ಬರವಣಿಗೆಯ ತಾಲೀಂ: ಒಂದು ಅನುಭವ

ಎಫ್. ಆರ್. ಲೀವಿಸ್ ಬರೆದ ವಿಮರ್ಶಾ ಬರಹಗಳ ಪುಸ್ತಕ  ‘ದ ಕಾಮನ್ ಪರ್ಸೂಟ್’ ನಿಮಗೆ ಪರಿಚಯವಿರಬಹುದು. ಲೀವಿಸ್ ಈ ಪುಸ್ತಕದ ಶೀರ್ಷಿಕೆಯನ್ನು ಕವಿ, ವಿಮರ್ಶಕ ಎಲಿಯಟ್‌ನ  ‘ವಿಮರ್ಶೆ ಎಂದರೆ ಸತ್ಯವಾದ ತೀರ್ಮಾನದ ಸರ್ವಸಾಮಾನ್ಯ ಹುಡುಕಾಟ’ (‘ದ ಕಾಮನ್ ಪರ್ಸ್ಯೂಟ್ ಆಫ್ ಟ್ರೂ ಜಡ್ಜ್ ಮೆಂಟ್’) ಎಂಬ ಮಾತಿನಿಂದ ರೂಪಿಸಿಕೊಂಡ. ಈ ಮಾತಿನಲ್ಲಿ ವಿಮರ್ಶೆ ಎನ್ನುವುದು ಒಂದು ಸಂಸ್ಕೃತಿಯ ಅಥವಾ ಹಲವು ಸಂಸ್ಕೃತಿಗಳ ಹಲವರು ಸೇರಿ ಮಾಡುವ ಹುಡುಕಾಟ ಎಂಬ ಅರ್ಥವೂ ಇದೆ.

‘ದ ಕಾಮನ್ ಪರ್ಸ್ಯೂಟ್’ ಎಂಬ ಮಾತನ್ನು ಕ್ಲಾಸುಗಳಲ್ಲಿ, ಸೆಮಿನಾರುಗಳಲ್ಲಿ ಮತ್ತೆ ಮತ್ತೆ ಬಳಸಿದ್ದರೂ, ಅದು ಸರಿಯಾಗಿ ನನ್ನ ಅನುಭವಕ್ಕೆ ಬರತೊಡಗಿದ್ದು ಈಚಿನ ತಿಂಗಳುಗಳಲ್ಲಿ; ಈ ವೆಬ್‌ಸೈಟಿನಲ್ಲಿ ಬರಹಗಳನ್ನು ಬರೆಯಲು ಶುರು ಮಾಡಿದ ಮೇಲೆ; ಹಲವು ಸೂಕ್ಷ್ಮ ಲೇಖಕ, ಲೇಖಕಿಯರು ಸತ್ಯದ ಹಲವು ಮುಖಗಳನ್ನು ಆ ಬರಹಗಳಿಗೆ ಜೋಡಿಸತೊಡಗಿದ ಮೇಲೆ. ‘ಸರ್ವರೊಳಗೊಂದೊಂದು ನುಡಿ ಕಲಿವ’ ಈ ಪರಿಯ ಸೊಬಗು ರೋಚಕ ಕೂಡ!

ಈ ಮಾತು ಬರೆಯಲು ಕಾರಣವಿದೆ: ಈ ಅಂಕಣದ ಕಳೆದೆರಡು ವಾರಗಳ ಬರಹಗಳಲ್ಲಿ ಕತೆ, ಕಲೆ, ಬರವಣಿಗೆಯ ಕಲಿಕೆ ಕುರಿತ ಪ್ರಶ್ನೆಗಳನ್ನು ಎತ್ತಿದಾಗಿನಿಂದ ಲೇಖಕ, ಲೇಖಕಿಯರು, ಕಲಾವಿದರು, ಸಿನಿಮಾ ನಿರ್ದೇಶಕರು ಬರೆಯುತ್ತಿರುವ ಮಾತುಗಳು ಆ ಬರಹಗಳ ಗ್ರಹಿಕೆಗಳನ್ನು ವಿಸ್ತರಿಸುತ್ತಲೇ ಇವೆ. ಸಿನಿಮಾದ ಗೆಳೆಯರಿಬ್ಬರು ಯಾವ ಕಲೆಯನ್ನೇ ಆಗಲಿ ‘ಕಲಿಸುವುದು’ ಕಷ್ಟ ಅಂದಾಗ, ತಮ್ಮ ಆಳದ ನಿಜಾರ್ಥವನ್ನೇ ಹೇಳಿದ್ದರು. ಆದರೆ ಕಲಿಯಲು ತಯಾರಿರುವ, ಕಲಿಕೆ ನಿಜಕ್ಕೂ ಬೇಕಾಗಿರುವ ತಲೆಮಾರುಗಳು ಬರುತ್ತಲೇ ಇರುವಾಗ, ಕಲೆಯನ್ನು ಕಲಿಸಲಾಗದಿದ್ದರೂ ಕೌಶಲವನ್ನಂತೂ ಕಲಿಸಬಹುದು ಎಂದು ವಾದಿಸುವ ಗೆಳೆಯರೂ ಇದ್ದರು. ಈ ವಾದದ ಒಂದು ಪ್ರಾತಿನಿಧಿಕ ರೂಪವಾಗಿ ನಾಟಕ, ಧಾರಾವಾಹಿ, ಸಿನಿಮಾಗಳ ನಿರ್ದೇಶಕರಾದ ಗೆಳೆಯ ಬಿ. ಸುರೇಶ್ ಬರೆದ ಪತ್ರ:
‘ಕಲಿಸುವುದು ‘ಅಸಾಧ್ಯ’ ಎನ್ನುವವರ ಸಂಖ್ಯೆ ಹೆಚ್ಚಿರುವಾಗ 'ಇದೂ ಸಾಧ್ಯ' ಎನ್ನುವ ಅಲ್ಪಸಂಖ್ಯಾತ ಗುಂಪಿನವನಾಗಿ ಕೆಲವು ಮಾತುಗಳನ್ನು ಹಂಚಿಕೊಳ್ಳುವೆ.

‘ಯಾವುದೇ ಕಲೆಯನ್ನು ಅದು ಕಲಿಯುವ ವ್ಯಕ್ತಿಗೆ ಬದುಕಿನ ಪ್ರಶ್ನೆಯಾಗದೆ ಇದ್ದರೆ ಕಲಿಸುವುದು ಅಸಾಧ್ಯ. ಬಹುತೇಕ ಕಲಿಯಲು ಬರುವವರು ಚಿತ್ರಕತೆ ರಚನೆ ಅಥವಾ ಕತೆ ಬರೆಯುವುದನ್ನು ಹವ್ಯಾಸವಾಗಿ ಕಲಿಯಲು ಬರುತ್ತಾರೆ. ಅಂತಹವರಿಗೆ ‘ಸಾಧನಗಳನ್ನು, ಕೌಶಲಗಳನ್ನು ಕಲಿಸಬಹುದು. ನಂತರ ಆಯಾ ಕಲಿಯುವ ವ್ಯಕ್ತಿಯ ಸ್ವಂತ ಪರಿಶ್ರಮ ಹಾಗೂ ತೊಡಗಿಕೊಳ್ಳುವ ದೃಷ್ಟಿಕೋನವನ್ನು ಆಧರಿಸಿ ಆಯಾ ವ್ಯಕ್ತಿ ಲೇಖಕ ಆಗಬಹುದು, ಆಗದೆಯೂ ಉಳಿಯಬಹುದು’ ಎಂಬುದು ಪ್ರಚಲಿತದಲ್ಲಿರುವ ಮಾತು. ಆದರೆ ನನ್ನ ಅನುಭವ ಭಿನ್ನವಾದುದು.

‘ಕಳೆದ ನಾಲ್ಕು ದಶಕದಿಂದ ದೃಶ್ಯ ಮಾಧ್ಯಮಗಳಿಗೆ ಬರೆಯುತ್ತಿರುವ ನಾನು ಹಲವು ಹೊಸಬರನ್ನು ಈ ಉದ್ಯಮಕ್ಕೆ ಶೃತಿಗೊಳಿಸಿದ್ದೇನೆ. ಅವರಲ್ಲಿ ಹಲವರು ಇಂದು ದೃಶ್ಯ ಮಾಧ್ಯಮದ ಖ್ಯಾತನಾಮರಾಗಿದ್ದಾರೆ. ಇವರೆಲ್ಲರೂ ನನ್ನ ಬಳಿ ಕೆಲಸಕ್ಕೆ ಬಂದಾಗ ದೃಶ್ಯ ಮಾಧ್ಯಮಕ್ಕೆ ಬರೆಯುವುದರ ಗಂಧ ಗಾಳಿ ಇಲ್ಲದವರಾಗಿದ್ದರು ಎಂಬುದಂತೂ ಸತ್ಯ. ಇವರನ್ನು ಶೃತಿಗೊಳಿಸಲು ನಾನೇನು ಮಾಡುತ್ತಿದ್ದೆ ಎಂಬುದನ್ನು ಗಮನಿಸೋಣ. 

‘ಒಂದು ತಂಡ ಕಟ್ಟುವುದು ಎಂದರೆ ಅದೊಂದು ಬಹುಮುಖ್ಯ ಪ್ರೊಸೆಸ್. ಇಲ್ಲಿಗೆ ನಾವೇ ಆರಿಸಿದ ವ್ಯಕ್ತಿಗಳು ಬರಬಹುದು ಅಥವಾ ಓದು ಮುಂದುವರೆಸಲಾಗದೆ, ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು ಬರುವವರೂ ಇರಬಹುದು. ನನ್ನ ತಂಡದಲ್ಲಿ ಬಹುತೇಕ ಎರಡನೆಯ ಬಗೆಯವರೇ ಹೆಚ್ಚು. ಹೀಗೆ ತಂಡಕ್ಕೆ ಸೇರಿದವರಿಗೆ ನಾನು ನೀಡುತ್ತಿದ್ದ ಮೊದಲ ಕೆಲಸ- ನನ್ನ ಲೈಬ್ರರಿಯಲ್ಲಿ ಇರುವ ಪುಸ್ತಕಗಳನ್ನು ಓದಿ ಮತ್ತು ಸಿನಿಮಾಗಳನ್ನು ನೋಡಿ, ಅವುಗಳ ಕುರಿತು- ವಿಮರ್ಶೆ ಅನ್ನಲಾಗದ ಆದರೆ ಕಥನ ಬರೆಯಲು ಬೇಕಾದ-  ಅಗತ್ಯವಾಗಿ ಗಮನಿಸಬೇಕಾದ ಟಿಪ್ಪಣಿ ಬರೆಯಲು ತಿಳಿಸುವುದು. ಆರಂಭದಲ್ಲಿ ತೆಳುವಾಗಿ, ಓದಿದ ಕತೆಯನ್ನು ಮರಳಿ ಬರೆದಂತೆ ಬರೆಯುವ ಹೊಸಬರಿಗೆ, ನಿಧಾನವಾಗಿ ಅವುಗಳಲ್ಲಿ ಇರುವ ಗ್ರಾಫ್ ಗುರುತಿಸುವುದನ್ನು, ಚಿತ್ರಿಕೆಗಳ (ಷಾಟ್ಸ್) ಪಟ್ಟಿ ಮಾಡುವುದನ್ನು ಕಲಿಯುವ ಶಕ್ತಿ ಬರುತ್ತದೆ. 

ಆ ಹಂತ ಕೆಲವರಿಗೆ ಎರಡು ಮೂರು ತಿಂಗಳಲ್ಲಿ ಸಾಧ್ಯವಾದರೆ, ಕೆಲವರಿಗೆ ವರ್ಷಗಳ ಅವಧಿ ದಾಟಬಹುದು. ನಂತರದ ಕೆಲಸ ನಮ್ಮ ತಂಡ ಬೇರೆ ಬೇರೆ ಚಿತ್ರಕತೆಗಳನ್ನು ಸಿದ್ಧಪಡಿಸುವಾಗ ನಡೆಸುವ ಚರ್ಚೆಗಳಲ್ಲಿ ಹೊಸಬರಿಗೆ ಹಾಜರಿದ್ದು, ಟಿಪ್ಪಣಿ ಮಾಡಲು ಅವರಿಗೆ ಹೇಳುವುದು. ಈ ಪ್ರಯೋಗದಿಂದ ಹೊಸಬರಿಗೆ ತಾವು ನೋಡುತ್ತಿದ್ದ ಸಿನಿಮಾ, ಓದುತ್ತಿದ್ದ ಕತೆ, ಕಾದಂಬರಿ ಅರ್ಥಗ್ರಹಿಕೆ ಬದಲಾಗಲು ಆರಂಭ ಆಗುತ್ತದೆ. ಈ ಹಂತ ಸಂಪೂರ್ಣ ದಾಟುವ ಮೊದಲೇ ಅವರಿಗೆ ನಾವೇ ಮಾಡಬೇಕು ಎಂದುಕೊಂಡಿರುವ ಕಥೆಯೊಂದನ್ನು ಕೊಟ್ಟು, ಸ್ವತಂತ್ರವಾಗಿ ಚಿತ್ರಕತೆ ಬರೆಯಲು ಹೇಳುತ್ತೇವೆ. ಬರೆದರೆ ಮಾತ್ರ ಸಂಬಳ ಸಿಗುತ್ತದೆ ಎಂದು ತಿಳಿಸುತ್ತೇವೆ. ಬದುಕುವ ಹಸಿವು ಆಯಾ ಹೊಸಬರಿಂದ ಬರೆಸುತ್ತದೆ. ಅದರಿಂದ ಬರುವ ಮೊದಲ ಬರಹ ಸಂಪೂರ್ಣ ತಪ್ಪೇ ಆಗಿರಬಹುದು. ಆ ತಪ್ಪು ಸರಿಪಡಿಸುತ್ತಾ, ಅದರಲ್ಲಿ ಇರುವ ಹೊಸತನ್ನು ಮೆಚ್ಚುತ್ತಾ ಪೂರ್ಣ ಪ್ರಮಾಣದ ಚಿತ್ರಕಥೆಯನ್ನು ನಾವು ರೂಪಿಸುವಾಗ ಹೊಸಬರಿಗೆ ಬೃಹತ್ ಅನುಭವ ಸಹಿತ ಪಾಠ ಆಗುತ್ತದೆ. ಹೀಗೆ ಬರೆಯುತ್ತಾ, ಎಡವುತ್ತಾ ಏದುಸಿರು ಬಿಟ್ಟು ಓಡುತ್ತಾ ಹೊಸಬರು ಕೆಲಸ ಕಲಿಯಲು ಆರಂಭಿಸುತ್ತಾರೆ. 

‘ಅಲ್ಲಿಂದಾಚೆಗೆ ಹೊಸಬರಿಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಹೇಳಲಾಗುತ್ತದೆ. ಆಗ ಚಿತ್ರ ತಯಾರಿಯ ನೇರ ಅನುಭವ ಹೊಸಬರಿಗೆ ಮತ್ತಷ್ಟು ಕಲಿಕೆ ನೀಡುತ್ತದೆ. ನಂತರ ಸಂಕಲನ ವಿಭಾಗದಲ್ಲಿ ಕೆಲಸ ಮಾಡುವಾಗ ಹೊಸಬರಿಗೆ ಚಿತ್ರ ತಯಾರಿಯ ದೊಡ್ಡ ಸತ್ಯಗಳು ಅರಿವಾಗತೊಡಗುತ್ತದೆ. ಹೀಗೆ ದೃಶ್ಯ ಮಾಧ್ಯಮದ ಎಲ್ಲಾ ಮಜಲುಗಳನ್ನು ಕಲಿತವರಿಗೆ ದಿಢೀರನೆ ದೊಡ್ಡ ಜವಾಬ್ದಾರಿ ಕೊಟ್ಟು ಸ್ವತಂತ್ರವಾಗಿ ಕೆಲಸ ಮಾಡಲು ಹಚ್ಚಲಾಗುತ್ತದೆ. ಆಗ ಅವರು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ನಾವೇ ಸರಿಪಡಿಸಿ, ಕೃತಿ ತಯಾರಿ ಆದಾಗ ಹೊಸಬರು ಬೃಹತ್ ಅನುಭವ ಕೋಶ ಹೊಂದಿದವರಾಗಿರುತ್ತಾರೆ.

‘ಈ ಕ್ರಮದಲ್ಲಿ ನನ್ನ ತಂಡದ ಭಾಗವಾಗಿ ಚಿತ್ರಕತೆ, ಸಂಭಾಷಣೆ ಬರೆಯುವುದನ್ನು ಕಲಿತವರ ಬೃಹತ್ ಪಟ್ಟಿಯನ್ನು ಕೊಡಬಹುದು. ಅವರಲ್ಲಿ ಕೆಲವರು ಈಗಾಗಲೇ ಕತೆ, ಕವನ ಬರೆಯುವುದನ್ನು ಕಲಿತಿದ್ದವರು ನಮ್ಮ ತಂಡದಲ್ಲಿ ಚಿತ್ರಕತೆ ಬರೆಯುವುದನ್ನು ರೂಢಿಸಿಕೊಂಡವರು; ಇನ್ನು ಹಲವರು ಏನನ್ನೂ ಸರಿಯಾಗಿ ಬರೆಯಲು ಕಲಿತಿಲ್ಲದವರು ನಮ್ಮ ತಂಡದ ಜೊತೆಗೆ ಕೆಲಸ ಮಾಡುತ್ತಾ ಇಂದು ನಾಡಿನ ಖ್ಯಾತನಾಮ ಬರಹಗಾರರಾಗಿದ್ದಾರೆ. 

‘ಈ ಪ್ರೊಸೆಸ್ಸನ್ನು ಸರಳವಾಗಿ ಹೀಗೆನ್ನಬಹುದು; ಈಜು ಬರದವನನ್ನು ಒಮ್ಮೆಗೇ ನೀರಿಗೆ ತಳ್ಳುವುದು. ಆಗ ಬದುಕುವ ಅನಿವಾರ್ಯವೇ ಆಯಾ ವ್ಯಕ್ತಿಗೆ ಕೈ ಕಾಲು ಬಡಿಯುತ್ತಾ ಈಜುವುದನ್ನು ಕಲಿಸುತ್ತದೆ. ಈ ಬಗೆಯ ಪ್ರಯೋಗದಿಂದ ಈವರೆಗೆ ನಮ್ಮ ತಂಡದ ಮೂಲಕ ಹೊರಬಂದಿರುವ ದೊಡ್ಡ ಪಡೆಯೇ ಇದೆ ಎಂಬುದು "ಬರೆಯುವುದನ್ನು ಕಲಿಸಲು ಸಾಧ್ಯ" ಎಂದು ಸಾಬೀತುಪಡಿಸುತ್ತದೆ. 

‘ಇದೇ ಪ್ರೊಸೆಸ್ ಮೂಲಕ ಸೋತು ಹತಾಶರಾಗಿದ್ದ ಮತ್ತು ಅವಕಾಶ ಇಲ್ಲದಂತಾಗಿದ್ದ ನಿರ್ದೇಶಕರನ್ನು ಮರಳಿ "ಯಶಸ್ವಿ ನಿರ್ದೇಶಕರು" ಎನಿಸಿಕೊಳ್ಳುವಂತೆ ಮಾಡಿದ ಉದಾಹರಣೆಗಳು ಸಹ ಹೇರಳವಾಗಿವೆ.’

ಬಿ. ಸುರೇಶರ ಅಭಿಪ್ರಾಯವನ್ನು ವಿಸ್ತರಿಸುವ ಹಿರಿಯ ಲೇಖಕ ಉದಯಕುಮಾರ ಹಬ್ಬು ಹಾಗೂ ಕತೆಗಾರ, ನಿರ್ದೇಶಕ ಮೌನೇಶ್ ಬಡಿಗೇರ್ ಮಾತುಗಳನ್ನು ಕಳೆದ ವಾರದ ಬರಹದ (READ HERE) ಕಾಮೆಂಟ್ಸ್ ವಿಭಾಗದಲ್ಲಿ ನೀವು ಗಮನಿಸಿರಬಹುದು.

ಕೊನೆ ಟಿಪ್ಪಣಿ
ಮತ್ತೆ ಬಂದ ಗಾಳಿ ಬೆಳಕು!

ಶೇಕ್‌ಸ್ಪಿಯರನ ‘ರೋಮಿಯೋ ಅ್ಯಂಡ್ ಜೂಲಿಯೆಟ್’ ನಾಟಕದಲ್ಲಿ ಜೂಲಿಯಟ್ ರೋಮಿಯೋಗೆ ಪ್ರಶ್ನೆಯೆಸೆದು ತಾನೇ ಉತ್ತರ ಕೊಡುವ ಕೋಮಲ ಆಟ ನೋಡಿ: 

What is in a name? That which we call a rose
By any name would smell as sweet’

ಜೂಲಿಯಟ್ ಬಣ್ಣನೆಯನ್ನು ಓದಿರುವಂತೆ ಕಾಣುವ ಕವಯಿತ್ರಿ ಗರ್ಟ್ರೂಡ್ ಸ್ಟೈನ್ ‘ಸೇಕ್ರೆಡ್ ಎಮಿಲಿ’ ಪದ್ಯದಲ್ಲಿ ಈ ರೂಪಕವನ್ನು ಇನ್ನಷ್ಟು ಸುಂದರವಾಗಿಸಿದಳು: Rose is a rose is a rose is a rose. ಗದ್ಯದಲ್ಲಿ ಕಿರಿಕಿರಿ ಎನ್ನಿಸುವ ಪುನರಾವರ್ತನೆ ಪದ್ಯದಲ್ಲಿ ಆಟವಾಗಿ, ಆನಂದ ಹುಟ್ಟಿಸಬಲ್ಲದು! ಈ ಸಾಲಿನಲ್ಲಿ ಮೊದಲು ಬರುವ Rose ಒಬ್ಬ ಹುಡುಗಿಯ ಹೆಸರು ಕೂಡ ಎಂದು ಊಹಿಸಬಹುದು. ಈ ಪದ್ಯ ಪ್ರಖ್ಯಾತ ಅಮೆರಿಕನ್ ಕವಯಿತ್ರಿ ಎಮಿಲಿ ಡಿಕಿನ್ಸನ್ ಕುರಿತಾದದ್ದು ಎನ್ನುವವರಿದ್ದಾರೆ. ಈ ಸಾಲನ್ನು ಶೇಕ್‌ಸ್ಪಿಯರನದೆಂದೇ ತಿಳಿದವರಿದ್ದಾರೆ. ಹಾಗೇ ತಿಳಿದಿದ್ದ ನನ್ನನ್ನೂ ಗೂಗಲ್ ತಿದ್ದಿದೆ!

ಇದ್ದಕ್ಕಿದ್ದಂತೆ ಈ ಬಗೆಯ ಹೆಸರಿನ ರೂಪಕಗಳು ನೆನಪಾಗಲು ಈ ಅಂಕಣಕ್ಕೆ ‘ಗಾಳಿ ಬೆಳಕು’ ಎಂಬ ಹೆಸರು ಬಂದ ಗಳಿಗೆ ಕೂಡ ಕಾರಣ. ಕಳೆದ ವಾರ ಸಂಜೆ, ‘ನಿಮ್ಮ ಬ್ಲಾಗಿನಲ್ಲಿ ನಿಮ್ಮ ಹಳೆಯ ‘ಗಾಳಿ ಬೆಳಕು’ ಮತ್ತೆ ಮುಂದುವರಿದಿದೆ’ ಎಂದು ಗೆಳೆಯ, ವಿಮರ್ಶಕ ಸಿರಾಜ್ ಅಹಮದ್ ಹೇಳಿದೇಟಿಗೇ, ‘ಯಾರಪ್ಪ ನೀನು- ನನ್ನೊಳಗಿನ ಬಯಕೆಯನ್ನೇ ಬಡಿದೆಬ್ಬಿಸುತ್ತಿರುವೆ?’ ಎಂಬ ಎಲಿಯಟ್‌ನ ‘ಮರ್ಡರ್ ಇನ್ ದಿ ಕೆಥೆಡ್ರಲ್’ನ ನಾಟಕದ ಥಾಮಸ್ ಬೆಕೆಟ್ ಉದ್ಗರಿಸಿದ ಸಾಲು ನೆನಪಾಗತೊಡಗಿತು. ಯಾಕೆಂದರೆ, ಗಾಳಿ ಬೆಳಕು ಎಂಬ ಹೆಸರನ್ನು ಈ ಅಂಕಣಕ್ಕೂ ಇಡಬೇಕೆಂಬುದು ನನ್ನ ಒಳಾಸೆಯೂ ಆಗಿತ್ತು!

‘ಗಾಳಿ ಬೆಳಕು’ ಅಂಕಣ ಮೊದಲು ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲಿ ಶುರುವಾಗಿ, ಆಮೇಲೆ ಚಂದ್ರಶೇಖರ ಐಜೂರ್ ಸಂಪಾದಕತ್ವದ ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಮುಂದುವರಿದು, ಪುಸ್ತಕವಾಯಿತು. ಈಗ ಅದೇ ಹೆಸರನ್ನು ಮತ್ತೆ ಕಂಡ ಇಂಗ್ಲಿಷ್ ಪ್ರೊಫೆಸರುಗಳು ಶೇಕ್‌ಸ್ಪಿಯರ್, ಗರ್ಟ್ರೂಡ್ ಸ್ಟೈನ್ ಇಬ್ಬರ ಮಾತನ್ನೂ ಪಲ್ಲಟಗೊಳಿಸಿ, ‘ಎ ಥಾರ್ನ್ ಈಸ್ ಎ ಥಾರ್ನ್ ಈಸ್ ಎ ಥಾರ್ನ್ ಈಸ್ ಎ ಥಾರ್ನ್, ಕಾಲ್ ಇಟ್ ಬೈ ಎನಿ ನೇಮ್’ ಎಂದು ಆಡಿಕೊಳ್ಳದಿರಲಿ!

 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:


Recent Posts

Latest Blogs



Kamakasturibana

YouTube



Comments

3 Comments



| Suresha B

ಗುಡ್ ಕಾಮ್ರೇಡ್...

\r\n\r\n

ಈ ಬಗೆಯ ಆರೋಗ್ಯಕರ ಚರ್ಚೆಗಳು ಆಗಾಗ ಮಾಡುತ್ತಿರಬೇಕು.

\r\n\r\n

ಅದು ಎಲ್ಲರಿಗೂ ಒಳ್ಳೆಯದನ್ನು ಮಾಡಬಹುದು.

\r\n


| Jyothilakshmi H

ಸರ್ ನಿಮ್ಮ ತಯಾರಿ ಕತೆ ಅದ್ಬುತವಾಗಿ ಇದು ಒಬ್ಬ ಸಾಮಾಜಿಕ ಪ್ರಜ್ಞೆ ಯುಳ್ಳ ಲೇಖಕ, ಚಿಂತಕನ ಮಾನಸಿಕ ಸ್ಥಿತಿಯುಕೂಡ ಅನಿಸುತ್ತೆ ಸರ್ ಕತೆ ಚೆನ್ನಾಗಿದೆ ಸರ್ 

\r\n


| Gangadhara BM

ನಮಸ್ತೆ ಸರ್,

\r\n\r\n

'ಬರವಣಿಗೆಯ ತಾಲೀಂ'

\r\n\r\n

ಅನಿವಾರ್ಯ ಅನುಭವವಾಗಿ ಆರಂಭವಾಗಿ

\r\n\r\n

ಅತ್ಯಗತ್ಯ ಸಂವಹನವಾಗುವ ಕಥನವೆ ಬರಹಗಾರನ ಬದುಕು!

\r\n\r\n

 

\r\n\r\n

ಸೂಪರ್‌ ಸರ್. ಧನ್ಯವಾದಗಳು

\r\n




Add Comment