Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
22 Jun 2025 ಕೀರ್ತನೆ ಕವಿತೆಯಾದಾಗ

ಕರ್ನಾಟಕ ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಕೇಂದ್ರದ ಪ್ರೊಫೆಸರ್ ಹನುಮಗೌಡರು ಇದ್ದಕ್ಕಿದ್ದಂತೆ ಕನಕದಾಸರ ಎರಡು ಕೀರ್ತನೆಗಳನ್ನು ಕೊಟ್ಟು, ‘ಆಕಾಶವಾಣಿಯಲ್ಲಿ ಈ ಕೀರ್ತನೆಗಳನ್ನು ಕುರಿತು ಮಾತಾಡಬೇಕು’ ಎಂದರು. ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಭಾಷಾಂತರ ಕುರಿತ ವಿಚಾರ ಸಂಕಿರಣಕ್ಕೆ ಧಾರವಾಡಕ್ಕೆ ಹೊರಟಿದ್ದ ದಿನ ಎದುರಾದ ಆಕಸ್ಮಿಕ ಕೋರಿಕೆಯಿದು.

ಯಾರಾದರೂ ಕೇಳಿದ ತಕ್ಷಣ ಇಂಥ ಅಸೈನ್‌ಮೆಂಟುಗಳನ್ನು ಒಪ್ಪದ ನನಗೆ, ಕೆಲವು ಗಂಟೆಗಳ ನಂತರ, ಈ ಕೀರ್ತನೆಗಳನ್ನು ಸುಮ್ಮನೆ, ಮುಕ್ತವಾಗಿ ಓದಿದರೆ ಹೇಗೆ ಎನ್ನಿಸತೊಡಗಿತು. 'ಕೀರ್ತನೆ’ ಎಂದ ತಕ್ಷಣ ನಮ್ಮ ಓದಿನ ದಿಕ್ಕು ಹಾಗೂ ಅರ್ಥ ನಿರ್ದಿಷ್ಟಗೊಳ್ಳುವುದರಿಂದ ಇದನ್ನೊಂದು ಕವಿತೆಯಾಗಿ ಓದಿದರೆ ಏನನ್ನಿಸುತ್ತದೆ ನೋಡೋಣ ಎಂದುಕೊಂಡೆ. ಕನಕದಾಸರ ಒಂದು ಕವಿತೆಯನ್ನು ಆರಿಸಿಕೊಂಡು ಪ್ರಯಾಣದ ಹಾದಿಯಲ್ಲಿ ಮತ್ತೆ ಮತ್ತೆ ಓದಿದೆ. 

ಈ ಕವಿತೆ ಓದುತ್ತಿರುವಾಗ ಕೃತಿಕಾರನ ಹಿನ್ನೆಲೆ ಬಿಟ್ಟು ಕೃತಿಯನ್ನು ಓದುವ ಐ.ಎ. ರಿಚರ್ಡ್ಸ್ ವಿಮರ್ಶಾ ಮಾರ್ಗ ನೆರವಿಗೆ ಬಂತು. ನೂರು ವರ್ಷಗಳ ಕೆಳಗೆ ಇಂಗ್ಲಿಷ್ ಪ್ರೊಫೆಸರ್ ರಿಚರ್ಡ್ಸ್ ಕ್ಲಾಸ್ ರೂಮಿನಲ್ಲಿ ಮಾಡಿದ ಪ್ರಯೋಗ ಸಾಹಿತ್ಯ ವಿಮರ್ಶೆ ಬಲ್ಲವರಿಗೆಲ್ಲ ಗೊತ್ತಿರುತ್ತದೆ: ಕವಿತೆಗಳ ಟೈಟಲ್; ಕವಿ, ಕವಯಿತ್ರಿಯರ ಹೆಸರು; ಕವಿತೆ ಬರೆದ ಕಾಲ… ಇವನ್ನೆಲ್ಲ ತೆಗೆದು ಹಾಕಿದ ರಿಚರ್ಡ್ಸ್, ಕೇವಲ ಅಚ್ಚಾದ ಪುಟಗಳನ್ನಷ್ಟೇ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೊಟ್ಟು, ಅವರು ಅವನ್ನು ಹೇಗೆ ಗ್ರಹಿಸುತ್ತಾರೆ ಎಂದು ನೋಡಿದ. ಅವರ ಪ್ರತಿಕ್ರಿಯೆಗಳನ್ನೆಲ್ಲ ಅಧ್ಯಯನ ಮಾಡುತ್ತಾ, ಕವಿತೆ ಓದುವವರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನೆಲ್ಲ ಪಟ್ಟಿ ಮಾಡಿ ’ಪ್ರಾಕ್ಟಿಕಲ್ ಕ್ರಿಟಿಸಿಸಂ’ ಎಂಬ ಪುಸ್ತಕ ಬರೆದ. ಈ ಮಾರ್ಗದ ಮಿತಿಗಳೇನೇ ಇರಲಿ, ಇವತ್ತಿಗೂ ಕ್ಲಾಸ್ ರೂಮಿನಲ್ಲಿ ಬಿಡಿ ಬಿಡಿ ಕವಿತೆಗಳನ್ನು, ಕತೆಗಳನ್ನು ಟೀಚ್ ಮಾಡುವವರಿಗೆ ಉಪಯುಕ್ತ ಮಾರ್ಗ ಇದು.    

ಈ ರಿಚರ್ಡ್ಸ್ ಮಾರ್ಗ ಉಪಯುಕ್ತ ಎನ್ನಲು ಕಾರಣವಿದೆ: ಯಾವುದೇ ಕೃತಿಯನ್ನು ಕೃತಿಕಾರ ಅಥವಾ ಕೃತಿಕಾರ್ತಿಯನ್ನೇ ನೆನಪಿನಲ್ಲಿಟ್ಟುಕೊಂಡು ಓದಿದರೆ ಕೃತಿಯ ಅರ್ಥದ ಬಗ್ಗೆ ನಮ್ಮ ಪೂರ್ವ ತೀರ್ಮಾನ ಸಿದ್ಧವಾಗತೊಡಗುತ್ತದೆ. ಹಾಗೆಯೇ ಕೃತಿಯೊಂದು ಹುಟ್ಟಿದ ಸಾಹಿತ್ಯ ಚಳುವಳಿಯ ಹಿನ್ನೆಲೆಯಲ್ಲಿ ಅದನ್ನು ನವೋದಯ ಕೃತಿ, ಬಂಡಾಯ ಕೃತಿ ಎಂದು  ಓದಿದಾಗಲೂ ಹೀಗೇ ಆಗುತ್ತದೆ. ಅಥವಾ ರೊಮ್ಯಾಟಿಕ್ ಕವಿ ಕೀಟ್ಸ್ ಬರೆದ ಕವಿತೆ; ಹನುಮಂತಯ್ಯನವರ ದಲಿತ ಕವಿತೆ; ಅಥವಾ ರೂಪಾ ಹಾಸನ ಅವರ ಸ್ತ್ರೀವಾದಿ ಕವಿತೆ... ಹೀಗೆ ಶುರು ಮಾಡಿದಾಗಲೂ ಓದುವ ಮುನ್ನವೇ ಕವಿತೆಯ ಒಂದು ಅರ್ಥ ಸಿದ್ಧವಾಗಿರುತ್ತದೆ. 

ಅದಕ್ಕೇ ಕನಕದಾಸರ ಈ ಕವಿತೆಯನ್ನು ಅವರ 'ದಾಸ’ ಹಿನ್ನೆಲೆ ಬಿಟ್ಟು, ಭಕ್ತಿ ಕಾವ್ಯದ ಭಜನಾ ಪ್ರಭಾವಳಿ ಬಿಟ್ಟು, ಓದಿ ನೋಡಿದರೆ ಹೇಗಿರುತ್ತದೆ ಎಂಬ ಕುತೂಹಲ ಹುಟ್ಟಿತು. ಅವತ್ತು ಈ ಓದಿನ ಪ್ರಯೋಗಕ್ಕೆ ಸಿಕ್ಕ ಕನಕದಾಸರ 'ಸ್ನಾನವ ಮಾಡಿರೋ ಜ್ಞಾನತೀರ್ಥದಲ್ಲಿ’ ಎಂಬ ಕವಿತೆ:

ಸ್ನಾನವ ಮಾಡಿರೊ ಜ್ಞಾನತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು

ತನ್ನ ತಾನರಿತುಕೊಂಬುದೇ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ-ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ

ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ತ್ವವರಿತುಕೊಂಬುದೆ ಒಂದು ಸ್ನಾನ

ಸಾಧುಸಜ್ಜನರ ಸಂಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದಧ್ಯಾನವೆ ನಿತ್ಯ ಗಂಗಾಸ್ನಾನ

ಕನಕದಾಸರು ಈ ಗೀತೆಯನ್ನು ಹಾಡಿದಾಗ ತಲೆಬರಹ ಕೊಟ್ಟರೋ, ಅಥವಾ ನಂತರ ಸಂಗ್ರಹಕಾರರಿಂದ ತಲೆಬರಹ ಬಂತೋ, ಅಥವಾ ಕೀರ್ತನೆಗಳಲ್ಲಿ ಮೊದಲ ಸಾಲನ್ನೇ ಸಂಪಾದಕರು ತಲೆಬರಹವಾಗಿ ಕೊಟ್ಟರೋ…ಹೇಳುವುದು ಕಷ್ಟ.

ಸ್ನಾನ ಮಾಡುವ ಕ್ರಿಯೆ ಕವಿತೆಯಲ್ಲಿ ರೂಪಕವಾಗಿದೆ ಎಂಬುದು ಯಾರಿಗಾದರೂ ಮೇಲುನೋಟಕ್ಕೇ ಸ್ಪಷ್ಟವಾಗುತ್ತದೆ. ಪದವೊಂದು ಮೇಲುನೋಟಕ್ಕೆ ಏನಾಗಿ ತೋರುತ್ತಿದೆಯೋ ಅದಕ್ಕಿಂತ ಬೇರೆಯದೇ ಆದ ಅರ್ಥಗಳನ್ನು ಸೂಚಿಸುವುದು ರೂಪಕ- ಇದು ರೂಪಕದ ಒಂದು ಸರಳ ಅರ್ಥ ತಾನೆ? ಈ ದೃಷ್ಟಿಯಿಂದ ಸ್ನಾನ ಮಾಡುವ ಕ್ರಿಯೆ ಈ ಕವಿತೆಯಲ್ಲಿ ಮೇಲುನೋಟದ ಅರ್ಥಕ್ಕಿಂತ ಭಿನ್ನವಾದ ಹಲವು ಅರ್ಥಗಳನ್ನು ಹೊರಡಿಸಬಲ್ಲ ರೂಪಕ. 'ಸ್ನಾನ’ಕ್ಕೆ ಇರುವ ಮೀಯುವುದು, ಮುಳುಗೇಳುವುದು, ಶುಭ್ರವಾಗುವುದು… ಮುಂತಾದ ಅರ್ಥಗಳು ಬಳಕೆಯ ಸಂದರ್ಭಗಳಲ್ಲಿ ಹಲವು ಅರ್ಥಗಳನ್ನು ಕೊಡತೊಡಗುತ್ತವೆ. ಉದಾಹರಣೆಗೆ, 'ಅವಳ ದೇಹದಲ್ಲಿ ಮಿಂದೆದ್ದ’ ಎಂಬ ರಮ್ಯ ರೂಪಕದ ಅರ್ಥವೇ ಬೇರೆ; ‘ಅವನು ಜ್ಞಾನಸಾಗರದಲ್ಲಿ ಮಿಂದೆದ್ದ’ ಎಂಬ ರೂಪಕದ ಅರ್ಥವೇ ಬೇರೆ. ಅಕಸ್ಮಾತ್ ಈ ಎರಡೂ ಸಾಲುಗಳು ಒಟ್ಟಿಗೇ ಬಂದಾಗ ಇವೆರಡರ ಅರ್ಥಗಳು ಬೆರೆಯುವ ಗಳಿಗೆಯೂ ಒಂದಿದೆ: ಆಗ ಆತ ಅವಳ ದೇಹದ ಬಗ್ಗೆ ಜ್ಞಾನ ಪಡೆದ;  ಆ ದೇಹದ ಜ್ಞಾನಸಾಗರದ ಅರಿವು ಪಡೆದ ಎಂಬ ಅರ್ಥ ವಿಸ್ತರಿಸಿಕೊಳ್ಳಲೂಬಹುದು! 

ಈ ಥರದ ಮುಕ್ತ ಓದುಗಳು ಒತ್ತಟ್ಟಿಗಿರಲಿ, ಸಹಜ ಕವಿ ಕನಕದಾಸರ ಕವಿತೆ ಶುರುವಾಗುವುದು ಸ್ನಾನ, ಜ್ಞಾನಗಳ ಪ್ರಾಸರೂಪಿ ಪದಗಳ ಮೂಲಕ. ಯಾವುದನ್ನು ಮಾಡಿದರೆ ಶುಭ್ರತೆ; ಯಾವುದು ಕೊಳಕು ಎಂಬ ತದ್ವಿರುದ್ಧ ಚಿತ್ರಗಳನ್ನೂ ಕವಿತೆ ಕೊಡುತ್ತದೆ.  ಮೇಲುನೋಟಕ್ಕೆ ಇದೊಂದು ನೀತಿಕವಿತೆಯಂತೆ ಇದ್ದರೂ, ನುರಿತ ಕವಿಯ ನಿರಾಯಾಸವಾದ ಅನುಪ್ರಾಸಗಳ ನಿರ್ವಹಣೆ ಆನಂದ ಮೂಡಿಸತೊಡಗುತ್ತದೆ. ಅನ್ನ-ಅನ್ಯಾಯ, ಅನ್ನದಾನ-ಅನ್ಯಧ್ಯಾನಗಳ ಹಾಗೆ ’ಪರ’ದ ಸುತ್ತಣ ಆಟವೂ ಆಕರ್ಷಕವಾಗಿದೆ. 

ಕನಕದಾಸರು ಇಲ್ಲಿ  ಅನ್ನ-ಅನ್ಯಾಯಗಳನ್ನು ಒಟ್ಟಿಗೇ ತಂದಿರುವ ರೀತಿ ಮುಂದೆ ಗೋಪಾಲಕೃಷ್ಣ ಅಡಿಗರ ’ಕಟ್ಟುವೆವು ನಾವು’ ಪದ್ಯದಲ್ಲಿ ’ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ’ ಎಂದು ಅಂತರ್ ಪಠ್ಯೀಯವಾಗುವುದು ಕುತೂಹಲಕರ. ಈ ಥರದ ಅಂತರ್ ಪಠ್ಯೀಯತೆ ಯಾವುದೇ ಭಾಷೆಯ ಕಾವ್ಯರಚನೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ… ರೂಢಿಯ ಓದಿನಂತೆ ಕನಕರ ಕವಿತೆಯ ಪ್ರತಿಮೆಗಳನ್ನೆಲ್ಲ ಕೊನೆಯ ಸಾಲಿನ ಕಾಗಿನೆಲೆಯಾದಿಕೇಶವನ ಪಾದದಲ್ಲಿ ಲೀನಗೊಳಿಸದೆ ಓದುವ ಆಟ ನನ್ನಲ್ಲಿ ಕ್ರಿಯೇಟಿವ್ ಎನರ್ಜಿ ಹುಟ್ಟಿಸತೊಡಗಿತು.

‘ಟ್ರಸ್ಟ್ ದ ಟೇಲ್, ನಾಟ್ ದ ಟೆಲ್ಲರ್’ (ಕತೆಯನ್ನು ನಂಬು; ಕತೆ ಹೇಳುವವರನ್ನಲ್ಲ) ಎಂಬ ಡಿ.ಎಚ್. ಲಾರೆನ್ಸ್‌ನ ಮಾತನ್ನು ಮತ್ತೆ ಮತ್ತೆ ಈ ಅಂಕಣಗಳಲ್ಲಿ ಉಲ್ಲೇಖಿಸಿರುವ ನಾನು ಕವಿಯನ್ನು ಬಿಟ್ಟು, ಕೃತಿಯ ಅಚ್ಚಾದ ಪುಟಗಳನ್ನೇ ಓದುತ್ತೇನೆ ಎಂದು ಕನಕದಾಸರ ಕವಿತೆಯನ್ನು ಓದುವಾಗಲೂ ಹೊರಟಿದ್ದೆನಷ್ಟೆ? ಆದರೆ ನಾನು ಅವತ್ತು ಅಚ್ಚಾದ ಪುಟಗಳಲ್ಲಿ ಯಾವುದನ್ನು ನೋಡದೆ ಬಿಟ್ಟಿದ್ದೆ ಎಂಬುದು ಒಂದು ತಿಂಗಳ ನಂತರ ಈ ಕವಿತೆಯನ್ನು ಮತ್ತೆ ಓದಿದಾಗ ಹೊಳೆದು ಪೆಚ್ಚಾದೆ. 

ಈ ಕಣ್ತಪ್ಪು, ಬುದ್ಧಿತಪ್ಪು ಕಂಡಿದ್ದು ಕನಕರ ಈ ಕವಿತೆಯನ್ನು ಕಳೆದ ವಾರ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ರಿಫ್ರೆಶರ್ ಕೋರ್ಸಿನಲ್ಲಿ ಪ್ರಸ್ತಾಪಿಸಲು ಮತ್ತೆ ಗಮನಿಸುತ್ತಿದ್ದಾಗ. ಅರೆ! ಕವಿತೆಯ ಶುರುವಿನಲ್ಲೇ ‘ರಾಗ: ಧನ್ಯಾಸಿ’, ‘ತಾಳ: ಆದಿತಾಳ’ ಎಂಬ ವಿವರಗಳಿವೆಯಲ್ಲ! ಅದನ್ನು ಕಳೆದ ತಿಂಗಳು ನಾನು ಗಮನಿಸಿದ್ದೆನೋ, ಗಮನಿಸಿದರೂ ಅಥವಾ ಗಮನಿಸದೆಯೇ ಮುಂದೆ ಸಾಗಿದೆನೋ? ಎಷ್ಟೋ ಸಲ, ಎದುರಿಗಿರುವ, ತೀರಾ ಎದ್ದು ಕಾಣುವ ವಸ್ತುವನ್ನೇ ಕಾಣದೆ ನಾವು ಮುಂದೆ ಸಾಗುವ ಹಾಗೆ ಅವತ್ತೂ ಆಗಿತ್ತು! 

ನಾನೊಬ್ಬನೇ ಈ ತಪ್ಪು ಮಾಡಿರಬಹುದೇ ಎಂಬ ಅಳುಕಿನಿಂದ ಅಲ್ಲಿದ್ದ ಮೇಡಂಗಳನ್ನು, ಮೇಷ್ಟರುಗಳನ್ನು ಕೇಳಿದೆ: 

‘ನೀವು ನಿಮ್ಮ ಪಠ್ಯಪುಸ್ತಕಗಳಲ್ಲಿ ಪುರಂದರದಾಸ, ಕನಕದಾಸರ ಕವಿತೆಗಳನ್ನು ಟೀಚ್ ಮಾಡಿದ್ದೀರಾ?’ 

‘ಹೂಂ!’ …ಸಣ್ಣಗೆ ಕೇಳಿ ಬಂತು... ‘ಮೊಳೆಯದಲೆಗಳ ಮೂಕ ಮರ್ಮರ!’

‘ಸರಿ. ಆ ಕವಿತೆಗಳ ಆರಂಭದಲ್ಲಿ ಕೊಟ್ಟಿರುವ ರಾಗ, ತಾಳಗಳ ವಿವರಗಳನ್ನೇನಾದರೂ ಗಮನಿಸಿದ್ದೀರಾ?’

ಪಿನ್ ಡ್ರಾಪ್ ಸೈಲೆನ್ಸ್! ಅವನ್ನು ಯಾರೂ ಗಮನಿಸಿದಂತಿರಲಿಲ್ಲ! ಅವರಲ್ಲಿ ನನ್ನ ಪರಿಚಿತ ಗೆಳೆಯರೂ, ಹಿರಿಯ ವಿದ್ಯಾರ್ಥಿನಿಯರೂ ಇದ್ದರು. ಅವರು ಕೂಡ ನನ್ನಂತೆಯೇ ಎದುರಿಗಿರುವುದನ್ನು ಗಮನಿಸದ ಕಣ್ ಮಂಪರಿಗೆ ಗುರಿಯಾಗಿದ್ದರು! 

ಕನಕದಾಸರಾಗಲಿ, ಪುರಂದರದಾಸರಾಗಲಿ ಕರ್ನಾಟಿಕ್ ಸಂಗೀತದ ಉತ್ತಮ ಜ್ಞಾನ ಉಳ್ಳವರಾಗಿದ್ದುದನ್ನು ಅವರ ಕೃತಿಗಳೇ ಸೂಚಿಸುತ್ತವೆ. ಅವರ ಭಾವಗೀತೆಗಳ ಹರಿವಿಗೂ, ಸ್ವತಃ ಅವರೋ ಅಥವಾ ಕೃತಿಗಳ ಸಂಗ್ರಹಕಾರರೋ ಸೂಚಿಸಿರುವ ಅನೇಕ ಮೂಲ ರಾಗಗಳ ಓಟಕ್ಕೂ, ಅವುಗಳ ಸಾಂಗೀತಿಕ ಲಯಕ್ಕೂ ಸಂಬಂಧವಿದ್ದಂತಿದೆ. ರಾಗ, ಸಂಗೀತಗಳ ಹಂಗಿಲ್ಲದೆಯೂ ಕನಕರ ಕವಿತೆಗಳನ್ನು ಓದಬಹುದು. ಆ ಮಾತು ಬೇರೆ. 

ಆದರೂ ನನ್ನ ರಿಸರ್ಚ್ ಮನಸ್ಸು ಕರ್ನಾಟಿಕ್ ಸಂಗೀತದ ಧನ್ಯಾಸಿ ರಾಗದ ಓಟ ಈ ಕವಿತೆಗೆ ಇನ್ನೂ ಯಾವ್ಯಾವ ಆಯಾಮ ಕೊಡಬಹುದೆಂಬುದನ್ನು ನೋಡಲೆತ್ನಿಸಿತು. ಮುಂದೊಮ್ಮೆ ಈ ಅಂಕಣದಲ್ಲಿ ಧನ್ಯಾಸಿ ರಾಗದಲ್ಲಿ ಕನಕರ ಕವಿತೆ ಯಾವ ಯಾವ ಅರ್ಥ ಹೊರಡಿಸಬಹುದೆಂಬುದನ್ನು ಹುಡುಕಬಹುದು. ಈ ಅಂಕಣದ ಓದುಗ, ಓದುಗಿಯರಲ್ಲಿ ಸಂಗೀತ ಬಲ್ಲವರು ಈ ಕೆಲಸ ಕೈಗೆತ್ತಿಕೊಂಡು ಈ ಪಠ್ಯವನ್ನು ಬೆಳೆಸಿ ನೋಡಿದರೆ, ಆ ಪ್ರಯೋಗ ನಿಜಕ್ಕೂ ರೋಮಾಂಚಕಾರಿಯಾಗಬಲ್ಲದು; ಇಂಥ ಪ್ರಯೋಗಗಳು ಓದಿನ ಆನಂದಕ್ಕೆ, ವಿಶ್ಲೇಷಣೆಗೆ ಒಮ್ಮೊಮ್ಮೆ ಕವಿತೆಯ ರಚನೆಗೆ, ಟೀಚಿಂಗಿಗೆ… ಲಾಭಕರವಾಗಲೂ ಬಲ್ಲವು. 

ಇದೀಗ ಕತ್ತೆತ್ತಿದರೆ ಮುತ್ತುವ ಭೀಕರ ಯುದ್ಧದ ದುರಹಂಕಾರ, ನಿರ್ದಯ ಹಿಂಸೆಗಳ ಕಟು ವಾಸ್ತವದ ನಡುವೆ ನಮ್ಮಂಥವರಿಗೆ ಓದು, ಬರಹಗಳೇ ಕೊನೆಯ ಆಶ್ರಯವೇನೋ…
 

blog
15 Jun 2025 ಚಿಯರ್‍ಸ್ ಜೇಪಿ!

ನಾಲ್ಕು ವರ್ಷಗಳ ಕೆಳಗೆ ಒಂದು ಡಿಸೆಂಬರ್ ಮಧ್ಯಾಹ್ನ ಫೋನಿನಲ್ಲಿ ಗೆಳೆಯ ಜೇಪಿಗೆ ‘ಚಿಯರ್‍ಸ್’ ಎಂದೆ. 

‘ಕಾರಣ?’ ಎಂದರು ಜೇಪಿ, ಅಲಿಯಾಸ್, ಬಂಜಗೆರೆ ಜಯಪ್ರಕಾಶ್.

‘ನಿಮ್ಮ ಪದ್ಯರೂಪಕಕ್ಕೆ ಕೊನೆಗೂ ‘ಮದ್ಯಮನ್ನಣೆ’ ಸಿಕ್ಕಿದೆ!’

‘ಆಂ?!’

‘ಒರಿಸ್ಸಾ ಸರ್ಕಾರ ’ಮಹೂವಾ’ ಪಾನೀಯವನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ!’

ಈ ಸುದ್ದಿ ‘ಮಹೂವಾ’ ಹೆಸರಿನ ಪದ್ಯ ಬರೆದು, ಅದೇ ಹೆಸರಿನ ಕವನ ಸಂಕಲನವನ್ನು ಪ್ರಕಟಿಸಿದ್ದ ಜೇಪಿಗೆ ಪುಳಕ ಹುಟ್ಟಿಸಿದ್ದು ಅಚ್ಚರಿಯಲ್ಲ! ಆ ಪುಳಕವನ್ನು ಕೆಲ ದಿನಗಳ ನಂತರ ಜೇಪಿಯ ಸಮಗ್ರ ಕಾವ್ಯಕ್ಕೆ ಬರೆದ ಮುನ್ನುಡಿಯ ಕೊನೆಯ ಭಾಗವಾಗಿಸಿದೆ: 

‘ಈಚೆಗೆ ಒರಿಸ್ಸಾ ಸರ್ಕಾರ ಬಸ್ತಾರ್ ಪ್ರದೇಶದ ಮಹೂವಾ ಹೂಗಳಿಂದ ತಯಾರಾಗುವ ಗುಡ್ಡಗಾಡಿನ ಆರೋಗ್ಯಕರ ಮದ್ಯವನ್ನು ಅಧಿಕೃತವಾಗಿ ಮಾರಾಟಕ್ಕೆ ಬಿಡುಗಡೆ ಮಾಡಿದ ಸುದ್ದಿ ಬಂದಿದೆ! ಮೂವತ್ತು ವರ್ಷಗಳ ಕೆಳಗೆ ‘ಮಹೂವಾ’ವನ್ನು ಕನ್ನಡ ಕಾವ್ಯದ ಚಿರಪರಿಚಿತವಾದ ಸುಂದರ ರೂಪಕವಾಗಿಸಿದ ಜೇಪಿಯ ಸಮಗ್ರ ಕಾವ್ಯಸಂಪುಟದ ಬಿಡುಗಡೆಯ ಸಂದರ್ಭದಲ್ಲೇ ಮಹೂವಾ ಪಾನೀಯದ ಬಿಡುಗಡೆಯ ಸುದ್ದಿಯನ್ನೂ ಕೇಳಿ ರೋಮಾಂಚನಗೊಂಡೆ. ಮಹೂವಾ ಹೂವಿನಿಂದ ತಯಾರಿಸಿದ ಗುಡ್ಡಗಾಡಿನ ಪಾನೀಯದ ಹಾಗೆಯೇ ಲೋಕದ ಸಂಘರ್ಷಗಳ ಒಡಲಿನಿಂದ ಸಹಜವಾಗಿ ಒಡಮೂಡಿರುವ ಜೇಪಿಯ ಒಟ್ಟು ಕಾವ್ಯದ ಆರೋಗ್ಯಕರ ಸಂಘರ್ಷ ಈ ತಲೆಮಾರುಗಳಲ್ಲೂ ಬೆಳೆಯಲಿ.’

ಈ ಸಮಗ್ರ ಕಾವ್ಯ ಸಂಪುಟ ಇನ್ನೂ ಪ್ರಕಾಶಕರ ಸರಳುಗಳಿಂದ ಬಿಡುಗಡೆಯಾಗಿಲ್ಲ. ಇದೆಲ್ಲ ಈಗ ನೆನಪಾಗಿದ್ದಕ್ಕೆ ಕಾರಣ: ಜೇಪಿಗೆ ತಕ್ಕಮಟ್ಟಿಗೆ ವಯಸ್ಸಾಗಿದೆಯೆಂದು ಹೆದರಿಸಲು  ಗೆಳೆಯರ ‘ಗೆಟ್ ಟುಗೆದರ್‍’ ಕುರಿತು ಕೃಷಿತಜ್ಞ ಸ್ವಾಮಿ ಆನಂದ್ ಅವರ ಬ್ರೇಕಿಂಗ್ ನಾಯ್ಸ್. ಮೊನ್ನೆ ತಾನೇ ಲೇಖಕ ಮಿತ್ರರೊಬ್ಬರೊಡನೆ ಮಾತಾಡುತ್ತಾ, ’ಜೇಪಿ ಅಸಲಿ ಬಂಡಾಯ ಕವಿ. ಅವರ ಕಾವ್ಯವನ್ನು ಬಂಡಾಯ ಮಾರ್ಗದವರು ಕೂಡ ಸೀರಿಯಸ್ಸಾಗಿ ಚರ್ಚಿಸಿದಂತಿಲ್ಲ’ ಎಂದು ನಾನು ಹೇಳಿದ್ದು ನೆನಪಾಯಿತು.

‘ಅವರು ಕವಿತೆ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಹೀಗಾಗಿ…’ ಎಂದರು ಆ ಲೇಖಕರು.

‘ಅವರು ಆ ಮಾರ್ಗದ ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸಿದ್ದು ಒಂದು ರೀತಿಯಲ್ಲಿ ಸರಿಯಿರಬಹುದು; ಯಾಕೆಂದರೆ, ಕೆಲವರು ತಮ್ಮ ಬಂಡಾಯ ಸಂವೇದನೆ ಬತ್ತಿ ಹೋಗಿ, ಸಹಜ ಪ್ರತಿಭಟನೆಯ ಸಾಮರ್ಥ್ಯ ಕುಂದಿದ ಮೇಲೆ ಅಂಥದೇ ಕವಿತೆಯನ್ನು ಏಳದಿದ್ದರೂ ಏಳಿಸಲು ಹೋಗಿ ಸೊರಗಿದ ಕಾವ್ಯ ಬರೆದಿದ್ದಾರೆ…’ಎನ್ನುತ್ತಾ ಸುಮ್ಮನಾದೆ.

ಸಮರ್ಥವಾದ ಕಾವ್ಯ ಬರೆಯುತ್ತಾ, ಕವಿ ಎನ್ನಿಸಿಕೊಳ್ಳುತ್ತಿದ್ದಾಗಲೇ ಜೇಪಿ ಸುಮ್ಮನಾಗಿದ್ದು; ಆಮೇಲೆ ಬೇರೆ ಬೇರೆ ಥರದ ಚಟುವಟಿಕೆ, ಭಾಷಣ, ಬರವಣಿಗೆ ಮಾಡಿದ್ದು ಅದೆಲ್ಲ ಅವರ ಪಾಡು… ಎಂದುಕೊಳ್ಳುತ್ತಿರುವಾಗ, ಇಪ್ಪತ್ತು ವರ್ಷಗಳ ಕೆಳಗೆ ಜೇಪಿಯ ಎಲ್ಲ ಕವಿತೆಗಳನ್ನೂ ಒಟ್ಟಿಗೆ ಓದಿದ ದಿನಗಳು ನೆನಪಾದವು.

ಅವತ್ತು ಜೆಪಿ ತಮ್ಮ ಎರಡುಮೂರು ಹಳೆಯ ಕವನ ಸಂಕಲನಗಳನ್ನು ಕೊಟ್ಟು, ‘ಇವನ್ನೆಲ್ಲ ಸೇರಿಸಿ, ಸಮಗ್ರ ಕವಿತೆಗಳನ್ನು ಪ್ರಕಟಿಸುತ್ತಿದ್ದೇನೆ; ನಿಮಗನ್ನಿಸಿದ್ದನ್ನು ಬರೆಯಿರಿ’ ಎಂದರು. ಅದು ಮುನ್ನುಡಿ ಬರೆಯಲು ನನಗೆ ಅಷ್ಟಿಷ್ಟು ವಿರಾಮದ ಸಮಯವಿದ್ದ ಕಾಲ ಕೂಡ. ಈಗ ಆ ಲಕ್ಷುರಿ ಇಲ್ಲ.

ಅವತ್ತು ಜೇಪಿಗೆ ಬರೆದ ಮುನ್ನುಡಿ ಅವರ ಸಂಕಲನದಲ್ಲಿ, ಅವರ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾದ ನಂತರ ಅವರ ಮತ್ತೊಂದು ಸಮಗ್ರ ಕಾವ್ಯ ಸಂಪುಟ ಬರುವ ಕಾಲ ಬಂತು. ಅದರಲ್ಲಿ ತೆಲುಗು, ಇಂಗ್ಲಿಷಿನಿಂದ ಜೇಪಿ ಕನ್ನಡಿಸಿದ್ದ ಕವಿತೆಗಳಿದ್ದವು; ಅವರ ಕವಿತೆಗಳಂತೇ ಇದ್ದ ಅವು ಕೂಡ ನನ್ನನ್ನು ಸೆಳೆದವು. ಆಗ ನನ್ನ ಹಳೆಯ ಮುನ್ನುಡಿಗೆ ಅವರ ಅನುವಾದಿತ ಕವಿತೆಗಳನ್ನು ಕುರಿತ ಮಾತುಗಳನ್ನೂ ಸೇರಿಸಿ ಕೊಟ್ಟೆ. ಈ ಮುನ್ನುಡಿ ಯಾಕೋ ಸೂರ್ಯನ ಬೆಳಕಿಗೆ ಬರುವಂತೆ ಕಾಣುತ್ತಿಲ್ಲ. ಹೀಗಾಗಿ ಈ ಟಿಪ್ಪಣಿಗಳ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ. ಅದರಲ್ಲೂ ಮುಖ್ಯವಾಗಿ, ಅವರ ಕವಿತೆಗಳನ್ನು ಓಟ್ಟಿಗೇ ಓದಿದಾಗ ನನ್ನ ಮೇಲೆ ಆದ ಪರಿಣಾಮ ಕುರಿತ ಒಂದು ಭಾಗ:

‘ಒಂದು ರಾತ್ರಿ ಜೇಪಿಯ ಈ ಕವಿತೆಗಳನ್ನು ಓದುತ್ತಾ ಹಾಗೇ ಮಲಗಿದ ನನಗೆ ಕಾಡು, ಕಾಡಿನ ವಿಚಿತ್ರ ಪ್ರತಿಮೆಗಳು, ಹಾಗೂ ಯಾರೋ ಬೆನ್ನಟ್ಟುವ, ಪರ್ಸಿಕ್ಯೂಷನ್ನಿನ ಭಾವಗಳು ಮತ್ತೆ ಮತ್ತೆ ಕನಸಿನಲ್ಲಿ ಕಾಣಿಸಿಕೊಳ್ಳತೊಡಗಿದವು. ಜೇಪಿಯ ಕಾವ್ಯದ ಭಿತ್ತಿಯಲ್ಲಿರುವ ಧೀರತೆ-ಅಧೀರತೆ, ಹೋರಾಟ-ಆತಂಕ ಮುಂತಾದ ಅವಳಿ ವೈರುಧ್ಯಗಳು ನನ್ನ ಸುಪ್ತ ಪ್ರಜ್ಞೆಗಿಳಿದು ಅವು ಕನಸಿನಲ್ಲಿ ಒಸರಿದಂತಿದ್ದವು; ಅವು ಹಾಗೆ ಕನಸಿನಲ್ಲಿ ಪ್ರಕಟವಾದ ರೀತಿ ಕಂಡು ಜೇಪಿಯ ಕಾವ್ಯದಲ್ಲಿರುವ ಅಥೆಂಟಿಕ್ ಅನುಭವದ ಶಕ್ತಿಯ ಅರಿವಾಗತೊಡಗಿತು. ಜೇಪಿ ರೀತಿಯಲ್ಲಿ ಹೋರಾಟದ ಹಾಗೂ ಚಳುವಳಿಯ ಅನುಭವವುಳ್ಳ ಹಾಗೂ ಈ ಅನುಭವವೇ ದಟ್ಟವಾದ ಸ್ಥಾಯಿ ಭಿತ್ತಿಯಾಗಿರುವ ಕಾವ್ಯ ಕನ್ನಡದಲ್ಲಿ ಹೆಚ್ಚು ಇದ್ದಂತಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದಲ್ಲಿ ಜೇಪಿ ರೀತಿಯ ಕವಿ ಇನ್ನೊಬ್ಬನಿದ್ದಂತಿಲ್ಲ.

ಹೀಗಿದ್ದೂ ಕೂಡ, ಬಂಡಾಯ ಮನೋಧರ್ಮವನ್ನು ತಾತ್ವಿಕ ನೆಲೆಯಲ್ಲಿ ಸ್ವೀಕರಿಸಿದ ‘ಪಾತ್ರಧಾರಿ’ ಕವಿಗಳೇ ಹೆಚ್ಚು ಕೇಂದ್ರ ರಂಗದಲ್ಲಿ ಕಾಣಿಸಿಕೊಂಡು, ಜೇಪಿಯಂಥ ನಿಜ ಬಂಡಾಯಗಾರನ ರಾಜಕೀಯ ಕಾವ್ಯ ಕೊಂಚ ಹಿನ್ನೆಲೆಗೆ ಸರಿದದ್ದು ವಿಚಿತ್ರವಾಗಿದೆ. ಜೇಪಿ ಕಾವ್ಯ ಕನ್ನಡ ಎಡಪಂಥೀಯ ಕಾವ್ಯದ ಬಹುಮುಖ್ಯ ಪ್ರಾತಿನಿಧಿಕ ರೂಪ ಎಂಬುದನ್ನು ಕನ್ನಡ ವಿಮರ್ಶೆ ಸರಿಯಾಗಿ ಗ್ರಹಿಸದಿರುವುದು ಕೂಡ ವಿಚಿತ್ರವಾಗಿದೆ. ಆಂಧ್ರದ ದೊಡ್ಡ ಹೋರಾಟಗಾರರಲ್ಲೊಬ್ಬರಾದ ವರವರರಾವ್ ಅವರು, ‘ಸಮಕಾಲೀನ ಕ್ರಾಂತಿಕಾರಿ ಕಾವ್ಯದಲ್ಲಿ ಭಾರತೀಯ ಭಾಷೆಗಳಲ್ಲಿ ಬಂದ ಹೊಸ ಮುನ್ನಡೆಗೆ, ತಿರುವಿಗೆ ಕನ್ನಡದಲ್ಲಿ ಈ ಕವಿ ಖಚಿತವಾಗಿ ಒಂದು ಸಂಕೇತ’ಎಂದು ಹೇಳಿರುವುದನ್ನು ಬಂಡಾಯ ವಿಮರ್ಶೆ ಕೂಡ ಸರಿಯಾಗಿ ಗಮನಿಸಿದಂತಿಲ್ಲ.’ ಜೇಪಿ ಕಾವ್ಯಕ್ಕೆ ಆಗ ಬರೆದ ಮುನ್ನುಡಿಗಳಲ್ಲಿ ಉಲ್ಲೇಖಿಸಿದ ಕವಿತೆಗಳ ಪ್ರತಿಮೆಗಳನ್ನು ಈಗ ಮತ್ತೆ ನೋಡಿದೆ. ಅವುಗಳಲ್ಲಿ ಕೆಲವು ಇವತ್ತೂ ಫ್ರೆಶ್ ಆಗಿ ಕಂಡವು. 

೨೦೧೭ರ ಸುಮಾರಿಗೆ ಜೇಪಿ ನನಗಾಗಿ ಕೆಲವು ಆಫ್ರಿಕನ್ ಕವಿತೆಗಳನ್ನು ಅನುವಾದಿಸಿದರು. ಆಗ ನಾನು ಕೇಶವ ಮಳಗಿ, ಗಂಗಾಧರಯ್ಯನವರ ಜೊತೆಗೂಡಿ ‘ಆಫ್ರಿಕನ್ ಸಾಹಿತ್ಯ’ ವಾಚಿಕೆ ಮಾಡುವಾಗ ಕವಿ, ಕವಯಿತ್ರಿಯರ ಸಂವೇದನೆಗೆ ಹತ್ತಿರವಿರುವ ಕವಿತೆಗಳನ್ನೇ ಆರಿಸಿ ಅನುವಾದಿಸಲು ಕೊಟ್ಟಿದ್ದೆ; ಅದು ನಿಜಕ್ಕೂ ಉತ್ತಮ ಫಲ ಕೊಟ್ಟಿತ್ತು. ಇದೀಗ ಮತ್ತೆ ‘ಆಫ್ರಿಕನ್ ಸಾಹಿತ್ಯ’ ವಾಚಿಕೆಯ ಮರುಮುದ್ರಣ ಕುವೆಂಪು ಭಾಷಾಭಾರತಿಯಿಂದ ಪ್ರಕಟವಾಗಿದೆ.  

ಪ್ರಾಯಶಃ ಈ ಆಫ್ರಿಕನ್ ಸಾಹಿತ್ಯ ವಾಚಿಕೆಯಲ್ಲಿರುವ ಅನುವಾದಗಳೇ ಜೇಪಿಯ ಇತ್ತೀಚಿನ ಕವಿತೆಗಳಿರಬಹುದು. ಜೇಪಿ ತೆಲುಗಿನ, ಇಂಗ್ಲಿಷಿನ ಇತರರ ಪದ್ಯಗಳನ್ನು ಕನ್ನಡಿಸಿದಾಗಲೂ ಅವು ಜೇಪಿಯ ಪದ್ಯಗಳೇ ಆಗಿ, ಅವೆಲ್ಲ ಅವರ ಸಮಗ್ರ ಕಾವ್ಯದ ಸಹಜ ಭಾಗವಾಗಿಬಿಟ್ಟಿವೆ. ಆಫ್ರಿಕನ್ ಕವಿ ಲೆನ್ರಿ ಪೀಟರ್‍ಸ್ ಬರೆದ ‘ಸೊವೆಟೋ, ಐ ನೋ ಯುವರ್ ಆಂಗ್ವಿಶ್’ ಪದ್ಯವನ್ನು ಜೇಪಿ, ‘ಸೋವೆಟೋ ನಿನ್ನ ಬೇಗುದಿ ನಂಗೊತ್ತು’ ಎಂದು ಕನ್ನಡಿಸಿದ್ದಾರೆ. ಆ ಪದ್ಯದ ಕೆಲವು  ಪ್ರತಿಮೆಗಳು: 

ಹಸಿ ಕಂದಗಳ ತಲೆಬುರುಡೆ 
ಛಿದ್ರಗೊಳಿಸುವ ತುಪಾಕಿ
ನನ್ನ ನಿದ್ದೆಯ ಚೂರುಚೂರಾಗಿಸುತ್ತೆ
ಅಲ್ಸೇಶಿಯನ್ ನಾಯಿಯ ಹಲ್ಲುಗಳು ನಾಟಿದ ಆಳಗಾಯ 

ನನ್ನ ಮಾಂಸಖಂಡದ ಆಳದಲ್ಲಿ. 
ಕಾಲುದಾರಿಗಳಲ್ಲಿ ಇಡಿಕಿರಿದ 
ವಿಷಾನಿಲಗಳ ನಾನು ಉಸಿರಾಡಲಾರೆ 

ಬಚಾವಾಗಲು ನಾನು ಹೊರಳಿ ವಿಲಿವಿಲಿ ಒದ್ದಾಡುವಾಗ
ಪೊಲೀಸರ ತುಕಡಿ ನನ್ನ ತಲೆಬುರುಡೆಯನ್ನು
ಒಡೆದ ಮೊಟ್ಟೆಯ ಚಿಪ್ಪಿನಂತಾಗಿಸುತ್ತೆ.

ದಕ್ಷಿಣ ಆಫ್ರಿಕಾದ ಸೊವೆಟೋ ಪಟ್ಟಣದಲ್ಲಿ ಶಾಲೆಗಳಲ್ಲಿ ವರ್ಣಭೇದ ನೀತಿಯ ಭಾಗವಾಗಿ ಬಿಳಿಯರ ಸರ್ಕಾರ ೧೯೭೬ರಲ್ಲಿ ‘ಆಫ್ರಿಕಾನ್’ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಹೇರಿತು. ಇದರ ವಿರುದ್ಧ ೧೯೭೬ರ ಜೂನ್ ೧೬ರಂದು ಸೊವೆಟೋದ ೨೦೦೦೦ ಕಪ್ಪು ಆಫ್ರಿಕನ್ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರು.  ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿಳಿಯರ ಸರ್ಕಾರದ ಪೊಲೀಸರ ಬರ್ಬರ ಹಿಂಸೆ ಚೆಲ್ಲಾಡಿತು. ೧೭೬ ಜನ ಸಾವನ್ನಪ್ಪಿದ್ದರು ಎಂದು ಅಧಿಕೃತ ಅಂಕಿ ಅಂಶ ಹೇಳುತ್ತದೆ; ಆದರೆ ೭೦೦ಕ್ಕೂ ಹೆಚ್ಚು ಜನ ಸತ್ತು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡರು ಎಂದು ಒಂದು ಅಂದಾಜು ಹೇಳುತ್ತದೆ. 

ಈ ಹಿಂಸೆಯಲ್ಲಿ ತೀರಿಕೊಂಡ ಹೆಕ್ಟರ್ ಪೀಟರ್ಸನ್ ಎಂಬ ಹುಡುಗನ ಗಾಯಗೊಂಡ ದೇಹವನ್ನು ಮಬುಸಿಯಾ ಮಾಖುಬೋ ಎಂಬ ಹುಡುಗ ಆಸ್ಪತ್ರೆಗೆ ಒಯ್ದ. ಹೆಕ್ಟರ್ ತಂಗಿ ಆಂಟೊನಿಟ್ ಸಿಥೋಲೆ ಕೂಡ ಅವನ ಜೊತೆಗಿದ್ದಳು. ಆಸ್ಪತ್ರೆ ತಲುಪುವ ಹೊತ್ತಿಗೆ ಹೆಕ್ಟರ್ ತೀರಿಕೊಂಡಿದ್ದ. ಹಾದಿಯಲ್ಲಿ ಸ್ಯಾಮ್ ನಝಿಮಾ ತೆಗೆದ ಈ ಫೋಟೋ ಸೊವೆಟೋ   ದಂಗೆಯ ಮೂಲ ಚಿತ್ರವಾಯಿತು; ಜಗತ್ತಿನಾದ್ಯಂತ ಪ್ರಕಟಗೊಂಡು ಜನರು ವರ್ಣಭೇದ ನೀತಿಯ ವಿರುದ್ಧ ಕೆರಳುವಂತೆ ಮಾಡಿತು. ಸ್ವತಂತ್ರ ಆಫ್ರಿಕಾದ ಪ್ರಥಮ ಅಧ್ಯಕ್ಷರಾದ ನೆಲ್ಸನ್ ಮಂಡೇಲ ಸೊವೆಟೋದಲ್ಲಿ ಹೆಕ್ಟರ್ ಗೆ ಗುಂಡೇಟು ಬಿದ್ದ ಸ್ಥಳದ ಬಳಿ ೧೯೯೨ರಲ್ಲಿ ಹೆಕ್ಟರ್ ಮೆಮೋರಿಯಲ್ ಉದ್ಘಾಟಿಸಿದರು. ಅದರ ಪಕ್ಕದಲ್ಲೇ ೨೦೦೨ರಲ್ಲಿ ಹೆಕ್ಟರ್ ಪಿಯರ್ಸನ್ ಮ್ಯೂಸಿಯಂ ಕೂಡ ಶುರುವಾಯಿತು. 

ಸೊವೆಟೋ ಪಟ್ಟಣವನ್ನೇ ಒಂದು ಪಾತ್ರವನ್ನಾಗಿಸಿ, ೧೯೭೬ರ ಸೊವೆಟೋ ದಂಗೆಯನ್ನು ವಸಾಹತು ಹಿಂಸೆಯ ವಿಶಾಲ ರೂಪಕವಾಗಿಸಿ, ಲೆನ್ರಿ ಪೀಟರ್‍ಸ್ ಬರೆದ ‘ಸೊವೆಟೋ, ಐ ನೋ ಯುವರ್ ಆಂಗ್ವಿಶ್’. ಪದ್ಯವನ್ನು ಓದಿ, ಕನ್ನಡಿಸುವ ಮೂವತ್ತಾರು ವರ್ಷಗಳ ಮೊದಲೇ ಜೇಪಿ ‘ಎನ್ಕೊಸೆ ಸಿಕಲೆಲೆ ಆಫ್ರಿಕಾ’ (‘ದೇವರೇ ಆಫ್ರಿಕಾಕ್ಕೆ ಒಳ್ಳೆಯದು ಮಾಡು’) ಕವಿತೆ ಬರೆದಿದ್ದರು. ಅದೇ ಸುಮಾರಿಗೆ ಇಂಡಿಯಾದ ಪೊಲೀಸ್ ಕ್ರೌರ್ಯದ ಚಿತ್ರಗಳನ್ನು ತಮ್ಮ ಕವಿತೆಗಳಲ್ಲಿ ಬಿಚ್ಚಿಟ್ಟಿದ್ದರು:

‘ಬೂಟು ಕಾಲೊದೆತಕ್ಕೆ 
ಚೆಲ್ಲಾಪಿಲ್ಲಿ ಬಿದ್ದ
ಅನ್ನದ ಅಗುಳಿನಂತೆ ನಕ್ಷತ್ರ’ 
 
‘ಹೀಗೆ ಮನಸು 
ಕರ್ಫ್ಯೂ ವಿಧಿಸಿದ ಬೀದಿ.’

‘ಆಗಸದ ಲಾಕಪ್‌ನಲ್ಲಿ ಚಂದ್ರ ಬಂದಿ; 
ಮುಖ ತುಂಬ ಬಾಸುಂಡೆ’ 

ಇವು ಕೂಡ ಲೆನ್ರಿ ಪೀಟರ್‍ಸ್ ಕವಿತೆಯ ಆಫ್ರಿಕನ್ ಅನುಭವದ ಪ್ರತಿಮೆಗಳಂತೆಯೇ ಇವೆ.  ಎಷ್ಟೋ ಸಲ ಲೇಖಕ, ಲೇಖಕಿಯರು ತಂತಮ್ಮ ಮನಸ್ಥಿತಿಗೆ ಒಗ್ಗುವುದನ್ನೇ ಅನುವಾದ ಮಾಡಿದಾಗ ಕೂಡ ಅಕಸ್ಮಾತ್ ಹಿಂಜರಿದಿರುವ ಅವರ ಕ್ರಿಯೇಟಿವಿಟಿ ಮರಳಬಲ್ಲದು; ಕುಂದಿರುವ ಸೃಜನಶೀಲ ಶಕ್ತಿ ಹಠಾತ್ತನೆ ಒಲಿದು ಬರಬಲ್ಲದು. ಎಪ್ಪತ್ತರ ದಶಕದ ತಮ್ಮ ಆಳದ ತಲ್ಲಣಗಳಿಗೆ ಹತ್ತಿರವಿದ್ದ ಬೋದಿಲೇರ್ ಕಾವ್ಯವನ್ನು ಕನ್ನಡದಲ್ಲಿ ತೀವ್ರವಾಗಿ ಮರುಸೃಷ್ಟಿಸಿ ಲೇಖಕ ಲಂಕೇಶರು ರಿವೈವ್ ಆದದ್ದು, ಆ ತೀವ್ರತೆ ಅವರನ್ನು ಕೊನೆವರೆಗೂ ಬಿಡದೆ ಹಿಡಿದಿದ್ದು ನೆನಪಾಗುತ್ತದೆ. ಇದು ಎಂಟು ವರ್ಷಗಳ ಕೆಳಗೆ ಆಫ್ರಿಕನ್ ಕವಿತೆಗಳನ್ನು ಅನುವಾದಿಸಿದಾಗ ಜೇಪಿಯಲ್ಲೂ ಒಂದು ಮಟ್ಟದಲ್ಲಿ ಆದಂತಿದೆ.

ಅಸಲಿ ಕವಿಯೊಬ್ಬನಿಗೆ ಕಾವ್ಯ ಪ್ರಕಾರವೇ ಕೈ ಕೊಟ್ಟರೆ, ಅಥವಾ ಕವಿತೆಯನ್ನು ಕವಿಯೇ ಕೈಬಿಟ್ಟರೆ, ಅದು ಕವಿಗೂ, ಸಂಸ್ಕೃತಿಗೂ ಒಂಥರದ ನಷ್ಟವೇ. ಆದರೆ ಯಾವುದೇ ಲೇಖಕನಿಗೆ ಬರೆಯುವ, ಬರೆಯಲಾಗದ ಘಟ್ಟಗಳು ಇದ್ದೇ ಇರುತ್ತವೆ. ಅತಿಯಾದ ಸಾರ್ವಜನಿಕ ಮಾತು, ನಮ್ಮ ಸಂವೇದನೆಗೆ, ಒಳವ್ಯಕ್ತಿತ್ವಕ್ಕೆ ಹೊರತಾದ ಭಾಷಣಗಳು ಕೂಡ ಬರವಣಿಗೆಗೆ ಅಡ್ಡಿಯೇ. ಇಂಥ ಗಳಿಗೆಗಳಲ್ಲಿ ಮಾತು-ಬರಹ ಎರಡನ್ನೂ ಒಂದೇ ಕೇಂದ್ರದಿಂದ ನಿರ್ವಹಿಸುತ್ತಾ, ಎರಡರಲ್ಲೂ ಒಂದೇ ತೂಕ, ಆಳ, ಜವಾಬ್ದಾರಿಗಳನ್ನು ಇರಿಸಿಕೊಂಡ ಅಂಬೇಡ್ಕರ್, ಲೋಹಿಯಾ ಮಾದರಿಗಳು ನಮ್ಮ ನಿತ್ಯದ ಪ್ರೇರಣೆಗಳಾಗಬೇಕು.  
ಬರವಣಿಗೆಯ ಕಾಲ, ಬರೆಯದ ಕಾಲ – ಈ ಎರಡೂ ಕಾಲದಲ್ಲೂ ಅಸಲಿ ಲೇಖಕ ಅಥವಾ ಲೇಖಕಿ ಬರೆಯುತ್ತಲೇ ಇರಬೇಕಾಗುತ್ತದೆ. ಅದು ಅವರಿಗೆ ಗಾಳಿ, ಉಸಿರು, ಆಹಾರದ ಹಾಗೆ! ಕೆಲ ಬಗೆಯ ಸಡಗರ, ಸಂಭ್ರಮಗಳು ಕೂಡ ಬರೆವವರಲ್ಲಿ ಹೊಸ ಸೃಜನಶೀಲ ಎನರ್ಜಿ ಉಕ್ಕಿಸಬಲ್ಲವು. ಅದು ಗೆಳೆಯ ಜೇಪಿಗೂ ಆಗುವಂತಾಗಲಿ. ಚಿಯರ್‍ಸ್!

blog
08 Jun 2025 ಸ್ವಂತದ ಬಗ್ಗೆ ಬರೆಯುವುದು

ಸ್ವಂತದ ಬಗ್ಗೆ ಬರೆಯುವುದು ಕಷ್ಟ ಎನ್ನುವುದು ನನ್ನ ಅನುಭವ. ಆದ್ದರಿಂದಲೋ ಏನೋ, ಸಣ್ಣ ಸಣ್ಣ ವಯಸ್ಸಿನಲ್ಲೇ ಆತ್ಮಚರಿತ್ರೆ ಬರೆದು ಪ್ರಕಟಿಸುವವರನ್ನು ಕಂಡು ವಿಸ್ಮಯವಾಗುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಸಲೀಸಾಗಿ ವಿಮರ್ಶೆ, ಪ್ರತಿಕ್ರಿಯೆ ಬರೆಯುವವರ ಬಗೆಗೂ ಅಷ್ಟೇ ಅಚ್ಚರಿಯಾಗುತ್ತದೆ. ಕಾರಣ: ಎಷ್ಟೋ ಸಲ ಇನ್ನೊಬ್ಬರ ಆತ್ಮಚರಿತ್ರೆಯ ಬಗ್ಗೆ ವಿಮರ್ಶೆ ಬರೆಯುವವರು ತಮ್ಮ ಆತ್ಮಚರಿತ್ರೆ ಬರೆಯಲು ಶುರು ಮಾಡಿರುತ್ತಾರೆ! ಆತ್ಮಚರಿತ್ರಾತ್ಮಕ ಬರವಣಿಗೆಗಳನ್ನು ಕುರಿತು ಮಾತಾಡುವವರ ವೈಖರಿ, ಅವುಗಳಿಗೆ ಪ್ರತಿಕ್ರಿಯಿಸುವವರ ಭಾಷೆ, ಧೋರಣೆ ಒಮ್ಮೊಮ್ಮೆ ನಗೆ ಉಕ್ಕಿಸುವಂತಿರುತ್ತದೆ. 

ಅಂಥದೊಂದು ಪ್ರಸಂಗ: 

ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ತೀರಿಕೊಂಡ ನಂತರ ಅವರ ಪತ್ನಿ ತಮ್ಮ ಪತಿಯನ್ನು ಕುರಿತ ನೆನಪುಗಳ ಪುಸ್ತಕವನ್ನು ಬರೆದು ಪ್ರಕಟಿಸಿದರು. ಆಗ ಈ ಪುಸ್ತಕವನ್ನು ಪತ್ರಿಕೆಯೊಂದರಲ್ಲಿ ಪರಿಚಯಿಸಿದ್ದ ಲೇಖಕರೊಬ್ಬರು, ಕಳೆದ ವರ್ಷ ತೀರಿಕೊಂಡ ಮತ್ತೊಬ್ಬ ಲೇಖಕ 'ಚಂದ್ರಕೀರ್ತಿ’ಯವರ ಪತ್ನಿಗೆ ಒಂದು ಉಚಿತ ಸುಪಾರಿ ಸಲಹೆ ಕೊಟ್ಟರು: 'ನೀವು ನಿಮ್ಮ ನೆನಪುಗಳನ್ನು ಬರೆಯಿರಿ; ಆಗ 'ಚಂದ್ರಕೀರ್ತಿ’ಯವರ ಬಗ್ಗೆ ನಾವು ಈವರೆಗೆ ಕಾಣದಿರುವ ಮುಖಗಳು ಕಾಣುತ್ತವೆ.’ 

ಈ ಸಲಹೆ ಓದಿದಾಗ ನನಗೂ ಒಂದು ಸಲಹೆ ಕೊಡಬೇಕೆನ್ನಿಸಿತು: ಈ ಥರದ ಉಚಿತಾನುಚಿತ ಸಲಹೆ ಕೊಟ್ಟಿರುವ ಸದರಿ ಲೇಖಕ ತನ್ನ ಸ್ವಂತ ಪತ್ನಿಗೆ ಈಗಲೇ ಸುಪಾರಿ ಕೊಟ್ಟು, ಸ್ವತಃ ತಾನು ’ಕಾಣದ’ ಮುಖಗಳನ್ನು ಬರೆಯಲು ಕೇಳಿಕೊಳ್ಳುವುದು ಒಳ್ಳೆಯದಲ್ಲವೆ! ತನ್ಮೂಲಕ ಈ ಲೇಖಕ ತಾನು ಕಾಣದ ತನ್ನ ಅಗೋಚರ ವ್ಯಕ್ತಿತ್ವವನ್ನು ತನ್ನ ಪತ್ನಿಯ ಮೂಲಕ ಕಂಡುಕೊಂಡು ಬದುಕಿದ್ದಾಗಲೇ ಆನಂದಪಡುವುದು ಅಥವಾ ದುಃಖಪಡುವುದು ಲಾಭಕರವಲ್ಲವೆ! 

ಲೇಖಕಿ ಅಥವಾ ಲೇಖಕ ತನ್ನ ಸ್ವಂತವನ್ನು ಅಥವಾ ಸೆಲ್ಫ್ ಅನ್ನು ಶೋಧಿಸಿಕೊಂಡು ಬರೆಯುವ ‘ಆಟೋಬಯಾಗ್ರಫಿ’ ಪ್ರಕಾರ ಇಂಗ್ಲಿಷಿನಿಂದ ಭಾರತೀಯ ಭಾಷೆಗಳಿಗೆ ಬಂತೋ ಅಥವಾ ಮೊಘಲ್ ದೊರೆ ಬಾಬರ್ ಬರೆದ 'ಬಾಬರ್ ನಾಮಾ’ ಥರದ ಬರವಣಿಗೆಗಳಿಂದ ಭಾರತೀಯರಿಗೆ ಹೆಚ್ಚು ಪರಿಚಿತವಾಯಿತೋ ಹೇಳುವುದು ಕಷ್ಟ. ತೊಂಬತ್ತು ಪುಟಗಳ 'ಬಾಬರ್ ನಾಮಾ’ ಕುರಿತು ಲಂಕೇಶರು ೧೯೯೧ರಲ್ಲಿ ಬರೆದ ’ಬಾಬರ್’ ಎಂಬ ಟೀಕೆ ಟಿಪ್ಪಣಿ ಓದಿದಾಗ  'ಬಾಬರ್ ನಾಮಾ’ ಭಾರತದ ಆತ್ಮಚರಿತ್ರೆಯ ಆರಂಭದ ಮುಖ್ಯ ಮಾದರಿಯಂತೆ ಕಂಡಿತ್ತು. ಈ ಟೀಕೆಟಿಪ್ಪಣಿಯನ್ನು ಗೆಳೆಯ ರಿಷಿಕೇಶ್ ಬಹದ್ದೂರ್ ’ದ ಸೋರ್ ಮ್ಯಾಂಗೋ ಟ್ರೀ’ ಸಂಕಲನಕ್ಕಾಗಿ ಇಂಗ್ಲಿಷಿಗೆ ಅನುವಾದಿಸಿದಾಗ ಆತ್ಮಚರಿತ್ರೆಯ ಪ್ರಾಮಾಣಿಕ ಬರವಣಿಗೆ ಬಾಬರ್ ಗೆ ಸಹಜವಾಗಿ ಒಗ್ಗಿರುವುದನ್ನು ಮತ್ತೆ ಗಮನಿಸಿದೆ. ಆತ್ಮಚರಿತ್ರೆಯ ಪ್ರಕಾರ ಬಾಬರ್ ಗೆ ಒಲಿದಿರುವ ರೀತಿಯನ್ನು ಕನ್ನಡ ಜಾಣಜಾಣೆಯರಿಗೆ ತೋರಿಸಿದ ಲಂಕೇಶರ ಟೀಕೆ ಟಿಪ್ಪಣಿಯ ಶಕ್ತಿ ಕೂಡ ಅಷ್ಟೇ ಮಹತ್ವದ್ದು ಎನ್ನಿಸಿತು. 

ಇದಾದ ಕೆಲವು ವರ್ಷಗಳ ನಂತರ, ೧೯೯೭ರಲ್ಲಿ ಲಂಕೇಶ್ 'ಹುಳಿಮಾವಿನ ಮರ’ ಆತ್ಮಕತೆ ಬರೆದರು. ಇಂಗ್ಲಿಷಿನ ’ಆಟೋಬಯಾಗ್ರಫಿ’ ಪ್ರಕಾರ ಸೃಷ್ಟಿಸಿದ ಮಾದರಿಗೆ ಅತ್ಯಂತ ಹತ್ತಿರವಿರುವ ಕನ್ನಡ ಆತ್ಮಚರಿತ್ರೆಯೆಂದರೆ 'ಹುಳಿಮಾವಿನ ಮರ’ ಎಂದು ನನಗೆ ಇವತ್ತಿಗೂ ಅನ್ನಿಸುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಈಚಿನ ಪ್ರತಿಕ್ರಿಯೆಯೊಂದನ್ನು ನೋಡುತ್ತಿದ್ದಾಗ, ಲಂಕೇಶರ ಆತ್ಮಚರಿತ್ರೆ ಪ್ರಕಟವಾದಾಗ ಕೇಳಿಬಂದ ಕೆಲವು ಗೊಣಗುಗಳು ನೆನಪಾದವು: 

ಲಂಕೇಶರ ಆತ್ಮಚರಿತ್ರೆಯಲ್ಲಿ 'ನನ್ನ ಹೆಸರಿಲ್ಲ’; 'ನಾನು ಲಂಕೇಶ್‌ಗೆ ಅಷ್ಟು ಹತ್ತಿರವಾಗಿದ್ದೆ, ನನ್ನ ಬಗ್ಗೆ ಬರೆದಿಲ್ಲ’; 'ನಾನು ಲಂಕೇಶ್‌ಗೆ ಬ್ಯಾಂಕಿನಲ್ಲಿ ಸಾಲ ಕೊಡಿಸಿದ್ದೆ. ಅದರ ಬಗ್ಗೆ ಲಂಕೇಶ್ ಬರೆದೇ ಇಲ್ಲ…’ ಇತ್ಯಾದಿಯಾಗಿ ಕೆಲವರು ಗೊಣಗಿದ್ದರು. ಆ ಕಾಲದಲ್ಲಿ ನಾನು ಬರೆದ 'ಆತ್ಮಚರಿತ್ರೆಯ ಆತ್ಮ’ ಎಂಬ ಟಿಪ್ಪಣಿಯೊಂದರಲ್ಲಿ ಇಂಥ ಪ್ರತಿಕ್ರಿಯೆಗಳನ್ನು ಕುರಿತು ಪ್ರತಿಕ್ರಿಯೆ ಬರೆದ ನೆನಪು: ಆತ್ಮಚರಿತ್ರೆ ಬರೆದವರ ಆತ್ಮಕ್ಕೆ ಹತ್ತಿರವಾಗಿರುವ ಸಂಗತಿಗಳು ಮಾತ್ರ ಅವರ ಆತ್ಮಚರಿತ್ರೆಯಲ್ಲಿ ಬರುತ್ತವೆ; ನೀವು ಲೇಖಕನೊಬ್ಬನ ಆತ್ಮಕ್ಕೆ ತಲುಪಿಯೇ ಇಲ್ಲ ಎಂದರೆ, ಅವನ ಆತ್ಮಚರಿತ್ರೆಯಲ್ಲಿ ನೀವು ಬರುವ ಸಂಭವವೇ ಇರುವುದಿಲ್ಲ, ಅಲ್ಲವೆ?

ಮೊನ್ನೆ ಗೆಳೆಯನೊಬ್ಬ ತನ್ನ ವಾರಿಗೆಯ ಲೇಖಕನೊಬ್ಬ ಬರೆದ ಆತ್ಮಚರಿತ್ರೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ನೋಡಿದಾಗ ಲಂಕೇಶರ 'ಹುಳಿಮಾವಿನ ಮರ’ದ ಬಗ್ಗೆ ನಾನು ಬರೆದ ಆ ಟಿಪ್ಪಣಿ ಮತ್ತೆ ಮನಸ್ಸಿಗೆ ಬಂತು. ಈ ಗೆಳೆಯನ ಹೆಸರು 'ರಾಜು’ ಎಂದಿಟ್ಟುಕೊಳ್ಳೋಣ. ಅವತ್ತು ರಾಜು ಚರ್ಚಿಸುತ್ತಿದ್ದ ಆತ್ಮಚರಿತ್ರೆಯನ್ನು ಬರೆದಿದ್ದ ಲೇಖಕ ಹುಬ್ಬಳ್ಳಿಯಲ್ಲಿದ್ದ; ರಾಜು ಕೂಡ ಆಗ ಹುಬ್ಬಳ್ಳಿಯಲ್ಲಿದ್ದ.  ಇಬ್ಬರೂ ಪರಿಚಿತರು. ಆದರೆ ಸದರಿ ಲೇಖಕ ಹುಬ್ಬಳ್ಳಿಯಲ್ಲಿದ್ದ ಕಾಲವನ್ನು ಕುರಿತು ಬರೆದದ್ದರಲ್ಲಿ ರಾಜುವಿಗೆ ಕೆಲವು ದೋಷಗಳು ಕಾಣಿಸಿದವು: ಉದಾಹರಣೆಗೆ, ಐದು ವರ್ಷ ತನ್ನನ್ನು ಸಾಕಿದ್ದ ಹುಬ್ಬಳ್ಳಿಯ ಬಗ್ಗೆ ಈತ ಎರಡೇ ಎರಡು ಪ್ಯಾರಾ ಮಾತ್ರ ಬರೆದಿದ್ದಾನೆ. ತನಗೆ ಕೆಲಸ ಕೊಡಿಸಲು ನೆರವಾದ 'ಪುಟ್ಟಪ್ಪ’ ಹಾಗೂ 'ಚಂದ್ರಪ್ಪ’ನವರ ಬಗ್ಗೆ ಅವನ ಆತ್ಮಚರಿತ್ರೆಯಲ್ಲಿ ಒಂದು ಕೃತಜ್ಞತೆಯ ಸಾಲು ಕೂಡ ಇಲ್ಲ… ಇತ್ಯಾದಿ. 

ಬರೆವ ವ್ಯಕ್ತಿಯ ಆತ್ಮವನ್ನು ಸೋಕದ ವಿಚಾರಗಳು ಆತನ ಆತ್ಮಚರಿತ್ರೆಯಲ್ಲಿ, ಅದರಲ್ಲೂ ಅದನ್ನು ಬರೆಯುವ ಕಾಲದಲ್ಲಿ, ಬರಬೇಕಾಗಿತ್ತೆಂದು ಇತರರು ಹುಡುಕುವುದರಲ್ಲಿ ಅರ್ಥವೇನಿದೆ ಎಂಬ ಪ್ರಶ್ನೆ ಈಗ ಮತ್ತೆ ಎದುರಾಯಿತು. ಹಿಂದೊಮ್ಮೆ ವಿ.ಎಸ್. ನಯಪಾಲ್ ಎಂ.ಕೆ. ಗಾಂಧಿಯವರ ಆತ್ಮಚರಿತ್ರೆ 'ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರೂತ್’ ಆರ್ 'ದ ಸ್ಟೋರಿ ಆಫ್ ಮೈ ಲೈಫ್’ ಕುರಿತು ಎತ್ತಿದ ಪ್ರಶ್ನೆಗಳ ಸಂದರ್ಭದಲ್ಲೂ ಹೀಗೆನ್ನಿಸಿತ್ತು. ಮೋಹನದಾಸ್ ಕರಮಚಂದ ಗಾಂಧಿ ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಪ್ರತಿ ವಾರ 'ನವಜೀವನ’ ಪತ್ರಿಕೆಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಆತ್ಮಚರಿತ್ರೆಯಲ್ಲಿ ಸರಳ ಹಾಗೂ ಸತ್ಯದ ಬರವಣಿಗೆಯ ಮಾದರಿಯನ್ನು ಸೃಷ್ಟಿಸಿದರು. ಯಾರಾದರೂ ಬರವಣಿಗೆ ಕಲಿಯಲು ಇದು ಒಳ್ಳೆಯ ಆರಂಭದ ಮಾಡೆಲ್ ಕೂಡ.

ಆದರೆ ಮುಂದೆ ನಯಪಾಲ್‌ಗೆ ಈ ಆತ್ಮಚರಿತ್ರೆಯಲ್ಲಿ ಒಂದು ಮುಖ್ಯ ದೋಷ ಕಂಡಿತು: ಎಷ್ಟೋ ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದ ಗಾಂಧಿ ಅಲ್ಲಿನ ಲ್ಯಾಂಡ್‌ಸ್ಕೇಪ್‌ಗಳ ಬಗ್ಗೆ ಒಂದು ಸಾಲನ್ನೂ ಬರೆದಿಲ್ಲ; ಅವರು ಅಷ್ಟೊಂದು ತಮ್ಮೊಳಗೇ ಹೂತು ಹೋಗಿದ್ದರು ಎಂಬರ್ಥದ ಮಾತುಗಳನ್ನು ನಯಪಾಲ್ ತಮ್ಮ ‘ಇಂಡಿಯಾ: ಎ ವೂಂಡೆಡ್ ಸಿವಿಲೈಸೇಶನ್’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ಓದಿದಾಗ, ‘ಅರೆ! ಮೋಹನದಾಸ ಕರಮಚಂದ ಗಾಂಧಿ ತನ್ನನ್ನು ತಾನು ಕಂಡುಕೊಳ್ಳಲು, ತಾನು ಯಾರು ಎಂಬುದನ್ನು ಹುಡುಕಿಕೊಳ್ಳಲು ಈ ಆತ್ಮಚರಿತ್ರೆ ಬರೆದಿದ್ದಾರೆ; ಆದರೆ ಅಂಥ ದೊಡ್ಡ ಲೇಖಕ ನಯಪಾಲ್‌ಗೆ- ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಈ ಕೆರಿಬಿಯನ್ ಲೇಖಕನಿಗೆ- ಕೂಡ ಆತ್ಮಚರಿತ್ರೆಯ ಬರವಣಿಗೆಯ ಸೂಕ್ಷ್ಮಗಳು ಹೊಳೆಯಲಿಲ್ಲವಲ್ಲ!’ ಎಂದು ಸೋಜಿಗವಾಯಿತು.  ತನ್ನ ವ್ಯಕ್ತಿತ್ವದ 'ಇನ್ ಸ್ಕೇಪ್' ಹುಡುಕುತ್ತಿದ್ದ ಲೇಖಕನಿಗೆ ಹೊರಗಿನ ಲ್ಯಾಂಡ್‌ಸ್ಕೇಪ್ ಅಷ್ಟು ಮುಖ್ಯ ಅನ್ನಿಸದಿದ್ದರೆ ಅದು ಸಹಜವೇ!

ಅದೇನೇ ಇರಲಿ, ಲೇಖಕ, ಲೇಖಕಿಯರು ಬರವಣಿಗೆಯ ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಮಾತಾಡಿದಾಗ ನಾನು ಕೊಡುವ ಸಲಹೆ: 'ಬರೇ ಪ್ರಾಕ್ಟೀಸಿಗಾದರೂ ಪರವಾಗಿಲ್ಲ; ನಿಮ್ಮ ಅನುಭವದ ವಿವರಗಳನ್ನೇ ಬರೆಯಲು ಪ್ರಯತ್ನಿಸಿ. ಅದನ್ನೆಲ್ಲ ಪ್ರಕಟಿಸದಿದ್ದರೂ ಪರವಾಯಿಲ್ಲ.’ ಯಾಕೆಂದರೆ, ಸ್ವಂತದ ಬಗ್ಗೆ ಬರೆಯತೊಡಗಿದಾಗ ನೆನಪುಗಳು ಉಕ್ಕಿ ಹರಿದು ಬಂದು- ಅಥವಾ ಕವಿ ವರ್ಡ್ಸ್‌ವರ್ತ್ ಹೇಳುವಂತೆ ’ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಆಗಿ- ನಮ್ಮ ಕೈ ಬರವಣಿಗೆಗೆ ಕುದುರಿಕೊಳ್ಳತೊಡಗುತ್ತದೆ.  ತುಂಬಾಡಿ ರಾಮಯ್ಯನವರು ಒಂದು ಕಾಲದಲ್ಲಿ ಇದ್ದಕ್ಕಿದ್ದಂತೆ ತಮ್ಮ ಅನುಭವದ ಬಗ್ಗೆ ಗೆಳೆಯರೊಡನೆ ಮಾತಾಡುತ್ತಲೇ ಬರವಣಿಗೆಗೆ ಕುದುರಿಕೊಂಡಿದ್ದು ಹೀಗೇ ಎಂಬುದನ್ನು ಗಮನಿಸಿದ್ದೇನೆ.  

ರಾಮಯ್ಯನವರ 'ಮಣೆಗಾರ’ ಆತ್ಮಕತೆಯ ಆರಂಭದ ಪ್ರಯತ್ನ, ಆವರೆಗೆ ’ಸಾಹಿತ್ಯ’ ಎನ್ನುವುದನ್ನು ಎಂದೂ ಬರೆಯದೇ ಇದ್ದ ಅಧಿಕಾರಿಯೊಬ್ಬ ಆತ್ಮಕತೆಯ ಮೂಲಕವೇ ಲೇಖಕನಾದ ಪರಿಯನ್ನೂ ಹೇಳುತ್ತದೆ. ಆತ್ಮಚರಿತ್ರೆ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಆದ್ದರಿಂದಲೇ ಬರೆಯಲು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹುಟ್ಟಬಹುದು ಎಂದು ನಾನು ಹೇಳಿದ್ದು. ಗೆಳೆಯರೊಬ್ಬರಿಗೆ ಮರೆವಿನ ಕಾಯಿಲೆ ಬಂದಾಗ ನಾನು ಅವರಿಗೆ ಕೊಟ್ಟ ಸಲಹೆ ಕೂಡ ಇದೇ. ಅವರು ಈ ನಿಟ್ಟಿನಲ್ಲಿ ಒಂಚೂರು ಪ್ರಯತ್ನ ಮಾಡಿದಾಗ ಅವರ ನೆನಪು ಅಷ್ಟಿಷ್ಟು ಮರಳಿ ಬಂದದ್ದೂ ಇದೆ. 

ಬರೆಯಲು ಆಗುತ್ತಿಲ್ಲ ಎಂದು ಚಡಪಡಿಸುವವರು ಸ್ವಂತದ ಬಗ್ಗೆ ಬರೆಯುವ ನಿಷ್ಠುರ ಸವಾಲನ್ನು ಕೈಗೆತ್ತಿಕೊಂಡರೆ ಬರವಣಿಗೆ ಕೇವಲ ಚಿಮ್ಮುವುದಷ್ಟೇ ಅಲ್ಲ, ಅದು ಪ್ರಾಮಾಣಿಕವಾಗಿಯೂ ಚಿಮ್ಮತ್ತಿದೆಯೋ ಎಂದು ಸ್ವ-ಪರೀಕ್ಷೆ ಮಾಡಿಕೊಳ್ಳುವ ಅವಕಾಶ ಕೂಡ ಸೃಷ್ಟಿಯಾಗಬಹುದು. ಬರವಣಿಗೆಯ ಸುಳ್ಳು, ನಿಜಗಳ ಪರೀಕ್ಷೆ ಅತ್ಯಂತ ಸವಾಲಿನದು. ಆದರೆ ಪ್ರಾಮಾಣಿಕವಾಗಿ ಒಂದು ಡೈರಿ ಬರೆದುಕೊಳ್ಳುವುದು, ಬರೆದಿಡುವುದು ಕೂಡ ಕಷ್ಟವಾಗಿರುವ ಸಮಾಜದಲ್ಲಿ ಇಂಥ ಬರವಣಿಗೆಯ ಕಷ್ಟಗಳು ಕೂಡ ಅಸಂಖ್ಯ. 

ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಕವಿ ಕೋಲರಿಜ್ ತಾನು ನಿತ್ಯ ಓದಿದ್ದನ್ನು, ಯೋಚಿಸಿದ್ದನ್ನು ಬರೆದಿಡುತ್ತಿದ್ದ ಜರ್ನಲ್ ನನ್ನ ಕಿಂಡಲ್ ಸಂಗ್ರಹದಲ್ಲಿದೆ. ಇಂಥ ಜರ್ನಲ್ ಬರವಣಿಗೆ ಪಶ್ಚಿಮದ ಲೇಖಕರಲ್ಲಿ ತೀರಾ ಸಾಮಾನ್ಯ. ಇದು ’ಸ್ವಂತ’ದ ಬರವಣಿಗೆಯಾದರೂ ತೀರಾ ಖಾಸಗಿ ಅಲ್ಲ. ಬರೆಯುವ ಅಸಲಿ ಚಡಪಡಿಕೆ ಉಳ್ಳವರು ಇಂಥ ಜರ್ನಲ್ಲುಗಳಲ್ಲಿ ತಾವು ಕಂಡ, ಓದಿದ, ಕೇಳಿದ,  ಎಲ್ಲದರ ಬಗೆಗೂ ತಮ್ಮ ಸ್ಪಂದನವನ್ನು ದಾಖಲಿಸುವುದು ಅವರವರ ಮಾತು, ಬರಹ, ಟೀಚಿಂಗ್, ಚರ್ಚೆ, ಪತ್ರಿಕೋದ್ಯಮ, ಭಾಷಣ ಹಾಗೂ ನಿರಂತರ ಬೌದ್ಧಿಕ ಬೆಳವಣಿಗೆ… ಎಲ್ಲದಕ್ಕೂ ನೆರವಾಗಬಲ್ಲದು. 



Latest Video


Nataraj Huliyar Official
YouTube Channel

SUBSCRIBE