ಮಿಂಚುಕತೆಯ ಗಾಢ ಸತ್ಯಗಳು

ಬುದ್ಧ, ನೀಷೆ ಥರದ ಫಿಲಾಸಫರ್‍ಸ್ ಒಂದೇ ಮಾತಿನಲ್ಲಿ, ಒಂದೇ ಸಾಲಿನಲ್ಲಿ ಹೇಳುವ ಗಾಢ ಸತ್ಯಗಳನ್ನು ಕವಿತೆ, ನಾಟಕ, ಕಾದಂಬರಿ ಬರೆಯುವವರು ಪುಟಗಟ್ಟಲೆ ಬರೆದು ಹುಡುಕಬೇಕಾಗುತ್ತದಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಸಾಹಿತ್ಯ ಹಾಗೂ ತತ್ವಜ್ಞಾನ ಎಂಬ ಎರಡೂ ಬಗೆಯ ಹುಡುಕಾಟಗಳ ಮಾರ್ಗಗಳಲ್ಲಿ ಮಿಂಚಿದ ಸತ್ಯಗಳು ಒಂದು ಜೀವಮಾನದ ಧ್ಯಾನದಿಂದಲೇ ಹುಟ್ಟಿರಬಲ್ಲವು. 'ಆಶೆಯೇ ದುಃಖಕ್ಕೆ ಕಾರಣ’ ಎಂಬ ಏಕವಾಕ್ಯ ತತ್ವಜ್ಞಾನ ಹುಟ್ಟಲು ಬುದ್ಧನ ಇಡೀ ಜೀವಮಾನದಲ್ಲಿ ನಡೆದ ಮಾನವ ಜೀವನದ ಅನುಭವಗಳ, ಸ್ವಂತದ ಅನುಭವಗಳ, ಅಥವಾ ಸಕಲ ಜೀವಿಗಳ ಅನುಭವಗಳ ನಿರಂತರ ಶೋಧನೆಗಳು ಕಾರಣವಾಗಿರಬಹುದು. 

ಹೀಗೆ ಅಡಕವಾಗಿ ಗಾಢ ಸತ್ಯ ಹಿಡಿಯುವ ಆಸೆ ದೊಡ್ಡ ದೊಡ್ಡ ಕಾದಂಬರಿ ಬರೆದವರಲ್ಲೂ ಇರಬಹುದು. ಕೆಲವು ವರ್ಷಗಳ ಕೆಳಗೆ ಜಗತ್ತಿನ ಅತಿ ಸಣ್ಣ ಕತೆ ಯಾವುದೆಂದು ತಡಕಾಡುತ್ತಿದ್ದೆ. ಆಗ ಅಮೆರಿಕನ್ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ಜಗತ್ತಿನ ಅತಿ ಸಣ್ಣ ಕತೆ ಬರೆದಿದ್ದಾನೆ ಎಂಬುದನ್ನು ಗಮನಿಸಿದೆ. 

ಹೆಮಿಂಗ್ವೆ ಆರು ಪದಗಳ ಅತಿ ಸಣ್ಣ ಕತೆಯನ್ನು ಬರೆಯುತ್ತೇನೆಂದು ತನ್ನ ಗೆಳೆಯರ ಜೊತೆ ಬೆಟ್ಸ್ ಕಟ್ಟಿದ್ದನಂತೆ. ಅಂಥ ಕತೆ ಬರೆದು ಹತ್ತು ಡಾಲರ್ ಬೆಟ್ಸ್ ಗೆದ್ದನಂತೆ. ೧೯೦೬ರ ಸುಮಾರಿನಲ್ಲಿ ಬರೆದ ಆ ಕತೆ ಹೆಮಿಂಗ್ವೆಗೆ ತಂದುಕೊಟ್ಟ ಹತ್ತು ಡಾಲರ್‍ಸ್ ಆ ಕಾಲಕ್ಕೆ ದೊಡ್ಡ ಮೊತ್ತ. ಆ ಅತಿಸಣ್ಣ ಕತೆ ಇದು: 

For Sale: Baby shoes, never worn. 
೧೯೯೦ರವರೆಗೂ ಇದು ಹೆಮಿಂಗ್ವೆ ಬರೆದ ಕತೆ ಎಂದು ಜನಕ್ಕೆ ಗೊತ್ತಿರಲಿಲ್ಲ. ಇಂಥವನ್ನು ಇಂಗ್ಲಿಷಿನಲ್ಲಿ, ವಿವಿಧ ದೇಶಭಾಷೆಗಳಲ್ಲಿ 'ಶಾರ್ಟೆಸ್ಟ್ ಸ್ಟೋರಿ’, 'ಫ್ಲ್ಯಾಶ್ ಫಿಕ್ಷನ್’ ಎನ್ನುತ್ತಾರೆ. ಕನ್ನಡದಲ್ಲಿ ಇವನ್ನು ಮಿಂಚುಕತೆ ಅಥವಾ ಮಿಂಚುಗತೆ ಎನ್ನಬಹುದು.

ಹೆಮಿಂಗ್ವೆಯ ಮಿಂಚುಕತೆ ಓದುವ ಮೊದಲು ಲ್ಯಾಟಿನ್ ಅಮೆರಿಕದ   Augusto Monterosso Bonilla ಎಂಬ ಕತೆಗಾರ ಸ್ಪ್ಯಾನಿಶ್ ಭಾಷೆಯಲ್ಲಿ ಬರೆದ El Dinosaurio (ದ ಡೈನೋಸರ್) ಜಗತ್ತಿನ ಅತಿಸಣ್ಣ ಕತೆ ಎಂದುಕೊಂಡಿದ್ದೆ. ಅಂಬರ್ತೋ ಇಕೋ ತನ್ನ Mouse or Rat? Translation as Negotiation ಪುಸ್ತಕದಲ್ಲಿ ಅನುವಾದದ ಸವಾಲುಗಳನ್ನು ಚರ್ಚಿಸಲು ಬಳಸಿದ ಕತೆ ಇದು. ಇದನ್ನು 'ಅನುವಾದಿಸಲಾಗದ ಕತೆ’ ಎನ್ನುತ್ತಿದ್ದರು.

‘Mouse or Rat?’ ಎಂಬ ಟ್ರಾನ್ಸ್‌ಲೇಶನ್ ಥಿಯರಿಯ ಪುಸ್ತಕದಲ್ಲಿ ಇಕೋ ಈ ಏಕವಾಕ್ಯ ಕತೆಯನ್ನು ಮತ್ತೊಂದು ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂದು ಚರ್ಚಿಸುತ್ತಾನೆ. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿ ಈ ಕತೆ ಹೀಗಿದೆ: 

Cuando despertó, el dinosaurio todavía estaba allí   

ವಿಕಿಪೀಡಿಯಾದಲ್ಲಿರುವ ಅದರ ಸರಳ ಇಂಗ್ಲಿಷ್ ಅನುವಾದ: When he awoke, the dinosaur was still there.

ಹೈಸ್ಕೂಲ್ ಹುಡುಗ ಶೋಯಿಂಕಾ ಹಿಂದೊಮ್ಮೆ ಅದನ್ನು IM TRANSLATE ಎಂಬ ಪೋರ್ಟಲ್‌ಗೆ ಹಾಕಿ ನೋಡಿದಾಗ ಬಂದ ಅದರ ಅನುವಾದ ಹೀಗಿತ್ತು: 

When woke up, the dinosaur was still there.

ಸ್ಪ್ಯಾನಿಶ್ ಮೂಲದ ಏಕವಾಕ್ಯ ಕತೆಯಲ್ಲಿ ಅವನು ಅಥವಾ ಅವಳು ಇಲ್ಲ. ಈ ಸ್ಪ್ಯಾನಿಷ್ ಕತೆಯ ಕನ್ನಡ ಅನುವಾದ ಹೀಗಿರಬಲ್ಲದು: 'ಎದ್ದಾಗ ಡೈನೋಸರ್ ಅಲ್ಲೇ ಇತ್ತು.’ ಈ ಥರದ ಕರ್ತೃ ಇಲ್ಲದ ವಾಕ್ಯ ಇಂಗ್ಲಿಷಿನಲ್ಲಿ ಕಷ್ಟ. ಸ್ಪ್ಯಾನಿಷ್ ಭಾಷೆಯಲ್ಲಿ, ಕನ್ನಡದಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಈ ತರದ ವಾಕ್ಯಗಳು ಸಾಧ್ಯ.

ಈ ಸ್ಪ್ಯಾನಿಶ್ ಕತೆಯನ್ನು ಓದುವಾಗ, 'ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾ ಮಾತಿನ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ. ಕಳೆದ ಸಲದ ಅಂಕಣದ ‘ಕೃತಕ ಜಾಣತನಕ್ಕೆ ಸವಾಲ್!’ ಬರಹಕ್ಕೆ ಪ್ರತಿಕ್ರಿಯಿಸುತ್ತಾ, ಕಾಮೆಂಟ್ಸ್ ವಿಭಾಗದಲ್ಲಿ ಗೆಳೆಯ ಶಿವಲಿಂಗಮೂರ್ತಿ, ’ಡೆರಿಡಾ ಹೇಳಿದ್ದು ಅರ್ಥದ ಮುಂದುವರಿಕೆಯೋ? ಮುಂದೂಡಿಕೆಯೋ?’ ಎಂದು ಕೇಳಿದ್ದರು. ಈಗ ಈ ಸ್ಪ್ಯಾನಿಶ್ ಏಕವಾಕ್ಯ ಕತೆಯ ಅರ್ಥದ ನಿರಂತರ ಮುಂದೂಡಿಕೆಯ ರೋಮಾಂಚನವನ್ನು ನೋಡಿ: 

೧. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಎದ್ದವರು ಯಾರು? ಅವನೋ? ಅವಳೋ? ಪ್ರಾಣಿಯೋ? ಜೀವಾತ್ಮನೋ? ಜೀವಾತ್ಮಳೋ? ಪ್ರಜ್ಞೆಯೋ?....ಹೀಗೆ ಓದಿನಲ್ಲಿ ಅರ್ಥವನ್ನು ಮುಂದೂಡುತ್ತಲೇ ಇರಬಹುದು!

೨. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಈ ಡೈನೋಸರ್ ಯಾರೋ ಎದ್ದಾಗ ಕಣ್ಣಿಗೆ ಕಂಡದ್ದೋ? ಅದು ಹಿಂದಿನ ರಾತ್ರಿ ಅಲ್ಲಿಗೆ ಬಂದು ಇನ್ನೂ ಅಲ್ಲೇ ಇದ್ದ ಡೈನೋಸರೋ? 

೩. ‘ಎದ್ದಾಗ ಡೈನೋಸರ್ ಅಲ್ಲೇ ಇತ್ತು’: 
ಈ ಡೈನೋಸರ್ ಕನಸಿನಲ್ಲಿ ಕಂಡದ್ದೋ? ಅಥವಾ ಕನಸೊಡೆದೆದ್ದಾಗ ಮನಸಿನಲ್ಲಿ ಉಳಿದ ಡೈನೋಸರೋ?

೪. ಅರವತ್ತಾರು ಮಿಲಿಯನ್ ವರ್ಷಗಳ ಹಿಂದೆ ಕಣ್ಮರೆಯಾದ ಡೈನೋಸರುಗಳ ಬಗ್ಗೆ ಈಗ ಓದಿ, ಅವುಗಳ ಚಿತ್ರ ನೋಡಿದ ಮೇಲೆ ಒಂದು ದಿನ ಎದ್ದವರ ಮನಸ್ಸಿನಲ್ಲಿ ಉಳಿದ ಚಿತ್ರವೋ ಇದು? ಕಲ್ಪನೆಯೋ? ಭ್ರಮೆಯೋ? ಎಷ್ಟೋ ಸಲ ನಮಗೆ ನಿಜಚಿತ್ರ, ಭ್ರಮಾಚಿತ್ರಗಳ ವ್ಯತ್ಯಾಸವೇ ಕಾಣದಂಥ ಸ್ಥಿತಿ ಸೃಷ್ಟಿಯಾಗುತ್ತದೆ; ಹಾಗೆ ಇದೂ ಅಂಥದೊಂದು ಸ್ಥಿತಿಯಲ್ಲಿ ಕಂಡ ಚಿತ್ರವೇ? 

ಈ ಕತೆಯನ್ನು ಸಿನಿಮಾ ದೃಶ್ಯಕ್ಕೆ ಅನುವಾದಿಸುವುದು ಹೇಗೆ ಎಂಬ ಪ್ರಶ್ನೆ ಅಂಬರ್ತೋ ಇಕೋಗೆ ಎದುರಾಗುತ್ತದೆ. ಅಂಬರ್ತೋ ಇಕೋ ಪ್ರಕಾರ, ಅನುವಾದದ ವಿಶಾಲ ಪ್ರಕ್ರಿಯೆಯಲ್ಲಿ ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಹೋಗುವುದು ಕೂಡ ಭಾಷಾಂತರವೇ. ಕತೆಯೊಂದು ಚಿತ್ರಕತೆಯಾಗುವುದು; ಕತೆ ನಾಟಕವಾಗುವುದು; ಕಾದಂಬರಿ ಸಿನಿಮಾ ಆಗುವುದು… ಇವೆಲ್ಲವೂ ಇಕೋ ಪ್ರಕಾರ ಭಾಷಾಂತರವೇ. ಕಾರಣ, ಭಾಷಾಂತರ ಎಂದರೆ ಒಂದು ಸಂಜ್ಞಾವ್ಯವಸ್ಥೆಯಿಂದ ಇನ್ನೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಗೊಳ್ಳುವುದು. ಇಲ್ಲಿ ಕತೆಯೊಂದು ಕತೆಯ ಸಂಜ್ಞಾವ್ಯವಸ್ಥೆಯಿಂದ ಅಥವಾ ಕತೆಯ ಭಾಷೆಯಿಂದ ಚಿತ್ರಕತೆ, ಸಿನಿಮಾದ ಭಾಷೆಗೆ ಅಥವಾ ಅವುಗಳ ಸಂಜ್ಞಾವ್ಯವಸ್ಥೆಗೆ ‘ಭಾಷಾಂತರ’ ಆಗುತ್ತದೆ ಎಂದುಕೊಳ್ಳಬಹುದು.

ಭಾಷಾಂತರದ ಈ ಆಟವನ್ನು ಮುಂದೆಂದಾದರೂ ಚರ್ಚಿಸಬಹುದು; ಈಗ ಮತ್ತೆ ಮಿಂಚುಕತೆಯ ಲೋಕಕ್ಕೆ ಮರಳೋಣ ಎಂದುಕೊಂಡಾಗ, ತಮಿಳು ಕತೆಗಾರ ಪ್ರೊಫೆಸರ್ ನಂಜುಂಡನ್ ನೆನಪಾಗುತ್ತಾರೆ. ನಂಜುಂಡನ್ ಇದ್ದಕ್ಕಿದ್ದಂತೆ ಒಂದು ಮಧ್ಯಾಹ್ನ ‘ವಿಶ್ವದ ಅತಿ ಸಣ್ಣ ಕತೆ ಇದು’ ಎಂದು ಒಂದು ಮಿಂಚುಗತೆಯನ್ನು ಹೇಳಿದ್ದರು. ಅದರ ವಿವರಗಳು ಮರೆತು ಹೋಗಿವೆ. ಕಾರ್ಡಿಗೆ ಅಂಟಿಕೊಂಡ ನೊಣದ ಕಾಲುಗಳ ಚಿತ್ರ ಆ ಕತೆಯಲ್ಲಿತ್ತು ಎಂಬುದು ಮಾತ್ರ ನೆನಪಾಗುತ್ತದೆ. 

ಸಾಮಾನ್ಯವಾಗಿ ಇಂಥ ವಿಶೇಷಗಳನ್ನು ಬರೆದಿಡುವ ನಾನು ಅವತ್ತು ಆ ಸಾಲನ್ನು ಡೈರಿಯಲ್ಲಿ ಬರೆದಿಡದೇ ಹೋದುದಕ್ಕೆ ವಿಷಾದ ಹುಟ್ಟುತ್ತದೆ. ಈ ಕತೆ ಕುರಿತು ನಂಜುಂಡನ್ ಅವರನ್ನೇ ಮತ್ತೆ ಕೇಳುವುದು ಇನ್ನೆಂದೂ ಸಾಧ್ಯವಿರಲಿಲ್ಲ; ನನ್ನ ಅನೇಕ ಪ್ರಿಯ ಮಿತ್ರರ ಹಾಗೆ ನಂಜುಂಡನ್ ಕೂಡ ಹಟಾತ್ತನೆ ತೀರಿಕೊಂಡರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಟ್ಯಾಟಿಸ್ಟಿಕ್ಸ್ ಪ್ರೊಫೆಸರ್ ಆಗಿದ್ದ ನಂಜುಂಡನ್ ವಿಶಿಷ್ಟ ನೋಟದ ತಮಿಳು ಕತೆಗಾರರಾಗಿದ್ದರು. ಜಾರ್ಜ್ ಲೂಯಿ ಬೋರ್ಹೆಸ್ ಅವರ ನೆಚ್ಚಿನ ಕತೆಗಾರನಾಗಿದ್ದ. ಬೋರ್ಹೆಸ್ ರೀತಿಯಲ್ಲಿ ತಮಿಳು ಕತೆಗಳನ್ನು ಬರೆಯುತ್ತಿದ್ದ ನಂಜುಂಡನ್ ಅವರ ಬದುಕು ಕೂಡ ಜೀವನಕ್ಕೆ ಅಂಟಿಕೊಂಡ ನೊಣದ ಕಾಲುಗಳ ಸ್ಥಿತಿಯಂತೆ ಇತ್ತು ಎಂಬುದು ನನ್ನ ಗ್ರಹಿಕೆ. ’ಕತೆಯನ್ನು ನಂಬು ಕತೆಗಾರ/ ಕತೆಗಾರ್ತಿಯನ್ನಲ್ಲ’ ಎಂಬ ಲಾರೆನ್ಸ್ ಮಾತನ್ನು ಒಪ್ಪುವ ನಾನು ನಂಜುಂಡನ್‌ಗೂ, ಅವರು ಹೇಳಿದ ಕತೆಗೂ ಸಂಬಂಧ ಕಲ್ಪಿಸುವ ಬಾಲಿಶ ಓದಿಗೆ ಇಳಿಯಲಾರೆ. ಆದರೆ ವಿಚಿತ್ರ ಪ್ರತಿಮೆಗಳನ್ನು ಸೃಷ್ಟಿಸಬಲ್ಲವರಾಗಿದ್ದ ನಂಜುಂಡನ್ ಇಂಥ ಮಿಂಚುಗತೆಗಳನ್ನು ತಮ್ಮ ತಮಿಳು ಕತೆಗಳ ಒಳಗೇ ಸೃಷ್ಟಿಸಿರಬಹುದು ಎಂದು ಮಾತ್ರ ಊಹಿಸುವೆ.

ಯಾಕೆಂದರೆ ಕತೆ, ಕಾದಂಬರಿಗಳ ವ್ಯಾಪ್ತಿಯುಳ್ಳ ಅನೇಕ ಸಾಲುಗಳು ಸಾಹಿತ್ಯ ಕೃತಿಗಳಲ್ಲಿ ಮಿಂಚುತ್ತಿರುತ್ತವೆ. ಟಾಲ್‌ಸ್ಟಾಯ್ ಮತ್ತೆ ಮತ್ತೆ ತಿದ್ದಿ ತಮ್ಮ ‘ಅನ್ನಾಕರೆನಿನಾ’ ಕಾದಂಬರಿಯ ಮೊದಲ ಸಾಲನ್ನು ಬರೆದರು. ರಷ್ಯನ್ ‘ಅನ್ನಾಕರೆನಿನಾ’ದ ಆರಂಭವಾಕ್ಯದ ಹಲ ಬಗೆಯ ಇಂಗ್ಲಿಷ್ ಅನುವಾದಗಳಿವೆ. ಕಾನಸ್ಟನ್ಸ್ ಗ್ಯಾರ್‍ನೆಟ್ ಮಾಡಿದ ಅನುವಾದ: Happy families are all alike; every unhappy family is unhappy in its own way. ತೇಜಶ್ರೀ ಮಾಡಿದ ‘ಅನ್ನಾಕರೆನಿನಾ’ ಕಾದಂಬರಿಯ ಸಂಗ್ರಹಾನುವಾದದಲ್ಲಿ ಈ ಮೊದಲ ಸಾಲು: 'ಸುಖೀ ಕುಟುಂಬಗಳೆಲ್ಲ ಒಂದೇ ಥರ; ಒಂದೊಂದು ದುಃಖಿ ಕುಟುಂಬವೂ ದುಃಖಿಯಾಗಿರುತ್ತದೆ ತನ್ನದೇ ಥರ.’  

‘ಅನ್ನಾಕರೆನಿನಾ’ ಕಾದಂಬರಿಯ ಆರಂಭದ ವಾಕ್ಯವೇ ಒಂದು ಕಾದಂಬರಿಯ ಅರ್ಥವ್ಯಾಪ್ತಿಯನ್ನು ಮುಂದಿಡುವಂತಿದೆ. ಸರಳವಾಗಿ ನೋಡಿದರೆ, ಇಡೀ ಕಾದಂಬರಿ  unhappy/ಅಸಂತುಷ್ಟ/ಅಸುಖಿ ಸಂಸಾರಗಳು ತಂತಮ್ಮದೇ ಆದ ರೀತಿಯಲ್ಲಿ ದುಃಖಿಗಳಾಗಿರುವ ಕತೆಗಳನ್ನು ಹೇಳುತ್ತದೆ.  ಸಾಹಿತ್ಯ ಹುಟ್ಟುವುದೇ ಮಾನವಲೋಕದ ದುಃಖವನ್ನು ಅಥವಾ ಜೀವಲೋಕದ ದುಃಖವನ್ನು ಹೇಳಲು ತಾನೆ? 

ದುಃಖ ಆಳ; ಆನಂದ ಹಗುರ ಎಂಬ ನನ್ನ ಬಹುಕಾಲದ ನಂಬಿಕೆಯ ಹಿನ್ನೆಲೆಯಲ್ಲಿ ಹೆಮಿಂಗ್ವೆಯ For Sale: Baby shoes, never worn ಮಿಂಚುಗತೆಯನ್ನು ದುಃಖದ ನೋಟದಲ್ಲೇ ಓದಿದೆ: ಯಾರೋ ತಂದೆ, ತಾಯಿ ಪ್ರಾಯಶಃ ತಮ್ಮ ಮಗುವಿಗಾಗಿ ತಂದಿಟ್ಟ ಶೂ ತೊಡುವ ಮೊದಲೇ ಮಗು ತೀರಿಕೊಂಡಿತೆ? ಈಗ ಆ ಶೂಗಳು ಮಾರಾಟಕ್ಕಿವೆಯೆ? 

ಈ ಮಿಂಚುಗತೆಯ ಒಂದು ಸೂಚನೆಯನ್ನಷ್ಟೇ ಹೇಳಿ, ಇದರ ಅರ್ಥದ ನಿರಂತರ ಮುಂದೂಡಿಕೆಯ ಪ್ರಯೋಗದ ಸೃಜನಶೀಲ ಆಟವನ್ನು ನಿಮಗೇ ದಾಟಿಸುತ್ತೇನೆ! 

ಅದರ ಜೊತೆಗೇ ವೆಬ್‌ಸೈಟೊಂದರಲ್ಲಿ ಕಂಡ ಮತ್ತೊಂದು ಮಿಂಚುಗತೆ: 

I always make two cups of coffee.

ಈ ಮಿಂಚುಕತೆಯ ಅರ್ಥದ ಮುಂದೂಡಿಕೆ ಕೂಡ ಈ ಅಂಕಣದ ಪ್ರತಿಭಾವಂತ ಓದುಗಿಯರಲ್ಲಿ, ಓದುಗರಲ್ಲಿ ನಡೆಯುತ್ತಲೇ ಇರಬಲ್ಲದು ಎಂಬ ಅಚಲ ನಂಬಿಕೆಯಿಂದ ಈ ಕತೆಯ ಬಗ್ಗೆ ಏನೂ ಹೇಳದೆ ಹಾಗೇ ಕೊಟ್ಟಿರುವೆ!
 
  
 

Share on:

Comments

23 Comments



| ಅನಿಲ್ ಗುನ್ನಾಪೂರ

ಮಿಂಚುಕತೆಯ ಗಾಢ ಸತ್ಯಗಳು ಲೇಖನ ಇಷ್ಟವಾಯಿತು ಸರ್.


| Bc Prabhakar

Simple topic, fantastic narration!


| Dr.Kavyashri

One of your best sir.Loved it, enjoyed it amid fever


| Subramanya Swamy

ಬುದ್ಧ,ನೀಷೆ, ಆಗಸ್ಟೋ, ಹೆಮಿಂಗ್ವೇ, ಟಾಲ್ಸ್ಟಾಯ್ ಮೊದಲಾದ ಅಪ್ರತಿಮರು ಮನುಕುಲದ ಒಳಿತಿಗಾಗಿ ಬರೆದ ಬರಹಗಳನ್ನು ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿರುವ ಹಾಗೆ ನಿಚ್ಬವೂ ನಿರಂತರ ಡಾ ನಟರಾಜ್ ಹುಳಿಯಾರ್ ಸಾರ್ ಹಬ್ಬದ ದಿನ ಮಾನವೀಯ ಸಂಬಂಧಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುವಂತೆ ಮಾಡಿದ್ದಾರೆ For sale Baby Shoes,Never Worn ಕತೆ ನನಗೆ ತಿಳಿದಿರಲಿಲ್ಲ ಮತ್ತು OLD MAN AND THE SEA ಹೆಮಿಂಗ್ವೇ ನಾನು ಓದಿದ ಮಹತ್ವದ ಕೃತಿ. ಸಾಹಿತ್ಯ ಪ್ರೇಮಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು.


| ಮಂಜುನಾಥ್ ಸಿ ನೆಟ್ಕಲ್

ಮಿಂಚು ಕತೆಗಳು ಬರಹ ಆ ಕತೆಗಳ ಹಾಗೆ ಮಿಂಚಿನಂತೆ ಮೂಡಿ ಇನ್ನೂ ಇದೆಯೇನೋ ಎನ್ನುವಷ್ಟರಲ್ಲಿ ಮುಗಿದು ಮರೆಯಾಯಿತು. ಆದರೂ ನಾವು ಓದುವ ಮಿಂಚು ಕತೆಗಳ ಹೊಳಹನ್ನು ಮಿಂಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸುವೆ.... ದೊಡ್ಡ ಕತೆ ಬರೆಯಲಾಗದವರು ಈ ಮಿಂಚು ಕತೆಗಳನ್ನು ಬರೆಯಲು ಪ್ರಯತ್ನಿಸ ಬಹುದೇ....


| NATARAJ HULIYAR replies

ಪ್ರಿಯ ನೆಟ್ಕಲ್, ದೊಡ್ಡ ಕತೆ ಸಣ್ಣ ಕತೆ ಎಂಬುದಿಲ್ಲ. ಕತೆ ಮಾತ್ರ ಇದೆ. ಗಟ್ಟಿ ರೂಪಕ ಸೃಷ್ಟಿಸಿ ಮಿಂಚೊಂದನ್ನು ಹಿಡಿಯಿರಿ ಅಥವಾ ಸುದೀರ್ಘ ಕತೆಯಲ್ಲೂ ಮಿಂಚುಗತೆಗಳನ್ನು ಸೃಷ್ಟಿಸಿ!


| ದೇವಿಂದ್ರಪ್ಪ ಬಿ.ಕೆ.

ಮಿಂಚುಕತೆಯ ಗಾಢ ಸತ್ಯಗಳು ಲೇಖನ ಓದಿದ ನಂತರ ಒಬ್ಬ ಬರಹಗಾರ ಏನನ್ನೂ ಹೇಳಬೇಕೋ ಅದನ್ನು ಅತೀ ಕಡಿಮೆ ಪದಗಳಲ್ಲಿ ಗಾಢವಾಗಿ ಮನಸಿಗೆ ಮುಟ್ಟುವಂತೆ ಹೇಳಬೇಕು ಎನ್ನಿಸಿತು. ಬುದ್ಧನ ಫಿಲಾಸಫಿ, ಸೂಫಿ ತತ್ವ, ಝೆನ್ ಕಥೆಗಳು ಈ ರೀತಿಯ ಚಿಕ್ಕ ಕಥೆಗಳ ಮೂಲಕ ಮನುಷ್ಯ ಲೋಕದ ದುಃಖವನ್ನು ಹಿಡಿದಿಡಲು ಪ್ರಯತ್ನಿಸಿವೆ. ಜೊತೆಗೆ ತೆಳುವಾದ ಹಾಸ್ಯದ ಮೂಲಕ ಮನುಷ್ಯ ಮನುಷ್ಯರ ನಡುವಿನ ದ್ವೇಷ ಮತ್ಸರವನ್ನು ಕಡಿಮೆ ಮಾಡಲು ಸಾಧನವಾಗಿವೆ. ಕನ್ನಡ ಸಾಹಿತ್ಯದಲ್ಲಿ ಅತಿ ಸಣ್ಣ ಕಥೆಯ ಪ್ರಯೋಗಗಳು ನಡೆದಿರುವುದು ಕಡಿಮೆ. ಇಂಗ್ಲಿಷ್ ಸಾಹಿತ್ಯದಲ್ಲಿ ಇಂದಿಗೂ ಈ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಕನ್ನಡದಲ್ಲಿ ಒಗಟಿನ ಮೂಲಕ ಜನಪದರು ಕಥೆ ಕಟ್ಟಿರುವುದು ಗಮನಾರ್ಹ. ನಮ್ಮ ಕಡೆ ರಾಮಾಯಣದ ಕಥೆಯನ್ನು ಈ ರೀತಿ ಅತಿ ಕಡಿಮೆ ಪದಗಳಲ್ಲಿ ವಿವರಿಸಿದ್ದಾರೆ. 'ದಶರಥನ ಕಂದ, ರಾವಣನ ಕೊಂದ ಸೀತೆಯ ತಂದ' ಇಡೀ ರಾಮಾಯಣವನ್ನು ಚಿಕ್ಕದಾಗಿ ಕಟ್ಟಿಕೊಟ್ಟಿರುವುದು ಸೋಜಿಗ. ಬರಹಗಾರರು ತಮ್ಮ ಬರವಣಿಗೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು. ಆಗ ಸಾಹಿತ್ಯಕ್ಕೆ ಹೊಸ ಪ್ರಕಾರಗಳು ಬಂದು ಸೇರಲು ಸಾಧ್ಯ. ಲೇಖಕನಾದವನು ಮಗುವಿನ ತೊದಲ್ನುಡಿಗಳನ್ನು ಬರೆಯಲು ಶಕ್ತನಾಗಿರಬೇಕಂತೆ.


| Dr.Vimala

ಎಚ್ಚರವಾದಾಗ ಡೈನೋಸರ್ ಇನ್ನೂ ಅಲ್ಲಿಯೇ ಇತ್ತು 🤔! 😊


| vali R

ಆ ಒಂದು ಕಪ್ಪು ಕಾಫಿ ಅಪ್ಪನಿಗಾಗಿ./ಅಮ್ಮನಿಗಾಗಿ / ಮಗನಿಗಾಗಿ /ಮಗಳಿಗಾಗಿ /ಅವನಿಗಾಗಿ /ಅವಳಿಗಾಗಿ ಆ ಒಂದು ಕಪ್ಪು ಕಾಫಿ ಎದುರು ಮನೆಯ ಮುದುಕಿಗಾಗಿ / ಮುದುಕನಿಗಾಗಿ ಆ ಒಂದು ಕಪ್ಪು ಕಾಫಿ........ ಇದನ್ನು ಕುಡಿಯುವಷ್ಟೊತ್ತಿಗೆ ಯಾವಾಗಲೂ ತಣ್ಣಗಾಗಿರುತ್ತದೆ.


| Aiyasha

Sir, ಕನ್ನಡದಲ್ಲಿ ಇಂಥ ಕಥೆಗಳನ್ನು ನಾನಂತೂ ಓದಿಲ್ಲ. ಹೊಸ ಹೊಸ ಆವಿಷ್ಕಾರಗಳನ್ನ ನಮ್ಮ ಮುಂದೆ ಇಡುವಂತಹ ನಟರಾಜ್ ಸರ್ ಗೆ ಧನ್ಯವಾದಗಳು


| M S PRAKASH BABU

ಸಿನೆಮಾ ಸಾಹಿತ್ಯದಿಂದ ತನ್ನ ನಂಟನ್ನು ಕಳಚಿಕೊಳ್ಳುಲು ಸಾಕಷ್ಟು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಾ ಕತೆಯಿಂದಲೇ ದೂರವಾಗಲು ಬರೀ ಹೇಳುವ ಬದಲಿಗೆ ದೃಶ್ಯ ಮತ್ತು ಶಬ್ದಗಳಿಂದಲೇ ತೋರಿಸಲು ಪ್ರಯತ್ನಿಸಿದೆ. ಆದರೆ ಯಾರಿಗೂ ಕತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕತೆಯಿಂದ ತಪ್ಪಿಸಿಕೊಳ್ಳಲು ಜರ್ಮನಿಯ ನಿರ್ದೇಶಕ ವಿಮ್ ವೈಂಡೆರ್ ಒಂದು ಅತೀ ಸಣ್ಣ ಕಿರುಚಿತ್ರವನ್ನು ಮಾಡಿದ, ಒಂದು ರೈಲ್ವೇ ಕ್ರಾಸಿಂಗಿನಲ್ಲಿ ಕ್ಯಾಮೆರಾ ಪ್ಲೇಸ್ ಮಾಡಿ ರೆಕಾರ್ಡ್ ಮಾಡ ತೊಡಗಿದ. ಅಲ್ಲಿ ರೈಲ್ವೇ ಹಳಿ, ಅದರ ಮುಂದೆ ಗೇಟು, ಕೆಂಪು ದೀಪ ಆನ್ ಅಂಡ್ ಆಫ್ ಆಗುತ್ತಿತ್ತು ಅಷ್ಟೆ. ಮತ್ತೇನೂ ಕ್ರಿಯೆ ನಡೆಸುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಒಂದು ಬೆಕ್ಕು ರೈಲ್ವೇ ಹಳಿಯ ಆ ಬದಿಯಿಂದ ಈ ಬದಿಗೆ ಹಾದುಬಂದು ರೈಲ್ವೇ ಗೇಟನ್ನು ದಾಟಿ ಫ್ರೇಮಿನಿಂದ ಹೊರಹೋಗುವುದು. ಅಲ್ಲಿ ಕತೆಯ ಸೃಷ್ಟಿಯಾಗುವುದನ್ನು ಗಮನಿಸಬಹುದು.


| Rajaram R

Great to know about one line short stories. A beautiful read!


| Shivavenkataiah

ಪ್ರತಿ ಲೇಖನದಲ್ಲೂ ಕನ್ನಡ ಸಾಹಿತ್ಯಕ್ಕೆ ಹೊಸಪದ ಕೊಡುತ್ತಿದ್ದೀರ. 'ಮಿಂಚುಕತೆ' ಚೆನ್ನಾಗಿದೆ.


| ಕುಸುಮ ಬಿ.ಎಂ

ಮಿಂಚುಗತೆ ಮಿಂಚಿನಂತೆ ಹೊಳೆಯುವ ಸಣ್ಣ ಕಥೆ. ಸಣ್ಣ ಕಂದಮ್ಮಗಳ ತೊದಲ್ನುಡಿಯಂತಿವೆ.ಇಂತಹ ಸಾಲುಗಳು ಚಿಂತನೆಯ ನೆಲೆಯಲ್ಲಿ ಕಥೆಗಳಾದಾಗ ಸೋಜಿಗ. ಕಥೆಯ ಹೊಸ ರೂಪವನ್ನು ಪರಿಚಯಿಸಿದಿರಿ ಸರ್. ಧನ್ಯವಾದಗಳು


| ಮಾಲತಿ ಪಟ್ಟಣಶೆಟ್ಟಿ

ನಿಮ್ಮ ಮಿಂಚುಕತೆ ಈ ಸಮಯದ ಅಗತ್ಯದಂತಿದೆ.. ನನಗೊಂದು ಮಿಂಚುಕತೆ ಹೊಳೆದಿದೆ :: ಆಕೆ ತಿರುಗಿ ನೋಡಲಿಲ್ಲ, ಅವನೂ ಬರಲಿಲ್ಲ. ಸಮಯ ಸಿಕ್ಕರೆ ನೀವೇನು ಕತೆ ಕಟ್ಟಬಲ್ಲಿರಿ?


| Nataraj Huliyar Replies

ಪ್ರೀತಿಯ ಮೇಡಂ, 'ಆಕೆ ತಿರುಗಿ ನೋಡಲಿಲ್ಲ, ಅವನೂ ಬರಲಿಲ್ಲ.' ಇಷ್ಟೇ ಸಾಕು, ಇದೊಂದು ಅರ್ಥಗರ್ಭಿತ ಮಿಂಚುಗತೆಯಾಗುತ್ತದೆ. ಜಾಣ ಓದುಗಿಯರು, ಓದುಗರು ಇದಕ್ಕೆ ಪುಟಗಟ್ಟಲೆ ವ್ಯಾಖ್ಯಾನ ಸೃಷ್ಟಿ ಮಾಡಬಲ್ಲರು.


| ಎಂ.ಜಿ. ಚಂದ್ರಶೇಖರಯ್ಯ

ಟಾಲ್ಸ್ಟಾಯ್ ಅವರ ಅನ್ನಾಕರೇನಿನಾ ಕಾದಂಬರಿಯ ಇಂಗ್ಲಿಷ್ ಆವೃತ್ತಿಯನ್ನು ಓದುವ ಮೊದಲು ತರಗತಿಯಲ್ಲಿ ಯಾರೋ ಹೇಳಿದ್ದು- ಕಾದಂಬರಿಯ ಮೊದಲ ಸಾಲಿದು: "All happy families are alike in their happiness, but all unhappy families are unlike in their unhappiness." ಇದು ಯಾವ ಆವೃತ್ತಿಯಲ್ಲಿದೆಯೋ!!? ತೇಜಸ್ವಿಯವರು ಒಮ್ಮೆ ನಿಮಗೆ "ಎಲ್ಲಾ waste ಆಯ್ತು ಕಣ್ರಿ" ಎಂದು ಹೇಳಿದ್ದರ ಬಗ್ಗೆ ಬರೆದಿದ್ದು ನೆನಪಾಯಿತು. ಆ ಸಾಲು ಕೂಡ ನನಗೆ ಮಿಂಚುಗತೆಯಂತೇ ಭಾಸವಾಗುವುದು.


| Nataraj Huliyar Replies

ಪ್ರಿಯ ಎಂಜಿ ಚಂದ್ರಶೇಖರ್, ಟಾಲ್ ಸ್ಟಾಯ್ ಅವರ "ಅನ್ನಾಕರೆನಿನಾ" ಕಾದಂಬರಿಯ ಮೊದಲ ಸಾಲು ನಾನು ಉಲ್ಲೇಖಿಸಿದ ಸಾಲಿಗೆ ಹತ್ತಿರವಿದೆ. ಥ್ಯಾಂಕ್ಸ್ ತೇಜಸ್ವಿಯವರ ಮಾತನ್ನು ನೆನಪಿಸಿದ್ದಕ್ಕೆ. ಹದಿನೆಂಟು ವರ್ಷಗಳ ಕೆಳಗೆ ಆ ರಾತ್ರಿ ಇದ್ದಕ್ಕಿದ್ದಂತೆ ತೇಜಸ್ವಿ ಹೇಳಿದರು:" ಎಲ್ಲ ವೇಸ್ಟ್ ಆಯ್ತಲ್ರೀ!" ನಿಜ. ಅದೇ ಒಂದು ಮಿಂಚುಗತೆ! ಆ ಮಾತು ಇದೇ ಅಂಕಣದ "ತೇಜಸ್ವಿ ಕಲಿಸುವ ಪಾಠಗಳು" ಲೇಖನದಲ್ಲಿದೆ. https://natarajhuliyar.com/dailyblogs/tejaswi-lessons-for-writers-and-readers


| Arundhati D

"ಮಿಂಚು ಕತೆ" ಧನ್ಯವಾದ ಸರ್ .


| sanganagouda

ಗುಡ್ಡದಂಥ ರಾಗ ಮಾಡಿ ಹುಲ್ಲುಕಡ್ಡಿಯಂಥ ಕತೆ ಬರೆಯುವ ನಮ್ಮಂಥವರಿಗೆ ಇಂಥ ಬರೆವಣಿಗೆ ಮುಖ್ಯವೆನಿಸಿತು ಸರ್. ಈ ತರಹದ ಲೇಖನಗಳನ್ನು ನಾನು ನಿಮ್ಮಿಂದ ಸಾಕಷ್ಟೂ ನಿರೀಕ್ಷಿಸುವೆ.. ಧನ್ಯವಾದಗಳು ❤️


| ಡಾ. ನಿರಂಜನ ಮೂರ್ತಿ ಬಿ ಎಂ

'ಮಿಂಚುಕತೆಯ ಗಾಢ ಸತ್ಯಗಳು' ಮಿಂಚಿನ ಹಾಗೇ ಮಿಂಚಿ ಮಾಯವಾದವು. ಆದರೆ ಮತ್ತೆ ಮತ್ತೆ ಮಿಂಚುತ್ತಿವೆ! ಪ್ರತಿಬಾರಿಯೂ ಮಿಂಚು ಭಿನ್ನವಾಗಿ ಕಾಣುತ್ತಿದೆ!!


| ರಾಮಚಂದ್ರ ನಾಯಕ

ಲೇಖನ ಒಂದು ವಿಶಿಷ್ಟ ಅನುಭವವನ್ನು , ಚಿಂತನೆಯನ್ನು ನೀಡುತ್ತದೆ😁


| Shashikala N

ಮಿಂಚುಕತೆಗಳು ಚಿಕ್ಕವೇ ಆದರೂ ಮಿಂಚುತ್ತಲೇ ಇರುತ್ತವೆ. ಆ ಮಿಂಚು, ಕಥೆಯ ತಿರುಳನ್ನು ಮಿಂಚಿಸುತ್ತದೆ.




Add Comment


Nataraj Huliyar on Book Prize Awardees

YouTube






Recent Posts

Latest Blogs