ಬುದ್ಧ, ನೀಷೆ ಥರದ ಫಿಲಾಸಫರ್ಸ್ ಒಂದೇ ಮಾತಿನಲ್ಲಿ, ಒಂದೇ ಸಾಲಿನಲ್ಲಿ ಹೇಳುವ ಗಾಢ ಸತ್ಯಗಳನ್ನು ಕವಿತೆ, ನಾಟಕ, ಕಾದಂಬರಿ ಬರೆಯುವವರು ಪುಟಗಟ್ಟಲೆ ಬರೆದು ಹುಡುಕಬೇಕಾಗುತ್ತದಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಸಾಹಿತ್ಯ ಹಾಗೂ ತತ್ವಜ್ಞಾನ ಎಂಬ ಎರಡೂ ಬಗೆಯ ಹುಡುಕಾಟಗಳ ಮಾರ್ಗಗಳಲ್ಲಿ ಮಿಂಚಿದ ಸತ್ಯಗಳು ಒಂದು ಜೀವಮಾನದ ಧ್ಯಾನದಿಂದಲೇ ಹುಟ್ಟಿರಬಲ್ಲವು. 'ಆಶೆಯೇ ದುಃಖಕ್ಕೆ ಕಾರಣ’ ಎಂಬ ಏಕವಾಕ್ಯ ತತ್ವಜ್ಞಾನ ಹುಟ್ಟಲು ಬುದ್ಧನ ಇಡೀ ಜೀವಮಾನದಲ್ಲಿ ನಡೆದ ಮಾನವ ಜೀವನದ ಅನುಭವಗಳ, ಸ್ವಂತದ ಅನುಭವಗಳ, ಅಥವಾ ಸಕಲ ಜೀವಿಗಳ ಅನುಭವಗಳ ನಿರಂತರ ಶೋಧನೆಗಳು ಕಾರಣವಾಗಿರಬಹುದು.
ಹೀಗೆ ಅಡಕವಾಗಿ ಗಾಢ ಸತ್ಯ ಹಿಡಿಯುವ ಆಸೆ ದೊಡ್ಡ ದೊಡ್ಡ ಕಾದಂಬರಿ ಬರೆದವರಲ್ಲೂ ಇರಬಹುದು. ಕೆಲವು ವರ್ಷಗಳ ಕೆಳಗೆ ಜಗತ್ತಿನ ಅತಿ ಸಣ್ಣ ಕತೆ ಯಾವುದೆಂದು ತಡಕಾಡುತ್ತಿದ್ದೆ. ಆಗ ಅಮೆರಿಕನ್ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ಜಗತ್ತಿನ ಅತಿ ಸಣ್ಣ ಕತೆ ಬರೆದಿದ್ದಾನೆ ಎಂಬುದನ್ನು ಗಮನಿಸಿದೆ.
ಹೆಮಿಂಗ್ವೆ ಆರು ಪದಗಳ ಅತಿ ಸಣ್ಣ ಕತೆಯನ್ನು ಬರೆಯುತ್ತೇನೆಂದು ತನ್ನ ಗೆಳೆಯರ ಜೊತೆ ಬೆಟ್ಸ್ ಕಟ್ಟಿದ್ದನಂತೆ. ಅಂಥ ಕತೆ ಬರೆದು ಹತ್ತು ಡಾಲರ್ ಬೆಟ್ಸ್ ಗೆದ್ದನಂತೆ. ೧೯೦೬ರ ಸುಮಾರಿನಲ್ಲಿ ಬರೆದ ಆ ಕತೆ ಹೆಮಿಂಗ್ವೆಗೆ ತಂದುಕೊಟ್ಟ ಹತ್ತು ಡಾಲರ್ಸ್ ಆ ಕಾಲಕ್ಕೆ ದೊಡ್ಡ ಮೊತ್ತ. ಆ ಅತಿಸಣ್ಣ ಕತೆ ಇದು:
For Sale: Baby shoes, never worn.
೧೯೯೦ರವರೆಗೂ ಇದು ಹೆಮಿಂಗ್ವೆ ಬರೆದ ಕತೆ ಎಂದು ಜನಕ್ಕೆ ಗೊತ್ತಿರಲಿಲ್ಲ. ಇಂಥವನ್ನು ಇಂಗ್ಲಿಷಿನಲ್ಲಿ, ವಿವಿಧ ದೇಶಭಾಷೆಗಳಲ್ಲಿ 'ಶಾರ್ಟೆಸ್ಟ್ ಸ್ಟೋರಿ’, 'ಫ್ಲ್ಯಾಶ್ ಫಿಕ್ಷನ್’ ಎನ್ನುತ್ತಾರೆ. ಕನ್ನಡದಲ್ಲಿ ಇವನ್ನು ಮಿಂಚುಕತೆ ಅಥವಾ ಮಿಂಚುಗತೆ ಎನ್ನಬಹುದು.
ಹೆಮಿಂಗ್ವೆಯ ಮಿಂಚುಕತೆ ಓದುವ ಮೊದಲು ಲ್ಯಾಟಿನ್ ಅಮೆರಿಕದ Augusto Monterosso Bonilla ಎಂಬ ಕತೆಗಾರ ಸ್ಪ್ಯಾನಿಶ್ ಭಾಷೆಯಲ್ಲಿ ಬರೆದ El Dinosaurio (ದ ಡೈನೋಸರ್) ಜಗತ್ತಿನ ಅತಿಸಣ್ಣ ಕತೆ ಎಂದುಕೊಂಡಿದ್ದೆ. ಅಂಬರ್ತೋ ಇಕೋ ತನ್ನ Mouse or Rat? Translation as Negotiation ಪುಸ್ತಕದಲ್ಲಿ ಅನುವಾದದ ಸವಾಲುಗಳನ್ನು ಚರ್ಚಿಸಲು ಬಳಸಿದ ಕತೆ ಇದು. ಇದನ್ನು 'ಅನುವಾದಿಸಲಾಗದ ಕತೆ’ ಎನ್ನುತ್ತಿದ್ದರು.
‘Mouse or Rat?’ ಎಂಬ ಟ್ರಾನ್ಸ್ಲೇಶನ್ ಥಿಯರಿಯ ಪುಸ್ತಕದಲ್ಲಿ ಇಕೋ ಈ ಏಕವಾಕ್ಯ ಕತೆಯನ್ನು ಮತ್ತೊಂದು ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂದು ಚರ್ಚಿಸುತ್ತಾನೆ. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿ ಈ ಕತೆ ಹೀಗಿದೆ:
Cuando despertó, el dinosaurio todavía estaba allí
ವಿಕಿಪೀಡಿಯಾದಲ್ಲಿರುವ ಅದರ ಸರಳ ಇಂಗ್ಲಿಷ್ ಅನುವಾದ: When he awoke, the dinosaur was still there.
ಹೈಸ್ಕೂಲ್ ಹುಡುಗ ಶೋಯಿಂಕಾ ಹಿಂದೊಮ್ಮೆ ಅದನ್ನು IM TRANSLATE ಎಂಬ ಪೋರ್ಟಲ್ಗೆ ಹಾಕಿ ನೋಡಿದಾಗ ಬಂದ ಅದರ ಅನುವಾದ ಹೀಗಿತ್ತು:
When woke up, the dinosaur was still there.
ಸ್ಪ್ಯಾನಿಶ್ ಮೂಲದ ಏಕವಾಕ್ಯ ಕತೆಯಲ್ಲಿ ಅವನು ಅಥವಾ ಅವಳು ಇಲ್ಲ. ಈ ಸ್ಪ್ಯಾನಿಷ್ ಕತೆಯ ಕನ್ನಡ ಅನುವಾದ ಹೀಗಿರಬಲ್ಲದು: 'ಎದ್ದಾಗ ಡೈನೋಸರ್ ಅಲ್ಲೇ ಇತ್ತು.’ ಈ ಥರದ ಕರ್ತೃ ಇಲ್ಲದ ವಾಕ್ಯ ಇಂಗ್ಲಿಷಿನಲ್ಲಿ ಕಷ್ಟ. ಸ್ಪ್ಯಾನಿಷ್ ಭಾಷೆಯಲ್ಲಿ, ಕನ್ನಡದಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಈ ತರದ ವಾಕ್ಯಗಳು ಸಾಧ್ಯ.
ಈ ಸ್ಪ್ಯಾನಿಶ್ ಕತೆಯನ್ನು ಓದುವಾಗ, 'ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾ ಮಾತಿನ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ಕಳೆದ ಸಲದ ಅಂಕಣದ ‘ಕೃತಕ ಜಾಣತನಕ್ಕೆ ಸವಾಲ್!’ ಬರಹಕ್ಕೆ ಪ್ರತಿಕ್ರಿಯಿಸುತ್ತಾ, ಕಾಮೆಂಟ್ಸ್ ವಿಭಾಗದಲ್ಲಿ ಗೆಳೆಯ ಶಿವಲಿಂಗಮೂರ್ತಿ, ’ಡೆರಿಡಾ ಹೇಳಿದ್ದು ಅರ್ಥದ ಮುಂದುವರಿಕೆಯೋ? ಮುಂದೂಡಿಕೆಯೋ?’ ಎಂದು ಕೇಳಿದ್ದರು. ಈಗ ಈ ಸ್ಪ್ಯಾನಿಶ್ ಏಕವಾಕ್ಯ ಕತೆಯ ಅರ್ಥದ ನಿರಂತರ ಮುಂದೂಡಿಕೆಯ ರೋಮಾಂಚನವನ್ನು ನೋಡಿ:
೧. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’:
ಎದ್ದವರು ಯಾರು? ಅವನೋ? ಅವಳೋ? ಪ್ರಾಣಿಯೋ? ಜೀವಾತ್ಮನೋ? ಜೀವಾತ್ಮಳೋ? ಪ್ರಜ್ಞೆಯೋ?....ಹೀಗೆ ಓದಿನಲ್ಲಿ ಅರ್ಥವನ್ನು ಮುಂದೂಡುತ್ತಲೇ ಇರಬಹುದು!
೨. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’:
ಈ ಡೈನೋಸರ್ ಯಾರೋ ಎದ್ದಾಗ ಕಣ್ಣಿಗೆ ಕಂಡದ್ದೋ? ಅದು ಹಿಂದಿನ ರಾತ್ರಿ ಅಲ್ಲಿಗೆ ಬಂದು ಇನ್ನೂ ಅಲ್ಲೇ ಇದ್ದ ಡೈನೋಸರೋ?
೩. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’:
ಈ ಡೈನೋಸರ್ ಕನಸಿನಲ್ಲಿ ಕಂಡದ್ದೋ? ಅಥವಾ ಕನಸೊಡೆದೆದ್ದಾಗ ಮನಸಿನಲ್ಲಿ ಉಳಿದ ಡೈನೋಸರೋ?
೪. ಅರವತ್ತಾರು ಮಿಲಿಯನ್ ವರ್ಷಗಳ ಹಿಂದೆ ಕಣ್ಮರೆಯಾದ ಡೈನೋಸರುಗಳ ಬಗ್ಗೆ ಈಗ ಓದಿ, ಅವುಗಳ ಚಿತ್ರ ನೋಡಿದ ಮೇಲೆ ಒಂದು ದಿನ ಎದ್ದವರ ಮನಸ್ಸಿನಲ್ಲಿ ಉಳಿದ ಚಿತ್ರವೋ ಇದು? ಕಲ್ಪನೆಯೋ? ಭ್ರಮೆಯೋ? ಎಷ್ಟೋ ಸಲ ನಮಗೆ ನಿಜಚಿತ್ರ, ಭ್ರಮಾಚಿತ್ರಗಳ ವ್ಯತ್ಯಾಸವೇ ಕಾಣದಂಥ ಸ್ಥಿತಿ ಸೃಷ್ಟಿಯಾಗುತ್ತದೆ; ಹಾಗೆ ಇದೂ ಅಂಥದೊಂದು ಸ್ಥಿತಿಯಲ್ಲಿ ಕಂಡ ಚಿತ್ರವೇ?
ಈ ಕತೆಯನ್ನು ಸಿನಿಮಾ ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂಬ ಪ್ರಶ್ನೆ ಅಂಬರ್ತೋ ಇಕೋಗೆ ಎದುರಾಗುತ್ತದೆ. ಅಂಬರ್ತೋ ಇಕೋ ಪ್ರಕಾರ, ಅನುವಾದದ ವಿಶಾಲ ಪ್ರಕ್ರಿಯೆಯಲ್ಲಿ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಹೋಗುವುದು ಕೂಡ ಭಾಷಾಂತರವೇ. ಕತೆಯೊಂದು ಚಿತ್ರಕತೆಯಾಗುವುದು; ಕತೆ ನಾಟಕವಾಗುವುದು; ಕಾದಂಬರಿ ಸಿನಿಮಾ ಆಗುವುದು… ಇವೆಲ್ಲವೂ ಇಕೋ ಪ್ರಕಾರ ಭಾಷಾಂತರವೇ. ಕಾರಣ, ಭಾಷಾಂತರ ಎಂದರೆ ಒಂದು ಸಂಜ್ಞಾವ್ಯವಸ್ಥೆಯಿಂದ ಇನ್ನೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಗೊಳ್ಳುವುದು. ಇಲ್ಲಿ ಕತೆಯೊಂದು ಕತೆಯ ಸಂಜ್ಞಾವ್ಯವಸ್ಥೆಯಿಂದ ಅಥವಾ ಕತೆಯ ಭಾಷೆಯಿಂದ ಚಿತ್ರಕತೆ, ಸಿನಿಮಾದ ಭಾಷೆಗೆ ಅಥವಾ ಅವುಗಳ ಸಂಜ್ಞಾವ್ಯವಸ್ಥೆಗೆ ‘ಭಾಷಾಂತರ’ ಆಗುತ್ತದೆ ಎಂದುಕೊಳ್ಳಬಹುದು.
ಭಾಷಾಂತರದ ಈ ಆಟವನ್ನು ಮುಂದೆಂದಾದರೂ ಚರ್ಚಿಸಬಹುದು; ಈಗ ಮತ್ತೆ ಮಿಂಚುಕತೆಯ ಲೋಕಕ್ಕೆ ಮರಳೋಣ ಎಂದುಕೊಂಡಾಗ, ತಮಿಳು ಕತೆಗಾರ ಪ್ರೊಫೆಸರ್ ನಂಜುಂಡನ್ ನೆನಪಾಗುತ್ತಾರೆ. ನಂಜುಂಡನ್ ಇದ್ದಕ್ಕಿದ್ದಂತೆ ಒಂದು ಮಧ್ಯಾಹ್ನ ‘ವಿಶ್ವದ ಅತಿ ಸಣ್ಣ ಕತೆ ಇದು’ ಎಂದು ಒಂದು ಮಿಂಚುಗತೆಯನ್ನು ಹೇಳಿದ್ದರು. ಅದರ ವಿವರಗಳು ಮರೆತು ಹೋಗಿವೆ. ಕಾರ್ಡಿಗೆ ಅಂಟಿಕೊಂಡ ನೊಣದ ಕಾಲುಗಳ ಚಿತ್ರ ಆ ಕತೆಯಲ್ಲಿತ್ತು ಎಂಬುದು ಮಾತ್ರ ನೆನಪಾಗುತ್ತದೆ.
ಸಾಮಾನ್ಯವಾಗಿ ಇಂಥ ವಿಶೇಷಗಳನ್ನು ಬರೆದಿಡುವ ನಾನು ಅವತ್ತು ಆ ಸಾಲನ್ನು ಡೈರಿಯಲ್ಲಿ ಬರೆದಿಡದೇ ಹೋದುದಕ್ಕೆ ವಿಷಾದ ಹುಟ್ಟುತ್ತದೆ. ಈ ಕತೆ ಕುರಿತು ನಂಜುಂಡನ್ ಅವರನ್ನೇ ಮತ್ತೆ ಕೇಳುವುದು ಇನ್ನೆಂದೂ ಸಾಧ್ಯವಿರಲಿಲ್ಲ; ನನ್ನ ಅನೇಕ ಪ್ರಿಯ ಮಿತ್ರರ ಹಾಗೆ ನಂಜುಂಡನ್ ಕೂಡ ಹಟಾತ್ತನೆ ತೀರಿಕೊಂಡರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಟ್ಯಾಟಿಸ್ಟಿಕ್ಸ್ ಪ್ರೊಫೆಸರ್ ಆಗಿದ್ದ ನಂಜುಂಡನ್ ವಿಶಿಷ್ಟ ನೋಟದ ತಮಿಳು ಕತೆಗಾರರಾಗಿದ್ದರು. ಜಾರ್ಜ್ ಲೂಯಿ ಬೋರ್ಹೆಸ್ ಅವರ ನೆಚ್ಚಿನ ಕತೆಗಾರನಾಗಿದ್ದ. ಬೋರ್ಹೆಸ್ ರೀತಿಯಲ್ಲಿ ತಮಿಳು ಕತೆಗಳನ್ನು ಬರೆಯುತ್ತಿದ್ದ ನಂಜುಂಡನ್ ಅವರ ಬದುಕು ಕೂಡ ಜೀವನಕ್ಕೆ ಅಂಟಿಕೊಂಡ ನೊಣದ ಕಾಲುಗಳ ಸ್ಥಿತಿಯಂತೆ ಇತ್ತು ಎಂಬುದು ನನ್ನ ಗ್ರಹಿಕೆ. ’ಕತೆಯನ್ನು ನಂಬು ಕತೆಗಾರ/ ಕತೆಗಾರ್ತಿಯನ್ನಲ್ಲ’ ಎಂಬ ಲಾರೆನ್ಸ್ ಮಾತನ್ನು ಒಪ್ಪುವ ನಾನು ನಂಜುಂಡನ್ಗೂ, ಅವರು ಹೇಳಿದ ಕತೆಗೂ ಸಂಬಂಧ ಕಲ್ಪಿಸುವ ಬಾಲಿಶ ಓದಿಗೆ ಇಳಿಯಲಾರೆ. ಆದರೆ ವಿಚಿತ್ರ ಪ್ರತಿಮೆಗಳನ್ನು ಸೃಷ್ಟಿಸಬಲ್ಲವರಾಗಿದ್ದ ನಂಜುಂಡನ್ ಇಂಥ ಮಿಂಚುಗತೆಗಳನ್ನು ತಮ್ಮ ತಮಿಳು ಕತೆಗಳ ಒಳಗೇ ಸೃಷ್ಟಿಸಿರಬಹುದು ಎಂದು ಮಾತ್ರ ಊಹಿಸುವೆ.
ಯಾಕೆಂದರೆ ಕತೆ, ಕಾದಂಬರಿಗಳ ವ್ಯಾಪ್ತಿಯುಳ್ಳ ಅನೇಕ ಸಾಲುಗಳು ಸಾಹಿತ್ಯ ಕೃತಿಗಳಲ್ಲಿ ಮಿಂಚುತ್ತಿರುತ್ತವೆ. ಟಾಲ್ಸ್ಟಾಯ್ ಮತ್ತೆ ಮತ್ತೆ ತಿದ್ದಿ ತಮ್ಮ ‘ಅನ್ನಾಕರೆನಿನಾ’ ಕಾದಂಬರಿಯ ಮೊದಲ ಸಾಲನ್ನು ಬರೆದರು. ರಷ್ಯನ್ ‘ಅನ್ನಾಕರೆನಿನಾ’ದ ಆರಂಭವಾಕ್ಯದ ಹಲ ಬಗೆಯ ಇಂಗ್ಲಿಷ್ ಅನುವಾದಗಳಿವೆ. ಕಾನಸ್ಟನ್ಸ್ ಗ್ಯಾರ್ನೆಟ್ ಮಾಡಿದ ಅನುವಾದ: Happy families are all alike; every unhappy family is unhappy in its own way. ತೇಜಶ್ರೀ ಮಾಡಿದ ‘ಅನ್ನಾಕರೆನಿನಾ’ ಕಾದಂಬರಿಯ ಸಂಗ್ರಹಾನುವಾದದಲ್ಲಿ ಈ ಮೊದಲ ಸಾಲು: 'ಸುಖೀ ಕುಟುಂಬಗಳೆಲ್ಲ ಒಂದೇ ಥರ; ಒಂದೊಂದು ದುಃಖಿ ಕುಟುಂಬವೂ ದುಃಖಿಯಾಗಿರುತ್ತದೆ ತನ್ನದೇ ಥರ.’
‘ಅನ್ನಾಕರೆನಿನಾ’ ಕಾದಂಬರಿಯ ಆರಂಭದ ವಾಕ್ಯವೇ ಒಂದು ಕಾದಂಬರಿಯ ಅರ್ಥವ್ಯಾಪ್ತಿಯನ್ನು ಮುಂದಿಡುವಂತಿದೆ. ಸರಳವಾಗಿ ನೋಡಿದರೆ, ಇಡೀ ಕಾದಂಬರಿ unhappy/ಅಸಂತುಷ್ಟ/ಅಸುಖಿ ಸಂಸಾರಗಳು ತಂತಮ್ಮದೇ ಆದ ರೀತಿಯಲ್ಲಿ ದುಃಖಿಗಳಾಗಿರುವ ಕತೆಗಳನ್ನು ಹೇಳುತ್ತದೆ. ಸಾಹಿತ್ಯ ಹುಟ್ಟುವುದೇ ಮಾನವಲೋಕದ ದುಃಖವನ್ನು ಅಥವಾ ಜೀವಲೋಕದ ದುಃಖವನ್ನು ಹೇಳಲು ತಾನೆ?
ದುಃಖ ಆಳ; ಆನಂದ ಹಗುರ ಎಂಬ ನನ್ನ ಬಹುಕಾಲದ ನಂಬಿಕೆಯ ಹಿನ್ನೆಲೆಯಲ್ಲಿ ಹೆಮಿಂಗ್ವೆಯ For Sale: Baby shoes, never worn ಮಿಂಚುಗತೆಯನ್ನು ದುಃಖದ ನೋಟದಲ್ಲೇ ಓದಿದೆ: ಯಾರೋ ತಂದೆ, ತಾಯಿ ಪ್ರಾಯಶಃ ತಮ್ಮ ಮಗುವಿಗಾಗಿ ತಂದಿಟ್ಟ ಶೂ ತೊಡುವ ಮೊದಲೇ ಮಗು ತೀರಿಕೊಂಡಿತೆ? ಈಗ ಆ ಶೂಗಳು ಮಾರಾಟಕ್ಕಿವೆಯೆ?
ಈ ಮಿಂಚುಗತೆಯ ಒಂದು ಸೂಚನೆಯನ್ನಷ್ಟೇ ಹೇಳಿ, ಇದರ ಅರ್ಥದ ನಿರಂತರ ಮುಂದೂಡಿಕೆಯ ಪ್ರಯೋಗದ ಸೃಜನಶೀಲ ಆಟವನ್ನು ನಿಮಗೇ ದಾಟಿಸುತ್ತೇನೆ!
ಅದರ ಜೊತೆಗೇ ವೆಬ್ಸೈಟೊಂದರಲ್ಲಿ ಕಂಡ ಮತ್ತೊಂದು ಮಿಂಚುಗತೆ:
I always make two cups of coffee.
ಈ ಮಿಂಚುಕತೆಯ ಅರ್ಥದ ಮುಂದೂಡಿಕೆ ಕೂಡ ಈ ಅಂಕಣದ ಪ್ರತಿಭಾವಂತ ಓದುಗಿಯರಲ್ಲಿ, ಓದುಗರಲ್ಲಿ ನಡೆಯುತ್ತಲೇ ಇರಬಲ್ಲದು ಎಂಬ ಅಚಲ ನಂಬಿಕೆಯಿಂದ ಈ ಕತೆಯ ಬಗ್ಗೆ ಏನೂ ಹೇಳದೆ ಹಾಗೇ ಕೊಟ್ಟಿರುವೆ!