Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
21 Jul 2024 ಪದಾರ್ಥವನರಿಯಬಹುದೆ?

ಬರಬರುತ್ತಾ ಒಂದು ವ್ಯಕ್ತಿತ್ವದಲ್ಲಿ ಒಂದು ಗುಣವೇ ಎದ್ದು ಕಾಣತೊಡಗಿದರೆ ಏನಾಗುತ್ತದೆ? 

ಈ ಪ್ರಶ್ನೆ ಹುಟ್ಟಿದ್ದು ಹಿರಿಯ ಗೆಳೆಯರಂತಿದ್ದ ಕವಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಯಾಕೋ ನೆನಪಾದಾಗ. ಮೊದಲು ಸಿಟ್ಟಿನ ಕವಿ ಎನ್ನಿಸಿಕೊಂಡಿದ್ದ ಸಿದ್ದಲಿಂಗಯ್ಯ ಸಂಜೆಯ ಗೋಷ್ಠಿಗಳಲ್ಲಿ ತಮಾಷೆಯ ಪ್ರಸಂಗಗಳನ್ನು ಹೇಳುವ ವ್ಯಕ್ತಿಯಾದರು. ಸಭೆಗಳಲ್ಲೂ ಪಂಚಿಂಗ್ ಜೋಕುಗಳನ್ನು ಪ್ರಯೋಗಿಸತೊಡಗಿದರು. ಅವರ ಈ ವ್ಯಕ್ತಿತ್ವವೇ ಮುಂಚೂಣಿಗೆ ಬಂದು ಅವರ ಕವಿ ವ್ಯಕ್ತಿತ್ವ, ಸ್ಕಾಲರ್ ವ್ಯಕ್ತಿತ್ವ, ವಿಧಾನ ಪರಿಷತ್ತಿನಲ್ಲಿ ಮುಖ್ಯ ಪ್ರಶ್ನೆಗಳನ್ನೆತ್ತುತ್ತಿದ್ದ ದಿಟ್ಟ ವ್ಯಕ್ತಿತ್ವ ಇವೆಲ್ಲ ಹಿನ್ನೆಲೆಗೆ ಸರಿಯತೊಡಗಿದವು; ಎಲ್ಲರೂ 'ಕವಿಗಳು’ ಎಂದು ಕರೆಯುತ್ತಿದ್ದ ಕವಿ ವ್ಯಕ್ತಿತ್ವವೂ ಮಬ್ಬಾಗತೊಡಗಿತು.

ಸಿದ್ಧಲಿಂಗಯ್ಯನವರು ಹಲ ಬಗೆಯ ಪುಸ್ತಕಗಳನ್ನು ಬೆನ್ನು ಹತ್ತುತ್ತಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಒಂದು ಸಂಜೆ ಭಾಷಣ ಮುಗಿಸಿ ನನ್ನ ಜೊತೆ ಹೊರಟ ಅವರು ವೇದಾಂತ ಬುಕ್ ಹೌಸ್ ಹೊಕ್ಕರು. ಅಲ್ಲಿ ಕೆಲವು ಪುಸ್ತಕಗಳನ್ನು ಕೊಂಡರು. ಉಳಿದ ಹಣದಲ್ಲಿ ಸಂಜೆ ಪುಟ್ಟ ಪಾರ್ಟಿ. ಕವಿಗಳ ವೇದಾಂತ ಪುಸ್ತಕ ಮಳಿಗೆಯ ಭೇಟಿ ನನ್ನ ಮನಸ್ಸಿನಲ್ಲಿ ಸುತ್ತರಗಾಣ ಹೊಡೆಯುತ್ತಿತ್ತು! ಮಾತಿನ ನಡುವೆ ಅವರೇ ಹೇಳಿದರು: 'ಇವರೆಲ್ಲ ಏನು ಬರೀತಾರೆ… ಇವೆಲ್ಲ ಗೊತ್ತಿರಬೇಕು. ಅದಕ್ಕೇ ಅಲ್ಲಿಗೆ ಹೋಗ್ತಿರ್‍ತೀನಿ.’ 

ಇಂಥ ಪುಸ್ತಕಗಳು ಯಜಮಾನಿಕೆಯ ಸಂಕಥನ ಸೃಷ್ಟಿಸುತ್ತಿದ್ದುದನ್ನು ಅರಿತಿದ್ದ ಅಂಬೇಡ್ಕರ್ ಇವನ್ನು ಮೂಲ ಸಂಸ್ಕೃತದಲ್ಲೇ ಓದಿದ್ದರು. ಈ ಮಾದರಿ ಯಾವುದೇ ಅಕಡೆಮಿಕ್ ಸಂಶೋಧನೆ ಮಾಡುವವರಿಗೆ ಮುಖ್ಯ ಪಾಠವಾಗಬಲ್ಲದು: ಮೂಲ ಪಠ್ಯಗಳನ್ನು ನಿಕಟವಾಗಿ ಓದಿದರೆ ಮಾತ್ರ ಹೊಸತೇನಾದರೂ ಕಾಣುತ್ತದೆ.

ಸಿದ್ಧಲಿಂಗಯ್ಯ ಹಲಬಗೆಯ ಪುಸ್ತಕಗಳನ್ನು ಓದುತ್ತಿದ್ದರು: ಬುದ್ಧಿಸಂ, ಅಂಬೇಡ್ಕರ್ ಕುರಿತ ಹತ್ತಾರು ಪುಸ್ತಕಗಳನ್ನು ಓದಿದ್ದರು. ಅಲ್ಲಮ ಮತ್ತು ಬೌದ್ಧರ ನಡುವಣ ಜಗಳದ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದರು. ಲಂಕೇಶರ ಮಾತಿನಂತೆ ಗಾಂಧೀಜಿಯವರ 'ಹರಿಜನ್’ ಪತ್ರಿಕೆಯ ಬರಹಗಳನ್ನೆಲ್ಲ ಓದಿದ್ದರು. ಅವರು ಇವೆಲ್ಲ ವಿಚಾರಗಳನ್ನೂ ಯಾಕೆ ಸಂಭಾಷಣೆಯಲ್ಲಿ, ಭಾಷಣದಲ್ಲಿ ತರುವುದಿಲ್ಲ ಎಂದು ವಿಸ್ಮಯವಾಗುತ್ತಿತ್ತು. 

ಎಲಿನಾರ್ ಝೆಲಿಯಟ್ ಬರೆದ 'ಫ್ರಂ ಅನ್ ಟಚಬಲ್ ಟು ದಲಿತ್’ ಪುಸ್ತಕದ ಬಗ್ಗೆ ಮೊದಲು ನನಗೆ ಹೇಳಿದವರು ಅವರೇ. ಎಲ್ಲೋ ಆ ಪುಸ್ತಕದ ವಿವರಗಳನ್ನು ಓದಿದ್ದ ಅವರು ಹೇಳಿದ್ದು ಕುತೂಹಲಕರವಾಗಿತ್ತು:

ಒಬ್ಬ 'ಅಸ್ಪೃಶ್ಯ’ನು 'ದಲಿತ’ನಾಗುವ ಪ್ರಕ್ರಿಯೆ ಎಂದರೆ, ಪ್ರಜ್ಞಾಪೂರ್ವಕವಾಗಿ ಸಿಟ್ಟಿನ, ಹೊಸ ಸ್ವಾಭಿಮಾನದ ವ್ಯಕ್ತಿತ್ವವನ್ನು ಪ್ರಧಾನವಾಗಿ ಗಳಿಸಿಕೊಳ್ಳುವುದು ಎಂಬ ಆ ಪುಸ್ತಕದ ಒಂದು ಗ್ರಹಿಕೆಯನ್ನು ಸಿದ್ಧಲಿಂಗಯ್ಯ ವಿವರಿಸಿದರು. ಎಲಿನಾರ್ ಝೆಲಿಯಟ್ ಪುಸ್ತಕ ಈ ಅಂಶವನ್ನು ದಲಿತ ಸಾಹಿತ್ಯ, ಚಳುವಳಿ ಎಲ್ಲದರಲ್ಲೂ ಕಂಡುಕೊಳ್ಳುತ್ತದೆ.

ಅವತ್ತು 'ಅನ್‌ಟಚಬಲ್ಸ್' ಎಂಬ ಇಂಗ್ಲಿಷ್ ಸಿನಿಮಾವನ್ನೂ ಕವಿಗಳು ನೆನಸಿಕೊಂಡರು. ಅದಕ್ಕೂ ನಾವು ಚರ್ಚಿಸುವ 'ಅನ್‌ಟಚಬಲಿಟಿ’ಗೂ ಯಾವ ಸಂಬಂಧವೂ ಇರಲಿಲ್ಲ. ಇಂಗ್ಲಿಷ್ ಸಿನಿಮಾದ ಟೈಟಲ್ಲನ್ನು 'ಅಸ್ಪೃಶ್ಯ’ ಪದಕ್ಕೆ ಕನೆಕ್ಟ್ ಮಾಡುತ್ತಾ ಸಿದ್ಧಲಿಂಗಯ್ಯ ಹೇಳಿದರು: 'ಇದು ಮುಟ್ಟಬಾರದ ವ್ಯಕ್ತಿಯೊಬ್ಬ ಯಾರೂ ಸುಲಭವಾಗಿ ಮುಟ್ಟಲಾಗದ ವ್ಯಕ್ತಿಯಾಗುವ ರೀತಿ! ಅಂದರೆ, ಒಂದು ಕಾಲಕ್ಕೆ ದೈನ್ಯದ ವ್ಯಕ್ತಿತ್ವ ಪಡೆದಿದ್ದ ವ್ಯಕ್ತಿಯೊಬ್ಬ ಹೊಸ ವಿದ್ಯಾಭ್ಯಾಸ ಪಡೆದು, ವಿಮೋಚನೆಗೊಂಡು, ಸಂಘಟಿತನಾಗಿ, ಹೋರಾಡುತ್ತಾ, 'ಎಲ್ಲಿ! ಟಚ್ ಮಾಡ್ ನೋಡಿ' ಎಂದು ಸವಾಲೆಸೆಯುವ ವ್ಯಕ್ತಿತ್ವವನ್ನು ಪಡೆಯುತ್ತಾನೆ.’

೧೯೭೨ರಲ್ಲಾಗಲೇ 'ದಲಿತ’ ಎಂಬ ಪದಕ್ಕೆ ಆತ್ಮಗೌರವ, ಸ್ವಾಭಿಮಾನ, ಪ್ರತಿಭಟನೆ ಮುಂತಾದ ಕ್ರಾಂತಿಕಾರಕ ಅರ್ಥಗಳನ್ನು ಮಹಾರಾಷ್ಟ್ರದ 'ದಲಿತ್ ಪ್ಯಾಂಥರ್‍ಸ್’ ಪ್ರತಿಪಾದಿಸಿದ್ದರು. ಅಮೆರಿಕದ ಆಫ್ರೋ-ಅಮೆರಿಕನ್ ಹೋರಾಟಗಾರರು ತಮ್ಮನ್ನು ತಾವು 'ಬ್ಲ್ಯಾಕ್ ಪ್ಯಾಂಥರ್‍ಸ್’ (ಕಪ್ಪು ಚಿರತೆಗಳು) ಎಂದು ಬಣ್ಣಿಸಿಕೊಂಡಿದ್ದರು. ಯಾವುದನ್ನು ಬಿಳಿಯರು 'ಕಪ್ಪು’ ಎಂದು ಹೀಗಳೆದಿದ್ದರೋ, ಅದನ್ನೇ ಪಾಸಿಟಿವ್ ಆಗಿ 'ಬ್ಲ್ಯಾಕ್’ ಪ್ಯಾಂಥರ್‍ಸ್ ಚಳುವಳಿ ಶುರು ಮಾಡಿದ್ದರು. 'ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಘೋಷಣೆಯನ್ನೂ ಕೊಟ್ಟರು. ದಲಿತ್ ಪ್ಯಾಂಥರ್‍ಸ್ ಈ ಹಾದಿಯಲ್ಲಿ ಮುಂದುವರಿದು, 'ದಲಿತ’ ಪದವನ್ನು ಸ್ವಾಭಿಮಾನದ ಪದವನ್ನಾಗಿ ಮಾಡಿತು. ದಲಿತ ಕಾವ್ಯದ, ದಲಿತ ಸಾಹಿತ್ಯದ ಆರಂಭ ಘಟ್ಟವನ್ನೂ ಉದ್ಘಾಟಿಸಿತು.

ಈಚೆಗೆ ವಿಧಾನಸಭೆಯಲ್ಲಿ 'ದಲಿತ’ ಪದದ ಬಗೆಗಿನ ಚರ್ಚೆ ಕೇಳಿಸಿಕೊಂಡಾಗ 'ದಲಿತ’ ಪದದ  ಸುದೀರ್ಘ ನಡಿಗೆ ನೆನಪಾಯಿತು. 

ದಲಿತ ಪದವನ್ನು ಮೊದಲು ಬಳಸಿದವರು ಜ್ಯೋತಿಬಾ ಫುಲೆ ಎನ್ನುತ್ತಾರೆ. ಅಂಬೇಡ್ಕರ್ ಕುರಿತು ಅಶೋಕ್ ಗೋಪಾಲ್ ಬರೆದ ಜೀವನ ಚರಿತ್ರೆ 'ಎ ಪಾರ್ಟ್ ಅಪಾರ್ಟ್’ನಲ್ಲಿ 'ದಲಿತ’ ಎಂಬ ಪದ ಸಾವಿತ್ರಿಬಾಯಿ ಫುಲೆ ೧೮೫೪ರಲ್ಲಿ ಬರೆದ 'ಕಾವ್ಯಫುಲೆ’ (ಹೂ ಕವಿತೆಗಳು) ಕವನ ಸಂಕಲನದಲ್ಲಿ ಮೊದಲು ಸಾಹಿತ್ಯಕವಾಗಿ ಕಾಣಿಸಿಕೊಂಡಿತು’ ಎಂಬ ದಾಖಲೆಯಿದೆ.

'ದಲಿತ’ ಪದ ಕುರಿತು ಎಲಿನಾರ್ ಝೆಲಿಯಟ್, ಆನಂದ್ ತೇಳ್‌ತುಂಬ್ಡೆ, ಅಶೋಕ್ ಗೋಪಾಲ್ ಪುಸ್ತಕಗಳಿಂದ ಕೆಲವು ಗ್ರಹಿಕೆಗಳು: 

ಆರಂಭದಲ್ಲಿ 'ಅನ್‌ಟಚಬಲ್ಸ್’ ಪದವನ್ನು ಬಳಸುತ್ತಿದ್ದ ಬಾಬಾಸಾಹೇಬರಿಗೆ ಮುಂದೆ ಬ್ರಿಟಿಷರು ಬಳಸುತ್ತಿದ್ದ 'ಡಿಪ್ರೆಸ್ಡ್ ಕ್ಲಾಸಸ್’ ಎಂಬ ಪದ ಸರಿಯಾಗಿ ಕಂಡಿತು. ನಂತರ ೧೯೨೪ರಲ್ಲಿ'ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದ ಕಾಲಕ್ಕೆ 'ಬಹಿಷ್ಕೃತ’ ಪದವನ್ನು ಬಳಸಿದರು. 'ಬಹಿಷ್ಕೃತ್ ಭಾರತ್’ ಪತ್ರಿಕೆಯ ಒಂದು ಲೇಖನದಲ್ಲಿ'ದಲಿತ’ ಪದವನ್ನು ಅಲ್ಲಲ್ಲಿ ಬಳಸಿದರು. ಸಾಮಾಜಿಕ ಶ್ರೇಣಿಯಲ್ಲಿ ನಡೆಯುತ್ತಿದ್ದ ದಮನ, ತುಳಿತವನ್ನು ಚರ್ಚಿಸುವಾಗ 'ಅನ್‌ಟಚಬಲ್ಸ್’ ಪದ ಬಳಸಿದರು. ಸರ್ಕಾರಿ ಕಾರ್ಯಕ್ರಮಗಳು, ಮೀಸಲಾತಿಗಳ ಸಂದರ್ಭದಲ್ಲಿ 'ಪರಿಶಿಷ್ಟ ಜಾತಿ’ಯನ್ನು ಬಳಸಿದರು.  

ಮೊದಲು 'ಸಪ್ರೆಸ್ಡ್ ಕ್ಲಾಸಸ್’ ಪದಗುಚ್ಛ ಬಳಸಿದ್ದ ಗಾಂಧೀಜಿ ಮುಂದೆ 'ಹರಿಜನ್’ ಎಂಬ ಪದ ಬಳಸಿದರು. 'ಹರಿಜನ್’ ಪದವನ್ನು ಮೊದಲು ಬಳಸಿದವರು ಗಾಂಧೀಜಿಯಲ್ಲ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಗಾಂಧೀಜಿ ಸಂಪಾದಿಸುತ್ತಿದ್ದ 'ನವಜೀವನ್’ ಪತ್ರಿಕೆಯ ಓದುಗರೊಬ್ಬರು ೧೯೩೧ರಲ್ಲಿ ಗಾಂಧೀಜಿಗೆ ಪತ್ರ ಬರೆದರು: 'ಅಂತ್ಯಜ’, 'ಅಸ್ಪೃಶ್ಯ’ ಮುಂತಾದ ಪದಗಳಿಂದ ನಮಗೆ ನೋವಾಗುತ್ತದೆ. ಹದಿನೈದನೇ ಶತಮಾನದ ಗುಜರಾತಿ ಕವಿ ನರಸಿಂಹ ಮೆಹ್ತಾ ತಮ್ಮ ಕವಿತೆಯೊಂದರಲ್ಲಿ ನೊಂದ ಸಮುದಾಯಗಳ ಜನರನ್ನು 'ಹರಿಜನ’ ಎಂದಿದ್ದಾರೆ. ನೀವೂ ಆ ಹೆಸರನ್ನು ಬಳಸಬಹುದು.’ 

೧೯೩೨ರಿಂದೀಚೆಗೆ ಗಾಂಧೀಜಿ 'ಹರಿಜನ’ ಪದ ಬಳಸಿದರು; ಇದರಿಂದ ಸವರ್ಣೀಯರ ಧಾರ್ಮಿಕ ಭಾವನೆ ಉದ್ದೀಪನಗೊಂಡು, ಅಸ್ಪೃಶ್ಯತೆಯ ಆಚರಣೆಯನ್ನು ಕೈಬಿಡುತ್ತಾರೆ ಎಂದು ನಂಬಿದ್ದರು. ಆದರೆ ಜಡ ಮನಸ್ಸು ಬದಲಾಗಲಿಲ್ಲ. ಈ ಪದವನ್ನು ಅಂಬೇಡ್ಕರ್ ಹಾಗೂ ಎಚ್ಚೆತ್ತ ದಲಿತರು ಒಪ್ಪಲಿಲ್ಲ.

೧೯೭೨ರಲ್ಲಿ ದಲಿತ್ ಪ್ಯಾಂಥರ್‍ಸ್ ಹುಟ್ಟಿದ ನಂತರ ದೇಶಾದ್ಯಂತ ಅಂಬೇಡ್ಕರ್ ವಾದಿಗಳು 'ಎಚ್ಚೆತ್ತ’ 'ಸ್ವಾಭಿಮಾನ’ದ, 'ವಿಮೋಚನೆ’ಗೊಂಡ’, 'ಹಕ್ಕುಗಳಿಗಾಗಿ ಹೋರಾಡುವ’ ಎಂಬ ಪಾಸಿಟಿವ್ ಅರ್ಥದಲ್ಲಿ 'ದಲಿತ’ ಪದವನ್ನು ಬಳಸಿದರು. ಅದು ದಲಿತ ಚಿಂತನೆ, ದಲಿತ ಸ್ತ್ರೀವಾದ, ದಲಿತಾಧ್ಯಯನ, ದಲಿತ ರಾಜಕಾರಣ…ಹೀಗೆ ಕಳೆದ ಐವತ್ತು ವರ್ಷಗಳಲ್ಲಿ ಬೆಳೆದು ಮಹತ್ವದ ಚಾರಿತ್ರಿಕ ಸ್ಥಾನ ಪಡೆದಿದೆ.

ದಾದಾಸಾಹೇಬ್ ಕಾನ್ಷೀರಾಂ ಬಹುಜನ ಸಮಾಜ ಪಕ್ಷದ ಮೂಲಕ ದಲಿತ ರಾಜಕಾರಣವನ್ನು ರಾಜಕೀಯ ಅಧಿಕಾರದತ್ತ ಒಯ್ದರು. ತಮಿಳುನಾಡಿನಲ್ಲಿ 'ದಲಿತ್ ಪ್ಯಾಂಥರ್‍ಸ್’ನ ತಮಿಳು ರೂಪವಾದ 'ವಿಡುದಲೈ ಚಿರುದೈಗಳ್ ಕಚ್ಚಿ’ (ವಿಸಿಕೆ) ರಾಜಕೀಯ ಪಕ್ಷದಲ್ಲಿ ಈಗ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರೂ ಇದ್ದಾರೆ.

'ದಲಿತ’ ಎಂಬ ಪರಿಕಲ್ಪನೆ ಇಡೀ ದೇಶದಲ್ಲಿ ಸೃಷ್ಟಿಸಿರುವ ಐಕ್ಯತೆ, ಕ್ರಾಂತಿಕಾರಕತೆ ಹಾಗೂ ಸ್ವಾಭಿಮಾನದ ಚಳುವಳಿ ರಾಜಕಾರಣವನ್ನು ಕಂಡು ದಿಗಿಲುಗೊಂಡು, 'ದಲಿತ’ ಎಂಬ ಪದಕ್ಕೇ ಕುತ್ತು ತರುವ ಹುನ್ನಾರವೂ ನಡೆದಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಗಳು, ದಲಿತ ಸಾಹಿತ್ಯ, ದಲಿತ ಚಳುವಳಿ, ದಲಿತ ಚಿಂತನೆ, ದಲಿತ ರಾಜಕಾರಣ ಹಾಗೂ ಒಟ್ಟಾರೆ ಪ್ರಗತಿಪರ ಚಿಂತನೆ ಆಳವಾಗಿ ಚರ್ಚಿಸಿ ಮುನ್ನಡೆಯಬೇಕಾದ ಅಗತ್ಯವಿದೆ ಎನ್ನಿಸುತ್ತದೆ.

ಓದುಗಿ-ಓದುಗ ಸ್ಪಂದನ
ಕಳೆದ ವಾರ ಬರೆದ 'ರೂಪಕ ತೋರುವ ಹಾದಿ’ಯಲ್ಲಿ ಚರ್ಚಿಸಿದ ಹ್ಯಾಮ್ಲೆಟ್‌ನ 'ಟು ಬಿ ಆರ್ ನಾಟ್ ಟು ಬಿ ದಟ್ ಈಸ್ ದಿ ಕ್ವೆಶ್ಚನ್’ ಸ್ವಗತದಲ್ಲಿ ಪ್ರಶ್ನೆ, ಆತ್ಮಪರೀಕ್ಷೆ, ಆತ್ಮಮರುಕ, ಕೋಪ, ಪ್ರತಿಪಾದನೆ... ಇನ್ನೂ ಏನೇನೋ ಇವೆ ಅನ್ನಿಸುತ್ತಲೇ ಇತ್ತು…ಅಷ್ಟೊತ್ತಿಗೆ ಈ ಅಂಕಣ ಓದಿದ ಕನ್ನಡ ಪ್ರಾಧ್ಯಾಪಕಿಯೊಬ್ಬರು ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲನ್ನು ಕಳಿಸುತ್ತಾ ಬರೆದರು:

“…'ರೂಪಕ ತೋರುವ ಹಾದಿ’ ಲೇಖನದಲ್ಲಿ ಹ್ಯಾಮ್ಲೆಟ್‌ನ 'to be or not be' ಸಾಲನ್ನು ವಿವಿಧ ಅನುವಾದಗಳ ಹಿನ್ನೆಲೆಯಲ್ಲಿ ಚರ್ಚಿಸಿರುವುದನ್ನು ಓದಿದಾಗ, ಅಂಥದೇ ಸಾಲುಗಳು ನೆನಪಾದವು. ಉದಾಹರಣೆಗೆ, ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!’

'ಒಂದು ಚರ್ಚೆಯಲ್ಲಿ ಈ ಸಾಲು ಪ್ರಶ್ನೆಯೋ, ತೀರ್ಮಾನವೋ, ಹೇಳಿಕೆಯೋ, ಉದ್ಗಾರವೋ?’ ಈ ಪ್ರಶ್ನೆ ಬಂತು. 'ಕೊನೆಯಲ್ಲಿ ಆಶ್ಚರ್ಯ ಸೂಚಕ ಚಿಹ್ನೆ -!- ಇರುವುದರಿಂದ ಇದು ಉದ್ಗಾರ’ ಎಂದು ಒಬ್ಬರು ಹೇಳಿದರು. ಮತ್ತೊಬ್ಬರು, ‘ಅಲ್ಲಿ ಫುಲ್‌ಸ್ಟಾಪ್ ಇದೆ; ಇದು ತೀರ್ಮಾನ’ ಎಂದರು. ಆದರೆ, ಯಾರೋ ಹಾಡಿದ್ದನ್ನು ಕೇಳಿಸಿಕೊಂಡಾಗ, ನನಗೆ ಅವರು ದೈನ್ಯವಾಗಿ ಪ್ರಶ್ನಿಸುತ್ತಿದ್ದಾರೆ ಅನ್ನಿಸಿತು.’

ಪ್ರಾಧ್ಯಾಪಕಿಯ ಸ್ಪಂದನ ಓದುತ್ತಾ, ಹಿಂದೊಮ್ಮೆ ನಾನೂ ಹೀಗೇ ಓದುತ್ತಿದ್ದುದು ನೆನಪಾಯಿತು. ಆದರೆ ಒಂದು ಬೆಳಗ್ಗೆ ಸುಮತೀಂದ್ರ ನಾಡಿಗರು ಒಂದು ರೇಡಿಯೋ ಟಾಕ್‌ನಲ್ಲಿ 'ಈ ಸಾಲಿನ ಕೊನೆಗೆ ಪ್ರಶ್ನೆಯಿರುವುದನ್ನು ಓದುಗರು ಗಮನಿಸಿಲ್ಲ’ ಎಂದಿದ್ದು ಕೇಳಿಸಿತು!    

ನಾಡಿಗರ ಮಾತು ಕೇಳಿ ಅಡಿಗರ 'ಸಮಗ್ರ ಕಾವ್ಯ’ ತೆಗೆದು ನೋಡಿದೆ; ಅಡಿಗರ ಒರಿಜಿನಲ್ ಸಾಲು ಹೀಗಿತ್ತು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’

ಈ ಸಾಲಿನ ಬಗ್ಗೆ ೧೯೯೮ರಲ್ಲಿ 'ಲಂಕೇಶ್ ಪತ್ರಿಕೆ’ಯಲ್ಲಿ ನನ್ನ 'ಗಾಳಿ ಬೆಳಕು' ಅಂಕಣದ 'ಸುಗಮ ಸಂಗೀತ ಹಾಗೂ ಸುಗಮ ಸಾಹಿತ್ಯ' ಲೇಖನದಲ್ಲಿ (ಪಲ್ಲವ ಪ್ರಕಾಶನ) ಚರ್ಚಿಸಿದ್ದು ನೆನಪಾಗುತ್ತದೆ.
ಅಡಿಗರ ಕವಿತೆಯ ಕೊನೆಯ ಸಾಲಿಗೆ ತಾತ್ವಿಕ ಹೇಳಿಕೆಯ ಅರ್ಥ ಬಂದಿರುವುದು ರತ್ನಮಾಲಾರ ಒಳತೋಟಿಯ ಗಾಯನದಿಂದ ಕೂಡ ಎಂದು ಕಂಡುಕೊಂಡಿರುವೆ. ಈ ಸಾಲನ್ನು ವಿದ್ಯಾರ್ಥಿನಿ-ವಿದ್ಯಾರ್ಥಿಗಳ ಸಂಗದಲ್ಲಿ ಹಲ ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತಾ ಡೆರಿಡಾ ಹೇಳಿದಂತೆ ಅರ್ಥದ ನಿರಂತರ ಮುಂದೂಡಿಕೆಯಲ್ಲಿ ನಿರತನಾದೆ:

೧. ಜೀವನವು ಇರುವುದೆಲ್ಲವನ್ನೂ ಬಿಟ್ಟು ತುಡಿಯುವುದೇ?
೨. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೇ?
೩. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ಶಕ್ತಿ ಜೀವನಕ್ಕೆ ಇದೆಯೇ?
೪. ’ಇರವು’ ಎಂದರೆ ಅಸ್ತಿತ್ವ, ಜೀವನ, ಹಾಜರಿ… ಈ ಅರ್ಥಗಳೂ ಇವೆ. ಇರವನ್ನು ಬಿಟ್ಟು, ಗೊತ್ತಿಲ್ಲದ, ಇರದ ಏನೋ ಒಂದರತ್ತ, ಅಥವಾ ಇರದ ಮತ್ತೊಂದು ಜನ್ಮದತ್ತ ನಡೆಯುವುದೇ? 

ಹೀಗೆಲ್ಲ ಬರೆಯುತ್ತಿರುವಾಗ… 'ಇರುವ ಅರ್ಥವನ್ನೆಲ್ಲ ಬಿಟ್ಟು ಇರದುದರೆಡೆಗೆ ತುಡಿವುದೇ ಓದಿನ ಜೀವನ ಅಲ್ಲವೆ?’ ಎಂಬ ಅರ್ಥವನ್ನೂ ಈ ಸಾಲು ಉಸುರತೊಡಗಿತು! ಥ್ಯಾಂಕ್ಯೂ ಡೆರಿಡಾ!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 
 

blog
14 Jul 2024 ರೂಪಕ ತೋರುವ ಹಾದಿ!

'ಈ ಅಂಕಣದಲ್ಲಿ ನೀವೇಕೆ ರಾಜಕೀಯದ ಬಗ್ಗೆ ಬರೆಯುತ್ತಿಲ್ಲ?  ರಾಜಕೀಯದ ಬಗ್ಗೆ ಬರೆಯಿರಿ’ ಎಂದು ಕೇಳುವ, ಹೇಳುವ ಕೆಲವು ಗೆಳೆಯರಿದ್ದಾರೆ. ಗೆಳತಿಯರು ಈ ಪ್ರಶ್ನೆ ಕೇಳಿದಂತಿಲ್ಲ!

ಅದಕ್ಕೊಂದು ಸರಳ ಉತ್ತರ: 'ನೀವು ಕೇಳುವ ರೀತಿಯ ಸಮಕಾಲೀನ ರಾಜಕಾರಣದ ಬಗ್ಗೆ ’ಪ್ರಜಾವಾಣಿ’ಯಲ್ಲಿ ಬರೆಯುತ್ತಿರುತ್ತೇನೆ. ಈ ಅಂಕಣದ ಕೆಲಸ, ಉದ್ದೇಶ ಬೇರೆ.’

ಹಾಗೆ ನೋಡಿದರೆ, ನಾವು ಮಾಡುವ ಅನೇಕ ಬಗೆಯ 'ಸಾಂಸ್ಕೃತಿಕ’ ಎನ್ನಬಹುದಾದ ಕೆಲಸಗಳು ರಾಜಕಾರಣದ ವಿಶಾಲ ವ್ಯಾಪ್ತಿಗೇ ಸೇರುತ್ತವೆ. ಮೊನ್ನೆ ಚುನಾವಣೆಯ ಕಾಲದಲ್ಲಿ ಅಧ್ಯಾಪಕಿಯೊಬ್ಬರು ಮಾಡಿದ ಸಾಹಿತ್ಯದ ಪಾಠದಲ್ಲೇ ಖಚಿತ ರಾಜಕೀಯ ಸಂದೇಶವಿತ್ತು. ಬಹುತೇಕ ಮಹಿಳಾ ಕಾವ್ಯದಲ್ಲಿ ಒಂದಲ್ಲ ಒಂದು ಬಗೆಯ ರಾಜಕೀಯ ಪ್ರಶ್ನೆ ಇದ್ದೇ ಇರುತ್ತದೆ. ನಟರಾಜ್ ಹೊನ್ನವಳ್ಳಿ, ಬಸವಲಿಂಗಯ್ಯ, ಕೆ.ಪಿ. ಲಕ್ಷ್ಮಣ್ ಥರದ ರಂಗ ನಿರ್ದೇಶಕರು ಮಾಡುವ ಯಾವುದೇ ಕಲಾತ್ಮಕ ನಾಟಕದಲ್ಲೂ ರಾಜಕೀಯ ಎಳೆಗಳು ಇದ್ದೇ ಇರುತ್ತವೆ. 

ಹೀಗೆಲ್ಲ ಅನ್ನಿಸತೊಡಗಿದ್ದಕ್ಕೆ ಒಂದು ಮೊಬೈಲ್ ಮೆಸೇಜ್ ಕಾರಣವಾಗಿತ್ತು. ಅದು ತಮ್ಮದೇ ಆದ ಸ್ಟೈಲ್‌ನಲ್ಲಿ ರಾಜಕೀಯ ರಂಗದಲ್ಲಿರುವ ಗೆಳೆಯರೊಬ್ಬರ ಹುಟ್ಟುಹಬ್ಬದ ಎಸ್. ಎಂ. ಎಸ್. ಅಥವಾ ನನ್ನ ಭಾಷೆಯಲ್ಲೇ ಹೇಳುವುದಾದರೆ, ಸಂಕ್ಷಿಪ್ತ ಮೇಘ ಸಂದೇಶ; ಸಂಮೇಸಂ!

'ಜುಲೈ ೧೪ರಂದು ರವಿಕೃಷ್ಣಾರೆಡ್ಡಿ ಅವರ ೫೦ನೇ ಹುಟ್ಟುಹಬ್ಬ. ಅಂದು ನಾವು ಕೆಲವು ಸ್ನೇಹಿತರು ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತಾವು ದಯವಿಟ್ಟು ಬರಬೇಕು. ಕಾರ್ಯಕ್ರಮ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಇರುತ್ತದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.’ 

ಅದ್ಯಾಕೋ ಏನೋ, ಈ ಸಂಮೇಸಂ ನೋಡುತ್ತಿದ್ದಂತೆ ನನಗೆ ಶೇಕ್‌ಸ್ಪಿಯರ್‌ನ ಹ್ಯಾಮ್ಲೆಟ್‌ನ ಪಿಸುಮಾತು (ಹ್ಯಾಮ್ಲೆಟ್ ಎಲ್ಲೂ ’ಕಿರುಚು ಮಾತು’ ಆಡಿದಂತಿಲ್ಲ!) ನೆನಪಾಯಿತು: 

‘The time is out of joint- Oh, cursed spite, 

That ever I was born to set it right!

ನನ್ನ 'ಶೇಕ್‌ಸ್ಪಿಯರ್ ಮನೆಗೆ ಬಂದ' ನಾಟಕದಲ್ಲಿ ಸ್ಟ್ರಾಟ್‌ಫರ್ಡ್ ಲೋಕಲ್ ನಟರು ಹ್ಯಾಮ್ಲೆಟ್‌ ನಾಟಕದ ರಿಹರ್ಸಲ್‌ ಮಾಡುವ ತಮಾಷೆಯ ದೃಶ್ಯದಲ್ಲಿ ಚೀರುವುದಕ್ಕಾಗಿ ಈ ಮಾತಿನ ಭಾಗವನ್ನು ಕೊಂಚ ಸಂಕ್ಷಿಪ್ತವಾಗಿ ಅನುವಾದಿಸಿಕೊಂಡಿದ್ದೆ: 'ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?' ಆ ಭಾಗವನ್ನು ನನ್ನ ಯೂಟ್ಯೂಬ್ ಚಾನಲ್‌ನಲ್ಲಿರುವ ನಾಟಕದಲ್ಲಿ ನೋಡಬಹುದು.

ಅದಿರಲಿ, ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ.ಆರ್.ಎಸ್) ಗೆಳೆಯರ ಸಂಮೇಸಂ ನೋಡಿದ ತಕ್ಷಣ ರವಿಕೃಷ್ಣಾರೆಡ್ಡಿಯ ಬಗೆಗೆ ಏನೋ ಬರೆಯಬೇಕೆನ್ನಿಸಿ ಲ್ಯಾಪ್‌ಟಾಪ್ ಮೇಲೆ ಬೆರಳಿಟ್ಟರೆ ಹ್ಯಾಮ್ಲೆಟ್ ಮಾತು ಬಾಯಿಗೆ ಬಂತು! 

ರೈಟಿಂಗ್ ಈಸ್ ಥಿಂಕಿಂಗ್ ಎಂಬುದು ನನ್ನ ಈಚಿನ ಆಳದ ನಂಬಿಕೆ; ಇದನ್ನು ನಿತ್ಯದ ಅನುಭವದ ಮೂಲಕ ಮತ್ತೆ ಮತ್ತೆ ಕಂಡುಕೊಂಡಿರುವೆ. ಸರಿ! ಶೇಕ್‌ಸ್ಪಿಯರ್ ಸಾಲು ಕರೆದೊಯ್ದ ಕಡೆ ಹೊರಡಲು ಸಿದ್ಧನಾದೆ. ಕಾರಣ, ಸಾಹಿತ್ಯದ ರೂಪಕಗಳ ವಿಸ್ಡಂ ಅಥವಾ ಪರಮಜ್ಞಾನ ವಿನಾಕಾರಣ ನೆನಪಾಗುವುದಿಲ್ಲ ಎಂಬುದು ನನ್ನ ಅನುಭವ. ನಮಗೆ ಬೀಳುವ ಕನಸುಗಳ ಹಾಗೆ ಈ ರೂಪಕಗಳು ನೆನಪಾಗುವುದಕ್ಕೂ ಅದರದೇ ಆದ ತರ್ಕವಿರಬಹುದು. ಗೆಳೆಯರ ಆಹ್ವಾನದ ಸಂದೇಶ ನೋಡಿದ ಗಳಿಗೆಯಲ್ಲಿ ಹ್ಯಾಮ್ಲೆಟ್ ಮಾತು ಯಾಕೆ ಹೊಳೆಯಿತು ಎಂಬುದು ನಂತರ ಹೊಳೆಯಿತು! ಅದನ್ನು ಹೊಳೆಯಿಸಿದ್ದು ಕೂಡ ಶೇಕ್‌ಸ್ಪಿಯರ್‌ನ ಮತ್ತೊಂದು ದರ್ಶನ-ಸ್ವಗತವೇ: 

'ಟು ಬಿ ಆರ್ ನಾಟ್ ಟು ಬಿ- ದಟ್ ಈಸ್ ದ ಕ್ವೆಶ್ಚನ್’  

ಈ ಸ್ವಗತ ಹೊಳೆದಿದ್ದು ರವಿಕೃಷ್ಣಾರೆಡ್ಡಿಯ ರಾಜಕೀಯ ರೀತಿ ಒಂಥರದಲ್ಲಿ ಭಿನ್ನ ಎಂದುಕೊಂಡಾಗ. ರವಿ ಹ್ಯಾಮ್ಲೆಟ್ ಥರ ’ಟು ಬಿ ಆರ್‍ ನಾಟ್ ಟು ಬಿ’ ಎಂದು ನಾನಾರ್ಥ ತೂಗಿ, ಮುಂದಡಿಯಿಡುವ ವ್ಯಕ್ತಿಯಲ್ಲ! ’ಹೌದು! ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿದ್ದೇನೆ’ ಎಂದು ನಂಬಿ ಏಕ್‌ದಂ ಕ್ರಿಯೆಗಿಳಿಯುವ ಮನುಷ್ಯ. ರವಿ ಹ್ಯಾಮ್ಲೆಟ್ ಥರ ’ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?’ ಎಂದು ಅಳೆದು ತೂಗುತ್ತಾ ನಿರ್ಧಾರ ಮುಂದೂಡುವ ಅತಿ ಸೂಕ್ಷ್ಮ ಮನುಷ್ಯನಲ್ಲ!

ಹ್ಯಾಮ್ಲೆಟ್ ಮಾತುಗಳ, ಸ್ವಗತಗಳ ಅನುವಾದದ ಕಷ್ಟಗಳು ಒಂದಲ್ಲ, ಎರಡಲ್ಲ. ಖ್ಯಾತ ಶೇಕ್‌ಸ್ಪಿಯರ್ ವಿದ್ವಾಂಸ-ಭಾಷಾಂತರಕಾರ ಭಗವಾನ್ 'ಟೈಮ್ ಈಸ್ ಔಟ್ ಆಫ್ ಜಾಯಿಂಟ್’ ಎಂಬ ಸಾಲನ್ನು 'ಕಾಲ ಕೀಲು ತಪ್ಪಿದೆ’ ಎಂದು ಅನುವಾದಿಸಿದ ನೆನಪು; ಅದೇ ಸರಿಯೆನ್ನಿಸುತ್ತದೆ. ಶೇಕ್‌ಸ್ಪಿಯರ್ ಪಾತ್ರಗಳ ಮಾತುಗಳನ್ನು ಒಂದು ರೀತಿಯಲ್ಲಿ ಅನುವಾದ ಮಾಡಿದರೆ, ಮತ್ತೊಂದು ಅರ್ಥ ಕೈ ಕೊಡುತ್ತದೆ. 'ಟು ಬಿ ಆರ್ ನಾಟ್ ಟು ಬಿ’ಯ ಕನ್ನಡ ಅನುವಾದವೊಂದು ನೆನಪಾಗುತ್ತದೆ: 

'ಇರಲೆ ಅಥವ ಇಲ್ಲದೆ ಇರಲೆ-ಇದು ಪ್ರಶ್ನೆ’ 

ಇದು ರಾಮಚಂದ್ರ ದೇವರ ಅನುವಾದ. ಭಗವಾನ್ ಅವರಿಗೆ ಫೋನ್ ಮಾಡಿ, ‘ಇದನ್ನು ನೀವು ಹೇಗೆ ಅನುವಾದಿಸಿದ್ದೀರಿ?’ ಎಂದೆ. 

“…‘ಇರುವುದೇ ಅಥವಾ ಇಲ್ಲವಾಗುವುದೇ?’ ಎಂದು ಅನುವಾದಿಸಿದ್ದೇನೆ ಅನ್ನಿಸುತ್ತದೆ” ಎಂದರು. 

'ಆಗ 'be’ ಎಂಬ ಕ್ರಿಯಾಪದಕ್ಕಿರುವ ನಾನಾರ್ಥಗಳು ಮರೆಯಾಗುತ್ತವಲ್ಲ?’ ಎಂದೆ.  

'ನಿಜ. ಅದಕ್ಕೇ ಎಪ್ಪತ್ತೈದು ಭಾಷೆಗಳಲ್ಲಿ ಈ ವಾಕ್ಯವನ್ನು ಅನುವಾದಿಸದೆ ಹಾಗೇ ಇಟ್ಟುಕೊಂಡಿದ್ದಾರೆ’ ಎಂದರು ಭಗವಾನ್. ಸಾರ್ತರ್‌ನ ‘being’ and ’becoming’ ಪರಿಕಲ್ಪನೆಗಳನ್ನು ಕೂಡ ಭಗವಾನ್ ನೆನಪಿಸಿದರು. ಅವರ ಅಧ್ಯಯನ, ತಕ್ಷಣಕ್ಕೆ ಅವರಿಗೆ ಒದಗುವ ನೆನಪು ಕಂಡು ವಿಸ್ಮಯವಾಯಿತು.

'be’ ಎಂಬ ಕ್ರಿಯಾಪದಕ್ಕೆ ಅಸ್ತಿತ್ವ, ಹಾಜರಿ, ಇರುವುದು, ಬಿದ್ದಿರುವುದು, ಬದುಕಿರುವುದು….ಹೀಗೆ ಹಲವು ಅರ್ಥಗಳಿವೆ. ವಾಕ್ಯದಲ್ಲಿ ಬಳಕೆಯಾದಾಗ ಅದಕ್ಕೆ ಇನ್ನಷ್ಟು ಚಹರೆಗಳು ಬರುತ್ತವೆ.  
ಹೀಗಾಗಿ, ಹ್ಯಾಮ್ಲೆಟ್‌ಗೆ ಎದುರಾಗುವ ‘ಟು ಬಿ ಆರ್ ನಾಟ್ ಟು ಬಿ’ ಹೊಯ್ದಾಟ, ತುಯ್ದಾಟಗಳು ’ಹ್ಯಾಮ್ಲೆಟ್’ ಅನುವಾದಕರಿಗೂ ಎದುರಾಗುವುದು ಗ್ಯಾರಂಟಿ. ಆದರೆ… ಪ್ರಖರ ವಿಚಾರವಾದಿ ಭಗವಾನ್‌ ನಿತ್ಯ ವಿವಾದದ ಹೇಳಿಕೆ ಕೊಡುವ ಮುನ್ನ ಅವರೊಳಗಿರುವ ಶೇಕ್‌ಸ್ಪಿಯರಿಯನ್ ಸ್ಕಾಲರ್ ಭಗವಾನ್ ’ಟು ಬಿ ಆರ್ ನಾಟ್ ಟು ಬಿ…’ ಎಂದು ಬ್ರೇಕ್ ಹಾಕುವುದಿಲ್ಲವೆ? 

ಈ ಪ್ರಶ್ನೆ ಇದ್ದಕ್ಕಿದ್ದಂತೆ ಹುಟ್ಟಿದ್ದು ಈ ಮಾತು ಬರೆಯುತ್ತಿರುವ ಭಾನುವಾರದ ಶುಭ್ರ ಬೆಳಗಿನಲ್ಲಿ!  ಇದನ್ನೇ ರೈಟಿಂಗ್ ಈಸ್ ಥಿಂಕಿಂಗ್ ಎಂದು ನಾನು ನೆಚ್ಚಿಕೊಂಡಿರುವುದು. ನಿಜಕ್ಕೂ ನಮ್ಮ ಹೆಮ್ಮೆಯ ಶೇಕ್‌ಸ್ಪಿಯರ್ ವಿದ್ವಾಂಸರಾದ ಭಗವಾನ್ ಅವರ ಇಮೇಜನ್ನು ಕ್ಷುಲ್ಲಕ ವಿವಾದಗಳ ಭಗವಾನ್ ಇಮೇಜ್ ನುಂಗಿ ಹಾಕದಿರಲಿ. ಸಾವಿರಾರು ಕನ್ನಡಿಗರಿಗೆ ಅತ್ಯಂತ ದಕ್ಷವಾಗಿ ಶೇಕ್‌ಸ್ಪಿಯರ್ ಸಂವೇದನೆಯನ್ನು ಹಬ್ಬಿಸಿರುವ ಅವರ ಅನನ್ಯ ಕೊಡುಗೆಯನ್ನು ವಾಚಾಳಿ ಹೇಳಿಕೆಗಳು ಮರೆಯಾಗಿಸದಿರಲಿ.

ಮತ್ತೆ ರವಿಕೃಷ್ಣಾರೆಡ್ಡಿಯ ಕತೆಗೆ: ಇಪ್ಪತ್ತು ವರ್ಷಗಳ ಕೆಳಗೆ ರವಿಕೃಷ್ಣಾರೆಡ್ಡಿ ಏನೋ ಒಂದನ್ನು ಮಾಡಬೇಕೆಂದು ಹೊರಟಾಗ ಅವರೆದುರು ಹ್ಯಾಮ್ಲೆಟ್‌ನ ‘ಟು ಬಿ ಆರ್ ನಾಟ್ ಟು ಬಿ’ ತೂಗುಯ್ಯಾಲೆಯಿರಲಿಲ್ಲ! ಅದರಿಂದ ಅವರು ನೇರ ಕ್ರಿಯೆಗಿಳಿದರು. ಅವರ ರೀತಿ ಬೇರೆ: 

ಆಗ ರವಿ ಅಮೆರಿಕದಲ್ಲಿ ಟೆಕ್ಕಿಯಾಗಿ ದುಡಿಯುತ್ತಿದ್ದರು. ಅಷ್ಟಿಷ್ಟು ಹಣ ಸಂಪಾದಿಸಿದ ಮೇಲೆ ಇಂಡಿಯಾದಲ್ಲಿ ಏನಾದರೂ ಮಾಡಬೇಕೆಂದುಕೊಂಡು ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ಮಾಡಿದರು. ಆದರೆ ಅವರು ಮಾಡಬಯಸಿದ್ದ ರಾಜಕಾರಣಕ್ಕೆ ನೆರವಾಗಲು ನಿಜಕ್ಕೂ ಬೇಕಾದದ್ದು ೧೨-೧೬ ಪುಟಗಳ ಟ್ಯಾಬ್ಲಾಯ್ಡ್ ಎಂದು ನನಗನ್ನಿಸಿತ್ತು. 'ಸುಧಾ’ ಸೈಜಿನ ಈ ವಾರಪತ್ರಿಕೆ ಕೆಲ ವರ್ಷ ನಡೆಯಿತು. ಚಂದ್ರಶೇಖರ್ ಐಜೂರ್ ಸಂಪಾದಕತ್ವದಲ್ಲಿ ನಾವೆಲ್ಲ ಗೆಳೆಯರು ಮಾಡುತ್ತಿದ್ದ ‘ಕನ್ನಡ ಟೈಮ್ಸ್’ ವಾರಪತ್ರಿಕೆ ಮಾಡಿದ ಚುನಾವಣಾ ಸಂಚಿಕೆಯಲ್ಲಿ ರವಿಕೃಷ್ಣಾರೆಡ್ಡಿ ವಿಶಿಷ್ಟ ನಾಯಕರ ಪಟ್ಟಿಯಲ್ಲೂ ಇದ್ದರು. 

ರವಿ ಚುನಾವಣಾ ರಾಜಕೀಯಕ್ಕಿಳಿದರು; ಅದೂ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ. ಅವರ ಚುನಾವಣಾ ಜಿಗಿತವನ್ನು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮೊದಲ ಪತ್ರಿಕಾಗೋಷ್ಠಿಯ ಮೂಲಕ ಲಾಂಚ್ ಮಾಡಿದ ದಾಖಲೆ ನನ್ನ ಹೆಸರಲ್ಲೇ ಇದೆ! ನಂತರ ರವಿ ಚುನಾವಣೆಯ ಮೇಲೆ ಚುನಾವಣೆಗೆ ನಿಂತರು. ಆಮ್ ಆದ್ಮಿ ಪಾರ್ಟಿಯ ಆರಂಭದ ಸ್ಪಿರಿಟ್‌ಗೆ ರವಿ ಹೇಳಿ ಮಾಡಿಸಿದಂತಿದ್ದರು. ಕರ್ನಾಟಕದ ಆಮ್ ಆದ್ಮಿ ಪಾರ್ಟಿಯ ಆರಂಭದ ನಾಯಕರಲ್ಲಿ ರವಿ ಕೂಡ ಮುಖ್ಯರಾಗಿದ್ದರು. ಅಲ್ಲಿ ಕೂಡ ಅವರು ಇರಲಾಗಲಿಲ್ಲ. ರವಿಯ ಹೋರಾಟ, ಪಯಣ ಮುಂದುವರಿಯಿತು. 

ಕೆಲವು ತಿಂಗಳ ಕೆಳಗೆ ಸೇಂಟ್ ಜೋಸೆಫ್ ಕಾಲೇಜಿನ ಹುಡುಗ ಚರಣ್ ’ನಾನು ರವಿಕೃಷ್ಣಾರೆಡ್ಡಿಯವರ ಕೆ.ಆರ್.ಎಸ್ ಜೊತೆ ಇದ್ದೇನೆ’ ಅಂದ. ಜರ್ನಲಿಸಂ ಓದುತ್ತಿದ್ದ ಚರಣ್‌‌ಗೆ ರವಿ ಮಾಡುತ್ತಿರುವ ರಾಜಕಾರಣದಲ್ಲಿ ಅರ್ಥ ಕಂಡಿತ್ತು. ಚರಣ್ ಮಾತು ಕೇಳಿದಾಗ ರವಿಯ ರಾಜಕೀಯ  ಮುಂದುವರಿದೇ ಇದೆ; ಅದಕ್ಕೆ ಹೊಸ ಅನುಯಾಯಿಗಳೂ ಹುಟ್ಟುತ್ತಿದ್ದಾರೆ ಎಂದುಕೊಂಡೆ. 

ನನ್ನಂಥವರು ಅವರ ಜೊತೆ ಬರುತ್ತಿಲ್ಲ ಎಂದು ರವಿ ಕಾಲೆಳೆಯುವುದುಂಟು. ಅವರ ಕೆಲಸ ಅರ್ಥಪೂರ್ಣವೋ; ನನ್ನಂಥವರ, ನಿಮ್ಮಂಥವರ ಕೆಲಸ; ಭಗವಾನ್ ಅನುವಾದ, ಭಾಷಣ; ರಂಗಭೂಮಿಯವರ ಕೆಲಸ…ಇವು ಅರ್ಥಪೂರ್ಣವೋ… ಇವೆಲ್ಲ ಒಣ ಚರ್ಚೆಗಳಷ್ಟೆ. ಹೀಗೆಂದುಕೊಳ್ಳುವಾಗ ಫಳಾರನೆ ಮಿಂಚಿದ ಒಂದು ಎಲಿಯಟ್ ದರ್ಶನ-ರೂಪಕ: 

‘Mole digs, eagle flies. Both want to live.’

’ಹೆಗ್ಗಣ ಅಗೆಯುವುದು, ಹದ್ದು ಹಾರುವುದು. ಎರಡೂ ಬದುಕಲು ಬಯಸುವುವು.’

ನಾನು ಹಿಂದೆ ಕಂಡಂತೆ, ತಾನು ದುಡಿದ ದುಡ್ಡಿನಲ್ಲಿ ತನಗೆ ಬೇಕಾದ ರೀತಿಯ ರಾಜಕೀಯ ಮಾಡುತ್ತಿದ್ದ ರವಿಕೃಷ್ಣಾರೆಡ್ಡಿ, ಹೋರಾಟದ ಕಷ್ಟ ನಷ್ಟ, ಸವಾಲು, ಅರ್ಥಪೂರ್ಣತೆ ಎಲ್ಲವನ್ನೂ ಅನುಭವಿಸಿರುವವರು. ಸೋಲು, ಗೆಲುವುಗಳ ಹಂಗಿಲ್ಲದೆ ಮಾಡುವ ರಾಜಕೀಯ ಅವರ ಪಾಲಿಗೆ ಅರ್ಥಪೂರ್ಣ ಅನ್ನಿಸಿರಬಹುದು. ಅದನ್ನು ಈಗಿನ ಪರಿಚಿತ ರಾಜಕಾರಣದ ಹಿನ್ನೆಲೆಯಲ್ಲಿ ಅಳೆದು ತೂಗುವ ತಕ್ಕಡಿಯ ಅಗತ್ಯ ಇರಲಾರದು. 

ಎಲ್ಲರೂ ಹ್ಯಾಮ್ಲೆಟ್ ಥರ ’ಸೂಕ್ಷ್ಮ’ವಾಗಿಯೇ ಯಾಕಿರಬೇಕು, ಅಲ್ಲವೆ? ಕ್ಷಿಪ್ರ ಕ್ರಿಯೆಗಳ ಸುಖ ದುಃಖಗಳನ್ನೂ ಶೇಕ್‌ಸ್ಪಿಯರ್‍ ಪಾತ್ರಗಳೇ ತೋರಿಸಿವೆಯಲ್ಲ! 

ಕೊನೆಯದಾಗಿ, ‘ರಾಜಕೀಯ ಬರಹ’, ‘ರಾಜಕೀಯ ಕ್ರಿಯೆಗಳು’ ಎಂದರೆ ಒಂದೇ ಎರಕದಲ್ಲಿ ಇರುವುದಿಲ್ಲ ಎಂಬುದನ್ನು ವಿನಮ್ರವಾಗಿ ಸೂಚಿಸಬಯಸುವೆ. 

blog
07 Jul 2024 ಪ್ರಬುದ್ಧ ನಟ ಇರ್ಫಾನ್ ಜೊತೆ ಒಂದು ದಿನ

ಸೂಕ್ಷ್ಮ ಸಂವೇದನೆಯ ನಟ ಇರ್ಫಾನ್ ಖಾನ್ ಬಗ್ಗೆ ನನ್ನ ಅಂಕಣವೊಂದರಲ್ಲಿ ಬರೆದ ಟಿಪ್ಪಣಿ ಓದಿ ಗೆಳೆಯ ಸಂದೀಪ್ ನಾಯಕ್ ಬರೆದರು: 

‘ಇರ್ಫಾನ್ ತನ್ನ ಕಣ್ಣು, ದೇಹ ಎರಡನ್ನೂ ನಟನೆಯಲ್ಲಿ ಬಳಸುತ್ತಿದ್ದ. ಎರಡರ ನಡುವೆ ಸಮತೋಲನವಿತ್ತು. ಹಾಗಾಗಿಯೇ ಇರ್ಫಾನ್ ನಟನೆಯಲ್ಲಿ ಜೀವಂತಿಕೆ ಕಾಣಿಸುತ್ತದೆ. ಆತ ಸಂವೇದನಾಶೀಲ ಮಾತ್ರವಲ್ಲ, ತನ್ನ ಸುತ್ತಣ ಜಗತ್ತಿಗೆ ಸ್ಪಂದಿಸುವ ಸೂಕ್ಷ್ಮಜ್ಞನೂ ಆಗಿದ್ದರಿಂದಲೇ ಉತ್ತಮ ನಟನೂ ಆಗಿದ್ದ. ದಂತಗೋಪುರದಲ್ಲಿ ಇರುವ ಜಡಗೊಂಡ ನಟರು ಹೇಗಿರುತ್ತಾರೆ ಎಂಬುದು ನಿಮ್ಮ ಗಮನಕ್ಕೂ ಬಂದಿರುತ್ತದೆ; ಅಥವಾ ದಂತಗೋಪುರದಲ್ಲಿ ಇರುವುದರಿಂದಲೇ ಅವರು ಜಡಗೊಂಡಿರುತ್ತಾರೇನೋ! ಈ ಮಾತನ್ನು ನಮ್ಮ ಕೆಲವು ಲೇಖಕರಿಗೂ ಅನ್ವಯಿಸಬಹುದು. ದುರದೃಷ್ಟವೆಂದರೆ, ಇರ್ಫಾನ್ ತರಹದ ನಟರು ಕಡಿಮೆ.

ಇರ್ಫಾನ್ ಬಗ್ಗೆ ಹಿಂದೆ ’ಸುಧಾ’ ವಾರಪತ್ರಿಕೆಯಲ್ಲಿ ನಾನು ಬರೆದಿದ್ದ ಟಿಪ್ಪಣಿ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಈಚೆಗೆ ‘ಸುಧಾ’ದಲ್ಲಿ ಬರುತ್ತಿರುವ ರಾಮಮನೋಹರ ಲೋಹಿಯಾ ಕುರಿತ ನನ್ನ ಧಾರಾವಾಹಿಯನ್ನು ಸಿನಿಮಾ ಮಾಡುವ ಮಾತು ಬಂದಾಗ ಮತ್ತೆ ಇರ್ಫಾನ್ ನೆನಪು ಬಂತು.

`ಲೋಹಿಯಾ ಪಾತ್ರಕ್ಕೆ ಪಕ್ಕಾ ಸೂಟಾಗಬಲ್ಲ ನಟ ನವಾಜುದ್ದೀನ್ ಸಿದ್ದಿಕಿ’ ಎಂದು ಸಿನಿಮಾ ನಿರ್ದೇಶಕ ಕಬಡ್ಡಿ ನರೇಂದ್ರಬಾಬು ಹೇಳಿದ್ದರು. ಅದೇಕೋ ಇರ್ಫಾನ್ ಖಾನ್ ಮುಖ ನನ್ನೆದುರು ತೇಲಿ ಬಂತು. ಇರ್ಫಾನ್ ಲೋಹಿಯಾ ಪಾತ್ರಕ್ಕೆ ನಿಜಕ್ಕೂ ಲಾಯಕ್ಕಾಗಿದ್ದರು. ಆದರೆ ನಾಲ್ಕು ವರ್ಷಗಳ ಕೆಳಗೆ ಇರ್ಫಾನ್ ತೀರಿಕೊಂಡಿದ್ದರು. ಪೆಚ್ಚೆನ್ನಿಸಿತು.

ಇರ್ಫಾನ್ ಬಗ್ಗೆ ಹಿಂದೊಮ್ಮೆ ಬರೆದ ಟಿಪ್ಪಣಿಗಳು ನೆನಪಾದವು. ಐದಾರು ವರ್ಷಗಳ ಕೆಳಗೆ ಮೈಸೂರಿನಲ್ಲಿ ಒಂದೇ ದಿನದ ಮೂರು ಭೇಟಿಗಳಲ್ಲಿ ಇರ್ಫಾನ್ ನನಗೆ ಪ್ರಿಯರಾಗಿದ್ದರು.  ತಾನೊಬ್ಬ ಸೆಲೆಬ್ರಿಟಿ ನಟ ಎಂಬ ನೆನಪೇ ಇಲ್ಲದವರಂತೆ ಇರ್ಫಾನ್ ಬಹುಕಾಲದ ಗೆಳೆಯನಂತೆ ಆರಾಮಾಗಿ ನಮ್ಮೊಡನೆ ಬೆರೆತಿದ್ದರು. ಇರ್ಫಾನ್ ರಂಗಾಯಣದ ‘ಬಹುರೂಪಿ’ ಸಮಾರೋಪಕ್ಕೆ ಬಂದಿದ್ದರು. ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿ ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಇರ್ಫಾನ್‌ಗೆ ಸೀನಿಯರ್. ಜನ್ನಿಯವರ ಪತ್ನಿ ರಂಗನಿರ್ದೇಶಕಿ ಸುಮತಿ ಎನ್‌ಎಸ್‌ಡಿಯಲ್ಲಿ ಇರ್ಫಾನ್, ಅವರ ಪತ್ನಿ ಸುತಾಪ ಇಬ್ಬರಿಗೂ ಕ್ಲಾಸ್‌ಮೇಟ್. 

ಸಿನಿಮಾ ನೋಡುವುದನ್ನು ಕೂಡ ಒಪ್ಪದ ಕುಟುಂಬದಿಂದ ಬಂದ ಇರ್ಫಾನ್ ನಾಟಕಶಾಲೆ ಸೇರುವುದನ್ನು ಅಮ್ಮ ಒಪ್ಪಿರಲಿಲ್ಲ; ‘ಎನ್‌ಎಸ್‌ಡಿಯಲ್ಲಿ ಕಲಿತು ಬಂದು ಲೆಕ್ಚರರ್ ಆಗುತ್ತೇನೆ’ ಎಂದು ಅಮ್ಮನನ್ನು ನಂಬಿಸಿ ಇರ್ಫಾನ್ ಅಲ್ಲಿ ಸೇರಿದರಂತೆ! ಎನ್‌ಎಸ್‌ಡಿಯಲ್ಲಿ ತಮ್ಮ ಗುರುವಾಗಿದ್ದ ಪ್ರಸನ್ನ ಬದನವಾಳಿನಲ್ಲಿ ಮಾಡುತ್ತಿದ್ದ ಸತ್ಯಾಗ್ರಹವನ್ನು ಬೆಂಬಲಿಸಲು ಇರ್ಫಾನ್ ಹಿಂದೊಮ್ಮೆ ಬಂದಿದ್ದರು. ‘ಪ್ರಸನ್ನ ನಿರ್ದೇಶನ ಮಾಡಿದರೆ ರಂಗಭೂಮಿಗೆ ಬಂದು ನಟಿಸುತ್ತೇನೆ’ ಎಂದಿದ್ದರು. 

ನಮ್ಮ ಭೇಟಿಯಲ್ಲಿ ರಂಗಭೂಮಿಯ ಬಗ್ಗೆ ಇರ್ಫಾನ್ ಹೇಳಿದ ಮಾತು ರಂಗ ನಟ, ನಟಿಯರಿಗೆ ದಿಕ್ಸೂಚಿಯಂತಿತ್ತು: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ…ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು’ ಎಂದರು ಇರ್ಫಾನ್. 
ಇರ್ಫಾನ್ ಮಾತು ಬರವಣಿಗೆ, ನೃತ್ಯ, ಟೀಚಿಂಗ್ ಎಲ್ಲದಕ್ಕೂ ಅನ್ವಯಿಸಬಲ್ಲದು ಎಂಬುದು ನನಗೆ ನಂತರ ಹೊಳೆಯಿತು. 

‘Maturity is indivisible’ ಎನ್ನುತ್ತಾನೆ ಝೆಕ್ ಕಾದಂಬರಿಕಾರ ಮಿಲನ್ ಕುಂದೇರ. ಅಂದರೆ, ವ್ಯಕ್ತಿಯೊಬ್ಬ ನಿಜಕ್ಕೂ ಪ್ರಬುದ್ಧನಾಗಿದ್ದರೆ ಅವನ ಮಾತು, ಕ್ರಿಯೆ, ಪ್ರತಿಕ್ರಿಯೆ ಎಲ್ಲದರಲ್ಲೂ ಒಂದೇ ಬಗೆಯ ಪ್ರಬುದ್ಧತೆ ಇರುತ್ತದೆ. ವಿಶಿಷ್ಟ ಸಂವೇದನೆಯ ನಟನಾಗಿದ್ದ ಇರ್ಫಾನ್‌ಗೆ ಅಂಥ ಮೆಚುರಿಟಿ ಇತ್ತು. ಅಮೀರ್ ಖಾನ್, ಶಾರೂಕ್ ಖಾನ್ ಇಂಥ ಮೆಚುರಿಟಿ ಉಳ್ಳವರು ಎಂದು ನನಗನ್ನಿಸುತ್ತಿರುತ್ತದೆ. 

ಅದಿರಲಿ, ಅವತ್ತು ಸಂಜೆ ರಂಗಾಯಣದಲ್ಲಿ ಇರ್ಫಾನ್ ಮಾತಾಡಬೇಕಾಗಿತ್ತು. ‘ಇರ್ಫಾನ್ ಓಪನ್ನಾಗಿ ಮಾತಾಡುತ್ತಾ ಹೋದರೆ ನೇರವಾಗಿ ಸತ್ಯ ಹೇಳುತ್ತಾರೆ; ಅದು ಮತ್ತೆಲ್ಲಿಗೋ ಹೋಗಿ ವಿವಾದವಾಗುತ್ತದೆ’ ಎಂದು ಸುತಾಪ ಆತಂಕದಲ್ಲಿದ್ದರು. ಅಷ್ಟೊತ್ತಿಗಾಗಲೇ ಇರ್ಫಾನ್, ಶಾರೂಖ್ ಥರದ ದೊಡ್ಡ ನಟರ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಮತೀಯ ಬಣ್ಣ ಬಳಿಯುವ ಕೋಮುವಾದಿ ಸೈತಾನ ಕಾರ್ಖಾನೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು.  

ಸಂಜೆ ಇರ್ಫಾನ್ ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ಈ ದೇಶದಲ್ಲಿ ‘ನಾನು ಏನು ಹೇಳಿದರೂ ಅದನ್ನು ಒಬ್ಬ ಮುಸ್ಲಿಂ ಹೇಳುತ್ತಿದ್ದಾನೆ ಎಂದು ತಿರುಚಿದರೆ ನನಗೆಷ್ಟು ನೋವಾಗುತ್ತದೆ, ಯೋಚಿಸಿ’ ಎಂದರು. ಕೋಮು ವಿಕಾರಗಳ ಬಗ್ಗೆ ಸಿಟ್ಟಾದರು. ರಂಗಾಯಣದ ಪ್ರೇಕ್ಷಕರಿಗೆ ಇರ್ಫಾನ್ ನೋವು, ಕಾಳಜಿ, ಆತಂಕ ಅರ್ಥವಾಗತೊಡಗಿತು. ನಿಜಕ್ಕೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನು ಇರ್ಫಾನ್ ಹೇಳುತ್ತಿದ್ದರು. ದೇಶದಲ್ಲಿ ಒಂದೇ ಮಾರ್ಗ,ಧ್ವನಿ ಪ್ರಬಲವಾದರೆ ಆಗುವ ಅಪಾಯದ ಬಗ್ಗೆ, ನಟರು ಸಾಮಾಜಿಕ ಪ್ರಶ್ನೆಗಳ ಬಗ್ಗೆ ಮಾತಾಡಲೇಬೇಕಾದ ಬಗ್ಗೆ ಮಾತಾಡುತ್ತಾ ಹೋದರು. 

ರಾತ್ರಿ ಪಾರ್ಟಿಯಲ್ಲಿ ಇರ್ಫಾನ್ ಇನ್ನಷ್ಟು ಮುಕ್ತವಾಗಿದ್ದರು. ಇರ್ಫಾನ್ ಆರಾಮಾಗಿ ಹರಟುತ್ತಿದ್ದನ್ನು ನೋಡುತ್ತಿದ್ದ ನನಗೆ, ಅವರು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕಾಣುವ ತೆಳ್ಳಗಿನ ಮುಸ್ಲಿಂ ತರುಣರ ಹಾಗೆ ಕಂಡರು! ಅದಕ್ಕೆ ಸರಿಯಾಗಿ ಕೊರಳಿಗೆ ಮಫ್ಲರ್ ಬೇರೆ! ಎನ್‌ಎಸ್‌ಡಿಯಲ್ಲಿ ವಿದ್ಯಾರ್ಥಿಯಾಗಿದ್ದ ಇರ್ಫಾನ್ ದಪ್ಪಗಾಗಲಿ ಎಂದು ಅವರ ಅಮ್ಮಿ ಕ್ಯಾರಿಯರ್ ತುಂಬ ತುಪ್ಪ ತಂದು ಕೊಡುತ್ತಿದ್ದುದನ್ನೂ, ಅದನ್ನು ಇರ್ಫಾನ್ ಯಾರಿಗೂ ಕೊಡದೆ ತಿನ್ನುತ್ತಿದ್ದುದನ್ನೂ ಸುಮತಿ ನೆನಪಿಸಿದರು. ‘ನಾನು ಕಡ್ಡೀ ಪೈಲ್ವಾನ್ ಥರಾ ಇದ್ನಲ್ಲಾ, ದಪ್ಪ ಆಗಬೇಕೂಂತ ತುಪ್ಪಾನ ಯಾರಿಗೂ ಕೊಡದೆ ಒಬ್ಬನೇ ತಿನ್ನುತ್ತಿದ್ದೆ. ದಪ್ಪ ಆಗಬೇಕು ಅಂತ ರೋಡ್‌ಸೈಡ್ ತಿಂಡೀನೂ ತಿನ್ನುತ್ತಿದ್ದೆ.…ಏನೂ ಪ್ರಯೋಜನವಾಗಲಿಲ್ಲ!’ ಎಂದು ಇರ್ಫಾನ್ ನಕ್ಕರು.

ಆ ಕಾಲಕ್ಕೆ ನನಗೆ ಇರ್ಫಾನ್ ಒಬ್ಬ ವಿಶಿಷ್ಟ ನಟನೆಂಬ ಅಂದಾಜಿತ್ತೇ ಹೊರತು, ಅವರ ಮುಖ್ಯ ಸಿನಿಮಾಗಳನ್ನು ನೋಡಿರಲಿಲ್ಲ. ‘ಸ್ಲಂ ಡಾಗ್ ಮಿಲಿಯನೇರ್’, ‘ಲಂಚ್ ಬಾಕ್ಸ್’ ಥರದ ಸಿನಿಮಾಗಳನ್ನು, ಅವರ ನಟನೆಯ ತುಣುಕುಗಳನ್ನು ಗಮನಿಸಿದ್ದೆ. ಆದರೆ ಒಬ್ಬ ವ್ಯಕ್ತಿ ನಿಜವಾದ ನಟನೋ, ನಟಿಯೋ ಅಲ್ಲವೋ ಎಂಬುದನ್ನು ತಿಳಿಯಲು ಒಂದೇ ಸಿನಿಮಾ, ಒಂದೇ ಪಾತ್ರ ಸಾಕು! ನಾನು ಗಮನಿಸಿದ್ದ ಕೆಲವೇ ಪಾತ್ರಗಳಲ್ಲೇ ಇರ್ಫಾನ್ ಪಾತ್ರಕ್ಕೆ ತಕ್ಕಂತೆ ‘ನಟಿಸದೆ’ ಪಾತ್ರವನ್ನು ಮರು ಸೃಷ್ಟಿಸುವ ಸೃಜನಶೀಲ ಕಲಾವಿದ ಎಂಬುದು ಮನದಟ್ಟಾಗಿತ್ತು. 

ಇದೆಲ್ಲ ಆ ರಾತ್ರಿ ನೆನಪಾಗಿ, ‘ಒಂದಲ್ಲ ಒಂದು ದಿನ ನಿಮಗೆ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ’ ಎಂದೆ. ಇರ್ಫಾನ್ ಕಣ್ಣರಳಿಸಿದರು. ನಾನು ವಿವರಿಸಿದೆ: ‘ಒಂದು ಕಾಲಕ್ಕೆ ನಾಸಿರುದ್ದೀನ್ ಶಾ ನಟನೆಗೆ ಆಸ್ಕರ್ ಬರಬಹುದೆಂದುಕೊಂಡಿದ್ದೆ; ಅವರ ನಟನೆ ಇಳಿಮುಖವಾಯಿತು; ನಾನಾ ಪಾಟೇಕರ್ ಸತ್ವ ಕಳಕೊಂಡು ‘ಟೈಪ್ಡ್’ ನಟನಾದರು. ನೀವು ಈಗಿನ ಹಾದಿಯಲ್ಲೇ ಮುಂದುವರಿದರೆ ಮುಂದೊಮ್ಮೆ ಆಸ್ಕರ್ ಬರುವುದು ಗ್ಯಾರಂಟಿ; ಇದು ನನ್ನ ನಂಬಿಕೆ.’

ಇರ್ಫಾನ್ ಅಚ್ಚರಿಗೊಳ್ಳಲಿಲ್ಲ. ಇರ್ಫಾನ್‌ಗೆ ದೊಡ್ಡ ದೊಡ್ಡ ರಾಷ್ಟ್ರೀಯ, ಅಂತರ‍್ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು. ನಟನಾಲೋಕದ ನಿತ್ಯವಿದ್ಯಾರ್ಥಿಯಂತಿದ್ದ ಇರ್ಫಾನ್‌ಗೆ ಆಸ್ಕರ್ ಆತ್ಮವಿಶ್ವಾಸವೂ ಇದ್ದಂತಿತ್ತು! 

‘ಹೌ ಡೂ ಯೂ ಸೇ ದಟ್?’ ಎಂದರು ಇರ್ಫಾನ್.

‘ಬಿಕಾಸ್… ಐ ನೋ ಎ ಬಿಟ್ ಆಫ್ ಅಸ್ಟ್ರಾಲಜಿ!’ ಎಂದೆ. 

‘ರಿಯಲಿ?’ ಎನ್ನುತ್ತಾ, ‘ನನ್ನ ಕೈ ನೋಡಿ!’ ಎಂದು ಇರ್ಫಾನ್ ಹಸ್ತ ಚಾಚಿದರು. 

‘ತಮಾಷೆಗೆ ಅಸ್ಟ್ರಾಲಜಿ ಅಂದೆ, ಅಷ್ಟೆ! ಆಸ್ಕರ್ ಬಗ್ಗೆ ಹೇಳಿದ್ದು ಮಾತ್ರ ನನ್ನ ಆಳದ ನಂಬಿಕೆಯಿಂದ’ ಎಂದೆ. 

ಇರ್ಫಾನರ ‘ಮಖಬೂಲ್’ ‘ಪಾನ್ ಸಿಂಗ್ ತೋಮರ್’ ಸೇರಿದಂತೆ ಅವರ ಇನ್ನಿತರ ಮುಖ್ಯ ಸಿನಿಮಾಗಳನ್ನು ನೋಡಿರುವವರು ಈ ಮಾತನ್ನು ಒಪ್ಪಿಯಾರು. 

ರಾತ್ರಿ ಹನ್ನೊಂದಾಗುತ್ತಿತ್ತು. ಇರ್ಫಾನ್, ಸುತಾಪ ಬೆಂಗಳೂರಿನಲ್ಲಿ ಮಧ್ಯರಾತ್ರಿಯ ವಿಮಾನ ಹಿಡಿಯಬೇಕಾಗಿತ್ತು. ವಾಚ್ ನೋಡುತ್ತಾ ಮೇಲೆದ್ದ ಇರ್ಫಾನ್, ತಮ್ಮ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ಕೊಂಚ ಮೇಲೆತ್ತಿ, ‘ಶಲ್ ಐ ಟೇಕ್ ದಿಸ್?’ ಎಂದರು. ಆ ರಾತ್ರಿ ನಸುನಗುತ್ತಾ ಭವಿಷ್ಯ ಕೇಳಲು ಇರ್ಫಾನ್ ನನ್ನೆದುರು ಚಾಚಿದ ಕೈ, ಗ್ಲಾಸ್ ಹಿಡಿದ ಕೈ ಎರಡೂ ನನ್ನ ಕಣ್ಣ ಮುಂದಿವೆ. ಈ ಆತ್ಮೀಯ ಭೇಟಿಯ ನಂತರ ಇರ್ಫಾನ್ ಸಿನಿಮಾಗಳನ್ನು ಹೆಚ್ಚು ಗಮನಿಸಿದೆ. 

ಕರಕುಶಲಿಗಳ ಪರವಾಗಿ ಪ್ರಸನ್ನ ರೂಪಿಸಿದ ಹೋರಾಟಕ್ಕೂ ಇರ್ಫಾನ್ ಬಂದರು; ‘ಕೈ, ಕಾಲು, ಆತ್ಮ, ಭಾವನೆ, ಮಾತುಗಳನ್ನು ಬಳಸಿ ನಟನೆ ಮಾಡುವ ನನಗೆ, ಕೈಗಳನ್ನು ಬಳಸಿ ಕೆಲಸ ಮಾಡುವ ಕುಶಲಕರ್ಮಿಗಳು ನನ್ನ ಅಣ್ಣ ತಂಗಿಯರಂತೆ ಕಾಣುತ್ತಾರೆ. ನನಗೆ ದುಡ್ಡು ಬರುತ್ತೆ; ಆದರೆ ಈ ಕುಶಲಕರ್ಮಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ’ ಎಂದು ಇರ್ಫಾನ್ ಕಾಳಜಿಯಿಂದ ಹೇಳಿದ್ದರು.  

ಇರ್ಫಾನ್‌ಗೆ ಬ್ರೈನ್ ಟ್ಯೂಮರ್ ಆದಾಗ ದುಗುಡಗೊಂಡವರಲ್ಲಿ ನಾನೂ ಒಬ್ಬ. ನಂತರ ಇರ್ಫಾನ್ ಸಾವನ್ನು ಗೆದ್ದು ಬಂದವರಂತೆ ‘ಆಂಗ್ರೇಝಿ ಮೀಡಿಯಂ’ ಸಿನಿಮಾದಲ್ಲೂ ನಟಿಸಿದರು. ಕೊನೆಯ ಸಿನಿಮಾದಲ್ಲೂ ಅವರ ಸತ್ವ ಮುಕ್ಕಾಗಿರಲಿಲ್ಲ. ಇರ್ಫಾನ್‌ಗೆ ಕಲೆಯೇ ಮರುಜೀವ ತುಂಬಿದಂತಿತ್ತು. ಸಾವಿನೊಂದಿಗೆ ಸೆಣಸಿದ್ದ ಇರ್ಫಾನ್ ತಮ್ಮ ಬದುಕಿನಲ್ಲಿ ಇಂಗ್ಲಿಷಿನೊಂದಿಗೂ ಸೆಣಸಿದ್ದರು! ಅದು ಕೂಡ ಈ ಸಿನಿಮಾದಲ್ಲಿತ್ತು. 

ಒಳ್ಳೆಯ ಇಂಗ್ಲಿಷ್ ಬರದೆ ಮುಂಬೈನಲ್ಲಿ ಸೆಲೆಬ್ರಿಟಿ ನಟನಾಗುವುದು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯ ನಡುವೆ ತಮಗೆ ಗೊತ್ತಿದ್ದಷ್ಟೇ ಇಂಗ್ಲಿಷಿನಲ್ಲಿ ಹಾಲಿವುಡ್ ಸಿನಿಮಾಗಳಲ್ಲೂ ಇರ್ಫಾನ್ ನಟಿಸಿ ಗೆದ್ದಿದ್ದರು; ಅಸಲಿ ನಟನಾ ಪ್ರತಿಭೆ ಏನನ್ನಾದರೂ ಅನುಕರಿಸಬಲ್ಲದು, ಮರು ಸೃಷ್ಟಿಸಬಲ್ಲದು ಎಂಬುದನ್ನು ಇಪ್ಪತ್ತು ವರ್ಷಗಳಲ್ಲಿ ಸಾಧಿಸಿ ತೋರಿಸಿದರು. ‘ಈ ಪಾತ್ರವನ್ನು ಇರ್ಫಾನ್ ಅಲ್ಲದೆ ಬೇರೆ ಯಾರೂ ನಿಭಾಯಿಸಲಾರರು’ ಎನ್ನುವಷ್ಟರ ಮಟ್ಟಿಗೆ ಬೆಳೆಯುತ್ತಾ ಹೋದರು.

ಒಮ್ಮೆ ಕ್ಲಿಕ್ಕಾದ ರೀತಿಯ ಪಾತ್ರವನ್ನು ಮತ್ತೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಇರ್ಫಾನ್ ನಂಬಿದ್ದರು. ‘ಹೀರೋ’ಗೆ ಇಂಥದೇ ಮುಖವಾಗಲೀ, ಇಂಥದೇ ಮೈಕಟ್ಟಾಗಲೀ ಮುಖ್ಯವಲ್ಲ; ಅಸಲಿಗೆ, ನಟನೊಬ್ಬ ‘ಹೀರೋ’ ಆಗಲೇಬೇಕಾಗಿಲ್ಲ; ನಟನೊಳಗಿನ ಸತ್ವ ಮಾತ್ರ ಅವನನ್ನು ಕಲಾವಿದನನ್ನಾಗಿ ಮಾಡುತ್ತದೆ ಎಂದು ಇರ್ಫಾನ್ ತೋರಿಸಿದರು. ಪ್ರತಿ ಪಾತ್ರದ ಒಳಸತ್ವವನ್ನು ಗುರುತಿಸಿ, ವ್ಯಾಖ್ಯಾನಿಸಿ, ವಿಸ್ತರಿಸಿ, ಆಯಾ ವ್ಯಕ್ತಿತ್ವಗಳ ಅಗೋಚರ ಸತ್ಯಗಳನ್ನು ಕಾಣಿಸಿದರು.  

ಇರ್ಫಾನ್ ಎಷ್ಟು ಗಂಭೀರ ನಟನೆಂದರೆ, ರಾತ್ರಿ ಎಷ್ಟೋ ಹೊತ್ತಿನ ತನಕ ನಾಳೆಯ ಶೂಟಿಂಗ್ ಸ್ಕ್ರಿಪ್ಟ್ ಓದುತ್ತಿದ್ದರು. ಬಜಾರಿನಲ್ಲಿ, ರಸ್ತೆಯಲ್ಲಿ, ಲಿಫ್ಟಿನಲ್ಲಿ ಇರ್ಫಾನ್ ಡೈಲಾಗುಗಳನ್ನು ಗಟ್ಟು ಮಾಡಿಕೊಳ್ಳುತ್ತಿದ್ದುದನ್ನು ಸುತಾಪ ತಮಾಷೆ ಮಾಡುತ್ತಿದ್ದರು. ಇವೆಲ್ಲ ಪ್ರತಿ ಪಾತ್ರದ ಮನೋಲೋಕ ಅರಿತು, ಆ ಪಾತ್ರದ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂದು ನಂಬಿದ್ದ ಇರ್ಫಾನರ ನಿತ್ಯ ತಯಾರಿಗಳಾಗಿದ್ದವು. ಪ್ರತಿ ಜೀವಿಗೂ ತನ್ನದೇ ಆದ ವಿಶಿಷ್ಟ ಅಸ್ತಿತ್ವ, ಮಹತ್ವ ಇರುತ್ತದೆ ಎಂಬ ಸತ್ಯವನ್ನು ಅವರ ನಟನೆ ಹುಡುಕುತ್ತಿತ್ತು. ವಿಶಾಲ್ ಭಾರದ್ವಾಜ್ ಹೆಂಡತಿಗೆ ಹೊಡೆಯುವ ಪಾತ್ರವೊಂದನ್ನು ಇರ್ಫಾನರಿಗೆ ಕೊಟ್ಟರು; ಆ ಪಾತ್ರ ಮಾಡಲು ಮೊದಮೊದಲು ಒಲ್ಲೆನೆಂದಿದ್ದ ಇರ್ಫಾನ್, ‘ಆ ಪಾತ್ರದಲ್ಲಿ ನಾನು ಶೋಧಿಸುವುದಾಗಲೀ, ಕಲಿಯುವುದಾಗಲೀ ಏನೂ ಇಲ್ಲ’ ಎಂದಿದ್ದರು. 

ಮನುಷ್ಯನ ಒಳಲೋಕದ ವಿಚಿತ್ರಗಳನ್ನು, ಮಾನವರ ಸೂಕ್ಷ್ಮಗಳನ್ನು ಎಲ್ಲ ಬಗೆಯ ಪ್ರೇಕ್ಷಕರಿಗೂ ಕಾಣಿಸಬಲ್ಲ ಇರ್ಫಾನ್ ಥರದ ಪ್ರತಿಭೆಗಳು ತೀರ ಕಡಿಮೆ. ಇಂಥ ಅಪರೂಪದ ನಟರು ಹಠಾತ್ತನೆ ನಿರ್ಗಮಿಸಿದಾಗ ಒಟ್ಟಾರೆ ಪ್ರಬುದ್ಧ ನಟನೆಯ ಲೋಕಕ್ಕೇ ನಿಜಕ್ಕೂ ದೊಡ್ಡ ನಷ್ಟ. ಈಚೆಗೆ ಲೋಹಿಯಾ ಪಾತ್ರದ ಚರ್ಚೆ ಬಂದಾಗ ಇರ್ಫಾನ್ ಮತ್ತೆ ನೆನಪಾದರು; ಈ ನೆಪದಲ್ಲಿ  ಮರುಟಿಪ್ಪಣಿ. ಜೊತೆಗೆ ನಟ ಕಿರಣ್ ನಾಯಕ್ ಕಳಿಸಿದ, ಖ್ಯಾತ ಸಿನಿಮಾ ನಿರ್ದೇಶಕ ಮನ್ಸೋರೆ ಮಾಡಿದ ಇರ್ಫಾನ್ ಸ್ಕೆಚ್! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 



Latest Video


Nataraj Huliyar Official
YouTube Channel

SUBSCRIBE