ಈಚೆಗೆ ವ್ಯಾಟಿಕನ್ ಸಿಟಿಯ ಕ್ರೈಸ್ತ ಪರಮಗುರು ಪೋಪ್ ಫ್ರಾನ್ಸಿಸ್ ತೀರಿಕೊಂಡ ಸುದ್ದಿ ಓದಿ ನನ್ನ ಪರಿಚಿತ ಸಜ್ಜನ ಹಿರಿಯರೊಬ್ಬರು ತೀರಿಕೊಂಡಂತೆ ಅನ್ನಿಸಿತು. ಮೊನ್ನೆ ಮೊನ್ನೆ ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕದ ಐಲು ದೊರೆ ವಲಸಿಗರ ವಿರುದ್ಧ ಕಿರುಚುತ್ತಿದ್ದಾಗ ಪೋಪ್ ಫ್ರಾನ್ಸಿಸ್ ಟ್ರಂಪ್ ವರ್ತನೆಯನ್ನು ವಿರೋಧಿಸಿದ್ದು ಕಣ್ಣ ಮುಂದೆ ಬಂತು. ಹತ್ತು ವರ್ಷಗಳ ಕೆಳಗೆ ಪತ್ರಿಕೆಗಳಲ್ಲಿ ಪ್ರಕಟವಾದ ‘ವಲಸಿಗರ ಕಾಲು ತೊಳೆದ ಪೋಪ್’ಎಂಬ ಸುದ್ದಿ ನೆನಪಾಯಿತು. ಆ ಕುರಿತು ಆಗ ಬರೆದ ಟಿಪ್ಪಣಿಗಳನ್ನು ಮತ್ತೆ ಕೊಡುತ್ತಿರುವೆ:
‘ರೋಮ್ನಲ್ಲಿ ಪೋಪ್ ಫ್ರಾನ್ಸಿಸ್ ಗುರುವಾರ ರಾತ್ರಿ ವಲಸಿಗ ಮುಸ್ಲಿಮರು, ಸಂಪ್ರದಾಯವಾದಿಗಳು, ಹಿಂದೂಗಳು, ಕ್ಯಾಥೊಲಿಕ್ ನಿರಾಶ್ರಿತರ ಕಾಲು ತೊಳೆದು ಮುತ್ತಿಟ್ಟು, ನಂತರ ಎಲ್ಲರೂ ಒಂದೇ ದೇವರ ಮಕ್ಕಳು ಎಂದು ಘೋಷಿಸಿದರು.’ ಮಾರನೆಯ ದಿನ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಯಿತು. ಫೋಟೋದ ಕೆಳಗೆ ‘ಎಲ್ಲ ಜನಾಂಗದವರು ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಆಚರಣೆಯನ್ನು ನೆರವೇರಿಸಲಾಗುತ್ತದೆ ಎಂಬ ವಿವರಣೆಯಿತ್ತು.
ಈ ಫೋಟೊ ನೋಡಿದ ಹುಡುಗನೊಬ್ಬ ಜೀಸಸ್ ಶಿಲುಬೆಗೇರುವ ಹಿಂದಿನ ದಿನ ತನ್ನ ಶಿಷ್ಯರ ಪಾದಗಳನ್ನು ತೊಳೆದ ಪ್ರಸಂಗವನ್ನು ನೆನಪಿಸಿದ: ಜೀಸಸ್ನ ಜನಪ್ರಿಯತೆಯನ್ನು ಸಹಿಸದ ಯಹೂದಿಗಳು ಜೀಸಸ್ ಯಹೂದಿ ಧರ್ಮಕ್ಕೆ ಅಪಾಯ ತಂದೊಡ್ಡುತ್ತಾನೆಂದು ಆಪಾದಿಸುತ್ತಿದ್ದರು. ತನ್ನ ‘ಕೊನೆಯ ಊಟ’ದ (‘ಲಾಸ್ಟ್ ಸಪ್ಪರ್’) ದಿನ, ಜೀಸಸ್ ತನ್ನ ಹನ್ನೊಂದು ಜನ ಶಿಷ್ಯರ ಕಾಲನ್ನು ತೊಳೆದ. ಊಟದ ಮುನ್ನ ಜೀಸಸ್, ‘ನಿಮ್ಮಲ್ಲಿ ಯಾರೋ ಒಬ್ಬರು ನನಗೆ ದ್ರೋಹ ಬಗೆಯುತ್ತೀರಿ’ಎಂದ; ಅದು ನಿಜವಾಯಿತು. ಅವನ ಶಿಷ್ಯರಲ್ಲೊಬ್ಬನಾದ ಜುದಾಸ್ ಇನ್ನಿತರರ ಜೊತೆ ರೋಮನ್ ಜನರಲ್ ಬಳಿ ಹೋಗಿ, ಬೆಳ್ಳಿ ತುಣುಕುಗಳ ಆಸೆಗೆ ಬಿದ್ದು, ಜೀಸಸ್ ವಿರುದ್ಧ ಚಾಡಿ ಹೇಳಿದ. ನಂತರ ಜೀಸಸ್ನನ್ನು ಶಿಲುಬೆಗೇರಿಸಲಾಯಿತು. ಆ ದಿನದ ನೆನಪಿಗಾಗಿ ಗುಡ್ ಫ್ರೈಡೇ ಆಚರಿಸಲಾಗುತ್ತದೆ.
ಹತ್ತು ವರ್ಷಗಳ ಕೆಳಗೆ ಪೋಪ್ ಫ್ರಾನ್ಸಿಸ್ ವಲಸಿಗರ, ಮಹಿಳೆಯರ ಕಾಲು ತೊಳೆದದ್ದು ಗುಡ್ ಫ್ರೈಡೇಯ ಹಿಂದಿನ ‘ಮಾಂಡಿ ಥರ್ಸ್ ಡೇ’ ದಿನ; ಜೀಸಸ್ ಮಾಡಿದ ಕೊನೆಯ ಸೇವೆಯನ್ನು ನೆನೆಸಿಕೊಳ್ಳುವ ದಿನ. ಅವತ್ತು ಫ್ರಾನ್ಸಿಸ್ ಆಚರಣೆ ಜಗತ್ತಿನಾದ್ಯಂತ ಅಪೂರ್ವ ಪುಳಕವನ್ನೂ, ಮುಗ್ಧ ಮನಸ್ಸುಗಳಲ್ಲಿ ಸಾತ್ವಿಕ ಭಾವನೆಯನ್ನೂ ಹುಟ್ಟಿಸಿರಬಹುದು ಎಂದು ನನ್ನ ಊಹೆ. ನನ್ನೊಳಗಂತೂ ಅಂಥದೊಂದು ಭಾವ ಹುಟ್ಟಿದ್ದು ನಿಜ.
ಆದರೂ ಪೋಪ್ ಆಚರಣೆಯನ್ನು ‘ಪ್ರದರ್ಶನ’ಅಥವಾ ಪ್ರತಿ ವರ್ಷದ ಯಾಂತ್ರಿಕ ಧಾರ್ಮಿಕ ಆಚರಣೆ ಎನ್ನುವವರಿದ್ದಾರೆ. ಕೆ.ಬಿ.ಸಿದ್ಧಯ್ಯನವರ ‘ಗಲ್ಲೇಬಾನಿ’ ಖಂಡಕಾವ್ಯದಲ್ಲಿ ಹಿಂದೊಮ್ಮೆ ಚಮ್ಮಾರರು ಚರ್ಮ ಹದ ಮಾಡಲು ಇಟ್ಟ ಗಲ್ಲೇಬಾನಿಯ ನೀರನ್ನು ಮಾಧ್ವರು ಮದುವೆಯ ಸಂದರ್ಭದಲ್ಲಿ ಬಳಸುತ್ತಿದ್ದ ಆಚರಣೆಯ ಉಲ್ಲೇಖವಿದೆ. ಸಾಂಕೇತಿಕ ಆಚರಣೆಯ ಮಟ್ಟದಲ್ಲಿದ್ದ ಈ ಎರಡು ಜಾತಿಗಳ ನಡುವಣ ‘ಸಂಬಂಧ’ ಅದರಾಚೆಗೆ ಇರಲಿಲ್ಲ! ಈ ಹಿನ್ನೆಲೆಯಲ್ಲಿ ನೋಡಿದಾಗ ಪೋಪ್ ಆಚರಣೆ ಕೂಡ ಸಾಂಕೇತಿಕವೆಂದು ಅನ್ನಿಸಬಹುದು.
ಆದರೆ ಕ್ರೈಸ್ತ ಧರ್ಮದ ಚರಿತ್ರೆಯಲ್ಲಿ ಹಿಂಸೆಯ ಮುಖಗಳ ಜೊತೆಗೇ ಎಲ್ಲರನ್ನೂ ಮುಟ್ಟುವ, ಅಪ್ಪಿಕೊಳ್ಳುವ ಕ್ರಿಯೆ ಕೂಡ ನಿರಂತರವಾಗಿ ಇದೆ. ಆಫ್ರಿಕಾದ ನಾಡುಗಳಲ್ಲಿ ಮೊದಲು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರು ಅಲ್ಲಿ ಅಸ್ಪೃಶ್ಯರಾಗಿದ್ದ ಒಸು ಜನಾಂಗದವರು. ಆಫ್ರಿಕಾದ ಇಬೋ ಸಮುದಾಯದಲ್ಲಿ ಅವಳಿ ಮಕ್ಕಳನ್ನು ಹೆತ್ತ ತಾಯಿ ಹಾಗೂ ಅವಳಿ ಮಕ್ಕಳು ಭೂಮಿಗೆ ಕಂಟಕವೆಂದು ಅವರನ್ನು ಸಮುದಾಯದಿಂದ ಹೊರಹಾಕುತ್ತಿದ್ದರು. ಅವರೇ ಒಸುಗಳು. ಚರ್ಚು ಒಸುಗಳನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿರಲಿಲ್ಲ. ಅದರಿಂದ ಅವರು ಚರ್ಚು ಸೇರಿದರು; ಕ್ರೈಸ್ತರಾದರು. ಇಂಡಿಯಾದಲ್ಲೂ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರಲ್ಲಿ ಅಸ್ಪೃಶ್ಯತೆಯ ನರಕದಿಂದ ತಪ್ಪಿಸಿಕೊಂಡವರ ಸಂಖ್ಯೆ ಲಕ್ಷಾಂತರ ಇರಬಹುದು. ಇಂಡಿಯಾದಲ್ಲಿ ಅಸ್ಪೃಶ್ಯತೆಯಿಂದ ಪಾರಾಗಲು ಜೈನ, ಬೌದ್ಧ, ಇಸ್ಲಾಂ, ಸಿಖ್ ಧರ್ಮಗಳನ್ನು ಅಪ್ಪಿಕೊಂಡವರೂ ಇದ್ದಾರೆ.
ಪೋಪ್ ಫ್ರಾನ್ಸಿಸ್ ತೋರಿಕೆಯ ಆಚರಣೆಯ ವ್ಯಕ್ತಿಯಾಗಿರಲಿಲ್ಲ. ಹತ್ತು ವರ್ಷಗಳ ಕೆಳಗೆ ಕೂಡ ಇವತ್ತಿನ ರೀತಿಯಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅನ್ಯದ್ವೇಷದ ಖಾಯಿಲೆಯನ್ನು ಹಬ್ಬಿಸುತ್ತಿದ್ದಾಗ ಎಲ್ಲ ವಲಸಿಗರನ್ನೂ ಅಪ್ಪಿಕೊಳ್ಳುತ್ತಿದ್ದ ಪೋಪ್ ಫ್ರಾನ್ಸಿಸರ ಆಚರಣೆಗಳಿಗೆ, ಮಾತುಗಳಿಗೆ ಅಪಾರ ಮಹತ್ವ ಬಂದಿತ್ತು. ಜಗತ್ತಿನಾದ್ಯಂತ ಪೋಪ್ರನ್ನು ಗೌರವದಿಂದ ಕಾಣುವ ಅವರ ಅನುಯಾಯಿಗಳಲ್ಲಿ ತಮ್ಮ ಗುರುವಿನ ಈ ನಡವಳಿಕೆ ಒಂದು ಸಣ್ಣ ಸ್ಪಂದನವನ್ನಾದರೂ ಹುಟ್ಟಿಸಿರಬಹುದು. ಜಗತ್ತಿನಲ್ಲಿ ವಿಭಜನೆ, ಭೇದಭಾವದ ಮಾತುಗಳು ಹೆಚ್ಚುಹೆಚ್ಚಾಗಿ ಧರ್ಮಮೂಲದಿಂದ ಬರುತ್ತಿರುವಾಗ ಪೋಪ್ ಫ್ರಾನ್ಸಿಸ್ ಅವರ ಮಾತು, ನಡವಳಿಕೆಗಳು ಇವೆಲ್ಲದರ ವಿರುದ್ಧ ಒಂದು ಉದಾರವಾದದ ಚಿಂತನೆಯನ್ನಾದರೂ ಹುಟ್ಟು ಹಾಕುತ್ತಿದ್ದವು.
೨೦೧೬ರಲ್ಲಿ ಪೋಪ್ ಫ್ರಾನ್ಸಿಸ್ ಕರಿಯನ ಕಾಲಿಗೆ ಮುತ್ತಿಟ್ಟ ಫೋಟೋ ನೋಡಿದ ದಿನ ನನಗೆ ಲಂಕೇಶರ ‘ಸಹಪಾಠಿ’ಕತೆ ನೆನಪಾಗಿತ್ತು: ‘ಸಹಪಾಠಿ’ಕತೆಯ ಜಮೀನ್ದಾರ ಬಸವೇಗೌಡನ ಚೇಲಾಗಳು ದಲಿತ ಮೇಷ್ಟರೊಬ್ಬರ ಮೇಲೆ ಹಲ್ಲೆ ಮಾಡುತ್ತಾರೆ. ಬಸವೇಗೌಡ ಪಾಪಪ್ರಜ್ಞೆಯಿಂದ ನರಳಿ ಕಾಯಿಲೆ ಬೀಳುತ್ತಾನೆ. ಕತೆಗಾರ ಭಗವಾನ್ ಗೆಳೆಯ ಬಸವೇಗೌಡನ ಕಾಯಿಲೆಗೆ ಒಂದು ಗಾಂಧೀವಾದಿ ಮದ್ದು ಸೂಚಿಸುತ್ತಾನೆ: ಬಸವೇಗೌಡ ದಲಿತನೊಬ್ಬನ ಕಾಲು ತೊಳೆದು ತಾನು ಮಾಡಿರುವ ಅಸ್ಪೃಶ್ಯತೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದರಂತೆ ದಲಿತ ಜೋನಿಯ ಕಾಲು ತೊಳೆದ ಬಸವೇಗೌಡನಿಗೆ ಈ ಪ್ರಾಯಶ್ಚಿತ್ತದಿಂದ ಅವನ ಅಹಂಕಾರಕ್ಕೆ ಪೆಟ್ಟು ಬಿದ್ದಂತಾಗಿ ಒಳಗೊಳಗೇ ಕೆರಳುತ್ತಾನೆ. ಮಾರನೆಯ ದಿನ ಜೋನಿಯ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ತನ್ನ ಅಹಂಕಾರವನ್ನು ತಣಿಸಿಕೊಳ್ಳುತ್ತಾನೆ. ಕಾರಣ, ಬಸವೇಗೌಡ ಹುಟ್ಟಿರುವ ಜಾತಿ ಅಥವಾ ಧರ್ಮ ಉದಾತ್ತ ಪ್ರಾಯಶ್ಚಿತ್ತದ ಸಾಧ್ಯತೆಯನ್ನೇ ಹೇಳಿಕೊಟ್ಟಿಲ್ಲ; ಅವನು ಓದಿದ ಪ್ರಗತಿಪರ ಪುಸ್ತಕಗಳು ಕೂಡ ಅವನಿಗೆ ನಿಜವಾದ ಜಾತ್ಯತೀತತೆಯನ್ನು ಹೇಳಿಕೊಟ್ಟಿಲ್ಲ. ಹೀಗಾಗಿ ಜಾತಿಯ ಹೀನಬುದ್ಧಿ ಹಾಗೂ ಫ್ಯೂಡಲ್ ಮನಸ್ಥಿತಿಗಳನ್ನು ಮೀರುವ ಉದಾತ್ತತೆ ಬಸವೇಗೌಡನಿಗೆ ಸಾಧ್ಯವಾಗಲೇ ಇಲ್ಲ.
ಆದರೆ ಕಪ್ಪು ವರ್ಣೀಯನ ಕಾಲಿಗೆ ಮುತ್ತಿಟ್ಟ ಕ್ರೈಸ್ತ ಗುರು ಫ್ರಾನ್ಸಿಸ್ಗೆ ಈ ಉದಾತ್ತತೆ ಕ್ರೈಸ್ತ ಧರ್ಮದ ಮೂಲ ಚಿಂತನೆಗಳ ಪ್ರಭಾವದಿಂದಲೇ ಸಾಧ್ಯವಾಗಿತ್ತು. ಫ್ರಾನ್ಸಿಸ್ ಆಚರಣೆ ಕೇವಲ ಸಾಂಕೇತಿಕವಾಗಿರಲಿಲ್ಲ. ಅನೇಕ ಕ್ರೈಸ್ತ ಗುರುಗಳು ಜಾತಿ, ಮತ, ವರ್ಗ ನೋಡದೆ ನೂರಾರು ಜನರಿಗೆ ನೆರವಾದ ಉದಾಹರಣೆಗಳು ಇವತ್ತಿಗೂ ಕಾಣುತ್ತವೆ. ಇವತ್ತಿಗೂ ಜಗತ್ತಿನ ಮುಖ್ಯ ಚರ್ಚುಗಳಲ್ಲಿ ಎಲ್ಲ ಬಗೆಯ ಜಾತಿ ವರ್ಣ ವರ್ಗಗಳ ಜನರನ್ನೂ ಬರಮಾಡಿಕೊಳ್ಳುವ ಔದಾರ್ಯವಿದೆ. ಮದರ್ ಥೆರೆಸಾ ಅವರನ್ನು ‘ಸೇಂಟ್’ ಎಂದು ದಶಕದ ಕೆಳಗೆ ರೋಮ್ ಚರ್ಚು ಘೋಷಿಸಿದ್ದು ನಿಮಗೆ ನೆನಪಿರಬಹುದು. ಆದರೆ ಅದಕ್ಕೂ ಮೊದಲೇ ಕಲ್ಕತ್ತಾದಲ್ಲಿ ಥೆರೆಸಾ ಕುಷ್ಟರೋಗಿಗಳಿಗಾಗಿ ಮಾಡಿರುವ ಅಪೂರ್ವ ಸೇವೆಯನ್ನು ಕಂಡು ಕೃತಜ್ಞರಾದವರ ಮನಸ್ಸಿನಲ್ಲಿ ಅವರು ಸಂತರಾಗಿ ನೆಲೆಯೂರಿದ್ದರು.
ಕಲ್ಕತ್ತಾದ ಫುಟ್ಪಾತುಗಳಲ್ಲಿ ಎಸೆಯಲಾಗಿದ್ದ ಕುಷ್ಟರೋಗಿಗಳನ್ನು ತಬ್ಬಿ ಕರೆತಂದು ಆರೈಕೆ ಮಾಡಿದ ಥೆರೆಸಾರ ಇಡೀ ಜೀವಮಾನದ ಕಾಯಕ ಪೋಪ್ ಫ್ರಾನ್ಸಿಸ್ ಅವರ ಸಾಂಕೇತಿಕ ಕ್ರಿಯೆಗಿಂತ ನೂರು ಪಾಲು ಮೇಲು, ನಿಜ. ಆದರೆ ಫ್ರಾನ್ಸಿಸ್ ಆಚರಣೆ ಕಳೆದ ನಾಲ್ಕುನೂರು ವರ್ಷಗಳಿಂದ ಕರಿಯರ ಮೇಲೆ ಪಶ್ಚಿಮ ಎಸಗಿರುವ ದೌರ್ಜನ್ಯಕ್ಕಾಗಿ ಕ್ರೈಸ್ತ ಧರ್ಮಗುರು ಮಾಡಿಕೊಂಡ ಉದಾತ್ತ ಪ್ರಾಯಶ್ಚಿತ್ತದ ಪ್ರಾತಿನಿಧಿಕ ರೂಪದಂತಿದೆ. ಅದರಲ್ಲೂ ಚರ್ಚು ವಸಾಹತೀಕರಣದ ಸಂದರ್ಭದಲ್ಲಿ ವಸಾಹತುಕಾರರನ್ನು ಬೆಂಬಲಿಸಿತ್ತು ಎಂಬುದನ್ನು ನೆನೆದರೆ ಫ್ರಾನ್ಸಿಸ್ ಆಚರಣೆಯ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ಬಿಳಿಯರು ಕರಿಯರನ್ನು ಗುಲಾಮರಾಗಿ ಇಟ್ಟುಕೊಳ್ಳುವುದನ್ನು ಒಪ್ಪಿತ್ತು. ಆದರೆ ಚರ್ಚಿನ ನಡುವಿನಿಂದಲೇ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಥರದ ಗುರುಗಳೂ ಬಂದು ಕರಿಯರ ಬಿಡುಗಡೆಗೆ ಹೋರಾಡಿದ ಬೆಳವಣಿಗೆಯೂ ನಡೆಯಿತು.
ಈಚಿನ ಚರಿತ್ರೆಯಲ್ಲಿ ಅಸ್ಪೃಶ್ಯತೆಯನ್ನು ಮೀರುವ ಇಂಥ ಆಚರಣೆಗಳಿಗಿಂತ ಮೊದಲು, ಹನ್ನೆರಡನೆಯ ಶತಮಾನದಲ್ಲಿ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ಎಂದು ಘೋಷಿಸಿ ಜಾತಿಪ್ರಜ್ಞೆಯನ್ನು ಮೀರುವ ಮಾರ್ಗವೊಂದನ್ನು ಬಸವಣ್ಣ ತೋರಿಸಿದರು. ಬಸವಣ್ಣನವರು ಹರಳಯ್ಯ ಮತ್ತು ಅವರ ಪತ್ನಿಯ ತೊಡೆಯ ಚರ್ಮದಿಂದ ಹೊಲೆದ ಚಪ್ಪಲಿಗಳನ್ನು ತಮ್ಮ ತಲೆಯ ಮೇಲೆ ಹೊತ್ತು ನಡೆದ ಕತೆ ಕೂಡ ಉದಾತ್ತ ಪ್ರಾಯಶ್ಚಿತ್ತದ ಉದಾಹರಣೆಯಂತಿದೆ. ಸವರ್ಣೀಯ ಸಮಾಜ ದಲಿತರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಟೀಕಿಸಿ ವಚನಗಳನ್ನು ಬರೆದ ಬಸವಣ್ಣನವರ ಜಾತ್ಯತೀತತೆಯನ್ನು ಅವರ ನಡವಳಿಕೆಯ ಮೂಲಕವೂ ಸಾರುವ ಕತೆ ಇದು; ನಂತರದ ಬಸವಾನುಯಾಯಿಗಳು ಜಾತೀಯ ಸಮಾಜದ ಹೀನತನವನ್ನು ತಿದ್ದುವ ಸ್ಪಷ್ಟ ಸಂದೇಶವೊಂದನ್ನು ಕೊಡುವ ಉದ್ದೇಶದಿಂದ ಕೂಡ ಈ ಕತೆಯನ್ನು ಸೃಷ್ಟಿಸಿರಬಹುದು.
ಆದರೆ ಈಚಿನ ವರ್ಷಗಳಲ್ಲಿ ಕೆಲವು ಸ್ವಾಮೀಜಿಗಳು ಪ್ರಚಾರಕ್ಕಾಗಿ ದಲಿತಕೇರಿಗೆ ಹೋಗುವುದು ಮೇಲುಜಾತಿಯ ಠೇಂಕಾರದಂತೆ ಕಾಣುತ್ತದೆಯೇ ಹೊರತು, ಅದು ಬಸವಣ್ಣನವರ ವಚನಗಳ ಸಹಜ ವಿನಯದಂತೆ ಕಾಣುವುದಿಲ್ಲ. ಕೊನೇ ಪಕ್ಷ ಫ್ರಾನ್ಸಿಸ್ ಅವರ ಸಾಂಕೇತಿಕ ಆಚರಣೆಯ ಸಂದೇಶ ಕೂಡ ಈ ಸ್ವಾಮಿಗಳ ಠೇಂಕಾರದಿಂದ ಹೊರಡುವುದಿಲ್ಲ. ಈ ಸ್ವಾಮಿಗಳಿಗೆ ನಿಜಕ್ಕೂ ದಲಿತರ ಬಗ್ಗೆ ಕಾಳಜಿ ಇದ್ದರೆ, ಅವರು ಮೊದಲು ತಂತಮ್ಮ ಜಾತಿಗಳ ಅನುಯಾಯಿಗಳಲ್ಲಿರುವ ಜಾತೀಯತೆ, ಅಸ್ಪೃಶ್ಯತೆಗಳ ಮನಸ್ಥಿತಿಯನ್ನು ತಿದ್ದಬೇಕು.
ಇಷ್ಟಾಗಿಯೂ, ವರ್ಣಭೇದದ ವಿರುದ್ಧ ಪೋಪ್ ಫ್ರಾನ್ಸಿಸ್ ಥರದವರ ಸಾಂಕೇತಿಕ ಆಚರಣೆ; ಸ್ವಾಮಿಗಳ ದಲಿತಕೇರಿ ಸಂದರ್ಶನ, ಅಥವಾ ಮಂಟೇಸ್ವಾಮಿ ಜಾತ್ರೆಗಳಲ್ಲಿ ಒಂದೆರಡು ದಿನ ಎಲ್ಲ ಜಾತಿಗಳೂ ಮೇಲುನೋಟಕ್ಕೆ ಬೆರೆಯುವ ಆಚರಣೆಗಳು…ಇವುಗಳಿಂದ ಈ ಹೀನ ಆಚರಣೆಗಳು ಕೊನೆಗೊಳ್ಳಲಾರವು. ಇಂಥ ಹಲ ಬಗೆಯ ಸಾಂಕೇತಿಕ ಆಚರಣೆಗಳನ್ನು ಮೀರಿ, ಪ್ರಕೃತಿಯಂತೆ ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಸಹಜ ನೋಟ; ಅಥವಾ ನಾವು ಆಧುನಿಕವಾಗಿ ರೂಢಿಸಿಕೊಂಡ ಸಮಾನತೆಯ ಜಾತ್ಯತೀತ ನೋಟ; ಅಥವಾ ಗಾಂಧೀವಾದ, ಅಂಬೇಡ್ಕರ್ವಾದ, ಲೋಹಿಯಾವಾದದಂಥ ಚಿಂತನೆಗಳಿಂದ ಆಳವಾಗಿ ಪ್ರಭಾವಿತವಾದ ಮನಸ್ಸು- ಇವುಗಳೇ ಈ ಬಗೆಯ ಕೃತಕ ಭೇದಗಳನ್ನು, ಅಸ್ಪೃಶ್ಯತೆಗಳನ್ನು ಇಲ್ಲವಾಗಿಸುವ ಖಚಿತ ಮಾರ್ಗಗಳು ಎನ್ನಿಸುತ್ತದೆ.