ಇದು ನಿಚ್ಚಂ ಪೊಸತು!

ಇವು ನನಗೆ ನಿತ್ಯ ವಿಸ್ಮಯ ಹುಟ್ಟಿಸುವ ಬೆಳವಣಿಗೆಗಳು: ಕಳೆದ ವಾರ ಇಲ್ಲಿ ಬರೆದ ’ಮಿಂಚುಕತೆಗಳ ಗಾಢ ಸತ್ಯಗಳು’ (READ HERE) ಹಲವು ಲೇಖಕ, ಲೇಖಕಿಯರನ್ನೂ ಆವರಿಸಿಕೊಂಡವು. ಈ ಮಿಂಚುಕತೆಗಳ ಸುತ್ತ ನಿತ್ಯವೂ ಹೊಸ ಹೊಸ ಸೃಜನಶೀಲ ಸ್ಪಂದನಗಳು ಹುಟ್ಟತೊಡಗಿದವು. ಪ್ರತಿಯೊಬ್ಬರಲ್ಲೂ ಇಂಥದೊಂದು ಮಿಂಚು ಪ್ರತಿಭೆ ಅಥವಾ ಸೃಜನಶೀಲ ಕಲ್ಪನಾವಿಲಾಸ ಇದ್ದೇ ಇರುತ್ತದೆ ಎಂಬುದನ್ನು ಇವು ಮತ್ತೆ ಮತ್ತೆ ಖಾತ್ರಿ ಪಡಿಸುವಂತಿದ್ದವು. ಸಾಹಿತ್ಯ ಬರವಣಿಗೆ, ಓದು, ಟೀಚಿಂಗನ್ನು ಗಂಭೀರವಾಗಿ ತೆಗೆದುಕೊಂಡ ವಲಯಗಳು ಸ್ಪಂದಿಸುವ ಈ ಬಿಡುಬೀಸಾದ ಸ್ವಚ್ಛಂದ ರೀತಿ ಚೇತೋಹಾರಿಯಾಗಿತ್ತು.

`ಎಲ್ಲ ವೇಸ್ಟ್ ಆಯ್ತಲ್ರೀ!’ ಎಂದು ತೇಜಸ್ವಿ ನಿಮ್ಮೆದುರು ಹೊರಡಿಸಿದ ಉದ್ಗಾರವೇ ಒಂದು ಮಿಂಚು ಕತೆಯಂತಿದೆ ಎಂದು ಪ್ರೊಫೆಸರ್ ಎಂ.ಜಿ. ಚಂದ್ರಶೇಖರಯ್ಯ ನೆನಪಿಸಿದರು. ಕಳೆದ ವರ್ಷ ಇದೇ ಅಂಕಣದಲ್ಲಿ `ತೇಜಸ್ವಿ ಕಲಿಸುವ ಪಾಠಗಳು’ ಎಂಬ ಬರಹದಲ್ಲಿ ಈ ಉದ್ಗಾರ ಕುರಿತು ಬರೆದಿದ್ದೇನೆ. ಇದರ ಭಾಗಗಳಿರುವ `ತೇಜಸ್ವಿ ಭೇಟಿ; ಮರು ಭೇಟಿ’ ಎಂಬ ಲೇಖನ ನನ್ನ `ಗಾಳಿ ಬೆಳಕು’ (ಪಲ್ಲವ ಪ್ರಕಾಶನ) ಪುಸ್ತಕದಲ್ಲೂ ಇದೆ. ೨೦೦೬ರ ಒಂದು ರಾತ್ರಿ ಗೆಳೆಯರಾದ ಡಾ. ಲಕ್ಷ್ಮೀಪತಿಬಾಬು, ಬಸವರಾಜು ಅವರ ಜೊತೆಗೆ ತೇಜಸ್ವಿಯವರನ್ನು ನೋಡಲು ಬೆಂಗಳೂರಿನ ಅವರ ಮಗಳ ಮನೆಗೆ ಹೋದೆವು. ಆ ಭೇಟಿಯಲ್ಲಿ ಅದೂ ಇದೂ ಮಾತಾಡುತ್ತಾ ಒಂಥರದ ವಿಷಾದದಲ್ಲಿ ಹುಬ್ಬೇರಿಸಿ ತೇಜಸ್ವಿ ಹೊರಡಿಸಿದ ಉದ್ಗಾರ ಇದು: `ಏನ್ರಿ! ಎಲ್ಲ ವೇಸ್ಟ್ ಆಯ್ತಲ್ರೀ!’ 

ತೇಜಸ್ವಿಯವರ ಅಂದಿನ ಉದ್ಗಾರ ಇವತ್ತು ಒಂದು ಸ್ವತಂತ್ರ ಮಿಂಚುಕತೆಯಾಗಿ, ಜೀವನದ ಗಾಢ ದಿಗ್ಭ್ರಮೆಯಾಗಿ ಹಲ ಬಗೆಯ ಅರ್ಥಗಳನ್ನು ಹೊರಡಿಸಬಲ್ಲದು ಎಂಬ ಸತ್ಯ ಈಗ ಮತ್ತೊಮ್ಮೆ ಮಿನುಗತೊಡಗಿತು! 

ತೇಜಸ್ವಿಯವರ ಉದ್ಗಾರವನ್ನು ನೆನೆಯುತ್ತಿದ್ದಾಗ, ೧೯೮೯ರಲ್ಲಿ ಪ್ರಕಟವಾದ ಲಂಕೇಶರ `ಕಲ್ಲು ಕರಗುವ ಸಮಯ’ ಕತೆಯಲ್ಲಿ ಬರುವ ಒಂದು ಮಾತು ಒಂದು ಗಂಭೀರ ಕತೆಯಂತೆ ನನ್ನನ್ನು ಸದಾ ಕೆಣಕುತ್ತಲೇ ಇರುವುದು ನೆನಪಾಯಿತು. ಈ ಕತೆಯಲ್ಲಿ ಬರುವ ಸ್ವಾಮೀಜಿಯ ಉದ್ಗಾರ:

`ಮನುಷ್ಯ ಬಾಯಿ ಬಿಟ್ಟೊಡನೆ ಒಂದು ಸುಳ್ಳಾಡಿರ್‍ತಾನೆ.’ 

ಮಾನವರ ಈವಿಲ್ ಗುಣಗಳನ್ನು ಜೀವಮಾನವಿಡೀ ತಮ್ಮ ಕತೆ, ಕವಿತೆ, ಗದ್ಯ, ಪತ್ರಿಕೋದ್ಯಮಗಳ ಬರಹಗಳಲ್ಲಿ ಶೋಧಿಸಿದ ಲಂಕೇಶರ ಈ ಕಥಾಪಾತ್ರದ ಮಾತನ್ನು ಮಿಂಚುಕತೆಯೆನ್ನಲೆ? ನಮ್ಮೆಲ್ಲರಿಗೂ ಅತ್ಯಗತ್ಯವಾದ ಆತ್ಮಪರೀಕ್ಷೆಯ ಉದ್ಗಾರ ಎನ್ನಲೆ? ದೊಡ್ಡ ಲೇಖಕನೊಬ್ಬನ ಸತ್ಯನಿಷ್ಠ ಫಿಲಾಸಫಿಯೆನ್ನಲೆ?  

ಈ ಥರದ ಗಾಢ ರೂಪಕಗಳ ಮಿಂಚು ನನ್ನೊಳಗೆ ಹಬ್ಬಿಸಿರುವ ಕಾಯಂ ಪ್ರಕಾಶವನ್ನು ನೆನೆಯುತ್ತಿರುವಾಗ ಧಾರವಾಡದ ಹಿರಿಯ ಲೇಖಕಿ ಮಾಲತಿಯವರು ಮೊನ್ನೆ ತಮಗೆ ಥಟ್ಟನೆ ಹೊಳೆದ ಒಂದು ಮಿಂಚು ಕತೆಯನ್ನು ಕಳಿಸಿದರು: 

`ಆಕೆ ತಿರುಗಿ ನೋಡಲಿಲ್ಲ. ಅವನೂ ಬರಲಿಲ್ಲ.'

ಈ ಮಿಂಚು ಲೋಕದ ನಡುವೆ, ಕಳೆದ ಸಲದ ಅಂಕಣದಲ್ಲಿ ಪ್ರಕಟವಾದ I always make two cups of coffee ಎಂಬ ಮಿಂಚುಕತೆ ಓದಿ ಹುಟ್ಟಿದ ಕೆಲವು ಕುತೂಹಲಕರ ವ್ಯಾಖ್ಯಾನಗಳನ್ನು ಗಮನಿಸಿ:

ಕನ್ನಡ ಅಧ್ಯಾಪಕ-ಸಂಶೋಧಕ ವಲಿ ಆರ್ ಅವರಿಗೆ ಹೊಳೆದ ಅರ್ಥಗಳು : 

೧.‘ಆ ಒಂದು ಕಪ್ಪು ಕಾಫಿ ಅಪ್ಪನಿಗಾಗಿ; ಅಮ್ಮನಿಗಾಗಿ; ಮಗನಿಗಾಗಿ; ಮಗಳಿಗಾಗಿ; ಅವನಿಗಾಗಿ; ಅವಳಿಗಾಗಿ.’
೨. ಆ ಒಂದು ಕಪ್ಪು ಕಾಫಿ ಎದುರು ಮನೆಯ ಮುದುಕಿಗಾಗಿ/ಮುದುಕನಿಗಾಗಿ. 
೩. ಆ ಒಂದು ಕಪ್ಪು ಕಾಫಿ...ಕುಡಿಯುವಷ್ಟೊತ್ತಿಗೆ ತಣ್ಣಗಾಗಿರುತ್ತದೆ. 

ಕನ್ನಡ ಪ್ರಾಧ್ಯಾಪಕಿಯೊಬ್ಬರ ಹಲವು ಓದುಗಳಲ್ಲಿ ಆಯ್ದ ಕೆಲವು:

೧. ನನಗೊಂದು; ನನಗೇ ಇನ್ನೊಂದು.
೨. ನೀ ಬರಬಹುದೆಂದು. 
೩. ಜೊತೆಯಲಿದ್ದ ನೆನಪಿಗೆ.
೪. ಒಂದು ಬರಿದಾಗುವಾಗ, ಮತ್ತೊಂದಿದೆ ಎಂಬ ನಿರಾಳತೆಗೆ.

`ಐ ಆಲ್ವೇಸ್ ಮೇಕ್ ಟೂ ಕಪ್ಸ್ ಆಫ್ ಕಾಫಿ’ ಎಂಬ ಮಿಂಚುಕತೆಯನ್ನು ಒಬ್ಬ ಮೇಷ್ಟ್ರು, ಮತ್ತೊಬ್ಬ ಮೇಡಂ ಓದಿದ ಮೇಲೂ ಇಲ್ಲಿ ಇನ್ನೂ ಏನೋ ಹೊಸದೊಂದು ಹುದುಗಿದೆ ಎಂದು ನಿಮಗನ್ನಿಸಿದರೆ ಅಚ್ಚರಿಯಲ್ಲ!

ಈ ಎಲ್ಲರ ನಡುವೆ ಖ್ಯಾತ ಚಿತ್ರಕಲಾವಿದ ಹಾಗೂ ಸಿನಿಮಾ ನಿರ್ದೇಶಕ ಪ್ರಕಾಶ್ ಬಾಬು ನೆನಪಿಸಿದ ಜರ್ಮನಿಯ ಸಿನಿಮಾನಿರ್ದೇಶಕ-ಸಿನಿಮಾಟೋಗ್ರಾಫರ್ Wim Wenders ಮಾಡಿದ ಒಂದು ಅತಿಕಿರುಚಿತ್ರದ ಇಮೇಜ್ ಇನ್ನಷ್ಟು ವಿಶಿಷ್ಟವಾಗಿತ್ತು.

ಪ್ರಕಾಶ್ ಬಾಬು ಬರೆಯುತ್ತಾರೆ: 

`ಸಿನೆಮಾ ಸಾಹಿತ್ಯದಿಂದ ತನ್ನ ನಂಟನ್ನು ಕಳಚಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಾ ಕತೆಯಿಂದಲೇ ದೂರವಾಗಲು ಬರೀ ಹೇಳುವ ಬದಲಿಗೆ ದೃಶ್ಯ ಮತ್ತು ಶಬ್ದಗಳಿಂದಲೇ ತೋರಿಸಲು ಪ್ರಯತ್ನಿಸಿದೆ. ಆದರೆ ಯಾರಿಗೂ ಕತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕತೆಯಿಂದ ತಪ್ಪಿಸಿಕೊಳ್ಳಲು ಜರ್ಮನಿಯ ನಿರ್ದೇಶಕ ವಿಮ್ ವೆಂಡರ್‍ಸ್ ಒಂದು ಅತಿ ಸಣ್ಣ ಕಿರುಚಿತ್ರವನ್ನು ಮಾಡಿದ. ಒಂದು ರೈಲ್ವೇ ಕ್ರಾಸಿಂಗಿನಲ್ಲಿ ಕ್ಯಾಮೆರಾ ಪ್ಲೇಸ್ ಮಾಡಿ ರೆಕಾರ್ಡ್ ಮಾಡತೊಡಗಿದ. ರೈಲ್ವೇ ಹಳಿ. ಅದರ ಮುಂದೆ ಗೇಟು. ಕೆಂಪು ದೀಪ ಆನ್ ಅಂಡ್ ಆಫ್ ಆಗುತ್ತಿತ್ತು, ಅಷ್ಟೆ. ಮತ್ತೇನೂ ಕ್ರಿಯೆ ನಡೆಯುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಒಂದು ಬೆಕ್ಕು ರೈಲ್ವೇ ಹಳಿಯ ಆ ಬದಿಯಿಂದ ಈ ಬದಿಗೆ ಹಾದುಬಂದು ರೈಲ್ವೇ ಗೇಟನ್ನು ದಾಟಿ ಫ್ರೇಮಿನಿಂದ ಹೊರಹೋಗುವುದು. ಅಲ್ಲಿ ಕತೆಯ ಸೃಷ್ಟಿಯಾಗುವುದನ್ನು ಗಮನಿಸಬಹುದು.’ 


ಇದೆಲ್ಲದರ ಜೊತೆಗೆ, ಕಳೆದ ಸಲದ ಅಂಕಣದಲ್ಲಿ ಪ್ರಕಟವಾದ `ಎದ್ದಾಗ ಡೈನೋಸರ್ ಅಲ್ಲೇ ಇತ್ತು' ಮಿಂಚುಕತೆ ಓದಿದ ಮೇಲೊಂದು ರಾತ್ರಿ ಮಂಗಳೂರಿನ ಕತೆಗಾರ-ಚಿತ್ರಕಥಾಲೇಖಕ ಗೌತಮ್ ಜ್ಯೋತ್ಸ್ನಾಗೆ ಬಿದ್ದ ಕನಸು:

`ಇವತ್ತು ಒಂದು ಕನಸಿಂದ ಎದ್ದೆ. ನೀವು ಮಂಗಳೂರಿಗೆ ಬಂದಿದ್ರಿ, ನನ್ನ ಮನೆಗೆ. ಬಾಲ್ಕನಿಯಲ್ಲಿ ಕೂತಿದ್ವಿ; ಆದ್ರೆ ಅದು ಬರೀ ಬಾಲ್ಕನಿ ಅಲ್ಲ, ಮುಸ್ಸಂಜೆಯ ಕೇಸರಿ ಮತ್ತು ಹಳದಿ ಬಣ್ಣಗಳ ಆಕಾಶ ಕಿಟಕಿಯ ಕಂಬಿಗಳನ್ನು ದಾಟಿ ಆವರಿಸುತ್ತಾ ಇತ್ತು; ಅಂದರೆ ಆಕಾಶವೇ ಇಳಿದು ಬಂದು, ಸೂರ್ಯನ ಬಣ್ಣಗಳ ದೊಡ್ಡ ಮೋಡಗಳು ತೇಲಿ ಬರ್ತಿದ್ದವು. ದುಂಡಗಿನ ಟೇಬಲ್ ಒಂದಿತ್ತು. ನೀವು ಅದರ ಇನ್ನೊಂದು ತುದಿಯಲ್ಲಿ ಕುಳಿತಿದ್ರಿ. ಇಬ್ರೂ ಏನೋ ಕುಡೀತಾ ಇದ್ವಿ. ಆದ್ರೆ ಏನು ಮಾತಾಡ್ತಿದ್ವಿ ಅಂತ ನೆನಪಿಲ್ಲ. ಹಾಗೇ ಆ ಜಾಗ ನಿಧಾನಕ್ಕೆ ನರಸಿಪುರದ ನನ್ನಪ್ಪನ ಹಳೆಯ ಮನೆಯ ವರಾಂಡದಂತೆ ಬದಲಾಗ್ತಿತ್ತು. ಆಗ ಒಬ್ಬ ಮಹಿಳೆ ಬಂದು ನಿಮ್ಮ ಹತ್ರ ಡಿಪ್ರೆಶನ್ ಬಗ್ಗೆ ಮಾತಾಡೋಕೆ ಶುರು ಮಾಡಿದ್ಲು. ಆಗ ನಾನು ಮನಸ್ಸಲ್ಲೇ, `ಈ ಹೆಂಗಸು... ಮತ್ತೆ ಶುರು ಮಾಡ್ತು!' ಅಂದ್ಕೊಂಡೆ. ಅದೇ ಗಳಿಗೇಲಿ ನಿಮ್ಗೆ ನನ್ನ ಮಗಳ ಜೊತೆಗಿನ ನನ್ನ ಹೊಸ ಫೋಟೋ ತೋರಿಸ್ಬೇಕು ಅನ್ಕೊಂಡೆ. ಹುಡುಕ್ದೆ. ಸಿಗಲೇ ಇಲ್ಲ. ನೀವು ಮಾತಾಡ್ತಿದ್ರಿ; ನಾನು ಫೋಟೋ ಹುಡುಕೋಕೆ ಅಂತ ಹೊರಟೆ. ಆಮೇಲೆ ನಿದ್ದೆ ಮಾಡಿ ಕೊನೆಗೆ ಎದ್ದಾಗ, ವಾರದ ಹಿಂದೆ ತೆಗೆದ ಸೆಲ್ಫಿ ಸಿಕ್ತು. ಕನಸು ಜಾಗೃತ ಜಗತ್ತಿಗೆ ವಿಸ್ತರಿಸಿದಾಗ ಹೀಗಾಗುತ್ತಾ? ಆಗ ಕನಸಲ್ಲಿ ಹುಡುಕಿದಾಗ ಸಿಗದ ಈ ಚಿತ್ರಪಟ ಈಗ ಎದ್ದಾಗ ಕೈಗೆ ದಕ್ಕಿದೆ, ಅದನ್ನಿಲ್ಲಿ ಅಂಟಿಸಿದ್ದೇನೆ!
 

ಈಚೆಗೆ ಯಾಕೋ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಕನಸು, ವಾಸ್ತವಗಳ ಚರ್ಚೆಗಳಲ್ಲಿ ಇಂಥ ಸೂಕ್ಷ್ಮ ಪ್ರತಿಮೆಗಳನ್ನು ನೋಡುವ ಅರಿಯುವ, ವಿವರಿಸುವ ಕಣ್ಣು ಮಬ್ಬಾಗತೊಡಗಿದೆ ಅನ್ನಿಸುತ್ತದೆ. ಗಾಣದೆತ್ತಿನಂತೆ ಸಾಹಿತ್ಯ ಕೃತಿಗಳನ್ನು ಏಕಮುಖವಾಗಿ ಚರ್ಚಿಸುವ ಜಡತೆ ಎದ್ದು ಕಾಣತೊಡಗಿದೆ. ಅಗತ್ಯವಿರಲಿ, ಇಲ್ಲದಿರಲಿ, ಮಾನವಿಕ ವಿಜ್ಞಾನಗಳ ಪರಿಕಲ್ಪನೆಗಳನ್ನು ತಂದು ಗಿಡಿದು ಸಾಹಿತ್ಯದ ಓದನ್ನು ಯಾಂತ್ರಿಕಗೊಳಿಸುವ ರೋಬೋಟ್ ರೀಡಿಂಗ್ ಕೂಡ ಕಾಡತೊಡಗಿದೆ! 

ಇಂಥ ಕಾಲದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಈ ಬಗೆಯ ಓಪನ್ ರೀಡಿಂಗಿನ, ಅರ್ಥದ ನಿರಂತರ ಮುಂದೂಡಿಕೆಯ ಸೃಜನಶೀಲತೆ ನನ್ನಂಥವರಲ್ಲಿ ಅಪಾರ ಚೈತನ್ಯ ಉಕ್ಕಿಸುತ್ತದೆ. ಈ ಚೈತನ್ಯ ನಿಮ್ಮಲ್ಲೂ ಉಕ್ಕಿರಬಹುದು. ಪಂಪನ `ನಿಚ್ಚಂ ಪೊಸತು’ ಎಂಬ ಮಾತು ಕವಿ ತನ್ನ ಕೃತಿಯ ಬಗ್ಗೆ ಹೆಮ್ಮೆ, ಆತ್ಮವಿಶ್ವಾಸಗಳಿಂದ ಮಾತ್ರ ಹೇಳಿಕೊಂಡ ಮಾತಲ್ಲ; ಬದಲಿಗೆ, ಅದು ಒಟ್ಟಾರೆಯಾಗಿ ಓದಿನ ಚಿನ್ನಾಟದ ಸೃಜನಶೀಲತೆ ಕುರಿತಾದದ್ದು ಕೂಡ ಎಂದು ಮೊನ್ನೆ ಅನ್ನಿಸಿತು. ಹೊಸ ಹೊಸ ಓದಿನಿಂದ ತಾನೇ ಕವಿತೆ, ಚಿತ್ರ, ಸಿನಿಮಾ-ಅಷ್ಟೇ ಯಾಕೆ ಮನುಷ್ಯರು ಕೂಡ- ನಿತ್ಯವೂ ಹೊಸತಾಗಿ ಕಾಣಿಸುವುದು? ಪಂಪನ ಕೃತಿಗಳನ್ನೂ ನಮ್ಮ ಹಿರಿಯರು, ಸಮಕಾಲೀನರು ಹೊಸ ಹೊಸತಾಗಿ ಓದಿ ತೋರಿಸಿದ್ದಾರೆ ತಾನೆ? 

ಒಂದು ಕೃತಿ ನಿತ್ಯವೂ ಹೊಸತಾಗಿ ಕಾಣಲು ಬರಿ ಕಣ್ಣು ಸಾಲದು. ಅದರ ಜೊತೆಗೆ ನಾವು ನೂರಾರು ಕೃತಿಗಳನ್ನು ಓದಿ ಪಡೆದ ಬೆಳಕು ಕೂಡ ನಿತ್ಯ ನೆರವಾಗಬಲ್ಲದು. ಈ ವಾರದ ಓದು ಮುಂದಿನ ವಾರ ನಮ್ಮ ಮತ್ತೊಂದು ಓದಿಗೆ ಸೇರಿಕೊಂಡು ಓದು ಹೊಸತಾಗಬಲ್ಲದು; ಹೀಗೆ ಈ ಓದುಗಳು ಒದಗಿ ಬರುವ ರೀತಿಯನ್ನು ನಾವು ಇನ್ನಷ್ಟು ವ್ಯವಸ್ಥಿತವಾಗಿ, ಪ್ರಜ್ಞಾಪೂರ್ವಕವಾಗಿ ನೋಡಿ ಕಂಡುಕೊಳ್ಳುವುದು ಕೂಡ ಅರ್ಥಪೂರ್ಣ ಬೌದ್ಧಿಕ ತಾಲೀಂ ಆಗಬಲ್ಲದು.   

ಕೊನೆಯದಾಗಿ, ಜಾಯ್ಸ್ ಕೆರೋಲ್ ಓಟ್ಸ್ ಬರೆದ ಅತಿ ಸಣ್ಣ ಮಿಂಚುಕತೆಯ ಟೈಟಲ್: Widow’s First Year.  ನಾಲ್ಕು ಪದಗಳ ಈ ಕತೆ:  I kept myself alive.  

Share on:

Comments

7 Comments



| Suresha B

ನೆನಪಿನ ಬೀಜ ಬೆಳೆದಷ್ಟು ಅಳಿಯುವುದೇ ಸೋಜಿಗ...


| Dr.Prabhakar

Can you please give the details of your conversation with Tejaswi where he saiid ಎಲ್ಲಾ ವೇಸ್ಟ್ ಆಯ್ತಲ್ರಿ!


| Nataraj Huliyar Replies

ತೇಜಸ್ವಿ ಮಾತು ಕತೆಯ ಅಂಕಣ ಬರಹದ ಲಿಂಕ್‌ ಇಲ್ಲಿದೆ: https://natarajhuliyar.com/dailyblogs/tejaswi-lessons-for-writers-and-readers


| ಡಾ. ನಿರಂಜನ ಮೂರ್ತಿ ಬಿ ಎಂ

'ಇದು ನಿಚ್ಚಂ ಪೊಸತು' ಮಿಂಚುಕತೆಗಳ ಗಾಢ ಸತ್ಯಗಳ ಮುಂದುವರಿದ ಭಾಗವಾಗಿರುವುದರ ಜೊತೆಗೆ ಅವುಗಳ ಅರ್ಥದ ನಿರಂತರ ಮುಂದೂಡಿಕೆ-ಮುಂದುವರಿಕೆಯಾಗಿದೆ. ಒಂದು ಕೃತಿ ನಿತ್ಯವೂ ಹೊಸತಾಗಿ ಕಾಣಲು ಕಣ್ಣಿನ ಜೊತೆಗೆ ನೂರಾರು ಕೃತಿಗಳ ಓದಿನ ಬೆಳಕೂ ನೆರವಾಗಬಲ್ಲದೆಂಬ ಲೇಖಕರ ನುಡಿಯೂ ಮತ್ತೆ ಮತ್ತೆ ಹೊಸತಾಗಿ ಕಾಣುತ್ತಲೇ ಇರುತ್ತದೆ!


| ಎಂ.ಜಿ.ಚಂದ್ರಶೇಖರಯ್ಯ

ಅನೇಕ ವರ್ಷಗಳ ಹಿಂದೆ ಗೋಪಾಲಗೌಡರ ಮಾಹಿತಿ ಸಂಗ್ರಹಿಸಲು‌ ಅವರ ಊರಿಗೆ ಹೋಗಿದ್ದೆ. ಅಜ್ಜಿಯೊಬ್ಬರು ಮನೆ ಮುಂದಿನ ಬಾವಿ ಕಟ್ಟೆಗೆ ಒರಗಿ ಕೆಮ್ಮುತ್ತ ಕುಳಿತಿದ್ದರು. ನಾನು ಬಂದ ವಿಷಯ ತಿಳಿಸಿ "ತಾವು ಯಾರು" ಎಂದೆ. ಆಗ ಆಕೆ 'ನಾನು ಅವರ ದಾಯಾದಿಗಳ ಮನೆಯ ಸೊಸೆ. ನಮಗೆ ಬಂದ ಕಷ್ಟ ಹೇಳಬಾರದು.' ಎಂದು ನಿಟ್ಟುಸಿರು ಬಿಟ್ಟು "ಆಯಪ್ಪ ಸಾಯದೆ ನಾನಾರ ಸಾಯಬಾರದಿತ್ತೆ" ಎಂದರು. ಆಗ ಗೋಪಾಲಗೌಡರ ಬದುಕಿನ ಇಡೀ ಕಥೆ, ಅಂಥವರ ಅಗತ್ಯ ಫಳ್ ಎಂದು ಕಣ್ಣಮುಂದೆ ಮಿಂಚಿದಂತಾಯಿತು. ನಿಚ್ಚಮ್ ಪೊಸತು ಎಂಬ ಮಾತು ನಿಜವಾಗುವುದು ಅಂಥವರ ಕಥೆ ಮತ್ತೆ ಮತ್ತೆ ಮರುಹುಟ್ಟಿನಲ್ಲಿ.


| Shamarao

ಪ್ರತಿಯೊಂದು ಉತ್ತಮ ಬರವಣಿಗೆಯೂ ನಿತ್ಯನೂತನವೇ. ಕಿ.ರಂ. ನಾಗರಾಜ್ ನೆನಪಾಗುತ್ತಾರೆ. ಪಂಪನ ಇದು ನಿಚ್ಚಂ ಪೊಸತು ಕುರಿತು ಒಂದು ಗಂಟೆಗೂ ಮೀರಿ (ಅವರ ತರಗತಿ ಸಮಯಕ್ಕೆ ಸರಿಯಾಗಿ ಎಲ್ಲಿಗೆ ಮುಗಿಯುತ್ತಿತ್ತು!) ಮಾತಾಡಿದ್ದರು.


| Aiyasha

ಪ್ರತಿನಿತ್ಯವೆಲ್ಲವೂ ಹೊಸದೇ ಸಂಶೋಧನೆಗೆ ಉತ್ತಮ ಆಹಾರ. ಅದೇನು ಸರಿಯೇ ಕಿರಣ್ ಸರ್ ಅಂತವರಿಗೆ ಎರಡು ಗಂಟೆಯಲ್ಲ ಎಷ್ಟೇ ಸಮಯ ಕೊಟ್ಟರು ಅವರಿಗೆ ಅದು ನಿತ್ಯವೂ ಹೊಸದೇ ಆಗಿರುತ್ತಿತ್ತು




Add Comment


Nataraj Huliyar on Book Prize Awardees

YouTube






Recent Posts

Latest Blogs