Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
14 Sep 2025 ಲೋಟಸ್ ಈಟರ್‍ಸ್!

ಆ ದ್ವೀಪದಲ್ಲಿರುವ ಜನರ ಕೆಲಸ ಇಷ್ಟೇ: ತಾವರೆ ತಿನ್ನುವುದು, ಸುಮ್ಮನೆ ಇರುವುದು, ಒರಗುವುದು, ಮಲಗುವುದು!  ತಾವರೆ ತಿಂದರೆ ಸಾಕು, ಅವರಿಗೆ ಬೇರೇನೂ ಬೇಕೆನ್ನಿಸುವುದಿಲ್ಲ! 

ಮೇಲುನೋಟಕ್ಕೆ ‘ಮಹಾಸೋಮಾರಿತನ’ ಎನ್ನಿಸುವ ಸ್ಥಿತಿ. ಆದರೂ ಈ ಸ್ಥಿತಿಯನ್ನು ಸಾಂಕೇತಿಕವಾಗಿ ಎಲ್ಲರಿಗೂ ಅನ್ವಯಿಸಿ ನೋಡಿ: ಮನುಷ್ಯರಷ್ಟೇ ಅಲ್ಲ, ಎಲ್ಲ ಜೀವಿಗಳೂ ಒಂದಲ್ಲ ಒಂದು ಸಲ-ಅಥವಾ ನೂರಾರು ಸಲ-ಈ ಸ್ಥಿತಿಯಲ್ಲಿರಬೇಕೆಂದು ಬಯಸುತ್ತಲೇ ಇರಬಹುದು ಎಂಬುದು ನನ್ನ ಊಹೆ. 

ಈ ‘ಲೋಟಸ್ ಈಟರ‍್ಸ್’ಅಥವಾ ‘ತಾವರೆ ಭಕ್ಷಕರು’ಕತೆ ಗ್ರೀಕ್ ಕವಿ ಹೋಮರನ ಮಹಾಕಾವ್ಯ ‘ಒಡಿಸ್ಸಿ’ಯ ಮೋಹಕ ಭಾಗಗಳಲ್ಲಿ ಒಂದು. ಹೋಮರನ ಮೊದಲ ಮಹಾಕಾವ್ಯ ‘ಇಲಿಯಡ್’ನಲ್ಲಿ ಗ್ರೀಕ್ ಹಾಗೂ ಟ್ರೋಜನ್ನರ ನಡುವೆ ಯುದ್ಧ ನಡೆಯುತ್ತದೆ. ಗ್ರೀಕ್ ನಾಯಕ ಅಖಿಲೀಸನ ಸಾವಿನೊಂದಿಗೆ ಮೂಲ ಮಹಾಕಾವ್ಯ ಮುಗಿಯುತ್ತದೆ. ಗ್ರೀಕರು ಯುದ್ಧ ಗೆಲ್ಲಲಾಗದೆ ವಾಪಸ್ ಹೊರಟ ನಂತರ ಗ್ರೀಕ್ ವೀರ, ಚತುರ ಒಡಿಸ್ಯೂಸ್ ಮರದ ಕುದುರೆಯಲ್ಲಿ ಯೋಧರನ್ನು ಹುದುಗಿಸಿ ಟ್ರಾಯ್ ಕೋಟೆಯೊಳಕ್ಕೆ ಕಳಿಸಿ ಟ್ರೋಜನ್ನರನ್ನು ಮುಗಿಸಿದ ಎಂಬ ಕತೆ ‘ಇಲಿಯಡ್’ಮಹಾಕಾವ್ಯದೊಳಗೆ ನಂತರ ಸೇರಿಕೊಂಡಿದೆ. ಈ ಪ್ರಸಂಗದಲ್ಲಿ ಬರುವ ‘ಟ್ರೋಜನ್ ಹಾರ್ಸ್’ಎಂಬುದು ಯುರೋಪಿಯನ್ ಭಾಷೆಗಳಲ್ಲಿ ಕುಟಿಲೋಪಾಯವನ್ನು ಸೂಚಿಸುವ ನುಡಿಗಟ್ಟಾಗಿ ಬಳಕೆಯಾಗುತ್ತಿದೆ. ಕೆಲವು ವರ್ಷಗಳ ಕೆಳಗೆ ಗ್ರೀಕ್ ಪ್ರಧಾನಿ ಯುರೂಪಿನ ಕೆಲವು ದೇಶಗಳು ತನಗೆ ಕೊಟ್ಟ ಸಲಹೆಯನ್ನು ತಿರಸ್ಕರಿಸುತ್ತಾ, ‘ನಮಗೆ ನಿಮ್ಮ ಟ್ರೋಜನ್ ಹಾರ್ಸ್ ಬೇಕಾಗಿಲ್ಲ’ ಅಂದಿದ್ದು ನೆನಪಾಗುತ್ತದೆ! 

ಟ್ರೋಜನ್ ಯುದ್ಧದಲ್ಲಿ ಮಡಿಯದೆ ಉಳಿದ ಕೆಲವೇ ವೀರರಲ್ಲಿ ಚತುರನಾಯಕ ಒಡಿಸ್ಯೂಸ್ ಕೂಡ ಒಬ್ಬ. ಗ್ರೀಕ್ ಭಾಷೆಯಲ್ಲಿ ಅದಿಸ್ಯೂಸ್ ಎಂದು ಕರೆಯುವ ಒಡಿಸ್ಯೂಸ್‌ಗೆ ಯೂಲಿಸಿಸ್ ಎಂಬ ಹೆಸರು ಕೂಡ ಇದೆ. ಒಡಿಸ್ಯೂಸನ ಯಾನ ಅಥವಾ ಪಯಣವೇ ‘ಒಡಿಸ್ಸಿ’. ನಂತರದಲ್ಲಿ ‘ಒಡಿಸ್ಸಿ’ ಎಂಬ ಪದ ಯುರೋಪಿಯನ್ ಭಾಷೆಗಳಲ್ಲಿ ಯಾವುದೇ ದೀರ್ಘಪಯಣವನ್ನು ಸೂಚಿಸುವ ಪದವಾಗಿ ನಿಘಂಟು ಸೇರಿದೆ. 

ಟ್ರೋಜನ್ ಯುದ್ಧದಲ್ಲಿ ಅಳಿದುಳಿದ ಯೋಧರನ್ನು ಕರೆದುಕೊಂಡು ತನ್ನೂರು ಇಥಕಕ್ಕೆ ಹೊರಟ ಒಡಿಸ್ಯೂಸ್ ಹಲಬಗೆಯ ಕಷ್ಟ ಎದುರಿಸಿ, ಸಾಹಸ ನಡೆಸಿ, ಮುಂದೆ ಸಾಗುತ್ತಿದ್ದಾನೆ. ಒಂದು ಘಟ್ಟದಲ್ಲಿ ಅವನಿದ್ದ ದೋಣಿ ಫೀಶಿಯಾ ಪಟ್ಟಣದ ಬಳಿ ಕಡಲ ದಂಡೆಗೆ ಬಡಿದು ಚೂರಾಗುತ್ತದೆ; ಒಡಿಸ್ಯೂಸ್ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಮೈ ಮೇಲೆ ನೂಲಿನೆಳೆಯೂ ಇಲ್ಲದೆ ಎಲೆಗಳಲ್ಲಿ ಸೊಂಟ ಮುಚ್ಚಿಕೊಂಡು ಮೇಲೆದ್ದು ಬರುತ್ತಿದ್ದ ಒಡಿಸ್ಯೂಸನ ಮೈಕಟ್ಟು ಕಂಡ ಫೀಶಿಯಾದ ದೊರೆ ಆಲ್ಸಿನೌಸ್‌ನ ಮಗಳು ರಾಜಕುಮಾರಿ ನೌಸಿಕಾಗೆ ಇವನು ಯಾರೋ ವೀರಾಧಿವೀರನೇ ಇರಬೇಕು; ಮದುವೆಯಾದರೆ ಇಂಥವನನ್ನೇ ಮದುವೆಯಾಗಬೇಕು ಎನ್ನಿಸುತ್ತದೆ! ಸಖಿಯರಿಗೆ ಹೇಳಿ ಅವನನ್ನು ಸಜ್ಜುಗೊಳಿಸಿ ಅರಮನೆ ತಲುಪುವ ಹಾದಿ ತೋರಿಸುತ್ತಾಳೆ. ದೊರೆ ಆಲ್ಸಿನೌಸ್ ಅವನನ್ನು ಎದುರುಗೊಂಡು ಆದರಿಸುತ್ತಾನೆ. 

ಒಂದು ಸಂಜೆ ಆಲ್ಸಿನೌಸ್‌ನ ಆಸ್ಥಾನದಲ್ಲಿ ಗಾಯಕನೊಬ್ಬ ಟ್ರೋಜನ್ ಯುದ್ಧಕಾಲದ ಒಡಿಸ್ಯೂಸ್-ಅಖಿಲೀಸರ ಕತೆಯನ್ನು ಹಾಡುತ್ತಾನೆ. ಈ ಹಾಡು ಕೇಳುತ್ತಾ ಒಡಿಸ್ಯೂಸ್‌ಗೆ ಕಣ್ಣೀರು ಉಕ್ಕುತ್ತದೆ. ‘ಯಾಕಪ್ಪಾ ಅಳುತ್ತಿದ್ದೀಯ?’ ಎಂದು ಆಲ್ಸಿನೌಸ್ ವಿಚಾರಿಸಿದಾಗ, ಒಡಿಸ್ಯೂಸ್ ‘ಆ ಹಾಡುಗಾರ ಬಣ್ಣಿಸುತ್ತಿರುವ ಓಡಿಸ್ಯೂಸ್ ನಾನೇ’ಎನ್ನುತ್ತಾನೆ. ಅಲ್ಲಿಯತನಕ ತನ್ನ ಗುರುತು ಮುಚ್ಚಿಟ್ಟಿದ್ದ ಒಡಿಸ್ಯೂಸ್ ತನ್ನ ಆವರೆಗಿನ ಸಾಹಸದ ಕತೆಗಳನ್ನು, ಟ್ರೋಜನ್ ಯುದ್ಧ ಮುಗಿದ ನಂತರ ಇಲ್ಲಿಯವರೆಗೆ ಪಟ್ಟ ಪಾಡನ್ನು, ಹೇಳುತ್ತಾನೆ. ಆಧುನಿಕ ಕಾಲದಲ್ಲಿ ನಾವು ‘ಫ್ಲ್ಯಾಶ್‌ಬ್ಯಾಕ್’ಎನ್ನುವ ಕಥಾನಿರೂಪಣಾ ತಂತ್ರವನ್ನು ಹೋಮರ್ ೨೮೦೦ ವರ್ಷಗಳ ಕೆಳಗೇ ಬಳಸಿದ್ದ! ಸಾವಿರ ವರ್ಷಗಳ ಕೆಳಗೆ ಕನ್ನಡ ಕವಿ ರನ್ನ ತನ್ನ ‘ಗದಾಯುದ್ಧ’ದಲ್ಲಿ ‘ಸಿಂಹಾವಲೋಕನ ತಂತ್ರ’ಬಳಸಿ ಹಿಂದೆ ನಡೆದ ಕತೆ ಹೇಳಿದ್ದ. ನನ್ನ ಕಲ್ಪನೆಯಲ್ಲಿ ಸಿಂಹಾವಲೋಕನ ಫ್ಲ್ಯಾಶ್‌ಬ್ಯಾಕ್‌ಗಿಂತ ಭಿನ್ನವಾದ, ವಿರಾಮದ ಕಥನತಂತ್ರದಂತೆ ಕಾಣುತ್ತಿರುತ್ತದೆ.

ಅದಿರಲಿ. ಒಡಿಸ್ಯೂಸ್ ಆಲ್ಸಿನೌಸಿನ ಆಸ್ಥಾನದಲ್ಲಿ ತನ್ನ ಆವರೆಗಿನ ಯಾನದ ಕತೆ ಹೇಳುತ್ತಾ ಈ ಅಂಕಣದ ಆರಂಭದಲ್ಲಿ ಹೇಳಿದ ತಾವರೆ ತಿನ್ನುವವರ ನಾಡಿನ ಪ್ರಸಂಗಕ್ಕೆ ಬರುತ್ತಾನೆ. ಆ ಭಾಗದ ಸರಳ ಗದ್ಯಾನುವಾದ:

‘…ಅದಾದ ಮೇಲೆ ಒಂಬತ್ತು ದಿನ ಭೀಕರ ಬಿರುಗಾಳಿ ನಮ್ಮನ್ನು ಎಲ್ಲೆಲ್ಲೋ ಒಯ್ದಿತು. ಹತ್ತನೆ ದಿನಕ್ಕೆ ನಾವು ತಾವರೆ ತಿನ್ನುವವರ ನಾಡಿಗೆ ಕಾಲಿಟ್ಟೆವು. ಅಲ್ಲಿರುವ ಜನ ತೊಡಗಿರುವ ಒಂದೇ ಕೆಲಸವೆಂದರೆ ತಾವರೆ ತಿನ್ನುವುದು. ಸರಿ, ನಮ್ಮ ಪಾಡಿಗೆ ನಾವು ಕಡಲ ದಂಡೆಗೆ ಹೋಗಿ ಉಂಡೆವು, ಕುಡಿದೆವು. ಎಲ್ಲರೂ ಉಂಡಾದ ಮೇಲೆ, ‘ಈ ನಾಡಿನಲ್ಲಿರೋ ಆ ತಾವರೆ ತಿನ್ನೋ ಜನ ಯಾರು, ಎತ್ತ, ವಿಚಾರಿಸಿಕೊಂಡು ಬನ್ನಿ’ ಎಂದು ನನ್ನಿಬ್ಬರು ಸಹಚರರನ್ನು ಕಳಿಸಿದೆ. ಈ ಇಬ್ಬರ ಉಸ್ತುವಾರಿಗೆ ಮತ್ತೊಬ್ಬನನ್ನು ಕಳಿಸಿದೆ. ನಾನು ಕಳಿಸಿದ ಮೂವರೂ ತಾವರೆ ಭಕ್ಷಕರ ತಾಣಕ್ಕೆ ಹೋದರು. ಆದರೆ ಎಷ್ಟೊತ್ತಾದರೂ ಅವರು ಮರಳಿ ಬರಲೇ ಇಲ್ಲ! 

ಆ ತಾವರೆ ಭಕ್ಷಕರು ನಮ್ಮವರಿಗೆ ಕೇಡನ್ನೇನೂ ಮಾಡಿರಲಿಲ್ಲ; ನಮ್ಮವರನ್ನೂ ‘ಬನ್ನಿ, ತಾವರೆ ರುಚಿ ನೋಡಿ’ಎಂದು ಕರೆದಿದ್ದರು. ಆ ಜೇನುಸವಿಯ ತಾವರೆ ತಿಂದವರಿಗೆ ಅಲ್ಲಿಂದ ಎದ್ದು ಹೊರಡುವ ಬಯಕೆಯೇ ಮೂಡುತ್ತಿರಲಿಲ್ಲ. ಹೀಗಾಗಿ ನಮ್ಮವರು, ನಮ್ಮೂರು, ಊರ ದಾರಿ, ಮನೆ… ಎಲ್ಲ ಮರೆತು ಅಲ್ಲಿಯೇ ಇದ್ದುಬಿಟ್ಟಿದ್ದರು. ನಾನು ಅಲ್ಲಿಗೆ ಹೋಗಿ ಅವರನ್ನು ಕಾಡಿ ಬೇಡಿ, ಅತ್ತು ಕರೆದು, ಅವರನ್ನು ಹಡಗಿನತ್ತ ಎಳೆದುಕೊಂಡು ಬಂದು ಕಟ್ಟಿ ಹಾಕಿದೆ. ‘ಸರಸರ ಹಡಗು ಮುನ್ನಡೆಸಿ’ ಎಂದು ಉಳಿದ ನಾವಿಕರಿಗೆ ಹೇಳಿದೆ. ಯಾಕೆಂದರೆ ಈ ಉಳಿದವರು ಕೂಡ ಆ ತಾವರೆ ತಿಂದು ಮನೆಯ ಹಾದಿ ಮರೆತಾರೆಂದು ನನ್ನ ಭಯ. ನನ್ನ ಮಾತಿಗೆ ಕಿವಿಗೊಟ್ಟ ನಾವಿಕರು ಹಡಗು ನಡೆಸತೊಡಗಿದರು.’   

ಇಂಥ ಮಹಾಕಾವ್ಯ ಕತೆಗಳೆಲ್ಲ ಓಬೀರಾಯನ ಕಾಲದ ಕತೆಗಳು, ಊಳಿಗಮಾನ್ಯ ಕಾಲದ ಕತೆಗಳು ಇತ್ಯಾದಿ ವಾದಗಳೆಲ್ಲ ಒಂದು ಮಟ್ಟದವರೆಗೆ ಸರಿಯಿರಬಹುದು. ಆದರೆ ಈ ಮಹಾಕಾವ್ಯ ಕತೆಗಳನ್ನು ಜನಸಮುದಾಯದ ಸಾಮೂಹಿಕ ಮಹಾಜ್ಞಾನ-ಕಲೆಕ್ಟೀವ್ ವಿಸ್ಡಂ- ಅಥವಾ ಕಾರ್ಲ್ ಯೂಂಗ್ ಹೇಳುವ ಸಾಮೂಹಿಕ ಅಪ್ರಜ್ಞೆ- ‘ಕಲೆಕ್ಟಿವ್ ಅನ್‌ಕಾನ್ಷಿಯಸ್’-ಕೂಡ ಸೃಷ್ಟಿಸಿದೆ ಎಂಬುದನ್ನು ಮರೆಯದಿರೋಣ. ಅವು ಜನಮಾನಸದ ಕತೆಗಳಾಗಿ ಸಾವಿರಾರು ತಲೆಮಾರುಗಳು ಮೆಚ್ಚಿ, ಮೆಲುಕು ಹಾಕಿರುವ ಕತೆಗಳೂ ಆಗಿರುತ್ತವೆ; ಅವುಗಳಲ್ಲಿರುವ ರೂಪಕಗಳು ಹೊಸ ಹೊಸ ತಲೆಮಾರುಗಳಿಗೆ ಆಕರ್ಷಕವೂ ಆಗಿರುತ್ತವೆ; ಎಲ್ಲ ಕಾಲಕ್ಕೂ ಹೊಸ ಅರ್ಥ ಕೊಡುವ ಕತೆಗಳೂ ಆಗುತ್ತವೆ. ಹೋಮರನ ‘ಒಡಿಸ್ಸಿ’ಯಲ್ಲಿರುವ ತಾವರೆ ತಿನ್ನುವವರ ಕತೆಯನ್ನು ಮೂವತ್ತೈದು ವರ್ಷಗಳ ಕೆಳಗೆ ಓದಿದಾಗಿನಿಂದಲೂ ಈ ಕತೆ ಹಾಗೂ ಮಹಾಕಾವ್ಯ ರೂಪಕಗಳ ಕಾಲಾತೀತತೆ ಅಚ್ಚರಿ ಹುಟ್ಟಿಸುತ್ತಲೇ ಇರುತ್ತದೆ. 

ಹತ್ತೊಂಬತ್ತನೇ ಶತಮಾನದ ಇಂಗ್ಲಿಷ್ ಕವಿ ಆಲ್‌ಫ್ರೆಡ್ ಟೆನ್ನಿಸನ್ ಈ ಕತೆ ಓದಿ ಚಕಿತಗೊಂಡು ‘ಲೋಟಸ್ ಈಟರ್ಸ್’ಎಂಬ ಸುಂದರ ಪದ್ಯ ಬರೆದು ತಾವರೆ ತಿಂದವರ ಸ್ಥಿತಿ-ಮನಸ್ಥಿತಿಗಳನ್ನು ಇನ್ನಷ್ಟು ಚಿತ್ರಕವಾಗಿ ವಿಸ್ತರಿಸಿ ತೋರಿಸಿದ. ಟೆನ್ನಿಸನ್ ಪದ್ಯದ ಶುರುವಿನಲ್ಲಿ ಒಡಿಸ್ಯೂಸ್ ತಾವರೆ ತಿಂದು ಆರಾಮಾಗಿ ಕೂತಿದ್ದ ತನ್ನ ಸೈನಿಕರಿಗೆ ‘ಕರೇಜ್!’ಎಂದು ಹುರಿದುಂಬಿಸುತ್ತಾನೆ.  ಸೈನಿಕರು ಹೊರಡಲು ಸಿದ್ಧರಿಲ್ಲ! ಸುಂದರ ಮಧ್ಯಾಹ್ನ, ಮೆಲ್ಲಗೆ ಮದವೇರಿಸುವ ಸೋಮಾರಿತನ… ಅಯ್ಯೋ ಮುಂದಿನ ಗುರಿ, ಊರು… ಇವೆಲ್ಲ ಯಾರಿಗೆ ಬೇಕು ಎಂದು ಒಡಿಸ್ಯೂಸನ ಸೈನಿಕರು ತಾವರೆ ತಿಂದು ಕುಂತಲ್ಲೇ ಕೂರುತ್ತಾರೆ. 

ಹೀಗೆ ತಾವರೆ ತಿಂದು ಇದ್ದಲ್ಲೇ ಇರಬಯಸುವವರ ಈ ಕತೆ, ಎಲ್ಲೆಂದರಲ್ಲಿ, ಯಾವುದರಲ್ಲಿ ಮುಳುಗಿದ್ದರೆ ಅದರಲ್ಲೇ, ಇರುವ ಎಲ್ಲರ ಕತೆಯೂ ಆಗಿರಬಹುದೇನೋ! ಯಾರಿಗೆ ಬೇಡ ಈ ಸ್ಥಿತಿ? ಏನೂ ಮಾಡದೆ ಆರಾಮಾಗಿರುವುದು. ‘ಇಲ್ಲಿ ಏನೂ ಕೆಲಸ ಇಲ್ಲ. ಆರಾಮಾಗಿದ್ದೇನೆ’ಎಂದು ಆನಂದ ಪಡುವ ಜನರನ್ನು ನೋಡುತ್ತಲೇ ಇರುತ್ತೇವೆ. ಅಂಥವರು ಒಳಗೊಳಗೇ ಜಡರಾಗಿ ಕೊಳೆತು ನಾಶವಾಗುತ್ತಾರೆ ಎನ್ನುವವರು ಇರಬಹುದು. ಅದೇ ರೀತಿ ಸಂಗೀತ, ಓದು, ಕಲೆಗಳಲ್ಲಿ ಮುಳುಗಿ ಬೇರೇನೂ ಬೇಡ ಎನ್ನುವವರ ಸ್ಥಿತಿಯನ್ನೂ ಈ ಕತೆ ಹೇಳುತ್ತಿದೆಯೆ? ಊರು ಬಿಟ್ಟು ನಗರ ಸೇರಿ, ಊರಿನತ್ತ ತಲೆ ಹಾಕಿಯೂ ಮಲಗದೆ ಇರುವವರ ಮಂಪರನ್ನೂ ಈ ಕತೆ ಸೂಚಿಸುತ್ತಿದೆಯೆ? ಅಥವಾ ಕೆಲಸದಲ್ಲೇ ಮುಳುಗಿ ಬೇರೇನೂ ಬೇಡ ಎನ್ನುವ ‘ವರ‍್ಕ್ಆಲ್ಕೋಹಾಲಿಕ್’ಗಳ-ಕಾಯಕ ನಶಾಜೀವಿಗಳ- ಸ್ಥಿತಿಯನ್ನೂ ಇದು ಹೇಳುತ್ತಿರಬಹುದಲ್ಲವೆ? 

ಕತೆಯೊಂದರ ಬಗೆಬಗೆಯ ಅರ್ಥವಿಸ್ತಾರಗಳನ್ನು ನೋಡನೋಡುತ್ತಾ, ‘ವಾಚ್ಯಕ್ಕಳಿವುಂಟು; ರೂಪಕಕ್ಕಳಿವಿಲ್ಲ’ ಅನ್ನಿಸತೊಡಗುತ್ತದೆ! ಈ ಅನ್ನಿಸಿಕೆಗೆ ಪ್ರೇರಣೆಯಾದ ಬಸವಣ್ಣನವರ `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಮಾಣಿಕದಲ್ಲಿ ವಾಚ್ಯ ಸ್ಥಾವರ, ರೂಪಕ ಜಂಗಮ ಎಂಬ ಅರ್ಥವೂ ಹೊರಡುತ್ತದೆ. ಈ ಅಂಕಣದ ಬರಹಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಡೆರಿಡಾನ ‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂಬ ಮಾತಿನ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿರುತ್ತದೆ!



ಜಗತ್ತಿನ ಮಹಾನ್ ಮನಸ್ಸುಗಳನ್ನು ಕೆಣಕಿದ ಒಡಿಸ್ಯೂಸ್ ತತ್ವಜ್ಞಾನಿ ನೀಷೆಯನ್ನೂ ಕೆಣಕಿದ್ದು ಅಚ್ಚರಿಯಲ್ಲ! 

ಹತ್ತಾರು ತಿಂಗಳ ಹಿಂದಿನ ಅಂಕಣವೊಂದರಲ್ಲಿ ಕೊಟ್ಟಿದ್ದ ಆಲ್ಸಿನೌಸ್‌ನ ಅರಮನೆಯಿಂದ ಒಡಿಸ್ಯೂಸ್ ಹೊರಟ ಪ್ರಸಂಗವನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: ಒಡಿಸ್ಯೂಸನ ಕತೆ ಕೇಳಿದ ಆಲ್ಸಿನೌಸನಿಗೆ ತನ್ನ ಮಗಳು ನೌಸಿಕಾಗೆ ಒಡಿಸ್ಯೂಸ್ ತಕ್ಕ ಜೋಡಿ ಎನ್ನಿಸುತ್ತದೆ. ಮಗಳಿಗೆ ಮದುವೆ ಮಾಡಿ ಒಡಿಸ್ಯೂಸನನ್ನು ಇಲ್ಲೇ ಉಳಿಸಿಕೊಳ್ಳಬೇಕೆನ್ನಿಸುತ್ತದೆ. ಆದರೆ ಊರು ತಲುಪುವ ಕಾತರದಲ್ಲಿರುವ ಒಡಿಸ್ಯೂಸನನ್ನು ಇಲ್ಲೇ ಉಳಿಯಬೇಕೆಂದು ಒತ್ತಾಯಿಸಲಾಗದ ದೊರೆ ಅವನನ್ನು ಇಥಾಕಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡುತ್ತಾನೆ. 

ಎಂಥ ಸನ್ನಿವೇಶದಲ್ಲೂ ವ್ಯವಧಾನದ ಸುಂದರ ಚಿತ್ರಗಳನ್ನು ಕೊಡಬಲ್ಲ ವ್ಯವಧಾನದ ಪ್ರಕಾರವೆಂದರೆ ಮಹಾಕಾವ್ಯ! ಒಡಿಸ್ಯೂಸ್ ಹೊರಟು ಇನ್ನೇನು ಅರಮನೆ ಬಿಡುವ ಗಳಿಗೆಯಲ್ಲಿ ಹೋಮರ್ ಕೋಮಲ ಸನ್ನಿವೇಶವೊಂದನ್ನು ಸೃಷ್ಟಿಸುತ್ತಾನೆ:

ರಾಜಕುವರಿ ನೌಸಿಕಾ, ಕಡು ಚೆಲುವೆ ನೌಸಿಕಾ,
ಸ್ವರ್ಗವೇ ಕಡೆದಂತಿರುವ ನೌಸಿಕಾ,
ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ,
ಒಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರ್ರನೆ ಮೆಲುನುಡಿದಳು:

‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು, ನೆನೆದುಕೋ 
ನೆನೆನೆನೆದು ಹಾಯೆಂದುಕೋ.’

ನೌಸಿಕಾ ಮೆಲುನುಡಿಗೆ ಒಡಿಸ್ಯೂಸ್ ಮರುನುಡಿದನು:

‘ನೌಸಿಕಾ, ಆಲ್ಸಿನೌಸನ ಮಗಳೆ,    
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ,
ಆ ನೆಲದಲ್ಲಿ ಆ ಗಳಿಗೆಯಲ್ಲಿ 
ಮತ್ತು ಅಂದಿನಿಂದ ಅನುದಿನವು 
ನನ್ನ ಕಟ್ಟ ಕಡೆಯ ಉಸಿರಿರುವ ತನಕ, 
ನನ್ನ ಜೀವ ಉಳಿಸಿದ ರಾಜಕುವರಿಯೇ, 
ದೇವಿಯೊಬ್ಬಳ ನೆನೆದಂತೆ 
ನಾ ನಿನ್ನ ನೆನೆಯುವಂತಾಗಲಿ.’

ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.

‘ಒಡಿಸ್ಸಿ’ಯ ಈ ಭಾಗ ಕಂಡು ನೀಷೆಗೆ ಹೊಳೆದ ಸತ್ಯ:

ಒಡಿಸ್ಯೂಸ್ ಒಂದು ಘಟ್ಟದಲ್ಲಿ 
ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಹೊರಡುತ್ತಾನಲ್ಲಾ
ಹಾಗೆ ಜೀವನದಿಂದ ತೆರಳಬೇಕು-
ಶುಭ ಕೋರುತ್ತಾ ತೆರಳಬೇಕು; 
ಬದುಕಿನ ಬಗ್ಗೆ ತೀವ್ರ ಅನುರಕ್ತಿಯಿಂದಲ್ಲ.
    
 

blog
07 Sep 2025 ‘ಸಿನಿಕರ ನಡುವೆ ಶ್ರದ್ಧೆ’ ಎಂಬ ಚಿರ ರೂಪಕ!

ಕಾಲ ಇಷ್ಟೊಂದು ವೇಗವಾಗಿ ಉರುಳುವುದನ್ನು ಯಾವಾಗ ಕಲಿಯಿತು!

'ಗಾಳಿ ಬೆಳಕು' ಅಂಕಣದ ಮೂರನೆಯ ಅವತಾರ ಮೂರನೆಯ ವರ್ಷಕ್ಕೆ ಅಡಿಯಿಟ್ಟದ್ದನ್ನು natarajhuliyar.com ವೆಬ್‌ಸೈಟ್ ನಡೆಸುವ ಸಮಂತ್ ನೆನಪಿಸಿದಾಗ ಅಚ್ಚರಿಯಾಯಿತು. 

ಆ ಬಗ್ಗೆ ಬರೆಯುವುದೋ, ಎಂದಿನಂತೆ ಅಂಕಣ ಬರೆಯುವ ಹವ್ಯಾಸ ಗಳಿಗೆಗಳಲ್ಲಿ ಕೆಣಕುವ-ಆಹ್ವಾನಿಸುವ- ಪ್ರೇರೇಪಿಸುವ ವಸ್ತುವಿನ ಸುತ್ತ ಹೊರಡುವುದೋ ಎಂದುಕೊಳ್ಳುತ್ತಿದ್ದವನನ್ನು ಕಿರಿಯ ಮಿತ್ರ ಚರಣ್ ಕಳೆದ ವಾರದ 'ಶಾಂತವೇರಿ ಡೈರಿ’ ಓದಿ ಬರೆದ ಪತ್ರ ಬೇರೊಂದು ದಿಕ್ಕಿಗೆ ಒಯ್ದಿತು. ಚರಣ್ ಶಾಂತವೇರಿಯವರ ಡೈರಿಯ ಭಾಗಗಳನ್ನಷ್ಟೇ ಅಲ್ಲ, ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್‌ ಪ್ರಕಟಿಸಿರುವ ನನ್ನ 'ಶಾಂತವೇರಿ ಗೋಪಾಲಗೌಡ’ ಜೀವನ ಚರಿತ್ರೆಯನ್ನೂ ಓದಿ ಪ್ರತಿಕ್ರಿಯೆ ಬರೆದಿದ್ದ. 

ಮೊದಲಿಗೆ ಚರಣ್ ಬರೆದ ಪತ್ರ: 

‘ರಾಜಕೀಯ ಕುರಿತು ತಿಳಿದುಕೊಳ್ಳಲು, ತಾವು ರಚಿಸಿರುವ ಗೋಪಾಲಗೌಡರ ಜೀವನಚರಿತ್ರೆ ಓದಿದ ಮೇಲೆ, ಕ್ಷುಲ್ಲಕ ವೈಯಕ್ತಿಕ ಪ್ರತಿಷ್ಠೆಗೆ ಮಾಡುವ ರಾಜಕಾರಣಗಳಾಚೆ, ಜನಜೀವನದ ಉದ್ಧಾರದ ಉದ್ದೇಶಕ್ಕಾಗಿ ಮಾಡಿದ ಗೋಪಾಲಗೌಡರ ರಾಜಕಾರಣ ಕಂಡು, "ಇಲ್ಲ, ರಾಜಕಾರಣ ಅಂದ್ರೆ ನಾವು ಇಲ್ಲಿಯತನಕ ಅಂದುಕೊಂಡಂತೆ ಸಣ್ಣದ್ದಲ್ಲ" ಎನಿಸತೊಡಗಿತು. ಇವತ್ತಿನ ರಾಜಕಾರಣ ಜಾತಿ, ಮತ, ಹಣ, ದರ್ಪ, ಕೊಲೆ ಇವುಗಳ ಮೇಲೆ ನಡೆಯುತ್ತಿದೆ. ರಾಜಕಾರಣ ಎಷ್ಟು ಅವಶ್ಯಕ ಎಂಬ ಪ್ರಾಥಮಿಕ ತಿಳುವಳಿಕೆ ಮೂಡಿಸಲಾಗದಷ್ಟು ನಮ್ಮ ಮನೆ, ಬೀದಿ, ಶಾಲೆ, ಕಾಲೇಜು ಮುಂತಾದ ಸಂಸ್ಥೆಗಳು ಮೋಸ ಮಾಡಿವೆ ಅಥವಾ ಅಧಿಕಾರಸ್ಥರು ಆ ವಾತಾವರಣವನ್ನು ನಿರ್ಮಿಸಿದ್ದಾರೆ. ಇವತ್ತು ರೀಲ್ಸ್ ಮೂಲಕ political leaning ನಿರ್ಧಾರ ಆಗುತ್ತಿದೆಯೇ ವಿನಾ ಪ್ರಾಮಾಣಿಕ ಬೌದ್ಧಿಕ ಸಂವಾದದಿಂದ ಅಲ್ಲ. ಪರ್ಯಾಯ ಎಂದು ಬಿಂಬಿಸಿಕೊಳ್ಳುತ್ತಿರುವ ಉಪೇಂದ್ರರ ಪ್ರಸಿದ್ಧ ’ಪ್ರಜಾಕೀಯ’ವು ಮರುಳು ಮಾಡುವಂತೆ, ಸಮಾಜದ ಮುಖ್ಯ ಸಮಸ್ಯೆಗಳೇ ಇಲ್ಲವೆಂಬಂತೆ, ವಿಚಿತ್ರ ಟೊಳ್ಳುತನದ ಪಾಯದ ಮೇಲೆ ನಿಂತಿದೆ. ಯುವಕರಿಗೆ ಇದೇ ಇಷ್ಟವಾಗುತ್ತಿದೆ. ಮೋಸವನ್ನು, ಭ್ರಷ್ಟಾಚಾರವನ್ನು ಒಂದು ತರ ವೈಭವೀಕರಿಸಿ ಅಥವಾ ಗ್ರೇಟೀಕರಿಸಿ ನಾವೆಲ್ಲ ನಮಗೆ ಜನಕ್ಕೆ ಮೋಸ ಮಾಡುತ್ತಿದ್ದೇವೆ ಅನ್ನಿಸುತ್ತದೆ. ಇದಕ್ಕೆಲ್ಲ ಕಾರಣ ಸಾಂಸ್ಕೃತಿಕ ರಾಜಕಾರಣ, ಸಾಮಾಜಿಕ ರಾಜಕಾರಣ ಮತ್ತು ಆರ್ಥಿಕ ರಾಜಕಾರಣದ ಅನಕ್ಷರತೆ ಅನಿಸುತ್ತದೆ. ಇದು ನಮ್ಮನ್ನು ಅನೈಕ್ಯತೆಯ ಎಡೆಗೆ ಮುಖಮಾಡಿ ನಿಲ್ಲಿಸಿ ಆಸಕ್ತಿಹೀನರನ್ನಾಗಿ ಮಾಡಿದೆ. ಆದರೆ ಗೋಪಾಲಗೌಡರ ಜೀವನಚರಿತ್ರೆ ಓದಿದಾಗ ಸಾಹಿತ್ಯ-ಸಂಗೀತ-ರಾಜಕಾರಣ ಮಿಳಿತವಾದ ಪ್ರಾಮಾಣಿಕ ವ್ಯಕ್ತಿತ್ವ ಮೈಯಲ್ಲಿ ಪುಳಕ ಹುಟ್ಟಿಸಿತು; ಹಾಗೇ ಭರವಸೆಯನ್ನೂ ಕೂಡ.’

ಆಲೋಚನೆ ಸ್ಪಷ್ಟವಾಗಿದ್ದರೆ ಭಾಷೆಯೂ ಸ್ಪಷ್ಟವಾಗಿರಬಲ್ಲದು ಎಂಬುದನ್ನು ಚರಣ್ ಬರವಣಿಗೆ ಕೂಡ ಸೂಚಿಸುತ್ತದೆ. ನಾನು ಗಮನಿಸುವ ಈ ಕಾಲದ ಅನೇಕ ಹುಡುಗ ಹುಡುಗಿಯರ ಭಾಷೆಯಲ್ಲಿ ಎಲ್ಲರನ್ನೂ ತಲುಪಬಲ್ಲ ಸರಳ ಕಮ್ಯುನಿಕೇಟೀವ್ ಶಕ್ತಿ ಇದೆ. ಆದರೆ ಇವರೆಲ್ಲ ತಂತಮ್ಮ ತಕ್ಷಣದ ಪ್ರತಿಕ್ರಿಯೆಗಳ ಆಚೆಗೆ ಗಂಭೀರವಾದ ವಸ್ತುಗಳನ್ನು ನಿರ್ವಹಿಸುವಾಗ ಹಾಗೂ ಸುದೀರ್ಘ ನಿರೂಪಣೆಗಳನ್ನು ಬರೆಯಲು ಹೊರಟಾಗ ಈ ಭಾಷೆ ಹೇಗೆ ಬೆಳೆಯುತ್ತದೆ ಎನ್ನುವುದರ ಮೇಲೆ ಇವರ ಬರವಣಿಗೆಯ ಮುಂದಿನ ದಿಕ್ಕು ನಿಂತಿದೆ ಅನ್ನಿಸುತ್ತದೆ.

ಚರಣ್ ಎರಡು ವರ್ಷದ ಕೆಳಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಿಕ್ಕಾಗ ಬಿ.ಎ. ಪತ್ರಿಕೋದ್ಯಮ ಓದುತ್ತಿದ್ದ. ಚಡಪಡಿಕೆಯ ರಾಜಕಾರಣಿ ರವಿಕೃಷ್ಣಾರೆಡ್ಡಿಯವರ ಜೊತೆ ಅಡ್ಡಾಡುತ್ತಿದ್ದ. ’ಈ ದಿನ.ಕಾಂ’ನಲ್ಲೂ ಬರೆದ. ಎಲ್ಲ ಕಾಲದಲ್ಲೂ ಮೂಡಿ ಬರುವ ಇಂಥ ಹೊಸ ಲೇಖಕ, ಲೇಖಕಿಯರ ಬೆಳೆಯ ಬಗ್ಗೆ ನಾನು ಸದಾ ಆಶಾವಾದಿ. ಥಿಯೇಟರ್‍, ಕವಿತೆ, ಕತೆ, ರಾಜಕಾರಣ, ಟೀಚಿಂಗ್, ಚಳುವಳಿ, ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾ ಮುಂತಾಗಿ ಹಲವು ದಿಕ್ಕಿನಲ್ಲಿ ಆರೋಗ್ಯವನ್ನು ಬಿತ್ತಿ ಬೆಳೆಯುತ್ತಲೇ ಇರುವ ಇಂಥ ನೂರಾರು ಹೊಸ ಹುಡುಗ, ಹುಡುಗಿಯರು ಕರ್ನಾಟಕದ ಎಲ್ಲೆಡೆ ಆಸೆ, ಭರವಸೆ ಹುಟ್ಟಿಸುತ್ತಿರುತ್ತಾರೆ. ಹಾಗೆಯೇ ನಾನು ಒಡನಾಡುವ ಹಲವು ತಲೆಮಾರಿನ ಹಿರಿಯ ಕಿರಿಯ ಗೆಳೆಯ ಗೆಳತಿಯರು ಕೂಡ. ಇವರೆಲ್ಲರ ಒಳಿತಿನ ಪ್ರಜ್ಞೆ, ಬದ್ಧತೆ, ಚಡಪಡಿಕೆ, ನೈತಿಕ ಶಕ್ತಿಗಳು ನಮ್ಮ ಸುತ್ತ ಹೂಂಕರಿಸುವ ಈವಿಲ್‌ಗಳನ್ನು ತಂತಮ್ಮ ಮಿತಿಯಲ್ಲೇ ಹಿಮ್ಮೆಟ್ಟಿಸುತ್ತಿರಬಲ್ಲವು ಎಂಬ ನಿರೀಕ್ಷೆ ಮೂಡುತ್ತಲೇ ಇರುತ್ತದೆ…

ಇಂಥವರ ಜೊತೆ ಇರಲು ಈ ಅಂಕಣ ಎಂಬುದು ನಿಮಗೆಲ್ಲ ಗೊತ್ತಿರುತ್ತದೆ. 

ಈ ಕುರಿತು ಹೆಚ್ಚು ಹೇಳದೆ, ಐವತ್ತು ಅರವತ್ತು ವರ್ಷಗಳ ಕೆಳಗೆ ಪ್ರತಿ ತಲೆಮಾರೂ ತನ್ನ ಆದರ್ಶ, ಗುರಿಗಳನ್ನು ಹುಡುಕಿಕೊಳ್ಳುತ್ತಿರುತ್ತದೆ ಎಂದು ನಂಬಿ ಕೆಲಸ ಮಾಡುತ್ತಿದ್ದ ರಾಮಮನೋಹರ ಲೋಹಿಯಾ ಹೊಸ ತಲೆಮಾರನ್ನು ಕುರಿತು ಆಡಿದ ಮಾತುಗಳನ್ನು ಮತ್ತೆ ಕೇಳಿಸಿಕೊಳ್ಳುತ್ತಾ ಇಲ್ಲಿ ಕೊಡುತ್ತಿರುವೆ. ಕೆ.ವಿ. ಸುಬ್ಬಣ್ಣ ಅನುವಾದಿಸಿದ 'ಸತ್ಯ, ಕ್ರಿಯೆ, ಪ್ರತಿಭಟನೆ ಮತ್ತು ವ್ಯಕ್ತಿತ್ವ ನಿರ್ಮಾಣ’ ಲೇಖನದಿಂದ ಆಯ್ದ ಭಾಗ:

‘ಕ್ರಾಂತಿಕಾರರು ಅನೇಕ ಸಲ ತಾವು ಎಲ್ಲಿಂದ ಹೊರಟೆವು ಎಂಬುದನ್ನೇ ಮರೆತುಬಿಡುವುದುಂಟು. ತಮ್ಮ ಜನಕೋಟಿಗೋ ಅಥವಾ ಮಾನವಕುಲಕ್ಕೋ ಸತ್ಯ, ಕಾರ್ಯಶೀಲತೆ, ಔದಾರ‍್ಯ ಮುಂತಾದ ಸದ್ಗುಣಗಳ ಸಂಸ್ಕಾರ ಕೊಡುವುದಕ್ಕೆ ಕ್ರಾಂತಿ ಬೇಕು ಎಂಬ ನೆಲೆಯಿಂದಲೇ ಅವರು ಹೊರಟಿರಬಹುದು. ಆದರೆ ಒಮ್ಮೆ ಅವರು ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಕ್ರಾಂತಿಯ ಆರಂಭಕ್ಕೆ ತಮ್ಮನ್ನು ತೆತ್ತುಕೊಂಡರೆಂದರೆ, ಆಮೇಲೆ ತಮ್ಮ ಗುರಿಯ ಮೂಲ ಕಾರಣಗಳನ್ನೇ ಮರೆತುಬಿಡುವುದುಂಟು. ಕ್ರಾಂತಿಯ ತ್ವರೆ ಕೂಡ ಅವರನ್ನು ಹಾದಿಯಿಂದ ಅಡ್ಡ ಹಚ್ಚಿಬಿಡಬಹುದು. ಯಾವುದನ್ನು ತಾವು ಕಲಿತುಕೊಳ್ಳಬೇಕೆನ್ನುತ್ತಾರೋ, ಯಾವುದನ್ನು ತಮ್ಮ ಜನಕ್ಕೆ ಕಲಿಸಬೇಕೆನ್ನುತ್ತಾರೋ ಅದಕ್ಕೆ ತದ್ವಿರುದ್ಧವಾದ ಹಾದಿ ಹಿಡಿಯುವುದರಲ್ಲೇ ಯಶಸ್ಸು ಸುಲಭವಾಗಿ ಸಿಕ್ಕುತ್ತದೆ ಎಂದು ಅವರಿಗೆ ಭಾಸವಾಗುತ್ತದೆ. ಯಾರಿಗೆ ಸತ್ಯದ ಜೊತೆ ಸುಳ್ಳು ಬೆರೆಸುವುದು ಹೇಗೆಂಬುದು ತಿಳಿದಿರುತ್ತದೆಯೋ ಮತ್ತು ಯಾರಿಗೆ ಔದಾರ‍್ಯ, ಸಹಕಾರಗಳನ್ನು ಭೇದ ಹಾಗೂ ನಿಷ್ಕರುಣೆಯ ನಡವಳಿಕೆಗಳಿಂದ ಸಾಧಿಸಲು ಆತಂಕವೆನಿಸುವುದಿಲ್ಲವೋ ಅಂಥವರಿಗೇ ರಾಜಕೀಯದಲ್ಲಿ ಜಯ ದೊರಕುವುದು ಹೆಚ್ಚು. ಹೀಗಾಗಿ ನಿನ್ನೆಯ ಅಂಥ ಕ್ರಾಂತಿಕಾರರು ಪುರಾತನ ಅಸ್ತ್ರಾಗಾರದ ತುಕ್ಕು ಹಿಡಿದ ಆಯುಧದ ಹಾಗೆ ನಿರುಪಯುಕ್ತವಾಗುತ್ತಾರೆ. ಮಾನವಕುಲಕ್ಕೆ ಪ್ರಶಂಸನೀಯ ಸದ್ಗುಣಗಳ ಸಂಸ್ಕಾರ ದೊರಕಿಸಿಕೊಡಲು ಅವರು ಅಸಮರ್ಥರು. ಒಂದು ವಿಶಿಷ್ಟ ಸಾಮಾಜಿಕ ಪದ್ಧತಿಗೆ ಬದ್ಧರಾದ ಇಂಥ ಸಂಕುಚಿತ ಕ್ರಾಂತಿಕಾರಿಗಳು ಸಾಮಾಜಿಕ ಶೂನ್ಯತೆಯಲ್ಲಿ ಚಾರಿತ್ಯ್ರ  (ಕ್ಯಾರಕ್ಟರ್)ನಿರ್ಮಾಣಕ್ಕೆ ಹೆಣಗುವ ಸುಧಾರಕರ ಹಾಗೆ ಅರ್ಥಹೀನರಾಗುತ್ತಾರೆ. ರಾಷ್ಟ್ರೀಯ ಚಾರಿತ್ಯ್ರದ ನಿರ್ಮಾಪಕರು ಎನ್ನುವಂಥ ಅನೇಕರು ಸತ್ಯ, ಕಾರ‍್ಯಶೀಲತೆ, ಔದಾರ‍್ಯ ಮುಂತಾದ ಸದ್ಗುಣಗಳನ್ನು ಚಂದ ಮಾತುಗಳಲ್ಲಿ ಎತ್ತಿ ಎತ್ತಿ ಹೊಗಳುತ್ತಾರೆ, ಸತತ ಶ್ಲಾಘ್ಯವಾಗಿ ಉಪದೇಶಿಸುತ್ತಾರೆ. ಆದರೆ ಚಾರಿತ್ಯ್ರ ದ ಅಡಿಪಾಯ ನಿರ್ಮಿಸುವುದಕ್ಕೆ ಬದಲಾಗಿ ಅವರು ಮಾತಿನ ಧಭದಭೆ ಮೆರೆಸಿರುತ್ತಾರೆ. ಇಂಥ ಕ್ರಾಂತಿಕಾರರು ಮತ್ತು ಸುಧಾರಕರು- ಹೆಚ್ಚೆಂದರೆ ಒಂದು ನೆಲೆಯ ತನಕ ಯಾರು ಕ್ರಾಂತಿ ಹಾಗೂ ಚಾರಿತ್ಯ್ರ  ನಿರ್ಮಾಣಗಳೆರಡನ್ನೂ ಒಂದಾಗಿಯೇ ಸಾಧಿಸಲು ಶ್ರಮಿಸುತ್ತಾರೋ ಅಂಥವರಿಗೆ ಅನುಕೂಲ ವಾತಾವರಣವನ್ನು ನಿರ್ಮಿಸಿಕೊಡಬಲ್ಲರು. ಆಲಸಿತನ, ಮೈಗಳ್ಳತನಗಳು ಎಂಥ ರೇಶಿಮೆ ನುಣುಪಿನ ವಾಕ್ಚಾತುರ‍್ಯಗಳನ್ನು ಸುತ್ತಿಬಂದಿದ್ದರೂ ಅಥವಾ ಎಂಥ ವಶೀಲಿಗಳನ್ನು ಎದುರಿಟ್ಟುಕೊಂಡು ಬಂದಿದ್ದರೂ ಕ್ರಾಂತಿಕಾರಿಗಳು ಮಾತ್ರ ಇವನ್ನು ಎಂದೂ ಸಹಿಸಬಾರದು; ಹಾಗೆಯೇ ಶೀಘ್ರ ಯಶಸ್ಸು ಸಿಕ್ಕುತ್ತದೆಯೆಂದು ಎಂದೂ ಸುಳ್ಳಿನ ಸಾಧನೆಗಳನ್ನು ಅವಲಂಬಿಸಬಾರದು. ಸಾಮಾಜಿಕ ಕ್ರಾಂತಿ ಮತ್ತು ಚಾರಿತ್ಯ್ರ ನಿರ್ಮಾಣಗಳೆರಡೂ ಒಗ್ಗೂಡಿ ನಡೆಯಬೇಕು, ಒಂದಕ್ಕೊಂದಕ್ಕೆ ಸಂವಾದವಿರಬೇಕು; ಒಂದು ಇನ್ನೊಂದರ ಪರಿಣಾಮ ಎಂಬ ಭಾವನೆಯಿಲ್ಲದೆ ಇವು ಒಂದೇ ಅಭಿವ್ಯಕ್ತಿಯ ಎರಡು ಅವಿಭಕ್ತ ಮುಖಗಳು ಎನಿಸಬೇಕು.’

ಈ ಮಾತುಗಳಿರುವ ಮೂಲ ಲೇಖನ ಕೆ.ವಿ. ಸುಬ್ಬಣ್ಣ ಅನುವಾದಿಸಿರುವ ‘ರಾಜಕೀಯದ ಮಧ್ಯೆ ಬಿಡುವು’ (ಅಕ್ಷರ ಪ್ರಕಾಶನ ಹಾಗೂ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ); ನಟರಾಜ್ ಹುಳಿಯಾರ್ ಸಂಪಾದಿಸಿರುವ ’ಉತ್ತರ ದಕ್ಷಿಣ’ (ಕನ್ನಡ ಸಂಸ್ಕೃತಿ ಇಲಾಖೆ,) ರಾಮಮನೋಹರ ಲೋಹಿಯಾ ಚಿಂತನೆ (ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ) ಈ ಪುಸ್ತಕಗಳಲ್ಲಿದೆ.

ಈ ಅಂಕಣ ಬರೆಯುತ್ತಿದ್ದಾಗ, ಸುಮಾರು ಮೂವತ್ತು ವರ್ಷಗಳ ಕೆಳಗೆ ಡಿ. ಆರ್. ನಾಗರಾಜ್ ‘ಲಂಕೇಶ್ ಪತ್ರಿಕೆ’ಯ ಹುಟ್ಟುಹಬ್ಬಕ್ಕಾಗಿ ಬರೆದ ಲವಲವಿಕೆಯ ಗಂಭೀರ ಲೇಖನಕ್ಕೆ ಕೊಟ್ಟ ಶೀರ್ಷಿಕೆ: ‘ಸಿನಿಕರ ನಡುವೆ ಶ್ರದ್ಧೆ’ ನೆನಪಾಯಿತು. ಈ ಟೈಟಲ್ ಸರ್ವಕಾಲಕ್ಕೂ ಸಲ್ಲುವ ರೂಪಕದಂತೆ ನಾವು ಮಾಡುವ ಎಲ್ಲ ಬಗೆಯ ಕೆಲಸಗಳ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಆ ಕಾರಣದಿಂದ ಆ ಟೈಟಲ್ಲನ್ನೇ ಇಲ್ಲಿ ಬಳಸಿರುವೆ. ಈ ಅಂಕಣದಲ್ಲಿ ಸದಾ ಹರಿಯುವ ಲೋಹಿಯಾ, ಅಂಬೇಡ್ಕರ್‍, ಲಂಕೇಶ್, ಡಿ.ಆರ್‍, ಕೀರಂ ಎಲ್ಲರೂ ಸಿನಿಕರ ನಡುವೆ ಶ್ರದ್ಧೆ ಎಂಬ ರೂಪಕದ ಅರ್ಥವನ್ನೇ ಪ್ರತಿಧ್ವನಿಸುತ್ತಿರುತ್ತಾರೆ. ಅಂಥ ದೊಡ್ಡವರ ನೋಟಗಳನ್ನು ಮತ್ತೆ ಮತ್ತೆ ಎಲ್ಲರೊಡನೆ ಹಂಚಿಕೊಳ್ಳುವ ಕಾತರ ಕೂಡ ಈ ಅಂಕಣಗಳನ್ನು ಮೂರನೆಯ ವರ್ಷಕ್ಕೆ ಒಯ್ದಿದೆ ಎಂದಷ್ಟೆ ಹೇಳಿದರೆ ಸಾಕು.

ಎಂದಿನಂತೆ ಈ ವೆಬ್‌ಸೈಟ್ ನೋಡಿಕೊಳ್ಳುವ ಸಮಂತ್ ಪತ್ತಾರ್, ಕಲಾವಿದ ವಿನ್ಯಾಸ ಬಡಿಗೇರ್, ಮೂಲ ಪ್ರೇರಣೆಯಾದ ’ಓಪನ್ ಮೈಂಡ್ಸ್’ ಕಿರಣ್‌ಕುಮಾರ್; ತಿದ್ದುವ, ಒಪ್ಪುವ, ಟೀಕಿಸುವ ಗೆಳೆಯ ಗೆಳತಿಯರು; ಹೊಸ ಹೊಸ ಓದುಗಿಯರು, ಓದುಗರು…ಎಲ್ಲರಿಗೂ ಥ್ಯಾಂಕ್ಸ್, ಅಂಡ್ ಚಿಯರ್‍ಸ್.

 

 

 

 

 

 

 

 

ಜರ್ಮನಿಯ ಫಿಲಾಸಫರ್ ಫ್ರೆಡರಿಕ್ ನೀಷೆ ಜಗತ್ತಿನ ಶ್ರೇಷ್ಠ ಫಿಲಾಸಫರುಗಳಲ್ಲಿ ಒಬ್ಬ. ತೀವ್ರ ಚಿಂತನೆಯಲ್ಲಿ ಹುಟ್ಟುವ ಅವನ ತೀಕ್ಷ್ಣ ಸತ್ಯಕ್ಕೆ ಎಲ್ಲರಲ್ಲೂ ‘ಮಿಂಚಿನ ಹೊಳೆ ತುಳುಕಾಡುವುದು’.  
‘ನೀಷೆಗೆ ಹೊಳೆದ ಸತ್ಯ’ ಎಂಬ ಈ ಬಿಡಿ ಬಿಡಿ ಹೊಳಹುಗಳಲ್ಲಿ ನೀಷೆಯ ಒಳನೋಟಗಳನ್ನು ಪದ್ಯದ ಸರಳ ಚೌಕಟ್ಟಿಗೆ ತರಲೆತ್ನಿಸಿರುವೆ. ಇಂಥ ಹೊಳಹುಗಳು ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಕನ್ನಡ ಟೈಮ್ಸ್ ೨೦೦೭-೮ರ ನಡುವೆ ಗೆಳೆಯರೆಲ್ಲ ಸೇರಿ ಹೊರಡಿಸುತ್ತಿದ್ದ ವಾರಪತ್ರಿಕೆ. ಅದರೊಡನಿದ್ದ ಚಂ‌ದ್ರಶೇಖರ ಐಜೂರ್, ಮಂಜುನಾಥ ಲತಾ, ಮಂಜುನಾಥ ಕಾರ್ಗಲ್, ಜಯಶಂಕರ ಹಲಗೂರು, ನಾಗತಿಹಳ್ಳಿ ರಮೇಶ್, ಎನ್. ಸಿ. ಮಹೇಶ್ ಮೊದಲಾದವರು ನೀಷೆಗೆ ಹೊಳೆದ ಸತ್ಯವನ್ನು ಮೆಲುಕು ಹಾಕುತ್ತಿದ್ದುದು ನೆನಪಾಗುತ್ತದೆ.

ನಂತರ ಕೂಡ ಆಗಾಗ್ಗೆ ನೀಷೆಯ ಹೊಳಹುಗಳನ್ನು ಓದಿದಾಗೆಲ್ಲ ಕನ್ನಡಿಸಿಕೊಳ್ಳುವ ಕೆಲಸ ಮುಂದುವರಿಯಿತು. ಈಗ ‘ಗಾಳಿ ಬೆಳಕು ವೆಬ್ ಅಂಕಣಕ್ಕೆ ಎರಡು ವರ್ಷ ತುಂಬಿ ಮೂರಕ್ಕೆ ಕಾಲಿಟ್ಟಾಗ ಏನನ್ನಾದರೂ ಹೊಸದನ್ನು ಕೊಡಬಹುದು ಅನ್ನಿಸಿ, ‘ನೀಷೆಗೆ ಹೊಳೆದ ಸತ್ಯ’ದ ಎರಡನೆಯ ಅವತಾರ ಇಲ್ಲಿ ಕಾಣಿಸಿಕೊಂಡಿದೆ. ಆಗಾಗ ಪ್ರಕಟವಾಗುವ ನೀಷೆ ನಮ್ಮೊಳಗನ್ನು ಬೆಳಗಿಸಬಲ್ಲ. 

ನೀವು ನಿಮ್ಮ ಬಾಯಿಂದ ಸುಳ್ಳು ಹೇಳಬಹುದು;
ಆದರೆ, 
ಆ ಸುಳ್ಳಿನ ಜೊತೆಗೇ ಮೂಡುವ 
ತಿರುಚಿದ, ಕಹಿಯಾದ ವ್ಯಗ್ರ ಮುಖ
ಹೇಗೂ ಸತ್ಯವನ್ನು ಹೇಳಿಯೇ ತೀರುವುದು.
 

ಆತ್ಮಹತ್ಯೆಯ ಬಯಕೆ
ಅದ್ಭುತ ಸಮಾಧಾನ ತರುವುದು
ಅದರ ಮೂಲಕ ನಾವು ಹಲವು  
ಕೆಟ್ಟ ರಾತ್ರಿಗಳನ್ನು ಯಶಸ್ವಿಯಾಗಿ ದಾಟುವೆವು.

blog
31 Aug 2025 ಶಾಂತವೇರಿ ಡೈರಿ

ಮೈಸೂರಿನ ಡಾ. ವಿಷ್ಣುಮೂರ್ತಿಯವರಿಗೆ ಶಾಂತವೇರಿ ಗೋಪಾಲಗೌಡರ ಆರು ವರ್ಷದ ಡೈರಿಗಳು ಸಿಕ್ಕವು. ಹಿಂದೊಮ್ಮೆ ವಿಷ್ಣುಮೂರ್ತಿ ಪ್ರಕಟಿಸಿದ್ದ ‘ಗೋಪಾಲಗೌಡ ಶಾಂತವೇರಿ: ಅಂತರಂಗ ಬಹಿರಂಗ’ ಪುಸ್ತಕದಲ್ಲಿ ಈ ಡೈರಿಗಳ ಜೊತೆಗೇ ಪತ್ರಗಳು, ಭಾಷಣಗಳು, ಶಾಂತವೇರಿ ಕುರಿತ ನೆನಪುಗಳು, ಪತ್ರಿಕಾ ಹೇಳಿಕೆಗಳು ಇವೆಲ್ಲ ಇದ್ದವು. ಧಾರವಾಡದ ಅನನ್ಯ ಪ್ರಕಾಶನ ಈ ಅಪೂರ್ವ ಚಾರಿತ್ರಿಕ ದಾಖಲೆಗಳನ್ನು ೨೦೨೪ರಲ್ಲಿ ಮತ್ತೆ ಪ್ರಕಟಿಸಿ ಅವನ್ನು ಮರುಜೀವಗೊಳಿಸಿದೆ. ಈ ಪುಸ್ತಕ ನೋಡನೋಡುತ್ತಾ, ನ್ಯಾ಼ಶನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ನನ್ನ ‘ಶಾಂತವೇರಿ ಗೋಪಾಲಗೌಡ’ ಪುಸ್ತಕಕ್ಕಾಗಿ ೨೦೧೭ರಲ್ಲಿ ಮಾಡಿಕೊಂಡ ಗೋಪಾಲಗೌಡರ ಡೈರಿಯಿಂದ ಆಯ್ದ ಟಿಪ್ಪಣಿಗಳು ನೆನಪಾದವು:

೧೯೫೨ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದ ತರುಣ ಶಾಂತವೇರಿ ಗೋಪಾಲಗೌಡರು ೧೯೫೭ರಲ್ಲಿ ಚುನಾವಣೆ ಸೋತರು. ಅನಂತರ ಯಾವ ಆದಾಯವೂ ಇಲ್ಲದೆ, ಬೆಂಗಳೂರಿನಲ್ಲಿ ಇರಲು ಮನೆಯೂ ಇಲ್ಲದೆ ಗೋಪಾಲಗೌಡರು ಹಲ್ಲುಕಚ್ಚಿ ಬದುಕುತ್ತಿದ್ದರು. ಅವರು ದಾಖಲಿಸಿರುವ ೧೯೬೦ರ ವರ್ಷದ ದಿನಚರಿಯ ವಿವರಗಳು: ‘ಸಂಜೆ ಬಾಟಾದಿಂದ ಎರಡು ಮೂರು ರೂಪಾಯಿಗಳನ್ನು ತರಿಸಿಕೊಂಡು ಕಾಲ ಹಾಕಲಾಯಿತು.’ ‘ಮಂಡ್ಯದವರು ಕೊಟ್ಟಿದ್ದ ೪೦ ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು. ಇಂದು ಯಾವ ಹಣವೂ ಬರಲಿಲ್ಲ.’  

ಇದರ ಜೊತೆಗೆ, ಗೋಪಾಲಗೌಡರಿಗೆ ಸಣ್ಣ ಪುಟ್ಟ ಸಾಲ ಕೊಟ್ಟವರು ಮರಳಿ ಕೇಳುತ್ತಿದ್ದರು: ‘ಬೆಳಗ್ಗೆ ಶ್ರೀ ಬಸಪ್ಪ ಹಣ ವಸೂಲಿಗಾಗಿ ಬಂದಿದ್ದರು. ನಮ್ಮ ಪರಿಸ್ಥಿತಿ ವಿವರಿಸಿದ ಮೇಲೆ ಅವರೇ ನಮಗೆ ಪಂಜಾಬ್ ಕೆಫೆಯಲ್ಲಿ ವಡೆ, ಟೀ ಇತ್ಯಾದಿ ಕೊಡಿಸಿ ಕೈ ಬಿಟ್ಟರು… ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ಬಸಪ್ಪನವರಿಗೆ ವಾಯಿದೆ ಹೇಳಿ ಹೇಳಿ ಸಾಕಾಯಿತು.’  

ಬೇರೆಯವರಿಂದ ಹಣ ತೆಗೆದುಕೊಳ್ಳುವಾಗ ಗೌಡರಿಗೆ ಅಪಾರ ಮುಜುಗರವೂ ಆಗುತ್ತಿತ್ತು: ‘ಗೆ. [ಕೋಣಂದೂರು]ಲಿಂಗಪ್ಪ ರಾತ್ರಿ ರೈಲಿಗೆ ಮೈಸೂರಿಗೆ ಹೋದ. ನನ್ನ ಸ್ಥಿತಿ ನೋಡಿ ಆತನೇ ಹತ್ತು ರೂ. ಕೊಟ್ಟ. ಅದನ್ನು ಸ್ವೀಕರಿಸುವುದು ನನಗೆ ತುಂಬ ಕಷ್ಟವಾಯಿತು. ಆದರೂ ತೆಗೆದುಕೊಂಡೆ. ಆತ ವಿದ್ಯಾರ್ಥಿ. ನನಗಿಂತಲೂ ಅಸಹಾಯಕ, ಬಡವ. ನಾನು ಅವನಿಗೆ ಸಹಾಯ ಮಾಡುವುದು ಬಿಟ್ಟು, ನಾನು ಅವನಿಂದ ಹಣ ಪಡೆಯುವುದೆಂದರೆ ಆಭಾಸಕರ.’   

ಸಣ್ಣಪುಟ್ಟ ಪ್ರಯಾಣದ ಖರ್ಚಿಗೂ ಹಣವಿಲ್ಲದೆ ಗೌಡರು ಅಸಹಾಯಕ ರಾಗಿದ್ದರು.  ಬೆಂಗಳೂರಿನ ಮೆಜೆಸ್ಟಿಕ್ಕಿನ ಚಿಕ್ಕ ಲಾಲ್‌ಬಾಗ್ ಬಳಿ ಸಮಾಜವಾದಿ ಪಕ್ಷದ ಕಾರ್ಯಾಲಯವಿತ್ತು. ಕಾರ್ಯಾಲಯ ತೆರವುಗೊಳಿಸಬೇಕೆಂದು ಮಾಲೀಕರು ಕೇಸು ಹಾಕಿದ್ದರು. ಈ ಸಂಬಂಧ ಕೋರ್ಟಿನ ಅಲೆತವೂ ನಡೆಯುತ್ತಿತ್ತು. ‘ಮಾರ್ಗದರ್ಶಿ’ ವಾರಪತ್ರಿಕೆ ಪ್ರಕಟಿಸಲು ಮತ್ತೆ ಮತ್ತೆ ಸಾಲ ಎತ್ತಬೇಕಾಗಿತ್ತು. ಪತ್ರಿಕೆ ಅಚ್ಚು ಮಾಡಿದರೂ, ಪೋಸ್ಟ್ ಮಾಡಲು ಅಂಚೆ ಚೀಟಿ ಕೊಳ್ಳುವುದು  ಕಷ್ಟವಿತ್ತು. ಪಕ್ಷಕ್ಕೆ ಹೊಸ ಸದಸ್ಯರನ್ನು ಮಾಡಿಸಿ, ಸದಸ್ಯರಿಂದ ಐದು, ಹತ್ತು ರೂಪಾಯಿ ಸದಸ್ಯತ್ವ ಶುಲ್ಕ ಪಡೆಯುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿತ್ತು.  

ಗೋಪಾಲಗೌಡರ ಆರೋಗ್ಯವೂ ಕೆಡುತ್ತಿತ್ತು. ಪಿತ್ತಕೋಪ. ಅರುಚಿ, ಜ್ವರ, ಆಮಶಂಕೆ, ಇಂಜೆಕ್ಷನ್, ಮಾತ್ರೆ... ಹೀಗೆ ಇಡೀ ವರ್ಷ ಅನಾರೋಗ್ಯ. ಬಟ್ಟೆಗಳು ಹರಿದು ಹೋಗಿದ್ದವು.   ‘ಹೊಸ ಬಟ್ಟೆಗೆ ೮ರೂ. ೧೦ ಪೈಸೆ ಮತ್ತು ಹೊಲಿಗೆಗೆ ೨ ರೂ; ೩ ರೂ. ಇಂಜೆಕ್ಷನ್, ೧ ರೂ. ೨೫ ಪೈ. ಮಾತ್ರೆ, ೨ ರೂ. ಸಿಗರೇಟು.’ ಸಭೆಯೊಂದರ ಸಂಘಟಕರು ಹತ್ತು ರೂಪಾಯಿ ಮನಿಯಾರ್ಡರ್ ಮಾಡಿದ ಮೇಲೆ ಗೌಡರು ಮಂಡ್ಯಾದ ಸಭೆಗೆ ಹೋಗುತ್ತಾರೆ: ‘ಮಂಡ್ಯದವರು ಕೊಟ್ಟಿದ್ದ ೪೦ ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು.’ 

ಅವರಿವರಿಂದ ಇಪ್ಪತ್ತು, ನಲವತ್ತು, ಇಪ್ಪತ್ತೈದು ರೂಪಾಯಿಗಳ ಕೈಗಡ, ಜಮಾ, ಸಹಾಯ ತೆಗೆದುಕೊಂಡು, ದುಡ್ಡಿದ್ದಾಗ ಎರಡೆರಡು ಪೇಜ್ ಕಂಪೋಸ್ ಮಾಡಿಸಿ, ಕಷ್ಟಪಟ್ಟು ಹಾಗೂ ಹೀಗೂ ನಡೆಸುತ್ತಿದ್ದ ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು’ ಎಂಬ ಗಾಢ ವಿಷಾದವೂ ಇಲ್ಲಿದೆ. 

೧೯೬೦ರ ವರ್ಷದ ಈ ಚಾರಿತ್ರಿಕ ಡೈರಿಯಲ್ಲಿ ಕರ್ನಾಟಕದ ಧೀಮಂತ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು, ಸಾರ್ವಜನಿಕ ಜವಾಬ್ದಾರಿಗಳು, ಬಡತನ, ಅಭದ್ರತೆ, ಒಂಟಿತನ, ಸಂಜೆಯ ಹಾಗೂ ನಾಳೆಯ ಊಟದ ಖಾತ್ರಿಯಿರದ ಸ್ಥಿತಿ, ಇನ್ನೊಬ್ಬರಿಂದ ಹಣ ಪಡೆಯುವಾಗ ಹುಟ್ಟುವ ದೈನೇಸಿತನ, ಮತ್ತೆ ಮತ್ತೆ ಆತ್ಮಾಭಿಮಾನಕ್ಕೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನಿಗೆ ಹಲವು ದಿಕ್ಕಿನ ಕಷ್ಟಗಳು ಮುತ್ತುತ್ತವೆ.

ಆ ವರ್ಷ ಗೋಪಾಲಗೌಡರು ಧಾರವಾಡಕ್ಕೆ ಹೋದಾಗಿನ ಒಂದು ವಿವರ: ‘…ಇಲ್ಲಿ ಎಲ್ಲಾ ಥಂಡಿ- ರಾಜಕೀಯವೂ ಥಂಡಿ. ನಮ್ಮ ಗೆಳೆಯರಂತೂ ಉಸಿರಾಡಲು ಕೂಡ ಹಿಂದೆಗೆಯುತ್ತಿದ್ದಾರೆ. ನಿರಾಶೆ, ಅಸಹಾಯಕತೆ, ವಿಮುಖತೆ, ಜಿಗುಪ್ಸೆ ಎಲ್ಲಾ ಸೇರಿ ನಿಶ್ಚೇಷ್ಟಿತರಾಗಿದ್ದಾರೆ. ಜೀವನ ನಡೆಸುವುದು ತೀರಾ ಕಷ್ಟವಾಗಿದೆ ಈ ಜನಕ್ಕೆ. ಹೋರಾಡಲು ಶಕ್ತಿಯಿಲ್ಲ.’ 

ಆ ದಿನಗಳಲ್ಲಿ ಗೋಪಾಲಗೌಡರು ಹೈದರಾಬಾದಿನಲ್ಲಿ ಕಂಡ ಸಮಾಜವಾದಿ ಕಾರ್ಯಾಲಯದ ಚಿತ್ರ: ‘ದುಂಡುಮೇಜಿನ ಸುತ್ತ ಗೆಳೆಯ ಮುರಹರಿ, ಆಧ್ಯಾತ್ಮ ತ್ರಿಪಾಠಿ, ಅಜನಾಲ್ವಿ ಉದಾಸರಾಗಿ ಕುಳಿತಿದ್ದರು. ಅಲ್ಲಲ್ಲಿ ಒಳಗೆ ಒಬ್ಬಿಬ್ಬರು ಕೂತಿದ್ದರು... ನಮ್ಮ [ಬೆಂಗಳೂರು] ಕಾರ್ಯಾಲಯಕ್ಕಿಂತ ಕಳಾಹೀನ, ಜೀವನ್ಮರಣ ಸ್ಥಿತಿ ಎಲ್ಲೆಲ್ಲೂ ಅದರ ಮುದ್ರೆ ಒತ್ತಿತ್ತು. ಕಸ ಕಡ್ಡಿಗಳ ರಾಶಿ, ನಗು ಸತ್ತ ಮುಖ, ಅಸಹಾಯಕ ಕೆಲಸಗಾರರು- ಅಯ್ಯೋ ಹೀಗಾಗಬಾರದಿತ್ತು ಎಂದು ಮನಸ್ಸಿಗೆ ಸಂಕಟವಾಯಿತು.’  

ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಮಾಜವಾದಿ ಸಂಗಾತಿಗಳು ಚಳುವಳಿ ರಾಜಕಾರಣದ ಮೂಲಕ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುವ ಮೂಲಕ ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇಡಲೆತ್ನಿಸುತ್ತಿದ್ದರು. ಹರತಾಳ; ಅರಣ್ಯಭೂಮಿ ಆಕ್ರಮಿಸುವ ಉಪವಾಸ ಸತ್ಯಾಗ್ರಹ; ಇಂಗ್ಲಿಷ್ ತೊಲಗಿಸಿ ಆಂದೋಲನ; ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ; ಸವಿನಯ ಕಾನೂನುಭಂಗ ಚಳುವಳಿ; ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಆದರೆ ನಿರಾಶಾದಾಯಕ ಫಲಿತಾಂಶಗಳು ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು: ‘ಸಾರ್ವತ್ರಿಕ ಮುಷ್ಕರ ಅಷ್ಟಾಗಿ ಬೆಂಗಳೂರಿನಲ್ಲಿ ಯಶಸ್ವಿಯಾಗಲಿಲ್ಲ’; ‘ಕಾರ್ಪೋರೇಷನ್ ಎಲೆಕ್ಷನ್‌ನಲ್ಲಿ ನಮ್ಮ ಪಾರ್ಟಿಯ ಎಲ್ಲರೂ ಸೋತಿದ್ದಾರೆ.’

ಗೋಪಾಲಗೌಡರು ಈ ಸ್ಥಿತಿಯಲ್ಲೂ ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು, ರೇಡಿಯೋದಲ್ಲಿ ಅಲಿ ಅಕ್ಬರ್ ಸರೋದ್ ವಾದನ ಕೇಳಿಸಿಕೊಳ್ಳುವುದು, ಕಾರಂತರ ‘ಅಳಿದ ಮೇಲೆ’ ಥರದ ಕಾದಂಬರಿಗಳನ್ನು ಓದುವುದು ಇವೆಲ್ಲ ಡೈರಿಯಲ್ಲಿವೆ. ‘ಲಂಕೇಶಪ್ಪನವರ ಜೊತೆ ಬಂದಿದ್ದ ಕೆ.ಎಸ್. ನಿಸಾರ್ ಅಹಮದ್ ಪದ್ಯ ಓದಿ’ದ್ದೂ ಇದೆ.  ನೆಬೊಕೊವ್ ಅವರ ‘ಲೋಲಿತಾ’ ಕಾದಂಬರಿ, ಪರ್ಲ್ ಎಸ್. ಬಕ್ ಅವರ ‘ದಿ ಹಿಡನ್ ಫ್ಲವರ್ ಕಾದಂಬರಿ ಓದಿದ ವಿವರವೂ ಇದೆ: ‘ದಿನವೆಲ್ಲಾ ‘ದ ಹಿಡನ್ ಫ್ಲವರ್’ ಓದುತ್ತಾ ಕಳೆದೆ. ವಿಶ್ವದಲ್ಲಿ ಇಬ್ಬರು ಪ್ರೇಮಿಗಳು ತನ್ನ ಇಚ್ಛೆಯಂತೆ ಕೂಡಿ ಜೀವನ ನಡೆಸಲು ಸಮಾಜ ಎಷ್ಟು ಅಡ್ಡಿ ಬರುತ್ತದೆಂಬ ಸಮಸ್ಯೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ ಪರ್ಲ್ ಎಸ್. ಬಕ್; ಅಂಥವರಿಗೆ ಹುಟ್ಟಿದ ಮಕ್ಕಳು?’

ಆ ಕಾಲದಲ್ಲಿ ವಿವಾದ ಹುಟ್ಟಿಸಿದ್ದ ‘ಲೋಲಿತಾ’, ‘ದ ಹಿಡನ್ ಫ್ಲವರ್’ ಥರದ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಕಾಲದಲ್ಲಿ ಪ್ರೇಮ, ಕಾಮ, ಗಂಡುಹೆಣ್ಣಿನ ಸಂಬಂಧ ಕುರಿತ ವಾಂಛೆಗಳು ಆಗಾಗ್ಗೆ ಗೋಪಾಲಗೌಡರ ಚಿತ್ತದಲ್ಲಿ, ಜೀವನಾನುಭವದಲ್ಲಿ ಮಿಂಚಿ ಮರೆಯಾದಂತಿವೆ. ನಿರಾಶೆ, ಅನಿಶ್ಚಯಗಳ ನಡುವೆ ಸಾಹಿತ್ಯ, ಸಂಗೀತ, ರಾಜಕೀಯ ಚಿಂತನೆ, ಸಂಬಂಧಗಳು ಗೋಪಾಲಗೌಡರನ್ನು ಕೊಂಚವಾದರೂ ನೆಮ್ಮದಿಯಲ್ಲಿಟ್ಟ ಸೂಚನೆಗಳಿವೆ.  ಗೋಪಾಲಗೌಡರು ತೀರಾ ಸ್ವ ಮರುಕವಿಲ್ಲದೆ ತಮ್ಮ ಹತಾಶೆಯ ಸ್ಥಿತಿಯನ್ನು ತೂಗಿಸಿಕೊಂಡು ಹೋಗಿರುವ ರೀತಿ ಅವರ ಅನನ್ಯ ಹಳ್ಳಿಗ ಛಲವನ್ನೂ ಸೂಚಿಸುತ್ತದೆ. 

ಗೋಪಾಲಗೌಡರ ಈ ಘಟ್ಟ ಕುರಿತು ಲಂಕೇಶ್ ‘ಹುಳಿಮಾವಿನ ಮರ’ದಲ್ಲಿ ಬರೆಯುತ್ತಾರೆ: ‘[ಆ ಕಾಲದಲ್ಲಿ] ಅಲ್ಲೋಲ ಕಲ್ಲೋಲ ಮನಸ್ಸಿನ ಗೋಪಾಲಗೌಡರು ಚಿಕ್ಕ ಲಾಲ್‌ಬಾಗ್ ಹತ್ತಿರದ ತಮ್ಮ ಆಫೀಸಿನಲ್ಲಿ ಇರುತ್ತಾ ಗೆಳೆಯರನ್ನು ಸಂಧಿಸುತ್ತಿದ್ದರು. ಅವರಿಗೆ ಸಾಹಿತಿಗಳು, ಕಲಾವಿದರೆಂದರೆ ತುಂಬ ಇಷ್ಟ. ಅಧಿಕಾರವಿಲ್ಲದ ಆ ದಿನಗಳಲ್ಲಿ ಅವರು ಒಂದು ರೀತಿಯ ಗುರಿ ಇಲ್ಲದ ಜೀವನ ನಡೆಸುತ್ತಿದ್ದಂತೆ, ರಾಜಕೀಯವೇ ದುಷ್ಟ ವೃತ್ತಿಯೆಂಬ ಅನುಮಾನ ಅವರಲ್ಲಿ ಬಲವಾಗುತ್ತಿದ್ದಂತೆ ಕಾಣುತ್ತಿತ್ತು.’ 

ಗೋಪಾಲಗೌಡರ ಈ ಸ್ಥಿತಿಯ ಬಗ್ಗೆ ಮುಂದೊಮ್ಮೆ ‘ಕಟ್ಟೆ ಪುರಾಣ’ದ ಬಿ.ಚಂದ್ರೇಗೌಡರ ಜೊತೆ ಮಾತಾಡುತ್ತಾ ಲಂಕೇಶ್ ಹೇಳಿದರು: ‘...ಆಗ ಗೋಪಾಲಗೌಡರು ತುಂಬ ಹಣಕಾಸಿನ ತೊಂದರೆಯಲ್ಲಿದ್ದರು. ನಾವೆಷ್ಟು ಅವಿವೇಕಿಗಳಾಗಿದ್ವು ಅಂದ್ರೆ, ಅವರ ಹತ್ರ ದುಡ್ಡಿದೆಯೋ ಇಲ್ಲವೋ ಅಂತ ಕೂಡ ಕೇಳುತ್ತಿರಲಿಲ್ಲ. ನಾವು ಅವರ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳದಷ್ಟು ಅಹಂಕಾರಿಗಳೂ ಸಿನಿಕರೂ ಆಗಿದ್ದೆವು.’ ಅವತ್ತು ಮಾತು ನಿಲ್ಲಿಸಿದಾಗ ಲಂಕೇಶರ ಕಣ್ಣು ತುಂಬಿ ಬಂದಿತ್ತು ಎಂದು ಚಂದ್ರೇಗೌಡ ನೆನಸಿಕೊಳ್ಳುತ್ತಾರೆ. 

ಆಗಿನ ಗೋಪಾಲಗೌಡರ ಬಗ್ಗೆ ಲಂಕೇಶರು ಕೊಡುವ ಚಿತ್ರ: ‘...ಮಹಾ ಸ್ವಾಭಿಮಾನಿಯಾಗಿದ್ದು ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಸಮಾಜದ ನೀಚರು, ಶೋಷಕರನ್ನು ಕಂಡರೆ ಕೆಂಡವಾಗುತ್ತಿದ್ದರು; ಆದರೆ ಆತ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ. ಸಮಾಜವಾದಿ ನಿಲುವಿಗೆ ತಕ್ಕಂತೆ ಜಾತಿ, ಆಸ್ತಿ, ಭಾಷೆಯ ಬಗ್ಗೆ ಸ್ಪಷ್ಟವಾಗಿ, ಮನ ಮುಟ್ಟುವಂತೆ ಮಾತಾಡಬಲ್ಲವರಾಗಿದ್ದರೂ, ಮನುಷ್ಯರ ಎದುರು ಎಲ್ಲ ಸಿದ್ಧಾಂತ ಮರೆತು ಅಕ್ಕರೆಯ ಮೂರ್ತಿಯಾಗುತ್ತಿದ್ದರು.’ ಅದೇ ಆಸುಪಾಸಿನಲ್ಲಿ ಗೋಪಾಲಗೌಡರನ್ನು ಕುರಿತು ಲಂಕೇಶರ ಇನ್ನೊಂದು ನೋಟ: ‘...ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು.’  

೧೯೬೦ರ ವರ್ಷ ಮುಗಿದ ದಿನ ಡಿಸೆಂಬರ್ ೩೧ರಂದು ಗೋಪಾಲಗೌಡರು ಬರೆಯುತ್ತಾರೆ: ‘ಈ ವರ್ಷವೆಲ್ಲಾ ತೊಡಕಿನಿಂದಲೇ ಕಳೆಯಿತು. ಪಾರ್ಟಿಯ ಕೆಲಸಗಳು ತೃಪ್ತಿಕರವಾಗಿ ನಡೆಯಲಿಲ್ಲ. ಕಾನೂನುಭಂಗ ಚಳುವಳಿಯೂ ಸಫಲವಾಗಲಿಲ್ಲ. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಬೋರ್ಡುಗಳಿಗೆ ನಡೆದ ಚುನಾವಣೆಗಳಲ್ಲಿ ಪಾರ್ಟಿ ಹೇಳಿಕೊಳ್ಳುವಂತಹ ಪಾತ್ರ ವಹಿಸಲಿಲ್ಲ. ಸದಸ್ಯತ್ವವಂತೂ ನಡೆಯಲಿಲ್ಲ. ಸಂಘಟನೆ ಮತ್ತಷ್ಟು ಬಲಹೀನವಾಯಿತೆಂದೇ ಹೇಳಬೇಕು. ಗೆ.ಶಿವಪ್ಪ, ಕಣ್ಣನ್ ಮೊದಲಾದವರು ಪಿ.ಎಸ್.ಪಿ.ಗೆ ಹೊರಟು ಹೋದರು. ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು. ಈ ಕಡೆಯ ಎರಡು ತಿಂಗಳುಗಳನ್ನು ಅನಾರೋಗ್ಯ ಮತ್ತು ವಿಶ್ರಾಂತಿಯಲ್ಲಿ ಕಳೆದೆ.’ 

ಕೊನೆ ಟಿಪ್ಪಣಿ

ಈ ಡೈರಿಯ ಶುರುವಿನಲ್ಲಿ ಗೋಪಾಲಗೌಡರು ತಮ್ಮ ಹಳೆಯ ಡೈರಿಗಳು ’ಯಾರ ಯಾರ ಮನೆಯಲ್ಲೋ ಬಿದ್ದಿವೆ. ಅವುಗಳನ್ನೆಲ್ಲ ಸಂಗ್ರಹಿಸುವುದು ಸಾಧ್ಯವಾದರೆ ಏನಾದರೂ ಪ್ರಯೋಜನವಾದೀತು’ ಎಂದು ಬರೆಯುತ್ತಾರೆ. ಆ ಡೈರಿಗಳು  ಯಾರ ಬಳಿಯಾದರೂ ಇದ್ದರೆ, ಅವುಗಳ ಪ್ರಕಟಣೆ ಕರ್ನಾಟಕದ ರಾಜಕೀಯ ಚರಿತ್ರೆಯ ಮಹತ್ವದ ದಾಖಲೆಯಾಗಬಲ್ಲದು. 



Latest Video


Nataraj Huliyar Official
YouTube Channel

SUBSCRIBE