ಈ ಘಟನೆ ಕೆಲವು ವರ್ಷಗಳ ಕೆಳಗೆ ತೀರಿಕೊಂಡ ತಮಿಳು ಲೇಖಕ, ಆಪ್ತಗೆಳೆಯ ಪ್ರೊಫೆಸರ್ ನಂಜುಂಡನ್ ಹೇಳಿದ್ದು:
ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಒಮ್ಮೆ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದರು. ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ಅಡ್ಡಾಡುತ್ತಿದ್ದಾಗ ಹುಡುಗನೊಬ್ಬ ದನ ಮೇಯಿಸುವುದನ್ನು ನೋಡಿದರು; ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಹುಡುಗ ದನ ಮೇಯಿಸುತ್ತಿದಾನಲ್ಲ ಎನ್ನಿಸಿ, ಆ ಹುಡುಗನನ್ನು ಕರೆದು, ‘ಯಾಕೋ ಸ್ಕೂಲಿಗೆ ಹೋಗ್ತಾ ಇಲ್ಲ?’ ಅಂದರು.
ಪ್ರಶ್ನೆ ಕೇಳುತ್ತಿದ್ದವರು ರಾಜ್ಯದ ಮುಖ್ಯಮಂತ್ರಿ ಎಂಬುದು ಹುಡುಗನಿಗೆ ಗೊತ್ತಿರಲಿಲ್ಲ.
‘ಸ್ಕೂಲ್ಗೋದ್ರೆ ನೀನು ಊಟ ಕೊಡ್ತೀಯ?’ ಅಂದ.
‘ಊಟ ಕೊಟ್ರೆ ಸ್ಕೂಲಿಗೆ ಹೋಗ್ತೀಯ?’ ಕಾಮರಾಜ್ ಕೇಳಿದರು.
‘ಹೂಂ!’ ಅಂದ ಹುಡುಗ.
ಹುಡುಗ ಕೊಟ್ಟ ಉತ್ತರದ ಬಗ್ಗೆ ಕಾಳಜಿಯಿಂದ ಯೋಚಿಸಿದ ಕಾಮರಾಜ್ಗೆ ಹುಡುಗನ ಕಷ್ಟ ಗೊತ್ತಿತ್ತು. ಹುಡುಗನ ಸವಾಲಿಗೆ ಉತ್ತರವೂ ಹೊಳೆಯಿತು. ತಮಿಳುನಾಡಿನ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಕೊಡುವ ಯೋಜನೆ ಹುಟ್ಟಿದ್ದು ಆಗ.
ಈ ಯೋಜನೆಗೆ ಕಾಮರಾಜ್ ಹುಡುಗನಾಗಿದ್ದಾಗ ಕಂಡುಂಡ ಅನುಭವವೂ ಕಾರಣವಾಗಿತ್ತು. ಪ್ರೈಮರಿ ಸ್ಕೂಲಿನಲ್ಲಿ ಕಾಮರಾಜ್ಗೆ ಮೇಷ್ಟ್ರಾಗಿದ್ದ ವೇಲಾಯುಧನ್ಗೆ ಕೋಲು ಬಿಟ್ಟರೆ ಬೇರೆ ಮಾರ್ಗ ಗೊತ್ತಿರಲಿಲ್ಲ. ಈ ಮೇಷ್ಟ್ರಿಂದ ಗಣಿತ, ವರ್ಣಮಾಲೆ ಕಲಿಯುವ ಹೊತ್ತಿಗೆ ಕಾಮರಾಜ್ ಸುಸ್ತಾಗಿ ಹೋದ. ಮೇಷ್ಟರ ಒರಟುತನದಿಂದ ಬೇಸತ್ತಿದ್ದ ತಂದೆ ತಾಯಿಗಳು ಮಗನನ್ನು ಬೇರೆ ಶಾಲೆಗೆ ಸೇರಿಸಿದರು.
ಮುಂದೆ ಕಾಮರಾಜ್ ವಿರುಧುಪಟ್ಟಿಯ ಕ್ಷತ್ರಿಯ ವಿದ್ಯಾಲಯ ಹೈಸ್ಕೂಲ್ ಸೇರಿದ. ನಾಡಾರ್ ಸಮುದಾಯ ತಮ್ಮ ಸಮುದಾಯದ ಹುಡುಗರಿಗೆ ಶಿಕ್ಷಣ ದೊರಕಿಸಲು ಆರಂಭಿಸಿದ ಶಾಲೆ ಇದು. ಈ ಶಾಲೆಗೆ ಅಲ್ಲಿನ ಸಮುದಾಯದ ಪ್ರತಿಯೊಂದು ಮನೆಯೂ ಒಂದೊಂದು ಹಿಡಿ ಅಕ್ಕಿ ಕೊಡುತ್ತಿತ್ತು. ಅದನ್ನು ‘ಪಿಡಿ ಅರಸಿ ಶಾಲೆ’ ಅಂದರೆ ‘ಹಿಡಿ ಅಕ್ಕಿ ಶಾಲೆ’ ಎನ್ನುತ್ತಿದ್ದರು. ನಂತರ ಆ ಸಮುದಾಯದ ಜನ ಈ ಶಾಲೆಗೆ ಮಾಡುತ್ತಿದ್ದ ಸಹಾಯವನ್ನು ಇನ್ನಷ್ಟು ಹೆಚ್ಚಿಸಿದರು.
ಹನ್ನೆರಡನೆಯ ವಯಸ್ಸಿಗೆ ಶಾಲೆ ಬಿಟ್ಟ ಕಾಮರಾಜ್ ಮುಂದೆ ಸ್ವಾತಂತ್ರ್ಯ ಚಳುವಳಿ ಸೇರಿದರು. ಗಾಂಧೀಜಿಯ ಒಂದು ಭಾಷಣ ಅವರ ನೋಟವನ್ನೇ ಬದಲಿಸಿತು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರು ದೇಶದ್ರೋಹದ ಆಪಾದನೆ ಮೇಲೂ ಕಾಮರಾಜರನ್ನು ಜೈಲಿಗೆ ಕಳಿಸಿದರು. ಸ್ವತಂತ್ರ ಭಾರತದಲ್ಲಿ ಕಾಮರಾಜ್ ೧೯೫೪-೧೯೬೩ರ ನಡುವೆ ಎರಡು ಸಲ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅವರು ಉಚಿತ ಪ್ರಾಥಮಿಕ ಶಿಕ್ಷಣವನ್ನು ರಾಜ್ಯದ ಎಲ್ಲೆಡೆ ಜಾರಿಗೊಳಿಸಲು ಕೂಡ ಬಾಲ್ಯದ ಅನುಭವ ಕಾರಣವಾಗಿತ್ತು.
ಕಾಮರಾಜ್ (೧೯೦೩-೧೯೭೫) ಆರಂಭಿಸಿದ ಮಧ್ಯಾಹ್ನದ ಊಟದ ಯೋಜನೆ ‘ಹಿಡಿ ಅಕ್ಕಿ ಶಾಲೆ’ಯಿಂದ ಬಂದಂತೆ, ದಾರಿಯಲ್ಲಿ ಎದುರಾದ ದನ ಮೇಯಿಸುವ ಹುಡುಗನ ಪ್ರಶ್ನೆಯಿಂದಲೂ ಹುಟ್ಟಿತ್ತು. ಕಾಮರಾಜರ ಉಳಿದ ಸಾಧನೆಗಳ ಜೊತೆಗೇ ಅವರು ಜನರ ದನಿಗೆ ಕಿವಿ ಕೊಟ್ಟ ರೀತಿ ಕೂಡ ಮುಖ್ಯವಾದುದು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾಲ್ಯದಲ್ಲಿ ತಾವು ಕಂಡುಂಡ ಹಸಿವೇ ಉಚಿತ ಅಕ್ಕಿ ಕೊಡುವ ಯೋಜನೆಯ ಹಿಂದಿರುವ ಪ್ರೇರಣೆ ಎಂದು ಹಲವು ಸಲ ಹೇಳಿರುವುದು ಎಲ್ಲರಿಗೂ ಗೊತ್ತಿದೆ.
ಕಾಮರಾಜ್ಗಿಂತ ಭಿನ್ನವಾಗಿ, ಭಾರತದುದ್ದಕ್ಕೂ ಅಡ್ಡಾಡಿ ಜನರ ಸಂಕಷ್ಟಗಳನ್ನು ಕಂಡಿದ್ದ ಲೋಹಿಯಾ ಒಮ್ಮೆ ತಾವು ಕಂಡ ಸತ್ಯವನ್ನು ಹೇಳಿದರು: ‘ನಮ್ಮ ದೇಶದ ಜಾಡಮಾಲಿಯೊಬ್ಬ ದಿನಕ್ಕೆ ಎರಡು ರೂಪಾಯಿ ಗಳಿಸುತ್ತಾನೆ; ಹೊಲದಲ್ಲಿ ಕೂಲಿ ಮಾಡುವವನಿಗೆ ಹತ್ತು, ಹನ್ನೆರಡಾಣೆ ಆದಾಯ. ಆದರೆ ನಮ್ಮ ಪ್ರಧಾನಿಯ ಒಂದು ದಿನದ ಖರ್ಚು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ.'
‘ಸಾಮಾನ್ಯರ ದಿನನಿತ್ಯದ ವರಮಾನ ಮೂರಾಣೆ’ ಎಂಬ ಅರವತ್ತರ ದಶಕದ ಮುಖ್ಯ ಚರ್ಚೆ ರೂಪುಗೊಂಡ ಗಳಿಗೆ ಕುರಿತು ರಬಿರಾಯ್ ಬರೆಯುತ್ತಾರೆ:
ಒಮ್ಮೆ ಹಳ್ಳಿಯೊಂದರಲ್ಲಿ ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಹುಡುಗನನ್ನು ಲೋಹಿಯಾ ಕೇಳಿದರು: ‘ನಿನ್ನ ಒಂದು ದಿನದ ಆದಾಯ ಎಷ್ಟು?'
‘ಮೂರು, ಮೂರೂವರೆ ಆಣೆ' ಎಂದ ಹುಡುಗ.
ಈ ಉತ್ತರ ಕೇಳಿದ ನಂತರ ಲೋಹಿಯಾ ಭಾರತದ ಸಾಮಾನ್ಯ ಜನರ ನಿತ್ಯದ ಆದಾಯದ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿದರು. ಜನರ ತಲಾ ಆದಾಯದ ಬಗ್ಗೆ ಸರ್ಕಾರ ಕೊಡುತ್ತಿರುವ ಅಂಕಿ ಅಂಶಗಳು ಬೋಗಸ್ ಎಂಬುದನ್ನು ಬಯಲಿಗೆಳೆಯುತ್ತಾ ಲೋಹಿಯಾ ೧೯೬೨ರ ಲೋಕಸಭಾ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಮತ್ತೆ ಎತ್ತಿದರು. ಪ್ರಧಾನಮಂತ್ರಿಯವರ ದಿನದ ಖರ್ಚನ್ನು ಕುರಿತ ಈ ತಾತ್ವಿಕ ಪ್ರಶ್ನೆ ಕೇವಲ ನೆಹರೂ ಕುರಿತ ಪ್ರಶ್ನೆಯಾಗಿರಲಿಲ್ಲ; ಬದಲಿಗೆ, ಅಧಿಕಾರಸ್ಥರು ಹಾಗೂ ಜನಸಾಮಾನ್ಯರ ವರಮಾನ-ವೆಚ್ಚದ ಅಂತರ ಕುರಿತ ವ್ಯಾಪಕ ಪ್ರಶ್ನೆಯಾಗಿತ್ತು.
ಇವೆರಡೂ ದೇಶದ ಇಬ್ಬರು ದೊಡ್ಡ ರಾಜಕಾರಣಿಗಳು ಎತ್ತಿದ ಪ್ರಶ್ನೆಗಳಾದರೆ, ಕರ್ನಾಟಕದ ವಿಶಿಷ್ಟ ನಾಯಕ ಬಿ. ನಾರಾಯಣರಾವ್ ಅವರ ವಿದ್ಯಾರ್ಥಿದೆಸೆಯ ಕಾಳಜಿಯಿಂದ ಹುಟ್ಟಿದ ಪ್ರಶ್ನೆಯ ಪರಿಣಾಮ ಕೂಡ ಇಷ್ಟೇ ಮುಖ್ಯವಾಗಿದೆ. ಬಸವರಾಜು ಮೇಗಲ್ಕೇರಿ ಸಂಪಾದಿಸಿರುವ ‘ನಮ್ಮ ಅರಸು’ ಪುಸ್ತಕದಲ್ಲಿ ದಾಖಲಾಗಿರುವ ಘಟನೆ ಇದು: ಓದಲು ಹಾಸ್ಟೆಲ್ ಇಲ್ಲದೆ ಕಷ್ಟಪಡುತ್ತಿದ್ದ ಬೀದರ್ ಜಿಲ್ಲೆಯ ಬಸಂತಪುರದ ಕೋಲಿ ಸಮುದಾಯದ ಬಡ ಬಿ.ಎ. ವಿದ್ಯಾರ್ಥಿ ಬಿ. ನಾರಾಯಣರಾವ್ ಹುಡುಗರನ್ನು ಕಟ್ಟಿಕೊಂಡು ಬಂದು ೧೯೭೬ರಲ್ಲಿ ವಿಧಾನಸೌಧದ ಎದುರು ಒಂಬತ್ತು ದಿನ ಸತ್ಯಾಗ್ರಹ ಮಾಡಿದರು. ಹುಡುಗರ ಅಹವಾಲು ಕೇಳಿದ ಮುಖ್ಯಮಂತ್ರಿ ಅರಸು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ೨೨೪ ಪ್ರಿ-ಮೆಟ್ರಿಕ್ ಹಾಗೂ ೨೧ ಪೋಸ್ಟ್ಮೆಟ್ರಿಕ್ ಹಾಸ್ಟೆಲುಗಳನ್ನು ಮಂಜೂರು ಮಾಡಿದರು.
ಮುಂದೆ ನಾರಾಯಣರಾವ್ ಮೊದಲ ಬಾರಿಗೆ ೨೦೧೮ರಲ್ಲಿ ಬಸವಕಲ್ಯಾಣದ ಶಾಸಕರಾದರು. ‘ಜವಾರಿ ಜನನಾಯಕರಾಗಿದ್ದ ನಾರಾಯಣರಾವ್ ಕೋವಿಡ್ ಸಮಯದಲ್ಲಿ ಅಸಹಾಯಕ ಹಳ್ಳಿಗರಿಗೆ ಸಹಾಯ ಮಾಡಲು ಊರೂರು ಸುತ್ತಿ ೨೦೨೦ರಲ್ಲಿ ತೀರಿಕೊಂಡರು’ ಎಂದು ಗೆಳೆಯ ದೇವು ಪತ್ತಾರ್ ಹೇಳಿದರು.
ಇವತ್ತಿಗೂ ಬಡವರಿಗೆ ಕೊಡುವ ಹತ್ತು ಕೆ.ಜಿ. ಅಕ್ಕಿಯನ್ನು ಆಡಿಕೊಳ್ಳುವ ಹೊಟ್ಟೆ ತುಂಬಿದ ಮಂದಿ ನಮ್ಮ ಸುತ್ತ ಇದ್ದಾರೆ. ಮಕ್ಕಳಿಗೆ ಕೊಡುವ ಮಧ್ಯಾಹ್ನದ ಊಟವನ್ನು ಸಿನಿಕತೆಯಿಂದ ಹೀಗಳೆವ ಹೀನರಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಜಾತಿವಿಕಾರದಿಂದ ಕ್ಯಾತೆ ತೆಗೆಯುವವರಲ್ಲಿ ಸಾಧಾರಣ ಹುಂಬರಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎಂ.ಎಸ್. ತಿಮ್ಮಪ್ಪ ಥರದವರೂ ಇದ್ದಾರೆ; ಮಠಾಧೀಶರಿದ್ದಾರೆ. ಇಂಥ ಜನಕ್ಕೆ ಹಿಂದೊಮ್ಮೆ ಮಧ್ಯಾಹ್ನದ ಉಪ್ಪಿಟ್ಟಿನ ಯೋಜನೆ ಕೋಟ್ಯಂತರ ಮಕ್ಕಳು ಶಿಕ್ಷಣ ಪಡೆಯಲು ನೆರವಾಗಿದೆ; ಆ ಮಕ್ಕಳನ್ನು ಕಾಪಾಡಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಬಿಸಿಯೂಟ ಯೋಜನೆಯಿಂದ ದಲಿತ ಹಿಂದುಳಿದ ವರ್ಗಗಳ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ, ವಿದ್ಯಾಭ್ಯಾಸ ದೊಡ್ಡ ಮಟ್ಟದಲ್ಲಿ ಹೆಚ್ಚಿರುವ ಅಂಕಿ, ಅಂಶಗಳು ಗೊತ್ತಿರಲಿಕ್ಕಿಲ್ಲ.
ಇವತ್ತು ಹೈಸ್ಕೂಲ್ವರೆಗಿನ ಶಾಲೆಗಳ ಎಲ್ಲ ಜಾತಿ, ವರ್ಗಗಳ ಮಕ್ಕಳು ಮಧ್ಯಾಹ್ನದ ಊಟದ ಪ್ರಯೋಜನ ಪಡೆಯುತ್ತಿದ್ದಾರೆ. ಮೊದಲು ಒಂದನೆಯ ತರಗತಿಯಿಂದ ಐದನೇ ತರಗತಿಯ ಮಕ್ಕಳವರೆಗೂ ಜಾರಿಗೆ ಬಂದ ಬಿಸಿಯೂಟ ಯೋಜನೆ ಕುರಿತು ಗೆಳೆಯ, ಸಮಾಜವಿಜ್ಞಾನಿ ಎಚ್. ಡಿ. ಪ್ರಶಾಂತ್ ಮಾಡಿದ ’ಶಾಲಾ ಬಿಸಿಯೂಟ ಅಧ್ಯಯನ ಯೋಜನೆ’ ಎಂಬ ಅಧ್ಯಯನ ೨೦೦೪ರಲ್ಲಿ ಪ್ರಕಟವಾಯಿತು; ಈ ಯೋಜನೆಯ ವ್ಯಾಪಕ ಪರಿಣಾಮ ಕುರಿತ ಚರ್ಚೆ ಈ ಪುಸ್ತಕದಲ್ಲಿ ಆರಂಭವಾಯಿತು. ಈ ಯೋಜನೆ ಹೈಸ್ಕೂಲಿನವರೆಗೂ ವಿಸ್ತರಿಸಿದ ಮೇಲೆ ಪ್ರಶಾಂತ್ ಈ ಯೋಜನೆಯನ್ನು ಮತ್ತೆ ಮತ್ತೆ ವಿಶ್ಲೇಷಿಸಿದ್ದಾರೆ.
ಹುಳಿಯಾರಿನ ಮಾಧ್ಯಮಿಕ ಶಾಲೆಯಲ್ಲಿ ಮಧ್ಯಾಹ್ನ ಕೊಡುತ್ತಿದ್ದ ಉಪ್ಪಿಟ್ಟಿನ ವಾಸನೆ ಇನ್ನೂ ನನ್ನ ಮೂಗಿನಲ್ಲಿದೆ. ಹಳ್ಳಿಯಿಂದ ಬರುತ್ತಿದ್ದ ಮಕ್ಕಳಿಗೆ ಆ ಉಪ್ಪಿಟ್ಟು ಕೂಡ ಆಸರೆಯಾಗಿ ಎಷ್ಟೋ ಜನ ಶಾಲೆ ಬಿಡಲಿಲ್ಲ ಎಂಬುದು ನಂತರ ಗೊತ್ತಾಯಿತು. ಕನ್ನಡ ದಲಿತ ಆತ್ಮಕತೆಗಳಲ್ಲಿ ಶಾಲೆಯ ಉಪ್ಪಿಟ್ಟು ತಮ್ಮ ಓದಿಗೆ ನೆರವಾದ ಪ್ರಸಂಗಗಳಿವೆ. ಅವತ್ತೂ ಆ ಉಪ್ಪಿಟ್ಟಿನ ಬಗ್ಗೆ ಮೂಗು ಮುರಿಯುತ್ತಾ ಬಾಯಿಗೆ ಬಂದದ್ದು ಹೇಳುತ್ತಿದ್ದವರ ಶನಿಸಂತಾನ ಇವತ್ತೂ ಇದೆ. ಮಹಿಳೆಯರಿಗೆ ಟಿಕೆಟ್ರಹಿತ ಬಸ್ ಪ್ರಯಾಣದ ಅವಕಾಶ ಕೊಟ್ಟಾಗ ಅದರ ವಿರುದ್ಧ ಮಾತಾಡುವವರೂ ಇವರೇ. ಖ್ಯಾತ ಲೇಖಕಿಯೊಬ್ಬರು ಮೊನ್ನೆ ಇಂಥದೇ ಆಣಿಮುತ್ತನ್ನು ಉದುರಿಸಲು ಹೊರಟು, ನನ್ನ ನಿಲುವು ನೆನಪಾಗಿಯೋ ಏನೋ, ತಮ್ಮ ವಿಷವಾಕ್ಯವನ್ನು ಹಾಗೇ ನುಂಗಿಕೊಂಡರು! ಉಚಿತ ಹಾಸ್ಟೆಲುಗಳಲ್ಲಿ ಎರಡು ಹೊತ್ತು ಊಟ ಮಾಡಿ ಬದುಕಿ ದೊಡ್ಡ ದೊಡ್ಡ ಹುದ್ದೆ ಹಿಡಿದವರ ಸಾವಿರಾರು ಉದಾಹರಣೆಗಳು ಇಂಥ ಸಿನಿಕರಿಗೆ ಗೊತ್ತಿರಲಿಕ್ಕಿಲ್ಲ.
ಎಂದೋ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಜನರ ಹಸಿವನ್ನು ನೀಗಿಸುವ ಚಿಂತನೆ-ಯೋಜನೆಗಳು ಹೊಳೆಯಬಲ್ಲವು. ಅಮೆರಿಕದ ಕರಿಯರ, ಬಡವರ ಕಷ್ಟ ಕಂಡಿದ್ದ ಅಧ್ಯಕ್ಷ ಬರಾಕ್ ಒಬಾಮ ‘ಒಬಾಮ ಕೇರ್’ ಎಂಬ ಯೋಜನೆ ಸ್ಥಾಪಿಸಿ ಅಮೆರಿಕದ ಲಕ್ಷಾಂತರ ಬಡವರ ಆರೋಗ್ಯವನ್ನು ಪೊರೆದರು. ದುರಹಂಕಾರಿ ಅಧ್ಯಕ್ಷ ಟ್ರಂಪ್ ಇಂಥ ಜನಪರ ಯೋಜನೆಗಳನ್ನು ಕೊಲ್ಲತೊಡಗಿದ.
ಇದರಿಂದ ಟ್ರಂಪ್ ಎಂಬಾತನಿಗೆ ಬಂದ ಲಾಭವೇನು ಎಂದು ನೀವು ಕೇಳಬಹುದು. ಮೇಲ್ವರ್ಗದ ಜನರ ಅಹಂಕಾರದ ತಣಿವು ಯಾವ ಯಾವ ರೀತಿ ಆಗುತ್ತಿರುತ್ತದೋ ಯಾರು ಬಲ್ಲರು! ಬಡವರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನಗಳ ದಿನಗೂಲಿ ಕೆಲಸ ಕೊಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯೋಜನೆಯನ್ನು ಹಿನ್ನೆಲೆಗೆ ತಳ್ಳಿರುವುದಕ್ಕೂ ಹೊಟ್ಟೆ ತುಂಬಿದವರ ದುರಹಂಕಾರವೇ ಕಾರಣ. ಕೊನೇ ಪಕ್ಷ ಬಡತನದಿಂದ ನೊಂದ ಅಧಿಕಾರಿ, ರಾಜಕಾರಣಿಗಳಿಗಾದರೂ ನೊಂದವರ ನೋವನ್ನು ಕಡಿಮೆ ಮಾಡಲು ಪ್ರೇರಣೆಯಾಗದಿದ್ದರೆ, ಅವರ ನೋವಿಗೆ ಏನರ್ಥವಿದೆ?
ಕೊನೆಗೂ ರಾಜಕಾರಣಿಯನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲೀ ಜನ ನೆನಸಿಕೊಳ್ಳುವುದು ಆತನ ಉದಾರ ಗುಣದಿಂದ ಹಾಗೂ ಚಾಚಿದ ಸಹಾಯಹಸ್ತದಿಂದಲೇ ಹೊರತು ಡೌಲಿನ ಪ್ರದರ್ಶನದಿಂದಲ್ಲ. ಕಾಮರಾಜ್, ಅರಸು, ನಾರಾಯಣರಾವ್ ಥರದ ನಾಯಕರು ಇವತ್ತಿಗೂ ತಂಗಾಳಿಯಂತೆ ನೆನಪಾಗುವುದು ಆ ಕಾರಣಕ್ಕೇ.
ಕೊನೇ ಮಾತು: ಗೆಳೆಯನೊಬ್ಬ ಈ ಸಲದ ಅಂಕಣದಲ್ಲಿ ಡಿಸೆಂಬರ್ ೬ರ ಅಂಬೇಡ್ಕರ್ ಪರಿನಿಬ್ಬಾಣದ ಸಂದರ್ಭಕ್ಕೆ ತಕ್ಕ ಲೇಖನವನ್ನು ಎದುರು ನೋಡುತ್ತೇನೆಂದು ಬರೆದಿದ್ದ. ಈ ಸಲದ ಲೇಖನವನ್ನು ಅಂಬೇಡ್ಕರ್ ‘ಬರೆಸಿಲ್ಲ’ ಎಂದು ಹೇಗೆ ಹೇಳುವುದು!