Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
08 Jun 2025 ಸ್ವಂತದ ಬಗ್ಗೆ ಬರೆಯುವುದು

ಸ್ವಂತದ ಬಗ್ಗೆ ಬರೆಯುವುದು ಕಷ್ಟ ಎನ್ನುವುದು ನನ್ನ ಅನುಭವ. ಆದ್ದರಿಂದಲೋ ಏನೋ, ಸಣ್ಣ ಸಣ್ಣ ವಯಸ್ಸಿನಲ್ಲೇ ಆತ್ಮಚರಿತ್ರೆ ಬರೆದು ಪ್ರಕಟಿಸುವವರನ್ನು ಕಂಡು ವಿಸ್ಮಯವಾಗುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಸಲೀಸಾಗಿ ವಿಮರ್ಶೆ, ಪ್ರತಿಕ್ರಿಯೆ ಬರೆಯುವವರ ಬಗೆಗೂ ಅಷ್ಟೇ ಅಚ್ಚರಿಯಾಗುತ್ತದೆ. ಕಾರಣ: ಎಷ್ಟೋ ಸಲ ಇನ್ನೊಬ್ಬರ ಆತ್ಮಚರಿತ್ರೆಯ ಬಗ್ಗೆ ವಿಮರ್ಶೆ ಬರೆಯುವವರು ತಮ್ಮ ಆತ್ಮಚರಿತ್ರೆ ಬರೆಯಲು ಶುರು ಮಾಡಿರುತ್ತಾರೆ! ಆತ್ಮಚರಿತ್ರಾತ್ಮಕ ಬರವಣಿಗೆಗಳನ್ನು ಕುರಿತು ಮಾತಾಡುವವರ ವೈಖರಿ, ಅವುಗಳಿಗೆ ಪ್ರತಿಕ್ರಿಯಿಸುವವರ ಭಾಷೆ, ಧೋರಣೆ ಒಮ್ಮೊಮ್ಮೆ ನಗೆ ಉಕ್ಕಿಸುವಂತಿರುತ್ತದೆ. 

ಅಂಥದೊಂದು ಪ್ರಸಂಗ: 

ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ತೀರಿಕೊಂಡ ನಂತರ ಅವರ ಪತ್ನಿ ತಮ್ಮ ಪತಿಯನ್ನು ಕುರಿತ ನೆನಪುಗಳ ಪುಸ್ತಕವನ್ನು ಬರೆದು ಪ್ರಕಟಿಸಿದರು. ಆಗ ಈ ಪುಸ್ತಕವನ್ನು ಪತ್ರಿಕೆಯೊಂದರಲ್ಲಿ ಪರಿಚಯಿಸಿದ್ದ ಲೇಖಕರೊಬ್ಬರು, ಕಳೆದ ವರ್ಷ ತೀರಿಕೊಂಡ ಮತ್ತೊಬ್ಬ ಲೇಖಕ 'ಚಂದ್ರಕೀರ್ತಿ’ಯವರ ಪತ್ನಿಗೆ ಒಂದು ಉಚಿತ ಸುಪಾರಿ ಸಲಹೆ ಕೊಟ್ಟರು: 'ನೀವು ನಿಮ್ಮ ನೆನಪುಗಳನ್ನು ಬರೆಯಿರಿ; ಆಗ 'ಚಂದ್ರಕೀರ್ತಿ’ಯವರ ಬಗ್ಗೆ ನಾವು ಈವರೆಗೆ ಕಾಣದಿರುವ ಮುಖಗಳು ಕಾಣುತ್ತವೆ.’ 

ಈ ಸಲಹೆ ಓದಿದಾಗ ನನಗೂ ಒಂದು ಸಲಹೆ ಕೊಡಬೇಕೆನ್ನಿಸಿತು: ಈ ಥರದ ಉಚಿತಾನುಚಿತ ಸಲಹೆ ಕೊಟ್ಟಿರುವ ಸದರಿ ಲೇಖಕ ತನ್ನ ಸ್ವಂತ ಪತ್ನಿಗೆ ಈಗಲೇ ಸುಪಾರಿ ಕೊಟ್ಟು, ಸ್ವತಃ ತಾನು ’ಕಾಣದ’ ಮುಖಗಳನ್ನು ಬರೆಯಲು ಕೇಳಿಕೊಳ್ಳುವುದು ಒಳ್ಳೆಯದಲ್ಲವೆ! ತನ್ಮೂಲಕ ಈ ಲೇಖಕ ತಾನು ಕಾಣದ ತನ್ನ ಅಗೋಚರ ವ್ಯಕ್ತಿತ್ವವನ್ನು ತನ್ನ ಪತ್ನಿಯ ಮೂಲಕ ಕಂಡುಕೊಂಡು ಬದುಕಿದ್ದಾಗಲೇ ಆನಂದಪಡುವುದು ಅಥವಾ ದುಃಖಪಡುವುದು ಲಾಭಕರವಲ್ಲವೆ! 

ಲೇಖಕಿ ಅಥವಾ ಲೇಖಕ ತನ್ನ ಸ್ವಂತವನ್ನು ಅಥವಾ ಸೆಲ್ಫ್ ಅನ್ನು ಶೋಧಿಸಿಕೊಂಡು ಬರೆಯುವ ‘ಆಟೋಬಯಾಗ್ರಫಿ’ ಪ್ರಕಾರ ಇಂಗ್ಲಿಷಿನಿಂದ ಭಾರತೀಯ ಭಾಷೆಗಳಿಗೆ ಬಂತೋ ಅಥವಾ ಮೊಘಲ್ ದೊರೆ ಬಾಬರ್ ಬರೆದ 'ಬಾಬರ್ ನಾಮಾ’ ಥರದ ಬರವಣಿಗೆಗಳಿಂದ ಭಾರತೀಯರಿಗೆ ಹೆಚ್ಚು ಪರಿಚಿತವಾಯಿತೋ ಹೇಳುವುದು ಕಷ್ಟ. ತೊಂಬತ್ತು ಪುಟಗಳ 'ಬಾಬರ್ ನಾಮಾ’ ಕುರಿತು ಲಂಕೇಶರು ೧೯೯೧ರಲ್ಲಿ ಬರೆದ ’ಬಾಬರ್’ ಎಂಬ ಟೀಕೆ ಟಿಪ್ಪಣಿ ಓದಿದಾಗ  'ಬಾಬರ್ ನಾಮಾ’ ಭಾರತದ ಆತ್ಮಚರಿತ್ರೆಯ ಆರಂಭದ ಮುಖ್ಯ ಮಾದರಿಯಂತೆ ಕಂಡಿತ್ತು. ಈ ಟೀಕೆಟಿಪ್ಪಣಿಯನ್ನು ಗೆಳೆಯ ರಿಷಿಕೇಶ್ ಬಹದ್ದೂರ್ ’ದ ಸೋರ್ ಮ್ಯಾಂಗೋ ಟ್ರೀ’ ಸಂಕಲನಕ್ಕಾಗಿ ಇಂಗ್ಲಿಷಿಗೆ ಅನುವಾದಿಸಿದಾಗ ಆತ್ಮಚರಿತ್ರೆಯ ಪ್ರಾಮಾಣಿಕ ಬರವಣಿಗೆ ಬಾಬರ್ ಗೆ ಸಹಜವಾಗಿ ಒಗ್ಗಿರುವುದನ್ನು ಮತ್ತೆ ಗಮನಿಸಿದೆ. ಆತ್ಮಚರಿತ್ರೆಯ ಪ್ರಕಾರ ಬಾಬರ್ ಗೆ ಒಲಿದಿರುವ ರೀತಿಯನ್ನು ಕನ್ನಡ ಜಾಣಜಾಣೆಯರಿಗೆ ತೋರಿಸಿದ ಲಂಕೇಶರ ಟೀಕೆ ಟಿಪ್ಪಣಿಯ ಶಕ್ತಿ ಕೂಡ ಅಷ್ಟೇ ಮಹತ್ವದ್ದು ಎನ್ನಿಸಿತು. 

ಇದಾದ ಕೆಲವು ವರ್ಷಗಳ ನಂತರ, ೧೯೯೭ರಲ್ಲಿ ಲಂಕೇಶ್ 'ಹುಳಿಮಾವಿನ ಮರ’ ಆತ್ಮಕತೆ ಬರೆದರು. ಇಂಗ್ಲಿಷಿನ ’ಆಟೋಬಯಾಗ್ರಫಿ’ ಪ್ರಕಾರ ಸೃಷ್ಟಿಸಿದ ಮಾದರಿಗೆ ಅತ್ಯಂತ ಹತ್ತಿರವಿರುವ ಕನ್ನಡ ಆತ್ಮಚರಿತ್ರೆಯೆಂದರೆ 'ಹುಳಿಮಾವಿನ ಮರ’ ಎಂದು ನನಗೆ ಇವತ್ತಿಗೂ ಅನ್ನಿಸುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಈಚಿನ ಪ್ರತಿಕ್ರಿಯೆಯೊಂದನ್ನು ನೋಡುತ್ತಿದ್ದಾಗ, ಲಂಕೇಶರ ಆತ್ಮಚರಿತ್ರೆ ಪ್ರಕಟವಾದಾಗ ಕೇಳಿಬಂದ ಕೆಲವು ಗೊಣಗುಗಳು ನೆನಪಾದವು: 

ಲಂಕೇಶರ ಆತ್ಮಚರಿತ್ರೆಯಲ್ಲಿ 'ನನ್ನ ಹೆಸರಿಲ್ಲ’; 'ನಾನು ಲಂಕೇಶ್‌ಗೆ ಅಷ್ಟು ಹತ್ತಿರವಾಗಿದ್ದೆ, ನನ್ನ ಬಗ್ಗೆ ಬರೆದಿಲ್ಲ’; 'ನಾನು ಲಂಕೇಶ್‌ಗೆ ಬ್ಯಾಂಕಿನಲ್ಲಿ ಸಾಲ ಕೊಡಿಸಿದ್ದೆ. ಅದರ ಬಗ್ಗೆ ಲಂಕೇಶ್ ಬರೆದೇ ಇಲ್ಲ…’ ಇತ್ಯಾದಿಯಾಗಿ ಕೆಲವರು ಗೊಣಗಿದ್ದರು. ಆ ಕಾಲದಲ್ಲಿ ನಾನು ಬರೆದ 'ಆತ್ಮಚರಿತ್ರೆಯ ಆತ್ಮ’ ಎಂಬ ಟಿಪ್ಪಣಿಯೊಂದರಲ್ಲಿ ಇಂಥ ಪ್ರತಿಕ್ರಿಯೆಗಳನ್ನು ಕುರಿತು ಪ್ರತಿಕ್ರಿಯೆ ಬರೆದ ನೆನಪು: ಆತ್ಮಚರಿತ್ರೆ ಬರೆದವರ ಆತ್ಮಕ್ಕೆ ಹತ್ತಿರವಾಗಿರುವ ಸಂಗತಿಗಳು ಮಾತ್ರ ಅವರ ಆತ್ಮಚರಿತ್ರೆಯಲ್ಲಿ ಬರುತ್ತವೆ; ನೀವು ಲೇಖಕನೊಬ್ಬನ ಆತ್ಮಕ್ಕೆ ತಲುಪಿಯೇ ಇಲ್ಲ ಎಂದರೆ, ಅವನ ಆತ್ಮಚರಿತ್ರೆಯಲ್ಲಿ ನೀವು ಬರುವ ಸಂಭವವೇ ಇರುವುದಿಲ್ಲ, ಅಲ್ಲವೆ?

ಮೊನ್ನೆ ಗೆಳೆಯನೊಬ್ಬ ತನ್ನ ವಾರಿಗೆಯ ಲೇಖಕನೊಬ್ಬ ಬರೆದ ಆತ್ಮಚರಿತ್ರೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ನೋಡಿದಾಗ ಲಂಕೇಶರ 'ಹುಳಿಮಾವಿನ ಮರ’ದ ಬಗ್ಗೆ ನಾನು ಬರೆದ ಆ ಟಿಪ್ಪಣಿ ಮತ್ತೆ ಮನಸ್ಸಿಗೆ ಬಂತು. ಈ ಗೆಳೆಯನ ಹೆಸರು 'ರಾಜು’ ಎಂದಿಟ್ಟುಕೊಳ್ಳೋಣ. ಅವತ್ತು ರಾಜು ಚರ್ಚಿಸುತ್ತಿದ್ದ ಆತ್ಮಚರಿತ್ರೆಯನ್ನು ಬರೆದಿದ್ದ ಲೇಖಕ ಹುಬ್ಬಳ್ಳಿಯಲ್ಲಿದ್ದ; ರಾಜು ಕೂಡ ಆಗ ಹುಬ್ಬಳ್ಳಿಯಲ್ಲಿದ್ದ.  ಇಬ್ಬರೂ ಪರಿಚಿತರು. ಆದರೆ ಸದರಿ ಲೇಖಕ ಹುಬ್ಬಳ್ಳಿಯಲ್ಲಿದ್ದ ಕಾಲವನ್ನು ಕುರಿತು ಬರೆದದ್ದರಲ್ಲಿ ರಾಜುವಿಗೆ ಕೆಲವು ದೋಷಗಳು ಕಾಣಿಸಿದವು: ಉದಾಹರಣೆಗೆ, ಐದು ವರ್ಷ ತನ್ನನ್ನು ಸಾಕಿದ್ದ ಹುಬ್ಬಳ್ಳಿಯ ಬಗ್ಗೆ ಈತ ಎರಡೇ ಎರಡು ಪ್ಯಾರಾ ಮಾತ್ರ ಬರೆದಿದ್ದಾನೆ. ತನಗೆ ಕೆಲಸ ಕೊಡಿಸಲು ನೆರವಾದ 'ಪುಟ್ಟಪ್ಪ’ ಹಾಗೂ 'ಚಂದ್ರಪ್ಪ’ನವರ ಬಗ್ಗೆ ಅವನ ಆತ್ಮಚರಿತ್ರೆಯಲ್ಲಿ ಒಂದು ಕೃತಜ್ಞತೆಯ ಸಾಲು ಕೂಡ ಇಲ್ಲ… ಇತ್ಯಾದಿ. 

ಬರೆವ ವ್ಯಕ್ತಿಯ ಆತ್ಮವನ್ನು ಸೋಕದ ವಿಚಾರಗಳು ಆತನ ಆತ್ಮಚರಿತ್ರೆಯಲ್ಲಿ, ಅದರಲ್ಲೂ ಅದನ್ನು ಬರೆಯುವ ಕಾಲದಲ್ಲಿ, ಬರಬೇಕಾಗಿತ್ತೆಂದು ಇತರರು ಹುಡುಕುವುದರಲ್ಲಿ ಅರ್ಥವೇನಿದೆ ಎಂಬ ಪ್ರಶ್ನೆ ಈಗ ಮತ್ತೆ ಎದುರಾಯಿತು. ಹಿಂದೊಮ್ಮೆ ವಿ.ಎಸ್. ನಯಪಾಲ್ ಎಂ.ಕೆ. ಗಾಂಧಿಯವರ ಆತ್ಮಚರಿತ್ರೆ 'ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರೂತ್’ ಆರ್ 'ದ ಸ್ಟೋರಿ ಆಫ್ ಮೈ ಲೈಫ್’ ಕುರಿತು ಎತ್ತಿದ ಪ್ರಶ್ನೆಗಳ ಸಂದರ್ಭದಲ್ಲೂ ಹೀಗೆನ್ನಿಸಿತ್ತು. ಮೋಹನದಾಸ್ ಕರಮಚಂದ ಗಾಂಧಿ ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಪ್ರತಿ ವಾರ 'ನವಜೀವನ’ ಪತ್ರಿಕೆಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಆತ್ಮಚರಿತ್ರೆಯಲ್ಲಿ ಸರಳ ಹಾಗೂ ಸತ್ಯದ ಬರವಣಿಗೆಯ ಮಾದರಿಯನ್ನು ಸೃಷ್ಟಿಸಿದರು. ಯಾರಾದರೂ ಬರವಣಿಗೆ ಕಲಿಯಲು ಇದು ಒಳ್ಳೆಯ ಆರಂಭದ ಮಾಡೆಲ್ ಕೂಡ.

ಆದರೆ ಮುಂದೆ ನಯಪಾಲ್‌ಗೆ ಈ ಆತ್ಮಚರಿತ್ರೆಯಲ್ಲಿ ಒಂದು ಮುಖ್ಯ ದೋಷ ಕಂಡಿತು: ಎಷ್ಟೋ ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದ ಗಾಂಧಿ ಅಲ್ಲಿನ ಲ್ಯಾಂಡ್‌ಸ್ಕೇಪ್‌ಗಳ ಬಗ್ಗೆ ಒಂದು ಸಾಲನ್ನೂ ಬರೆದಿಲ್ಲ; ಅವರು ಅಷ್ಟೊಂದು ತಮ್ಮೊಳಗೇ ಹೂತು ಹೋಗಿದ್ದರು ಎಂಬರ್ಥದ ಮಾತುಗಳನ್ನು ನಯಪಾಲ್ ತಮ್ಮ ‘ಇಂಡಿಯಾ: ಎ ವೂಂಡೆಡ್ ಸಿವಿಲೈಸೇಶನ್’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ಓದಿದಾಗ, ‘ಅರೆ! ಮೋಹನದಾಸ ಕರಮಚಂದ ಗಾಂಧಿ ತನ್ನನ್ನು ತಾನು ಕಂಡುಕೊಳ್ಳಲು, ತಾನು ಯಾರು ಎಂಬುದನ್ನು ಹುಡುಕಿಕೊಳ್ಳಲು ಈ ಆತ್ಮಚರಿತ್ರೆ ಬರೆದಿದ್ದಾರೆ; ಆದರೆ ಅಂಥ ದೊಡ್ಡ ಲೇಖಕ ನಯಪಾಲ್‌ಗೆ- ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಈ ಕೆರಿಬಿಯನ್ ಲೇಖಕನಿಗೆ- ಕೂಡ ಆತ್ಮಚರಿತ್ರೆಯ ಬರವಣಿಗೆಯ ಸೂಕ್ಷ್ಮಗಳು ಹೊಳೆಯಲಿಲ್ಲವಲ್ಲ!’ ಎಂದು ಸೋಜಿಗವಾಯಿತು.  ತನ್ನ ವ್ಯಕ್ತಿತ್ವದ 'ಇನ್ ಸ್ಕೇಪ್' ಹುಡುಕುತ್ತಿದ್ದ ಲೇಖಕನಿಗೆ ಹೊರಗಿನ ಲ್ಯಾಂಡ್‌ಸ್ಕೇಪ್ ಅಷ್ಟು ಮುಖ್ಯ ಅನ್ನಿಸದಿದ್ದರೆ ಅದು ಸಹಜವೇ!

ಅದೇನೇ ಇರಲಿ, ಲೇಖಕ, ಲೇಖಕಿಯರು ಬರವಣಿಗೆಯ ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಮಾತಾಡಿದಾಗ ನಾನು ಕೊಡುವ ಸಲಹೆ: 'ಬರೇ ಪ್ರಾಕ್ಟೀಸಿಗಾದರೂ ಪರವಾಗಿಲ್ಲ; ನಿಮ್ಮ ಅನುಭವದ ವಿವರಗಳನ್ನೇ ಬರೆಯಲು ಪ್ರಯತ್ನಿಸಿ. ಅದನ್ನೆಲ್ಲ ಪ್ರಕಟಿಸದಿದ್ದರೂ ಪರವಾಯಿಲ್ಲ.’ ಯಾಕೆಂದರೆ, ಸ್ವಂತದ ಬಗ್ಗೆ ಬರೆಯತೊಡಗಿದಾಗ ನೆನಪುಗಳು ಉಕ್ಕಿ ಹರಿದು ಬಂದು- ಅಥವಾ ಕವಿ ವರ್ಡ್ಸ್‌ವರ್ತ್ ಹೇಳುವಂತೆ ’ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಆಗಿ- ನಮ್ಮ ಕೈ ಬರವಣಿಗೆಗೆ ಕುದುರಿಕೊಳ್ಳತೊಡಗುತ್ತದೆ.  ತುಂಬಾಡಿ ರಾಮಯ್ಯನವರು ಒಂದು ಕಾಲದಲ್ಲಿ ಇದ್ದಕ್ಕಿದ್ದಂತೆ ತಮ್ಮ ಅನುಭವದ ಬಗ್ಗೆ ಗೆಳೆಯರೊಡನೆ ಮಾತಾಡುತ್ತಲೇ ಬರವಣಿಗೆಗೆ ಕುದುರಿಕೊಂಡಿದ್ದು ಹೀಗೇ ಎಂಬುದನ್ನು ಗಮನಿಸಿದ್ದೇನೆ.  

ರಾಮಯ್ಯನವರ 'ಮಣೆಗಾರ’ ಆತ್ಮಕತೆಯ ಆರಂಭದ ಪ್ರಯತ್ನ, ಆವರೆಗೆ ’ಸಾಹಿತ್ಯ’ ಎನ್ನುವುದನ್ನು ಎಂದೂ ಬರೆಯದೇ ಇದ್ದ ಅಧಿಕಾರಿಯೊಬ್ಬ ಆತ್ಮಕತೆಯ ಮೂಲಕವೇ ಲೇಖಕನಾದ ಪರಿಯನ್ನೂ ಹೇಳುತ್ತದೆ. ಆತ್ಮಚರಿತ್ರೆ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಆದ್ದರಿಂದಲೇ ಬರೆಯಲು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹುಟ್ಟಬಹುದು ಎಂದು ನಾನು ಹೇಳಿದ್ದು. ಗೆಳೆಯರೊಬ್ಬರಿಗೆ ಮರೆವಿನ ಕಾಯಿಲೆ ಬಂದಾಗ ನಾನು ಅವರಿಗೆ ಕೊಟ್ಟ ಸಲಹೆ ಕೂಡ ಇದೇ. ಅವರು ಈ ನಿಟ್ಟಿನಲ್ಲಿ ಒಂಚೂರು ಪ್ರಯತ್ನ ಮಾಡಿದಾಗ ಅವರ ನೆನಪು ಅಷ್ಟಿಷ್ಟು ಮರಳಿ ಬಂದದ್ದೂ ಇದೆ. 

ಬರೆಯಲು ಆಗುತ್ತಿಲ್ಲ ಎಂದು ಚಡಪಡಿಸುವವರು ಸ್ವಂತದ ಬಗ್ಗೆ ಬರೆಯುವ ನಿಷ್ಠುರ ಸವಾಲನ್ನು ಕೈಗೆತ್ತಿಕೊಂಡರೆ ಬರವಣಿಗೆ ಕೇವಲ ಚಿಮ್ಮುವುದಷ್ಟೇ ಅಲ್ಲ, ಅದು ಪ್ರಾಮಾಣಿಕವಾಗಿಯೂ ಚಿಮ್ಮತ್ತಿದೆಯೋ ಎಂದು ಸ್ವ-ಪರೀಕ್ಷೆ ಮಾಡಿಕೊಳ್ಳುವ ಅವಕಾಶ ಕೂಡ ಸೃಷ್ಟಿಯಾಗಬಹುದು. ಬರವಣಿಗೆಯ ಸುಳ್ಳು, ನಿಜಗಳ ಪರೀಕ್ಷೆ ಅತ್ಯಂತ ಸವಾಲಿನದು. ಆದರೆ ಪ್ರಾಮಾಣಿಕವಾಗಿ ಒಂದು ಡೈರಿ ಬರೆದುಕೊಳ್ಳುವುದು, ಬರೆದಿಡುವುದು ಕೂಡ ಕಷ್ಟವಾಗಿರುವ ಸಮಾಜದಲ್ಲಿ ಇಂಥ ಬರವಣಿಗೆಯ ಕಷ್ಟಗಳು ಕೂಡ ಅಸಂಖ್ಯ. 

ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಕವಿ ಕೋಲರಿಜ್ ತಾನು ನಿತ್ಯ ಓದಿದ್ದನ್ನು, ಯೋಚಿಸಿದ್ದನ್ನು ಬರೆದಿಡುತ್ತಿದ್ದ ಜರ್ನಲ್ ನನ್ನ ಕಿಂಡಲ್ ಸಂಗ್ರಹದಲ್ಲಿದೆ. ಇಂಥ ಜರ್ನಲ್ ಬರವಣಿಗೆ ಪಶ್ಚಿಮದ ಲೇಖಕರಲ್ಲಿ ತೀರಾ ಸಾಮಾನ್ಯ. ಇದು ’ಸ್ವಂತ’ದ ಬರವಣಿಗೆಯಾದರೂ ತೀರಾ ಖಾಸಗಿ ಅಲ್ಲ. ಬರೆಯುವ ಅಸಲಿ ಚಡಪಡಿಕೆ ಉಳ್ಳವರು ಇಂಥ ಜರ್ನಲ್ಲುಗಳಲ್ಲಿ ತಾವು ಕಂಡ, ಓದಿದ, ಕೇಳಿದ,  ಎಲ್ಲದರ ಬಗೆಗೂ ತಮ್ಮ ಸ್ಪಂದನವನ್ನು ದಾಖಲಿಸುವುದು ಅವರವರ ಮಾತು, ಬರಹ, ಟೀಚಿಂಗ್, ಚರ್ಚೆ, ಪತ್ರಿಕೋದ್ಯಮ, ಭಾಷಣ ಹಾಗೂ ನಿರಂತರ ಬೌದ್ಧಿಕ ಬೆಳವಣಿಗೆ… ಎಲ್ಲದಕ್ಕೂ ನೆರವಾಗಬಲ್ಲದು. 

blog
01 Jun 2025 ಆಫ್ರಿಕಾದ ಗೂಗಿ: ಬರಹ ಮತ್ತು ಬಂಡಾಯ

ಪೂರ್ವ ಆಫ್ರಿಕಾದ ಖ್ಯಾತ ಲೇಖಕ ಗೂಗಿ ವಾ ಥಿಯಾಂಗೋ ತೀರಿಕೊಂಡ ಸುದ್ದಿಯನ್ನು ಗೆಳೆಯ ವಿಜಯಾನಂದ್ ಹೇಳಿದಾಗ ಮೂವತ್ತು ವರ್ಷಗಳ ಕೆಳಗೆ ಮೇಷ್ಟ್ರು ಬಾಬಯ್ಯನವರು ಕೊಟ್ಟ ಪಿಂಕ್ ಬಣ್ಣದ ಬೈಂಡಿನ ಜೆರಾಕ್ಸ್ ಪ್ರತಿ ಕಣ್ಣೆದುರು ಬಂತು. ಅದರೊಳಗೆ ಗೂಗಿಯ ’ಡಿಕಾಲನೈಸಿಂಗ್ ದ ಮೈಂಡ್’ ಎಂಬ ಥಿಯರಿಯ ಪುಸ್ತಕ, 'ಐ ವಿಲ್ ಮ್ಯಾರಿ ವೆನ್ ಐ ವಾಂಟ್' ನಾಟಕ ಎರಡೂ ಇದ್ದವು. 

ನಮ್ಮ ಉತ್ತರ ಕನ್ನಡದ ಕಡೆಯ ಸಿದ್ದಿಗಳ ಅಣ್ತಮ್ಮಗಳಂತೆ ಕಾಣುವ ಗೂಗಿಯ ನಿರ್ಗಮನದೊಂದಿಗೆ ಆಧುನಿಕ ಆಫ್ರಿಕನ್ ಸಾಹಿತ್ಯದ ಎರಡನೆಯ ತಲೆಮಾರಿನ ಮುಖ್ಯ ಕೊಂಡಿಯೊಂದು ಕಳಚಿಕೊಂಡಿತು. ೧೯೩೮ರಲ್ಲಿ ಬ್ರಿಟಿಷ್ ಆಡಳಿತದ ಕೀನ್ಯಾದಲ್ಲಿ ಹುಟ್ಟಿದ ಜೇಮ್ಸ್ ಗೂಗಿ (೫ ಜನವರಿ ೧೯೩೮- ೨೮ ಮೇ ೨೦೨೫) ತಾರುಣ್ಯದಲ್ಲಿ ತನ್ನ ಮೊದಲ ಕಾದಂಬರಿ ’ವೀಪ್ ನಾಟ್, ಚೈಲ್ಡ್’ ಬರೆದು, ಅಷ್ಟೊತ್ತಿಗಾಗಲೇ ಖ್ಯಾತನಾಗಿದ್ದ ಆಫ್ರಿಕನ್ ಲೇಖಕ ಚಿನುವ ಅಚೀಬೆಗೆ ಕಳಿಸಿದ. ಅಚೀಬೆ ಅದನ್ನು ಪ್ರಕಾಶಕರಿಗೆ ಕಳಿಸಿಕೊಟ್ಟ. ಗೂಗಿಯ ಮೊದಲ ಕಾದಂಬರಿಯೇ ಆಫ್ರಿಕನ್ ಕಾದಂಬರಿ ಲೋಕದಲ್ಲಿ ಅವನಿಗೆ ಮಹತ್ವದ ಸ್ಥಾನ ದಕ್ಕಿಸಿತು.

ಎಪ್ಪತ್ತರ ದಶಕದಲ್ಲಿ ಜೇಮ್ಸ್ ಗೂಗಿ ತನ್ನ ಹೆಸರಿನಲ್ಲಿದ್ದ ಜೇಮ್ಸ್ ಎಂಬ ಕ್ರಿಶ್ಚಿಯನ್ ಭಾಗವನ್ನು ಕೈಬಿಟ್ಟು, ಗೂಗಿ ವಾ ಥಿಯಾಂಗೋ ಎಂಬ ಆಫ್ರಿಕನ್ ಹೆಸರಿಟ್ಟುಕೊಂಡ. ಇಂಗ್ಲಿಷಿನಲ್ಲಿ ಬರೆಯುವುದನ್ನು ಬಿಟ್ಟು ತನ್ನ ಬುಡಕಟ್ಟಿನ ಗಿಕುಯು ಭಾಷೆಯಲ್ಲಿ ಬರೆಯಲು ತೀರ್ಮಾನಿಸಿದ. ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಗೂಗಿ ’ಹೋಮ್ ಕಮಿಂಗ್ ಅಂಡ್ ಅದರ್‍ ಎಸ್ಸೇಸ್’ ಎಂಬ ಪುಸ್ತಕ ಪ್ರಕಟಿಸಿದ. ’ಡಿಕಾಲನೈಸಿಂಗ್ ದ ಮೈಂಡ್’ ಪುಸ್ತಕ ಬರೆದು, ಆಫ್ರಿಕಾದ ಬೇರುಗಳಿಗೆ ಮರಳಲೆತ್ನಿಸಿದ. ಇವೆಲ್ಲ ಆಫ್ರಿಕನ್ ಪ್ರಜ್ಞೆಯ ನಿರ್ವಸಾಹತೀಕರಣದ ಪ್ರಯತ್ನಗಳಾಗಿದ್ದವು.  

ಆ ಸರಿಸುಮಾರಿನಲ್ಲಿ ಕೀನ್ಯಾದ ಜೊಮೊ ಕೆನ್ಯಾಟ್ಟನ ಭ್ರಷ್ಟ ಸರ್ಕಾರ ನೇರ ನಡೆನುಡಿಯ ಗೂಗಿಯನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಟ್ಟಿತು. ಗೂಗಿಯ ಸ್ವಂತ ತಮ್ಮ ಪೊಲೀಸರ ಗುಂಡಿಗೆ ಬಲಿಯಾದ ಸನ್ನಿವೇಶ ಭೀಕರವಾಗಿತ್ತು. ಮಾವೋವಾದಿ ಮಾದರಿಯ ’ಮಾವುಮಾವು’ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಕೊಲ್ಲತೊಡಗಿದ್ದರು. ಒಂದು ಸಂದರ್ಭದಲ್ಲಿ ಪೊಲೀಸರು ಶೂಟೌಟ್ ಮಾಡುವ ಮುನ್ನ ಹೋರಾಟಗಾರರಿಗೆ ಚದುರುವಂತೆ ಎಚ್ಚರಿಕೆ ಕೊಟ್ಟರು. ಆದರೆ ಕಿವಿ ಕೇಳಿಸದಿದ್ದ ಗೂಗಿಯ ತಮ್ಮ ನಿಂತಲ್ಲಿಂದ ಕದಲದೆ ಗುಂಡಿಗೆ ಬಲಿಯಾದ. 

ಸೆರೆಮನೆಯಲ್ಲೂ ಗೂಗಿಯ ಲೇಖಕ ಚೈತನ್ಯ ಉಡುಗಿರಲಿಲ್ಲ. ಜೈಲಿನ ಟಾಯ್ಲೆಟ್ ಪೇಪರಿನ ಮೇಲೆ ಇಂಗ್ಲಿಷ್ ಲಿಪಿ ಬಳಸಿ, ಗಿಕುಯು ಭಾಷೆಯಲ್ಲಿ ಬರೆಯತೊಡಗಿದ. ಅದು ‘ಕೈತಾನಿ ಮುತರಾಬಾಇನಿ’ ಎಂಬ ಕಾದಂಬರಿಯಾಯಿತು. ಕಾದಂಬರಿ ಪ್ರಕಾರವನ್ನು  ಆಫ್ರಿಕೀಕರಣಗೊಳಿಸತೊಡಗಿದ್ದ ಗೂಗಿ ಆಫ್ರಿಕದ ಜನಪದರು ಕತೆ ಹೇಳುವ ರೀತಿ ಬಳಸಿ ಕಾದಂಬರಿ ಬರೆಯಹೊರಟಿದ್ದ. ನಾವು ಕತೆ ಹೇಳುವ ಕ್ರಮಕ್ಕೂ ನಮ್ಮ ತಾಯ್ನುಡಿಯ ಓಟಕ್ಕೂ ಬೆಸುಗೆಯರಿಯದ ಸಂಬಂಧವಿರುತ್ತದಲ್ಲವೆ? ಗೂಗಿ ಗಿಕುಯುನಲ್ಲಿ ಕಾದಂಬರಿ ಬರೆಯುವ ಮೂಲಕ ಹದಿನೆಂಟನೆಯ ಶತಮಾನದಿಂದಲೂ ಜಗತ್ತಿಗೆ ಪರಿಚಿತವಿದ್ದ ’ಓದು ಕಾದಂಬರಿ’ಯ ಬದಲಿಗೆ ’ಕೇಳು ಕಾದಂಬರಿ’ ಬರೆದ. ಪಬ್‌‌ಗಳಲ್ಲಿ ಆಫ್ರಿಕನ್ ತರುಣ, ತರುಣಿಯರು ಅವನ ಕಾದಂಬರಿಗಳನ್ನು ಓದಿ ಹೇಳತೊಡಗಿದರು. 

ಹಿಂದೊಮ್ಮೆ ಗೆಳೆಯ ಕೇಶವ ಮಳಗಿಯವರ ಜೊತೆಗೂಡಿ ನಾನು ಕುವೆಂಪು ಭಾಷಾಭಾರತಿಗಾಗಿ ಸಂಪಾದಿಸಿದ ’ಲೋಕ ಸಾಹಿತ್ಯ ಮಾಲಿಕೆ’ಗೆ ಮಿತ್ರ ಬಂಜಗೆರೆ ಜಯಪ್ರಕಾಶ್ ’ಕೈತಾನಿ ಮುತರಾ ಬಾಇನಿ’ಯ ಇಂಗ್ಲಿಷ್ ರೂಪವಾದ ’ಡೆವಿಲ್ ಆನ್ ದ ಕ್ರಾಸ್’ ಕಾದಂಬರಿಯನ್ನು ಅನುವಾದಿಸಿದರು. ಗೂಗಿ ಈ ಕಾದಂಬರಿ ಬರೆದ ದಿನಗಳನ್ನು ಬಂಜಗೆರೆ ತಮ್ಮ ಮುನ್ನುಡಿಯಲ್ಲಿ ನೆನೆಯುತ್ತಾರೆ: 

‘೧೯೭೭ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಕಾದಂಬರಿಯನ್ನು ೧೯೭೮ರ ಸೆಪ್ಟೆಂಬರ್‌ವರೆಗೆ ಟಾಯ್ಲೆಟ್ ಪೇಪರ್ ಮೇಲೆ ಬರೆಯುತ್ತಿದ್ದ ಗೂಗಿಗೆ ಈ ಕಾದಂಬರಿ ಪೂರ್ಣಗೊಳಿಸಿದರೆ ತನ್ನ ಬಿಡುಗಡೆಯಾಗುತ್ತದೆಂಬ ಹುಚ್ಚು ನಂಬಿಕೆ ಹುಟ್ಟಿತ್ತು. ಕೆನ್ಯಾದ ಅಧ್ಯಕ್ಷ ಜೋಮೋ ಕೆನ್ಯಾಟ್ಟ ತೀರಿಕೊಂಡಾಗ ಜೈಲಿನಲ್ಲಿದ್ದ ಎಲ್ಲರಿಗೂ ತಾವು ಬಿಡುಗಡೆಯಾಗುತ್ತೇವೆಂಬ ಆಶಾವಾದ ಹುಟ್ಟಿತು. 

ಸೆಪ್ಟೆಂಬರ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಈ ಸೆರೆಮನೆವಾಸಿಗಳ ಸೆಲ್‌ಗಳಲ್ಲಿ ‘ಸರ್ಚ್’ ನಡೆಸುತ್ತಿದ್ದ ಸಾರ್ಜೆಂಟ್, ಅಲ್ಲಿ ರಾಶಿ ಬಿದ್ದಿದ್ದ ಟಾಯ್ಲೆಟ್ ಪೇಪರ್‌ಗಳನ್ನು ನೋಡಿ ಅದರ ಮೇಲೆ ಮುಗಿಬಿದ್ದ. ಗೆದ್ದವನಂತೆ ಅಧಿಕಾರಿಯೆಡೆಗೆ ತಿರುಗಿ ಕೂಗಿಕೊಂಡ: ‘ನೋಡಿ ಸಾರ್! ಇವನು ಟಾಯ್ಲೆಟ್ ಪೇಪರ್ ಮೇಲೆ ಪುಸ್ತಕ ಬರೆದಿದಾನೆ!’

‘ವಶಪಡಿಸಿಕೋ!’ ಎಂದ ಅಧಿಕಾರಿ. `ಇದೆಲ್ಲಾ ಪೂರ್ತಿ ಅದೇನಾ? ಜೈಲ್ನಲ್ಲಿ ಪುಸ್ತಕ ಬರಿ ಅಂತ ಯಾರು ನಿನಗೆ ಹೇಳಿದ್ದು?’ ಎಂದು ಅಧಿಕಾರಿ ಕೂಗಿದ. ಈತನಿಗಿಂತ ಮೊದಲು ಅಲ್ಲಿದ್ದ ಒಬ್ಬ ಕ್ರೂರಿ ಜೈಲು

ಸೂಪರಿಂಟೆಂಡೆಂಟ್, ’ಜೈಲಿನಲ್ಲಿ ಕವಿತೆ ಬರೆಯಬೇಡ, ನನ್ನ ಅನುಮತಿಯಿಲ್ಲದೆ ಏನನ್ನೂ ಬರೆಯಬೇಡ’ ಎಂದು ಮೊದಲೇ ಗೂಗಿಯನ್ನು ಎಚ್ಚರಿಸಿದ್ದ. ‘ಬರೆದೇ ಬರೆಯುತ್ತೇನೆ’ ಎಂದು ಗೂಗಿ ಅವತ್ತೇ ತೀರ್ಮಾನಿಸಿದ!

ಆದರೆ ಟಾಯ್ಲೆಟ್ ಪೇಪರ್ ಮೇಲೆ ಗೂಗಿ ಶ್ರಮಪಟ್ಟು ಬರೆದ ಕಾದಂಬರಿ ಅಧಿಕಾರಿಗಳ ದುರಾಕ್ರಮಣಕ್ಕೆ ಗುರಿಯಾಗಿತ್ತು. ಜೈಲಿಗೆ ಬಂದು ಹೋಗುತ್ತಿದ್ದ ಕ್ರೈಸ್ತ ಧರ್ಮಗುರು ಕೊಟ್ಟಿದ್ದ ಬೈಬಲ್‌ನ ಖಾಲಿ ಹಾಳೆಗಳಲ್ಲಿ ಬರೆದಿದ್ದ ಎರಡು ಅಧ್ಯಾಯಗಳು ಮಾತ್ರ ಅವರ ದೃಷ್ಟಿಗೆ ಬೀಳಲಿಲ್ಲ; ಹೀಗಾಗಿ ಅವು ಉಳಿದುಕೊಂಡಿದ್ದವು. ಈ ಕಾದಂಬರಿ ಬರೆಯುವಾಗ ಗೂಗಿ ಭಾಷೆ, ಸಂಕೇತಗಳ ಜೊತೆ ಸೆಣಸಾಡಿದ್ದ. ಜೈಲಿನ ಕಹಿ ನೆನಪುಗಳು, ನಿರಾಶೆಯ ಕ್ಷಣಗಳು, ಸೆರೆಮನೆವಾಸದಲ್ಲಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಅನಿವಾರ್ಯವಾಗಿ ಅನುಭವಿಸಬೇಕಾದ ಪ್ರತಿಕೂಲ ಪರಿಸ್ಥಿತಿ… ಇವೆಲ್ಲವುಗಳೊಂದಿಗೆ ಹೋರಾಡಿದ್ದ. ಈಗ ಅದೆಲ್ಲ ವ್ಯರ್ಥವಾಯಿತು. 

ಹೀಗೇ ಮೂರು ವಾರಗಳು ಕಳೆದವು. ಗೂಗಿ ರಕ್ತ ಬಸಿದುಹೋಗಿ ನಿಸ್ಸಾರಗೊಂಡ ಮನುಷ್ಯನಂತಾಗಿಬಿಟ್ಟಿದ್ದ. ಆದರೂ ಕಾದಂಬರಿಯನ್ನು ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ. ಈ ಸಲ ಚೆಖಾಫ್, ಗಾರ್ಕಿ, ಥಾಮಸ್‌ಮನ್ ಮೊದಲಾದವರ ಕಾದಂಬರಿಗಳ ನಡುವೆ, ಬೈಬಲ್ಲಿನ ಪಂಕ್ತಿಗಳ ನಡುವೆ, ಕಾದಂಬರಿಯನ್ನು ಮತ್ತೆ ಬರೆಯಬೇಕೆಂದುಕೊಂಡ. ಧರ್ಮದಲ್ಲಿ ಹೊಸದಾಗಿ ಭಕ್ತಿ ಹುಟ್ಟಿದವನಂತೆ ಧರ್ಮಗುರುವಿನಿಂದ ಬೇರೆ ಬೇರೆ ಗಾತ್ರಗಳ ಮೂರ‍್ನಾಲ್ಕು ಬೈಬಲ್ ಪ್ರತಿಗಳನ್ನು ಕೇಳಿ ತರಿಸಿಕೊಂಡು, ಅದರಲ್ಲಿ ಬರೆಯಬೇಕೆಂದುಕೊಂಡ. ಕಾದಂಬರಿಯನ್ನು ನಾನು ಪೂರ್ತಿಯಾಗಿ ಕಳೆದುಕೊಂಡಿಲ್ಲ, ಸೋಲೊಪ್ಪಿಕೊಳ್ಳಬಾರದು ಎಂದುಕೊಂಡ.

ಮತ್ತೆ ಕಥಾಹಂದರವನ್ನು, ಕತೆಯ ಘಟ್ಟಗಳನ್ನು ನೆನಪು ಮಾಡಿಕೊಂಡು ಚೆಕಾಫನ ಕಥಾಸಂಪುಟದೊಳಗೆ ಬರೆಯತೊಡಗಿದ. ಆಗ ಹೊಸ ಪೊಲೀಸ್ ಅಧಿಕಾರಿ ಬಂದಿದ್ದ. ಆತ ಇದನ್ನೆಲ್ಲ ಓದಿ ಗೂಗಿಗೆ ವಾಪಸ್ ಕೊಡುತ್ತಾ, ’ಇದರಲ್ಲಿ ನನಗೆ ತಪ್ಪೇನೂ ಕಾಣಿಸುತ್ತಿಲ್ಲ. ಆದರೆ ನೀವು ಬಹಳ ಕ್ಲಿಷ್ಟವಾದ ಗಿಕುಯುನಲ್ಲಿ ಬರೆಯುತ್ತೀರಿ’ ಅಂದ.

‘ಥ್ಯಾಂಕ್ಯೂ’ ಅಂದ ಗೂಗಿ.

‘ನೀವು ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿರಲಿಲ್ಲ. ಬಿಳಿ ಹಾಳೆಗಳನ್ನು ಕೊಡಲು ಚೀಫ್ ವಾರ್ಡರ್‍‌ಗೆ ಹೇಳುತ್ತೇನೆ. ನನ್ನ ಆಫೀಸಿನಲ್ಲಿ ಬೇಕಾದಷ್ಟಿದೆ. ಟಾಯ್ಲೆಟ್ ಪೇಪರ್ ಮೇಲಿರುವುದೆಲ್ಲವನ್ನೂ ಕಾಗದದ ಮೇಲೆ ಬರೆಯಿರಿ’ ಎಂದ.

ಗೂಗಿ ಬರೆಯುತ್ತಾನೆ: ’ರಾತ್ರಿ ಮಾತ್ರವಲ್ಲದೆ, ಹಗಲು ಕೂಡ ಬರೆಯಲಾರಂಭಿಸಿದೆ. ಜೊತೆಗೆ, ಈ ಕಾದಂಬರಿಯ ಮುಕ್ತಾಯದೊಂದಿಗೆ ನನ್ನ ಬಿಡುಗಡೆಯ ಗಡುವು ಬೇರೆ ಮನಸ್ಸಿನಲ್ಲಿ ಗಂಟು ಹಾಕಿಕೊಂಡಿದೆ. ಚೀಫ್ ವಾರ್ಡರ್ ಕೊಟ್ಟ ಕಾಗದ ಸಾಕಾಗಲಿಲ್ಲ. ಜೊತೆಯ ಜೈಲುವಾಸಿಗಳು ಕೂಡ ತಮ್ಮ ಹಾಳೆಗಳನ್ನು ಕೊಟ್ಟರು. ಬಹಳ ಜನ ತಾವು ಉಳಿಸಿಟ್ಟುಕೊಂಡಿದ್ದ ಎಲ್ಲ ಪೇಪರನ್ನೂ ಕೊಟ್ಟರು.’

ಡಿಸೆಂಬರ್ ೧೨, ೧೯೭೮ರ ರಾತ್ರಿ. ಕಾದಂಬರಿ ಪೂರ್ಣಗೊಳ್ಳುವುದರಲ್ಲಿತ್ತು... ಗೂಗಿಯ ಕಲ್ಪನೆಯ ಸಮಕ್ಕೆ ಓಡಲು ಅವನ ಕೈಗಳಿಗೆ ಕಷ್ಟವಾಗುತ್ತಿದೆ. ದೂರದಿಂದ ತನ್ನನ್ನು ಯಾರೋ ನೋಡುತ್ತಿದ್ದಾರೆ. ಕಾಗದ ಸಾಕಾಗದೆ ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿ ಬಂದಿದೆ. ಗೂಗಿ ತಲೆಯೆತ್ತಿ ನೋಡಿದ: ಸೂಪರಿಂಟೆಂಡೆಂಟ್ ಆಫ್ ಪೊಲೀಸನ ಕಣ್ಣೋಟ ಗೂಗಿಯ ನೋಟದೊಡನೆ ಬೆರೆಯಿತು.

`ಗೂಗಿ, ನೀವಿನ್ನು ಸ್ವತಂತ್ರ ಜೀವಿ’ಎಂದ ಎಸ್.ಪಿ.

ಗೂಗಿಗೆ ಕೊಟ್ಟಿದ್ದ ೬.೭೭ ಎಂಬ ನಂಬರಿಗೆ ಬದಲಾಗಿ ಮತ್ತೆ ಗೂಗಿ ಥಿಯಾಂಗೋ ಎಂಬ ಹೆಸರು ವಾಪಸ್ ಬಂತು.’

ಇವೆಲ್ಲವನ್ನೂ ತಮ್ಮ ಮುನ್ನುಡಿಯಲ್ಲಿ ದಾಖಲಿಸಿರುವ ಬಂಜಗೆರೆ, ಗೂಗಿಯ ಕಾದಂಬರಿಯನ್ನು ಇಷ್ಟಪಟ್ಟು ಅನುವಾದಿಸಿದ್ದಾರೆ; ಬಂಜಗೆರೆಯವರ ತಾತ್ವಿಕತೆಗೂ ಈ ಕೃತಿ ಹತ್ತಿರವಾಗಿತ್ತು.

ಮಾರ್ಕ್ಸಿಸ್ಟ್ ಗೂಗಿ ಈ ಕಾದಂಬರಿಯಲ್ಲಿ ಆಫ್ರಿಕದ ನೆಲದಲ್ಲೇ ಅರಳಿದ ವಿಶಿಷ್ಟ ಕಮ್ಯುನಿಸ್ಟ್ ಮಾರ್ಗದ ಹೋರಾಟದ ಸಾಧ್ಯತೆಯನ್ನು ಶೋಧಿಸಿದ್ದ. ಜೈಲಿನಿಂದ ಬಿಡುಗಡೆಯಾದ ಗೂಗಿಯ ನಿಷ್ಠುರ ಹೋರಾಟಗಾರ-ಬುದ್ಧಿಜೀವಿ ವ್ಯಕ್ತಿತ್ವವನ್ನು ಮುಂದಿನ ಕೀನ್ಯಾ ಸರ್ಕಾರಗಳೂ ಸಹಿಸಿಕೊಳ್ಳಲಿಲ್ಲ. ಬಂಧನ-ಬಿಡುಗಡೆಗಳ ಚಕ್ರದಲ್ಲಿ ನರಳಿದ ಗೂಗಿ ಬರೆಯುತ್ತಲೇ ಹೋದ. ಒಮ್ಮೆ ವಿದೇಶದಿಂದ ವಾಪಸ್ ಬಂದ ಗೂಗಿಯ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ಮಾಡಿತು. ಗೂಗಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಲಾಯಿತು. ಇದೆಲ್ಲ ತನ್ನ ಚೈತನ್ಯವನ್ನು ಉಡುಗಿಸುವ ರಾಜಕೀಯ ಸಂಚು ಎಂಬುದು ಗೂಗಿಗೆ ಖಾತ್ರಿಯಾಗಿತ್ತು. 

‘ವಿಝರ್ಡ್ ಆಫ್ ದ ಕ್ರೋ’ (ಕಾಗೆ ಮಂತ್ರವಾದಿ) ಥರದ ಕ್ರಾಂತಿಕಾರಿ ಕಾದಂಬರಿ ಬರೆದ ಗೂಗಿ ಅದರಲ್ಲಿ ಕೂಡ ಆಫ್ರಿಕದ ನೆಲದಲ್ಲಿದ್ದ ಹೋರಾಟದ ಮಾದರಿಗಳನ್ನು ಕಮ್ಯುನಿಸ್ಟ್ ನೆಲೆಯಲ್ಲಿ ಮರುಸೃಷ್ಟಿಸಲೆತ್ನಿಸಿದ. ಕೀನ್ಯಾದ ದೇಶಿ ಸಂಸ್ಕೃತಿಯ ಕಾಮಿರುತು ರಂಗಭೂಮಿಯನ್ನು ಮರು ಸೃಷ್ಟಿಸಿ, ಆಫ್ರಿಕನ್ ಲಯಕ್ಕೆ ಹತ್ತಿರವಿರುವ ’ಐ ವಿಲ್ ಮ್ಯಾರಿ ವೆನ್ ಐ ವಾಂಟ್’ ನಾಟಕ ಬರೆದ. ಆದರೆ ಆಫ್ರಿಕನ್ ಬೇರುಗಳಿಗೆ ಸದಾ ಮರಳುತ್ತಿದ್ದ ಗೂಗಿ ಆಫ್ರಿಕದ ದೇಶಿ ಸರ್ಕಾರಗಳ ಕಾಟ ತಾಳಲಾರದೆ ಕೊನೆಗೆ ನೈಜೀರಿಯಾದ ಪ್ರಸಿದ್ಧ ಲೇಖಕ ವೋಲೆ ಶೋಯಿಂಕಾನಂತೆ ಅಮೆರಿಕದಲ್ಲಿ ನೆಲೆಸಿದ. ಗೂಗಿಯ ಮಗಳು, ಮಗ ಕೂಡ ಬರವಣಿಗೆಗೆ ತೊಡಗಿದ್ದರು. ‘ಮನೆಯಲ್ಲೇ ಭಾಳಾ ಕಾಂಪಿಟೀಶನ್ ಇದೆ’ ಎಂದು ನಗುತ್ತಿದ್ದ ಗೂಗಿ, ತನ್ನ ೮೮ನೆಯ ವಯಸ್ಸಿನಲ್ಲಿ ತೀರಿಕೊಂಡ.

ವಸಾಹತು ಆಡಳಿತ ಕಾಲದ ದಾಸ್ಯ, ಹೋರಾಟಗಳನ್ನು ಕಂಡಿದ್ದ ಗೂಗಿ, ವಸಾಹತೋತ್ತರ ಕಾಲದ ಆಫ್ರಿಕನ್ ಆಡಳಿತದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ಸಂಕಷ್ಟಕ್ಕೊಳಗಾದ. ಆದರೆ ಹಿಮ್ಮೆಟ್ಟದ ಗೂಗಿ ಇತರ ಆಫ್ರಿಕನ್ ಲೇಖಕರಂತೆ ಲಕ್ಷಾಂತರ ಆಫ್ರಿಕನ್ನರ ಹೊಸ ಪ್ರಜ್ಞೆಯನ್ನು ರೂಪಿಸಿದ. ಗೂಗಿಯ ’ಮಾನಸಿಕ ನಿರ್ವಸಾಹತೀಕರಣ’ದ ಥಿಯರಿ ಆಫ್ರಿಕಾದಾಚೆಗೆ ಭಾರತದಂಥ ದೇಶಗಳಿಗೂ ಕೈಪಿಡಿಯಂತಿದೆ. ಅದನ್ನು ಗೆಳೆಯ ರಹಮತ್ ತರೀಕೆರೆ ಕನ್ನಡದಲ್ಲೂ ನಿರೂಪಿಸಿದ್ದಾರೆ. 

ಇಂಡಿಯಾದ ದ್ರಾವಿಡ ಲೇಖಕರಂತೆಯೇ ಇರುವ, ಬರೆಯುವ ಗೂಗಿ, ಅಚೀಬೆ, ಶೋಯಿಂಕಾ ಥರದ ಲೇಖಕರನ್ನು ಎಷ್ಟೋ ವರ್ಷಗಳಿಂದ ಓದುತ್ತಿರುವ ನನಗೆ ಅವರು ಕನ್ನಡ ಲೇಖಕಿ, ಲೇಖಕರಂತೇ ಆತ್ಮೀಯರು. ಶೋಯಿಂಕಾಗೆ ಬಂದ ನೊಬೆಲ್ ಪ್ರಶಸ್ತಿ ಅಚೀಬೆಗೆ ಬರದಿದ್ದುದನ್ನು ನೋಡಿ ನೊಬೆಲ್ ಮಾನದಂಡಗಳ ಬಗೆಗೇ ಅನುಮಾನ ಹುಟ್ಟುತ್ತದೆ. ಗೂಗಿಗೂ ನೊಬೆಲ್ ಬರಬೇಕಿತ್ತು ಎನ್ನುವವವರಿದ್ದಾರೆ. ಆದರೆ ಗೂಗಿಯ ಕಾದಂಬರಿಗಳಲ್ಲಿ ಕೊಂಚ ಅತಿಯಾಗಿ ಎದ್ದು ಕಾಣುವ ತಾತ್ವಿಕತೆ ಅವನ ಕಾದಂಬರಿ ಕಲೆಗೆ ಅಲ್ಲಲ್ಲಿ ತೊಡಕಾಯಿತು ಎನ್ನಿಸುತ್ತದೆ. 

ಅದೇನೇ ಇರಲಿ, ಈಚಿನ ದಶಕಗಳಲ್ಲಿ ಇಂಗ್ಲಿಷ್ ಲಿಪಿ ಬಳಸಿ ಗಿಕುಯು ಭಾಷೆಯಲ್ಲಿ ಬರೆದರೂ, ತನ್ನ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಲೋಕದ ತುಂಬ ಹಬ್ಬಿದ ಗೂಗಿ ವಾ ಥಿಯಾಂಗೋ ಬದುಕು-ಬರಹಗಳು ಚಿಂತನೆ-ಬರವಣಿಗೆಗಳಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು. 
 

blog
25 May 2025 ರಾಗ-ಹಾಡು; ಕವಿತೆ-ಅರ್ಥ

 ಸದಾ ಓದು, ಬರಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಳುಗಿರುವ ಲೇಖಕ ಮಿತ್ರರೊಬ್ಬರಿಗೆ ಒಂದು ತಿಂಗಳ ಕಾಲ ಪುಸ್ತಕಗಳ ಲೋಕದಿಂದ ದೂರವಿರುವ ಶಿಕ್ಷೆ ಈಚೆಗೆ ಎದುರಾಯಿತು. ಕೆಲವು ವಾರದ ನಂತರ ಕಣ್ಣಿನ ಪೊರೆಯ ಆಪರೇಶನ್ ಮಾಡಿಸಿಕೊಳ್ಳಲಿರುವ ಅವರಿಗೆ ಇದು ಡಾಕ್ಟರ ಕಟ್ಟಪ್ಪಣೆ. ಆಪರೇಶನ್ ನಂತರವೂ ಕೆಲ ಕಾಲ ಈ ಸ್ಥಿತಿ ಮುಂದುವರಿಯಲಿದೆ.

ನನ್ನ ಪ್ರಾಜೆಕ್ಟೊಂದಕ್ಕೆ ಲೇಖನಗಳನ್ನು ಅನುವಾದ ಮಾಡಬೇಕಾಗಿದ್ದ ಗೆಳೆಯರು ತಮಗೆದುರಾದ ಈ ಅನಿರೀಕ್ಷಿತ ಸ್ಥಿತಿಯಲ್ಲಿ ಡಾಕ್ಟರ ಆದೇಶವನ್ನೂ ಪಾಲಿಸಿದರು; ನನಗೆ ಕೊಟ್ಟ ಮಾತನ್ನೂ ಪಾಲಿಸಿದರು! ತಾವು ಬಲ್ಲ ಇಬ್ಬರು ಹೊಸ ಅನುವಾದಕಿಯರಿಂದ ನನ್ನ ಪ್ರಾಜೆಕ್ಟಿನ ಕೆಲಸ ಮಾಡಿಸಿಕೊಟ್ಟರು. ಅವರು ತಮ್ಮ ಕರ್ತವ್ಯ ನಿರ್ವಹಿಸಿದ ರೀತಿ ಅನೇಕ ಹೊಸಬರಿಗೆ ಮಾದರಿಯಂತಿತ್ತು. 

ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ‘ನಿಮಗೆ ಪ್ರಿಯವಾದ ಓದು ಬರಹ ಮಾಡಲಾಗದ ಈ ದಿನಗಳಲ್ಲಿ ಕಾಲ ಹೇಗೆ ಉರುಳುತ್ತಿದೆ?’ ಎಂದೆ.

‘ನನಗೆ ಇಷ್ಟವಾದ ಹಳೆಯ ಹಿಂದಿ, ಕನ್ನಡ ಹಾಡುಗಳನ್ನು, ಅದರಲ್ಲೂ ರಾಗಾಧಾರಿತ ಹಾಡುಗಳನ್ನು ಕೇಳುವುದು; ಕೆಲವೊಮ್ಮೆ ಹಿಂದೂಸ್ತಾನಿ ಮ್ಯೂಸಿಕ್ ಕೇಳುವುದು...’ ಎಂದರು ಅವರು.

ಬಡಪೆಟ್ಟಿಗೆ ಬಗ್ಗದ ಹ್ಯೂಮನ್ ಸ್ಪಿರಿಟ್‌ಗೆ ಇದೂ ಒಂದು ಉದಾಹರಣೆ!  

ಅವರ ಮಾತು ಕೇಳಿದ ಮೇಲೆ ನನ್ನ ಪ್ರಿಯ ರಾಗಾಧಾರಿತ ಹಾಡುಗಳು ನೆನಪಾದವು. ಬಾಲ್ಯದಲ್ಲಿ ಅವುಗಳನ್ನು ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತಿದ್ದಾಗ ಅವು ಯಾಕೆ ಅಷ್ಟೊಂದು ಪ್ರಿಯವಾಗಿದ್ದವು ಎಂಬುದು ನನಗೆ ಗೊತ್ತಿರಲಿಲ್ಲ. ಸ್ಕೂಲಿನಲ್ಲಿ ಅಷ್ಟಿಷ್ಟು ಕರ್ನಾಟಿಕ್ ಸಂಗೀತದ ಪಾಠ ಕಲಿತಿದ್ದರ ಪ್ರಭಾವ ಕೂಡ ಈ ಹಾಡುಗಳು ಪ್ರಿಯವಾಗಲು ಕಾರಣವಾಗಿರಬಹುದು. 

ಮುಂದೊಮ್ಮೆ ಜಯಂತಕುಮಾರ ದಾಸ್ ಅವರಿಂದ ಸಿತಾರ್ ಕಲಿಯಲೆತ್ನಿಸುತ್ತಾ ಹಿಂದೂಸ್ತಾನಿ ಸಂಗೀತವನ್ನು ಅರಿಯಲೆತ್ನಿಸಿದಾಗ ಯಾವ ಕನ್ನಡ ಹಾಡುಗಳು ಯಾವ ಯಾವ ರಾಗಗಳನ್ನು ಆಧರಿಸಿ ಮೈದಾಳಿವೆ ಎಂದು ಹುಡುಕುವುದು ನನ್ನ ಪ್ರಿಯ ಅಭ್ಯಾಸವಾಯಿತು. ಒಂದು ಮಧ್ಯಾಹ್ನ ಮೇಷ್ಟ್ರು ಹಿಂದೂಸ್ತಾನಿ ಮಾರ್ಗದ ‘ದುರ್ಗಾ’ ರಾಗ  ಕಲಿಸುತ್ತಿದ್ದಾಗ ಅದು ನನಗೆ ಪರಿಚಿತ ರಾಗ ಎನ್ನಿಸತೊಡಗಿತು. ಅದಕ್ಕೆ ಕಾರಣ ನಾನು ಗುನುಗಿಕೊಳ್ಳುತ್ತಿದ್ದ ಕನ್ನಡ ಹಾಡುಗಳು ಎಂಬುದು ನಂತರ ತಿಳಿಯಿತು! ಪಿ.ಬಿ. ಶ್ರೀನಿವಾಸ್ ಹಾಡಿರುವ 'ಗುಮ್ಮನ ಕರೆಯದಿರೇ' ಹಾಗೂ ರಾಜ್ ಕುಮಾರ್ ಹಾಡಿರುವ 'ಇದೇ ರಾಗದಲ್ಲಿ, ಇದೇ ತಾಳದಲ್ಲಿ' ಈ ಹಾಡುಗಳು ನನ್ನೊಳಗೆ ಸುತ್ತುತ್ತಿದ್ದುದು ಕೂಡ 'ದುರ್ಗಾ' ರಾಗ ನನಗೆ ಚಿರಪರಿಚಿತ ಎನ್ನಿಸಲು ಕಾರಣವಾಗಿತ್ತು. 

ಈ ಸಂಗೀತ ತರಬೇತಿಯ ಫಲ: ಕೆಲವು ರಾಗಗಳನ್ನು ಕೆಲವು ನಿರ್ದಿಷ್ಟ ಮೂಡುಗಳಿಗೆ ಕಟ್ಟಿ ಹಾಕುವ ಕೆಲವು ಸಂಗೀತ ನಿರ್ದೇಶಕರ ಸೀಮಿತತೆ ಕೂಡ ಅರ್ಥವಾಗತೊಡಗಿತು. ಉದಾಹರಣೆಗೆ, ದುಃಖ, ವಿಷಾದಗಳ ಹಾಡುಗಳಿಗೆ ರಾಗಸಂಯೋಜನೆ ಮಾಡಲು ಕೆಲವರು ರೂಢಿಗತವಾಗಿ ಬಳಸುವ ಶಿವರಂಜಿನಿ ರಾಗ: ಮುಖೇಶರ ಪ್ರಖ್ಯಾತ ‘ಜಾನೇ ಕಹಾ ಗಯೇ ಓ ದಿನ್’ ಹಾಡು, ಅಥವಾ ರಾಜ್‌ಕುಮಾರ್ ಭಾರತಿ ಹಾಡಿರುವ ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ ನನ್ನ’ಹಾಡು- ಇವೆರಡೂ ಶಿವರಂಜಿನಿ ರಾಗವನ್ನಾಧರಿಸಿದ ಹಾಡುಗಳು. ಅನೇಕ ಜನಪದ ಧಾಟಿಯ ಹಾಡುಗಾರರು ಮತ್ತೆ ಮತ್ತೆ ಬಳಸುವ ರಾಗ ಧಾಟಿ ಕೂಡ ಇದೇ.

ಇವೆಲ್ಲ ನಾನು ನೀವು ಮೆಲುಕು ಹಾಕುವ ಹಾಡುಗಳೇ. ಆದರೂ ಒಂದು ರಾಗವನ್ನು ಒಂದು ಭಾವಕ್ಕೆ, ಒಂದು ಮೂಡ್‌ಗೆ ಕಟ್ಟಿಹಾಕುವುದು ಸೀಮಿತ ಎನಿಸುತ್ತಿರುತ್ತದೆ. ಈ ಕುರಿತು ಎರಡೂವರೆ ದಶಕಗಳ ಕೆಳಗೆ ಬರೆದ ಟಿಪ್ಪಣಿಯ ಭಾಗಗಳನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: 

ಜರ್ನಲಿಸಂ ಓದುವ ಹುಡುಗ, ಹುಡುಗಿಯರಿಗೆ ಹಿಂದೂಸ್ತಾನಿ ಸಂಗೀತದ ಪರಿಚಯ ಮಾಡಿಕೊಡುತ್ತಿದ್ದ ಸಂಗೀತಗಾರ-ಮೇಷ್ಟ್ರು ನಾಗರಾಜರಾವ್ ಹವಾಲ್ದಾರ್ ಈ ರಾಗಗಳನ್ನು ಹೇಗೆ ಅನುಭವಿಸಬೇಕು, ಆನಂದಿಸಬೇಕು ಎಂದು ಹೇಳಿಕೊಡಲೆತ್ನಿಸುತ್ತಿದ್ದರು. ಈ ರಾಗ ಪರಿಚಯದಲ್ಲಿ ಹಿಂದೂಸ್ತಾನಿಯ ‘ತೋಡಿ’ರಾಗಕ್ಕೆ ಬಂದಾಗ, ‘ಇದು ಖಿನ್ನತೆ, ಕರುಣೆ ಥರದ ಭಾವಗಳನ್ನು ವ್ಯಕ್ತಪಡಿಸುವ ರಾಗ’ಎಂದು ಮೇಷ್ಟ್ರು ಆ ರಾಗದ ಗ್ರಹಿಕೆಗೆ ಪೀಠಿಕೆ ಹಾಕಿದರು. ನೀವು ಪಿ.ಬಿ. ಶ್ರೀನಿವಾಸ್ ಹಾಡಿರುವ ‘ವೈದೇಹಿ ಏನಾದಳೋ...’ ಸಿನಿಮಾ ಹಾಡು ಕೇಳಿದ್ದರೆ, ಹಿಂದೂಸ್ತಾನಿ ತೋಡಿ ರಾಗದ ಒಂದು ಓಟ ನಿಮಗೆ ಪರಿಚಯವಾಗಿರುತ್ತದೆ. 

ಆದರೆ ಹಿಂದೂಸ್ತಾನಿ ರಾಗಗಳ ಆಸ್ವಾದನೆಗೆ ಅದೇ ಆಗ ಪ್ರವೇಶಿಸುತ್ತಿದ್ದವರಿಗೆ ಒಂದು ರಾಗವನ್ನು ಒಂದೆರಡು ಭಾವಗಳಿಗೆ ಕಟ್ಟಿಹಾಕಿದ್ದು ಅಷ್ಟು ಸರಿಯಲ್ಲವೇನೋ ಎನಿಸತೊಡಗಿತು. ತೋಡಿ ರಾಗ ಹೊಸ ಕೇಳುಗರಲ್ಲಿ ಯಾವ ಭಾವ ಹೊರಡಿಸುತ್ತದೆ ಎಂಬುದನ್ನು ಮೇಷ್ಟ್ರು ಪರೀಕ್ಷಿಸಿ ನೋಡಬಹುದಾಗಿತ್ತೇನೋ! ಆಗ ಈ ಹೊಸಬರ ಅನುಭವದ ಮೂಲಕ ಆ ರಾಗದ ಹೊಸ ನೋಟ ಸಿಗುವ ಸಾಧ್ಯತೆ ಇತ್ತು. ಕಾರಣ, ರಾಗವೊಂದರ ಪ್ರಧಾನ ಎಳೆ ಖಿನ್ನತೆ ಅಥವಾ ಸಂಭ್ರಮದ ಕಡೆಗೆ ವಾಲುತ್ತಿದ್ದರೂ ಅದರ ಸ್ವರಗಳ ಬಗೆಬಗೆಯ ಮಿಶ್ರಣ ಯಾವ ಭಾವವನ್ನಾದರೂ ಹುಟ್ಟುಹಾಕಬಹುದು. ಆದ್ದರಿಂದಲೇ ರಾಗವೊಂದನ್ನು ನಿರ್ದಿಷ್ಟ ಭಾವಕ್ಕೆ ಕಟ್ಟಿ ಹಾಕುವವರು ಅದನ್ನು ಸೀಮಿತಗೊಳಿಸುತ್ತಿರುತ್ತಾರೆ ಅನ್ನಿಸತೊಡಗಿತು. 

ಹಾಗೆಯೇ ಕ್ಲಾಸ್‌ರೂಮ್ ಪಾಠಗಳಲ್ಲಿ ಕವಿತೆಯೊಂದರ ಪ್ರಧಾನ ಭಾವ ಇದೇ ಎಂದು ಹೊರಡುವವರು ಅಥವಾ ಕವಿತೆಯ ಸಂದರ್ಭಸೂಚಿಗೆ ಗಂಟು ಬೀಳುವವರು ಕೂಡ ಕವಿತೆಯನ್ನು ಸೀಮಿತಗೊಳಿಸುತ್ತಿರುತ್ತಾರೆ. ಬೇಂದ್ರೆಯವರ ಕವನ ಸಂಕಲನಗಳ ಕೊನೆಗೆ ವಾಮನಬೇಂದ್ರೆ ಬರೆದಿರುವ ಭಾವಸಂದರ್ಭಸೂಚಿಗಳನ್ನು ನೀವು ಗಮನಿಸಿರಬಹುದು:
ಉದಾಹರಣೆಗೆ, ‘ಇನ್ನು ಯಾಕ ಬರಲಿಲ್ಲಾಂವ ಹುಬ್ಬಳ್ಳಿಯಾಂವ’ ಪದ್ಯಕ್ಕೆ ಬರೆಯಲಾದ ಟಿಪ್ಪಣಿ: ‘...ನಾಟಕದಲ್ಲಿ ಒಬ್ಬ ಹುಚ್ಚಿ ಹೇಳಬಹುದಾದ ಹಾಡು ಇದು... ಹುಚ್ಚಿಯ ವ್ಯಥೆಯನ್ನು ವರ್ಣಿಸುವಲ್ಲಿ ಈ ಕವನದ ವಿಸ್ತಾರ, ವಿಲಾಸ ಇದೆ’. ಇದೇ ರೀತಿ ‘ಬಾರೋ ಸಾಧನಕೇರಿಗೆ’ಎಂಬ ಕವಿತೆಯ ಬಗ್ಗೆ: ‘...ಒಂದು ವರ್ಷ ಗದುಗಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದು, ಕೆಲಸ ಹೋಗಿದ್ದರಿಂದ ಬೇಂದ್ರೆಯವರು ಧಾರವಾಡಕ್ಕೆ ಮರಳಬೇಕಾಯಿತು. ಆಗ ಅವರು ತಮ್ಮ ಜೀವಕ್ಕೆ ಸಂಬೋಧಿಸಿ ಬಾರೋ ಸಾಧನಕೇರಿಗೆ ಎಂದಿದ್ದಾರೆಯೇ ಹೊರತು, ಬೇರೆ ಯಾರಿಗಾದರೂ ಕೊಟ್ಟ ಆಮಂತ್ರಣದ ಪದ್ಯ ಇದಲ್ಲ...’

ಹೀಗೆ ತಾವೇ ಕವಿಯ ಮನಸ್ಸಿನಲ್ಲಿ ಬಿಡಾರ ಹೂಡಿದವರಂತೆ ಇಂಥ ಸಂದರ್ಭಸೂಚಿಗಳನ್ನು ಬರೆದು ಬೇಂದ್ರೆಯನ್ನು ‘ಬಲಿ’ತೆಗೆದುಕೊಂಡಿರುವ ‘ವಾಮನ’ರಿಗೆ ಕವಿ ಬ್ಲೇಕ್ ‘ದಿಸ್ ಪೊಯೆಮ್ ಈಸ್ ಮೈನ್, ಬಟ್ ನಾಟ್ ಮೈನ್’ (‘ಈ ಕವಿತೆ ನನ್ನದು; ಆದರೆ ನನ್ನದಲ್ಲ’) ಎಂದು ಯಾಕೆ ಹೇಳಿದ ಎಂಬುದು ಗೊತ್ತಿರಲಾರದು. ಸ್ವತಃ ಕವಿಯೇ ಈ ಬಗೆಯ ಸಂದರ್ಭಸೂಚಿಗಳನ್ನು ಬರೆದರೂ ನಾವು ಆ ಸೂಚಿಗಳನ್ನು ತೀರಾ ಅವಲಂಬಿಸಬೇಕಾಗಿಲ್ಲ. ಇದನ್ನು ಕನ್ನಡ ಅಧ್ಯಾಪಕರೊಬ್ಬರಿಗೆ ಹೇಳಿದರೆ, ‘ಹಾಗೇನಿಲ್ಲ, ಒಂದು ಕವಿತೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಲು ಸಂದರ್ಭಸೂಚಿಗಳು ಸಹಾಯ ಮಾಡುತ್ತವೆ’ಎಂದರು. ಈ ಮಾತಿನ ಒಳ ಅರ್ಥ ಇವು ಸ್ವತಃ ಈ ಸೋಮಾರಿ ಅಧ್ಯಾಪಕರು ಕವಿತೆಯನ್ನು ಒಂದು ಸರಳ ಮಟ್ಟದಲ್ಲಾದರೂ ಓದಿಕೊಳ್ಳಲು ಸಹಾಯ ಮಾಡುತ್ತವೆ ಎಂಬುದೇ ಆಗಿತ್ತು! 

ಹೀಗೆ ಯಾರೋ ಸೂಚಿಸಿದ ಸಂದರ್ಭಕ್ಕೆ ಆತುಕೊಂಡು ಕವಿತೆಯನ್ನು ಓದುವುದು ಕೆಲವು ರೀತಿಯ ಟೀಚರುಗಳಿಗೆ ಯಾಕೆ ಇಷ್ಟವೆನ್ನುವುದನ್ನು ಸುಲಭವಾಗಿ ಊಹಿಸಬಹುದು: ಆಗ ಕವಿತೆಯನ್ನೂ ಕತೆಯಂತೆಯೇ ಪಾಠ ಮಾಡಿ ಕೈತೊಳೆದುಕೊಳ್ಳಬಹುದು. ಬೇಂದ್ರೆಯವರ ‘ಮಲ್ಲಾಡದ ಗಿಣಿಯೇ’ಎಂಬ ಕವಿತೆಯನ್ನು ವಿವರಿಸುವವರು ‘ಈ ಗಿಣಿ ಯಾವ ಪ್ರದೇಶಕ್ಕೆ ಸೇರಿದ್ದು?’ ಎಂಬ ಒಂದಂಕದ ಪ್ರಶ್ನೆಯಿಂದಲೇ ಶುರುಮಾಡಬಹುದು! ಆದರೆ ಹೀಗೆ ಕವಿತೆಯ ಹೊರ ಸಂದರ್ಭದ ಮೇಲೆ ಕಣ್ಣಿಟ್ಟ ತಕ್ಷಣ, ಅಲ್ಲಿ ‘ಮಲ್ಲಾಡದ’ ಗಿಣಿ ‘ಅಲ್ಲಾಡದೆ’ಕುಂತ ರೀತಿ ಹೊರಡಿಸುವ ಶಬ್ದದ ಆಟ ನಮ್ಮನ್ನು ತಟ್ಟದೇ ಹೋಗುತ್ತದೆ. ನಮ್ಮ ಮನಸ್ಸೆಲ್ಲ ಗಿಣಿ ಎಲ್ಲಿಂದ ಬಂತು, ಹೇಗೆ ಬಂತು, ಹಾಗೂ ಎಲ್ಲಿಗೆ ಹೋಗುತ್ತದೆ ಎಂಬ ಮಾಹಿತಿಯ ಸುತ್ತಲೇ ತಿರುಗುತ್ತಿರುತ್ತದೆ. ಆ ಸೀಮಿತ ಓದಿನಲ್ಲಿ ಕವಿಗೆ ಮೊದಲು ‘ಅಲ್ಲಾಡದ’ಗಿಳಿ ಕಂಡು ‘ಮಲ್ಲಾಡ’ಎಂಬ ಆದಿಪ್ರಾಸ ಹುಟ್ಟಿರಬಹುದು; ಅದರಿಂದ ಮಲೆನಾಡು ‘ಮಲ್ಲಾಡು’ಆಗಿರಬಹುದು...ಈ ಥರದ ಹೊಸ ಅರ್ಥಗಳು ಹೊಳೆಯದೇ ಹೋಗುತ್ತವೆ.  

ಅಂದರೆ, ಒಂದೇ ಬಗೆಯ ಓದಿನ ರೀತಿ ಕವಿತೆಯೊಂದರಲ್ಲಿ ಒಂದು ಕೇಂದ್ರ ಪ್ರತಿಮೆಯ ಸುತ್ತ ಏನೇನೆಲ್ಲಾ ಹೇಳಲು ಪ್ರಯತ್ನಿಸಲಾಗಿದೆ ಅಥವಾ ನಾವು ಏನೇನೆಲ್ಲಾ ಓದಲು ಸಾಧ್ಯ ಎಂಬುದನ್ನು ಕಡೆಗಣಿಸುತ್ತಿರುತ್ತದೆ. ಇದು ಹಿಂದೊಮ್ಮೆ ನನಗೆ ಸ್ಪಷ್ಟವಾದದ್ದು ಕವಿ ಎಲಿಯಟ್ ತನ್ನ ‘ಟ್ರೆಡಿಷನ್ ಅಂಡ್ ದಿ ಇಂಡಿವಿಜುಯಲ್ ಟ್ಯಾಲೆಂಟ್’ಲೇಖನದಲ್ಲಿ ಕೀಟ್ಸ್‌ನ ‘ಓಡ್ ಟು ನೈಟಿಂಗೇಲ್’ಪದ್ಯವನ್ನು ಪ್ರಸ್ತಾಪಿಸಿದ್ದನ್ನು ಓದಿದಾಗ. ಶೀರ್ಷಿಕೆಯೇ ಹೇಳುವಂತೆ ಇದು ನೈಟಿಂಗೇಲ್ ಹಕ್ಕಿಗೆ ಕೀಟ್ಸ್ ಬರೆದ ಪ್ರಗಾಥ. ಆದರೆ ಎಲಿಯಟ್ ಬರೆಯುತ್ತಾನೆ: 

‘...ಕೀಟ್ಸನ ಈ ಪದ್ಯದಲ್ಲಿ ತುಂಬಿರುವ ಅನೇಕ ರೀತಿಯ ಭಾವಗಳಿಗೂ ನೈಟಿಂಗೇಲ್ ಹಕ್ಕಿಗೂ ನಿರ್ದಿಷ್ಟ ಸಂಬಂಧವೇನೂ ಇಲ್ಲ. ಆದರೆ ನೈಟಿಂಗೇಲ್ ಎಂಬ ಆಕರ್ಷಕ ಹೆಸರು ಅಥವಾ ಈ ಹಕ್ಕಿಗಿರುವ ಕೀರ್ತಿ ಈ ಎಲ್ಲ ಭಾವಗಳನ್ನು ಒಟ್ಟಾಗಿ ತರಲು ಸಹಾಯಕವಾಗಿದೆ.’ 

ಬೇಂದ್ರೆಯ ಮಲ್ಲಾಡದ ಗಿಣಿ ಕೂಡ ಹೀಗೆ ಹಲವು ಭಾವಗಳನ್ನು ತಂದು ಸೇರಿಸುತ್ತದೆ. ಎಲ್ಲ ಉತ್ತಮ ಕವಿತೆಗಳೂ, ಕತೆಗಳೂ ಒಂದು ಕೇಂದ್ರ ಪ್ರತಿಮೆಗೆ ಬಗೆಬಗೆಯ ಸರಕನ್ನು ತಂದು ಜೋಡಿಸುವುದೂ ಹೀಗೆಯೇ.

ಅಂದರೆ, ನಿಮಿತ್ತಮಾತ್ರವಾಗಿ ಒಂದು ಗಿಣಿ ಅಥವಾ ನೈಟಿಂಗೇಲ್, ಕವಿತೆಯ ಆಯಕಟ್ಟಿನ ಸ್ಥಳವೊಂದರಲ್ಲಿ ಕೂತು ಏನೇನನ್ನೋ ಹೇಳಿಸಲೆತ್ನಿಸುತ್ತಿರುತ್ತದೆ. ಭಾವಗಳನ್ನು ಒಂದರಿಂದ ಇನ್ನೊಂದಕ್ಕೆ ಹಾರಿಸಲೆತ್ನಿಸುತ್ತಿರುತ್ತದೆ. ಆದರೆ ಅವುಗಳ ಜೊತೆ ಹಾರಲೊಲ್ಲದ, ಹಾರಲಾಗದ ಓದುಗ ಓದುಗಿಯರು ಹಾಗೂ ಕವಿತೆಯ ಸಂದರ್ಭಸೂಚಕರು ‘ಕವಿ ನೈಟಿಂಗೇಲ್ ಬಗ್ಗೆ ಹೀಗೆ ಹೇಳಿದ್ದಾನೆ’ಅಥವಾ ‘ಗಿಣಿಯನ್ನು ಈ ರೀತಿ ವರ್ಣಿಸಿದ್ದಾನೆ’ಎಂದು ಎಲ್ಲವನ್ನೂ ಕವಿತೆಯ ಕೇಂದ್ರಕ್ಕೇ ಆರೋಪಿಸಿ ಆರಾಮಾಗಿ ರೈಲು ಬಿಡುತ್ತಲೇ ಇರುತ್ತಾರೆ. ಇದು ಕೇವಲ ಈ ಬಗೆಯ ಓದಿನ ಸಮಸ್ಯೆ ಮಾತ್ರ ಅಲ್ಲ. ‘ಕವಿತೆಯೊಂದರಲ್ಲಿ ಬರುವ ಎಲ್ಲವೂ ಕೇಂದ್ರ ಅರ್ಥಕ್ಕೇ ದುಡಿಯಬೇಕು’ ಎಂದು ನಂಬುವ ನವ್ಯ ವಿಮರ್ಶಕರು ಕೂಡ ಇಂಥ ತಪ್ಪು ಮಾಡುತ್ತಿರುತ್ತಾರೆ.

-ಇವು ಈ ಅಂಕಣಕಾರ ಆಗ ಬರೆದ ಮಾತುಗಳು. 

ಇದೀಗ ಮತ್ತೆ ರಾಗ ಮತ್ತು ಹಾಡುಗಳ ಸಂಬಂಧದ ಪ್ರಶ್ನೆಗೆ ಹೊರಳಿದಾಗ, ಕವಿ- ಸಂಗೀತ ನಿರ್ದೇಶಕರಾದ ಹಂಸಲೇಖ ಈ ಸಿದ್ಧ ಮಾದರಿಯನ್ನು ಒಡೆದದ್ದು ನೆನಪಾಯಿತು. ನಮ್ಮ ಎಷ್ಟೋ ಆಧುನಿಕ ‘ಹಾಡುಕವಿ’ಗಳಿಗಿಂತ ಹಂಸಲೇಖರ ರಚನೆಗಳು ಹೆಚ್ಚು ಸೃಜನಶೀಲವಾಗಿವೆ ಎಂಬರ್ಥದ ಮಾತುಗಳನ್ನು ಡಿ. ಆರ್. ನಾಗರಾಜ್ ಹೇಳಿದ್ದು ನೆನಪಾಯಿತು. ಹಂಸಲೇಖರಲ್ಲಿ ಪದಗಳು ರಾಗಸಂಯೋಜನೆಯನ್ನು ಮುನ್ನಡೆಸುತ್ತವೋ, ಅಥವಾ ಹಲವು ರಾಗಗಳ ಮಿಶ್ರಣವಾದ ಸ್ವರಸಂಯೋಜನೆ ಅವರ ಪದಗಳನ್ನು ಸೃಷ್ಟಿಸುತ್ತದೋ... ಅದನ್ನು ಅವರೇ ಹೇಳಬೇಕು... ಅವರ ಈ ‘ಹಂಸರಾಗ ನ್ಯಾಯ’ಕುರಿತು ಮುಂದೊಮ್ಮೆ ಅವರನ್ನೇ ಕೇಳಿ ತಿಳಿಯಬೇಕೆನ್ನಿಸಿತು.

ಅದೇನೇ ಇರಲಿ, ಮೊನ್ನೆ ಗೆಳೆಯರು ಕಣ್ಣಿಗೆ ಕಡ್ಡಾಯ ವಿಶ್ರಾಂತಿ ಕೊಡಬೇಕಾದ ದಿನಗಳಲ್ಲಿ ರಾಗಾಧಾರಿತ ಹಾಡುಗಳು ಅವರನ್ನು ನೆಮ್ಮದಿಯಲ್ಲಿಟ್ಟ ರೀತಿ ನೆನಪಾಗಿ, ರಾಗಾಧಾರಿತ ಹಾಡುಗಳ ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರಿಗೆ ಥ್ಯಾಂಕ್ಸ್ ಹೇಳಬೇಕೆನ್ನಿಸಿತು. ಜೊತೆಗೆ ಕಣ್ಣು ಮುಚ್ಚಿ ಕೇಳಿಸಿಕೊಂಡಾಗ ಈ ಹಾಡುಗಳು ಹುಟ್ಟಿಸಿದ ಅರ್ಥಗಳು ಯಾವುವು ಎಂದು ಆ ಗೆಳೆಯರಿಂದ ತಿಳಿಯುವ ಕುತೂಹಲವೂ ಹುಟ್ಟಿತು.



Latest Video


Nataraj Huliyar Official
YouTube Channel

SUBSCRIBE