ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕವಿಯದು ‘ಕಾರಯಿತ್ರಿ ಪ್ರತಿಭೆ’ ಹಾಗೂ ಸಹೃದಯನದು 'ಭಾವಯಿತ್ರಿ ಪ್ರತಿಭೆ’ ಎಂದು ವಿಭಾಗ ಮಾಡಿರುವ ರೀತಿ ನಿಮ್ಮಲ್ಲಿ ಹಲವರಿಗೆ ಗೊತ್ತಿರುತ್ತದೆ. ಇಂಥ ಕಟ್ಟುನಿಟ್ಟಿನ ವಿಭಾಗೀಕರಣ ಅಷ್ಟು ಸರಿಯಲ್ಲ ಎಂದು ಬಹಳ ವರ್ಷಗಳಿಂದ ಅನಿಸುತ್ತಲೇ ಇತ್ತು. ಓದುವುದು ಕೂಡ ಕಾರಯಿತ್ರಿ- ಅಂದರೆ ಕ್ರಿಯೇಟಿವ್- ಪ್ರತಿಭೆ-ಸೃಜನಶೀಲ ಪ್ರತಿಭೆ- ಎಂದೇ ನಂಬಿಕೊಂಡು ಬಂದ ನನ್ನಂಥವರು ಹಲವರಿರಬಹುದು.
ಈ ನಂಬಿಕೆ ಕೃತಿ ರಚನೆಯ ನಂತರ, ‘the author dies and the reader is born’ (ಕೃತಿಕಾರ-ಕೃತಿಕಾರ್ತಿ ಸಾಯುತ್ತಾರೆ; ಓದುಗ-ಓದುಗಿ ಹುಟ್ಟುತ್ತಾರೆ) ಎಂಬ ರೋಲಾ ಬಾರ್ತ್ ಮಾತು ಕೇಳಿದ ಮೇಲಂತೂ ಇನ್ನಷ್ಟು ಗಾಢವಾಗತೊಡಗಿತು. ‘ನೀನು ಬೆಳೆದರೆ ನಾನು ಬೆಳೆವೆ’ ಎಂಬ ಕುವೆಂಪು ಸಾಲಿನಲ್ಲಿ ಕೃತಿಯೊಂದು ಓದುಗ, ಓದುಗಿಗೆ ಮಾಡುವ ಬಿನ್ನಹ ಅಥವಾ ಅವರಿಗೆ ಹಾಕುವ ಅವ್ಯಕ್ತ ಸವಾಲ್ ಕೂಡ ಇದೆ ಎಂದು ನನಗನ್ನಿಸಿದ್ದು ಅನಂತರ. ‘ಓದು ಎನ್ನುವುದು ಅರ್ಥದ ನಿರಂತರ ವಿಸ್ತರಣೆ’ ಎಂಬ ಡೆರಿಡಾ ಮಾತು ಓದಿದ ಮೇಲಂತೂ ಪ್ರತಿ ಓದೂ ಅರ್ಥದ ನಿರಂತರ ವಿಸ್ತರಣೆ ಎಂಬ ನಂಬಿಕೆ ಗಾಢವಾಗಿಯೇ ಬೆಳೆಯಿತು.
ಈ ಥರದ ವಿಸ್ತರಣೆ ಕೂಡ ‘ಹೀಗೆ ಅರ್ಥ ವಿಸ್ತರಣೆ ಮಾಡಲೇಬೇಕು’ ಎಂಬ ಪ್ರಜ್ಞಾಪೂರ್ವಕವಾದ ಒತ್ತಾಯದಿಂದ ಆಗಬೇಕಿಲ್ಲ; ಈ ಅರ್ಥದ ವಿಸ್ತರಣೆಯನ್ನು ಒಂದು ವ್ರತದಂತೆ ಹೇರಿಕೊಂಡೋ ಅಥವಾ ಕೆಟ್ಟ ಹಟಕ್ಕೆ ಬಿದ್ದಂತೆಯೋ ‘ಹೊಸ ಅರ್ಥ ಸಾಧಿಸಲು’ ಮಾಡಿದ ಕಸರತ್ತಿನಂತೆ ನಡೆಸಬೇಕಿಲ್ಲ. ಹೀಗೆ ಮಾಡಲು ಹೋಗಿ ಪೋಲಂಕಿ ರಾಮಮೂರ್ತಿಯವರು ’ಸೀತಾಯಣ’ದಲ್ಲಿ ಎಷ್ಟೊಂದು ಓವರ್ರೀಡಿಂಗ್ ಮಾಡಿದ್ದರಲ್ಲವೇ ಎಂದು ಇವತ್ತೂ ಅನ್ನಿಸುತ್ತದೆ. ಎಲ್ಲ ವಾಚ್ಯಾರ್ಥಗಳಿಗೂ ಧ್ವನ್ಯಾರ್ಥವಿರಬಹುದು; ಆದರೆ ಸದಾ ಎಲ್ಲ ಮಾತುಗಳಿಗೂ ಎಲ್ಲ ಬಗೆಯ ಧ್ವನ್ಯಾರ್ಥಗಳನ್ನೂ ಆರೋಪಿಸುವುದು ಸರಿಯಾಗದು!
ಈ ಸಲ ಇಷ್ಟೆಲ್ಲ ಪೀಠಿಕೆ ಬರೆಯುವ ಲಹರಿಗೆ ಕರೆದೊಯ್ದವರು ಈ ಅಂಕಣ ಓದುವ ಗೆಳೆಯ ಗೆಳತಿಯರು. ಈ ಅಂಕಣ ಬರೆಯಲು ಶುರುಮಾಡಿದ ದಿನದಿಂದಲೂ ಗೆಳೆಯ, ಗೆಳತಿಯರ, ಓದುಗ ಓದುಗಿಯರ ಸೃಜನಶೀಲ ಪ್ರತಿಕ್ರಿಯೆಗಳು ಈ ಅಂಕಣದ ಹಲವು ವಸ್ತುಗಳನ್ನು ಬೆಳೆಸುತ್ತಲೇ ಇರುವ ವಿಸ್ಮಯವನ್ನು ನೋಡುತ್ತಾ ಅನುಭವಿಸುತ್ತಾ ಬಂದಿದ್ದೇನೆ. ಅವರಿವರ ಜೊತೆ ಓದುವ ಈ ಆಟ, ಡೆರಿಡಾ ಹೇಳಿದ ಅರ್ಥದ ನಿರಂತರ ವಿಸ್ತರಣೆ, ನನ್ನ ಹಲವು ಪ್ರಿಯವಾದ ತೊಡಗುವಿಕೆಗಳಲ್ಲಿ ಒಂದು; ಈ ಓದಿನ ಆಟದ ಖುಷಿಗೆ ಕಿ.ರಂ. ನಾಗರಾಜ್ ಡಿ. ಆರ್. ನಾಗರಾಜ್ ಥರದ ದೊಡ್ಡವರ ಸಂಗವೂ ಒಂದು ಪ್ರೇರಣೆ; ಹಾಗೆಯೇ ನನ್ನ ತರಗತಿಗಳಲ್ಲಿ ಎದುರಾದ ಸಾವಿರಾರು ವಿದ್ಯಾರ್ಥಿನಿ-ವಿದ್ಯಾರ್ಥಿಗಳು ಕೂಡ ಇಂಥ ಆಟವನ್ನು ಪ್ರೇರೇಪಿಸಿದ್ದಾರೆ. ಆ ಅನುಭವ ಈ ಅಂಕಣದಲ್ಲೂ ಮುಂದುವರಿದಿದೆ.
ಓದುವ ಆಟದ ಸೃಜನಶೀಲತೆ ಕೈಬಿಟ್ಟು ಕ್ಲಾಸ್ ರೂಮುಗಳು ಜಡವಾಗತೊಡಗುವ ಅನುಭವವನ್ನು ನಿಮ್ಮಲ್ಲನೇಕರು ಹಾದು ಬಂದಿರಬಹುದು ಅಥವಾ ಈಗಲೂ ಹಾದು ಬರುತ್ತಿರಲೂಬಹುದು. ಇಂಥ ಜಡತೆಯನ್ನು ಇಲ್ಲವಾಗಿಸಬಲ್ಲ ಕ್ರಿಯೇಟಿವ್ ಮಂದಿಯನ್ನೂ ನೀವು ಬಲ್ಲಿರಿ. ‘ಕೃತಿ ರಚನೆಯ ನಂತರ ಕೃತಿಕಾರ, ಕೃತಿಕಾರ್ತಿ ಸಾಯುತ್ತಾರೆ; ಓದುಗ, ಓದುಗಿ ಹುಟ್ಟುತ್ತಾರೆ’ ಎಂಬ ರೋಲಾ ಬಾರ್ತ್ ಮಾತು ಕೇಳದಿದ್ದವರು ಕೂಡ ಈ ಓದಿನ ಸ್ವಾಯತ್ತತೆಯ ಸ್ಪಿರಿಟ್ಟನ್ನು ಸಹಜವಾಗಿಯೇ ಚಲಾಯಿಸುತ್ತಲೇ ಇರುತ್ತಾರೆ.
ಹಿಂದಿನ ಅಂಕಣಗಳಲ್ಲಿ ಓದುಗ, ಓದುಗಿಯರ ವ್ಯಾಖ್ಯಾನ ಪ್ರತಿಭೆಯ ಬಗ್ಗೆ ಆಗಾಗ್ಗೆ ಬೆರಗಾಗಿ ಬರೆದಿರುವುದನ್ನು ನೀವು ಗಮನಿಸಿರಬಹುದು. ಕಳೆದ ವಾರ ಈ ಅಂಕಣದಲ್ಲಿ ಬರೆದ ಪಾಲೋ ಕೊಯ್ಲೋನ ಚಮಚದಲ್ಲಿನ ಎರಡು ಹನಿ ಎಣ್ಣೆಯ ಕತೆಯ ಬಗ್ಗೆ ಬಂದ ಕೆಲವು ವ್ಯಾಖ್ಯಾನಗಳು ವಿಶೇಷವಾಗಿದ್ದವು. ಅವುಗಳ ಸುತ್ತ ಕೆಲವು ಮಾತು:
‘ಆನಂದದ ನಿಗೂಢ ಒರತೆಗಳು’ ಲೇಖನ ಓದಿ ‘ಸುಮ್ಮನೆ ಖುಷಿಖುಷಿಯಾಗಿರಬೇಕಾದ ಅವಶ್ಯಕತೆ’ ಪ್ರೊಫೆಸರ್ ವತ್ಸಲಾಗೆ ಕಂಡದ್ದು ಕುತೂಹಲಕರ. ‘ಸುಖೀನಾಡುಗಳ ಸಮೀಕ್ಷೆ’ ಎಷ್ಟೇ ಯಾಂತ್ರಿಕವಾಗಿರಲಿ ಅಥವಾ ಪಶ್ಚಿಮದ ಆಟವಾಗಿರಲಿ, ಅದು ವತ್ಸಲಾಗೆ ‘ಪಕ್ಕದ ಭೂತಾನ್ ಹಲವು ಕೊರತೆಗಳ ನಡುವೆಯೂ ತೃಪ್ತ ದೇಶ ಎಂಬ ಸಮೀಕ್ಷೆಯೊಂದು ಕೆಲವರ್ಷಗಳ ಹಿಂದೆ ಬಹಳ ವೈರಲ್ ಆಗಿತ್ತು’ ಎಂಬುದನ್ನು ನೆನಪಿಸಿತು. ಪಾಲೋ ಹೇಳಿದ ಕತೆ ಕೇಳಿದ ವತ್ಸಲಾಗೆ, ಟಾಲ್ ಸ್ಟಾಯ್ ಬರೆದ ‘ಒಬ್ಬನಿಗೆ ಎಷ್ಟು ಭೂಮಿ ಬೇಕು?’ ನೆನಪಾಯಿತು.
ವತ್ಸಲಾ ಉಲ್ಲೇಖ ’ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್?’ ಎಂಬ ಟಾಲ್ಸ್ಟಾಯ್ ನ ಎಲ್ಲ ಕಾಲದ ಶ್ರೇಷ್ಠ ಕತೆ ೧೯೪೭ರ ಸುಮಾರಿಗೆ ಕೊನಗವಳ್ಳಿಯ ಹುಡುಗ ಲಂಕೇಶಪ್ಪನಿಗೆ ಸಿಕ್ಕ ಗಳಿಗೆಗೆ ಕನೆಕ್ಟಾಯಿತು! ಆ ಹುಡುಗನಿಗೆ ಆ ಕತೆಯ ಕನ್ನಡಾನುವಾದ ಅಲ್ಲಿನ ವಯಸ್ಕರ ಶಿಕ್ಷಣ ಶಾಲೆಯಲ್ಲಿ ಸಿಕ್ಕಿತ್ತು. ಆಗ ಪಿ. ಲಂಕೇಶ್ ಇನ್ನೂ ಲಂಕೇಶಪ್ಪ ಆಗಿದ್ದರು; ಹೆಚ್ಚುಕಡಿಮೆ ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ಯ ಉಮಾಪತಿಯಂತೆ ಶಾಣ್ಯಾ ಹಾಗೂ ಗೊಂದಲಗಳ ಹುಡುಗನಾಗಿದ್ದರು ಎಂದು ಅವರ ‘ಹುಳಿಮಾವಿನ ಮರ’ ಆತ್ಮಕತೆ ಸೂಚಿಸುತ್ತದೆ.
ಈ ಮಾತು ಬರೆಯುವಾಗ ಇದ್ದಕ್ಕಿದ್ದಂತೆ ಹೀಗನ್ನಿಸಿತು: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಿಸಿದ ಈ ಕತೆಯ ಓದು ಹುಡುಗ ಲಂಕೇಶನಲ್ಲಿ ಹುದುಗಿದ್ದ ಕತೆಗಾರನನ್ನು ಹೊರತಂದಿರಬಹುದು. ಅಂದರೆ, ಒಂದು ಕತೆಯ ಆಕಸ್ಮಿಕ ಓದು ಕೊನಗವಳ್ಳಿಯ ಹದಿಹರೆಯದ ಹುಡುಗನ ಸೃಜನಶೀಲತೆಯ ಉಕ್ಕುವಿಕೆಗೆ, ಸ್ಫೋಟಕ್ಕೆ ಕಾರಣವಾಗಿರಬಹುದಾದದ್ದು ಹೀಗೆ. ಅಥವಾ ಬಾಡದ ಕನಕದಾಸ ಎಲ್ಲೋ ಕೇಳಿಸಿಕೊಂಡ ಪುರಾಣ ಕತೆಗಳು ಅನನ್ಯವಾದ ಶೃಂಗಾರ ರಸ ಉಕ್ಕಿ ಹರಿಯುವ ‘ಮೋಹನ ತರಂಗಿಣಿ’ ಎಂಬ ಮಹಾಕಾವ್ಯವಾಗುವುದು ಪ್ರಾಯಶಃ ಹೀಗೆ; ಅಥವಾ, ಗದುಗಿನ ನಾರಣಪ್ಪನ ಕಿವಿಗೆ ಬಿದ್ದ ವ್ಯಾಸಭಾರತ ಕುಮಾರವ್ಯಾಸನ ಗದುಗಿನ ಭಾರತವಾಗುವುದು ಹೀಗೆ; ಅಥವಾ, ಗ್ರೀಕ್ ನಾಡಿನ ಸಮೂಹ ಜ್ಞಾನವನ್ನೆಲ್ಲ ಹೊತ್ತು ತಂದ ಹತ್ತಾರು ಕತೆಗಳ ತೊರೆ, ನದಿ, ಹೊಳೆ ಹರಿದು ಬಂದು ಹೋಮರ್ನ ’ಇಲಿಯಡ್’ ಮಹಾಕಾವ್ಯವಾಗುವುದು ಹೀಗೆ. ಹೋಮರನ ’ಇಲಿಯಡ್’ ‘ಒಡಿಸ್ಸಿ’ ಕಾವ್ಯಗಳ ಇಪ್ಪತ್ತನೆಯ ಶತಮಾನದ ಓದು ಜೇಮ್ಸ್ ಜಾಯ್ಸನ ‘ಯೂಲಿಸಿಸ್’ ಎಂಬ ಮಹಾನ್ ನವ್ಯ ಕಾದಂಬರಿ ಬರೆಸುವುದು ಹೀಗೆ!
ಇವೆಲ್ಲದರ ಹಿಂದೆ ’ಓದು’ ಅಥವಾ ’ರೀಡಿಂಗ್’ ಎನ್ನುವ ಭಾವಯಿತ್ರಿ ಪ್ರತಿಭೆ ಇದ್ದೇ ಇದೆ. ಆದರೆ ಭಾವಯಿತ್ರೀ ಪ್ರತಿಭೆಯ ಸೃಜನಶೀಲ ಓದು ಕಾರಯಿತ್ರೀ ಪ್ರತಿಭೆಯ ಮೂಲಗಳಲ್ಲೊಂದು ಎಂದರೆ ಯಾರೂ ಅಚ್ಚರಿಪಡಬೇಕಾಗಿಲ್ಲ.
ಕಳೆದ ಸಲದ ಅಂಕಣದಲ್ಲಿ ಪಾಲೋ ಕೊಯ್ಲೋ ಕತೆಯನ್ನು ಅವರವರ ಭಾವಕ್ಕೆ ಅವರವರ ಅರ್ಥಕ್ಕೆ ಬಿಟ್ಟಿದ್ದೆನಲ್ಲ, ಆ ಕತೆಯ ಮೊದಲ ಓದಿನಲ್ಲಿ ಹಲವರು ಕೊಟ್ಟ ಆ ಕ್ಷಣದ ಹೊಸ ಓದುಗಳನ್ನು ಕೆಳಗೆ ಕೊಟ್ಟಿರುವೆ:
ಪಾಲೋ ಕತೆ ಓದಿದ ಗೆಳೆಯ ಜೆ. ಶಾಮರಾವ್ ಬರೆದರು: ‘ಆನಂದದ ನಿಗೂಢ ಒರತೆಗಳು ನೂರೋ ಸಾವಿರವೋ ಇದ್ದಾವು. ಆದರೂ ಈ ಕತೆ, ‘ಎಣ್ಣೆ ಚೆಲ್ಲುವ ಕುರಿತು ಕಾಳಜಿ ಬೇಡ, ಸುತ್ತಲಿನ ಸೊಬಗು ನೋಡಿ ಆನಂದಿಸು’ ಎಂದಂತಿದೆ!’
ಕನ್ನಡ ಅಧ್ಯಾಪಕಿ ಕುಸುಮ ವಡ್ಡಾರಾಧನೆಯ ಕತೆಯ ನಂದಿಮಿತ್ರನನ್ನು ನೆನಪಿಸಿದರು: ‘ವಡ್ಡಾರಾಧನೆ’ಯಲ್ಲಿ ಬರುವ ನಂದಿಮಿತ್ರ ಎಂಬ ಮುನಿಯ ಕಥೆ ವಿಶೇಷವಾಗಿದೆ. ಊಟದ ಸವಿಯಲ್ಲಿ ಸುಖ ಕಾಣುವ ಅವನು ಅದಕ್ಕಾಗಿಯೇ ತಪಸ್ವಿಯಾಗುತ್ತಾನೆ. ನಂತರದಲ್ಲಿ ಆ ಊಟದ ಆಸೆಯನ್ನು ಮೀರುವಲ್ಲಿ ಸುಖ ಅನುಭವಿಸುತ್ತಾನೆ. ಅಂದರೆ, ಸುಖ ಎಂಬ ಕಲ್ಪನೆಯೇ ಕ್ಷಣಿಕವೋ? ಕಟ್ಟುಕಥೆಯೋ? ಭ್ರಮೆಯೋ? ಅಥವಾ ನಮ್ಮ ನಂಬಿಕೆಯೋ ಎನಿಸಿತು. ಭೋಗಸಂಸ್ಕೃತಿ ಎಂಬುದರ ನಿಜ ಅರ್ಥವನ್ನು ಇನ್ನೂ ತಿಳಿಯಬೇಕಿದೆ .’
ಲೇಖಕಿ, ಪ್ರೊಫೆಸರ್ ಶಾಕಿರ ಖಾನುಂ ಕೊಟ್ಟ ವ್ಯಾಖ್ಯಾನ: ‘ಆನಂದದ ಗುಟ್ಟು ಏನು ಎಂದು ತಿಳಿಯಲು ಹೋದ ತರುಣನಿಗೆ ಸಂತ-ಜ್ಞಾನಿ ಎರಡು ಹನಿ ಎಣ್ಣೆಯ ಚಮಚ ಕೊಟ್ಟು, ಅದನ್ನು ಚೆಲ್ಲದಂತೆ ಅರಮನೆ ಸುತ್ತಾಡಿ ಬರಲು ಹೇಳುತ್ತಾನೆ. ಮೊದಲು ತರುಣ ಎಣ್ಣೆಯ ಚಿಂತೆಯಲ್ಲೇ ಅರಮನೆಯ ಸೊಬಗನ್ನು ನೋಡದೆ ಹಿಂತಿರುಗುತ್ತಾನೆ. ಮತ್ತೆ ಎಣ್ಣೆಯ ಚಮಚ ಕೊಟ್ಟು ಅರಮನೆ ಸುತ್ತಾಡಲು ಹೇಳಿದಾಗ, ತರುಣ ಅರಮನೆಯ ಸೊಬಗನ್ನು ನೋಡಿ, ಎಣ್ಣೆ ಚೆಲ್ಲಿದ್ದನ್ನು ಗಮನಿಸಿ, ಆನಂದದ ಗುಟ್ಟನ್ನು ಅರಿಯುತ್ತಾನೆ. ಅಂದರೆ, ಸುಖ-ದುಃಖಗಳನ್ನು ಸಮತೂಕದಲ್ಲಿ ಇರಿಸಿಕೊಂಡು ಜೀವನವನ್ನು ಆನಂದಿಸುವುದು ಎಂದರ್ಥ- ವಿಷ್ಣು ನಾರದನ ಭಕ್ತಿಯನ್ನು ರೈತನ ಭಕ್ತಿಗೆ ಹೋಲಿಸಿದಂತೆ.’
ಪಾಲೋ ಕೊಯ್ಲೋ ಕತೆ ಓದಿದ ಲೇಖಕ ಹಳೆಮನೆ ರಾಜಶೇಖರ ಅವರಿಗೆ, ‘ತತ್ವಪದಗಳಲ್ಲಿ ವ್ಯಕ್ತವಾದ ಆನಂದದ ಸ್ಥಿತಿ ನೆನಪಾಯಿತು. ಲೋಕದ ಸೊಗಸು ಮತ್ತು ಕೇಡಿನ ಜೊತೆ ಅಂತರಂಗದ ತನ್ಮಯತೆಯಿಂದ ಅನುಸಂಧಾನಗೊಳ್ಳುತ್ತಲೇ ಇರುವುದು ಆನಂದದ ಒಂದು ಒರತೆಯಾಗುತ್ತದೆ’ ಎನ್ನಿಸಿತು.
ಪಾಲೋ ಕೊಯ್ಲೋನ ‘ಆಲ್ಕೆಮಿಸ್ಟ್’ ಕಾದಂಬರಿಯನ್ನು ಓದಿ ಬಹುವಾಗಿ ಮೆಚ್ಚಿರುವ ಪದ್ಮಾಕ್ಷಿಯವರು ಆ ಕಾದಂಬರಿಯ ಹಲವು ಸಾಲುಗಳನ್ನು ಮೆಲುಕು ಹಾಕುತ್ತಾ ಸದಾ ಕಾಡುವ ಸಾಲೊಂದನ್ನು ಬರೆದರು: ‘ರಾತ್ರಿಯ ಕಗ್ಗತ್ತಲ ಗಂಟೆ ಇನ್ನೇನು ಬೆಳಗು ಮೂಡುವ ಮುನ್ನ ಬರುತ್ತದೆ.’ ಈ ಸಾಲಿನ ನಿರಂತರ ಆಶಾವಾದ (ಅಥವಾ ವಿಚಿತ್ರ ವಿಷಾದ?) ನನ್ನನ್ನು ಚಣ ಹಿಡಿದು ನಿಲ್ಲಿಸಿತು.
ಕವಿ ರಮೇಶ್ ಅರೋಲಿಗೆ ಜಪಾನಿನ ಆಚರಣೆಯೊಂದು ನೆನಪಾಯಿತು: ‘ಅಲ್ಲಿ ಜನ ಪ್ರಾರ್ಥನಾ ಮಂದಿರಕ್ಕೆ ಹೋದಾಗ ಅಲ್ಲಿ ಖಾಲಿ ಮಡಕೆಯಲ್ಲಿ ತಮ್ಮ ಬಯಕೆಯನ್ನು ಉಸುರುತ್ತಾರೆ ಹಾಗೂ ಆಮೇಲೆ ಮುಚ್ಚಳ ಮುಚ್ಚಿ ಇಡುತ್ತಾರೆ.’
ಈ ಅಂಕಣ ಬಾನೇರುವಾಗ ಗುರು ಜಗಳೂರು ಬರೆದರು: ‘ಕೆ.ಎಸ್.ನ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಎನ್ನುವುದರ ಅರ್ಥ ಇದೇ ಅಲ್ಲವೇ?’
ಈ ಬಗೆಯ ಓದಿನ ಆಟ ನಮ್ಮೆಲ್ಲರನ್ನೂ ಲವಲವಿಕೆಯಲ್ಲಿಟ್ಟಿರಲಿ!