Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
30 Mar 2025 ಮಿಂಚುಕತೆಯ ಗಾಢ ಸತ್ಯಗಳು

ಬುದ್ಧ, ನೀಷೆ ಥರದ ಫಿಲಾಸಫರ್‍ಸ್ ಒಂದೇ ಮಾತಿನಲ್ಲಿ, ಒಂದೇ ಸಾಲಿನಲ್ಲಿ ಹೇಳುವ ಗಾಢ ಸತ್ಯಗಳನ್ನು ಕವಿತೆ, ನಾಟಕ, ಕಾದಂಬರಿ ಬರೆಯುವವರು ಪುಟಗಟ್ಟಲೆ ಬರೆದು ಹುಡುಕಬೇಕಾಗುತ್ತದಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಸಾಹಿತ್ಯ ಹಾಗೂ ತತ್ವಜ್ಞಾನ ಎಂಬ ಎರಡೂ ಬಗೆಯ ಹುಡುಕಾಟಗಳ ಮಾರ್ಗಗಳಲ್ಲಿ ಮಿಂಚಿದ ಸತ್ಯಗಳು ಒಂದು ಜೀವಮಾನದ ಧ್ಯಾನದಿಂದಲೇ ಹುಟ್ಟಿರಬಲ್ಲವು. 'ಆಶೆಯೇ ದುಃಖಕ್ಕೆ ಕಾರಣ’ ಎಂಬ ಏಕವಾಕ್ಯ ತತ್ವಜ್ಞಾನ ಹುಟ್ಟಲು ಬುದ್ಧನ ಇಡೀ ಜೀವಮಾನದಲ್ಲಿ ನಡೆದ ಮಾನವ ಜೀವನದ ಅನುಭವಗಳ, ಸ್ವಂತದ ಅನುಭವಗಳ, ಅಥವಾ ಸಕಲ ಜೀವಿಗಳ ಅನುಭವಗಳ ನಿರಂತರ ಶೋಧನೆಗಳು ಕಾರಣವಾಗಿರಬಹುದು. 

ಹೀಗೆ ಅಡಕವಾಗಿ ಗಾಢ ಸತ್ಯ ಹಿಡಿಯುವ ಆಸೆ ದೊಡ್ಡ ದೊಡ್ಡ ಕಾದಂಬರಿ ಬರೆದವರಲ್ಲೂ ಇರಬಹುದು. ಕೆಲವು ವರ್ಷಗಳ ಕೆಳಗೆ ಜಗತ್ತಿನ ಅತಿ ಸಣ್ಣ ಕತೆ ಯಾವುದೆಂದು ತಡಕಾಡುತ್ತಿದ್ದೆ. ಆಗ ಅಮೆರಿಕನ್ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ಜಗತ್ತಿನ ಅತಿ ಸಣ್ಣ ಕತೆ ಬರೆದಿದ್ದಾನೆ ಎಂಬುದನ್ನು ಗಮನಿಸಿದೆ. 

ಹೆಮಿಂಗ್ವೆ ಆರು ಪದಗಳ ಅತಿ ಸಣ್ಣ ಕತೆಯನ್ನು ಬರೆಯುತ್ತೇನೆಂದು ತನ್ನ ಗೆಳೆಯರ ಜೊತೆ ಬೆಟ್ಸ್ ಕಟ್ಟಿದ್ದನಂತೆ. ಅಂಥ ಕತೆ ಬರೆದು ಹತ್ತು ಡಾಲರ್ ಬೆಟ್ಸ್ ಗೆದ್ದನಂತೆ. ೧೯೦೬ರ ಸುಮಾರಿನಲ್ಲಿ ಬರೆದ ಆ ಕತೆ ಹೆಮಿಂಗ್ವೆಗೆ ತಂದುಕೊಟ್ಟ ಹತ್ತು ಡಾಲರ್‍ಸ್ ಆ ಕಾಲಕ್ಕೆ ದೊಡ್ಡ ಮೊತ್ತ. ಆ ಅತಿಸಣ್ಣ ಕತೆ ಇದು: 

For Sale: Baby shoes, never worn. 
೧೯೯೦ರವರೆಗೂ ಇದು ಹೆಮಿಂಗ್ವೆ ಬರೆದ ಕತೆ ಎಂದು ಜನಕ್ಕೆ ಗೊತ್ತಿರಲಿಲ್ಲ. ಇಂಥವನ್ನು ಇಂಗ್ಲಿಷಿನಲ್ಲಿ, ವಿವಿಧ ದೇಶಭಾಷೆಗಳಲ್ಲಿ 'ಶಾರ್ಟೆಸ್ಟ್ ಸ್ಟೋರಿ’, 'ಫ್ಲ್ಯಾಶ್ ಫಿಕ್ಷನ್’ ಎನ್ನುತ್ತಾರೆ. ಕನ್ನಡದಲ್ಲಿ ಇವನ್ನು ಮಿಂಚುಕತೆ ಅಥವಾ ಮಿಂಚುಗತೆ ಎನ್ನಬಹುದು.

ಹೆಮಿಂಗ್ವೆಯ ಮಿಂಚುಕತೆ ಓದುವ ಮೊದಲು ಲ್ಯಾಟಿನ್ ಅಮೆರಿಕದ   Augusto Monterosso Bonilla ಎಂಬ ಕತೆಗಾರ ಸ್ಪ್ಯಾನಿಶ್ ಭಾಷೆಯಲ್ಲಿ ಬರೆದ El Dinosaurio (ದ ಡೈನೋಸರ್) ಜಗತ್ತಿನ ಅತಿಸಣ್ಣ ಕತೆ ಎಂದುಕೊಂಡಿದ್ದೆ. ಅಂಬರ್ತೋ ಇಕೋ ತನ್ನ Mouse or Rat? Translation as Negotiation ಪುಸ್ತಕದಲ್ಲಿ ಅನುವಾದದ ಸವಾಲುಗಳನ್ನು ಚರ್ಚಿಸಲು ಬಳಸಿದ ಕತೆ ಇದು. ಇದನ್ನು 'ಅನುವಾದಿಸಲಾಗದ ಕತೆ’ ಎನ್ನುತ್ತಿದ್ದರು.

‘Mouse or Rat?’ ಎಂಬ ಟ್ರಾನ್ಸ್‌ಲೇಶನ್ ಥಿಯರಿಯ ಪುಸ್ತಕದಲ್ಲಿ ಇಕೋ ಈ ಏಕವಾಕ್ಯ ಕತೆಯನ್ನು ಮತ್ತೊಂದು ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂದು ಚರ್ಚಿಸುತ್ತಾನೆ. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿ ಈ ಕತೆ ಹೀಗಿದೆ: 

Cuando despertó, el dinosaurio todavía estaba allí   

ವಿಕಿಪೀಡಿಯಾದಲ್ಲಿರುವ ಅದರ ಸರಳ ಇಂಗ್ಲಿಷ್ ಅನುವಾದ: When he awoke, the dinosaur was still there.

ಹೈಸ್ಕೂಲ್ ಹುಡುಗ ಶೋಯಿಂಕಾ ಹಿಂದೊಮ್ಮೆ ಅದನ್ನು IM TRANSLATE ಎಂಬ ಪೋರ್ಟಲ್‌ಗೆ ಹಾಕಿ ನೋಡಿದಾಗ ಬಂದ ಅದರ ಅನುವಾದ ಹೀಗಿತ್ತು: 

When woke up, the dinosaur was still there.

ಸ್ಪ್ಯಾನಿಶ್ ಮೂಲದ ಏಕವಾಕ್ಯ ಕತೆಯಲ್ಲಿ ಅವನು ಅಥವಾ ಅವಳು ಇಲ್ಲ. ಈ ಸ್ಪ್ಯಾನಿಷ್ ಕತೆಯ ಕನ್ನಡ ಅನುವಾದ ಹೀಗಿರಬಲ್ಲದು: 'ಎದ್ದಾಗ ಡೈನೋಸರ್ ಅಲ್ಲೇ ಇತ್ತು.’ ಈ ಥರದ ಕರ್ತೃ ಇಲ್ಲದ ವಾಕ್ಯ ಇಂಗ್ಲಿಷಿನಲ್ಲಿ ಕಷ್ಟ. ಸ್ಪ್ಯಾನಿಷ್ ಭಾಷೆಯಲ್ಲಿ, ಕನ್ನಡದಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಈ ತರದ ವಾಕ್ಯಗಳು ಸಾಧ್ಯ.

ಈ ಸ್ಪ್ಯಾನಿಶ್ ಕತೆಯನ್ನು ಓದುವಾಗ, 'ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾ ಮಾತಿನ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ಕಳೆದ ಸಲದ ಅಂಕಣದ ‘ಕೃತಕ ಜಾಣತನಕ್ಕೆ ಸವಾಲ್!’ ಬರಹಕ್ಕೆ ಪ್ರತಿಕ್ರಿಯಿಸುತ್ತಾ, ಕಾಮೆಂಟ್ಸ್ ವಿಭಾಗದಲ್ಲಿ ಗೆಳೆಯ ಶಿವಲಿಂಗಮೂರ್ತಿ, ’ಡೆರಿಡಾ ಹೇಳಿದ್ದು ಅರ್ಥದ ಮುಂದುವರಿಕೆಯೋ? ಮುಂದೂಡಿಕೆಯೋ?’ ಎಂದು ಕೇಳಿದ್ದರು. ಈಗ ಈ ಸ್ಪ್ಯಾನಿಶ್ ಏಕವಾಕ್ಯ ಕತೆಯ ಅರ್ಥದ ನಿರಂತರ ಮುಂದೂಡಿಕೆಯ ರೋಮಾಂಚನವನ್ನು ನೋಡಿ: 

೧. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಎದ್ದವರು ಯಾರು? ಅವನೋ? ಅವಳೋ? ಪ್ರಾಣಿಯೋ? ಜೀವಾತ್ಮನೋ? ಜೀವಾತ್ಮಳೋ? ಪ್ರಜ್ಞೆಯೋ?....ಹೀಗೆ ಓದಿನಲ್ಲಿ ಅರ್ಥವನ್ನು ಮುಂದೂಡುತ್ತಲೇ ಇರಬಹುದು!

೨. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಈ ಡೈನೋಸರ್ ಯಾರೋ ಎದ್ದಾಗ ಕಣ್ಣಿಗೆ ಕಂಡದ್ದೋ? ಅದು ಹಿಂದಿನ ರಾತ್ರಿ ಅಲ್ಲಿಗೆ ಬಂದು ಇನ್ನೂ ಅಲ್ಲೇ ಇದ್ದ ಡೈನೋಸರೋ? 

೩. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಈ ಡೈನೋಸರ್ ಕನಸಿನಲ್ಲಿ ಕಂಡದ್ದೋ? ಅಥವಾ ಕನಸೊಡೆದೆದ್ದಾಗ ಮನಸಿನಲ್ಲಿ ಉಳಿದ ಡೈನೋಸರೋ?

೪. ಅರವತ್ತಾರು ಮಿಲಿಯನ್ ವರ್ಷಗಳ ಹಿಂದೆ ಕಣ್ಮರೆಯಾದ ಡೈನೋಸರುಗಳ ಬಗ್ಗೆ ಈಗ ಓದಿ, ಅವುಗಳ ಚಿತ್ರ ನೋಡಿದ ಮೇಲೆ ಒಂದು ದಿನ ಎದ್ದವರ ಮನಸ್ಸಿನಲ್ಲಿ ಉಳಿದ ಚಿತ್ರವೋ ಇದು? ಕಲ್ಪನೆಯೋ? ಭ್ರಮೆಯೋ? ಎಷ್ಟೋ ಸಲ ನಮಗೆ ನಿಜಚಿತ್ರ, ಭ್ರಮಾಚಿತ್ರಗಳ ವ್ಯತ್ಯಾಸವೇ ಕಾಣದಂಥ ಸ್ಥಿತಿ ಸೃಷ್ಟಿಯಾಗುತ್ತದೆ; ಹಾಗೆ ಇದೂ ಅಂಥದೊಂದು ಸ್ಥಿತಿಯಲ್ಲಿ ಕಂಡ ಚಿತ್ರವೇ? 

ಈ ಕತೆಯನ್ನು ಸಿನಿಮಾ ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂಬ ಪ್ರಶ್ನೆ ಅಂಬರ್ತೋ ಇಕೋಗೆ ಎದುರಾಗುತ್ತದೆ. ಅಂಬರ್ತೋ ಇಕೋ ಪ್ರಕಾರ, ಅನುವಾದದ ವಿಶಾಲ ಪ್ರಕ್ರಿಯೆಯಲ್ಲಿ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಹೋಗುವುದು ಕೂಡ ಭಾಷಾಂತರವೇ. ಕತೆಯೊಂದು ಚಿತ್ರಕತೆಯಾಗುವುದು; ಕತೆ ನಾಟಕವಾಗುವುದು; ಕಾದಂಬರಿ ಸಿನಿಮಾ ಆಗುವುದು… ಇವೆಲ್ಲವೂ ಇಕೋ ಪ್ರಕಾರ ಭಾಷಾಂತರವೇ. ಕಾರಣ, ಭಾಷಾಂತರ ಎಂದರೆ ಒಂದು ಸಂಜ್ಞಾವ್ಯವಸ್ಥೆಯಿಂದ ಇನ್ನೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಗೊಳ್ಳುವುದು. ಇಲ್ಲಿ ಕತೆಯೊಂದು ಕತೆಯ ಸಂಜ್ಞಾವ್ಯವಸ್ಥೆಯಿಂದ ಅಥವಾ ಕತೆಯ ಭಾಷೆಯಿಂದ ಚಿತ್ರಕತೆ, ಸಿನಿಮಾದ ಭಾಷೆಗೆ ಅಥವಾ ಅವುಗಳ ಸಂಜ್ಞಾವ್ಯವಸ್ಥೆಗೆ ‘ಭಾಷಾಂತರ’ ಆಗುತ್ತದೆ ಎಂದುಕೊಳ್ಳಬಹುದು.

ಭಾಷಾಂತರದ ಈ ಆಟವನ್ನು ಮುಂದೆಂದಾದರೂ ಚರ್ಚಿಸಬಹುದು; ಈಗ ಮತ್ತೆ ಮಿಂಚುಕತೆಯ ಲೋಕಕ್ಕೆ ಮರಳೋಣ ಎಂದುಕೊಂಡಾಗ, ತಮಿಳು ಕತೆಗಾರ ಪ್ರೊಫೆಸರ್ ನಂಜುಂಡನ್ ನೆನಪಾಗುತ್ತಾರೆ. ನಂಜುಂಡನ್ ಇದ್ದಕ್ಕಿದ್ದಂತೆ ಒಂದು ಮಧ್ಯಾಹ್ನ ‘ವಿಶ್ವದ ಅತಿ ಸಣ್ಣ ಕತೆ ಇದು’ ಎಂದು ಒಂದು ಮಿಂಚುಗತೆಯನ್ನು ಹೇಳಿದ್ದರು. ಅದರ ವಿವರಗಳು ಮರೆತು ಹೋಗಿವೆ. ಕಾರ್ಡಿಗೆ ಅಂಟಿಕೊಂಡ ನೊಣದ ಕಾಲುಗಳ ಚಿತ್ರ ಆ ಕತೆಯಲ್ಲಿತ್ತು ಎಂಬುದು ಮಾತ್ರ ನೆನಪಾಗುತ್ತದೆ. 

ಸಾಮಾನ್ಯವಾಗಿ ಇಂಥ ವಿಶೇಷಗಳನ್ನು ಬರೆದಿಡುವ ನಾನು ಅವತ್ತು ಆ ಸಾಲನ್ನು ಡೈರಿಯಲ್ಲಿ ಬರೆದಿಡದೇ ಹೋದುದಕ್ಕೆ ವಿಷಾದ ಹುಟ್ಟುತ್ತದೆ. ಈ ಕತೆ ಕುರಿತು ನಂಜುಂಡನ್ ಅವರನ್ನೇ ಮತ್ತೆ ಕೇಳುವುದು ಇನ್ನೆಂದೂ ಸಾಧ್ಯವಿರಲಿಲ್ಲ; ನನ್ನ ಅನೇಕ ಪ್ರಿಯ ಮಿತ್ರರ ಹಾಗೆ ನಂಜುಂಡನ್ ಕೂಡ ಹಟಾತ್ತನೆ ತೀರಿಕೊಂಡರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಟ್ಯಾಟಿಸ್ಟಿಕ್ಸ್ ಪ್ರೊಫೆಸರ್ ಆಗಿದ್ದ ನಂಜುಂಡನ್ ವಿಶಿಷ್ಟ ನೋಟದ ತಮಿಳು ಕತೆಗಾರರಾಗಿದ್ದರು. ಜಾರ್ಜ್ ಲೂಯಿ ಬೋರ್ಹೆಸ್ ಅವರ ನೆಚ್ಚಿನ ಕತೆಗಾರನಾಗಿದ್ದ. ಬೋರ್ಹೆಸ್ ರೀತಿಯಲ್ಲಿ ತಮಿಳು ಕತೆಗಳನ್ನು ಬರೆಯುತ್ತಿದ್ದ ನಂಜುಂಡನ್ ಅವರ ಬದುಕು ಕೂಡ ಜೀವನಕ್ಕೆ ಅಂಟಿಕೊಂಡ ನೊಣದ ಕಾಲುಗಳ ಸ್ಥಿತಿಯಂತೆ ಇತ್ತು ಎಂಬುದು ನನ್ನ ಗ್ರಹಿಕೆ. ’ಕತೆಯನ್ನು ನಂಬು ಕತೆಗಾರ/ ಕತೆಗಾರ್ತಿಯನ್ನಲ್ಲ’ ಎಂಬ ಲಾರೆನ್ಸ್ ಮಾತನ್ನು ಒಪ್ಪುವ ನಾನು ನಂಜುಂಡನ್‌ಗೂ, ಅವರು ಹೇಳಿದ ಕತೆಗೂ ಸಂಬಂಧ ಕಲ್ಪಿಸುವ ಬಾಲಿಶ ಓದಿಗೆ ಇಳಿಯಲಾರೆ. ಆದರೆ ವಿಚಿತ್ರ ಪ್ರತಿಮೆಗಳನ್ನು ಸೃಷ್ಟಿಸಬಲ್ಲವರಾಗಿದ್ದ ನಂಜುಂಡನ್ ಇಂಥ ಮಿಂಚುಗತೆಗಳನ್ನು ತಮ್ಮ ತಮಿಳು ಕತೆಗಳ ಒಳಗೇ ಸೃಷ್ಟಿಸಿರಬಹುದು ಎಂದು ಮಾತ್ರ ಊಹಿಸುವೆ.

ಯಾಕೆಂದರೆ ಕತೆ, ಕಾದಂಬರಿಗಳ ವ್ಯಾಪ್ತಿಯುಳ್ಳ ಅನೇಕ ಸಾಲುಗಳು ಸಾಹಿತ್ಯ ಕೃತಿಗಳಲ್ಲಿ ಮಿಂಚುತ್ತಿರುತ್ತವೆ. ಟಾಲ್‌ಸ್ಟಾಯ್ ಮತ್ತೆ ಮತ್ತೆ ತಿದ್ದಿ ತಮ್ಮ ‘ಅನ್ನಾಕರೆನಿನಾ’ ಕಾದಂಬರಿಯ ಮೊದಲ ಸಾಲನ್ನು ಬರೆದರು. ರಷ್ಯನ್ ‘ಅನ್ನಾಕರೆನಿನಾ’ದ ಆರಂಭವಾಕ್ಯದ ಹಲ ಬಗೆಯ ಇಂಗ್ಲಿಷ್ ಅನುವಾದಗಳಿವೆ. ಕಾನಸ್ಟನ್ಸ್ ಗ್ಯಾರ್‍ನೆಟ್ ಮಾಡಿದ ಅನುವಾದ: Happy families are all alike; every unhappy family is unhappy in its own way. ತೇಜಶ್ರೀ ಮಾಡಿದ ‘ಅನ್ನಾಕರೆನಿನಾ’ ಕಾದಂಬರಿಯ ಸಂಗ್ರಹಾನುವಾದದಲ್ಲಿ ಈ ಮೊದಲ ಸಾಲು: 'ಸುಖೀ ಕುಟುಂಬಗಳೆಲ್ಲ ಒಂದೇ ಥರ; ಒಂದೊಂದು ದುಃಖಿ ಕುಟುಂಬವೂ ದುಃಖಿಯಾಗಿರುತ್ತದೆ ತನ್ನದೇ ಥರ.’  

‘ಅನ್ನಾಕರೆನಿನಾ’ ಕಾದಂಬರಿಯ ಆರಂಭದ ವಾಕ್ಯವೇ ಒಂದು ಕಾದಂಬರಿಯ ಅರ್ಥವ್ಯಾಪ್ತಿಯನ್ನು ಮುಂದಿಡುವಂತಿದೆ. ಸರಳವಾಗಿ ನೋಡಿದರೆ, ಇಡೀ ಕಾದಂಬರಿ  unhappy/ಅಸಂತುಷ್ಟ/ಅಸುಖಿ ಸಂಸಾರಗಳು ತಂತಮ್ಮದೇ ಆದ ರೀತಿಯಲ್ಲಿ ದುಃಖಿಗಳಾಗಿರುವ ಕತೆಗಳನ್ನು ಹೇಳುತ್ತದೆ.  ಸಾಹಿತ್ಯ ಹುಟ್ಟುವುದೇ ಮಾನವಲೋಕದ ದುಃಖವನ್ನು ಅಥವಾ ಜೀವಲೋಕದ ದುಃಖವನ್ನು ಹೇಳಲು ತಾನೆ? 

ದುಃಖ ಆಳ; ಆನಂದ ಹಗುರ ಎಂಬ ನನ್ನ ಬಹುಕಾಲದ ನಂಬಿಕೆಯ ಹಿನ್ನೆಲೆಯಲ್ಲಿ ಹೆಮಿಂಗ್ವೆಯ For Sale: Baby shoes, never worn ಮಿಂಚುಗತೆಯನ್ನು ದುಃಖದ ನೋಟದಲ್ಲೇ ಓದಿದೆ: ಯಾರೋ ತಂದೆ, ತಾಯಿ ಪ್ರಾಯಶಃ ತಮ್ಮ ಮಗುವಿಗಾಗಿ ತಂದಿಟ್ಟ ಶೂ ತೊಡುವ ಮೊದಲೇ ಮಗು ತೀರಿಕೊಂಡಿತೆ? ಈಗ ಆ ಶೂಗಳು ಮಾರಾಟಕ್ಕಿವೆಯೆ? 

ಈ ಮಿಂಚುಗತೆಯ ಒಂದು ಸೂಚನೆಯನ್ನಷ್ಟೇ ಹೇಳಿ, ಇದರ ಅರ್ಥದ ನಿರಂತರ ಮುಂದೂಡಿಕೆಯ ಪ್ರಯೋಗದ ಸೃಜನಶೀಲ ಆಟವನ್ನು ನಿಮಗೇ ದಾಟಿಸುತ್ತೇನೆ! 

ಅದರ ಜೊತೆಗೇ ವೆಬ್‌ಸೈಟೊಂದರಲ್ಲಿ ಕಂಡ ಮತ್ತೊಂದು ಮಿಂಚುಗತೆ: 

I always make two cups of coffee.

ಈ ಮಿಂಚುಕತೆಯ ಅರ್ಥದ ಮುಂದೂಡಿಕೆ ಕೂಡ ಈ ಅಂಕಣದ ಪ್ರತಿಭಾವಂತ ಓದುಗಿಯರಲ್ಲಿ, ಓದುಗರಲ್ಲಿ ನಡೆಯುತ್ತಲೇ ಇರಬಲ್ಲದು ಎಂಬ ಅಚಲ ನಂಬಿಕೆಯಿಂದ ಈ ಕತೆಯ ಬಗ್ಗೆ ಏನೂ ಹೇಳದೆ ಹಾಗೇ ಕೊಟ್ಟಿರುವೆ!
 
  
 

blog
23 Mar 2025 ಕೃತಕ ಜಾಣತನಕ್ಕೆ ಸವಾಲ್!

ಈ ಪುಸ್ತಕದ ಸಂಪಾದಕನನ್ನು ಕುರಿತ ಪ್ರಶ್ನೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಜಾಣತನ ಏನು ಉತ್ತರ ಕೊಡಬಹುದು ಎಂಬ ಕುತೂಹಲ ಕನ್ನಡ ಅಧ್ಯಾಪಕಿಯೊಬ್ಬರಿಗೆ ಹುಟ್ಟಿತು. ಅವರು ಮೆಟಾ ಎಐಗೆ ಆ ಪ್ರಶ್ನೆ ಹಾಕಿದರು. ಅವರು ಆ ಪ್ರಶ್ನೆ ಹಾಕಿದ್ದು ನಟರಾಜ್ ಹುಳಿಯಾರ್‍ ಸಂಪಾದಿಸಿದ The Sour Mango Tree ಎಂಬ ಲಂಕೇಶರ ಆಯ್ದ ಕೃತಿಗಳ ಇಂಗ್ಲಿಷ್ ಅನುವಾದಗಳ ಸಂಕಲನದ ಬಗ್ಗೆ.  

ಈಚೆಗೆ ಪೆಂಗ್ವಿನ್-ರಾಂಡಮ್ ಹೌಸ್‌ ಮಾಡರ್ನ್ ಕ್ಲಾಸಿಕ್ಸ್ ಸರಣಿಯಲ್ಲಿ ಲಂಕೇಶರು ಬರೆದ ಎಲ್ಲ ಪ್ರಕಾರಗಳ ಮುಖ್ಯ ಕೃತಿಗಳನ್ನು ಒಳಗೊಂಡಿರುವ The Sour Mango Tree ಸಂಕಲನವನ್ನು ಪ್ರಕಟಿಸಿದೆ. ಈ ಮುಖಪುಟವನ್ನು ಮೊನ್ನೆ ಕೆಲವರಿಗೆ ಕಳಿಸಿದೆ. ಈ ಪುಸ್ತಕದ ಮುಖಪುಟವನ್ನು ಗೂಗಲ್‌ನಲ್ಲಿ ನೋಡಿದ್ದ ಅಧ್ಯಾಪಕಿ ಕೇಳಿದ ‘What inspired Nataraj Huliyar to edit Lankesh's works?' ಎಂಬ ಪ್ರಶ್ನೆಗೆ ಮೆಟಾ ಎಐ ಕೊಟ್ಟ ಉತ್ತರ ಈ ಸಲದ ಅಂಕಣಕ್ಕೆ ಕುತೂಹಲಕರ ವಸ್ತುವಾಗಿ ಕಂಡಿತು; ಹೀಗಾಗಿ ಈ ಟಿಪ್ಪಣಿ. 

‘ಲಂಕೇಶರ ಕೃತಿಗಳನ್ನು ಸಂಪಾದಿಸಲು ನಟರಾಜ್ ಹುಳಿಯಾರ್‍‌ಗೆ ಪ್ರೇರಣೆಯಾದ ಅಂಶ ಯಾವುದು?’ ಎಂಬ ಈ ಪ್ರಶ್ನೆಗೆ ಎಐ ಉತ್ತರ: 

Nataraj Huliyar's inspiration to edit P. Lankesh's works likely stems from his deep respect for Lankesh's literary contributions and his desire to share those works with a wider audience. As a scholar and editor, Huliyar may have seen the value in curating Lankesh's writings, which offer insightful commentary on Kannada culture, society, and politics.       

By editing "The Sour Mango Tree: Selected Works", Huliyar may have aimed to introduce Lankesh's oeuvre to new readers, while also providing a fresh perspective on his works for those already familiar with them. Additionally, Huliyar's effort may have been driven by a sense of responsibility to preserve and promote Kannada literary heritage. 

ಈ ಉತ್ತರ ಓದಿದ ಇಬ್ಬರು ಗೆಳೆಯರು, ‘ಗುಡ್’, ‘ಇಂಟೆರೆಸ್ಟಿಂಗ್’ ಎಂದರು. ಆದರೆ ಇದನ್ನು ಓದಿದ ತಕ್ಷಣ, ಇದೊಂದು ಕಿಲಾಡಿ ಉತ್ತರ ಅಥವಾ ‘ಸ್ಮಾರ್ಟ್ ಆನ್ಸರ್‍’ ಎಂದು ನನಗನ್ನಿಸಿತ್ತು. ಈ ಕೃತಕ ಜಾಣತನದ ಆಳವನ್ನು ಪರೀಕ್ಷಿಸುವ ಕುತೂಹಲದಿಂದ ಮತ್ತಷ್ಟು ಹತ್ತಿರದಿಂದ ಈ ಉತ್ತರವನ್ನು ನೋಡಿದೆ. ಈ ಪುಸ್ತಕದಲ್ಲಿ ಏನಿದೆ ಎಂಬುದು ಗೊತ್ತಿರದೆ ಈ ಪುಸ್ತಕದ ಬ್ಲರ್ಬಿನಲ್ಲಿದ್ದ, ಅಥವಾ ಈ ಪುಸ್ತಕದ ಬಗ್ಗೆ ಗೂಗಲ್ ಕೊಟ್ಟ ವಿವರಗಳನ್ನು ಆಧರಿಸಿ, ಊಹಿಸಿ ಎಐ ಉತ್ತರಿಸಿತ್ತು. ಆ ಉತ್ತರದ ಒಂದೊಂದೇ ವಿವರವನ್ನು ಗಮನಿಸಿದಂತೆಲ್ಲ ಅದರ ಕಿಲಾಡಿ ಜಾಣತನ ಕಚಗುಳಿಯಿಡುವಂತಿತ್ತು. ಈ ಕಿಲಾಡಿತನವನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಲು ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡೆ: 

‘ಪ್ರಾಯಶಃ ಲಂಕೇಶರ ಸಾಹಿತ್ಯಕ ಕೊಡುಗೆಗಳ ಬಗೆಗಿನ ಆಳವಾದ ಗೌರವದಿಂದ ಹಾಗೂ ಈ ಕೃತಿಗಳನ್ನು ವಿಸ್ತೃತ ಓದುಗಸಮುದಾಯದ ಜೊತೆಗೆ ಹಂಚಿಕೊಳ್ಳುವ ಆಸೆಯಿಂದ ಲಂಕೇಶರ ಕೃತಿಗಳನ್ನು ಸಂಪಾದಿಸುವ ಪ್ರೇರಣೆ ನಟರಾಜ್ ಹುಳಿಯಾರ್‍‌ಗೆ ಹುಟ್ಟಿದಂತಿದೆ. ಕನ್ನಡ ಸಂಸ್ಕೃತಿ, ಸಮಾಜ ಮತ್ತು ರಾಜಕಾರಣದ ಬಗ್ಗೆ ಒಳನೋಟವುಳ್ಳ ವಿವರಣೆ, ವ್ಯಾಖ್ಯಾನಗಳನ್ನು ಕೊಡುವ ಲಂಕೇಶರ ಕೃತಿಗಳನ್ನು ಸಂಗ್ರಹಿಸಿಕೊಡುವುದರ ಮೌಲ್ಯವನ್ನು ಒಬ್ಬ ವಿದ್ವಾಂಸ ಹಾಗೂ ಸಂಪಾದಕನಾಗಿ ನಟರಾಜ್ ಹುಳಿಯಾರ್‍ ಕಂಡುಕೊಂಡಿರಬಹುದು.     

‘ದ ಸೋರ್‍ ಮ್ಯಾಂಗೋ ಟ್ರೀ: ಸೆಲೆಕ್ಟೆಡ್ ವರ್ಕ್ಸ್’ ಸಂಪಾದಿಸುವ ಮೂಲಕ ಲಂಕೇಶರ ಸಮಗ್ರ ಕೃತಿಗಳನ್ನು ಹೊಸ ಓದುಗರಿಗೆ ಪರಿಚಯಿಸುವ ಗುರಿ ಹುಳಿಯಾರ್‍‌ಗೆ ಪ್ರಾಯಶಃ ಇರಬಹುದು; ಅಲ್ಲದೆ, ಈಗಾಗಲೇ ಲಂಕೇಶರ ಕೃತಿಗಳ ಪರಿಚಯ ಇರುವವರಿಗೂ ಹೊಸ ನೋಟಗಳನ್ನು ಒದಗಿಸುವ ಗುರಿಯೂ ಇರಬಹುದು. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಪಸರಿಸುವ ಹೊಣೆಗಾರಿಕೆಯ ಪ್ರಜ್ಞೆಯಿಂದ ಕೂಡ ಹುಳಿಯಾರ್‍ ಪ್ರಯತ್ನಗಳು ಪ್ರೇರಣೆಗೊಂಡಿರಬಹುದು.’ 

ಈ ‘ಕೃಜಾ’ ಉತ್ತರ ಕಿಲಾಡಿ ಉತ್ತರ ಯಾಕೆಂದು ಹೊಳೆಯಿತೆ? ಇಂಥ ಮೇಲ್ಪದರದ ವಿವರಣೆಗಳು ಒಂಥರದಲ್ಲಿ ಸುಲಭ. ಇಂಥ ಬುಡುಬುಡಿಕೆ ಮಾತುಗಳನ್ನು ನೀವು ನಿಮ್ಮ ಸುತ್ತಮುತ್ತ ಕೇಳುತ್ತಲೇ ಇರುತ್ತೀರಿ. ಉದಾಹರಣೆಗೆ, ಕುವೆಂಪು ಕುರಿತ ಭಾಷಣಕಾರರೊಬ್ಬರ ಭಾಷಣದ ಅಥವಾ ಬರಹದ ಸ್ಯಾಂಪಲ್ ನೋಡಿ: 

‘ಮಹಾಕವಿ ಕುವೆಂಪು ಕನ್ನಡವನ್ನು ಕಟ್ಟುವ ಕೆಲಸಕ್ಕೆ ದಣಿವರಿಯದೆ ಸದಾ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಕುವೆಂಪು ಕನ್ನಡ ಸಂಸ್ಕೃತಿಯನ್ನು ರೂಪಿಸುವ ಅನನ್ಯ ಹೊಣೆಗಾರಿಕೆಯಿಂದ ಸಾಹಿತ್ಯದ ಸರ್ವ ಪ್ರಕಾರಗಳಲ್ಲೂ ಕೈಯಾಡಿಸಿದರು. ಪ್ರಖರ ವೈಚಾರಿಕ ದೃಷ್ಟಿಕೋನದಿಂದ ಸಮಾಜವನ್ನು ವಿಶ್ಲೇಷಿಸುತ್ತಿದ್ದ ವಿಶ್ವಮಾನವ ಕುವೆಂಪು ಆಳವಾದ ಸಾಮಾಜಿಕ ಪ್ರಜ್ಞೆಯಿಂದ ಬರೆದರು, ದಿಟ್ಟವಾಗಿ ಮಾತಾಡಿದರು…ಅಸಾಮಾನ್ಯ ಎತ್ತರಕ್ಕೆ ಏರಿದರು.’

ಈ ಭಾಷಣ ಅಥವಾ ಬರಹ ಯಾರದು, ಇದು ಎಲ್ಲಿದೆ ಎಂದು ಅನಗತ್ಯ ಕುತೂಹಲದಿಂದ ಹುಡುಕದಿರಿ! ಇಂಥ ಭಾಷಣಗಳನ್ನು, ಬರಹಗಳನ್ನು ನೀವು ನಿತ್ಯ ನೋಡುತ್ತಿರುತ್ತೀರಿ. ಇವು ಅನೇಕ ಬುಡುಬುಡಿಕೆ ಭಾಷಣಕಾರರ ನಿತ್ಯದ ಟೆಂಪ್ಲೆಟ್‌ಗಳು ಅಥವಾ ಮಾದರಿ ಚೌಕಟ್ಟುಗಳು! ಈ ಚೌಕಟ್ಟುಗಳಲ್ಲಿ ಕೃತಿಯ ಹೆಸರನ್ನು ಬದಲಿಸಿ, ಕೃತಿ ಬರೆದವರ ಹೆಸರಿನ ಬದಲಿಗೆ ಮತ್ತೊಬ್ಬರ ಹೆಸರು ಹಾಕಿದರೆ ಅದು ಆ ಮತ್ತೊಬ್ಬರನ್ನು ಕುರಿತ ಭಾಷಣವಾಗುತ್ತದೆ! 

ಅಂದರೆ, ಮೇಲಿನ ಭಾಷಣ ಅಥವಾ ಬರಹದಲ್ಲಿ ಕುವೆಂಪು ಬದಲಿಗೆ ಬೇಂದ್ರೆಯವರ ಹೆಸರು ಹಾಕಿದರೂ ನಡೆಯುತ್ತದೆ; ತೇಜಸ್ವಿಯವರ ಹೆಸರು ಹಾಕಿದರೂ ಯಾರೂ ಬೆರಳು ಮಾಡಿ ತೋರಿಸುವುದಿಲ್ಲ! ಅದೇ ರೀತಿ, ‘ದ ಸೋರ್‍ ಮ್ಯಾಂಗೋ ಟ್ರೀ’ ಸಂಕಲನದ ಸಂಪಾದಕನನ್ನು ಕುರಿತು ‘ಕೃಜಾ’ ಕೊಟ್ಟಿರುವ ಉತ್ತರದಲ್ಲಿ ಸಂಪಾದಕ ನಟರಾಜ್ ಹುಳಿಯಾರ್‍ ಬದಲಿಗೆ, ಸಂಪಾದಕ ತಾರಕೇಶ್ವರ್‍ ಎಂದರೂ ನಡೆಯುತ್ತದೆ; ‘ಲಂಕೇಶರ ಆಯ್ದ ಕೃತಿಗಳು’ ಎಂಬುದರ ಬದಲಿಗೆ ‘ಶ್ರೀಕೃಷ್ಣ ಆಲನಹಳ್ಳಿಯವರ ಆಯ್ದ ಕೃತಿಗಳು’ ಎಂದರೂ ನಡೆಯುತ್ತದೆ!  

ಎಐ ಉತ್ತರಗಳು ಸೃಷ್ಟಿಸುವ ಸವಾಲು ಇಷ್ಟು ಸರಳವಲ್ಲ ಎಂಬುದು ನಿಜ. ಎಐ ಉಪಯೋಗ ಕೆಲವೆಡೆ ಅದ್ಭುತವಾಗಿದೆ. ಅದು ಇಂಗ್ಲಿಷಿನಲ್ಲಿ ಕವಿತೆಗಳಿಗೆ ಟೈಟಲ್ ಕೊಡುವ ಅಚ್ಚರಿಯನ್ನು ಇದೇ ಅಂಕಣದ ‘ಇನ್ನಷ್ಟು ಟೈಟಲ್ ಬೇಕೆ?’ ಎಂದು ಅದು ಕೇಳಿತು’ ಎಂಬ ಲೇಖನದಲ್ಲಿ ಹಿಂದೊಮ್ಮೆ ಬರೆದಿದ್ದೇನೆ. ಎಐ ಅಲ್ಲಿಂದ, ಇಲ್ಲಿಂದ ಕಿತ್ತು ಹಾಕಿ ಕಿಲಾಡಿ ಕತೆಗಳನ್ನು ಬರೆಯುವುದನ್ನೂ ನೋಡಿದ್ದೇನೆ; ಶೇಕ್‌ಸ್ಪಿಯರ್‍, ಎಲಿಯಟ್ ಬಗ್ಗೆ ಸ್ಟೂಡೆಂಟುಗಳಿಗೆ ಅದು ಕ್ಷಣಮಾತ್ರದಲ್ಲಿ ಅಸೈನ್‌ಮೆಂಟ್ ಬರೆದುಕೊಡುವುದನ್ನೂ ಕೇಳಿದ್ದೇನೆ. ಈ ಎಲ್ಲದರಲ್ಲೂ ಜಾಣತನ, ಸ್ಮಾರ್ಟ್‌ನೆಸ್ ಎದ್ದು ಕಾಣುವುದನ್ನು ನೀವು ಗಮನಿಸಿರಬಹುದು. 

ಆದರೂ ಕೆಲ ಬಗೆಯ ವಿಜ್ಞಾನದ ಪ್ರಯೋಗಗಳಲ್ಲಿ, ವೈದ್ಯಕೀಯ ಚಿಕಿತ್ಸೆಗಳಲ್ಲಿ ಎಐ ಕ್ರಾಂತಿಕಾರಕ ಕೆಲಸ ಮಾಡತೊಡಗಿರುವುದು ಕೂಡ ನಿಜ. ಮೊನ್ನೆ ತಾನೇ X ಡಿಜಿಟಲ್ ವೇದಿಕೆಯ GROK ಎಂಬ ಸಾಧನ ಇಂಡಿಯಾದ ರಾಜಕಾರಣಿಗಳ ಬಗ್ಗೆ ಖಡಕ್ ಸತ್ಯದ ಉತ್ತರ ಕೊಡುತ್ತಿರುವುದನ್ನು ಕಂಡು ಈ ಸತ್ಯಪಿಶಾಚಿ ಗ್ರೋಕನ್ನೇ ಇಂಡಿಯಾದಿಂದ ಬ್ಯಾನ್ ಮಾಡುವ ಹೊಂಚು ಕೂಡ ನಡೆಯುತ್ತಿದೆ!

ಇಷ್ಟಾಗಿಯೂ, ಮೇಲೆ ಹೇಳಿದ ಲಂಕೇಶರ ’ದ ಸೋರ್‍ ಮ್ಯಾಂಗೋ ಟ್ರೀ’ ಪುಸ್ತಕದಲ್ಲಿರುವ ‘ಸಹಪಾಠಿ’ ಕತೆಯ ‘ದ ಕ್ಲಾಸ್‌ಮೇಟ್’ ಎಂಬ ಇಂಗ್ಲಿಷ್ ಅನುವಾದವನ್ನು ಎಐ ನಿಜಕ್ಕೂ ಸೂಕ್ಷ್ಮವಾಗಿ ಗ್ರಹಿಸಬಲ್ಲದೆ? ‘ಸಹಪಾಠಿ’ ಕತೆಯನ್ನು ‘ಶತಮಾನದ ಕನ್ನಡ ಕತೆ’ ಎಂದು ಬಣ್ಣಿಸಿದ ಡಿ. ಆರ್‍. ನಾಗರಾಜರ ವಿಶಿಷ್ಟ ಸಾಂಸ್ಕೃತಿಕ ವ್ಯಾಖ್ಯಾನ ಎಐಗೆ ದಕ್ಕಬಲ್ಲದೆ? ಅಥವಾ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾದ ಕನ್ನಡದ ಕಿ.ರಂ. ನಾಗರಾಜ್, ಓ.ಎಲ್. ನಾಗಭೂಷಣಸ್ವಾಮಿ, ಎಚ್.ಎಸ್. ರಾಘವೇಂದ್ರರಾವ್, ಆಶಾದೇವಿ, ರಾಜೇಂದ್ರ ಚೆನ್ನಿ ಥರದವರಂತೆ; ಅಥವಾ ಇಂಗ್ಲಿಷಿನ ವಿಲಿಯಂ ಎಂಪ್ಸನ್ ಅಥವಾ ಹೆರಾಲ್ಡ್ ಬ್ಲೂಮ್ ಥರದವರಂತೆ ಎಐ ಈ ಕತೆಯನ್ನು ನಿಕಟವಾಗಿ ಓದಬಲ್ಲದೆ? ಈ ಥರದ ಸೂಕ್ಷ್ಮ ಕಣ್ಣು, ವಿಶೇಷ ಗ್ರಹಿಕೆಗಳ ಮೂಲಕ ಕೃತಿಗಳ ಸಂಕೀರ್ಣ ಅರ್ಥಗಳನ್ನು ‘ಎಐ’ ವಿವರಿಸುವ ಸಾಧ್ಯತೆ ಸದ್ಯದಲ್ಲಂತೂ ಕಾಣುತ್ತಿಲ್ಲ. ‘ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾನ ಸೃಜನಶೀಲ ಸವಾಲಿನ ಕೆಲಸವನ್ನು ಕೃಜಾ ಕೈಗೆತ್ತಿಕೊಳ್ಳಬಲ್ಲದೆ? ಅಕಸ್ಮಾತ್ ಕೈಗೆತ್ತಿಕೊಂಡರೂ, ಅದು ಕೊಡುತ್ತಿರುವುದು ಅರ್ಥವೋ ಅನರ್ಥವೋ ಎಂಬುದನ್ನು ಮಾತ್ರ ನಿಮ್ಮ ಸಹಜ ಬುದ್ಧಿಯೇ ತೀರ್ಮಾನಿಸಬೇಕಾಗುತ್ತದೆ.

ಹೀಗಿದ್ದರೂ ಸಾಹಿತಿಗಳಾಗಲೀ, ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಾಗಲೀ ಎಐ ಸವಾಲನ್ನು ತೀರಾ ಹಗುರಾಗಿ ನೋಡಿ ಆರಾಮಾಗಿರಲಾಗದು! ಅನುಭವ ಶೋಧನೆಯನ್ನು, ಅನುಭವ ಮಂಡನೆಯನ್ನು, ಕೃತಿ ರಚನೆಯನ್ನು; ಕೃತಿಗಳ ಓದು, ವ್ಯಾಖ್ಯಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು, ಆಳವಾಗಿಸುವುದು ಹಾಗೂ ಸೃಜನಶೀಲಗೊಳಿಸುವುದೇ ಎಲ್ಲ ಬಗೆಯ ಕೃತಕ ಜಾಣತನಕ್ಕೆ ಉತ್ತರವಾಗಬಲ್ಲದೇನೋ! ಸ್ಟೂಡೆಂಟುಗಳು ಒಂದರ ಮೇಲೊಂದು ಕೃಜಾ ಅಸೈನ್‌ಮೆಂಟುಗಳನ್ನು ತಂದುಕೊಡಬಹುದು; ಆದರೆ ಅವರಿಗೆ ಕೇವಲ ಐದು ನಿಮಿಷಗಳ ಕಾಲ ಒಂದು ಪುಸ್ತಕದ ಸೂಕ್ಷ್ಮ ಅಂಶಗಳನ್ನು ನೇರವಾಗಿ ಹೇಳುವಂತೆ ಮೇಡಂ, ಮೇಷ್ಟ್ರುಗಳು ಕೇಳಿ ನೋಡಲಿ: ಅವರ ಸಹಜ ಬುದ್ಧಿಯೆಷ್ಟು, ಸ್ವಂತ ಬುದ್ಧಿಯ ಶಕ್ತಿಯೆಷ್ಟು ಎಂಬುದು ಕೇಳಿದವರಿಗೂ ಕೇಳಿಸಿಕೊಂಡವರಿಗೂ ನಿಧಾನಕ್ಕೆ ಹೊಳೆಯತೊಡಗುತ್ತದೆ. 

ಆದರೂ ‘ಇದು ಬರಿ ಎಐ ಅಲ್ಲೋ ಅಣ್ಣ! ಎಂಬುದನ್ನೂ ಹೇಳಲೇಬೇಕು!

blog
16 Mar 2025 ಅಂಬೇಡ್ಕರ್ ತೆರೆದ ಆತ್ಮಕತೆಯ ಹಾದಿ

ಗೆಳೆಯರೊಬ್ಬರು ರಿಸರ್ಚ್ ಪ್ರಾಜೆಕ್ಟಿಗಾಗಿ ದಲಿತ ಆತ್ಮಚರಿತ್ರೆಗಳನ್ನು ಹುಡುಕುತ್ತಿದ್ದರು. ಅವರ ಹುಡುಕಾಟದ ಜಾಡಿನಲ್ಲಿ ಹೊರಟ ನಾನು ದಯಾ ಪವಾರರ ಮರಾಠಿ ಆತ್ಮಚರಿತ್ರೆ ‘ಬಲುತ’ ಭಾರತದ ಮೊದಲ ದಲಿತ ಆತ್ಮಚರಿತ್ರೆ ಎಂದು ದಾಖಲಾಗಿದ್ದನ್ನು ಗಮನಿಸಿದೆ. ‘ಬಲುತ’ಕ್ಕೂ ಮೊದಲು, ಆಧುನಿಕ ಕನ್ನಡದ ಮೊದಲ ದಲಿತ ಸಾಹಿತಿ ಡಿ. ಗೋವಿಂದದಾಸ್ ೧೯೪೦-೪೪ರ ನಡುವೆ ಬರೆದ ಅಪೂರ್ಣ ಆತ್ಮಚರಿತ್ರೆಯ ಪುಟಗಳು ಎಂ.ಎಸ್. ಶೇಖರ್ ಸಂಪಾದಿಸಿರುವ ‘ಡಿ. ಗೋವಿಂದದಾಸ್ ಸಮಗ್ರ ಸಾಹಿತ್ಯ’ ಪುಸ್ತಕದಲ್ಲಿವೆ. ಗೋವಿಂದದಾಸ್ ಅವರ ‘ನನ್ನ ಆತ್ಮಚರಿತೆ’ ಕನ್ನಡದ ಮೊದಲ ದಲಿತ ಆತ್ಮಚರಿತ್ರೆ ಎಂದು ಹೊಂಬಯ್ಯ ಹೊನ್ನಲಗೆರೆ ತಮ್ಮ ಥೀಸಿಸ್ಸಿನಲ್ಲಿ ತೋರಿಸಿಕೊಟ್ಟಿದ್ದು ನೆನಪಾಯಿತು. ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಕನ್ನಡದ ಮೊದಲ ಪೂರ್ಣ ದಲಿತ ಆತ್ಮಕತೆಯೆಂಬುದು ಕೂಡ ಈಗಾಗಲೇ ದಾಖಲಾಗಿದೆ. 

ಅದೇನೇ ಇದ್ದರೂ, ಅಂಬೇಡ್ಕರ್ ಅವರ ‘ವೆಯ್ಟಿಂಗ್ ಫಾರ್ ಎ ವೀಸಾ’ ಎಂಬ ಆತ್ಮಚರಿತ್ರಾತ್ಮಕ ಬರವಣಿಗೆಯ ಮೂವತ್ತು-ನಲವತ್ತು ಪುಟಗಳೇ ಇಂಡಿಯಾದ ಮೊದಲ ದಲಿತ ಆತ್ಮಚರಿತ್ರೆ ಎಂದು ನನಗನ್ನಿಸಿದೆ. ಕಾರಣ, ಮುಂದೆ ಬಂದ ದಲಿತ ಆತ್ಮಚರಿತ್ರೆಗಳಲ್ಲಿ ಆತ್ಮಚರಿತ್ರೆಯೇ ಸಮುದಾಯದ ಪ್ರಾತಿನಿಧಿಕ ಚರಿತ್ರೆಯಾಗಲು ಅಗತ್ಯವಾಗಿದ್ದ ಮೂಲ ಮಾದರಿಗಳು ‘ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳಲ್ಲಿವೆ. ಈ ಮೂಲ ಮಾದರಿಗಳನ್ನು ಹೀಗೆ ಪಟ್ಟಿ ಮಾಡಬಹುದು: 

೧. ದಲಿತ ಲೇಖಕ, ಲೇಖಕಿಯರು ತಮ್ಮ ಅನುಭವವನ್ನು ಪ್ರಾಮಾಣಿಕವಾಗಿ ಹೇಳುತ್ತಲೇ ಅದು ದಲಿತ ಸಮುದಾಯದ ಕತೆಯಾಗುವುದು; ತಮ್ಮ ಕತೆಯ ಜೊತೆಗೇ ತಮ್ಮಂತೆ ಅವಮಾನಕ್ಕೊಳಗಾದ ಇತರರ ಕತೆಯನ್ನೂ ಹೇಳುವುದು.
೨. ದಲಿತ ಬದುಕಿನ ಅವಮಾನದ ಕತೆ ಹೇಳುತ್ತಲೇ ಅದು ಸವರ್ಣೀಯ ಸಮಾಜದ ಕ್ರೌರ್ಯದ ಹಾಗೂ ಭಾರತದ ಸಾವಿರಾರು ವರ್ಷಗಳ ಭೀಕರ ಅಸ್ಪೃಶ್ಯತೆಯ ಚರಿತ್ರೆಯ ದಾಖಲೆಯೂ ಆಗುವುದು. 
೩. ಅತಿ ಆಭರಣಾತ್ಮಕ ಶೈಲಿಯಿಲ್ಲದೆ ನೇರವಾಗಿ ಅನುಭವವನ್ನು ನಿರೂಪಿಸುವುದು. 
೪.ವಾಸ್ತವದ ಕಟು ವಿವರಗಳನ್ನು ಹೇಳುವುದರ ಮೂಲಕವೇ ಶೋಷಕ-ಶೋಷಿತರಿಬ್ಬರನ್ನೂ ಬದಲಾಯಿಸಲೆತ್ನಿಸುವುದು. 
೫. ಎಲಿನಾರ್ ಝೆಲಿಯಟ್ ತಮ್ಮ ‘ಫ್ರಂ ಅನ್‌ಟಚಬಲ್ ಟು ದಲಿತ್’ ಪುಸ್ತಕದಲ್ಲಿ ತೋರಿಸುವಂತೆ ‘ಅಸ್ಪೃಶ್ಯತೆ’ಯಿಂದ ಕುಗ್ಗಿದ ವ್ಯಕ್ತಿತ್ವ ಸ್ವಾಭಿಮಾನದ, ‘ದಲಿತ್ ಐಡೆಂಟಿಟಿ’ಯ ಕಡೆಗೆ ನಡೆಯುವುದನ್ನು ದಾಖಲಿಸುವುದು…
೬. ಇದೆಲ್ಲದರ ಜೊತೆಗೆ ಯಾವುದೇ ದಮನಿತ ಸಮುದಾಯಗಳ ಲೇಖಕ, ಲೇಖಕಿಯರು ಹಾಗೂ ಒಟ್ಟಾರೆಯಾಗಿ ದಮನಿತರು ತಮ್ಮ ಆತ್ಮಚರಿತ್ರೆಯನ್ನು ಬರೆಯುವ ಹಾದಿಯನ್ನೂ ತೋರಿಸುವುದು.

ಇವೆಲ್ಲ ಮಾದರಿಗಳನ್ನೂ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಬಿಡಿಬಿಡಿ ಭಾಗಗಳ ಮೂಲಕ ಸೂಕ್ಷ್ಮವಾಗಿ ಸೂಚಿಸುತ್ತಾ ಭಾರತದ ದಲಿತ ಆತ್ಮಚರಿತ್ರೆಗಳ ಸ್ವರೂಪವನ್ನೂ, ಭಾರತದಲ್ಲಿ ಆವರೆಗೆ ಬರೆಯದ ದಮನಿತರ ಆತ್ಮಚರಿತ್ರೆಗಳ ಮಾದರಿಯನ್ನೂ ರೂಪಿಸಿದಂತಿದೆ. ಇಂಡಿಯಾದ ದಲಿತ ವರ್ಗಗಳ, ಅಂಚಿನ ವರ್ಗಗಳ, ಶೂದ್ರ ವರ್ಗಗಳ ವಿಮೋಚನಾ ಸಿದ್ಧಾಂತಗಳನ್ನು ರೂಪಿಸಿದ ಅಂಬೇಡ್ಕರ್ ದಲಿತ ಸ್ವಾನುಭವವನ್ನು, ದಮನಿತರ ಅನುಭವಗಳನ್ನು ಹೇಗೆ ಬರೆಯಬೇಕು ಎಂದು ಕೂಡ ‘ವೆಯ್ಟಿಂಗ್ ಫಾರ್ ಎ ವೀಸಾ’ದಲ್ಲಿ ತೋರಿಸಿಕೊಟ್ಟಿದ್ದಾರೆಂದು ನನಗನ್ನಿಸಿದೆ. 

ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ಇಂಗ್ಲಿಷಿನಲ್ಲಿ ಬರೆಯಲಾರಂಭಿಸಿದ ಅಂಬೇಡ್ಕರ್, ‘ಸವರ್ಣೀಯ ಹಿಂದೂಗಳು ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ವಿದೇಶೀಯರಿಗೆ ಅಂದಾಜು ಕೊಡುವುದು ತಮ್ಮ ಈ ಬರವಣಿಗೆಯ ಉದ್ದೇಶ’ ಎಂದಿದ್ದರು. ‘ವೆಯ್ಟಿಂಗ್ ಫಾರ್ ಎ ವೀಸಾ’ದ ಎಪ್ಪತ್ತು, ಎಂಬತ್ತು ಪುಟಗಳಲ್ಲಿ ಅನೇಕ ಪುಟಗಳು ಕಾಣೆಯಾಗಿವೆ ಎಂಬ ಅಸ್ಪಷ್ಟ ಮಾಹಿತಿಯೂ ಇದೆ.  ಈ ಆತ್ಮಚರಿತ್ರೆಯ ಕೊನೆಯ ಭಾಗದಲ್ಲಿ ೧೯೩೮ರ ಮಾರ್ಚ್ ೬ರಂದು ಬಾಂಬೆಯ ದಾದರ್ ನಲ್ಲಿ ನಡೆದ ಭಂಗಿ ಸಮುದಾಯದ ಸಭೆಯಲ್ಲಿ ಭಂಗಿ ಹುಡುಗ ಪರ್ಮಾರ್ ಕಾಳಿದಾಸ್ ಶಿವರಾಂ ತಾನು ‘ತಲಾಟಿ’ಯಾಗಿ ನೌಕರಿಗೆ ಸೇರಿದ ಕಾರಣದಿಂದಾಗಿ ಪಟ್ಟ ದಾರುಣ ಅನುಭವಗಳನ್ನು ಹೇಳಿಕೊಂಡಿದ್ದನ್ನು ಅಂಬೇಡ್ಕರ್ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದಿಂದ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ೧೯೩೮ರಿಂದಲೋ, ಅನಂತರವೋ ಬರೆದಿರಬಹುದು ಎಂದು ಊಹಿಸಬಹುದು; ಅಥವಾ ಬಿಡಿಬಿಡಿ ಭಾಗಗಳನ್ನು ಈ ಹಿಂದೆಯೂ ಆಗಾಗ್ಗೆ ಬರೆದಿರಬಹುದು. ಅಂಬೇ‌ಡ್ಕರ್ ನಿರ್ಗಮನದ ನಂತರ ಈ ಭಾಗಗಳು ಪ್ರಕಟವಾದವು.  

ಕುತೂಹಲಕರ ವಿಚಾರವೆಂದರೆ, ಅಂಬೇ‌ಡ್ಕರ್ `ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳನ್ನು ಬರೆದ ನಂತರದ ಕಾಲದಲ್ಲಿ, ೧೯೪೦ರಲ್ಲಿ, ಕನ್ನಡ ಲೇಖಕ ಡಿ. ಗೋವಿಂದದಾಸ್ ತಮ್ಮ ಆತ್ಮಚರಿತ್ರೆಯ ‘ನಾಲ್ಕು ಪಂಕ್ತಿಗಳನ್ನು’ ಬರೆದು ಸುಮ್ಮನಾದರು. ೧೯೪೪ರಲ್ಲಿ ಮತ್ತೆ ಬರವಣಿಗೆ ಮುಂದುವರಿಸಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಮ್ಮನಿಂಗಳ ಗ್ರಾಮದ ಡಿ. ಗೋವಿಂದದಾಸರ ಆತ್ಮಕತೆ ಕೂಡ ಅಪೂರ್ಣವಾಗಿದೆ. ಈ ಪುಟಗಳನ್ನು ಬರೆದು ಕೈಬಿಟ್ಟ ಗೋವಿಂದದಾಸ್ ೮ ಆಗಸ್ಟ್ ೧೯೮೬ರವರೆಗೂ ಬದುಕಿದ್ದರು ಎಂದು ಗೋವಿಂದದಾಸರ ಮಗ ರಾಜಬಾನು ಈಚೆಗೆ ಹೇಳಿದರು. ಆ ನಡುವೆ ಅಂಬೇಡ್ಕರ್ ಬರಹಗಳನ್ನು ಓದಿದ್ದ ಗೋವಿಂದದಾಸರ ಆತ್ಮಕತೆ ಮುಂದುವರಿದಿದ್ದರೆ ಆ ಕಾಲದ ಕರ್ನಾಟಕದ ದಲಿತ ಹಾಗೂ ಸವರ್ಣೀಯ ಸಮಾಜಗಳ ಚರಿತ್ರೆ ಇನ್ನಷ್ಟು ವಿವರವಾಗಿ ದಾಖಲಾಗುತ್ತಿತ್ತು. ಈ ಬರವಣಿಗೆ ಅರ್ಧದಲ್ಲೇ ನಿಂತಿದ್ದು ವಿಷಾದ ಹುಟ್ಟಿಸುತ್ತದೆ. 

ಅಂಬೇಡ್ಕರ್ ಆತ್ಮಚರಿತ್ರೆಯ ಸಿಕ್ಕದ ಪುಟಗಳು ಅಥವಾ ಬರೆಯದ ಪುಟಗಳು ಇನ್ನಷ್ಟು ಆಳವಾದ ವಿಷಾದ ಹುಟ್ಟಿಸುತ್ತವೆ. ಕಾರಣ, ಪ್ರಖರ ವಿದ್ವಾಂಸರಾಗಿದ್ದ ಅಂಬೇಡ್ಕರ್‍ ಅವರ ಪ್ರಾಮಾಣಿಕ ಬರವಣಿಗೆಯಲ್ಲಿ ಆವರೆಗೆ ದಾಖಲಾಗದಿದ್ದ ದಲಿತ ಸಮುದಾಯದ ಅಧಿಕೃತ ಚರಿತ್ರೆ ಬಿಚ್ಚಿಕೊಳ್ಳತೊಡಗಿತ್ತು. ಅಂಬೇಡ್ಕರ್ ಈ ಬರವಣಿಗೆಯನ್ನು ಮುಂದುವರಿಸಲಿದ್ದ ಸೂಚನೆಗಳಿದ್ದವು. ಇದಕ್ಕೂ ಮೊದಲು ಅಂಬೇಡ್ಕರ್ ಲಂಡನ್ನಿನ ದುಂಡುಮೇಜಿನ ಪರಿಷತ್ತಿನ ಸಭೆಗೆ ಹೊರಟಾಗ ಅವರ ಶಾಲಾ ಮೇಷ್ಟರು ಪ್ರೀತಿಯಿಂದ ಪತ್ರ ಬರೆದಿದ್ದರು. ಅದನ್ನು ನೆನೆಯುತ್ತಾ ಅಂಬೇಡ್ಕರ್ ಬರೆಯುತ್ತಾರೆ: ‘ನಾನು ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್‌ಗೆ ಹೊರಟಾಗ ಅವರು ಪ್ರೀತಿಯ ಪತ್ರವೊಂದನ್ನು ಬರೆದಿದ್ದರು. ಮುಂದೊಮ್ಮೆ ನಾನೇನಾದರೂ ಆಟೋಬಯಾಗ್ರಫಿ ಬರೆದರೆ ಆ ಪತ್ರವನ್ನು ಪ್ರಕಟಿಸುತ್ತೇನೆ'. ಅಂದರೆ, ೧೯೩೦ ಅಥವಾ ೧೯೩೨ರ ನಂತರ ಅಂಬೇಡ್ಕರ್ ತಮ್ಮ ಆತ್ಮಚರಿತ್ರಾತ್ಮಕ ಘಟನೆಗಳನ್ನು ಬರೆಯಲಾರಂಭಿಸಿರಬಹುದು. ಸಿದ್ಧಾರ್ಥ ಕಾಲೇಜಿನ ಲೈಬ್ರರಿಯನ್ ಎಸ್. ಎಸ್. ರೇಗೆಯವರಿಗೆ ಸಿಕ್ಕ ಟಿಪ್ಪಣಿಗಳು ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯನ್ನು ಮೂರು ಭಾಗಗಳಲ್ಲಿ ಬರೆಯಹೊರಟಿದ್ದರು ಎಂದು ಸೂಚಿಸುತ್ತವೆ.

ನಿಷ್ಕರುಣಿ ಕಾಲ ಅಂಬೇಡ್ಕರ್ ಅವರಿಗೆ ಸಮಯಾವಕಾಶ ಕೊಡಲಿಲ್ಲ. ಅಂಬೇಡ್ಕರ್ ಬದುಕಿದ್ದಾಗಲೇ ಅವರ ಸಂಬಂಧಿ ಖೈರ್ಮೋಡೆ ಅಂಬೇಡ್ಕರ್ ಜೀವನಚರಿತ್ರೆಯನ್ನು ಬರೆಯಹೊರಟರು. ಖೈರ್ಮೋಡೆಯವರ ನಿರೂಪಣೆಯ ಮೊದಲ ಸಂಪುಟದ ವಿವರಗಳನ್ನು ಅಂಬೇಡ್ಕರ್ ಗಮನಿಸಿದಂತಿದೆ. ಧನಂಜಯ್ ಕೀರ್ ಅಂಬೇಡ್ಕರ್ ಜೀವನಚರಿತ್ರೆ ಬರೆಯಹೊರಟಾಗ ಅಂಬೇಡ್ಕರ್ ತಮ್ಮ ಜೀವನದ ಕೆಲವು ವಿವರಗಳನ್ನು ಹೇಳಿದಂತಿದೆ. ಆದರೆ ಧನಂಜಯ ಕೀರ್ ಬರೆದ ‘ಡಾ. ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಜೀವನಚರಿತ್ರೆಯಲ್ಲಿ ಅನೇಕ ದೋಷಗಳು ಕಾಣುತ್ತವೆ. ಸಾವರ್ಕರ್ ಜೀವನಚರಿತ್ರೆಯನ್ನೂ ಬರೆದಿರುವ ಕೀರ್ ಅವರ ಸೈದ್ಧಾಂತಿಕ ಗೊಂದಲಗಳು ಹಲವೆಡೆ ಎದ್ದು ಕಾಣುತ್ತವೆ. ಆದರೂ ಅಂಬೇಡ್ಕರ್ ಕುರಿತು ಹೆಚ್ಚಿನ ವಿವರಗಳೇ ಇಲ್ಲದಿದ್ದ ಕಾಲದಲ್ಲಿ ಕೀರ್ ಬರೆದ ಜೀವನಚರಿತ್ರೆಗೆ ಒಂದು ಮಟ್ಟದ ಮಹತ್ವವಿದೆ. ಆದರೆ ಕೀರ್ ಮಾಡುವ ಕೆಲ ಬಗೆಯ ವಿಶ್ಲೇಷಣೆ, ವ್ಯಾಖ್ಯಾನಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಗತ್ಯವಿದೆ. 

ನಂತರ ಅಂಬೇಡ್ಕರ್ ಅವರ ಹಲ ಬಗೆಯ ಜೀವನಚರಿತ್ರೆಗಳು ಬಂದವು: ಖೈರ್ಮೋಡೆಯವರ ‘ಬಾಬಾಸಾಹೇಬ್ ಡಾ. ಅಂಬೇಡ್ಕರ್: ಜೀವನ್ ಔರ್ ಚಿಂತನ್’ ಎಂಬ ಮರಾಠಿ, ಹಿಂದಿ ಸಂಪುಟಗಳು; ವಸಂತ ಮೂನ್ ಬರೆದ Dr. Babasaheb Ambedkar; ಅಶೋಕ್ ಗೋಪಾಲ್ ಅವರ A Part Apart: The Life and Thought of B.R. Ambedkar; ಶಶಿ ಥರೂರ್ ಬರೆದ Ambedkar: A Life; ಆನಂದ್ ತೇಳ್‌ತುಂಬ್ಡೆಯವರ The Iconoclast: Reflective Biography of Dr. Babasaheb Ambedkar ಇತ್ಯಾದಿ. 

ಇವೆಲ್ಲವನ್ನೂ ಕುರಿತು ಟಿಪ್ಪಣಿ ಮಾಡುತ್ತಿರುವಾಗಲೇ ತುಂಬಾಡಿ ರಾಮಯ್ಯನವರ ಆತ್ಮಚರಿತ್ರೆ ‘ಮಣೆಗಾರ’ಕ್ಕೆ ಇಪ್ಪತ್ತೈದು ವರ್ಷ ತುಂಬಿತೆಂದು ಗೆಳೆಯರು ಹೇಳಿದರು. ‘ಮಣೆಗಾರ’ ಕುರಿತು ಇಪ್ಪತ್ತೈದು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾದ ’ಗಾಳಿ ಬೆಳಕು’ ಅಂಕಣದ ಬರಹವನ್ನು ಗೆಳೆಯರಾದ ಚಂದ್ರಶೇಖರ ಐಜೂರ್, ಶ್ರೀಧರ್ ತಮ್ಮ ‘ಫೇಸ್ ಬುಕ್’ನಲ್ಲಿ ಪ್ರಕಟಿಸಿ ಮತ್ತೆ ಲೋಕಕ್ಕೆ ತಲುಪಿಸಿದ್ದರು. ಈ ನೆಪದಲ್ಲಿ ಅಂಬೇಡ್ಕರ್ ಆತ್ಮಚರಿತ್ರೆ ಪ್ರೇರೇಪಿಸಿದ ನನ್ನ ಈಚಿನ ಟಿಪ್ಪಣಿಗಳ ಭಾಗಗಳನ್ನು ಇಲ್ಲಿ ಕೊಟ್ಟಿರುವೆ. ಈ ಟಿಪ್ಪಣಿಗಳು ತುಂಬಾಡಿ ರಾಮಯ್ಯನವರ ‘ಮಣೆಗಾರ’ದವರೆಗೂ ಚಾಚಿಕೊಳ್ಳಬಲ್ಲವು ಎಂದು ಊಹಿಸುವೆ. ‘ಮಣೆಗಾರ’ದ ಬರವಣಿಗೆ ರಾಮಯ್ಯನವರ ಮುಂದಿನ ಪುಸ್ತಕಗಳನ್ನೂ ಬರೆಸಿದಂತಿದೆ.  

ಅಂದರೆ, ಆತ್ಮಚರಿತ್ರೆಯ ಬರವಣಿಗೆಯ ಪ್ರಯತ್ನ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಬರೆಯುವುದು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮುಂದೆ ಸಾಗುವುದಿಲ್ಲವೆಂದು ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹರಿದರೂ ಹರಿಯಬಹುದು! ಆದರೆ ಅಂಥ ಬರವಣಿಗೆಯ ಸುಳ್ಳು, ನಿಜ, ಉತ್ಪ್ರೇಕ್ಷೆಗಳ ಸ್ವ-ಪರೀಕ್ಷೆ ಕೂಡ ಬರವಣಿಗೆಯ ಅತ್ಯಗತ್ಯ ಭಾಗವಾಗಿರಬೇಕಾಗುತ್ತದೆ. 

ಇಂಥ ಸ್ವ-ಪರೀಕ್ಷೆ ಎಲ್ಲ ಜಾತಿ, ವರ್ಗ, ಸಮುದಾಯಗಳ ಲೇಖಕ, ಲೇಖಕಿಯರ ಆತ್ಮಚರಿತ್ರೆಗಳ ಪ್ರಾಥಮಿಕ ಅಗತ್ಯವಾಗಿರಬೇಕು ಹಾಗೂ ಮೂಲ ತುಡಿತವಾಗಿರಬೇಕು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ದಲಿತ ಆತ್ಮಕತೆಯಿರಲಿ, ಮಹಿಳಾ ಆತ್ಮಕತೆಯಿರಲಿ, ಯಾರದೇ ಆತ್ಮಕತೆಯಿರಲಿ, ಬರೆವವರಲ್ಲಿ ನಿಷ್ಠುರ ಸ್ವ-ಪರೀಕ್ಷೆಯಿಲ್ಲದಿದ್ದರೆ ಅವು ಸಾರ್ವಜನಿಕ ಭಾಷಣಗಳಾಗುತ್ತವೆ. ಆತ್ಮಕತೆ ’ಆತ್ಮಕಹಳೆ’ಯಾಗದಂತೆ ಅಂಬೇಡ್ಕರ್ ಅಪೂರ್ಣ ಆತ್ಮಚರಿತ್ರೆಯ ಪುಟಗಳು ನಮ್ಮನ್ನು ಎಚ್ಚರಿಸುತ್ತಿರಲಿ!



Latest Video


Nataraj Huliyar Official
YouTube Channel

SUBSCRIBE