'ಟ್ರ್ಯಾಜಿಡಿ'ಯ ದೇಶಿ ಸ್ವೀಕಾರ
by Nataraj Huliyar
ಈ ಅಂಕಣದಲ್ಲಿ ಕೆಲವು ವಾರಗಳ ಕೆಳಗೆ ಬರೆದ '೧೨ ಅಕ್ಟೋಬರ್ ೧೯೬೭’ ಲೇಖನ ನಿಮಗೆ ನೆನಪಿರಬಹುದು. (CLICK HERE) ಲೋಹಿಯಾರ ಕೊನೆಯ ದಿನಗಳ ಬಗ್ಗೆ ಬರೆಯುತ್ತಾ ಅವರೊಬ್ಬ ದುರಂತ ನಾಯಕ ಎಂಬ ಮಾತು ಅಲ್ಲಿ ಬಂದಿತ್ತು.
ಈ ಅಂಕಣವನ್ನು ಗಂಭೀರವಾಗಿ ಓದಿ, ಪ್ರತಿಕ್ರಿಯಿಸುವ ಗೆಳೆಯ-ಚಿಂತಕ ಬಂಜಗೆರೆ ಜಯಪ್ರಕಾಶ್ ಈ ಬಣ್ಣನೆಯ ಬಗ್ಗೆ ಒಂದು ಪ್ರಶ್ನೆಯನ್ನೆತ್ತಿದರು: 'ಲೋಹಿಯಾರ ಕಡೆಯ ದಿನಗಳ ಚಿತ್ರಣ ಕೊಡುವಾಗ ಅವರನ್ನು ದುರಂತ ನಾಯಕ ಅನ್ನುವ ವಿಶೇಷಣದಿಂದ ಗುರುತಿಸುವುದು ಬೇಕೇ? ಅವರ ಕನಸುಗಳು ಪೂರ್ತಿ ಈಡೇರದಿದ್ದ ಮಾತ್ರಕ್ಕೆ ಅವರು ದುರಂತ ನಾಯಕರಾಗುವ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ಜಗತ್ತಿನಲ್ಲಿ ಯಾವ ಮಹಾನ್ ಚಿಂತಕನ ಕನಸುಗಳು ಪೂರ್ತಿ ಸಾಕಾರಗೊಂಡಿವೆ? ವಿಶಿಷ್ಟ ಜನನಾಯಕ ಲೋಹಿಯಾಗೆ ನಮನಗಳು.’
ಬಂಜಗೆರೆಯವರ ಮಾತು 'ದುರಂತ’ ಎಂಬ ಪದದ ಬಗ್ಗೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡಿತು. ಗ್ರೀಕ್ ಭಾಷೆಯ 'ಟ್ರ್ಯಾಜಿಡಿ’ ಪದವನ್ನು-ಪರಿಕಲ್ಪನೆಯನ್ನು ನಾವು ಸರಿಯಾಗಿ ಅನುವಾದಿಸಿಕೊಂಡಿಲ್ಲ ಎಂದು ಟ್ರ್ಯಾಜಿಡಿಗಳನ್ನು ಟೀಚ್ ಮಾಡುವಾಗಲೆಲ್ಲ ಅನ್ನಿಸುತ್ತಿತ್ತು. ಈ ಸಲ ಮತ್ತೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದ ಹುಡುಗ, ಹುಡುಗಿಯರಿಗೆ ಗ್ರೀಕ್ ಟ್ರ್ಯಾಜಿಡಿಗಳನ್ನು ಪರಿಚಯಿಸುವಾಗ ಈ ಪ್ರಶ್ನೆ ಮರಳಿ ಬಂತು.
ಈ ಎನ್.ಎಸ್.ಡಿ. ಕ್ಲಾಸಿನಲ್ಲಿ ಭಾರತದ ವಿವಿಧ ಭಾಗಗಳ, ಹಲವು ಭಾಷೆಗಳ ಪಾದರಸದಂಥ ಹುಡುಗ, ಹುಡುಗಿಯರು ಕೆಲವರಿದ್ದರು. ಅವರಲ್ಲಿ ಹಲವರ ಕಲಿಕೆಯ ಕಾತರ ಕಂಡ ನನಗೆ, ಕಲಿಕೆ ತಮ್ಮ ಜೀವನ್ಮರಣದ ಪ್ರಶ್ನೆ ಎಂದು ಮನವರಿಕೆಯಾದವರು ಮಾತ್ರ ಹೀಗೆ ಕಲಿಯಬಲ್ಲರು ಎಂಬುದು ಮತ್ತೆ ಗೊತ್ತಾಯಿತು. ಜೀವನ ನಡೆಸಲು ಟೈಲರಿಂಗ್, ಮೆಕ್ಯಾನಿಕ್ ಕೆಲಸ ಕಲಿಯುವ ಹುಡುಗ ಹುಡುಗಿಯರು ಹೀಗೆ ಕಲಿಯುವುದನ್ನು ನೋಡಿದ್ದೇನೆ. ಒಂದು ವರ್ಷದ ಎನ್.ಎಸ್.ಡಿ.ಕೋರ್ಸ್ ಮುಗಿದ ತಕ್ಷಣ ಈ ಹುಡುಗ ಹುಡುಗಿಯರು ವೃತ್ತಿಪರ ರಂಗಭೂಮಿಯಲ್ಲಿ ತೊಡಗಲೇಬೇಕಾಗಿತ್ತು. ಆದ್ದರಿಂದ ಇಲ್ಲಿ ಕಲಿತ ಎಲ್ಲವೂ ಅವರ ವೃತ್ತಿ ಬದುಕಿಗೆ ಅತ್ಯಗತ್ಯ ಎಂಬ ಪ್ರಜ್ಞೆ ಅವರಿಗಿತ್ತು. ಪ್ರತಿ ರಂಗಪರಿಕಲ್ಪನೆಯನ್ನೂ ಅವರು ಮತ್ತೆ ಮತ್ತೆ ಕೇಳಿ ತಿಳಿದುಕೊಳ್ಳುತ್ತಿದ್ದರು. 'ಟೀಚಿಂಗ್ ಈಸ್ ಲರ್ನಿಂಗ್’ ಎಂದು ನಂಬಿರುವ ನನಗೆ ಅವರಿಂದ ತಿಳಿದುಕೊಳ್ಳುವ ಸರದಿ ಬಂತು:
‘ಟ್ರ್ಯಾಜಿಡಿ ಎಂಬ ಪದವನ್ನು ನಿಮ್ಮ ನಿಮ್ಮ ಭಾಷೆಗಳಲ್ಲಿ ಹೇಗೆ ಅನುವಾದಿಸಿಕೊಂಡಿದ್ದೀರಿ?’ ಎಂದೆ.
ಅವರು ಹುಡುಕತೊಡಗಿದರು: ‘ವಿಷಾದ ನಾಟಕಂ’ (ತೆಲುಗು) 'ಸೋಕ ನಾಟಕಂ’ (ತಮಿಳು) ಎಂಬ ಅನುವಾದಗಳಿದ್ದವು. 'ಶೋಕಾಂತಿಕ್’ 'ದುಃಖಾಂತ್’ ಅನುವಾದಗಳು ಇತರ ಭಾಷೆಗಳಲ್ಲಿದ್ದವು. ಒಂದು ಭಾಷೆ ‘ಟ್ರ್ಯಾಸ್ಡಿ’ ಎಂದು 'ಟ್ರ್ಯಾಜಿಡಿ’ ಎಂಬುದನ್ನೇ ಲಿಪ್ಯಂತರ ಮಾಡಿಕೊಂಡಿತ್ತು.
ಕನ್ನಡ ಭಾಷೆ 'ಟ್ರ್ಯಾಜಿಡಿ’ಯನ್ನು ದುರಂತ ನಾಟಕ, ದುಃಖಾಂತ ನಾಟಕ, ರುದ್ರ ನಾಟಕ, ಗಂಭೀರ ನಾಟಕ ಮುಂತಾಗಿ ಅನುವಾದ ಮಾಡಿಕೊಂಡಿದೆ. ಶ್ರೀಕಂಠೇಶಗೌಡ, ಬಿಎಂಶ್ರೀಯವರಿಂದ ಹಿಡಿದು ಎಸ್. ವಿ. ರಂಗಣ್ಣ ಮೊದಲಾದವರು ಆಳವಾಗಿ ಯೋಚಿಸಿ ರೂಪಿಸಿರುವ ಈ ಪದಪ್ರಯೋಗಗಳಿಗೆ ಕನ್ನಡಿಗರು ಋಣಿಯಾಗಿರಬೇಕು. ಬೇಂದ್ರೆ 'ಟ್ರ್ಯಾಜಿಡಿ’ಯನ್ನು ’ಸಾಯೋ ಆಟ’ ಎಂದು ಕರೆದರು! ಟ್ರ್ಯಾಜಿಡಿಯ ಕನ್ನಡಾನುವಾದದ ಈ ವೈವಿಧ್ಯ ಇತರ ಭಾಷೆಗಳಲ್ಲಿ ಕಾಣಲಿಲ್ಲ.
ಆದರೂ 'ಟ್ರ್ಯಾಜಿಡಿ’ ಎಂಬ ಪದದ ಅರ್ಥ ದುರಂತ, ದುಃಖಾಂತ ಎಂದಾಗಿಬಿಟ್ಟರೆ, ಈ ಪದಗಳು ಈ ನಾಟಕಗಳ ಅಂತ್ಯವನ್ನು ಸೂಚಿಸುವಷ್ಟಕ್ಕೆ ಸೀಮಿತವಾಗುತ್ತವೆ ಎನ್ನಿಸುತ್ತದೆ. 'ರುದ್ರ ನಾಟಕ’ ಹಾಗೂ 'ಗಂಭೀರ ನಾಟಕ’ ಇವು 'ಟ್ರ್ಯಾಜಿಡಿ’ಯ ಅರ್ಥವನ್ನು ಚೆನ್ನಾಗಿ ಹಿಡಿದಿಟ್ಟಿವೆ. ೨೫೦೦ ವರ್ಷಗಳ ಕೆಳಗೆ ಗ್ರೀಕರು ಈ ಅದ್ಭುತ ನಾಟಕ ಪ್ರಕಾರವನ್ನು ರೂಪಿಸಿಕೊಂಡ ಹಿನ್ನೆಲೆಯನ್ನು ನೆನಸಿಕೊಳ್ಳಿ:
'ಟ್ರ್ಯಾಜಿಡಿ’ ಎಂಬ ಪದ ಗ್ರೀಕ್ ಭಾಷೆಯ 'ಟ್ರ್ಯಾಗೋಡಿಯಾ’ ಎಂಬ ಪದದಿಂದ ಹುಟ್ಟಿದೆ. 'ಟ್ರ್ಯಾಗೋಡಿಯಾ’ ಎಂಬ ಪದ 'ಸಾಂಗ್ ಆಫ್ ದ ಗೋಟ್’ ಎಂಬುದರಿಂದ ಹುಟ್ಟಿದೆ. 'ಸಾಂಗ್ ಆಫ್ ದ ಗೋಟ್’ನ ಹಿನ್ನೆಲೆ ಇದು: ಗ್ರೀಕರು ಕಾಳ ಶಕ್ತಿಗಳ ದೇವತೆ ಡಯೋನಿಸಿಸ್ನ ಪೂಜೆಯಲ್ಲಿ ಒಂದು ಗೋಟ್ (ಆಡು) ಬಲಿಕೊಡುತ್ತಿದ್ದರು. ಬಲಿಯಾಗುವ ಆಡಿನ ಆಕ್ರಂದನವೇ 'ಟ್ರ್ಯಾಗೋಡಿಯಾ’ ಆಯಿತು. ಇದು ನಾಟಕ ಪ್ರಕಾರವಾದಾಗ 'ಟ್ರ್ಯಾಜಿಡಿ’ ಆಯಿತು 'ಟ್ರ್ಯಾಗೋಡಿಯಾ’ದ ಅಕ್ಷರಶಃ ಕನ್ನಡಾನುವಾದ: 'ಆಡಿನ ಹಾಡು.’
ಗ್ರೀಕ್ ಟ್ರ್ಯಾಜಿಡಿ ನಾಟಕಗಳ ಯುಗ ಪ್ರವರ್ತಕ ಸೃಷ್ಟಿಕರ್ತರಾದ ಈಸ್ಕಿಲಸ್, ಸೊಫೋಕ್ಲಿಸ್, ಯೂರಿಪಿಡೀಸ್ ಟ್ರ್ಯಾಜಿಡಿಯನ್ನು ಅಸಹಾಯಕ ಮಾನವರ ಆಕ್ರಂದನದ ನಾಟಕವನ್ನಾಗಿ ರೂಪಿಸಿದರು. ಈ ನಾಟಕಗಳ ನಾಯಕ ನಾಯಕಿಯರ ಬದುಕು ದುಃಖಾಂತವಾಗುತ್ತದೆ. ಆದರೆ, ಇಡೀ 'ಟ್ರ್ಯಾಜಿಡಿ’ ನಾಟಕಗಳು ಮಾನವ ಬದುಕಿನ ಊಹಾತೀತ ಸಂಕಷ್ಟ, ಬಿಕ್ಕಟ್ಟು, ದುಃಖಗಳನ್ನು ಕುರಿತು ಧ್ಯಾನಿಸಿದ ಮಾಗಿದ ಮನಸ್ಸುಗಳು ಬರೆದ ಸಾಹಿತ್ಯ ಕೃತಿಗಳು. ಇಲ್ಲಿ ಸಾಮಾನ್ಯ ಅರ್ಥದ ಖಳ ಪಾತ್ರಗಳಿಲ್ಲ.
ಎಲ್ಲಾ ಸರಿಯಿರುವಾಗ ಮಾನವರ ಬದುಕು ಯಾಕೆ ಪತನಗೊಳ್ಳುತ್ತದೆ? ಎಲ್ಲಾ ಸರಿಯಿರುವಾಗ ಮಾನವರು ತಮ್ಮ ಬದುಕನ್ನು ತಾನೇ ನಾಶ ಮಾಡಿಕೊಳ್ಳುವುದೇಕೆ? ತಂತಮ್ಮ ಕ್ರಿಯೆಗಳ ಪರಿಣಾಮ ಗೊತ್ತಿದ್ದೂ ಮಾನವರು ಯಾಕೆ ತಪ್ಪು ನಡೆಯಿಟ್ಟು ದುರಂತವನ್ನಪ್ಪುತ್ತಾರೆ? ಆಕಸ್ಮಿಕಗಳು ಮಾನವ ಬದುಕನ್ನು ಯಾಕೆ ನಿಯಂತ್ರಿಸುತ್ತವೆ? ಮನುಷ್ಯರು ಎತ್ತರಕ್ಕೇರಿ ಯಾಕೆ ಅಷ್ಟು ಭೀಕರವಾಗಿ ಪತನಗೊಳ್ಳುತ್ತಾರೆ? ಈ ಪತನದಲ್ಲಿ ವಿಧಿಯ ಪಾಲೆಷ್ಟು, ಮನುಷ್ಯರ ಕ್ರಿಯೆಯ ಪಾಲೆಷ್ಟು, ಅವರು ಅರಿಯದೇ ಮಾಡಿದ ತಪ್ಪಿನ ಪಾಲೆಷ್ಟು?...
ಇಂಥ ಹಲವು ಫಿಲಸಾಫಿಕಲ್ ಪ್ರಶ್ನೆಗಳನ್ನು 'ಈಡಿಪಸ್’ 'ಅಂತಿಗೊನೆ’ 'ಎಜಾಕ್ಸ್’ 'ಮೀಡಿಯಾ’ 'ಅಗಮೆಮ್ನನ್’ ಮುಂತಾದ ಹತ್ತಾರು ಟ್ರ್ಯಾಜಿಡಿಗಳು ನೋಡುಗರ ಮುಂದಿಡುತ್ತವೆ. ಈ ಪ್ರಶ್ನೆಗಳು ಇವತ್ತಿಗೂ ಬಗೆ ಹರಿದಿಲ್ಲ; ಬಗೆ ಹರಿಯಲಾರವು!
ಹಾಗಾದರೆ 'ಟ್ರ್ಯಾಜಿಡಿ’ಗೆ ತಕ್ಕ ಸಂವಾದಿ ಪದ ಹುಡುಕುವಲ್ಲಿ ಗ್ರೀಕೇತರ ಭಾಷೆಗಳು ಅರೆಯಶಸ್ವಿ ಮಾತ್ರ ಆದವೆ? ಕನ್ನಡದ 'ರುದ್ರ ನಾಟಕ’, 'ಗಂಭೀರ ನಾಟಕ’, ತಮಿಳಿನ 'ಶೋಕ ನಾಟಕ’ ಈ ಮೂರೂ ಟ್ರ್ಯಾಜಿಡಿಯ ಮುಖ್ಯ ಸೂಚನೆಗಳನ್ನು ಹಿಡಿದಂತಿವೆ. ಅಸಹಾಯಕ ಮಾನವರ ಆಕ್ರಂದನ, ದುಃಖಿತ ನೋಟದ ಮೂಲಕ ಬದುಕನ್ನು ಅರಿಯುವ ಮಾಗಿದ ನೋಟ ಇತ್ಯಾದಿ ಅರ್ಥಗಳನ್ನೂ 'ಟ್ರ್ಯಾಜಿಡಿ’ ನಾಟಕ ಸೂಚಿಸುತ್ತದೆ. 'ದುರಂತ’, 'ದುಃಖಾಂತ’ ಪದಗಳು ಇವನ್ನೆಲ್ಲ ಹೇಳದಿದ್ದರೂ, ಟ್ರ್ಯಾಜಿಡಿಗಳನ್ನು ಅನುವಾದಿಸಿಕೊಂಡ ಕನ್ನಡ ಲೇಖಕರು ಇದನ್ನೆಲ್ಲ ಗ್ರಹಿಸಿದ್ದಾರೆ. ಟ್ರ್ಯಾಜಿಡಿ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಲು ಸೊಫೊಕ್ಲಿಸ್ನ 'ಎಜಾಕ್ಸ್’ ನಾಟಕವನ್ನು ಆಧರಿಸಿ ಬಿ.ಎಂ.ಶ್ರೀ 'ಅಶ್ವತ್ಥಾಮನ್’ ನಾಟಕ ಬರೆದರು. ಕುವೆಂಪು 'ಹ್ಯಾಮ್ಲೆಟ್’ ನಾಟಕದ ನೆನಪನ್ನು, ನೆರಳನ್ನು ಹಾಗೂ ಬಿದನೂರು ಸಂಸ್ಥಾನದ ಚರಿತ್ರೆಯನ್ನು ಆಧರಿಸಿ 'ರಕ್ಷಾಕ್ಷಿ’ ಬರೆದರು. ಈ ಇಬ್ಬರೂ ಟ್ರ್ಯಾಜಿಡಿಯ ರುದ್ರ ಗಾಂಭೀರ್ಯವನ್ನು ಈ ನಾಟಕಗಳ ಭಾಷೆ, ವಸ್ತು, ವಸ್ತು ವಿನ್ಯಾಸಗಳ ಆಯಾಮಗಳಲ್ಲೂ ತರಲೆತ್ನಿಸಿದರು. ಟ್ರ್ಯಾಜಿಡಿ ಎಂದರೆ ದುಃಖಾಂತ್ಯ ಮಾತ್ರವಲ್ಲದೆ, ರುದ್ರ ನಾಟಕ, ಗಂಭೀರ ನಾಟಕ ಮುಂತಾಗಿ ಕನ್ನಡ ಸಂಸ್ಕೃತಿ ಟ್ರ್ಯಾಜಿಡಿಯನ್ನು ಸ್ವೀಕರಿಸಿದ ರೀತಿಗೆ ಪುರಾವೆ ಈ ಕನ್ನಡ ಟ್ರ್ಯಾಜಿಡಿಗಳಲ್ಲಿದೆ.
ಲಂಕೇಶರ 'ಈಡಿಪಸ್’ 'ಅಂತಿಗೊನೆ’ ಎಂಬ ಸೊಫೊಕ್ಲಿಸ್ ನಾಟಕಗಳ ಅನುವಾದ; ಸೊಫೋಕ್ಲಿಸ್ನ 'ಎಜಾಕ್ಸ್’ ನಾಟಕದ ಸುಜನಾರ ಅನುವಾದ- ಇವು ಕನ್ನಡ ನಾಟಕದ ಎರಡು ಘಟ್ಟಗಳಲ್ಲಿ, ವಿಭಿನ್ನ ಭಾಷಾ ಶೈಲಿಗಳಲ್ಲಿ ಗ್ರೀಕ್ ಟ್ರ್ಯಾಜಿಡಿಗಳನ್ನು ಸಮರ್ಥವಾಗಿ ಕನ್ನಡಿಸಿದ ಅಪೂರ್ವ ಕೊಡುಗೆಗಳು. 'ಟ್ರ್ಯಾಜಿಡಿ’ ಚೌಕಟ್ಟು ಕೇವಲ ನಾಟಕದ ಕೊನೆಗೆ ಮಾತ್ರ ಸಂಬಂಧಿಸಿರದೆ, ಭಾಷೆಯ ಗಾಂಭೀರ್ಯ, ಜೀವನ ನೋಟ, ಜೀವನದ ದುಃಖಮಯ ತಿರುವುಗಳು ಎಲ್ಲಕ್ಕೂ ಸಂಬಂಧಿಸಿದೆ ಎಂಬುದನ್ನೂ ಕನ್ನಡ ನಾಟಕಕಾರರು ಆಳವಾಗಿ ಗ್ರಹಿಸಿದರು. ಮುಂದೆ ಶೇಕ್ಸ್ಪಿಯರನ ಟ್ರ್ಯಾಜಿಡಿಗಳನ್ನು ಕನ್ನಡಿಸಿದ ಭಗವಾನ್, ಶಿವಪ್ರಕಾಶ್, ರಾಮಚಂದ್ರದೇವ ಮೊದಲಾದವರು ಈ ಪರಂಪರೆಯನ್ನು ಗಂಭೀರವಾಗಿ ಮುಂದೊಯ್ದರು.
ಇಷ್ಟಾಗಿಯೂ 'ಟ್ರ್ಯಾಜಿಡಿ’ ಪದದ ಅನುವಾದದ ಅಪೂರ್ಣತೆಯ ಪ್ರಶ್ನೆ ಹಾಗೇ ಉಳಿಯುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಭಾಷೆಗಳಲ್ಲಿ 'ಟ್ರ್ಯಾಜಿಡಿ’ಗೆ ಕೊಟ್ಟಿರುವ ಸಂವಾದಿ ಪದಗಳು ನಾಟಕದ ಅಂತ್ಯವನ್ನೇ ಹೆಚ್ಚು ಸೂಚಿಸುವಂತಿರುವುದರಿಂದ ಕೂಡ ಈ ಅಪೂರ್ಣತೆ ಎದ್ದು ಕಾಣುತ್ತದೆ. ಆದರೆ ಒಂದು ಶತಮಾನದಷ್ಟು ದೀರ್ಘ ಕಾಲ ಸಂಸ್ಕೃತಿಗಳಲ್ಲಿ ಉಳಿದು, ಬೇರು ಬಿಟ್ಟ ಪದಗಳನ್ನು ಕದಲಿಸುವುದು, ಬದಲಿಸುವುದು ಕಷ್ಟ. ಆದ್ದರಿಂದ ’ಟ್ರ್ಯಾಜಿಡಿ’ ಎನ್ನುವುದು ದುಃಖಮಯ ಅಂತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಜೀವನವನ್ನು, ಅದರಲ್ಲೂ ದುಃಖವನ್ನು, ಗಂಭೀರವಾಗಿ ನೋಡುವ, ಅರಿಯುವ ಕ್ರಮ ಎಂಬುದನ್ನು ಕ್ಲಾಸುಗಳಲ್ಲಿ, ರಂಗಭೂಮಿಯಲ್ಲಿ, ಸಾಂಸ್ಕೃತಿಕ ಚರ್ಚೆಗಳಲ್ಲಿ ಹೊಸ ಹೊಸ ತಲೆಮಾರುಗಳಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಲೇ ಇರಬೇಕಾಗುತ್ತದೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
10 Comments
| Dr. Mohan Mirle
ಟ್ರ್ಯಾಜಿಡಿಯನ್ನು ಉನ್ನತ ಪಾತ್ರವೊಂದರ ದುಃಖಾಂತ್ಯವೆಂದಷ್ಟೆ ಅರಿತಿದ್ದ ನಮಗೆ ಪ್ರಸ್ತುತ ಲೇಖನ ಹಲವು ಉದಾಹರಣೆಗಳೊಂದಿಗೆ ಅದರ ವಿಶಾಲಾರ್ಥವನ್ನು ಮನವರಿಕೆ ಮಾಡಿಕೊಟ್ಟಿದೆ. ‘ಟ್ರ್ಯಾಜಿಡಿ’ಯ ಗ್ರೀಕ್ ಪದದ ಮೂಲ ‘ಟ್ರ್ಯಾಗೋಡಿಯಾ’(ಆಡಿನ ಹಾಡು) ಹಿನ್ನೆಲೆ ಅರ್ಥಪೂರ್ಣವಾಗಿದ್ದು, ಈ ಪರಿಕಲ್ಪನೆಯನ್ನು ವಿವರಿಸಲು, ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥೈಸಲು ನೆರವಾಗಿದೆ.
| Sanganagowda
ಜಾನಪದ ಹೆಣ್ಣುಮಗಳೊಬ್ಬಳು \'ಹಾದಿಡಿದು ಹೋಗೋರೆ ಹಾಡೆಂದು ಹೇಳ್ಬೇಡಿ, ಹಾಡಲ್ಲವಿದು ನನ್ನ ಒಡಲ ಉರಿ\' ಎನ್ನುವಂತೆ. ಇದೊಂದು ಆಡಿನ ಒಡಲ ಉರಿ ಎನ್ನುವುದನ್ನು ಗೊತ್ತುಪಡಿಸಿದ ನಿಮಗೆ ವಂದನೆಗಳು 🙏🙏
| Kavita
\r\n\r\nVery thought provoking article!
| ಹರಿಪ್ರಸಾದ್
ಆಡು ಕಥಾ ಅಥವಾ ಆಡುಗಾಥ.\r\nಈಚಿನ ಮಲೆಯಾಳಂ ಸಿನಿಮಾವೊಂದು*ಆಡುಜೀವಿತಂ* ಎಂದಿತ್ತು. ಅದು ಕೂಡ ರುದ್ರಗಾಥೆಯೇ
| GANGADHAR
ನನ್ನ ನಾಳಿನ ತರಗತಿಯೊಂದರಲ್ಲಿ ಟ್ಯ್ರಾಜಿಡಿ ಕುರಿತ ಟೀಚಿಂಗಿಗೆ ಈ ಬರಹದ ಮೂಲಕ ಹೊಸ ನೋಟ ಸಿಕ್ಕಿತು
| ವಿಜಯೇಂದ್ರ ಕುಮಾರ್ ಜಿ.ಎಲ್.
ಗ್ರೀಕ್ ಮೂಲದ ಟ್ರ್ಯಾಜಿಡಿ Concept ಅನ್ನು ನಮ್ಮ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗ ಸರಿಯಾಗಿ ಅರ್ಥ ಮಾಡಿಕೊಳ್ಳಲೂ ಇಲ್ಲ, ಈ ಪರಿಕಲ್ಪನೆಯನ್ನು ಸರಿಯಾಗಿ ದುಡಿಸಿಕೊಳ್ಳಲೂ ಇಲ್ಲ. ಇದೇ ನಮ್ಮ ಟ್ರ್ಯಾಜಿಡಿ! ರಂಗಭೂಮಿ ಮತ್ತು ಚಿತ್ರರಂಗಗಳನ್ನು ತೌಲನಿಕವಾಗಿ ಗಮನಿಸಿದರೆ, ಈ ವಿಚಾರದಲ್ಲಿ ರಂಗಭೂಮಿ ಸ್ವಲ್ಪ ಪರವಾಗಿಲ್ಲ ಅನ್ನಿಸುವ ಮಟ್ಟಿಗೆ ನಿರ್ವಹಿಸಿದೆ. \r\n\r\nನಾಯಕನ ಹೀರೋಯಿಸಂ ಪ್ರೂವ್ ಮಾಡುವುದಕ್ಕಾಗಿಯೇ, ನಮ್ಮಲ್ಲಿ ತಯಾರಾಗುವ ಬಹಳಷ್ಟು ಚಲನಚಿತ್ರಗಳು ಖಳನಾಯಕನ ಸಾವಿನಲ್ಲಿ ಮತ್ತು ನಾಯಕನ ಗೆಲುವಿನಲ್ಲಿ ಸುಖಾಂತ್ಯಗೊಳ್ಳುತ್ತವೆ. ವಾಸ್ತವದಲ್ಲಿ ಜೀವನ ಟ್ರ್ಯಾಜಿಕ್ ಆಗಿದ್ದರೂ, ʼಶುಭಂ ಮಂಗಳಂʼ ಎಂದು ಅಂತ್ಯವಾಗುವ ಚಲನಚಿತ್ರಗಳನ್ನು ನೋಡಿ ರಿಲ್ಯಾಕ್ಸ್ ಆಗುವ ಪ್ರೇಕ್ಷಕವರ್ಗದಲ್ಲಿ ಸಮಸ್ಯೆಯಿದೆಯೋ ಅಥವಾ ಚಿತ್ರತಯಾರಕರಲ್ಲಿ ಸಮಸ್ಯೆ ಇದೆಯೋ- ಈ ಕುರಿತು ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. ಕಲಾಕೃತಿಯನ್ನು ಮತ್ತು ಜೀವನವನ್ನು ಸ್ವೀಕರಿಸುವ ಬಗೆಗಿನ ಇಂಡಿಯನ್ ಸೈಕಲಾಜಿ ಕುರಿತು, ವಿಧಿವಾದದ ಕುರಿತು ಚರ್ಚೆಗಳಾಗಬೇಕಿದೆ.\r\n\r\nಟ್ರ್ಯಾಜಿಡಿಯನ್ನು ಕುರಿತು ನೀವು ನಮ್ಮ ಎಂ.ಎ. ತರಗತಿಯಲ್ಲಿ ಮಾತನಾಡುವಾಗ Greek Tragedies and Shakespearian Tragedies ಎಂದು ವರ್ಗೀಕರಿಸಿ, ಅವುಗಳ ವ್ಯತ್ಯಾಸಗಳನ್ನು ವಿವರಿಸಿದ್ದಿರಿ. ಶೇಕ್ಸ್ ಪಿಯರ್ನ ಟ್ರ್ಯಾಜಿಡಿಗಳಲ್ಲಿ ವಿಧಿ ಮುಖ್ಯವಲ್ಲ. ವ್ಯಕ್ತಿಗಳು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳಿಂದಾಗಿ ಹೇಗೆ ಪತನಗೊಳ್ಳುತ್ತಾರೆ ಎಂಬುದಕ್ಕೆ “ಮ್ಯಾಕ್ಬೆತ್” ಮತ್ತು “ಕಿಂಗ್ ಲಿಯರ್” ಉದಾಹರಣೆ ಕೊಟ್ಟಿದ್ದಿರಿ. ಆದರೆ ಗ್ರೀಕ್ ಟ್ರ್ಯಾಜೆಡಿಗಳಲ್ಲಿ ವಿಧಿ ಹೇಗೆ ಒಂದು ನಿರ್ಣಾಯಕ ಪಾತ್ರವಾಗಿರುತ್ತದೆ ಎಂಬುದನ್ನು \"ದೊರೆ ಈಡಿಪಸ್\" ನಾಟಕದ ಮೂಲಕ ವಿವರಿಸಿದ್ದಿರಿ.\r\n\r\nಗ್ರೀಕರಲ್ಲಿ ವಿಧಿಸಿದ್ಧಾಂತ ಟ್ರ್ಯಾಜೆಡಿಗೆ ದೊಡ್ಡ ತೊಡಕಾಗಲಿಲ್ಲ. ಆದರೆ ಭಾರತೀಯರಲ್ಲಿ ವಿಧಿಸಿದ್ಧಾಂತ ಟ್ರ್ಯಾಜೆಡಿಯ ಪರಿಕಲ್ಪನೆಯನ್ನೇ ಸಡಿಲಗೊಳಿಸಿಬಿಟ್ಟಿತು; ಟ್ರ್ಯಾಜೆಡಿಯ ಗಾಂಬೀರ್ಯತೆಯನ್ನು ಮಸುಕುಗೊಳಿಸಿತು; ರೌದ್ರತೆಯ ತೀವ್ರತೆಯನ್ನು ಕಳೆದುಬಿಟ್ಟಿತು. ಯಾಕೆ ಹೀಗೆ ಎಂಬ ಪ್ರಶ್ನೆ ನನಗೆ ಹಲವು ಸಲ ಕಾಡಿದೆ ಸರ್. \r\n\r\nವರ್ಜಿಲನ ಈನಿಯಡ್ ಮಹಾಕಾವ್ಯದ \"The Tragedy of Dido\" ಅಧ್ಯಾಯವನ್ನು ತೌಲನಿಕ ಸಾಹಿತ್ಯದ ವಿದ್ಯಾರ್ಥಿಗಳಾದ ನಮಗೆ ಕಣ್ಣಿಗೆ ಕಟ್ಟುವಂತೆ ನೀವು ವರ್ಣಿಸಿದ್ದಿರಿ ಸರ್. ಪ್ರಾಚೀನರಲ್ಲಿ ಮಹಾಕಾವ್ಯಗಳೇ ರುದ್ರನಾಟಕಗಳಿಗೆ ಆಕರಗಳಾಗಿದ್ದವೆಂಬ ಹೊಳಹನ್ನು ನೀಡಿದ್ದಿರಿ. ಕೇವಲ ಎರಡು ತರಗತಿಗಳಲ್ಲಿ \"The Tragedy of Dido\" ಎಂಬ ಇಡೀ ಅಧ್ಯಾಯವನ್ನು ಇಂಗ್ಲಿಷಿನಲ್ಲಿ ಓದಿ, ಅತ್ಯಂತ ಪರಿಣಾಮಕಾರಿಯಾಗಿ ಕನ್ನಡದಲ್ಲಿ ವಿವರಿಸಿದ್ದಿರಿ. ಅಂದು ಕ್ಲಾಸ್ ರೂಮಿನಲ್ಲಿನ ನಿಮ್ಮ ಓದು, ವಿವರಣೆ ಮತ್ತು ವ್ಯಾಖ್ಯಾನವನ್ನು ಯಥಾವತ್ತಾಗಿ ಅಕ್ಷರರೂಪಕ್ಕೆ ಇಳಿಸಿದ್ದೇನೆ ಸರ್. ಈಗಲೂ ಬಿಡುವು ಮಾಡಿಕೊಂಡು ಆ ಟಿಪ್ಪಣಿಯನ್ನು ಓದುತ್ತೇನೆ. ಅಷ್ಟು ಎನರ್ಜಿಟಿಕ್ ಆಗಿತ್ತು ನಿಮ್ಮ ಕ್ಲಾಸ್.\r\n\r\nಈಗ \'ಟ್ರ್ಯಾಜಿಡಿ\'ಯ ದೇಶಿ ಸ್ವೀಕಾರ ಎಂಬ ಈ ಅಂಕಣ ಓದುವಾಗ ಮತ್ತೆ ಎಲ್ಲ ನೆನಪಾಗುತ್ತಿದೆ! ಹೊರಗೆ ಮಳೆ ಸುರಿಯುತ್ತಿದೆ!\r\n
| Kusuma B M
\"ಆದ್ದರಿಂದ ’ಟ್ರ್ಯಾಜಿಡಿ’ ಎನ್ನುವುದು ದುಃಖಮಯ ಅಂತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಜೀವನವನ್ನು, ಅದರಲ್ಲೂ ದುಃಖವನ್ನು, ಗಂಭೀರವಾಗಿ ನೋಡುವ, ಅರಿಯುವ ಕ್ರಮ ಎಂಬುದನ್ನು ಕ್ಲಾಸುಗಳಲ್ಲಿ, ರಂಗಭೂಮಿಯಲ್ಲಿ, ಸಾಂಸ್ಕೃತಿಕ ಚರ್ಚೆಗಳಲ್ಲಿ ಹೊಸ ಹೊಸ ತಲೆಮಾರುಗಳಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಲೇ ಇರಬೇಕಾಗುತ್ತದೆ.\" ದುಃಖವನ್ನು ಅರಿಯುವ, ಅನುಭವಿಸುವ ಮತ್ತು ಅಭಿವ್ಯಕ್ತಿ ಗೊಳಿಸುವ ನೆಲೆಯಲ್ಲಿ ಭಿನ್ನತೆ ಕಂಡುಬರುತ್ತದೆ. ಆಸೆಯನ್ನು ಮೀರಬೇಕೆಂಬ ಬುದ್ಧನ ಸಂದೇಶ ದುಃಖ ಇಲ್ಲದ ಒಂದು ಅವಸ್ಥೆಗೆ ತಲುಪಲು ಮನುಷ್ಯನ ಹಂಬಲವನ್ನು ಮತ್ತು ಆ ಪ್ರಯತ್ನವನ್ನು ಪ್ರೇರೆಪಿಸುತ್ತದೆ. ಅಂತೆಯೇ ಜನರ ಅನುಭವ ನುಡಿಯು ಮಾರ್ದನಿಸುತ್ತದೆ ಎಂದರೆ ದುಃಖ ಈ ಜೀವನದಲ್ಲಿ ಬೇಡದ ಆದರೂ ಅನಿವಾರ್ಯವಾಗಿರುವ ಅನುಭವವಾಗಿದೆ. ಹಾಗಾಗಿ ಗಂಭೀರ ನಾಟಕಗಳು ಗಮನ ಸೆಳೆಯುತ್ತವೆ
| Ravi
ಟ್ರ್ಯಾಜಿಡಿ ಕುರಿತ ಲೇಖನ ಉಪಯುಕ್ತವಾಗಿದೆ
| ವಿಕ್ರಮ ವಿಸಾಜಿ
ವಿಕ್ರಮ್: ಆಡಿನ ಆರ್ತನಾದ ಸೂಕ್ತ ಅಲ್ಲವೆ?
| ನಟರಾಜ್ ಹುಳಿಯಾರ್
ಥ್ಯಾಂಕ್ಸ್ ವಿಕ್ರಮ್. \'ಆಡಿನ ಆರ್ತನಾದ\' ಎಂಬ ವರ್ಣನೆ ಚೆನ್ನಾಗಿದೆ. ಆದರೆ \'ಟ್ರ್ಯಾಗೋಡಿಯಾ\' ಪದದ ಗ್ರೀಕ್ ಅರ್ಥ \'ಸಾಂಗ್ ಆಫ್ ದ ಗೋಟ್\'. ಇದೊಂದು ಮೆಟಫರ್. ಅದನ್ನು ಓವರ್ ಟ್ರಾನ್ಸ್ಲೇಟ್ ಅಥವಾ ಅತಿಅನುವಾದ ಮಾಡಬಾರದು. ಸಾಂಗ್ ಕಲೆಯಾದದ್ದರಿಂದ ಅದರಲ್ಲಿ ರಿಲೀಫ್, ವಿಷಾದ, ಆನಂದ, ಸೌಂದರ್ಯಾತ್ಮಕ (ಏಸ್ತೆಟಿಕ್) ಆನಂದ, ಯಾತನೆ ಯಾವುದಾದರೂ ಹೊಮ್ಮಬಹುದು. ಅದರ ಒಂದು ಸೂಚನೆ ಆಡಿನ ಆಕ್ರಂದನ ಅಥವಾ ಆಡಿನ ಆರ್ತನಾದ ಎಂದಾಗಬಹುದು. 🌻
Add Comment