Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
06 Jul 2025 ಮೊನಾ ಲಿಸಾ ಮುಗುಳುನಗೆ

ನೀವು ಎಲ್ಲಿ ನಿಂತು ನೋಡಿದರೂ, ಯಾವ ದಿಕ್ಕಿನಿಂದ ನೋಡಿದರೂ ಆ ಮುಗುಳುನಗೆಯ ಯಕ್ಷಿಣಿ ನಿಮ್ಮನ್ನು ಸಮ್ಮೋಹನಗೊಳಿಸುತ್ತಲೇ ಇರುತ್ತದೆ. ಮೊನಾ ಲಿಸಾಳ ಈ ನಿಗೂಢ ಮುಗುಳುನಗೆ ಲಿಯನಾರ್ಡೊ ಡವಿಂಚಿಯ ಕುಂಚಕ್ಕೆ, ಬಣ್ಣಗಳಿಗೆ ಹೇಗೆ ದಕ್ಕಿರಬಹುದು ಎಂಬ ಆಳದ ಕ್ರಿಯೇಟಿವ್ ಹಾಗೂ ಮನೋವೈಜ್ಞಾನಿಕ ಸಂಶೋಧನಾ ಕುತೂಹಲ ಸಿಗ್ಮಂಡ್ ಫ್ರಾಯ್ಡ್‌ಗೆ ಹುಟ್ಟಿತು. 

ಇಬ್ಬರೂ ಮಹಾನ್ ಧೀಮಂತರು. ಇಟಲಿಯ ರೆನೈಸಾನ್ಸ್ ಕಾಲದ ಡವಿಂಚಿ ಕಲಾಲೋಕದ  ಚಕ್ರವರ್ತಿ; ಆಸ್ಟ್ರಿಯಾದ ಫ್ರಾಯ್ಡ್ ಮಾನವರ ಅಪ್ರಜ್ಞೆಯ ಆಳ-ಆಳದ ದಣಿವರಿಯದ ಅನ್ವೇಷಕ ಮನೋವಿಜ್ಞಾನಿ; ಜರ್ಮನ್ ಭಾಷೆಯಲ್ಲಿ ಬರೆದ ಅನನ್ಯ ಲೇಖಕ. ಫ್ರಾಯ್ಡ್‌ನ ಅನ್ವೇಷಣೆಗಳು ಮಂಕಾದರೂ ಅವನ ಬರವಣಿಗೆಯ ಹೊಳಪು ಮಾಯವಾಗಿಲ್ಲ! ಡವಿಂಚಿಯ ಬಾಲ್ಯಕ್ಕೂ ಅವನ ಸೃಜನಶೀಲ ಸೃಷ್ಟಿಗೂ ಇರುವ ಸಂಬಂಧ ಹುಡುಕುತ್ತಾ 'ಲಿಯನಾರ್ಡೊ ಡವಿಂಚಿ: ಎ ಮೆಮೊಯ್ರ್‍ ಆಫ್ ಹಿಸ್ ಚೈಲ್ಡ್ ಹುಡ್’ (೧೯೧೦) ಎಂಬ ಜೀವನಚರಿತ್ರಾತ್ಮಕ ಕಥನ ಬರೆಯಲು ಫ್ರಾಯ್ಡ್‌ ಹೊರಟಿದ್ದು ಬೌದ್ಧಿಕ ಲೋಕದ ಅದೃಷ್ಟ. ತೊಂಬತ್ತೇಳು ಪುಟಗಳ ಈ ಮಹತ್ವದ ಪುಸ್ತಕವನ್ನು ಅಗಲಿದ ಕತೆಗಾರ-ಗೆಳೆಯ ಯೋಗಪ್ಪನವರ್ ಇಪ್ಪತ್ತು ವರ್ಷಗಳ ಕೆಳಗೆ ನನಗೆ ಓದಲು ಕೊಟ್ಟಿದ್ದು ನನ್ನ ಅದೃಷ್ಟ. ಅವತ್ತಿನಿಂದ ಇವತ್ತಿನವರೆಗೂ ನನಗೆ ಹಲವು ನೋಟಗಳನ್ನು ಕೊಡುತ್ತಿರುವ ಪುಸ್ತಕ ಇದು:

ಇಟಲಿಯ ಫ್ಲಾರೆನ್ಸಿನ ರೇಶ್ಮೆ ವ್ಯಾಪಾರಿ ಫ್ರಾನ್ಸೆಸ್ಕೊ ಡೆಲ್ ಗಿಯೊಕೊಂಡೋ(೧೪೬೫-೧೫೪೨) ತನ್ನ ಪತ್ನಿ ಲಿಸಾ ಘೆರಾಡಿನಿಯ ಚಿತ್ರ ಬರೆಯಲು ಡವಿಂಚಿಗೆ ಅಸೈನ್‌ಮೆಂಟ್ ಕೊಟ್ಟ. ಅದು ಮುಗಿಯಲೇ ಇಲ್ಲ. ಕಾರಣ, ಎಲ್ಲ ಮಹಾನ್ ಸೃಜನಶೀಲರಂತೆ ಪರಿಪೂರ್ಣತೆಗಾಗಿ ಹಂಬಲಿಸಿದ ಡವಿಂಚಿಯ ಕ್ರಿಯೇಟಿವ್ ಅತೃಪ್ತಿ, ಚಡಪಡಿಕೆ… ಇತ್ಯಾದಿ. ಅಷ್ಟೊತ್ತಿಗಾಗಲೇ ಡವಿಂಚಿ ಅರ್ಧಕ್ಕೆ ಕೈಬಿಟ್ಟ ಹತ್ತಾರು ಚಿತ್ರಗಳಿದ್ದವು. ಈಗ ಪ್ರಖ್ಯಾತವಾಗಿರುವ ಏಸು ಕ್ರಿಸ್ತನ 'ಲಾಸ್ಟ್ ಸಪ್ಪರ್’ ಪೇಂಟಿಂಗ್ ಮುಗಿಸಲು ಡವಿಂಚಿ ಮೂರು ವರ್ಷ ತೆಗೆದುಕೊಂಡಿದ್ದ. ಮೊನಾ  ಲಿಸಾ (ಅಂದರೆ ಮೇಡಂ ಲಿಸಾ, ಶ್ರೀಮತಿ ಲಿಸಾ) ಚಿತ್ರ ಮುಗಿಯದೆ ಅದನ್ನು ಗಿಕೊಂಡೋಗೆ ಕೊಡಲಾಗದ ಲಿಯನಾರ್ಡೊ ಕೊನೆಗೆ ಅದನ್ನು ಫ್ರಾನ್ಸ್‌ಗೆ ಒಯ್ದ. ಚಿತ್ರ ಬರೆದು ಮುಗಿಸಲು ನಾಲ್ಕು ವರ್ಷ ಹಿಡಿಯಿತು. ಒಂದನೆಯ ದೊರೆ ಫ್ರಾನ್ಸಿಸ್ ಅದನ್ನು ಕೊಂಡುಕೊಂಡು ತನ್ನ ಕಲಾ ಸಂಗ್ರಹಾಲಯದಲ್ಲಿಟ್ಟ.

ಕಲಾಕೃತಿಗಳ ರಚನೆಯ ಮುಂದೂಡಿಕೆ ಡವಿಂಚಿಯ ಒಟ್ಟು ಸೃಜನಶೀಲ ಬದುಕಿನುದ್ದಕ್ಕೂ ಇರುವುದನ್ನು ಫ್ರಾಯ್ಡ್ ಗಮನಿಸುತ್ತಾನೆ. ಅವನು ಚಿತ್ರಿಸಿ ಮುಗಿಸಿದ ಪೇಟಿಂಗುಗಳಿಗಿಂತ ಮುಗಿಸದೆ ಹಾಗೇ ಬಿಟ್ಟ ಚಿತ್ರಗಳೇ ಹೆಚ್ಚು! ಇದು ಸಾಹಿತ್ಯ, ಚಿತ್ರಕಲೆ, ಶಿಲ್ಪ ಮುಂತಾದ ವಲಯಗಳ ಮಹಾನ್ ಕಲಾವಿದ, ಕಲಾವಿದೆಯರ ಸೃಜನಶೀಲ ಅತೃಪ್ತಿಯ ಫಲ ಕೂಡ. ಇವರು ಈ ಗಳಿಗೆ ತಮ್ಮ ಕಲೆಯನ್ನು ಸೃಷ್ಟಿಸಿ, ಮರುಗಳಿಗೆಗಾಗಲೇ ತಕ್ಷಣದ ಲೋಕಾಭಿಪ್ರಾಯಕ್ಕೆ ಬಾಯಿಬಾಯಿಬಿಡುವ ಅಲ್ಪತೃಪ್ತಿಯ ಹುಲು ಮಾನವರಲ್ಲ! 

ಸೃಜನಶೀಲ ಮನೋವಿಜ್ಞಾನಿ ಫ್ರಾಯ್ಡ್ ಮಹಾನ್ ಚಿಂತಕ. ಅವನೂ ಡವಿಂಚಿಯಂಥ ಋಷಿಯೇ. ಮನುಷ್ಯರ ಅಪ್ರಜ್ಞೆ, ಕನಸು, ಕನವರಿಕೆಗಳನ್ನು ಆಳವಾಗಿ ಧ್ಯಾನಿಸಿ ಹುಡುಕುವ ಋಷಿ. ಅವನು ತಕ್ಷಣ ಮನಸ್ಸಿಗೆ ಹೊಳೆದದ್ದನ್ನೇ ಸುಪ್ತ ಮನಸ್ಸಿನ ಸತ್ಯ ಎಂದು ಹೇಳಿ ವಿಜೃಂಭಿಸುವ ಮಾರ್ಕೆಟ್ ಮನೋವಿಶ್ಲೇಷಕನಲ್ಲ. ಫ್ರಾಯ್ಡ್ ಡವಿಂಚಿಯ ಕಲಾಕೃತಿಗಳನ್ನು ನೋಡನೋಡುತ್ತಾ ಯಾವುದು ಮೊನಾ ಲಿಸಾಳ ಮುಗುಳುನಗೆಯ ಮೂಲ ಎಂದು ಹುಡುಕುತ್ತಾ ಹೋದ. ಆ ಹುಡುಕಾಟ ಬೇಂದ್ರೆಯ ಅಪೂರ್ವ ರೂಪಕದಂತೆ ’ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ’ಬಿಡುವಂಥ ಅನ್ವೇಷಣೆಯೇ ಹೌದು! 

ಇವತ್ತಿಗೂ 'ನಿಚ್ಚಂಪೊಸತು’ ಆಗಿರುವ ಮೊನಾ ಲಿಸಾಳ ಮುಗುಳುನಗೆಯ ಮೂಲದ ಹುಡುಕಾಟದ ಒಂದು ಹಂತದಲ್ಲಿ ಫ್ರಾಯ್ಡ್ ಎಲ್ಲ ಸೃಜನಶೀಲರ ಆಳದ ಮೂಲ ಒರತೆಯಾದ ಬಾಲ್ಯಕ್ಕೆ, ಅದಕ್ಕಿಂತ ಹಿಂದಿನ ಶಿಶುಘಟ್ಟದ ವಿವರಗಳಿಗೆ, ಹೊರಳುತ್ತಾನೆ. ಡವಿಂಚಿಯ ಆಳದಲ್ಲಿ ಅವನಿಗರಿವಿಲ್ಲದೆಯೇ ಹುದುಗಿದ ಯಾವ ಭಾವಗಳು ಮೊನಾಲಿಸಾಳ ಅಮರ ಮುಗುಳುನಗೆಯನ್ನು ಸೃಷ್ಟಿಸಿದವು ಎಂಬ ನಿಗೂಢ ಪ್ರಶ್ನೆಯನ್ನು ಫ್ರಾಯ್ಡ್ ಬೆನ್ನು ಹತ್ತುತ್ತಾನೆ.

ಲಿಯನಾರ್ಡೋನ ಬಾಲ್ಯದ ನೆನಪೊಂದು ಫ್ರಾಯ್ಡನನ್ನು ಸೆಳೆಯುತ್ತದೆ. ಅದು ಲಿಯನಾರ್ಡೋ ತಾಯಿಯ ಮೊಲೆಹಾಲು ಕುಡಿಯುತ್ತಿದ್ದ ಕಾಲದ ನೆನಪಿನ ಬಗ್ಗೆ ಅವನ ಡೈರಿಯಲ್ಲಿರುವ ದಾಖಲೆ: 'ನಾನು ತೊಟ್ಟಿಲಲ್ಲಿ ಮಲಗಿದ್ದೇನೆ. ಹದ್ದೊಂದು ತನ್ನ ಗರಿಬಾಲದಿಂದ ಮತ್ತೆ ಮತ್ತೆ ನನ್ನ ತುಟಿಗೆ ಹೊಡೆಯುತ್ತಿದೆ.’ 

'ಶಿಶುವಿಗೆ ಮೊಲೆಹಾಲು ಕುಡಿಯುವ ಕಾಲದ ನೆನಪು ಇರುವ ಸಾಧ್ಯತೆಯನ್ನು ಪೂರಾ ತಳ್ಳಿ ಹಾಕುವಂತಿಲ್ಲ’ ಎಂದುಕೊಳ್ಳುವ ಫ್ರಾಯ್ಡ್, 'ಇದು ತಾಯಿ ಮುಂದೆ ಮಗುವಿಗೆ ಆಗಾಗ್ಗೆ ಹೇಳಿರುವ ಪ್ರಸಂಗವೂ ಆಗಿರಬಹುದು; ಬರಬರುತ್ತಾ ಅದು ಮಗುವಿಗೆ ತನಗೇ ಆದ ಅನುಭವದ ಘಟನೆಯಂತೆ ನೆನಪಿನಲ್ಲಿ ಉಳಿದಿರಬಹುದು’ ಎನ್ನುತ್ತಾನೆ. ಐದು ವರ್ಷಕ್ಕೇ ತಾಯಿಯಿಂದ ದೂರವಾದ ಲಿಯನಾರ್ಡೊಗೆ ತಂದೆಯ ಅಕ್ಕರೆಯಿರಲಿಲ್ಲ. ನಂತರ ಮತ್ತೊಬ್ಬ ತಾಯಿಯ ಪ್ರೀತಿಯ ಆಶ್ರಯದಲ್ಲಿ ಬೆಳೆದ. ಇದನ್ನೆಲ್ಲ ಪರಿಶೀಲಿಸುತ್ತಾ ಮತ್ತೆ ಲಿಯನಾರ್ಡೋನ ತೊಟ್ಟಿಲ ನೆನಪಿಗೆ ಫ್ರಾಯ್ಡ್ ಮರಳುತ್ತಾನೆ:

ಈಜಿಪ್ಟಿನ ಪುರಾಣಗಳಲ್ಲಿರುವ ತಾಯಿಯ ಹಲವು ಮುಖಗಳಲ್ಲಿ ಹದ್ದಿನ ಮುಖವೂ ಇದೆ ಎಂಬ ವಿಸ್ಮಯ ಫ್ರಾಯ್ಡ್‌ನ ಸೃಜನಶೀಲ ಸಂಶೋಧನೆಗೆ ಹೊಳೆಯುತ್ತದೆ. ಲಿಯನಾರ್ಡೊ ನೆನೆಯುವ ಹದ್ದಿನ ಕತೆ ಹೊರಡಿಸುವ ಲೈಂಗಿಕ ಸೂಚನೆಗಳನ್ನು ವಿಶ್ಲೇಷಿಸುತ್ತಾ ಫ್ರಾಯ್ಡ್ ಮತ್ತೊಂದು ಸುತ್ತಿನ ವ್ಯಾಖ್ಯಾನಕ್ಕೆ ಹೊರಳುತ್ತಾನೆ: ಮಗುವಿನ ತುಟಿಯ ಮೇಲೆ ತಾಯಿಯ (ಹದ್ದಿನ) ಆಟದ ಈ ಫ್ಯಾಂಟಸಿಯಲ್ಲಿ ಮಗುವಿನ ಪೂರಕ ನೆನಪೂ ಸೇರಿಕೊಂಡಿದೆ. ಅದನ್ನು ಹೀಗೆ ವಿವರಿಸಬಹುದು: 'ನಮ್ಮಮ್ಮ ನನ್ನ ತುಟಿಗೆ ಲೆಕ್ಕವಿಲ್ಲದಷ್ಟು ಮುತ್ತುಗಳನ್ನು ಕೊಟ್ಟಳು’ ಎಂದು ಡವಿಂಚಿಯ ನೆನಪು ಸೂಚಿಸುತ್ತದೆ. ತಂದೆಯಿಲ್ಲದ ಮಗುವಿಗೆ ಕೊಂಚ ಅತಿ ಪ್ರೀತಿಯಿಂದ ಕೊಟ್ಟ ಅಮ್ಮನ ಮುತ್ತುಗಳು ಬಿರುಸಾಗಿಯೂ ಇದ್ದವು. ಈ ಭಾವ ಲಿಯನಾರ್ಡೋನ ಅಪ್ರಜ್ಞೆಯಲ್ಲಿ ಹುದುಗಿಬಿಟ್ಟಿದೆ.  

ಆಳದಲ್ಲಿ ಹುದುಗಿದ ಭಾವಗಳು ಕಲಾವಿದರಲ್ಲಿ ಮಾತ್ರ ಹೇಗೆ ಹೊರಬರುತ್ತವೆ ಎಂಬ ಪ್ರಶ್ನೆಗೆ ಫ್ರಾಯ್ಡ್ ಕೊಡುವ ಸುಂದರ ಒಳನೋಟ ಇದು: 

'ಕರುಣಾಳು ಪ್ರಕೃತಿ (’ನೇಚರ್’: ಮನುಷ್ಯ ಪ್ರಕೃತಿ ಅಥವಾ ಒಟ್ಟಾರೆ ಪ್ರಕೃತಿ) ಕಲಾವಿದರಿಗೆ ಗುಟ್ಟಾದ ಮಾನಸಿಕ ತೀವ್ರ ಸಹಜಭಾವಗಳನ್ನು (ಮೆಂಟಲ್ ಇಂಪಲ್ಸಸ್) -ಸ್ವತಃ ಆ ಕಲಾವಿದರಿಗೂ ಅರಿವಿಲ್ಲದೆ ಆಳದಲ್ಲಿ ಅವಿತಿರುವ ತೀವ್ರ ಒಳಭಾವಗಳನ್ನು- ತಾವು ಸೃಷ್ಟಿಸುವ ಕೃತಿಗಳಲ್ಲಿ ಹೊರಚೆಲ್ಲುವಂಥ ಶಕ್ತಿ ಕೊಟ್ಟಿರುತ್ತದೆ; ಈ ಕಲಾವಿದರ ಬಗ್ಗೆ ಏನೇನೂ ಗೊತ್ತಿಲ್ಲದ, ತಮ್ಮ ಭಾವನೆಗಳ ಮೂಲ ಯಾವುದೆಂಬುದು ಕೂಡ ಗೊತ್ತಿರದ, ಅಪರಿಚಿತರ ಮೇಲೂ ಈ ಕೃತಿಗಳು ಮಹತ್ತರ ಪರಿಣಾಮ ಬೀರುತ್ತವೆ.’

ಹೀಗೆ ವಿಶ್ಲೇಷಿಸುತ್ತಾ, ಫ್ರಾಯ್ಡ್ ಲಿಯನಾರ್ಡೋನ ಇತರ ಪೇಂಟಿಂಗುಗಳ ಮುಗುಳುನಗೆಗಳತ್ತ  ಹೊರಳುತ್ತಾನೆ. ಕನ್ನಡದಲ್ಲಿ ಮುಗುಳು ಎಂದರೆ ಮೊಗ್ಗು; ಅಂದರೆ ಅರಳಲಿರುವ ಮೊಗ್ಗು ನಗೆ! ಪ್ರೋಟೋ-ಇಂಡೋ-ಯುರೋಪಿಯನ್ ಬೇರಿನ Smei ಧಾತುವಿನಿಂದ Smile ಮೂಡಿದೆ.  ಸಂಸ್ಕೃತದ 'ಸ್ಮಿತ’ದ ಜೊತೆಗಿರುವ ’ಮಂದಸ್ಮಿತ’ಕ್ಕೆ ಮುಗುಳುನಗೆಯ ಚಿತ್ರಕ ಶಕ್ತಿ ಇದ್ದಂತಿಲ್ಲ. ಅದೇನೇ ಇರಲಿ, ಲಿಯನಾರ್ಡೋನ ಪೇಂಟಿಂಗುಗಳಲ್ಲಿರುವ ಎಲ್ಲ ಹೆಣ್ಣುಗಳ ತುಟಿಗಳಲ್ಲೂ ಅವನು ಮೂಡಿಸಿರುವ ಅಪೂರ್ವ ಮುಗುಳುನಗೆ ನೋಡುವವರನ್ನು ಆಕರ್ಷಿಸುತ್ತಾ, ವಿಸ್ಮಯಗೊಳಿಸುತ್ತಲೇ ಇರುತ್ತದೆ. ಕೊಂಚ ಅರಳಿದ ವಿಶಾಲ ತುಟಿಯ ಮೇಲೆ ಎಂದೂ ಬದಲಾಗದ ಮುಗುಳು ನಗೆ; ’ಲಿಯನಾರ್ಡೊಸ್ಕ್’ ಎಂದೇ ಕರೆಯಲಾಗುವ ಈ ನಗೆ ಮೊನಾ ಲಿಸಾ ಚಿತ್ರಕ್ಕೆ ರೂಪದರ್ಶಿಯಾಗಿ ಕೂತಿರುತ್ತಿದ್ದ ವಿಚಿತ್ರ ಸೌಂದರ್ಯದ ಲಿಸಾ ಡೆಲ್ ಗಿಕೊಂಡೋಳ ಮೊಗದ ಮೇಲೆ ಮೂಡಿ, ಈ ಚಿತ್ರವನ್ನು ಯಾರೇ ನೋಡಿದರೂ ಅವರಲ್ಲಿ ಚಕಿತತೆ, ಗಲಿಬಿಲಿ ಇತ್ಯಾದಿ ಭಾವಗಳ ಬಲವಾದ ಪರಿಣಾಮ ಮಾಡುತ್ತದೆ.  

ಈ ಮುಗುಳುನಗೆ ಮೊನಾ ಲಿಸಾಳ ತುಟಿತುಂಬ, ಮೊಗತುಂಬ, ಮೈತುಂಬ, ವ್ಯಕ್ತಿತ್ವದ ತುಂಬ, ಇರವಿನ ತುಂಬ… ಹಬ್ಬಲೆಂದು ಈ ಚಿತ್ರ ಬರೆಯುವಾಗ ಲಿಯನಾರ್ಡೊ ಬಗೆಬಗೆಯಲ್ಲಿ ಅವಳನ್ನು ಖುಷಿಯಲ್ಲಿಡುವ ವಸ್ತುಗಳನ್ನು ತರಿಸಿಟ್ಟಿರುತ್ತಿದ್ದ. ಮೊನಾ ಲಿಸಾಳ ಮುಗುಳು ನಗೆ ಕುರಿತು ನೂರಾರು ಕವಿಗಳು ಬರೆದಿದ್ದಾರೆ. ಕವಿಗಳು, ಲೇಖಕರು ಈ ನಗೆಯಲ್ಲಿರುವ ಆಹ್ವಾನ, ಬಿಗುಪು ಬಿಂಕ, ಸೆಳೆಯುವ, ಮೆಲ್ಲಗೆ ಆವರಿಸುವ, ಕಬಳಿಸುವ…ಹತ್ತಾರು ಭಾವಗಳನ್ನು ಕಂಡಿದ್ದಾರೆ. ಆದರೂ ಇನ್ನೂ ಈ ಮುಗುಳು ನಗೆಯ ನಿಗೂಢ ಅರ್ಥವನ್ನು ಹಿಡಿದಿಡಲಾಗಿಲ್ಲ ಎಂದು ಫ್ರಾಯ್ಡ್‌ಗೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಈ ಪೇಂಟಿಂಗ್ ಮಾಡುವಾಗ ಬ್ರಶ್ ಸ್ಟ್ರೋಕುಗಳಲ್ಲಿ ಕ್ಯಾನ್ವಾಸಿನ ಮೇಲೆ ಮೂಡಿ, ಮುಳುಗುತ್ತಿದ್ದ ಗಳಿಗೆಯ ಸೊಬಗಿನಲ್ಲಿ ಅರ್ಧ ಕೂಡ ಅಂತಿಮ ಚಿತ್ರದಲ್ಲಿ ಇರಲಿಕ್ಕಿಲ್ಲ ಎಂದುಕೊಳ್ಳುತ್ತಾನೆ. 

ಹೀಗೇ ಹುಡುಕುತ್ತಾ ಹುಡುಕುತ್ತಾ ಲಿಯನಾರ್ಡೊನ ತಾರುಣ್ಯ ಕಾಲದ ಮತ್ತೊಂದು ವಿವರ ಫ್ರಾಯ್ಡ್‌ಗೆ ಎದುರಾಗುತ್ತದೆ: ಲಿಯನಾರ್ಡೋ ಮಣ್ಣಿನಲ್ಲಿ ಮಾಡುತ್ತಿದ್ದ ನಗುವ ಹೆಣ್ಣಿನ ತಲೆಯ ಕಲಾಕೃತಿಗಳು ಹಾಗೂ ನಗುವ ಮಕ್ಕಳ ತಲೆಯ ಕಲಾಕೃತಿಗಳು ಕೂಡ ಸಿದ್ಧಹಸ್ತನಾದ ಕಲಾವಿದ ಮಾಡಿದಂತೆಯೇ ಇದ್ದವು. ಸುಂದರವಾಗಿದ್ದವು. ಮತ್ತೆ ಮತ್ತೆ ಕಾಣಿಸಿಕೊಂಡ ಆ ಹೆಣ್ಣು ಮುಖಗಳ ನಗು ಅವನ ತಾಯಿ ಕೆಟರೀನಾಳದು; ಮಕ್ಕಳ ಮುಖ ಸ್ವತಃ ಅವನದೇ ಆಗಿತ್ತು. ಇವನ್ನೆಲ್ಲ ನೋಡನೋಡುತ್ತಾ ಫ್ರಾಯ್ಡ್ ಒಂದು ಸಾಧ್ಯತೆಯನ್ನು ಕಾಣುತ್ತಾನೆ: ಲಿಯನಾರ್ಡೋ ಬಾಲ್ಯದಲ್ಲಿ ಕಳೆದುಕೊಂಡ ತಾಯಿಯ ನಿಗೂಢ ನಗು ಮೊನಾ ಲಿಸಾ ಎಂಬ ಹೆಣ್ಣಿನಲ್ಲಿ ಮತ್ತೆ ಕಂಡಿತು. ಅದು ಅವನನ್ನು ಸಮ್ಮೋಹಿನಿಯಂತೆ ಹಿಡಿಯಿತು… ಬಾಲ್ಯದಿಂದಲೂ ಅವನ ಒಳಗೆ ಉಳಿದಿದ್ದ ಆ ಮುಗುಳುನಗೆಯನ್ನು ಕ್ಯಾನ್ವಾಸಿನ ಮೇಲೆ ಮೂಡಿಸಲೆತ್ನಿಸಿದ ಸಾಹಸವೇ ಮೊನಾ ಲಿಸಾ…

ಮುಂದೆ ಈ ಮುಗುಳುನಗೆಯ ಮಾಯೆ ಲಿಯನಾರ್ಡೊನ ‘ಮಡೋನಾ ಅಂಡ್ ಚೈಲ್ಡ್ ವಿತ್ ಸೇಂಟ್ ಆನ್ನೆ’ ಪೇಂಟಿಂಗಿನಲ್ಲಿ ಮೂಡಿತು. ಅಲ್ಲಿ ಲಿಯನಾರ್ಡೋನ ಬಾಲ್ಯದ ಇಬ್ಬರು ತಾಯಂದಿರೂ ಮೂಡಿ ಬಂದರು. ಅವನ ಇತರ ಪೇಂಟಿಂಗುಗಳು, ಅವನ ವಿದ್ಯಾರ್ಥಿಗಳ ಪೇಂಟಿಂಗುಗಳಲ್ಲೂ ಈ ಮುಗುಳುನಗೆ ಮುಂದುವರಿಯಿತು; ಹಾಗೇ ಏಸುವಿನ ತಾಯಿ ಮೇರಿಯ ಇತರ ಚಿತ್ರಗಳಲ್ಲೂ ಈ ಮುಗುಳುನಗೆಯ ಅನುಕಂಪ ನೆಲೆಸತೊಡಗಿತು…

ಕಾಲದ ಓಟದಲ್ಲಿ ಮೊನಾಲಿಸಾಳ ಅಮರ ಮುಗುಳುನಗೆ ಕೊಂಚ ಮಂಕಾಗಿದ್ದರೇನಂತೆ; ಅದು ನೋಡುವವರ ಮೇಲೆ ಎಂದೋ ಮಾಡಿದ್ದ ಮಾಯೆ, ಈಗಲೂ ಹಬ್ಬಿಸುವ ಮಾಯೆ ಮಾತ್ರ ನಿರಂತರ. ಹಾಗೆಯೇ ಫ್ರಾಯ್ಡ್‌ನ ಅದ್ಭುತ ಅನ್ವೇಷಕ ಪ್ರತಿಭೆ ಬೆನ್ನು ಹತ್ತಿದ ಆ ಮುಗುಳುನಗೆಯ ಮೂಲದ ಹುಡುಕಾಟ ಹುಟ್ಟಿಸುವ ವಿಸ್ಮಯದ ಮುಗುಳುನಗೆ ಕೂಡ ನಮ್ಮ ಚಿತ್ತದಲ್ಲಿ ಉಳಿದುಬಿಡುತ್ತದೆ. ಒಂದು ಮುಗುಳುನಗೆಯ ನಿರ್ಮಲ ಆನಂದಭಾವ ನಮ್ಮ ಕಣ್ಣಿಂದ ಮರೆಯಾದರೂ, ಅದು ಕೊನೆಗೂ ಉಳಿಯುವುದು ನಮ್ಮ ಚಿತ್ತದಲ್ಲಿ ತಾನೆ!    
 

blog
29 Jun 2025 ಕವಿ ಕಲಿಸಿದ ತುರ್ತು ಪಾಠ

‘ಇತಿಹಾಸದಿಂದ ನಾವು ಕಲಿಯುವ ಒಂದೇ ಪಾಠ ಏನೆಂದರೆ, ನಾವು ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ ಎಂಬುದು.’

ಜರ್ಮನ್ ತತ್ವಜ್ಞಾನಿ ಜಾರ್ಜ್ ಫ್ರೆಡ್ರಿಕ್ ಹೆಗೆಲ್ (೧೭೭೦-೧೮೩೧) ಹೇಳಿದ ಪ್ರಖ್ಯಾತ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು.

ಇಂಡಿಯಾದಲ್ಲಿ ೧೯೭೫ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ಐವತ್ತನೆಯ ವರ್ಷದ ಕಹಿ ನೆನಪಿನ ಸಂದರ್ಭದಲ್ಲಿ ಹಲವರು ಹಲ ಬಗೆಯಲ್ಲಿ ಮಾತಾಡುತ್ತಿದ್ದಾರೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ತಮ್ಮ ವಾಕ್ ಸ್ವಾತಂತ್ರ‍್ಯದ ಹರಣವಾಗಿತ್ತು ಎನ್ನುತ್ತಿರುವ ಕೆಲವರು ಇತಿಹಾಸದ ಪಾಠವನ್ನೇ ಮರೆತು, ತಮಗಾಗದವರನ್ನು ‘ಜೈಲಿಗೆ ಕಳಿಸುತ್ತೇವೆ’ ಎಂದು ಕ್ರೂರವಾಗಿ ಅರಚುತ್ತಿರುವ ವಿರೋಧಾಭಾಸ ಇವತ್ತು ಎದ್ದು ಕಾಣುತ್ತಿದೆ.

ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸೆರೆಮನೆವಾಸ ಅನುಭವಿಸಿದ್ದ ಕನ್ನಡ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಆ ಇತಿಹಾಸದ ಪಾಠಗಳನ್ನು ಎಂದೂ ಮರೆಯಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ಏಕಮಾತ್ರ ಕನ್ನಡ ಕವಿ ಚಂಪಾ ಮುಂದೆ ಇಪ್ಪತ್ತೊಂದನೆಯ ಶತಮಾನದಲ್ಲಿ ಇಂಡಿಯಾದ ರಾಜಕೀಯ ಮತ್ತೆ ತುರ್ತು ಪರಿಸ್ಥಿತಿಯೆಡೆಗೆ ತಿರುಗುತ್ತಿರುವುದನ್ನು ಕುರಿತು ಎಚ್ಚರಿಸುತ್ತಲೇ ಇದ್ದರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಕವಿ, ನಾಟಕಕಾರ, ಇಂಗ್ಲಿಷ್ ಪ್ರೊಫೆಸರ್‍ ಚಂದ್ರಶೇಖರ ಪಾಟೀಲ್ (೧೮ ಜೂನ್ ೧೯೩೯- ೧೦ ಜನವರಿ ೨೦೨೨) ನಮ್ಮೊಡನೆ ಇದ್ದಿದ್ದರೆ ಮೊನ್ನೆ ಜೂನ್ ಹದಿನೆಂಟಕ್ಕೆ ಅವರಿಗೆ ಎಂಬತ್ತಾರು ವರ್ಷ ತುಂಬುತ್ತಿತ್ತು. ತುರ್ತುಪರಿಸ್ಥಿತಿಯ ನಂತರ ಚಂಪಾ ಪ್ರಕಟಿಸಿದ ‘ಗಾಂಧೀ ಸ್ಮರಣೆ’ಎಂಬ ಚಾರಿತ್ರಿಕ ರಾಜಕೀಯ ಕವನ ಸಂಕಲನ ಎಪ್ಪತ್ತರ ದಶಕದಲ್ಲಿ ನನ್ನಂಥ ಎಳೆಯ ವಿದ್ಯಾರ್ಥಿಗಳಲ್ಲಿ ಕೂಡ ರಾಜಕೀಯ ಪ್ರಜ್ಞೆ ಬಿತ್ತಿದ್ದು ನೆನಪಾಗುತ್ತದೆ.  

ಚಂಪಾ ಜೈಲಿನಲ್ಲಿದ್ದ ಕಾಲದ ಅನುಭವವನ್ನು ಹಾಗೂ ಆ ಕಾಲದ ಇಂಡಿಯಾದ ರಾಜಕೀಯ ವಿಮರ್ಶೆಯನ್ನು ಬಿಂಬಿಸುವ ‘ಗಾಂಧೀ ಸ್ಮರಣೆ’ ಸಂಕಲನದ ಕವನಗಳಲ್ಲಿ ಸರ್ವಾಧಿಕಾರದ ವಿರುದ್ಧ- ಚಂಪಾ ಮಾತಿನಲ್ಲೇ ಹೇಳುವುದಾದರೆ 'ದುಶ್ಶಾಸನ ಪರ್ವ'ದ ವಿರುದ್ಧ- ಕಟಕಿಯಿತ್ತು; ಗಾಂಧಿ ಮಾರ್ಗಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾದದ್ದರ ಬಗ್ಗೆ ಗಾಢ ವಿಷಾದವಿತ್ತು; ಸರ್ವಾಧಿಕಾರದ ವಿರುದ್ಧ ಕವಿಯ ಸುಪ್ತ, ಗಂಭೀರ ಪ್ರತಿಭಟನೆಯೂ ಅಲ್ಲಿತ್ತು. ಇಂಡಿಯಾದ ವಿಕಾರಗಳ ವಿಮರ್ಶೆಯಿತ್ತು. ಈ ಸಂಕಲನದಲ್ಲಿರುವ ‘ಅತಿಥಿ’ ಪದ್ಯದ ಗಾಢ ವ್ಯಂಗ್ಯದ  ರಾಜಕೀಯ ಚಿತ್ರಗಳನ್ನು ಗಮನಿಸಿ:

ಹಿಂದಿಬ್ಬರು ಮುಂದಿಬ್ಬರು ರಾಜಭಟರ ನಡುವೆ

ನಡೆದಾಗ ದೊಡ್ಡ ಗೇಟು ಕಿರುಗುಡುತ್ತದೆ.

ಒಂದು ಮೂಲೆಗೆ ಗಾಂಧಿ. ಇನ್ನೊಂದು ಮೂಲೆಗೆ ನೆಹರೂ.

ಗೋಡೆಯ ತುಂಬ ಮತ್ತೊಬ್ಬ ಗಾಂಧಿಯ ಅಮರ ಸಂದೇಶ.

‘ಗಾಂಧೀ ಸ್ಮರಣೆ’ ಸಂಕಲನದ ನಂತರ, ‘ಜೂನ್ ೭೫- ಮಾರ್ಚ್ ೭೭’ ಎಂಬ ತುರ್ತು ಕವನಗಳ ಚಾರಿತ್ರಿಕ ಮಹತ್ವದ ಪ್ರಾತಿನಿಧಿಕ ಸಂಕಲನವನ್ನು ಸಂಪಾದಿಸಿದ ಚಂಪಾ, ೨೦೧೧ರಲ್ಲಿ ಈ ಸಂಕಲನದ ಎರಡನೆಯ ಮುದ್ರಣ ಬಂದಾಗ ಬರೆದ ಮಾತು: ‘ಮೂವತ್ತಮೂರು ವರ್ಷಗಳ ನಂತರ...ಈಗ ಇಂಡಿಯಾದ ಸಮಕಾಲೀನ ರಾಜಕೀಯ ಪರಿಸ್ಥಿತಿಯೂ ಆ ಕರಾಳ ದಿನಗಳನ್ನು ನೆನಪಿಗೆ ತರುವಂತಿದೆ.’   

ತಮ್ಮ ಸೆರೆಮನೆ ದಿನಚರಿಯಲ್ಲಿ ತಮ್ಮ ಜೈಲು ಅನುಭವವನ್ನು ದಾಖಲಿಸಿರುವ ಚಂಪಾ ೧೯೭೬ರಲ್ಲಿ ಪ್ರಕಟಿಸಿದ ಕವನಗಳಲ್ಲಿರುವ ರಾಜಕೀಯ ವಿಮರ್ಶೆ ಇದೀಗ ಮತ್ತೆ ದುಶ್ಶಾಸನ ಪರ್ವ ಮುತ್ತುತ್ತಿರುವ ಕಾಲಘಟ್ಟದಲ್ಲಿ ಹೊಸ ಪ್ರತಿಧ್ವನಿ ಪಡೆಯುವ ರೀತಿ ಅವರ ‘ಗಾಂಧೀ ಸ್ಮರಣೆ’ ಪದ್ಯದಲ್ಲಿದೆ. ಕವಿತೆ ಕಾಲಾತೀತ, ದೇಶಾತೀತ; ಕಾಲದ ಕನ್ನಡಿಯಲ್ಲಿ ಕವಿತೆಯ ಸಮಕಾಲೀನ ಅರ್ಥಗಳು ವಿಸ್ತಾರಗೊಳ್ಳುತ್ತಿರುತ್ತವೆ. ತುರ್ತು ಪರಿಸ್ಥಿತಿಯಲ್ಲಿ ವಿಭಿನ್ನ   ತಾತ್ವಿಕತೆಗಳ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ಹೋದ ಲೋಕನಾಯಕ ಜಯಪ್ರಕಾಶ ನಾರಾಯಣರ ಪ್ರಯೋಗದಲ್ಲಿ ಕೋಮುವಾದಿ ಶಕ್ತಿಗಳಿಗ ರೆಕ್ಕೆ ಪುಕ್ಕ ಬಂದದ್ದರಿಂದ ಅನಂತರ ಭಾರತಕ್ಕೆ ಬಂದ ಕುತ್ತು ನಮ್ಮ ಕಣ್ಣೆದುರಿಗೇ ಇದೆ. ಎಪ್ಪತ್ತರ ದಶಕದ ‘ಗಾಂಧೀ ಸ್ಮರಣೆ’ಯ ಗಾಢ ವ್ಯಂಗ್ಯ ಅಂದಿನ ತುರ್ತುಪರಿಸ್ಥಿತಿಗಿಂತ ಹಿಂಸಾಮಯವಾದ ಸನ್ನಿವೇಶವನ್ನು ಈಗ ಸೃಷ್ಟಿಸುತ್ತಿರುವ ಇಂಡಿಯಾದ ಚಿತ್ರವನ್ನೂ ಕೊಡುತ್ತದೆ:

ಸರಕಾರದ ಕೆಲಸ ದೇವರ ಕೆಲಸವಾಗಿ

ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.

ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ

ಜಿಟಿ ಜಿಟಿ ಮಳೆ ಹಿಡಿದಿದೆ

ನಮ್ಮ ತ್ರಿವರ್ಣ ಧ್ವಜ ತೊಯ್ದು ತಪ್ಪಡಿಯಾಗಿ

ಅಶೋಕ ಚಕ್ರ ಸ್ಥಿರವಾಗಿದೆ.

ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ

‘ನಾಡು ಮುನ್ನಡೆದಿದೆ’ ಎಂಬ ಸಂದೇಶ ಹೊತ್ತಿದೆ.

ರೇಡಿಯೋದ ಗಿಳಿವಿಂಡು, ಅದೋ,

ಒಕ್ಕೊರಲಿನಿಂದ ಅದೇ ಹಾಡು ಹಾಡುತ್ತಿದೆ. 

‘ಗಾಂಧೀ ಸ್ಮರಣೆ’ಯ ಕಾಲದಲ್ಲಿ ಗಾಢ ವಿಷಾದ, ಚೂಪು ತಿವಿತಗಳ ರಾಜಕೀಯ ಕವಿತೆಗಳನ್ನು ಕೊಟ್ಟಿದ್ದ ಚಂಪಾ ಆ ಹೊತ್ತಿಗಾಗಲೇ ಕನ್ನಡದ ವಿಶಿಷ್ಟ ಬಂಡುಕೋರ ಕವಿಯಾಗಿದ್ದರು. ೧೯೭೮ರಲ್ಲಿ ಸಾಮಾಜಿಕ ಬದ್ಧತೆ, ಸಾಮಾಜಿಕ ವಿಶ್ಲೇಷಣೆ, ರಾಜಕೀಯ ವಿಮರ್ಶೆಗಳಿಗೆ ಒತ್ತು ಕೊಟ್ಟ ಬಂಡಾಯ ಕಾವ್ಯ ಆರಂಭವಾದಾಗ ಸಮಾಜವಾದಿ ಚಂಪಾ ಬಂಡಾಯ ಕಾವ್ಯದ ದಿಕ್ಕನ್ನು ರೂಪಿಸಿದ ಕವಿಗಳಲ್ಲಿ ಒಬ್ಬರಾದರು. ಚಂಪಾ ಸಂಪಾದಕತ್ವದಲ್ಲಿ ‘ಸಂಕ್ರಮಣ’ ಪತ್ರಿಕೆ ಬಂಡಾಯ ಮಾರ್ಗದ ತಾತ್ವಿಕತೆಯ ಸಮರ್ಥನೆ, ಬಂಡಾಯ ಕಾವ್ಯತತ್ವದ ಪ್ರತಿಪಾದನೆ, ದಲಿತ, ಬಂಡಾಯ ಹಾಗೂ ಸ್ತ್ರೀವಾದಿ ಕವಿತೆ, ಕತೆ, ವೈಚಾರಿಕ ಬರಹಗಳನ್ನು ಹೆಚ್ಚು ಪ್ರಕಟಿಸತೊಡಗಿತು. ದಲಿತ ಹಾಗೂ ಬಂಡಾಯ ಮಾರ್ಗಗಳ ಕವಿಗಳ, ವಿಮರ್ಶಕರ ಬರಹಗಳನ್ನು ಚಂಪಾ ನಿರಂತರವಾಗಿ ಪ್ರಕಟಿಸಿದರು. ಈ ಮೂಲಕ ‘ಸಂಕ್ರಮಣ’ ಕನ್ನಡದ ಪ್ರಗತಿಪರ ದನಿಗಳನ್ನು ಗಟ್ಟಿಗೊಳಿಸಿತು.

ತಮ್ಮ ಕಾವ್ಯ ಹಾಗೂ ಬಂಡಾಯ ಕಾವ್ಯ ಏಕರಾಗ ಹಾಡತೊಡಗಿದಾಗ ತಮ್ಮ ಕಾವ್ಯಪ್ರತಿಮೆಗಳ ಧಾಟಿಯೇ ಬದಲಾಗಬೇಕು ಎಂಬ ತುರ್ತು ಚಂಪಾಗೆ ಎದುರಾಯಿತು.  ಆಗ ಅವರು ಬರೆದ ‘ಹೂವು ಹೆಣ್ಣು ತಾರೆ’ ಕವಿತೆಯಲ್ಲಿರುವ ಸ್ವ-ಪಾಠ, ಪರ-ಪಾಠ:

ನಾವು ಹೂವಿನ ಬಗ್ಗೆ

ನಾವು ತಾರೆಯ ಬಗ್ಗೆ

ಬರೆಯುವುದು ಬೇಡ

ಅಂತ ಹೇಳುವುದು ಬೇಡ ಗೆಳೆಯ.   

ಪ್ರಖರ ರಾಜಕೀಯ ಪದ್ಯಗಳನ್ನು ಬರೆದ ಚಂದ್ರಶೇಖರ ಪಾಟೀಲರ ಕಾವ್ಯ ಮುಂದಿನ ಘಟ್ಟದಲ್ಲಿ, ಧಾರವಾಡ ಪ್ರದೇಶದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಶಾಲ್ಮಲಾ ರೂಪಕಕ್ಕೆ ಮತ್ತೆ ಮತ್ತೆ ಮರಳಿತು. ಶಾಲ್ಮಲಾ ನದಿಯಂತೆ ಚಂದ್ರಶೇಖರ ಪಾಟೀಲರ ಕಾವ್ಯದ ರಾಜಕೀಯ ಪ್ರಜ್ಞೆ, ಇತಿಹಾಸ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಕೂಡ ನಮ್ಮೊಳಗೇ ಹರಿಯುತ್ತಲೇ ಇರಬೇಕಾಗುತ್ತದೆ.  

ಚಂಪಾರ ’ಉಳಿದ ನದಿಗಳ ಹಾಗೆ’ ಕವಿತೆಯ ಕೊನೆಯ ಸಾಲುಗಳು:

ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆ

ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕೊಂಡವರಿಲ್ಲ

ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ

ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ

ನೀನು ಹರಿಯಬೇಕೆಂದಿರುವುದು ಮಾತ್ರ ಒಂದೇ ಖರೆ;

ಬಹುಶಃ

ನಾನು ಬದುಕಬೇಕೆಂದಿರುವ ಬದುಕಿನಂತೆ

ನಾನು ಬರೆಯಬೇಕೆಂದಿರುವ ಕಾವ್ಯದಂತೆ.

ಈ ಕೊನೆಯ ಸಾಲು ಕೇವಲ ಕವಿ ಚಂದ್ರಶೇಖರ ಪಾಟೀಲರ ತುಡಿತ ಮಾತ್ರ ಅಲ್ಲ; ಬರೆವ ಬದುಕಿನ ಎಲ್ಲರ ತಹತಹವೂ ಆಗಿರಬಹುದು!

ಸಹ ಸ್ಪಂದನ:

ಕಳೆದ ವಾರ ’ಕೀರ್ತನೆ ಕವಿತೆಯಾದಾಗ’ ಎಂಬ ಅಂಕಣ ಓದಿದ ಪ್ರೊಫೆಸರೊಬ್ಬರು ಕನಕದಾಸರು ತಮ್ಮ ಕೀರ್ತನೆಗೆ ಸೂಚಿಸಿದ ರಾಗ ’ಧನ್ಯಾಸಿ’ಯನ್ನು ಆಧರಿಸಿದ ’ವಾಲ್ಮೀಕಿ’ ಚಿತ್ರದ ’ಜಲಲ ಜಲಲ ಜಲ ಧಾರೆ’ ಎಂಬ ಪ್ರಖ್ಯಾತ ಹಾಡನ್ನು ನೆನಪಿಸಿದರು; ಆ ಅಂಕಣದಲ್ಲಿ ರಾಗ ಕುರಿತ ಪ್ರಶ್ನೆ ಎತ್ತಿದ್ದು ನಿಜಕ್ಕೂ ಸಾರ್ಥಕ ಅನ್ನಿಸಿತು.

ಕಳೆದ ವಾರದ ’ಕೀರ್ತನೆ ಕವಿತೆಯಾದಾಗ’ ಅಂಕಣ ಬರೆಯುವ ಮುನ್ನ ಕನ್ನಡ ರಿಫ್ರೆಶರ್ ಕೋರ್ಸಿಗಾಗಿ ಧನ್ಯಾಸಿ ಅಥವಾ ಶುದ್ಧ ಧನ್ಯಾಸಿ ರಾಗವನ್ನು ಆಧರಿಸಿದ ಹಾಡುಗಳನ್ನು ಹುಡುಕಿದ್ದೆ. ಯೂಟ್ಯೂಬ್‌ನಲ್ಲಿ ರಾಗಾಧಾರಿತ ಜನಪ್ರಿಯ ಹಾಡುಗಳ ಮಾಲಿಕೆಯಲ್ಲಿ ಕರ್ನಾಟಿಕ್ ಸಂಗೀತವನ್ನು ಪರಿಚಯಿಸುವ ಗಾಯಕಿ ರಕ್ಷಾ ಎಂ. ಧನ್ಯಾಸಿ ರಾಗವನ್ನು   ಪರಿಚಯಿಸಿದ್ದನ್ನು ಕುರಿತ ಟಿಪ್ಪಣಿ ಮಾಡಿಕೊಳ್ಳುತ್ತಾ ಒಂದು ಗಂಟೆ ಆ ಹಾಡುಗಳಲ್ಲೇ ಮುಳುಗಿ ಹೋದೆ! ಇಂಥ ಆನಂದದ ರಿಸರ್ಚುಗಳು ಟೀಚಿಂಗಿಗೆ ಹೊಸ ಬಣ್ಣ ತರಬಲ್ಲವು!

ರಕ್ಷಾ ಪರಿಚಯಿಸಿದ ಧನ್ಯಾಸಿ ರಾಗಾಧಾರಿತ ಕೆಲವು ಜನಪ್ರಿಯ ಹಾಡುಗಳು:

’ಗೋರಿ ತೇರ ಗಾಂವ್ ಬಡಾ ಪ್ಯಾರಾ…’

’ಏನೇನೋ ಆಸೆ…ನೀ ತಂದ ಭಾಷೆ…’

’ಮನಸು ಪಲಿಕೆ… ಮಧುರ ಗೀತಂ…’

’ರಾ ರಾ ಸರಸಕು ರಾರಾ…’

’ನನಗಾಗಿಯೇ ನಿನ್ನಂದವು…ನಿನಗಾಗಿಯೇ ಈ ಜನ್ಮವು…’

ಹೀಗೆ ರಾಗಾಧಾರಿತ ಹಾಡುಗಳ ಬೆನ್ನು ಹತ್ತುವುದು ರಾಗಗಳನ್ನು ನೆನಪಿಟ್ಟುಕೊಳ್ಳುವ ನನ್ನ ಬಗೆ ಕೂಡ. ಅವತ್ತು ರಿಫ್ರೆಶರ್‍ ಕೋರ್ಸಿನಲ್ಲಿ ಈ ಹಾಡುಗಳನ್ನು ನೆನಪಿಸುತ್ತಿರುವಂತೆ ಅಲ್ಲಿದ್ದ ಮೇಡಂಗಳ ಕಣ್ಣುಗಳು ಇದ್ದಕ್ಕಿದ್ದಂತೆ ಮಿನುಗತೊಡಗಿದವು! ಅದರಲ್ಲೂ ’ವಾಲ್ಮೀಕಿ’ ಸಿನಿಮಾದ ’ಜಲಲ ಜಲಲ ಜಲ ಧಾರೆ’ ಹಾಡಿನ ಪ್ರಸ್ತಾಪ ಬಂದ ತಕ್ಷಣ, ಒಂದು ಕಾಲಕ್ಕೆ ಕವಿ ಕುವೆಂಪು ಅಡ್ಡಾಡಿದ್ದ ಮಾನಸಗಂಗೋತ್ರಿಯ ಕ್ಲಾಸಿನಲ್ಲಿದ್ದ ಕೋಗಿಲೆ, ಕಾಜಾಣಗಳು ತುಟಿಯೊಳಗೇ ಈ ಹಾಡುಗಳನ್ನು ಗುನುಗತೊಡಗಿದವು! ಆವರೆಗೆ ನಡೆದಿದ್ದ ಆಧುನಿಕೋತ್ತರ ಚಿಂತನೆ ಕುರಿತ ಆ ’ಬೌದ್ಧಿಕ’ ಕ್ಲಾಸಿನಲ್ಲಿ ಹಠಾತ್ತನೆ ಭಾವಗೀತಾತ್ಮಕ ಎನರ್ಜಿ ಚಿಮ್ಮಿದಂತಿತ್ತು…

ನಮ್ಮ ಬರಹ, ಮಾತು, ಚಿಂತನೆ ನಮ್ಮಲ್ಲೂ, ಇತರರಲ್ಲೂ ಇಂಥ ಎನರ್ಜಿ ಉಕ್ಕಿಸಿದಾಗ ಅವು ನಿಧಾನಕ್ಕೆ ಎಲ್ಲೆಡೆ ಹಬ್ಬಬಲ್ಲವು…

blog
22 Jun 2025 ಕೀರ್ತನೆ ಕವಿತೆಯಾದಾಗ

ಕರ್ನಾಟಕ ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಕೇಂದ್ರದ ಪ್ರೊಫೆಸರ್ ಹನುಮಗೌಡರು ಇದ್ದಕ್ಕಿದ್ದಂತೆ ಕನಕದಾಸರ ಎರಡು ಕೀರ್ತನೆಗಳನ್ನು ಕೊಟ್ಟು, ‘ಆಕಾಶವಾಣಿಯಲ್ಲಿ ಈ ಕೀರ್ತನೆಗಳನ್ನು ಕುರಿತು ಮಾತಾಡಬೇಕು’ ಎಂದರು. ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಭಾಷಾಂತರ ಕುರಿತ ವಿಚಾರ ಸಂಕಿರಣಕ್ಕೆ ಧಾರವಾಡಕ್ಕೆ ಹೊರಟಿದ್ದ ದಿನ ಎದುರಾದ ಆಕಸ್ಮಿಕ ಕೋರಿಕೆಯಿದು.

ಯಾರಾದರೂ ಕೇಳಿದ ತಕ್ಷಣ ಇಂಥ ಅಸೈನ್‌ಮೆಂಟುಗಳನ್ನು ಒಪ್ಪದ ನನಗೆ, ಕೆಲವು ಗಂಟೆಗಳ ನಂತರ, ಈ ಕೀರ್ತನೆಗಳನ್ನು ಸುಮ್ಮನೆ, ಮುಕ್ತವಾಗಿ ಓದಿದರೆ ಹೇಗೆ ಎನ್ನಿಸತೊಡಗಿತು. 'ಕೀರ್ತನೆ’ ಎಂದ ತಕ್ಷಣ ನಮ್ಮ ಓದಿನ ದಿಕ್ಕು ಹಾಗೂ ಅರ್ಥ ನಿರ್ದಿಷ್ಟಗೊಳ್ಳುವುದರಿಂದ ಇದನ್ನೊಂದು ಕವಿತೆಯಾಗಿ ಓದಿದರೆ ಏನನ್ನಿಸುತ್ತದೆ ನೋಡೋಣ ಎಂದುಕೊಂಡೆ. ಕನಕದಾಸರ ಒಂದು ಕವಿತೆಯನ್ನು ಆರಿಸಿಕೊಂಡು ಪ್ರಯಾಣದ ಹಾದಿಯಲ್ಲಿ ಮತ್ತೆ ಮತ್ತೆ ಓದಿದೆ. 

ಈ ಕವಿತೆ ಓದುತ್ತಿರುವಾಗ ಕೃತಿಕಾರನ ಹಿನ್ನೆಲೆ ಬಿಟ್ಟು ಕೃತಿಯನ್ನು ಓದುವ ಐ.ಎ. ರಿಚರ್ಡ್ಸ್ ವಿಮರ್ಶಾ ಮಾರ್ಗ ನೆರವಿಗೆ ಬಂತು. ನೂರು ವರ್ಷಗಳ ಕೆಳಗೆ ಇಂಗ್ಲಿಷ್ ಪ್ರೊಫೆಸರ್ ರಿಚರ್ಡ್ಸ್ ಕ್ಲಾಸ್ ರೂಮಿನಲ್ಲಿ ಮಾಡಿದ ಪ್ರಯೋಗ ಸಾಹಿತ್ಯ ವಿಮರ್ಶೆ ಬಲ್ಲವರಿಗೆಲ್ಲ ಗೊತ್ತಿರುತ್ತದೆ: ಕವಿತೆಗಳ ಟೈಟಲ್; ಕವಿ, ಕವಯಿತ್ರಿಯರ ಹೆಸರು; ಕವಿತೆ ಬರೆದ ಕಾಲ… ಇವನ್ನೆಲ್ಲ ತೆಗೆದು ಹಾಕಿದ ರಿಚರ್ಡ್ಸ್, ಕೇವಲ ಅಚ್ಚಾದ ಪುಟಗಳನ್ನಷ್ಟೇ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೊಟ್ಟು, ಅವರು ಅವನ್ನು ಹೇಗೆ ಗ್ರಹಿಸುತ್ತಾರೆ ಎಂದು ನೋಡಿದ. ಅವರ ಪ್ರತಿಕ್ರಿಯೆಗಳನ್ನೆಲ್ಲ ಅಧ್ಯಯನ ಮಾಡುತ್ತಾ, ಕವಿತೆ ಓದುವವರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನೆಲ್ಲ ಪಟ್ಟಿ ಮಾಡಿ ’ಪ್ರಾಕ್ಟಿಕಲ್ ಕ್ರಿಟಿಸಿಸಂ’ ಎಂಬ ಪುಸ್ತಕ ಬರೆದ. ಈ ಮಾರ್ಗದ ಮಿತಿಗಳೇನೇ ಇರಲಿ, ಇವತ್ತಿಗೂ ಕ್ಲಾಸ್ ರೂಮಿನಲ್ಲಿ ಬಿಡಿ ಬಿಡಿ ಕವಿತೆಗಳನ್ನು, ಕತೆಗಳನ್ನು ಟೀಚ್ ಮಾಡುವವರಿಗೆ ಉಪಯುಕ್ತ ಮಾರ್ಗ ಇದು.    

ಈ ರಿಚರ್ಡ್ಸ್ ಮಾರ್ಗ ಉಪಯುಕ್ತ ಎನ್ನಲು ಕಾರಣವಿದೆ: ಯಾವುದೇ ಕೃತಿಯನ್ನು ಕೃತಿಕಾರ ಅಥವಾ ಕೃತಿಕಾರ್ತಿಯನ್ನೇ ನೆನಪಿನಲ್ಲಿಟ್ಟುಕೊಂಡು ಓದಿದರೆ ಕೃತಿಯ ಅರ್ಥದ ಬಗ್ಗೆ ನಮ್ಮ ಪೂರ್ವ ತೀರ್ಮಾನ ಸಿದ್ಧವಾಗತೊಡಗುತ್ತದೆ. ಹಾಗೆಯೇ ಕೃತಿಯೊಂದು ಹುಟ್ಟಿದ ಸಾಹಿತ್ಯ ಚಳುವಳಿಯ ಹಿನ್ನೆಲೆಯಲ್ಲಿ ಅದನ್ನು ನವೋದಯ ಕೃತಿ, ಬಂಡಾಯ ಕೃತಿ ಎಂದು  ಓದಿದಾಗಲೂ ಹೀಗೇ ಆಗುತ್ತದೆ. ಅಥವಾ ರೊಮ್ಯಾಟಿಕ್ ಕವಿ ಕೀಟ್ಸ್ ಬರೆದ ಕವಿತೆ; ಹನುಮಂತಯ್ಯನವರ ದಲಿತ ಕವಿತೆ; ಅಥವಾ ರೂಪಾ ಹಾಸನ ಅವರ ಸ್ತ್ರೀವಾದಿ ಕವಿತೆ... ಹೀಗೆ ಶುರು ಮಾಡಿದಾಗಲೂ ಓದುವ ಮುನ್ನವೇ ಕವಿತೆಯ ಒಂದು ಅರ್ಥ ಸಿದ್ಧವಾಗಿರುತ್ತದೆ. 

ಅದಕ್ಕೇ ಕನಕದಾಸರ ಈ ಕವಿತೆಯನ್ನು ಅವರ 'ದಾಸ’ ಹಿನ್ನೆಲೆ ಬಿಟ್ಟು, ಭಕ್ತಿ ಕಾವ್ಯದ ಭಜನಾ ಪ್ರಭಾವಳಿ ಬಿಟ್ಟು, ಓದಿ ನೋಡಿದರೆ ಹೇಗಿರುತ್ತದೆ ಎಂಬ ಕುತೂಹಲ ಹುಟ್ಟಿತು. ಅವತ್ತು ಈ ಓದಿನ ಪ್ರಯೋಗಕ್ಕೆ ಸಿಕ್ಕ ಕನಕದಾಸರ 'ಸ್ನಾನವ ಮಾಡಿರೋ ಜ್ಞಾನತೀರ್ಥದಲ್ಲಿ’ ಎಂಬ ಕವಿತೆ:

ಸ್ನಾನವ ಮಾಡಿರೊ ಜ್ಞಾನತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು

ತನ್ನ ತಾನರಿತುಕೊಂಬುದೇ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ-ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ

ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ತ್ವವರಿತುಕೊಂಬುದೆ ಒಂದು ಸ್ನಾನ

ಸಾಧುಸಜ್ಜನರ ಸಂಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದಧ್ಯಾನವೆ ನಿತ್ಯ ಗಂಗಾಸ್ನಾನ

ಕನಕದಾಸರು ಈ ಗೀತೆಯನ್ನು ಹಾಡಿದಾಗ ತಲೆಬರಹ ಕೊಟ್ಟರೋ, ಅಥವಾ ನಂತರ ಸಂಗ್ರಹಕಾರರಿಂದ ತಲೆಬರಹ ಬಂತೋ, ಅಥವಾ ಕೀರ್ತನೆಗಳಲ್ಲಿ ಮೊದಲ ಸಾಲನ್ನೇ ಸಂಪಾದಕರು ತಲೆಬರಹವಾಗಿ ಕೊಟ್ಟರೋ…ಹೇಳುವುದು ಕಷ್ಟ.

ಸ್ನಾನ ಮಾಡುವ ಕ್ರಿಯೆ ಕವಿತೆಯಲ್ಲಿ ರೂಪಕವಾಗಿದೆ ಎಂಬುದು ಯಾರಿಗಾದರೂ ಮೇಲುನೋಟಕ್ಕೇ ಸ್ಪಷ್ಟವಾಗುತ್ತದೆ. ಪದವೊಂದು ಮೇಲುನೋಟಕ್ಕೆ ಏನಾಗಿ ತೋರುತ್ತಿದೆಯೋ ಅದಕ್ಕಿಂತ ಬೇರೆಯದೇ ಆದ ಅರ್ಥಗಳನ್ನು ಸೂಚಿಸುವುದು ರೂಪಕ- ಇದು ರೂಪಕದ ಒಂದು ಸರಳ ಅರ್ಥ ತಾನೆ? ಈ ದೃಷ್ಟಿಯಿಂದ ಸ್ನಾನ ಮಾಡುವ ಕ್ರಿಯೆ ಈ ಕವಿತೆಯಲ್ಲಿ ಮೇಲುನೋಟದ ಅರ್ಥಕ್ಕಿಂತ ಭಿನ್ನವಾದ ಹಲವು ಅರ್ಥಗಳನ್ನು ಹೊರಡಿಸಬಲ್ಲ ರೂಪಕ. 'ಸ್ನಾನ’ಕ್ಕೆ ಇರುವ ಮೀಯುವುದು, ಮುಳುಗೇಳುವುದು, ಶುಭ್ರವಾಗುವುದು… ಮುಂತಾದ ಅರ್ಥಗಳು ಬಳಕೆಯ ಸಂದರ್ಭಗಳಲ್ಲಿ ಹಲವು ಅರ್ಥಗಳನ್ನು ಕೊಡತೊಡಗುತ್ತವೆ. ಉದಾಹರಣೆಗೆ, 'ಅವಳ ದೇಹದಲ್ಲಿ ಮಿಂದೆದ್ದ’ ಎಂಬ ರಮ್ಯ ರೂಪಕದ ಅರ್ಥವೇ ಬೇರೆ; ‘ಅವನು ಜ್ಞಾನಸಾಗರದಲ್ಲಿ ಮಿಂದೆದ್ದ’ ಎಂಬ ರೂಪಕದ ಅರ್ಥವೇ ಬೇರೆ. ಅಕಸ್ಮಾತ್ ಈ ಎರಡೂ ಸಾಲುಗಳು ಒಟ್ಟಿಗೇ ಬಂದಾಗ ಇವೆರಡರ ಅರ್ಥಗಳು ಬೆರೆಯುವ ಗಳಿಗೆಯೂ ಒಂದಿದೆ: ಆಗ ಆತ ಅವಳ ದೇಹದ ಬಗ್ಗೆ ಜ್ಞಾನ ಪಡೆದ;  ಆ ದೇಹದ ಜ್ಞಾನಸಾಗರದ ಅರಿವು ಪಡೆದ ಎಂಬ ಅರ್ಥ ವಿಸ್ತರಿಸಿಕೊಳ್ಳಲೂಬಹುದು! 

ಈ ಥರದ ಮುಕ್ತ ಓದುಗಳು ಒತ್ತಟ್ಟಿಗಿರಲಿ, ಸಹಜ ಕವಿ ಕನಕದಾಸರ ಕವಿತೆ ಶುರುವಾಗುವುದು ಸ್ನಾನ, ಜ್ಞಾನಗಳ ಪ್ರಾಸರೂಪಿ ಪದಗಳ ಮೂಲಕ. ಯಾವುದನ್ನು ಮಾಡಿದರೆ ಶುಭ್ರತೆ; ಯಾವುದು ಕೊಳಕು ಎಂಬ ತದ್ವಿರುದ್ಧ ಚಿತ್ರಗಳನ್ನೂ ಕವಿತೆ ಕೊಡುತ್ತದೆ.  ಮೇಲುನೋಟಕ್ಕೆ ಇದೊಂದು ನೀತಿಕವಿತೆಯಂತೆ ಇದ್ದರೂ, ನುರಿತ ಕವಿಯ ನಿರಾಯಾಸವಾದ ಅನುಪ್ರಾಸಗಳ ನಿರ್ವಹಣೆ ಆನಂದ ಮೂಡಿಸತೊಡಗುತ್ತದೆ. ಅನ್ನ-ಅನ್ಯಾಯ, ಅನ್ನದಾನ-ಅನ್ಯಧ್ಯಾನಗಳ ಹಾಗೆ ’ಪರ’ದ ಸುತ್ತಣ ಆಟವೂ ಆಕರ್ಷಕವಾಗಿದೆ. 

ಕನಕದಾಸರು ಇಲ್ಲಿ  ಅನ್ನ-ಅನ್ಯಾಯಗಳನ್ನು ಒಟ್ಟಿಗೇ ತಂದಿರುವ ರೀತಿ ಮುಂದೆ ಗೋಪಾಲಕೃಷ್ಣ ಅಡಿಗರ ’ಕಟ್ಟುವೆವು ನಾವು’ ಪದ್ಯದಲ್ಲಿ ’ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ’ ಎಂದು ಅಂತರ್ ಪಠ್ಯೀಯವಾಗುವುದು ಕುತೂಹಲಕರ. ಈ ಥರದ ಅಂತರ್ ಪಠ್ಯೀಯತೆ ಯಾವುದೇ ಭಾಷೆಯ ಕಾವ್ಯರಚನೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ… ರೂಢಿಯ ಓದಿನಂತೆ ಕನಕರ ಕವಿತೆಯ ಪ್ರತಿಮೆಗಳನ್ನೆಲ್ಲ ಕೊನೆಯ ಸಾಲಿನ ಕಾಗಿನೆಲೆಯಾದಿಕೇಶವನ ಪಾದದಲ್ಲಿ ಲೀನಗೊಳಿಸದೆ ಓದುವ ಆಟ ನನ್ನಲ್ಲಿ ಕ್ರಿಯೇಟಿವ್ ಎನರ್ಜಿ ಹುಟ್ಟಿಸತೊಡಗಿತು.

‘ಟ್ರಸ್ಟ್ ದ ಟೇಲ್, ನಾಟ್ ದ ಟೆಲ್ಲರ್’ (ಕತೆಯನ್ನು ನಂಬು; ಕತೆ ಹೇಳುವವರನ್ನಲ್ಲ) ಎಂಬ ಡಿ.ಎಚ್. ಲಾರೆನ್ಸ್‌ನ ಮಾತನ್ನು ಮತ್ತೆ ಮತ್ತೆ ಈ ಅಂಕಣಗಳಲ್ಲಿ ಉಲ್ಲೇಖಿಸಿರುವ ನಾನು ಕವಿಯನ್ನು ಬಿಟ್ಟು, ಕೃತಿಯ ಅಚ್ಚಾದ ಪುಟಗಳನ್ನೇ ಓದುತ್ತೇನೆ ಎಂದು ಕನಕದಾಸರ ಕವಿತೆಯನ್ನು ಓದುವಾಗಲೂ ಹೊರಟಿದ್ದೆನಷ್ಟೆ? ಆದರೆ ನಾನು ಅವತ್ತು ಅಚ್ಚಾದ ಪುಟಗಳಲ್ಲಿ ಯಾವುದನ್ನು ನೋಡದೆ ಬಿಟ್ಟಿದ್ದೆ ಎಂಬುದು ಒಂದು ತಿಂಗಳ ನಂತರ ಈ ಕವಿತೆಯನ್ನು ಮತ್ತೆ ಓದಿದಾಗ ಹೊಳೆದು ಪೆಚ್ಚಾದೆ. 

ಈ ಕಣ್ತಪ್ಪು, ಬುದ್ಧಿತಪ್ಪು ಕಂಡಿದ್ದು ಕನಕರ ಈ ಕವಿತೆಯನ್ನು ಕಳೆದ ವಾರ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ರಿಫ್ರೆಶರ್ ಕೋರ್ಸಿನಲ್ಲಿ ಪ್ರಸ್ತಾಪಿಸಲು ಮತ್ತೆ ಗಮನಿಸುತ್ತಿದ್ದಾಗ. ಅರೆ! ಕವಿತೆಯ ಶುರುವಿನಲ್ಲೇ ‘ರಾಗ: ಧನ್ಯಾಸಿ’, ‘ತಾಳ: ಆದಿತಾಳ’ ಎಂಬ ವಿವರಗಳಿವೆಯಲ್ಲ! ಅದನ್ನು ಕಳೆದ ತಿಂಗಳು ನಾನು ಗಮನಿಸಿದ್ದೆನೋ, ಗಮನಿಸಿದರೂ ಅಥವಾ ಗಮನಿಸದೆಯೇ ಮುಂದೆ ಸಾಗಿದೆನೋ? ಎಷ್ಟೋ ಸಲ, ಎದುರಿಗಿರುವ, ತೀರಾ ಎದ್ದು ಕಾಣುವ ವಸ್ತುವನ್ನೇ ಕಾಣದೆ ನಾವು ಮುಂದೆ ಸಾಗುವ ಹಾಗೆ ಅವತ್ತೂ ಆಗಿತ್ತು! 

ನಾನೊಬ್ಬನೇ ಈ ತಪ್ಪು ಮಾಡಿರಬಹುದೇ ಎಂಬ ಅಳುಕಿನಿಂದ ಅಲ್ಲಿದ್ದ ಮೇಡಂಗಳನ್ನು, ಮೇಷ್ಟರುಗಳನ್ನು ಕೇಳಿದೆ: 

‘ನೀವು ನಿಮ್ಮ ಪಠ್ಯಪುಸ್ತಕಗಳಲ್ಲಿ ಪುರಂದರದಾಸ, ಕನಕದಾಸರ ಕವಿತೆಗಳನ್ನು ಟೀಚ್ ಮಾಡಿದ್ದೀರಾ?’ 

‘ಹೂಂ!’ …ಸಣ್ಣಗೆ ಕೇಳಿ ಬಂತು... ‘ಮೊಳೆಯದಲೆಗಳ ಮೂಕ ಮರ್ಮರ!’

‘ಸರಿ. ಆ ಕವಿತೆಗಳ ಆರಂಭದಲ್ಲಿ ಕೊಟ್ಟಿರುವ ರಾಗ, ತಾಳಗಳ ವಿವರಗಳನ್ನೇನಾದರೂ ಗಮನಿಸಿದ್ದೀರಾ?’

ಪಿನ್ ಡ್ರಾಪ್ ಸೈಲೆನ್ಸ್! ಅವನ್ನು ಯಾರೂ ಗಮನಿಸಿದಂತಿರಲಿಲ್ಲ! ಅವರಲ್ಲಿ ನನ್ನ ಪರಿಚಿತ ಗೆಳೆಯರೂ, ಹಿರಿಯ ವಿದ್ಯಾರ್ಥಿನಿಯರೂ ಇದ್ದರು. ಅವರು ಕೂಡ ನನ್ನಂತೆಯೇ ಎದುರಿಗಿರುವುದನ್ನು ಗಮನಿಸದ ಕಣ್ ಮಂಪರಿಗೆ ಗುರಿಯಾಗಿದ್ದರು! 

ಕನಕದಾಸರಾಗಲಿ, ಪುರಂದರದಾಸರಾಗಲಿ ಕರ್ನಾಟಿಕ್ ಸಂಗೀತದ ಉತ್ತಮ ಜ್ಞಾನ ಉಳ್ಳವರಾಗಿದ್ದುದನ್ನು ಅವರ ಕೃತಿಗಳೇ ಸೂಚಿಸುತ್ತವೆ. ಅವರ ಭಾವಗೀತೆಗಳ ಹರಿವಿಗೂ, ಸ್ವತಃ ಅವರೋ ಅಥವಾ ಕೃತಿಗಳ ಸಂಗ್ರಹಕಾರರೋ ಸೂಚಿಸಿರುವ ಅನೇಕ ಮೂಲ ರಾಗಗಳ ಓಟಕ್ಕೂ, ಅವುಗಳ ಸಾಂಗೀತಿಕ ಲಯಕ್ಕೂ ಸಂಬಂಧವಿದ್ದಂತಿದೆ. ರಾಗ, ಸಂಗೀತಗಳ ಹಂಗಿಲ್ಲದೆಯೂ ಕನಕರ ಕವಿತೆಗಳನ್ನು ಓದಬಹುದು. ಆ ಮಾತು ಬೇರೆ. 

ಆದರೂ ನನ್ನ ರಿಸರ್ಚ್ ಮನಸ್ಸು ಕರ್ನಾಟಿಕ್ ಸಂಗೀತದ ಧನ್ಯಾಸಿ ರಾಗದ ಓಟ ಈ ಕವಿತೆಗೆ ಇನ್ನೂ ಯಾವ್ಯಾವ ಆಯಾಮ ಕೊಡಬಹುದೆಂಬುದನ್ನು ನೋಡಲೆತ್ನಿಸಿತು. ಮುಂದೊಮ್ಮೆ ಈ ಅಂಕಣದಲ್ಲಿ ಧನ್ಯಾಸಿ ರಾಗದಲ್ಲಿ ಕನಕರ ಕವಿತೆ ಯಾವ ಯಾವ ಅರ್ಥ ಹೊರಡಿಸಬಹುದೆಂಬುದನ್ನು ಹುಡುಕಬಹುದು. ಈ ಅಂಕಣದ ಓದುಗ, ಓದುಗಿಯರಲ್ಲಿ ಸಂಗೀತ ಬಲ್ಲವರು ಈ ಕೆಲಸ ಕೈಗೆತ್ತಿಕೊಂಡು ಈ ಪಠ್ಯವನ್ನು ಬೆಳೆಸಿ ನೋಡಿದರೆ, ಆ ಪ್ರಯೋಗ ನಿಜಕ್ಕೂ ರೋಮಾಂಚಕಾರಿಯಾಗಬಲ್ಲದು; ಇಂಥ ಪ್ರಯೋಗಗಳು ಓದಿನ ಆನಂದಕ್ಕೆ, ವಿಶ್ಲೇಷಣೆಗೆ ಒಮ್ಮೊಮ್ಮೆ ಕವಿತೆಯ ರಚನೆಗೆ, ಟೀಚಿಂಗಿಗೆ… ಲಾಭಕರವಾಗಲೂ ಬಲ್ಲವು. 

ಇದೀಗ ಕತ್ತೆತ್ತಿದರೆ ಮುತ್ತುವ ಭೀಕರ ಯುದ್ಧದ ದುರಹಂಕಾರ, ನಿರ್ದಯ ಹಿಂಸೆಗಳ ಕಟು ವಾಸ್ತವದ ನಡುವೆ ನಮ್ಮಂಥವರಿಗೆ ಓದು, ಬರಹಗಳೇ ಕೊನೆಯ ಆಶ್ರಯವೇನೋ…
 



Latest Video


Nataraj Huliyar Official
YouTube Channel

SUBSCRIBE