Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
27 Apr 2025 ಪೋಪ್ ತೋರಿದ ಪ್ರಾಯಶ್ಚಿತ್ತದ ದಾರಿ

ಈಚೆಗೆ ವ್ಯಾಟಿಕನ್ ಸಿಟಿಯ ಕ್ರೈಸ್ತ ಪರಮಗುರು ಪೋಪ್ ಫ್ರಾನ್ಸಿಸ್ ತೀರಿಕೊಂಡ ಸುದ್ದಿ ಓದಿ ನನ್ನ ಪರಿಚಿತ ಸಜ್ಜನ ಹಿರಿಯರೊಬ್ಬರು ತೀರಿಕೊಂಡಂತೆ ಅನ್ನಿಸಿತು. ಮೊನ್ನೆ ಮೊನ್ನೆ ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕದ ಐಲು ದೊರೆ ವಲಸಿಗರ ವಿರುದ್ಧ ಕಿರುಚುತ್ತಿದ್ದಾಗ ಪೋಪ್ ಫ್ರಾನ್ಸಿಸ್ ಟ್ರಂಪ್ ವರ್ತನೆಯನ್ನು ವಿರೋಧಿಸಿದ್ದು ಕಣ್ಣ ಮುಂದೆ ಬಂತು. ಹತ್ತು ವರ್ಷಗಳ ಕೆಳಗೆ ಪತ್ರಿಕೆಗಳಲ್ಲಿ ಪ್ರಕಟವಾದ ‘ವಲಸಿಗರ ಕಾಲು ತೊಳೆದ ಪೋಪ್’ಎಂಬ ಸುದ್ದಿ ನೆನಪಾಯಿತು. ಆ ಕುರಿತು ಆಗ ಬರೆದ ಟಿಪ್ಪಣಿಗಳನ್ನು ಮತ್ತೆ ಕೊಡುತ್ತಿರುವೆ:

 ‘ರೋಮ್‌ನಲ್ಲಿ ಪೋಪ್ ಫ್ರಾನ್ಸಿಸ್ ಗುರುವಾರ ರಾತ್ರಿ ವಲಸಿಗ ಮುಸ್ಲಿಮರು, ಸಂಪ್ರದಾಯವಾದಿಗಳು, ಹಿಂದೂಗಳು, ಕ್ಯಾಥೊಲಿಕ್ ನಿರಾಶ್ರಿತರ ಕಾಲು ತೊಳೆದು ಮುತ್ತಿಟ್ಟು, ನಂತರ ಎಲ್ಲರೂ ಒಂದೇ ದೇವರ ಮಕ್ಕಳು ಎಂದು ಘೋಷಿಸಿದರು.’  ಮಾರನೆಯ ದಿನ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್‌ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಯಿತು. ಫೋಟೋದ ಕೆಳಗೆ ‘ಎಲ್ಲ ಜನಾಂಗದವರು ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಆಚರಣೆಯನ್ನು ನೆರವೇರಿಸಲಾಗುತ್ತದೆ ಎಂಬ ವಿವರಣೆಯಿತ್ತು.  

ಈ ಫೋಟೊ ನೋಡಿದ ಹುಡುಗನೊಬ್ಬ ಜೀಸಸ್ ಶಿಲುಬೆಗೇರುವ ಹಿಂದಿನ ದಿನ ತನ್ನ ಶಿಷ್ಯರ ಪಾದಗಳನ್ನು ತೊಳೆದ ಪ್ರಸಂಗವನ್ನು ನೆನಪಿಸಿದ: ಜೀಸಸ್‌ನ ಜನಪ್ರಿಯತೆಯನ್ನು ಸಹಿಸದ ಯಹೂದಿಗಳು ಜೀಸಸ್ ಯಹೂದಿ ಧರ್ಮಕ್ಕೆ ಅಪಾಯ ತಂದೊಡ್ಡುತ್ತಾನೆಂದು ಆಪಾದಿಸುತ್ತಿದ್ದರು. ತನ್ನ ‘ಕೊನೆಯ ಊಟ’ದ (‘ಲಾಸ್ಟ್ ಸಪ್ಪರ್’) ದಿನ, ಜೀಸಸ್ ತನ್ನ ಹನ್ನೊಂದು ಜನ ಶಿಷ್ಯರ ಕಾಲನ್ನು ತೊಳೆದ. ಊಟದ ಮುನ್ನ ಜೀಸಸ್, ‘ನಿಮ್ಮಲ್ಲಿ ಯಾರೋ ಒಬ್ಬರು ನನಗೆ ದ್ರೋಹ ಬಗೆಯುತ್ತೀರಿ’ಎಂದ; ಅದು ನಿಜವಾಯಿತು. ಅವನ ಶಿಷ್ಯರಲ್ಲೊಬ್ಬನಾದ ಜುದಾಸ್ ಇನ್ನಿತರರ ಜೊತೆ ರೋಮನ್ ಜನರಲ್ ಬಳಿ ಹೋಗಿ, ಬೆಳ್ಳಿ ತುಣುಕುಗಳ ಆಸೆಗೆ ಬಿದ್ದು, ಜೀಸಸ್ ವಿರುದ್ಧ ಚಾಡಿ ಹೇಳಿದ. ನಂತರ ಜೀಸಸ್‌ನನ್ನು ಶಿಲುಬೆಗೇರಿಸಲಾಯಿತು. ಆ ದಿನದ ನೆನಪಿಗಾಗಿ ಗುಡ್ ಫ್ರೈಡೇ ಆಚರಿಸಲಾಗುತ್ತದೆ. 

ಹತ್ತು ವರ್ಷಗಳ ಕೆಳಗೆ ಪೋಪ್ ಫ್ರಾನ್ಸಿಸ್ ವಲಸಿಗರ, ಮಹಿಳೆಯರ ಕಾಲು ತೊಳೆದದ್ದು ಗುಡ್ ಫ್ರೈಡೇಯ ಹಿಂದಿನ ‘ಮಾಂಡಿ ಥರ್ಸ್ ಡೇ’ ದಿನ; ಜೀಸಸ್ ಮಾಡಿದ ಕೊನೆಯ ಸೇವೆಯನ್ನು ನೆನೆಸಿಕೊಳ್ಳುವ ದಿನ. ಅವತ್ತು  ಫ್ರಾನ್ಸಿಸ್ ಆಚರಣೆ ಜಗತ್ತಿನಾದ್ಯಂತ ಅಪೂರ್ವ ಪುಳಕವನ್ನೂ, ಮುಗ್ಧ ಮನಸ್ಸುಗಳಲ್ಲಿ ಸಾತ್ವಿಕ ಭಾವನೆಯನ್ನೂ ಹುಟ್ಟಿಸಿರಬಹುದು ಎಂದು ನನ್ನ ಊಹೆ. ನನ್ನೊಳಗಂತೂ ಅಂಥದೊಂದು ಭಾವ ಹುಟ್ಟಿದ್ದು ನಿಜ. 

ಆದರೂ ಪೋಪ್ ಆಚರಣೆಯನ್ನು ‘ಪ್ರದರ್ಶನ’ಅಥವಾ ಪ್ರತಿ ವರ್ಷದ ಯಾಂತ್ರಿಕ ಧಾರ್ಮಿಕ ಆಚರಣೆ ಎನ್ನುವವರಿದ್ದಾರೆ. ಕೆ.ಬಿ.ಸಿದ್ಧಯ್ಯನವರ ‘ಗಲ್ಲೇಬಾನಿ’ ಖಂಡಕಾವ್ಯದಲ್ಲಿ ಹಿಂದೊಮ್ಮೆ ಚಮ್ಮಾರರು ಚರ್ಮ ಹದ ಮಾಡಲು ಇಟ್ಟ ಗಲ್ಲೇಬಾನಿಯ ನೀರನ್ನು ಮಾಧ್ವರು ಮದುವೆಯ ಸಂದರ್ಭದಲ್ಲಿ ಬಳಸುತ್ತಿದ್ದ ಆಚರಣೆಯ ಉಲ್ಲೇಖವಿದೆ. ಸಾಂಕೇತಿಕ ಆಚರಣೆಯ ಮಟ್ಟದಲ್ಲಿದ್ದ ಈ ಎರಡು ಜಾತಿಗಳ ನಡುವಣ ‘ಸಂಬಂಧ’ ಅದರಾಚೆಗೆ ಇರಲಿಲ್ಲ! ಈ ಹಿನ್ನೆಲೆಯಲ್ಲಿ ನೋಡಿದಾಗ ಪೋಪ್ ಆಚರಣೆ ಕೂಡ ಸಾಂಕೇತಿಕವೆಂದು ಅನ್ನಿಸಬಹುದು. 

ಆದರೆ ಕ್ರೈಸ್ತ ಧರ್ಮದ ಚರಿತ್ರೆಯಲ್ಲಿ ಹಿಂಸೆಯ ಮುಖಗಳ ಜೊತೆಗೇ ಎಲ್ಲರನ್ನೂ ಮುಟ್ಟುವ, ಅಪ್ಪಿಕೊಳ್ಳುವ ಕ್ರಿಯೆ ಕೂಡ ನಿರಂತರವಾಗಿ ಇದೆ. ಆಫ್ರಿಕಾದ ನಾಡುಗಳಲ್ಲಿ ಮೊದಲು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರು ಅಲ್ಲಿ ಅಸ್ಪೃಶ್ಯರಾಗಿದ್ದ ಒಸು ಜನಾಂಗದವರು. ಆಫ್ರಿಕಾದ ಇಬೋ ಸಮುದಾಯದಲ್ಲಿ ಅವಳಿ ಮಕ್ಕಳನ್ನು ಹೆತ್ತ ತಾಯಿ ಹಾಗೂ ಅವಳಿ ಮಕ್ಕಳು ಭೂಮಿಗೆ ಕಂಟಕವೆಂದು ಅವರನ್ನು ಸಮುದಾಯದಿಂದ ಹೊರಹಾಕುತ್ತಿದ್ದರು. ಅವರೇ ಒಸುಗಳು. ಚರ್ಚು ಒಸುಗಳನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿರಲಿಲ್ಲ. ಅದರಿಂದ ಅವರು ಚರ್ಚು ಸೇರಿದರು; ಕ್ರೈಸ್ತರಾದರು. ಇಂಡಿಯಾದಲ್ಲೂ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರಲ್ಲಿ ಅಸ್ಪೃಶ್ಯತೆಯ ನರಕದಿಂದ ತಪ್ಪಿಸಿಕೊಂಡವರ ಸಂಖ್ಯೆ ಲಕ್ಷಾಂತರ ಇರಬಹುದು. ಇಂಡಿಯಾದಲ್ಲಿ ಅಸ್ಪೃಶ್ಯತೆಯಿಂದ ಪಾರಾಗಲು ಜೈನ, ಬೌದ್ಧ, ಇಸ್ಲಾಂ, ಸಿಖ್ ಧರ್ಮಗಳನ್ನು ಅಪ್ಪಿಕೊಂಡವರೂ ಇದ್ದಾರೆ. 

ಪೋಪ್ ಫ್ರಾನ್ಸಿಸ್ ತೋರಿಕೆಯ ಆಚರಣೆಯ ವ್ಯಕ್ತಿಯಾಗಿರಲಿಲ್ಲ. ಹತ್ತು ವರ್ಷಗಳ ಕೆಳಗೆ ಕೂಡ ಇವತ್ತಿನ ರೀತಿಯಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅನ್ಯದ್ವೇಷದ ಖಾಯಿಲೆಯನ್ನು ಹಬ್ಬಿಸುತ್ತಿದ್ದಾಗ ಎಲ್ಲ ವಲಸಿಗರನ್ನೂ ಅಪ್ಪಿಕೊಳ್ಳುತ್ತಿದ್ದ ಪೋಪ್ ಫ್ರಾನ್ಸಿಸರ ಆಚರಣೆಗಳಿಗೆ, ಮಾತುಗಳಿಗೆ ಅಪಾರ ಮಹತ್ವ ಬಂದಿತ್ತು. ಜಗತ್ತಿನಾದ್ಯಂತ ಪೋಪ್‌ರನ್ನು ಗೌರವದಿಂದ ಕಾಣುವ ಅವರ ಅನುಯಾಯಿಗಳಲ್ಲಿ ತಮ್ಮ ಗುರುವಿನ ಈ ನಡವಳಿಕೆ ಒಂದು ಸಣ್ಣ ಸ್ಪಂದನವನ್ನಾದರೂ ಹುಟ್ಟಿಸಿರಬಹುದು. ಜಗತ್ತಿನಲ್ಲಿ ವಿಭಜನೆ, ಭೇದಭಾವದ ಮಾತುಗಳು ಹೆಚ್ಚುಹೆಚ್ಚಾಗಿ ಧರ್ಮಮೂಲದಿಂದ ಬರುತ್ತಿರುವಾಗ ಪೋಪ್ ಫ್ರಾನ್ಸಿಸ್ ಅವರ ಮಾತು, ನಡವಳಿಕೆಗಳು ಇವೆಲ್ಲದರ ವಿರುದ್ಧ ಒಂದು ಉದಾರವಾದದ ಚಿಂತನೆಯನ್ನಾದರೂ ಹುಟ್ಟು ಹಾಕುತ್ತಿದ್ದವು.   

೨೦೧೬ರಲ್ಲಿ ಪೋಪ್ ಫ್ರಾನ್ಸಿಸ್ ಕರಿಯನ ಕಾಲಿಗೆ ಮುತ್ತಿಟ್ಟ ಫೋಟೋ ನೋಡಿದ ದಿನ ನನಗೆ ಲಂಕೇಶರ ‘ಸಹಪಾಠಿ’ಕತೆ ನೆನಪಾಗಿತ್ತು: ‘ಸಹಪಾಠಿ’ಕತೆಯ ಜಮೀನ್ದಾರ ಬಸವೇಗೌಡನ ಚೇಲಾಗಳು ದಲಿತ ಮೇಷ್ಟರೊಬ್ಬರ ಮೇಲೆ ಹಲ್ಲೆ ಮಾಡುತ್ತಾರೆ. ಬಸವೇಗೌಡ ಪಾಪಪ್ರಜ್ಞೆಯಿಂದ ನರಳಿ ಕಾಯಿಲೆ ಬೀಳುತ್ತಾನೆ. ಕತೆಗಾರ ಭಗವಾನ್ ಗೆಳೆಯ ಬಸವೇಗೌಡನ ಕಾಯಿಲೆಗೆ ಒಂದು ಗಾಂಧೀವಾದಿ ಮದ್ದು ಸೂಚಿಸುತ್ತಾನೆ: ಬಸವೇಗೌಡ ದಲಿತನೊಬ್ಬನ ಕಾಲು ತೊಳೆದು ತಾನು ಮಾಡಿರುವ ಅಸ್ಪೃಶ್ಯತೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದರಂತೆ ದಲಿತ ಜೋನಿಯ ಕಾಲು ತೊಳೆದ ಬಸವೇಗೌಡನಿಗೆ ಈ ಪ್ರಾಯಶ್ಚಿತ್ತದಿಂದ ಅವನ ಅಹಂಕಾರಕ್ಕೆ ಪೆಟ್ಟು ಬಿದ್ದಂತಾಗಿ ಒಳಗೊಳಗೇ ಕೆರಳುತ್ತಾನೆ. ಮಾರನೆಯ ದಿನ ಜೋನಿಯ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ತನ್ನ ಅಹಂಕಾರವನ್ನು ತಣಿಸಿಕೊಳ್ಳುತ್ತಾನೆ. ಕಾರಣ, ಬಸವೇಗೌಡ ಹುಟ್ಟಿರುವ ಜಾತಿ ಅಥವಾ ಧರ್ಮ ಉದಾತ್ತ ಪ್ರಾಯಶ್ಚಿತ್ತದ ಸಾಧ್ಯತೆಯನ್ನೇ ಹೇಳಿಕೊಟ್ಟಿಲ್ಲ; ಅವನು ಓದಿದ ಪ್ರಗತಿಪರ ಪುಸ್ತಕಗಳು ಕೂಡ ಅವನಿಗೆ ನಿಜವಾದ ಜಾತ್ಯತೀತತೆಯನ್ನು ಹೇಳಿಕೊಟ್ಟಿಲ್ಲ. ಹೀಗಾಗಿ ಜಾತಿಯ ಹೀನಬುದ್ಧಿ ಹಾಗೂ ಫ್ಯೂಡಲ್ ಮನಸ್ಥಿತಿಗಳನ್ನು ಮೀರುವ ಉದಾತ್ತತೆ ಬಸವೇಗೌಡನಿಗೆ ಸಾಧ್ಯವಾಗಲೇ ಇಲ್ಲ.

ಆದರೆ ಕಪ್ಪು ವರ್ಣೀಯನ ಕಾಲಿಗೆ ಮುತ್ತಿಟ್ಟ ಕ್ರೈಸ್ತ ಗುರು ಫ್ರಾನ್ಸಿಸ್‌ಗೆ ಈ ಉದಾತ್ತತೆ ಕ್ರೈಸ್ತ ಧರ್ಮದ ಮೂಲ ಚಿಂತನೆಗಳ ಪ್ರಭಾವದಿಂದಲೇ ಸಾಧ್ಯವಾಗಿತ್ತು. ಫ್ರಾನ್ಸಿಸ್ ಆಚರಣೆ ಕೇವಲ ಸಾಂಕೇತಿಕವಾಗಿರಲಿಲ್ಲ. ಅನೇಕ ಕ್ರೈಸ್ತ ಗುರುಗಳು ಜಾತಿ, ಮತ, ವರ್ಗ ನೋಡದೆ ನೂರಾರು ಜನರಿಗೆ ನೆರವಾದ ಉದಾಹರಣೆಗಳು ಇವತ್ತಿಗೂ ಕಾಣುತ್ತವೆ. ಇವತ್ತಿಗೂ ಜಗತ್ತಿನ ಮುಖ್ಯ ಚರ್ಚುಗಳಲ್ಲಿ ಎಲ್ಲ ಬಗೆಯ ಜಾತಿ ವರ್ಣ ವರ್ಗಗಳ ಜನರನ್ನೂ ಬರಮಾಡಿಕೊಳ್ಳುವ ಔದಾರ್ಯವಿದೆ. ಮದರ್ ಥೆರೆಸಾ ಅವರನ್ನು ‘ಸೇಂಟ್’ ಎಂದು ದಶಕದ ಕೆಳಗೆ ರೋಮ್ ಚರ್ಚು ಘೋಷಿಸಿದ್ದು ನಿಮಗೆ ನೆನಪಿರಬಹುದು. ಆದರೆ ಅದಕ್ಕೂ ಮೊದಲೇ ಕಲ್ಕತ್ತಾದಲ್ಲಿ ಥೆರೆಸಾ ಕುಷ್ಟರೋಗಿಗಳಿಗಾಗಿ ಮಾಡಿರುವ ಅಪೂರ್ವ ಸೇವೆಯನ್ನು ಕಂಡು ಕೃತಜ್ಞರಾದವರ ಮನಸ್ಸಿನಲ್ಲಿ ಅವರು ಸಂತರಾಗಿ ನೆಲೆಯೂರಿದ್ದರು. 

ಕಲ್ಕತ್ತಾದ ಫುಟ್‌ಪಾತುಗಳಲ್ಲಿ ಎಸೆಯಲಾಗಿದ್ದ ಕುಷ್ಟರೋಗಿಗಳನ್ನು ತಬ್ಬಿ ಕರೆತಂದು ಆರೈಕೆ ಮಾಡಿದ ಥೆರೆಸಾರ ಇಡೀ ಜೀವಮಾನದ ಕಾಯಕ ಪೋಪ್ ಫ್ರಾನ್ಸಿಸ್ ಅವರ ಸಾಂಕೇತಿಕ ಕ್ರಿಯೆಗಿಂತ ನೂರು ಪಾಲು ಮೇಲು, ನಿಜ. ಆದರೆ ಫ್ರಾನ್ಸಿಸ್ ಆಚರಣೆ ಕಳೆದ ನಾಲ್ಕುನೂರು ವರ್ಷಗಳಿಂದ ಕರಿಯರ ಮೇಲೆ ಪಶ್ಚಿಮ ಎಸಗಿರುವ ದೌರ್ಜನ್ಯಕ್ಕಾಗಿ ಕ್ರೈಸ್ತ ಧರ್ಮಗುರು ಮಾಡಿಕೊಂಡ ಉದಾತ್ತ ಪ್ರಾಯಶ್ಚಿತ್ತದ ಪ್ರಾತಿನಿಧಿಕ ರೂಪದಂತಿದೆ. ಅದರಲ್ಲೂ ಚರ್ಚು ವಸಾಹತೀಕರಣದ ಸಂದರ್ಭದಲ್ಲಿ ವಸಾಹತುಕಾರರನ್ನು ಬೆಂಬಲಿಸಿತ್ತು ಎಂಬುದನ್ನು ನೆನೆದರೆ ಫ್ರಾನ್ಸಿಸ್ ಆಚರಣೆಯ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ.  ಬಿಳಿಯರು ಕರಿಯರನ್ನು ಗುಲಾಮರಾಗಿ ಇಟ್ಟುಕೊಳ್ಳುವುದನ್ನು ಒಪ್ಪಿತ್ತು. ಆದರೆ ಚರ್ಚಿನ ನಡುವಿನಿಂದಲೇ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಥರದ ಗುರುಗಳೂ ಬಂದು ಕರಿಯರ ಬಿಡುಗಡೆಗೆ ಹೋರಾಡಿದ ಬೆಳವಣಿಗೆಯೂ ನಡೆಯಿತು. 

ಈಚಿನ ಚರಿತ್ರೆಯಲ್ಲಿ ಅಸ್ಪೃಶ್ಯತೆಯನ್ನು ಮೀರುವ ಇಂಥ ಆಚರಣೆಗಳಿಗಿಂತ ಮೊದಲು, ಹನ್ನೆರಡನೆಯ ಶತಮಾನದಲ್ಲಿ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ಎಂದು  ಘೋಷಿಸಿ ಜಾತಿಪ್ರಜ್ಞೆಯನ್ನು ಮೀರುವ ಮಾರ್ಗವೊಂದನ್ನು ಬಸವಣ್ಣ ತೋರಿಸಿದರು. ಬಸವಣ್ಣನವರು ಹರಳಯ್ಯ ಮತ್ತು ಅವರ ಪತ್ನಿಯ ತೊಡೆಯ ಚರ್ಮದಿಂದ ಹೊಲೆದ ಚಪ್ಪಲಿಗಳನ್ನು ತಮ್ಮ ತಲೆಯ ಮೇಲೆ ಹೊತ್ತು ನಡೆದ ಕತೆ ಕೂಡ ಉದಾತ್ತ ಪ್ರಾಯಶ್ಚಿತ್ತದ ಉದಾಹರಣೆಯಂತಿದೆ. ಸವರ್ಣೀಯ ಸಮಾಜ ದಲಿತರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಟೀಕಿಸಿ ವಚನಗಳನ್ನು ಬರೆದ ಬಸವಣ್ಣನವರ ಜಾತ್ಯತೀತತೆಯನ್ನು ಅವರ ನಡವಳಿಕೆಯ ಮೂಲಕವೂ ಸಾರುವ ಕತೆ ಇದು; ನಂತರದ ಬಸವಾನುಯಾಯಿಗಳು ಜಾತೀಯ ಸಮಾಜದ ಹೀನತನವನ್ನು ತಿದ್ದುವ ಸ್ಪಷ್ಟ ಸಂದೇಶವೊಂದನ್ನು ಕೊಡುವ ಉದ್ದೇಶದಿಂದ ಕೂಡ ಈ ಕತೆಯನ್ನು ಸೃಷ್ಟಿಸಿರಬಹುದು. 

ಆದರೆ ಈಚಿನ ವರ್ಷಗಳಲ್ಲಿ ಕೆಲವು ಸ್ವಾಮೀಜಿಗಳು ಪ್ರಚಾರಕ್ಕಾಗಿ ದಲಿತಕೇರಿಗೆ ಹೋಗುವುದು ಮೇಲುಜಾತಿಯ ಠೇಂಕಾರದಂತೆ ಕಾಣುತ್ತದೆಯೇ ಹೊರತು, ಅದು ಬಸವಣ್ಣನವರ ವಚನಗಳ ಸಹಜ ವಿನಯದಂತೆ ಕಾಣುವುದಿಲ್ಲ. ಕೊನೇ ಪಕ್ಷ ಫ್ರಾನ್ಸಿಸ್ ಅವರ ಸಾಂಕೇತಿಕ ಆಚರಣೆಯ ಸಂದೇಶ ಕೂಡ ಈ ಸ್ವಾಮಿಗಳ ಠೇಂಕಾರದಿಂದ ಹೊರಡುವುದಿಲ್ಲ. ಈ ಸ್ವಾಮಿಗಳಿಗೆ ನಿಜಕ್ಕೂ ದಲಿತರ ಬಗ್ಗೆ ಕಾಳಜಿ ಇದ್ದರೆ, ಅವರು ಮೊದಲು ತಂತಮ್ಮ ಜಾತಿಗಳ ಅನುಯಾಯಿಗಳಲ್ಲಿರುವ ಜಾತೀಯತೆ, ಅಸ್ಪೃಶ್ಯತೆಗಳ ಮನಸ್ಥಿತಿಯನ್ನು ತಿದ್ದಬೇಕು.

ಇಷ್ಟಾಗಿಯೂ, ವರ್ಣಭೇದದ ವಿರುದ್ಧ ಪೋಪ್ ಫ್ರಾನ್ಸಿಸ್ ಥರದವರ ಸಾಂಕೇತಿಕ ಆಚರಣೆ; ಸ್ವಾಮಿಗಳ ದಲಿತಕೇರಿ ಸಂದರ್ಶನ, ಅಥವಾ ಮಂಟೇಸ್ವಾಮಿ ಜಾತ್ರೆಗಳಲ್ಲಿ ಒಂದೆರಡು ದಿನ ಎಲ್ಲ ಜಾತಿಗಳೂ ಮೇಲುನೋಟಕ್ಕೆ ಬೆರೆಯುವ ಆಚರಣೆಗಳು…ಇವುಗಳಿಂದ ಈ ಹೀನ ಆಚರಣೆಗಳು ಕೊನೆಗೊಳ್ಳಲಾರವು. ಇಂಥ ಹಲ ಬಗೆಯ ಸಾಂಕೇತಿಕ ಆಚರಣೆಗಳನ್ನು ಮೀರಿ, ಪ್ರಕೃತಿಯಂತೆ ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಸಹಜ ನೋಟ; ಅಥವಾ ನಾವು ಆಧುನಿಕವಾಗಿ ರೂಢಿಸಿಕೊಂಡ ಸಮಾನತೆಯ ಜಾತ್ಯತೀತ ನೋಟ; ಅಥವಾ ಗಾಂಧೀವಾದ, ಅಂಬೇಡ್ಕರ್‍‌ವಾದ, ಲೋಹಿಯಾವಾದದಂಥ ಚಿಂತನೆಗಳಿಂದ ಆಳವಾಗಿ ಪ್ರಭಾವಿತವಾದ ಮನಸ್ಸು- ಇವುಗಳೇ ಈ ಬಗೆಯ ಕೃತಕ ಭೇದಗಳನ್ನು, ಅಸ್ಪೃಶ್ಯತೆಗಳನ್ನು ಇಲ್ಲವಾಗಿಸುವ ಖಚಿತ ಮಾರ್ಗಗಳು ಎನ್ನಿಸುತ್ತದೆ.

blog
20 Apr 2025 ಹ್ಯಾಪಿ ಬರ್ತ್ ಡೇ ಶೇಕ್‌ಸ್ಪಿಯರ್

ಹೊಸಪೇಟೆಯ ಸರ್ಕಾರಿ ಪದವಿ ಕಾಲೇಜಿನ ಹುಡುಗ ಹುಡುಗಿಯರ ಜೊತೆಗೆ ಇನ್ನೂ ಕೆಲವು ಕಾಲೇಜಿನ ಐನೂರಕ್ಕೂ ಹೆಚ್ಚಿನ ಹುಡುಗ ಹುಡುಗಿಯರು `ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕ ಕುರಿತ ಸಂವಾದಕ್ಕೆ ಸೇರಿದ್ದರು. ಹುಡುಗಿಯರು ಉಳಿದವರ ಜೊತೆಗೂಡಿ ಬಳ್ಳಾರಿ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿರುವ ನನ್ನ ನಾಟಕದ ಮೂರನೆಯ ಮುದ್ರಣವನ್ನೂ ಬಿಡುಗಡೆ ಮಾಡಿದರು. ಅದೊಂದು ಅರ್ಥಪೂರ್ಣ ಆನಂದದ ಗಳಿಗೆ. 

`ಶೇಕ್‌ಸ್ಪಿಯರ್’ ಎನ್ನಬೇಕೋ `ಶೇಕ್ಸ್ ಪಿಯರ್’ ಎಂದು ಹುಡುಗಿಯೊಬ್ಬಳು ಕೇಳಿದಳು. ಕನ್ನಡದಲ್ಲಿ ಹಲ ಬಗೆಯ ಪ್ರಯೋಗಗಳಿರುವುದರಿಂದ ಈ ಅನುಮಾನ ಸಹಜವಾಗಿತ್ತು. `ಶೇಕ್‌ಸ್ಪಿಯರ್’ ಎನ್ನುವುದೇ ಸರಿಯಾದ ರೂಪ ಎಂದು ಮಕ್ಕಳಿಗೆ ಮನವರಿಕೆ ಮಾಡಿದೆ.

 ಏಪ್ರಿಲ್ ೨೩ರ ಶೇಕ್‌ಸ್ಪಿಯರ್ ಹುಟ್ಟುಹಬ್ಬದ ನೆಪದಲ್ಲಿ ಅವತ್ತು, ಆಗಾಗ ಶೇಕ್‌ಸ್ಪಿಯರ್ ಬಗ್ಗೆ ಟಿಪ್ಪಣಿ ಮಾಡಿದ್ದನ್ನು ಇಲ್ಲಿ ಕೊಡುತ್ತಿರುವೆ: 
ಇಂಗ್ಲಿಷ್ ಲೇಖಕ ಜೇಮ್ಸ್ ಜಾಯ್ಸ್‌ನನ್ನು‘ಜನರೇ ಇಲ್ಲದ ಒಂಟಿ ದ್ವೀಪವೊಂದರಲ್ಲಿ ನೀನೊಬ್ಬನೇ ಇರುವ ಸಂದರ್ಭ ಬರುತ್ತದೆ ಎಂದಿಟ್ಟುಕೋ; ಆಗ ಯಾವ ಲೇಖಕನ ಪುಸ್ತಕಗಳ ಜೊತೆ ಇರುತ್ತೀಯ?’ ಎಂದು ಯಾರೋ ಕೇಳಿದರು. ‘ಶೇಕ್‌ಸ್ಪಿಯರ್ ಜೊತೆಗೆ ಇರುತ್ತೇನೆ’ ಎಂದ ಜಾಯ್ಸ್. 

ನನಗೂ ಹಾಗೇ ಅನ್ನಿಸಿತು. ಜೊತೆಗೆ ಬೇಂದ್ರೆ, ಲಂಕೇಶ್ ಇದ್ದರೆ ಚಂದ ಎಂದೂ ಅನ್ನಿಸಿತು! ಓದುಗ-ಓದುಗಿಯರ ಚಿತ್ತದಲ್ಲಿ ಪ್ರತಿ ದಿನ ಹುಟ್ಟುವ ವಿಲಿಯಂ ಶೇಕ್‌ಸ್ಪಿಯರ್‌ (೧೫೬೪-೧೬೧೬) ಇಂಗ್ಲೆಂಡಿನ ಸ್ಟ್ರಾಟ್‌ಫರ್ಡ್ ಊರಲ್ಲಿ ಏಪ್ರಿಲ್ ೨೩ನೇ ತಾರೀಕು ಹುಟ್ಟಿದ; ಐವತ್ತಮೂರನೆಯ ವಯಸ್ಸಿಗೆ ಏಪ್ರಿಲ್ ೨೩ರಂದು ಹುಟ್ಟಿದೂರಲ್ಲೇ ತೀರಿಕೊಂಡ.  ಅಬ್ಬಬ್ಬಾ ಎಂದರೆ ಇಪ್ಪತ್ತೈದು ವರ್ಷಗಳ ಸೃಜನಶೀಲ ಪಯಣದಲ್ಲಿ ಅದ್ಭುತ ನಾಟಕಗಳು, ಸಾನೆಟ್ಟುಗಳನ್ನು ಸೃಷ್ಟಿಸಿ ಅಮರನಾದ ಶೇಕ್‌ಸ್ಪಿಯರ್ ಈ ಗಳಿಗೆಯಲ್ಲೂ ಮರುಹುಟ್ಟು ಪಡೆಯುತ್ತಲೇ ಇದ್ದಾನೆ.  

‘ಶೇಕ್‌ಸ್ಪಿಯರ್ ರಾಜರುಗಳ ಬಗ್ಗೆ ಬರೆಯುತ್ತಾನಲ್ಲ?’ ಎಂದು ಹುಡುಗನೊಬ್ಬ ಕೇಳಿದ.  ಸ್ಯಾಮುಯಲ್ ಜಾನ್ಸನ್ ಉತ್ತರ ನೆನಪಾಯಿತು: ‘ಶೇಕ್‌ಸ್ಪಿಯರ್‍ ರಾಜರುಗಳ ಬಗ್ಗೆ ಬರೆದರೂ ಒಟ್ಟಾರೆಯಾಗಿ ಜನರ ಕಷ್ಟಗಳ ಬಗ್ಗೆ ಬರೆದ.’ 

ಅಂದರೆ, ಯಾವುದೇ ಸಾಹಿತ್ಯ ಕೃತಿ ಮೂಲತಃ ರೂಪಕ ಎಂಬುದನ್ನು ಮರೆಯಬಾರದು. ಅದು ಯಾರ ಕತೆ ಹೇಳಿದರೂ ಅದು ಇನ್ನಾರದೋ ಅನುಭವವಾಗುವ ಸಾಧ್ಯತೆ ಸದಾ ಮುಕ್ತವಾಗಿರುತ್ತದೆ. ಮೇಲುನೋಟಕ್ಕೆ ಚರಿತ್ರೆಯ ಕೇಂದ್ರದಲ್ಲಿರುವ ವ್ಯಕ್ತಿಗಳ, ಚರಿತ್ರೆಯನ್ನು ಬದಲಿಸಲೆತ್ನಿಸುವ, ಚರಿತ್ರೆಯ ಚಲನೆಯ ಹೊಡೆತಕ್ಕೆ ಸಿಕ್ಕ, ವ್ಯಕ್ತಿಗಳ ಒಳ ಮನಸ್ಸಿಗೆ ಏನಾಗುತ್ತದೆ ಎಂಬ ದೊಡ್ಡ ಪ್ರಶ್ನೆ ಶೇಕ್‌ಸ್ಪಿಯರ್ ಎದುರಿಗಿತ್ತು. ಆದರೆ ಹ್ಯಾಮ್ಲೆಟ್ ಇರಲಿ, ಥರ್‍ಸೈಟಿಸ್ ಇರಲಿ; ಅಥವಾ ಪೂಲ್, ಒಥೆಲೋ, ಓಫೀಲಿಯಾ, ಬ್ರೂಟಸ್ ಇರಲಿ…ಎಲ್ಲರೂ ನನ್ನ ಒಳಕನ್ನಡಿಗಳಂತೆ ಕಾಣತೊಡಗುತ್ತಾರೆ. ಇದು ನಾನು ಶೇಕ್‌ಸ್ಪಿಯರನಿಂದ ನಿತ್ಯ ಕಲಿಯುವ ಪಾಠ. ’ಶೇಕ್‌ಸ್ಪಿಯರ್ ನಮ್ಮೆಲ್ಲರನ್ನೂ ಕಂಡು ಹಿಡಿದ; ಅಂದರೆ, ಅವನಿಲ್ಲದಿದ್ದರೆ ನಮ್ಮೊಳಗೇ ಇದ್ದ ಭಾವಗಳನ್ನು ಕಾಣದೇ ಸುಮ್ಮನಿರುತ್ತಿದ್ದ ನಾವು, ಅವನಿಂದಾಗಿ ಈ ಭಾವಗಳನ್ನು ನೋಡುತ್ತಿದ್ದೇವೆ’ ಎನ್ನುತ್ತಾನೆ ಹೆರಾಲ್ಡ್ ಬ್ಲೂಮ್.

ಶೇಕ್‌ಸ್ಪಿಯರ್ ನಾಟಕಗಳ ನಿತ್ಯ ಜೀವಂತಿಕೆಗೆ ಇನ್ನೊಂದು ಕಾರಣ, ಅವನು ಸಂಪೂರ್ಣವಾಗಿ ರಂಗಭೂಮಿಯ ವ್ಯಕ್ತಿಯಾಗಿದ್ದುದು. ಓದುವವರನ್ನು, ನೋಡುವವರನ್ನು ಸದಾ ಎಚ್ಚರದಲ್ಲಿಡುವ ಕಲೆ ಅವನಿಗೆ ಒಲಿದುಬಿಟ್ಟಿತ್ತು. ದುರಂತ, ಹಾಸ್ಯ, ತೀವ್ರ ಚಿಂತನೆ ಎಲ್ಲವನ್ನೂ ಹೇಳಬಲ್ಲ ನುಡಿಗಟ್ಟುಗಳು ದಕ್ಕಿದ್ದವು. ಕತೆಯ ಓಟ, ಪಾತ್ರಗಳ ತೀವ್ರ ಸ್ಥಿತಿಯ ನಾಟ್ಯೀಕರಣದ ಜೊತೆಜೊತೆಗೇ ಭಾಷೆಯ ಬಗೆಬಗೆಯ ಆಟಗಳ ಮೂಲಕವೂ ನಮ್ಮನ್ನು ಹಿಡಿದಿಡುವ ಕೌಶಲ ಅವನಿಗಿತ್ತು. ‘ಜೂಲಿಯಸ್ ಸೀಸರ್’ ನಾಟಕದ ಈ ಸಂಭಾಷಣೆ ನೋಡಿ: 

ಬ್ರೂಟಸ್: ತಾರೀಕು ಎಷ್ಟು?
ಸೇವಕ: (ಒಳ ಹೋಗಿ ಕ್ಯಾಲೆಂಡರ್ ನೋಡಿ ಬಂದು) ಮಾರ್ಚ್ ಹದಿನೈದು ದಿನಗಳನ್ನು ವೇಸ್ಟ್ ಮಾಡಿದೆ!   

ಈ ಉತ್ತರ ಕೇಳಿದ ತಕ್ಷಣ ನಮ್ಮೊಳಗೆ ಲವಲವಿಕೆ ಮೂಡುತ್ತದೆ. ಜಾಣ ಮಾತಿನ ಜೀವಂತಿಕೆಯೆಂದರೆ ಇದೇ! ಹೊಸಪೇಟೆಯ ಹುಡುಗ, ಹುಡುಗಿಯರ ಎದುರು ಈ ಸಂಭಾಷಣೆ ನೆನಪಾದಾಗ, ‘ಹೌದಲ್ಲವೆ? ಈ ವರ್ಷದ ನನ್ನ ಮಾರ್ಚ್ ತಿಂಗಳು ವೇಸ್ಟ್ ಆಗಿದೆಯಲ್ಲವೆ?’ ಎಂಬ ಫಿಲಸಾಫಿಕಲ್ ಪ್ರಶ್ನೆ ನನ್ನಲ್ಲಿ ಮೂಡಿತು! ಹೀಗೆ ಸಾಧಾರಣ ಎನ್ನಿಸುವ ಮಾತುಗಳು ಫಿಲಾಸಫಿಯ ಮಟ್ಟಕ್ಕೇರುವ ಭಾಗ್ಯ ಲೋಕದ ಬಹುತೇಕ ಲೇಖಕರಿಗೆ ಈತನಕ ಸಾಧ್ಯವಾದಂತಿಲ್ಲ! ‘ಹ್ಯಾಮ್ಲೆಟ್’ ನಾಟಕದ ಗ್ರೇವ್ ಡಿಗ್ಗರ್ ದೃಶ್ಯದಲ್ಲಿ ಗೋರಿ ತೋಡುವವನನ್ನು ‘ಯಾರನ್ನು ಹೂಳುತ್ತಿದ್ದೀಯ?’ ಎಂದು ಹ್ಯಾಮ್ಲೆಟ್ ಕೇಳುತ್ತಾನೆ; ಗೋರಿ ತೋಡುವವನು ‘ನಿನ್ನೆಯವರೆಗೆ ಹೆಂಗಸಾಗಿದ್ದವಳನ್ನು’ ಎನ್ನುತ್ತಾನೆ! ಕರಾರುವಾಕ್ಕಾದ ವರ್ಣನೆ! ಸತ್ತ ಮೇಲೆ ಹೆಂಗಸೇನು! ಗಂಡಸೇನು!  

‘ರಾತ್ರಿ ಟೈಮೆಷ್ಟು?’ಎನ್ನುವ ಬದಲು ‘ಹೌ ಗೋಸ್ ದಿ ನೈಟ್ ಬಾಯ್’ ಎಂದು ಒಬ್ಬ ಕೇಳಿದಾಗ, ಮತ್ತೊಬ್ಬ ‘ರಾತ್ರಿ  ಕೋಮಲವಾಗಿದೆ’ಎಂದು ಉತ್ತರ ಕೊಡುತ್ತಾನೆ! ಒಂದೆರಡು ಮಾತಾಡುವ ಸಣ್ಣ ಪುಟ್ಟ ಪಾತ್ರಗಳಿಗೂ ಶೇಕ್‌ಸ್ಪಿಯರ್ ವಿಶಿಷ್ಟ ಆ್ಯಕ್ಷನ್ನನ್ನೋ, ಚುರುಕಾದ ಅರ್ಥಪೂರ್ಣ ಮಾತನ್ನೋ ಕೊಡುವುದರಿಂದ ಇಲ್ಲಿ ಎಲ್ಲರೂ ಜೀವಂತ. ‘ಜೂಲಿಯಸ್ ಸೀಸರ್’ನಾಟಕದ ಮೊದಲ ದೃಶ್ಯದಲ್ಲಿ ಅಧಿಕಾರಿಯೊಬ್ಬ ‘ನೀನು ಏನು ಕೆಲಸ ಮಾಡುತ್ತೀಯ?’ ಎಂದು ಚಪ್ಪಲಿ ಹೊಲೆಯುವವನನ್ನು ಕೇಳುತ್ತಾನೆ. ಅವನು ‘ಐ ಆ್ಯಮ್ ಎ ಮೆಂಡರ್ ಆಫ್ ಬ್ಯಾಡ್ ಸೋಲ್ಸ್’ ಎನ್ನುತ್ತಾನೆ.  ಇಲ್ಲಿ ‘ಸೋಲ್’ ಎಂಬ ಪದಕ್ಕೆ ಆತ್ಮ ಹಾಗೂ ಚಪ್ಪಲಿಯ ಅಟ್ಟೆ ಎರಡೂ ಅರ್ಥಗಳು ಹೊರಡುತ್ತವೆ! ‘ಅದೇನು ಸರಿಯಾಗಿ ಹೇಳಯ್ಯಾ’ ಎಂದು ಅಧಿಕಾರಿ ರೇಗಿದರೆ, ‘ನಿನ್ನನ್ನೂ ರಿಪೇರಿ ಮಾಡಬಲ್ಲೆ... ನಿನ್ನನ್ನೂ ಹೊಲೆಯಬಲ್ಲೆ’ ಎಂದು ಚಮ್ಮಾರ ಆ ಅಧಿಕಾರಿಯ ಬಗ್ಗೆ ತನ್ನೊಳಗಿನ ಸಿಟ್ಟನ್ನು ತಮಾಷೆಯಾಗಿ ಹೇಳುತ್ತಾ ಅವನನ್ನು ರೇಗಿಸುತ್ತಾನೆ; ‘ಐ ಆ್ಯಮ್ ಎ ಸರ್ಜನ್ ಆಫ್ ಓಲ್ಡ್ ಶೂಸ್’ಎನ್ನುತ್ತಾನೆ. ಅಧಿಕಾರಿಗೆ ತಲೆ ಕೆಟ್ಟು ಹೋಗುತ್ತದೆ! 

ಈ ಪುಟ್ಟ ಪಾತ್ರಗಳು ಖಾಯಮ್ಮಾಗಿ ಉಳಿಯುತ್ತವೆ; ಹಾಗೆಯೇ ದುರಂತ ದೃಶ್ಯಗಳಲ್ಲಿ ಅವನ ಭಾಷೆಯ ಭಾವಗೀತೆಯ ತೀವ್ರತೆ ಹಾಗೂ ಆಡುನುಡಿ ಕೂಡ. ವೃದ್ಧ ಲಿಯರ್ ಸತ್ತ ತನ್ನ ಮಗಳು ಕಾರ್ಡೀಲಿಯಾಳನ್ನು ಕಂಡು ‘ಒಂದು ನಾಯಿಗೆ, ಕುದುರೆಗೆ, ಇಲಿಗೆ ಇಲ್ಲಿ ಜೀವವಿದೆ; ನಿನಗ್ಯಾಕವ್ವ ಜೀವವಿಲ್ಲ?’ ಎಂದು ಮರುಗುವಾಗ ನಾವು ಕರಗಿ ಹೋಗುತ್ತೇವೆ.

ಶೇಕ್‌ಸ್ಪಿಯರ್ ೧೮೦೦ ಹೊಸ ಪದ ಪ್ರಯೋಗಗಳನ್ನು ಮಾಡಿರುವುದನ್ನು ವಿದ್ವಾಂಸರು ಹೆಕ್ಕಿ ತೋರಿಸಿದ್ದಾರೆ: ಅಸಾಸಿನೇಷನ್, ಅಪ್‌ಸ್ಟೇರ್ಸ್, ಕೋಲ್ಡ್ ಬ್ಲಡೆಡ್, ಐರನ್ ಹೀಲ್, ಗಾಸಿಪ್, ಲಾಫಬಲ್, ಅನ್‌ಡ್ರೆಸ್, ಅರೌಸ್…ಹೀಗೆ ಶೇಕ್‌ಸ್ಪಿಯರ್‌ನಲ್ಲಿ ಹೊಸ ಪದವೊಂದು ಹುಟ್ಟುತ್ತದೆ; ಎರಡು ಶಬ್ದಗಳು ಸೇರಿ ನವಪದ ನಿರ್ಮಾಣವಾಗುತ್ತದೆ. ಹಳೆಯ ಶಬ್ದಗಳು ರೂಪಾಂತರಗೊಳ್ಳುತ್ತವೆ; ಚರಿತ್ರೆಯ ಘಟನೆಗಳು, ಪರಿಚಿತ ಕತೆಗಳು ಹೊಸ ದರ್ಶನಗಳ ನಾಟಕಗಳಾಗುತ್ತವೆ.

ಶೇಕ್‌ಸ್ಪಿಯರ್ ತನ್ನ ನಾಟಕಗಳ ಕಥಾವಸ್ತು, ಘಟನಾವಳಿಗಳು, ಪಾತ್ರಗಳ ಬೆಳವಣಿಗೆಗಳ ಜೊತೆಜೊತೆಗೇ ಬದುಕಿನ ಗಾಢ ಫಿಲಾಸಫಿಗಳನ್ನು ಸಹಜವಾಗಿ ಹಬ್ಬಿಸಿದ. ‘ದ ಮರ್ಚೆಂಟ್ ಆಫ್ ವೆನಿಸ್’ ನಾಟಕದಲ್ಲಿ ಸಾಲಿಗ ಶೈಲಾಕನ ದುರಾಸೆ, ಕ್ರೌರ‍್ಯ ತೋರಿಸುತ್ತಲೇ, ಪೋರ್ಷಿಯಾ ಮೂಲಕ ಕರುಣೆಯ ಸಂದೇಶವೂ ಮೂಡುತ್ತದೆ:

ಕರುಣೆ ಹನಿ ಮಳೆಯ ಹಾಗೆ 
ಇಳೆಯೆಡೆಗೆ ಇಳಿಯುವುದು; 
ಕೊಡುವವನನ್ನೂ ಹರಸುವುದು; 
ಪಡೆಯುವವನನ್ನೂ ಹರಸುವುದು. 

ಪ್ರೀತಿ, ದ್ವೇಷ, ಅಗಲಿಕೆ, ಮಿಲನ, ಸಾವು, ಕಾದಾಟ, ಅತಿಯಾಸೆ, ಕಾಮ ಮುಂತಾದ ತೀವ್ರ ಸ್ಥಿತಿಗಳಲ್ಲಿ ಗಂಡು ಹೆಣ್ಣುಗಳ ವಿಚಿತ್ರ, ಸಂಕೀರ್ಣ ಭಾವನೆಗಳು, ಊಹಾತೀತ ವರ್ತನೆಗಳು ಪ್ರಕಟವಾಗುವುದನ್ನು ಶೇಕ್‌ಸ್ಪಿಯರ್ ಕಂಡುಕೊಂಡ. ಎಲ್ಲ ಸರಿಯಿರುವಂತೆ ಕಾಣುತ್ತಿರುವಾಗಲೇ ಮನುಷ್ಯನ ಬದುಕು ಯಾಕೆ ನಾಶವಾಗುತ್ತದೆ? ಮನುಷ್ಯ ತನ್ನ ಬದುಕನ್ನು ತಾನೇ ಯಾಕೆ ನಾಶ ಮಾಡಿಕೊಳ್ಳುತ್ತಾನೆ? ಈ ಗಾಢ ಪ್ರಶ್ನೆಗಳು ಶೇಕ್‌ಸ್ಪಿಯರ್ ಪಾತ್ರಗಳಲ್ಲಿ   ಸಂಕೀರ್ಣವಾಗುತ್ತವೆ. ಸೇನಾನಾಯಕ ಮ್ಯಾಕ್‌ಬೆತ್ ಯುದ್ಧ ಗೆದ್ದು ಬಂದ ಮೇಲೆ ಅವನೊಳಗೆ ತಾನೇ ರಾಜನಾಗಬೇಕೆಂಬ ಆಸೆ ಹುಟ್ಟಿ, ಅದು ಅವನನ್ನು ದುರಂತಕ್ಕೂ ಒಯ್ಯುತ್ತದೆ. ಆದರೆ ‘ಆ ಆಸೆ ಅವನಲ್ಲಿ ಹುಟ್ಟಿದ್ದು ತಪ್ಪೆ?’ ಎಂಬ ಸೂಕ್ಷ್ಮ ಪ್ರಶ್ನೆಯೂ ನಮಗೆ ಎದುರಾಗುತ್ತದೆ. 

ಕಿಂಗ್ ಲಿಯರ್ ಆ ಇಳಿವಯಸ್ಸಿನಲ್ಲಿ ತನ್ನ ಹೆಣ್ಣು ಮಕ್ಕಳಿಗೆ ರಾಜ್ಯ ಹಂಚುವ ಮೊದಲು ‘ನಿಮಗೆ ನನ್ನನ್ನು ಕಂಡರೆ ಎಷ್ಟು ಪ್ರೀತಿ, ಹೇಳಿ ನೋಡೋಣ?’ ಎಂಬ ಹುಡುಗಾಟಿಕೆಯ ಪ್ರಶ್ನೆಯನ್ನು ಯಾಕೆ ಕೇಳಿದ? ಅವನ ಕೊನೆಯ ಮಗಳು ಕಾರ್ಡೀಲಿಯಾ ತನ್ನ ಅಕ್ಕಂದಿರಂತೆ ಒಂಚೂರು ಉತ್ಪ್ರೇಕ್ಷೆ ಮಾಡಿ, ‘ಅಪ್ಪಾ ನಿನ್ನನ್ನು ಕಂಡರೆ ನನಗೆ ಸಿಕ್ಕಾಪಟ್ಟೆ ಪ್ರೀತಿ!’ ಎಂದಿದ್ದರೆ ಲಿಯರ್‌ನ ದುರಂತ ಸರಣಿ ತಪ್ಪುತ್ತಿತ್ತೆ? ಸದಾ ಆತ್ಮಪರೀಕ್ಷೆ ಮಾಡಿಕೊಳ್ಳುವ ಬುದ್ಧಿಜೀವಿ ಹ್ಯಾಮ್ಲೆಟ್ ತನ್ನ ತಂದೆಯ ಸಾವಿನ ಪ್ರತೀಕಾರದ ಸುಳಿಯಲ್ಲಿ ಯಾಕೆ ಸಿಕ್ಕಿ ಹಾಕಿಕೊಂಡು ನಾಶವಾದ? 

‘ಜೂಲಿಯಸ್ ಸೀಸರ್’ ನಾಟಕದಲ್ಲಿ ಗಣ್ಯ ಸೆನೇಟರ್ ಆಗಿದ್ದ ಬ್ರೂಟಸ್ ಯಾಕೆ ಕ್ಯಾಸಿಯಸ್‌ನ ಸಂಚನ್ನು ಒಪ್ಪಿದ? ಯಾಕೆ ಸೀಸರ್‌ನ ಕೊಲೆ ಮಾಡಲು ತಕ್ಕ ತರ್ಕ, ನ್ಯಾಯಬದ್ಧತೆ ಸೃಷ್ಟಿಸಿಕೊಂಡ? ಮನುಷ್ಯನ ಆತ್ಮಪರೀಕ್ಷೆ ಯಾಕೆ ಅವನಿಗೆ ಸಕಾಲಕ್ಕೆ ಕೈ ಕೊಡುತ್ತದೆ? ಸೀಸರ್ ವಿರುದ್ಧದ ಸಂಚಿನಲ್ಲಿ ಭಾಗಿಯಾಗುವ ಬ್ರೂಟಸ್‌ಗೆ ಒಂದು ಕ್ಷಣ ‘ತೋರಿಕೆಯ ಹಾಗೆ ಮನುಷ್ಯ ಇದ್ದಿದ್ದರೆ?’ ಎಂಬ ಸೂಕ್ಷ್ಮ ಪ್ರಶ್ನೆಯೂ ಎದುರಾಗುತ್ತದೆ. ಈ ಮನುಷ್ಯ ಹೀಗೆ ಕಾಣುತ್ತಾನೆ; ಆದರೆ ನಿಜವಾಗಿಯೂ ಅವನು ಹೇಗಿದ್ದಾನೆ ನೋಡೋಣ ಎಂಬ ಹುಡುಕಾಟ ಶೇಕ್‌ಸ್ಪಿಯರ್ ನಾಟಕಗಳಲ್ಲಿ ಆಗಾಗ್ಗೆ ಸುಳಿಯುತ್ತದೆ. ಮಾನವ ಬದುಕಿನ ತೋರಿಕೆ-ವಾಸ್ತವಗಳ ನಡುವಣ ವ್ಯತ್ಯಾಸ ಕುರಿತ ಟೀಕೆ, ಅಣಕ ಹಾಗೂ ದಿಗ್ಭ್ರಮೆ ಇಲ್ಲಿ ಮತ್ತೆ ಮತ್ತೆ ಸುಳಿಯುತ್ತದೆ.  

ಜಗತ್ತಿನ ಎಲ್ಲೆಡೆ ಜನ ತತ್ವಜ್ಞಾನಿಗಳನ್ನು ಉಲ್ಲೇಖಿಸುವಂತೆ ಶೇಕ್‌ಸ್ಪಿಯರ್ ಪಾತ್ರಗಳ ಮಾತುಗಳನ್ನು ಉಲ್ಲೇಖಿಸುತ್ತಾರೆ. ಪ್ರೇಮಿಗಳು ಅವನ ರೋಮಿಯೋ, ಜೂಲಿಯೆಟ್, ಮಿರಾಂಡ, ಫರ್ಡಿನೆಂಡ್ ಥರದ ಮುಗ್ಧ ರಮ್ಯ ಪ್ರೇಮಿಗಳಿಂದ ಸ್ಫೂರ್ತಿ ಪಡೆಯುತ್ತಲೇ ಇರುತ್ತಾರೆ. ಜಗತ್ತಿನ ನಾಟಕ, ಸಿನಿಮಾಗಳಲ್ಲಂತೂ ಅವನ ನಾಟಕಗಳ ಪಾತ್ರಗಳು, ಕಥಾವಸ್ತುಗಳು ಪ್ರತ್ಯಕ್ಷವಾಗುತ್ತಲೇ ಇರುತ್ತವೆ. ‘ರೋಮಿಯೋ ಅಂಡ್ ಜೂಲಿಯೆಟ್’ ಹಿಂದಿಯಲ್ಲಿ ‘ರಾಮ್ ಲೀಲಾ’ ಎಂಬ ಸಿನಿಮಾ ಆಯಿತು; ‘ಒಥೆಲೋ’ ‘ಓಂಕಾರ್’ ಆಯಿತು. ಅಕಿರ ಕುರೊಸಾವಾ ಸಿನಿಮಾಗಳಲ್ಲಿ ಶೇಕ್‌ಸ್ಪಿಯರ್ ನಾಟಕಗಳ ವಿಶಿಷ್ಟ ವ್ಯಾಖ್ಯಾನಗಳು ಹುಟ್ಟಿವೆ. 

ಜೀವಮಾನಪೂರ್ತಿ ಶೇಕ್‌ಸ್ಪಿಯರ್ ಅಧ್ಯಯನದಲ್ಲೇ ತೊಡಗಿರುವ ಶೇಕ್‌ಸ್ಪಿಯರಿಯನ್ ಸ್ಕಾಲರುಗಳು, ಜಗತ್ತಿನ ಎಲ್ಲ ಭಾಗಗಳ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಲಕ್ಷಾಂತರ   ಬೋಧಕ ಬೋಧಕಿಯರು, ವಿಮರ್ಶಕ ವಿಮರ್ಶಕಿಯರು, ಶೇಕ್‌ಸ್ಪಿಯರ್ ಕೃತಿಗಳನ್ನು ವಿಸ್ತರಿಸುತ್ತಾ ತಮ್ಮೊಳಗೂ ನವಸ್ಫೂರ್ತಿ ತುಂಬಿಕೊಂಡಿದ್ದಾರೆ; ಸೂಕ್ಷ್ಮವಾಗಿದ್ದಾರೆ. ಶೇಕ್‌ಸ್ಪಿಯರ್ ನಾಟಕಗಳಲ್ಲಿ ಸ್ತ್ರೀವಿರೋಧಿ ಧೋರಣೆಗಳನ್ನು ಗುರುತಿಸಿರುವ ಸ್ತ್ರೀವಾದಿ ವಿಮರ್ಶಕಿಯರಿದ್ದಾರೆ. ಶೇಕ್‌ಸ್ಪಿಯರ್‌ನ ಪಾತ್ರಗಳಲ್ಲಿ ಯಹೂದಿಗಳ ವಿರುದ್ಧ ಇರುವ ಪೂರ್ವಗ್ರಹಗಳನ್ನು ತೋರಿಸಿದವರಿದ್ದಾರೆ. ‘ಒಥೆಲೋ’ಪಾತ್ರ ಸೃಷ್ಟಿಯಲ್ಲಿ ಆಫ್ರಿಕನ್ನರ ಬಗ್ಗೆ ಅಸಹನೆಯಿದೆ ಎನ್ನುವವರಿದ್ದಾರೆ.    

ಅದೇನೇ ಇದ್ದರೂ, ಅವನ ನಾಟಕಗಳ ಹಲವು ಸ್ತರಗಳ ಅರ್ಥ ನಮ್ಮಲ್ಲಿ ವಿಸ್ಮಯ ಹುಟ್ಟಿಸುತ್ತಲೇ ಇರುತ್ತದೆ. ಓದುವವರನ್ನು ಸೃಜನಶೀಲವಾಗಿಸುವ ಭಾವಗೀತಾತ್ಮಕ ಸಂಭಾಷಣೆಗಳು, ಶಬ್ದಗಳ ಬಳುಕು, ತಿರುವು, ಭಾಷೆಯ ಚಿನ್ನಾಟ ನಮ್ಮನ್ನು ರೋಮಾಂಚನಗೊಳಿಸುತ್ತಲೇ ಇರುತ್ತದೆ. ಪ್ರತಿ ಸಲ ಶೇಕ್‌ಸ್ಪಿಯರ್ ಕೃತಿಗಳನ್ನು ಓದಿದಾಗ, ನಾಟಕ ಆಡಿದಾಗ, ನೋಡಿದಾಗ, ಅಲ್ಲಿ ಹೊಸಹೊಸ ಅರ್ಥಗಳು, ತಾತ್ವಿಕ ಅರಿವುಗಳು ಸೃಷ್ಟಿಯಾಗಿ ನಮ್ಮನ್ನು ಬೆರಗಾಗಿಸುತ್ತಿರುತ್ತವೆ. ಶೇಕ್‌ಸ್ಪಿಯರ್‌ ನಾಟಕಗಳನ್ನು ಹೊಕ್ಕಾಗಲೆಲ್ಲ ಅರ್ಥಪೂರ್ಣವಾದ ಸೃಜನಶೀಲ ಕ್ರಿಯೆಯಲ್ಲಿ ತೊಡಗಿದ ಸಾರ್ಥಕ ಭಾವ, ನಾವೇ ಬರೆಯುತ್ತಿರುವ ಭಾವ ಸದಾ ನಮ್ಮೊಳಗೆ ಹುಟ್ಟುತ್ತಿರುತ್ತದೆ.

ಈಗ ನಮ್ಮೆದುರು ಸರಳ ಇಂಗ್ಲಿಷ್ ಶೇಕ್‌ಸ್ಪಿಯರ್, ಕನ್ನಡ ಶೇಕ್ ಸ್ಪಿಯರ್ ಎಲ್ಲವೂ ಇವೆ. ಭಗವಾನ್ ಥರದವರ ಸುಂದರ ಕನ್ನಡಾನುವಾದಗಳಿವೆ. ಈ ಸಲದ ಶೇಕ್‌ಸ್ಪಿಯರ್ ಹುಟ್ಟು ಹಬ್ಬದ ದಿನದಿಂದಲಾದರೂ ನಿಮ್ಮ ಶೇಕ್‌ಸ್ಪಿಯರ್ ಯಾನ ಶುರುವಾಗಲಿ!

ಹ್ಯಾಪಿ ಬರ್ತ್ ಡೇ ವಿಲಿಯಂ!

Shakespeare Manege Banda Nataka YouTube Video Available Below

blog
13 Apr 2025 ಸವಿತಾ-ಅಂಬೇಡ್ಕರ್ ಆತ್ಮಸಂಗಾತ

’ಒಂದು ಆತ್ಮ ಇನ್ನೊಂದು ಆತ್ಮವನ್ನು ನೋಡಿತು. ಎರಡೂ ಆತ್ಮಗಳು ಒಂದು ಕಾಮನ್ ಐಡೆಂಟಿಟಿಯನ್ನು ಕಂಡುಕೊಂಡವು.’

ಡಾ. ಬಿ. ಆರ್. ಅಂಬೇಡ್ಕರ್ ಡಾಕ್ಟರ್ ಶಾರದಾ ಕಬೀರ್ ಗೆ ೧೯೪೮ರಲ್ಲಿ ಬರೆದ ಪತ್ರದಲ್ಲಿ ಹೇಳಿದ ಮಾತಿದು. 

ಅಂಬೇಡ್ಕರ್-ಶಾರದಾ ಭೇಟಿ ಆಕಸ್ಮಿಕವಾಗಿತ್ತು. ಸಾವಿರಾರು ವರ್ಷಗಳ ದಲಿತ ದಮನದ ಭೀಕರ ಇತಿಹಾಸ ಚಕ್ರದ ಓಟದ ದಿಕ್ಕನ್ನು ತಮ್ಮ ಪುಟ್ಟ ಕೈಗಳ ಮೂಲಕ ಬೇರೆಡೆ ತಿರುಗಿಸಲು ಹೊರಟಿದ್ದ ಅಂಬೇಡ್ಕರರಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವ ಲಕ್ಷುರಿಯಿರಲಿಲ್ಲ. ಓದಲು ಕೊಲಂಬಿಯಾ ತಲುಪಿದ ಕಾಲದಿಂದಲೂ ಹದಿನಾರು, ಹದಿನೆಂಟುಗಳ ಕಾಲ ಕೆಲಸ ಮಾಡುವುದು ಅವರ ಬದುಕಿನ ರೂಢಿಯಾಗಿಬಿಟ್ಟಿತ್ತು. ಹೊತ್ತುಹೊತ್ತಿನ ಊಟ, ನಿದ್ರೆ, ವಿರಾಮಗಳ ದಿನಚರಿ ಅವರ ಜೀವನದಲ್ಲಿ ಇರಲೇ ಇಲ್ಲ.    

ತಮ್ಮ ಐವತ್ತೇಳನೆಯ ವಯಸ್ಸಿನಲ್ಲಿ ದೇಹ ಪೂರಾ ಹತೋಟಿ ತಪ್ಪಿಹೋಗುತ್ತಿದೆ ಎಂದು ಅಂಬೇಡ್ಕರ್‌ಗೆ ಅರಿವಾಗತೊಡಗಿತು. ಡಯಾಬಿಟಿಸ್, ನರಗಳ ಸಮಸ್ಯೆ, ಕೀಲು ನೋವು, ರಕ್ತದ ಅತಿ ಒತ್ತಡ…ಹೀಗೆ ಹಲವು ಕಷ್ಟಗಳ ನಡುವೆಯೂ ದೇಶದ ಹಿತ ನೋಡಿಕೊಳ್ಳುತ್ತಿದ್ದ ಅಂಬೇಡ್ಕರ್ ದೇಹವನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಕೊನೆಗೂ ಅಂಬೇಡ್ಕರ್ ತಮ್ಮ ಮಿತ್ರ ಡಾ. ರಾವ್ ಸಲಹೆಯಂತೆ ಡಾ. ಮಾವ್ಲಂಕರ್ ಅವರನ್ನು ಕಾಣಲೇಬೇಕಾಯಿತು.  

ಅಂಬೇಡ್ಕರ್ ಮಾವ್ಲಂಕರ್ ಆಸ್ಪತ್ರೆಗೆ ಭೇಟಿ ಕೊಡುವ ಮೊದಲು ಡಾ. ಶಾರದ ಕಬೀರ್ ಎಂಬ ಸಾರಸ್ವತ ಬ್ರಾಹ್ಮಣ ತರುಣಿಯನ್ನು ಭೇಟಿ ಮಾಡಿದ್ದು ಆಕಸ್ಮಿಕವಾಗಿತ್ತು. ಮುಂಬೈನ ಹೊರವಲಯದಲ್ಲಿ ನೆಲೆಸಿದ್ದ ಮೈಸೂರು ಕಡೆಯ ಡಾ. ರಾವ್ ಅಂಬೇಡ್ಕರ್ ಅವರ ಗೆಳೆಯರಾಗಿದ್ದರು; ರಾವ್ ಮನೆಗೆ ಅಂಬೇಡ್ಕರ್ ಒಮ್ಮೊಮ್ಮೆ ಭೇಟಿ ಕೊಡುತ್ತಿದ್ದರು. ರಾವ್ ಅವರ ತಂಗಿಯ ಗೆಳತಿಯಾಗಿದ್ದ ಶಾರದ ಅಷ್ಟೊತ್ತಿಗೆ ಎಂ.ಬಿ.ಬಿ.ಎಸ್. ಮುಗಿಸಿದ್ದರು. ಗೆಳತಿಯನ್ನು ಭೇಟಿ ಮಾಡಲು ಶಾರದ ಆಗಾಗ್ಗೆ ರಾವ್ ಮನೆಗೆ ಬರುತ್ತಿದ್ದರು. 

೧೯೪೭ರ ಶುರುವಿನಲ್ಲಿ ಒಮ್ಮೆ ಅಂಬೇಡ್ಕರ್ ಡಾ. ರಾವ್ ಮನೆಗೆ ಬಂದರು. ಅವತ್ತು ಶಾರದ ಕೂಡ ಅಲ್ಲಿದ್ದರು. ವೈಸರಾಯ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಅಂಬೇಡ್ಕರ್ ಹೆಸರನ್ನು ಶಾರದ ಕೇಳಿದ್ದರು. ಅಂಬೇಡ್ಕರ್ ವಿದೇಶದಲ್ಲಿ ಅಷ್ಟೆಲ್ಲ ಡಿಗ್ರಿಗಳನ್ನು ಪಡೆಯಲು ಪಟ್ಟ ಪರಿಶ್ರಮ, ಕಷ್ಟ, ಅವರು ಏರಿದ್ದ ಎತ್ತರ, ಬೆಲೆ ಕಟ್ಟಲಾಗದ ಬರಹಗಳು, ಅವರ ಹೋರಾಟ ಎಲ್ಲವನ್ನೂ ಡಾ. ರಾವ್ ಶಾರದಾಗೆ ಹೇಳಿದರು. ತಾನೊಬ್ಬ ಮಹಾನ್ ವ್ಯಕ್ತಿಯೆದುರು ಇರುವುದು ಶಾರದಾಗೆ ಅರಿವಾಯಿತು. 

ಮೊದಲ ಭೇಟಿಯಲ್ಲೇ ಅಂಬೇಡ್ಕರ್ ಮಹಿಳೆಯರ ಪ್ರಗತಿಯ ಬಗ್ಗೆ, ಮಹಿಳೆಯರು ಗಂಡಸರಿಗೆ ಸಮಾನವಾಗಿ ಹೆಜ್ಜೆ ಹಾಕುವ ಬಗ್ಗೆ ಮಾತಾಡಿದಾಗಲಂತೂ ಶಾರದಾಗೆ ಅವರ ಬಗ್ಗೆ ಅಪಾರ ಗೌರವ ಹುಟ್ಟಿತು.  ಇದಾದ ಮೇಲೆ, ರಾವ್ ಮನೆಯಲ್ಲಿ ನಡೆದ ಭೇಟಿಗಳಲ್ಲಿ ಅಂಬೇಡ್ಕರ್ ಓದಿನ ಆಳ, ಗ್ರಹಿಕೆ  ಶಾರದಾಗೆ ಮನದಟ್ಟಾಗತೊಡಗಿತು.

ಕೆಲ ದಿನಗಳ ನಂತರ ಅಂಬೇಡ್ಕರ್ ಮಾವ್ಲಂಕರ್ ಅವರ ಆಸ್ಪತ್ರೆಗೆ ಬಂದಾಗ ಅಲ್ಲಿ ಜೂನಿಯರ್ ಡಾಕ್ಟರಾಗಿದ್ದ ಶಾರದಾಗೆ ಅಂಬೇಡ್ಕರ್ ಅವರನ್ನು ಕಂಡು ಅಚ್ಚರಿ-ಆನಂದ! ಮಾವ್ಲಂಕರ್ ಅಂಬೇಡ್ಕರ್ ಅವರ ಪೂರ್ಣ ತಪಾಸಣೆ ಮಾಡಿ, ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಶಾರದಾಗೆ ಸೂಚನೆಗಳನ್ನು ಕೊಟ್ಟರು. 

ಶಾರದಾ ಅಂಬೇಡ್ಕರ್ ಅವರಿಗೆ ಮಾತ್ರೆ ಚೀಟಿಗಳನ್ನು ಸಿದ್ಧಪಡಿಸುತ್ತಾ, ಮುಂದೆ ಅವರ ಜೀವನ ಶೈಲಿ ಹೇಗಿರಬೇಕು ಇತ್ಯಾದಿಗಳ ಬಗ್ಗೆ ಸೂಚನೆ ಕೊಡುತ್ತಾ, ’ನಾನು ಬಂದು ನಿಮ್ಮ ಹೆಂಡತಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು. ರಮಾಬಾಯಿ ತೀರಿಕೊಂಡಿದ್ದು ಶಾರದಾಗೆ  ಗೊತ್ತಾದ ಮೇಲೆ ‘ನಿಮ್ಮ ಮನೆಗೇ ಬಂದು ಕೆಲವು ದಿನ ಇದ್ದು ನಿಮ್ಮ ಸಹಾಯಕರಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು.  

ಅಂಬೇಡ್ಕರ್: ಅಯ್ಯೋ ಡಾಕ್ಟರ್! ಹಾಗೆಲ್ಲ ಮಾಡಿಬಿಟ್ಟೀರಿ. ನಾನು ಒಬ್ಬಂಟಿ. ಒಬ್ಬ ಹೆಂಗಸು ಬಂದು ನನ್ನ ಮನೆಯಲ್ಲಿದ್ದರೆ ಜನ ಏನೆಂದುಕೊಳ್ಳುತ್ತಾರೆ?
ಶಾರದ: ಅದರಲ್ಲೇನಿದೆ! ನೀವು ಮಿನಿಸ್ಟರ್. ನಿಮ್ಮ ಬಂಗಲೆಯಲ್ಲಿರುತ್ತೀರಿ. ಅಲ್ಲಿ ನಾನು ನಿಮ್ಮ ಗೆಸ್ಟ್ ಹೌಸಿನಲ್ಲಿದ್ದು ಇದನ್ನೆಲ್ಲ ನಿಮ್ಮ ಸಹಾಯಕರಿಗೆ ಹೇಳಿಕೊಟ್ಟು ಬರುತ್ತೇನೆ.

ಕೊನೆಗೂ ಅಂಬೇಡ್ಕರ್ ಅದಕ್ಕೆ ಒಪ್ಪಲಿಲ್ಲ. 'ಹಾಗಾದರೆ ನೀವು ಮದುವೆಯಾಗುವುದು ಒಳ್ಳೆಯದು’ ಎಂದು ಶಾರದ ಅಂಬೇಡ್ಕರ್ ಅವರನ್ನು ಬೀಳ್ಕೊಟ್ಟರು. 

೧೯೪೭ರ ಡಿಸೆಂಬರ್ ತಿಂಗಳ ಒಂದು ದಿನ ಅಂಬೇಡ್ಕರ್ ತಮ್ಮ ಆಯ್ಕೆಯನ್ನು ಶಾರದಾಗೆ ಹೇಳಿಬಿಟ್ಟರು. ತಕ್ಷಣ ಏನು ಹೇಳಬೇಕೆಂಬುದು ಶಾರದಾಗೆ ಹೊಳೆಯಲಿಲ್ಲ. ಪತ್ರಗಳ ಅಡ್ಡಾಟ ಶುರುವಾಯಿತು. ಅಂಬೇ‌ಡ್ಕರ್ ತಾವು 'ಶಾರು’ ಎಂದು ಕರೆಯುತ್ತಿದ್ದ ಹುಡುಗಿಯನ್ನು ಸವಿತಾ ಎಂ‌ದರು;  ಸವಿತಾರ ಪತ್ರಗಳಲ್ಲಿ ಅಂಬೇಡ್ಕರ್ 'ರಾಜ’ ಆದರು.

ಅಂಬೇಡ್ಕರ್ ಅವರ‌ ಐವತ್ತೇಳನೇ ಹುಟ್ಟುಹಬ್ಬದ ಮಾರನೆಯ ದಿನ ೧೫ ಏಪ್ರಿಲ್ ೧೯೪೮ರಂದು ದೆಹಲಿಯಲ್ಲಿ ಸವಿತಾ- ಅಂಬೇಡ್ಕರ್ ಮದುವೆ ನಡೆಯಿತು. ನಂತರ ಸವಿತಾ ಡಾಕ್ಟರ್ ಕೆಲಸ ಬಿಟ್ಟಿದ್ದು; ಸದಾ ಹಿನ್ನೆಲೆಯಲ್ಲಿದ್ದು ಅಂಬೇಡ್ಕರ್ ಅವರನ್ನು ಅಪಾರ ಕಾಳಜಿಯಿಂದ ನೋಡಿಕೊಂಡಿದ್ದು; ಬೌದ್ಧ ಧರ್ಮವನ್ನು ಆಳವಾಗಿ ಓದಿ, ಪ್ರೀತಿಸಿದ್ದ ಸವಿತಾ ಬಾಬಾಸಾಹೇಬರ ಜೊತೆ ಬೌದ್ಧಧರ್ಮ ಸ್ವೀಕಾರ ಮಾಡಿದ್ದು…ಇದೆಲ್ಲ ಈಗ ಎಲ್ಲರಿಗೂ ಗೊತ್ತಿದೆ. 

ಆದರೆ ಸವಿತಾ ಮನಸ್ಸಿನಲ್ಲಿ ಉಳಿದಿದ್ದ ಅಂಬೇಡ್ಕರ್ ವಿಶಿಷ್ಟ ಚಿತ್ರಗಳು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಂಬೇಡ್ಕರ್ ಆರೋಗ್ಯದ ಅಸ್ಥಿರತೆ, ಸಂವಿಧಾನ ರಚನೆಯ ಕಾಲದಲ್ಲಿ ಕುಸಿಯುತ್ತಿದ್ದ ಅವರ ಆರೋಗ್ಯ ಡಾಕ್ಟರ್‍ ಸವಿತಾರನ್ನೂ ಕಂಗೆಡಿಸುತ್ತಿದ್ದವು. ಇದರ ಜೊತೆಗೆ, ಅಂಬೇಡ್ಕರ್ ಅವರ ಹಾಸ್ಯ ಪ್ರಜ್ಞೆಯನ್ನೂ ಸವಿತಾ ಸವಿಯುತ್ತಿದ್ದರು. ಅಂಬೇಡ್ಕರ್ ಕೆಲವರನ್ನು ಅಣಕ ಮಾಡುತ್ತಿದ್ದರೆ, ತಾನೂ ಉಳಿದವರೂ ಬಿದ್ದುಬಿದ್ದು ನಗುತ್ತಿದ್ದುದನ್ನು ಸವಿತಾ ನೆನೆಯುತ್ತಾರೆ. ಅಡುಗೆಯ ಬಗೆಗೆ ವಿಶೇಷ ತಿಳಿವಳಿಕೆಗಳಿದ್ದ ಅಂಬೇಡ್ಕರ್ ಒಂದು ದಿನ ಎಲ್ಲರಿಗೂ ಅಡಿಗೆ ಮಾಡಿ ಬಡಿಸಿದ ದಿನ ಮಸಾಲೆಯ ಬಗ್ಗೆ ಹೇಳಿದ್ದು ಕೂಡ ಸವಿತಾಗೆ ನೆನಪಿತ್ತು: 'ಮಸಾಲೇನ ಬೆಣ್ಣೆ ಥರ ಸಾಫ್ಟಾಗಿ ಅರೀಬೇಕು; ಅದು ಎಷ್ಟು ನುಣ್ಣಗಿರಬೇಕೂಂದ್ರೆ ಅದನ್ನ ಯಾರ ಕಣ್ಣಿಗಾದ್ರೂ ಇಟ್ರೂ ಅದು ಅವರಿಗೆ ಗೊತ್ತಾಗಬಾರದು!’  

ಸವಿತಾ ಅಂಬೇಡ್ಕರ್ (೧೯೦೯-೨೦೦೩) ಬರೆದಿರುವ 'ಬಾಬಾಸಾಹೇಬ್: ಮೈ ಲೈಫ್ ವಿತ್ ಡಾ. ಅಂಬೇಡ್ಕರ್‍’ ಆತ್ಮಚರಿತ್ರೆಯಲ್ಲಿ ಸವಿತಾ ತಮ್ಮ ವೃತ್ತಿ ಬಿಟ್ಟು ಭಾರತದ ಮಹಾನ್ ವ್ಯಕ್ತಿಯೊಬ್ಬರ ನೆರಳಾಗಿ, ಅವರ ದೈಹಿಕ, ಮಾನಸಿಕ ಆರೋಗ್ಯ ಕಾಯುವ ಕಾಯಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ತ್ಯಾಗದ ಚಿತ್ರ ನನ್ನೊಳಗೆ ಗಾಢವಾಗಿ ಉಳಿದುಬಿಟ್ಟಿದೆ. ಆದರೆ ಅಂಬೇಡ್ಕರ್ ತೀರಿಕೊಂಡ ನಂತರ ಸವಿತಾರ ಮೇಲೆ ಎರಗಿದ ಪೂರ್ವಗ್ರಹಗಳು ಹಾಗೂ ಆಪಾದನೆಗಳಿಂದಾಗಿ ಅವರ ಮೇಲೆ ಹೇರಲ್ಪಟ್ಟ ದಶಕಗಳ ಅಜ್ಞಾತವಾಸದ ಪಾಡು ಕಂಡು ಅಪಾರ ದುಗುಡ ಮುತ್ತುತ್ತದೆ.  

ಸವಿತಾರ ಅಜ್ಞಾತವಾಸದ ಹಿನ್ನೆಲೆ ಇದು: ೧೯೫೬ರ ಡಿಸೆಂಬರ್ ೬ರ ಬೆಳಗ್ಗೆ ಸವಿತಾ ಎಂದಿನಂತೆ ಚಹಾದ ಟ್ರೇ ಹಿಡಿದು ಅಂಬೇಡ್ಕರ್ ಅವರ ರೀಡಿಂಗ್ ರೂಮಿಗೆ ಬಂದರು. ಅಷ್ಟೊತ್ತಿಗೆ ಅಂಬೇಡ್ಕರ್ ಕೊನೆಯ ಉಸಿರೆಳೆದಿದ್ದರು. ನಂತರದ ದಿನಗಳಲ್ಲಿ ಸವಿತಾ ಅಪಾರ ಅವಮಾನಕ್ಕೊಳಗಾದರು; ಅನುಮಾನಕ್ಕೊಳಗಾದರು. ದಶಕಗಳ ಕಾಲ ಎಣೆಯಿಲ್ಲದಷ್ಟು ನೋವನ್ನನುಭವಿಸಿದರು. ಅಜ್ಞಾತರಾಗಿ ಹೇಗೋ ಬದುಕಿದರು. 

ಸವಿತಾ ಬಗೆಗಿನ ಕೆಲವರ ಪೂರ್ವಗ್ರಹ ಎಲ್ಲಿಯವರೆಗೆ ಹೋಗಿತ್ತೆಂದರೆ, ಅಂಬೇಡ್ಕರ್ ಅವರ ’ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿಯಲ್ಲಿ ಸವಿತಾ ಬಗ್ಗೆ ಕೃತಜ್ಞತೆಯಿತ್ತು ಎಂಬ ಕಾರಣಕ್ಕಾಗಿ ಆ ಮುನ್ನುಡಿಯೇ ಬಹುಕಾಲ ಮಾಯವಾಯಿತು. ೧೯೫೬ರ ಡಿಸೆಂಬರ್ ೫-೬ರ ನಡುವಣ ರಾತ್ರಿ ತಿದ್ದಿರಬಹುದಾದ ಈ ಮುನ್ನುಡಿಯ ಕೊನೆಗೆ ಅಂಬೇಡ್ಕರ್ ಬರೆಯುತ್ತಾರೆ: ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಸ್ಥಿತಿ ಈಗಲೂ ಹಾಗೇ ಇದೆ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ವೈದ್ಯರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದೂ ಇದೆ. ಆದರೆ ಈ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ ಕೌಶಲ್ಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’

ಸವಿತಾ ಸುತ್ತ ಕೆಲವರು ಹಬ್ಬಿಸಿದ ಕೆಟ್ಟ ಪೂರ್ವಗ್ರಹ ಈ ಮುನ್ನುಡಿಯ ಸಾಲುಗಳನ್ನೇ ಕಣ್ಮರೆಯಾಗಿಸಿತ್ತು. ಒಂದೇ ಸಮಾಧಾನವೆಂದರೆ, ಅಂಬೇಡ್ಕರ್ ತೀರಿಕೊಂಡ ಎರಡು ಮೂರು ದಶಕಗಳ ನಂತರವಾದರೂ ಆವರೆಗೆ ಸವಿತಾರನ್ನು ಮೂದಲಿಸಿ ಅವಮಾನಿಸಿದ್ದ ಸಮುದಾಯದ ಮತ್ತೊಂದು ತಲೆಮಾರು ಅವರನ್ನು ಆದರಿಸತೊಡಗಿತು. ಸವಿತಾರ ಆತ್ಮಚರಿತ್ರೆಯನ್ನು ನಿರೂಪಿಸಲು ವಿಜಯರಾವ್ ಸುರ್ವಾಡೆ ಮುಂದಾದರು. ಅಂಬೇಡ್ಕರ್ ಅನುಯಾಯಿಗಳು ಅವರನ್ನು 'ಮಾಯಿ ಸಾಹೇಬ್’ ಎಂದು ಗೌರವಿಸತೊಡಗಿದರು. ಈ ಬದಲಾವಣೆ ಕಂಡಾಗ ಮನುಷ್ಯರ ಸುತ್ತ ಹಬ್ಬುವ ದುರುಳ ಪೂರ್ವಗ್ರಹಗಳು ಕೂಡ ಒಂದಲ್ಲ ಒಂದು ದಿನ ಚದುರಬಲ್ಲವು ಎಂಬ ಭರವಸೆ ಮೂಡುತ್ತದೆ. 

೧೯೯೦ರಲ್ಲಿ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಯನೈಟೆಡ್ ಫ್ರಂಟ್ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು; ಅಂಬೇ‌ಡ್ಕರ್ ಪರವಾಗಿ ಸವಿತಾ ಭಾರತರತ್ನ ಪ್ರಶಸ್ತಿಯನ್ನು  ಸ್ವೀಕರಿಸಿದರು. ೧೯೯೫ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಬಾಬಾಸಾಹೇಬರ ಪುತ್ಥಳಿಯನ್ನು ಸ್ಥಾಪಿಸಿದಾಗ, ಮಾಯಿಸಾಹೇಬ್ ಪುತ್ಥಳಿಯನ್ನು ಅನಾವರಣಗೊಳಿಸಿದರು. 

೨೯ ಮೇ ೨೦೦೩ರಂದು, ತೊಂಬತ್ತನಾಲ್ಕನೆಯ ವಯಸ್ಸಿನಲ್ಲಿ ಸವಿತಾ ಮುಂಬೈನಲ್ಲಿ ತೀರಿಕೊಂಡರು. ಅಂಬೇಡ್ಕರ್ ಸವಿತಾಗೆ ಬರೆದ ಪತ್ರಗಳು, ಅಂಬೇಡ್ಕರರಿಗೆ ಸವಿತಾ ಬರೆದ ಪತ್ರಗಳು ಇಂಡಿಯಾದ ಅಪೂರ್ವ ಸಂಬಂಧವೊಂದರ ಅನನ್ಯ ದಾಖಲೆಗಳಾಗಿವೆ. ಸವಿತಾ ಅಂಬೇಡ್ಕರ್ ಆತ್ಮಚರಿತ್ರೆ 'ಬಾಬಾಸಾಹೇಬ್: ಮೈ ಲೈಫ್ ವಿತ್ ಅಂಬೇಡ್ಕರ್’ ಪುಸ್ತಕವನ್ನು ಕಳೆದೊಂದು ವರ್ಷದಿಂದ ಆಗಾಗ ಓದಿ ಗುರುತು ಹಾಕಿದ್ದೆ.  ೧೯೯೦ರಲ್ಲಿ ಪ್ರಕಟವಾದ 'ಡಾ. ಅಂಬೇಡ್ಕರಾಂಚ್ಯ ಸಹವಾಸಾತ್’ ಮರಾಠಿ ಆತ್ಮಚರಿತ್ರೆಯನ್ನು ನದೀಮ್ ಖಾನ್ ೨೦೨೨ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. 'ಡಾ. ಅಂಬೇಡ್ಕರ್ ಕೆ ಸಂಪರ್ಕ್ ಮೆ’ ಎಂಬ ಹಿಂದಿ ಅನುವಾದವೂ ಬಂದಿದೆ. ಈ ಅಂಕಣ ಬರೆಯುತ್ತಿದ್ದಾಗ, ’ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಎಂಬ ಕನ್ನಡ ಪುಸ್ತಕವೂ ಬಂದಿದೆಯೆಂದು ’ಅಂಬೇ‌ಡ್ಕರ್‌‍ವಾದ’ ಪತ್ರಿಕೆಯ ಸಂಪಾದಕ ರವಿಕುಮಾರ್ ಬಾಗಿ ಹೇಳಿದರು. ಅನಿಲ್ ಹೊಸಮನಿ ಅನುವಾದಿಸಿರುವ ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. 

ಸವಿತಾ ಹಾಗೂ ಅಂಬೇಡ್ಕರ್ ಅವರ ಈ ಅನನ್ಯ ಆತ್ಮಸಂಗಾತವನ್ನು ಅರಿತ ಓದುಗಿಯರ, ಓದುಗರ ಆತ್ಮಗಳೂ ಬೆಳಗಬಲ್ಲವು ಎಂದು ಗ್ಯಾರಂಟಿ ಕೊಡುವೆ.   


 



Latest Video


Nataraj Huliyar Official
YouTube Channel

SUBSCRIBE