ಈ ಅರ್ಥಗಳಿದ್ದವು. ಈ ಅರ್ಥಗಳನ್ನು ಕಿಟ್ಟಲ್ ಕನ್ನಡ ಕಾವ್ಯಗಳಲ್ಲಿರುವ ಪದ ಪ್ರಯೋಗಗಳ ಒಳಗಿಂದಲೇ ಕೊಡುತ್ತಾರೆ. ಆದರೂ ಕರ್ತೃ ಎಂಬ ಪದಕ್ಕೆ ಈ ವಚನವನ್ನು ಒಂದು ಕವಿತೆಯನ್ನಾಗಿ ಓದಿದರೆ ಇನ್ನೂ ಅರ್ಥ ಸಾಧ್ಯತೆಗಳಿರಬಹುದು ಎನ್ನಿಸತೊಡಗಿತು. ಕರ್ತೃ ಎಂಬುದಕ್ಕೆ ಕವಿ, ಕವಯಿತ್ರಿ ಎಂಬ ಅರ್ಥವೂ ಇರಬಹುದಲ್ಲವೆ?
ಅದೇನೇ ಇರಲಿ, ನಾವು ನಮ್ಮ ಗದ್ಯ ಬರವಣಿಗೆಯ ಪಾಠಗಳನ್ನು ವಚನಗಳಿಂದ ಕಲಿಯಬೇಕೆಂದರೆ, ಗದ್ಯವನ್ನು ಪ್ರಖರವಾಗಿಸಿಕೊಳ್ಳಬೇಕೆಂದರೆ ಮೊದಲಿಗೆ ವಚನಗಳನ್ನೇ ನೇರವಾಗಿ ಹೊಗುವುದು ಒಳ್ಳೆಯದು. ನಂತರ ಓ.ಎಲ್. ನಾಗಭೂಷಣಸ್ವಾಮಿ, ಶಿವಪ್ರಕಾಶ್, ಡಿ. ಆರ್. ನಾಗರಾಜ್, ಸುರೇಶ್ ನಾಗಲಮಡಿಕೆ, ಆಶಾದೇವಿ ಥರದವರ ವ್ಯಾಖ್ಯಾನಗಳಿಗೆ ಹೋಗಿ ಆಳದ ಅರ್ಥಗಳನ್ನು ಹುಡುಕಬಹುದು.
ಹೀಗೆನ್ನಿಸಲು ಕಾರಣವಿದೆ: ಈವರೆಗೆ, ಯಾವ ಗಳಿಗೆಯಲ್ಲೇ ಆಗಲಿ, ‘ಕವಿಮನದ ಬ್ಯಾಸರ ಹರಿಸಾಕ’ ವಚನ ಸಂಪುಟ ತೆರೆದಾಗಲೆಲ್ಲ ನನಗೆ ನಿರಾಶೆಯಾಗಿಲ್ಲ! ಅಲ್ಲಿ ಒಂದಲ್ಲ ಒಂದು ಕಡೆ ‘ಗೀತ ಮಾತೆಂಬ ಜ್ಯೋತಿ’ ಎದುರಾಗಿ ನನ್ನೆದೆ ಬೆಳಗುತ್ತಲೇ ಇರುತ್ತದೆ. ಹಿಂದೊಮ್ಮೆ ಇದೇ ಅನುಭವ ಕುರಿತು ಬರೆಯುವಾಗ ವಚನ ಎನ್ನುವುದು ‘ನಿತ್ಯ ತೇಜದ ಬೆಳಕು’ ಎಂದು ಬರೆದಿದ್ದು ನೆನಪಾಗಿ ಹಲವು ಕಾರಣಗಳಿಗಾಗಿ ರೋಮಾಂಚನವಾಯಿತು! ಏಳೆಂಟು ವರ್ಷಗಳ ಕೆಳಗೆ ನನ್ನ ಅಂಕಣವೊಂದರಲ್ಲಿ ಬರೆದ ಮಾತುಗಳು:
‘...ನನ್ನ ನೆಚ್ಚಿನ ಪುಸ್ತಕಗಳ ಗುಂಪಿನಲ್ಲಿರುವ ‘ವಚನ ಕಮ್ಮಟ’ (ಸಂ: ಕಿ.ರಂ.ನಾಗರಾಜ್, ಕೆ.ಮರುಳಸಿದ್ಧಪ್ಪ) ಹಾಗೂ ಕಲಬುರ್ಗಿಯವರು ಸಂಪಾದಿಸಿರುವ ‘ಬಸವಣ್ಣನವರ ವಚನ ಸಂಪುಟ’ಗಳತ್ತ ಕಣ್ಣಾಡಿಸಿದೆ. ಈ ಪುಸ್ತಕಗಳಲ್ಲಿ ಆಗಾಗ್ಗೆ ಓದಿ ಗುರುತು ಹಾಕಿರುವ ನೂರಾರು ವಚನಗಳ ಸಾಲುಗಳು ಕಣ್ಣಿಗೆ ಬೀಳತೊಡಗಿದಂತೆ, ವಚನ ಲೋಕದ ತಂಗಾಳಿ, ಕನ್ನಡ ಭಾಷೆಯ ಅದ್ಭುತ ರೂಪಗಳು, ಕಾವ್ಯಪ್ರಯೋಗಗಳು, ಆರೋಗ್ಯಕರ ನೋಟ ಹಾಗೂ ವಿಮರ್ಶಾತೀಕ್ಷ್ಣತೆ... ಇವೆಲ್ಲ ಎಂದಿನಂತೆ ಮೈಮನಸ್ಸುಗಳ ತುಂಬ ಮಿಂಚು ಮೂಡಿಸತೊಡಗಿದವು. ವಚನದ ಸ್ವರೂಪವನ್ನು ಹೇಳುವ
ಚನ್ನಬಸವಣ್ಣನವರ ವಚನವನ್ನು ನೋಡಿ:
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು
ಕೂಡಲ ಚನ್ನಸಂಗನ ಶರಣರು.’
ವಚನದ ಗುಂಗು, ಜಾಡು ಎಂದರೆ ಹೀಗೇ. ಧಾರವಾಡ ವಿಶ್ವವಿದ್ಯಾಲಯದ ತುಂಬ ವಚನ ಸಾಹಿತ್ಯದ ಸಂಶೋಧಕರೇ ತುಂಬಿರುತ್ತಾರೆ ಎಂದು ಹಿಂದೆಲ್ಲ ಆಡಿಕೊಳ್ಳುತ್ತಿದ್ದರು. ಅದು ಸಹಜ ಬೆಳವಣಿಗೆಯೇ ಇರಬಹುದು. ಕಾರಣ, ವಚನಸಂಚಾರ ಮಾಡುವವರಿಗೆ, ಒಮ್ಮೆ ವಚನದ ಜಾಡು ಹಿಡಿದವರಿಗೆ ಬೇರೇನೂ ರುಚಿಸುವುದು ಕಷ್ಟ! ಈ ಮಾತು ಬರೆಯುತ್ತಾ ಬರೆಯುತ್ತಾ, ಲಿಂಗಮ್ಮನವರ ವಚನಗಳು ನನ್ನನ್ನು ಪಟ್ಟಾಗಿ ಹಿಡಿದುಬಿಟ್ಟವು:
ಹೋಗುತ್ತ ಹೋಗುತ್ತ ಹೊಗೆಯ ಕಂಡೆ,
ಹೊಗೆಯೊಳಗೊಂದು ನಗೆಯ ಕಂಡೆ,
ನಗೆ ನಡೆಗೆಡಿಸಿ, ನಾನೆಂಬುದನರಿದು,
ತಾನು ತಾನೆಯಾಗಿ ತಲ್ಲಣವಿಲ್ಲದೆ,
ಎಲ್ಲವೂ ತಾನೆಂದರಿದು ತನ್ಮಯವಾಗಿ
ತರಹದಲ್ಲಿ ನಿಂದು ನೋಡುತ್ತಿರಲು
ಉರಿಯ ಕಂಡೆ; ಉರಿಯೊಳಗೊಂದು ಹೊಳೆವ ಜ್ಯೋತಿಯ ಕಂಡೆ;
ಆ ಜ್ಯೋತಿಯೊಳಗೊಂದು ಚಿಜ್ಜ್ಯೋತಿಯ ಕಂಡೆ
ಆ ಚಿಜ್ಜ್ಯೋತಿಯೊಳಗೊಂದು ಚಿತ್ಪ್ರಕಾಶವ ಕಂಡೆ.
ಆ ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ
ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,
ಆಡಿಯೂ ಆಡದಂತೆ, ನೋಡಿಯೂ ನೋಡದಂತೆ,
ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು,
ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !
ಈ ವಚನವನ್ನು ನೋಡುತ್ತಾ, ವೀರಣ್ಣ ರಾಜೂರ ಸಂಪಾದಿಸಿರುವ ‘ಶಿವಶರಣೆಯರ ವಚನ ಸಂಪುಟದ ಮುನ್ನುಡಿ ಗಮನಿಸಿದೆ. ಲಿಂಗಮ್ಮನವರ ವಚನಗಳನ್ನು ’ಬೋಧೆಯ ವಚನಗಳು’ ಎಂದು ಕರೆಯಲಾಗುತ್ತದೆ ಎಂಬ ಹಳಬರ ಹೇಳಿಕೆಯನ್ನು ರಾಜೂರ ಉಲ್ಲೇಖಿಸಿದ್ದರು. ನಾವು ಯಾರನ್ನು ಉಲ್ಲೇಖಿಸುತ್ತೇವೆ ಎಂಬುದು ನಮ್ಮ ನಿಲುವನ್ನೂ ಹೇಳುತ್ತಿರುತ್ತದೆ. ಲಿಂಗಮ್ಮನಂಥವರ ವಚನಗಳ ಅನಂತಸಾಧ್ಯತೆಗಳನ್ನು ಕೊಲ್ಲಲು ಇಂಥ ಸೀಮಿತ ಹಣೆಪಟ್ಟಿಗಳ ಕತ್ತಿ ಸಾಕಲ್ಲವೆ! ಈ ತೀರ್ಮಾನದ ನಡುವೆ ಕೂಡ ಲಿಂಗಮ್ಮನವರ ವಚನಗಳ ಸುಂದರ ಚಿತ್ರಗಳು ರಾಜೂರರನ್ನು ಕಾಡದೆ ಬಿಟ್ಟಿಲ್ಲ: ‘ಒಂದು ಹುತ್ತಕ್ಕೆ ಒಂಬತ್ತು ಬಾಗಿಲು’, ‘ಬೆಳಗ ಕಂಡವರಿಗೆ ಕತ್ತಲೆಯ ಹಂಗುಂಟೆ’, ’ಗಾಳಿ ಬೀಸದ ಜಲದಂತೆ’, ‘ಕಾಮನ ಸುಟ್ಟಂಗೆ ಕಳವಳದ ಹಂಗೇಕೋ’…ಇಂಥ ಚಿತ್ರಗಳನ್ನು ರಾಜೂರ ಉಲ್ಲೇಖಿಸಿದ್ದರು. ಲಿಂಗಮ್ಮನ ವಚನಗಳಿರುವಾಗ ರಾಜೂರರ ಹಂಗೇಕೋ ಎಂದುಕೊಂಡು ಮತ್ತೆ ವಚನಗಳಿಗೇ ಹೋದೆ:
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು,
ತನ್ನ ನೆಲೆಯ ತಿಳಿದಿತ್ತು.
ಕತ್ತಲೆಯೊಳಗೆ ನಿಂದು ನೋಡುತ್ತಿರಲು,
ನೋಟ ಹಿಂದಾಯಿತ್ತು; ಆಟವಡಗಿತ್ತು;
ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು.
ಊಟವನುಂಡು ಕೂಟವ ಕೂಡಿ
ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,
ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,
ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
ಇದನ್ನು ಕೇವಲ ‘ತತ್ವಬೋಧೆ’ಯ ವಚನ ಎನ್ನಲಾಗುವುದೆ? ವಚನಗಳನ್ನು ಸುಮ್ಮನೆ, ಮುಕ್ತವಾಗಿ ಓದುವುದು ಎಷ್ಟೋ ಸಲ ಸರಿಯಾದ ಕ್ರಮ; ನಮಗೆ ಬೇಕಾದ್ದನ್ನು ಪಡೆಯಲು ಅದೇ ಸ್ವತಂತ್ರ ದಾರಿ. ನಮಗೆ ಬರವಣಿಗೆಯ ಬಿಕ್ಕಟ್ಟು ಎದುರಾದಾಗಲೆಲ್ಲ ಒಂದೆರಡು ದಿನ ಎಲ್ಲವನ್ನೂ ಕೈಬಿಟ್ಟು, ಬರೀ ವಚನ ಲೋಕದಲ್ಲಿ ಅಡ್ಡಾಡಿದರೆ ಸಾಕು, ಒಂದಲ್ಲ ಒಂದು ಹಾದಿ ಕಾಣುತ್ತದೆ ಎನ್ನಿಸುತ್ತದೆ. ಅಸಂಬದ್ಧ ಗದ್ಯ ಬರವಣಿಗೆಯನ್ನು ಸರಿಪಡಿಸಿಕೊಳ್ಳಲು ಹಲವು ಮಾರ್ಗಗಳಿರಬಹುದು. ಅದರಲ್ಲಿ ವಚನಗನ್ನಡಿ ನಿಜಕ್ಕೂ ಮಾಯಾಕನ್ನಡಿ; ಸಿದ್ಧೌಷಧ. ಇದು ನನ್ನ ಅನುಭವ.