Nataraj Huliyar


Writer

Biography

Dr. Nataraj Huliyar is a short story writer, novelist, columnist, poet and critic.
Born in Huliyar town, Tumkur district Karnataka, India, he did his Masters in English and has done his Ph.D., on ‘Tradition and Modernity in Modern African and Kannada Literature: A comparative Study.’ He is a Professor of English and teaches Comparative Literature at Centre of Kannada Studies, Bangalore University, and is also the Director of Centre for Gandhian Studies. He is the former Dean of school of languages, and Head of the Dept. of English, Central University of Karnataka. He lives in Bangalore.

He is the Executive Editor of Dr. Ram Manohar Lohia’s works in Kannada Translation. He has written columns for magazines and presently writes a socio-cultural column in Prajavani, leading Kannada Daily. He has published over 2000 articles both in English and Kannada.

Publications: He has to his credit 3 Short Story Collections, 2 plays, a novel, 2 poetry Collections, a biography, a monograph and 3 books of Cultural Criticism. He has edited about 48 books for various projects. His works have been prescribed as texts in several universities across Karnataka.

Awards: He has won Karnataka Sahitya Academy awards 3 times (1994, 2002, 2009) and Sahitya Shree Award for Lifetime Literary Achievement in 2017. He is also a recipient of Madhyama Academy Ambedkar Award and Lokanayaka Jayaprakash Narayan Award, G.S. Shivarudrappa Award for Criticism, Rammanohar Lohia Award, Ki. Ram. Nagaraj Samskruthi Award.
Read More


Blog

Latest Posts

More Blogs

blog
11 Jan 2026 ಹಾಡುಹಕ್ಕಿಗಳ ಪ್ರಾಣಮಿತ್ರ!

ಅವತ್ತು ಬರೆಯ ಹೊರಟಿದ್ದೇ ಬೇರೆ; ಅದು ಕರೆದೊಯ್ದದ್ದೇ ಬೇರೆಡೆಗೆ! 

ಇದೇ ಅಂಕಣದಲ್ಲಿ ಹಿಂದೊಮ್ಮೆ ಉಲ್ಲೇಖಿಸಿದ ಅಮೆರಿಕದ ಕವಿ ರಾಬರ್ಟ್ ಫ್ರಾಸ್ಟ್ ನ `ದ ರೋಡ್ ನಾಟ್ ಟೇಕನ್’ ಪದ್ಯದಲ್ಲಿರುವ ‘ವೇ ಲೀಡ್ಸ್ ಆನ್ ಟು ವೇ’ (ಹಾದಿ ಕರೆದೊಯ್ಯವುದು ಹಾದಿಗೆ) ಎಂಬ ಪ್ರತಿಮೆ ನಿಮಗೆ ನೆನಪಿರಬಹುದು. ಮೊನ್ನೆ ಈ ಅಂಕಣದ ವಸ್ತು ತಲೆಯಲ್ಲಿ ಸುತ್ತುತ್ತಿದ್ದಾಗಲೂ ಹಾಗೇ ಆಯಿತು. ಈ ಅಂಕಣ ಬರೆಯುವಾಗ ಆಗಾಗ ಹೀಗೆ ಆಗುವುದು ನನ್ನ ಅದೃಷ್ಟ. ಜಡ ಸಾಮಾಜಿಕ ವಸ್ತು, ವಿವರಗಳಲ್ಲಿ ಮುಳುಗಿ ಜಡ್ಡು ಹಿಡಿದ ಮನಸ್ಸು ಅವನ್ನೆಲ್ಲ ಹಿಂದೆಬಿಟ್ಟು, ಮೀರಿ ಎಲ್ಲೋ ಹೊರಳುತ್ತಿರುತ್ತದೆ! ಹಾಗೆ ಹೊರಳಿದಾಗ ಕಂಡದ್ದು ಈ ಹಕ್ಕಿ ರಕ್ಷಕನ ಲೇಟೆಸ್ಟ್ ಪ್ರಸಂಗ. 


ಈತನ ಹೆಸರು ಸಿಲ್ವಾ ಗು. ಊರು: ಚೀನಾದ ರಾಜಧಾನಿ ಬೀಜಿಂಗ್. ಈಗ ಈತನ ಫುಲ್‌ಟೈಂ ಕೆಲಸ: ಹಾಡುಹಕ್ಕಿಗಳನ್ನು ಹಕ್ಕಿಗಳ್ಳರಿಂದ ಕಾಪಾಡುವುದು; ಅವು ಆಗಸದಲ್ಲಿ ಮತ್ತೆ ಹಾಡುತ್ತಾ ಹಾರಿಹೋಗುವಂತೆ ಮಾಡುವುದು. 

ಕೆಲವು ದಿನಗಳ ಕೆಳಗೆ ಒಂದು ಬೆಳಗಿನ ಜಾವ ಬಿ.ಬಿ.ಸಿ ಚಾನಲ್‌ನ ಸಿಯೋಲ್ ವರದಿಗಾರ್ತಿ ಲಾರಾ ಬಿಕರ್ ಈ ಸಿಲ್ವಾ ಹಾಡುಹಕ್ಕಿಗಳನ್ನು ರಕ್ಷಣೆ ಮಾಡುವ ಪರಿ ನೋಡಲು  ಕ್ಯಾಮರಾಮನ್ ಜೊತೆ ಅವನ ಹಿಂದೆ ಹೊರಟಳು. ಸೂರ್ಯ ಹುಟ್ಟಿರಲಿಲ್ಲ. ಬೀಜಿಂಗ್ ಇನ್ನೂ ಮಲಗಿತ್ತು. ಸಿಲ್ವಾ ಪಿಸುದನಿಗಿಂತ ಪಿಸುದನಿಯಲ್ಲಿ ಅವರಿಗೆ ಸೂಚನೆ ಕೊಡುತ್ತಿದ್ದ. ಎಲ್ಲರೂ ಉಸಿರು ಬಿಗಿ ಹಿಡಿದು ಕಾದರು. 

ಇನ್ನೇನು ಸೂರ್ಯ ಮೂಡುವುದರ ಸೂಚನೆ ಕೊಡುತ್ತಿದ್ದಂಥ ಬೆಳಗು ಆಗಸದಲ್ಲಿ ಹಬ್ಬುತ್ತಿತ್ತು... ಹಕ್ಕಿಗಳ್ಳರ ಹೆಜ್ಜೆ ಸಪ್ಪಳ ಕೇಳಿಸತೊಡಗಿತು. ತೆಳ್ಳನೆಯ ಮೈಕಟ್ಟಿನ ಮೂವತ್ತೊಂದರ ಹರೆಯದ ಸಿಲ್ವಾ ಮೆಲ್ಲಮೆಲ್ಲನೆ ಮುಂದೆ ಸರಿಯತೊಡಗಿದ. ಲಾರಾ ಹಾಗೂ ಅವಳ ಜೊತೆಗೆ ಕ್ಯಾಮರಾ ರೆಡಿಯಿರಿಸಿಕೊಂಡಿದ್ದ ಕ್ಯಾಮರಾಮನ್ ಸಿಲ್ವಾನ ಹಿಂದೆ ಕಳ್ಳ ಹೆಜ್ಜೆ ಇಡತೊಡಗಿದರು. ಮರಗಳ ಸಾಲು ದಾಟಿ ನೋಡಿದರೆ ಅಲ್ಲೊಂದು ಹಕ್ಕಿ ಬಲೆ. ಅದು ಮಂಜಿನಂತಿರುವ ಮಾಯಾಬಲೆ. ಅದು ಎಷ್ಟು ತೆಳ್ಳಗಿದೆಯೆಂದರೆ, ಹಕ್ಕಿ ಮಿದುಳಿಗೆ ಅದು ತನ್ನನ್ನು ಸೆರೆ ಹಿಡಿವ ಬಲೆ ಎನ್ನುವುದು ಗೊತ್ತಾಗುವುದು ಕೂಡ ಸಾಧ್ಯವಿರಲಿಲ್ಲ.  

ಅಲ್ಲೇ ಬಿದಿರುಮೆಳೆಗಳ ನಡುವೆ ಹಕ್ಕಿಗಳ್ಳರು ಇರಿಸಿದ್ದ ಅಂಥದೊಂದು ಮಂಜು ಬಲೆ. ಪುಟ್ಟ ಹಕ್ಕಿಯೊಂದು ಆ ಬಲೆಯಲ್ಲಿ ಸಿಕ್ಕಿಕೊಂಡ ತನ್ನ ಕಾಲನ್ನು ಹೊರಗೆಳೆಯಲೆತ್ನಿಸುತ್ತಿದೆ. ಹಕ್ಕಿ ಕಾಲೆಳೆದುಕೊಳ್ಳಲೆತ್ನಿದಷ್ಟೂ ಅದರ ಕಾಲು ಆ ಬಲೆಯೊಳಗೆ ಇನ್ನಷ್ಟು ಸಿಕ್ಕಿಕೊಳ್ಳುತ್ತಿದೆ. ಅದು ಮೆಡೋ ಪಿಪಿಟ್ ಎಂಬ ಹಕ್ಕಿ. ಚೀನಾದಲ್ಲೀಗ ಅದು ಸಂರಕ್ಷಿತ ಹಕ್ಕಿ. 

ಅತ್ತಣಿಂದ ಬಂದ ಹಕ್ಕಿಗಳ್ಳ ಸಿಲ್ವಾನ ತಂಡ ನೋಡಿದ ತಕ್ಷಣ ಪೇರಿ ಕೀಳತೊಡಗಿದ. ಸೊಂಟದ ಹಿಂದಕ್ಕೆ ಕಟ್ಟಿಕೊಂಡಿದ್ದ ಚೀಲದಿಂದ ಐದಾರು ಹಕ್ಕಿಗಳನ್ನು ಸರ‍್ರನೆ ಆಗಸಕ್ಕೆಸೆಯುತ್ತಾ ಪೊದೆಸಾಲಿನ ಗುಂಟ ಓಡತೊಡಗಿದ. ಇದೆಲ್ಲವನ್ನೂ ಕ್ಯಾಮರಾ ಸೆರೆ ಹಿಡಿಯುತ್ತಲೇ ಇತ್ತು. ಸಿಲ್ವಾ ಓಡೋಡಿ ಹಕ್ಕಿಗಳ್ಳನನ್ನು ಅಡ್ಡ ಹಾಕತೊಡಗಿದ. ಸಿಲ್ವಾನ ಈಚಿನ ಹಲವು ವರ್ಷಗಳ ಅನುಭವದಲ್ಲಿ ಹಕ್ಕಿಗಳ್ಳರನ್ನು ಹಿಡಿಯುವುದು, ಪೊಲೀಸರನ್ನು ಕರೆಯುವುದು...ಈ ಕಲೆ ಕರಗತವಾಗಿಬಿಟ್ಟಿದೆ. ಅವತ್ತು ನಲವತ್ತು ನಿಮಿಷಗಳಲ್ಲಿ ಪೊಲೀಸರು ಅಲ್ಲಿಗೆ ಬಂದರು. ಪೊಲೀಸರು ಹೀಗೆ ಸ್ಪಾಟಿಗೆ ಬರುವುದರ ಹಿಂದೆ ಸಿಲ್ವಾನ ಎಡೆಬಿಡದ ಪ್ರಚಾರ, ಮನವೊಲಿಕೆ, ಅವನ ವಿಶಿಷ್ಟ ಬದ್ಧತೆ ಎಲ್ಲವೂ ಇದ್ದವು.

ಸಿಲ್ವಾನ ಸಾಹಸ ಮತ್ತು ಹಕ್ಕಿ ಒಲವಿನ ಕತೆ ಓದುತ್ತಿರುವಾಗಲೂ ಸಮಸ್ಯೆಯ ಮತ್ತೊಂದು ಮುಖ ನಮ್ಮನ್ನು ಕಾಡುತ್ತಲೇ ಇರುತ್ತದೆ: ಹಳ್ಳಿಗಾಡುಗಳಿಂದ ಬೀಜಿಂಗಿಗೆ ಕೆಲಸ ಮಾಡಲು ಬಂದು, ಇಲ್ಲಿನ ದುಡಿಮೆಯಿಂದ ಬರುವ ದುಡ್ಡು ಬದುಕಲು ಸಾಕಾಗದೆ ಹಾಡುಹಕ್ಕಿಗಳನ್ನು ಹಿಡಿಯುವ, ಮಾರುವ ಬಡವರು, ಕೂಲಿ ಕಾರ್ಮಿಕರು… ಇವರೆಲ್ಲರ ಸಂಕಷ್ಟಗಳ ಕತೆಯನ್ನು ಇನ್ನೊಂದು ದಿಕ್ಕಿನಿಂದಲೇ ನೋಡಬೇಕಾಗುತ್ತದೇನೋ. ಈ ಕೂಲಿಕಾರರ ಅದೃಷ್ಟಕ್ಕೆ ಒಂದು ಹಾಡುಹಕ್ಕಿ ಅವರ ಮಂಜು ಬಲೆಗೆ ಸಿಕ್ಕಿ, ಅದನ್ನು ಮಾರಿದರೆ ೨೧೦ ಪೌಂಡ್‌ನಷ್ಟು ಹಣ ಸಿಗುತ್ತದೆ. ಅಂದರೆ ಸುಮಾರು ೨೫೦೦೦ ರೂಪಾಯಿ. ಇದು ರೈತ ಕಾರ್ಮಿಕರ, ಶ್ರಮಿಕರ ತಿಂಗಳ ದುಡಿಮೆಗಿಂತ ಹೆಚ್ಚು. ಅದರಲ್ಲೂ ಸೈಬೀರಿಯಾದ ರೂಬಿತ್ರೋಟ್, ಬ್ಲೂತ್ರೋಟ್ ಥರದ ಹಕ್ಕಿಗಳು ಸಿಕ್ಕರೆ ಜಾಕ್ ಪಾಟ್ ಹೊಡೆದಂತೆ!  

ಮನೆಯೆದುರು ಹಾಡು ಹಕ್ಕಿಗಳನ್ನು ತೂಗುಬಿಡುವುದು ಶ್ರೀಮಂತಿಕೆಯ, ಅಂತಸ್ತಿನ ಸಂಕೇತ ಎಂದು ಹಳೆಯ ಚೀನಾದ ಜನ ನಂಬಿದ್ದರು. ಆ ನೆನಪಲ್ಲೇ ಇವತ್ತೂ ಇರುವ ಅರವತ್ತು ಎಪ್ಪತ್ತು ವರ್ಷ ದಾಟಿದ ನಿವೃತ್ತ ಮಂದಿ ಇವತ್ತಿಗೂ ಹಕ್ಕಿಗಳನ್ನು ಮನೆಯ ಹೊರಗೆ ತೂಗುಬಿಡುವ ರೂಢಿ ಚೀನಾದಲ್ಲಿ ಮುಂದುವರಿದಿದೆ. ಇವರಿಗಾಗಿ ಹಕ್ಕಿಗಳ್ಳರು, ಮಾರಾಟಗಾರರು ಅಲ್ಲಲ್ಲಿ ಕದ್ದುಮುಚ್ಚಿ ಈ ಹಕ್ಕಿಗಳನ್ನು ಮಾರುತ್ತಲೇ ಇರುತ್ತಾರೆ. ಪ್ರಜಾಪ್ರಭುತ್ವ ದೇಶವಾದರೇನು, ಕಮ್ಯುನಿಸ್ಟ್ ದೇಶವಾದರೇನು! ಜನರ ವರ್ತನೆಗಳು ಎಲ್ಲೆಡೆಯೂ ಒಂದೇ ಇರಬೇಕು!
ಅಪರೂಪದ ಹಾಡುಹಕ್ಕಿಗಳನ್ನು ರಕ್ಷಿಸುವ ಬಗ್ಗೆ ಸಿಲ್ವಾ ಪ್ರಯತ್ನ ಹಾಗೂ ಅವನ ಪ್ರಚಾರ ಶುರುವಾದ ಮೇಲೆ ಚೀನಾದಲ್ಲಿ ಹಕ್ಕಿ ಹಿಡಿಯುವ ಅಪರಾಧದ ಸುತ್ತಣ ಕಾಯ್ದೆಗಳು ಕೊಂಚ ಬಿಗಿಯಾಗಿವೆ. ಇಂಥ ಹಕ್ಕಿಗಳನ್ನು ಮಾರುವುದು, ಕೊಳ್ಳುವುದು ಈಗ ಕಷ್ಟವಾಗಿದೆ. ಕಳೆದ ವರ್ಷ ಬೀಜಿಂಗಿನಲ್ಲಿ ಪೊಲೀಸರು ಹೀಗೆ ಹಕ್ಕಿಗಳನ್ನು ಕೊಂಡವರ ಹೆಸರು ಬರೆದುಕೊಳ್ಳತೊಡಗಿದಾಗ, ಒಬ್ಬ ‘ನಾನು ನನ್ನ ಹಕ್ಕಿ ಜೊತೆ ವಾಕಿಂಗ್ ಬಂದಿದ್ದೇನೆ, ನಿನಗೇನಾಗಬೇಕು?’ ಎಂದು ಪೊಲೀಸರ ಮೇಲೆ ರೇಗಿದ!   

ಹಕ್ಕಿಗಳ್ಳರ ಬೆನ್ನು ಹತ್ತಿದ ಸಿಲ್ವಾನ ಸಾಹಸ ವಿಸ್ಮಯಕರವಾಗಿದೆ: ಮೊದಮೊದಲು ಒಂದು ಹುಚ್ಚು ಕಾಳಜಿಯ ಹುಕ್ಕಿಯಲ್ಲಿ ಒಬ್ಬನೇ ಈ ಹಾಡುಹಕ್ಕಿಗಳ ರಕ್ಷಣೆಗಿಳಿದ ಸಿಲ್ವಾ ನಿಧಾನಕ್ಕೆ ತನ್ನಂಥವರ ಪುಟ್ಟ ತಂಡವನ್ನೇ ಕಟ್ಟಿದ; ಅದನ್ನು `ಬೀಜಿಂಗ್ ಮೈಗ್ರೇಟರಿ ಬರ್ಡ್ ಸ್ಕ್ವಾಡ್’ ಎಂದು ಕರೆದ. ಸ್ಥಳೀಕರ ಜೊತೆ ಸಭೆ ಮಾಡಿ ಈ ಹಕ್ಕಿಗಳನ್ನು ಉಳಿಸುವ ಬಗ್ಗೆ ಮಾತಾಡಿದ. ಈ ಅಪರೂಪದ ಹಕ್ಕಿಗಳನ್ನು ಉಳಿಸುವ ಅಗತ್ಯವನ್ನು ಪೊಲೀಸರಿಗೂ ಮನವರಿಕೆ ಮಾಡಿದ. ಕೊನೆಗೂ ಪೊಲೀಸರು ಈ ಹಕ್ಕಿಗಳ್ಳರ ಮೇಲೆ ನಿಗಾ ಇಡತೊಡಗಿದರು. ಆ ಮೂಲಕ ಪೊಲೀಸರಿಗೆ ಇನ್ನಿತರ ಅಪರಾಧಗಳ ಸುಳಿವುಗಳೂ ಸಿಗತೊಡಗಿದವು.  

ಸಿಲ್ವಾನ ಹಾದಿ ಸುಗಮವಾಗಿರಲಿಲ್ಲ. ಬೀಜಿಂಗಿನ ಹಕ್ಕಿ ಮಾರಾಟಗಾರ ದಾದಾ ಒಬ್ಬ ತನ್ನ ಚೇಲಾಗಳನ್ನು ಸಿಲ್ವಾನ ಬೆನ್ನು ಹತ್ತಲು ಕಳಿಸಿದ. ಆ ಚೇಲಾಗಳು ಸಿಲ್ವಾನನ್ನು ಸುತ್ತುವರಿದು ಹೊಡೆದದ್ದೂ ಆಯಿತು. ಸಿಲ್ವಾ ಪೊಲೀಸರ ಬಳಿ ದೂರು ಹೊತ್ತು ಹೋದರೆ, ಅವರು ಕೂಡ ಈ ದಂಧೆಯಲ್ಲಿ ಶಾಮೀಲಾದಂತಿತ್ತು! ಸಿಲ್ವಾ ಬಗ್ಗಲಿಲ್ಲ. ಹಕ್ಕಿ ರಕ್ಷಣೆಯನ್ನು ಫುಲ್‌ಟೈಂ ಕಾಯಕ ಮಾಡಿಕೊಂಡ. ಅವನ ತಂಡಕ್ಕೆ ವಂತಿಗೆ ಕೊಡುವವರೂ ಮುಂದೆ ಬಂದರು. ಸಿಲ್ವಾ ಹೊಸ ಕಾಲದ ಸೆಟಲೈಟ್ ಸಾಧನಗಳನ್ನೂ ಬಳಸತೊಡಗಿದ. ಹಕ್ಕಿ ಹಿಡಿಯುವವರು ಓಡಾಡುವ ಜಾಡುಗಳ ಮೇಲೆ ಕಣ್ಣಿಟ್ಟ. ರಾತ್ರಿಯ ಹೊತ್ತು ಹಕ್ಕಿಗಳನ್ನು ಸೆಳೆದುಕೊಳ್ಳುವ ಬಲೆಗಳ ಗುರುತನ್ನೂ ಪತ್ತೆ ಹಚ್ಚತೊಡಗಿದ.   

ಸಿಲ್ವಾ ಗು ಕಳೆದ ಹತ್ತು ವರ್ಷಗಳಲ್ಲಿ ಸುಮಾರು ೨೦೦೦೦ ಹಕ್ಕಿಗಳನ್ನು ರಕ್ಷಿಸಿದ್ದಾನೆ; ಹಕ್ಕಿಗಳ್ಳರ ಲೆಕ್ಕವಿಲ್ಲದಷ್ಟು ಬಲೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾನೆ. ಹಕ್ಕಿವಲಸೆಯ ಕಾಲದಲ್ಲಂತೂ ರಾತ್ರಿಯೆಲ್ಲ ಬೀಜಿಂಗಿನ ಹೊಲಗದ್ದೆಗಳಲ್ಲಿ ತಿರುಗುತ್ತಾ ಮತ್ತೆ ಬೀಜಿಂಗಿನ ಆಗಸದಲ್ಲಿ ಹಾಡುಹಕ್ಕಿಗಳ ದನಿ ಮರಳಿ ಬರುವಂತೆ ಮಾಡುವ ಕನಸು ಕಾಣುತ್ತಾನೆ. ತಾನು ಹುಡುಗನಾಗಿದ್ದಾಗ ಬೀಜಿಂಗಿನ ಆಗಸದಲ್ಲಿ ಈ ಹಕ್ಕಿಗಳ ದನಿ ಕೇಳಿಸುತ್ತಿತ್ತಲ್ಲ, ಆ ದನಿ ಮರಳಿ ಬರಲಿ ಎಂದು ಸಿಲ್ವಾ ಕಾತರಿಸುತ್ತಾನೆ.


ವಿಚಿತ್ರವೆಂದರೆ, ಮೊನ್ನೆ ಬರೆಯಬೇಕೆಂದು ಹೊರಟದ್ದು ಸಿಲ್ವಾನ ಕತೆಯಲ್ಲ! ಕಳೆದ ತಿಂಗಳು ಬೆಂಗಳೂರಿನ ಗಿರಿನಗರದ ಅಪಾರ್ಟ್‌ಮೆಂಟೊಂದರ ಬಳಿ ನಾಗಮಂಗಲದ ಅರುಣ್‌ಕುಮಾರ್ ಎಂಬ ಮೂವತ್ತೆರಡು ವರ್ಷದ ತರುಣ ಉದ್ಯಮಿ ಎರಡು, ಎರಡೂವರೆ ಲಕ್ಷ ರೂಪಾಯಿ ಬೆಲೆಯ ಸುಂದರ ಗಿಳಿಯನ್ನು ರಕ್ಷಿಸಲು ಹೋಗಿ ಕರೆಂಟು ಹೊಡೆದು ತೀರಿಕೊಂಡ ಘಟನೆ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಈ ಘಟನೆಯ ವಿವರಗಳನ್ನು ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಬಿ.ಬಿ.ಸಿ.ಯ ಸಿಲ್ವಾ ಸ್ಟೋರಿ ಕಣ್ಣಿಗೆ ಬಿತ್ತು. ಬೆಂಗಳೂರಿನ ರಮ್ಯ ಸಾಹಸಿಯ ಕತೆ ಬೀಜಿಂಗಿನ ಸಿಲ್ವಾ ಕಡೆಗೆ ಕರೆದೊಯ್ದಿತ್ತು. ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಅರುಣ್ ಹಾಗೂ ಸಿಲ್ವಾರ ವಿಚಿತ್ರ ಸಾಹಸ ನನ್ನನ್ನು ವಿಸ್ಮಯದಲ್ಲಿ ಅದ್ದಿತು. ಅರುಣ್ ತನ್ನ ’ಕಸಿನ್’ಗಾಗಿ ಈ ಗಿಳಿಯನ್ನು ರಕ್ಷಿಸಲು ಹೋದ ಎಂದು ಪತ್ರಿಕಾವರದಿಯೊಂದು ಹೇಳುತ್ತದೆ. 

ಹಾಡುಹಕ್ಕಿಗಳನ್ನು ಆಗಸಕ್ಕೆ ಹಾರಿಬಿಡುವ ಸಿಲ್ವಾನ ಕಾಯಕದಲ್ಲೂ ಅರುಣ್ ಸಾಹಸದಲ್ಲಿರುವ ಅಪಾಯಗಳು ಇದ್ದೇ ಇವೆ. ಹೊಟ್ಟೆಪಾಡಿಗೆ ಹಕ್ಕಿ ಮಾರುವ ಬಡವರೋ ಅಥವಾ ಹಕ್ಕಿ ಮಾರಾಟದ ದಂಧೆಯ ದಾದಾಗಳೋ ಸಿಲ್ವಾಗೆ ಅಪಾಯ ತಂದೊಡ್ಡಲೂಬಹುದು. 

ಅದೇನೇ ಇರಲಿ, ಮುಂಬರಲಿರುವ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಸ್ವಂತಕ್ಕೆ ಯಾವ ಲಾಭವೂ ಇಲ್ಲದ ಕಾಯಕಗಳಲ್ಲಿ ಮುಳುಗುವ ಇಂಥ ಮಾನವ ಚೈತನ್ಯಗಳ ಒಳಚಾಲಕ ಶಕ್ತಿ ನಿಜಕ್ಕೂ ನಿಗೂಢ ಹಾಗೂ ಅನನ್ಯ! 
 

blog
04 Jan 2026 ಸಾವಿತ್ರಿಬಾಯಿ ಫುಲೆ: ಒಂದು ಟಿಪ್ಪಣಿಯ ನಂತರ 

ನಿನ್ನೆ ಜನವರಿ ೩ನೇ ತಾರೀಕು ಹಿಂದೊಮ್ಮೆ ೨೦೧೪ರಲ್ಲಿ ಈ ಅಂಕಣಕಾರ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಪ್ರಜಾವಾಣಿಯ ಸಂಗತ ಅಂಕಣಕ್ಕೆ ಬರೆದ ಟಿಪ್ಪಣಿ, ಆ ಟಿಪ್ಪಣಿಗೆ ಬಂದ ಸ್ಪಂದನಗಳು ನೆನಪಾದವು. ಪ್ರಜಾವಾಣಿಯ ಸಹಸಂಪಾದಕರಾಗಿದ್ದ ಸಿ.ಜಿ. ಮಂಜುಳ ಆ ಬರಹ ಬರೆಯಲು ಪ್ರೇರಣೆಯಾಗಿದ್ದರ ಬಗ್ಗೆ ಕೃತಜ್ಞತೆ ಹುಟ್ಟಿತು. ಅವತ್ತು ಅವರು ನನ್ನ ಬರಹದಿಂದ ಆಯ್ದು ಕೊಟ್ಟಿದ್ದ ಇಂಟ್ರೊ ಇದು: ‘ನಮ್ಮ ಸರ್ಕಾರಗಳು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸುವುದು ಅರ್ಥಪೂರ್ಣವಾಗಿರಬಲ್ಲದು.’  

ಆ ಪುಟ್ಟ ಬರಹಕ್ಕೆ ಬಂದ ಕನ್ನಡ ಕ್ರಿಯಾಶೀಲ ಚಿಂತಕ, ಚಿಂತಕಿಯರ ಸ್ಪಂದನ ವಿಸ್ಮಯಕರವಾಗಿತ್ತು. ಚಿತ್ರದುರ್ಗದಲ್ಲಿ ಬಿ.ಎಸ್.ಪಿ.ಯಲ್ಲಿ ಕ್ರಿಯಾಶೀಲರಾಗಿದ್ದ ಮೇಷ್ಟ್ರು ಶಿವಣ್ಣ ಮತ್ತವರ ಗೆಳೆಯರು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವ ಪೋಸ್ಟ್ ಕಾರ್ಡ್ ಚಳುವಳಿ ಶುರು ಮಾಡಿದರು. ಈ ಟಿಪ್ಪಣಿಯನ್ನು ಕಿರಣ್‌ಕುಮಾರ್ ಅವರ ’ಓಪನ್ ಮೈಂಡ್ಸ್’ ಸ್ಕೂಲಿನ ಮಕ್ಕಳು, ಇನ್ನಿತರ ಗೆಳೆಯ, ಗೆಳತಿಯರು ಪ್ರತಿ ವರ್ಷ ಹಂಚಿಕೊಳ್ಳುತ್ತಲೇ ಇದ್ದರು. 

ಮುಂದೆ ೨೦೧೯ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಸಾವಿತ್ರಿಬಾಯಿ ಫುಲೆಯವರ ದಿನಾಚರಣೆಯನ್ನು ಆಚರಿಸುವ ಆದೇಶ ಹೊರಡಿಸಿತು. ಶಿಕ್ಷಕರ ದಿನಾಚರಣೆಯಂದು ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ ಕೊಡುವ ಯೋಜನೆಯೂ ಶುರುವಾಯಿತು. ಇದೆಲ್ಲ ಒಂದು ಬರಹದಿಂದ ಆಯಿತು ಎಂದು ಸೂಚಿಸುತ್ತಿಲ್ಲ. ಸರಿ ದಿಕ್ಕಿನ ಒಂದು ಚಿಂತನೆ ಹೇಗೋ ಬೆಳೆದು, ಯಾರಿಂದಲೋ ಜಾರಿಯಾಗುವ ಸೋಜಿಗವನ್ನು ಇದು ಸೂಚಿಸುತ್ತದೆ.  

ಅಂದಿನ ’ಪ್ರಜಾವಾಣಿ’ ಲೇಖನದ ಆರಂಭದ ಮಾತುಗಳನ್ನು ಮತ್ತೆ ಉಲ್ಲೇಖಿಸುತ್ತೇನೆ: 

‘ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಿರುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಹತ್ತೊಂಬತ್ತನೇ ಶತಮಾನದ ಐವತ್ತರ ದಶಕದಲ್ಲಿ ಹುಡುಗಿಯರನ್ನು ಶಾಲೆಗೆ ಕಳಿಸುವ ಬಗ್ಗೆ ಇಂಗ್ಲೆಂಡಿನ ಸಮಾಜವೇ ಇನ್ನೂ ಹಿಂದೆ ಮುಂದೆ ನೋಡುತ್ತಿತ್ತು. ಅಂಥ ಕಾಲಘಟ್ಟದಲ್ಲಿ ಜ್ಯೋತಿಬಾ ಫುಲೆಯವರು ಸಾಮಾಜಿಕ ಸ್ವಾತಂತ್ರ‍್ಯ ಹಾಗೂ ಮಹಿಳೆಯರ ವಿಮೋಚನೆಯ ಕಾಲವನ್ನಾಗಿ ಪರಿವರ್ತಿಸುವ ಕೆಲಸ ಆರಂಭಿಸಿದ್ದರು. ಹದಿಹರೆಯಕ್ಕೆ ಕಾಲಿಡುತ್ತಿದ್ದ ಪತ್ನಿ ಸಾವಿತ್ರಿಬಾಯಿಗೆ ಅಕ್ಷರ ಕಲಿಸಲು ಶುರು ಮಾಡಿದ್ದರು.’ 

ಅವತ್ತು ಈ ಲೇಖನ ಓದಿ ಬಂದ ಫೋನುಗಳಲ್ಲಿ ಕವಿ ಚಂದ್ರಶೇಖರ ಕಂಬಾರರು ಹೇಳಿದ್ದ ಒಂದು ಮಾತನ್ನು-ಈವರೆಗಿನ ನಮ್ಮ ಚರಿತ್ರೆಯ ಬರವಣಿಗೆಯ ಲೋಪವನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ಮಾತ್ರ- ಇಲ್ಲಿ ಕೊಡುತ್ತಿದ್ದೇನೆ: ‘ಏನ್ರೀ ಆ ಹೆಣ್ಣುಮಗಳ ಸಾಹಸ! ಇದೆಲ್ಲ ನನಗೆ ಗೊತ್ತೇ ಇರಲಿಲ್ಲವಲ್ರೀ?’ 

ಆ ಲೇಖನ ಓದಿದ ಮತ್ತೊಬ್ಬರು, ‘ನೀವು ಫಾತಿಮಾ ಶೇಖ್ ಬಗ್ಗೆ ಬರೆದಿಲ್ಲವಲ್ಲ?’ ಅಂದಾಗ  ಕಂಬಾರರ ಮಾತನ್ನು ಮರುನುಡಿವ ಸರದಿ ನನ್ನದಾಗಿತ್ತು! ಚರಿತ್ರೆಯ ಅಷ್ಟಿಷ್ಟು ಓದಿನಲ್ಲಿ ಸಾವಿತ್ರಿಬಾಯಿಯವರ ಬಗ್ಗೆ ತಿಳಿದಿದ್ದ ನನಗೆ ಆಗ ಫಾತಿಮಾ ಶೇಖ್ ಬಗ್ಗೆ ಗೊತ್ತಿರಲಿಲ್ಲ. ಫಾತಿಮಾ ಕುರಿತು ನಂತರ ಓದಿದ ವಿವರಗಳನ್ನು ಬರೆಯುವ ಮುನ್ನ ನಿಮಗೆ ಪರಿಚಿತವಿರಬಹುದಾದ ೨೦೧೪ರ ಲೇಖನದ ಭಾಗಗಳನ್ನು ಕೊಡುವೆ.  

‘ಎದೆಗೆ ಬಿದ್ದ ಅಕ್ಷರದ ಫಲವಾಗಿ ಸಾವಿತ್ರಿಬಾಯಿ (ಜನನ: ೩ ಜನವರಿ ೧೮೩೧) ಮುಂದೆ ೧೮೫೧ರಲ್ಲಿ ಜ್ಯೋತಿಬಾಫುಲೆ ಎಲ್ಲ ಜಾತಿಯ ಹುಡುಗಿಯರಿಗಾಗಿ ತೆರೆದ ಮೊಟ್ಟ ಮೊದಲ ಶಾಲೆಯಲ್ಲಿ ಭಾರತದ ಮೊದಲ ಶಿಕ್ಷಕಿಯಾಗುತ್ತಾರೆ. ಸಾವಿತ್ರಿಯವರ ಮಾವ ಶಿಕ್ಷಕಿಯ ಕೆಲಸ ಬಿಡುವಂತೆ ಸಾವಿತ್ರಿಗೆ ತಾಕೀತು ಮಾಡುತ್ತಾರೆ. ಜ್ಯೋತಿಬಾಗೆ ಶಾಲೆ ಮುಚ್ಚಲು ಹೇಳುತ್ತಾರೆ. ಹುಡುಗಿಯರು ಅಕ್ಷರ ಕಲಿತರೆ ಗಂಡಂದಿರು ಸಾಯುತ್ತಾರೆ ಎಂದು ಸನಾತನಿಗಳು ಎಲ್ಲೆಡೆ ಪತ್ರ ಬರೆದು ಜನರನ್ನು ಹೆದರಿಸುತ್ತಾರೆ. ಸಾವಿತ್ರಿ ಹಾಗೂ ಜ್ಯೋತಿಬಾ ಮನೆ ಬಿಟ್ಟು ಹೊರಬರುವ ಸನ್ನಿವೇಶ ನಿರ್ಮಾಣವಾಗುತ್ತದೆ. ಶಿಕ್ಷಕಿ ಸಾವಿತ್ರಿ ಶಾಲೆಗೆ ಹೊರಟರೆ, ಕ್ರೂರ ಮಡಿವಂತರು ಆಕೆಯ ಮೇಲೆ ಸಗಣಿ ಎರಚುತ್ತಾರೆ. ಅದಕ್ಕೆಲ್ಲ ಜಗ್ಗದ ಸಾವಿತ್ರಿ ಪತಿಯ ಸಲಹೆಯಂತೆ ಶಾಲೆಗೆ ಹೋಗುವಾಗ ಹಳೆಯ ಸೀರೆ ಉಟ್ಟು, ಶಾಲೆ ತಲುಪಿದ ಮೇಲೆ ಮತ್ತೊಂದು ಸೀರೆ ಉಟ್ಟು ಹುಡುಗಿಯರಿಗೆ ಪಾಠ ಹೇಳಿಕೊಡುತ್ತಾರೆ. 

ಸಾವಿತ್ರಿಬಾಯಿಯವರ ಶಾಲೆಯಲ್ಲಿ ಕಲಿತ ಮೊಟ್ಟ ಮೊದಲ ಮಾತಂಗ ಜಾತಿಯ ಧನ್ಯಾಬಾಯಿ ಎಂಬ ಹುಡುಗಿ ೧೮೫೫ರಲ್ಲಿ ಮರಾಠಿ ಪತ್ರಿಕೆಯೊಂದರಲ್ಲಿ ಬರೆದ ಬರಹ ಇಡೀ ಮೌನಕ್ರಾಂತಿಯ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಂತಿದೆ: ‘ನಾವು ಮನೆಗಳ ಕೆಳಗೆ ಹೂತು ಹೋಗಿದ್ದೆವು. ಹಿಂದೆ ನಮನ್ನು ಓದಲು ಬರೆಯಲು ಬಿಡುತ್ತಿರಲಿಲ್ಲ. ಆದರೆ ಈಗ ಯಾರೂ ನಮ್ಮನ್ನು ಹೀಗಳೆಯಲಾರರು. ಜೀವಂತ ಸುಡಲಾರರು. ನಾವೀಗ ಬಟ್ಟೆ ತೊಡಬಹುದು; ಪೇಟೆಗೆ ಹೋಗಬಹುದು.’  

ಸಾವಿತ್ರಿ ಶಿಕ್ಷಕಿಯಾದ ಮರುವರ್ಷವೇ ಮಹಿಳಾ ಸೇವಾಮಂಡಳ ತೆರೆದರು. ಜ್ಯೋತಿಬಾ- ಸಾವಿತ್ರಿ ಶೂದ್ರರು, ದಲಿತರಿಗಾಗಿ ಹದಿನೆಂಟು ಶಾಲೆಗಳನ್ನು ತೆರೆದರು. ಈ ಪ್ರಯತ್ನಗಳಿಗೆ ವಿರೋಧಗಳೂ ಮುಂದುವರಿದವು. ‘ಅಸ್ಪೃಶ್ಯರಿಗೆ ವಿದ್ಯೆ ಕಲಿಸಿ ನೀನೂ ನಿನ್ನ ಪತಿಯೂ ಸಮಾಜದಲ್ಲಿ ಅಸ್ಪೃಶ್ಯರಾಗಿದ್ದೀರಿ’ ಎಂದು ಸಾವಿತ್ರಿಯ ಅಣ್ಣನೇ ಖಂಡಿಸತೊಡಗಿದ. ‘ನಾಗರ ಹಬ್ಬದ ದಿನ ವಿಷ ಕಕ್ಕುವ ಹಾವುಗಳನ್ನು ಹಿಡಿದು ಹಾಲೆರೆದು ಪೂಜಿಸುತ್ತೀರಿ; ಆದರೆ ಮಹರ್ ಹಾಗೂ ಮಾಂಗ್ ಜಾತಿಯ ಮನುಷ್ಯರನ್ನು ಅಸ್ಪೃಶ್ಯರಾಗಿಸಿದ್ದೀರಲ್ಲ?’ ಎಂದು ಅಣ್ಣನನ್ನು ಗಟ್ಟಿಸಿ ಕೇಳಿದ ಸಾವಿತ್ರಿ, ಅವನ ಕಣ್ಣು ತೆರೆಸಲೆತ್ನಿಸಿದರು. ಸಾವಿತ್ರಿಬಾಯಿ ಈ ಬಗ್ಗೆ ಜ್ಯೋತಿಬಾಗೆ ಬರೆಯುತ್ತಾ ‘ಎಂಥ ಕಷ್ಟ ಬಂದರೂ ನಾವು ನಮ್ಮ ಈ ಹಾದಿಯಿಂದ ಕದಲಬಾರದು; ನಾಳೆ ನಮ್ಮದು’ ಎಂದದ್ದು ಎಲ್ಲ ಕಾಲಕ್ಕೂ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿದವರಲ್ಲಿ ಸ್ಫೂರ್ತಿ ಹುಟ್ಟಿಸುತ್ತದೆ. 
‘ಕಾವ್ಯ ಫುಲೆ’ ಕವನ ಸಂಕಲನವೂ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಸಾವಿತ್ರಿಬಾಯಿ ಕಾವ್ಯವನ್ನು ಜಾತಿಪದ್ಧತಿ, ಮನುಧರ್ಮಶಾಸ್ತ್ರದ ವಿರುದ್ಧ ಅಸ್ತ್ರವನ್ನಾಗಿ ಬಳಸಿದರು. ತಮ್ಮ ಮನೆಯ ಬಾವಿಯನ್ನು ದಲಿತರೂ ಸೇರಿದಂತೆ ಎಲ್ಲ ಜಾತಿಗಳವರೆಗೂ ತೆರೆದರು. ವಿಧವೆಯವರ ತಲೆ ಬೋಳಿಸುವುದನ್ನು ಪ್ರತಿಭಟಿಸಲು ಸಾವಿತ್ರಿಬಾಯಿ ೧೮೬೦ರಲ್ಲಿ ಕ್ಷೌರಿಕರನ್ನು ಸಂಘಟಿಸಿದರು. ದಲಿತ ಹುಡುಗಿ-ಬ್ರಾಹ್ಮಣ ಹುಡುಗನ ಪ್ರೇಮವಿವಾಹಕ್ಕೆ ಇಂಬಾಗಿ ನಿಂತರು. ವಿಧವಾವಿವಾಹ ಕುರಿತು ಅರಿವು ಮೂಡಿಸಿದರು. ವೇಶ್ಯೆಯರ, ವಿಧವೆಯರ ಮಕ್ಕಳು ಅವರಲ್ಲಿ ಆಸರೆ ಪಡೆದರು. ಜ್ಯೋತಿಬಾ ನಿರ್ಗಮನದ ನಂತರ ‘ಸತ್ಯಶೋಧಕ ಸಮಾಜ’ದ ಸಾಮಾಜಿಕ ಚಳುವಳಿಯನ್ನೂ ಮುಂದುವರಿಸಿದ ಸಾವಿತ್ರಿಬಾಯಿ ಪ್ಲೇಗಿಗೆ ತುತ್ತಾದ ರೋಗಿಗಳ ಆರೈಕೆ ಮಾಡುತ್ತಿರುವಾಗ ಪ್ಲೇಗಿನ ಸೋಂಕು ತಗುಲಿ ೧೦ ಮಾರ್ಚ್ ೧೮೬೦ರಂದು ತೀರಿಕೊಂಡರು. ಅವರ ಸಾವಿನಲ್ಲೂ ಒಂದು ಅಪೂರ್ವ ಅರ್ಪಣಾ ಸಂದೇಶವೇ ಇತ್ತು.

ಸಾವಿತ್ರಿಬಾಯಿ- ಜ್ಯೋತಿಬಾ ಅವರ ಶಿಕ್ಷಣದ ಕಲ್ಪನೆಯ ಕೇಂದ್ರದಲ್ಲಿ ಮಹಿಳೆ, ದಲಿತ, ಶೂದ್ರರಿದ್ದರು. ಸಂಸ್ಕೃತಿಯ ಬದಲಾವಣೆಗೆ ಸ್ತ್ರೀಯರ ಮಾನಸಿಕ ಪರಿವರ್ತನೆ ಅತ್ಯಂತ ಮುಖ್ಯ ಎಂಬ ಬಗ್ಗೆ ಇಬ್ಬರಿಗೂ ಸ್ಪಷ್ಟತೆಯಿತ್ತು.  

ಸಾವಿತ್ರಿಬಾಯಿಯವರ ಇಡೀ ಶಿಕ್ಷಣಪಯಣ ಸರ್ವಕಾಲದ ಸಂದೇಶಗಳನ್ನು ಹೊರಡಿಸುತ್ತದೆ. ಇವತ್ತಿಗೂ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಕ್ಷರ ಕಲಿಯಹೊರಟಿರುವ ಹಳ್ಳಿಗಾಡಿನ ಹುಡುಗ, ಹುಡುಗಿಯರಿದ್ದಾರೆ. ಅಂಥವರಿಗೆಲ್ಲ ಸಾವಿತ್ರಿಬಾಯಿಯವರ ರೀತಿಯ ಬದ್ಧತೆಯಿಂದ ವಿದ್ಯೆ ಕಲಿಸಬೇಕಾದ ಹಾಗೂ ಶಿಕ್ಷಣದ ಅರ್ಥವನ್ನು ವಿಸ್ತರಿಸಬೇಕಾದ ಜರೂರು ಈಗ ಇದೆ. ಈಗ ಸರ್ಕಾರಿ ವಲಯದಲ್ಲಿ ಪ್ರೈಮರಿ ಶಿಕ್ಷಣದ ಅರ್ಧ ಭಾಗಕ್ಕಿಂತ ಹೆಚ್ಚು ಹಾಗೂ ಖಾಸಗಿ ಶಿಕ್ಷಣದಲ್ಲಿ ಬಹುತೇಕ ಭಾಗ ಬೋಧನೆಯ ಜವಾಬ್ದಾರಿ ಮಹಿಳೆಯರ ಕೈಯಲ್ಲಿದೆ. ಈ ಕುತೂಹಲಕರ ಅಂಕಿಅಂಶವನ್ನು ಇವತ್ತು ಶಿಕ್ಷಣವನ್ನು ಸಮಾಜ ಬದಲಾವಣೆಯ ಸಾಧನವನ್ನಾಗಿ ಕಾಣುವ ಎಲ್ಲರೂ ಸರಿಯಾಗಿ ಗ್ರಹಿಸಬೇಕು. 

ಶಿಕ್ಷಣ ಕ್ಷೇತ್ರದಲ್ಲಿರುವ ಮಹಿಳೆಯರು ನಿಜವಾದ ಅರ್ಥದಲ್ಲಿ ಸುಶಿಕ್ಷಿತರಾಗಿ ಪಾಠ ಮಾಡತೊಡಗಿದರೆ, ನಮ್ಮ ಮಕ್ಕಳ ತಲೆಯಲ್ಲಿರುವ ಹಲವು ವಿಕಾರಗಳನ್ನು ಹೊಡೆದೋಡಿಸಬಹುದು. ಪ್ರೈಮರಿ ಶಿಕ್ಷಕ, ಶಿಕ್ಷಕಿಯರಿಂದ ಹಿಡಿದು ವಿಶ್ವವಿದ್ಯಾಲಯಗಳ ಅಧ್ಯಾಪಕ ಅಧ್ಯಾಪಕಿಯರವರೆಗೂ ಇರುವ ಶಿಕ್ಷಕ ವರ್ಗ ಕ್ರಾಂತಿಜ್ಯೋತಿ ಸಾವಿತ್ರಿಬಾಯಿಯವರ ಜೀವನದ ಎಳೆಯಿಂದ ಸ್ಫೂರ್ತಿ ಪಡೆದರೆ, ಶಿಕ್ಷಣಲೋಕದ ಬಗೆಬಗೆಯ ಬೇಜವಾಬ್ದಾರಿತನಗಳು ಎಷ್ಟೋ ಕಡಿಮೆಯಾಗಬಲ್ಲವು. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸಿದರೆ ಅರ್ಥಪೂರ್ಣ ವಾಗಿರಬಲ್ಲದು.’ 


೨೦೧೪ರಲ್ಲಿ ಮೇಲಿನ ಲೇಖನ ಬರೆದ ನಂತರದ ದಿನಗಳಲ್ಲಿ ಫಾತಿಮಾ ಜೀವನದ ವಿವರಗಳನ್ನು ಗಮನಿಸಿದೆ. ರೀಟಾ ರಾಮಮೂರ್ತಿ ಗುಪ್ತ ಬರೆದ ‘ಸಾವಿತ್ರಿಬಾಯಿ ಫುಲೆ: ಹರ್‍ ಲೈಫ್, ಹರ್‍ ರಿಲೇಶನ್‌ಶಿಪ್ಸ್, ಹರ್‍ ಲೆಗಸಿ’ ಪುಸ್ತಕದ ವಿವರಗಳನ್ನು ಈಚೆಗೆ ನೋಡಿದೆ: 

ಫುಲೆ-ಸಾವಿತ್ರಿಬಾಯಿ ಮಹರ್, ಮಾಂಗ್, ಶೂದ್ರ, ಅತಿ ಶೂದ್ರರಿಗಾಗಿ ೧೮ ಶಾಲೆಗಳನ್ನು ರೂಪಿಸಿದಾಗ ಫಾತಿಮಾ ಜೊತೆಗೂಡಿದ್ದರು. ೧ ಜನವರಿ ೧೮೪೮ರಂದು ಅವರ ಮೊದಲ ಶಾಲೆ ಶುರುವಾಯಿತು. ಸಾವಿತ್ರಿಬಾಯಿ ಹೆಡ್ ಮಿಸ್ಟ್ರೆಸ್ ಆದರು; ಫಾತಿಮಾ ಶಿಕ್ಷಕಿಯಾದರು. 

‘ಅಲ್ಲಿ ಇಲ್ಲಿ ದೊರೆತ ಮೌಖಿಕ ದಾಖಲೆಗಳ ಆಧಾರದ ಮೇಲೆ ಫಾತಿಮಾರ ಜೀವನಯಾನವನ್ನು ಕಟ್ಟುವುದು ಕಷ್ಟವಿತ್ತು’ ಎಂದು ರೀಟಾ ಬರೆಯುತ್ತಾರೆ. ಸಾವಿತ್ರಿ-ಫಾತಿಮಾರ ಭೇಟಿಯಾದದ್ದು ಪೂನಾದ ಮಿಸೆಸ್ ಮಿಶೆಲ್ ಸ್ಕೂಲಿನಲ್ಲಿ; ಅಲ್ಲಿ ಇಬ್ಬರೂ ಇಂಗ್ಲಿಷ್ ಕಲಿಯುತ್ತಿದ್ದರು. ಆವರೆಗೆ  ಫಾತಿಮಾ ಥರದ ಹುಡುಗಿಯನ್ನೇ ಸಾವಿತ್ರಿ ಕಂಡಿರಲಿಲ್ಲ. ಉರ್ದು ಕಾವ್ಯದ ಸಾಲುಗಳನ್ನು ನಿರರ್ಗಳವಾಗಿ ಉಲ್ಲೇಖಿಸಬಲ್ಲವರಾಗಿದ್ದ ಫಾತಿಮಾ, ಪರ್ಷಿಯನ್ ಸಾಹಿತ್ಯವನ್ನು ಆಳವಾಗಿ ಓದುತ್ತಿದ್ದರು. 

ಬಾಲಕಿಯರ, ಮಹಿಳೆಯರ ಸ್ಥಿತಿ ಬದಲಾಯಿಸಲು ಸಾವಿತ್ರಿಬಾಯಿ ಆರಂಭಿಸಿದ್ದ ಯುದ್ಧಕ್ಕೆ ಫಾತಿಮಾ ಬೆಂಬಲವಾಗಿ ನಿಂತರು. ‘ಟೀಕೆ, ನಿಂದೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು; ಎಲ್ಲ ಕಡೆಯಿಂದ ಸಂಕಷ್ಟಗಳು ಎದುರಾದರೂ ಅನುಕಂಪ ಕಳೆದುಕೊಳ್ಳಬಾರದು’ ಎಂಬುದನ್ನು ಸಾವಿತ್ರಿಬಾಯಿಗೆ ಹೇಳಿಕೊಟ್ಟರು. ಮಹರ್‍, ಮಾಂಗ್ ಮಕ್ಕಳಿಗೆ ಕುಡಿಯುವ ನೀರು ಸಿಗದಿದ್ದಾಗ ಫಾತಿಮಾ, ಸಾವಿತ್ರಿ ನೀರು ಕೊಂಡು ಈ ಮಕ್ಕಳಿಗೆ ಕೊಡುತ್ತಿದ್ದರು.  

ಫಾತಿಮಾ ತಮ್ಮ ಮನೆಯಿಂದ ಭಿಡೇವಾಡದ ಶಾಲೆಗೆ ಹೋಗುತ್ತಿದ್ದಾಗ ಕ್ರೂರಿಗಳು ಅವರ ಮೇಲೂ ಸಗಣಿ ಎಸೆದರು. ಫಾತಿಮಾ ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊಂಡರು. ಸಹೋದ್ಯೋಗಿಯನ್ನು ಸಂತೈಸುತ್ತಾ ಸಾವಿತ್ರಿಬಾಯಿ ’ಹೆದರಬೇಡ’ ಎಂದರು. ಆಗ ಫಾತಿಮಾ ಹೇಳಿದರು: ‘ನಮ್ಮದು ನೂರು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಹಿಡಿಯುವ ಹೋರಾಟ.’   ಫುಲೆ-ಸಾವಿತ್ರಿ ಮನೆ ಬಿಟ್ಟು ಹೊರಡಬೇಕಾಗಿ ಬಂದಾಗ ಅವರಿಬ್ಬರೂ ಫಾತಿಮಾರ ಮನೆಯಲ್ಲಿ ನೆಲೆ ಕಂಡರು. ಭಾರತದ ಒಂದು ಮಹತ್ವದ ಶಿಕ್ಷಣ ಕ್ರಾಂತಿ ಗಂಡ-ಹೆಂಡತಿಯ ಅರ್ಥಪೂರ್ಣ ಸಂಬಂಧದ ಮೂಲಕ, ಜಾತಿ ಧರ್ಮಗಳ ಗಡಿ ಮೀರಿದ ಸಂಬಂಧಗಳ ಮೂಲಕ, ಆದದ್ದು ಮಲೆತುಹೋಗಿರುವ ಮನಸ್ಸುಗಳಿಗೆ ನೆನಪಾಗಬೇಕು.  

ಕಳೆದ ವರ್ಷವಷ್ಟೇ ಸಾವಿತ್ರಿಬಾಯಿಯವರ ಪದ್ಯಗಳ ಮರಾಠಿ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದೆ. ಮೂಲ ಮರಾಠಿ ಕವಿತೆಗಳ ಲಯ, ಪ್ರಾಸಗಳನ್ನು ಗಮನಿಸಿದರೆ, ಸಾವಿತ್ರಿಯವರ ಸಹಜ ಕವಿತಾ ಶಕ್ತಿ ಓದು, ಟೀಚಿಂಗ್, ಸಾಮಾಜಿಕ ಸವಾಲುಗಳ ಜೊತೆ, ಭಕ್ತಿ ಕಾವ್ಯದ ಓದಿನ ಜೊತೆಗೆ ವಿಕಾಸಗೊಂಡಂತಿದೆ:

ಜಾತಿ ಗಾಯದ ರಕ್ತ ಒಸರುತ್ತಲಿದೆ
ಈ ಬದುಕಿಂದ ಕೊನೆಗೊಮ್ಮೆ ಅದನು ತೊಡೆದು ಹಾಕುವೆ.

ಸಾವಿತ್ರಿಬಾಯಿಯವರ ಕವಿತೆಗಳನ್ನು ಮರಾಠಿ ಬಲ್ಲ ಕನ್ನಡ ಕವಯಿತ್ರಿಯೊಬ್ಬರು ಅನುವಾದಿಸಿದರೆ, ಆ ಕಾವ್ಯದ ನಿಜವಾದ ಶಕ್ತಿ ಅರಿವಾಗಬಲ್ಲದು. ಆಧುನಿಕ ಮಹಿಳಾ ಕಾವ್ಯದ ಹುಟ್ಟಿನ ಕೆಲವು ಎಳೆಗಳು ಸಾವಿತ್ರಿಬಾಯಿಯವರ ಕವಿತೆಗಳಲ್ಲೂ ಇವೆಯೆನ್ನಿಸುತ್ತದೆ. ಮರಾಠಿಯಲ್ಲಿ ಬಂದ ‘ಸತ್ಯಶೋಧಕ್’ ಸಿನಿಮಾ, ಈಚೆಗೆ ಬಂದ ‘ಫುಲೆ’ ಹಿಂದಿ ಸಿನಿಮಾಕ್ಕೆ ಸೆನ್ಸಾರಿನವರು ಕೊಟ್ಟ ಕಿರುಕುಳ, ಈ ಸಿನಿಮಾ ಫುಲೆ-ಸಾವಿತ್ರಿಬಾಯಿಯವರ ಹೋರಾಟವನ್ನು ಹಿಡಿದಿಟ್ಟಿರುವ ರೀತಿ ಇವೆಲ್ಲ ನಿಮಗೂ ಗೊತ್ತಿರಬಹುದು.  

ಇಷ್ಟಾಗಿಯೂ ಸಾವಿತ್ರಿಬಾಯಿ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸುವ ಕೆಲಸ ಹಾಗೇ ಉಳಿದಿದೆ. ಜೊತೆಗೆ, ರಾಧಾಕೃಷ್ಣನ್ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ  ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ಕೊನೇ ಪಕ್ಷ ೫೦:೫೦ರ ಅನುಪಾತದಲ್ಲಿ ಹಂಚಬೇಕೆಂಬ ಬೇಡಿಕೆಯನ್ನೂ ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಸಲ್ಲಿಸುವ ಕೆಲಸವೂ ತಕ್ಷಣ ಆರಂಭವಾಗಬೇಕು.  


 

blog
28 Dec 2025 ಕಪ್ಪು ಜನರ ನವೋದಯ

ಅಮೆರಿಕದಲ್ಲಿ ನೂರು ವರ್ಷಗಳ ಕೆಳಗೆ ಪ್ರಕಟವಾದ ಈ ಪುಸ್ತಕದ ಹೆಸರು ‘ದ ನ್ಯೂ ನೀಗ್ರೊ’. ಆಫ್ರಿಕನ್ನರನ್ನು ಕುರಿತಂತೆ ಯುರೋಪಿಯನ್ನರು ಬಳಸುತ್ತಿದ್ದ ‘ನೀಗ್ರೋ’, ‘ನಿಗ್ಗರ್’ ಎಂಬ ಪದಗಳು ಅವರನ್ನು ಹೀಗಳೆಯುವ ಅವಮಾನಕರ ಪದಗಳು. ಇವತ್ತು ಈ ಪದಗಳನ್ನು ಬಳಸಿದರೆ ಒದೆ ಬೀಳುತ್ತದೆ. ಇಂಡಿಯಾದಲ್ಲಿ ಅವಮಾನಕರವಾದ ಜಾತಿಸೂಚಕ ಪದಗಳನ್ನು ಹೀಗಳೆಯಲು ಬಳಸಿದರೆ ಎಂಥ ಪ್ರತಿಕ್ರಿಯೆ ಬರುತ್ತದೋ ಅಂಥ ಪ್ರತಿಕ್ರಿಯೆ ಅಮೆರಿಕದಲ್ಲೂ ಈಗ ಬರುತ್ತದೆ. 

ಆದರೆ ೧೯೨೫ರಲ್ಲಿ ಅಲೈನ್ ಲಾಕ್ ಸಂಪಾದಿಸಿದ ‘ದ ನ್ಯೂ ನೀಗ್ರೋ’ ಸಂಕಲನದಲ್ಲಿರುವ ಲೇಖಕ, ಲೇಖಕಿಯರು ‘ನೀಗ್ರೋ’ ಎಂಬ ಅವಮಾನದ ಪದವನ್ನೇ ಆತ್ಮವಿಶ್ವಾಸದ ಪದವನ್ನಾಗಿಸಿಕೊಂಡು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಕತೆ, ಕಾವ್ಯ, ಪ್ರಬಂಧಗಳ ಸಂಕಲನದಲ್ಲಿ ಮುಂದೆ ಪ್ರಖ್ಯಾತ ಆಫ್ರೋ ಅಮೆರಿಕನ್ ಲೇಖಕರಾದ ಲಾಂಗ್‌ಸ್ಟನ್ ಹ್ಯೂಸ್, ಕ್ಲಾಡ್ ಮೆಕೇ ಮೊದಲಾದವರ ಬರಹಗಳಿದ್ದವು. 
ಗುಲಾಮನಾಗಿದ್ದ ‘ಹಳೆಯ ನೀಗ್ರೋ’ನ ಕೀಳರಿಮೆ, ಅವಮಾನಗಳ ಎದುರು, ತನ್ನನ್ನು ತಾನು ಅರಿತ, ತನ್ನ ಸ್ಥಿತಿಯನ್ನು ಬದಲಾಯಿಸುವ, ಸ್ವಾಭಿಮಾನದ ’ಹೊಸ ನೀಗ್ರೋ’ನ ಹುಟ್ಟನ್ನು ಈ ಬರಹಗಳು ಸಾರುತ್ತಿದ್ದವು. ಭಾರತದಲ್ಲೂ ಎಲಿನಾರ್ ಝೆಲಿಯಟ್ ೧೯೯೬ರಲ್ಲಿ ಪ್ರಕಟಿಸಿದ ’ಫ್ರಂ ಅನ್‌ಟಚಬಲ್ ಟು ದಲಿತ್’ ಪುಸ್ತಕ ಅಸ್ಪೃಶ್ಯನೊಬ್ಬ ’ದಲಿತ’ ಆಗಿ ಹೊಸ ವ್ಯಕ್ತಿತ್ವ, ಸ್ವಾಭಿಮಾನವನ್ನು ಗಳಿಸಿಕೊಳ್ಳುವ ಬೆಳವಣಿಗೆಯ ಹೆಜ್ಜೆಗಳನ್ನು ತೋರಿಸಿದ್ದು ನಿಮಗೆ ನೆನಪಿರಬಹುದು. ಭಾರತದ ದಲಿತ ಚಳುವಳಿಯ ಈ ಥರದ ನೋಟಗಳುಳ್ಳ ಅಧ್ಯಯನಗಳ ಹಿನ್ನೆಲೆಯಲ್ಲಿ ‘ದ ನ್ಯೂ ನೀಗ್ರೋ’ ಪ್ರಕಟವಾದ ಕಾಲದ ಹ್ಯಾರ್‍ಲೆಮ್ ರೆನೈಸಾನ್ಸ್ ಥರದ ಮೈಲಿಗಲ್ಲುಗಳೂ ಇದ್ದಂತಿವೆ. ಭಾರತದಲ್ಲೂ ದಲಿತ, ಆದಿವಾಸಿ ಸಾಹಿತ್ಯದಲ್ಲಿ ಕೆಲವು ಲೇಖಕರು ಜಾತಿಯ ಹೆಸರುಗಳನ್ನು ಸ್ವಾಭಿಮಾನದ ಸಂಕೇತವಾಗಿ ಇಟ್ಟುಕೊಂಡ ಬೆಳವಣಿಗೆಗಳೂ ನಡೆದವು. 

ಈ ಹಿನ್ನೆಲೆಯಲ್ಲಿ, ಶತಮಾನ ದಾಟಿದ ಆಫ್ರೋ-ಅಮೆರಿಕನ್ನರ ‘ಹ್ಯಾರ್‍ಲೆಮ್ ರೆನೈಸಾನ್ಸ್’ ಕುರಿತು ಈ ಟಿಪ್ಪಣಿ: 

ಯುರೋಪಿಗೊಂದು ರೆನೈಸಾನ್ಸ್ ಇದ್ದಂತೆ, ಅಮೆರಿಕದಲ್ಲಿ ನೆಲೆಸಿದ ಕರಿಯರ ಬದುಕಿನಲ್ಲೂ ಒಂದು ರೆನೈಸಾನ್ಸ್ ೧೯೧೮-೩೦ರ ನಡುವೆ ನಡೆಯಿತು. ಅಮೆರಿಕಾದಲ್ಲಿ ನಡೆದ ಈ ‘ಹ್ಯಾರ್ಲೆಮ್ ರೆನೈಸಾನ್ಸ್’ನ ಸಾಂಸ್ಕೃತಿಕ ಮಹತ್ವ ಜಗತ್ತಿಗೆ ತೀರ ತಡವಾಗಿ ಗೊತ್ತಾಗತೊಡಗಿತು. ಹ್ಯಾರ್ಲೆಮ್ ನವೋದಯ ಆಫ್ರೋಅಮೆರಿಕನ್ನರ ಬದುಕಿನ ಒಂದು ಮುಖ್ಯ ತಿರುವಾಯಿತು. ಅಮೆರಿಕಾದ ನ್ಯೂಯಾರ್ಕ್ ನಗರದ ಒಂದು ಭಾಗ ಹ್ಯಾರ್ಲೆಮ್. ಅಲ್ಲಿನ ರಂಗಭೂಮಿಯಲ್ಲಿ ಕಪ್ಪು ನಟರು ಹೊಸ ರೀತಿಯಲ್ಲಿ ರೂಪುಗೊಳ್ಳತೊಡಗಿದರು. ಅದು ಆಫ್ರೋಅಮೆರಿಕನ್ನರ ಚರಿತ್ರೆಯಲ್ಲಿ ಹೊಸ ಘಟ್ಟವನ್ನೇ ತೆರೆಯಿತು. 

ಕಲೆ, ಸಾಹಿತ್ಯ ಹಾಗೂ ರಂಗಭೂಮಿಗಳು ಸಮಾಜವನ್ನು ಬದಲಿಸಬಲ್ಲವೆಂಬ ನಂಬಿಕೆಯಿಂದ ಈ ನಟರು ಹೊರಟಿದ್ದರು. ಅದಕ್ಕೊಂದು ರಾಜಕೀಯ ಮುಖವೂ ಇತ್ತು. ಅಮೆರಿಕಾದ ದಕ್ಷಿಣ ಭಾಗ ಹಾಗೂ ಮಿಡ್‌ವೆಸ್ಟ್ ಭಾಗಗಳಲ್ಲಿ ವರ್ಣಗಲಭೆಗಳು ಶುರುವಾದಾಗ ಕರಿಯರಿಗೆ ಹ್ಯಾರ್ಲೆಮ್ ಒಂದು ಆಶ್ರಯತಾಣವಾಯಿತು. ಆಫ್ರೋಅಮೆರಿಕನ್ ಸಮಾಜವಾದಿಗಳು ‘ಮೆಸೆಂಜರ್’ ಎಂಬ ವೈಚಾರಿಕ ಪತ್ರಿಕೆ ಹೊರಡಿಸಿದರು. ಜಮೈಕಾದ ಮಾರ್ಕಸ್ ಗಾರ್ವೇ ‘ಬ್ಯಾಕ್ ಟು ಆಫ್ರಿಕಾ’ ಚಳುವಳಿಯನ್ನು ಶುರು ಮಾಡಿದ; ಎಲ್ಲ ಕಪ್ಪು ಜನರೂ ಆಫ್ರಿಕಾಕ್ಕೆ ಮರಳಬೇಕು ಎಂದು ಕರೆ ಕೊಟ್ಟ.

ಹ್ಯಾರ್ಲೆಮ್ ಪ್ರದೇಶದಲ್ಲಿ ಸೇರತೊಡಗಿದ ಕರಿಯರ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ನೃತ್ಯ, ಫ್ಯಾಶನ್, ರಾಜಕಾರಣ, ಗಂಭೀರ ಅಧ್ಯಯನ ಹೀಗೆ ಹಲವು ವಲಯಗಳಲ್ಲಿ ಒಂದು ನವೋದಯ ಆರಂಭವಾಯಿತು. ಜಾಝ್ ಸಂಗೀತಗಾರರು ಹ್ಯಾರ್ಲೆಮ್ ಕಡೆಗೆ ಬರತೊಡಗಿದರು. ಹ್ಯಾರ್ಲೆಮ್ ನವೋದಯದ ಫಲವಾಗಿ ಆಫ್ರೋ-ಅಮೆರಿಕನ್ ವಲಯದಿಂದ ಹೊಸ ಕಾದಂಬರಿಕಾರರು, ಕವಿಗಳು, ಸಮಾಜವಿಜ್ಞಾನಿಗಳು ಮೂಡಿ ಬಂದರು. ಅವರು ಕಪ್ಪುಜನರ ಅನನ್ಯ ಗುಣಗಳನ್ನು ಶೋಧಿಸತೊಡಗಿದರು. ಡುಬೈಸ್, ಕ್ಲಾಡ್ ಮೆಕೇ, ಲಾಂಗ್‌ಸ್ಟನ್ ಹ್ಯೂಸ್ ಮೊದಲಾದವರು ಕಪ್ಪು ಜನರ ಧ್ವನಿಗಳಷ್ಟೇ ಅಲ್ಲ, ಒಟ್ಟು ಅಮೆರಿಕನ್ ಸಾಹಿತ್ಯದ ಮುಖ್ಯ ಧ್ವನಿಗಳಾಗಿಯೂ ಹೊರ ಹೊಮ್ಮಿದರು. 

ಈ ಘಟ್ಟದಲ್ಲಿ ಬಿಳಿಯರ ಮನ ಬದಲಿಸುವಲ್ಲಿ ಕಾವ್ಯ ಹಾಗೂ ಆತ್ಮಚರಿತ್ರೆಗಳು ಮಹತ್ತರ ಕೆಲಸ ಮಾಡತೊಡಗಿದವು. ಅಮೆರಿಕದ ಬಿಳಿಯರಿಗಿಲ್ಲದ ವಿಶಿಷ್ಟ ಶಕ್ತಿ ಕರಿಯರಿಗಿದೆ ಹಾಗೂ ಬಿಳಿಯರ ನಾಗರಿಕತೆ ಪತನಗೊಳ್ಳುತ್ತಿದೆ ಎಂದು ಹ್ಯಾರ್ಲೆಮ್ ಲೇಖಕ, ಲೇಖಕಿಯರು ಗಟ್ಟಿ ದನಿಯಲ್ಲೇ ಪ್ರತಿಪಾದಿಸಲಾರಂಭಿಸಿದರು. ಆದರೆ ಹ್ಯಾರ್ಲೆಮ್ ನವೋದಯ ಹೊಮ್ಮಿಸಿದ್ದ ಆಶಾವಾದ ಬಹುಕಾಲ ಉಳಿಯಲಿಲ್ಲ. ೧೯೨೯ರ ಹೊತ್ತಿಗೆ ಅಮೆರಿಕಾದಲ್ಲಿ ಆರ್ಥಿಕ ಕುಸಿತದ ಶುರುವಾಯಿತು. ಈ ನೆವದಲ್ಲಿ ಕಪ್ಪು ಜನರನ್ನು ಕೊಲ್ಲುವ ಬರ್ಬರ ಘಟ್ಟ ಆರಂಭವಾಯಿತು. ಹ್ಯಾರ್ಲೆಮ್ ನವೋದಯ ಕರಿಯರಲ್ಲಿ ಹುಟ್ಟಿಸಿದ್ದ ಹೊಸ ಭರವಸೆ ಕುಸಿಯತೊಡಗಿತು.  

ಆದರೆ ಹ್ಯಾರ್ಲೆಮ್ ನವೋದಯ ಬಿತ್ತಿದ ಕಪ್ಪು ಸ್ಫೂರ್ತಿ ಆಫ್ರಿಕಾ ಖಂಡದ ದೇಶಗಳಲ್ಲೂ ಹಲವು ವರ್ಷ ಮುಂದುವರೆಯಿತು. ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿದ್ದ ಆಫ್ರಿಕನ್ ಕವಿ ಲೆಪಾಲ್ಡ್ ಸೆಂಘರ್ ಹ್ಯಾರ್ಲೆಮ್ ನವೋದಯದ ಪ್ರತಿಧ್ವನಿ ಎಂಬಂತೆ ಮುಂದೊಮ್ಮೆ ತನ್ನ ‘ನ್ಯೂಯಾರ್ಕ್’ ಪದ್ಯದಲ್ಲಿ ‘ಎಲೆ ನ್ಯೂಯಾರ್ಕ್, ಕಪ್ಪು ರಕ್ತ ಹರಿಯಲಿ ನಿನ್ನೊಳಗೆ’ ಎಂದು ಬರೆದ. ಕರಿಯರನ್ನು ‘ನೀಗ್ರೋ’ ಎಂಬ ಅವಹೇಳನದ ಪದ ಬಳಸಿ ಹೀಗಳೆಯುತ್ತಿದ್ದ ಬಿಳಿಯರ ಮುಖಕ್ಕೆ ರಾಚುವಂತೆ ಫ್ರೆಂಚ್ ಆಫ್ರಿಕಾದ ಲೇಖಕರು ‘ನೀಗ್ರೋತನ’ (ನೆಗ್ರಿಟ್ಯೂಡ್) ಎಂಬ ಚಳುವಳಿಯನ್ನೇ ಹುಟ್ಟು ಹಾಕಿದರು. 

‘ಅಮೆರಿಕಾದ ನೀಗ್ರೋಗಳ ಬದುಕಿನ ಭೀಕರ ಅನುಭವಗಳನ್ನು ಹೇಳಲು ಇನ್ನೂ ಭಾಷೆಯೇ ಸೃಷ್ಟಿಯಾಗಿಲ್ಲ’ ಎಂದು ಜೇಮ್ಸ್ ಬಾಲ್ಡ್‌ವಿನ್‌ಗೆ ಅನ್ನಿಸತೊಡಗಿತು. ಬಾಲ್ಡ್‌ವಿನ್ ಕಪ್ಪು ಜನರ ಆಳದ ಸಿಟ್ಟಿಗೆ ತಾತ್ವಿಕ ರೂಪ ಕೊಟ್ಟ. ಇದೆಲ್ಲದರ ನಡುವೆ, ಅಮೆರಿಕಾದ ಆಫ್ರಿಕನ್ನರು ಹಾಗೂ ಇನ್ನಿತರ ಕರಿಯರು ತಮ್ಮ ಚರ್ಮದ ಬಣ್ಣದ ಕೀಳರಿಮೆಯನ್ನು ಮೀರಲು ಹಾಗೂ ಕಪ್ಪು ಸಂಸ್ಕೃತಿಯ ಶಕ್ತಿ ಹಾಗೂ ವಿಶಿಷ್ಟ ಅಸ್ತಿತ್ವವನ್ನು ಪ್ರತಿಪಾದಿಸಲು ೧೯೬೦ರ ದಶಕದಲ್ಲಿ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳುವಳಿಯನ್ನು ಆರಂಭಿಸಿದರು. ಮುಂದೆ ಮಾಯಾ ಏಂಜೆಲೊ, ಆ್ಯಲಿಸ್ ವಾಕರ್, ಟೋನಿ ಮಾರಿಸನ್ ಅಮೆರಿಕಾದ ಬರವಣಿಗೆಯ ದಿಕ್ಕನ್ನೇ ಬದಲಿಸಿದರು. 

ಹಲವು ದಿಕ್ಕುಗಳಿಂದ ಶುರುವಾದ ತಮ್ಮ ಬಿಡುಗಡೆಗೆ ಹಿಂಸಾಮಾರ್ಗವನ್ನು ಹಿಡಿಯುವುದೋ ಅಥವಾ ಅಹಿಂಸಾ ಮಾರ್ಗವನ್ನು ಹಿಡಿಯುವುದೋ ಎಂಬ ಗೊಂದಲ ಕೂಡ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆಫ್ರೋ-ಅಮೆರಿಕನ್ನರಿಗೆ ಎದುರಾಯಿತು. ಇದೆಲ್ಲದರ ನಡುವೆ, ಕರಿಯರ ಮೇಲೆ ಬಿಳಿಯರ ಮಾರುಕಟ್ಟೆಯ ಹಿಡಿತ ಸಾಧಿಸುವ ಪ್ರಯತ್ನಗಳು ಶುರುವಾದವು. ಕರಿಯರು ನಡೆಸುತ್ತಿದ್ದ ಬಡ ಪ್ರದೇಶಗಳ ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ಮೇಲೆ ಸರ್ಕಾರ ನಿರ್ಬಂಧ ಹೇರಿತು. ಅಲಬಾಮಾ ರಾಜ್ಯದ ಬರ್ಮಿಂಗ್ ಹ್ಯಾಂ ಕಡೆ ಗಲಭೆಗಳಾದವು. ಆ ಕಾಲದಲ್ಲಿ ಗುಡ್ ಫ್ರೈಡೇಯ ದಿನ ಚರ್ಚೊಂದನ್ನು ಸುತ್ತುವರಿದ ಜನರನ್ನು ಬಂಧಿಸಲಾಯಿತು. ಅವತ್ತು ಬಂಧನಕ್ಕೊಳಗಾದವರಲ್ಲಿ ಕ್ರೈಸ್ತ ಬ್ಯಾಪ್ಟಿಸ್ಟ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡ ಇದ್ದರು. 

‘ನಾವು ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು’ ಎಂದು ಘೋಷಿಸಿದ ಮಾರ್ಟಿನ್ ಲೂಥರ್ ಕಿಂಗ್ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು. ಬಂಧನದಲ್ಲಿದ್ದಾಗ ಜೈಲಿನಲ್ಲಿ ಸಿಕ್ಕ ಟಾಯ್ಲೆಟ್ ಪೇಪರ್ ಹಾಗೂ ದಿನಪತ್ರಿಕೆಗಳ ಮೇಲೆ ಹತ್ತೊಂಬತ್ತು ಪುಟಗಳ ಪತ್ರ ಬರೆದು ಕಪ್ಪು ಜನರ ಅಸಹನೆಯ ಕಾರಣಗಳನ್ನು ವಿವರಿಸಿದರು. ‘ಲೆಟರ್ ಫ್ರಂ ಎ ಬರ್ಮಿಂಗ್ ಹ್ಯಾಮ್ ಜೈಲ್’ ಎಂಬ ಪ್ರಖ್ಯಾತ ಪತ್ರದ ಒಂದು ಭಾಗ:

‘ಬರ್ಮಿಂಗ್ ಹ್ಯಾಮ್‌ನಲ್ಲಿ ನೀಗ್ರೋಗಳ ಮನೆಯ ಮೇಲೆ ಆದಷ್ಟು ಬಾಂಬ್ ದಾಳಿ ಇನ್ಯಾವ ನಗರದಲ್ಲೂ ಆಗಿಲ್ಲ…ಏಷ್ಯಾ ಹಾಗೂ ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಗಳಿಸಲು ಜೆಟ್ ವೇಗದಲ್ಲಿ ಚಲಿಸುತ್ತಿವೆ; ಆದರೆ ನಾವಿಲ್ಲಿ ಜಟಕಾ ಗಾಡಿಯ ವೇಗದಲ್ಲಿ ಲಂಚ್ ಕೌಂಟರಿನಲ್ಲಿ ಒಂದು ಕಪ್ ಕಾಫಿ ಪಡೆಯಲು ಹೋರಾಡುತ್ತಿದ್ದೇವೆ’ 

ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕಾದ ಕರಿಯರ ನಾಯಕರಾದ ಇತಿಹಾಸ ಈಗ ಎಲ್ಲರಿಗೂ ಗೊತ್ತಿದೆ: ಅವರ ಪ್ರಖ್ಯಾತ ಭಾಷಣ ‘ಐ ಹ್ಯಾವ್ ಎ ಡ್ರೀಮ್’ನ ಸಾಲುಗಳಿವು: 
‘ನನಗೊಂದು ಕನಸಿದೆ…ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು… ಎಂದು ನನಗೊಂದು ಕನಸಿದೆ.’ 

‘ಐ ಹ್ಯಾವ್ ಎ ಡ್ರೀಮ್’ ಎಂಬ ಕಿಂಗ್ ಕನಸಿನ ಪಲ್ಲವಿ ಚರಿತ್ರೆಯಲ್ಲಿ ಪ್ರಬಲ ರೂಪಕವಾಯಿತು. ಎಲ್ಲ ಬಗೆಯ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಾ ಬಂತು. ೧೯೬೪ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಕಿಂಗ್ ನಾಲ್ಕು ವರ್ಷಗಳ ನಂತರ ಹತ್ಯೆಯಾದರು.  

ಇಷ್ಟೆಲ್ಲ ಬಲಿದಾನಗಳ ನಡುವೆ ಹ್ಯಾರ್‍ಲೆಮ್ ರೆನೈಸಾನ್ಸ್ ನಿಧಾನಕ್ಕೆ ಫಲ ಕೊಡತೊಡಗಿತು. ಆಫ್ರೋ ಅಮೆರಿಕನ್ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದರ ಹಿಂದೆ ನೂರು ವರ್ಷಗಳ ಕೆಳಗೆ ಶುರುವಾದ ‘ಹ್ಯಾರ್‍ಲೆಮ್ ನವೋದಯ’ವೂ ಇತ್ತು. 

ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿತು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಎಲ್ಲೋ ಹ್ಯಾರ್‍ಲೆಮ್ ನವೋದಯ ಕೂಡ ನಮ್ಮ ನೆನಪಿನಲ್ಲಿರಬೇಕು ಎನ್ನಿಸಿತು. ಈ ಮಾತುಗಳನ್ನು ಬರೆಯುತ್ತಿರುವಾಗ ನಾಳೆ ಕುವೆಂಪು ಜನ್ಮದಿನ ಎಂಬುದು ನನ್ನ ತಲೆಯಲ್ಲಿ ಸುಳಿಯುತ್ತಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಭಾರತದಲ್ಲಿ ವಿಕಾಸಗೊಂಡ ಹೊಸ ಸಾಹಿತ್ಯವನ್ನು ‘ನವೋದಯ’ ಎಂದು ಕರೆದವರು ಕುವೆಂಪು ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಭಾರತದ ಇನ್ನಿತರ ಸಾಹಿತಿಗಳಿಗಿಂತ ಭಿನ್ನವಾಗಿ  ನವೋದಯದ ಕಲ್ಪನೆಯನ್ನು ವಿಸ್ತರಿಸಿದ ಕುವೆಂಪು ಅದನ್ನು ಕನ್ನಡನಾಡಿನ ಬಹುಜನ ಸಮುದಾಯದ ನವೋದಯಕ್ಕೆ ವಿಸ್ತರಿಸಿ, ಸರ್ವೋದಯದ ಕಲ್ಪನೆಯಾಗಿ ಮರುರೂಪಿಸಿದರು.  ನವೋದಯ ರಾಷ್ಟ್ರೀಯತೆಗೆ ವಿಶಿಷ್ಟ ರಾಜಕೀಯ ಆಯಾಮ ಒದಗಿಸುವ ಅಖಂಡ ಕರ್ನಾಟಕದ ಕಲ್ಪನೆಯ ಜೊತೆಗೆ ಸರ್ವಸ್ವೀಕಾರ ರಾಷ್ಟ್ರೀಯತೆಯನ್ನೂ ರೂಪಿಸಿದರು.

ಈ ಅಂಕಣ ಬರೆಯುವ ಹಿಂದಿನ ದಿನ, ಇದ್ದಕ್ಕಿದ್ದಂತೆ ವಿದ್ಯಾರ್ಥಿ ಮಿತ್ರ-ಉದಯೋನ್ಮುಖ ವಿಮರ್ಶಕ ಕಿಶೋರ್ ಚಿಂತಾಮಣಿ ‘ಕುವೆಂಪು ಸಾಹಿತ್ಯವನ್ನು ಸಿದ್ಧ ಮಾದರಿಯಲ್ಲೇ ನೋಡಿ ನೋಡಿ ಅಧ್ಯಯನಗಳು ಸವಕಲಾಗತೊಡಗಿವೆಯೇನೋ’ ಎಂದಿದ್ದು ಈ ಟಿಪ್ಪಣಿ ಬರೆಯುವಾಗ ನೆನಪಾಗುತ್ತಿದೆ. ಕುವೆಂಪು ಕಾವ್ಯ ಹಾಗೂ ಅವರ ಒಟ್ಟು ಸಾಹಿತ್ಯ ರಾಷ್ಟ್ರೀಯ ಚಳುವಳಿ, ಕನ್ನಡ ಚಳುವಳಿ, ವೈಚಾರಿಕ ಚಳುವಳಿ ಇವೆಲ್ಲದರ ಜೊತೆ ಬೆರೆತು ಸೃಷ್ಟಿಸಿದ ನವೋದಯದ ರಾಜಕೀಯ, ಸಾಂಸ್ಕೃತಿಕ ಪರಿಣಾಮ, ಬೆಳವಣಿಗೆಗಳನ್ನು ಕ್ಷೇತ್ರಕಾರ್ಯ,  ಸಂದರ್ಶನಗಳ ಮೂಲಕ ವಿಸ್ತೃತ ಅಧ್ಯಯನ ಮಾಡಬಹುದೇ ಎಂಬ ಬಗ್ಗೆ ಹೊಸ ಕಾಲದ ಅಧ್ಯಯನಕಾರರು, ಅಧ್ಯಯನಕಾರ್ತಿಯರು ಯೋಚಿಸಬಹುದೆಂದು ಕಾಣುತ್ತದೆ.

Follow Blog WhatsApp Channel: CLICK HERE



Latest Video


Nataraj Huliyar Official
YouTube Channel

SUBSCRIBE