Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
13 Oct 2024 ೧೨ ಅಕ್ಟೋಬರ್ ೧೯೬೭

ಕಳೆದ ವಾರ ವಿಮರ್ಶೆ ಕುರಿತು ಬರೆದ ಬರಹಕ್ಕೆ ಹಲವರ ಗಂಭೀರ ಪ್ರತಿಕ್ರಿಯೆಗಳು ಬಂದ ಮೇಲೆ ವಿಮರ್ಶೆ ಕುರಿತು ಲೋಹಿಯಾ ಬರೆದ ಮಾತುಗಳನ್ನು ಇಲ್ಲಿ ಕೊಡಬೇಕೆಂದುಕೊಂಡೆ. ಆದರೆ ಆ ವಿಮರ್ಶೆಯ ಟಿಪ್ಪಣಿಗಳನ್ನು ಹಿಂದಕ್ಕೆ ತಳ್ಳಿ ೧೯೬೭ರ ಅಕ್ಟೋಬರ್ ೧೨ರಂದು ಬೆಳಗಿನ ಜಾವ ೧ ಗಂಟೆಯ ಹೊತ್ತಿಗೆ ಲೋಹಿಯಾ ನಿರ್ಗಮಿಸಿದ ದೃಶ್ಯವೇ ಕಣ್ಣೆದುರು ಬಂತು. ಈಚೆಗೆ `ಸುಧಾ’ ವಾರಪತ್ರಿಕೆಯಲ್ಲಿ ಮುಗಿದ `ಡಾಕ್ಟರ್ ಸಾಹೇಬ್’ ಧಾರಾವಾಹಿಯ ಕೊನೆಕೊನೆಯ ಅಧ್ಯಾಯವೊಂದರ ಟಿಪ್ಪಣಿಗಳನ್ನು ಕೊಡುತ್ತಿರುವೆ: 

ಎಲ್ಲರ ಕಷ್ಟ ನೋಡಲು, ಕೇಳಿಸಿಕೊಳ್ಳಲು, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಒಂದೆಡೆ ನಿಲ್ಲದೆ, ದೇಶದುದ್ದಕ್ಕೂ ಸುತ್ತುತ್ತಿದ್ದ ಲೋಹಿಯಾ ದೇಹ ನವೆಯುತ್ತಿತ್ತು. ಚುನಾವಣೆಯ `ಮಾಡು ಇಲ್ಲವೆ ಮಡಿ’ ಸುತ್ತಾಟದಿಂದ ದೇಹ ಹೈರಾಣಾಗಿತ್ತು. ಆದರೆ ಒಳಗಿದ್ದ ಬೆಂಕಿ ಪ್ರಜ್ವಲಿಸುತ್ತಲೇ ಇತ್ತು.

೧೯೬೭ರ ಸೆಪ್ಟೆಂಬರ್ ಎರಡನೆಯ ವಾರದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ, ಕವಿ ರಾಮ್‌ಧಾರಿ ಸಿಂಹ ’ದಿನಕರ್’ ಲೋಹಿಯಾ ಜೊತೆ ಮಾತಾಡುತ್ತಾ ಹೇಳಿದರು:’ಡಾಕ್ಟರ್ ಸಾಹೇಬ್, ನೀವೀಗ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ದೇಶ ನಿಮ್ಮನ್ನು ಇಷ್ಟಪಡುತ್ತಿದೆ. ನೀವೀಗ ಸಣ್ಣಪುಟ್ಟ ವಿಷಯಗಳನ್ನು ಕೈಗೆತ್ತಿಕೊಂಡು ಕಹಿ ಸೃಷ್ಟಿಸಬೇಡಿ. ಈ ದೇಶ ಬಹಳ ಕ್ಲಿಷ್ಟ ದೇಶ. ದೇಶದ ಭಾರ ನಿಮ್ಮ ಹೆಗಲೇರಿದಾಗ ನಿಮ್ಮ ಈ ವ್ಯಕ್ತಿತ್ವ ನಿಮ್ಮ ಹಾದಿಯ ಮುಳ್ಳಾಗಬಾರದು.’

ಲೋಹಿಯಾ ಖಿನ್ನರಾಗಿ ಹೇಳಿದರು: `ನಾನು ಅಷ್ಟು ದಿನ ಬದುಕುತ್ತೇನೆ ಅಂದುಕೊಂಡಿದ್ದೀಯಾ? ನನ್ನ ಆಯಸ್ಸು ತೀರಾ ಕಡಿಮೆಯಿದೆ. ಅದಕ್ಕೇ ನಾನು ಹೇಳೋದನ್ನೆಲ್ಲ ಹೇಳಿ ಬಿಡುತ್ತೇನೆ, ಬಿಡು.’ ಅದೇ ವಾರ, `ನಾನು ಹೆಚ್ಚು ದಿನ ಬದುಕುವುದಿಲ್ಲ' ಎಂದು ಲೋಕಸಭೆಯಲ್ಲೂ ಹೇಳಿದ್ದರು. ಹೇಳಬೇಕಾದ್ದನ್ನೆಲ್ಲ ಧಾವಂತದಲ್ಲಿ ಹೇಳುತ್ತಾ ಹೋದರು.

ಕೆನಡಿಯನ್ ವಿಮರ್ಶಕ ನಾರ್ತ್ರಾಪ್ ಫ್ರೈ ಶೇಕ್‌ಸ್ಪಿಯರನ ಪ್ರಖ್ಯಾತ ದುರಂತ ನಾಟಕ ‘ಹ್ಯಾಮ್ಲೆಟ್’ನ ಕೊನೆಯ ಭಾಗಗಳನ್ನು ಪುರಾಣಪ್ರತೀಕ ವಿಮರ್ಶೆಗೆ ಒಳಪಡಿಸುತ್ತಾನೆ: ಹ್ಯಾಮ್ಲೆಟ್ ಸಾಯುವ ಮುನ್ನ, ‘ಗ್ರೇವ್ ಡಿಗ್ಗರ್ ಸೀನ್’, ಗೋರಿ ಅಗೆವವರ ದೃಶ್ಯ, ಬರುತ್ತದೆ. ನಾರ್ತ್ರಾಪ್ ಫ್ರೈ ಈ ದೃಶ್ಯದ ಮಹತ್ವವನ್ನು ಚರ್ಚಿಸುತ್ತಾ ಹೇಳುತ್ತಾನೆ: ‘ಸಾಮಾನ್ಯವಾಗಿ ದುರಂತ ನಾಯಕರಿಗೆ ಸಾವಿಗೆ ಮುನ್ನವೇ ಸಾವಿನ ದರ್ಶನವಾಗುತ್ತದೆ; ಇದೊಂದು ಆದಿಮ ಮಾದರಿ.’ ರನ್ನನ ‘ಗದಾಯುದ್ಧ’ದಲ್ಲಿ  ದುರಂತ ನಾಯಕನಂತೆ ಕಾಣುವ ದುರ್‍ಯೋಧನನಿಗೂ ಹೀಗೆ ಸಾವಿನ ದರ್ಶನವಾಗುತ್ತದೆ.

ಒಂದು ದೃಷ್ಟಿಯಿಂದ ನೋಡಿದರೆ, ಭಾರತೀಯ ರಾಜಕಾರಣದ ದುರಂತ ನಾಯಕನಂತೆಯೂ ಕಾಣತೊಡಗುವ ಲೋಹಿಯಾಗೂ ಕೊನೆಯ ಘಟ್ಟದಲ್ಲಿ ಸಾವಿನ ದರ್ಶನವಾದಂತಿದೆ. 

ಅವತ್ತು ಲೋಹಿಯಾ ಭೂಪಾಲ್‌ನಲ್ಲಿ ನಡೆಯಲಿದ್ದ ಸಭೆಯಲ್ಲಿ ಸಂಯಕ್ತ ವಿಧಾಯಕ ದಳಗಳ ಸರ್ಕಾರಗಳಿಗಾಗಿ ಯೋಜನೆಗಳ ಕರಡು ಸಿದ್ಧಪಡಿಸುತ್ತಿದ್ದರು. ಆ ಸಂಜೆ ಅವರಿಗೆ ಗಂಗಾನದಿಯಲ್ಲಿ ಸುತ್ತಾಡುವ ಮನಸ್ಸಾಯಿತು. ಇಡೀ ರಾತ್ರಿ ದೋಣಿಯಲ್ಲೇ ಕಳೆದರು. ದೋಣಿ ಸಾಗುತ್ತಿರುವಂತೆ ಮಣಿಕರ್ಣಿಕಾದಲ್ಲಿ ಚಿತೆಗಳು ಉರಿಯುತ್ತಿದ್ದುದನ್ನು ನೋಡಿ ಚಣ ದೋಣಿ ನಿಲ್ಲಿಸುವಂತೆ ಹೇಳಿದ ಲೋಹಿಯಾ, ಯೋಚಿಸುತ್ತಾ ಹೇಳಿದರು: ‘ಒಂದು ದೇಹಕ್ಕಾಗಿ ಇಷ್ಟೆಲ್ಲ ಪ್ರದರ್ಶನವೇ?’ 

ಆ ತಿಂಗಳು ಲೋಹಿಯಾ ಮಾರ್ಟಿನ್ ಲೂಥರನ ೪೫೦ನೇ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜರ್ಮನಿಗೆ ಹೊರಡಬೇಕಾಗಿತ್ತು. ಆದರೆ ಪ್ರಾಸ್ಟೇಟ್ ಸಮಸ್ಯೆಗೆ ಸರ್ಜರಿ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿ ಲೋಹಿಯಾಗೆ ಎದುರಾಯಿತು. ‘ಜರ್ಮನಿಯಲ್ಲೇ ಆಪರೇಶನ್ ಮಾಡಿಸಿಕೊಳ್ಳಿ’ ಎಂಬ ಸಲಹೆಯೂ ಬಂತು. ಲೋಹಿಯಾ ಯಾರ ಮಾತನ್ನೂ ಕೇಳಲಿಲ್ಲ. ಗೆಳೆಯರಿಗೆ ಹೇಳದೆ ವಿಲ್ಲಿಂಗ್‌ಡನ್ ಆಸ್ಪತ್ರೆ ಸೇರಿದರು. ಕಾರಣ, ಅದು ಜನಸಾಮಾನ್ಯರು, ಬಡವರು ಹೋಗುವ ಆಸ್ಪತ್ರೆಯಾಗಿತ್ತು. 

ಲೋಹಿಯಾ ಸುತ್ತ ಹಲವು ಡಾಕ್ಟರು, ನರ್ಸುಗಳು ನೆರೆದಿದ್ದರು. ಲೋಹಿಯಾ ಕೇಳಿದರು: ‘ಒಬ್ಬ ರೋಗಿಗೆ ಇಷ್ಟೊಂದು ಜನ ಡಾಕ್ಟರುಗಳೇಕೆ? ಇದು ಸಾಮಾನ್ಯ ಪ್ರಜೆಗೆ ಸಿಗುತ್ತದೆಯೆ? ನನ್ನ ಮೇಲೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಿ?’   

ಲೋಹಿಯಾ: ಡಾಕ್ಟ್ರೇ, ನನ್ನ ಕಾಯಿಲೆ ಗುಣ ಆಗುತ್ತಾ?

ಡಾಕ್ಟರ್: ಖಂಡಿತಾ ಗುಣವಾಗುತ್ತೆ.

ಲೋಹಿಯಾ: ಡಾಕ್ಟ್ರೆ! ನೀವೂ ರಾಜಕಾರಣಿಗಳ ಥರ ಸುಳ್ಳು ಹೇಳೋದನ್ನು ಕಲ್ತಿದೀರ...ಡಾಕ್ಟರುಗಳೂ ರಾಜಕಾರಣಿಗಳ ಥರ ಕತ್ತಲಲ್ಲಿ ತಡಕಾಡುತ್ತಿರುತ್ತಾರೆ ಅನ್ನಿಸುತ್ತೆ!’ 

ಲೋಹಿಯಾ ವಂಶಸ್ಥರ ಒಂದು ವಿಚಿತ್ರ ವಿವರವನ್ನು ಲೋಹಿಯಾರ ಸಂಗಾತಿ ಮಧು ಲಿಮಯೆ ಹೇಳುತ್ತಿದ್ದರು: ‘ಡಾಕ್ಟರ್ ಸಾಹೇಬರಿಗೆ ತಾನು ಐವತ್ತಾರು, ಐವತ್ತೇಳು ವರ್ಷ ಮೀರಿ ಬದುಕುವುದಿಲ್ಲ, ಯಾಕೆಂದರೆ ತಮ್ಮ ಕುಟುಂಬದಲ್ಲಿ ಯಾರೂ ಈ ವಯಸ್ಸಿನ ನಂತರ ಬದುಕಿಲ್ಲ ಎಂಬ ಭಾವನೆ ಇತ್ತು.’   

ಲೋಹಿಯಾ ಆಸ್ಪತ್ರೆ ಸೇರಿರುವ ಸುದ್ದಿ ದೇಶಾದ್ಯಂತ ಹಬ್ಬಿತು. ರಾಜಿಂದರ್ ಪುರಿ ಬರೆಯುತ್ತಾರೆ: ‘ಲೋಹಿಯಾ ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಸೆಣಸುತ್ತಿದ್ದಾಗ ಜನರಿಗೆ ಇದ್ದಕ್ಕಿದ್ದಂತೆ ಅವರ ಮಹತ್ವದ ಅರಿವಾಯಿತು. ಅವರೀಗ ’ಮಿಸ್ಟರ್‍ ಆಪೋಸಿಶನ್’ ಆಗಿದ್ದರು. ಪ್ರತಿ ದಿನ ರಿಕ್ಷಾದವರು, ಹೋಟೆಲ್ ಕಾರ್ಮಿಕರು, ಲೇಖಕರು, ಪತ್ರಕರ್ತರು, ತಳ್ಳುಗಾಡಿಯ ವ್ಯಾಪಾರಿಗಳು, ಟೀಚರುಗಳು, ರಾಜಕಾರಣಿಗಳು ವಿಲ್ಲಿಂಗ್‌ಡನ್ ಆಸ್ಪತ್ರೆಯ ಎದುರು ಸೇರುತ್ತಿದ್ದರು; ಡಾಕ್ಟರ್‍ ಸಾಹೇಬ್ ಗುಣಮುಖರಾಗುವ ಸುದ್ದಿ ಎದುರು ನೋಡುತ್ತಾ ನಿಂತಿರುತ್ತಿದ್ದರು.’ 

ಆಸ್ಪತ್ರೆಯಲ್ಲಿ ಮಲಗಿದ್ದಾಗಲೂ ಲೋಹಿಯಾ ಲೋಕದ ಸ್ಥಿತಿಗತಿಗಳ ಬಗೆಗೇ ಕನವರಿಸುತ್ತಿದ್ದುದನ್ನು ರಮಾ ಮಿತ್ರ ದಾಖಲಿಸುತ್ತಾರೆ: ಹಾಸಿಗೆಯಲ್ಲಿ ಮಲಗಿದ್ದ ಲೋಹಿಯಾ ಭೂ ಕಂದಾಯ, ಹಿಂದೂ- ಮುಸ್ಲಿಂ ಏಕತೆ, ಬಡ ರೈತರ ಸ್ಥಿತಿ, ಭಾಷೆಯ ಸಮಸ್ಯೆ ಇವುಗಳ ಬಗೆಗೇ ಮಾತಾಡುತ್ತಿದ್ದರು. ಒಮ್ಮೊಮ್ಮೆ ಲೋಕಸಭೆಯಲ್ಲಿ ಮಾತಾಡುತ್ತಿದ್ದಂತೆಯೂ ಮಾತಾಡುತ್ತಿದ್ದರು: ‘ಅಧ್ಯಕ್ಷ್ ಮಹೋದಯ್! ನೀವು ಸ್ವಾತಂತ್ರ್ಯ, ಸತ್ಯ, ನ್ಯಾಯಗಳಿಗೆ ಸಂಪೂರ್ಣ ರಕ್ಷಣೆ ಕೊಡಬೇಕು.’

ಒಮ್ಮೆ ರಮಾ ಕೈ ಹಿಡಿದು ಲೋಹಿಯಾ ಕೇಳಿದರು: ‘ಹೇಳು ಇಳಾ, ನೀನು ನನಗೆ ಸುಳ್ಳು ಹೇಳಬಾರದು. ಈ ದೇಶದಲ್ಲಿ ಏನಾದರೂ ದೊಡ್ಡದು ನಡೆಯುತ್ತಿದೆಯಾ?’ ಹೀಗೆಂದವರೇ ಇಂಡಿಯಾ-ಪಾಕಿಸ್ತಾನಗಳ ಒಕ್ಕೂಟ ಕುರಿತು ಮಾತಾಡತೊಡಗಿದರು.

ಓಂ ಪ್ರಕಾಶ್ ದೀಪಕ್ ಲೋಹಿಯಾರನ್ನು ನೋಡಲು ಹೋದಾಗ ಹಾಸಿಗೆಯ ಮೇಲೆ ಒರಗಿದ್ದ ಲೋಹಿಯಾ ಭಾರತದ ಅಧಿಕಾರಶಾಹಿ ಕುರಿತ ಪುಸ್ತಕ ಓದುತ್ತಿದ್ದರು. ‘ಶೋಷಿತರ ಕೂಗು’ ಪತ್ರಿಕೆ ನಡೆಸುತ್ತಿದ್ದ ಗುಲಬರ್ಗಾದ ಸಮಾಜವಾದಿ ವೀರಣ್ಣ ತಿಮ್ಮಾಜಿ ಆಗ ದಿನವಿಡೀ ವಿಲ್ಲಿಂಗ್‌ಡನ್ ಆಸ್ಪತ್ರೆಯ ಬಳಿಯೇ ಇರುತ್ತಿದ್ದರು. ವೀರಣ್ಣ ತಿಮ್ಮಾಜಿ ಹಾಗೂ ಇತರ ಲೇಖಕ, ಲೇಖಕಿಯರು ಕೊಡುವ ಆ ದಿನಗಳ ವಿವರಗಳು: 

ಮೊದಮೊದಲು ಸರ್ಜರಿ ಮಾಡಿಸಿಕೊಳ್ಳಲು ಒಪ್ಪದ ಲೋಹಿಯಾ ಕೊನೆಗೂ ಮನಸ್ಸು ಮಾಡಿದರು. ಸೆಪ್ಟೆಂಬ‌ರ್ ೩೦. ಲೋಹಿಯಾರ ಶಸ್ತ್ರಕ್ರಿಯೆಯಾಯಿತು. ಶಸ್ತ್ರಕ್ರಿಯೆಯ ನಂತರ ಅವರ ಶರೀರದಿಂದ ಬಹಳಷ್ಟು ರಕ್ತ ಹರಿದು ಹೋಯಿತು. ಲೋಹಿಯಾಗೆ ರಕ್ತ ಕೊಡಲು ನೂರಾರು ಜನರು ಬಂದರು. ಅಕ್ಟೋಬ‌ರ್ ೧ರಂದು ರಕ್ತದ ಒತ್ತಡ ಹೆಚ್ಚಿತು. ಜ್ವರ ಏರಿತು. ಆಪರೇಶನ್ ಆದಾಗಿನಿಂದ ೪ನೇ ತಾರೀಖಿನವರೆಗೆ ಲೋಹಿಯಾ ಪರಿಸ್ಥಿತಿಯಲ್ಲಿ ಸ್ಥಿರತೆ ಬರಲಿಲ್ಲ.

ಅಕ್ಟೋಬರ್ ೬.  ದೇಹ ಕುಸಿದಂತಾಗಿ ಲೋಹಿಯಾ ಹೇಳಿದರು: ‘ಡಾಕ್ಟರ್, ನನಗಾಗಿ ಬಹಳ ಕಷ್ಟ ಪಡ್ತಿದೀರಿ. ಸಾಕು ಬಿಡಿ. ನನಗೂ ಸುಸ್ತಾಗಿದೆ.’ 

ಅವತ್ತು ರಾತ್ರಿ ಲೋಹಿಯಾ ಹೇಳಿದರು: ‘ಎಲ್ಲಾ ಮುಗೀತು. ನಾನು ಹೋಗ್ತಾ ಇದೀನಿ.’ 

ಲೋಹಿಯಾ ಸಾವು, ಬದುಕುಗಳ ನಡುವೆ ತೂಗಾಡುತ್ತಿದ್ದರು. ಜೆ.ಪಿ., ರಮಾ, ಮಧು ಲಿಮಯೆ, ಕಿಶನ್ ಪಟ್ನಾಯಕ್… ಒಬ್ಬರಲ್ಲ ಒಬ್ಬರು ಅಲ್ಲಿರುತ್ತಿದ್ದರು. ಒಂದು ದಿನ ಉಪಪ್ರಧಾನಿ ಮೊರಾರ್ಜಿ ದೇಸಾಯಿ ಲೋಹಿಯಾಗೆ ಏನೋ ಹೇಳಿದರು.

ಗೆಳೆಯರು ಕೇಳಿದರು: ಮೊರಾರ್ಜಿ ಏನು ಹೇಳಿದರು?

ಲೋಹಿಯಾ: ಲೋಕಸಭೆಯಲ್ಲಿ ಆಡಿದಂತೆ ಆಡಬೇಡ, ಡಾಕ್ಟರು ಹೇಳಿದ ಮಾತು ಕೇಳು ಅಂದರು!

ಪ್ರಧಾನಿ ಇಂದಿರಾಗಾಂಧಿಯವರು ಬಂದರು; ಕಾಮರಾಜ್, ಚವಾಣ್…ಹೀಗೆ ಲೋಹಿಯಾರಿಂದ ಟೀಕಿಸಿಕೊಂಡವರೂ ಬರುತ್ತಿದ್ದರು. 

ಪ್ರತಿ ದಿನ ಆಸ್ಪತ್ರೆಯ ಹೊರಗೆ ಜನ ಆತಂಕದಿಂದ, ಆಸೆಯಿಂದ ಕೇಳುತ್ತಲೇ ಇದ್ದರು:‘ಡಾಕ್ಟರ್ ಸಾಹೇಬ್ ಹೇಗಿದ್ದಾರೆ?’

೧೧ ಅಕ್ಟೋಬರ್ ೧೯೬೭. ಹಿಂದಿ ಲೇಖಕ ಮಸ್ತ್ರಂ ಕಪೂರ್ ಆಸ್ಪತ್ರೆಯ ಹೊರಗೆ ನೆರೆದಿದ್ದ ಜನರ ಗುಂಪಿನಲ್ಲಿ ನಿಂತಿದ್ದರು. ಆ ಗಳಿಗೆಯನ್ನು ಮಸ್ತ್ರಂ ನೆನೆಯುತ್ತಾರೆ: 

‘ಆಸ್ಪತ್ರೆಯೊಳಗಿಂದ ಯಾರಾದರೂ ಬಂದರೆ ಜನ ಅವರ ಮುಖವನ್ನೇ ನೋಡುತ್ತಾ ಆ ಮುಖಭಾವವನ್ನು ಓದಲೆತ್ನಿಸುತ್ತಿದ್ದರು. ಅವತ್ತು ಸಂಜೆ ಲೋಹಿಯಾ ಇದ್ದ ವಾರ್ಡಿನಿಂದ ಮಧು ಲಿಮಯೆ ಹೊರ ಬಂದರು. ಮುಖದಲ್ಲಿ ಉದ್ವಿಗ್ನತೆಯಿತ್ತು; ಭಯಾನಕವಾದ ಸುದ್ದಿಯ ಸೂಚನೆ ಅಲ್ಲಿತ್ತು. ಮಧು ಲಿಮಯೆ ಭರ್‍ರನೆ ಜೀಪಿನಲ್ಲಿ ಹೋದರು. ನನ್ನ ಪಕ್ಕದಲ್ಲಿ ಹಿಂದಿ ಲೇಖಕ ಶ್ರೀಕಾಂತ ವರ್ಮ ಕಣ್ಣೀರೊರೆಸಿಕೊಳ್ಳುತ್ತಾ ನಿಂತಿದ್ದರು.’

ಆ ನಡುರಾತ್ರಿ ಭಾರತದ ಮಹಾನ್ ಸಮಾಜವಾದಿ ಚೇತನ ನಿರ್ಗಮಿಸಿತು. ನಂತರ ಲೋಹಿಯಾವಾದ ಉಳಿದು ಬೆಳೆದು, ಈಚಿನ ‘ಇಂಡಿಯಾ’ ಒಕ್ಕೂಟದ ವಿರೋಧ ಪಕ್ಷಗಳ ಏಕತೆಯವರೆಗೂ ಹಾದಿ ತೋರಿದ್ದು ಎಲ್ಲರಿಗೂ ಗೊತ್ತಿದೆ. ಕೆಲವು ದಶಕಗಳ ಕೆಳಗೆ ಲೋಹಿಯಾರ ಸಂಗಾತಿ ಬಿ.ಪಿ. ಮಂಡಲ್ ತಯಾರಿಸಿದ ಹಿಂದುಳಿದ ಆಯೋಗಗಳ ವರದಿ ದೇಶದ ಹಿಂದುಳಿದ ವರ್ಗಗಳ ರಾಜಕಾರಣ ಹಾಗೂ ಹಿಂದುಳಿದವರ ಸಾಮಾಜಿಕ ಸ್ಥಾನಮಾನವನ್ನು ನಿರ್ಣಾಯಕವಾಗಿ ಬದಲಿಸಿತು. ರೈತ ಚಳುವಳಿ, ಸಮಾನತಾ ಚಿಂತನೆ, ವೈಚಾರಿಕತೆ, ಮೀಸಲಾತಿಯ ವಿಸ್ತಾರ, ಮಹಿಳೆಯರಿಗೆ ವಿಶೇಷಾಧಿಕಾರ, ಸಂಸ್ಕೃತಿ ಚಿಂತನೆ, ವೈಯಕ್ತಿಕ ನೈತಿಕತೆ, ವರ್ತನೆಯ ರೀತಿಗಳು... ಹೀಗೆ ದೇಶದ ಹಲವು ವಲಯಗಳನ್ನು ಪ್ರಭಾವಿಸುತ್ತಾ ಲೋಹಿಯಾ ಚಿಂತನೆಗಳು ಜೀವಂತ ತತ್ವವಾಗಿ ವಿಸ್ತರಿಸುತ್ತಿವೆ...  

ಆದರೂ ಲೋಹಿಯಾ ಕೊನೆಯ ದಿನಗಳ ಟಿಪ್ಪಣಿಗಳನ್ನು ಮತ್ತೆ ಇಲ್ಲಿ ತಿದ್ದಿ ಕೊಡುತ್ತಿರುವಾಗ ಮತ್ತೊಮ್ಮೆ ಮನಸ್ಸು ಭಾರವಾಗುತ್ತದೆ

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

blog
06 Oct 2024 ’ಕ್ರಿಟಿಸಿಸಂ’ನ ಕಾರ್ಯ ಮತ್ತು ’ಕ್ರಿಟಿಕಲ್’ ನೋಟ

ಈಚೆಗೆ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರು, ಲೇಖಕರು, ಲೇಖಕಿಯರ ಜೊತೆ ಮಾತಾಡುವಾಗ `ಕ್ರಿಟಿಕಲ್’ ಮತ್ತು ’ಕ್ರಿಟಿಸಿಸಂ’ ಈ ಎರಡು ಪದಗಳ ಬಳಕೆಯ ಬಗ್ಗೆ ಗೊಂದಲವಿರುವುದನ್ನು ಗಮನಿಸಿರುವೆ. ಮೂವತ್ತು ವರ್ಷ ಸಾಹಿತ್ಯ ಪಾಠ ಮಾಡಿರುವ ಮೇಷ್ಟರೊಬ್ಬರು ಒಂದು ಭಾಷಣದಲ್ಲಿ ಹತ್ತು ಸಲ `ಕ್ರಿಟಿಕಲ್ ಆಗಿ ನೋಡಬೇಕು’ ಎಂಬುದನ್ನು `ಟೀಕಿಸಬೇಕು’ ಎಂಬ ಅರ್ಥದಲ್ಲೇ ಬಳಸುತ್ತಿದ್ದರು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಈ ಮೇಷ್ಟ್ರು ಬಳಸುತ್ತಿದ್ದ `ಕ್ರಿಟಿಕಲ್’ ಎಂಬ ಪದ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುವ `ಟೀಕೆ’ ಅಥವಾ ಕ್ರಿಟಿಸೈಸ್ ಮಾಡುವುದು ಎಂಬ ಸರಳ ಅರ್ಥವನ್ನೇ ಮತ್ತೆ ಮತ್ತೆ ಸೂಚಿಸುತ್ತಿತ್ತು. 

ಇಂಥ ಮಾತುಗಳಿಂದ ಕೂಡ ಸಾಹಿತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಒಂದು ಕೃತಿಯ ವಿಮರ್ಶೆಯೆಂದರೆ ಅದರಲ್ಲಿರುವ ದೋಷ, ದೌರ್ಬಲ್ಯಗಳನ್ನು ಹೆಕ್ಕಿ ತೋರಿಸುವುದು ಅಥವಾ ಟೀಕಿಸುವುದು ಎಂಬುದೇ ಪ್ರಧಾನ ಅರ್ಥವಾಗಿ ಉಳಿದುಬಿಟ್ಟಿರುತ್ತದೆ. ಯಾವುದೇ ಪಠ್ಯವನ್ನು `ಕ್ರಿಟಿಕಲ್’ ಆಗಿ ನೋಡುವುದು ಎಂಬುದರ ಅರ್ಥ ಹೀಗೆ ಸೀಮಿತವಾದರೆ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ಯ ವಿಸ್ತಾರವಾದ ಕೆಲಸ ಮರೆತು ಹೋಗುತ್ತದೆ. 

ಸಾಹಿತ್ಯಕ ಸಂಸ್ಕೃತಿಯಲ್ಲಿ ಹಾಗೂ ಸಾಹಿತ್ಯದ ಟೀಚಿಂಗಿನಲ್ಲಿ ಇಂಥ ಗೊಂದಲಗಳು ಸೃಷ್ಟಿಯಾದಾಗ ಸಾಹಿತ್ಯ ವಿಮರ್ಶೆಯ ಪ್ರಾಥಮಿಕ ಪಾಠಗಳನ್ನು ಮತ್ತೆ ತಿರುವಿ ಹಾಕಿ ಸ್ಪಷ್ಟತೆ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ ಎಂಬ ಪದಕ್ಕೆ ವಿಮರ್ಶೆ ಕುರಿತು ನೀವು ಹಿಂದೆ ಕೇಳಿರುವ ವಿವರಣೆಗಳನ್ನು ಒಮ್ಮೆ ನೆನಸಿಕೊಳ್ಳಿ. ಅಥವಾ ಓ. ಎಲ್. ನಾಗಭೂಷಣಸ್ವಾಮಿಯವರ ’ವಿಮರ್ಶೆಯ ಪರಿಭಾಷೆ’ಯನ್ನು ನೋಡಿ. ವಿಮರ್ಶೆಗೆ ಪರಿಶೀಲನೆ, ಪರೀಕ್ಷೆ, ವ್ಯಾಖ್ಯಾನ, ವಿವರಣೆ, ಮೌಲ್ಯಮಾಪನ, ಕೃತಿಪ್ರಕಾಶ, ಕೃತಿ ವಿಸ್ತಾರ, ಸಮಕಾಲೀನ ಅರ್ಥನಿರ್ಮಾಣ…  ಹೀಗೆ ಹಲವು ಕೆಲಸಗಳಿರುತ್ತವೆ. ಡೇವಿಡ್ ಡೈಚಸ್‌ನ `ಕ್ರಿಟಿಕಲ್ ಅಪ್ರೋಚಸ್ ಟು ಲಿಟರೇಚರ್’ ಎಂಬ ಹಳೆಯ ಪುಸ್ತಕ ವಿಮರ್ಶೆಯ ವಿಶಾಲ ಪ್ರಕ್ರಿಯೆಯಲ್ಲಿ ಬಗೆಬಗೆಯ ಓದುಗಳು, ಅಂತರ್ ಶಿಸ್ತೀಯ ಸಂಬಂಧಗಳು ಸೇರಿರುವುದನ್ನು ವಿವರವಾಗಿ ಮಂಡಿಸುತ್ತದೆ. 

ವಿಮರ್ಶೆಯ ಚರಿತ್ರೆಯ ಈ ಹಿನ್ನೆಲೆಯಲ್ಲಿ, `ಕ್ರಿಟಿಕಲ್’ ಎಂಬ ಪದಕ್ಕೆ ಕನ್ನಡದಲ್ಲಿ ಕೆಲವೊಮ್ಮೆ ಸೀಮಿತ ಅರ್ಥ ಬಂದಿದ್ದೇಕೆ ಎಂಬುದನ್ನು ಗಮನಿಸೋಣ. ಕುವೆಂಪು ಕೃತಿಗಳ ಬಗ್ಗೆ ಹಲ ಬಗೆಯ ವಿಮರ್ಶೆಗಳು ಬಂದಿದ್ದರೂ, `ಬಿ. ಕೃಷ್ಣಪ್ಪನವರು ಕುವೆಂಪು ಬರೆದ ಎರಡು ಕಾದಂಬರಿಗಳಲ್ಲಿ ದಲಿತಲೋಕದ ಚಿತ್ರಣವನ್ನು `ಕ್ರಿಟಿಕಲ್’ ಆಗಿ ನೋಡಿದ್ದಾರೆ’ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ದಲಿತ ತಾತ್ವಿಕತೆಯ ಮೂಲಕ ಕುವೆಂಪು ಕಾದಂಬರಿಗಳನ್ನು ಪರಿಶೀಲಿಸಿದ ಕೃಷ್ಣಪ್ಪ(1938-1997), ಕುವೆಂಪುವಿನಂಥ ದೊಡ್ಡ ಲೇಖಕರಿಗೂ ದಲಿತ ಲೋಕವನ್ನು ಹತ್ತಿರದಿಂದ ನೋಡಿ ಬರೆಯಲು ಸಾಧ್ಯವಾಗಲಿಲ್ಲ; ಅವರ ದಲಿತ ಜೀವನಚಿತ್ರಣದಲ್ಲಿ ಪೂರ್ವಗ್ರಹಗಳಿವೆ. ಆದ್ದರಿಂದ ದಲಿತರ ಅಥೆಂಟಿಕ್ ಲೋಕವನ್ನು ದಲಿತ ಸಾಹಿತಿಗಳೇ ಚಿತ್ರಿಸಲು ಸಾಧ್ಯ ಎಂದು ವಾದಿಸಿದರು. ಇದು ಒಂದು ಬಗೆಯ `ಕ್ರಿಟಿಕಲ್’ ನೋಟವೂ ಹೌದು. 

ಆದರೆ `ಕ್ರಿಟಿಸಿಸಂ’ನ ವಿಶಾಲ ಪ್ರಕ್ರಿಯೆ ಹೀಗೆ `ಕ್ರಿಟಿಸೈಸ್’ ಅಥವಾ ’ಟೀಕೆ’ ಮಾಡುವುದರ ಜೊತೆಗೇ ಕುವೆಂಪು ಕೃತಿಗಳಲ್ಲಿ ಇರುವ ಇನ್ನಿತರ ಅಂಶಗಳನ್ನೂ ಓದುಗರ ಎದುರು ತೆರೆದಿಡುತ್ತದೆ: ಉದಾಹರಣೆಗೆ, ಈ ಕಾದಂಬರಿಯ ಭಾಷೆ ಓದುಗ, ಓದುಗಿಯರನ್ನು ತನ್ನೊಳಗೆ ಮಗ್ನವಾಗಿಸಿಕೊಂಡು ಅವರ ವ್ಯಕ್ತಿತ್ವ ಬೇರೆ ಥರ ಬೆಳೆಯುವಂತೆ ಮಾಡುತ್ತದೆ; ಕಾದಂಬರಿಯ ನಾಯಕ ಹೂವಯ್ಯ ಜಡ ಸಮಾಜವನ್ನು ಕದಲಿಸಲೆತ್ನಿಸುತ್ತಿದ್ದಾನೆ, ಬದಲಿಸಲೆತ್ನಿಸುತ್ತಿದ್ದಾನೆ; ಸುತ್ತಲಿನ ಜನರನ್ನು ಸೂಕ್ಷ್ಮವಾಗಿಸುತ್ತಿದ್ದಾನೆ; ಒಂದು ಸಮಾಜ ಬದಲಾಗಲು ಎಲ್ಲ ಜಾತಿಗಳ ಆಧುನಿಕ ಮನಸ್ಸಿನವರೂ ತಂತಮ್ಮ ಸಮುದಾಯಗಳ ಸ್ವವಿಮರ್ಶೆಯನ್ನು, ಸುಧಾರಣೆಯನ್ನು ಆರಂಭಿಸಬೇಕು ಎಂಬ  ಸ್ವಾತಂತ್ರ‍್ಯ ಚಳುವಳಿಯ ಕಾಲದ ತುಡಿತವನ್ನು, ಗಾಂಧೀ ನೋಟವನ್ನು ಈ ಕಾದಂಬರಿ ಹೇಳುತ್ತಿದೆ; ಕಾದಂಬರಿಯ ಕೇಂದ್ರ ಪಾತ್ರದ ಕ್ರಿಯೆ ಒಟ್ಟಾರೆಯಾಗಿ ಸಮಾಜದ ಶೂದ್ರರ, ದಲಿತರ, ಮಹಿಳೆಯರ ಬಿಡುಗಡೆಯ ಹಾದಿಯನ್ನೂ ನಿಧಾನಕ್ಕೆ ತೆರೆಯಬಹುದು…ಇವೆಲ್ಲವನ್ನೂ ಕಾದಂಬರಿಯ ಸಮಗ್ರ ವಿಮರ್ಶೆ ತೋರಿಸಿಕೊಡಬಲ್ಲದು.

ಆದ್ದರಿಂದಲೇ, `ಕ್ರಿಟಿಸಿಸಂ’ನ ಚಟುವಟಿಕೆಗೆ ಹಲವು ಕೆಲಸಗಳಿವೆ ಎಂಬುದನ್ನು ಸಾಹಿತ್ಯದ ಟೀಚರುಗಳಾದರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೃತಿಯ ವಿಮರ್ಶೆ ಕೃತಿಯಲ್ಲಿನ ಅನೇಕ ಅಂಶಗಳನ್ನು ಅನುಭವಿಸಿ, ಆ ಅನುಭವವನ್ನು ಓದುಗ, ಓದುಗಿಯರಿಗೆ ದಾಟಿಸಬೇಕಾಗುತ್ತದೆ. ಟೀಚಿಂಗಿನಲ್ಲಿ ಕ್ರಿಟಿಸಿಸಂನ ಈ ಕೆಲಸ ಪ್ರಧಾನವಾಗಿ ನಡೆಯುತ್ತಿರುತ್ತದೆ. ಕೃತಿಯ ಭಾಷೆ, ಶೈಲಿ, ಪಾತ್ರ, ವಸ್ತು, ವಸ್ತುವಿನ್ಯಾಸ ಎಲ್ಲವನ್ನೂ ವಿವರವಾಗಿ ನೋಡಬೇಕಾಗುತ್ತದೆ. ತನ್ನ ಸ್ವಂತದ ಸಿದ್ಧಾಂತ ಅಥವಾ ಫಿಲಾಸಫಿ ಯಾವುದೇ ಇದ್ದರೂ ಅದರಾಚೆಗೂ ಹೋಗಿ ಕೃತಿಯ ಸತ್ವವನ್ನು ನೋಡಬೇಕಾಗುತ್ತದೆ. 

ಹೀಗೆ ಮಾಡದಿದ್ದರೆ, `ಈ ಬಟ್ಟೆಯ ಬಣ್ಣ ಚೆನ್ನಾಗಿದೆ’; `ಆ ಬಟ್ಟೆಯ ಬಣ್ಣ ಚೆನ್ನಾಗಿಲ್ಲ’ ಎನ್ನುವ ಬಟ್ಟೆಯಂಗಡಿ ಗ್ರಾಹಕ ಗ್ರಾಹಕಿಯರಂತೆ ಓದುಗ ಓದುಗಿಯರೂ ಸೀಮಿತ ಪ್ರತಿಕ್ರಿಯೆಗಳಲ್ಲಿ ಮುಳುಗುತ್ತಾರೆ. `ಫೇಸ್ ಬುಕ್’, `ವಾಟ್ಸ್ ಆಪ್’ ವೇದಿಕೆಗಳಲ್ಲಿ ಸಡನ್ನಾಗಿ ಹೆಬ್ಬೆಟ್ಟೆತ್ತುವ, ಹೆಬ್ಬೆಟ್ಟಿಳಿಸುವ ಪ್ರತಿಕ್ರಿಯೆಕಾರರ ಆಯ್ಕೆ-ತಿರಸ್ಕಾರಗಳ ಕ್ಷಿಪ್ರ ಮಾರ್ಗವನ್ನು ಸಾಹಿತ್ಯ ವಿಮರ್ಶೆ ಅಳವಡಿಸಿಕೊಳ್ಳಲಾಗದು. ಹಾಗೆ ಮಾಡಿದರೆ ಸಾಹಿತ್ಯ ಕೃತಿಗಳ-ಒಟ್ಟಾರೆಯಾಗಿ ಎಲ್ಲ ಬಗೆಯ ಬರವಣಿಗೆಗಳ- ಓದು, ವಿಮರ್ಶೆ, ಅಧ್ಯಯನ, ಟೀಚಿಂಗ್, ಮೌಲ್ಯಮಾಪನ ಎಲ್ಲವೂ ಕ್ಷಿಪ್ರ ಪ್ರತಿಕ್ರಿಯೆಗಳ ಅವಸರದಲ್ಲಿ ಚಿಂದಿಯಾಗಿ ಹೋಗುತ್ತವೆ. ಹಲವು ವರ್ಷಗಳ ಆಳವಾದ ಅಧ್ಯಯನಗಳ ಹಿನ್ನೆಲೆಯಲ್ಲಿ ಹುಟ್ಟುವ ಕ್ಷಿಪ್ರ ಪ್ರತಿಕ್ರಿಯೆಗಳು ಕೂಡ ಗಂಭೀರವಾಗಿ `ಕ್ರಿಟಿಕಲ್’ ಆಗಿರಬಲ್ಲವು, ನಿಜ. ಅವುಗಳಲ್ಲಿ `ಕ್ರಿಟಿಸಿಸಂ’ನ ವಿಸ್ತೃತ ಕೆಲಸ ಸೇರಿಕೊಂಡಾಗ ಮಾತ್ರ ಅವು ಕೃತಿಗಳನ್ನು ಬೆಳೆಸಬಲ್ಲವು.  

‘ಈಗಿನ ಪರಿಸ್ಥಿತಿಯಲ್ಲಿ ನಮ್ಮ ಕ್ಲಾಸ್‌ ರೂಮುಗಳಲ್ಲಿ ಒಂದು ಪಠ್ಯ ಟೀಚ್ ಮಾಡುವಾಗ ಯಾವುದಾದರೂ ಧರ್ಮವನ್ನು `ಕ್ರಿಟಿಕಲ್’ ಆಗಿ ನೋಡುವುದು ಕಷ್ಟವಾಗಿದೆಯಲ್ಲ?’ ಎಂದು ಸಾಹಿತ್ಯದ ಅಧ್ಯಾಪಕರೊಬ್ಬರು ಈಚೆಗೆ ಕೇಳಿದರು. ಅವರ ಕಷ್ಟ ಎಲ್ಲರಿಗೂ ಅರ್ಥವಾಗುತ್ತದೆ. ಅವರ ಮಾತಿನ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ಹೀಗೆನ್ನಿಸಿತು: 

`ನಮ್ಮ ಸಮಾಜದಲ್ಲಿ `ಜಾತ್ಯತೀತತೆ’, `ಉದಾರವಾದ’, `ಸಮಾನತೆ’, `ವೈಚಾರಿಕತೆ’ ಇತ್ಯಾದಿ ಪದಗಳು ಮಕ್ಕಳ ಕಿವಿಗೆ ಬೀಳದೆ, ತಿರುಪತಿ ಲಡ್ಡು, ಜಾತೀಯತೆ, ಸಂಕುಚಿತ ಅರ್ಥದ ಧರ್ಮ…ಇತ್ಯಾದಿ ಪದಗಳು ಕಿವಿಗೆ ಬೀಳುತ್ತಿವೆ; ಇಂಥ ಕಾಲದಲ್ಲಿ ಮಕ್ಕಳ ಮನಸ್ಸಿನ ವಿಕಾರಗಳಿಗೆ `ಮನೆಯೆ ಮೊದಲ ಪಾಠಶಾಲೆ’ಯಾಗಿದೆ; ಹಾದಿ ಬೀದಿಗಳು, ಸಮಾಜ, ಹಾಗೂ ಒಂದು ವರ್ಗದ ಮಾಧ್ಯಮಗಳು ಈ ವಿಕಾರಗಳ `ಹೈಯರ್ ಎಜುಕೇಶನ್’ ಸೆಂಟರುಗಳಾಗಿವೆ. ಈ ಭಾಷೆ ನ್ಯಾಯಾಧೀಶರುಗಳ ನಾಲಗೆಯಿಂದಲೂ ಉದುರತೊಡಗಿದೆ. ಇಂಥ ಸಂದರ್ಭದಲ್ಲಿ ಯಾವುದಾದರೂ ಧರ್ಮವನ್ನು ‘ಟೀಕಿಸುವುದು’, ಅಂದರೆ ಸರಳ ಅರ್ಥದಲ್ಲಿ ‘ಕ್ರಿಟಿಕಲ್ ಆಗಿರುವುದು’ ಕಷ್ಟ. ಆದರೆ ‘ಕ್ರಿಟಿಸಿಸಂ’ನ ಇತರ ಸಲಕರಣೆಗಳನ್ನು ಬಳಸಿ ಪಠ್ಯಗಳಲ್ಲಿರುವ ಧರ್ಮದ ನಿಜವಾದ ಅರ್ಥವನ್ನು ತೋರಿಸಬಹುದು. ಜೈನ ಧರ್ಮದ ಬಗ್ಗೆ ಪಂಪ, ಜನ್ನರ ಕೃತಿಗಳು ಏನು ಹೇಳುತ್ತಿವೆ ಎಂಬುದನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡಿಯಂತೆ ತೋರಿಸುತ್ತಾ, ಈಗ ಏನಾಗುತ್ತಿದೆ ಎಂಬುದನ್ನು ನೋಡಲು ಸೂಚಿಸಬಹುದು.

ಇದೆಲ್ಲದರ ಕುರಿತು ಟಿಪ್ಪಣಿ ಮಾಡುತ್ತಿರುವಾಗ ಮುಡಾ ಪ್ರಕರಣದ ಬಗೆಗಿನ ಹೈಕೋರ್ಟ್ ತೀರ್ಪಿನ ೧೯೭ ಪುಟಗಳ ಕಾಪಿಯನ್ನು ತರುಣ ಲಾಯರೊಬ್ಬರು ಕಳಿಸಿದರು. ಪಠ್ಯದ ನಿಕಟ ಓದು ಕೂಡ ವಿಮರ್ಶೆಯ ಭಾಗವೇ ತಾನೆ? ಇದೀಗ ಈ ತೀರ್ಪನ್ನು ವಿವರವಾಗಿ ಗ್ರಹಿಸುವ, ಕ್ರಿಟಿಕಲ್ ಆಗಿ ಪರೀಕ್ಷಿಸುವ ಹಾಗೂ ತೀರ್ಪಿನ ಪರಾಮರ್ಶೆ ಮಾಡುವ ‘ಕ್ರಿಟಿಸಿಸಂ’ ಇವೆಲ್ಲವೂ ಈ ಸನ್ನಿವೇಶದಲ್ಲಿ ಅತ್ಯಗತ್ಯ ಎನ್ನಿಸತೊಡಗಿತು.  

ವಿಮರ್ಶೆಯ ಈ ಮುಖ್ಯ ಕೆಲಸಗಳು ತರಗತಿಗಳಲ್ಲೂ ಆರಂಭವಾದರೆ ಮಕ್ಕಳ ಸಂವೇದನೆ ಹರಿತವಾಗತೊಡಗುತ್ತದೆ. ಕ್ರಿಟಿಸಿಸಂನ ಕೆಲಸಗಳಲ್ಲಿ ’ಅಭಿರುಚಿಯನ್ನು ತಿದ್ದುವುದು’ (’ಕರೆಕ್ಷನ್ ಆಫ್ ಟೇಸ್ಟ್’) ಕೂಡ ಮುಖ್ಯವಾದುದು ಎನ್ನುತ್ತಾನೆ ಎಲಿಯಟ್. ಈ ಕೆಲಸ ಮೊದಲು ಶುರುವಾದರೆ, ನಂತರ ’ಕ್ರಿಟಿಕಲ್’ ಆಗಿ ನೋಡುವ ಬಗೆಯನ್ನು ಕಲಿಸಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲು ಕುವೆಂಪು ಸಾಹಿತ್ಯದ ಸತ್ವವನ್ನು ಕಲಿಸಿ ಓದುಗಲೋಕವನ್ನು ಅರಳಿಸೋಣ. ಕುವೆಂಪುವಿನ ಭಾವಗೀತೆಯ ಸಾಧ್ಯತೆಯನ್ನು ತೋರಿಸಿ ಮಕ್ಕಳ ಮನಸ್ಸನ್ನು ಉದಾರವಾಗಿಸೋಣ. ನಂತರ ಕುವೆಂಪು ಕಾದಂಬರಿಯ ಬಗ್ಗೆ ಕೃಷ್ಣಪ್ಪನವರು ಎತ್ತಿದ ಪ್ರಶ್ನೆಯನ್ನೋ, ’ಮನೆ ಮನೆಯ ತಪಸ್ವಿನಿಗೆ’ ಪದ್ಯದ ಬಗ್ಗೆ ಸ್ತ್ರೀವಾದಿ ಚಿಂತಕಿ ಎಲ್. ಸಿ. ಸುಮಿತ್ರ ಅವರು ಎತ್ತಿರುವ ’ಕ್ರಿಟಿಕಲ್’ ಪ್ರಶ್ನೆಗಳನ್ನೋ ಮುನ್ನಲೆಗೆ ತರೋಣ. ಆಗ ’ಕ್ರಿಟಿಸಿಸಂ’ ಹಾಗೂ ’ಕ್ರಿಟಿಕಲ್ ನೋಟ’ ಎರಡೂ ತಂತಮ್ಮ ಕೆಲಸ ಮಾಡುತ್ತಿರುತ್ತವೆ. ಹಲವು ಓದುಗಳು ಬೆಳೆಯುತ್ತಿರುತ್ತವೆ.  

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

blog
29 Sep 2024 ’ಇನ್ನಷ್ಟು ಟೈಟಲ್ಸ್ ಬೇಕೆ?’ ಎಂದು ಅದು ಕೇಳಿತು!

 ವಾರಗೆಯ ಲೇಖಕ, ಲೇಖಕಿಯರು ತಂತಮ್ಮ ಬರಹಗಳಿಗೆ ಹೇಗೆ ಟೈಟಲ್ ಕೊಡುತ್ತಾರೆ ನೋಡೋಣವೆಂದು ಅವರವರ ಟೈಟಲ್ ಥಿಯರಿಯ ಬಗ್ಗೆ ಕೇಳಿದೆ. ದೊಡ್ಡ ದೊಡ್ಡ ಲೇಖಕರು ತಮ್ಮ ಕೃತಿಗಳಿಗೆ ಹೇಗೆ ಟೈಟಲ್ ಕೊಡಬಹುದು ಎಂಬ ಕುತೂಹಲದಿಂದ ನನ್ನ ಪ್ರಿಯ ಲೇಖಕ ಮಾರ್ಕ್ವೆಜ್ ಸಂದರ್ಶನಗಳನ್ನು ನೋಡಲು ಹೋದೆ… ಇದೆಲ್ಲ ಕಳೆದ ವಾರದ `ಕಲಾಕೃತಿಯ ಹೆಸರು’ (READ HERE) ಎಂಬ ಅಂಕಣಬರಹದ ಮಳೆ ನಿಂತ ಮೇಲಿನ ಮರದ ಹನಿ ಎಂಬುದು ನಿಮಗೆ ಹೊಳೆದಿರಬಹುದು!

ಗೂಗಲ್ ಹಾದಿಯಲ್ಲಿ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆಯಲ್ಲ! ಮಾರ್ಕ್ವೆಝ್ ಸಂದರ್ಶನ ಹುಡುಕುತ್ತಿರುವಂತೆ ಒಂದು ವೆಬ್‌‌ಸೈಟ್ ಪ್ರತ್ಯಕ್ಷವಾಯಿತು. ಹೆಸರು: Poem Title Generator. ಅದರ ಕೆಳಗೆ `ನಮ್ಮ ಪೊಯೆಮ್ ಟೈಟಲ್ ಜನರೇಟರ್ ಆಟೊಮ್ಯಾಟಿಕ್ ಆಗಿ ಕವಿತೆಯ ಶೀರ್ಷಿಕೆಗಳನ್ನು ಉತ್ಪಾದಿಸಲು `ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ ಶಕ್ತಿ ಬಳಸುತ್ತದೆ’ ಎಂಬ ಒಕ್ಕಣೆಯಿತ್ತು!

ಏಳೆಂಟು ತಿಂಗಳ ಕೆಳಗೆ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಇಂಗ್ಲಿಷಿನಲ್ಲಿ ಪ್ರಬಂಧ ಬರೆಯುವುದನ್ನು ಸಮಾಜವಿಜ್ಞಾನಿ ಸಿ.ಜಿ. ಲಕ್ಷ್ಮೀಪತಿ ತೋರಿಸಿದ್ದರು. ಆಗ ಆ ವೇದಿಕೆಗೆ ಕೈ ಕೊಡಲು ಅಂಬೇಡ್ಕರ್ ಬಗ್ಗೆ ಯಾರೂ ಕೊಡದ ವಿಶೇಷ ವಸ್ತುವನ್ನು ಕೊಟ್ಟು `ಟ್ರೈ ಮಾಡಿ’ ಎಂದೆ. ಅದು ಅಸಂಬದ್ಧವಾದ ಬರಹವೊಂದನ್ನು ಸೃಷ್ಟಿಸಿತು. 

ಆದರೆ ಈ ಸಲ ಸಿಕ್ಕ ಪೊಯೆಮ್ ಟೈಟಲ್ ಜನರೇಟರ್’ ಸೃಜನಶೀಲವಾಗಿತ್ತು. ಮೊದಲಿಗೆ `ನಿನ್ನ ಕವಿತೆಯ ವಸ್ತುವೇನು?’ ಎಂದು ಟೈಟಲ್ ಜನರೇಟರ್ ಕೇಳಿತು. ರೈಟಿಂಗ್ ಈಸ್ ಥಿಂಕಿಂಗ್ ಎಂದು ನಂಬುವ ನಾನು ಕೀಬೋರ್ಡ್ ಮೇಲೆ ಬೆರಳಿಟ್ಟ ತಕ್ಷಣ ಸುಮ್ಮಸುಮ್ಮನೆ ಕವಿತೆಯ ವಸ್ತುವೊಂದು ಟೈಪಾಗತೊಡಗಿತು: My poem deals with a lonely girl who has lost her way in the woods and it is dark and she is helpless… 

'ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎದುರು ನನ್ನ 'ಸಹಜ ಇಂಟಲಿಜೆನ್ಸ್’ ಇಷ್ಟನ್ನು ಟೈಪ್ ಮಾಡಿ ಸುಮ್ಮನಾಯಿತು. ಈ ಸಾಲು ಏಕೆ, ಹೇಗೆ ಮೂಡಿತೋ ತಿಳಿಯದು! ಈ ವಿವರಣೆಗೊಂದು ಟೈಟಲ್ ಬಂತು: ’Whispers of the Lost Woods.’ ಅಂದರೆ, `ಕಳೆದು ಹೋದ ಕಾಡಿನ ಪಿಸುಮಾತುಗಳು’! ಲವ್ಲಿ! `ಇನ್ನಷ್ಟು ಟೈಟಲ್ಸ್ ಬೇಕೆ?’ ಎಂದು ಅದು ಕೇಳಿತು. `ಹೂಂ’ ಎಂದೆ. ಟೈಟಲ್ ಬಂತು: Tales from the Mystic Vale ಅಂದರೆ, ನಿಗೂಢ ಕಣಿವೆಯ ಕತೆಗಳು. 
ನೋಡನೋಡುತ್ತಾ ಹಲವು ಟೈಟಲ್‌ಗಳು ಮೂಡತೊಡಗಿದವು.`Fables Beneath Canopy's Veil’; `Laments of the Shrouded Thorns’ ಇತ್ಯಾದಿ…
ಇನ್ನು ಮುಂದೆ ಶಬ್ದವಿಲ್ಲ! 

ನಿನ್ನೆ ತಾನೆ ಕವಿ ಚಂದ್ರಶೇಖರ ತಾಳ್ಯ ತಮ್ಮ ಕವಿತೆಗೆ ಹೆಸರಿಡುವುದರ ಬಗ್ಗೆ ಮಾತಾಡಿದ್ದು ನೆನಪಾಯಿತು. ಆ ಕವಿತೆಯ ಹೆಸರು `ಕಾಲದ ಹಾಡು’ ಎಂದ ತಕ್ಷಣ, `ಅದು ಕವಿತೆಯ ವಸ್ತು, ಆಶಯ, ಕೇಂದ್ರ ಧ್ವನಿ…ಎಲ್ಲವನ್ನೂ ಹೇಳಿಬಿಟ್ಟಿದೆಯಲ್ಲ? ಇನ್ನು ಕವಿತೆಯನ್ನೇಕೆ ಓದಬೇಕು?’ ಎಂದೆ. ಕವಿತೆಯ ಎಲ್ಲ ಗೂಢಗಳನ್ನು ಟೈಟಲ್ ಬಿಟ್ಟುಕೊಡಬಾರದೆಂಬ ಕಾರಣಕ್ಕೋ ಏನೋ, ಅನೇಕರು ಅನೇಕ ಅರ್ಥಗಳನ್ನು ಹೊರಡಿಸುವ ರೂಪಕವೊಂದನ್ನು ಟೈಟಲ್ ಮಾಡಲು ಹುಡುಕಾಡುತ್ತಿರುತ್ತಾರೆ. ಮೇಲೆ ಹೇಳಿದ ‘ಟೈಟಲ್ ಜೆನರೇಟರ್’ ಕೂಡ ರೂಪಕಗಳನ್ನೇ ಹುಡುಕಿ ಕೊಟ್ಟಿತ್ತು! ಆದರೆ ಬರೆವವರೆಲ್ಲರೂ ಕೊನೆಗೆ ತಮ್ಮ `ಒಳಪಿಸುಮಾತು’ ಅಥವಾ `ಇಂಟ್ಯೂಶನ್’ ಆಧಾರದ ಮೇಲೆ ಟೈಟಲ್ ಕೊಡುತ್ತಾರೆಂದು ಕಾಣುತ್ತದೆ. ಈ ಕುರಿತು ಇಬ್ಬರ ಪ್ರತಿಸ್ಪಂದನವನ್ನು ಇಲ್ಲಿ ಕೊಡುವೆ: 

ಚಂದ್ರಶೇಖರ ತಾಳ್ಯ: `ಕವಿತೆಗೆ ಹೆಸರು ಅನಿವಾರ್ಯವೇ ಎನ್ನುವುದು ಜಿಜ್ಞಾಸೆಯ ವಿಷಯವೇ. ಆದರೆ ಅದೊಂದು ರೀತಿಯಲ್ಲಿ ನದಿ ದಾಟುವಾಗಿನ ಪುಟ್ಟ ದೋಣಿ ಇದ್ದಂತೆ. ನಾವು ದೋಣಿಯಲ್ಲಿ ಕುಳಿತು ನದಿಯ ವಿಸ್ತಾರ, ಅದರ ಹರಿವಿನ ವಯ್ಯಾರ, ಅಲೆಗಳ ಮೋಹಕತೆ, ಆಚೆ ದಡದ ಸೆಳೆತ, ದಂಡೆಯಲ್ಲಿ ಬೆಳೆದ ಹಸಿರು ಮರಗಳ ನೋಟಗಳನ್ನು ಗಮನಿಸುತ್ತಾ ಕುಂತ ದೋಣಿಯನ್ನು ಮರೆತೇಬಿಟ್ಟಿರುತ್ತೇವೆ. ದಂಡೆ ಮುಟ್ಟಿದ ಮೇಲೂ ದೋಣಿ ನೆನಪಷ್ಟೇ ಆಗಿ ಉಳಿಯುತ್ತದೆ. ಹೀಗೇ ಕವಿತೆಯ ಹೆಸರು.

ನಾನು ಕವಿತೆ ಬರೆದಾದ ಮೇಲೆ ಕವಿತೆ ಇಡಿಯಾಗಿ ಏನು ಹೇಳುತ್ತದೆ ಎನ್ನುವುದರ ಮೇಲೆ ಹೆಸರು ನೀಡುತ್ತೇನೆ. ಅದು ಕವಿತೆಯ ಕೇಂದ್ರ ಧ್ವನಿಯೂ ಆಗಿರಬಹುದು; ಅದರ ಭಾವಸೂಚಕವೂ ಆಗಿರಬಹುದು. ಏನೇ ಇದ್ದರೂ ಇದೊಂದು ಇಬ್ಬದಿಯ ಅಲಗಿನ ಪ್ರಶ್ನೆಯೇ. ಕೊನೆಗೂ ಉಳಿಯುವುದು ಓದುಗರ ಪ್ರತಿಭೆ. ಗಿಣಿ, ನೈಟಿಂಗೇಲ್ ನೆಪದಲ್ಲಿ ಕವಿ ಮತ್ತೇನೋ ವಿಭಿನ್ನ ದರ್ಶನವೊಂದನ್ನು ಕಟ್ಟಿ ಕೊಡಲು ಯತ್ನಿಸುವಂತೆ ಕಾಣಿಸುತ್ತಾನೆ. ಅದನ್ನು ಬಗೆವ ಬಗೆ ಕವಿತೆಯ ಹೆಸರನ್ನು ಮೀರಿ ಹೋಗಿರುತ್ತದೆ.

ಅಂತಿಮವಾಗಿ, ಕವಿತೆಗೆ ಟೈಟಲ್ ಅನಿವಾರ್ಯವೋ ಅಲ್ಲವೋ ಎಂಬುದು 'ಜಿಜ್ಞಾಸೆಯ' ವಿಷಯವೇ!

ಎಂ. ಎಸ್. ಆಶಾದೇವಿ: `ಶೀರ್ಷಿಕೆಗಳನ್ನು ಕೊಡುವುದು ಕೆಲವು ಸಲ ಹೆತ್ತ ಮಕ್ಕಳಿಗೆ ಹೆಸರಿಡುವಷ್ಟೇ ಉತ್ಕಟವಾದ ಹುಡುಕಾಟ; ಇದು ಕೆಲವೊಮ್ಮೆ ಸರಿಯಾದ, ಸರಳವಾದ ಶೀರ್ಷಿಕೆ ಕೊಟ್ಟರೆ ಸಾಕಪ್ಪಾ ಎನ್ನಿಸುವ ಒತ್ತಡದ ಸಂಗತಿಯೂ ಆಗಿಬಿಡುತ್ತದೆ. ಆದರೆ ಅದು ನಾನು ಹೇಳಹೊರಟಿರುವುದನ್ನು ಧ್ವನಿಸುವ ಶೀರ್ಷಿಕೆಯಾಗಿರಬೇಕು ಎನ್ನುವ ಆಸೆ! ಕೆಲವು ಸಲ ಲೇಖನ ಬರೆದು ಎಷ್ಟು ಹೊತ್ತಾದರೂ ಶೀರ್ಷಿಕೆ ಹೊಳೆಯದೆ ಕಂಗಾಲಾಗುವುದೂ ಇದೆ. ಶೀರ್ಷಿಕೆಯೇ ಮೊದಲು ಹೊಳೆದು ಅದೇ ಲೇಖನದ ಭಿತ್ತಿಯನ್ನು ರೂಪಿಸಿದ್ದೂ ಇದೆ… ಕೆಲವೊಮ್ಮ ಶೀರ್ಷಿಕೆ ಕಾವ್ಯಮಯವಾಗಿರಲಿ ಎಂಬ ಭಾವ ಮಿಂಚಿ ಮರೆಯಾಗುತ್ತಿರುತ್ತದೆ. 

ಕಳೆದ ವಾರ ಟೈಟಲ್ ಎಂಬ ಪರಿಕಲ್ಪನೆಯನ್ನು ’ಪ್ರಾಬ್ಲಮೆಟೈಸ್’ ಮಾಡಿದ್ದು ಎಲ್ಲೆಲ್ಲಿಗೆ ಕರೆದೊಯ್ಯತ್ತಿದೆ ನೋಡಿ! ಈ ಟೈಟಲ್ ಸವಾಲು ಇಟಲಿಯ ಸುಪ್ರಸಿದ್ಧ ಲೇಖಕ ಅಂಬರ್ತೊ ಇಕೋಗೂ ಎದುರಾಯಿತು. ಹಲವು ಬಗೆಯ ‘ನ್ಯಾರೇಟೀವ್’ ಅಥವಾ ‘ಕಥನ’ಗಳನ್ನು ಬರೆಯುತ್ತಿದ್ದ ಇಕೋ ತನ್ನ ಬರೆವ ಬದುಕಿನಲ್ಲಿ ಕೊಂಚ ತಡವಾಗಿ, ೧೯೮೦ರಲ್ಲಿ, ತನ್ನ ಮೊದಲ ಕಾದಂಬರಿ ಬರೆದ. ‘ಈ ಕಾದಂಬರಿಗೆ ಯಾವ ಹೆಸರಿಡಲಿ?’ ಎಂದು ಹತ್ತು ಹೆಸರುಗಳನ್ನು ಬರೆದು ಗೆಳೆಯ, ಗೆಳತಿಯರಿಗೆ ಕಳಿಸಿದ. ಅವರು ಆ ಹೆಸರುಗಳಲ್ಲಿ ‘ದ ನೇಮ್ ಆಫ್ ದಿ ರೋಸ್' ಎಂಬ ಟೈಟಲ್ ಆರಿಸಿದರು. ಆದರೆ ಇಕೋ ಕಾದಂಬರಿಯ ಆಶಯವನ್ನು, ವಸ್ತುವನ್ನು ಒಡೆದು ಹೇಳದಿರುವಂಥ ‘Adso of Melk’ ಎಂಬ `ನ್ಯೂಟ್ರಲ್’ ಟೈಟಲ್ ಹುಡುಕಿ ಅದನ್ನೇ ಫೈನಲೈಸ್ ಮಾಡಿದ. ಪ್ರಕಾಶಕರು ಅದನ್ನು ಒಪ್ಪಲಿಲ್ಲ. 

ಕೊನೆಗೆ, `ದ ನೇಮ್ ಆಫ್ ದಿ ರೋಸ್’ ಟೈಟಲ್ ಕೊಡುತ್ತಾ ಇಕೋ ಹೇಳಿದ: `ಈ ಹೆಸರಿಟ್ಟಿದ್ದು ನಿಜಕ್ಕೂ ಆಕಸ್ಮಿಕ. `ಗುಲಾಬಿ’ ಎನ್ನುವುದು ಎಷ್ಟೊಂದು ಸಮೃದ್ಧ ಅರ್ಥಗಳನ್ನು ಕೊಡುವ ಸಾಂಕೇತಿಕ ಚಿತ್ರವಾಗಿದೆಯೆಂದರೆ, ಈಗಂತೂ ಅದರಲ್ಲಿ ಇನ್ಯಾವ ಅರ್ಥವೂ ಉಳಿದಂತಿಲ್ಲ.’ 

`ದ ನೇಮ್ ಆಫ್ ದಿ ರೋಸ್’ ಕಾದಂಬರಿಯ ಐವತ್ತು ಮಿಲಿಯನ್ ಪ್ರತಿಗಳು ಮಾರಾಟವಾದವು. ಕೊಲೆಯ ರಹಸ್ಯವೂ ಕೇಂದ್ರದಲ್ಲಿರುವ ಈ ಕಾದಂಬರಿ ಮುಂದೆ ಅದೇ ಹೆಸರಿನ ಜನಪ್ರಿಯ ಸಿನಿಮಾ ಕೂಡ ಆಯಿತು. ಈ ಕಾದಂಬರಿಯ ಜನಪ್ರಿಯತೆಯಲ್ಲಿ ಗುಲಾಬಿ ಎಂಬ ಹೆಸರಿನ ಆಕರ್ಷಣೆ ಕೂಡ ಸೇರಿರಬಹುದೇನೋ.

ಇಂಗ್ಲಿಷ್ ಕವಯಿತ್ರಿ ಗರ್ಟ್ರೂಡ್ ಸ್ಟೆಯ್ನ್ ಬರೆದ `ಸೇಕ್ರೆಡ್ ಎಮಿಲಿ’ ಪದ್ಯದಲ್ಲಿ ಬರುವ ‘ರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಈಸ್ ಎ ರೋಸ್’ ಎಂಬ ಪ್ರಖ್ಯಾತ ಸಾಲು ನಿಮ್ಮ ಕಿವಿಗೆ ಬಿದ್ದಿರಬಹುದು. ಈ ಸಾಲಿನಲ್ಲಿ ಗುಲಾಬಿ ಎಂಬ ಒಂದೇ ಸಂಕೇತದ ಪುನರಾವರ್ತನೆ ಹಾಗೂ `ಈಸ್’ ಎಂಬ ಕ್ರಿಯಾಪದದ ಪುನರಾವರ್ತನೆಯ ಹಟಮಾರಿ ಚೀತ್ಕಾರ…ಈ ಎರಡರಿಂದ ಅರ್ಥಸಮೃದ್ಧತೆ ಹುಟ್ಟುವುದನ್ನು ನೀವು ಗಮನಿಸಿರಬಹುದು. `ಗುಲಾಬಿಯನ್ನು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯಾಗಿಯೇ ಇರುತ್ತದೆ; ಹಾಗೆಯೇ ಎಮಿಲಿಯ ವ್ಯಕ್ತಿತ್ವದ ಶುಭ್ರತೆ ಕೂಡ’ ಎಂದು ಕೂಡ ಗರ್ಟ್ರೂಡ್ ಸ್ಟೆಯ್ನ್ ಅಲ್ಲಿ ಸೂಚಿಸಿದ್ದರು.  

ಅಂಬರ್ತೋ ಇಕೋ ತನ್ನ ಕಾದಂಬರಿಗೆ `ದ ನೇಮ್ ಆಫ್ ದ ರೋಸ್’ ಟೈಟಲ್ ಕೊಟ್ಟಾಗ ಗರ್ಟ್ರೂಡ್ ಸ್ಟೆಯ್ನ್ ಕವಿತೆಯ ಸಾಲನ್ನು ಗಮನಿಸಿರಬಹುದು ಅಥವಾ ಇಲ್ಲದಿರಬಹುದು. ಅನೇಕ ಸಲ ನಾವು ಓದಿದ, ಕೇಳಿದ, ನಮ್ಮೊಳಗಿಳಿದ ಸಂಕೇತ, ರೂಪಕಗಳು ಕೂಡ ಆಧುನಿಕ, ಅತ್ಯಾಧುನಿಕ ಕೃತಿಗಳಲ್ಲಿ ನೇರವಾಗಿ ಅಥವಾ ಮಾರ್ಪಟ್ಟು ಟೈಟಲ್‌ಗಳಾಗುತ್ತವೆ. ನಾನು ಹಿಂದೊಮ್ಮೆ ಬರೆದ ರಮ್ಯ ಪ್ರೇಮಕತೆಯೊಂದಕ್ಕೆ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯೊಂದರಲ್ಲಿರುವ ’ದಾರಿಯೆರಡರ ನಡುವೆ ದಟ್ಟ ಮಂಜು’ (ಮತ್ತೊಬ್ಬ ಸರ್ವಾಧಿಕಾರಿ, ಪಲ್ಲವ ಪ್ರಕಾಶನ) ಎಂಬ ಸಂಕೇತ ಟೈಟಲ್ ಆಗಿದ್ದು ನೆನಪಾಗುತ್ತದೆ!

ನಿಮಗೂ ಹಾಗಾಗಬಹುದು. ಮೇ ಟೈಟಲ್ ಫೈಂಡ್ ಯು!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK



Latest Video


Nataraj Huliyar Official
YouTube Channel

SUBSCRIBE