ಅಮೆರಿಕನ್ ಲೇಖಕಿ ಪರ್ಲ್ ಎಸ್. ಬಕ್ ಇಂಡಿಯಾದ ಸಮಾಜವಾದಿ ಚಿಂತಕ-ರಾಜಕಾರಣಿ ರಾಮಮನೋಹರ ಲೋಹಿಯಾರನ್ನು ತಮ್ಮ ಮನೆಗೆ ಊಟಕ್ಕೆ ಕರೆದರು. ತಮ್ಮ ಮೂವತ್ತೆಂಟನೆಯ ವಯಸ್ಸಿನಲ್ಲಿ ಆಕೆ ಬರೆದ 'ದ ಗುಡ್ ಅರ್ತ್’ ಕಾದಂಬರಿ ಜಗತ್ತಿನಾದ್ಯಂತ ಹೆಸರು ಪಡೆದಿತ್ತು. ೧೯೩೨ ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದ ಪರ್ಲ್ ಎಸ್. ಬಕ್, ೧೯೩೮ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಲೇಖಕಿ. ೧೯೫೨ರಲ್ಲಿ ಅಮೆರಿಕಾ ಪ್ರವಾಸದಲ್ಲಿದ್ದ ಲೋಹಿಯಾ ಜೊತೆಗಿನ ಮಾತುಕತೆಯ ನಡುವೆ ಪರ್ಲ್ ಎಸ್. ಬಕ್ ಲೋಹಿಯಾರನ್ನು ಒಂದು ಪ್ರಶ್ನೆ ಕೇಳಿದರು:
‘Does self ever meet self in your country?'
ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಈ ಪ್ರಶ್ನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಲೋಹಿಯಾಗೆ ಎದುರಾಯಿತು. ''ನಮ್ಮ 'ಇಗೋ’ ಲೋಕದ ಸಕಲ ಸೆಲ್ಫ್ಗಳನ್ನು (ಯೂನಿವರ್ಸಲ್ ಸೆಲ್ಫ್) ಸಂಧಿಸುವುದರ ಬಗ್ಗೆ ಈಕೆ ಕೇಳುತ್ತಿದ್ದಂತಿಲ್ಲ. ಪ್ರಾಯಶಃ ಇಬ್ಬರು ವ್ಯಕ್ತಿಗಳ ನಡುವಣ ಆಳವಾದ ಸಂವಹನವನ್ನು; ಎಲ್ಲ ಜಡ, ಕೃತಕ ಹೊದಿಕೆಗಳನ್ನು ತೊಡೆದು ಹಾಕಿ ಶುಭ್ರವಾದ ಎರಡು ಸೆಲ್ಫ್ಗಳು ಸಂಧಿಸುವುದನ್ನು ಕುರಿತು ಆಕೆ ಕೇಳುತ್ತಿರಬಹುದು...’’ ಎಂದು ಲೋಹಿಯಾ ಊಹಿಸಿಕೊಳ್ಳಲೆತ್ನಿಸಿದರು.
ಪರ್ಲ್ ಎಸ್. ಬಕ್ ಪ್ರಶ್ನೆಯನ್ನು ಓದಿದಾಗಿನಿಂದಲೂ ಅಲ್ಲಿರುವ ‘ಸೆಲ್ಫ್’ ಎಂಬ ಪದವನ್ನು ಕನ್ನಡಿಸುವುದು ಎಷ್ಟು ಕಷ್ಟ ಎನ್ನಿಸುತ್ತಲೇ ಇದೆ. 'ಸೆಲ್ಫ್ ಕ್ರಿಟಿಸಿಸಂ’ ಎಂಬುದನ್ನು ‘ಸ್ವ-ವಿಮರ್ಶೆ’ ಎನ್ನುವಂತೆ, ‘ಸೆಲ್ಫ್’ ಎಂಬುದನ್ನು 'ಸ್ವ' ಎಂದು ಅನುವಾದಿಸಿದರೆ, ಪರ್ಲ್ ಎಸ್. ಬಕ್ ಪ್ರಶ್ನೆಯ ಆಳ ಅರ್ಥವಾಗುವುದಿಲ್ಲ. ಈ ಪ್ರಶ್ನೆಯನ್ನು ಕೆದಕುತ್ತಾ ಹೋದಂತೆಲ್ಲ ಈ ಪದ ಎಷ್ಟು ಸಂಕೀರ್ಣ ಎನ್ನಿಸತೊಡಗುತ್ತದೆ. ಸದ್ಯಕ್ಕೆ, ಈ ಪ್ರಶ್ನೆಯನ್ನು 'ಇಂಡಿಯಾದಲ್ಲಿ ಒಬ್ಬ ವ್ಯಕ್ತಿಯ ಆಳದ ಒಳಗು ಮತ್ತೊಬ್ಬನ ಅಥವಾ ಮತ್ತೊಬ್ಬಳ ಆಳದ ಒಳಗನ್ನು ಎಂದಾದರೂ ಸಂಧಿಸುತ್ತದೆಯೆ?’ ಎಂದು ಸರಳವಾಗಿ ವಿವರಿಸಿಕೊಳ್ಳಲೆತ್ನಿಸಿದೆ.
ಮೊನ್ನೆ ಈ ಪ್ರಶ್ನೆಯನ್ನು ಗಂಭೀರ ಮನಸ್ಸಿನ ಗೆಳೆಯರಿಗೆ ಕೇಳಿದ ತಕ್ಷಣ, 'ಇಲ್ಲ! ಈ ಕಾಲದಲ್ಲಂತೂ ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದನ್ನು ಸಂಧಿಸುವ ಗಳಿಗೆಗಳು ಇಲ್ಲವೇ ಇಲ್ಲ’ ಎಂದರು. ನಿಜಕ್ಕೂ ಅವರಿಗೆ ತಮ್ಮಾಳದಲ್ಲಿ ಹಾಗನ್ನಿಸಿದಂತಿತ್ತು. ಪರ್ಲ್ ಎಸ್. ಬಕ್ ಪ್ರಶ್ನೆ ಸೂಚಿಸುತ್ತಿರುವ ಎರಡು ಸೆಲ್ಫ್ಗಳ ಭೇಟಿ ನಿತ್ಯದ ಸಂಬಂಧಗಳಲ್ಲಂತೂ ಸಾಧ್ಯವೇ ಇಲ್ಲದ ಸ್ಥಿತಿ ಇವತ್ತು ಇದೆ ಎಂದು ಅವರಿಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅಚ್ಚರಿಯಲ್ಲ. ಆದರೆ ಒಬ್ಬರ ಒಳಗು ಇನ್ನೊಬ್ಬರಿಗೆ ತಲಪದ ಸ್ಥಿತಿ ಸಾವಿಗೆ ಹತ್ತಿರವಿರಬಲ್ಲದು ಎಂಬುದು ಹೊಳೆದಾಗ ದಿಗ್ಭ್ರಮೆಯಾಗುತ್ತದೆ.
ಇನ್ನೊಬ್ಬರ ಸೆಲ್ಫನ್ನು ಸಂಧಿಸುವ ಮಾತು ಹಾಗಿರಲಿ; ಬಹುತೇಕ ಸಲ ‘ನಮ್ಮ ಸೆಲ್ಫನ್ನು ನಾವು ಸಂಧಿಸುವ ಗಳಿಗೆಗಳಾದರೂ ಇವೆಯೆ?’ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ! ಕೆಲವರು ತಮ್ಮ ಆತ್ಮಚರಿತ್ರೆಯಲ್ಲಿ ಕೂಡ ತಮ್ಮ ಸೆಲ್ಫನ್ನು ಸಂಧಿಸಿದಂತೆ ಕಾಣುವುದಿಲ್ಲ. ಇನ್ನು ಕತೆ, ಕವಿತೆ, ಪ್ರಬಂಧ, ಭಾಷಣಗಳಲ್ಲಿ ತಮ್ಮ ಸೆಲ್ಫನ್ನು ಸಂಧಿಸಿದ್ದಾರೆಯೆ ಎಂಬ ಮಾತನ್ನಂತೂ ಕೇಳುವಂತೆಯೇ ಇಲ್ಲ!
ಸೆಲ್ಫ್ ಸುತ್ತಣ ಪ್ರಶ್ನೆಗಳು ಇಷ್ಟು ಸೂಕ್ಷ್ಮವಾಗಿರುವುದರಿಂದಲೇ ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಸಾಮಾನ್ಯ ಮಾತುಕತೆಯಲ್ಲಿ ಕೂಡ ಲೋಹಿಯಾ ತಮ್ಮ ಸೆಲ್ಫ್ ನಿಂದ ಹುಟ್ಟದಿರುವ ಉತ್ತರ ಕೊಡುವವರಾಗಿರಲಿಲ್ಲ. ಪ್ರತಿ ಪ್ರಶ್ನೆಗೂ 'ಯೆಸ್’ ಅಥವಾ 'ನೋ’ ಎಂಬ ಉತ್ತರ ಇರುವುದಿಲ್ಲವಲ್ಲ! ಪರ್ಲ್ ಎಸ್. ಬಕ್ ಕೇಳಿದ ಅತಿ ಸೂಕ್ಷ್ಮ ಪ್ರಶ್ನೆಗೆ ವರ್ಷಗಟ್ಟಲೆ ಯೋಚಿಸಿದರೂ ಸ್ಪಷ್ಟ ಉತ್ತರ ಹೊಳೆಯುವುದು ಕಷ್ಟ. ಅದರಲ್ಲೂ ಇಂಡಿಯಾದಲ್ಲಿ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಯಾವಾಗಲಾದರೂ ಸಂಧಿಸುತ್ತದೆಯೇ ಎಂಬ ಪ್ರಶ್ನೆಗಂತೂ ಉತ್ತರ ಹುಡುಕುವುದು ಇನ್ನಷ್ಟು ಕಷ್ಟ. ಇಂಡಿಯಾದಲ್ಲಿ ಎದ್ದು ಕಾಣುವ 'ಬೂಟಾಟಿಕೆ ಹಾಗೂ ಎರಡು ನಾಲಗೆ’ಗಳನ್ನು ಕುರಿತು ಮುಂದೆ ೧೯೫೬ರಲ್ಲಿ ಲೇಖನ ಬರೆದ ಲೋಹಿಯಾಗೆ ಆ ಕಾಲಕ್ಕಾಗಲೇ ಈ ದೇಶದಲ್ಲಿ ಒಂದು ಸೆಲ್ಫ್ ಮತ್ತೊಂದು ಸೆಲ್ಫ್ ನಡುವಣ ಭೇಟಿ ಅಸಾಧ್ಯವಾಗತೊಡಗಿದೆ ಎನ್ನಿಸಿತ್ತೇನೋ.
ಲೋಹಿಯಾ ಆ ಹೊತ್ತಿಗೆ ಇಂಡಿಯಾದ ಅತ್ಯಂತ ಸೂಕ್ಷ್ಮ ಚಿಂತಕ-ರಾಜಕಾರಣಿಯಾಗಿ ರೂಪುಗೊಳ್ಳತೊಡಗಿದ್ದವರು. ತಮ್ಮೊಳಗೆ, ತಮ್ಮ ಆಳದಲ್ಲಿ, ತುಡಿಯುತ್ತಿದ್ದುದನ್ನು ಆಪ್ತರ ಜೊತೆಗೆ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಜೊತೆಗೆ, ವಿರೋಧಿಗಳ ಜೊತೆಗೆ ಹಂಚಿಕೊಳ್ಳಬಲ್ಲವರಾಗಿದ್ದರು. ಸ್ವಪರೀಕ್ಷೆಯ ಆತ್ಮಚರಿತ್ರೆಯನ್ನೇ ಬರೆದಿದ್ದ ಗಾಂಧೀಜಿಯ ಒಡನಾಟವಿದ್ದವರು. ಲೋಹಿಯಾ ತಮ್ಮ ಸಾರ್ವಜನಿಕ ಭಾಷಣಗಳಲ್ಲೂ, ಎಲ್ಲ ಬಗೆಯ ಸಭೆಗಳಲ್ಲೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನೇ ಹೆಚ್ಚು ಮಾತಾಡಲೆತ್ನಿಸುತ್ತಿದ್ದರು. ಅಂದರೆ, ತಮ್ಮ ಸೆಲ್ಫನ್ನು ಇತರರಿಗೂ ತಲುಪಿಸಲೆತ್ನಿಸುತ್ತಾ, ತಾವೂ ಇತರರ ಸೆಲ್ಫನ್ನು ತಲುಪಲೆತ್ನಿಸುತ್ತಿದ್ದರು. ಲೋಕಸಭಾ ಸದಸ್ಯೆ-ಬುದ್ಧಿಜೀವಿ ತಾರಕೇಶ್ವರಿ ಸಿನ್ಹಾ ಇರಲಿ; ಸ್ತ್ರೀವಾದಿ ಚಿಂತಕಿ ಶಕುಂತಲಾ ಶ್ರೀವಾಸ್ತವ ಇರಲಿ; ದಿಲ್ಲಿಯ ಕಾಫೀ ಹೌಸಿನಲ್ಲಿ ಲೋಹಿಯಾ ಕೂತಿದ್ದ ಟೇಬಲ್ಲಿನ ಚರ್ಚೆಗೆ ಬಂದು ಸೇರಿಕೊಳ್ಳುತ್ತಿದ್ದ ವೇಟರುಗಳಿರಲಿ; ಲೋಹಿಯಾರ ಕ್ಷೌರಿಕನಿರಲಿ; ಐದು ವರ್ಷದ ಹುಡುಗಿ ನಂದನಾ ರೆಡ್ಡಿಯಿರಲಿ… ಲೋಹಿಯಾ ಈ ಯಾರ ಜೊತೆ ಮಾತಾಡಿದಾಗಲೂ ಅವರ ಸೆಲ್ಫನ್ನು ಸಹಜವಾಗಿಯೇ ಸಂಧಿಸಲೆತ್ನಿಸುತ್ತಿದ್ದರು ಎಂದು ನನಗನ್ನಿಸಿದೆ.
ಇದು ಲೋಹಿಯಾರ ಸಾವಿರಾರು ಪುಟಗಳ ಬರಹಗಳನ್ನು ಓದಿದ ಹಿನ್ನೆಲೆಯಲ್ಲಿ ನನ್ನನ್ನು ತಟ್ಟಿರುವ ಸತ್ಯ. ಲೋಹಿಯಾರ ಸೆಲ್ಫ್ ಅವರ ಓದುಗನಾದ ನನ್ನ ಸೆಲ್ಫನ್ನು ಸಂಧಿಸಿದ ರೀತಿಯನ್ನೂ ಗಮನಿಸಿರುವ ಆಧಾರದ ಮೇಲೆ ಈ ಮಾತು ಹೇಳುತ್ತಿರುವೆ. ಲೋಹಿಯಾ ಕುರಿತು ಬರೆದಿರುವ ಸೂಕ್ಷ್ಮ ಮನಸ್ಸಿನ ಬಹುತೇಕರು ಲೋಹಿಯಾರ ಈ ಗುಣವನ್ನು ಮನಗಂಡಂತಿದೆ. ಅವರ ತೀಕ್ಷ್ಣ ವರ್ತನೆಯನ್ನು, ನಿಷ್ಠುರ ನಿಲುವುಗಳನ್ನು ಟೀಕಿಸುವವರಿದ್ದಾರೆ. ಆದರೆ ಲೋಹಿಯಾರ ಸೆಲ್ಫ್ ಉಳಿದವರ ಸೆಲ್ಫನ್ನು ಸಂಧಿಸಲೆತ್ನಿಸುತ್ತಿತ್ತು ಎಂಬುದನ್ನು ಬಿಡಿಸಿ ಹೇಳದಿದ್ದರೂ, ಈ ಬಗ್ಗೆ ಅವರನ್ನು ಬಲ್ಲವರಿಗೆ ಅನುಮಾನವಿದ್ದಂತಿರಲಿಲ್ಲ.
೧೯೫೨ರಲ್ಲಿ ಅಮೆರಿಕದಲ್ಲಿ ಲೋಹಿಯಾಗೆ ಹೊಳೆಯದ ಉತ್ತರ ಬರಬರುತ್ತಾ ಅವರ ಅನುಭವಕ್ಕೆ ಹೊಳೆದಿರಬಹುದು ಎನ್ನಿಸುತ್ತದೆ. ರಮಾ ಮಿತ್ರರ ಸಖ್ಯದಲ್ಲಿ ಲೋಹಿಯಾಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು ಎಂದು 'ಸುಧಾ’ ವಾರಪತ್ರಿಕೆಯಲ್ಲಿ 'ಡಾಕ್ಟರ್ ಸಾಹೇಬ್’ ಧಾರಾವಾಹಿ ಬರೆಯುತ್ತಿದ್ದಾಗ ಊಹಿಸಿದೆ. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಭೂಗತ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಲೋಹಿಯಾ ೧೯೪೩-೪೪ರ ನಡುವೆ ಲಾಹೋರ್ ಜೈಲಿನಲ್ಲಿ ಭೀಕರ ಹಿಂಸೆಯ ಸೆರೆಮನೆವಾಸ ಮುಗಿಸಿ ಕಲ್ಕತ್ತಾಕ್ಕೆ ಬಂದರು. ಆಗ ಹಿಸ್ಟರಿ ಲೆಕ್ಚರರ್ ರಮಾ ಮಿತ್ರ ಲೋಹಿಯಾರನ್ನು ಮೊದಲ ಬಾರಿಗೆ ಭೇಟಿಯಾದರು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಕೆಲವು ಭೂಗತ ಚಳುವಳಿಗಾರರು ಆಗ ಲೇಡೀಸ್ ಹಾಸ್ಟೆಲ್ಲಿನಲ್ಲಿದ್ದ ರಮಾ ಮಿತ್ರರ ಕೊಠಡಿಯನ್ನು ಸ್ಫೋಟಕ ಅಸ್ತ್ರಗಳನ್ನು ಬಚ್ಚಿಡಲು ಕೂಡ ಬಳಸಿಕೊಂಡಿದ್ದರು.
ರಮಾ-ರಾಮಮನೋಹರರ ಸಖ್ಯ ಗಾಢವಾಯಿತು. ೧೯೫೬ರಿಂದೀಚೆಗೆ ರಮಾಗೆ ಲೋಹಿಯಾ ಬರೆದ ಪತ್ರಗಳನ್ನು ಓದುತ್ತಿದ್ದರೆ, ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ನಿರಂತರವಾಗಿ ಸಂಧಿಸಿದ ಅಪೂರ್ವ ಗಳಿಗೆಗಳು ಕಾಣುತ್ತವೆ. ಈ ಪತ್ರಗಳಿಗೆ ರಮಾ ಮಿತ್ರ ಬರೆದ ಉತ್ತರಗಳಲ್ಲೂ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸಿದ್ದ ಸೂಚನೆಗಳು ಲೋಹಿಯಾರ ಮಾರೋಲೆಗಳಲ್ಲಿವೆ. ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವುದೆಂದರೆ ಅಲ್ಲಿ ಎಲ್ಲ ಭಾವಗಳೂ ಪರಸ್ಪರ ಮುಕ್ತವಾಗಿ ಹರಿದು ತಲುಪುವಂತಿರಬೇಕೇನೋ! ಎರಡು ಸೆಲ್ಫ್ಗಳ ಈ ಅಪೂರ್ವ ಭೇಟಿಯ ವಿವರಗಳನ್ನು ಅರಿಯಬಯಸುವವರ ದುರದೃಷ್ಟವೆಂದರೆ, ರಮಾ ಲೋಹಿಯಾಗೆ ಬರೆದ ಪತ್ರಗಳು ಹೈದರಾಬಾದಿನಲ್ಲಿ ಅಚ್ಚಿಗೆ ಸಿದ್ಧವಾಗುವ ಕಾಲದಲ್ಲಿ ಕಳೆದುಹೋದವು.
ಕಲೆ: ಮೋನಪ್ಪ
ಕಾಲದ ಒತ್ತಾಯದಿಂದಾಗಿ ಬಹುತೇಕ ಕಾಲ ಸಾರ್ವಜನಿಕ ವ್ಯಕ್ತಿಯಾಗಬೇಕಾಗಿ ಬಂದಿದ್ದ ಅಂಬೇಡ್ಕರ್ ಅವರು ಸವಿತಾಗೆ ಬರೆದ ಪತ್ರಗಳಲ್ಲಿ ಹೀಗೆ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳನ್ನು ಈಚೆಗೆ ನೋಡಿದೆ. ಆ ಬಗ್ಗೆ ಮುಂದೊಮ್ಮೆ ಚರ್ಚಿಸೋಣ. ಹೆಣ್ಣು-ಗಂಡಿನ ನಡುವೆ, ಗಂಡು-ಗಂಡಿನ ನಡುವೆ, ಹೆಣ್ಣು-ಹೆಣ್ಣಿನ ನಡುವೆ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳು ನಮ್ಮೊಳಗನ್ನು ಅಥವಾ ಸೆಲ್ಫನ್ನು ಸದಾ ಜೀವಂತವಾಗಿಟ್ಟಿರುತ್ತವೆಂದು ಕಾಣುತ್ತದೆ. ಹಟಾತ್ತನೆ ಎದ್ದು ನಿಲ್ಲುವ ಅಗೋಚರ ಗೋಡೆಗಳ ಈ ಕಾಲದಲ್ಲೂ ಇಂಥದೊಂದು ನಂಬಿಕೆ ಈ ಕಾಲದಲ್ಲೂ ಸಿನಿಕರಾಗದಂತೆ ನಮ್ಮನ್ನು ಪೊರೆಯಬಲ್ಲದೆ?