Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
19 May 2024 ಪ್ರತಿಮೆಗೊಂದು ಪ್ರತಿಮೆ ಹೊಳೆವ ಪ್ರತಿಭಾವಿಲಾಸ!

ವಿದ್ಯಾರ್ಥಿನಿಯೊಬ್ಬರು ತಮ್ಮೂರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಮಾಡುವ ಸಾಹಸಕ್ಕಿಳಿದಿದ್ದರು. ಸಾಹಿತ್ಯ, ಸಂಗೀತಗಳ ಲೋಕದ ಸೂಕ್ಷ್ಮಜೀವಿಯಾದ ಆಕೆಗೆ ಪಕ್ಕದ ಜಮೀನಿನವರು ಅನಗತ್ಯ ಕಿರುಕುಳ ಕೊಡತೊಡಗಿದರು. ಈಚೆಗೆ ಅವರು ತಮ್ಮ ಕೃಷಿ ಸಾಹಸ ಹೇಳುತ್ತಲೇ ತಮ್ಮ ಜಮೀನಿನ ಪಕ್ಕದ 'ಕಿರುಕುಳಜೀವಿ’ಯ ಉಪಟಳ ಹೇಳಿಕೊಂಡರು. ಈ 'ಕಿರುಕುಳಜೀವಿ’ ಎಂಬ ಪದ ನನಗೊಮ್ಮೆ ಹೀಗೇ ಹೊಳೆಯಿತು! ಅದರ ಸಂಕ್ಷಿಪ್ತರೂಪ 'ಕಿಕುಜೀ!’ 

ಅದಿರಲಿ! ಆಕೆಯ ಊರಿಗೆ ಸ್ವಲ್ಪ ಹತ್ತಿರದಲ್ಲಿ ಗೆಳೆಯರೊಬ್ಬರು ಪೊಲೀಸ್ ಅಧಿಕಾರಿಯಾಗಿರುವುದು ನೆನಪಾಯಿತು. 'ಅವರನ್ನು ಭೇಟಿ ಮಾಡಿ ನೋಡಿ’ ಎಂದೆ.
ಸಮಸ್ಯೆ ಹೊತ್ತು ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಆಕೆ ಮಾತಿನ ನಡುವೆ ಅವರ ಸಾಹಿತ್ಯ ವಿಹಾರದ ಪರಿ ಕಂಡು ವಿಸ್ಮಯಗೊಂಡರು; ಆಕೆಯ ಸಮಸ್ಯೆಗೂ ಅಧಿಕಾರಿ ಒಂದು ಪರಿಹಾರ ತೋರಿಸಿದ್ದರು. ಆ ಪರಿಹಾರಕ್ಕಿಂತ ಹೆಚ್ಚಾಗಿ, ಕಾಖಿ ತೊಟ್ಟ ಅಧಿಕಾರಿಯೊಳಗೆ ಉಕ್ಕುತ್ತಲೇ ಇದ್ದ ಸಾಹಿತ್ಯದ ಒರತೆ ಕಂಡು ಆಕೆ ದಂಗಾಗಿದ್ದರು. 

ಆಕೆ ತಮ್ಮ ವಿಸ್ಮಯವನ್ನು ಹೇಳುತ್ತಿರುವಾಗ ಹತ್ತು ವರ್ಷಗಳ ಕೆಳಗೆ ಈ ಅಧಿಕಾರಿ ನನಗೂ ಇಂಥದೇ ವಿಸ್ಮಯ ಹುಟ್ಟಿಸಿದ್ದು ನೆನಪಾಯಿತು. ಆಗಿನ್ನೂ ಅವರು ಸರ್ಕಲ್ ಇನ್‌ಸ್ಪೆಕ್ಟರ್  ಆಗಿದ್ದರು. ಅವರ ಪರಿಚಯವೂ ನನಗಿರಲಿಲ್ಲ. ನಾನು ಯಾವುದೋ ಸಮಸ್ಯೆ ಹೇಳಿದ ತಕ್ಷಣ, ಅವರು ನನ್ನ ಸಹಾಯಕ್ಕೆ ಧಾವಿಸಿದ್ದರು. ಅಷ್ಟೊತ್ತಿಗಾಗಲೇ ನನ್ನ ಬರಹಗಳನ್ನು ಗಮನಿಸಿದ್ದ ಅವರು ಮಾತುಮಾತಾಡುತ್ತಲೇ ತಮ್ಮ ಯಾವುದೋ ಮಾತಿಗೆ ಉದಾಹರಣೆಯಾಗಿ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ದ ಪದ್ಯವೊಂದನ್ನು ಉಲ್ಲೇಖಿಸಿದರು. 

ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸುವುದು ಸಾಮಾನ್ಯವಾಗಿ ಸಾಹಿತ್ಯಾಸಕ್ತರ ಅಭ್ಯಾಸ ಎಂದುಕೊಂಡು ಸುಮ್ಮನಿದ್ದೆ. ಆದರೆ ಮರುಗಳಿಗೆಗೇ ಆ ಇನ್‌ಸ್ಪೆಕ್ಟರ್ ಸ್ನೇಹಮಯ ಸವಾಲೊಂದನ್ನು ಎಸೆದರು:

‘ನೀವು ಯಾವುದಾದರೂ ಥೀಮ್ ಹೇಳಿ, ನಾನು ಅದಕ್ಕೆ ತಕ್ಕ ಕಗ್ಗವೊಂದನ್ನು ಹೇಳುತ್ತೇನೆ!’  

‘ಸರಿ! ’ಸೈಲೆನ್ಸ್’ ಬಗ್ಗೆ ಮಂಕುತಿಮ್ಮನ ಕಗ್ಗದಲ್ಲಿ ಏನಾದರೂ ಬರುತ್ತಾ, ನೋಡಿ’ ಎಂದೆ.  ಒಂದು ಕಾಲಕ್ಕೆ ನನಗೆ ಪ್ರಿಯವಾಗಿದ್ದ ಆ ಪದ್ಯ ಇನ್‌ಸ್ಪೆಕ್ಟರ್ ನಾಲಗೆಯ ತುದಿಯಲ್ಲೇ ಇತ್ತು! 

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ 
ಬೆಳಕೀವ ಸೂರ‍್ಯ ಚಂದ್ರರದೊಂದೂ ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.

ಸಣ್ಣಪುಟ್ಟದ್ದನ್ನೇ ‘ಸಾಧನೆ’ ಎಂದುಕೊಂಡು ಆ ಬಗ್ಗೆ ಶಂಖ ಬಾರಿಸಿ ಕೂಗಿಕೊಳ್ಳುವ ಆತ್ಮಕೇಂದ್ರಿತ ಭಾರತೀಯರಿಗೆ ಎಚ್ಚರ ಹೇಳುವ ಈ ಪದ್ಯವನ್ನು ಹದಿಹರೆಯದಲ್ಲೇ ಒಪ್ಪಿ ಮೆಚ್ಚಿದ್ದು, ಹಾಗೂ ಆ ಪದ್ಯದ ಸಂದೇಶದಂತೆ ಅಷ್ಟಿಷ್ಟು ತುಟಿ ಹೊಲಿದುಕೊಂಡಿದ್ದು ನೆನಪಾಯಿತು! ಇದೀಗ ಮತ್ತೆ ಆ ಪದ್ಯ ಕೇಳಿ ಪುಳಕ ಹುಟ್ಟಿತು. 

ಈ ಅಧಿಕಾರಿಯ ವಿಶಿಷ್ಟ ಪ್ರತಿಭೆಯ ಬಗ್ಗೆ ನನ್ನಲ್ಲಿ ಹುಟ್ಟಿದ ಗೌರವ, ಆನಂದಗಳನ್ನು ಅವರಿಗೆ ತುಟಿ ಹೊಲಿದುಕೊಂಡೇ, ಅಂದರೆ ಸೂಚ್ಯವಾಗಿ, ಹೇಳಿದೆ. ಆಗ ಅವರು ‘ಅಲ್ಲಮಪ್ರಭುಗಳ ವಚನಗಳು, ಗೋಪಾಲಕೃಷ್ಣ ಅಡಿಗರ ಕವನಗಳನ್ನು ಎಲ್ಲಿ ಬೇಕಾದರೂ ಕೇಳಿ, ಹೇಳುತ್ತೇನೆ’ ಎಂದು ಇನ್ನಷ್ಟು ಬೆರಗು ಹುಟ್ಟಿಸಿದರು! 

ಮಂಕುತಿಮ್ಮನ ಕಗ್ಗದ ಬಗೆಗಿನ ಅವರ ಒಲವನ್ನೇನೋ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಿತ್ತು; ಆದರೆ ಕನ್ನಡದ ಶ್ರೇಷ್ಠ ಕವಿಗಳ ಸಾಲಿನಲ್ಲಿರುವ ಅಲ್ಲಮಪ್ರಭು, ಅಡಿಗರಂಥ ಸಂಕೀರ್ಣ ಕವಿಗಳಿಗೂ ಚಾಚಿಕೊಂಡಿರುವ ಅವರ ಬಗ್ಗೆ ವಿಶೇಷ ಅಭಿಮಾನ ಮೂಡತೊಡಗಿತು. ಆ ಗಳಿಗೆಯಲ್ಲೇ ನಾನು ಅವರ ಗೆಳೆಯನಾದೆ; ಸಂವೇದನೆಗಳು ಮ್ಯಾಚ್ ಆಗದೆ, ತಕ್ಷಣ ಇಂಥ ಸ್ನೇಹ ಹುಟ್ಟುವುದು ಕಷ್ಟ. ನೀವು ಇಂಥ ಸ್ನೇಹಿತ, ಸ್ನೇಹಿತೆಯರನ್ನು ಹೆಚ್ಚು ಭೇಟಿ ಮಾಡಿ, ಬಿಡಿ; ಆ ಸ್ನೇಹ ಹಾಗೇ ಇರುತ್ತದೆ. ಅವತ್ತಿನಿಂದಲೂ ಅವರು ನನ್ನ ಅಥವಾ ಇತರರ ಕಷ್ಟಗಳಲ್ಲಿ ಕೈ ಹಿಡಿದಿದ್ದಾರೆ. ಅದನ್ನೆಲ್ಲ ಹೇಳಲು ಇದು ವೇದಿಕೆಯಲ್ಲ. 

ಇದನ್ನೆಲ್ಲ ಬರೆಯುತ್ತಾ, ’ಸ್ನೇಹ’ ಎಂಬ ಪದ ಸುಳಿದ ತಕ್ಷಣ, ಕಿ.ರಂ. 'ಸ್ನೇಹ' ಎಂಬ ಪದಕ್ಕೆ ಕೊಟ್ಟ ವಿವರಣೆಯನ್ನು ನನ್ನ ’ಕಾಮನಹುಣ್ಣಿಮೆ’ ಕಾದಂಬರಿಯ (ಪಲ್ಲವ ಪ್ರಕಾಶನ) ಚಂದ್ರ ನೆನಪಿಸಿಕೊಳ್ಳುವ ಭಾಗ ನೆನಪಾಯಿತು: 

’[ಕಿ.ರಂ. ನಾಗರಾಜರು] ಇದ್ದಕ್ಕಿದ್ದಂತೆ ’ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ ಸುತ್ತಿ ಸುತ್ತಿ…’ ಎಂಬ ಅಕ್ಕನ ವಚನಕ್ಕೆ ಬಂದು ನಿಂತರು. ಅದೇ ಸಾಲನ್ನು ಇನ್ನೊಂದು ಸಲ ಹೇಳಿ, ’ಸ್ನೇಹ ಅಂದರೆ ಏನು ಗೊತ್ತೇನ್ರೀ?’ ಎಂದು ಚಣ ಮಾತು ನಿಲ್ಲಿಸಿ, ಸೈಲೆಂಟಾಗಿ ಸುತ್ತಮುತ್ತ ನೋಡಿದರು; ಕನ್ನಡ ಮೇಷ್ಟರಾದಿಯಾಗಿ ಯಾರೂ ಇದಕ್ಕೆ ಉತ್ತರ ಹೇಳಲು ಬಾಯಿ ಬಿಡಲಿಲ್ಲ. ಆಮೇಲೆ ಅವರೇ, ’ಸ್ನೇಹ ಅಂದರೇ … ಅಂಟು ಅಂತ! ಗೊತ್ತೇನ್ರೀ!’ ಎಂದು ನಗುತ್ತಾ ಕಣ್ಣು ಮಿಟುಕಿಸಿದರು!’

ಕಿ.ರಂ. ಮಾತನ್ನು ಉಲ್ಲೇಖಿಸುತ್ತಿರುವಂತೆಯೇ ಅವರೂ, ಕವಿ ಕೆ.ಬಿ. ಸಿದ್ಧಯ್ಯನವರೂ ಒಂದು ರಾತ್ರಿ ’ವಚನದಾಟ’ ಶುರು ಮಾಡಿದ್ದು ಕಣ್ಣಿಗೆ ಬಂತು! ಒಂದು ವಚನ ಒಗೆದು, ಅದಕ್ಕೆ ಸರಣಿಯಂತೆ ಸೇರಿಕೊಳ್ಳುವ ಇನ್ನೊಂದು ವಚನ, ಮತ್ತೊಂದು ವಚನ… ಹೀಗೆ ಅವರ ಸುಂದರ ಸಂಧ್ಯಾ ವಚನ ಖವ್ವಾಲಿ ನಡೆಯುತ್ತಿತ್ತು. ಅಂಥ ಪ್ರತಿಭೆಯನ್ನು ನಾನು ಮತ್ತೆ ಕಂಡಿದ್ದು ಈ ಹೊಸ ಗೆಳೆಯನಲ್ಲಿ.

ಇದಕ್ಕಿಂತ ಭಿನ್ನವಾದ, ಜನಪದ ಲೋಕದ ಅನನ್ಯ ಪ್ರತಿಭೆಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಒಗಟಿಗೊಂದು ಒಗಟು ಹೇಳುವ ಪ್ರತಿಭೆಗಳು, ಸವಾಲ್ ಜವಾಬ್‌ಗಳ, ಖವ್ವಾಲಿಗಳ ಅದ್ಭುತ ಹಾಡುಗಾರ, ಹಾಡುಗಾರ್ತಿಯರು ಕೂಡ ನಿಮಗೆ ಪರಿಚಯವಿರಬಹುದು. ವಚನ ಸಾಹಿತ್ಯ ರಚನೆಯಲ್ಲಿ ಭಾಗಿಯಾದ ಹಲವರು ಪ್ರತಿಮೆಗೊಂದು ಪ್ರತಿಮೆ ತಗುಲಿ ಬೆಳೆದ ವಚನಗಳನ್ನು ನುಡಿದಿದ್ದಾರೆ ಎಂದು ಊಹಿಸುವೆ. ಆಫ್ರಿಕದ ಜಾನಪದದಲ್ಲಿ ಕತೆಗೊಂದು ಕತೆ, ಸರಗತೆಗಳ ಲೋಕವೂ ಇದೆ. 

ಆದರೆ ಈ ಕಾಲದ ಮೌಖಿಕ ಪ್ರತಿಭೆ ಈ ಗೆಳೆಯನಲ್ಲಿ ಕಾಲಕ್ಕೆ ತಕ್ಕ ರಿಫೈನ್‌ಮೆಂಟ್ ಪಡೆದಿತ್ತು. ನಾವು ಓದಿ ಹೀರಿಕೊಂಡಿದ್ದರ ನೆನಪು ಹೀಗೆ ಸೃಜನಶೀಲವಾಗಿ ಒದಗುವಂತೆ, ನುಡಿಯುವಂತೆ ನೆರವಾಗುವ ಈ ಪ್ರತಿಭೆ ಸಾಮಾನ್ಯದ್ದಲ್ಲ!   

ಆ  ಗೆಳೆಯ ಮೊದಲ ಸಲ ಭೇಟಿಯಾಗಿ ಹೊರಡುವಾಗ ನನ್ನ ’ಇಂತಿ ನಮಸ್ಕಾರಗಳು: ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ’ ಪುಸ್ತಕ ಕೊಟ್ಟೆ. ಅವರು ಜೀಪು ಹತ್ತಿದರು. 

ಮುಂದಿನ ಎರಡೇ ನಿಮಿಷದಲ್ಲಿ ಆ ಪುಸ್ತಕದ ಪರಿವಿಡಿಯ ಮೇಲೆ ಕಣ್ಣಾಡಿಸಿದ್ದ ಅವರು ಫೋನ್ ಮಾಡಿದರು: 

‘ಸಾರ್! ಇಲ್ಲೊಂದು ಚಾಪ್ಟರ್ ಟೈಟಲ್ ಬರುತ್ತಲ್ಲಾ- ‘ಇದ ಕಂಡು ಬೆರಗಾದೆ ಗುಹೇಶ್ವರಾ!’  ಇದು ಅಲ್ಲಮ ಪ್ರಭುಗಳ ’ಆ….’ ವಚನದ ಸಾಲಲ್ಲವೆ?’
’ಹೂಂ’ ಎಂದೆ. 

ಆ ವಚನ ಅವರ ಬಾಯಲ್ಲೇ ಇತ್ತು:

ಬೆಳಕೂ ಅದೇ! ಕತ್ತಲೆಯೂ ಅದೇ! 
ಇದೇನು ಚೋದ್ಯವೊ? ಒಂದಕ್ಕೊಂದಂಜದು
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ!

ಅವರು ಫೋನಿಟ್ಟ ತಕ್ಷಣ, ನಮ್ಮ ಅನೇಕ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಲ್ಲಿ ಹುಡುಕಿದರೂ ಕಾಣದ ಅವರ ತೀವ್ರ ಕಾವ್ಯಮೋಹ ನನ್ನೊಳಗೆ ಹಬ್ಬತೊಡಗಿತು. ಅವರು ಸಮಸ್ಯೆಯೊಂದನ್ನು ಬಗೆಹರಿಸಲು ಬಂದಿದ್ದರು ಎಂಬುದನ್ನೇ ಮರೆತು ಅವರ ನವಮೌಖಿಕ ಪ್ರತಿಭಾಲೋಕ ತೆರೆದ ವಿಸ್ಮಯದಲ್ಲಿ ಮುಳುಗಿದೆ. ಅವತ್ತು ಅವರ ಹಾಜರಿಯ ವೈಖರಿಯಿಂದಲೇ ಕಳ್ಳ ಸಿಕ್ಕು ಬಿದ್ದ; ಹೇಳದೆ ಕೇಳದೆ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋದ! ಆ ಕತೆ ಬೇರೆ!  

ಒಂದು ಪ್ರತಿಮೆ ಇನ್ನೊಂದು ಪ್ರತಿಮೆಗೆ ತಗುಲಿ ಕವಿತೆ ಬೆಳೆಯುವ ರೀತಿ ಕವಯಿತ್ರಿಯರಿಗೆ ಗೊತ್ತಿರುತ್ತದೆ; ಎಷ್ಟೋ ಸಲ ಹಟಾತ್ತನೆ ಹೊಳೆದ ಪದವೇ ತಮ್ಮ ಕವಿತೆಯನ್ನು ಎಲ್ಲೋ ಕರೆದೊಯ್ಯುವ ಬೆರಗನ್ನು, ಬೆಡಗನ್ನು ಸೃಜನಶೀಲರು ಅನುಭವಿಸುತ್ತಲೇ ಇರುತ್ತಾರೆ. ಆದರೆ ಓದುಗ, ಓದುಗಿಯರ ಒಳಗಿಳಿದ ನೂರಾರು ಪಠ್ಯಗಳು ಹೀಗೆ ಕರೆದಾಗ ಒದಗಿ ಬರುವ ಪ್ರತಿಭೆ ಮಾತ್ರ ಅಪರೂಪ ಮತ್ತು ವಿಶಿಷ್ಟ! 

ನಾವು ಓದಿದ ಕವಿತೆಗಳು ನಮ್ಮ ಆಳಕ್ಕಿಳಿಯದೆ, ನಮ್ಮ ಒಳಗಿನ ಭಾಗವಾಗದೆ, ಕಾವ್ಯದ ಬಗ್ಗೆ ಸಹಜ ಪ್ರೀತಿಯಿಲ್ಲದೆ, ಕವಿತೆಯ ಸಾಲುಗಳು ಹೀಗೆ ಎದೆಯಿಂದ ಪುಟಿದೆದ್ದು ಹೊರ ಚಿಮ್ಮಲಾರವು. ಕಿ.ರಂ. ಬಾಯಲ್ಲಿ ಹೀಗೆ ನುಗ್ಗಿ ನುಗ್ಗಿ ಬರುತ್ತಿದ್ದ ಕಾವ್ಯಪ್ರತಿಮೆಗಳನ್ನು ಕೇಳಿದ್ದ ನಾನು ಅವರ ನಂತರ ಹೀಗೆ ಸಾಲುಸಾಲುಗಳನ್ನು ನುಡಿಯಬಲ್ಲ, ನುಡಿಸಬಲ್ಲ ಮತ್ತೊಬ್ಬರನ್ನು ಮೊದಲ ಬಾರಿಗೆ ಕಂಡಿದ್ದೆ. ’ಕುಸುಮಬಾಲೆ’ಯನ್ನು ಎಲ್ಲಿ ಕೇಳಿದರಲ್ಲಿ ಹೇಳುವ ಮೈಸೂರು ಸೀಮೆಯ ಕನ್ನಡ ಪ್ರೊಫೆಸರ್ ಶಿವಸ್ವಾಮಿ ಕೂಡ ನೆನಪಾದರು.

ಮತ್ತೆ ಪೊಲೀಸ್ ಗೆಳೆಯರ ಮಾತಿಗೇ ಬರುವುದಾದರೆ, ಕಾವ್ಯ ಸಂಗಾತ ಅವರ ಮಾತು, ಗ್ರಹಿಕೆಗಳನ್ನು ಚೆನ್ನಾಗಿಯೇ ರೂಪಿಸಿದಂತಿತ್ತು. ಅದು ಮುಂದೆಯೂ ನನ್ನ ಅನುಭವಕ್ಕೆ ಬಂತು. ಅನೇಕ ಸಾಹಿತ್ಯದ ಮೇಷ್ಟರುಗಳು ತಪ್ಪಿಯೂ ಸಾಹಿತ್ಯ ಮಾತಾಡುವುದಿಲ್ಲ; ಆದರೆ ಈ ಗೆಳೆಯ ಸಾಹಿತ್ಯದ ನಾವೆಯಲ್ಲೇ ಸದಾ ತೇಲುವವರಂತೆ ಕಂಡರು! 

ಇಂಥ ಮೌಖಿಕ ಪ್ರತಿಭೆಯ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದ ರವೀಶ್ ಸಿ. ಆರ್. ಈಚೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆದ ಮೇಲೆ ಹೆಚ್ಚು ಬಿಜಿಯಾಗಿರುವುದು ಸಹಜ. ಆದರೆ ಅವರ ಮನಸ್ಸು ಹಳಗನ್ನಡ, ಹೊಸಗನ್ನಡವೆನ್ನದೆ  ಕನ್ನಡ ಕಾವ್ಯಲೋಕದಲ್ಲೇ ತಂಗಲು ಕಾತರಿಸುತ್ತಿರುತ್ತದೆ. 

ತಮ್ಮ ಬೆಂಗಳೂರಿನ ಮನೆಯಲ್ಲಿ ಸಾವಿರಾರು ಪುಸ್ತಕಗಳ ಖಾಸಗಿ ಗ್ರಂಥಾಲಯವನ್ನೂ ಜೋಡಿಸಿಕೊಂಡಿರುವ ರವೀಶ್ ನಮ್ಮೆಲ್ಲ ಮೇಡಂ, ಮೇಷ್ಟರುಗಳಿಗೂ ಒಳ್ಳೆಯ ಮಾದರಿಯಾಗಬಲ್ಲರು.  ಮೊನ್ನೆಮೊನ್ನೆಯವರೆಗೂ ಪೊಲೀಸ್ ಅಧಿಕಾರಿಯಾಗಿದ್ದು, ಈಗ ಬೇರೊಂದು ಇಲಾಖೆಯಲ್ಲಿರುವ ಸ್ತ್ರೀವಾದಿ ಚಿಂತಕಿ ಧರಣೀದೇವಿ ಈಚೆಗೆ ಬರೆದ ಸೂಕ್ಷ್ಮ ಪದ್ಯಗಳು, ರವಿ ಬೆಸಗರಹಳ್ಳಿ ಆಗಾಗ್ಗೆ ಬರೆಯುವ ಚುರುಕಾದ ಪದ್ಯಗಳು ಕೂಡ ನೆನಪಾಗುತ್ತಿವೆ. ವೃತ್ತಿಯ ಒತ್ತಡಗಳಲ್ಲಿ ಸೃಜನಪ್ರತಿಭೆ ಛಲದಿಂದ ಹೊರ ಚಿಮ್ಮುವ ಈ ಪರಿ ಕಂಡಾದರೂ ’ಅಯ್ಯೋ! ಟೈಮೇ ಇಲ್ಲ!’ ಎಂದು ಹಲುಬುವ ವೃತ್ತಿಜೀವಿಗಳು ಸ್ಫೂರ್ತಿ ಪಡೆಯಲಿ!

ಹತ್ತಾರು ವರ್ಷ ಒಂದು ವೃತ್ತಿಯಲ್ಲಿರುವವರ ಭಾಷೆ, ಧೋರಣೆ, ವರ್ತನೆಗಳನ್ನು ಆ ವೃತ್ತಿಯೇ ರೂಪಿಸುತ್ತಿರುತ್ತದೆ, ನಿಜ. ಆದರೆ ನಮ್ಮ, ನಿಮ್ಮೆಲ್ಲರಂತೆ ಪೊಲೀಸರು ಕೂಡ ತಮ್ಮ ವೃತ್ತಿಯ ನಿರ್ದೇಶನ ಮೀರಿ ಕಲೆ, ಸಾಹಿತ್ಯಗಳ ಒರತೆಗಳನ್ನು ಹುಡುಕಿಕೊಳ್ಳುತ್ತಿರುತ್ತಾರೆ ಎಂಬುದನ್ನು ಬಾಲ್ಯದಿಂದಲೂ ನೋಡಿ ಬಲ್ಲೆ.

ನಮ್ಮ ಗ್ರಾಮೀಣ ರಂಗಭೂಮಿಯಲ್ಲಿ, ಹಳೆಯ ಬೆಂಗಳೂರಿನ ಭಾಗಗಳಲ್ಲಿ ಪೌರಾಣಿಕ ಪಾತ್ರಗಳನ್ನು ಮಾಡುತ್ತಿದ್ದ, ಈಗಲೂ ಪಾತ್ರ ಮಾಡುತ್ತಿರಬಹುದಾದ, ಪೊಲೀಸರು ನಿಮಗೆ ನೆನಪಾಗುತ್ತಿದ್ದಾರೆಯೆ?

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

blog
12 May 2024  ಅತ್ತಲಿತ್ತ ಹರಿದಾಡುವ ಮನಸಿನ ಜಾಣ ಕಣ್ಣು!  

ನಮ್ಮ ಮನಸ್ಸಿಗೆ ಪ್ರಿಯವಾದ ವಸ್ತುವಿನ ಬಗ್ಗೆ ಸಾರ್ವಜನಿಕ ಭಾಷಣ ಮಾಡುವಾಗಲೆಲ್ಲ ಆ ಮಾತುಗಳನ್ನು ಕೇಳಲು ತಕ್ಕ ಮುಖಗಳನ್ನು ಚಿತ್ತ ಹುಡುಕುತ್ತಿರುತ್ತದೆ; ನಮ್ಮ ಕಣ್ಣು ಸಭಾಂಗಣದ ಉದ್ದಗಲಕ್ಕೂ ಹರಿದಾಡುತ್ತಿರುತ್ತದೆ; ನಮ್ಮ ‘ಭಾಷಣಮಗ್ನ ಮನಸ್ಸು’ ತಂಗಲು ತಕ್ಕ ತಾಣವನ್ನು ಅರಸುತ್ತಿರುತ್ತದೆ.

ಭಾಷಣಮಗ್ನ ಮನಸ್ಸಿನ ಇಂಥ ಹರಿದಾಟಗಳನ್ನು ಗೋಪಾಲಕೃಷ್ಣ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಗಿಂತ ಚೆನ್ನಾಗಿ ಹೇಳಿದ ಕನ್ನಡ ಕವಿತೆಯನ್ನು ನಾನಂತೂ ಕಂಡಿಲ್ಲ. ನಿಜವಾದ ಕವಿಯ ಶಕ್ತಿ ಅದು. ಶಕ್ತ ಕವಿಯಲ್ಲಿ ಎಂಥ ಸಂದರ್ಭ ಬೇಕಾದರೂ ಕಾವ್ಯಸಂದರ್ಭವಾಗುತ್ತದೆ. ಕುಂಬಾರನ ಕೈಲಿ ಮಣ್ಣು ಏನೇನೋ ಆಕಾರ ಪಡೆಯುವ ಹಾಗೆ ಅಸಲಿ ಕವಿಯ ಭಾಷೆ ನಾದದಲ್ಲಿ, ಹೊರಳುವಿಕೆಯಲ್ಲಿ, ಶಬ್ದ ನಿಶ್ಶಬ್ದಗಳಲ್ಲಿ ಹಲ ಬಗೆಯ ಆಕಾರ ಪಡೆಯುತ್ತಿರುತ್ತದೆ. ಆಗ ಏನು ಬೇಕಾದರೂ ಕಾವ್ಯವಾಗುತ್ತದೆ! 

ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬನಾದ ವಿಲಿಯಂ ಬಟ್ಲರ್ ಯೇಟ್ಸ್ ಕೂಡ ಒಂದು ಭಾಷಣದ ಸಂದರ್ಭವನ್ನು ಕವಿತೆ ಮಾಡುತ್ತಾ, ‘ಈ ಭಾಷಣ ಗೀಷಣ ಬಿಟ್ಟು ಅಲ್ಲಿ ಕೂತಿರುವ ಆ ಹುಡುಗಿಯನ್ನು ಅಪ್ಪಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬರ್ಥದ ಮಾತುಗಳನ್ನು ಬರೆಯುತ್ತಾನೆ. ಆ ಗಳಿಗೆಯಲ್ಲಿ ‘ಅತ್ತಲಿತ್ತ ಹರಿದಾಡುವ ಮನಸಿಗೆ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ’ ಎಂಬ ಶಿಶುನಾಳ ಶರೀಫನ ಬುದ್ಧಿಮಾತನ್ನು, ಕವಿಯ ಕಿವಿಯಲ್ಲಿ ಯಾರೂ ಉಸುರಿದಂತಿಲ್ಲ! ಶರೀಫ ತೀರಿಕೊಂಡಾಗ ಯೇಟ್ಸ್ ಮೂವತ್ನಾಲ್ಕು ವರ್ಷದ ಪ್ರಖರ ಕವಿಯಾಗಿದ್ದ.

ಅದಿರಲಿ, ಮೇಲೆ ಹೇಳಿದ ಯೇಟ್ಸ್ ಕವಿತೆಯಲ್ಲಿ ಭಾಷಣಕಾರನಿಗೆ ಭಾಷಣದ ನಡುವೆ ಕಾಣಿಸಿಕೊಳ್ಳುವ ಈ ರೊಮ್ಯಾಂಟಿಕ್ ಬಯಕೆ ಸರಿಯಲ್ಲ ಎಂದು ಯಾವ ಮಹನೀಯರೂ ಭಿನ್ನಮತ ವ್ಯಕ್ತಪಡಿಸಿದಂತಿಲ್ಲ! 

ಶರೀಫರ ಮಾತನ್ನು ಯೇಟ್ಸ್ ಕೇಳಿಸಿಕೊಳ್ಳುತ್ತಿದ್ದನೋ ಇಲ್ಲವೋ, ಆದರೆ ಸ್ವತಃ ಶರೀಫನೇ ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳುತ್ತಿದ್ದನೇ ಎನ್ನುವುದೇ ಅನುಮಾನ! ಗುರು ಗೋವಿಂದಭಟ್ಟರೇ ಶರೀಫನ ಮನಸ್ಸು ಅತ್ತಲಿತ್ತ ಹರಿದಾಡದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದ್ದರೂ ಕಿಲಾಡಿ ಕವಿ ಶರೀಫ ಅದನ್ನೆಲ್ಲ ಕೇಳಿಸಿಕೊಳ್ಳುವ ಆಸಾಮಿಯಾಗಿರಲಿಲ್ಲ! ಯಾಕೆಂದರೆ, ಅವನೊಳಗಿನ ಕವಿಯು ಹಾವು ತುಳಿದ ಮಾನಿನಿ, ಹುಬ್ಬಳ್ಳಿ ಕೊಡದ ಮಾಟದಂಥ ಹುಡುಗಿ...ಎಲ್ಲರನ್ನೂ ನೋಡಿ ನೋಡಿ ತನ್ನ ‘ಪದ ಬರಕೋ’ಬೇಕಾಗಿತ್ತಲ್ಲ! 

ಶರೀಫರು ಕನ್ನಡ ಭಾಷೆಯನ್ನು ಆಧುನಿಕವಾಗಿ ಬಳಸಿ ಬರೆದ ಸುಮಾರು ನೂರು ವರ್ಷಗಳ ನಂತರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಬರೆದ ಅಡಿಗರ ಕವಿತೆಯಲ್ಲಿ ನಿರೂಪಕನ ಭಾಷಣಮಗ್ನ ಮನಸ್ಸು ಶರೀಫರ ಮಾತು ಕೇಳದೆ ಅತ್ತಲಿತ್ತ ಹರಿದಾಡುತ್ತಲೇ ಇತ್ತು:

ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ 
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು 
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು 
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ.

ದಶಕಗಳ ಕೆಳಗೆ ಈ ಕವಿತೆಯನ್ನು ಮೊದಲ ಬಾರಿಗೆ ಓದಿದಾಗಿನಿಂದಲೂ ಮತ್ತೆ ಮತ್ತೆ ಸುಳಿಯುತ್ತಲೇ ಇರುವ ‘ಭಾಷಣಮಗ್ನ ಮನಸ್ಸು’, ’ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ’, ತಂಗಲು ’ರೇವುಳ್ಳ ನಡುಗಡ್ಡೆಯೊಂದ’ ಮುಂತಾದ ನುಡಿಚಿತ್ರಗಳು; ಭಾಷಣಕಾರನ ಏಕಾಂಗಿ ಕಣ್ಣು ಸಭಾಂಗಣದಲ್ಲಿ ಹರಿದಾಡುವ ರೀತಿ...ಎಲ್ಲವೂ ನನ್ನೊಳಗೆ ಉಳಿದುಬಿಟ್ಟಿವೆ. 

ಎಂಟು ವರ್ಷಗಳ ಕೆಳಗೆ ಒಂದು ತಂಪಾದ ಮಧ್ಯಾಹ್ನ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯ ಅನುಭವವನ್ನು ಬೆಂಗಳೂರಿನ ಜ್ಞಾನಭಾರತಿಯ ಕನ್ನಡ ಹುಡುಗಿಯರು, ಹುಡುಗರಿಗೆ ದಾಟಿಸಲೆತ್ನಿಸುತ್ತಿದ್ದೆ; ಆಗ ಇದ್ದಕ್ಕಿದ್ದಂತೆ ಅಂಥದೊಂದು ಪರಮಾಪ್ತ ಮುಖದ ಹುಡುಕಾಟವನ್ನು ನನ್ನ ಕಣ್ಣು ಕೂಡ ಆರಂಭಿಸಿದ್ದು ನೆನಪಾಗುತ್ತದೆ. 

ಹಲವು ಸಲ ವೇದಿಕೆಯ ಮೇಲೆ ನಿಂತಾಗ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗುವ ‘ಚಿಂತಾಮಣಿಯಲ್ಲಿ ಕಂಡ ಮುಖ’ದ ಈ ಪ್ರತಿಮೆಗಳು ಈಚೆಗೆ ಮತ್ತೆ ನನ್ನೆದುರು ಮೂಡತೊಡಗಿದವು. ಗುಲಬರ್ಗಾದ ಸೆಂಟ್ರಲ್ ಯೂನಿವರ್ಸಿಟಿಯ ಹುಡುಗ, ಹುಡುಗಿಯರಿಗೆ ಅಂಬೇಡ್ಕರ್ ಕುರಿತು ಮಾತಾಡುವ ಮುನ್ನ ನನ್ನ ‘ಭಾಷಣಮಗ್ನ ಮನಸ್ಸು’ ಅಡಿಗರ ಕವಿತೆಯ ನಿರೂಪಕನ ಥರವೇ ‘ಹುಡುಕುತ್ತಿತ್ತು ತಂಗಲು ರೇವುಳ್ಳ ನಡುಗಡ್ಡೆಯೊಂದ.’ 

ಆದರೆ ಅವತ್ತು ಒಂದು ವ್ಯತ್ಯಾಸವಿತ್ತು. ಇಪ್ಪತ್ತೊಂದನೆಯ ಶತಮಾನದಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಡಲು ನಿಂತಿದ್ದ ಅಧ್ಯಾಪಕನೊಬ್ಬ ಅಡಿಗರ ಕವಿತೆಯ ಭಾಷಣಕಾರನಂತೆ ‘ಒಂದು’ ಮುಖವನ್ನು ಹುಡುಕಬೇಕಾಗಿರಲಿಲ್ಲ. ಅಲ್ಲಿ ಅಂಬೇಡ್ಕರ್ ಸ್ಫೂರ್ತಿಯಿಂದ ಛಾರ್ಜ್ ಆದ ಒಂದಲ್ಲ, ನೂರು, ನೂರಾರು ಮುಖಗಳಿದ್ದವು! ಸೆಂಟ್ರಲ್ ಯೂನಿವಿರ್ಸಿಟಿಯ ಲೈಬ್ರರಿಯ ಉದ್ಯೋಗಿ ಹರಿಶ್ಚಂದ್ರ ಡೋನಿ ಲತಾ ಮಂಗೇಶ್ಕರ್‍ ಅವರ ‘ಪಂಖ್ ಹೋತಿ ತೊ ಉಡ್ ಆತಿ ರೇ’ ಧಾಟಿ ಅನುಸರಿಸಿ ಅಂಬೇಡ್ಕರ್  ಮೇಲೆ ಹಾಡು ಕಟ್ಟಿ ಹಾಡಿದ್ದ… 

ಆಗ ಇದ್ದಕ್ಕಿದ್ದಂತೆ ಇದೇ ಅಂಕಣದಲ್ಲಿ (READ HERE) ಅಂಬೇಡ್ಕರ್ ಜಯಂತಿಯಂದು ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ಪಂಕ್ತಿಯ ಪದವೊಂದನ್ನು ಹೊಸ ಗಾಯಕರು ಬದಲಿಸಿ ಹಾಡಿದ್ದನ್ನು ಕುರಿತು ಬರೆದದ್ದು ನೆನಪಾಯಿತು. ಆ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಸಿದ್ಧಲಿಂಗಯ್ಯನವರ ಕವಿತೆ ಕೊನೆಗೆ ಬಾಬಾಸಾಹೇಬರನ್ನು ಕೇಳುತ್ತದೆ:

ಮಲಗಿದ್ದವರ ಕೂರಿಸಿದೆ 
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ 
ಕಲಿಸುವವರು ಯಾರೋ?  

ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದ ಕೊನೆಯಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ ಹಾಡತೊಡಗಿದ ರೀತಿಯನ್ನೂ ಅದೇ ಅಂಕಣದಲ್ಲಿ ಉಲ್ಲೇಖಿಸಿದ್ದೆ:

ಮಲಗಿದ್ದವರ ಕೂರಿಸಿದೆ
ನಿಲಿಸುವವರು ನಾವು 
ಛಲದ ಜೊತೆಗೆ ಬಲದ ಪಾಠ 
ಕಲಿಸುವವರು ನಾವು. 

ಈ ಬದಲಾವಣೆ ಹೇಗಾಯಿತು ಎಂಬುದನ್ನು ಅವತ್ತು ಅಂಬೇಡ್ಕರ್ ಜನ್ಮದಿನದ ಅಂಕಣದಲ್ಲಿ ಊಹಿಸಲೆತ್ನಿಸಿದ್ದ ನನಗೆ ಗುಲಬರ್ಗಾದ ಸಭೆಯಲ್ಲಿ ಮತ್ತೊಂದು ಕಾರಣ ಹೊಳೆಯಿತು. ಗೆಳೆಯ ಅಪ್ಪಗೆರೆ ಸೋಮಶೇಖರ್ ಹೇಳಿದಂತೆ `ಅಂಬೇಡ್ಕರ್ ಜಯಂತಿಯನ್ನು ಹೊಸ ಬಟ್ಟೆ ತೊಟ್ಟು ಹಬ್ಬದಂತೆ ಆಚರಿಸುವ ಗುಲಬರ್ಗಾದಲ್ಲಿ’, ನಾನೇ ಕಂಡಂತೆ ಆಟೋಗಳ ಮೇಲೆ ‘ಜೈ ಭೀಮ್’ ಎದ್ದು ಕಾಣುವ ಗುಲಬರ್ಗಾದಲ್ಲಿ, ಈ ಕಾರಣ ಹೊಳೆದದ್ದು ಮತ್ತೂ ವಿಶೇಷವಾದುದು!  

ಸಿದ್ಧಲಿಂಗಯ್ಯನವರ ಪದ್ಯ ಐವತ್ತು ವರ್ಷಗಳ ಹಿಂದೆ ಕೇಳಿದ್ದ ‘ಯಾರು?’ ಎಂಬ ಪ್ರಶ್ನೆಗೆ, ಹೊಸ ದಲಿತ ಹಾಡುಗಾರರು ‘ನಿಲಿಸುವವರು ನಾವು, ಕಲಿಸುವವರು ನಾವು’ ಎಂದು ಆತ್ಮವಿಶ್ವಾಸದಿಂದ ಹಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಗುಲಬರ್ಗಾದಲ್ಲಿ ಹೊಸ ಉತ್ತರ ಸಿಕ್ಕಿತು!

ಆ ಉತ್ತರ ಹೊಳೆದ ಗಳಿಗೆ ಇದು: ಅದೇ ಆಗ ಸೆಂಟ್ರಲ್ ಯೂನಿವರ್ಸಿಟಿಯ ‘ಅಂಬೇಡ್ಕರ್’ ಸಮಾರಂಭದ ಆರಂಭದಲ್ಲಿ ಅನನ್ಯ ಎಂಬ ಜಾಣ ಹುಡುಗಿ ಸಂವಿಧಾನದ ಪೀಠಿಕೆಯನ್ನು ಸಭಿಕರಿಗೆ ಬೋಧಿಸಿದ್ದಳು: ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಈ ಪ್ರತಿಜ್ಞೆಯನ್ನು ವೇದಿಕೆಯ ಮೇಲಿದ್ದ ಅತಿಥಿಗಳು, ಸಭೆಯಲ್ಲಿದ್ದ ಹುಡುಗಿಯರು, ಹುಡುಗರು, ಮೇಡಂಗಳು, ಮೇಷ್ಟ್ರುಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ಎಲ್ಲರೂ ಸ್ವೀಕರಿಸಿದ್ದರು.

‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದ ಈ ಹೊಸ ಮುಖಗಳನ್ನು ನೋಡನೋಡುತ್ತಾ ಮಾತು ಶುರು ಮಾಡಿದ ಈ ಅಂಕಣಕಾರನ ಭಾಷಣಮಗ್ನ ಮನಸ್ಸಿನಲ್ಲಿ ‘ಅಂಬೇಡ್ಕರ್’ ಪದ್ಯದ ಹೊಸ ಓದು ಮೊಳೆಯಿತು: ಯೆಸ್! ಸಿದ್ಧಲಿಂಗಯ್ಯನವರ ಪದ್ಯದಲ್ಲಿರುವ ‘ಯಾರು?’ ಎಂಬ ಪ್ರಶ್ನೆಗೆ ಹೊಸ ಹಾಡುಗಾರರು ‘ನಾವು’ ಎಂದು ಉತ್ತರಿಸಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಘೋಷಣೆಯೂ ಕಾರಣವಿರಬಹುದು! ಅಂದರೆ, ಹೊಸ ದಲಿತ ಹಾಡುಗಾರರಿಗೆ ‘ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂಬ ಆತ್ಮವಿಶ್ವಾಸ ನಮ್ಮ ಸಂವಿಧಾನದಿಂದಲೇ ಹುಟ್ಟಿದೆ!

ಈ ಸಲ ಸಮಾಜಕಲ್ಯಾಣ ಇಲಾಖೆಯನ್ನು ವಹಿಸಿಕೊಂಡ ತಕ್ಷಣ ಶಾಲಾಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಜಾರಿಗೊಳಿಸಿದ ಹಿರಿಯ ಸಚಿವರಾದ ಎಚ್.ಸಿ. ಮಹಾದೇವಪ್ಪನವರ ಮುನ್ನೋಟ, ಬದ್ಧತೆಗಳ ಮಹತ್ವ ಮತ್ತೆ ಮನವರಿಕೆಯಾಗತೊಡಗಿತು.

ನಾನು, ನಾನು, ನನ್ನ ಜಾತಿ, ನನ್ನ ಕುಟುಂಬ..ಅಥವಾ ಸ್ವಾರ್ಥಕ್ಕೋ, ದ್ವೇಷಕ್ಕೋ ನನ್ನ ಧರ್ಮ… ಇದರಿಂದಾಚೆಗೆ ಹೋಗದ ಜಾತಿಕೋರ, ಧರ್ಮಕೋರ ಭಾರತೀಯ ಮನಸ್ಸಿಗೆ ಅಂಬೇಡ್ಕರ್ ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಪೀಠಿಕಾ ಪ್ರಮಾಣವಚನ ಕೊಡುವ ಮೂಲಕ ಹೊಸ ಭಾಷೆಯನ್ನೇ ಸೃಷ್ಟಿಸಿದ್ದರು; ಭಾರತೀಯ ಸಂಕುಚಿತ ಮನಸ್ಸಿನ ‘ನಾನು’ ಎನ್ನುವುದನ್ನು ಅಂಬೇಡ್ಕರ್ ಭಾಷೆಯ ಮಟ್ಟದಲ್ಲಿ ಮುರಿದು, ‘ನಾವು’ ಎಂಬುದನ್ನು ಹೇಳಿಕೊಟ್ಟಿದ್ದರು. 

ಭಾಷೆಯ ಮಟ್ಟದಲ್ಲಿ ಮೊದಲು ಮುರಿದರೆ ಅದು ನಂತರ ಪ್ರಜ್ಞೆಯ ಮಟ್ಟದಲ್ಲಿ, ಅನಂತರ ಸಮಾಜದ ಮಟ್ಟದಲ್ಲಿ, ಮುರಿಯುವ ಹಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಸ್ತ್ರೀವಾದಿಗಳು ನಮಗೆ ಹೇಳಿಕೊಟ್ಟಿದ್ದಾರಲ್ಲವೆ? 

ಒಂದು ಭಾಷಣಮಗ್ನ ಮನಸ್ಸು ಅತ್ತಲಿತ್ತ ಹರಿದಾಡುತ್ತಿದ್ದರೆ; ಯಾರನ್ನೋ ಮೆಚ್ಚಿಸುವ, ಅಥವಾ ಯಾರಿಂದಲಾದರೂ ಮೆಚ್ಚಿಸಿಕೊಳ್ಳುವ ಕಾತರವಿಲ್ಲದೆ ಐಡಿಯಾಗಳು ಒಳಗೂ ಹೊರಗೂ ನಿಸ್ವಾರ್ಥದಿಂದ ಅಡ್ಡಾಡುತ್ತಿದ್ದರೆ... ನಮ್ಮಂಥವರಿಗೂ ಸಣ್ಣ ಪುಟ್ಟ ಜ್ಞಾನೋದಯ ಯಾಕಾಗಲಾರದು? 

‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದು ನಿರಚನಾವಾದಿ ಗುರು ಜಾಕ್ವೆಸ್ ಡೆರಿಡಾ ಹೇಳಿದ್ದು…ಬರಿ ಬೆಡಗಲ್ಲೋ ಅಣ್ಣ!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

blog
05 May 2024 ಕಾರ್ಲ್ ಮಾರ್ಕ್ಸ್ ಮತ್ತು ಕನ್ನಡ ಸಂಸ್ಕೃತಿ

ಕಾರ್ಲ್ ಮಾರ್ಕ್ಸ್ ಬರೆಯದಿದ್ದರೆ ಚರಿತ್ರೆಯ ಚಕ್ರ ಎತ್ತ ತಿರುಗುತ್ತಿತ್ತೋ ಊಹಿಸುವುದು ಕಷ್ಟ!

ಗ್ರೀಕ್ ದೇವತೆ ಪ್ರೊಮಿಥ್ಯೂಸ್‌ಗೆ ಮಾನವವಿರೋಧಿಗಳಾದ ಹಿರಿಯ ದೇವತೆಗಳು ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಆಜ್ಞೆ ಮಾಡುತ್ತಾರೆ. ಆದರೆ ಮಾನವರಿಗೆ ಸಹಾಯ ಮಾಡಲೇಬೇಕೆಂಬ  ಕಾಳಜಿ, ಹಟದ ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಟಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಪ್ರೊಮಿಥ್ಯೂಸ್‌ಗೆ ಸ್ಯೂಸ್ ದೇವ ಕ್ರೂರ ಶಿಕ್ಷೆ ಕೊಡುತ್ತಾನೆ. ಪ್ರೊಮಿಥ್ಯೂಸ್ ದಿಟ್ಟತನ ಕುರಿತು ಗ್ರೀಕ್ ನಾಟಕಕಾರ ಈಸ್ಕಿಲಸ್ ಎರಡೂವರೆ ಸಾವಿರ ವರ್ಷಗಳ ಕೆಳಗೆ ’ಪ್ರೊಮಿಥ್ಯೂಸ್ ಬೌಂಡ್’ ಎಂಬ ಅದ್ಭುತ ನಾಟಕ ಬರೆದ.   

ಕಾರ್ಲ್ ಮಾರ್ಕ್ಸ್ (5.5.1818-14.3.1883) ಹುಟ್ಟು ಹಬ್ಬದ ದಿನ ಪ್ರೊಮಿಥ್ಯೂಸ್ ಅವನ ಪ್ರಿಯವಾದ ಪಾತ್ರವೆಂಬುದನ್ನು ನಿಮಗೆ ನೆನಪಿಸುತ್ತಿರುವೆ. ಬಡತನದಲ್ಲಿ ನರಳಿದ್ದ ಮಾರ್ಕ್ಸ್‌ಗೆ ಎಂಥ ಕಷ್ಟ ಎದುರಾದರೂ ಮಾನವಕೋಟಿಗೆ ನೆರವಾಗಲೇಬೇಕು ಎಂಬ ಪ್ರೇರಣೆ ಈ ಕತೆಯಿಂದಲೂ ಹುಟ್ಟಿರಬಹುದು. ಅಂಥ ಪ್ರೇರಣೆಯ ಸಣ್ಣ ಹೊಳೆ ನಮ್ಮೊಳಗೂ ಸದಾ ಹರಿಯುತ್ತಿರಲಿ! 

ಜರ್ಮನಿಯ ಮಾರ್ಕ್ಸ್ ಸಾಮಾಜಿಕ ರಚನೆಯನ್ನೇ ಕದಲಿಸಿ, ದುಡಿಯುವವರ ಸ್ಥಿತಿಯನ್ನು ಬದಲಿಸುವ ಫಿಲಾಸಫಿ ರೂಪಿಸಿದವನು; ಚರಿತ್ರೆಯ ಚಕ್ರದ ನಡೆ ಬದಲಿಸಿದವನು. ಚರಿತ್ರೆ, ತತ್ವಜ್ಞಾನ, ಲೋಕದ ರಾಜಕೀಯ ವ್ಯವಸ್ಥೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಮಾರ್ಕ್ಸ್ ಸಾಹಿತ್ಯದ ಸೂಕ್ಷ್ಮ ವಿದ್ಯಾರ್ಥಿಯಾಗಿದ್ದ. ಶೇಕ್‌ಸ್ಪಿಯರ್ ನಾಟಕಗಳ ಮೂಲಕವೂ ಚರಿತ್ರೆಯ ಸಂಘರ್ಷಗಳನ್ನು ಅರಿಯಲೆತ್ನಿಸಿದ್ದ. ಮಾರ್ಕ್ಸ್ ಹಾಗೂ ಎಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಜಗತ್ತಿನ ವಿಮೋಚನೆಯ ಪ್ರಣಾಳಿಕೆಯಾಗಿರುವಂತೆ ಅದ್ಭುತ ಕಾವ್ಯ ಕೂಡ ಎನ್ನುವವರಿದ್ದಾರೆ.

ತನ್ನ ಥಿಯರಿಗಳನ್ನು ರೂಪಿಸುತ್ತಿದ್ದಾಗ ಮಾರ್ಕ್ಸ್‌ಗೆ ಹೀಗೆನ್ನಿಸಿತು: ‘ತತ್ವಜ್ಞಾನಿಗಳು ಜಗತ್ತನ್ನು ಬರೀ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. ಈಗ ಇರುವ ವಿಚಾರವೆಂದರೆ ಜಗತ್ತನ್ನು ಬದಲಾಯಿಸುವುದು.’ ಈ ಮಾತನ್ನು ತತ್ವಜ್ಞಾನಿಗಳ ಕೆಲಸ ವ್ಯರ್ಥ ಎಂಬ ಅರ್ಥಬರುವಂತೆ ಕೆಲವರು ವ್ಯಾಖ್ಯಾನಿಸುತ್ತಾರೆ; ಆದರೆ  ಯಾವುದೇ ತತ್ವಜ್ಞಾನ ಜನರನ್ನು ಕ್ರಿಯೆಗೆ ಅಣಿಗೊಳಿಸುವಂತೆ ರೂಪುಗೊಳ್ಳಬೇಕು ಎಂಬುದು ಮಾರ್ಕ್ಸ್ ಆಶಯವಾಗಿತ್ತು. 

ಮಾರ್ಕ್ಸ್‌ವಾದ ಇಪ್ಪತ್ತನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಚಿಂತನೆ, ಕ್ರಿಯೆ, ವ್ಯಾಖ್ಯಾನ, ಕಲೆ, ರಾಜಕಾರಣ ಹಾಗೂ ಬರವಣಿಗೆಗಳ ದಿಕ್ಕನ್ನು ಬದಲಿಸಿತು. ಮಾರ್ಕ್ಸ್ ಚಿಂತನೆಯನ್ನು ಮೇಲ್ಪದರದಲ್ಲಿ ಗ್ರಹಿಸಿದವರು ಕೂಡ ಯಥಾಸ್ಥಿತಿವಾದಿ ಆಗಿರುವುದು ಸಾಧ್ಯವಿಲ್ಲ. ಜಗತ್ತಿನ ಎಲ್ಲ ದೇಶಗಳೂ ಒಂದಲ್ಲ ಒಂದು ಹಂತದಲ್ಲಿ ಮಾರ್ಕ್ಸ್- ಎಂಗೆಲ್ಸರ ಚಿಂತನೆಗಳಿಂದ ಪ್ರಭಾವಿತವಾಗಿವೆ.

ಮಾರ್ಕ್ಸ್ ಚಿಂತನೆ 1920ರ ಸುಮಾರಿಗೆ ಕಾರ್ಮಿಕ ಚಳುವಳಿಗಳ ಮೂಲಕ ಕನ್ನಡನಾಡನ್ನು ಪ್ರವೇಶಿಸಿತು; ಇಲ್ಲಿನ ಚಳುವಳಿ, ಸಂಸ್ಕೃತಿ, ರಾಜಕಾರಣಗಳ ದಿಕ್ಕನ್ನು ನಿರ್ಣಾಯಕವಾಗಿ ಬದಲಿಸಿತು. ನವೋದಯ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆಯವರ ಸಮಾನತೆಯ ಆಶಯದಲ್ಲಿ ಮಾರ್ಕ್ಸ್ ಹಣಿಕಿದಂತಿದೆ.  ಪ್ರಗತಿಶೀಲ, ಬಂಡಾಯ, ದಲಿತ ಹಾಗೂ ಸ್ತ್ರೀವಾದಿ ಘಟ್ಟಗಳು ಮಾರ್ಕ್ಸ್‌ವಾದದಿಂದ ಒಂದಲ್ಲ ಒಂದು ರೀತಿಯ ಪ್ರಭಾವ ಪಡೆದಿವೆ. ಸು.ರಂ. ಎಕ್ಕುಂಡಿ, ಬಂಜಗೆರೆ ಜಯಪ್ರಕಾಶ್ ಮಾರ್ಕ್ಸ್‌ವಾದಿ ನೋಟಕ್ರಮಗಳ ಮೂಲಕ ವಿಶಿಷ್ಟ ರಾಜಕೀಯ ಕಾವ್ಯ ಬರೆದರು. ದಲಿತ ಸಾಹಿತ್ಯದ ಆರಂಭದಲ್ಲೂ, ಇವತ್ತಿನ ಹಂತದಲ್ಲೂ ಮಾರ್ಕ್ಸ್‌ವಾದದ ಛಾಯೆಯಿದ್ದೇ ಇದೆ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಮಾರ್ಕ್ಸ್‌ವಾದಿಗಳು ದಲಿತ ಚಳುವಳಿಯ ತರುಣರಿಗೂ, ತರುಣ ಮಾರ್ಕ್ಸಿಸ್ಟರಿಗೂ ಚಿಂತನ ಶಿಬಿರ ನಡೆಸುತ್ತಿದ್ದುದರಿಂದಲೂ ಕನ್ನಡ ದಲಿತ ಚಿಂತನೆಯಲ್ಲಿ ಮಾರ್ಕ್ಸ್‌ವಾದ ಬೆರೆಯಿತು. 

ಕನ್ನಡ ಸಾಮಾಜಿಕ ವಿಮರ್ಶೆಯ ನುಡಿಗಟ್ಟು, ವಿಶ್ಲೇಷಣೆಗಳು ಮಾರ್ಕ್ಸ್‌ವಾದಿ ವಿಮರ್ಶೆಯಿಂದ ಪ್ರಭಾವಿತಗೊಂಡಿವೆ. ಪ್ರಗತಿಶೀಲ ಘಟ್ಟದಲ್ಲಿ ನಿರಂಜನರು ಕಮ್ಯುನಿಸ್ಟ್ ಪಕ್ಷದ ಜೊತೆಯಲ್ಲಿದ್ದರು;  ಅನಕೃ, ಬಸವರಾಜ ಕಟ್ಟೀಮನಿ, ತರಾಸು ಸಮಾಜದ ಬಗೆಗಿನ ಕಾಳಜಿಯ ಮಟ್ಟದಲ್ಲಿ ಮಾರ್ಕ್ಸ್ ಚಿಂತನೆಯ ಜೊತೆಗೆ ಸಂಬಂಧ ಸಾಧಿಸಿದ್ದರು. ಡಿ. ಆರ್. ನಾಗರಾಜ್, ಸಿದ್ಧಲಿಂಗಯ್ಯ, ಬರಗೂರರ ಚಿಂತನೆಯ ಆರಂಭ ಮಾರ್ಕ್ಸ್‌ವಾದದಿಂದಲೇ ಆಯಿತು. ಪ್ರಗತಿಶೀಲ ಹಾಗೂ ಬಂಡಾಯ ಪ್ರಣಾಳಿಕೆಗಳೆರಡರಲ್ಲೂ ಮಾರ್ಕ್ಸ್‌ವಾದದ ಪ್ರೇರಣೆಯಿದೆ. ಸಾಹಿತ್ಯಕ ಸಂಸ್ಕೃತಿಯ ಮೂಲಕ ಕರ್ನಾಟಕದಲ್ಲಿ ಹಬ್ಬಿರುವ ಕಮ್ಯುನಿಸಂ ಸ್ಥಳೀಯ ಬೇರುಗಳನ್ನೂ ಪಡೆದಿದೆ.

ಕಾರ್ಮಿಕ ಚಳುವಳಿಗಳು, ಕಮ್ಯುನಿಸ್ಟ್ ಪಕ್ಷಗಳ ರಾಜಕಾರಣಗಳೂ ಮಾರ್ಕ್ಸ್‌ವಾದವನ್ನು ಕನ್ನಡ ಸಂಸ್ಕೃತಿಯಲ್ಲಿ ಹಬ್ಬಿಸಿವೆ. ಕನ್ನಡ ರಂಗಭೂಮಿಗೆ ಬರ್ಟೋಲ್ಟ್ ಬ್ರೆಕ್ಟ್ ಮೂಲಕವೂ ಮಾರ್ಕ್ಸ್‌ವಾದ ಬಂತು; ರಂಗಭೂಮಿಯ ಮೂಲಕವೂ ಕಮ್ಯುನಿಸಂ ಕರ್ನಾಟದಲ್ಲಿ ಹಬ್ಬಿತು. ಎಪ್ಪತ್ತರ ದಶಕದ ’ಸಮುದಾಯ’ ಸಾಂಸ್ಕೃತಿಕ ಜಾಥಾ ಕರ್ನಾಟಕದುದ್ದಕ್ಕೂ ಎಡಪಂಥೀಯ ರಂಗಭೂಮಿಯನ್ನು, ಮಾರ್ಕ್ಸ್‌ವಾದಿ ಚಿಂತನೆಯನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಿತು. ಮಾಲತಿ, ಸಿಜಿಕೆ, ಪ್ರಸನ್ನ, ಗಂಗಾಧರಸ್ವಾಮಿ, ಗುಂಡಣ್ಣ, ಜನ್ನಿ, ಬಸವಲಿಂಗಯ್ಯ, ಮೊದಲಾದವರ ಜೊತೆ ರಾಜ್ಯದ ನೂರಾರು ನಟ, ನಟಿಯರು ಊರೂರು ಸುತ್ತಿ ಹಾಡು, ಬೀದಿ ನಾಟಕಗಳ ಮೂಲಕ ವೈಚಾರಿಕ ಆಲೋಚನೆಗಳನ್ನು, ಜನರ ಸ್ಥಿತಿಯ ಬದಲಾವಣೆಯ ಸಾಧ್ಯತೆಗಳನ್ನು ಬಿತ್ತುತ್ತಾ ಬಂದರು. ರಂಗ ಚಟುವಟಿಕೆಗಳಿಗೆ ಸಾಮಾಜಿಕ ಜವಾಬ್ದಾರಿಯ ಆಯಾಮ ದೊಡ್ಡ ಮಟ್ಟದಲ್ಲಿ ಬಂದದ್ದು ಆಗ. ದಲಿತ ಸಂಘರ್ಷ ಸಮಿತಿಯ ಒಂದು ಧಾರೆ ಗದ್ದರ್ ಹಾಡುಗಳಲ್ಲಿರುವ ವರ್ಗಪ್ರಜ್ಞೆಯನ್ನು ಕರ್ನಾಟಕದಲ್ಲಿ ಹಬ್ಬಿಸಲೆತ್ನಿಸಿತು. 

ಡಿ. ಆರ್.ನಾಗರಾಜ್, ಜಿ. ರಾಜಶೇಖರ್, ಚಂದ್ರಶೇಖರ ನಂಗಲಿಯವರ ಬರಹಗಳ ಮೂಲಕವೂ ಕನ್ನಡ ವಿಮರ್ಶೆ, ಸಂಸ್ಕೃತಿ ಚಿಂತನೆಗಳಲ್ಲಿ ಮಾರ್ಕ್ಸ್‌ವಾದಿ ವಿಮರ್ಶೆಯ ಖಚಿತ ಚೌಕಟ್ಟುಗಳು ಸೇರಿಕೊಂಡವು.   ಬಂಡಾಯ ಮಾರ್ಗದ ಬರಗೂರು ರಾಮಚಂದ್ರಪ್ಪ, ರಂಜಾನ್ ದರ್ಗಾ, ರಹಮತ್ ತರೀಕೆರೆಯವರಿಂದ ಹಿಡಿದು ಹಲವರ ವಿಮರ್ಶಾ‌  ನೋಟಕ್ರಮಗಳು ಮಾರ್ಕ್ಸ್‌ನ ಸಮಾಜ, ಸಂಸ್ಕೃತಿಗಳ ಗ್ರಹಿಕೆಯನ್ನು ಆಧರಿಸಿವೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕೂಡ ಕೊನೆಗೆ ವರ್ಗಸಂಘರ್ಷವೊಂದೇ ಉತ್ತರ ಎಂಬ ನಿಲುವಿಗೆ ತಲುಪಿದ್ದರು.

ಕನ್ನಡ ಸಂಸ್ಕೃತಿಯ ವೈಶಿಷ್ಟ್ಯ ಇದು: ಮಾರ್ಕ್ಸ್‌ವಾದದತ್ತ ಆಕರ್ಷಿತರಾದ ಡಿ. ಆರ್. ನಾಗರಾಜ್, ಸಿಜಿಕೆ, ಬರಗೂರು, ಸಿದ್ಧಲಿಂಗಯ್ಯ ಥರದವರು ಕಮ್ಯುನಿಸ್ಟ್ ಪಾರ್ಟಿಗಳ ನಿರ್ದೇಶನಕ್ಕಾಗಿ ಕಾಯುವವರಾಗಿರಲಿಲ್ಲ. ಕನ್ನಡ ಲೇಖಕರನ್ನು ಮಾರ್ಕ್ಸ್‌ವಾದದತ್ತ ಸೆಳೆದ ಎಂ.ಕೆ. ಭಟ್ ಹಾಗೂ ಪಾರ್ಟಿಯತ್ತ ಕರೆದೊಯ್ದ ಕೊಂಡಜ್ಜಿ ಮೋಹನ್ ನೆನಪಾಗುತ್ತಾರೆ. ಮಾರ್ಕ್ಸಿಸ್ಟ್ ನಾಯಕ ನಂಬೂದಿರಿಪಾಡ್ ‘ನೀವು ಕಲಾವಿದರೆಲ್ಲ ಐಡಿಯಾಲಜಿಗೆ ಕಟ್ಟು ಬೀಳದೆ ಮುಕ್ತವಾಗಿ ಯೋಚಿಸಿ’ ಎಂದಿದ್ದು ತಮಗೆಲ್ಲ ಹೊಸ ಹಾದಿ ತೋರಿಸಿತೆಂದು ’ಸಮುದಾಯ’ದ ಜನ್ನಿ ನೆನೆಯುತ್ತಾರೆ. ಗುಂಡಣ್ಣ, ಶಶಿಧರ್ ಬಾರಿಘಾಟ್ ಮೊದಲಾದವರು ಇದೇ ಹಾದಿಯಲ್ಲಿ ಮುಂದುವರಿದಿದ್ದಾರೆ.

ಕರ್ನಾಟಕದಲ್ಲಿ ನೀಲಾ, ವಿಮಲಾ, ವಸು ಮಳಲಿ, ಗಾಯತ್ರಿ, ರಾಜೇಶ್ವರಿ, ಮೀನಾಕ್ಷಿ ಬಾಳಿಯವರಂತೆ ಸ್ತ್ರೀವಾದದ ಜೊತೆಗೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ಬೆಸೆದವರಿದ್ದಾರೆ. ಕಮ್ಯುನಿಸ್ಟ್ ಆಗದೆಯೇ ಮಾರ್ಕ್ಸ್‌ವಾದದ ಮೂಲ ಸತ್ವ , ವರ್ಗ ಪ್ರಜ್ಞೆ, ವರ್ಗಸಂಘರ್ಷದ ಐಡಿಯಾಗಳ ಮೂಲಕ ಇಲ್ಲಿನ ಜಾತಿ ಸಮಾಜವನ್ನು ಗ್ರಹಿಸಿದ ಲೇಖಕ, ಲೇಖಕಿಯರೂ ಇದ್ದಾರೆ.

ಎಂಬತ್ತರದ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಕರ್ನಾಟಕದಲ್ಲೂ ಮಾರ್ಕ್ಸ್‌ವಾದದ ಬಗ್ಗೆ ಅನುಮಾನಗಳೆದ್ದವು. ಆದರೆ ಮಾರ್ಕ್ಸ್ ಚಿಂತನೆಗಳು ಬಂಡವಾಳಶಾಹಿಯ ರಾಕ್ಷಸ ವರ್ತನೆಯನ್ನು, ಜಾಗತೀಕರಣ-ಖಾಸಗೀಕರಣದ ವಿನಾಶಕರ ಮುಖವನ್ನು ಗ್ರಹಿಸಲು ಕನ್ನಡ ಚಿಂತಕ, ಚಿಂತಕಿಯರಿಗೆ ನೆರವಾದವು. ಈ ಹಂತದಲ್ಲಿ ಕಾರ್ಪೊರೇಟ್ ವಲಯಗಳ ಬೆಳವಣಿಗೆ, ಸರ್ಕಾರಿ ವಲಯದಲ್ಲಿ ಖಾಸಗೀಕರಣದ ಭರಾಟೆ ಹಾಗೂ ಕಾನೂನಿನ ಕುಣಿಕೆಗಳು ಹೋರಾಟದ ಹಕ್ಕುಗಳ ದಮನದಲ್ಲಿ ತೊಡಗಿದವು; ಖಾಸಗಿ ಕ್ಷೇತ್ರಗಳ ಆರಾಮ ಕುರ್ಚಿಯ ಚಿಂತಕರು ಹಾಗೂ ಬಲಪಂಥೀಯರು ತಮ್ಮ ಲಾಭಕ್ಕಾಗಿ ಮಾರ್ಕ್ಸ್‌ವಾದದ ವಿರುದ್ಧ ಅಸಹನೆ ಬಿತ್ತಲೆತ್ನಿಸಿದರು. ವಿಶ್ವವಿದ್ಯಾಲಯಗಳ ಇಬ್ಬರು ಸುಪಾರಿ ಕುಲಪತಿಗಳು ಮಾರ್ಕ್ಸ್‌ವಾದವನ್ನು ಪಠ್ಯದಿಂದಲೇ ಓಡಿಸುವಂತೆ ಕಿರುಚತೊಡಗಿದರು.

2011ರ ಹೊತ್ತಿಗೆ ಟೆರಿ ಈಗಲ್ಟನ್ ಅವರ ಮಹತ್ವದ ಪುಸ್ತಕ ‘ವೈ ಮಾರ್ಕ್ಸ್ ವಾಸ್ ರೈಟ್’ ಬಂತು. ‘ಚಿಂತನ ಪುಸ್ತಕ’ದ ವಸಂತರಾಜ್ ನನಗೆ ಈ ಪುಸ್ತಕ ಕೊಟ್ಟ ಗಳಿಗೆ ನೆನಪಿದೆ. ಮಾರ್ಕ್ಸ್‌ವಾದವನ್ನು ಒಪ್ಪಿದ್ದ ಸರ್ಕಾರಗಳು ಚೆಲ್ಲಿದ ಹಿಂಸೆ; ಮಾರ್ಕ್ಸ್‌ವಾದದ ನಿರಂತರ ಸಾಧ್ಯತೆ-ಎರಡನ್ನೂ ಈ ಪುಸ್ತಕ ಚರ್ಚಿಸುತ್ತದೆ; ‘ಪ್ರಜಾಪ್ರಭುತ್ವವಾದಿ’ ಎನ್ನಲಾದ ಸರ್ಕಾರಗಳು ಸೃಷ್ಟಿಸುವ ದಮನಗಳನ್ನೂ ವಿಶ್ಲೇಷಿಸುತ್ತದೆ. ಆರ್. ಕೆ. ಹುಡಗಿ, ಜಿ. ರಾಮಕೃಷ್ಣ ಮಾಡಿರುವ ಈ ಪುಸ್ತಕದ ಎರಡು ಕನ್ನಡಾನುವಾದಗಳು ಈ ಚರ್ಚೆಯನ್ನು ಕರ್ನಾಟಕದಲ್ಲೂ ಮುಂದುವರಿಸಿವೆ. ನವಕರ್ನಾಟಕ, ಕ್ರಿಯಾ ಪ್ರಕಾಶನ, ಚಿಂತನ ಪುಸ್ತಕ, ಲಡಾಯಿ ಪ್ರಕಾಶನಗಳು ಮಾರ್ಕ್ಸ್‌ವಾದಿ ಚಿಂತನೆಯನ್ನು ನಿರಂತರವಾಗಿ ಹಬ್ಬಿಸುತ್ತಿವೆ.

ಮಾರ್ಕ್ಸ್‌ವಾದ ಕ್ರಿಯೆ, ಪ್ರಯೋಗಗಳ ಜೊತೆಗೇ ಬೆಳೆಯುವ ಸಿದ್ಧಾಂತ. ಇವತ್ತಿಗೂ ವಿವಿಧ ವಲಯಗಳ ಕಾರ್ಮಿಕರನ್ನಾಗಲೀ, ಅಂಗನವಾಡಿ ಕಾರ್ಯಕರ್ತೆಯರನ್ನಾಗಲೀ, ಅಸಂಘಟಿತ ವಲಯಗಳ ಕಾರ್ಯಕರ್ತರನ್ನಾಗಲೀ ಕಮ್ಯುನಿಸ್ಟರು ತಾತ್ವಿಕವಾಗಿ ಸಂಘಟಿಸಬಲ್ಲರು. ಕಮ್ಯುನಿಸ್ಟರಲ್ಲಿ ದೀರ್ಘ ಹೋರಾಟಗಳನ್ನು ಕಟ್ಟಬಲ್ಲ ಸಂಘಟನೆ ಹಾಗೂ ಅನುಭವಗಳು ಇನ್ನೂ ಉಳಿದಿವೆ. ಉಳಿದವರಲ್ಲಿ ಆ ಕಾಳಜಿ, ಸ್ಪಷ್ಟತೆ, ತಾತ್ವಿಕ ಬದ್ಧತೆ ಕಡಿಮೆ.

ಕೋಮುವಾದ ವಿರೋಧಿ ಚಳುವಳಿ ಹಾಗೂ ಜಾತ್ಯತೀತ ಸಂಸ್ಕೃತಿ ನಿರ್ಮಾಣಕ್ಕೆ ಮಾರ್ಕ್ಸ್‌ವಾದಿಗಳ ಕೊಡುಗೆ ವಿಶಿಷ್ಟವಾದುದು. ಭಾರತದ ಸ್ವಾತಂತ್ರ್ಯ ಚಳುವಳಿಯ ಘಟ್ಟದಲ್ಲಿ ಕೋಮುವಾದಿ ವಿಭಜನೆಯನ್ನು ಕಮ್ಯುನಿಸ್ಟ್ ಚಿಂತನೆ ತಡೆಗಟ್ಟಿದ್ದನ್ನು ಇತಿಹಾಸಕಾರ ಎಸ್. ಚಂದ್ರಶೇಖರ್ ಗುರುತಿಸುತ್ತಾರೆ. ಇಂದಿಗೂ ಎಲ್ಲ ಕಮ್ಯುನಿಸ್ಟ್ ಬಣಗಳೂ ಕೋಮುವಾದವನ್ನು ಪ್ರಬಲವಾಗಿ ವಿರೋಧಿಸುತ್ತಿವೆ.

ಜಗತ್ತಿನ ಎಲ್ಲೆಡೆಯಲ್ಲಾದಂತೆ ಕನ್ನಡದಲ್ಲೂ ಸರಳ ಮಾರ್ಕ್ಸ್‌ವಾದಿ ವಿಮರ್ಶೆಯ ರೂಪಗಳು ಸಾಹಿತ್ಯ ಕೃತಿಗಳ ಓದನ್ನು ಸೀಮಿತಗೊಳಿಸಿವೆ; ಆದರೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ವಿಮರ್ಶಾ ದೃಷ್ಟಿಯಿಂದ ಮರು ಪರಿಶೀಲಿಸಿ ವಿಸ್ತರಿಸಿದ ವಾಲ್ಟರ್ ಬೆಂಜಮಿನ್, ಫ್ರಾಂಕ್‌ಫರ್ಟ್ ಸ್ಕೂಲ್ ಚಿಂತನೆಗಳಿಂದಲೂ ತಾರಕೇಶ್ವರ್,  ರಾಜೇಂದ್ರ ಚೆನ್ನಿಯಂಥವರ ವಿಮರ್ಶೆ ಸೂಕ್ಷ್ಮ ಪ್ರೇರಣೆಗಳನ್ನು ಪಡೆದಿದೆ. ಶಿವಸುಂದರ್, ಮುಝಾಫರ್ ಅಸಾದಿ ಥರದ ಹಲವು ಸಮಾಜವಿಜ್ಞಾನಿಗಳ ಮಾರ್ಕ್ಸ್‌ವಾದಿ ದೃಷ್ಟಿಕೋನ ಕನ್ನಡ ಸಮಾಜವಿಜ್ಞಾನಕ್ಕೆ ಖಚಿತ ತಾತ್ವಿಕ ಚೌಕಟ್ಟನ್ನು ಕೊಟ್ಟಿದೆ.    

ಎಲ್ಲ ಬಗೆಯ ಬಿಡುಗಡೆಯ ಚಿಂತನೆ, ಕ್ರಿಯೆಗಳನ್ನು ನಿರ್ಗತಿಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಬೇಕು ಎಂಬ ಮಾರ್ಕ್ಸ್‌ವಾದದ ಆಶಯ ಹಾಗೂ ಎಂಥ ಭೌತಿಕ ಸ್ಥಿತಿಯನ್ನಾದರೂ ವ್ಯವಸ್ಥಿತ ಅಧ್ಯಯನ ಹಾಗೂ ಸಂಘಟಿತ ಕ್ರಿಯೆಗಳಿಂದ ಬದಲಿಸಬಹುದು ಎಂಬ ಮಾರ್ಕ್ಸ್‌ವಾದದ ಸ್ಪಿರಿಟ್ ಎಲ್ಲ ಕಾಲಕ್ಕೂ ಮರು ಹುಟ್ಟು ಪಡೆಯಬಲ್ಲದು. ಮಾರ್ಕ್ಸ್‌ವಾದದ ಜೊತೆ ಸೆಣಸುತ್ತಾ ಅಥವಾ ಅದನ್ನು ವಿಸ್ತರಿಸುತ್ತಲೇ ಕಳೆದ ನೂರೈವತ್ತು ವರ್ಷಗಳ ಬಹುತೇಕ ಪ್ರಗತಿಪರ ಚಿಂತನೆಗಳು ಹುಟ್ಟಿವೆ ಎಂಬುದನ್ನು ಮಾರ್ಕ್ಸ್ ಹುಟ್ಟು ಹಬ್ಬದ ದಿನ ಮತ್ತೆ ನೆನೆಯೋಣ! 

ಲೇಖನ ಪ್ರಕಟವಾದ ನಂತರ ಹಿರಿಯ ಕಾಮ್ರೇಡ್ ಗುಂಡಣ್ಣ ಚಿಕ್ಕಮಗಳೂರು ಸಲಹೆಗಳು:

ಲೇಖನ ಸಮಗ್ರವಾಗಿದೆ. ಕೆಲವು ಘಟನೆಗಳು ಹಳೆಯ ನೆನಪುಗಳನ್ನು ತಂದಿತು.

ಸಮುದಾಯ ಸಂಘಟನೆಗೆ ಸಂಬಂದಿಸಿದ ಹಾಗೆ ಹಲವು ಹೆಸರುಗಳು ತಪ್ಪಾಗಿವೆ.
gangadhara Murthy  ಗಂಗಾಧರ ಸ್ವಾಮಿ ಆಗಬೇಕು. ಈ ಹೆಸರುಗಳ ಒಟ್ಟಿಗೇ, ಲಿಂಗದೇವರು ಹಳೆಮನೆ, ಎಮ್. ಜಿ. ವೆಂಕಟೇಶ್, ಸಿ. ಆರ್. ಭಟ್ , ಯತಿರಾಜ್ ಹೆಸರುಗಳು ಸೇರ್ಪಡಬೇಕು. ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದು ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದ್ದು ಕಾಂ.ಎಂ ಕೆ ಭಟ್ ಅವರೇ. 

ಮಹಿಳಾ ಸಂಘಟನೆಯ ಹೆಸರುಗಳಲ್ಲಿ ಹರಿಣಿ ಕಕ್ಕೇರಿ ಮಾತು ಗಾಯತ್ರಿ ದೇವಿ ಹೆಸರುಗಳು ಸೇರ್ಪಡೆ ಆಗಬೇಕು.
ಇದು ಸಂಘಟನೆಯ ವಿಷಯ ಆಗಿರುವುದರಿಂದ ದಯವಿಟ್ಟು ಸರಿಪಡಿಸಲು ಕೋರುತ್ತೇನೆ.

 
 
ಕೊನೆ ಟಿಪ್ಪಣಿ  

‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ ಐದನೇ ಕಂತು ಇದೀಗ ಮಾರುಕಟ್ಟೆಯಲ್ಲಿ!
 

 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 



Latest Video


Nataraj Huliyar Official
YouTube Channel

SUBSCRIBE