Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
24 Aug 2025 ಗೆಳೆಯನ ನೆನಪಿನ ತಂಗಾಳಿ!

ಇನ್ನೇನು ಸಂಜೆಯ ಕತ್ತಲಿಳಿಯುತ್ತಿರುವಾಗ ಆ ಸಾಕ್ಷ್ಯಚಿತ್ರ ಪ್ರತ್ಯಕ್ಷವಾಯಿತು! ಐದಾರು ವರ್ಷಗಳ ಕೆಳಗೆ ಆ ಸಾಕ್ಷ್ಯಚಿತ್ರ ಶೂಟ್ ಮಾಡಲು ಕನ್ನಡದ ಉತ್ತಮ ನಿರ್ದೇಶಕ ಪಿ.ಎಚ್. ವಿಶ್ವನಾಥ್ ನಮ್ಮ ಮನೆಗೆ ಬಂದಿದ್ದಾರೆ ಎಂಬುದು ನನಗೆ ಮೊದಲಿಗೆ ಗೊತ್ತಾಗಲಿಲ್ಲ. ಗೊತ್ತಾದ ತಕ್ಷಣ, ಅವರನ್ನು ಮೊದಲು ಸರಿಯಾಗಿ ಅಟೆಂಡ್ ಮಾಡದಿದ್ದಕ್ಕೆ ಪೆಚ್ಚಾಗಿ, ಆಮೇಲೆ ಹಾಗೂ ಹೀಗೂ ಸರಿದೂಗಿಸಿದೆ! ವಿಶ್ವನಾಥ್ ಎನ್.ಕೆ. ಹನುಮಂತಯ್ಯನವರ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಬಂದಿದ್ದರು. ತರುಣ ಕವಿ, ಗೆಳೆಯ ಎನ್. ಕೆ. ೨೦೧೦ರಲ್ಲಿ ತೀರಿಕೊಂಡಿದ್ದರು. ಪಿ.ಎಚ್. ವಿಶ್ವನಾಥ್ ಮಾಡಿದ ಸಾಕ್ಷ್ಯಚಿತ್ರ ೨೦೨೫ರ ಆಗಸ್ಟ್ ೨೩ರ ಶನಿವಾರ ಸಂಜೆ ನನ್ನ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿತ್ತು. 

ಆ ಸಾಕ್ಷ್ಯಚಿತ್ರವನ್ನು ಅಲ್ಲಲ್ಲಿ ನೋಡನೋಡುತ್ತಾ, ಎನ್.ಕೆ.ಯ ಮಾಮೇರಿ ನೆನಪುಗಳು ಹಬ್ಬತೊಡಗಿದವು. ವಿಶಿಷ್ಟ ಕವಿಯಾದ ಅವನ ಎರಡೂ ಕವನ ಸಂಕಲನಗಳಿಗೆ ಪ್ರಕಾಶಕರನ್ನು ನಾನೇ ಹುಡುಕಿಕೊಟ್ಟಿದ್ದ ಆಕಸ್ಮಿಕ ಗಳಿಗೆಗಳು ಅಚ್ಚರಿ ಹುಟ್ಟಿಸತೊಡಗಿದವು. ಅವನ ಮೊದಲನೆಯ ಕವನ ಸಂಕಲನ 'ಹಿಮದ ಹೆಜ್ಜೆ’ ಪ್ರಕಟಿಸಿದವರು ಇಂಥ ನೂರಾರು ಹೊಸ ಪ್ರತಿಭೆಗಳನ್ನು ಪೊರೆದ ಶ್ರೀನಿವಾಸರಾಜು ಮತ್ತು ಕ್ರೈಸ್ಟ್ ಕಾಲೇಜು ಕನ್ನಡ ಸಂಘ. ನಂತರ ಗೆಳೆಯ-ಇಂಗ್ಲಿಷ್ ಮೇಷ್ಟ್ರು ರಾಜಾರಾಂ ಸೇಂಟ್ ಜೋಸೆಫ್ಸ್ ಕನ್ನಡ ಸಂಘದಿಂದ 'ಚಿತ್ರದ ಬೆನ್ನು’ ಕವನ ಸಂಕಲನ ಪ್ರಕಟಿಸಿದರು. ಎರಡಕ್ಕೂ ಅನಿತಾ ಹುಳಿಯಾರ್ ರಚಿಸಿದ ಸಂಕೀರ್ಣ ಮುಖಪುಟಗಳು; 'ಚಿತ್ರದ ಬೆನ್ನು’ ಸಂಕಲನಕ್ಕೆ ನಾನು ಬರೆದ ದೀರ್ಘ ಮುನ್ನುಡಿ;  ಎನ್.ಕೆ.ಯ ವಿಸ್ಮಯಕರ, ತಾಜಾ ಪ್ರತಿಮೆಗಳು ಇವೆಲ್ಲ ನೆನಪಾದವು; ಅದೆಲ್ಲದರ ಜೊತೆಗೆ, ಎನ್.ಕೆ. ಕೊಟ್ಟ ಕನ್ನಡದ ಕಾವ್ಯದ ಒಂದು ಒರಿಜಿನಲ್ ಮೆಟಫರ್: 'ಗೋವು ತಿಂದು ಗೋವಿನಂತಾದವನು…’  

ಕವಯಿತ್ರಿ ಮಾಲತಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಮಾಡಿದ್ದ ಒಳ್ಳೆಯ ಯೋಜನೆಗಳಲ್ಲಿ ಈ ಸಾಕ್ಷ್ಯಚಿತ್ರ ಮಾಲಿಕೆ ಕೂಡ ಒಂದು. 

ಈ ಅಂಕಣ ಬರೆಯಹೊರಟ ಸಂಜೆ ವಿಶ್ವನಾಥ್ ಮಾಡಿದ ಸಾಕ್ಷ್ಯಚಿತ್ರ ಪ್ರತ್ಯಕ್ಷವಾಗಲು ಆರೀಫ್ ರಾಜ ಮತ್ತು ಗೊರವರ್ ‘ಅಕ್ಷರ ಸಂಗಾತ’ದ ಮೊದಲ ಸಂಚಿಕೆಗಾಗಿ ನನ್ನೊಡನೆ ನಡೆಸಿದ ಮಾತುಕತೆ ಕಣ್ಣಿಗೆ ಬಿದ್ದದ್ದು ಕಾರಣವಾಗಿತ್ತು. ಆ ಮಾತುಕತೆಯಲ್ಲಿ ಎನ್.ಕೆ. ಪ್ರಸ್ತಾಪ ಕಂಡು, ಅವನು ಹುಟ್ಟಿದ ತಾರೀಕಿಗಾಗಿ ಗೂಗಲ್ ಬೆರಳಾಟ ಶುರುವಾದಾಗ…ಈ ಸಾಕ್ಷ್ಯಚಿತ್ರ ಕಂಡಿತು…

ಅವತ್ತು ‘ಸಂಗಾತ’ಕ್ಕಾಗಿ ಮಧ್ಯಾಹ್ನದಿಂದ ರಾತ್ರಿಯ ತನಕ ಆಡಿದ ಮಾತುಕತೆಗಳ ನಡುವೆ ಆರೀಫ್ ಎನ್.ಕೆ.ಯ ಬಗ್ಗೆ ಕೇಳಿದ್ದರು: ‘ಪ್ರಸ್ತುತ ಕನ್ನಡ ಕಾವ್ಯದ ಸಂದರ್ಭದಲ್ಲಿ ದಲಿತ ಪ್ರಜ್ಞೆಯನ್ನು ಇನ್ನೊಂದು ಎತ್ತರಕ್ಕೆ ಒಯ್ದ ಪ್ರತಿಭಾಶಾಲಿ ಕವಿ ಎನ್.ಕೆ. ಹನುಮಂತಯ್ಯ. ನಿಮ್ಮ ಸಹಲೇಖಕ, ಶಿಷ್ಯ, ಒಡನಾಡಿ. ಹೊಸ ತಲೆಮಾರಿಗೆ ಅವರ ಕಾವ್ಯ ಸ್ಫೂರ್ತಿಯ ಚಿಲುಮೆಯಾಗಿರುವಂತೆ, ಅವರ ಬದುಕಿನ ಅಂತ್ಯ ಅನುಕರಣೀಯವಾಗದಿರುವುದು ವಿಷಾದಕರ. ಈ ಸಂದರ್ಭದಲ್ಲಿ ಅವರನ್ನು ಹೇಗೆ ನೆನೆಯುತ್ತೀರಿ?’

ಆ ಗಳಿಗೆಯಲ್ಲಿ ಅನ್ನಿಸಿದ್ದನ್ನು ಹೇಳಿದೆ:

‘ನನಗೆ ಯಾರೂ ಶಿಷ್ಯರಿಲ್ಲ. ನಾನೇ ನಿತ್ಯ ಗುರುಗಳನ್ನು ಹುಡುಕ್ತಿರ್‍ತೀನಿ! ಹನುಮಂತಯ್ಯನ ಅಂತ್ಯಕ್ಕೆ ಕಾರಣವಾದ ವಿಚಾರಗಳು ಅತ್ಯಂತ ಭಾವನಾತ್ಮಕವಾದ ಖಾಸಗಿ ವಿಚಾರಗಳು. ಇವು ತುಂಬಾ ’ಇರ‍್ಯಾಷನಲ್’ ಆದ ವಿಚಾರಗಳು. ಅವನ್ನು ರ‍್ಯಾಷನಲ್ ಆಗಿ ವಿವರಿಸೋಕೆ ಬರಲ್ಲ. ಯಾವುದೋ ಒಂದು ವ್ಯಕ್ತಿಯ ಜೀವನದಲ್ಲಿ ಇನ್ಯಾವುದೋ ಒಂದು ಜೀವ ಪ್ರವೇಶಿಸುತ್ತೆ. ಇವುಗಳ ಬಗ್ಗೆ ನಿಮಗೆ ಹಿಡಿತ ಇರುತ್ತೋ, ಇಲ್ಲವೋ ಗೊತ್ತಿಲ್ಲ. ಇವನ್ನೆಲ್ಲಾ ಮೀರಿ ಹನುಮಂತಯ್ಯನ ಬಗ್ಗೆ ಹೇಳಬೇಕಾದ್ರೆ, ಅವನು ಅನೇಕ ಸಲ ತನಗೆ ತಕ್ಷಣ ಅನ್ನಿಸಿದ ಭಾವನೆಗಳಿಗೆ ಪ್ರಾಮಾಣಿಕನಾಗಿರುತ್ತಿದ್ದ. ಭಾವುಕನಾಗಿ ಒಂದು ನಿರ್ಣಾಯಕ ಸನ್ನಿವೇಶಕ್ಕೆ ರಿಯಾಕ್ಟ್ ಮಾಡಿದ. ಈ ನಡುವೆ ಒಮ್ಮೆ ವಿಕ್ರಮ್ ವಿಸಾಜಿ ಹೇಳಿದ್ದರು- ‘ಎರಡು ಸರ್ತಿ ನಿಮ್ಮತ್ರ ಹೋಗೋಣ ಅಂತಾ ಹೊರಟಿದ್ವಿ ಸರ್, ನಾವಿಬ್ಬರೂ. ಆದರೆ ಹನುಮಂತಯ್ಯ, ‘ಬೇಡ ಬೇಡ, ಮೇಷ್ಟ್ರು ನನ್ನ ವಿರುದ್ಧ ತೀರ್ಪು ಕೊಡ್ತಾರೆ. ನಾನು ಬರಲ್ಲ’ ಅಂದ.’ ತೀರ್ಪು ಅನ್ನೋದು ಬಹಳ ದೊಡ್ಡ ಮಾತಾಯ್ತು. ನಾನ್ಯಾರು ತೀರ್ಪು ಕೊಡೋಕೆ? 

ಬಟ್... ಬೇಜಾರಾಗುತ್ತೆ. ಆದ್ರೆ ಅವ್ನು ಹಿಪೋಕ್ರೈಟ್ ಆಗಿರ‍್ಲಿಲ್ಲ. ತನಗೆ ಆ ಘಟ್ಟದಲ್ಲಿ ಆಳದಲ್ಲಿ ಏನು ತುಡೀತಾ ಇತ್ತು, ಆ ಕಡೆ ಹೋದ. ಅದು ಕೊನೆಗೆ ಸಾವಿಗೆ ಕರ‍್ಕೊಂಡು ಹೋಯ್ತು. ಬಾಳ ವಿಚಿತ್ರವಾದ ತಿರುವುಗಳಾದವು ಅಂತ ಕಾಣುತ್ತೆ. ಅವನು ಏನನ್ನು ನಂಬಿ ಹೊರಟು ಹೋಗಿದ್ನೋ ಅದೂ ಕೈ ಬಿಡ್ತಾ ಇದೆ ಅನ್ನೋ ಸ್ಥಿತಿಯಲ್ಲಿ ಅವ್ನು ಸೂಯಿಸೈಡ್ ಮಾಡ್ಕೊಂಡ ಅನಿಸುತ್ತೆ. ಆ ಕಾಲಕ್ಕೆ ಏನನ್ನಿಸ್ತೋ ಅದರ ಹಿಂದೆ ಹೊರಟು ಹೋದ ಅವನು. ಅದನ್ನು ನಾವು ಹೀಗೇ ಅಂತ ನಿರ್ಣಯ ಮಾಡಿ ಹೇಳೋದು ಬಹಳ ಕಷ್ಟ. ನನಗೆ ಅತ್ಯಂತ ಪ್ರಿಯರಾದ ವ್ಯಕ್ತಿಗಳಲ್ಲಿ ಅವನೂ ಒಬ್ಬ. ನಾನು ಏನಾದ್ರೂ ಜೋಕ್ ಹೇಳಿದ್ರೆ ಮನ ತುಂಬಿ ನಗ್ತಿದ್ದ. ಬಹಳ ಡಿಸ್ಟರ್ಬ್ ಆಗುತ್ತೆ ಅವನ ವಿಷಯದಲ್ಲಿ... ಅವನಿಗೆ ಎರಡು ಸಲ ರಿಸರ್ಚ್ ಮಾಡಲು ರಿಜಿಸ್ಟರ್ ಮಾಡಿಸಿದ್ದೆ. ಪ್ರತಿಭಾವಂತ, ಅವನು ರಿಸರ್ಚ್ ಮಾಡಬೇಕು ಅಂತ ಒಂದು ಆಸೆ. 

ರಿಸರ್ಚ್ ಬಗ್ಗೆ ಮತ್ತೆ ಮತ್ತೆ ಲೆಟರ್ ಬರ್‍ದೆ- ನೀನು ಹಿಂಗಿಂಗೆ ರಿಸರ್ಚ್ ಮಾಡು ಅಂತ. ನಾನು ಬರೆದಿದ್ದ ಒಂದು ಲೆಟರನ್ನ ಅವನ ಟೇಬಲ್ ಮೇಲೆ ಇಟ್ಕೊಂಡಿದ್ದ. ನಾನು ಅದರಲ್ಲಿ ಬರೆದಿದ್ದೆ- ‘ನಾವು ಇತರರರಿಗೆ ಹೇಳುವ ನೆವಗಳನ್ನು ನಮಗೇ ಹೇಳಿಕೊಳ್ಳಬಾರದು’ ಅಂತ. ನಾನು ಒಂದಿನ ತಿಪಟೂರಿಗೆ ಹೋದಾಗ ಬೆಳಬೆಳಗ್ಗೆ ಅವನ ಮನೆಯ ಹೊರಗೆ ನಿಂತು ಅವನ್ನ ಫೂಲ್ ಮಾಡೋಣ ಅಂತ ‘ಪೇಪರ್! ಮಿಲ್ಕ್! ಮಿಲ್ಕ್!’ ಅಂತ ಕೂಗಿದೆ!  ದನಿ ಕೇಳಿ ನಾನೇ ಅಂತ ಅವನಿಗೆ ಗೊತ್ತಾಗಿ ಹೋಯ್ತು. ‘ಸಾ...ರ್’ ಅಂತ ಅಚ್ಚರಿಯಿಂದ ಹೊರ ಬಂದ. ನಾನು ಬರೋದು ಗೊತ್ತಿದ್ದಿದ್ರೆ ಟೇಬಲ್ ಮೇಲೆ ಫ್ರೇಮಿಗೆ ಅಂಟಿಸಿದ್ದ ಆ ಪತ್ರ ಎತ್ತಿಟ್ಟಿರೋನೋ ಏನೋ! ನಾವೆಲ್ಲಾ ಹಂಗೆ ತಾನೇ- ಯಾರಾದ್ರೂ ನಮ್ಮ ರೂಮಿಗೆ ಬರ‍್ತಾರೆ ಅಂತ ಮೊದಲೇ ಗೊತ್ತಿದ್ರೆ ನಮ್ಮ ಪತ್ರ, ಹಾಳೆ, ಡೈರಿ ಎಲ್ಲಾ ಎತ್ತಿಟ್ಟಿರ‍್ತೀವಲ್ವ...’ 

‘ನಮ್ಮ ಅರ್ಧಂಬರ್ಧ ರಚನೆಗಳು, ಅಪ್ರಕಟಿತ ಬರಹಗಳು ಯಾರಿಗೂ ಕಾಣಬಾರದೂ ಅಂತ...’ ಎಂದು ಸೇರಿಸಿದರು ಆರೀಫ್. 

’ಹಾಂ!’ ಎನ್ನುತ್ತಾ ಮುಂದುವರಿಸಿದೆ: ’ಹನುಮಂತಯ್ಯ ನಿಜಕ್ಕೂ ನನಗೆ ಆಳದ ಗೆಳೆಯನಾಗಿಬಿಟ್ಟಿದಾನೆ ಅಂತ ನನಗೆ ತೀವ್ರವಾಗಿ ಅನ್ನಿಸಿದ್ದು ಅವನು ಕೆಲ ಕಾಲ ಬೆಂಗಳೂರಿನಲ್ಲಿದ್ದವನು, ಕೆಲಸ ಸಿಕ್ಕಿ ತಿಪಟೂರಿಗೆ ಮನೆ ಶಿಫ್ಟ್ ಮಾಡುವ ಹಿಂದಿನ ದಿವಸ. ಅವನು ನಾಳೆ ಹೋಗ್ತಾನೆ ಅಂತ ನಮ್ಮ ಮನೇಲಿ ಮಧ್ಯಾಹ್ನ ಅವನಿಗೆ ಸೆಂಡಾಫ್. ಸಂಜೆ ಬೇಜಾರಾಗಿ ಮತ್ತೆ ಅವನ ಮನೆಗೆ ಹುಡುಕ್ಕೊಂಡು ಹೋದೆ. ನಾನೂ ಅವನ ಮೇಲೆ ಡಿಪೆಂಡ್ ಆಗಿದೀನಿ ಅಂತ ಆಗ ನನಗೆ ಗೊತ್ತಾಯ್ತು. ನಾನು ಯಾಕೆ ಬಂದೆ ಅಂತ ಅವನಿಗೂ ಗೊತ್ತಾಯ್ತು. ಇಬ್ಬರಿಗೂ ಬೇಜಾರು. [ಆ ಸಂಜೆಯ ’ಮದ್ಯ’ಕಾಲೀನ, ಭಾವುಕ ಸಿಟ್ಟಿಂಗಿನ ನಂತರ] ನಾನು ರಾತ್ರಿ ಮನೆಗೆ ಬಂದ ಮೇಲೆ ಆ ದುಃಖ, ಬೇಸರ ಎಲ್ಲಾನೂ ಪದ್ಯದ ಥರಾ ಬರೆದೆ. ‘ಗೆಳೆಯನೊಬ್ಬ ಊರು ಬಿಟ್ಟಾಗ’ ಅಂತ ಪದ್ಯ ಶುರುವಾಗುತ್ತೆ...ನನ್ನ ಎಷ್ಟೋ ಅಪೂರ್ಣ ಬರಹಗಳಂತೆ ಅದೂ ಎಲ್ಲೋ ಇರಬಹುದು... ಆದರೆ ಇದನ್ನೆಲ್ಲ ನೆನಸಿಕೊಳ್ಳುವಾಗ ಎದೆ, ಕಣ್ಣು ತುಂಬಿ ಬರುತ್ತೆ...

‘ಇನ್ನೊಂದು ನೆನಪು. ಅವನು ಒಂದು ಸಲ ಬೆಂಗಳೂರಿಗೆ ಬಂದಾಗ ಒಂದು ರಾತ್ರಿ, ‘ನಮ್ಮ ಕಾಲೇಜ್ ಹುಡುಗಿ ಒಂದು ಕವಿತೆ ಬರ‍್ದವ್ಳೆ ಸಾರ್, ಓದ್ಲಾ ಸಾರ್?’ ಅಂದ. [ಅಕಾಡೆಮಿಯ ಕೃಷ್ಣ ಕಿಂಬಹುನೆಯವರ ಮನೆಯಲ್ಲಿ; ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ.]

‘ಓದಪ್ಪಾ. ಈ ರಾತ್ರಿ ನಮ್ಮ ಮೇಲೆ ಹಲ್ಲೆ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ ಓದಪ್ಪಾ’ ಅಂದೆ. 

‘ನಮ್ಮ ಕಾಲೇಜ್ ಹುಡುಗಿ… ಬಾಳಾ ಚೆನಾಗಿ ಬರ್‍ದೈತೆ ಸಾರ್’ ಅಂತ ಓದೋಕೆ ಶುರು ಮಾಡಿದ. ‘ಹೆಗ್ಗಣ ನುಗ್ಗಿದವೋ... ಊರೊಳು ಹೆಗ್ಗಣ ನುಗ್ಗಿದವೋ...’ ಅಂತ ಪದ್ಯ ಓದಲು ಶುರು ಮಾಡಿದ. 

ಒಂದು ಸ್ಟ್ಯಾಂಜಾ ಓದೋ ಹೊತ್ತಿಗೆ ನಾನು, ‘ಚೆನ್ನಾಗಿ ಬರ‍್ದವ್ಳೆ- ಎನ್.ಕೆ. ಹನುಮಂತಯ್ಯ ಅನ್ನೋ ಹುಡುಗಿ!’ ಅಂದೆ. 

‘ಸಾ...ರ್, ಸಾರ್...’ ಅಂತ ಎನ್. ಕೆ. ನಗತೊಡಗಿದ.’

ಅವತ್ತು ಆರೀಫ್, ಗೊರವರ್ ಜೊತೆಗಿನ ಈ ಮೇಲಿನ ಮಾತುಕತೆಯಲ್ಲಿ ಹೇಳಿದ ’ಗೆಳೆಯನೊಬ್ಬ ಊರು ಬಿಟ್ಟಾಗ’ ಪದ್ಯ ವರ್ಷಗಟ್ಟಲೆ ಬೆಳೆದು ಮುಂದೊಮ್ಮೆ ’ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು:  

ಗೆಳೆಯನೊಬ್ಬ ಊರು ಬಿಟ್ಟಾಗ

ಗೆಳೆಯನೊಬ್ಬ ಊರು ಬಿಟ್ಟ ಗಳಿಗೆ 
ಎಲ್ಲ ಗೆಳೆಯರೂ ಊರು ಬಿಟ್ಟಿರಬಹುದೆಂಬ ಬಡಪಾಯಿ ದುಗುಡ;
ಟೆಲಿಫೋನ್ ಡೈರಿಯ ಯಾವ ನಂಬರು ತಿರುಗಿಸಿದರೂ
ಅಲ್ಲಿ ಗೆಳೆಯರು ಸಿಕ್ಕಲಾರರೆಂಬ ಕಳ್ಳ ಅಳುಕು ಒಸರುತ್ತಿತ್ತು;
ನಂಬರು ಸಿಕ್ಕಿದರೂ ಅಲ್ಲಿ ಗೆಳೆಯರಿರಲಾರರೆಂಬುದು ಖಾತ್ರಿಯಾಗಿತ್ತು.
ಮೂರು ಸಲ ಮೂವರಿಗೆ ಫೋನೆತ್ತಿ ಕೆಳಗಿಟ್ಟೆ;
ನಡುವೆ ಉತ್ತರವಿರಲಿಲ್ಲ.

ಅವತ್ತು ಊರು ಬಿಟ್ಟ ಗೆಳೆಯನಲ್ಲಿ-
ಸಾಮಾನ್ಯವಾಗಿ ಪ್ರೀತಿಯಿತ್ತು; ಕಣ್ಣಲ್ಲಿ ಮೆಚ್ಚುಗೆಯಿತ್ತು
ಅಕಸ್ಮಾತ್ ಉಕ್ಕುವ ಪ್ರೀತಿಜಲ ಹೀರಿಕೊಳ್ಳುವ
ಬ್ಲಾಟಿಂಗ್ ಪೇಪರಿನಂಥ ಎದೆಯಿತ್ತು.
ಮಿಗಿಲಾಗಿ, ಅಲ್ಲಿ ದುಃಖವಿತ್ತು
ಉಡಾಫೆಯಿತ್ತು, ಅಲೆಮಾರಿಯ ಸೆಳೆತವಿತ್ತು.

ಅವನು ಎಲ್ಲೋ ಹೋಗುತ್ತಿದ್ದ, ಎಲ್ಲೋ ಬರುತ್ತಿದ್ದ
ಅವನ ಸಿಡಿಮಿಡಿ ವಿಸ್ಮಯ ಹುಟ್ಟಿಸುತ್ತಿತ್ತು
ಅಲ್ಲಿ ಸಣ್ಣತನ ಕೊಂಚ ಕಡಿಮೆಯಿತ್ತು
ಸಂಜೆ ಗುಂಡಿನ ಕರೆಗೆ ಅವನ ಇಡೀ ಮೈ ಹೂಂಗುಡುತ್ತಿತ್ತು
ಆಗ ಸಡಿಲಾಗುತ್ತಿದ್ದ ನಾಲಗೆಯಲ್ಲಿ ಆಸೆಯಿತ್ತು, ಭರವಸೆಯಿತ್ತು
ಗಂಟಲು ಗಿಲಿಗಿಲಿಗುಡುತ್ತಿತ್ತು
ಅಪ್ಪಂಥವರು ಸಿಕ್ಕರೆ ಅದು ಗುಡುಗುತ್ತಲೂ ಇತ್ತು.

ಮಾತುಮಾತಿಗೆ ಸುಮ್ಮನೆ ತೂಗುವ ಆ ಕತ್ತು ನನಗೆ ಪ್ರಿಯವಾಗಿತ್ತೆ?
ವಿಧೇಯ ಮುಖ ಹುಡುಕುತ್ತಿದ್ದ ನನ್ನ ಮನ ತುಂಬಿ ಬಂದಿತ್ತೆ?
ಇದ್ದರೂ ಇರಬಹುದು!

ಊರು ಬಿಟ್ಟ ಗೆಳೆಯನ ಬಗ್ಗೆ ಚರಮಗೀತೆ ಬರೆಯುವುದೇ? 
ಅಗಲುವುದೆಂದರೆ ಹಾಗೆಯೇ ತಾನೆ?
ಎಲ್ಲೋ ದೂರದಲ್ಲಿರುವ ಗೆಳೆಯ ಇನ್ನು ಅತ್ತತ್ತಲೇ ಅಲ್ಲವೆ?
ಹೋದವನು ಬರುತ್ತಾನೆ, ಬಂದು ಹೋಗುತ್ತಾನೆ; ಅದೆಲ್ಲ ಸರಿ,
ಅಂದು ಬಿಟ್ಟುಹೋದ ದುಗುಡ ಮಾತ್ರ ಹಾಗೇ ಇದೆ ಎಲ್ಲೋ ಒಳಗೆ…

ಅಂದು ಊರುಬಿಟ್ಟ ಗೆಳೆಯ ಕೊನೆಗೂ ಒಂದು ದಿನ ಬಂದ;
ಬಂದದ್ದು ವಿಷ ಕುಡಿದು ಜೀವ ಬಿಟ್ಟ ಸುದ್ದಿಯಾಗಿ... 
(೨೦೦೪-೨೦೧೨-೨೦೧೮.)

ಇದೀಗ ಮತ್ತೆ ಈ ಪದ್ಯ ನೋಡುತ್ತಾ, ನನ್ನ ಹಳೆಯ ಮೂಢನಂಬಿಕೆಯಂತೆ ತೀರಿಕೊಂಡವರ ಕೊನೆಯ ಮುಖ ನೋಡದಿದ್ದರೆ ಅವರು ಎಲ್ಲೋ ಇದ್ದಾರೆ ಅನ್ನಿಸತೊಡಗುತ್ತದೆ. ನನ್ನಲ್ಲಿ ಯಾವ ಕಹಿ ನೆನಪನ್ನೂ ಉಳಿಸದ ತಂಗಾಳಿಯಂಥ ಎನ್.ಕೆ.ಯ ಕಿಲಿಕಿಲಿ ನಗು ಹುಟ್ಟಿಸುವ ಎನರ್ಜಿಯಿಂದಾಗಿ ನನ್ನ ಲವಲವಿಕೆಯ ಮಾತುಕತೆ ಅವನೊಡನೆ ನಡೆಯುತ್ತಲೇ ಇರುತ್ತದೆ… ಈ ಅಂಕಣ ಆಗಸವೇರುವ ಹೊತ್ತಿಗೆ ಅಳುಕುತ್ತಲೇ ವಿಶ್ವನಾಥ್ ಮಾಡಿದ  ವ್ಯಕ್ತಿ-ಸಾಕ್ಷ್ಯ ಚಿತ್ರವನ್ನು ಅಲ್ಲಲ್ಲಿ  ನೋಡಿದೆ. ನಿಜಕ್ಕೂ ಮೂವಿಂಗ್...

 

blog
17 Aug 2025 ಕತೆ ಬರೆವ ಕಷ್ಟಗಳು

‘ಮಯೂರ’ದ ಉಪಸಂಪಾದಕರಾಗಿದ್ದ ಸಂದೀಪ ನಾಯಕ್ ಎಂಟು ವರ್ಷಗಳ ಕೆಳಗೆ, ‘ಕತೆ ಬರೆಯುವ ನಿಮ್ಮ ಅನುಭವದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕಳಿಸುತ್ತೇನೆ; ಉತ್ತರ ಕೊಡಿ’ ಎಂದರು. ಅವುಗಳಲ್ಲಿ ಕೆಲವು ಪ್ರಶ್ನೆಗಳು, ಉತ್ತರಗಳು ಇವತ್ತಿಗೂ -ಪ್ರಾಯಶಃ ನಿಮಗೂ-ಕೊಂಚ ಕುತೂಹಲ ಹುಟ್ಟಿಸುವಂತಿವೆ ಎನ್ನಿಸಿ ಕೆಲವನ್ನು ಆಯ್ದು ಇಲ್ಲಿ ಕೊಡುತ್ತೇನೆ. ಈ ಅಂಕಣ ಸಿದ್ಧಪಡಿಸುವ ದಿನ ಈ ಭಾಗಗಳನ್ನು ಎಡಿಟ್ ಮಾಡುತ್ತಾ ಹೊಳೆದ ಹೊಸ ಗ್ರಹಿಕೆಗಳನ್ನೂ ಇಲ್ಲಿ ಸೇರಿಸಿದ್ದೇನೆ.  

ಕತೆ ಬರೆಯುವ ಪ್ರಕ್ರಿಯೆ ಎಷ್ಟರಮಟ್ಟಿಗೆ ಪ್ರಜ್ಞಾಪೂರ್ವಕ? 

ನನ್ನ ಅನುಭವದಲ್ಲಿ ಕಥಾ ಬರವಣಿಗೆ ಪ್ರಜ್ಞಾಪೂರ್ವಕ ಹಾಗೂ ಅಪ್ರಜ್ಞಾಪೂರ್ವಕ- ಈ ಎರಡೂ ನೆಲೆಗಳಲ್ಲಿ ನಡೆಯುತ್ತಿರುತ್ತದೆ. ಕೆಲವೊಮ್ಮೆ ಕತೆಯ ವಸ್ತು, ಪಾತ್ರಗಳು ಹಾಗೂ ಕತೆಯೊಳಗಿನ ಬಿಕ್ಕಟ್ಟುಗಳು ನನ್ನ ಕತೆಯನ್ನು ಎಲ್ಲೋ ಕರೆದೊಯ್ದು ನಿಲ್ಲಿಸಿದಾಗ, ‘ಅರೆ! ಇಲ್ಲಿಗೆ ಹೇಗೆ ಬಂದೆ!’ ಎನ್ನಿಸಿ ಅಚ್ಚರಿಯಾಗುತ್ತದೆ. ಬೈಕ್, ಕಾರ್ ಡ್ರೈವ್ ಮಾಡುವಾಗ ಇಷ್ಟೊಂದು ದೂರ ಹೇಗೆ ಬಂದೆ ಎಂದು ಇದ್ದಕ್ಕಿದ್ದಂತೆ ಅನ್ನಿಸುವ ಹಾಗೆಯೇ ಇದು ಕೂಡ! ಈಗ ಈ ಕತೆಗಳನ್ನು ಹಿಂತಿರುಗಿ ನೋಡಿದರೆ, ನನ್ನ ಬಹುತೇಕ ಕತೆಗಳು ತಮ್ಮ ದಿಕ್ಕುಗಳನ್ನು ತಾವೇ ನಿರ್ಧರಿಸಿಕೊಂಡಂತಿವೆ ಹಾಗೂ ಪಾತ್ರಗಳು, ಘಟನೆಗಳು ತಮಗೆ ಇಷ್ಟ ಬಂದಂತೆ, ತಮ್ಮ ಆಂತರಿಕ ತರ್ಕಕ್ಕೆ ತಕ್ಕಂತೆ ಬೆಳೆದುಕೊಂಡಿವೆ ಎನ್ನಿಸುತ್ತದೆ. ನನ್ನ ಕೆಲವು ಕತೆಗಳ ಅಂತ್ಯವನ್ನು ಮಾತ್ರ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡೋ ಅಥವಾ ‘ಎಫೆಕ್ಟಿನ’ ದೃಷ್ಟಿಯಿಂದಲೋ ರೂಪಿಸಿರಲೂಬಹುದು ಎನ್ನಿಸುತ್ತದೆ! ಹಾಗೆಯೇ ಕತೆಯಲ್ಲೇ ವಿಕಾಸಗೊಳ್ಳುವ ಕಾಣ್ಕೆ, ಸತ್ಯ, ಪಾತ್ರ ಹಾಗೂ ಘಟನಾವಳಿಗಳ ಸೂಚನೆ-ಆದೇಶ-ಒತ್ತಾಯಗಳು ಕೂಡ ಕೆಲ ಬಗೆಯ ಅಂತ್ಯಗಳನ್ನು ನಿರ್ಧರಿಸಿರಬಹುದು. 

ನಿಮ್ಮ ಅನುಭವ ಹಾಗೂ ಓದು ನಿಮ್ಮ ಕತೆಗಳಿಗೆ ಹೇಗೆ ನೆರವಾಗಿದೆ? 

ಬರೆಯುವವನ ಅನುಭವ ಎನ್ನುವುದು ಯಾವಾಗಲೂ ಸೀಮಿತ ಅರ್ಥದಲ್ಲಿ ಅವನದ್ದೇ ಆದ ‘ಸ್ವಂತ’ ಅನುಭವವಾಗಿರಬೇಕಿಲ್ಲ. ಗೆಳೆಯ, ಗೆಳತಿಯರ ಕಷ್ಟ ಸುಖಗಳು, ಬದುಕಿನ ಸವಾಲುಗಳು, ಅವರ ಮಕ್ಕಳು ತಂದೊಡ್ಡುವ ಸಮಸ್ಯೆಗಳು, ಆಸ್ಪತ್ರೆಯ ಹಾಸಿಗೆಯ ಮೇಲೆ ಆಸೆ-ಆತಂಕಗಳ ನಡುವೆ ಮಲಗಿರುವ ಗೆಳೆಯ…ಎಲ್ಲವೂ ನನ್ನ ಅನುಭವಗಳೇ. 

ಕತೆಗಾರ, ಕತೆಗಾರ್ತಿಯರ ಪಾತ್ರಸೃಷ್ಟಿಯಲ್ಲಿ ಹೇಗೆ ಪರಕಾಯ ಪ್ರವೇಶ ನಡೆಯುತ್ತಿರುತ್ತದೋ ಹಾಗೆಯೇ ಇತರರ ಅನುಭವಗಳನ್ನು ತನ್ನದಾಗಿಸಿಕೊಂಡು ಆ ಅನುಭವಗಳನ್ನು ಶೋಧಿಸುವ ಕೆಲಸವೂ ನಡೆಯುತ್ತಿರುತ್ತದೆ. ಹೀಗೆ ಕತೆಗಾರನ ಅನುಭವಕ್ಕೆ ಬಂದ ಇತರರ ಸತ್ಯಗಳು ಕತೆಯಲ್ಲಿ ಇನ್ನೇನೋ ಆಗಿ ಮಾರ್ಪಾಡಾಗುತ್ತಿರುತ್ತವೆ. ಉದಾಹರಣೆಗೆ, ನೀವು ಒಂದು ಕತೆಯಲ್ಲಿ ಬಡಗಿಯೊಬ್ಬನ ಬದುಕಿನ ಹಾಗೂ ವ್ಯಕ್ತಿತ್ವದ ಏರಿಳಿತಗಳನ್ನು ಸೃಷ್ಟಿಸುತ್ತಿದ್ದರೆ, ಬಡಗಿಯ ಪಾತ್ರಕ್ಕೆ ಅಧಿಕೃತತೆ ತರಲು ಅವನ ವೃತ್ತಿಯ ಕೆಲವಾದರೂ ಬಾಹ್ಯ ವಿವರಗಳನ್ನು ಸೃಷ್ಟಿಸಲೆತ್ನಿಸುತ್ತೀರಿ; ಹಲವೊಮ್ಮೆ ನಿಮ್ಮ ಭಾವಗಳು ಅಥವಾ ನೀವು ಅವರಿವರಲ್ಲಿ ಕಂಡ ಅಥವಾ ನೀವು ಕಲ್ಪಿಸಿಕೊಂಡ ಭಾವಗಳು ಕೂಡ ಆ ಪಾತ್ರದೊಳಗೆ ಸೇರಿಕೊಳ್ಳುತ್ತವೆ. 

ಇವೆಲ್ಲ ಎಷ್ಟು ಸಂಕೀರ್ಣವೆಂದರೆ, ಇವನ್ನು ಥಿಯರೈಸ್ ಮಾಡಿ ಸ್ಪಷ್ಟವಾಗಿ ಹೇಳುವುದು ಕಷ್ಟ. ಒಂದು ಕತೆಯಲ್ಲಿ ನಾವು ಮಾಡಿದ ದುಡುಕುಗಳು ಮುಂದಿನ ಕತೆಯಲ್ಲಿ ಅಂಥ ದುಡುಕುಗಳನ್ನು ತಡೆಯಲು ನೆರವಾಗಬಹುದು! ಕತೆ ಬರೆಯುವುದು ಕೂಡ ಮಗುವೊಂದು ತೆವಳಿ, ದೊಗ್ಗಾಲು ಮಂಡಿಯಲ್ಲಿ ಚಲಿಸಿ, ಎದ್ದು ಬಿದ್ದು ನಡೆಯುವುದನ್ನು ಕಲಿತ ಹಾಗೆಯೇ. ಕೊನೆಗೊಮ್ಮೆ ಎದ್ದು ನಿಂತ ತಕ್ಷಣ ಮಗುವಿನ ಕೆಲಸ ಮುಗಿಯಲಿಲ್ಲ; ಹಾಗೆಯೇ ಕತೆಗಾರನ ಕೆಲಸ ಕೂಡ: ಏಳುವುದು, ಎಡವುವುದು, ಬೀಳುವುದು, ಮೇಲೇಳುವುದು, ನಡಿಗೆ ಕಲಿತ ಮೇಲೂ ನಡೆ ತಪ್ಪುವುದು… ಇವೆಲ್ಲ ಕಥಾ ಬರವಣಿಗೆಯಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ. 

ಇನ್ನು, ನಿಮ್ಮ ಪ್ರಶ್ನೆಯ ಎರಡನೆಯ ಭಾಗದಲ್ಲಿರುವ ‘ಓದು ನಿಮ್ಮ ಕತೆಗಳಿಗೆ ಹೇಗೆ ನೆರವಾಗಿದೆ?’ ಎಂಬ ಪ್ರಶ್ನೆಯನ್ನು ಇತರರ ಕತೆಗಳ ಹಾಗೂ ಇನ್ನಿತರ ಬಗೆಯ ಕೃತಿಗಳ ಓದು ನನ್ನ ಕಥಾಬರವಣಿಗೆಗೆ ಹೇಗೆ ನೆರವಾಗಿದೆ ಎನ್ನುವುದನ್ನು ಕುರಿತಾದದ್ದು ಎಂದು ಊಹಿಸುತ್ತೇನೆ: ಕನ್ನಡದಲ್ಲಿ ಕತೆ ಬರೆಯುವುದನ್ನು ಶಿಸ್ತುಬದ್ಧವಾಗಿ ಕಲಿಯುವ ಯಾವ ಕೋರ್ಸುಗಳೂ ಇಲ್ಲ. ಅಕಾಡೆಮಿಗಳು, ಕೆಲ ಬಗೆಯ ಸಂಸ್ಥೆಗಳು ನಡೆಸುವ ಕಥಾಕಮ್ಮಟಗಳು ತೀರಾ ‘ಅನ್‌ಪ್ರೊಫೆಶನಲ್’ ಅನ್ನಿಸುತ್ತವೆ. ನೊಬೆಲ್ ಪ್ರಶಸ್ತಿ ಪಡೆದ ಜಪಾನಿನ ಕಾದಂಬರಿಕಾರ ಇಷಿಗುರೊ ಅಂಥದೊಂದು ಕೋರ್ಸ್‌ನಲ್ಲಿ ಭಾಗವಹಿಸಿದ್ದನಂತೆ. ಇಂಥ ಕೋರ್ಸುಗಳು ಎಷ್ಟು ಉಪಯುಕ್ತವೋ ಗೊತ್ತಿಲ್ಲ. ಆದರೆ ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನಡೆಸಿದ ಇಂಥದೊಂದು ಕೋರ್ಸ್‌ನಲ್ಲಿ ಭಾಗವಹಿಸಿದ್ದ ಲೇಖಕನೊಬ್ಬ ಈ ಅನುಭವದ ಬಗ್ಗೆ ಉತ್ಸಾಹದಿಂದ ಬರೆದದ್ದು ನೆನಪಾಗುತ್ತದೆ. ಆದರೂ ಕತೆ ಬರೆಯುವ ಯಾವುದೇ ಲೇಖಕ ಲೇಖಕಿಯರಿಗೆ ಲೋಕ, ಬದುಕು, ತಮ್ಮ ಹಾಗೂ ಇತರರ ಅನುಭವಗಳು, ಸೃಜನಶೀಲತೆ ಹಾಗೂ ಇತರ ಲೇಖಕ, ಲೇಖಕಿಯರ ಕೃತಿಗಳೇ ಗುರುಗಳು. ಕನ್ನಡದ ಅಥವಾ ಇತರ ಭಾರತೀಯ ಭಾಷೆಗಳ ಅಥವಾ ಜಗತ್ತಿನ ಕತೆಗಾರ, ಕತೆಗಾರ್ತಿಯರನ್ನು ಹಾಗೂ ವಿಭಿನ್ನ ಪ್ರಕಾರಗಳ ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಅವೆಲ್ಲವೂ ಯಾವ್ಯಾವುದೋ ಪಾಠಗಳನ್ನು ಕಲಿಸುತ್ತಿರುತ್ತವೆ.

ಕತೆ ಬರೆಯುವ ವ್ಯಕ್ತಿಗೆ ಕೇವಲ ಇತರರ ಕತೆಗಳೇ ಮಾರ್ಗದರ್ಶನ ಮಾಡುತ್ತವೆಂದೇನಿಲ್ಲ; ನಾಟಕ, ಕಾವ್ಯದಂಥ ಇತರ ಪ್ರಕಾರಗಳು; ಸ್ತ್ರೀವಾದ, ಮಾರ್ಕ್ಸ್‌ವಾದ, ಲೋಹಿಯಾವಾದದಂಥ ಚಿಂತನೆಗಳು... ಇವೆಲ್ಲವೂ ಕಥಾ ಬರವಣಿಗೆಯ ಹಿನ್ನೆಲೆಯಲ್ಲಿದ್ದು ಪ್ರೇರಣೆ ನೀಡುತ್ತಿರುತ್ತವೆ. ಮುಸ್ಲಿಂ ಲೋಕದ ದುಗುಡಗಳನ್ನು, ಸೂಕ್ಷ್ಮಗಳನ್ನು ಪ್ರೇಮಚಂದ್ ಅಥವಾ ಇಸ್ಮತ್ ಚುಗ್ತಾಯಿಯವರ ಕತೆಗಳು ನನಗೆ ಹೇಳಿಕೊಟ್ಟಂತೆಯೇ, ಒಂದು ಕತೆಯ ಪಾತ್ರಗಳ ಜಾತಿಮೂಲ ವರ್ತನೆಗಳನ್ನು ಅರಿಯಲು ಅಂಬೇಡ್ಕರ್‌ವಾದ, ಲೋಹಿಯಾವಾದಗಳೂ ನೆರವಾಗುತ್ತಿರಬಹುದು. ಔದಾರ್ಯದ ಮಾನವೀಯ ಪಾತ್ರಗಳನ್ನು ಸೃಷ್ಟಿಸಲು ಗಾಂಧೀವಾದವೂ ನೆರವಾಗುತ್ತಿರಬಹುದು. ಇವೆಲ್ಲ ನಾವು ಉಸಿರಾಡುವ ಗಾಳಿಯಂತೆ ನಮಗರಿವಿಲ್ಲದೆಯೇ ನಮ್ಮ ಕಥಾಬರವಣಿಗೆಗೆ ಒದಗಿ ಬರುತ್ತಿರುತ್ತವೆ; ಆದರೆ ಕತೆಯೊಂದರಲ್ಲಿ ಇವೆಲ್ಲವೂ ಕಂಡೂ ಕಾಣದಂತೆ ಸಹಜವಾಗಿ ಬೆರೆಯದೆ, ಕೇವಲ ‘ವಾದ’ಗಳಂತೆ ವರ್ತಿಸತೊಡಗಿದರೆ ಕತೆಗೆ ಹೊಡೆತ ಬೀಳುತ್ತದೆ.

ಅನೇಕ ಸಲ ನಾವು ಗಮನಿಸುವ ಸಣ್ಣಪುಟ್ಟ ಅಂಶಗಳು ಹಾಗೂ ಸಾಧಾರಣ ವಿವರಗಳಿಂದಲೂ ಕಲಿಯುತ್ತಿರುತ್ತೇವೆ. ಮಾರ್ಕ್ವೆಝ್, ‘ಒಂದು ಬೆಕ್ಕು ಮೂಲೆಯಲ್ಲಿ ಹೇಗೆ ತಿರುಗುತ್ತದೆಂಬುದರ ಸ್ವಾರಸ್ಯವನ್ನು ಗ್ರಹಿಸುವ ರೀತಿಯನ್ನು ಹೆಮಿಂಗ್ವೇಯಿಂದ ಕಲಿಯಬೇಕು’ ಅನ್ನುತ್ತಾನೆ. ಕ್ಯಾಥರಿನ್ ಆ್ಯನ್ ಪೋರ್ಟರ್ ಬರೆದ ಕತೆಯೊಂದರಲ್ಲಿ ಹೆಂಗಸೊಬ್ಬಳು ಸಂತೆಯಲ್ಲಿ ಮಾರಲು ಹೊರಟ ಕೋಳಿಯ ಕಣ್ಣಿನ ವರ್ಣನೆ ಕಂಡಾಗ ಕತೆಯೊಂದರಲ್ಲಿ ಅಂಥ ಸಣ್ಣಪುಟ್ಟ ವಿವರಗಳ ಮಹತ್ವ ನನಗೆ ಅರಿವಾಗುತ್ತದೆ. ಆಫ್ರಿಕಾದ ಚಿನುವ ಅಚಿಬೆ, ಅಲೀಫಾ ರಿಫಾತ್; ಲಂಕೇಶರ ಗದ್ಯದ ಸೀಳಬಲ್ಲ ತೀವ್ರತೆ, ದೇವನೂರ್‍ ಕತೆಗಳ ವ್ಯವಧಾನ, ಅನಂತಮೂರ್ತಿಯವರ ಕತೆಗಳಲ್ಲಿ ವೈಚಾರಿಕತೆಯ ಮಿಶ್ರಣ, ತೇಜಸ್ವಿಯವರ ಲಘು ಅನುಕರಣೆ ಇವೆಲ್ಲವುಗಳಿಂದಲೂ ಕಲಿಯುತ್ತಿರುತ್ತೇನೆ. ಅಷ್ಟೇ ಅಲ್ಲ, ನನ್ನ ವಾರಿಗೆಯ ಮೊಗಳ್ಳಿ ಗಣೇಶರ ಕತೆಗಳ ಅಸಹಾಯಕ ಪಾತ್ರಗಳ ಲೋಕದಿಂದ; ಅಥವಾ ಹೊಸ ಕತೆಗಾರ ಗುರುಪ್ರಸಾದ್ ಕಂಟಲಗೆರೆ ಕತೆಯೊಂದರಲ್ಲಿ ಬಳಸಿದ ನಮ್ಮೂರಿನ ಸುತ್ತಲ ಭಾಷೆಯ ಬಳುಕಿನಿಂದಲೂ ಕಲಿಯುತ್ತಿರುತ್ತೇನೆ. ಹೀಗೆ ಒಬ್ಬರಲ್ಲ, ಹತ್ತಾರು ಲೇಖಕ, ಲೇಖಕಿಯರಿಂದ ನಾನು ದಿನನಿತ್ಯ ಕಲಿಯುತ್ತಿರುತ್ತೇನೆ…  
 
‘ಇದನ್ನು ಬೇರೆ ರೀತಿ ಬರೆಯಬಹುದಿತ್ತು’ ಎಂದು ಯಾವುದಾದರೂ ಕತೆಯನ್ನು ಬರೆದ ನಂತರ ನಿಮಗೆ ಅನ್ನಿಸಿದೆಯೆ?

ಯಾವುದಾದರೂ ಒಂದು ಕತೆಯನ್ನಲ್ಲ, ನನ್ನ ಅನೇಕ ಕತೆಗಳನ್ನು ಹಾಗೆ ಬೇರೆ ರೀತಿ ಬರೆಯಬೇಕಾಗಿತ್ತು, ಬರೆಯಬಹುದಿತ್ತು ಎನ್ನಿಸಿದೆ! ಪ್ರಕಟವಾಗುವ ಮೊದಲು ಒಂದಲ್ಲ ನೂರು ಸಲ ಎಡಿಟ್ ಮಾಡಿದ ಮೇಲೆ ಪ್ರಕಟಿಸಿದ ಕತೆಯನ್ನು ಮತ್ತೆ ಓದಲು ನಾನು ಹಿಂಜರಿಯುವುದು ಈ ಕಾರಣಕ್ಕಾಗಿಯೇ ಇರಬಹುದು! ಯಾವುದೋ ವರ್ಣನೆಯ ಹುಸಿತನ, ಇನ್ಯಾವುದೋ ಉತ್ಪ್ರೇಕ್ಷೆ, ಮತ್ತಾವುದೋ ವಾಕ್ಯ ರಚನೆಯ ಸಂದಿಗ್ಧತೆ, ಕೊಂಚ ಹೇರಿದಂತೆ ಕಾಣುವ ಮುಕ್ತಾಯ, ಪಾತ್ರಗಳಿಗೆ ನನ್ನಿಂದ ಆದ ಅನ್ಯಾಯ …ಹೀಗೆ ಹಲವಾರು ಸಮಸ್ಯೆಗಳು ನನಗೇ ಕಾಣತೊಡಗುತ್ತವೆ. ಅದರ ನಡುವೆಯೂ, ನನಗೆ ಸಾಧ್ಯವಾದಷ್ಟು ಪರಿಪೂರ್ಣವಾಗಿವೆ ಎನ್ನಿಸಿದ ಕತೆಗಳೂ ಇವೆ. ನನ್ನನ್ನು ಮೀರಿ ತಂತಾನೇ ಎತ್ತಲೋ ಹರಿದ ನನ್ನ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಇಂಥ ಕತೆಯಿರಬಹುದು. ಆದರೂ… ಒಬ್ಬ ಜನಪದ ಕತೆಗಾರ್ತಿಯಂತೆ ಇವತ್ತು ಹೇಳಿದ ಕತೆಯನ್ನು ನಾಳೆ ಬೇರೆ ಥರ ಹೇಳುವ ಭಾಗ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿದ್ದಿದೆ. ಇದು ಕತೆ ಬರೆಯುವ ಎಲ್ಲರ ಬಯಕೆಯೂ ಆಗಿರಬಹುದು… 

ತುಂಬಾ ಸಮಯದಿಂದ ಬರೆಯಬೇಕು ಎಂದುಕೊಂಡ, ಬರೆಯಲಾಗದ ಕತೆ, ಮುಟ್ಟಲಾಗದ ಅನುಭವ ನಿಮ್ಮ ಭಾವಕೋಶದಲ್ಲಿ ಇನ್ನೂ ಇದೆಯೇ?

ಅಂಥ ಸಾವಿರಾರು ಅನುಭವಗಳು ಹಾಗೂ ಹತ್ತಾರು ಅಪೂರ್ಣ ಕತೆಗಳು ನನ್ನ ನೋಟ್ ಬುಕ್ಕುಗಳಲ್ಲಿ, ಡೈರಿಗಳಲ್ಲಿ, ತಲೆಯಲ್ಲಿ ಇವೆ. ನನ್ನ ಯಾವುದೋ ಒಂದು ಕತೆಯ ಸುತ್ತ ಹಬ್ಬಿದ ವಿಚಿತ್ರ ಅನುಭವಗಳು ಕಳೆದ ಹತ್ತು ವರ್ಷಗಳಿಂದಲೂ ಕತೆಯಾಗಿ ಬರೆದುಕೊಳ್ಳುತ್ತಲೇ ಇವೆ.  ಸ್ತ್ರೀ ಪಾತ್ರಗಳು, ದಲಿತ ಪಾತ್ರಗಳು ನನ್ನ ಕತೆಯೊಳಗೆ ಸೃಷ್ಟಿಯಾಗಿದ್ದರೂ, ಈ ಎರಡೂ ಲೋಕಗಳ ಬಗ್ಗೆ ನಾನು ಗ್ರಹಿಸಬೇಕಾದ್ದು ಇನ್ನೂ ತುಂಬಾ ಇದೆ ಎನ್ನಿಸುತ್ತದೆ; ಹಾಗೆಯೇ ನಾನು ಮುಟ್ಟಬಯಸುವ, ಇನ್ನೂ ಮುಟ್ಟಲಾಗದಿರುವ ಇನ್ನೂ ಅನೇಕ ಲೋಕಗಳಿವೆ. ಅದರಲ್ಲೂ ಮಾನವ ವರ್ತನೆಗಳ ಸೂಕ್ಷ್ಮಾತಿಸೂಕ್ಷ್ಮ ರೂಪಗಳನ್ನು, ಮಾನವರ ನಡೆನುಡಿಗಳ ಹಿಂದಿರುವ ಅಸಲಿ ಮುಖವನ್ನು, ಮಾನವಚಿತ್ತದ ವೈಪರೀತ್ಯಗಳನ್ನು, ಸುಳ್ಳುಗಳನ್ನು, ಘನತೆಯನ್ನು ಕತೆಯಲ್ಲಿ ಹಿಡಿಯುವ ಕಷ್ಟ ನಿತ್ಯ ನನ್ನ ಅನುಭವಕ್ಕೆ ಬರುತ್ತಲೇ ಇರುತ್ತದೆ.  

ಕೊನೆಟಿಪ್ಪಣಿ: ಮೇಲಿನ ಪ್ಯಾರಾದಲ್ಲಿ ‘ಹತ್ತು ವರ್ಷಗಳಿಂದಲೂ ಬರೆದುಕೊಳ್ಳುತ್ತಲೇ ಇದೆ’ ಎಂದು ಸೂಚಿಸಿರುವ ಕತೆ ಮುಂದೆ ‘ಒಂದು ಬಹುಮಾನಿತ ಕತೆಯ ಸುತ್ತ’ ಎಂಬ ಕತೆಯಾಗಿ, ’ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು; ಅದಾದ ನಂತರವೂ ಕೊಂಚ ತಿದ್ದಿಸಿಕೊಂಡು, ಕಥಾನಂತರದ ಅನುಭವವನ್ನೂ ಬರೆಸಿಕೊಂಡು ನನ್ನ ‘ಕಥಾನಂತರ’ (ಪಲ್ಲವ ಪ್ರಕಾಶನ) ಕಥಾ ಸಂಕಲನದಲ್ಲಿ ಪ್ರಕಟವಾಯಿತು. ಕತೆಗಾರ-ಗೆಳೆಯ ಗೌತಮ್ ಜೋತ್ಸ್ನಾ ಕೈಯಲ್ಲಿ ’ಮಾರೀಚ’ ಎಂಬ ಚಿತ್ರಕತೆಯಾಗಿ, ಅದೇ ಹೆಸರಿನಲ್ಲಿ ಶಾನುಭಾಗ್ ಕೈಯಲ್ಲಿ ಸಿನಿಮಾ ಆಗಿ ಹೊರಬರುವ ಗಳಿಗೆಯನ್ನು ಎದುರು ನೋಡುತ್ತಿದೆ. ಆ ಕತೆಯೇ ಬೇರೆ. ಆ ಬಗ್ಗೆ ಮುಂದೊಮ್ಮೆ… 
 
 

blog
10 Aug 2025 ’ಕೀರಂ’ ಎಂಬ ಕೊನೆಯಿರದ ನಂಟು!

      
ಕಳೆದ ವಾರ ಗೆಳೆಯರೊಬ್ಬರು ಇದ್ದಕ್ಕಿದ್ದಂತೆ ಪ್ರೊಫೆಸರ್ ಕಿ.ರಂ. ನಾಗರಾಜರ ಫೋಟೋ ಸಮೇತ ನನ್ನ ‘ಕಾಮನಹುಣ್ಣಿಮೆ’ ಕಾದಂಬರಿಯ ಭಾಗವನ್ನು ತಮ್ಮ ಫೇಸ್‌ಬುಕ್ಕಿನಲ್ಲಿ ಪ್ರಕಟಿಸಿ, ನನಗೂ ಮೇಲ್ ಮಾಡಿದ್ದರು. ಆ ಭಾಗ ಕೀರಂ ನಾಗರಾಜು ಎಂಬ ಪಾತ್ರದ ಬಗ್ಗೆ ಇರುವುದರಿಂದ ಆ ಪಾತ್ರ ಕುರಿತಂತೆ ಕಾದಂಬರಿಯ ಎರಡು ಪ್ಯಾರಾಗಳನ್ನು ಇಲ್ಲಿ ಕೊಡುತ್ತೇನೆ:  

‘‘...ಮೈಸೂರಿನತ್ತ ಹೊರಡಲು ಮನಸ್ಸು ಮಾಡಿದ ಗಳಿಗೆಯಿಂದಲೂ ತನ್ನ ಜೀವನವೆಲ್ಲ ಹೆಚ್ಚೂಕಡಿಮೆ ಸ್ನೇಹದ ಬಲದಿಂದಲೇ ನಡೆದುಬಂದಿದೆಯೆಂಬ ಸತ್ಯ ಕಾಲೇಜಿನ ಒಂದು ಸಭೆಯಲ್ಲಿ ಕೂತಿದ್ದಾಗ ಚಂದ್ರನಿಗೆ ಇದ್ದಕ್ಕಿದ್ದಂತೆ ಹೊಳೆಯಿತು. ಅದು ಹೊಳೆದದ್ದು ಸಾಹಿತಿ ಕೀರಂ ನಾಗರಾಜು ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆ ಬಂದಿದ್ದ ದಿನ. ಕೀರಂ ನಾಗರಾಜು ಅವತ್ತು ಪಂಪ, ಕುಮಾರವ್ಯಾಸ ಎಂದೆಲ್ಲ ಮಾತಾಡುತ್ತಿದ್ದವರು, ಇದ್ದಕ್ಕಿದ್ದಂತೆ 'ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ...' ಎಂಬ ಅಕ್ಕನ ವಚನಕ್ಕೆ ಬಂದು ನಿಂತರು. ಅದೇ ಸಾಲನ್ನೇ ಇನ್ನೊಂದು ಸಲ ಹೇಳಿ, 'ಸ್ನೇಹ ಅಂದರೆ ಏನು ಗೊತ್ತೇನ್ರಿ?' ಎಂದು ಚಣ ಮಾತು ನಿಲ್ಲಿಸಿ, ಸೈಲೆಂಟಾಗಿ ಸುತ್ತಮುತ್ತ ನೋಡಿದರು; ಕನ್ನಡ ಮೇಷ್ಟ್ರರಾದಿಯಾಗಿ ಯಾರೂ ಇದಕ್ಕೆ ಉತ್ತರ ಹೇಳಲು ಬಾಯಿ ಬಿಡಲಿಲ್ಲ; ಆಮೇಲೆ ಅವರೇ, 'ಸ್ನೇಹ ಅಂದರೇ... ಅಂಟು ಅಂತ! ಗೊತ್ತೆನ್ರೀ!' ಎಂದು ನಗುತ್ತಾ ಕಣ್ಣು ಮಿಟುಕಿಸಿದರು! ಅವರ ಅಡೆತಡೆಯಿಲ್ಲದ ಮಾತು, ಕಣ್ಣ ಮಿಟುಕು, ಬಿಡುಬೀಸು ನಗು, ಕತ್ತಿನ ಕುಣಿತ, ಕೈಯ ಆಟ, ಯಕ್ಷಗಾನದ ವೇಷದವರಂತೆ ಎಣ್ಣೆ ಹಚ್ಚಿ ಹಿಂದಕ್ಕೆ ಬಾಚಿದ ಕೂದಲು... ಎಲ್ಲವೂ ಚಂದ್ರನ ಮನಸ್ಸಿನಲ್ಲಿ ಉಳಿದುಬಿಟ್ಟವು. 

‘‘ಅವತ್ತು ಸಂಜೆ ಚಂದ್ರ ‘ಸ್ನೇಹ ಎಂದರೆ ಅಂಟು’ ಅಂತ ಕೀರಂ ಹೇಳಿದ್ದ ಮಾತನ್ನು ಶಿವಣ್ಣನಿಗೆ ಹೇಳಿದಾಗ, ಅದು ಅವನಿಗೆ ತೀರಾ ಇಷ್ಟವಾಗಿ, ‘ಕರಕ್ಟು ಕಣಪ್ಪಾ, ಕರಕ್ಟಾಗೇಳವರೇ!’ ಎಂದು ಅದನ್ನು ಸಂಪೂರ್ಣವಾಗಿ ಒಪ್ಪಿದವನಂತೆ ಎರಡೆರಡು ಸಲ ಕತ್ತು ಹಾಕಿದ; ಅಲ್ಲೇ ನಿಂತಿದ್ದ ಲಾಲ್‌ಚಂದ್‌ಗೆ ಅದು ಪೂರ್ತಿ ಅರ್ಥವಾದಂತೆ ಕಾಣದಿದ್ದರೂ, ಅವನೂ ಅರ್ಥವಾದವನಂತೆ ಸುಮ್ಮನೆ ಕತ್ತು ಹಾಕಿದ್ದ.” (ಪು.೧೧೦)

ಈ ಸಲದ ಅಂಕಣದ ವಸ್ತುವಿನ ದೆಸೆಯಿಂದ ಸಂಭವಿಸಿದ ಈ ‘ಸ್ವ-ಕಾದಂಬರಿ ಮರ್ದನ’ಕ್ಕೆ ಕ್ಷಮೆಯಿರಲಿ! ಅವತ್ತು ‘ಕಾಮನ ಹುಣ್ಣಿಮೆ’ ಕಾದಂಬರಿಯ ಮೇಲಿನ ಪ್ಯಾರಾಗಳ ಭಾಗವನ್ನು ಪ್ರಕಟಿಸಿದ್ದ ಶ್ರೀಧರ ಏಕಲವ್ಯ ಅದರ ಜೊತೆಗೇ ಆ ಮೂಡಿಗೆ ತಕ್ಕ ಕೀರಂ ಫೊಟೋವನ್ನೂ ಪ್ರಕಟಿಸಿದ್ದರು. 

‘ಇವತ್ತು ಕೀರಂ ನೆನಪಿನ ದಿನವೇ?’ ಎಂದೆ.

‘ಇಲ್ಲ, ಫ್ರೆಂಡ್‌ಶಿಪ್ ಡೇ!’ ಎಂದರು ಶ್ರೀಧರ್.

ಹತ್ತು ಹನ್ನೆರಡು ವರ್ಷ ಹಾಗೂ ಹೀಗೂ ಬರೆದು, ೨೦೧೮ರಲ್ಲಿ ಪ್ರಕಟವಾದ ‘ಕಾಮನ ಹುಣ್ಣಿಮೆ’ (ಪಲ್ಲವ ಪ್ರಕಾಶನ, ರೂ. ೧೫೦) ಕಾದಂಬರಿಯಲ್ಲಿ ಕೀರಂ ಯಾಕೆ ಬಂದರು; ಹೇಗೆ ಬಂದರು…ಇದೆಲ್ಲ ‘ಅದಕೋ ಹರಿದತ್ತ ಹಾದಿ’ ಎಂದು ಹರಿದ ಆ ಕಾದಂಬರಿಯ ಆಟೋಟಕ್ಕೆ ಸಂಬಂಧಿಸಿದ್ದು. ಆದರೆ ಶ್ರೀಧರ್ ‘ಫ್ರೆಂಡ್‌ಶಿಪ್ ಡೇ’ ದಿನ ಕೀರಂ ಅವರನ್ನು ನೆನೆದಿದ್ದು, ಕೀರಂ ಸ್ನೇಹದ ಸವಿಯನ್ನು ಮತ್ತೆ ನೆನೆಯುವಂತೆ ನನ್ನನ್ನು ಪ್ರೇರೇಪಿಸಿತು. ನಾನು ಹತ್ತಿರದಿಂದ ಬಲ್ಲ ಕೆಲವು ಹಿರಿಯರಲ್ಲಿ ಕೀರಂ, ಸ್ನೇಹ ಎಂದರೆ ಫಲಾಪೇಕ್ಷೆಯಲ್ಲದೆ ಸುಮ್ಮನೆ ಕೊಡುವುದು ಎಂಬ ಅದ್ಭುತ ಜೀವನಮೌಲ್ಯವೊಂದನ್ನು ಬದುಕಿ ನನ್ನಂಥ ನೂರಾರು ಜನರಿಗೆ ತೋರಿಸಿದವರು. ಸಂಶೋಧಕನೊಬ್ಬನಿಗೆ ಬೇಕಾದ ಪುಸ್ತಕ; ವಿದ್ಯಾರ್ಥಿನಿಯೊಬ್ಬಳಿಗೆ ಬೇಕಾದ ಟೆಕ್ಸ್ಟ್ ಬುಕ್ಕಿನ ಜೆರಾಕ್ಸ್; ಕವಿಯೊಬ್ಬ ಓದಬೇಕೆಂದು ಹೇಳಿದ ಕವನ ಸಂಕಲನ; ಯಾವುದೋ ಕೆಲಸ ಮಾಡಿಕೊಟ್ಟವನಿಗೆ ಜೇಬಲ್ಲಿ ಸಿಕ್ಕಷ್ಟು ದುಡ್ಡು…ಹೀಗೆ ಎಲ್ಲವನ್ನೂ ಕೀರಂ ಸುಮ್ಮನೆ ತೆಗೆತೆಗೆದು ಕೊಡುತ್ತಿದ್ದರು; ಗೆಳೆಯರೊಡನೆ ಹೋಟೆಲ್, ಬಾರ್ ಎಲ್ಲಿಗೇ ಹೋಗಲಿ, ’ಬಿಲ್ ಬಾಣವ ತಾ ಪಾರ್ಥಾ’ ಎಂದು ಬಿಲ್ಲು ಕೊಡಲು ಪುಟ್ಟ ವಾಕ್‌ಸಮರವನ್ನೇ ನಡೆಸುತ್ತಿದ್ದರು! 

ಗಾಂಧಿ ಬಝಾರಿನ ಅಂಗಡಿಯಲ್ಲಿ ಒಂದು ಗಂಟೆ ನಿಂತು ಇಯಾನ್ ಕಾಟ್‌ನ ‘ಶೇಕ್‌ ಸ್ಪಿಯರ್ ಅವರ್ ಕಾಂಟೆಂಪರರಿ’ ಎಂಬ ಇಡೀ ಪುಸ್ತಕವನ್ನು ಜೆರಾಕ್ಸ್ ಮಾಡಿಸಿಕೊಟ್ಟ ಗಳಿಗೆ; ಸಿಮೋನ್ ವೇಲ್, ಹೋಮರ್, ಅಂಬರ್ತೋ ಇಕೋ…ಹೀಗೆ ಯಾವ ಪುಸ್ತಕ ಬೇಕಾದರೂ ಪುಸ್ತಕದ ರಾಶಿಯಿಂದ ಹೊರಗೆಳೆದು ನನಗೆ ಎತ್ತಿ ಕೊಟ್ಟ ಕೀರಂ ಕೈ; ಒಂದು ನಡುರಾತ್ರಿ ’ಪೋಸ್ಟ್‌ಮಾಡರ್ನಿಸಂ’ ಎಂಬ ಪುಸ್ತಕದ ಮೊದಲ ಪುಟದಲ್ಲಿ ಇಂಗ್ಲಿಷಿನಲ್ಲಿ ನನ್ನ ಹೆಸರು ಬರೆದು, ಕನ್ನಡದಲ್ಲಿ ತಮ್ಮ ಸಹಿ ಹಾಕಿ ಕೊಟ್ಟು ಕೆನ್ನೆಯರಳಿಸಿ ನನ್ನತ್ತ ನೋಡಿದ ರೀತಿ… ಇಂಥ ಅನೇಕ ಚಿತ್ರಗಳು ನನ್ನ ಕಣ್ಣೆದುರು ಮೂಡುತ್ತಲೇ ಇರುತ್ತವೆ.
ಕೊನೆಗೂ ಮನುಷ್ಯನೊಬ್ಬ ಭೌತಿಕವಾಗಿ ಅಳಿದ ಮೇಲೆ ಉಳಿಯುವುದು, ಅವನ ಅಥವಾ ಅವಳ ನೆನಪಾದ ತಕ್ಷಣ ಕೃತಜ್ಞತೆ ಹುಟ್ಟಿಸುವುದು ಅವರ generosity ಅಥವಾ ಔದಾರ್ಯ ಒಂದೇ ಇರಬಹುದೇ? ಇದು ಕೀರಂ ನೆನಪಾದಾಗ ಇನ್ನಷ್ಟು ನಿಜ ಎನ್ನಿಸುತ್ತಿರುತ್ತದೆ.

ಕಳೆದ ಹಲವು ವರ್ಷಗಳಂತೆ ಮೊನ್ನೆ ಆಗಸ್ಟ್ ೭ನೆಯ ತಾರೀಕು ಕೂಡ ನೂರಾರು ಜನ ಕಿರಿಯರು, ಹಿರಿಯರು ಪ್ರೊಫೆಸರ್ ಕಿ.ರಂ. ನಾಗರಾಜ್ (೫ ಡಿಸೆಂಬರ್ ೧೯೪೩- ೭ ಆಗಸ್ಟ್ ೨೦೧೦) ಅವರ ನೆನಪಿನ ಕಾರ್ಯಕ್ರಮ ಮಾಡಿದರು. ಮಾತು, ಹಾಡು, ಪದ್ಯ; ಎಲ್ಲೋ ಮರೆಯಲ್ಲಿ ಮದ್ಯಾಸಕ್ತರ ಪಾನ… ಇವೆಲ್ಲದರ ನಡುವೆ ಉತ್ಸಾಹ, ಸಂಭ್ರಮಗಳಿಂದ ಕೀರಂ ನೆನಪಿನ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುವ ಗೆಳೆಯರ ಬಗ್ಗೆ ಕೇಳಿದಾಗ, ಕೀರಂ ಅವರ ಸ್ನೇಹಮಯ, ಅರ್ಥಪೂರ್ಣ ಬದುಕಿನ ಬಗೆಗೆ ಕೃತಜ್ಞತೆ ಹುಟ್ಟುತ್ತದೆ. 

ಹೆಚ್ಚು ಬರೆಯದ ಕೀರಂ ತರಗತಿಗಳಲ್ಲಿ ಅಥವಾ ಮಾತುಕತೆಗಳಲ್ಲಿ, ಭಾಷಣಗಳಲ್ಲಿ ಕಲಿಸಿದ ಓದಿನ ಪಾಠಗಳು ಹೊಸ ಹೊಸ ತಲೆಮಾರುಗಳಲ್ಲಿ, ನಾನು ಈಚೆಗೆ ಕೇಳಿಸಿಕೊಂಡ ಗಂಗರಾಜು ತಟಗುಣಿ, ನೆಲ್ಲುಕುಂಟೆ ವೆಂಕಟೇಶ್, ಆಶಾದೇವಿ ಮೊದಲಾದವರು ಕೃತಿಗಳನ್ನು ನಿಕಟವಾಗಿ ಓದಿ ಮಾತಾಡುವ ರೀತಿಯಲ್ಲಿ ಮಿಂಚುತ್ತಿರುತ್ತವೆ; ಇದನ್ನು ಕಂಡಾಗ ಕನ್ನಡ ಸಾಹಿತ್ಯಕ ಸಂಸ್ಕೃತಿ ತನ್ನ ಸುತ್ತ ಕವಿದಿರುವ ಮೀಡಿಯೋಕ್ರಿಟಿಯನ್ನು ಮೀರಿ, ಅದರಾಚೆಗೆ ಹೊರಳುತ್ತಲೇ ಇರುತ್ತದೆ ಎಂಬ ಬಗ್ಗೆ ವಿಶ್ವಾಸ ಮೂಡತೊಡಗುತ್ತದೆ. ಸ್ವತಃ ನನ್ನ ಓದು, ಬರಹಗಳಿಗಂತೂ ಕೀರಂ ಏನೇನು ಮಾಡಿದ್ದಾರೆ ಎಂಬುದನ್ನು ಕುರಿತು ಆಗಾಗ್ಗೆ ನೆನೆಯುತ್ತಲೇ ಬಂದಿದ್ದೇನೆ. 

ಕೆಲ ಬಗೆಯ ಕವಿತೆಗಳನ್ನು ಈಗಾಗಲೇ ಓದಿದ್ದರೂ, ಅವನ್ನು ಕೀರಂ ನುಡಿದು, ನುಡಿಸಿದ ಮೇಲೆ ಅವು ನನ್ನ ಕಿವಿಯಲ್ಲಿ ಕಾಯಮ್ಮಾಗಿ ಕೂತು ಹೊಸ ಥರದ ಅರ್ಥಗಳನ್ನು ಹೊರಡಿಸಲೆತ್ನಿಸುತ್ತಲೇ ಇರುತ್ತವೆ. ಕೀರಂ ಒಂದು ರಾತ್ರಿ, ‘ನಮ್ಮೂರು ಚಂದವೋ ನಿಮ್ಮೂರು ಚಂದವೋ’ ಎನ್ನುತ್ತಾ, ‘ಊರು ಅಂದರೆ ತೊಡೆ ಅಂತ ಅರ್ಥಾನೂ ಇದೆಯಲ್ಲಾ ಸಾರ್!’ ಎಂದು ಮುಖ ಅರಳಿಸುತ್ತಾ ಹೇಳಿದ್ದು ಕಿವಿಯಲ್ಲಿ ಗುಂಯ್‌ಗುಡುತ್ತದೆ; ಅದಾದ ನಂತರ, ಕೆ.ಎಸ್.ನರಸಿಂಹಸ್ವಾಮಿಯವರ ಜನಪ್ರಿಯ ಹಾಡಿನ ಸಾಲನ್ನು ಬೇರೆ ರೀತಿಯಲ್ಲಿ ಓದಲು ಹೊರಟರೆ ಮನಸ್ಸು ಮುಷ್ಕರ ಹೂಡುತ್ತದೆ! ಹಿಂದೆ ಇದೇ ಅಂಕಣದಲ್ಲಿ ಉಲ್ಲೇಖಿಸಿದ ಕವಿ ಕೋಲರಿಜ್ ಮಾತು ನಿಮಗೆ ನೆನಪಿರಬಹುದು: ’ಕವಿತೆಯೊಂದನ್ನು ಓದುವ ನಮ್ಮ ಪಯಣವೇ ಆಹ್ಲಾದಕರವಾಗಿರಬೇಕು; ಅದು ಸರ್ಪದ ನಡಿಗೆಯಂತಿರಬೇಕು; ಅಲ್ಲಲ್ಲಿ ನಿಂತು ಆಸ್ವಾದಿಸಿ, ಮುನ್ನಡೆಯುವಂತೆ ಇರಬೇಕು; ಮುಂದೇನಾಗುತ್ತದೋ ಎಂಬ ಕುತೂಹಲದಿಂದ ಕವಿತೆಯನ್ನು ಓದಿದರೆ ಪ್ರಯೋಜನವಿಲ್ಲ…’ ಕೋಲರಿಜ್ ಹೇಳಿದ ರೀತಿಯ ವ್ಯವಧಾನ-ಧ್ಯಾನದ ಓದಿನ ರೀತಿ ನಾನು ಬಲ್ಲಂತೆ ಕೀರಂ ಬಿಟ್ಟರೆ, ಅನೇಕ ಒಳ್ಳೆಯ ಓದುಗ, ಓದುಗಿಯರಿಗೂ ಹೆಚ್ಚು ಸಾಧ್ಯವಾದಂತಿಲ್ಲ! ‘ದಶಕಗಳಿಂದ ಕವಿತೆ ಬರೆಯುತ್ತಿದ್ದೇನೆ’ ಎಂದುಕೊಂಡಿರುವ ನಾನು ಬಲ್ಲ ಕವಿ ಕವಯಿತ್ರಿಯರಲ್ಲೂ ಈ ವ್ಯವಧಾನ ಕಂಡಂತಿಲ್ಲ.

ಇದನ್ನೆಲ್ಲ ಬರೆಯುವಾಗ, ಈ ಬರಹದ ಶುರುವಿನಲ್ಲಿ ಸ್ನೇಹ ಕುರಿತು ಕೀರಂ ನೆನಪಿಸಿದ ಅಕ್ಕನ ವಚನದ ಉಪಮೆ, ಉಪಮಾನಗಳು ಮತ್ತೆ ನೆನಪಾಗುತ್ತದೆ; ಕೀರಂ ಕೂಡ ಹಾಗೇ ಅವರ ಪ್ರಿಯ ಕೃತಿಗಳ ಜೊತೆ ನಿರಂತರ ಸ್ನೇಹ ಅಥವಾ ಅಂಟಿನಲ್ಲಿ ಸಿಕ್ಕಿಕೊಂಡಿದ್ದವರೇ! ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ?’ ಎಂದು ಬೇಂದ್ರೆಯವರ ‘ಸಖೀಗೀತ’ ಕೇಳುತ್ತದೆ; ಕೀರಂ ನುಡಿಸುತ್ತಿದ್ದ ಈ ಕವಿಪ್ರತಿಮೆ ಕೊಂಚ ಪಲ್ಲಟಗೊಂಡು, ಕಾವ್ಯಪ್ರತಿಮೆಗಳ ಕಾಯಂ ಸಖ ಕೀರಂ ಕುರಿತ ಈ ಬರಹಕ್ಕೆ ತಲೆಬರಹವಾಗಿಬಿಟ್ಟಿತು!

ಹೀಗೆ ತಲೆಬರಹಗಳಿಗೆ ರೂಪಕಗಳನ್ನು ಹುಡುಕುವ ಅಥವಾ ಅಂಥ ರೂಪಕಗಳು ತಂತಾವೇ ಒದಗಿ ಬರುವ ಸೋಜಿಗದ ಕಲೆ ಕೂಡ ನನ್ನಂಥವರಿಗೆ ಕೀರಂ ಥರದವರ ಸ್ನೇಹದ ದೆಸೆಯಿಂದಲೂ ಬಂದಿರಬಹುದೇನೋ! 

ಕೀರಂ ಸ್ನೇಹ, ನಂಟು ಕುರಿತ ಅಪರೂಪದ ಅನುಭವಗಳು ನಿಮ್ಮಲ್ಲೂ ಇದ್ದರೆ, ಸಾಧ್ಯವಾದರೆ, ಈ ವೆಬ್‌ಸೈಟಿನ ಕಾಮೆಂಟ್ ಸೆಕ್ಷನ್ನಿಗೋ ಅಥವಾ ನನ್ನ ಇ-ಮೇಲ್‌ಗೋ (natarajhuliyar@gmail.com) ಬರೆಯಿರಿ!      



Latest Video


Nataraj Huliyar Official
YouTube Channel

SUBSCRIBE