Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
23 Feb 2025 ಸೊಫೋಕ್ಲಿಸ್, ಕುವೆಂಪು, ವ್ಯಾಸ: ಸ್ತ್ರೀವಾದಿ ನೋಟ

ಕೆಲವು ವರ್ಷಗಳ ಕೆಳಗೆ ‘ಮಿಥ್’ ಎಂಬ ಸ್ತ್ರೀವಾದಿ ಪದ್ಯ ಓದಿದ ಮೇಲೆ ಸೊಫೋಕ್ಲಿಸ್‌ನ 'ಈಡಿಪಸ್’ ದುರಂತ ನಾಟಕವನ್ನು ನಾನು ಓದುವ ರೀತಿ ಕೊಂಚ ಬದಲಾಯಿತು. ಆ ಪದ್ಯ ಓದುವ ಮೊದಲು ಗ್ರೀಕ್ ಸಂಸ್ಕೃತಿಯ ಈಡಿಪಸ್ ಪುರಾಣಕತೆಯ ಸಾರಾಂಶ: 

ಥೀಬ್ಸ್ ರಾಜ್ಯದ ರಾಜ ಲಾಯಿಸ್-ರಾಣಿ ಜೊಕಾಸ್ತರಿಗೆ ಹುಟ್ಟಿದ ಮಗು 'ತನ್ನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತದೆ’ ಎಂಬ ಭೀಕರ ಭವಿಷ್ಯವಾಣಿ ಕೇಳಿ ಬಂತು. ತಂದೆ, ತಾಯಿ ಈ ಮಗುವನ್ನು ಕೊನೆಗಾಣಿಸಲು ಸೇವಕನಿಗೆ ಹೇಳಿದರು. ಸೇವಕ ಆ ನತದೃಷ್ಟ ಮಗುವನ್ನು ಕೊಲ್ಲಲಾಗದೆ ಬೆಟ್ಟದಲ್ಲಿ ಬಿಟ್ಟು ಬಂದ. ಆ ಮಗು ಕಾರಿಂಥ್ ಪ್ರದೇಶದ ಕುರುಬನೊಬ್ಬನಿಗೆ ಸಿಕ್ಕಿತು. ಆತ ಆ ಮಗುವನ್ನು ತನ್ನ ರಾಜ್ಯದ ದೊರೆಗೆ ಕೊಟ್ಟ. ಮಕ್ಕಳಿಲ್ಲದ  ದೊರೆ ಈಡಿಪಸ್‌ನನ್ನು ಬೆಳೆಸಿದ. ತರುಣ ಈಡಿಪಸ್‌ಗೆ ಡೆಲ್ಫಿಯ ವಾಣಿಯಿಂದ ತನ್ನ ಬಗೆಗಿನ ಹಳೆಯ ಭವಿಷ್ಯವಾಣಿ ತಿಳಿಯಿತು. ಆದರೆ ಆ ಹಳೆಯ ಭವಿಷ್ಯವಾಣಿಯ ಕಾಲದ ತಂದೆ ತಾಯಿಯರ ಬಗ್ಗೆ ಅರಿವಿರದ ಈಡಿಪಸ್ ಈಗಿನ ತಂದೆ ತಾಯಿಯರಿಂದ ತಪ್ಪಿಸಿಕೊಳ್ಳಲು ದೇಶಾಂತರ ಹೊರಟ. 

ದಾರಿಯಲ್ಲಿ ಈಡಿಪಸ್ ನಡುರಾತ್ರಿಯಲ್ಲಿ ತನಗೆ ಅಡ್ಡವಾದವರನ್ನು ಕೊಂದು ಕುದುರೆಯನ್ನು ಮುಂದಕ್ಕೆ ಓಡಿಸುತ್ತಾ ಯಾವುದೋ ರಾಜ್ಯಕ್ಕೆ ಬಂದ. ರಾಜನಿಲ್ಲದ ಆ ರಾಜ್ಯದಲ್ಲಿ ಸ್ಫಿಂಕ್ಸ್ ಮಾರಿ ಒಂದು ಒಗಟಿಗೆ ಉತ್ತರ ಕೊಡುವಂತೆ ಜನರನ್ನು ಪೀಡಿಸುತ್ತಿದ್ದಳು. ಉತ್ತರ ಕೊಡದವರನ್ನು ಹಿಂಸಿಸುತ್ತಿದ್ದಳು. ಈಡಿಪಸ್ ಆಕೆಯ ಒಗಟಿಗೆ ಉತ್ತರ ಕೊಟ್ಟ. ರಾಜ್ಯದ ಜನ ಸ್ಫಿಂಕ್ಸ್ ಹಾವಳಿಯಿಂದ ಮುಕ್ತರಾದರು. ಆ ರಾಜ್ಯದ ದೊರೆ ಸತ್ತಿದ್ದರಿಂದ ಒಗಟು ಬಿಡಿಸಿ, ತಮ್ಮನ್ನು ರಕ್ಷಿಸಿದ ಜಾಣ ಈಡಿಪಸ್‌ನನ್ನೇ ಜನರು ರಾಜನನ್ನಾಗಿ ಆರಿಸಿದರು. ಅಲ್ಲಿನ ಪದ್ಧತಿಯಂತೆ ಅಳಿದ ರಾಜನ ರಾಣಿಯನ್ನು ಈಡಿಪಸ್ ಮದುವೆಯಾದ. ಮಕ್ಕಳನ್ನು ಪಡೆದ. 

ಹಲವು ವರ್ಷಗಳ ನಂತರ ರಾಜ್ಯಕ್ಕೆ ಮತ್ತೆ ಕಷ್ಟ ಎದುರಾಯಿತು. ‘ರಾಜ್ಯದ ಹಳೆಯ ದೊರೆ ಲಾಯಿಸ್‌ನನ್ನು ಕೊಂದವನು ಈ ರಾಜ್ಯದಲ್ಲಿದ್ದಾನೆ; ಅವನಿಂದಲೇ ಈ ರಾಜ್ಯಕ್ಕೆ ಕುತ್ತು ಬಂದಿದೆ’ ಎಂದು ಡೆಲ್ಫಿಯ ವಾಣಿ ಹೇಳಿತು. ಈಡಿಪಸ್ ವಿಚಾರಣೆ ನಡೆಸತೊಡಗಿದ. ಅವತ್ತು ನಡುರಾತ್ರಿ ತಾನು ಕೊಂದವನು ಈ ರಾಜ್ಯದ ದೊರೆ ಲಾಯಿಸ್; ಆತ ತನ್ನ ನಿಜವಾದ ತಂದೆ; ಮದುವೆಯಾದ ರಾಣಿ ತನ್ನ ತಾಯಿ ಎಂಬುದು ಈಡಿಪಸ್‌ಗೆ ಗೊತ್ತಾಯಿತು. ಜೊಕಾಸ್ತ ಆತ್ಮಹತ್ಯೆ ಮಾಡಿಕೊಂಡಳು. ಈಡಿಪಸ್ ಜೊಕಾಸ್ತಳ ಉಡುಗೆಯಲ್ಲಿದ್ದ ಆಭರಣದಿಂದ ಕಣ್ಣನ್ನು ಇರಿದುಕೊಂಡು ತನ್ನ ತಪ್ಪಿಗೆ ಶಿಕ್ಷೆಯಂಬಂತೆ ದೇಶಾಂತರ ಹೊರಟ.    

‘ತನ್ನದಲ್ಲದ ತಪ್ಪಿಗಾಗಿ ಮನುಷ್ಯ ಏಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ?’ ಎಂಬ ಎಂದೂ ಉತ್ತರ ಸಿಗದ ಪ್ರಶ್ನೆಯನ್ನು ಮುಂದಿಟ್ಟ ಜಗತ್ತಿನ ಶ್ರೇಷ್ಠ ದುರಂತನಾಟಕವಾದ ’ಈಡಿಪಸ್’ ನಾಟಕವನ್ನು ಲಂಕೇಶ್ ತೀವ್ರವಾಗಿ ಕನ್ನಡಿಸಿದರು. ಈಡಿಪಸ್ ಪುರಾಣ ಅಥವಾ ನಾಟಕ ಓದಿ ಅಮೆರಿಕದ ಸ್ತ್ರೀವಾದಿ ಕವಯಿತ್ರಿ Muriel Rukeyser ಬರೆದ ’ಮಿಥ್’ ಪದ್ಯದ ಸರಳ ಕನ್ನಡಾನುವಾದ:

ಕಾಲ ಉರುಳಿತು.
ಮುದುಕ ಈಡಿಪಸ್, ಕುರುಡ ಈಡಿಪಸ್, 
ಹಾದಿಗುಂಟ ನಡೆಯುತ್ತಿದ್ದ. 

ಮೂಗಿಗೆ ಪರಿಚಿತ ಗಂಧ ಮುತ್ತಿತು. 
ಎದುರಾದವಳು ಸ್ಫಿಂಕ್ಸ್. 

ಈಡಿಪಸ್ ಕೇಳಿದ: 'ನಿನಗೊಂದು ಪ್ರಶ್ನೆ ಕೇಳಲೆ? 
ನಾನು ನನ್ನ ತಾಯಿಯನ್ನೇಕೆ ಗುರುತಿಸಲಿಲ್ಲ?’  

'ನೀ ನನಗೆ ಕೊಟ್ಟ ಉತ್ತರ ತಪ್ಪಾಗಿತ್ತು’ ಎಂದಳು ಸ್ಫಿಂಕ್ಸ್.
’ಆದರೆ ಅದರಿಂದ ತಾನೇ ಎಲ್ಲವೂ ಆಗಿದ್ದು?’ ಎಂದ ಈಡಿಪಸ್.

ಅದಕ್ಕೆ ಸ್ಫಿಂಕ್ಸ್ ಕೊಟ್ಟ ಉತ್ತರ: 
'ಇಲ್ಲ. ಬೆಳಗ್ಗೆ ನಾಲ್ಕು ಕಾಲಿನ ಮೇಲೆ
ಮಧ್ಯಾಹ್ನ ಎರಡು ಕಾಲಿನ ಮೇಲೆ
ಮುಸ್ಸಂಜೆ ಮೂರು ಕಾಲಿನ ಮೇಲೆ 
ನಡೆಯುವುದು ಯಾವುದು?’ 
ಎಂದು ನಾನು ಕೇಳಿದೆ;
'ಮನುಷ್ಯ’ ಎಂದು ನೀನು ಹೇಳಿದೆ, 
ಆದರೆ ಹೆಣ್ಣಿನ ಬಗ್ಗೆ ನೀನು ಏನೂ ಹೇಳಲಿಲ್ಲ’.

'ಮನುಷ್ಯಾ… ಅಂದರೆ…ಅದರಲ್ಲಿ ಹೆಣ್ಣೂ ಸೇರಿರುತ್ತೆ ತಾನೆ?
ಇದು ಎಲ್ಲರಿಗೂ ಗೊತ್ತು’ ಎಂದ ಈಡಿಪಸ್.

'ಹಾಗಂತ ನೀನಂದುಕೊಂಡಿದ್ದೀಯ, ಅಷ್ಟೆ’ ಎಂದಳು ಸ್ಫಿಂಕ್ಸ್.

ಮ್ಯುರಿಯೆಲ್ ಪದ್ಯ ಅಲ್ಲಿಗೆ ಮುಗಿಯುತ್ತದೆ. ಶ್ರೇಷ್ಠ ಗ್ರೀಕ್ ದುರಂತಕಾರರಲ್ಲಿ ಒಬ್ಬನಾದ ಸೊಫೋಕ್ಲಿಸ್ ಗ್ರೀಕ್ ಜನಮಾನಸ ರೂಪಿಸಿದ್ದ ಈಡಿಪಸ್ ಪುರಾಣವನ್ನು ಎರಡೂವರೆ ಸಾವಿರ ವರ್ಷಗಳ ಕೆಳಗೆ ದುರಂತ ನಾಟಕವಾಗಿಸಿದ. ಆದರೆ ಈಡಿಪಸ್ ಅವತ್ತು ಸ್ಫಿಂಕ್ಸ್ ಕೇಳಿದ ಒಗಟಿಗೆ ಕೊಟ್ಟ ಸರ್ವಸಾಮಾನ್ಯ ಉತ್ತರ `ಮ್ಯಾನ್’ ಎಂಬುದು ಪುರುಷಪ್ರಧಾನತೆಯನ್ನೇ ಸೂಚಿಸುವ ಉತ್ತರವಾಗಿತ್ತು ಎಂಬುದು ಪ್ರಾಚೀನನಾದ ಸೊಫೋಕ್ಲಿಸ್‌ಗಿರಲಿ, ಅವನ ನಾಟಕವನ್ನು ಅನುವಾದಿಸಿದ ಆಧುನಿಕ ಲಂಕೇಶರಿಗೂ ಹೊಳೆಯುವುದು ಕಷ್ಟವಿತ್ತು.  ಸ್ತ್ರೀವಾದಿಗಳು ನಾವು ಬಳಸುವ ಭಾಷೆಯಲ್ಲೇ ಹುದುಗಿರುವ ಪುರುಷ ಯಜಮಾನಿಕೆಯನ್ನು ಗುರುತಿಸಿದ ನಂತರ ಈ ಸೂಕ್ಷ್ಮಗಳು ಲೇಖಕರಿಗೂ, ಲೇಖಕಿಯರಿಗೂ ಗೊತ್ತಾಗತೊಡಗಿದವು.   

ಇದಕ್ಕಿಂತ ಮೊದಲು ಇಂಥ ಸೂಕ್ಷ್ಮಗಳು ಶ್ರೇಷ್ಠ ಲೇಖಕರಿಗೂ ಹೊಳೆಯುವುದು ಕಷ್ಟವಿತ್ತು. ನಾನು ಸ್ತ್ರೀವಾದವನ್ನು ತಕ್ಕಮಟ್ಟಿಗೆ ಓದಿ, ಪಾಠ ಮಾಡುತ್ತಿರುವಾಗ ಸ್ತ್ರೀವಾದಿ ನೋಟ ಕವಿತೆಯೊಂದರ ಬಗ್ಗೆ ಒಂದು ಪ್ರಶ್ನೆಯನ್ನು ಪ್ರಚೋದಿಸಿತು: ಕರ್ನಾಟಕದ ಏಕೀಕರಣದ ಪರವಾಗಿದ್ದ ಕುವೆಂಪು ಅವರಿಗೆ ಸರ್ಕಾರ ನೊಟೀಸ್ ಕೊಟ್ಟಿತ್ತು; ಕುವೆಂಪು ಅದಕ್ಕೆ ಉತ್ತರವಾಗಿ ತಮ್ಮ ನಿಲುವನ್ನು ದಿಟ್ಟವಾಗಿ ಪ್ರತಿಪಾದಿಸಿ ಬರೆದ 'ಅಖಂಡ ಕರ್ಣಾಟಕ!’ ಕವಿತೆಯ ಈ ಸಾಲುಗಳು ಪ್ರಖ್ಯಾತವಾಗಿವೆ:

ನೃಪತುಂಗನೆ ಚಕ್ರವರ್‍ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್‍ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ,
ತನಗೆ ರುಚಿರ ಕುಂಡಲ!

ಈ ಭಾಗವನ್ನು ಮತ್ತೆ ಓದುವಾಗ, ‘ಅರೆರೆ! ಪಂಪ ಮುಖ್ಯಮಂತ್ರಿಯಾಗಿರುವ ಅಖಂಡ ಕರ್ನಾಟಕದ ಸಾಂಸ್ಕೃತಿಕ ಸಚಿವ ಮಂಡಲದಲ್ಲಿ ಬರೇ ಪುರುಷ ಕವಿಗಳೇ ಇದ್ದಾರಲ್ಲ! ಕನ್ನಡದ ಮೊದಲ ಭಾವಗೀತಕಾರ್ತಿ ಅಕ್ಕಮಹಾದೇವಿಗೂ ಸಚಿವೆಯ ಸ್ಥಾನವಿಲ್ಲವಲ್ಲ!’ ಎನ್ನಿಸಿದ್ದಕ್ಕೆ ಸ್ತ್ರೀವಾದಿ ತರಬೇತಿಯೂ ಕಾರಣವಾಗಿತ್ತು. ಇವೆಲ್ಲ ತುಂಟ ಪ್ರಶ್ನೆಗಳಾದರೂ ಬರೆವವರು ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಒಳ್ಳೆಯದು.

ಆ ಕಾಲದಲ್ಲೇ ಯಾರಾದರೂ ಈ ಪ್ರಶ್ನೆಯನ್ನು ಕುವೆಂಪು ಅವರ ಎದುರಿಗಿಟ್ಟಿದ್ದರೆ ಅವರಿಗೂ ಇದು ಹೊಳೆಯದೇ ಹೋಗುತ್ತಿರಲಿಲ್ಲ. ಕುವೆಂಪು ವಿದ್ಯಾರ್ಥಿ ದೆಸೆಯಲ್ಲೇ ಬರೆದ ’ಜಯಹೇ  ಕರ್ನಾಟಕ ಮಾತೆ’ ಕವಿತೆಯಲ್ಲಿ 'ಬಸವೇಶ್ವರರಿಹ ದಿವ್ಯಾರಣ್ಯ’ ಎಂದಿದೆಯೇ ಹೊರತು, ಅಲ್ಲಿ ಮಧ್ವಾಚಾರ್ಯರ ಹೆಸರಿರಲಿಲ್ಲ. ಕೆಲವರು ಈ ಹೆಸರೂ ಬೇಕು ಎಂದು ಗೋಗರೆದ ಮೇಲೆ ’ಹಾಕ್ಕೊಂಡು ಹಾಳಾಗೋಗಿ’ ಎಂದ ಕುವೆಂಪು ರೇಗಿದ್ದನ್ನು ಕುರಿತು ಪೂರ್ಣಚಂದ್ರ ತೇಜಸ್ವಿ ಮುಂದೊಮ್ಮೆ ಬರೆದರು.

ಕವಿತೆಯೊಂದು ರಚನೆಯಾದ ಮೇಲೆ ಅದರಲ್ಲಿ ಏನೋ ಮತ್ತೊಂದನ್ನು ಕೃತಕವಾಗಿ ಸೇರಿಸುವುದು ತೀರಾ ಕಷ್ಟ ಹಾಗೂ ಅಸಹಜ ಎಂಬುದು ಎಲ್ಲ ಲೇಖಕಿಯರಿಗೂ, ಲೇಖಕರಿಗೂ ಗೊತ್ತಿರುತ್ತದೆ. ಹಾಗೆ ಸೇರಿಸುವುದು ಈಗಾಗಲೇ ಕಟ್ಟಿದ ಕಟ್ಟಡದೊಳಗೆ ಮತ್ತೇನನ್ನೋ ತುರುಕುವಷ್ಟೇ ಕೃತಕವಾಗಿರುತ್ತದೆ. ಆದರೂ, ಒಂದು ಸಂಸ್ಕೃತಿಯಲ್ಲಿ ಶತಮಾನ-ಸಹಸ್ರಮಾನಗಳ ಲಿಂಗರಾಜಕಾರಣದಿಂದಾಗಿ ಭಾಷೆಯಲ್ಲೇ ಅದೃಶ್ಯವಾಗುವ ಮಹಿಳೆಯ ಬಗ್ಗೆ ಈ ಥರದ ಪ್ರಶ್ನೆಯನ್ನು ಲೇಖಕರು ಆಗಾಗ್ಗೆ ಕೇಳಿಕೊಳ್ಳುವುದು, ಮುಂದಿನ ಬರಹಗಳಲ್ಲಾದರೂ ಉತ್ತರ ಹುಡುಕಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ.

ಈ ಹಿನ್ನೆಲೆಯಲ್ಲಿ ಸೊಫೊಕ್ಲಿಸ್, ಕುವೆಂಪು ಥರದ ಜೀನಿಯಸ್‌ಗಳ ಎದುರು ಸ್ತ್ರೀವಾದ ಈ ಥರದ ಪ್ರಶ್ನೆಯನ್ನಿಟ್ಟಿದ್ದರೆ ಅದು ನಿಜಕ್ಕೂ ಅವರಿಗೆ ಮನವರಿಕೆಯಾಗಿ ಮುಂದಿನ ಆವೃತ್ತಿಯಲ್ಲಿ ತಿದ್ದಿಕೊಂಡಿರುತ್ತಿದ್ದರು ಎಂಬುದು ನನ್ನ ಊಹೆ. ಕಾರಣ ಸ್ವಂತದ ಹಾಗೂ ಸಂಸ್ಕೃತಿಯ ಪೂರ್ವಗ್ರಹ, ಹಿಡಿತಗಳನ್ನು ಮೀರಿ ನೋಡಬಲ್ಲ ಶಕ್ತಿ ಮಹಾಪ್ರತಿಭೆ ಅಥವಾ ಜೀನಿಯಸ್‌ಗೆ ಇರುತ್ತದೆ ಎಂಬುದು ನನ್ನ ನಂಬಿಕೆ. ಸಂಪೂರ್ಣ ಪುರುಷಯಜಮಾನಿಕೆಯ ಕಾಲದಲ್ಲಿ ಬಂದ ವ್ಯಾಸನ ಮಹಾಭಾರತದಲ್ಲೂ ಆ ಯಜಮಾನಿಕೆಯನ್ನು ಪ್ರಶ್ನಿಸುವ ದ್ರೌಪದಿಯ ಪಾತ್ರದ ಬಗ್ಗೆ 'ದ್ರೌಪದಿಯೋ? ಸಾವಿತ್ರಿಯೋ?’ ಎಂಬ ಲೇಖನದಲ್ಲಿ ಲೋಹಿಯಾ ಬರೆಯುತ್ತಾರೆ. ಈ ಬರಹ 'ಉತ್ತರ ದಕ್ಷಿಣ’ ಎಂಬ ಲೋಹಿಯಾ ಬರಹಗಳ ಸಂಪುಟ-೨ರಲ್ಲಿದೆ.

ಸಾವಿತ್ರಿ ಹಾಗೂ ದ್ರೌಪದಿಯರ ನಡುವೆ ಆಯ್ಕೆ ಬಂದಾಗ, ದ್ರೌಪದಿ ನನ್ನ ಆಯ್ಕೆ ಎನ್ನುವ ಲೋಹಿಯಾ, ದ್ರೌಪದಿಯ ಶಕ್ತಿಯ ಬಗ್ಗೆ ಬರೆಯುವ ಮಾತುಗಳು:
‘ಸುಮಾರು ನಲ್ವತ್ತು, ಐವತ್ತು ವಿಚಾರಗಳನ್ನು ಕುರಿತು ದ್ರೌಪದಿ ನಡೆಸುವ ವಾಗ್ವಾದ, ಮಾತುಕತೆಗಳಿವೆ… ದ್ರೌಪದಿಯಂತೆ ಇಷ್ಟೆಲ್ಲ ವಿಚಾರಗಳ ಮೇಲೆ ವಾಗ್ವಾದ ಮಾಡಿರುವ ಮಹಿಳೆ ಇನ್ನೊಬ್ಬಳಿಲ್ಲ…ಪ್ರಪಂಚದ ಯಾವುದೇ ದೇಶದ, ಯಾವುದೇ ಕಾಲದ ಯಾವೊಬ್ಬ ಮಹಿಳೆಯೂ ಅರಿವಿನಲ್ಲಿ, ತರ್ಕದಲ್ಲಿ, ಸೂಕ್ಷ್ಮದಲ್ಲಿ, ಧೈರ್ಯದಲ್ಲಿ ದ್ರೌಪದಿಯ ಥರ ಇರುವುದು ಕಾಣುವುದಿಲ್ಲ. ಇವಳಷ್ಟು ಜ್ಞಾನಸಂಪನ್ನಳಾದ ಇನ್ನೊಬ್ಬ ಮಹಿಳೆಯಿಲ್ಲ. ತನ್ನ ಕಾಲದ ಪ್ರತಿ ಗಂಡಸನ್ನೂ ದ್ರೌಪದಿ ಸೂಕ್ಷ್ಮವಾದ ಮಾತುಕತೆಯಲ್ಲಿ ಸೋಲಿಸಿದಳು. ಅವಳು ಎಂಥ ಜ್ಞಾನಿ ಹಾಗೂ ತೀಕ್ಷ್ಣಮತಿಯೆಂದರೆ, ಅವಳ ಮುಂದೆ ಆ ಕಾಲದ ಯಾವ ಗಂಡೂ ಸಹ ನಿಲ್ಲಲಾಗುತ್ತಿರಲಿಲ್ಲ...’

ದ್ರೌಪದಿಯ ಪ್ರಖರತೆಯನ್ನು ಸೂಚಿಸುವ ಪ್ರಸಂಗವೊಂದನ್ನು ಲೋಹಿಯಾ ಉಲ್ಲೇಖಿಸುತ್ತಾರೆ: ‘ಸಾವಿನ ಮಡಿಲಲ್ಲಿದ್ದ ಭೀಷ್ಮಾಚಾರ್ಯರು ರಾಜನೀತಿಯನ್ನು ಬರೆಸುತ್ತಿದ್ದರು. ಭಾರತದಲ್ಲಷ್ಟೇ ಅಲ್ಲ, ಇದು ಒಂದರ್ಥದಲ್ಲಿ ಪ್ರಪಂಚದಲ್ಲಿಯೇ ರಾಜನೀತಿಶಾಸ್ತ್ರ ಕುರಿತ ಮೊದಲ ಗ್ರಂಥ. ಮಹಾಭಾರತದ ‘ಶಾಂತಿಪರ್ವ’ದಲ್ಲಿ ಬಹುಶಃ ಕೌರವ, ಪಾಂಡವರೆಲ್ಲ ಒಟ್ಟಾಗಿ ಭೀಷ್ಮರಿಂದ ನೀತಿಯನ್ನು ಕಲಿಯುತ್ತಿದ್ದರು. ಈ ಪ್ರಸಂಗದಲ್ಲಿ ದ್ರೌಪದಿ ಒಮ್ಮೆಲೆ ನಕ್ಕಳು. ನನಗನ್ನಿಸುವಂತೆ ಕೊಂಚ ಜೋರಾಗಿಯೇ ನಕ್ಕಿರಬಹುದು! ಆಕೆ ನಿರ್ಭೀತ ಹೆಂಗಸು ನೋಡಿ! ಇಡೀ ಪ್ರಪಂಚದ ರಾಜನೀತಿಯನ್ನೆಲ್ಲ ವಿಶ್ಲೇಷಿಸಿ ಹೇಳುತ್ತಿದ್ದೇನೆ; ಜ್ಞಾನದಾನ ಮಾಡುತ್ತಿದ್ದೇನೆ ಎಂದು ಭೀಷ್ಮರು ವ್ಯರ್ಥ ಪಾಂಡಿತ್ಯಪ್ರದರ್ಶನ ಮಾಡುತ್ತಿದ್ದರು. ಆಗ ದ್ರೌಪದಿ ನಕ್ಕಳು. 

‘ಆ ನಗುವನ್ನು ಕಂಡು ಅರ್ಜುನನಿಗೆ ಎಷ್ಟು ಕೋಪ ಬಂತೆಂದರೆ, ಅವನು ದ್ರೌಪದಿಯನ್ನು ಅಟ್ಟಿಸಿಕೊಂಡು ಹೊಡೆಯಲು ಓಡಿದ. ಅನೇಕ ದೃಷ್ಟಿಯಿಂದ ಅರ್ಜುನ ಕಾಡುಮನುಷ್ಯ! ಅವನು ದ್ರೌಪದಿಯನ್ನು ಹೊಡೆಯಲು ಓಡತೊಡಗಿದಾಗ ಕೃಷ್ಣ ತಡೆದು ಹೇಳಿದ: ‘ತಾಳು ಅರ್ಜುನ. ದ್ರೌಪದಿ ಯಾಕೆ ನಕ್ಕಳು ಅಂತ ಕೇಳು.’ ಆಗ ಅರ್ಜುನ ಕೇಳಿದ ಪ್ರಶ್ನೆಗೆ ದ್ರೌಪದಿ ಹೇಳಿದಳು: ‘ಈ ಭೀಷ್ಮರು ತಮ್ಮ ಜೀವನದುದ್ದಕ್ಕೂ ಈ ಜ್ಞಾನೋಪದೇಶದ ವಿರುದ್ಧ ನಡೆದಿದ್ದಾರೆ. ಈಗ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ ನೀತಿಬೋಧೆಗೆ ಇಳಿದಿದ್ದಾರೆ!’ ದ್ರೌಪದಿಯ ನಗುವಿಗೆ ಉತ್ತರಿಸುತ್ತಾ ಭೀಷ್ಮ, ‘ಸರಿ, ನಗಲು ದ್ರೌಪದಿಗೆ ಪೂರ್ಣ ಹಕ್ಕಿದೆ’ ಎಂದ.’ 

ಸಾಹಿತ್ಯ ರಚನೆಯಲ್ಲಿ ಪುರುಷ ಪೂರ್ವಗ್ರಹದ ಬಗ್ಗೆ ಸ್ತ್ರೀವಾದಿ ಚಿಂತನೆ ಹೇಳುವುದನ್ನು ಒಪ್ಪುವಾಗಲೂ, ಎಷ್ಟೋ ಸಲ ಸಾಹಿತ್ಯ ಕೃತಿಯಲ್ಲಿ ಸೃಷ್ಟಿಯಾದ ಸ್ತ್ರೀ ಪಾತ್ರವೇ ತನ್ನ ಕಾಲದ ಪುರುಷ ಪೂರ್ವಗ್ರಹದಿಂದ ಆಚೆಗೆ ಬಂದು ನೋಡುವಂತೆ ಲೇಖಕನನ್ನು ಒತ್ತಾಯಿಸಬಲ್ಲದು. ಸೃಜನಶೀಲ ಸೃಷ್ಟಿಯ ಈ ಮುಖವನ್ನೂ ಮರೆಯದಿರೋಣ! 
 

blog
16 Feb 2025 ಡಿ. ಆರ್. ನಾಗರಾಜ್: ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು

ಲೇಖಕ ಮಿತ್ರರಾದ ಹರೀಶ್ ಗಂಗಾಧರ್, ರಾಜೇಂದ್ರ ಪ್ರಸಾದ್ ಕೆಲವು ವರ್ಷಗಳ ಕೆಳಗೆ ಡಿ. ಆರ್. ನಾಗರಾಜರ ಬರಹಗಳನ್ನು ಕುರಿತು ಚರ್ಚೆ ಏರ್ಪಡಿಸಿದ್ದರು. ಅವತ್ತು ಮಾತಾಡಲು ಬಂದಿದ್ದ ಹಿರಿಯ ಮಿತ್ರರಾದ ಅಗ್ರಹಾರ ಕೃಷ್ಣಮೂರ್ತಿ ಇದ್ದಕ್ಕಿದ್ದಂತೆ ಈ ಟಿಪ್ಪಣಿಗಳನ್ನು ನನಗೆ ಓದಲು ಕೊಟ್ಟರು. ಕನ್ನಡದ ಶ್ರೇಷ್ಠ ಸಂಸ್ಕೃತಿ ಚಿಂತಕ-ವಿಮರ್ಶಕರ ಸಾಲಿನಲ್ಲಿ ಮುಂಚೂಣಿ ಹೆಸರಾಗಿರುವ ಡಿ. ಆರ್. (೨೦ ಫೆಬ್ರವರಿ ೧೯೫೪-೧೨ ಆಗಸ್ಟ್ ೧೯೯೮) ನಮ್ಮೊಡನೆ ಇದ್ದಿದ್ದರೆ ಫೆಬ್ರವರಿ ೨೦ಕ್ಕೆ ಅವರಿಗೆ ಎಪ್ಪತ್ತೊಂದು ತುಂಬುತ್ತಿತ್ತು. ಡಿ. ಆರ್. ಹುಟ್ಟಿ ಬೆಳೆದ ದೊಡ್ಡಬಳ್ಳಾಪುರದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ಗೆಳೆಯ ಪ್ರಕಾಶ್ ಮಂಟೇದರ ಗೆಳೆಯ ಗೆಳತಿಯರು ಡಿ. ಆರ್. ಕೃತಿಗಳನ್ನು ಹೊಸ ತಲೆಮಾರಿಗೆ ಮತ್ತೆ ಓದುತ್ತಿರುವುದನ್ನು ಕೇಳಿ, ಡಿ. ಆರ್. ನಿರಂತರ ಸ್ಫೂರ್ತಿಯ ಸೆಲೆಯಾಗಿರುವುದನ್ನು ಕಂಡು, ನೆಮ್ಮದಿಯಾಯಿತು. ಡಿ.ಆರ್. ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು ಹೊಸ ತಲೆಮಾರುಗಳಲ್ಲಿ ಹೊಸ ಪ್ರೇರಣೆಗಳನ್ನು ಹುಟ್ಟಿಸಬಲ್ಲವು ಎನ್ನಿಸಿ ಬೇರೆಡೆ ಚರ್ಚಿಸಿದ್ದ ಟಿಪ್ಪಣಿಗಳಿಂದ ಕೆಲವನ್ನು ಇಲ್ಲಿ ಆಯ್ದು ಕೊಟ್ಟಿರುವೆ:  

ಡಿ. ಆರ್. ನಾಗರಾಜ್ ೧೯೭೪ರಲ್ಲಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಆ ವರ್ಷದ ತಮ್ಮ ಓದು, ಬರಹ, ಚಿಂತನೆ, ಕ್ರಿಯೆ, ತಲ್ಲಣಗಳನ್ನು ದಾಖಲಿಸಿರುವ ಟಿಪ್ಪಣಿಗಳಿವು. ಆಗ ಡಿ. ಆರ್. ಬೆಂಗಳೂರಿಗೆ ೪೦ ಕಿಲೋಮೀಟರ್ ದೂರವಿರುವ ದೊಡ್ಡಬಳ್ಳಾಪುರದಿಂದ ನಿತ್ಯ ರೈಲಿನಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು; ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎರಡನೇ ಎಂ.ಎ. ಓದುತ್ತಿದ್ದರು. ಹದಿಹರೆಯದಲ್ಲೇ ಉತ್ತಮ ಸಾಹಿತ್ಯ ಕೃತಿಗಳ ಸಂಗದಲ್ಲಿದ್ದ ಡಿ. ಆರ್. ನಿತ್ಯದ ರೈಲು ಪ್ರಯಾಣವನ್ನು ಗಂಭೀರ ಓದಿನ ಸಮಯವನ್ನಾಗಿಸಿಕೊಂಡರು. ಈ ಪಯಣದಲ್ಲಿ ಅಸಲಿ ಗ್ರಾಮೀಣ ಭಾರತವನ್ನು ಕಂಡ ಡಿ.ಆರ್. ಟಿಪ್ಪಣಿ: ‘ಇಲ್ಲಿ ಕಾಣುವ ಪ್ರತಿಯೊಬ್ಬರೂ ಇಂಡಿಯಾದ ಅಗಾಧ ದಾರಿದ್ರ‍್ಯದ ಅಸ್ಥಿಪಂಜರವಾಗಿ ಕಾಣುತ್ತಾರೆ’; ‘ಈ ದೇಶದ ರಾಜಕೀಯ ಬಹುಸಂಖ್ಯಾತ ಜನಸಮುದಾಯಕ್ಕೆ ತೀರಾ ಅಪ್ರಸ್ತುತ. ಆಳುವ ವರ್ಗ ಶಿಕ್ಷಣ ಪದ್ಧತಿಯ ಮೂಲಕ ವಿದ್ಯಾವಂತರನ್ನು ನಿಷ್ಕ್ರಿಯರನ್ನಾಗಿ ಮಾಡುತ್ತಿರುವುದೇ ಇಲ್ಲಿನ ಲಕ್ಷಣ.’  

ಕತೆಗಾರ ಕರಿಗೌಡ ಬೀಚನಹಳ್ಳಿ ನೆನೆಯುವಂತೆ, ‘ಡಿ.ಆರ್. ಕೆಲವೊಮ್ಮೆ ಬೆಂಗಳೂರಿನ ಬಂಡಿಶೇಷಮ್ಮ ಹಾಸ್ಟೆಲಿನಲ್ಲಿ ಗೆಳೆಯನೊಬ್ಬನಿಗೆ ನಿಗದಿಯಾಗಿದ್ದ ರೂಮಿನಲ್ಲೋ, ಕಮ್ಯುನಿಸ್ಟರ ‘ಕೆಂಬಾವುಟ’ ಕಛೇರಿಯಲ್ಲೋ ಮಲಗುತ್ತಾ, ಓದುತ್ತಾ, ಬರೆಯುತ್ತಾ ಬೆಳೆದರು.’  ಡಿ. ಆರ್. ಟಿಪ್ಪಣಿಗಳು ಸೂಚಿಸುವಂತೆ ಆಗ ಅವರ ವ್ಯಕ್ತಿತ್ವದಲ್ಲಿ ಪರಿಶ್ರಮ, ಬೌದ್ಧಿಕ ಕಾಳಜಿ, ಸಾಮಾಜಿಕ ಜವಾಬ್ದಾರಿ, ದಕ್ಷತೆಯ ಹುಡುಕಾಟ ಎಲ್ಲವೂ ವಿಕಾಸಗೊಳ್ಳುತ್ತಿದ್ದವು. ಪಶ್ಚಿಮದ ಸಾಹಿತ್ಯ ವಿಮರ್ಶೆಯ ದೊಡ್ಡ ಪಾಠಗಳನ್ನು ಕಲಿಯುತ್ತಲೇ ವಿಮರ್ಶೆ, ಸಂಶೋಧನೆಗಳ ಜಾಡುಗಳ ಹುಡುಕಾಟ; ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ, ಎಂ.ಡಿ. ನಂಜುಂಡಸ್ವಾಮಿಯವರ ನೇತೃತ್ವದ ಸಮಾಜವಾದಿ ಯುವಜನ ಸಭಾಗಳಲ್ಲಿ ಕಲಿತ ತತ್ವಗಳನ್ನು ಸಮಾಜಕ್ಕೆ ಉಪಯುಕ್ತವಾಗಿಸುವ ಕಾತರ; ತನ್ನ ಬೌದ್ಧಿಕಮಟ್ಟ ಯಾವುದು ಎಂದು ಪರೀಕ್ಷಿಸಿಕೊಳ್ಳುವ ಡಿ. ಆರ್. ಪ್ರಾಮಾಣಿಕತೆ- ಇವೆಲ್ಲವೂ ಎಲ್ಲ ಕಾಲದ ವಿದ್ಯಾರ್ಥಿಗಳಿಗೂ, ಹಿರಿಯರಿಗೂ ಮಾದರಿಯಂತಿವೆ.

ಸಾಹಿತ್ಯ, ಸಮಾಜ, ಸಿದ್ಧಾಂತ, ವಿಮರ್ಶೆಗಳ ಬಗೆಗೆ ಖಚಿತ ನಿಲುವುಗಳುಳ್ಳ ಡಿ. ಆರ್. ಗೆ ಎಂ.ಎ. ವಿದ್ಯಾರ್ಥಿಯಾಗಿದ್ದಾಗಲೇ ವಿಮರ್ಶೆ ಹಾಗೂ ರಿಸರ್ಚ್ ಬಗ್ಗೆ ಅಪಾರ ಸ್ಪಷ್ಟತೆಯಿದ್ದಂತಿದೆ. ಬಸವಲಿಂಗಪ್ಪನವರು ಎತ್ತಿದ ‘ಬೂಸಾ’ ಚರ್ಚೆಯನ್ನು ಗ್ರಹಿಸದೆ ಕವಿ ಬೇಂದ್ರೆ ಉಡಾಫೆಯಿಂದ ಮಾತಾಡಿದಾಗ ಡಿ. ಆರ್. ಪ್ರತಿಕ್ರಿಯೆ: ‘ಅವರ ಕಾವ್ಯ ಸೃಷ್ಟಿಯ ಬಗ್ಗೆ ಅಪಾರ ಗೌರವವಿದೆ; ಆದರೆ ಅವರ ಕವಿತೆ ಮತ್ತು ಆಲೋಚನೆ ಎರಡೂ ಭಿನ್ನವಾದುದೇ? ಶೂದ್ರ ಸಮುದಾಯದ ಸಂಪರ್ಕವಿಲ್ಲದಿದ್ದ ವೈದಿಕ ಸಾಹಿತ್ಯ ಬೂಸಾವಲ್ಲದೆ ಮತ್ತೇನು?’  

ಇಂಥ ಸ್ಪಷ್ಟ ವಿಮರ್ಶಾ ಗ್ರಹಿಕೆಗಳುಳ್ಳ ಡಿ. ಆರ್. ಟಿಪ್ಪಣಿಗಳನ್ನು ಗಮನಿಸಿ: 

‘ಭೈರಪ್ಪ ಒಬ್ಬ ಜನಪ್ರಿಯ ಕಾದಂಬರಿಕಾರ’ ಎನ್ನುತ್ತಾ, ಡಿ. ಆರ್. ಜನಪ್ರಿಯ ಸಾಹಿತ್ಯ ಕುರಿತು ಮಾಡುವ ವಿಶ್ಲೇಷಣೆ: ೧. ಒಬ್ಬ ಲೇಖಕ ತೀರ ಸುಲಭವಾಗಿ ಜನಪ್ರಿಯನಾದ ಎಂದರೆ ಆತ ಹೊಸ ರುಚಿಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕಿಂತ ಒಗ್ಗಿರುವ ರುಚಿಗೇ ಬರೆಯುತ್ತಿದ್ದಾನೆ. ೨. ಹೀಗೆ ಜನಪ್ರಿಯವಾಗುವ ಕೃತಿಗಳು ಆ ಜನಾಂಗದ ಮೇಲ್ಪದರದ ಅಭಿರುಚಿಯನ್ನು, ಆಲೋಚನಾ ಕ್ರಮವನ್ನು ಬಿಂಬಿಸುತ್ತವೆ; ಇವು ಸರಳ ಮತ್ತು ಮಾದಕವಾಗಿರುತ್ತವೆ.’

‘ಅಡಿಗರು ನಿಜಕ್ಕೂ ರಿಲಿಜಿಯಸ್ ಆಗಿದ್ದಾರೆಯೇ? ಸಾಮಾಜಿಕ ಪ್ರಜ್ಞೆ ಹೆಚ್ಚು ವ್ಯಕ್ತವಾಗುವುದು ಅವರ ಬೇರೆ ಬರಹಗಳಲ್ಲೇ ಅಲ್ಲವೆ? ಹಾಗಿದ್ದರೂ, ಕಾವ್ಯವನ್ನು ಸೃಷ್ಟಿಸುವ ಅಡಿಗ; ರಾಜಕೀಯದಲ್ಲಿ ಸಮುದಾಯ ವಿರೋಧಿ ಅಡಿಗ-ಇವರಿಬ್ಬರೂ ಬೇರೆಬೇರೆ ಏನಲ್ಲವಲ್ಲ?’; ‘ಅಡಿಗ ರಿವೈವಲಿಸ್ಟ್ ಮನೋಧರ್ಮದ ಕವಿ; ಕಳೆದುದರ ಬಗ್ಗೆ ಹಂಬಲವಿದೆ. ಹಾಗೆಯೇ ಸಮಕಾಲೀನ ಸ್ಥಿತಿಯ ಬಗ್ಗೆ ನಿಷ್ಠುರವಾದ ವ್ಯಂಗ್ಯವಿದೆ.’ 

ಅಡಿಗರ ‘ಶ್ರೀರಾಮನವಮಿಯ ದಿವಸ’ ಮತ್ತು ಬೇಂದ್ರೆಯವರ ‘ಜೋಗಿ’ ಪದ್ಯಗಳನ್ನು ಓದುತ್ತಾ ಡಿ.ಆರ್.ಗೆ ಹೀಗೆನ್ನಿಸುತ್ತದೆ: ‘ಬೇಂದ್ರೆ ತಮ್ಮ ಅನುಭವವನ್ನು ಭಾವತೀವ್ರತೆಯ ಮೂಲಕ ತಲುಪಲು ಬಯಸುತ್ತಾರೆ; ಆದರೆ ಅಡಿಗರು ಅನುಭವವನ್ನು ರಿಸರ್ಚ್ ಮತ್ತು ತರ್ಕದ ಮೂಲಕ ತಲುಪಲು ಬಯಸುತ್ತಾರೆ.’ ‘ಜೋಗಿ’ ಪದ್ಯ ಬರೀ ಮಣ್ಣಿನ ಪದಗಳಿಂದಲೇ, ಜಾನಪದ ಬಂಧದಿಂದಲೇ ‘ಅಮೂರ್ತ’ದೊಡನೆ ಸಂಬಂಧ ಸ್ಥಾಪಿಸುವ ರೀತಿಯನ್ನು, ಭಾಷೆಯ ‘ಒಳವಿನ್ಯಾಸ’ವನ್ನು ಡಿ. ಆರ್. ಗಮನಿಸುತ್ತಾರೆ. 

‘ಆತ್ಮರತ ಪ್ರವೃತ್ತಿಯ ಅನಂತಮೂರ್ತಿ; ಸಮಾಜವನ್ನು ಭಾಷೆಯಲ್ಲಿ ಪುನರ‍್ರಚಿಸುವ ತೇಜಸ್ವಿ- ಇವರ ನಡುವಿನ ವ್ಯತ್ಯಾಸ ಮಹತ್ವದ್ದು.’ ‘[ಸಂಸ್ಕಾರದ] ಪ್ರಾಣೇಶಾಚಾರ್ಯನ ಯೋಚನೆಗಳೆಲ್ಲ ಅಸ್ತಿತ್ವವಾದದ ತದ್ರೂಪುಗಳು. ಅದಕ್ಕೆಂದೇ ಅವನು ಬ್ರಾಹ್ಮಣ ಅಗ್ರಹಾರದ ನಡುವೆ ಕಿತ್ತಿಟ್ಟ ಪಾಶ್ಚಾತ್ಯ ತತ್ವಶಾಸ್ತ್ರಜ್ಞನಾಗುತ್ತಾನೆ.’…‘ತೇಜಸ್ವಿಯವರ ‘ನಿಗೂಢ ಮನುಷ್ಯರು’ ಯಶಸ್ವೀ ಕತೆ ಎನಿಸಿದರೂ ಅದರ ಯಶಸ್ಸಿನ ಕಾರಣಗಳ ಬಗ್ಗೆ ಮಾತ್ರ ಅನುಮಾನ ಬರುತ್ತಿದೆ.’ 

‘[ಕುವೆಂಪು ಕಾದಂಬರಿಗಳು] ಅವರ ಚೈತನ್ಯವನ್ನು ಬಿಂಬಿಸುತ್ತವೆ. ಶೂದ್ರ ಜಗತ್ತಿನ ಸಮಸ್ತ ವ್ಯಾಪಾರಗಳು ಪ್ರಪ್ರಥಮ ಬಾರಿಗೆ ಎಲ್ಲ ವಿವರಗಳೊಂದಿಗೆ ಸಾಹಿತ್ಯದಲ್ಲಿ ದಾಖಲಾಗಿವೆ.’  

ಆ ಕಾಲದಲ್ಲಿ ‘ಮಾರ್ಕ್ಸ್‌ವಾದ, ಲೋಹಿಯಾವಾದದ ಬಗೆಗೆ ತಾಕಲಾಟ’ದಲ್ಲಿದ್ದ ಡಿ. ಆರ್. ‘ಲೋಹಿಯಾರ ‘ಮಾರ್ಕ್ಸ್ ಗಾಂಧಿ ಸಮಾಜವಾದ’ ಪುಸ್ತಕ ಮತ್ತೆ ಲೋಹಿಯಾ ಕಂಬಕ್ಕೆ ನನ್ನ ಕಟ್ಟಿತು’ ಎಂದು ಬರೆಯುತ್ತಾರೆ. ಕಮ್ಯುನಿಸಂ ಕಡೆಗೆ ವಾಲುತ್ತಲೇ ಹೀಗೆಂದುಕೊಳ್ಳುತ್ತಾರೆ: ‘ಕಮ್ಯುನಿಸ್ಟನಾದರೆ ಜೀವನದ ಎಷ್ಟೋ ನಿಗೂಢ ಬಾಗಿಲುಗಳು ಶಾಶ್ವತವಾಗಿ ಮುಚ್ಚಿ ಹೋಗಿಬಿಡಬಹುದೇನೋ ಎಂಬ ಭಯ ನನ್ನನ್ನು ಕಮ್ಯುನಿಸ್ಟ್ ಆಗಲು ಬಿಟ್ಟುಕೊಟ್ಟಿಲ್ಲ.’ 

ಕತೆ, ಕಾದಂಬರಿ ಬರೆಯುವ ಕಾತರ ಡಿ. ಆರ್. ಅವರಲ್ಲಿ ಸುಳಿಯುತ್ತದೆ. ಮಿತ್ರ ವಾಸುದೇವಯ್ಯನ ಅನುಭವ ಕೇಳುತ್ತಿರುವಾಗ, ‘ನನ್ನಲ್ಲಿ ಸೃಷ್ಟಿಸುವ ತಾಖತ್ತಿದ್ದರೆ ಈತ ಮಹಾಕೃತಿಯೊಂದರ ಮೂಲದ್ರವ್ಯವಾದಾನು’ ಎನ್ನಿಸುತ್ತದೆ; ವಾಸುವಿನ ಮೂಲಕ ‘ಬರೇ ಅವನ ಕತೆಯಲ್ಲ- ಊರಿನ ಕತೆ, ಅದರ ನೋವು, ನಲಿವನ್ನು ಬಿಡಿಸಬೇಕೆಂಬ ಛಲ ಕೂಡ ಇದೆ. ಆದರೆ ಅದನ್ನು ಛಲ ಎನ್ನಲಾರೆ- ಅದಿಲ್ಲದಿದ್ದರೆ ಸಾಹಿತ್ಯ ಸೃಷ್ಟಿ ಸಾಧ್ಯವೇ ಇಲ್ಲ…[ಆ ಛಲ] ಬರುವ ತನಕ ಕಾಯುವುದೋ ಅಥವಾ ಕ್ರಿಯೆಯಲ್ಲಿಯೇ ರೂಢಿಸಿಕೊಳ್ಳುವುದೋ?’ ಎಂದುಕೊಳ್ಳುವ ಡಿ. ಆರ್. ಆಗ ಬರೆಯಲಿದ್ದ ಕತೆಗಾಗಿ ‘ಮೊದಲ ಭಾಗ- ಊರಿನಲ್ಲುಂಟಾದ ವಿಚಿತ್ರ ಚಲನೆಗೆ ಹಿನ್ನೆಲೆ’ ಎಂಬ ಟಿಪ್ಪಣಿ ಬರೆಯುತ್ತಾರೆ. 

ಮುಂದೊಮ್ಮೆ, ‘ಕಥೆಯ ಮೊದಲ ಭಾಗ ಮುಗಿಯಿತು…ಯಾವುದೋ ಕಥೆಯ ದಟ್ಟ ಛಾಯೆ ಕಾಣುತ್ತಿದೆ; ಅದನ್ನು ಕತ್ತರಿಸಿ ನಾಳೆಯಿಂದ ಹೊಸದನ್ನು ಸೃಷ್ಟಿಸಬೇಕು’ ಎಂದುಕೊಳ್ಳುತ್ತಾರೆ. ಮಂದೆ, ‘ಆ ಕಥೆಯನ್ನು ಬರೆಯುವ ಪ್ರಯತ್ನ ಇಲ್ಲವೇ ಇಲ್ಲ. ಕಾರಣ ಮತ್ತೆ ಸಮಸ್ಯೆಗಳನ್ನು ಮುಂದು ಹಾಕುವ ಪ್ರವೃತ್ತಿ’ ಎಂಬ ಶರಾ ಇದೆ. ಮುಂದೊಮ್ಮೆ ಕತೆಯೊಂದರ ‘ಸ್ಥೂಲ ರೂಪುರೇಖೆಗಳನ್ನು- ಅಸ್ಥಿ ಪಂಜರದ ಕೆಲವು ಭಾಗಗಳನ್ನು ಬಿಡಿಸಿಟ್ಟಿದ್ದೇನೆ. ಆದರೆ ನನಗಿರುವ ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಬರೆಯಲಾಗಿಲ್ಲ’ ಎಂದು ಬರೆಯುತ್ತಾರೆ.  ‘ನಿಜವಾದ ಸೋಶಲಿಸ್ಟ್ ಕತೆಗಾರ ನಾನಾಗುತ್ತೇನೆಯೋ ಇಲ್ಲವೋ ನನಗಂತೂ ಅನುಮಾನ ಇದೆ’ ಎಂಬ ಸ್ವಪರೀಕ್ಷೆಯೂ ಇಲ್ಲಿದೆ. 

ಲಾರೆನ್ಸ್, ಹೆಮಿಂಗ್ವೆ, ಕಾರಂತ ಥರದ ಕಾದಂಬರಿಕಾರರು ಇಪ್ಪತ್ತರ ಹರೆಯದ ಈ ಬುದ್ಧಿಜೀವಿಯನ್ನು ಕತೆಯ ದಿಕ್ಕಿಗೆ ಒಯ್ದರೆ, ಆಲ್ಡಸ್ ಹಕ್ಸ್ಲಿ, ಗುನ್ನರ್ ಮಿರ್‍ಡಾಲ್, ಲುಕಾಚ್ಸ್, ಸಾರ್ತರ್, ಕ್ರಿಸ್ಟಫರ್ ಕಾಡ್‌ವೆಲ್ ಥರದ ಚಿಂತಕರು ವಿಮರ್ಶೆ, ಸಿದ್ಧಾಂತಗಳೆಡೆಗೆ ಜಗ್ಗುತ್ತಿದ್ದರೇನೋ! ‘ಜಾರ್ಜ್ ಆರ್ವೆಲ್…ಭಾಷೆ ಮತ್ತು ರಾಜಕೀಯದ ಬಗ್ಗೆ ಹೇಳಿದ ಅಭಿಪ್ರಾಯಗಳು ಯಾಕೋ ಇತ್ತೀಚೆಗೆ ಬಹಳ ತಟ್ಟುತ್ತಿವೆ… ಸ್ಪಷ್ಟ, ನೇರ ಆಲೋಚನೆಗಿಂತ ನನ್ನ ಮನಸ್ಸು ಸಮಷ್ಟಿ ಮತ್ತು ಅಮೂರ್ತ ಆಲೋಚನೆಯ ಕಡೆಗೇ ಹೆಚ್ಚು ವಾಲಿದೆ’ ಎಂದು ಡಿ. ಆರ್. ಬರೆಯುತ್ತಾರೆ.

‘ಸ್ಫೂರ್ತಿಗಾಗಿ ಕಾಯುವುದು ಸೋಮಾರಿಗಳ ಕೆಲಸ’ ಎಂದುಕೊಳ್ಳುವ ಡಿ.ಆರ್.ಗೆ, ‘ಒಳ್ಳೆಯ ಮಾನಸಿಕ ಸ್ಥಿತಿ ಇಲ್ಲದಿದ್ದರೆ ಬರೆಯುವ ಗದ್ಯವೂ ಕಚಡಾ’ ಎಂಬುದು ಅರಿವಿಗೆ ಬರುತ್ತದೆ.  ‘ವಾಸ್ತವವಾಗಿ ಮೊದಲಿನಿಂದ ಗಂಭೀರ ಅಭ್ಯಾಸಕ್ಕೆ ಹೆಚ್ಚು ಗಮನ ಕೊಟ್ಟಿದ್ದರೆ ಇನ್ನಷ್ಟು ಗಾಢ ವ್ಯಕ್ತಿತ್ವ ಇರುತ್ತಿತ್ತೇನೋ’ ಎನ್ನಿಸುತ್ತದೆ. ‘ಡೈರಿಯಲ್ಲಿ ಬರೆಯುವಾಗ ಭಾಷೆ ಸಲೀಸಾಗಿ, ಸಂಭ್ರಮದಿಂದ ಉಕ್ಕುತ್ತದೆ; ಪ್ರಕಟಣೆಗೆಂದು ಬರೆಯುವಾಗ ಏಕೋ ಕುಂಟುತ್ತದಲ್ಲ’ ಎಂದು ಡಿ. ಆರ್.ಗೆ ವಿಸ್ಮಯವಾಗುತ್ತದೆ. ತಮ್ಮ ಅನಿಸಿಕೆಗಳನ್ನು ಇಂಗ್ಲಿಷಿನಲ್ಲೂ ಬರೆಯುತ್ತಿದ್ದ ಅವರಿಗೆ ಒಂದು ಘಟ್ಟದಲ್ಲಿ ಇಂಗ್ಲಿಷಿನಲ್ಲಿ ಲೇಖನ ಬರೆಯಲಾರಂಭಿಸಿದಾಗ ಹೊಸ ಆತ್ಮವಿಶ್ವಾಸ ಹುಟ್ಟುತ್ತದೆ.  

ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದ ಕರ್ನಾಟಕದ ತೀವ್ರ ವೈಚಾರಿಕ ಮಂಥನದ ಕಾಲಘಟ್ಟದಲ್ಲಿ ದಾಖಲಾಗುತ್ತಿದ್ದ ಡಿ. ಆರ್. ಟಿಪ್ಪಣಿಗಳು ತಾರುಣ್ಯಕ್ಕೆ ಅಡಿಯಿಡುತ್ತಿರುವ ಕಡು ಜಾಣ ವಿದ್ಯಾರ್ಥಿಯೊಬ್ಬನ ಆಳದ ಹುಡುಕಾಟ, ಗೊಂದಲ, ತಲ್ಲಣ, ಸಾಮರ್ಥ್ಯ ಎಲ್ಲವನ್ನೂ ಸೂಚಿಸುತ್ತವೆ. ನಿಷ್ಠುರ ಸ್ವ-ಟೀಕೆಗಳು, ತಿದ್ದಿಕೊಳ್ಳುವ ಕಾತರಗಳೂ ಇಲ್ಲಿವೆ. ತಾರುಣ್ಯಕ್ಕೆ  ಅಡಿಯಿಡುವ ಹೊತ್ತಿಗಾಗಲೇ ಡಿ.ಆರ್.ಗೆ ಇದ್ದ ಕನ್ನಡ ಭಾಷೆಯ ಮೇಲಿನ ಹಿಡಿತ; ಆಲೋಚನೆಗೆ ತಕ್ಕ ನುಡಿಗಟ್ಟು; ತಾತ್ವಿಕ ಪರಿಕಲ್ಪನೆಗಳ ಸ್ಪಷ್ಟತೆ; ನೋಟಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದ ಕ್ರಮ; ಜಗತ್ತಿನ ಹಲವು ದಿಕ್ಕಿನ ಸಾಹಿತ್ಯ, ವಿಮರ್ಶೆ, ಸಿದ್ಧಾಂತಗಳನ್ನು ಗ್ರಹಿಸಲು ಇಂಗ್ಲಿಷ್ ಭಾಷೆಯನ್ನು ದಕ್ಷವಾಗಿ ಕಲಿಯಲೆತ್ನಿಸುತ್ತಿದ್ದ ರೀತಿ… ಇವೆಲ್ಲವೂ ಅವರು  ಮುಂದೆ ಗಂಭೀರ ಪಿಎಚ್.ಡಿ. ಸಂಶೋಧಕರಾಗಲು ನೆರವಾಗಿವೆ. ಕನ್ನಡ ಕಾವ್ಯದ ಆಳವಾದ ಸಂಶೋಧನೆಯಿಂದ ರೂಪುಗೊಂಡ ಅವರ ಅನನ್ಯ ವಿಮರ್ಶಾ ಪುಸ್ತಕ ‘ಶಕ್ತಿ ಶಾರದೆಯ ಮೇಳ’ ದಲ್ಲಿ ಹಲವು ಶಿಸ್ತುಗಳು ಅವರ ಸಾಹಿತ್ಯ ವಿಮರ್ಶೆಗೆ ಒದಗಿ ಬಂದಿರುವುದರ ಹಿಂದಣ ಸಿದ್ಧತೆ, ಪರಿಶ್ರಮಗಳು ಅವರ ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳಲ್ಲಿವೆ. 

ತಾವು ತೊಡಗಬಯಸಿದ್ದ ವಿಭಿನ್ನ ಕ್ಷೇತ್ರಗಳ ಬಗ್ಗೆ ಸ್ಪಷ್ಟತೆ ಬೆಳೆಸಿಕೊಳ್ಳಲೆತ್ನಿಸುತ್ತಿದ್ದ ವಿದ್ಯಾರ್ಥಿ ಡಿ. ಆರ್. ಮುಂದಿನ ಎರಡು ದಶಕಗಳಲ್ಲಿ ಈ ಎಲ್ಲ ದಿಕ್ಕುಗಳಲ್ಲಿ ಕವಲಾಗಿ ಅಧ್ಯಯನ ಮಾಡಿದರು; ಅವನ್ನೆಲ್ಲ ಬೆಸೆದು ದೊಡ್ಡ ಚಿಂತಕರಾದರು. ಡಿ. ಆರ್. ಮುಂದೆ ರೂಪಿಸಿಕೊಂಡ ನಿರ್ವಸಾಹತೀಕರಣ ಥಿಯರಿ, ಜಾಗತೀಕರಣ ಕುರಿತ ಚಿಂತನೆಗಳನ್ನು ಬಿಟ್ಟರೆ ಅವರ ಬೌದ್ಧಿಕ ಜೀವನದ ಉಳಿದೆಲ್ಲ ಬಗೆಯ ವಿಮರ್ಶೆ, ಸಾಮಾಜಿಕ ವಿಶ್ಲೇಷಣೆಗಳ ಬೇರುಗಳೂ ಅವರ ಆರಂಭಿಕ ಟಿಪ್ಪಣಿಗಳಲ್ಲಿ ಕಾಣುತ್ತವೆ. ಇಪ್ಪತ್ತರ ವಯಸ್ಸಿಗೆ ಇಂಥ ಸಿದ್ಧತೆಯ ಹಾದಿಯಲ್ಲಿದ್ದ ಡಿ. ಆರ್. ನಲವತ್ತನೆಯ ವಯಸ್ಸಿಗಾಗಲೇ ಭಾರತದ ಪ್ರಖರ ಚಿಂತಕರಾಗಿ ವಿಕಾಸಗೊಂಡಿದ್ದರು. 

ಡಿ. ಆರ್. ಅವರ ತಾರುಣ್ಯಾರಂಭದ ಬೌದ್ಧಿಕ ಪಯಣವನ್ನು ಕಂಡ ಕೆಲವು ಸೂಕ್ಷ್ಮಜೀವಿಗಳಿಗಾದರೂ, ತಾವಿನ್ನೂ ‘ಇಂಥ ದೊಡ್ಡ ಪಯಣವನ್ನು ಆರಂಭಿಸಿಯೇ ಇಲ್ಲವಲ್ಲ?’ ಎಂಬ ವಿಷಾದ ಮುತ್ತಬಹುದು! ಆದರೆ ಯಾರು ಯಾವ ಘಟ್ಟದಲ್ಲಾದರೂ ಇಂಥ ಬೌದ್ಧಿಕ ಬದುಕನ್ನು ಆರಂಭಿಸಲು ಡಿ. ಆರ್. ಕೃತಿಗಳು ನಮ್ಮನ್ನು ಪ್ರೇರೇಪಿಸಬಲ್ಲವು.  


 

blog
09 Feb 2025 ನಳಂದದ ಮರು ಸೃಷ್ಟಿಯ ಕನಸು

ಏಳನೆಯ ಶತಮಾನದಲ್ಲಿ ಚೀನಾದಿಂದ ಬಂದು ನಳಂದ ವಿಶ್ವವಿದ್ಯಾಲಯದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿ ಹ್ಯೂಯೆನ್ ತ್ಸಾಂಗ್‌ನ ವಿದ್ಯಾಭ್ಯಾಸ ಮುಗಿದ ಮೇಲೆ ‘ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕ ಹುದ್ದೆ ಕೊಡುತ್ತೇವೆ. ಇಲ್ಲೇ ಉಳಿಯಿರಿ’ ಎಂದು ಹಿರಿಯ ಪ್ರಾಧ್ಯಾಪಕರು ಹೇಳಿದರು. 

ಹ್ಯೂಯೆನ್ ತ್ಸಾಂಗ್ ಹೇಳಿದ: “...‘ಜ್ಞಾನೋದಯದ ಫಲವನ್ನು ಒಬ್ಬನೇ ಅನುಭವಿಸಬಾರದು; ನಾವು ಏನನ್ನಾದರೂ ಕಲಿತರೆ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಗೌತಮ ಬುದ್ಧ ಹೇಳಿಕೊಟ್ಟಿದ್ದಾನೆ; ನಾನೀಗ ನಮ್ಮೂರಿಗೆ ಹೋಗಿ, ಬುದ್ಧ ಹೇಳಿದ ಆ ಕೆಲಸ ಮಾಡಬೇಕಾಗಿದೆ.” 

ಜಗತ್ತಿನ ಮೊಟ್ಟಮೊದಲ ವಿಶ್ವವಿದ್ಯಾಲಯ ಭಾರತದಲ್ಲಿತ್ತು; ಅದರ ಹೆಸರು ನಳಂದ ವಿಶ್ವವಿದ್ಯಾಲಯ ಎಂಬ ಪ್ರಜ್ಞೆ ಹಾಗೂ ಹೆಮ್ಮೆ ನಮ್ಮ ಸರ್ಕಾರಿ ಜನರಲ್ಲಿರಲಿ, ಅಕಡೆಮಿಕ್ ವಲಯಗಳಲ್ಲೂ ಕಣ್ಮರೆಯಾದಂತಿದೆ. ಆದರೆ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಎಂಬ ನಳಂದ ವಿಶ್ವವಿದ್ಯಾಲಯದ ಈ ಮಹಾನ್ ಬೌದ್ಧ ಆಶಯ ಎಂದಿಗೂ ಕಣ್ಮರೆಯಾಗಲು ಬಿಡಬಾರದು. ಹದಿನೈದು ವರ್ಷಗಳ ಕೆಳಗೆ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನರ ಕಣ್ಣೆದುರು ನಳಂದದ ಈ ಹೆಮ್ಮೆಯ ಪುಟಗಳು ತೆರೆದುಕೊಳ್ಳತೊಡಗಿದ್ದವು:

ಐದು, ಆರನೆಯ ಶತಮಾನದ ನಡುವೆ ನಳಂದ ವಿಶ್ವವಿದ್ಯಾಲಯ ಶುರುವಾದ ಆರುನೂರು ವರ್ಷಗಳ ನಂತರ ಯುರೋಪಿನ ಮೊದಲ ವಿಶ್ವವಿದ್ಯಾಲಯ ಇಟಲಿಯ ಬಲೋನ ವಿಶ್ವವಿದ್ಯಾಲಯ ೧೦೮೮ರಲ್ಲಿ ಶುರುವಾಯಿತು. ಅಂದಿನಿಂದ ಇಂದಿನವರೆಗೂ ಬಲೋನ ವಿಶ್ವವಿದ್ಯಾಲಯ ನಡೆಯುತ್ತಲೇ ಇದೆ. ಈಗ ಪಾಕಿಸ್ತಾನದಲ್ಲಿರುವ ತಕ್ಷಶಿಲಾ ವಿಶ್ವವಿದ್ಯಾಲಯ ನಳಂದಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದರೂ ಅದು ಧರ್ಮದ ಅಧ್ಯಯನಕ್ಕೆ ಮಾತ್ರ ಒತ್ತು ಕೊಟ್ಟಿತ್ತು. ನಳಂದ ವಿಶ್ವವಿದ್ಯಾಲಯ ಧಾರ್ಮಿಕ ವಿಷಯಗಳ ಜೊತೆಗೆ ಖಗೋಳ ವಿಜ್ಞಾನ, ಗಣಿತ ಇತ್ಯಾದಿಗಳ ಉನ್ನತ ಅಧ್ಯಯನದ ಕೇಂದ್ರವಾಯಿತು. 

೧೫೦೦ ವರ್ಷಗಳ ಕೆಳಗೆ ನಳಂದದಲ್ಲಿ ಕ್ಲಾಸುಗಳು ನಡೆಯುತ್ತಿದ್ದ ಕಾಲಕ್ಕೆ ಜಗತ್ತಿನಲ್ಲಿದ್ದ ಉನ್ನತ ವಿದ್ಯಾಭ್ಯಾಸದ ಕೇಂದ್ರ ಅದೊಂದೇ! ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ (೧೧೬೯) ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (೧೨೦೯) ಹುಟ್ಟಿದ್ದು ದಾಳಿಕೋರರು ನಳಂದವನ್ನು ನಾಶ ಮಾಡಿದ ನಂತರ.   

ಅಮರ್ತ್ಯ ಸೇನ್‌ಗೆ ಇವೆಲ್ಲ ನೆನಪಾದದ್ದಕ್ಕೆ ಒಂದು ಹಿನ್ನೆಲೆಯಿತ್ತು: ೨೦೦೭ನೆಯ ಇಸವಿಯಲ್ಲೊಂದು ದಿನ ಮನಮೋಹನ್ ಸಿಂಗ್ ಸಂಪುಟದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಂದ ಸೇನ್‌ಗೆ ಒಂದು ಫೋನ್ ಬಂತು. ಇಂಡಿಯಾದ ಚರಿತ್ರೆಯ ಹೆಮ್ಮೆಯ ವಿಶ್ವವಿದ್ಯಾಲಯವಾಗಿದ್ದ ನಳಂದ ವಿಶ್ವವಿದ್ಯಾಲಯವನ್ನು ಮರಳಿ ಕಟ್ಟುವ ಗಂಭೀರ ವಿದ್ವಾಂಸರ ಸಭೆಯ ಅಧ್ಯಕ್ಷತೆ ವಹಿಸಬೇಕೆಂದು ಮುಖರ್ಜಿ ಕೇಳಿದಾಗ ಅಮರ್ತ್ಯ ಸೇನ್ ಒಪ್ಪಿಕೊಂಡರು. ಕಾರಣ, ಸೇನ್ ೨೦೦೪ರಲ್ಲಿ ಬರೆದಿದ್ದ ನಳಂದ ವಿಶ್ವವಿದ್ಯಾಲಯದ ಇತಿಹಾಸ ಕುರಿತ ಲೇಖನದಲ್ಲಿ ಎಂದಾದರೊಂದು ದಿನ ನಳಂದ ಮರುಜೀವ ಪಡೆಯಬಹುದೆಂದು ಆಶಿಸಿದ್ದರು. ಆ ಕಾಲ ಹಟಾತ್ತನೆ ಅವರೆದುರು ಬಂದಂತಿತ್ತು!

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ನಳಂದದ ಕನಸು ಹೊತ್ತು ಅಮೆರಿಕದಿಂದ ಬಿಹಾರದ ನಳಂದಕ್ಕೆ ಬಂದರು. ತಾವೇ ಒಂದು ವಿಶ್ವವಿದ್ಯಾಲಯದಂತಿರುವ ಅಮರ್ತ್ಯ ಸೇನ್‌ ಎದುರಿಗೆ ದೇಶ ವಿದೇಶಗಳಲ್ಲಿ ತಾವು ಗಳಿಸಿದ ಜ್ಞಾನವನ್ನು ನಳಂದದ ಧ್ಯೇಯವಾಕ್ಯಕ್ಕೆ ತಕ್ಕಂತೆ ತಮ್ಮ ದೇಶದಲ್ಲಿ ಹಂಚುವ ಕರ್ತವ್ಯವೂ ಇತ್ತು. ನಳಂದದ ಚಾರಿತ್ರಿಕ ಹೆಸರು, ಹಾಗೂ ‘ನಳಂದಕ್ಕೆ ಮರಳಿ ಬನ್ನಿ’ ಎಂಬ ಭಾರತದ ಕರೆ ಕೇಳಿ ಜಗತ್ತಿನ ಹಲವೆಡೆಯಲ್ಲಿ ಗಂಭೀರ ಅಧ್ಯಯನ ಹಾಗೂ ಟೀಚಿಂಗಿನಲ್ಲಿ ತೊಡಗಿದ್ದ ಪ್ರೊಫೆಸರುಗಳು ಪುಳಕಗೊಂಡರು; ತಂತಮ್ಮ ವಿಶ್ವವಿದ್ಯಾಲಯಗಳ ಸಂಬಳಕ್ಕಿಂತ ಅರ್ಧ ಸಂಬಳಕ್ಕೆ ಬರಲು ಸಿದ್ಧವಾದರು. ನಳಂದದ ವಿಶಾಲ ಆಶಯಗಳನ್ನು ಮತ್ತೆ ಸಾಕಾರಗೊಳಿಸಬಲ್ಲ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸು ಕಂಡ ಏಷ್ಯಾದ ಹಲವು ದೇಶಗಳ ದೊಡ್ಡ ವಿದ್ವಾಂಸರು ಅಮರ್ತ್ಯ ಸೇನರ ಜೊತೆಗೂಡತೊಡಗಿದರು.   

ಮನಮೋಹನ್ ಸಿಂಗ್ ಸರ್ಕಾರ ನಳಂದ ವಿಶ್ವವಿದ್ಯಾಲಯದ ಆಧುನಿಕ ಮರುಸೃಷ್ಟಿಯನ್ನು ನಿಜಕ್ಕೂ ಗಂಭೀರವಾಗಿ ಕೈಗೆತ್ತಿಕೊಂಡಿತು. ವಿಶ್ವವಿದ್ಯಾಲಯಕ್ಕೆ ಸಂಪೂರ್ಣ ಅಕಡೆಮಿಕ್  ಸ್ವಾಯತ್ತತೆ, ಸ್ವಾತಂತ್ರ‍್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿತ್ತು. ನಳಂದ ವಿಶ್ವವಿದ್ಯಾಲಯದ ಅಕಡೆಮಿಕ್ ಸ್ವಾಯತ್ತತೆಯನ್ನು ರಕ್ಷಿಸುವ ಮಸೂದೆ ಪಾರ್ಲಿಮೆಂಟಿನಲ್ಲಿ ಪಾಸಾಯಿತು. ೨೦೨೧ರವರೆಗೂ ನಳಂದದ ಆರ್ಥಿಕ ಭದ್ರತೆಯ ಏರ್ಪಾಡೂ ಆಯಿತು. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ವಿಶ್ವವಿದ್ಯಾಲಯಕ್ಕೆ ಭೂಮಿ ಮಂಜೂರು ಮಾಡಿದರು. ಪ್ರಾಚೀನ ಯುಗದ ನಳಂದದ ಕನಸು ಇಪ್ಪತ್ತೊಂದನೆಯ ಶತಮಾನದ ಆಧುನಿಕೋತ್ತರ ಯುಗದಲ್ಲಿ ಸಾಕಾರವಾಗುವ ಕಾಲ ಬಂತು. ತರಗತಿಗಳೂ ಶುರುವಾದವು. 

ಅಷ್ಟೊತ್ತಿಗಾಗಲೇ, ಲೋಕದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಮಹತ್ವವನ್ನು ಬಲ್ಲವರಾಗಿದ್ದ ಸುಶಿಕ್ಷಿತ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸ್ವತಃ ಆಸಕ್ತಿ ವಹಿಸಿ ದೇಶದ ಉತ್ತಮ ಪ್ರತಿಭೆಗಳು ಇಂಡಿಯಾದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇರಬೇಕೆಂದು ಕನಸು ಕಂಡಿದ್ದರು; ಆ ಕಾರಣದಿಂದ ಕೂಡ ಇಂಡಿಯಾದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯ ಸಂಬಳವನ್ನು ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದ್ದ ಶೈಕ್ಷಣಿಕ ವಲಯಗಳ ಏಳಿಗೆ ಹಾಗೂ ಶೈಕ್ಷಣಿಕ ಸ್ವಾತಂತ್ರ‍್ಯ ಕುರಿತ ಪ್ರಾಮಾಣಿಕ ಬದ್ಧತೆ, ಕಾಳಜಿಗಳ ಮಹತ್ವ ಈ ಪತನದ ಕಾಲದಲ್ಲಿ ಇನ್ನಷ್ಟು ಎದ್ದು ಕಾಣುತ್ತಿದೆ.  

ಮನಮೋಹನ್ ಸಿಂಗ್ ಸರ್ಕಾರದ ನಿರ್ಗಮನದ ನಂತರ ಅಕಡೆಮಿಕ್ ವಲಯಗಳನ್ನು ಯೋಜಿತವಾಗಿ ನಾಶ ಮಾಡುತ್ತಿರುವ ನಿತ್ಯದ ಭಯಾನಕ ಚಿತ್ರಗಳು ನಮ್ಮ ಕಣ್ಣ ಮುಂದೇ ಇವೆ. ಅದರಲ್ಲಿ ನಳಂದದ ಕನಸಿನ ನಾಶವೂ ಸೇರಿದೆ. ೨೦೧೪ರ ನಂತರ ಅಮರ್ತ್ಯ ಸೇನ್ ನಳಂದದಿಂದ ಹೊರಹೋಗುವಂತೆ ನೋಡಿಕೊಳ್ಳಲಾಯಿತು; ನಳಂದ ವಿಶ್ವವಿದ್ಯಾಲಯದ ಅಕಡೆಮಿಕ್ ಸ್ವಾಯತ್ತತೆಗೆ ಧಕ್ಕೆ ಬಂತು. ಸರ್ಕಾರಿ ನಾಮನಿರ್ದೇಶಿತ ಸದಸ್ಯರ ಹಾವಳಿ ಶುರುವಾಯಿತು. 

ಬಾಯಿ ಬಿಟ್ಟರೆ ದೇಶದ ಗತ ಕಾಲ ಕುರಿತು ಚೀರುವ ಜನಕ್ಕೆ ದೇಶದ ಪ್ರಾಚೀನ ಯುಗದ ಹೆಮ್ಮೆಯನ್ನು ಮರಳಿ ಸ್ಥಾಪಿಸಹೊರಟಿದ್ದ ನಳಂದ ವಿಶ್ವವಿದ್ಯಾಲಯದ ಏಳಿಗೆಯ ಬಗ್ಗೆ ಕನಿಷ್ಠ ಬದ್ಧತೆಯೂ ಇರಲಿಲ್ಲ. ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಗತಿ ಏನಾಗತೊಡಗಿತ್ತೋ ಅದೇ ಗತಿ ಜಗತ್ತಿನ ವಿಶ್ವವಿದ್ಯಾಲಯಗಳಲ್ಲೇ ವಿಶಿಷ್ಟವಾಗಲು ಹೊರಟಿದ್ದ ನಳಂದ ವಿಶ್ವವಿದ್ಯಾಲಯಕ್ಕೂ ಬರತೊಡಗಿತು. ಈ ವಿವರಗಳನ್ನೆಲ್ಲ ಅಮರ್ತ್ಯ ಸೇನರ ‘ದ ಕಂಟ್ರಿ ಆಫ್ ಫಸ್ಟ್ ಬಾಯ್ಸ್’ ಪುಸ್ತಕದಲ್ಲಿ ಓದುತ್ತಿದ್ದರೆ ಕೇವಲ ಹತ್ತು ವರ್ಷಗಳಲ್ಲಿ ಇಂಡಿಯಾಕ್ಕೆ ಒದಗಿದ ಭೀಕರ ಬೌದ್ಧಿಕ ದುರಂತ ಕಂಡು ದುಗುಡ ಆವರಿಸತೊಡಗುತ್ತದೆ. 

ಆದರೂ ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಸ್ವತಂತ್ರ ಭಾರತದಲ್ಲಿ ಹಲವು ದಶಕಗಳ ಕಾಲ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲ ಗುರಿಯಾಗಿತ್ತು ಎಂಬುದನ್ನು ಇವತ್ತು ಮತ್ತೆ ನೆನೆಯಲೇಬೇಕಾಗಿದೆ. ‘ಸ್ವಾಯತ್ತ’ ಎಂದುಕೊಳ್ಳುವ ಅನೇಕ ಪ್ರೈವೇಟ್ ಸಂಸ್ಥೆಗಳು ಹಣವಿದ್ದವರಿಗೆ, ಹಣ ಬರುತ್ತದೆಂದು ಹೇಳಲಾದ ‘ಜ್ಞಾನ’ವನ್ನು ಹಂಚತೊಡಗಿರುವ ಕಾಲ ಇದು. ಇಲ್ಲಿ ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ’ಕ್ಕಾಗಲೀ, ‘ಎಲ್ಲರ ಜ್ಞಾನೋದಯ’ಕ್ಕಾಗಲೀ ಅವಕಾಶವೇ ಇಲ್ಲ. ಇವತ್ತಿಗೂ ದೇಶದ ಲಕ್ಷಾಂತರ ಕೆಳ ಮಧ್ಯಮವರ್ಗಗಳ ಮಕ್ಕಳ ಪಾಲಿಗೆ ಇರುವುದು ಸಾರ್ವಜನಿಕ ವಿಶ್ವವಿದ್ಯಾಲಯಗಳೇ. ಆದರೆ ಸಾರ್ವಜನಿಕ ವಿಶ್ವವಿದ್ಯಾಲಯಗಳು ಖಾಸಗಿ ವಲಯದ ಲಾಭಕೋರ ಮನಸ್ಸಿನ ಉಡಾಫೆ ಯೋಜನೆಗಳಿಗೆ ಬಲಿಯಾಗತೊಡಗಿವೆ. 

ಸರ್ಕಾರಗಳ ದುರುಳ ಹಸ್ತಕ್ಷೇಪ, ನೇಮಕಾತಿಗಳ ಭಷ್ಟಾಚಾರ ಇತ್ಯಾದಿಗಳು ವಿಶ್ವವಿದ್ಯಾಲಯಗಳ ಪತನದ ಮೂಲದಲ್ಲಿರುವುದು ನಿಜ; ಆದರೆ ಈ ಪತನಕ್ಕೆ ವಿಶ್ವವಿದ್ಯಾಲಯಗಳ ಒಳಗಿದ್ದೇ ಅವುಗಳ ಸಾವಿಗೆ ಕಾರಣರಾದವರ ಕೊಡುಗೆಯೇನೂ ಕಡಿಮೆಯಿಲ್ಲ. ವಿಶ್ವವಿದ್ಯಾಲಯಗಳಲ್ಲಿ ದೊಡ್ಡ ಮಟ್ಟದ ಬೋಧಕ, ಬೋಧಕಿಯರಿಲ್ಲ ಎನ್ನುವ ರಾಗ ಹಳೆಯದು; ಆದರೆ ಅಳಿದುಳಿದ, ‘ಅಳಿವಿನಂಚಿನಲ್ಲಿರುವ ಸಂತತಿ’ (‘ಎನ್‌ಡೇಂಜರ‍್ಡ್ ಸ್ಪೀಸೀಸ್’)ಗಳಂತಿರುವ ಧೀಮಂತರನ್ನು ಪೊರೆಯುವ, ರಕ್ಷಿಸುವ ಕೆಲಸ ನಡೆಯುತ್ತಲೇ ಇರಬೇಕಾಗುತ್ತದೆ. 

ಕಾರಣ, ಇಡೀ ವ್ಯವಸ್ಥೆಯನ್ನೇ ಜಡಗೊಳಿಸಿ ನಾಶ ಮಾಡುವ ವಿದ್ಯಾವಿರೋಧಿ ಫ್ಯಾಸಿಸ್ಟ್ ಶಕ್ತಿಗಳು ಸುತ್ತ ವಿಜೃಂಭಿಸುತ್ತಿರುವಾಗಲೂ ಪ್ರಯೋಗಾಲಯಗಳಲ್ಲಿ ಹೊಸ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳಿದ್ದಾರೆ; ಆರ್ಥಿಕತೆಯ ಬಗ್ಗೆ, ಸಮಾಜ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಆಳವಾದ ಸಂಶೋಧನೆ-ಚಿಂತನೆ ನಡೆಸುತ್ತಾ, ಓದುತ್ತಾ, ಬರೆಯುತ್ತಾ ಇರುವ ಅಧ್ಯಾಪಕ, ಅಧ್ಯಾಪಕಿಯರು ಇನ್ನೂ ಇಲ್ಲಿದ್ದಾರೆ. ಮಕ್ಕಳಿಗೆ ಉತ್ತಮ ಸಂಶೋಧನಾ ಕ್ರಮಗಳನ್ನು, ಸಾಹಿತ್ಯ ವಿಮರ್ಶೆಯ ಕ್ರಮಗಳನ್ನು ಗಂಭೀರವಾಗಿ ಹೇಳಿಕೊಡುತ್ತಿರುವವರು ಇನ್ನೂ ವಿಶ್ವವಿದ್ಯಾಲಯಗಳಲ್ಲಿದ್ದಾರೆ. ಆದರೆ ಇಂಥ ಗಂಭೀರ ಮಂದಿಗೂ ತಮ್ಮ ಸಂಖ್ಯೆ ಹೆಚ್ಚು ಇಲ್ಲ; ತಮ್ಮಿಂದ ಏನಾದೀತು ಎಂಬ ಭಾವ ಮುತ್ತುತ್ತಿರುವುದು ಆತಂಕಕಾರಿಯಾಗಿದೆ. 

ಇಂಥ ಅಧೀರ ಮನಸ್ಥಿತಿಯ ಜಡರು ಹೊಸ ತಲೆಮಾರುಗಳಿಗೂ ತಮ್ಮ ಹತಾಶೆ, ಜಡತೆಗಳನ್ನು ಅಂಟಿಸತೊಡಗುತ್ತಾರೆ. ಪ್ರತಿ ತಲೆಮಾರಿನಲ್ಲೂ ಮುಕ್ತ ಮನಸ್ಸಿನ, ಹೊಸದನ್ನು ಕಲಿತು ತಮ್ಮ ಟೀಚಿಂಗಿಗೆ ಅಳವಡಿಸಿಕೊಳ್ಳಲು ಬಯಸುವ, ಗಂಭೀರ ಅಧ್ಯಾಪಕ, ಅಧ್ಯಾಪಕಿಯರಿರುತ್ತಾರೆ. ನುರಿತವರು ಹೊಸ ಹೊಸ ಅಧ್ಯಯನ ಕ್ರಮ, ಬೋಧನಾ ಕ್ರಮಗಳನ್ನು ಹೇಳಿಕೊಟ್ಟರೆ ಅವುಗಳಿಂದ ಹೊಸ ಟೀಚರುಗಳು ಸ್ಫೂರ್ತಿಗೊಂಡು ಹೊಸ ಉತ್ಸಾಹದಿಂದ ತರಗತಿಗಳಿಗೆ ಮರಳಬಲ್ಲರು. ಒಬ್ಬ ಮೇಡಂ, ಒಬ್ಬ ಮೇಷ್ಟ್ರು ಕೂಡ ತರಗತಿಗಳಲ್ಲಿ ಏನನ್ನಾದರೂ ಸೃಷ್ಟಿಸಬಲ್ಲರು ಎಂಬ ಬಗ್ಗೆ ಒಂದು ಸಮಾಜ ಎಂದೂ ನಂಬಿಕೆ ಕಳೆದುಕೊಳ್ಳಬಾರದು.

ಅದಿರಲಿ. ಅಮರ್ತ್ಯ ಸೇನ್ ಮತ್ತು ಏಷ್ಯಾದ ದೊಡ್ಡ ವಿದ್ವಾಂಸರು ಹೊರ ಹೋಗುವಂತೆ ಮಾಡಿದ ಮೇಲೆ ನಳಂದ ವಿಶ್ವವಿದ್ಯಾಲಯದ ಹೊಸ ಕಟ್ಟಡವೇನೋ ಬಂದಿದೆ. ಜ್ಞಾನವಿರೋಧಿಗಳ ಈ ಕಾಲದಲ್ಲಿ ನಳಂದದ ಆತ್ಮ ಹಾಗೂ ಕನಸು ಆ ಕಟ್ಟಡದಲ್ಲಿ ನೆಲೆಸುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೇನಂತೆ, ಬುದ್ಧದರ್ಶನದಿಂದ ಹುಟ್ಟಿದ ನಳಂದ ವಿಶ್ವವಿದ್ಯಾಲಯದ  ಕನಸು, ಕಲ್ಪನೆ ಸದಾ ನಮ್ಮೊಳಗಿರಲೇಬೇಕಾಗುತ್ತದೆ.



Latest Video


Nataraj Huliyar Official
YouTube Channel

SUBSCRIBE