ಕರ್ನಾಟಕ ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಕೇಂದ್ರದ ಪ್ರೊಫೆಸರ್ ಹನುಮಗೌಡರು ಇದ್ದಕ್ಕಿದ್ದಂತೆ ಕನಕದಾಸರ ಎರಡು ಕೀರ್ತನೆಗಳನ್ನು ಕೊಟ್ಟು, ‘ಆಕಾಶವಾಣಿಯಲ್ಲಿ ಈ ಕೀರ್ತನೆಗಳನ್ನು ಕುರಿತು ಮಾತಾಡಬೇಕು’ ಎಂದರು. ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಭಾಷಾಂತರ ಕುರಿತ ವಿಚಾರ ಸಂಕಿರಣಕ್ಕೆ ಧಾರವಾಡಕ್ಕೆ ಹೊರಟಿದ್ದ ದಿನ ಎದುರಾದ ಆಕಸ್ಮಿಕ ಕೋರಿಕೆಯಿದು.
ಯಾರಾದರೂ ಕೇಳಿದ ತಕ್ಷಣ ಇಂಥ ಅಸೈನ್ಮೆಂಟುಗಳನ್ನು ಒಪ್ಪದ ನನಗೆ, ಕೆಲವು ಗಂಟೆಗಳ ನಂತರ, ಈ ಕೀರ್ತನೆಗಳನ್ನು ಸುಮ್ಮನೆ, ಮುಕ್ತವಾಗಿ ಓದಿದರೆ ಹೇಗೆ ಎನ್ನಿಸತೊಡಗಿತು. 'ಕೀರ್ತನೆ’ ಎಂದ ತಕ್ಷಣ ನಮ್ಮ ಓದಿನ ದಿಕ್ಕು ಹಾಗೂ ಅರ್ಥ ನಿರ್ದಿಷ್ಟಗೊಳ್ಳುವುದರಿಂದ ಇದನ್ನೊಂದು ಕವಿತೆಯಾಗಿ ಓದಿದರೆ ಏನನ್ನಿಸುತ್ತದೆ ನೋಡೋಣ ಎಂದುಕೊಂಡೆ. ಕನಕದಾಸರ ಒಂದು ಕವಿತೆಯನ್ನು ಆರಿಸಿಕೊಂಡು ಪ್ರಯಾಣದ ಹಾದಿಯಲ್ಲಿ ಮತ್ತೆ ಮತ್ತೆ ಓದಿದೆ.
ಈ ಕವಿತೆ ಓದುತ್ತಿರುವಾಗ ಕೃತಿಕಾರನ ಹಿನ್ನೆಲೆ ಬಿಟ್ಟು ಕೃತಿಯನ್ನು ಓದುವ ಐ.ಎ. ರಿಚರ್ಡ್ಸ್ ವಿಮರ್ಶಾ ಮಾರ್ಗ ನೆರವಿಗೆ ಬಂತು. ನೂರು ವರ್ಷಗಳ ಕೆಳಗೆ ಇಂಗ್ಲಿಷ್ ಪ್ರೊಫೆಸರ್ ರಿಚರ್ಡ್ಸ್ ಕ್ಲಾಸ್ ರೂಮಿನಲ್ಲಿ ಮಾಡಿದ ಪ್ರಯೋಗ ಸಾಹಿತ್ಯ ವಿಮರ್ಶೆ ಬಲ್ಲವರಿಗೆಲ್ಲ ಗೊತ್ತಿರುತ್ತದೆ: ಕವಿತೆಗಳ ಟೈಟಲ್; ಕವಿ, ಕವಯಿತ್ರಿಯರ ಹೆಸರು; ಕವಿತೆ ಬರೆದ ಕಾಲ… ಇವನ್ನೆಲ್ಲ ತೆಗೆದು ಹಾಕಿದ ರಿಚರ್ಡ್ಸ್, ಕೇವಲ ಅಚ್ಚಾದ ಪುಟಗಳನ್ನಷ್ಟೇ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೊಟ್ಟು, ಅವರು ಅವನ್ನು ಹೇಗೆ ಗ್ರಹಿಸುತ್ತಾರೆ ಎಂದು ನೋಡಿದ. ಅವರ ಪ್ರತಿಕ್ರಿಯೆಗಳನ್ನೆಲ್ಲ ಅಧ್ಯಯನ ಮಾಡುತ್ತಾ, ಕವಿತೆ ಓದುವವರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನೆಲ್ಲ ಪಟ್ಟಿ ಮಾಡಿ ’ಪ್ರಾಕ್ಟಿಕಲ್ ಕ್ರಿಟಿಸಿಸಂ’ ಎಂಬ ಪುಸ್ತಕ ಬರೆದ. ಈ ಮಾರ್ಗದ ಮಿತಿಗಳೇನೇ ಇರಲಿ, ಇವತ್ತಿಗೂ ಕ್ಲಾಸ್ ರೂಮಿನಲ್ಲಿ ಬಿಡಿ ಬಿಡಿ ಕವಿತೆಗಳನ್ನು, ಕತೆಗಳನ್ನು ಟೀಚ್ ಮಾಡುವವರಿಗೆ ಉಪಯುಕ್ತ ಮಾರ್ಗ ಇದು.
ಈ ರಿಚರ್ಡ್ಸ್ ಮಾರ್ಗ ಉಪಯುಕ್ತ ಎನ್ನಲು ಕಾರಣವಿದೆ: ಯಾವುದೇ ಕೃತಿಯನ್ನು ಕೃತಿಕಾರ ಅಥವಾ ಕೃತಿಕಾರ್ತಿಯನ್ನೇ ನೆನಪಿನಲ್ಲಿಟ್ಟುಕೊಂಡು ಓದಿದರೆ ಕೃತಿಯ ಅರ್ಥದ ಬಗ್ಗೆ ನಮ್ಮ ಪೂರ್ವ ತೀರ್ಮಾನ ಸಿದ್ಧವಾಗತೊಡಗುತ್ತದೆ. ಹಾಗೆಯೇ ಕೃತಿಯೊಂದು ಹುಟ್ಟಿದ ಸಾಹಿತ್ಯ ಚಳುವಳಿಯ ಹಿನ್ನೆಲೆಯಲ್ಲಿ ಅದನ್ನು ನವೋದಯ ಕೃತಿ, ಬಂಡಾಯ ಕೃತಿ ಎಂದು ಓದಿದಾಗಲೂ ಹೀಗೇ ಆಗುತ್ತದೆ. ಅಥವಾ ರೊಮ್ಯಾಟಿಕ್ ಕವಿ ಕೀಟ್ಸ್ ಬರೆದ ಕವಿತೆ; ಹನುಮಂತಯ್ಯನವರ ದಲಿತ ಕವಿತೆ; ಅಥವಾ ರೂಪಾ ಹಾಸನ ಅವರ ಸ್ತ್ರೀವಾದಿ ಕವಿತೆ... ಹೀಗೆ ಶುರು ಮಾಡಿದಾಗಲೂ ಓದುವ ಮುನ್ನವೇ ಕವಿತೆಯ ಒಂದು ಅರ್ಥ ಸಿದ್ಧವಾಗಿರುತ್ತದೆ.
ಅದಕ್ಕೇ ಕನಕದಾಸರ ಈ ಕವಿತೆಯನ್ನು ಅವರ 'ದಾಸ’ ಹಿನ್ನೆಲೆ ಬಿಟ್ಟು, ಭಕ್ತಿ ಕಾವ್ಯದ ಭಜನಾ ಪ್ರಭಾವಳಿ ಬಿಟ್ಟು, ಓದಿ ನೋಡಿದರೆ ಹೇಗಿರುತ್ತದೆ ಎಂಬ ಕುತೂಹಲ ಹುಟ್ಟಿತು. ಅವತ್ತು ಈ ಓದಿನ ಪ್ರಯೋಗಕ್ಕೆ ಸಿಕ್ಕ ಕನಕದಾಸರ 'ಸ್ನಾನವ ಮಾಡಿರೋ ಜ್ಞಾನತೀರ್ಥದಲ್ಲಿ’ ಎಂಬ ಕವಿತೆ:
ಸ್ನಾನವ ಮಾಡಿರೊ ಜ್ಞಾನತೀರ್ಥದಲ್ಲಿ
ಮಾನವರೆಲ್ಲ ಮೌನದೊಳಗೆ ನಿಂದು
ತನ್ನ ತಾನರಿತುಕೊಂಬುದೇ ಒಂದು ಸ್ನಾನ
ಅನ್ಯಾಯ ಮಾಡದಿರುವುದೊಂದು ಸ್ನಾನ
ಅನ್ನದಾನವ ಮಾಡುವುದೊಂದು ಸ್ನಾನ-ಹರಿ
ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ
ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
ಪರನಿಂದೆಯ ಮಾಡದಿದ್ದರೊಂದು ಸ್ನಾನ
ಪರೋಪಕಾರ ಮಾಡುವುದೊಂದು ಸ್ನಾನ
ಪರತತ್ತ್ವವರಿತುಕೊಂಬುದೆ ಒಂದು ಸ್ನಾನ
ಸಾಧುಸಜ್ಜನರ ಸಂಗವೆ ಒಂದು ಸ್ನಾನ
ಭೇದಾಭೇದವಳಿದಡೆ ಒಂದು ಸ್ನಾನ
ಆದಿಮೂರುತಿ ಕಾಗಿನೆಲೆಯಾದಿಕೇಶವನ
ಪಾದಧ್ಯಾನವೆ ನಿತ್ಯ ಗಂಗಾಸ್ನಾನ
ಕನಕದಾಸರು ಈ ಗೀತೆಯನ್ನು ಹಾಡಿದಾಗ ತಲೆಬರಹ ಕೊಟ್ಟರೋ, ಅಥವಾ ನಂತರ ಸಂಗ್ರಹಕಾರರಿಂದ ತಲೆಬರಹ ಬಂತೋ, ಅಥವಾ ಕೀರ್ತನೆಗಳಲ್ಲಿ ಮೊದಲ ಸಾಲನ್ನೇ ಸಂಪಾದಕರು ತಲೆಬರಹವಾಗಿ ಕೊಟ್ಟರೋ…ಹೇಳುವುದು ಕಷ್ಟ.
ಸ್ನಾನ ಮಾಡುವ ಕ್ರಿಯೆ ಕವಿತೆಯಲ್ಲಿ ರೂಪಕವಾಗಿದೆ ಎಂಬುದು ಯಾರಿಗಾದರೂ ಮೇಲುನೋಟಕ್ಕೇ ಸ್ಪಷ್ಟವಾಗುತ್ತದೆ. ಪದವೊಂದು ಮೇಲುನೋಟಕ್ಕೆ ಏನಾಗಿ ತೋರುತ್ತಿದೆಯೋ ಅದಕ್ಕಿಂತ ಬೇರೆಯದೇ ಆದ ಅರ್ಥಗಳನ್ನು ಸೂಚಿಸುವುದು ರೂಪಕ- ಇದು ರೂಪಕದ ಒಂದು ಸರಳ ಅರ್ಥ ತಾನೆ? ಈ ದೃಷ್ಟಿಯಿಂದ ಸ್ನಾನ ಮಾಡುವ ಕ್ರಿಯೆ ಈ ಕವಿತೆಯಲ್ಲಿ ಮೇಲುನೋಟದ ಅರ್ಥಕ್ಕಿಂತ ಭಿನ್ನವಾದ ಹಲವು ಅರ್ಥಗಳನ್ನು ಹೊರಡಿಸಬಲ್ಲ ರೂಪಕ. 'ಸ್ನಾನ’ಕ್ಕೆ ಇರುವ ಮೀಯುವುದು, ಮುಳುಗೇಳುವುದು, ಶುಭ್ರವಾಗುವುದು… ಮುಂತಾದ ಅರ್ಥಗಳು ಬಳಕೆಯ ಸಂದರ್ಭಗಳಲ್ಲಿ ಹಲವು ಅರ್ಥಗಳನ್ನು ಕೊಡತೊಡಗುತ್ತವೆ. ಉದಾಹರಣೆಗೆ, 'ಅವಳ ದೇಹದಲ್ಲಿ ಮಿಂದೆದ್ದ’ ಎಂಬ ರಮ್ಯ ರೂಪಕದ ಅರ್ಥವೇ ಬೇರೆ; ‘ಅವನು ಜ್ಞಾನಸಾಗರದಲ್ಲಿ ಮಿಂದೆದ್ದ’ ಎಂಬ ರೂಪಕದ ಅರ್ಥವೇ ಬೇರೆ. ಅಕಸ್ಮಾತ್ ಈ ಎರಡೂ ಸಾಲುಗಳು ಒಟ್ಟಿಗೇ ಬಂದಾಗ ಇವೆರಡರ ಅರ್ಥಗಳು ಬೆರೆಯುವ ಗಳಿಗೆಯೂ ಒಂದಿದೆ: ಆಗ ಆತ ಅವಳ ದೇಹದ ಬಗ್ಗೆ ಜ್ಞಾನ ಪಡೆದ; ಆ ದೇಹದ ಜ್ಞಾನಸಾಗರದ ಅರಿವು ಪಡೆದ ಎಂಬ ಅರ್ಥ ವಿಸ್ತರಿಸಿಕೊಳ್ಳಲೂಬಹುದು!
ಈ ಥರದ ಮುಕ್ತ ಓದುಗಳು ಒತ್ತಟ್ಟಿಗಿರಲಿ, ಸಹಜ ಕವಿ ಕನಕದಾಸರ ಕವಿತೆ ಶುರುವಾಗುವುದು ಸ್ನಾನ, ಜ್ಞಾನಗಳ ಪ್ರಾಸರೂಪಿ ಪದಗಳ ಮೂಲಕ. ಯಾವುದನ್ನು ಮಾಡಿದರೆ ಶುಭ್ರತೆ; ಯಾವುದು ಕೊಳಕು ಎಂಬ ತದ್ವಿರುದ್ಧ ಚಿತ್ರಗಳನ್ನೂ ಕವಿತೆ ಕೊಡುತ್ತದೆ. ಮೇಲುನೋಟಕ್ಕೆ ಇದೊಂದು ನೀತಿಕವಿತೆಯಂತೆ ಇದ್ದರೂ, ನುರಿತ ಕವಿಯ ನಿರಾಯಾಸವಾದ ಅನುಪ್ರಾಸಗಳ ನಿರ್ವಹಣೆ ಆನಂದ ಮೂಡಿಸತೊಡಗುತ್ತದೆ. ಅನ್ನ-ಅನ್ಯಾಯ, ಅನ್ನದಾನ-ಅನ್ಯಧ್ಯಾನಗಳ ಹಾಗೆ ’ಪರ’ದ ಸುತ್ತಣ ಆಟವೂ ಆಕರ್ಷಕವಾಗಿದೆ.
ಕನಕದಾಸರು ಇಲ್ಲಿ ಅನ್ನ-ಅನ್ಯಾಯಗಳನ್ನು ಒಟ್ಟಿಗೇ ತಂದಿರುವ ರೀತಿ ಮುಂದೆ ಗೋಪಾಲಕೃಷ್ಣ ಅಡಿಗರ ’ಕಟ್ಟುವೆವು ನಾವು’ ಪದ್ಯದಲ್ಲಿ ’ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ’ ಎಂದು ಅಂತರ್ ಪಠ್ಯೀಯವಾಗುವುದು ಕುತೂಹಲಕರ. ಈ ಥರದ ಅಂತರ್ ಪಠ್ಯೀಯತೆ ಯಾವುದೇ ಭಾಷೆಯ ಕಾವ್ಯರಚನೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ… ರೂಢಿಯ ಓದಿನಂತೆ ಕನಕರ ಕವಿತೆಯ ಪ್ರತಿಮೆಗಳನ್ನೆಲ್ಲ ಕೊನೆಯ ಸಾಲಿನ ಕಾಗಿನೆಲೆಯಾದಿಕೇಶವನ ಪಾದದಲ್ಲಿ ಲೀನಗೊಳಿಸದೆ ಓದುವ ಆಟ ನನ್ನಲ್ಲಿ ಕ್ರಿಯೇಟಿವ್ ಎನರ್ಜಿ ಹುಟ್ಟಿಸತೊಡಗಿತು.
‘ಟ್ರಸ್ಟ್ ದ ಟೇಲ್, ನಾಟ್ ದ ಟೆಲ್ಲರ್’ (ಕತೆಯನ್ನು ನಂಬು; ಕತೆ ಹೇಳುವವರನ್ನಲ್ಲ) ಎಂಬ ಡಿ.ಎಚ್. ಲಾರೆನ್ಸ್ನ ಮಾತನ್ನು ಮತ್ತೆ ಮತ್ತೆ ಈ ಅಂಕಣಗಳಲ್ಲಿ ಉಲ್ಲೇಖಿಸಿರುವ ನಾನು ಕವಿಯನ್ನು ಬಿಟ್ಟು, ಕೃತಿಯ ಅಚ್ಚಾದ ಪುಟಗಳನ್ನೇ ಓದುತ್ತೇನೆ ಎಂದು ಕನಕದಾಸರ ಕವಿತೆಯನ್ನು ಓದುವಾಗಲೂ ಹೊರಟಿದ್ದೆನಷ್ಟೆ? ಆದರೆ ನಾನು ಅವತ್ತು ಅಚ್ಚಾದ ಪುಟಗಳಲ್ಲಿ ಯಾವುದನ್ನು ನೋಡದೆ ಬಿಟ್ಟಿದ್ದೆ ಎಂಬುದು ಒಂದು ತಿಂಗಳ ನಂತರ ಈ ಕವಿತೆಯನ್ನು ಮತ್ತೆ ಓದಿದಾಗ ಹೊಳೆದು ಪೆಚ್ಚಾದೆ.
ಈ ಕಣ್ತಪ್ಪು, ಬುದ್ಧಿತಪ್ಪು ಕಂಡಿದ್ದು ಕನಕರ ಈ ಕವಿತೆಯನ್ನು ಕಳೆದ ವಾರ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ರಿಫ್ರೆಶರ್ ಕೋರ್ಸಿನಲ್ಲಿ ಪ್ರಸ್ತಾಪಿಸಲು ಮತ್ತೆ ಗಮನಿಸುತ್ತಿದ್ದಾಗ. ಅರೆ! ಕವಿತೆಯ ಶುರುವಿನಲ್ಲೇ ‘ರಾಗ: ಧನ್ಯಾಸಿ’, ‘ತಾಳ: ಆದಿತಾಳ’ ಎಂಬ ವಿವರಗಳಿವೆಯಲ್ಲ! ಅದನ್ನು ಕಳೆದ ತಿಂಗಳು ನಾನು ಗಮನಿಸಿದ್ದೆನೋ, ಗಮನಿಸಿದರೂ ಅಥವಾ ಗಮನಿಸದೆಯೇ ಮುಂದೆ ಸಾಗಿದೆನೋ? ಎಷ್ಟೋ ಸಲ, ಎದುರಿಗಿರುವ, ತೀರಾ ಎದ್ದು ಕಾಣುವ ವಸ್ತುವನ್ನೇ ಕಾಣದೆ ನಾವು ಮುಂದೆ ಸಾಗುವ ಹಾಗೆ ಅವತ್ತೂ ಆಗಿತ್ತು!
ನಾನೊಬ್ಬನೇ ಈ ತಪ್ಪು ಮಾಡಿರಬಹುದೇ ಎಂಬ ಅಳುಕಿನಿಂದ ಅಲ್ಲಿದ್ದ ಮೇಡಂಗಳನ್ನು, ಮೇಷ್ಟರುಗಳನ್ನು ಕೇಳಿದೆ:
‘ನೀವು ನಿಮ್ಮ ಪಠ್ಯಪುಸ್ತಕಗಳಲ್ಲಿ ಪುರಂದರದಾಸ, ಕನಕದಾಸರ ಕವಿತೆಗಳನ್ನು ಟೀಚ್ ಮಾಡಿದ್ದೀರಾ?’
‘ಹೂಂ!’ …ಸಣ್ಣಗೆ ಕೇಳಿ ಬಂತು... ‘ಮೊಳೆಯದಲೆಗಳ ಮೂಕ ಮರ್ಮರ!’
‘ಸರಿ. ಆ ಕವಿತೆಗಳ ಆರಂಭದಲ್ಲಿ ಕೊಟ್ಟಿರುವ ರಾಗ, ತಾಳಗಳ ವಿವರಗಳನ್ನೇನಾದರೂ ಗಮನಿಸಿದ್ದೀರಾ?’
ಪಿನ್ ಡ್ರಾಪ್ ಸೈಲೆನ್ಸ್! ಅವನ್ನು ಯಾರೂ ಗಮನಿಸಿದಂತಿರಲಿಲ್ಲ! ಅವರಲ್ಲಿ ನನ್ನ ಪರಿಚಿತ ಗೆಳೆಯರೂ, ಹಿರಿಯ ವಿದ್ಯಾರ್ಥಿನಿಯರೂ ಇದ್ದರು. ಅವರು ಕೂಡ ನನ್ನಂತೆಯೇ ಎದುರಿಗಿರುವುದನ್ನು ಗಮನಿಸದ ಕಣ್ ಮಂಪರಿಗೆ ಗುರಿಯಾಗಿದ್ದರು!
ಕನಕದಾಸರಾಗಲಿ, ಪುರಂದರದಾಸರಾಗಲಿ ಕರ್ನಾಟಿಕ್ ಸಂಗೀತದ ಉತ್ತಮ ಜ್ಞಾನ ಉಳ್ಳವರಾಗಿದ್ದುದನ್ನು ಅವರ ಕೃತಿಗಳೇ ಸೂಚಿಸುತ್ತವೆ. ಅವರ ಭಾವಗೀತೆಗಳ ಹರಿವಿಗೂ, ಸ್ವತಃ ಅವರೋ ಅಥವಾ ಕೃತಿಗಳ ಸಂಗ್ರಹಕಾರರೋ ಸೂಚಿಸಿರುವ ಅನೇಕ ಮೂಲ ರಾಗಗಳ ಓಟಕ್ಕೂ, ಅವುಗಳ ಸಾಂಗೀತಿಕ ಲಯಕ್ಕೂ ಸಂಬಂಧವಿದ್ದಂತಿದೆ. ರಾಗ, ಸಂಗೀತಗಳ ಹಂಗಿಲ್ಲದೆಯೂ ಕನಕರ ಕವಿತೆಗಳನ್ನು ಓದಬಹುದು. ಆ ಮಾತು ಬೇರೆ.
ಆದರೂ ನನ್ನ ರಿಸರ್ಚ್ ಮನಸ್ಸು ಕರ್ನಾಟಿಕ್ ಸಂಗೀತದ ಧನ್ಯಾಸಿ ರಾಗದ ಓಟ ಈ ಕವಿತೆಗೆ ಇನ್ನೂ ಯಾವ್ಯಾವ ಆಯಾಮ ಕೊಡಬಹುದೆಂಬುದನ್ನು ನೋಡಲೆತ್ನಿಸಿತು. ಮುಂದೊಮ್ಮೆ ಈ ಅಂಕಣದಲ್ಲಿ ಧನ್ಯಾಸಿ ರಾಗದಲ್ಲಿ ಕನಕರ ಕವಿತೆ ಯಾವ ಯಾವ ಅರ್ಥ ಹೊರಡಿಸಬಹುದೆಂಬುದನ್ನು ಹುಡುಕಬಹುದು. ಈ ಅಂಕಣದ ಓದುಗ, ಓದುಗಿಯರಲ್ಲಿ ಸಂಗೀತ ಬಲ್ಲವರು ಈ ಕೆಲಸ ಕೈಗೆತ್ತಿಕೊಂಡು ಈ ಪಠ್ಯವನ್ನು ಬೆಳೆಸಿ ನೋಡಿದರೆ, ಆ ಪ್ರಯೋಗ ನಿಜಕ್ಕೂ ರೋಮಾಂಚಕಾರಿಯಾಗಬಲ್ಲದು; ಇಂಥ ಪ್ರಯೋಗಗಳು ಓದಿನ ಆನಂದಕ್ಕೆ, ವಿಶ್ಲೇಷಣೆಗೆ ಒಮ್ಮೊಮ್ಮೆ ಕವಿತೆಯ ರಚನೆಗೆ, ಟೀಚಿಂಗಿಗೆ… ಲಾಭಕರವಾಗಲೂ ಬಲ್ಲವು.
ಇದೀಗ ಕತ್ತೆತ್ತಿದರೆ ಮುತ್ತುವ ಭೀಕರ ಯುದ್ಧದ ದುರಹಂಕಾರ, ನಿರ್ದಯ ಹಿಂಸೆಗಳ ಕಟು ವಾಸ್ತವದ ನಡುವೆ ನಮ್ಮಂಥವರಿಗೆ ಓದು, ಬರಹಗಳೇ ಕೊನೆಯ ಆಶ್ರಯವೇನೋ…