Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
07 Dec 2025 ಲೋಕಾನುಭವ ಮತ್ತು ರಾಜಕಾರಣ

ಈ ಘಟನೆ ಕೆಲವು ವರ್ಷಗಳ ಕೆಳಗೆ ತೀರಿಕೊಂಡ ತಮಿಳು ಲೇಖಕ, ಆಪ್ತಗೆಳೆಯ ಪ್ರೊಫೆಸರ್ ನಂಜುಂಡನ್ ಹೇಳಿದ್ದು: 

ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಒಮ್ಮೆ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದರು. ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ಅಡ್ಡಾಡುತ್ತಿದ್ದಾಗ ಹುಡುಗನೊಬ್ಬ ದನ ಮೇಯಿಸುವುದನ್ನು ನೋಡಿದರು; ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಹುಡುಗ ದನ ಮೇಯಿಸುತ್ತಿದಾನಲ್ಲ ಎನ್ನಿಸಿ, ಆ ಹುಡುಗನನ್ನು ಕರೆದು, ‘ಯಾಕೋ ಸ್ಕೂಲಿಗೆ ಹೋಗ್ತಾ ಇಲ್ಲ?’ ಅಂದರು. 

ಪ್ರಶ್ನೆ ಕೇಳುತ್ತಿದ್ದವರು ರಾಜ್ಯದ ಮುಖ್ಯಮಂತ್ರಿ ಎಂಬುದು ಹುಡುಗನಿಗೆ ಗೊತ್ತಿರಲಿಲ್ಲ. 

‘ಸ್ಕೂಲ್‌ಗೋದ್ರೆ ನೀನು ಊಟ ಕೊಡ್ತೀಯ?’ ಅಂದ.

‘ಊಟ ಕೊಟ್ರೆ ಸ್ಕೂಲಿಗೆ ಹೋಗ್ತೀಯ?’ ಕಾಮರಾಜ್ ಕೇಳಿದರು.
‘ಹೂಂ!’ ಅಂದ ಹುಡುಗ.

ಹುಡುಗ ಕೊಟ್ಟ ಉತ್ತರದ ಬಗ್ಗೆ ಕಾಳಜಿಯಿಂದ ಯೋಚಿಸಿದ ಕಾಮರಾಜ್‌ಗೆ ಹುಡುಗನ ಕಷ್ಟ  ಗೊತ್ತಿತ್ತು. ಹುಡುಗನ ಸವಾಲಿಗೆ ಉತ್ತರವೂ ಹೊಳೆಯಿತು. ತಮಿಳುನಾಡಿನ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಕೊಡುವ ಯೋಜನೆ ಹುಟ್ಟಿದ್ದು ಆಗ.

ಈ ಯೋಜನೆಗೆ ಕಾಮರಾಜ್ ಹುಡುಗನಾಗಿದ್ದಾಗ ಕಂಡುಂಡ ಅನುಭವವೂ ಕಾರಣವಾಗಿತ್ತು. ಪ್ರೈಮರಿ ಸ್ಕೂಲಿನಲ್ಲಿ ಕಾಮರಾಜ್‌ಗೆ ಮೇಷ್ಟ್ರಾಗಿದ್ದ ವೇಲಾಯುಧನ್‌ಗೆ ಕೋಲು ಬಿಟ್ಟರೆ ಬೇರೆ ಮಾರ್ಗ ಗೊತ್ತಿರಲಿಲ್ಲ. ಈ ಮೇಷ್ಟ್ರಿಂದ ಗಣಿತ, ವರ್ಣಮಾಲೆ ಕಲಿಯುವ ಹೊತ್ತಿಗೆ ಕಾಮರಾಜ್ ಸುಸ್ತಾಗಿ ಹೋದ. ಮೇಷ್ಟರ ಒರಟುತನದಿಂದ ಬೇಸತ್ತಿದ್ದ ತಂದೆ ತಾಯಿಗಳು ಮಗನನ್ನು ಬೇರೆ ಶಾಲೆಗೆ ಸೇರಿಸಿದರು. 

ಮುಂದೆ ಕಾಮರಾಜ್ ವಿರುಧುಪಟ್ಟಿಯ ಕ್ಷತ್ರಿಯ ವಿದ್ಯಾಲಯ ಹೈಸ್ಕೂಲ್ ಸೇರಿದ. ನಾಡಾರ್ ಸಮುದಾಯ ತಮ್ಮ ಸಮುದಾಯದ ಹುಡುಗರಿಗೆ ಶಿಕ್ಷಣ ದೊರಕಿಸಲು ಆರಂಭಿಸಿದ ಶಾಲೆ ಇದು. ಈ ಶಾಲೆಗೆ ಅಲ್ಲಿನ ಸಮುದಾಯದ ಪ್ರತಿಯೊಂದು ಮನೆಯೂ ಒಂದೊಂದು ಹಿಡಿ ಅಕ್ಕಿ ಕೊಡುತ್ತಿತ್ತು. ಅದನ್ನು ‘ಪಿಡಿ ಅರಸಿ ಶಾಲೆ’ ಅಂದರೆ ‘ಹಿಡಿ ಅಕ್ಕಿ ಶಾಲೆ’ ಎನ್ನುತ್ತಿದ್ದರು. ನಂತರ ಆ ಸಮುದಾಯದ ಜನ ಈ ಶಾಲೆಗೆ ಮಾಡುತ್ತಿದ್ದ ಸಹಾಯವನ್ನು ಇನ್ನಷ್ಟು ಹೆಚ್ಚಿಸಿದರು. 

ಹನ್ನೆರಡನೆಯ ವಯಸ್ಸಿಗೆ ಶಾಲೆ ಬಿಟ್ಟ ಕಾಮರಾಜ್ ಮುಂದೆ ಸ್ವಾತಂತ್ರ‍್ಯ ಚಳುವಳಿ ಸೇರಿದರು. ಗಾಂಧೀಜಿಯ ಒಂದು ಭಾಷಣ ಅವರ ನೋಟವನ್ನೇ ಬದಲಿಸಿತು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರು ದೇಶದ್ರೋಹದ ಆಪಾದನೆ ಮೇಲೂ ಕಾಮರಾಜರನ್ನು ಜೈಲಿಗೆ ಕಳಿಸಿದರು. ಸ್ವತಂತ್ರ ಭಾರತದಲ್ಲಿ ಕಾಮರಾಜ್ ೧೯೫೪-೧೯೬೩ರ ನಡುವೆ ಎರಡು ಸಲ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅವರು ಉಚಿತ ಪ್ರಾಥಮಿಕ ಶಿಕ್ಷಣವನ್ನು ರಾಜ್ಯದ ಎಲ್ಲೆಡೆ ಜಾರಿಗೊಳಿಸಲು ಕೂಡ ಬಾಲ್ಯದ ಅನುಭವ ಕಾರಣವಾಗಿತ್ತು. 

ಕಾಮರಾಜ್ (೧೯೦೩-೧೯೭೫) ಆರಂಭಿಸಿದ ಮಧ್ಯಾಹ್ನದ ಊಟದ ಯೋಜನೆ ‘ಹಿಡಿ ಅಕ್ಕಿ ಶಾಲೆ’ಯಿಂದ ಬಂದಂತೆ, ದಾರಿಯಲ್ಲಿ ಎದುರಾದ ದನ ಮೇಯಿಸುವ ಹುಡುಗನ ಪ್ರಶ್ನೆಯಿಂದಲೂ ಹುಟ್ಟಿತ್ತು. ಕಾಮರಾಜರ ಉಳಿದ ಸಾಧನೆಗಳ ಜೊತೆಗೇ ಅವರು ಜನರ ದನಿಗೆ ಕಿವಿ ಕೊಟ್ಟ ರೀತಿ ಕೂಡ ಮುಖ್ಯವಾದುದು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾಲ್ಯದಲ್ಲಿ ತಾವು ಕಂಡುಂಡ ಹಸಿವೇ ಉಚಿತ ಅಕ್ಕಿ ಕೊಡುವ ಯೋಜನೆಯ ಹಿಂದಿರುವ ಪ್ರೇರಣೆ ಎಂದು ಹಲವು ಸಲ ಹೇಳಿರುವುದು ಎಲ್ಲರಿಗೂ ಗೊತ್ತಿದೆ. 

ಕಾಮರಾಜ್‌ಗಿಂತ ಭಿನ್ನವಾಗಿ, ಭಾರತದುದ್ದಕ್ಕೂ ಅಡ್ಡಾಡಿ ಜನರ ಸಂಕಷ್ಟಗಳನ್ನು ಕಂಡಿದ್ದ ಲೋಹಿಯಾ ಒಮ್ಮೆ ತಾವು ಕಂಡ ಸತ್ಯವನ್ನು ಹೇಳಿದರು: ‘ನಮ್ಮ ದೇಶದ ಜಾಡಮಾಲಿಯೊಬ್ಬ ದಿನಕ್ಕೆ ಎರಡು ರೂಪಾಯಿ ಗಳಿಸುತ್ತಾನೆ; ಹೊಲದಲ್ಲಿ ಕೂಲಿ ಮಾಡುವವನಿಗೆ ಹತ್ತು, ಹನ್ನೆರಡಾಣೆ ಆದಾಯ. ಆದರೆ ನಮ್ಮ ಪ್ರಧಾನಿಯ ಒಂದು ದಿನದ ಖರ್ಚು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ.' 
‘ಸಾಮಾನ್ಯರ ದಿನನಿತ್ಯದ ವರಮಾನ ಮೂರಾಣೆ’ ಎಂಬ ಅರವತ್ತರ ದಶಕದ ಮುಖ್ಯ ಚರ್ಚೆ ರೂಪುಗೊಂಡ ಗಳಿಗೆ ಕುರಿತು ರಬಿರಾಯ್ ಬರೆಯುತ್ತಾರೆ: 

ಒಮ್ಮೆ ಹಳ್ಳಿಯೊಂದರಲ್ಲಿ ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಹುಡುಗನನ್ನು ಲೋಹಿಯಾ ಕೇಳಿದರು: ‘ನಿನ್ನ ಒಂದು ದಿನದ ಆದಾಯ ಎಷ್ಟು?'
‘ಮೂರು, ಮೂರೂವರೆ ಆಣೆ' ಎಂದ ಹುಡುಗ. 

ಈ ಉತ್ತರ ಕೇಳಿದ ನಂತರ ಲೋಹಿಯಾ ಭಾರತದ ಸಾಮಾನ್ಯ ಜನರ ನಿತ್ಯದ ಆದಾಯದ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿದರು. ಜನರ ತಲಾ ಆದಾಯದ ಬಗ್ಗೆ ಸರ್ಕಾರ ಕೊಡುತ್ತಿರುವ ಅಂಕಿ ಅಂಶಗಳು ಬೋಗಸ್ ಎಂಬುದನ್ನು ಬಯಲಿಗೆಳೆಯುತ್ತಾ ಲೋಹಿಯಾ ೧೯೬೨ರ ಲೋಕಸಭಾ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಮತ್ತೆ ಎತ್ತಿದರು. ಪ್ರಧಾನಮಂತ್ರಿಯವರ ದಿನದ ಖರ್ಚನ್ನು ಕುರಿತ ಈ ತಾತ್ವಿಕ ಪ್ರಶ್ನೆ ಕೇವಲ ನೆಹರೂ ಕುರಿತ ಪ್ರಶ್ನೆಯಾಗಿರಲಿಲ್ಲ; ಬದಲಿಗೆ, ಅಧಿಕಾರಸ್ಥರು ಹಾಗೂ ಜನಸಾಮಾನ್ಯರ ವರಮಾನ-ವೆಚ್ಚದ ಅಂತರ ಕುರಿತ ವ್ಯಾಪಕ ಪ್ರಶ್ನೆಯಾಗಿತ್ತು.

ಇವೆರಡೂ ದೇಶದ ಇಬ್ಬರು ದೊಡ್ಡ ರಾಜಕಾರಣಿಗಳು ಎತ್ತಿದ ಪ್ರಶ್ನೆಗಳಾದರೆ, ಕರ್ನಾಟಕದ ವಿಶಿಷ್ಟ ನಾಯಕ ಬಿ. ನಾರಾಯಣರಾವ್ ಅವರ ವಿದ್ಯಾರ್ಥಿದೆಸೆಯ ಕಾಳಜಿಯಿಂದ ಹುಟ್ಟಿದ ಪ್ರಶ್ನೆಯ ಪರಿಣಾಮ ಕೂಡ ಇಷ್ಟೇ ಮುಖ್ಯವಾಗಿದೆ. ಬಸವರಾಜು ಮೇಗಲ್ಕೇರಿ ಸಂಪಾದಿಸಿರುವ ‘ನಮ್ಮ ಅರಸು’ ಪುಸ್ತಕದಲ್ಲಿ ದಾಖಲಾಗಿರುವ ಘಟನೆ ಇದು: ಓದಲು ಹಾಸ್ಟೆಲ್ ಇಲ್ಲದೆ ಕಷ್ಟಪಡುತ್ತಿದ್ದ ಬೀದರ್‍ ಜಿಲ್ಲೆಯ ಬಸಂತಪುರದ ಕೋಲಿ ಸಮುದಾಯದ ಬಡ ಬಿ.ಎ. ವಿದ್ಯಾರ್ಥಿ ಬಿ. ನಾರಾಯಣರಾವ್ ಹುಡುಗರನ್ನು ಕಟ್ಟಿಕೊಂಡು ಬಂದು ೧೯೭೬ರಲ್ಲಿ ವಿಧಾನಸೌಧದ ಎದುರು ಒಂಬತ್ತು ದಿನ ಸತ್ಯಾಗ್ರಹ ಮಾಡಿದರು. ಹುಡುಗರ ಅಹವಾಲು ಕೇಳಿದ ಮುಖ್ಯಮಂತ್ರಿ ಅರಸು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ೨೨೪ ಪ್ರಿ-ಮೆಟ್ರಿಕ್ ಹಾಗೂ ೨೧ ಪೋಸ್ಟ್‌ಮೆಟ್ರಿಕ್ ಹಾಸ್ಟೆಲುಗಳನ್ನು ಮಂಜೂರು ಮಾಡಿದರು. 

ಮುಂದೆ ನಾರಾಯಣರಾವ್ ಮೊದಲ ಬಾರಿಗೆ ೨೦೧೮ರಲ್ಲಿ ಬಸವಕಲ್ಯಾಣದ ಶಾಸಕರಾದರು. ‘ಜವಾರಿ ಜನನಾಯಕರಾಗಿದ್ದ ನಾರಾಯಣರಾವ್ ಕೋವಿಡ್ ಸಮಯದಲ್ಲಿ ಅಸಹಾಯಕ ಹಳ್ಳಿಗರಿಗೆ ಸಹಾಯ ಮಾಡಲು ಊರೂರು ಸುತ್ತಿ ೨೦೨೦ರಲ್ಲಿ ತೀರಿಕೊಂಡರು’ ಎಂದು ಗೆಳೆಯ ದೇವು ಪತ್ತಾರ್ ಹೇಳಿದರು. 

ಇವತ್ತಿಗೂ ಬಡವರಿಗೆ ಕೊಡುವ ಹತ್ತು ಕೆ.ಜಿ. ಅಕ್ಕಿಯನ್ನು ಆಡಿಕೊಳ್ಳುವ ಹೊಟ್ಟೆ ತುಂಬಿದ ಮಂದಿ ನಮ್ಮ ಸುತ್ತ ಇದ್ದಾರೆ. ಮಕ್ಕಳಿಗೆ ಕೊಡುವ ಮಧ್ಯಾಹ್ನದ ಊಟವನ್ನು ಸಿನಿಕತೆಯಿಂದ ಹೀಗಳೆವ ಹೀನರಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಜಾತಿವಿಕಾರದಿಂದ ಕ್ಯಾತೆ ತೆಗೆಯುವವರಲ್ಲಿ ಸಾಧಾರಣ ಹುಂಬರಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎಂ.ಎಸ್. ತಿಮ್ಮಪ್ಪ ಥರದವರೂ ಇದ್ದಾರೆ; ಮಠಾಧೀಶರಿದ್ದಾರೆ. ಇಂಥ ಜನಕ್ಕೆ ಹಿಂದೊಮ್ಮೆ ಮಧ್ಯಾಹ್ನದ ಉಪ್ಪಿಟ್ಟಿನ ಯೋಜನೆ ಕೋಟ್ಯಂತರ ಮಕ್ಕಳು ಶಿಕ್ಷಣ ಪಡೆಯಲು ನೆರವಾಗಿದೆ; ಆ ಮಕ್ಕಳನ್ನು ಕಾಪಾಡಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಬಿಸಿಯೂಟ ಯೋಜನೆಯಿಂದ ದಲಿತ ಹಿಂದುಳಿದ ವರ್ಗಗಳ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ, ವಿದ್ಯಾಭ್ಯಾಸ ದೊಡ್ಡ ಮಟ್ಟದಲ್ಲಿ ಹೆಚ್ಚಿರುವ ಅಂಕಿ, ಅಂಶಗಳು ಗೊತ್ತಿರಲಿಕ್ಕಿಲ್ಲ. 

ಇವತ್ತು ಹೈಸ್ಕೂಲ್‌ವರೆಗಿನ ಶಾಲೆಗಳ ಎಲ್ಲ ಜಾತಿ, ವರ್ಗಗಳ ಮಕ್ಕಳು ಮಧ್ಯಾಹ್ನದ ಊಟದ ಪ್ರಯೋಜನ ಪಡೆಯುತ್ತಿದ್ದಾರೆ. ಮೊದಲು ಒಂದನೆಯ ತರಗತಿಯಿಂದ ಐದನೇ ತರಗತಿಯ ಮಕ್ಕಳವರೆಗೂ ಜಾರಿಗೆ ಬಂದ ಬಿಸಿಯೂಟ ಯೋಜನೆ ಕುರಿತು ಗೆಳೆಯ, ಸಮಾಜವಿಜ್ಞಾನಿ ಎಚ್. ಡಿ. ಪ್ರಶಾಂತ್ ಮಾಡಿದ ’ಶಾಲಾ ಬಿಸಿಯೂಟ ಅಧ್ಯಯನ ಯೋಜನೆ’ ಎಂಬ ಅಧ್ಯಯನ ೨೦೦೪ರಲ್ಲಿ ಪ್ರಕಟವಾಯಿತು; ಈ ಯೋಜನೆಯ ವ್ಯಾಪಕ ಪರಿಣಾಮ ಕುರಿತ ಚರ್ಚೆ ಈ ಪುಸ್ತಕದಲ್ಲಿ ಆರಂಭವಾಯಿತು. ಈ ಯೋಜನೆ ಹೈಸ್ಕೂಲಿನವರೆಗೂ ವಿಸ್ತರಿಸಿದ ಮೇಲೆ ಪ್ರಶಾಂತ್ ಈ ಯೋಜನೆಯನ್ನು ಮತ್ತೆ ಮತ್ತೆ ವಿಶ್ಲೇಷಿಸಿದ್ದಾರೆ. 

ಹುಳಿಯಾರಿನ ಮಾಧ್ಯಮಿಕ ಶಾಲೆಯಲ್ಲಿ ಮಧ್ಯಾಹ್ನ ಕೊಡುತ್ತಿದ್ದ ಉಪ್ಪಿಟ್ಟಿನ ವಾಸನೆ ಇನ್ನೂ ನನ್ನ ಮೂಗಿನಲ್ಲಿದೆ. ಹಳ್ಳಿಯಿಂದ ಬರುತ್ತಿದ್ದ ಮಕ್ಕಳಿಗೆ ಆ ಉಪ್ಪಿಟ್ಟು ಕೂಡ ಆಸರೆಯಾಗಿ ಎಷ್ಟೋ ಜನ ಶಾಲೆ ಬಿಡಲಿಲ್ಲ ಎಂಬುದು ನಂತರ ಗೊತ್ತಾಯಿತು. ಕನ್ನಡ ದಲಿತ ಆತ್ಮಕತೆಗಳಲ್ಲಿ ಶಾಲೆಯ ಉಪ್ಪಿಟ್ಟು ತಮ್ಮ ಓದಿಗೆ ನೆರವಾದ ಪ್ರಸಂಗಗಳಿವೆ. ಅವತ್ತೂ ಆ ಉಪ್ಪಿಟ್ಟಿನ ಬಗ್ಗೆ ಮೂಗು ಮುರಿಯುತ್ತಾ ಬಾಯಿಗೆ ಬಂದದ್ದು ಹೇಳುತ್ತಿದ್ದವರ ಶನಿಸಂತಾನ ಇವತ್ತೂ ಇದೆ. ಮಹಿಳೆಯರಿಗೆ ಟಿಕೆಟ್‌ರಹಿತ ಬಸ್ ಪ್ರಯಾಣದ ಅವಕಾಶ ಕೊಟ್ಟಾಗ ಅದರ ವಿರುದ್ಧ ಮಾತಾಡುವವರೂ ಇವರೇ. ಖ್ಯಾತ ಲೇಖಕಿಯೊಬ್ಬರು ಮೊನ್ನೆ ಇಂಥದೇ ಆಣಿಮುತ್ತನ್ನು ಉದುರಿಸಲು ಹೊರಟು, ನನ್ನ ನಿಲುವು ನೆನಪಾಗಿಯೋ ಏನೋ, ತಮ್ಮ ವಿಷವಾಕ್ಯವನ್ನು ಹಾಗೇ ನುಂಗಿಕೊಂಡರು! ಉಚಿತ ಹಾಸ್ಟೆಲುಗಳಲ್ಲಿ ಎರಡು ಹೊತ್ತು ಊಟ ಮಾಡಿ ಬದುಕಿ ದೊಡ್ಡ ದೊಡ್ಡ ಹುದ್ದೆ ಹಿಡಿದವರ ಸಾವಿರಾರು ಉದಾಹರಣೆಗಳು ಇಂಥ ಸಿನಿಕರಿಗೆ ಗೊತ್ತಿರಲಿಕ್ಕಿಲ್ಲ.  

ಎಂದೋ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಜನರ ಹಸಿವನ್ನು ನೀಗಿಸುವ ಚಿಂತನೆ-ಯೋಜನೆಗಳು ಹೊಳೆಯಬಲ್ಲವು. ಅಮೆರಿಕದ ಕರಿಯರ, ಬಡವರ ಕಷ್ಟ ಕಂಡಿದ್ದ ಅಧ್ಯಕ್ಷ ಬರಾಕ್ ಒಬಾಮ ‘ಒಬಾಮ ಕೇರ್’ ಎಂಬ ಯೋಜನೆ ಸ್ಥಾಪಿಸಿ ಅಮೆರಿಕದ ಲಕ್ಷಾಂತರ ಬಡವರ ಆರೋಗ್ಯವನ್ನು ಪೊರೆದರು. ದುರಹಂಕಾರಿ ಅಧ್ಯಕ್ಷ ಟ್ರಂಪ್ ಇಂಥ ಜನಪರ ಯೋಜನೆಗಳನ್ನು ಕೊಲ್ಲತೊಡಗಿದ. 

ಇದರಿಂದ ಟ್ರಂಪ್ ಎಂಬಾತನಿಗೆ ಬಂದ ಲಾಭವೇನು ಎಂದು ನೀವು ಕೇಳಬಹುದು. ಮೇಲ್ವರ್ಗದ ಜನರ ಅಹಂಕಾರದ ತಣಿವು ಯಾವ ಯಾವ ರೀತಿ ಆಗುತ್ತಿರುತ್ತದೋ ಯಾರು ಬಲ್ಲರು! ಬಡವರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನಗಳ ದಿನಗೂಲಿ ಕೆಲಸ ಕೊಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯೋಜನೆಯನ್ನು ಹಿನ್ನೆಲೆಗೆ ತಳ್ಳಿರುವುದಕ್ಕೂ ಹೊಟ್ಟೆ ತುಂಬಿದವರ ದುರಹಂಕಾರವೇ ಕಾರಣ. ಕೊನೇ ಪಕ್ಷ ಬಡತನದಿಂದ ನೊಂದ ಅಧಿಕಾರಿ, ರಾಜಕಾರಣಿಗಳಿಗಾದರೂ ನೊಂದವರ   ನೋವನ್ನು ಕಡಿಮೆ ಮಾಡಲು ಪ್ರೇರಣೆಯಾಗದಿದ್ದರೆ, ಅವರ ನೋವಿಗೆ ಏನರ್ಥವಿದೆ? 

ಕೊನೆಗೂ ರಾಜಕಾರಣಿಯನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲೀ ಜನ ನೆನಸಿಕೊಳ್ಳುವುದು ಆತನ ಉದಾರ ಗುಣದಿಂದ ಹಾಗೂ ಚಾಚಿದ ಸಹಾಯಹಸ್ತದಿಂದಲೇ ಹೊರತು ಡೌಲಿನ ಪ್ರದರ್ಶನದಿಂದಲ್ಲ. ಕಾಮರಾಜ್, ಅರಸು, ನಾರಾಯಣರಾವ್ ಥರದ ನಾಯಕರು ಇವತ್ತಿಗೂ ತಂಗಾಳಿಯಂತೆ ನೆನಪಾಗುವುದು ಆ ಕಾರಣಕ್ಕೇ. 

ಕೊನೇ ಮಾತು: ಗೆಳೆಯನೊಬ್ಬ ಈ ಸಲದ ಅಂಕಣದಲ್ಲಿ ಡಿಸೆಂಬರ್ ೬ರ ಅಂಬೇಡ್ಕರ್ ಪರಿನಿಬ್ಬಾಣದ ಸಂದರ್ಭಕ್ಕೆ ತಕ್ಕ ಲೇಖನವನ್ನು ಎದುರು ನೋಡುತ್ತೇನೆಂದು ಬರೆದಿದ್ದ. ಈ ಸಲದ ಲೇಖನವನ್ನು ಅಂಬೇಡ್ಕರ್ ‘ಬರೆಸಿಲ್ಲ’ ಎಂದು ಹೇಗೆ ಹೇಳುವುದು! 
 

blog
23 Nov 2025 ಅರವತ್ತೊಂದು ಲಕ್ಷ ದಾಟಿದ ಆತ್ಮಕತೆ!

ಕಳೆದ ತೊಂಬತ್ತು ವರ್ಷಗಳಿಂದಲೂ ಈ ಆತ್ಮಕತೆ ಪ್ರಕಟವಾಗುತ್ತಲೇ ಇದೆ. ನವಜೀವನ್ ಟ್ರಸ್ಟ್ ಈಚೆಗೆ ಕೊಟ್ಟ ಅಧಿಕೃತ ಅಂಕಿ ಅಂಶ ಇದು: ೨೦೨೫ರ ಅಕ್ಟೋಬರ್ ತಿಂಗಳ ಹೊತ್ತಿಗೆ ಈ ಆತ್ಮಕತೆಯ ೬೧ ಲಕ್ಷ ಪ್ರತಿಗಳು ಭಾರತದ ೧೭ ಭಾಷೆಗಳಲ್ಲಿ ಪ್ರಕಟವಾಗಿ ಮಾರಾಟವಾಗಿದ್ದವು. ಇಂಗ್ಲಿಷ್ ೨೧.೯ ಲಕ್ಷ. ಮಲಯಾಳಂ ೯.೧ ಲಕ್ಷ. ತಮಿಳು ೭.೮ ಲಕ್ಷ. ಹಿಂದಿ ೭.೦೬ ಲಕ್ಷ. ಗುಜರಾತಿ ೭.೦೫ ಲಕ್ಷ. 

ದಕ್ಷಿಣ ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಈ ಆತ್ಮಕತೆಯ ಪ್ರಸಾರದ ನಾಗಾಲೋಟದಲ್ಲಿ ಮಲಯಾಳಂ ಮುಂಚೂಣಿಯಲ್ಲಿದೆ. ೧೯೯೯-೨೦೦೦ದ ವರ್ಷದಲ್ಲಿ ಹಾಗೂ ೨೦೦೦-೦೧ರಲ್ಲಿ ತಲಾ ೧ ಲಕ್ಷ ಮಲಯಾಳಂ ಪ್ರತಿಗಳು ಮಾರಾಟವಾದವು. ಇವತ್ತಿಗೂ ಜಗತ್ತಿನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಈ ಪುಸ್ತಕಕ್ಕೆ ಕಾಯಂ ಸ್ಥಾನವಿದೆ. ಈ ಪುಸ್ತಕದ ವಿದೇಶಿ ಮಾರಾಟದ ಪ್ರಸಾರದ ಲೆಕ್ಕ ಸಿಕ್ಕಿಲ್ಲ. ಬೇರೆ ಬೇರೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಆವೃತ್ತಿಗಳ ಮಾರಾಟ ಹಾಗೂ ಈ ಆತ್ಮಕತೆಯ ಸಂಕ್ಷಿಪ್ತ ಆವೃತ್ತಿಯ ಮಾರಾಟದ ಅಂಕಿ ಅಂಶಗಳು ಕೂಡ ಇದರಲ್ಲಿ ಸೇರಿಲ್ಲ. 

ಈ ಗುಜರಾತಿ ಪುಸ್ತಕದ ಹೆಸರು: ‘ಸತ್ಯಾ ನ ಪ್ರಯೋಗೊ ಅಥವಾ ಆತ್ಮಕಥಾ’. ಲೇಖಕರು: ಮೋಹನದಾಸ್ ಕರಮಚಂದ ಗಾಂಧಿ.

ಗಾಂಧೀಜಿಯ ಆತ್ಮಕತೆ ೧೯೨೫ನೆಯ ಇಸವಿಯ ನವೆಂಬರ್ ೨೫ರಿಂದ ‘ನವಜೀವನ್’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ‘ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರೂತ್ ಆರ್‍ ಸ್ಟೋರಿ ಆಫ್ ಮೈ ಲೈಫ್’ ಎಂಬ ಶೀರ್ಷಿಕೆಯಲ್ಲಿ ಮಹದೇವ ದೇಸಾಯಿ ಪ್ರತಿ ಕಂತನ್ನೂ ಇಂಗ್ಲಿಷಿಗೆ ಅನುವಾದಿಸತೊಡಗಿದರು. ಅದು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ೧೯೨೫ರಿಂದ ೧೯೨೯ರವರೆಗೆ ಈ ಆತ್ಮಕತೆ ಪ್ರಕಟವಾಯಿತು. ‘ಸತ್ಯದೊಂದಿಗೆ ನನ್ನ ಪ್ರಯೋಗ ಅಥವಾ ನನ್ನ ಜೀವನ ಕತೆ’ಯ ಮೊದಲ ಭಾಗ ೧೯೨೭ರಲ್ಲಿ  ಪುಸ್ತಕರೂಪದಲ್ಲಿ ಪ್ರಕಟವಾಯಿತು. ನಂತರ ಎರಡನೆಯ ಭಾಗ ಬಂತು.


‘ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂದು ಕನ್ನಡದಲ್ಲೂ ಪ್ರಕಟವಾಗಿರುವ ಗಾಂಧೀ ಆತ್ಮಕತೆಯ ಪ್ರಸಾರವನ್ನು ಇನ್ನೆರಡು ಪುಸ್ತಕಗಳ ವ್ಯಾಪಕ ಪ್ರಸಾರಗಳ ಜೊತೆಗೆ ಕೆಲವರು ಹೋಲಿಸಿ ನೋಡಿದ್ದಾರೆ. ದುರುಳ ಸರ್ವಾಧಿಕಾರಿ ಹಿಟ್ಲರನ ‘ಮೈನ್ ಕೆಂಫ್’ (ನನ್ನ ಹೋರಾಟ) ೧೯೩೦-೪೫ರ ನಡುವೆ ಅವನ ನಾಝಿವಾದದ ಫ್ಯಾಸಿಸ್ಟ್ ಅಬ್ಬರದ ಕಾಲದಲ್ಲಿ ಮಿಲಿಯಗಟ್ಟಲೆ ಖರ್ಚಾಗಿತ್ತು. ಅದು ನಾಝಿ ಜನಾಂಗದ ಪರವಾದ ಹುಸಿ ಉನ್ಮಾದ ಹಾಗೂ ಪೂರ್ವಗ್ರಹದ ಫಲವಾಗಿತ್ತು. ಚೀನಾದ ಅಧ್ಯಕ್ಷರಾಗಿದ್ದ ಮಾವೋ ಭಾಷಣ, ಬರಹಗಳ ‘ರೆಡ್ ಬುಕ್’ನ ಕೋಟಿಗಟ್ಟಲೆ ಪುಸ್ತಕಗಳು ಮುದ್ರಣವಾಗಿವೆ. ಮಾವೋ ಪುಸ್ತಕದ ಕ್ರಾಂತಿಕಾರಿ ಮಹತ್ವ ಈ ಪ್ರಸಾರಕ್ಕೆ ಒಂದು ಕಾರಣವಾಗಿತ್ತು. ಚೀನಾ ಕ್ರಾಂತಿಯ ಸಂದರ್ಭದಲ್ಲಿ ಈ ಪುಸ್ತಕವನ್ನು ಕಡ್ಡಾಯವಾಗಿ ಹಂಚಲಾಗಿದ್ದು ಈ ಬೃಹತ್ ಪ್ರಸಾರಕ್ಕೆ ಮತ್ತೊಂದು ಕಾರಣ. 
ಆದರೆ ಕಳೆದ ತೊಂಬತ್ತೈದು ವರ್ಷಗಳಲ್ಲಿ ಭಾರತದಲ್ಲಿ ಹಾಗೂ ಭಾರತದಾಚೆಗೆ ಎಲ್ಲ ವರ್ಗದ ಜನರೂ ಕೊಂಡು ಓದಿದ ‘ಸತ್ಯದೊಂದಿಗೆ ನನ್ನ ಪ್ರಯೋಗ’ ಪುಸ್ತಕದ ಅಗ್ಗಳಿಕೆ ಈ ಎರಡೂ ಪುಸ್ತಕಗಳಿಗಿಲ್ಲ. ಒಂದು ಪುಸ್ತಕ ಓದಿದ ನಂತರ ಉಂಟಾಗುವ ಸಾತ್ವಿಕ ಪ್ರಭಾವ ಎಷ್ಟು ಅದ್ಭುತವಾಗಿರುತ್ತದೆ; ನಮ್ಮೊಳಗೆ ಎಂಥ ಒಳಿತಿನ ಭಾವ ಹಬ್ಬುತ್ತದೆ; ಹಾಗೂ ಒಳಿತು ಒಳಿತನ್ನು ಉದ್ದೀಪಿಸಬಲ್ಲದು ಎಂಬುದಕ್ಕೆ ಗಾಂಧೀ ಆತ್ಮಚರಿತ್ರೆ ಸಾಕ್ಷಿಯಂತಿದೆ.  

‘ಸತ್ಯದೊಂದಿಗೆ ನನ್ನ ಪ್ರಯೋಗ’ ಎನ್ನುವುದು ಎಲ್ಲ ಬರವಣಿಗೆಯ ಹಾಗೂ ಎಲ್ಲ ಬಗೆಯ ಅಭಿವ್ಯಕ್ತಿಯ ಸವಾಲನ್ನು ಹೇಳುತ್ತದೆ ಎಂದು ಸದಾ ನನಗನ್ನಿಸಿದೆ. ಆಧುನಿಕ ಗುಜರಾತಿ ಗದ್ಯವನ್ನು ರೂಪಿಸಿದ ಮಹತ್ವದ ಲೇಖಕರಾಗಿ ಕೂಡ ಗಾಂಧೀಜಿ ಗುಜರಾತಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಲೇಖಕನೊಬ್ಬ ಅತ್ಯಂತ ಸರಳವಾಗಿ, ಸತ್ಯಕ್ಕೆ ಅತ್ಯಂತ ಹತ್ತಿರವಾಗಿ ತನ್ನ ಬದುಕಿನ ಕತೆ ಹೇಳುವ ಈ ರೀತಿ ಎಲ್ಲ ಕಾಲದಲ್ಲೂ ಬರವಣಿಗೆ ಕಲಿಯಲು ಬಯಸುವವರಿಗೆ ಮಾರ್ಗದರ್ಶಿಯಂತಿದೆ. 

ತಮ್ಮ ಕಾವ್ಯ ಬದುಕಿನ ಒಂದು ಘಟ್ಟದಲ್ಲಿ ಸ್ಫೋಟಕ ಹಾಡು, ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ ತಮ್ಮ ನಡುವಯಸ್ಸಿನಲ್ಲಿ ಬೆಂಗಳೂರಿನ ಬಾದಾಮಿ ಹೌಸ್‌ ಲೈಬ್ರರಿಯಲ್ಲಿ ಕೂತು, ‘ಹರಿಜನ್’ ಪತ್ರಿಕೆಗೆ ಗಾಂಧೀಜಿ ಬರೆದ ಬರಹಗಳನ್ನು ಓದಿದರು. ನಂತರ ಇಡೀ ಸಂಗ್ರಹವನ್ನು ಕೊಂಡು ತಮ್ಮ ಖಾಸಗಿ ಗ್ರಂಥಭಂಡಾರದಲ್ಲಿ ಇಟ್ಟುಕೊಂಡರು. ಸಿದ್ಧಲಿಂಗಯ್ಯ ತಮ್ಮ ಆತ್ಮಚರಿತ್ರೆ ‘ಊರು ಕೇರಿ’ಯ ಮೊದಲ ಭಾಗ ಬರೆದಾಗ, ಕೊನೇ ಪಕ್ಷ ಅದರ ಸರಳ, ನಿರುದ್ವಿಗ್ನ ನಿರೂಪಣೆಯ ಶೈಲಿಯನ್ನು ಗಾಂಧೀಜಿಯ ಆತ್ಮಕತೆಯ ನಿರೂಪಣಾ ಶೈಲಿಯಿಂದಲೂ ಕಲಿತಿರಬಹುದು ಎಂದು ಊಹಿಸುತ್ತೇನೆ. ಗಾಂಧೀ ಲೋಕಕ್ಕೆ ಅತ್ಯಂತ ಒಳಗಿನವರಾಗಿದ್ದ,   ಸ್ವಾತಂತ್ರ‍್ಯ ಚಳುವಳಿಯಲ್ಲಿ ಸೆರೆಮನೆವಾಸ ಅನುಭವಿಸಿದ್ದ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ಗಾಂಧೀ ಆತ್ಮಕತೆಯನ್ನು ಕನ್ನಡ ಓದುಗಬಳಗಕ್ಕೆ ಆತ್ಮೀಯವಾಗುವಂತೆ ಅನುವಾದಿಸಿದ್ದಾರೆ. ಇದು ಅನುವಾದದ ಒಂದು ಮುಖ್ಯ ಮಾದರಿಯಾಗಿ ಕೂಡ ನಮ್ಮೆದುರಿಗಿದೆ. 

ಗಾಂಧೀಜಿಯವರ ಆತ್ಮಕತೆಯ ಬರವಣಿಗೆ ೧೯೨೦ನೆಯ ಇಸವಿಯವರೆಗಿನ ಅವರ ಅನುಭವಗಳವರೆಗೆ ಬಂದು ನಿಂತಿತು. ಅದಕ್ಕೆ ಕಾರಣವನ್ನು ಲೇಖಕರೇ ಕೊಡುತ್ತಾರೆ: ‘ಇನ್ನು ಈ ಅಧ್ಯಾಯಗಳನ್ನು ಮುಗಿಸುವ ಕಾಲ ಬಂದಿದೆ. ಇಲ್ಲಿಂದ ಮುಂದೆ ನನ್ನ ಜೀವನ ಎಷ್ಟು ಬಹಿರಂಗವಾಗಿದೆಯೆಂದರೆ, ಸಾರ್ವಜನಿಕರಿಗೆ ತಿಳಿಯದಿರುವ ಸಂಗತಿ ಏನೇನೂ ಇಲ್ಲ...’ 

ಇದೇ ಅಧ್ಯಾಯದಲ್ಲಿ ಅವರು ಬರೆಯುವ ಮಾತುಗಳು: 

‘ಈವರೆಗಿನ ನನ್ನ ಪ್ರಯೋಗಗಳಿಂದ ದೊರೆತ ನಿರ್ಣಯಗಳನ್ನು ನಾವು ಅಂತಿಮ ತೀರ್ಮಾನಗಳೆಂದು ಪರಿಗಣಿಸಲು ಆಗುವುದಿಲ್ಲ. ಆದುದರಿಂದ ಈ ಕಥೆಯನ್ನು ಇಲ್ಲಿಗೆ ಮುಗಿಸುವುದು ನನ್ನ ಸರಳ ಕರ್ತವ್ಯ. ವಾಸ್ತವವಾಗಿ ನನ್ನ ಲೇಖನಿ ಮುಂದುವರಿಯಲು ಸ್ವಾಭಾವಿಕವಾಗಿಯೇ ಹಿಂಜರಿಯುತ್ತದೆ. ವಾಚಕರಿಂದ ಬೀಳ್ಕೊಳ್ಳುವುದು ನನ್ನ ಮನಸ್ಸಿಗೆ ನೋವಾಗದೇ ಇಲ್ಲ. ನನ್ನ ಪ್ರಯೋಗಗಳಿಗೆ ನಾನು ಹೆಚ್ಚು ಬೆಲೆಯನ್ನು ಕಟ್ಟುತ್ತೇನೆ. ಅವುಗಳನ್ನು ಸತ್ಯಬದ್ಧವಾಗಿ ವರ್ಣಿಸುವಲ್ಲಿ ಯಶಸ್ವಿಯಾಗಿದ್ದೇನೋ ಇಲ್ಲವೋ ನನಗೆ ತಿಳಿಯದು. ಪ್ರಾಮಾಣಿಕವಾದ ನಿರೂಪಣೆಯನ್ನು ಮಾಡಲು ನಾನು ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆಂದು ಮಾತ್ರ ಹೇಳಬಲ್ಲೆ. ಸತ್ಯವು ನನಗೆ ಹೇಗೆ ತೋರಿತೋ ಹಾಗೆ ವಿವರಿಸುವುದು ಹಾಗೂ ನಾನು ಆ ಸತ್ಯವನ್ನು ಕಂಡುಕೊಂಡ ಮಾರ್ಗವನ್ನು ವಿವರಿಸುವುದು ನನ್ನ ನಿರಂತರ ಪ್ರಯತ್ನವಾಗಿದೆ. ಇವನ್ನೆಲ್ಲ ಓದುಗರಿಗೆ ವಿವರಿಸಿ ಹೇಳುವಾಗ ನನಗೆ ವರ್ಣನಾತೀತವಾದ ಮಾನಸಿಕ ಶಾಂತಿ ಸಿಕ್ಕಿದೆ; ಯಾಕೆಂದರೆ ಇದು ಓದುಗರಲ್ಲಿ ಸತ್ಯ, ಅಹಿಂಸೆಗಳಲ್ಲಿ ನಂಬಿಕೆ ಹುಟ್ಟಿಸಬಹುದೆಂಬುದು ನನ್ನ ನೆಚ್ಚಿನ ಆಸೆಯಾಗಿದೆ.’

 ‘ಸತ್ಯನಿಷ್ಠ ನಿರೂಪಣೆ ಮಾಡುವ ಹಾದಿಯಲ್ಲಿ ಎದುರಾಗುವ ಯಾವ ಕಷ್ಟ ಕೋಟಲೆಗಳನ್ನೂ ನಾನು ಎದುರಿಸದೆ ಬಿಟ್ಟಿಲ್ಲ' ಎಂಬ ಗಾಂಧೀಜಿಯ ಮಾತು ನಿಜವಾದ ಬರವಣಿಗೆಯ ಸವಾಲನ್ನು ಎಲ್ಲ ಲೇಖಕ ಲೇಖಕಿಯರಿಗೂ ನೆನಪಿಸುತ್ತದೆ. ‘ಆತ್ಮಕಥಾ’ ಕುರಿತು ಮುಂದೊಮ್ಮೆ ಗಾಂಧೀಜಿ ಬರೆದ ಮಾತು: ‘ನಾನೆಂದೂ ಆತ್ಮಚರಿತ್ರೆ ಬರೆಯಲಿಲ್ಲ. ಸತ್ಯದೊಂದಿಗೆ ನನ್ನ ಪ್ರಯೋಗ ಕುರಿತ ಲೇಖನಗಳ ಸರಣಿ ಬರೆದೆ; ಅವು ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು. ಇದಾಗಿ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಾದವು. ಅದಾದ ನಂತರ ನಾನು ಏನು ಮಾಡಿದೆ, ಏನು ಯೋಚಿಸಿದೆ... ಇವೆಲ್ಲವನ್ನೂ ಕಾಲಾನುಕ್ರಮದಲ್ಲಿ ಬರೆದಿಲ್ಲ. ಹಾಗೆ ಬರೆಯುವ ಆಸೆಯೇನೋ ಇದೆ. ಆದರೆ ನನಗೆ ಬಿಡುವೆಲ್ಲಿದೆ?' 

ಆತ್ಮಕತೆಯ ಮುಂದಿನ ಭಾಗವನ್ನು ಬರೆಯಬೇಕೆಂದು ಜನ ಕೇಳುತ್ತಲೇ ಇದ್ದರು. ಆಗ ಗಾಂಧೀಜಿ ಬರೆದರು: ‘ಆತ್ಮಕತೆಯನ್ನು ಎಲ್ಲಿಗೆ ನಿಲ್ಲಿಸಿದ್ದೇನೋ ಅಲ್ಲಿಂದ ಮತ್ತೆ ಮುಂದುವರಿಸಬೇಕೆಂದು, ಅಹಿಂಸಾ ತತ್ವವನ್ನು ವಿವರಿಸುವ ಒಂದು ಗ್ರಂಥದ ರಚನೆಗೂ ನಾನು ಶೀಘ್ರದಲ್ಲೇ ಕೈಹಾಕಬೇಕೆಂದು ನನ್ನ ಸ್ನೇಹಿತರೊಬ್ಬರು ಬೇಡಿಕೆಯಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಆತ್ಮಕತೆಯನ್ನು ಬರೆಯಬೇಕೆಂದು ತೀರ್ಮಾನಿಸಿ ನಾನು ಬರೆದದ್ದಲ್ಲ. ಬದುಕಿನ ಯಥಾರ್ಥ ಅನುಭವಗಳನ್ನು ಒಂದು ಅಂದಾಜಿನಲ್ಲಿ ನಾನು ದಾಖಲಿಸುತ್ತಾ ಹೋದೆನಷ್ಟೆ. ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹ ಸರಣಿ, ನಂತರ ಪುಸ್ತಕವಾಗಿ ಪ್ರಕಟವಾಯಿತು. ಆಗಿನಿಂದ ಇಲ್ಲಿಗೆ ಇಪ್ಪತ್ತು ವರ್ಷ ಸಂದಿವೆ. ನಾನು ಚಿಂತಿಸಿದ, ಕ್ರಿಯೆಯಲ್ಲಿ ತೊಡಗಿದ ವಿವರಗಳು ಈ ಅವಧಿಯಲ್ಲಿ ಅಷ್ಟು ವ್ಯವಸ್ಥಿತವಾಗಿ ಬರಹ ರೂಪಕ್ಕಿಳಿದಿಲ್ಲ. ಅವನ್ನು ಕ್ರಮಬದ್ಧವಾಗಿ ದಾಖಲಿಸುವುದು ನನಗೂ ಸಹ ಇಷ್ಟವೇ. ಆದರೆ ಅಷ್ಟು ಪುರಸತ್ತಾದರೂ ಎಲ್ಲಿದೆ?  ಆತ್ಮಕತೆಯನ್ನು ಮತ್ತೆ ಮುಂದುವರಿಸಲು ಸಮಯಾವಕಾಶವಂತೂ ಸದ್ಯಕ್ಕೆ ನನ್ನ ಬಳಿ ಇಲ್ಲ. ದೈವಸಂಕಲ್ಪ ಹೇಗಿದೆಯೋ ನೋಡಬೇಕು. ಆದರೆ ಅಹಿಂಸಾ ತತ್ವದ ಕುರಿತು ಗ್ರಂಥವನ್ನು ಬರೆಯುವಷ್ಟು ಖಂಡಿತ ನಾನು ಶಕ್ತನಲ್ಲ. ಪಾಂಡಿತ್ಯಪೂರ್ಣ ಬರವಣಿಗೆ ನನ್ನ ಕೈಲಾಗದು.’ (ಅನುವಾದ: ಶ್ರೀನಿವಾಸರಾಜು ದೊಡ್ಢೇರಿ)

೧೯೨೦ರ ನಂತರದ ಗಾಂಧೀ ಕತೆಯನ್ನು ರಾಜಮೋಹನ ಗಾಂಧಿಯವರ ‘ಮೋಹನದಾಸ್: ಎ ಟ್ರೂ ಸ್ಟೋರಿ’ ಅಥವಾ ಡಿ.ಎಸ್. ನಾಗಭೂಷಣರ ‘ಗಾಂಧೀ ಕಥನ’ ಮುಂತಾದ ಪುಸ್ತಕಗಳಲ್ಲಿ ಹಲವೆಡೆ ಓದಿಕೊಳ್ಳಬಹುದು. ಆದರೆ ‘ಗಾಂಧೀಜಿ ತಮ್ಮ ಆತ್ಮಕತೆಯ ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೂ ಬರೆದ ಸರಳ, ನೇರ ರೀತಿಯಲ್ಲಿ ನಂತರದ ಕತೆಯನ್ನೂ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬ ನಿರೀಕ್ಷೆ ಮಾತ್ರ ಹಾಗೇ ಉಳಿದುಬಿಟ್ಟಿದೆ.  ೫೦೦ ಪುಟಗಳ ಈ ಪುಸ್ತಕ ಈಗ ಎಲ್ಲೆಡೆ ದೊರೆಯುತ್ತದೆ. ‘ಗಾಂಧಿ ಭವನ, ಕುಮಾರ ಪಾಕ್ ಪೂರ್ವ, ಶೇಷಾದ್ರಿಪುರಂ, ಬೆಂಗಳೂರು ೫೬೦೦೧’ ಇಲ್ಲಿ ನೂರು ರೂಪಾಯಿ ಮುಖ ಬೆಲೆಯ ಇಂಗ್ಲಿಷ್ ಹಾಗೂ ಕನ್ನಡಾನುವಾದದ ಪ್ರತಿಗಳು ಐವತ್ತು ರೂಪಾಯಿಗೆ ದೊರೆಯುತ್ತವೆ. ಸಂಕ್ಷಿಪ್ತ ವಿದ್ಯಾರ್ಥಿ ಆವೃತ್ತಿ ಮೂವತ್ತು ರೂಪಾಯಿಗೆ ದೊರೆಯುತ್ತದೆ. 

ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು  ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ. 

ಕೊನೆ ಟಿಪ್ಪಣಿ: 

ಈ ಅಂಕಣ ಬರೆಯುವ ದಿನ ಬೆಳ್ಳಂಬೆಳಗಿಗೇ ಮೊಗಳ್ಳಿ ಗಣೇಶ್ ಕುರಿತ ‘ಮಯೂರ’ದ ಲೇಖನ ಓದಿ ಹಿರಿಯ ಲೇಖಕ ಶೂದ್ರ ಶ್ರೀನಿವಾಸ್,‘ಮೂವಿಂಗ್ ಆಗಿದೆ’ ಅಂದರು. ಮೊನ್ನೆ ಗೆಳೆಯ ಚಂದ್ರಶೇಖರ ಐಜೂರ್ ಕೂಡ ಈ ಬರಹ ಓದಿ ಎಮೋಶನಲ್ ಆಗಿದ್ದರು. 

ಈ ಬರಹ ಹಾಗೂ ಮೊಗಳ್ಳಿ ಗಣೇಶರ ಕೊನೆಯ ಕತೆ ‘ಹೊಸಿಲು ದಾಟಿದವರು’ ಎರಡೂ ಡಿಸೆಂಬರ್ ತಿಂಗಳ ‘ಮಯೂರ’ ಮಾಸಪತ್ರಿಕೆಯಲ್ಲಿವೆ. ನೀವೂ ಇವನ್ನು ಓದಿದರೆ ಚೆನ್ನಾಗಿರುತ್ತದೆ. ತಕ್ಷಣ ಓದಿ ಸ್ಪಂದಿಸಿದ ಈ ಗೆಳೆಯರಿಗೂ, ಇವೆರಡನ್ನೂ ಪ್ರಕಟಿಸಿದ 'ಮಯೂರ'ದ ಸಂಪಾದಕರಾದ ಚ.ಹ. ರಘುನಾಥ್ ಅವರಿಗೂ ಲೇಖಕ ಋಣಿ.  
 

blog
16 Nov 2025 ಸಾಲು ಮರದ ಸುಂದರ ಹಕ್ಕಿ!

ರಸ್ತೆ ಬದಿ ಸಾಲು ಮರ ನೆಟ್ಟು ಲಕ್ಷಾಂತರ ಹಾದಿಹೋಕರಿಗೆ ನೆರಳಾದ ಸಾಲುಮರದ ತಿಮ್ಮಕ್ಕನವರು (೩೦ ಜೂನ್ ೧೯೧೧-೧೪ ನವಂಬರ್೨೦೨೫) ಅತ್ಯಂತ ಅರ್ಥಪೂರ್ಣವಾದ ತುಂಬು ಬಾಳನ್ನು ಬದುಕಿ ನಿರ್ಗಮಿಸಿದರು. ಈ ಸುದ್ದಿ ಓದಿದ ದಿನ ಲಂಕೇಶರ ಅನನ್ಯ ಕತೆ ‘ವೃಕ್ಷದ ವೃತ್ತಿ’ ಮತ್ತೆ ನೆನಪಾಯಿತು. ಲಂಕೇಶರು ಈ ಕತೆ ಬರೆದ ಕಾಲದಿಂದಲೂ ಈ ಕತೆಗೆ ಸಾಲು ಮರದ ತಿಮ್ಮಕ್ಕನವರೇ ಪ್ರೇರಣೆಯಿರಬಹುದು ಎಂದು ನನಗನ್ನಿಸುತ್ತಲೇ ಇರುತ್ತದೆ. ಗೊತ್ತಿಲ್ಲ, ಲಂಕೇಶರ ಕತೆ ಬಂದಿದ್ದು ೧೯೮೯ರಲ್ಲಿ. ಅದೇನೇ ಇರಲಿ, ಈ ಕತೆಯ ಜೊತೆಗೇ ಕವಿ ಮಿತ್ರ ಎನ್.ಕೆ. ಹನುಮಂತಯ್ಯ ಬರೆದ ಸಾಲುಮರದ ತಿಮ್ಮಕ್ಕನವರನ್ನು ಕುರಿತ ಹಾಡೂ  ಸುಳಿಯಿತು. ಗೆಳೆಯ ನಾಗತಿಹಳ್ಳಿ ರಮೇಶ್ ನಿರ್ಮಿಸಲು ಹೊರಟಿದ್ದ ‘ನಕ್ಕೀರಾ ಜೋಕೆ’ ಸಿನಿಮಾಕ್ಕೆ ಎನ್. ಕೆ. ಹನುಮಂತಯ್ಯ ಬರೆದ ಹಾಡಿನ ಮೊದಲ ಪಂಕ್ತಿ ನವಕತೆಗಾರ ರವಿಕುಮಾರ ನೀಹಾ ಬಾಯಲ್ಲೇ ಇತ್ತು:

ನಾಡಿಗೆ ಸಿರಿದೇವಿಯಾದ ಬಡವಿ
ಸಾಲು ಮರದ ತಿಮ್ಮಕ್ಕ 
ಗಿಡ ಮರ ನೆಟ್ಟು ಸಲಹಿದ ತಾಯಿ 
ಸಾಲು ಮರದ ತಿಮ್ಮಕ್ಕ 

ಮುಂದೆ ‘ಚಿತ್ರದ ಬೆನ್ನು’ ಕವನ ಸಂಕಲನ ಪ್ರಕಟಿಸುವ ಹೊತ್ತಿಗೆ ಈ ಹಾಡನ್ನು ಅಲ್ಲಲ್ಲಿ ಬದಲಿಸಿ, ಪದ್ಯವಾಗಿಸಿದ ಎನ್.ಕೆ.ಹನುಮಂತಯ್ಯನವರನ್ನು ತಿಮ್ಮಕ್ಕನವರ ಅಸ್ಪಶ್ಯತೆಯ  ನೋವು, ಸಂಕಟ ಕಾಡಿದ್ದು ಸಹಜವಾಗಿತ್ತು:  

ನೋವಿನ ಸುಡುಗಾಡಲ್ಲಿ 
ಹಸಿರು ಹಡೆದ ತಿಮ್ಮಕ್ಕ 
ಹೊಲಸೆಂದು ನೂಕಿದ ಮಡಿಲಿನ ಒಳಗೆ 
ಪಕ್ಷಿ ತೂಗಿದ ತಿಮ್ಮಕ್ಕ

ಬೆಂಕಿಯ ಒಳಗೆ ನೀರ ಬೇರನು ಇಳಿಸಿ 
ಆಗಸದಗಲ ಎಲೆಯನ್ನು ಅರಳಿಸಿ 
ಕರ‍್ರನೆ ನೆರಳಾದವಳೇ 
ಮುಟ್ಟದ ಮತ್ಸರಕೆ ನಿನ್ನ
ಮುಗುಳುನಗು ಸಾಕು

ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಣಿಗಲ್ ಬಳಿಯ ಕುದೂರಿನ ತಿಮ್ಮಕ್ಕ ಹಾಗೂ ಬಿಕ್ಕಲುಚಿಕ್ಕಯ್ಯ ಎಂಬ ಬಡ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗು ಕಾಡಿತು. ಆಗ ಅವರು ಸಾಲು ಮರಗಳನ್ನು ನೆಡಲು ತೀರ್ಮಾನ ಮಾಡಿದರು. ಈ ಕುರಿತು ಮೊದಲ ಬಾರಿಗೆ ಅಧ್ಯಾಪಕ ಎಂ.ವಿ. ನೆಗಳೂರು ಮೂವತ್ತು ವರ್ಷಗಳ ಕೆಳಗೆ ಪ್ರಜಾವಾಣಿಯಲ್ಲಿ ಬರೆದ ಲೇಖನದ ಭಾಗ: 

‘ಮಕ್ಕಳಿಲ್ಲದ ಕೊರಗು ಪರಿಹರಿಸಿಕೊಳ್ಳಲು ಮರ ನೆಟ್ಟು ಮಕ್ಕಳಂತೆ ಪೋಷಿಸಲು ಇಬ್ಬರೂ ತೀರ್ಮಾನಿಸಿದರು. ಕುದೂರಿನಿಂದ ಹುಲಿಕಲ್‌ಗೆ ಹೋಗುವ ಸಾಲುಮರಗಳಿಲ್ಲದ ಬರಡು ರಸ್ತೆಯನ್ನು ತಮ್ಮ ಕಾಯಕಕ್ಕೆ ಆರಿಸಿಕೊಂಡರು. ಈ ದಂಪತಿಗಳ ಮುಗ್ಧ ತೀರ್ಮಾನ, ಅದಕ್ಕಾಗಿ ನಿಸ್ವಾರ್ಥವಾಗಿ ಹರಿಸಿದ ಬೆವರು, ಈಗ ಈ ರಸ್ತೆಯುದ್ದಕ್ಕೂ ನೂರಾರು ಹೆಮ್ಮರಗಳ ರೂಪದಲ್ಲಿ ನಳನಳಿಸುತ್ತಿವೆ. ಇದಕ್ಕಾಗಿ ಇವರಿಬ್ಬರೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸುತ್ತಮುತ್ತಲ ಪ್ರದೇಶಗಳನ್ನು ತಿರುಗಿ ನೆಡಲು ಯೋಗ್ಯವಾದ ಆಲದ ಮರದ ಕಡ್ಡಿಗಳನ್ನು ತಂದು ರಸ್ತೆಯ ಎರಡೂ ಬದಿ ಸಮಾನಾಂತರದಲ್ಲಿ ಗುಣಿ ತೋಡಿ ನೆಟ್ಟು ಅವುಗಳನ್ನು ದನಕರುಗಳು ತಿಂದುಹಾಕದಂತೆ ಬೇಲಿ ಕಟ್ಟಿದರು. ನಿತ್ಯವೂ ಚಿಕ್ಕಯ್ಯ ಅಡ್ಡೆಯಿಂದ, ತಿಮ್ಮಕ್ಕ ತಲೆ ಮೇಲೆ, ಸೊಂಟದ ಮೇಲೆ ಬಿಂದಿಗೆಯಲ್ಲಿ ಬಹುದೂರದಿಂದ ನೀರು ಹೊತ್ತು ತಂದು ಮರಗಳಿಗೆ ಉಣಿಸಿ ಬೆಳೆಸಿ ಪೋಷಿಸಿದರು. ಕಣ್ಗಾವಲಾಗಿ ರಕ್ಷಿಸಿದರು. ವಿಶಾಲವಾಗಿ ಬೇರು ಬಿಡಲು ಸಹಾಯಕವಾಗುವಂತೆ ಮಳೆಗಾಲದಲ್ಲಿ ಗಿಡಗಳ ಬುಡಗಳನ್ನು ಕೆದಕಿದರು. ಎದೆಯಲ್ಲಿ ಮಡುಗಟ್ಟಿದ ಪ್ರೀತಿಯನ್ನೆಲ್ಲಾ ಎಳೆಯ ಸಸಿಗಳಿಗೆ ಧಾರೆಧಾರೆಯಾಗಿ ಎರೆದರು. 

ಹೊಟ್ಟೆಪಾಡಿಗಾಗಿ ಕಲ್ಲು ಒಡೆಯಲು ಹೋಗುವ ಮೊದಲು ಅವರು ಇಷ್ಟೆಲ್ಲಾ ಮಾಡಿ ಕೆಲಸಕ್ಕೆ ಹೊರಡುತ್ತಿದ್ದರು. ಅವರಿಬ್ಬರೂ ಬಂಡೆಯ ಮೇಲೆ ಕಲ್ಲು ಒಡೆಯದಿದ್ದರೆ ಹೊಟ್ಟೆಗೆ ಸಂಚಕಾರ. ಹೀಗಾಗಿ ಹೊತ್ತು ಮೂಡುವ ಮೊದಲೇ ಅವರ ಮರಗಳ ಸೇವೆ ಆರಂಭ. ಸತತ ಆರು ವರ್ಷ ನೀರು ಹೊತ್ತು, ಮರಗಳ ಆರೈಕೆ ಮಾಡಿದರು. ಬಿಡುವಿಲ್ಲದ, ಸುಡುಬಿಸಿಲನ್ನು ಲೆಕ್ಕಿಸದ ಕಾಯಕ ಅವರದಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಿಂದ ಹುಲಿಕಲ್‌ಗೆ ಹೋಗುವ ಮೂರು ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ೨೮೪ ಸಾಲುಮರಗಳು ತಿಮ್ಮಕ್ಕ ತನ್ನ ಪತಿಯೊಡನೆ ಅಕ್ಕರೆಯಿಂದ ಸಾಕಿ ಸಲಹಿದ ಮಕ್ಕಳು.’ 

೧೯೯೪ರ ಹೊತ್ತಿಗಾಗಲೇ ಚಿಕ್ಕಯ್ಯ ತೀರಿಕೊಂಡಿದ್ದರು. ತಿಮ್ಮಕ್ಕನ ಮರಗಳ ಕಾಯಕ ಮುಂದುವರೆಯಿತು. ನಾವೆಲ್ಲ ನೋಡನೋಡುತ್ತಿರುವಂತೆಯೇ ತಿಮ್ಮಕ್ಕ ಬದುಕಿದ್ದಾಗಲೇ ದಂತಕತೆಯಾದರು. ಅವರಿಗೆ ಬಂದ ಪ್ರಶಸ್ತಿ, ಬಿರುದುಗಳನ್ನು ಇಡಲು ಅವರ ಪುಟ್ಟ ಮನೆಯಲ್ಲಿ ಜಾಗವೇ ಇರಲಿಲ್ಲ. ಹತ್ತು ವರ್ಷಗಳ ಕೆಳಗೆ ಗೆಳೆಯ ಡಾ. ಎಂ.ಬಿ. ರಾಮಮೂರ್ತಿ ಸಾಲು ಮರದ ತಿಮ್ಕಕ್ಕನವರನ್ನು ಕುರಿತ ಪುಸ್ತಕ ಸಂಪಾದಿಸುವ ಕಾಲಕ್ಕೆ ಅವರ ಮನೆಗೆ ಹೋದಾಗ ಆ ಬಿರುದು, ಫಲಕಗಳನ್ನು ಅಟ್ಟದ ಮೇಲೆ ಒಟ್ಟಿದ್ದನ್ನು ಕೂಡ ಕಂಡರು. 

ಸಾಲುಮರದ ಹಕ್ಕಿಯಂತಿದ್ದ ತಿಮ್ಮಕ್ಕನವರು ಬರಬರುತ್ತಾ ಹನುಮಂತಯ್ಯ, ಕಗ್ಗರೆ ಪ್ರಕಾಶರ ಎದೆಯಲ್ಲಿ ಹಾಡಾದರು; ಶ್ರೀಧರ ಬನವಾಸಿಯವರ ನಾಟಕವಾದರು. ಹೋರಾಟಗಾರ ರವಿಕೃಷ್ಣಾರೆಡ್ಡಿಯವರ ಆರಂಭದ ಪ್ರೇರಣೆಯಾದರು. ಸಾವಿರಾರು ಪರಿಸರ ಪ್ರೇಮಿಗಳಿಗೆ ಸ್ಫೂರ್ತಿಯಾದರು. ಧಾರವಾಡದ ಕವಯಿತ್ರಿ ಮಾಲತಿಯವರು ಬರೆದ ‘ತಿಮ್ಮಕ್ಕನ ಕನಸು’ ಪದ್ಯ:

ರಾಜ ಗದ್ದುಗೆಯು ಬೇಡ
ಬೇಡ ಸದ್ದು ಗದ್ದಲ
ಕಲಿತವರ ವಾದ ಬೇಡ
ಕೂತವರ ಹಾದಿ ಬೇಡ
ಇರಲಿ ನನ್ನ ಪುಟ್ಟಹಳ್ಳಿ
ಅಟ್ಟುಣ್ಣುವ ಬದುಕೆ ಇರಲಿ,
ಇರಲಿ ಒಂಟಿ ಕಣ್ಣಿನಲ್ಲು
ಮರದ ಕನಸು ತೂಗುತಿರಲಿ;
ಬಡತನವೆಂದೂ ಕಾಡಲಿಲ್ಲ
ನೆಲ ಬರಡು ಕಾಡಿದಂತೆ,
ಮಕ್ಕಳಿಲ್ಲ ದುಕ್ಕವಿಲ್ಲ; ನನ್ನ
ಕನಸಿಗೆ ಸುಕ್ಕುಗಳೇ ಇಲ್ಲ;
ಬಿಸಿಲನುಂಡ ಭೂದೇವಿಗೆ
ಹಸಿರುಗುಡಿಯ ಕಟ್ಟಲೆಂದು
ಕಲ್ಲು ಮಣ್ಣು ಒಟ್ಟಲಿಲ್ಲ
ಸಸಿಯ ನೆಟ್ಟು ಹಾಡಿದೆ;
ಒಂಟಿ ಜೀವ ಸೊಂಟ ಕಟ್ಟಿ
ಕಣ್ಣ ರೆಪ್ಪೆ ಮರೆಯ ಮಾಡಿ,
ಹರೆಯದ ಹಾಲನ್ನೇ ಊಡಿ
ಲಲ್ಲೆಗರೆದು ಬೆಳೆಸಿದೆ;
ಇರಲಿ ನಾನು ಇಲ್ಲದಿರಲಿ
ಮರಗಳಲ್ಲ ಮಕ್ಕಳಿವರ
ಬಳಗ ಹಬ್ಬುತಿರಲಿ, ನನ್ನ
ಕನಸು ಭುವಿಯ ತಬ್ಬುತಿರಲಿ

ಮಾಲತಿಯವರ ಈ ಸಹಜ ಹರಿವಿನ ಒಡಲ ಕವಿತೆ ಓದಿ, ಕವಿ ಚಂದ್ರಶೇಖರ ಪಾಟೀಲ ರೋಮಾಂಚನಗೊಂಡು ಮೈದುಂಬಿ ಬರೆದರು:  

‘ಸಾಲುಮರದ ತಿಮ್ಮಕ್ಕನ ಕತೆ ಯಾರಿಗೆ ಗೊತ್ತಿಲ್ಲ? ಶತಮಾನಗಳು ಗತಿಸಿದ ಮೇಲೆ ಕೂಡ ಮಾನವಕುಲದ ನೆನಪಿನಲ್ಲಿ ಉಳಿಯುವ ಜೀವ ಅದು; ಮತ್ತೆ ಮತ್ತೆ ಕತೆಯಾಗಿ, ಕಾವ್ಯವಾಗಿ, ಪುರಾಣವಾಗಿ ಮರುಕಳಿಸುವ ಬದುಕು ಸಾಗಿಸಿದ ತಿಮ್ಮಕ್ಕ ನಮ್ಮ ಕಣ್ಣೆದುರೇ ಇತಿಹಾಸ ನಿರ್ಮಿಸಿದವಳು. ರಾಜ ಗದ್ದುಗೆ ಬೇಡ, ಸುದ್ದಿ ಗದ್ದಲ ಬೇಡ ಎಂದರೂ ಈ ತಿಮ್ಮಕ್ಕ ಸುದ್ದಿ ಮಾಡಿದ್ದಾಳೆ; ಪದವಿ-ಪುರಸ್ಕಾರ ಪಡೆದಿದ್ದಾಳೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಳ ಸಾಧನೆ ದಾಖಲೆಯಾಗಿದೆ. ಎಲ್ಲ ಬಗೆಯ ದಾಖಲೆಗಳನ್ನು ನಿವಾಳಿಸಿ ಒಗೆಯುವಂತೆ ಅವಳು ನೆಟ್ಟು ಬೆಳೆಸಿದ ಸಾಲುಮರಗಳು ಇಂದಿಗೂ ನೆಲಮುಗಿಲುಗಳನ್ನು ಬೆಸೆಯುವ ಹಸಿರುಗುಡಿಯಾಗಿವೆ... ಏನು ಬೇಕು? ಏನು ಇರಲಿ? ಈ ವಾಸ್ತವಗಳು ಅವಳನ್ನು ಕಾಡಲಿಲ್ಲ, ಕಂಗೆಡಿಸಲಿಲ್ಲ. 
ತಿಮ್ಮಕ್ಕನನ್ನು ‘ಭೂದೇವಿ’ಯನ್ನಾಗಿ ಮಾಡಿಬಿಡುವ ಪವಾಡವೂ ಈ ಕವಿತೆಯಲ್ಲಿದೆ. ಈ ಭೂದೇವಿಯೂ ‘ಬಿಸಿಲನುಂಡ’ವಳು; ‘ಬರಡು’ತನವೇ ಅವಳ ಬಡತನ. ತಿಮ್ಮಕ್ಕನಿಗೆ ಮಕ್ಕಳಿಲ್ಲ; ಭೂದೇವಿಗೆ ಮರಗಳಿಲ್ಲ. ಆದರೆ ಈ ‘ದುಕ್ಕ’ ಅವರನ್ನು ಕಾಡದು; ಏಕೆಂದರೆ ಅವರ ಕನಸುಗಳಿಗೆ ‘ಸುಕ್ಕು’ಗಳೇ ಇಲ್ಲ. ಸುಕ್ಕು ಮುಪ್ಪಿನ ಗುರುತು; ಸಾವಿನ ಮುನ್ನುಡಿ. ಇಬ್ಬರಿಗೂ ‘ಹರೆಯದ ಹಾಲು’ ಮೈತುಂಬಿರುವುದರಿಂದ ಮಕ್ಕಳ ಬಳಗ ಹಬ್ಬಿಸುವ ತಾಕತ್ತಿದೆ. ತಿಮ್ಮಕ್ಕನ ಬದುಕಿನ ವಿಚಿತ್ರವೆಂದರೆ, ಮನುಷ್ಯಜೀವಿಯಾಗಿ ಅವಳಿಗೆ ಮಕ್ಕಳಾಗುವುದೇ ಇಲ್ಲ. ತಾನು ತಾಯಿಯಾಗದೆ, ‘ಮರಗಳಲ್ಲ ಮಕ್ಕಳಿವರು’ ಎಂದುಕೊಂಡು ಮರಗಳನ್ನೇ ಬೆಳೆಸಿ ಭೂದೇವಿಯ ಮಡಿಲು ತುಂಬಿ ಅವಳಿಗೆ ಹಸಿರು ಗುಡಿಯ ಕಟ್ಟಿ, ಅವಳನ್ನೇ ‘ತಾಯಿ’ಯನ್ನಾಗಿ ಮಾಡುತ್ತಾಳೆ! 
ಸಸಿ ನೆಟ್ಟ ಮೇಲೆ ಅದಕ್ಕೆ ಬೇಕು ನೀರು, ಬೆಳಕು, ಗೊಬ್ಬರ; ಮತ್ತೆ ಬೇಲಿಯೂ ಬೇಕು. ತಾನು ನೆಟ್ಟ ಸಾಲು ಸಾಲು ಸಸಿಗಳಿಗೆ ಪ್ರತಿನಿತ್ಯ ನೀರೆರೆದು, ರಕ್ಷಿಸಿ, ಸಂರಕ್ಷಿಸಿ ಅವುಗಳನ್ನು ‘ಮರ’ಗಳನ್ನಾಗಿ ಮಾಡಿದ ತಾಯಿ ಸಾಲುಮರದ ತಿಮ್ಮಕ್ಕ. ಕಲ್ಲು-ಮಣ್ಣುಗಳ ‘ಸ್ಥಾವರ’ ಎಂದೋ ಬಿದ್ದು ಹೋಗುವಂಥದು; ಆದರೆ ಮರವಾಗಿ ಬೆಳೆಯುವ ಸಸಿ ಮತ್ತೆ ಸಾವಿರ ಸಸಿಗಳಾಗಿ, ‘ಜಂಗಮ’ವಾಗಿ ಸದಾ ಹಬ್ಬುತ್ತಲೇ ಇರುವಂಥದು. ತಿಮ್ಮಕ್ಕನಂಥವರದು ಆದಿ ಇದ್ದರೂ ಅಂತ್ಯವಿಲ್ಲದ ಹಾದಿ. ಆ ಹಾದಿಗೆ ಮರಣವಿಲ್ಲ; ಮುಪ್ಪೂ ಇಲ್ಲ.’ 

ಒಂದು ಸಾರ್ಥಕ ವೃಕ್ಷದ ವೃತ್ತಿಯ ಬದುಕು ಒಂದು ಅರ್ಥಪೂರ್ಣ ಪದ್ಯ ಬರೆಸಿ, ಆ ಪದ್ಯ ಒಂದು ಮೈದುಂಬಿದ ಸ್ಪಂದನ ಬರೆಸಿದೆ!  ‘ಕವಿತೆಯ ವಸ್ತು-ಕವಿತೆ-ಸ್ಪಂದನಗಳ’ ಈ ಸುಂದರ ಸಮಾಗಮ ಕೂಡ ಮನತಟ್ಟುವಂತಿದೆ. ಮೂವರು ಸೂಕ್ಷ್ಮಜೀವಿಗಳ ಸಾರ್ಥಕತೆಯ ಹಾದಿಗಳು ಆದಿ-ಅಂತ್ಯಗಳಲ್ಲಿ ಕೂಡಿಕೊಂಡಂತಿವೆ

ತಿಮ್ಮಕ್ಕನ ನಿಸ್ವಾರ್ಥದ ಮತ್ತೊಂದು ಮುಖವನ್ನು ಪ್ರಮೀಳಾ ಪಾಲನೇತ್ರ ತಮ್ಮ ‘ಅನನ್ಯ ಚೇತನ ಸಾಲು ಮರದ ತಿಮ್ಮಕ್ಕ’ ಪುಸ್ತಕದಲ್ಲಿ ಕಾಣಿಸುತ್ತಾರೆ: ‘ಸಸ್ಯವಿಜ್ಞಾನಿಯೊಬ್ಬರ ವರದಿಯಂತೆ ತಿಮ್ಮಕ್ಕ ಬೆಳೆದಿರುವ ಮರವೊಂದರ ಜೀವಿತದ ಬೆಲೆ ೧ ಕೋಟಿ ೭೫ ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಒಟ್ಟು ಎಲ್ಲ ಮರಗಳ ಬೆಲೆ ೪೯೭ ಕೋಟಿ ರೂಪಾಯಿ. ಇವುಗಳ ಮಹಾ ಒಡತಿಯಾಗಿದ್ದರೂ ಅದರಲ್ಲಿ ಬಿಡಿಗಾಸನ್ನೂ ಪಡೆಯದೆ ಅದನ್ನು ರಾಷ್ಟ್ರಕ್ಕೆ ಅರ್ಪಿಸಿರುವ ಮಹಾತ್ಯಾಗಜೀವಿ ತಿಮ್ಮಕ್ಕ.’ 

ಬಾಲ್ಯದ ತಬ್ಬಲಿತನ, ಅಸ್ಪೃಶ್ಯತೆಯ ಅವಮಾನ, ಸಂಬಂಧಿಕರ ಹಿಂಸೆ ಎಲ್ಲವನ್ನೂ ನುಂಗಿ, ಬಂಗ ಬಡತನಕ್ಕೆ ಅಂಜದೆ ಮರವಾಗಿ ಅರಳಿದ ಕನ್ನಡನಾಡಿನ ಈ ಅದ್ಭುತ ಮಹಿಳೆಯ ಬಗ್ಗೆ ಓದುತ್ತಾ ಓದುತ್ತಾ, ಇಂಗ್ಲಿಷ್ ಕವಿ ಜೇಮ್ಸ್ ಶೆರ್ಲಿಯ ‘ಡೆತ್ ದ ಲೆವೆಲರ್‍’ ಎಂಬ ಪ್ರಖ್ಯಾತ ಪದ್ಯದ ಕೊನೆಯ ಸಾಲುಗಳು ನೆನಪಾದವು:

…only the actions of the just 
smell sweet and blossom in their dust.  

ನನಗೆ ಪ್ರಿಯರಾದವರು ತೀರಿಕೊಂಡು ಎಷ್ಟೋ ವರ್ಷಗಳಾದ ಮೇಲೂ ಅವರ ವ್ಯಕಿತ್ವದ ಸುಗಂಧ ಸುಳಿದಾಗಲೆಲ್ಲ ಶೆರ್ಲಿಯ ಕವಿತೆಯ ಸಾಲು ಸುಳಿಯುತ್ತಲೇ ಇರುತ್ತದೆ. ಸಾಲುಮರದ ತಿಮ್ಮಕ್ಕನವರ ಮರಗಳ ನೆರಳು ಮತ್ತು ವೃಕ್ಷದ ಕಾಯಕ ಇಂಥ ಸುಗಂಧವನ್ನು ನನ್ನಂಥ ಸಾವಿರಾರು ಜನರಲ್ಲಿ ಹಬ್ಬಿಸುತ್ತಲೇ ಇರುತ್ತದೆ. ತಂತಮ್ಮ ಪುಟ್ಟ ಜಮೀನುಗಳಲ್ಲಿ ಸಸಿ ನೆಟ್ಟು, ಬೆಳೆ ಬೆಳೆದು ಕೊಯ್ಲು ಮಾಡಿ ಬದುಕಿನ ಅರ್ಥ, ಸಾರ್ಥಕತೆ ಪಡೆಯುವ ಕೋಟ್ಯಾಂತರ ಮಂದಿಯೂ ನಮ್ಮ ಸುತ್ತ ಇದ್ದಾರೆ. ತಂತಮ್ಮ ಕೆಲಸಗಳಲ್ಲಿ ಮುಳುಗುವ ಈ ಕಾಯಕ ನಮ್ಮನಮ್ಮ ಸೀಮಿತ ಬದುಕುಗಳಲ್ಲೇ ಹೀಗೆ ತೊಡಗುವ ಕಲೆಯನ್ನು ಕಲಿಯಲು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತದೆ.  


 



Latest Video


Nataraj Huliyar Official
YouTube Channel

SUBSCRIBE