Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
05 Apr 2026 ಬಾಬೂಜಿ: ಬಂಡಾಯ, ಉಪಾಯ

ಮೊನ್ನೆ ತುಮಕೂರಿನ ಗೆಳೆಯರು ಬಾಬೂ ಜಗಜೀವನರಾಮ್ ಹುಟ್ಟುಹಬ್ಬದ ದಿನ (೫ ಏಪ್ರಿಲ್) ಮಾತಾಡಲು ಕೇಳಿದಾಗ, ಕೆಲವು ವರ್ಷಗಳ ಕೆಳಗೆ ಒಂದು ಗ್ರೂಪ್ ಫೋಟೋದಲ್ಲಿ ಕಂಡ ಬಾಬೂಜಿಯ ಮುಖಭಾವ ನೆನಪಾಯಿತು. ಆ ಫೋಟೋ ಕೆಳಗಿದೆ: 

ಈ ಫೋಟೋದಲ್ಲಿ ಜಗಜೀವನರಾಮರ ಮುಖದಲ್ಲಿ ಅವರ ಎಲ್ಲ ಸಂಕೋಚ, ಅವರು ಪ್ರತಿನಿಧಿಸುತ್ತಿದ್ದ ದಮನಿತ ಸಮುದಾಯದ ಆ ಕಾಲದ ಮನಸ್ಥಿತಿ, ಮೇಲುಜಾತಿಯ ನಾಯಕರ ನಡುವೆ ಅವರ ಹಿಂಜರಿಕೆ ಒಡೆದು ಕಾಣುತ್ತಿವೆಯೆಂದು ಅವತ್ತು ಅನ್ನಿಸಿತ್ತು; ಮತ್ತೊಬ್ಬ ಗೆಳೆಯರಿಗೂ ಹಾಗೇ ಅನ್ನಿಸಿತ್ತು. 

ಮತ್ತೊಂದು ವಿವರ: ಪ್ರಾಯಶಃ ಈ ಫೋಟೋ ತೆಗೆಯುವುದಕ್ಕಿಂತ ಮುಂಚೆ ೧೯೪೭ರಲ್ಲಿ ಗಾಂಧೀಜಿ ಹಾಗೂ ಇತರರು ತಯಾರಿಸಿದ್ದ ಪ್ರಥಮ ರಾಷ್ಟ್ರೀಯ ಮಂತ್ರಿಮಂಡಲದ ಪಟ್ಟಿಯಲ್ಲಿ ಅಂಬೇಡ್ಕರ್‍, ಜಗಜೀವನರಾಮ್ ಇಬ್ಬರ ಹೆಸರೂ ಇತ್ತು. ಅನಂತರ ಜಗಜೀವನರಾಂ ನೆಹರೂ, ಇಂದಿರಾ ಸಂಪುಟಗಳಲ್ಲಿ ಹಾಗು ಇತರ ಸಂಪುಟಗಳಲ್ಲೂ ಹಲವು ಖಾತೆಗಳ ಸಚಿವರಾಗಿದ್ದರು. ಉಪಪ್ರಧಾನಿಯೂ ಆದರು. ಜನ ಅವರನ್ನು ಪ್ರೀತಿಯಿಂದ ಬಾಬೂಜಿ ಎನ್ನುತ್ತಿದ್ದರು.  

ಮೇಲೆ ಕೊಟ್ಟಿರುವ ಫೋಟೋದ ಮುಖಭಾವಕ್ಕೆ ಮತ್ತೆ ಮರಳುವೆ. ಈ ಕಾಲದಲ್ಲಿ ಫೋಟೋ, ಪೋಸ್ಟರ್‍ ಮುಂತಾದ ದಾಖಲೆಗಳನ್ನು ಸಾಂಸ್ಕೃತಿಕ ಅಧ್ಯಯನ ಮಾಡುವ ಸಂಶೋಧಕ, ಸಂಶೋಧಕಿಯರು ಬಳಸುತ್ತಾರೆ. ಆದರೆ, ಮೇಲೆ ಕೊಟ್ಟಿರುವ ಜಗಜೀವನರಾಮರ ಫೋಟೋವನ್ನೇ ಆಧರಿಸಿ ಅವರನ್ನು ಗ್ರಹಿಸಿದರೆ ಅವರ ಸಂಕೀರ್ಣ ವ್ಯಕ್ತಿತ್ವ ಅರ್ಥವಾಗಲಾರದು.  

ಬಿಹಾರದ ಚಾಂದ್ವಾದ ಚಮ್ಮಾರಹಟ್ಟಿಯಲ್ಲಿ ಹುಟ್ಟಿದ ಜಗಜೀವನರಾಮ್ (೧೯೦೮-೧೯೮೬) ಬಾಲ್ಯ ಜಾಣ ಹುಡುಗನೊಬ್ಬನ ಬಡತನ, ಬಂಡಾಯಗಳ ಬಾಲ್ಯವಾಗಿತ್ತು. ಬಾಲಕ ಭೀಮರಾವ್ ಅಂಬೇಡ್ಕರ್‍ ಥರ ಜಗಜೀವನರಾಂ ಕೂಡ ಶಾಲೆಯಲ್ಲಿ ನೀರು ಕುಡಿಯಲು ಹೋದಾಗ ಅಸ್ಪೃಶ್ಯತೆ ಎದುರಿಸಬೇಕಾಯಿತು: ಆ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘ಹಿಂದೂ’, ‘ಮುಸ್ಲಿಂ’ ನೀರಿನ ಹೂಜಿಗಳಿದ್ದವು. ರಾಮ್ ‘ಹಿಂದೂ’ ಹೂಜಿಯಲ್ಲಿ ನೀರು ಕುಡಿದ. ಪ್ರಿನ್ಸಿಪಾಲರಿಗೆ ದೂರುಹೋಯಿತು. ಪ್ರಿನ್ಸಿಪಾಲರು ದಲಿತ ಮಕ್ಕಳಿಗೆ ಮೂರನೇ ಹೂಜಿ ಇರಿಸಿದರು. ಸಿಟ್ಟಿಗೆದ್ದ ರಾಮ್ ಹೂಜಿ ಒಡೆದು ಹಾಕಿದ. ಮತ್ತೊಂದು ಹೂಜಿಗೂ ಅದೇ ಗತಿಯಾಯಿತು! ಕೊನೆಗೆ ಶಾಲೆಯವರೇ ಪ್ರತ್ಯೇಕ ಹೂಜಿ ಪದ್ಧತಿಯನ್ನೇ ತೆಗೆದು ಹಾಕಬೇಕಾಯಿತು. 

ಹೈಸ್ಕೂಲಿನಲ್ಲಿ ರಾಮ್‌ಗೆ ಜಾತಿಯ ಆಧಾರದ ಮೇಲೆ ಸ್ಕಾಲರ್‍‌ಶಿಪ್ಪಿಗೆ ಅರ್ಜಿ ಹಾಕಲು ಗೆಳೆಯರು ಹೇಳಿದರು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ರಾಮ್, ‘ನನ್ನ ಪ್ರತಿಭೆ ನೋಡಿ ಅವರೇ ಸ್ಕಾಲರ್‍‌ಶಿಪ್ ಕೊಡಬೇಕು’ ಎಂದು, ಜಾತಿಯ ಆಧಾರದ ಮೇಲೆ ಸ್ಕಾಲರ್‍‌ಶಿಪ್ ಹಾಕಲು ಒಪ್ಪಲಿಲ್ಲ. ಹುಡುಗ ರಾಮ್ ಭಾಷಣ ಕಲೆ ಹಾಗೂ ಕುಸ್ತಿ ಎರಡರಲ್ಲೂ ತಯಾರಾಗುತ್ತಿದ್ದ!
ರಾಮ್ ಮುಂದೆ ಬನಾರಸ್ ಯೂನಿವರ್ಸಿಟಿಗೆ ಬಂದಾಗ ಅಲ್ಲಿ ಹುಡುಗನ ಪ್ರತಿಭೆಗೆ ತಕ್ಕಂತೆ ಬಿರ್ಲಾ ಸ್ಕಾಲರ್‍‌ಶಿಪ್ ಸಿಕ್ಕಿತು; ಕೈಗೆ ಬಂದ ಸ್ಕಾಲರ್‍‌ಶಿಪ್ ರಾಮ್ ಬಾಯಿಗೆ ಬರುವುದಕ್ಕೆ ಅಡ್ಡಿಗಳಿದ್ದವು. ಜಾತಿಯ ಕಾರಣಕ್ಕಾಗಿ ಇತರ ಜಾತಿಯ ಹುಡುಗರುಗಳಿದ್ದ ಜನರಲ್ ಹಾಸ್ಟೆಲಿನಲ್ಲಿರಲು ರಾಮ್‌ಗೆ ಅವಕಾಶವಿರಲಿಲ್ಲ. ರಾಮ್ ಕ್ಯಾಂಪಸ್ ಹೊರಗೆ ರೂಮ್ ಮಾಡಿಕೊಂಡು ತಾನೇ ಅಡಿಗೆ ಮಾಡಿಕೊಳ್ಳಬೇಕಾಯಿತು. ಬನಾರಸ್ ವಿಶ್ವವಿದ್ಯಾಲಯದ ಸಾವಾಸವೇ ಬೇಡವೆಂದು ರಾಮ್ ಕೊನೆಗೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾಯಿತು.

ತರುಣ ಜಗಜೀವನರಾಮ್ ಸ್ವಾತಂತ್ರ‍್ಯ ಚಳುವಳಿಗೆ ಪೂರ್ಣ ಪ್ರಮಾಣದಲ್ಲಿ ಇಳಿದರು. ಸ್ವಾತಂತ್ರ‍್ಯ ಹೋರಾಟಗಾರ ಜಗಜೀವನರಾಮರ ಜೈಲುವಾಸ, ಸಂಕಷ್ಟಗಳ ವಿವರಗಳು ಇವತ್ತಿಗೂ ಹೆಚ್ಚು ಪರಿಚಿತವಿಲ್ಲ. ಕಾಂಗ್ರೆಸ್ ನಾಯಕ ಬಾಬೂ ರಾಜೇಂದ್ರಪ್ರಸಾದ್ ಈ ತರುಣನ ಸಂಘಟನಾ ಶಕ್ತಿ ಕಂಡು ಕಾಂಗ್ರೆಸ್ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿ ಕೊಟ್ಟರು. ಮುಂದೆ ಸಮಾಜವಾದಿಗಳಾದ ಜಯಪ್ರಕಾಶ್ ನಾರಾಯಣ್, ರಾಮನಂದನ ಮಿಶ್ರಾ ಮೊದಲಾದವರು ಬಂಧಿಯಾಗಿದ್ದ ಹಜಾರಿಭಾಗ್ ಜೈಲಿನಲ್ಲಿ ಜಗಜೀವನರಾಮ್ ಕೂಡ ಬಂಧಿಯಾಗಿದ್ದರು. ಸಮಾಜವಾದಿಗಳು ಜೈಲಿನಿಂದ ಪರಾರಿಯಾದ ನಂತರ, ಅಲ್ಲಿದ್ದ ಕಾಂಗ್ರೆಸ್ ಕೈದಿಗಳಿಗೆ ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟರು. ಜಗಜೀವನರಾಮ್ ಆರೋಗ್ಯ ಕೆಟ್ಟು ಹೋಯಿತು.

ಜಗಜೀವನರಾಮ್ ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ ಗಾಂಧೀಜಿ ೧೯೪೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಕರೆ ಕೊಟ್ಟರು; ದೇಶದಲ್ಲಿ ಮಿಂಚಿನ ಸಂಚಾರವಾಯಿತು. ಬ್ರಿಟಿಷ್ ಸರ್ಕಾರ ಎಲ್ಲ ಮುಂಚೂಣಿ ಕಾಂಗ್ರೆಸ್ ನಾಯಕರನ್ನೂ ಅರೆಸ್ಟ್ ಮಾಡಿತು. ಜನರೇ ನಾಯಕರಾದರು. ಸಮಾಜವಾದಿ ನಾಯಕರು ಭೂಗತರಾಗಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲೆತ್ನಿಸುತ್ತಿದ್ದರು.  ಜಗಜೀವನರಾಮ್ ಪೊಲೀಸರ ಕಣ್ತಪ್ಪಿಸಿ ಕಲ್ಕತ್ತಾಕ್ಕೆ ಬಂದರು‌. ನಂತರ ಬಿಹಾರಕ್ಕೆ ವಾಪಸಾಗಿ ಸಂಪರ್ಕ ಜಾಲ ಕತ್ತರಿಸುವ ಕೆಲಸಕ್ಕೆ ಜನರನ್ನು ಸಂಘಟಿಸತೊಡಗಿದರು.  

ಬ್ರಿಟಿಷರ ದಮನ ಹೆಚ್ಚತೊಡಗಿತ್ತು. ಪಾಟ್ನಾದ ಜನ ತಮ್ಮದೇ ಊರಿನಲ್ಲಿ ಬೇರೆ ಕಡೆ ಓಡಾಡಲು ಪಾಸ್ ತೆಗೆದುಕೊಳ್ಳಬೇಕಾಗಿತ್ತು. ಜಗಜೀವನರಾಮ್ ಬಳಿ ಪಾಸ್ ಇರಲಿಲ್ಲ. ಸೈನಿಕನೊಬ್ಬ ಬ್ಯಾರಿಕೇಡ್ ಬಳಿ ಅವರನ್ನು ತಡೆದ. ರಾಮ್ ತಮ್ಮ ಜೇಬಿನಲ್ಲಿದ್ದ ಯಾವುದೋ ಹಳೇ ಇನ್ವಿಟೇಶನ್ ಕಾರ್ಡ್ ಝಳಪಿಸಿದರು. ಸೈನಿಕ ದೂಸರಾ ಮಾತಾಡದೆ ಹಾದಿ ಬಿಟ್ಟ! ಮತ್ತೊಂದೆಡೆ ಬ್ಯಾರಿಕೇಡುಗಳ ಬಳಿ ಬ್ರಿಟಿಷ್ ಸೇನೆಯಲ್ಲಿದ್ದ ಅಮೆರಿಕನ್ ಸೈನಿಕರು, ‘ನಾವು ಕೊಲೆಗಡುಕರಿಂದ, ಢಕಾಯಿತರಿಂದ ನಗರವನ್ನು ರಕ್ಷಿಸಲು ನಿಂತಿದ್ದೇವೆ’ ಎಂದರು. 

ರಾಮ್ ಅಮೆರಿಕದ ಸ್ವಾತಂತ್ರ‍್ಯ ಹೋರಾಟ ಕುರಿತ ಪಾಂಫ್ಲೆಟ್ ಹೊರ ತೆಗೆಯುತ್ತಾ, ವಾಶಿಂಗ್ಟನ್, ಜೆಫರ್ಸನ್, ಲಿಂಕನ್ ಅಮೆರಿಕದಲ್ಲಿ ನಡೆಸಿದ ಹೋರಾಟಗಳ ಬಗ್ಗೆ ಅಮೆರಿಕನ್ ಸೈನಿಕರಿಗೇ ಭಾಷಣ ಮಾಡಿದರು! ಭಾರತದಲ್ಲೂ ನಾವು ಅದೇ ರೀತಿ ಹೋರಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು. ಅವರ ಇಂಗ್ಲಿಷ್ ಭಾಷೆ, ಚರಿತ್ರೆಯ ಜ್ಞಾನ, ಸಮಯಸ್ಫೂರ್ತಿ ಎಲ್ಲ ಸೇರಿ ಪರಿಣಾಮ ಅದ್ಭುತವಾಗಿತ್ತು. ಅಮೆರಿಕನ್ ಸೈನಿಕರು ಸುಮ್ಮನಾದರು. ಪಾಟ್ನಾದ ತುಂಬ ಇದ್ದ ಅಮೆರಿಕನ್ ಸೈನಿಕರಿಗೆಲ್ಲ ಈ ಕರಪತ್ರಗಳು ತಲುಪಿದವು!   

ಶತ್ರುವಿನ ವಿರುದ್ಧ ಉಪಾಯ ನೈತಿಕ ಹೋರಾಟದ ಮಾರ್ಗಗಳಲ್ಲೊಂದು ಎಂಬುದು ಜಗಜೀವನರಾಮ್ ಜೀವನದಲ್ಲಿ ಮತ್ತೆ ಮತ್ತೆ ಕಾಣುತ್ತದೆ. ಅವರ ಒಟ್ಟು ರಾಜಕೀಯ ಬದುಕಿನಲ್ಲಿ ಕಾಣುವ ಚಾಣಾಕ್ಷತನ, ಸರ್ವೈವಲ್ ಗುಣ ಬ್ರಿಟಿಷರ ವಿರುದ್ಧದ ಹೋರಾಟದ ಕಾಲದಲ್ಲಿ ಮೈಗೂಡಿದ್ದ ಗುಣವಾಗಿತ್ತು. ಸಿಟ್ಟಿಗೆದ್ದು ಹೂಜಿ ಒಡೆದ ಹುಡುಗ ಕುಸ್ತಿ ಪಟುವಾಗಿ ಮೈಗೂಡಿಸಿಕೊಂಡ ಹಲವು ಪಟ್ಟುಗಳಂತೆ ಅವರ ರಾಜಕೀಯ ಪಟ್ಟುಗಳು ಕಾಣುತ್ತವೆ! ಮುಂದೆ ಕಾಂಗ್ರೆಸ್ ಒಡೆದಾಗ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಇಂದಿರಾ ನೇತೃತ್ವದ ಕಾಂಗ್ರೆಸ್ ಕಟ್ಟಲು ನೆರವಾದ ರೀತಿ; ರಕ್ಷಣಾ ಸಚಿವರಾಗಿ ಯುದ್ಧ ಕಾಲದಲ್ಲಿ ಅವರು ಬಳಸುತ್ತಿದ್ದ ಸಂಕ್ಷಿಪ್ತ ಖಚಿತ ಡಿಪ್ಲೊಮ್ಯಾಟಿಕ್ ಭಾಷೆ; ಹಸಿರು ಕ್ರಾಂತಿಯ ನೇತಾರನಾದ ರೀತಿ… ಇವೆಲ್ಲವೂ ಅವರ ವ್ಯಕ್ತಿತ್ವದ ಯಶಸ್ಸಿನ ಕತೆಯನ್ನೇ ಹೇಳುತ್ತವೆ.

ದೇಶದ ಪ್ರಧಾನಿ ಪಟ್ಟ ಇನ್ನೇನು ಕೈಗೆಟುಕುವವರೆಗೂ ಬೆಳೆದ ಜಗಜೀವನರಾಮ್ ಬಗ್ಗೆ ದೇಶದ ಪತ್ರಿಕೆಗಳು, ಬಾಳ್ ಠಾಕ್ರೆ ಥರದ ವ್ಯಂಗ್ಯಚಿತ್ರಕಾರರು ಮೂಡಿಸಿದ್ದ ನೀಚ ಪೂರ್ವಗ್ರಹಗಳು ಒಂದೊಂದಲ್ಲ. ಎಪ್ಪತ್ತರ ದಶಕದ ಕೊನೆಯ ಹೊತ್ತಿಗೆ ನಮ್ಮಂಥ ಗ್ರಾಮೀಣ ಪ್ರದೇಶದ ಪುಟ್ಟ ಊರುಗಳ ಹುಡುಗರ ಮನಸ್ಸಿನಲ್ಲಿ ಜಗಜೀವನರಾಮ್ ಬಗ್ಗೆ ತುಂಬಿದ್ದ ಕೆಟ್ಟ ಪೂರ್ವಗ್ರಹಗಳನ್ನು ಹೊಡೆದೋಡಿಸಿದ್ದು ‘ಪ್ರಜಾವಾಣಿ’ಯಲ್ಲಿ ಲಂಕೇಶರು ಬರೆದ ಒಂದು ಶನಿವಾರದ ಲೇಖನ. ಆ ಲೇಖನ ಈಚೆಗೆ ಪ್ರಕಟವಾದ ಟೀಕೆಟಿಪ್ಪಣಿಯ ಸಂಪುಟ-೧ರಲ್ಲಿದೆ.  

ಈ ಮೊದಲು ಕೂಡ ನಾನು ಉಲ್ಲೇಖಿಸಿರುವ ಈ ಬೆಚ್ಚಗಿನ ಬರಹದ ಭಾಗಗಳನ್ನು ಇಲ್ಲಿ ಮತ್ತೆ ಕೊಡುತ್ತಿರುವೆ. ಆ ಕಾಲದಲ್ಲಿ ಲಂಕೇಶರು ರಾಜಕಾರಣಿಗಳ ಹೆಸರನ್ನು, ರಾಜಕೀಯ ಸನ್ನಿವೇಶಗಳನ್ನು ಕಚಗುಳಿಯಿಡುವಂತೆ ಮಾರ್ಪಡಿಸಿ ಬರೆಯುತ್ತಿದ್ದರು: ಅಲ್ಲಿ ಭಾರತ ಸರ್ಕಾರ ‘ಬರ್ತೂರು ಪಂಚಾಯ್ತಿ’ ಆಗಿತ್ತು; ಇಂದಿರಾಗಾಂಧಿ, ‘ಉತ್ತರಳ್ಳಿ ಇಂದ್ರವ್ವ’; ಜಗಜೀವನರಾಮ್, ‘ಜೀವನರಾಮು’; ಚರಣ್ ಸಿಂಗ್, ‘ಚರಣಪ್ಪ’ ; ರಾಷ್ಟ್ರಪತಿ ಸಂಜೀವ ರೆಡ್ಡಿ, ‘ಸಂಜೀವಿ’… ಹೀಗೆ ಲಂಕೇಶರ ರಾಜಕೀಯ ವಿಮರ್ಶಾ ದೃಶ್ಯಾವಳಿಗಳ ಪಾತ್ರಗಳಿರುತ್ತಿದ್ದವು! ಪ್ರಬಲಜಾತಿಗಳ ರಾಜಕೀಯ ಕುತಂತ್ರದಿಂದ ಪ್ರಧಾನಮಂತ್ರಿ ಪಟ್ಟ ಜಗಜೀವನರಾಮರಿಗೆ ತಪ್ಪಿದ್ದ ಆ ವಾರ ಲಂಕೇಶರು ಬರೆದ ಬರಹದ ಭಾಗಗಳು:   

“ನಮ್ಮ ‘ಜೀವನರಾಮು’ ಕೊನೆಗೂ ಛೇರ್ಮನ್ ಆಗಲಿಲ್ಲ... ರಾಮು ನಮ್ಮೆಲ್ಲರ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವ ಕಪ್ಪು ಸಂಕೇತ. ನಮ್ಮ ಅನ್ಯಾಯಗಳ ಸಂಕೇತ ಕೂಡ...

ಪಂಚಾಯ್ತಿಯ ಜನ ಬಹಳ ಮಾತಾಡಿಕೊಳ್ಳುತ್ತಾರೆ- ಗುಂಡಗೆ ಕಪ್ಪಗಿರುವ ಜೀವನರಾಮು ವ್ಯಂಗ್ಯ ಚಿತ್ರ ಬರೆಯುವವನಿಗೆ ಹಬ್ಬವಾಗಬಲ್ಲ. ಈತನನ್ನು ಬಿಳೀ ಹಾಳೆಯ ಮೇಲೆ ಕಪ್ಪು ಇಂಕು ಚೆಲ್ಲಿ ಎರಡು ಕಣ್ಣು ಬರೆದು ಬಿಳಿ ಟೋಪಿ ಹಾಕಿ ತಮಾಷೆ ಮಾಡುವುದು ಸುಲಭ. ಆದರೆ ಈ ಕಪ್ಪು ಆಕಾರದ ಹಿಂದೆ ಅರ್ಧ ಶತಮಾನದ ಅನುಭವ ಇದೆ. ಕೋಟ್ಯಂತರ ಕಪ್ಪು ಜನರ ನೋವು ಇದೆ. ಗಾಂಧೀಜಿ ಅನುಭವಿಸಿದ ದುರಂತವಿದೆ. ವೇದೋಪನಿಷತ್ತು ಹೇಳಿ ಮೋಸ ಮಾಡಿದವರ, ಸುಲಿದು ಉಂಡವರ ಅಟ್ಟಹಾಸದ ನೆನಪುಗಳಿವೆ. ಚರಣಪ್ಪನಂತ ಕಟ್ಟೆ ಮುಖಂಡರ ತಾತ್ಸಾರ ಮತ್ತು ಶೋಷಣೆ ಇದೆ. ಯಜಮಾನ ಸಂಜೀವಿಯಂಥವರ ಪಿತೂರಿ ಮತ್ತು ಸೇಡುಗಳ ಬರೆ ಸ್ಪಷ್ಟವಾಗಿದೆ. ಜಾತಿ, ವರ್ಗಗಳ ಕೊಲೆಗಡುಕ ಚೌಕಟ್ಟು ನಮ್ಮೆಲ್ಲರ ಕಣ್ಣು ಕುಕ್ಕುವುದು ಸರಳವಾಗಿ ಎದ್ದು ಕಾಣುತ್ತಿದೆ.

ಜೀವನರಾಮು ಈಗಲಾದರೂ ತನ್ನ ದಾರಿ ಕಂಡುಕೊಳ್ಳಬೇಕು…ಜೀವನ ರಾಮುವಿನ ಎರೆಮಣ್ಣಿನ ರಾಜಕೀಯದಿಂದ ಒಳ್ಳೆಯದಾಗುತ್ತದೆ. ಗಾಳಿಯಲ್ಲಿ ಓಡಾಡುವ ಮೇಲುವರ್ಗದ ಜನಕ್ಕೆ ಕಾಣದೆ ಇದ್ದದ್ದು ಈ ಮಣ್ಣಿನ ಕಂದಮ್ಮನಿಗೆ ಕಾಣಬೇಕಾಗುತ್ತದೆ. ನಮ್ಮ ಕಪ್ಪು ಮುಖದ ಮಗುವಿನಂಥ ರಾಮುವಿನಲ್ಲಿ ಇನ್ನೂ ಸಾಕಷ್ಟು ಜೀವನದ್ರವ್ಯ ಇದೆಯೆಂದು ಆಶಿಸೋಣ. ಈತನ ನೋವಿನಲ್ಲಿ ಭಾಗಿಗಳಾಗೋಣ. ನಮ್ಮ ರಾಮು ತನ್ನ ಸ್ಪರ್ಧೆಯಲ್ಲಿ ಸೋತರೂ ಅದಕ್ಕಿರುವ ನಿಜವಾದ ಗೆಲುವಿನ ಬಗ್ಗೆ ಆಶಾವಾದಿಗಳಾಗೋಣ. ರಾಮುವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ಖೊಟ್ಟಿ ಅನುಕಂಪದ್ದಲ್ಲ. ಈ ಗಾಂಧೀಜಿಯ ನೆಲದ ಅನ್ಯಾಯದಿಂದ ಹೊರಟದ್ದು.”

ಜಗಜೀವನರಾಮರ ಬಗೆಗಷ್ಟೇ ಅಲ್ಲ, ಒಟ್ಟಾರೆ ದಲಿತ ಸಮುದಾಯದ ಬಗೆಗೆ ಹದಿಹರಯದಲ್ಲೇ ಜಾತ್ಯತೀತ ಆರೋಗ್ಯಕರ ದೃಷ್ಟಿಕೋನ ಲಂಕೇಶರಿಂದ ನನಗೆ ದೊರೆತದ್ದು ಒಂದು ಭಾಗ್ಯಶಾಲಿ ಗಳಿಗೆಯೆಂದು ಇವತ್ತಿಗೂ ಅನ್ನಿಸುತ್ತದೆ.

ಇದಾದ ಮೇಲೆ ಜಗಜೀವನರಾಮ್ ಕುರಿತ ಬರಹ, ಪುಸ್ತಕಗಳನ್ನು ಓದಿದೆ; ಅವರ ಭಾಷಣದ ಧ್ವನಿಮುದ್ರಿಕೆಗಳನ್ನು ಕೇಳಿದೆ. ಅಲ್ಲಿ ಅವರ ಪಾಂಡಿತ್ಯ, ಆಳವಾದ ಜ್ಞಾನ ನನ್ನನ್ನು ತಟ್ಟಿದವು. ಜಾತಿವ್ಯವಸ್ಥೆಯನ್ನು ವಿಮರ್ಶಿಸುವಾಗ, ಕಂಡುಂಡ ಅನುಭವ ಹಾಗೂ ಅಂಬೇಡ್ಕರ್‍ ಪರಿಭಾಷೆ ಎರಡನ್ನೂ ಅವರು ಬಳಸುತ್ತಿದ್ದರು. ಇಂಗ್ಲಿಷ್ ಭಾಷೆಯ ಮೇಲಿನ ಅದ್ಭುತ ಹಿಡಿತ ಹಾಗೂ ಇಂಗ್ಲಿಷಿನ ಸಹಜ, ಸರಾಗ ಬಳಕೆಯ ಕಲೆ ಜಗಜೀವನರಾಮರಿಗೆ ದಕ್ಕಿದ್ದವು. 

ಹ್ಯಾಪಿ ಬರ್ತ್ ಡೇ ಬಾಬೂಜಿ!
 
 
 

blog
29 Mar 2026 ಸತ್ತವರ ಸವಿ ನೆರಳು!

ಅದು ಹೇಗೋ ಏನೋ ತೀರಿಕೊಂಡ ದೊಡ್ಡವರ ಪುಸ್ತಕಗಳನ್ನು ಎಡಿಟ್ ಮಾಡುವ, ಮತ್ತೆ ರೂಪಿಸುವ, ಅಥವಾ ಅವರ ಬಗ್ಗೆ ಬರೆಯುವ ಕೆಲಸ ಆಗಾಗ್ಗೆ ನನ್ನ ಹೆಗಲ ಮೇಲೆ ಬೀಳುತ್ತಿರುತ್ತದೆ. ಲೋಹಿಯಾ, ಎಂ.ಡಿ. ನಂಜುಂಡಸ್ವಾಮಿ, ಲಂಕೇಶ್, ಕಿ.ರಂ. ನಾಗರಾಜ್, ಡಿ. ಆರ್. ನಾಗರಾಜ್, ಶಾಂತವೇರಿ ಗೋಪಾಲಗೌಡ, ಗಾಂಧೀಜಿ…ಹೀಗೆ. ಇದನ್ನೆಲ್ಲ ಮಾತಾಡುತ್ತಾ, ‘ನಮ್ ಜೊತೆ ಚೆನ್ನಾಗಿದ್ರೆ ನಿಮಗೂ ಒಂದು ಪುಸ್ತಕ ಗ್ಯಾರಂಟಿ; ಆದರೆ ಮರಣಾನಂತರ’ ಎಂದು ಗಟ್ಟಿ ಎದೆಯ ಗೆಳೆಯರನ್ನು ರೇಗಿಸುವುದೂ ಇದೆ!  

ಇದೇನೂ ಸ್ವತಃ ನಾನೇ ಹುಡುಕಿಕೊಂಡು ಹೋಗಿ ಮಾಡಿರುವ ಕೆಲಸವಲ್ಲ; ಇವೆಲ್ಲ ಆಗಾಗ್ಗೆ ನನ್ನ ಹಾದಿಯಲ್ಲಿ ಬಂದು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿದ ಕೆಲಸಗಳು:

ಉದಾಹರಣೆಗೆ, ಲಂಕೇಶರು ೧೯೯೭ರಲ್ಲಿ ಒಂದು ರಾತ್ರಿ ಸಣ್ಣ ದನಿಯಲ್ಲಿ, ‘ಆ ಟೀಕೆ ಟಿಪ್ಪಣಿ ಎರಡು, ಮೂರು ವಾಲ್ಯೂಮ್ಸ್ ಮಾಡ್ತೀಯೇನೋ ನೋಡು’ ಅನ್ನುವರು; ಅಥವಾ ಕಾಳೇಗೌಡ ನಾಗವಾರರು ಇದ್ದಕ್ಕಿದ್ದಂತೆ, ‘ಲೋಹಿಯಾ ಅನುವಾದ ಸಮಿತಿಯ ಸದಸ್ಯರಾಗಿ’ ಎಂದು ಕರೆಯುವರು; ಡಾ. ಲಕ್ಷ್ಮೀಪತಿಬಾಬು ಥರದ ಹಿರಿಯ ಗೆಳೆಯರು ತಮ್ಮ ಗುರುಗಳಾದ ಎಂ.ಡಿ. ನಂಜುಂಡಸ್ವಾಮಿಯವರಿಗೆ ಸಲ್ಲಿಸಿದ ‘ನುಡಿನಮನ’ ಕಾರ್ಯಕ್ರಮದ ಮಂಡನೆಗಳನ್ನು ಪುಸ್ತಕ ಮಾಡಿಕೊಡಿ ಎನ್ನುವರು; ‘ನಾನು ಪುಸ್ತಕ ಪ್ರಾಧಿಕಾರದಲ್ಲಿ ಇರೋದರೊಳಗೆ ಕಿರಂ ನಾಗರಾಜರ ಪುಸ್ತಕ ಮಾಡಿಕೊಡಿ! ಗುರುವಂದನೆ’ ಎಂದು ಕವಿ ಸಿದ್ಧಲಿಂಗಯ್ಯನವರು ಮುಗುಳ್ನಗುವರು; ‘ನಾನು ಅಕಾಡೆಮಿ ಬಿಡೋದರೊಳಗೆ ನಮ್ಮ ಗುರು ಡಿ. ಆರ್‍. ಪುಸ್ತಕ ಮಾಡಿಕೊಡು ಗುರುವೇ’ ಎಂದು ಗೆಳೆಯ ಮಹಾಬಲೇಶ್ವರ್‍ ಹೇಳುವರು; ‘ನಾನೂ ಶಾಂತವೇರಿ ಗೋಪಾಲಗೌಡರ ನಾಡಿನವನೇ; ನಾನು ನ್ಯಾಶನಲ್ ಬುಕ್ ಟ್ರಸ್ಟ್ ಬಿಡೋದರೊಳಗೆ ಗೋಪಾಲಗೌಡರ ಕಿರುಬಯೋಗ್ರಫಿ ಮುಗಿಸಿಕೊಡಿ’ ಎಂದು ದೆಹಲಿಯಿಂದ ನಾಗರಾಜಪ್ಪ ಹೇಳುವರು…
ಹೀಗೆ ತಂತಾವೇ ಬಂದ ಇವೆಲ್ಲ ಮಾಡಮಾಡುತ್ತಾ ನನ್ನ ಪ್ರಿಯವಾದ ಕೆಲಸಗಳೂ ಆಗತೊಡಗಿದವು; ಆ ಮಾತು ಬೇರೆ. 

ಕಳೆದ ಎರಡುಮೂರು ದಿನದಿಂದ ಕನಕದಾಸರ ‘ಮೋಹನ ತರಂಗಿಣಿ’ ಇಂಗ್ಲಿಷ್ ಅನುವಾದದ ಫೈನಲ್ ಎಡಿಟಿಂಗ್ ಹಾಗೂ ಅದರ ಮುನ್ನುಡಿ ಪೂರ್ಣಗೊಳಿಸುವ ಕೆಲಸ (ಅರೆ! ಮತ್ತೆ ಸತ್ತವರ ನೆರಳು! ಆದರೆ ಹಿತವಾದ, ತಂಪು ನೆರಳು!); ಅದರ ಜೊತೆಗೇ ಅಂತರ್ಜಾತೀಯ ವಿವಾಹಿತರ ರಕ್ಷಣೆಗಾಗಿ ಕರ್ನಾಟಕ ವಿಧಾನಸಭೆ ಅಂಗೀಕರಿಸಿರುವ ’ಇವ ನಮ್ಮವ’ ಮಸೂದೆ… ಇವುಗಳಲ್ಲಿ ಮುಳುಗಿದ್ದ ನನಗೆ ಇದನ್ನೆಲ್ಲ ಇವತ್ತು ಇಲ್ಲಿ ಹೇಳಬೇಕೆಂಬ ಇರಾದೆಯೇನೂ ಇರಲಿಲ್ಲ. 

ಇದಕ್ಕೆ ಕಾರಣವಾದದ್ದು ಈ ಅಂಕಣ ಬರೆಯುವ ಭಾನುವಾರ ಬೆಳಗ್ಗೆ ಅಕಸ್ಮಾತ್ ಕಂಡ ಪತ್ರ. ಲೇಖಕ, ಭಾವೀ ಸಿನಿಮಾ ನಟ ಹರಿಪ್ರಸಾದ್ ಬೇಸಾಯಿ ಬರೆದ ಈ ಪತ್ರ ನೋಡನೋಡುತ್ತಾ ಮೊದಲ ಪ್ಯಾರಾ ಹುಟ್ಟಿತು. ‘ತೀರಿಕೊಂಡವರ ಬದುಕು ಬದುಕಿ ಉಳಿಯುವವರ ನೆನಪಿನಲ್ಲಿ ಜಾಗ ಪಡೆಯುತ್ತದೆ’ ಎಂಬ ಸಿಸಿರೋ ಮಾತು ತೇಲಿ ಬಂತು. ಜೊತೆಗೆ ನೀಷೆಯೋ, ಇನ್ಯಾರೋ ಹೇಳಿದ ಮಾತು: ‘ತೀರಿಕೊಂಡವರ ಸತ್ವ ಬದುಕಿರುವವರ ಬೆನ್ನ ಹುರಿಯಲ್ಲಿ ಉಳಿದಿರುತ್ತದೆ…’

ಮೊನ್ನೆ ಲಂಕೇಶರ ‘ಟೀಕೆ ಟಿಪ್ಪಣಿ’ ಪುಸ್ತಕಗಳ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೂವತ್ತು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯ ವರದಿಯೊಂದರಲ್ಲಿ ಬಂದಿದ್ದ ಮಾತೊಂದನ್ನು ನೆನೆದಿದ್ದರು. ಆ ಮಾತುಗಳಿರುವ ವಿಡಿಯೋ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ‘ಕುರಿ ಎಣಿಸಲು ಬರದವನು ಹಣಕಾಸು ಮಂತ್ರಿ ಹೇಗಾಗುತ್ತಾನೆ? ಎಂದು ಲಂಕೇಶ್ ಪತ್ರಿಕೆಯವರು ಬರೆದಿದ್ದರು; ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ’ ಎಂದ ಮುಖ್ಯಮಂತ್ರಿಗಳು, ’ನನ್ನ ಜಾತಿಯ ಕಾರಣಕ್ಕೆ ಹಾಗೆ ಬರದಿರಲಿಕ್ಕಿಲ್ಲ’ ಎನ್ನುತ್ತಾ ಮುಂದಿನ ಮಾತಿಗೆ ಸಾಗಿದರು.

ಹರಿಪ್ರಸಾದ್ ಈ ಬಗ್ಗೆ ಬರೆದ ಪತ್ರ ನೋಡಿದಾಗ ತೀರಿಕೊಂಡವರ ಪುಸ್ತಕಗಳ ಕಾಗುಣಿತ ಇತ್ಯಾದಿ ತಪ್ಪುಗಳು, ಆ ಲೇಖಕರನ್ನು ಸಂಪಾದಿಸಿದ ಇನ್ಯಾರೋ ಮಾಡಿದ ತಪ್ಪುಗಳು… ಇವನ್ನೆಲ್ಲ ತಿದ್ದುವುದರ ಜೊತೆಗೆ ಅವರ ನಡೆನುಡಿಗಳ ಐಬುಗಳಿಗೂ ಉತ್ತರ ಕೊಡುವ ಅನಿವಾರ್ಯ ಹೊಣೆಯೂ ನನ್ನ ಪಾಲಿಗಿದೆಯಲ್ಲ ಎನ್ನಿಸಿ ವಿಸ್ಮಯವಾಯಿತು! 

ಅದೇನೇ ಇರಲಿ. ನನಗೆ ಸ್ಪಷ್ಟವಾಗಿ ಗೊತ್ತಿರುವಂತೆ ತೊಂಬತ್ತರ ದಶಕದಲ್ಲಿ ಸಿದ್ಧರಾಮಯ್ಯನವರು ಹಣಕಾಸು ಮಂತ್ರಿಯಾಗಿದ್ದಾಗ ಅವರಿಗೆ ಕುರಿ ಎಣಿಸಲು ಕೂಡ ಬರುವುದಿಲ್ಲ ಎಂದು ಲಂಕೇಶರು ಬರೆದಿರಲಿಲ್ಲ. ಅದನ್ನು ಬರೆದಿದ್ದ ವರದಿಗಾರರು ಕೂಡ ನಾನು ಬಲ್ಲಂತೆ ಹಲವು ಹಗರಣಗಳನ್ನು ಬಯಲಿಗೆಳೆದಿದ್ದ ದಿಟ್ಟ, ಜಾತ್ಯತೀತ ವ್ಯಕ್ತಿ. ಅವತ್ತು ಆ ವಾಕ್ಯದ ಬಗ್ಗೆ ಕೆ. ರಾಮದಾಸ್ ಆ ವರದಿಗಾರರ ಜೊತೆ ಜಗಳವಾಡಿದಾಗ ಕೂಡ, ಅದು ಜಾತಿಯನ್ನು ಎತ್ತಿ ಆಡಿದ್ದರಿಂದ ಹುಟ್ಟಿದ ಮಾತು ಎನ್ನಿಸಿರಲಿಲ್ಲ. ಇವತ್ತಿಗೂ ಹಾಗನ್ನಿಸಿಲ್ಲ.  ಲಂಕೇಶರು ಕೂಡ ಶ್ವಪಚ, ದೊಂಬರಾಟ ಮುಂತಾದ ಪದಗಳನ್ನು ಆರಾಮಾಗಿ ಬಳಸಿಬಿಡುತ್ತಿದ್ದರು. ತೇಜಸ್ವಿಯವರಲ್ಲಿ ಕೂಡ ಕೊರಮ ಮುಂತಾದ ಪದ ಬಳಕೆಗಳಿದ್ದವು. 

ಈ ಥರದ ಜನಬಳಕೆಯ ನುಡಿಗಟ್ಟುಗಳಲ್ಲಿ ಇಣುಕುವ ಜಾತಿ ಪೂರ್ವಗ್ರಹಗಳು, ಜಾತಿನಿಂದನೆಗಳ ಬಗ್ಗೆ ಸೂಕ್ಷ್ಮ ಚರ್ಚೆಗಳು ಶುರುವಾದ ಮೇಲೆ ನಮ್ಮ ಅನೇಕ ಲೇಖಕರು ಈ ಕುರಿತು ಮುಂದೆ ಎಚ್ಚರ ವಹಿಸತೊಡಗಿದರು. ಇದು ಎಲ್ಲರಿಗೂ ಗೊತ್ತಿದೆ. ಸ್ತ್ರೀವಾದ   ಎಲ್ಲರಿಗೂ ಪುರುಷನಿರ್ಮಿತ ಭಾಷೆಯ ಪೂರ್ವಗ್ರಹಗಳನ್ನು ಕುರಿತು ಹೇಳಿದ ಮೇಲೆ ಪುರುಷರೂ, ಸ್ತ್ರೀಯರೂ ಗಂಡುಭಾಷೆಯ ಸಲೀಸು ಬಳಕೆಯ ಬಗ್ಗೆ ಎಚ್ಚರ ವಹಿಸತೊಡಗಿದರು. ಇಷ್ಟಾದರೂ ನಮ್ಮ ನಿಮ್ಮೆಲ್ಲರ ಆಡು ಮಾತಿನಲ್ಲಿ ನಿತ್ಯ ಸ್ತ್ರೀವಿರೋಧಿ ಬೈಗುಳಗಳು ಬರುತ್ತಲೇ ಇರುತ್ತವೆ!

'ಲಂಕೇಶರ ದೋಷಗಳನ್ನು ಹೇಳಿ’ ಎಂದರು ಇನ್ನೊಬ್ಬರು. ಅವರಿಗೆ ನನ್ನ ಉತ್ತರ: ’ಅವನ್ನು ನೀವೇ ಓದಿ ಕಂಡುಕೊಳ್ಳಬಹುದು; ಗಾಳಿ ಸುದ್ದಿ ಆಧಾರಿಸಿ ಅಲ್ಲ. ಲಂಕೇಶರ ತಪ್ಪುಗಳು ಎಂದು ನೀವು ಹೇಳುವುದನ್ನೆಲ್ಲ ನಾನೂ ಹೇಳುತ್ತಾ ಹೋದರೆ ಲಂಕೇಶರ ಪದ್ಯದ ಸಾಲು ಬೌನ್ಸ್ ಆಗತೊಡಗುತ್ತದೆ: ‘ಸೂಳೇಮಗನೆ ಎಂದು ನಿನ್ನನ್ನು ಕರೆದರೆ ನನ್ನನ್ನೇ ಕರೆದಂತಾಗುತ್ತದೆ.’ 

ಈ ಥರದ ವಾದಬರಹದ ಧಾಟಿ ನನಗೆ ಪ್ರಿಯವಲ್ಲ; ತೀರಿಕೊಂಡ ದೊಡ್ಡವರ ದೋಷಗಳಿಂದ ಅಷ್ಟಿಷ್ಟು ಕಲಿತು, ಆ ದೊಡ್ಡವರ ಬರಹ, ಮಾತು, ದರ್ಶನಗಳನ್ನು, ವಿಸ್ಡಂ ಅನ್ನು ಓದುಗ ಓದುಗಿಯರ ನಡುವೆ ಹಬ್ಬಿಸುವುದು ನನ್ನ ಪ್ರಿಯವಾದ ಕಾಯಕಗಳಲ್ಲೊಂದು; ಅದು ಪ್ರಾಯಶಃ ಗಾಂಧೀ ಬರವಣಿಗೆಯಿಂದ ನಾನು ಕಲಿತ ಪುಟ್ಟ ಪಾಠವೂ ಇರಬಹುದು. ನಾವು ಒಪ್ಪುವ ವ್ಯಕ್ತಿಗಳಲ್ಲಿ ತಪ್ಪು ಕಂಡರೆ ಅದನ್ನು ಕಾಣುವ ಕಣ್ಣು ನಮಗಿರಬೇಕು; ಆದರೆ ನಮ್ಮ ನೋಟವನ್ನು ಬ್ಯಾಲೆನ್ಸ್ ಮಾಡಲು ಒಳಿತಿಗೊಂದು ಪ್ಯಾರಾ, ಕೆಡುಕಿಗೊಂದು ಪ್ಯಾರಾ ಬರೆಯುವ ಯಾಂತ್ರಿಕ ವಸ್ತುನಿಷ್ಠತೆಯ ಧಾಟಿ ನನ್ನ ಬರವಣಿಗೆ, ನಿರೂಪಣಾ ಧಾಟಿಗೆ ಒಗ್ಗಿದಂತಿಲ್ಲ. ಹಾಗೆ ನೋಡಿದರೆ ಲಂಕೇಶರಿಗೆ ಕೊಂಚ ಹತ್ತಿರದಲ್ಲಿದ್ದಾಗ ನಾನು ಅವರಲ್ಲಿ ಒಪ್ಪದ ಸಂಗತಿಗಳು ’ನನ್ನ ಇಂತಿ ನಮಸ್ಕಾರಗಳು’ ಪುಸ್ತಕದಲ್ಲಿ ಅಲ್ಲಲ್ಲಿ ದಾಖಲಾದಂತಿವೆ. ಅವು ಕೂಡ ಇವತ್ತು ಅಷ್ಟೇನೂ ಮುಖ್ಯವಲ್ಲವೆನ್ನಿಸಬಹುದು…

ಈ ಬಗ್ಗೆ ಹೆಚ್ಚು ಬರೆಯುವ ಅಗತ್ಯ ಕಾಣುತ್ತಿಲ್ಲ! ಯಾವುದೇ ದೊಡ್ಡವರ ತಪ್ಪು, ದೋಷಗಳನ್ನು ಕುರಿತು ಚಿಂತಿಸುವುದು ಅವನ್ನು ದಾಟುವ, ನಾವೂ ಅದನ್ನು ಪುನರಾವರ್ತಿಸದಿರುವ ದಿಕ್ಕಿನೆಡೆಗಿನ ಪ್ರಯತ್ನವಾಗಿರಬೇಕು ಅನ್ನಿಸುತ್ತಿದೆ. 

ಈ ಮಾತುಗಳನ್ನು ಬರೆಯುವಾಗ ೧೯೭೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕುವೆಂಪು ವಿಚಾರ ಸಂಕಿರಣದಲ್ಲಿ ಕುವೆಂಪು ಕುರಿತು ಎದ್ದ ಪ್ರಶ್ನೆಯೊಂದಕ್ಕೆ ಎಂ.ಡಿ. ನಂಜುಂಡಸ್ವಾಮಿಯವರು ಕೊಟ್ಟ ಉತ್ತರ ನೆನಪಾಯಿತು. ಆ ಮಾತನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ:

‘ಕೊನೆಯದಾಗಿ, ಭಾರತದ ರಾಜಕಾರಣದಲ್ಲಿ ಸ್ವಾತಂತ್ಯ್ರ ಸಂಗ್ರಾಮ, ಕರ್ನಾಟಕ ಏಕೀಕರಣ, ಸಂಪೂರ್ಣಕ್ರಾಂತಿ ಇವುಗಳಿಗೆ ನೇರ ಬೆಂಬಲ ನೀಡಿದ ಕುವೆಂಪು ತುರ್ತು ಪರಿಸ್ಥಿತಿಯ ಕಾಲದಲ್ಲಿ ಏಕೆ ಮೌನವಾಗಿದ್ದರು ಎಂದು ಕೇಳುವಾಗಲೂ ನಾವು ರಾಜಕಾರಣದಲ್ಲಿ ಆಗುವ ಸಂರ್ಕೀಣವಾದ ಕ್ರಿಯೆ-ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ತುರ್ತುಪರಿಸ್ಥಿತಿಯ ಕಾಲದಲ್ಲಿ ಪ್ರಶಸ್ತಿಯನ್ನು ತ್ಯಜಿಸಿದ ಕಾರಂತರು, ಜಯಪ್ರಕಾಶರ ಚಳವಳಿಯನ್ನು ಆಷಾಢಭೂತಿಗಳ ಚಳುವಳಿಯೆಂದು ತುರ್ತುಪರಿಸ್ಥಿತಿಗೆ ಬಹಳ ಹಿಂದೆಯೇ ಏಕೆ ಹೇಳಿದರು ಎನ್ನುವ ಪ್ರಶ್ನೆಗಳನ್ನು ಕೇಳುವವರೂ ಇದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಎರಡೂ ಪ್ರಶ್ನೆಗಳನ್ನೂ ಕೇಳಬಾರದು. ಇದಕ್ಕೆ ಉತ್ತರಗಳನ್ನು ಕುವೆಂಪು, ಕಾರಂತರನ್ನು ಬಿಟ್ಟು ಬೇರೆಯವರು ಕೊಡಲೂ ಹೋಗಬಾರದು.’ 
ನಂಜುಂಡಸ್ವಾಮಿಯವರ ಉತ್ತರದಲ್ಲಿರುವ ಈ ವಿಸ್ಡಂ -ಆಳವಾದ ನೋಟ- ನಾವು ದೊಡ್ಡವರ ಬಗ್ಗೆ ಎತ್ತುವ ಅನೇಕ ಬಗೆಯ ಪ್ರಶ್ನೆಗಳಿಗೆ ಉತ್ತರ ಕಾಣಿಸಬಲ್ಲದು.  
 

ಕೊನೆ ಟಿಪ್ಪಣಿ:

ಇಷ್ಟೆಲ್ಲದರ ನಡುವೆ, ಮೊನ್ನೆ ಟೀಕೆ ಟಿಪ್ಪಣಿ ಪುಸ್ತಕಗಳ ಬಿಡುಗಡೆಯಲ್ಲಿ ಕಂಡ ದೃಶ್ಯ: ಹೊಸ ತಲೆಮಾರಿನ ಹುಡುಗರು, ಇನ್ನೂ ಸಂಬಳವೇ ಬಾರದಿರುವವರು, ಹೊಟ್ಟೆ ಬಟ್ಟೆಗೂ ಕಷ್ಟ ಪಡುವವವರು ಈ ಟೀಕೆ ಟಿಪ್ಪಣಿಗಳನ್ನು ಕೊಂಡು ಹೋಗುತ್ತಿದ್ದುದನ್ನು ಕಂಡು ಎದೆ ತುಂಬಿ ಬಂತು ಎಂಬುದನ್ನು ಇಲ್ಲಿ ಹೇಳಲೇಬೇಕು. ಆ ಹುಡುಗ ಹುಡುಗಿಯರಲ್ಲಿ ಲಂಕೇಶರ ಬರಹ ಆಳವಾಗಿ ಬೆಳೆದು ಅವರೂ ಚೆನ್ನಾಗಿ ಬರೆಯುವಂತಾಗಲಿ ಎಂದಷ್ಟೆ ಹಾರೈಸೋಣ. 

ಈ ಪುಸ್ತಕಗಳು ಹೊಸ ತಲೆಮಾರಿಗಂತೂ ಅತ್ಯಗತ್ಯವಾಗಿ ಬೇಕು ಎಂಬುದನ್ನು ಸೂಚಿಸುವ ಮೂರನೆಯ ಸಂಪುಟದ ಮುನ್ನುಡಿಯ ಕೊನೆಮಾತುಗಳು:

‘ಈ ಸಂಪುಟದಲ್ಲಿರುವ ಲಂಕೇಶರ ಕೊನೆಯ ವರ್ಷಗಳ ಬರಹಗಳಲ್ಲೂ ಮನುಷ್ಯನ, ಜಗತ್ತಿನ ಆಶೆ ಹತಾಶೆಗಳ ನಡುವೆಯೇ ಕಟ್ಟುವ, ಬದಲಿಸುವ ಆಶೆ ಹಾಗೂ ಕಾತರಗಳು ಹಾಗೇ ಇವೆ. ಈ ಟೀಕೆ ಟಿಪ್ಪಣಿಗಳಿಂದ ಕಳೆದ ನಲವತ್ತೈದು ವರ್ಷಗಳಲ್ಲಿ ಸಾವಿರಾರು ಲೇಖಕ, ಲೇಖಕಿಯರು ಅಂಕಣ ಬರಹ, ಆತ್ಮೀಯ ಸಂಪಾದಕೀಯ, ಗದ್ಯ, ಸಮಾಜವಿಮರ್ಶೆ, ಸಾಹಿತಿ-ಸಾಹಿತ್ಯಗಳನ್ನು ನೋಡುವ ಬಗೆ; ರಾಜಕೀಯ, ಸಾಮಾಜಿಕ ವಿಶ್ಲೇಷಣೆ; ಪ್ರತಿರೋಧ... ಇತ್ಯಾದಿಯಾಗಿ ಹಲವು ಮಾದರಿಗಳನ್ನು ಕಲಿತಿದ್ದಾರೆ. ಕಾಲದ ಕನ್ನಡಿಯಂತಿರುವ ಈ ಬರಹಗಳನ್ನು ಮತ್ತೆ ಮತ್ತೆ ಓದುವ ಯಾರೇ ಆದರೂ ತೀವ್ರವಾಗಿ ಬರೆಯುವ, ಕಾಳಜಿಯಿಂದ ಯೋಚಿಸುವ, ಒಳ-ಹೊರಗನ್ನು ಬೆಸೆಯುವ ಬರಹದ ಕಲೆಯನ್ನು ಕಲಿಯಬಲ್ಲರು; ಹಾಗೆಯೇ ಬದುಕುವ ಕಲೆಯನ್ನು ಕೂಡ. ಇದು ನನ್ನ ಪ್ರಾಮಾಣಿಕ ನಂಬಿಕೆ.’

ಈ ಟೀಕೆ ಟಿಪ್ಪಣಿಗಳು ಬೆಂಗಳೂರಿನ ಪುಸ್ತಕದ ಮಳಿಗೆಗಳಲ್ಲಿ ದೊರೆಯುತ್ತಿವೆ. ಈ ಮೂರೂ ಸಂಪುಟಗಳನ್ನು ಲಂಕೇಶರ ಕಾಲದಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿದ್ದ ಗೆಳೆಯ ಸತೀಶ್ ಮನೆ ಮನೆಗೂ ತಲುಪಿಸಲು ಸಿದ್ದರಿದ್ದಾರೆ. ಕನ್ನಡದ ಹೆಮ್ಮೆಯಂತಿರುವ ಈ ಕೃತಿಗಳು ನಿಮಗೆ, ನಿಮ್ಮ ಗೆಳೆಯ ಗೆಳತಿಯರಿಗೂ ಬೇಕಾದಲ್ಲಿ ಅವರನ್ನು ಸಂಪರ್ಕಿಸಿ.  

Satish MOBILE: 6363990245 
ಮೂರೂ ಕೃತಿಗಳಿಗೆ ರೂ.1000 (ಅಂಚೆ ವೆಚ್ಚ ಅಥವಾ ತಲುಪಿಸುವ ವೆಚ್ಚ ಸೇರಿ)
ಬಿಡಿ ಪ್ರತಿ: ರೂ. 350 (ಅಂಚೆ ವೆಚ್ಚ ಅಥವಾ ತಲುಪಿಸುವ ವೆಚ್ಚ ಸೇರಿ)
ಪುಸ್ತಕ ಬೇಕಾದವರು ತಮ್ಮ ಕರಾರುವಾಕ್ಕಾದ ವಿಳಾಸ, ಮೇಲ್ ಐಡಿ, ಫೋನ್ ನಂಬರುಗಳನ್ನು ಈ ಅಂಕಣಕ್ಕೂ ಕಳಿಸಬಹುದು.

blog
22 Mar 2026 ವಿಶ್ವ ಕಾವ್ಯ ದಿನದ ಸುತ್ತಮುತ್ತ

ಇದು ಒಮ್ಮೆ ಮೈಸೂರಿಗೆ ಹೋಗುವ ದಾರಿಯಲ್ಲಿ ಕಂಬಾರರು ಹೇಳಿದ ಪ್ರಸಂಗ: 

ಸಭೆಯೊಂದರಲ್ಲಿ ಮಾತಾಡುತ್ತಿದ್ದ ಶಂಬಾ ಜೋಷಿ ಸಮಾಜ ಹೇಗೆ ಪದಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸುತ್ತಿದ್ದರು.

ಮಧ್ಯ ಪ್ರವೇಶಿಸಿದ ಬೇಂದ್ರೆ ಹೇಳಿದರು: ‘ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುವುದಿಲ್ಲ; ಕವಿ ಸೃಷ್ಟಿಸುತ್ತಾನೆ; ಸಮಾಜ ಅದಕ್ಕೆ ಠಸ್ಸೆ ಒತ್ತುತ್ತದೆ’

ಶಂಬಾ: ಇಲ್ಲ ಇಲ್ಲ! ಸಮಾಜ, ಸಮುದಾಯ ಶಬ್ದಗಳನ್ನು ಸೃಷ್ಟಿಸುತ್ತದೆ. 

ಬೇಂದ್ರೆ: ಇಲ್ಲ ಇಲ್ಲ. ಸಮುದಾಯದಲ್ಲಿ ‘ಪ್ರಜೆ’ ಅನ್ನೋ ಶಬ್ದ ಒಂದು ಕಡೆ ಬಿದ್ದಿರುತ್ತೆ; ‘ಪ್ರಭುತ್ವ’ ಅನ್ನೋದು ಒಂದು ಕಡೆ ಬಿದ್ದಿರುತ್ತೆ. ಕವಿ ಅವೆರಡನ್ನೂ ಸೇರಿಸಿ ‘ಪ್ರಜಾಪ್ರಭುತ್ವ’ ಅನ್ನೋ ಪದಾನ ಸೃಷ್ಟಿಸುತ್ತಾನೆ…’

ಸಂಸ್ಕೃತಿ ಅಧ್ಯಯನಕಾರ ಶಂಬಾ- ಕವಿ ಬೇಂದ್ರೆ ನಡುವಣ ಈ ಜಟಾಪಟಿಯನ್ನು ಹೇಳುತ್ತಾ ಕಂಬಾರರು ಮತ್ಯಾವುದೋ ಕಾಕರಾಜಪ್ರೇಮಿ ಕವಿಗಳ ಕುರಿತು ನಗೆಯಾಡುತ್ತಾ ಮತ್ತೆಲ್ಲಿಗೋ ಹೊರಟರು…
ಕಂಬಾರರು ಹೇಳಿದ ಪ್ರಸಂಗದಲ್ಲಿದ್ದ ಶಂಬಾ-ಬೇಂದ್ರೆ ತಾತ್ವಿಕ ಜಗಳ ಮಾತ್ರ ನನ್ನೊಳಗೇ ಉಳಿಯಿತು. ನಿನ್ನೆ ಮಾರ್ಚ್ ೨೧ರಂದು ’ವಿಶ್ವ ಕಾವ್ಯ ದಿನ’ದ ಪೋಸ್ಟರುಗಳನ್ನು ಕವಿ, ಕವಯಿತ್ರಿಯರು ಅಲ್ಲಲ್ಲಿ ಪ್ರಕಟಿಸುತ್ತಿದ್ದಾಗ ಅದು ಮತ್ತೊಮ್ಮೆ ನೆನಪಾಯಿತು. 

ಈ ಪ್ರಸಂಗ ಹೇಳುತ್ತಿದ್ದ ಕಂಬಾರರಿಗೆ ಬೇಂದ್ರೆಯವರ ಜೊತೆಗೆ ಒಂದು ಬಗೆಯ ‘ಕಾವ್ಯ ಸ್ಪರ್ಧಾಜಗಳ’ ಇದ್ದರೂ, ಅವರು ಕೂಡ ಬೇಂದ್ರೆ ಹೇಳುತ್ತಿದ್ದ ಕವಿಯ ಶಬ್ದ ಸೃಷ್ಟಿ ಶಕ್ತಿಯ ಪರವಾಗೇ ಇದ್ದರೆಂದು ಊಹಿಸುವೆ. 

ಬೇಂದ್ರೆ ಕೊಟ್ಟ ‘ಪ್ರಜಾಪ್ರಭುತ್ವ’ ಪದದ ಹುಟ್ಟನ್ನು ವಿವರವಾಗಿ ಗಮನಿಸಿ: ಪ್ರಜಾಪ್ರಭುತ್ವದ ಆರಂಭದ ಚರ್ಚೆಗಳು ಸಾವಿರಾರು ವರ್ಷಗಳ ಕೆಳಗೆ ಗ್ರೀಸ್ ಅಥವಾ ರೋಮ್‌ನಲ್ಲಿ ಇದ್ದವು; ಅಥವಾ ಫ್ರಾನ್ಸ್ ದೇಶದ ವರ್ಸೈಲ್ಸ್ ಊರಿನಲ್ಲಿ ಜೂನ್ ೨೦, ೧೭೮೯ರಲ್ಲಿ ಒಂದು ದಿನ ಟೆನ್ನಿಸ್ ಕೋರ್ಟಿನಲ್ಲಿ ನಡೆದ ಚರ್ಚೆಗಳು ಡೆಮಾಕ್ರಸಿ ಅಥವಾ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದವು… ಈ ಥರದ ವಿವರಗಳೆಲ್ಲವೂ ಇವೆ. ಎಂದೋ ಯಾರೋ ಕವಿಮನಸ್ಸಿನ ಸೃಜನಶೀಲ ವ್ಯಕ್ತಿ ‘ಪ್ರಜಾಪ್ರಭುತ್ವ’ ಪದವನ್ನು ಸೃಷ್ಟಿಸಿರಬಹುದು, ಉಳಿದವರು ಅದನ್ನು ಒಪ್ಪಿರಬಹುದು; ಅಥವಾ ಹಲವರು ಮಾತುಮಾತಾಡುತ್ತಾ ‘ಡೆಮಾಕ್ರಸಿ’ ಎಂಬ ಪದ ಸೃಷ್ಟಿಯಾಗಿರಬಹುದು; ಡೆಮಾಕ್ರೆಸಿಯಲ್ಲಿ ದುಷ್ಟರ ದರ್ಬಾರು ಸೃಷ್ಟಿಯಾದಾಗ ಅದೇ ಪಶ್ಚಿಮ ‘ಡೆಮನೋಕ್ರೆಸಿ’ ಅಥವಾ ’ರಾಕ್ಷಸ ಪ್ರಭುತ್ವ’ ಎಂಬ ಪದವನ್ನು ಸೃಷ್ಟಿಸಿತು!

ಈ ಚರ್ಚೆ ಮತ್ತೆ ಕವಿ, ಕವಯಿತ್ರಿಯರ ಅಥವಾ ಕವಿ ಮನಸ್ಸಿನವರ ನವಪದ ಸೃಷ್ಟಿಯ ಸಾಧ್ಯತೆಯನ್ನೇ ಹೇಳುತ್ತಿದೆ. ರಾಜಪ್ರಭುತ್ವ, ಧರ್ಮಪ್ರಭುತ್ವಗಳ ಕಾಲದಲ್ಲೂ ಕನಸುಗಾರರು- ಅಂದರೆ ಕವಿ ಮನಸ್ಸಿನವರು- ಈ ವ್ಯವಸ್ಥೆಯನ್ನು ಬದಲಿಸಿ ಜನರೇ ಆಳುವ ಪ್ರಭುತ್ವವನ್ನು ಸೃಷ್ಟಿಸಿಕೊಳ್ಳಬೇಕೆಂದು ಕನಸು ಕಂಡರಲ್ಲವೆ? 

ಕಿ.ರಂ. ನಾಗರಾಜ್ ಕವಿಯ ನವಪದ ನಿರ್ಮಾಣದ ಬಗ್ಗೆ ಮೈದುಂಬಿ ಮಾತಾಡುತ್ತಿದ್ದುದು ನೆನಪಾಗುತ್ತದೆ: ‘ಈಗ ನೋಡಿ! ಪ್ರೇಮ ಅನ್ನೋ ಪದ ಇರುತ್ತೆ! ಕಾಶ್ಮೀರ ಅನ್ನೋ ಪದ ಇರುತ್ತೆ. ಇವೆರಡೂ ಸೇರಿ ಕುವೆಂಪೂಗೆ ‘ಪ್ರೇಮ ಕಾಶ್ಮೀರ’ ಅನ್ನೋ ಶಬ್ದ ಹೊಳೆಯುತ್ತೆ. ‘ಪಕ್ಷಿ’ ಅನ್ನೋ ಪದ ಇರುತ್ತೆ; ‘ಕಾಶಿ’ ಅನ್ನೋ ಪದ ಇರುತ್ತೆ; ಕುವೆಂಪು ಪದ್ಯದಲ್ಲಿ ಅದು ‘ಪಕ್ಷಿಕಾಶಿ’ ಆಗುತ್ತೆ…’ 

ಕುವೆಂಪು ಕಾವ್ಯದಲ್ಲಿ ನವಪದ ನಿರ್ಮಾಣ ಕುರಿತೇ ಕೀರಂ ವಿದ್ಯಾರ್ಥಿನಿ ಗೌರಿ  ಡಿಸರ್ಟೇಶನ್ ಬರೆದದ್ದು ನೆನಪಾಗುತ್ತದೆ. ಈ ಕೀರಂ ಜಾಡು ನನಗಂತೂ ಹಲ ಬಗೆಯಲ್ಲಿ ಕಾವ್ಯ ಓದುವ ದಾರಿ ತೋರಿಸಿದೆ; ತಂತಮ್ಮ ಕೆಲಸ ಮಾಡಿಕೊಂಡಿದ್ದ ಪದಗಳು ಕವಿಯ ನವಪದ ನಿರ್ಮಾಣ ಪ್ರತಿಭೆಯಲ್ಲಿ ‘ಪ್ರೇಮ ಕಾಶ್ಮೀರ’ ಅಥವಾ ‘ಪಕ್ಷಿಕಾಶಿ’ ಆಗಿ ಹೊಸ ಮೆಟಫರ್‍ ಅಥವಾ ರೂಪಕವಾಗಿ ಬೇರೆ ಬೇರೆ ಅರ್ಥಗಳು, ಚಿತ್ರಗಳು, ದರ್ಶನಗಳು ಸೃಷ್ಟಿಯಾಗುವ ಕುರಿತ ಕೀರಂ ನೋಟ ಕಾವ್ಯದ ಓದಿನ ಸಂಭ್ರಮವನ್ನು ಉಕ್ಕಿಸುತ್ತಲೇ ಇರುತ್ತದೆ.

ಇದೆಲ್ಲ ಬರೆಯುವಾಗ ಬೇಂದ್ರೆ ಶಂಬಾಗೆ ಹೇಳಿದ ಮಾತನ್ನೇ ಬದಲಾಯಿಸಿ ಹೇಳಬೇಕೆನ್ನಿಸುತ್ತದೆ: ಕವಿತೆ ಬಿದ್ದಿರುತ್ತೆ; ಓದುವವರು ಅದಕ್ಕೆ ಹೊಸ ಅರ್ಥ ಕೊಡುತ್ತಾರೆ. ಆಗ ಕವಿತೆಗೆ ರೆಕ್ಕೆ ಮೂಡಿ ಹಾರುತ್ತದೆ! ವಿಶ್ವ ಕಾವ್ಯದ ದಿನ ‘ಈಗ ಕವಿತೆ ‌ಓದುವವರೇ’ ಇಲ್ಲ ಎಂದು ಕೆಲ ಬಗೆಯ ಕವಿಗಳು ಹಲುಬುವುದು ನೆನಪಾಗುತ್ತದೆ; ಅಂಥ ಹಲುಬರು ‘ತಮ್ಮ’ ಕವಿತೆಯನ್ನು ‘ಓದುವವರಿಲ್ಲ’ ಎಂದು ತಮ್ಮ ಸ್ವ-ಮರುಕದ ಹಲುಬನ್ನು ಬದಲಿಸಿಕೊಳ್ಳುವುದು ಒಳ್ಳೆಯದು! 

ಈ ಮಾತು ಹೇಳಲು ಕಾರಣವಿದೆ: ಕವಿತೆಗಳನ್ನು ಯಾರು ಓದಲಿ ಬಿಡಲಿ, ಕರ್ನಾಟಕದ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೇಡಂ, ಮೇಷ್ಟರುಗಳು ಕೊನೇ ಪಕ್ಷ ಪಠ್ಯಪುಸ್ತಕಗಳಲ್ಲಿರುವ ಕವಿತೆಗಳನ್ನಾದರೂ ಓದುತ್ತಲೇ ಇರುತ್ತಾರೆ! ನಿತ್ಯ ಹಾಡು ಕೇಳುವ ಕೋಟ್ಯಾಂತರ ಜನ ಒಂದಲ್ಲ ಒಂದು ಬಗೆಯ ಕಾವ್ಯಕ್ಕೆ ಕಿವಿ ಕೊಟ್ಟೇ ಇರುತ್ತಾರೆ. ಪಾಪ್ಯುಲರ್‍ ಇರಲಿ, ರ್‍ಯಾಪ್ ಸಂಗೀತವಿರಲಿ, ಸಿನಿಮಾ ಹಾಡುಗಳಿರಲಿ ಅಲ್ಲೆಲ್ಲ ಕಾವ್ಯದ ಒಂದು ಎಳೆ- ಅದು ಕ್ಲೀಷೆಯಾದರೂ ಸರಿ, ಸವಕಲಾದರೂ ಸರಿ- ಇರುತ್ತದೆ; ಅಲ್ಲಿ ಕೂಡ ಪ್ರತಿಮೆಗಳು ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ… 

ಅಷ್ಟೇ ಯಾಕೆ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ…ಹೀಗೆ ಯಾವ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದರೂ ಹತ್ತಾರು ಹೊಸಬರು ಒಂದಲ್ಲ ಒಂದು ಬಗೆಯ ಕವಿತೆಯನ್ನು ಅಥವಾ ಕವಿತೆಯಂಥ ರಚನೆಗಳನ್ನು ಉತ್ಸಾಹದಿಂದ ಓದುತ್ತಲೇ ಇರುತ್ತಾರೆ. ಇವರ ನಡುವಿನಿಂದಲೇ ಒಬ್ಬಳೋ ಒಬ್ಬನೋ ಬರಬರುತ್ತಾ ಕಾವ್ಯವನ್ನು ಗಟ್ಟಿಯಾಗಿ ಹಿಡಿಯುತ್ತಾರೆ; ಇಂಥವರಿಗೆ ಸಾವಿರಾರು ವರ್ಷಗಳ ಕನ್ನಡ ಕಾವ್ಯ ಪರಂಪರೆಯ ಜೊತೆಗಿನ ತಕ್ಕಮಟ್ಟಿನ ಒಡನಾಟವಾದರೂ ದಕ್ಕಿದರೆ ಕನ್ನಡ ಭಾಷೆಯ ಸಹಜ ಲಯಗಳು ಅವರೊಳಗೆ ನುಡಿಯತೊಡಗುತ್ತವೆ…ಒಂದು ಭಾಷಾಪರಂಪರೆಯ ಸಹಜ ಲಯಗಳು ದಕ್ಕದಿದ್ದರೆ ಯಾರೂ ದೊಡ್ಡ ಕವಿಯಾಗುವುದಿಲ್ಲ. ಈ ನಂಟಿನ ಜೊತೆಗೇ ನೂರಾರು, ಸಾವಿರಾರು ಸಾಲುಗಳನ್ನು ಬರೆದು ಅಳಿಸಿ ಬೇಸರಾಗಿ ಬಿಸುಟೆದ್ದು…ಎಲ್ಲೋ ಒಂದು ಹೊಸ ಪ್ರತಿಮೆ ಹುಟ್ಟುತ್ತದೆ. ಹೊಸ ಸತ್ಯ ಕಂಡರೆ ತಾನೆ ಹೊಸ ಪ್ರತಿಮೆಯ ಹುಟ್ಟು! ಈ ಪ್ರಕ್ರಿಯೆಯನ್ನೂ ಕವಿಯೇ ಹೇಳಿದ್ದು ನನ್ನ ಬಾಯಲ್ಲೇ ಇದೆ: 

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ 
ಕಂಡೀತು ಗೆರೆಮಿರುವ ಚಿನ್ನದದಿರು.
ಹೊರ ತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ 
ಇನ್ನಾದರೂ ಕೊಂಚ ಕಲಿಯಬೇಕು;
ಹೊನ್ನ ಕಾಯಿಸಿ, ಹಿಡಿದು ಬಡಿದಿಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು

ಹೀಗೆ ಅಡಿಗರ ಕಾವ್ಯದಲ್ಲಾಗುವಂತೆ ಕವಿತೆ ಅಪಾರ ಶ್ರಮದಿಂದ ಮತ್ತೆ ಮತ್ತೆ ಒಡೆದು ಮುರಿದು ಕಟ್ಟಿ ರೂಪುಗೊಳ್ಳಬಹುದು; ಅಥವಾ ಅದು ಬೇಂದ್ರೆಯ ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿರಬಹುದು; ಮಾತು ಮಾತು ಮಥಿಸಿ ಬಂದ ನವನೀತವಾಗಿರಬಹುದು; ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ’ವಾಗಿರಬಹುದು…ಅಥವಾ ವರ್ಡ್ಸ್ ವರ್ತನ ‘ಸಹಜ ಭಾವನೆಗಳ ಸ್ವಚ್ಛಂದ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವನೆ’ಯಾಗಿರಬಹುದು.  

ಕಾವ್ಯವೇ ಎಲ್ಲವನ್ನೂ ನೋಡುವ, ಯೋಚಿಸುವ ಪರಿಯಾದ ಈ ಥರದವರಿಗಿಂತ ಭಿನ್ನವಾಗಿ ಕಾವ್ಯದಿಂದ ಸ್ಫೂರ್ತಿ ಪಡೆದ ದೊಡ್ಡ ಚಿಂತಕರ ಕಾವ್ಯ ಪ್ರೇರಣೆಗಳು ನೆನಪಾಗುತ್ತವೆ. ಮಾರ್ಕ್ಸ್-ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಯಾಕೆ ಅಪ್ಪಟ ಕಾವ್ಯ ಎಂದು ಜನ ಹೇಳುತ್ತಾರೆಂದು ಹಲವು ಸಲ ಯೋಚಿಸಿದ್ದೇನೆ. ತರುಣ ಕಾರ್ಲ್ ಮಾರ್ಕ್ಸ್ ಕವಿಯಾಗಿದ್ದುದು ನೆನಪಾಗುತ್ತದೆ. 

ಕಾರ್ಲ್ ಮಾರ್ಕ್ಸ್ ಹದಿನೆಂಟು-ಹತ್ತೊಂಬತ್ತನೇ ವಯಸ್ಸಿನ ನಡುವೆ ತೀವ್ರ ರೊಮ್ಯಾಂಟಿಕ್ ಕವಿತೆಗಳನ್ನು ಬರೆದ. ಇವು ತನ್ನ ಪ್ರಿಯತಮೆ ಜೆನ್ನಿಗಾಗಿ ಬರೆದ ’ಟು ಜೆನ್ನಿ’; ‘ಕನ್‌ಕ್ಲೂಡಿಂಗ್ ಸಾನೆಟ್ಸ್ ಟು ಜೆನ್ನಿ’ ಎಂಬ ಕವಿತಾ ಗುಚ್ಛ ಗಳಾದವು. ಮಾರ್ಕ್ಸ್ ಮುಂದೆ ಜೆನ್ನಿಯನ್ನೇ ಮದುವೆಯಾದ. ಅವುಗಳಲ್ಲೊಂದು ಕವಿತೆ ಹೀಗೆ ಶುರುವಾಗುತ್ತದೆ: 

ನೋಡು ನೋಡು! ಸಾವಿರ ಸಂಪುಟಗಳನ್ನು ತುಂಬಿಸಬಲ್ಲೆ 

ಪ್ರತಿ ಸಾಲಿನಲ್ಲೂ ಬರೆಬರೆದು ’ಜೆನ್ನಿ’ ‘ಜೆನ್ನಿ’ ಎಂದು.  

ಹದಿ ಹರೆಯದಲ್ಲಿ ಧುಮ್ಮಿಕ್ಕುವ ಉದ್ವೇಗದಲ್ಲಿ ಶುರುವಾದ ಈ ಕವಿತೆಯ ಕೊನೆ ಹೀಗಿದೆ:

ನಿಜಕ್ಕೂ ಇದನ್ನೊಂದು ಪಲ್ಲವಿಯಾಗಿ ಬರೆಯುವೆನು-
ಮುಂಬರುವ ಶತಶತಮಾನ ಇದನ್ನು ಕಾಣಲೆಂದು:
ಪ್ರೀತಿ ಎಂದರೆ ಜೆನ್ನಿ; ಜೆನ್ನಿ ಎಂಬುದು ಪ್ರೀತಿಯ ಹೆಸರು. 

ಹದಿನೆಂಟರ ಆಸುಪಾಸಿನಲ್ಲಿ ಈ ಥರದ ಕವಿತೆಗಳನ್ನು ಬರೆದ ಮಾರ್ಕ್ಸ್ ಇದಾದ ಹತ್ತು ಹದಿನೈದು ವರ್ಷಗಳ ನಂತರ ಕಮ್ಯುನಿಸಂ, ಸೋಷಲಿಸಂ ಕಡೆಗೆ ಗಂಭೀರವಾಗಿ ನಡೆದ. ಮುಂದಿನ ಶತಮಾನದಲ್ಲಿ ಕಮ್ಯುನಿಸ್ಟ್ ಕವಿ ಪಾಬ್ಲೋ ನೆರೂಡ ಕೂಡ ತನ್ನ ಹದಿನೆಂಟನೇ ವಯಸ್ಸಿನಲ್ಲಿ ತೀವ್ರ ಪ್ರೇಮಪದ್ಯಗಳನ್ನು ಬರೆದ; ಹತ್ತು ಹದಿನೈದು ವರ್ಷಗಳ ನಂತರ ಮಾರ್ಕ್ಸ್ ವಾದಿಯಾದ, ನೆರೂಡ ಹದಿಹರೆಯದಲ್ಲಿ ಬರೆದ ‘ಟು ನೈಟ್ ಐ ಕೆನ್ ರೈಟ್ ದ ಸ್ಸ್ಯಾಡೆಸ್ಟ್ ಲೈನ್ಸ್…’ ಎಂಬ ಪ್ರಖ್ಯಾತ ಪದ್ಯವನ್ನು ಇದೇ ಅಂಕಣದಲ್ಲಿ ಎರಡು ವರ್ಷಗಳ ಕೆಳಗೆ ಕನ್ನಡಿಸಿ ಕೊಟ್ಟಿದ್ದು ನಿಮಗೆ ನೆನಪಿರಬಹುದು: 

 ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.

‘ದಿಕ್ಕೆಟ್ಟ ಕನಸು, ಕನವರಿಕೆ ಕಿಕ್ಕಿರಿದು ರಾತ್ರಿ ಕಂಗೆಟ್ಟಿದೆ;
ಎಲ್ಲೋ ದೂರದಲ್ಲಿ ನೀಲಿ ತಾರೆಗಳು ಥರಥರ ನಡುಗುತ್ತಿವೆ…’
ಹೀಗೆಲ್ಲ ಬರೆಯಬಲ್ಲೆ.

ಇರುಳಗಾಳಿ ಬಾನಲ್ಲಿ ಸುತ್ತರಗಾಣ ಹೊಡೆದು ಸುಯ್ಯೆಂದು ಹಾಡುತ್ತಿದೆ.
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು 

ನಾನವಳ ಪ್ರೀತಿಸಿದೆ; ಅವಳೂ ಆಗೀಗ ನನ್ನ ಪ್ರೀತಿಸಿದಳು.
ಇಂಥ ಇರುಳುಗಳಲ್ಲಿ ಈ ತೋಳ ತೆಕ್ಕೆಯಲ್ಲಿ ಅವಳ ಬಾಚಿಕೊಂಡಿದ್ದೆ.

ಹೀಗೆ ಈ ಕವಿತೆ ಓಡುತ್ತದೆ! ಸಾಮಾನ್ಯವಾಗಿ ಕವಿತೆ ಉಕ್ಕುವುದೇ ತಾಯ್ನುಡಿಯಲ್ಲಿ. ಮಾರ್ಕ್ಸ್ ಬರೆದ ಜರ್ಮನ್ ಭಾಷೆಯಲ್ಲಿ ಅಥವಾ ನೆರೂಡ ಬರೆದ ಸ್ಪ್ಯಾನಿಷ್ ಭಾಷೆಯಲ್ಲಿ ಈ ಕವಿತೆಗಳ ಸಂಗೀತ, ತೀವ್ರತೆ ಹೇಗಿದ್ದಿರಬಹುದು ಎಂಬುದನ್ನು ತಂತಮ್ಮ ಭಾಷೆಗಳಲ್ಲಿ ಕವಿತೆ ಬರೆಯುವವರು ಅನುಭವಿಸಿಕೊಳ್ಳಬಹುದು; ಅದರಲ್ಲೂ ಇಂಥ ಉತ್ಕಟ ಅನುಭವವನ್ನು, ತೀವ್ರವಾದ ಪ್ರೇಮಕವಿತೆಗಳನ್ನು ಬರೆದಿರುವವರು, ಈ ಕವಿತೆಗಳನ್ನು ಇಷ್ಟೇ ತೀವ್ರವಾಗಿ ಓದಿರುವವರು ಇದನ್ನು ಊಹಿಸಿಕೊಳ್ಳಬಲ್ಲರು. ಅದರಲ್ಲೂ ಮೈಯೇ ನುಡಿಯುವ ಪ್ರೇಮಕವಿತೆ ಬರೆದ ಹೆಣ್ಣು, ಗಂಡುಗಳು ಈ ತೀವ್ರತೆಯನ್ನು ಇನ್ನಷ್ಟು ಅನುಭವಿಸಿರಬಲ್ಲರು; ಅಷ್ಟೇ ಅಲ್ಲ, ಇಂಥ ಪ್ರೇಮಕವಿತೆಗಳನ್ನು ಯಾವ ಗಳಿಗೆಯಲ್ಲಾದರೂ, ಯಾವ ವಯಸ್ಸಿನಲ್ಲಾದರೂ ಬರೆದಾಗಲೂ ಮೈ ಮಧುರವಾಗಿ ಕಂಪಿಸುವ ತೀವ್ರ ಕೋಮಲತೆ ಹಬ್ಬುವುದನ್ನು ಕಂಡುಂಡಿರಬಹುದು. 

ಎಲ್ಲ ತೀವ್ರ ಬರವಣಿಗೆಗೂ ಕಾವ್ಯವೇ ಮೂಲ. ಬರೆಯುವವರಿಗೆ ನಿತ್ಯವೂ ಕಾವ್ಯ ದಿನವೇ! ಏನನ್ನಾದರೂ ಬರೆಯಲಿ, ಕಾವ್ಯದ ತೀವ್ರಸ್ಥಿತಿ ದಕ್ಕದಿದ್ದರೆ ಬರವಣಿಗೆಯಲ್ಲಿ ಜೀವ ಸಂಚಾರ ಎಂಬುದಿಲ್ಲ! ಕಾರ್ಲ್ ಮಾರ್ಕ್ಸ್ ಸಾಲನ್ನೇ ಕೊಂಚ ಪಲ್ಲಟಿಸಿ ಹೇಳಿದರೆ ಅದು ಸವಕಲಾಗುತ್ತದೆ ಎನ್ನಿಸಿದರೂ ಹೇಳಿಯೇಬಿಡಬೇಕೆನ್ನಿಸುತ್ತದೆ: ‘ಕಾವ್ಯ ಎಂದರೆ ಪ್ರೀತಿ; ಪ್ರೀತಿ ಎಂಬುದು ಕಾವ್ಯದ ಹೆಸರು’ 

ಈ ಬರಹದ ಆರಂಭದಲ್ಲಿರುವ ಶಂಬಾ- ಬೇಂದ್ರೆ ಚರ್ಚೆಗೆ ಮತ್ತೆ ವಾಪಸಾಗೋಣ: ಎಲ್ಲೋ ಭಾಷೆಯಲ್ಲಿ, ಸಮಾಜದಲ್ಲಿ ಇದ್ದ ವರ್ಗ-ವರ್ಗ-ಸಂಘರ್ಷ-ವರ್ಗಪ್ರಜ್ಞೆ; ಉಳ್ಳವರು-ನಿರ್ಗತಿಕರು; ದುಡಿಯವ ಜನರ ಸರ್ವಾಧಿಕಾರ…ಇಂಥ ಪರಿಕಲ್ಪನೆಗಳು ಕವಿ ಮಾರ್ಕ್ಸ್ ಕನಸಿದ ಹೊಸ ಸಮಾಜದ ಹಿನ್ನೆಲೆಯಲ್ಲೂ ಹೊಸ ಅರ್ಥ ಪಡೆದಿರಬಹುದು. ಮುಂದೆ ಕವಿ ಮಾರ್ಕ್ಸ್ ಕಟ್ಟಿದ ವೈಜ್ಞಾನಿಕ ಸಿದ್ಧಾಂತದ ಕನಸಿನ ಆಶಯಗಳು ಜಗತ್ತಿನ ಅರ್ಧ ಭಾಗಕ್ಕಿಂತ ಹೆಚ್ಚು ಹಬ್ಬಿದ್ದು ಇಂಥ ಕವಿಮನಸ್ಸಿನ ಹೋರಾಟಗಾರರು, ಚಿಂತಕ ಚಿಂತಕಿಯರು ಈ ಕವಿಕನಸುಗಳನ್ನು ಮುಂದೊಯ್ದದ್ದರಿಂದ ಅಲ್ಲವೆ? 

ಮಾರ್ಕ್ಸ್, ಅಂಬೇಡ್ಕರ್ ಎಲ್ಲರನ್ನೂ ಜಡವಾಗಿಸುವವರು ಅಂಬೇಡ್ಕರ್ ಸಂತ ಕವಿ ತುಕಾರಾಮನ ಅಭಂಗಗಳಿಂದ ಸ್ಫೂರ್ತಿಗೊಂಡಿದ್ದನ್ನು; ಮಾರ್ಕ್ಸ್ ಮಹಾಕವಿ ಗಯಟೆ, ಹೆನ್ರಿಕ್ ಹೈನ್, ಶೆಲ್ಲಿ ಮೊದಲಾದವರ ಕಾವ್ಯದಿಂದ ಪ್ರೇರಣೆ ಪಡೆದಿದ್ದನ್ನು ಗಮನಿಸುವುದು ಒಳ್ಳೆಯದು.
 



Latest Video


Nataraj Huliyar Official
YouTube Channel

SUBSCRIBE