ಹಾವಿನ ಕತೆಯ ಹಲವು ಜನ್ಮ

ಕೆಲವು ವರ್ಷಗಳ ಕೆಳಗೆ ಕಂಬಾರ ಮತ್ತು ಕಾರ್ನಾಡರಿಗೆ ಎ.ಕೆ. ರಾಮಾನುಜನ್ ಒಂದೇ ಜನಪದ ಕತೆಯನ್ನು ಹೇಳಿದರು. ಈ ಕತೆ ಇಬ್ಬರು ನಾಟಕಕಾರರ ಸೃಜನಶೀಲತೆಯನ್ನು ಎರಡು ಬಗೆಯಲ್ಲಿ ಕೆಣಕಿ, ‘ಸಿರಿಸಂಪಿಗೆ’, ‘ನಾಗಮಂಡಲ’ ನಾಟಕಗಳು ಹುಟ್ಟಿದವು. 

ಈ ಕತೆ ರಾಮಾನುಜನ್‌ಗೆ ಸಿಕ್ಕಿದ್ದು ಸತ್ಯಭಾಮ ಕಂಬಾರ ಅವರ ಊರಾದ ಅಕ್ಕತಂಗೇರ ಹಾಳದಲ್ಲಿ! ಕತೆಗಾರ ಕರಿಗೌಡ ಬೀಚನಹಳ್ಳಿ ಈ ಮಾಹಿತಿ ಕೊಟ್ಟಾಗ ನನ್ನೊಳಗೆ `ಫ್ರಾಯ್ಡಿಯನ್’ ತರಂಗಗಳೆದ್ದವು! ಆ ವಿವರಣೆ ಇಲ್ಲಿ ಬೇಡ! ರಾಮಾನುಜನ್ ಇಂಗ್ಲಿಷಿಗೆ ಅನುವಾದಿಸಿದ ಈ ಕತೆಯನ್ನು ಕರಿಗೌಡರು ‘ನಾಗಮಂಡಲ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಈ ಕತೆಯ ಸಾರಾಂಶ: 

ತರುಣಿ ಕಾಮಾಕ್ಷಿಯ ಗಂಡ ತನ್ನ ಹೆಂಡತಿಯ ಬಗ್ಗೆ ಒಲವಿಲ್ಲದೆ, ಪ್ರೇಯಸಿಯ ಮನೆಗೆ ಮಲಗಲು ಹೋಗುತ್ತಿದ್ದ. ಇದನ್ನು ತಪ್ಪಿಸಲು ಮುದುಕಿಯೊಬ್ಬಳು ಕಾಮಾಕ್ಷಿಗೆ ಒಂದು ಬೇರನ್ನು ತೇಯ್ದು ಪಾಯಸ ತಯಾರಿಸಿ, ‘ಇದನ್ನು ನಿನ್ನ ಗಂಡನಿಗೆ ಕುಡಿಸು; ಅವನು ನಿನ್ನ ‘ಕೈವಶ’ ಆಗುತ್ತಾನೆ’ ಎಂದಳು. ರಕ್ತದಂತಿದ್ದ ಪಾಯಸ ಕಂಡ ಕಾಮಾಕ್ಷಿಗೆ ‘ಇದನ್ನು ಕುಡಿದು ಗಂಡ ತೀರಿಕೊಂಡರೆ ಗತಿಯೇನು!’ ಎಂದು ದಿಗಿಲಾಗಿ ಪಾಯಸವನ್ನು ಮನೆಯ ಹಿತ್ತಲಿನಲ್ಲಿದ್ದ ಹುತ್ತಕ್ಕೆ ಸುರಿದಳು. ಹುತ್ತದಲ್ಲಿದ್ದ ಹಾವು ಪಾಯಸ ಕುಡಿಯಿತು; ಮತ್ತೇರಿದ ಹಾವಿಗೆ ಕಾಮಾಕ್ಷಿಯ ಬಗ್ಗೆ ಮೋಹ ಹುಟ್ಟಿತು. ಒಂದು ರಾತ್ರಿ ಆ ಹಾವು ಕಾಮಾಕ್ಷಿಯ ಗಂಡನ ವೇಷದಲ್ಲಿ ಬಂದು ಅವಳನ್ನು ಕೂಡಿತು. ಕಾಮಾಕ್ಷಿ ಗರ್ಭ ಧರಿಸಿದಳು. ಹಾವು ಕಾಮಾಕ್ಷಿಗೆ ತನ್ನ ನಿಜ ಸ್ವರೂಪ ತೋರಿಸಿ, ‘ನಾನು ನಾಗರಾಜ’ ಎಂದು ಹೇಳಿತು. 

ತಾನೆಂದೂ ಕೂಡದ ಕಾಮಾಕ್ಷಿ ಗರ್ಭಿಣಿಯಾಗಿದ್ದನ್ನು ಕಂಡು ಗಂಡ ಕೋಪಗೊಂಡ; ಕಾಮಾಕ್ಷಿಯ ತಂದೆತಾಯಿಗಳಿಗೆ ದೂರು ಕೊಟ್ಟ. ಕಾಮಾಕ್ಷಿ ನಾಗರಾಜನ ಸಲಹೆಯಂತೆ, ‘ನನ್ನ ಹೊಟ್ಟೆಯಲ್ಲಿರುವ ಮಗು ನನ್ನ ಗಂಡನದೇ; ಬೇಕಾದರೆ ನಾನು ಶಿವನ ಗುಡಿಯಲ್ಲಿ ನಾಗರಹಾವನ್ನು ಕೈಯಲ್ಲಿ ಹಿಡಿದು ಈ ಸತ್ಯವನ್ನು ಸಿದ್ಧ ಮಾಡಿ ತೋರಿಸುತ್ತೇನೆ’ ಎಂದಳು. ಊರವರೆಲ್ಲ ಶಿವನ ಗುಡಿಗೆ ಬಂದರು. ಐದು ಹೆಡೆಯ ನಾಗರಾಜ ಶಿವಲಿಂಗದ ಮೇಲೆ ಸಿಂಬೆ ಮಾಡಿಕೊಂಡು ಕೂತಿದ್ದ. ಹಾವನ್ನು ಕೈಯಲ್ಲಿ ಹಿಡಿದುಕೊಂಡ ಕಾಮಾಕ್ಷಿ, ‘ದೇವರೇ! ನನ್ನ ಹೊಟ್ಟೆಯಲ್ಲಿರುವ ಕುಡಿ ನನ್ನ ಗಂಡನದೇ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಕಚ್ಚಿ ಸಾಯಿಸು’ ಎಂದಳು. 

ನಾಗರಾಜ ಕಾಮಾಕ್ಷಿಯ ಕೊರಳಿನ ಸುತ್ತ ಹಾರವಾಗಿ ಸುತ್ತಿಕೊಂಡು ಹೆಡೆ ಬಿಚ್ಚಿದ. ಜನ ಕಾಮಾಕ್ಷಿಯ ಪಾತಿವ್ರತ್ಯವನ್ನು ಕೊಂಡಾಡಿದರು. ಆಕೆಯ ಪಾತಿವ್ರತ್ಯದ ಬಗ್ಗೆ ಖಾತ್ರಿಯಾದ ಗಂಡ ತನ್ನ ಹೆಂಡತಿ, ಮಗುವಿನ ಜೊತೆ ಸಂತೋಷದಿಂದ ಇರತೊಡಗಿದ. ಹಲವು ದಿನಗಳಾದ ಮೇಲೆ ನಾಗರಾಜ ಒಂದು ರಾತ್ರಿ ಕಾಮಾಕ್ಷಿ ಮಲಗುವ ಕೋಣೆಗೆ ಬಂದ. ಕಾಮಾಕ್ಷಿ ಗಂಡ, ಮಗುವಿನ ಜೊತೆ ನೆಮ್ಮದಿಯಾಗಿ ನಿದ್ರಿಸುತ್ತಿದ್ದಳು. ಅದನ್ನು ಕಂಡ ನಾಗರಾಜನಿಗೆ ಹೊಟ್ಟೆ ಕಿಚ್ಚಾಗಿ, ಸಂಕಟವಾಯಿತು; ಅವಳ ಕೂದಲಿಗೆ ಸುತ್ತಿಕೊಂಡು ಮಂಚದ ತುದಿಗೆ ನೇಣು ಹಾಕಿಕೊಂಡು ಸತ್ತ. ಮಾರನೆಯ ಬೆಳಗ್ಗೆ ಸತ್ತ ಹಾವನ್ನು ಕಂಡು  ದುಃಖಿಸಿದ ಕಾಮಾಕ್ಷಿ ‘ಈ ಹಾವು ನಿನ್ನನ್ನು ನನಗೆ ಮರಳಿ ತಂದುಕೊಟ್ಟಿತು’ ಎಂದು ಗಂಡನೆದುರು ಹಾವಿನ ಮಹಿಮೆಯನ್ನು ಹೊಗಳಿದಳು; ಮಗನ ಕೈಯಲ್ಲಿ ನಾಗರಾಜನಿಗೆ ಅಂತ್ಯಸಂಸ್ಕಾರ ಮಾಡಿಸಿದಳು.

ಈ ಕತೆ ಎಲ್ಲಿಂದ ಬಂತೋ! ಎಲ್ಲಿಗೆ ಹೋಯಿತೋ! ಇಂಥದೊಂದು ತಮಿಳು ಜನಪದ ಕತೆಯನ್ನು ಸುಧೀರ್ ಕಾಕರ್ ತಮ್ಮ ‘ಇಂಟಿಮೇಟ್ ರಿಲೇಷನ್ಸ್’ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ: ತಮಿಳಿನ `ಮದನ ಕಾಮರಾಜ ಕಥೈ’ಯಲ್ಲಿ ಸರ್ಪ ಮತ್ತೆ ತನ್ನ ಹೆಣ್ಣನ್ನು ಹುಡುಕಿಕೊಂಡು ಬರುತ್ತದೆ. ಹೆಣ್ಣು ಸುಖ ನಿದ್ರೆಯಲ್ಲಿದ್ದಾಳೆ; ಗರ್ಭ ಧರಿಸಿದ್ದಾಳೆ. ತಾಯ್ತನದ ನಿರೀಕ್ಷೆಯ ಸಂತೃಪ್ತಿಯಲ್ಲಿರುವ ಅವಳನ್ನು ಕಂಡು ಸರ್ಪಕ್ಕೆ ದುಃಖವಾಗುತ್ತದೆ; ಸರ್ಪ ಅವಳ ಜಡೆಯಲ್ಲಿ ನೇಣು ಹಾಕಿಕೊಂಡು ಸಾಯುತ್ತದೆ. 

ಸುಧೀರ್ ಕಾಕರ್ ಪ್ರಕಾರ, ಸರ್ಪ ಈ ಬಗೆಯಲ್ಲಿ ಸಾಯುವುದರಲ್ಲಿ ಕಾಮ ಕುರಿತಂತೆ ಭಾರತೀಯ ಸಂಸ್ಕೃತಿಯ ನೋಟ ವ್ಯಕ್ತವಾಗಿದೆ. ಭಾರತೀಯ ನೋಟಕ್ರಮಗಳಂತೆಯೇ ಕಾಮದ ಉದ್ದೇಶ ತಾಯ್ತನದ ಹೊತ್ತಿಗೆ ಮುಗಿಯಿತು ಎಂಬುದನ್ನು ಈ ಕತೆ ಸೂಚಿಸುತ್ತದೆ ಎನ್ನುತ್ತಾರೆ ಸುಧೀರ್ ಕಾಕರ್. ಭಾರತೀಯ ದೃಷ್ಟಿಯಲ್ಲಿ ಕಾಮಕ್ಕೆ ಇರುವ ಪರಿಧಿಯೆಂದರೆ ತಾಯ್ತನ, ಅಷ್ಟೇ. ಗಂಡನಿಂದ ತಿರಸ್ಕೃತಳಾದ ಹೆಣ್ಣಿಗೆ ಗರ್ಭ ನೀಡಿ, ಅವಳಿಗೆ ತಾಯ್ತನ ದೊರೆತ ಮೇಲೆ ಸರ್ಪ ಸಾಯುತ್ತದೆ. ಸರ್ಪ ಶಿಶ್ನದ ಅಥವಾ ಕಾಮದ ಸಂಕೇತವೆನ್ನುವುದನ್ನು ಎರಡು ಕತೆಗಳೂ ಸೂಚಿಸುತ್ತವೆ. ಕಂಬಾರರ ಸಿರಿಸಂಪಿಗೆ ಕೂಡ ದಾಂಪತ್ಯ ಹಾಗೂ ತಾಯ್ತನದ ನೆಮ್ಮದಿಗೆ ಮರಳುತ್ತಾಳೆ. ಕಾಮದ ಉದ್ದೇಶ ಇಷ್ಟೇ ಎಂಬ ಭಾರತೀಯ ನೋಟವನ್ನೇ ಕಂಬಾರರ ‘ಸಿರಿಸಂಪಿಗೆ’ ನಾಟಕದ ಕೊನೆಯೂ ಹೇಳುತ್ತಿರುವಂತಿದೆ.

ತಮಿಳಿನ ‘ಮದನಕಾಮರಾಜ ಕಥೈ’ ಹಾಗೂ ಕಂಬಾರ, ಕಾರ್ನಾಡರು ಬಳಸಿರುವ ಅಕ್ಕತಂಗೇರ ಹಾಳದ ಜನಪದ ಕತೆಗಿಂತ ಕೊಂಚ ಭಿನ್ನವಾದ ‘ಪರವುಗುಂಡಿ ಕತೆ’ ಟಿ. ಗೋವಿಂದರಾಜು ಸಂಪಾದಿಸಿರುವ ‘ಬಿಸಿನೆಸ್ ಮ್ಯಾನೇಜ್‌ಮೆಂಟ್ ಕತೆಗಳು’ ಸಂಕಲನದಲ್ಲಿದೆ. ದೊಡ್ಡಬಳ್ಳಾಪುರದ ಬಳಿಯ ತೂಬುಗೆರೆಯ ಹನುಮಂತಯ್ಯ ಅಲಿಯಾಸ್ ವಾಗಿನ್ ಹೇಳಿದ ಕತೆಯಿದು: 

ಚಂದ್ರಗಿರಿ ಪಟ್ಟಣದ ನವಬೋದರಾಜನ ಐದನೇ ಮಗನಿಗೆ ಬಡವಿ ಪರವುಗುಂಡಿಯನ್ನು ಕೊಟ್ಟು ಮದುವೆ ಮಾಡುತ್ತಾರೆ. ಅಷ್ಟೊತ್ತಿಗಾಗಲೇ ಈ ಐದನೇ ಮಗ ‘ಪದ್ಮಾವತಿ ಮನೇ ಪಳಗ್ಬಿಟ್ಟ’ ವನಾಗಿರುತ್ತಾನೆ. ಪರವುಗುಂಡಿ ರಾಜರ ಮನೆಯ ತೊತ್ತಾಗಬೇಕಾಗುತ್ತದೆ. ಒಮ್ಮೆ ಅವಳ ಸ್ಥಿತಿ ನೋಡಿ ಗಂಡನಿಗೆ ನಾಚಿಕೆಯಾಗಿ, ‘ನನ್ ಹೆಂಡ್ತೀನ ಹಿಂಗೆ ಎಮ್ಮೆ ಕಾಯಂಗೆ ಮಾಡ್ಬಿಟ್ಟೆನಲ್ಲಾ, ನನಗಿನ್ನ ಹೆಂಡ್ತೀನೂ ಬ್ಯಾಡ. ಮನೇನೂ ಬ್ಯಾಡ, ದೇಸಾಂತ್ರ ಹೋಗ್ಬಿಡ್ಬೇಕು ಅಂತ ತೀರ್ಮಾನ ಮಾಡ್ದ.’  ಗಂಡ ಕುದುರೆಯೇರಿ ದೇಸಾಂತ್ರ ಹೊರಟಾಗ ಪರವುಗುಂಡಿ ಬರಿಗಾಲಲ್ಲೇ ಅವನನ್ನು ಹಿಂಬಾಲಿಸುತ್ತಾಳೆ. ಕೊನೆಗೆ‌ ಇಬ್ಬರೂ ಒಂದೇ ಮನೆಯಲ್ಲಿ ಇರುವಂತಾಗುತ್ತದೆ. ಪರವುಗುಂಡಿಯ ಸ್ಥಿತಿ ಹಾಗೇ ಮುಂದುವರಿಯುತ್ತದೆ. ಅಲ್ಲೂ ಗಂಡ ನಾಯಕಸಾನಿಯ ಮನೆಗೆ ರೂಢಿಯಾಗುತ್ತಾನೆ! 

ಪರವುಗುಂಡಿಯ ಸ್ಥಿತಿ ಕಂಡು ಮರುಗಿದ ಮುದುಕಿಯೊಬ್ಬಳು ಮದ್ದು ಹಾಕಿದ ಅನ್ನವನ್ನು ಗಂಡನಿಗೆ ಉಣ್ಣಿಸಿದರೆ ಅವನು ಇವಳಿಗೆ ಒಲಿಯುವನೆಂದು ಮದ್ದು ಕೊಡುತ್ತಾಳೆ. ಪರವುಗುಂಡಿ ಮದ್ದು ಬೆರೆಸಿ ಅಡುಗೆ ಮಾಡುತ್ತಾಳೆ; ನಂತರ ಹೆದರಿ ಹಿಂಜರಿದು ಅಡುಗೆ ಬೇಯಿಸಿದ ಮಡಕೆಯನ್ನು ಬಾವಿಗೆಸೆಯುತ್ತಾಳೆ. ಮಡಕೆ ಸರ್ಪದ ತಲೆಯ ಮೇಲೆ ಬೀಳುತ್ತದೆ. ಕರ್ಣಕುಂಡ್ಲದಿಂದ ಬಳಲುತ್ತಿದ್ದ ಸರ್ಪಕ್ಕೆ ಮಹಾಪತಿವ್ರತೆಯ ಕೈಯಲ್ಲಿ ಮಾತ್ರ ಕರ್ಣಕುಂಡ್ಲ ಒಡೆಯುತ್ತದೆ ಎಂಬ ಕಣಿಯಿತ್ತು. ಈಗ ಶಾಪ ವಿಮೋಚನೆಯಾದ ಸರ್ಪ ಕೃತಜ್ಞತೆಯಿಂದ ಪರವುಗುಂಡಿಗೆ ಸಹಾಯ ಮಾಡಲು ಬರುತ್ತದೆ. ಅವಳ ಸ್ಥಿತಿ ಅರಿತ ಸರ್ಪ ಬೆಳಗಿನ ಹೊತ್ತು ಹನ್ನೆರಡು ವರ್ಷದ ಹುಡುಗ ‘ನಾಗೀಂದ್ರ’ನ ರೂಪು ತಳೆಯುತ್ತದೆ. ಪರವುಗುಂಡಿಯ ಗಂಡನ ಗೆಳೆಯನಾದ ನಾಗೀಂದ್ರ ಅವರ ಮನೆಗೆ ‘ರೂಢಿಯಾಗುತ್ತಾನೆ’. ಒಂದು ರಾತ್ರಿ ನಾಗೀಂದ್ರ ಪರವುಗುಂಡಿಯ ಗಂಡನ ವೇಷದಲ್ಲಿ ಆಕೆಯನ್ನು ಕೂಡುತ್ತಾನೆ. ಆಕೆ ಗರ್ಭಿಣಿಯಾಗುತ್ತಾಳೆ. 

ಈ ಕತೆಯ ಮುಂದಿನ ತಿರುವು ಅಚ್ಚರಿ ಹುಟ್ಟಿಸುತ್ತದೆ. ತಮಿಳು ಜನಪದ ಕತೆ; ಸತ್ಯಭಾಮ ಕಂಬಾರ ಹೇಳಿದ ಕತೆ; ಕಂಬಾರ, ಕಾರ್ನಾಡರ ನಾಟಕಗಳು… ಈ ಎಲ್ಲವುಗಳಿಗಿಂತ ಪರವುಗುಂಡಿ ಕತೆಯ ಕೊನೆ ವಿಶಿಷ್ಟವಾಗಿದೆ: 

ಪರವುಗುಂಡಿಯ ಗಂಡ ಪತ್ನೀಗರ್ಭದ ನಿಗೂಢ ಚೋದ್ಯದಿಂದ ಅಚ್ಚರಿಗೊಂಡು ಒಂದು ದಿನ ರಾತ್ರಿ ಮನೆಯ ಮೇಲೆ ಕಾವಲು ಕೂರುತ್ತಾನೆ. ಸರ್ಪವು ಮೂಲ ವೇಷವನ್ನು ಕಳಚಿ ತನ್ನ ವೇಷ ಧರಿಸುವುದನ್ನು ಕಂಡು ಗಂಡ ಮೂರ್ಛೆ ಹೋಗುತ್ತಾನೆ. ಇದಾದ ಮೇಲೂ ಆತ ನಾಯಕಸಾನಿಯ ಮನೆಗೆ ಹೋಗುತ್ತಾನೆ. ಪರವುಗುಂಡಿಗೆ ಮಕ್ಕಳಾದ ಮೇಲೆ ಅವಳು ತನ್ನ ಮೂಲ ಗಂಡನ ಜೊತೆ ರಾಣಿಯಾಗಿ ಮತ್ತೆ ಪಟ್ಟಣಕ್ಕೆ ಮರಳುತ್ತಾಳೆ. 

‘ಪರುವುಗುಂಡಿ’ ಕತೆ ಕುರಿತು ಟಿ. ಗೋವಿಂದರಾಜು ಬರೆಯುತ್ತಾರೆ: ‘ಮನುಷ್ಯನ ಜಟಿಲ ಬದುಕಿನ ಕಷ್ಟ ಸುಖಗಳನ್ನು ನೋಡಿದವರು, ಅನುಭವಗಳಿಂದ ಮಾಗಿದವರು ಈ ಬಗೆಯ ಅನುಭವವೂ ಜೀವನದ ಭಾಗವೆಂದು ಒಪ್ಪಿಕೊಂಡು ಒಟ್ಟಿಗೆ ಬದುಕನ್ನು ಮುಂದುವರಿಸುವ ಈ ಆರೋಗ್ಯಕರ ಧೋರಣೆ ತಳ ಸಮುದಾಯಗಳಲ್ಲಿ ಇವತ್ತಿಗೂ ಜೀವಂತವಾಗಿದೆ. ಅನುಮಾನದ ಅಪಸ್ವರ ಕೇಳಿ ಬಂದ ತಕ್ಷಣ ಪತ್ನಿಯನ್ನೇ ರಾಜ್ಯ ಬಿಟ್ಟು ಕಳಿಸಿದ ರಾಮನ ಕತೆಗೆ ಹೋಲಿಸಿದರೆ ನಮ್ಮ ಜನಪದರ ಈ ಉದಾರ ದೃಷ್ಟಿಕೋನ ಅನುಕರಣೀಯ ಆದರ್ಶವಾಗಿದೆ.’ 

ಗೋವಿಂದರಾಜು ಮುಂದೊಮ್ಮೆ ನನಗೆ ಬರೆದ ಇ-ಮೇಲ್‌ನಲ್ಲಿ ಅವರ ವ್ಯಾಖ್ಯಾನ ಮುಂದುವರಿಯಿತು: ‘ಈ ಕತೆಯಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆಯ ಕಷ್ಟಸುಖಗಳನ್ನು ಕಂಡುಂಡ ಗಂಡನಿಗೆ ಸಂಪ್ರದಾಯಬದ್ಧವಾಗಿ ಕೈ ಹಿಡಿದ ಪತ್ನಿಯ ನೈತಿಕತೆಯನ್ನು ಪ್ರಶ್ನಿಸುವುದು ತೀರಾ ಅನಿವಾರ್ಯ ಎನಿಸಿಲ್ಲ. ಸಾಮಾನ್ಯ ವರ್ಗದ ಗಂಡ ಹೆಂಡಿರಲ್ಲಿ ನೈತಿಕತೆಯ ಗೆರೆ ತೀರಾ ತೆಳುವಾಗಿರಬಹುದು. ಇಂಥ ಅನೇಕ ನೈಜ ಘಟನೆಗಳಲ್ಲಿ ‘ಇವೆಲ್ಲಾ ಜೀವನದ ಭಾಗವೇ ಆಗಿವೆ; ಆದದ್ದಾಯಿತು, ಇನ್ನಾದರೂ ನನ್ನ ಬದುಕು ಹಸನಾಗಲಿ’ ಎಂದು ಹೆಂಡತಿಯನ್ನು ಒಪ್ಪಿಕೊಂಡು ಸಂಸಾರ ಮುಂದುವರೆಸಿದವರಿದ್ದಾರೆ. ಈ ಕತೆಯ ಉದ್ದಕ್ಕೂ ಬರುವ ಅಂತಹ ಹೊಂದಾಣಿಕೆಯ ಅನೇಕ ಪ್ರಸಂಗಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಅನುಮಾನದ ಅಪಸ್ವರ ಕೇಳಿ ಬಂದಾಕ್ಷಣವೇ ತುಂಬುಗರ್ಭಿಣಿ ಧರ್ಮಪತ್ನಿಯನ್ನೇ ಕಾಡಿಗಟ್ಟಿದ ರಾಮನ ಆದರ್ಶ ಕತೆ ಇವರಿಗೆ ಗೊತ್ತಿರಲಿಲ್ಲ ಎಂದೇನಲ್ಲ.’ 

ದೊಡ್ಡಬಳ್ಳಾಪುರದ ಸುತ್ತಿನ ಈ ಜನಪದ ಕತೆಯನ್ನು ಕಂಬಾರ, ಕಾರ್ನಾಡರು ಕೇಳಿಸಿಕೊಂಡಿದ್ದರೆ ಅವರ ನಾಟಕಗಳ ಕೊನೆ ಹೇಗಿರುತ್ತಿತ್ತೋ! ಈ ಇಬ್ಬರೂ ಮೂಲ ಕತೆಯನ್ನು ಫ್ರಾಯ್ಡಿಯನ್ ಮನೋವಿಶ್ಲೇಷಣೆಯ ಹಿನ್ನೆಲೆಯಲ್ಲಿ ಗ್ರಹಿಸಿ, ತಂತಮ್ಮ ಕಲ್ಪನಾವಿಲಾಸದ ಮೂಲಕ ಎರಡು ಆಧುನಿಕ ನಾಟಕಗಳನ್ನು ಸೃಷ್ಟಿಸಿದಂತಿದೆ. ಆದರೆ, ಎಷ್ಟೇ ‘ಆಧುನಿಕ’ ನಾಟಕಕಾರರಾದರೂ ಪರವುಗುಂಡಿಯ ಕತೆ ಹೊಮ್ಮಿಸುವ ಔದಾರ್ಯ, ಭಾರತದ ಕುಟುಂಬಗಳಲ್ಲೂ ಇರುವ ಸಹಜ ಉದಾರ ಗುಣ ಅವರ ನಾಟಕಗಳಲ್ಲಿ ಮೂಡಲಿಲ್ಲವಲ್ಲ! 

ಇದೇನೂ ಕಂಬಾರ, ಕಾರ್ನಾಡರ ಸ್ವತಂತ್ರ ಕಲ್ಪನಾವಿಲಾಸ ಕುರಿತ ಆಕ್ಷೇಪಣೆಯಲ್ಲ; ಸಾಹಿತ್ಯದ ವಿದ್ಯಾರ್ಥಿಯೊಬ್ಬನ ಒಂದು ವಿಚಿತ್ರ ಅಚ್ಚರಿಯ ಉದ್ಗಾರ, ಅಷ್ಟೆ!

Share on:

Comments

22 Comments



| Dr.Mohan Mirle

ಕಂಬಾರರ \'ಸಿರಿಸಂಪಿಗೆ\', ಕಾರ್ನಾಡರ \'ನಾಗಮಂಡಲ\' ಮತ್ತು ಇವೆರಡಕ್ಕೂ ಮೂಲವಾದ ರಾಮಾನುಜನ್ ಅವರು ಹೇಳಿದ ಜನಪದ ಕತೆ ಇವಿಷ್ಟೇ ತಿಳಿದಿದ್ದ ನನಗೆ ಈ ಬರಹದಿಂದ ಈ ವಸ್ತುವಿನ ತಮಿಳು ಜನಪದ ಕತೆ; ಸತ್ಯಭಾಮ ಕಂಬಾರ ರಾಮಾನುಜನ್ ಅವರಿಗೆ ಹೇಳಿದ್ದು, ಮತ್ತೊಂದು \'ಪರುವುಗುಂಡಿ ಕತೆ\' ಇವೆಲ್ಲವನ್ನೂ ತಿಳಿಯಲು ಸಾಧ್ಯವಾಯಿತು. ಒಂದು ಕಥೆಯ ಭಿನ್ನ ರೂಪ, ಅರ್ಥ, ಪ್ರಯೋಗ, ಆಶಯ ಮತ್ತು ವ್ಯಾಖ್ಯಾನಗಳು ಹೇಗೆ ಒಂದು ಸಮಾಜದ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಮತ್ತು ಕೆಲವೊಮ್ಮೆ ಅವು ಮುಂಗಾಣ್ಕೆಯಿಂದ ಕೂಡಿರುತ್ತವೆ ಎಂಬುದು, ಪ್ರಸ್ತುತ ಸಮಾಜದೊಂದಿಗೆ ಹೋಲಿಸಿ ನೋಡಿದಾಗ ನಿಜಕ್ಕೂ ಬೆರಗುಮೂಡಿಸುವಂತಿದೆ.


| Hari Prasad

ಅಗಳಪ್ಪ \r\nಏನು ಚಂದಾಗದೆ ಈ ಕತೆ, ಕತೆಗಾರನ ವ್ಯಾಖ್ಯಾನ. ಇದನ್ನು ಹುಡುಕಿ ಬರೆದಿದ್ದಕ್ಕೆ ಟ್ಯಾಂಕ್ಸ್ ಸಾ, ಟ್ಯಾಂಕ್ಸ್ ಸಾ....


| Hari Prasad

ಅಗಳಪ್ಪ \r\nಏನು ಚಂದಾಗದೆ ಈ ಕತೆ, ಕತೆಗಾರನ ವ್ಯಾಖ್ಯಾನ. ಇದನ್ನು ಹುಡುಕಿ ಬರೆದಿದ್ದಕ್ಕೆ ಟ್ಯಾಂಕ್ಸ್ ಸಾ, ಟ್ಯಾಂಕ್ಸ್ ಸಾ....


| Anil Gunnapur

ಹಾವಿನ ಕತೆ ಇಷ್ಟವಾಯಿತು


| Sanganagowda

ಪರವುಗುಂಡಿ ಮುಂದುವರೆದ ಕತೆ‌, ನಾಟಕ ಹುಟ್ಟಬೇಕಾಗಿದೆ. ಒಳ್ಳೆಯ ವಿಶ್ಲೇಷಣೆ.


| Kavitha

Interesting!\r\n


| Saleem

ಚೆನ್ನಾಗಿದೆ.


| Dr. Karigowda Bichanahally

ಹಾವಿನ ಕತೆಯ ಹಲವು ಜನ್ಮ\' ಲೇಖನದಲ್ಲಿ ಈ ಜನಪದ ಕಥೆಯ version ಗಳನ್ನು ಇಟ್ಟುಕೊಂಡು ಒಳ್ಳೆ analysis ಮಾಡಿದ್ದೀರಿ. ಪರವುಗುಂಡಿ ಕತೆಯಲ್ಲಿ ಆಕೆಯ ನೈತಿಕತೆಯನ್ನು ಪ್ರಶ್ನೆ ಮಾಡಲು ಹೊರಟರೆ, ಗಂಡನ ನೈತಿಕತೆಯ ಪ್ರಶ್ನೆಯೂ ಎದುರಾಗುತ್ತದೆ.\r\nಅನೈತಿಕತೆ ಕೂಡ ಹೇಗೆ ಸಂಪ್ರದಾಯ ಸಮಾಜದಲ್ಲಿ ಒಪ್ಪಿತ ಮೌಲ್ಯ ಆಗಿಬಿಡುತ್ತದೆ !ಮಾಸ್ತಿ ಕಥೆಗಳಲ್ಲಿ ಇಂತಹ ಅನೇಕ ಸಾಮಾನ್ಯ ಪಾತ್ರಗಳು ಸಿಗುತ್ತವೆ ಅಲ್ಲವೇ? Nice perspective. Congratulations


| Dr.Prabhakar

I had not read Nagamandala. Your simple and artistic narration provided me the folk beauty of the story. Congratulations


| Vatsala

ಸಿರಿಸಂಪಿಗೆ , ನಾಗಮಂಡಲಗಳ ಮೂಲ ಜನಪದ ಕಥೆಯ ಉಲ್ಲೇಖ ಓದಿದಾಗ ನೆನಪಾದುದು \' ಅಹಲ್ಯೆಯ ಕಥೆ \' - ದೇವೇಂದ್ರ ಗೌತಮ ಋಷಿಯಾಗಿ ರೂಪಾಂತರಗೊಂಡು ಅಹಲ್ಯೆಯನ್ನು ಸೇರಿದ್ದು ; ತನ್ನ ಹಾಗೇ ರೂಪ ತಾಳಿ ಬಂದರೂ ಪರಪುರುಷನನ್ನು ಗುರುತಿಸುವಲ್ಲಿ ಸೋತ ಅಹಲ್ಯೆಗೆ \' ಶಿಲೆ \'ಯಾಗುವಂತೆ ಶಪಿಸಿದ ಗೌತಮರ ನಡವಳಿಕೆಗೆ ಹೋಲಿಸಿದರೆ, ಈ ಜನಪದ ಕಥೆ ಉದಾರವಾಗಿದೆ. ಇಲ್ಲಿ ಲೈಂಗಿಕ ಅಭೀಪ್ಸೆಯ ಪೂರೈಕೆಗೆ ಹಿಡಿದ ದಾರಿಯನ್ನು ಅಪಮೌಲ್ಯೀಕರಣಗೊಳ್ಳದಂತೆ ಕಾಣಿಸುವ ಸಲುವಾಗಷ್ಟೇ ಲೈಂಗಿಕ ಪ್ರತಿಮೆ ಹಾವು ಬಳಕೆ ಆಗಿರಬಹುದಲ್ಲವೇ? ಜನಪದರಲ್ಲಿ ಕಂಡುಬರುವ ನಾಗದಿವ್ಯ , ಅಗ್ನಿದಿವ್ಯ, ಜಲದಿವ್ಯಗಳ ಆಚರಣೆಯೂ ದಾಂಪತ್ಯ ಉಳಿಸಲೇಬೇಕೆನ್ನುವ ಕಾರಣಕ್ಕೆ ಜಾರಿಗೆ ತಂದ ಸೂಕ್ಷ್ಮ ಪದ್ಧತಿ ಇರಬಹುದೇ? ಪರುವುಗುಂಡಿ ಕತೆಗಾಗಿ ಥ್ಯಾಂಕ್ಸ್.


| Hombaiah

Nice one


| Shashikala

ಪರುವು ಗುಂಡಿಯ ಕಥೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು


| Shashikala

ಪರುವುಗುಂಡಿಯ ಕಥೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು


| ಗುರುಮೂರ್ತಿ

ಕಧೆಯ ವಿಶ್ಲೇಷಣೆಯೋ / ವಿಮರ್ಶೆಯೋ......!? ಈ ಕಥೆಯ ಹಂದರವನ್ನು ಹಲವು ಮಗ್ಗಲುಗಳಿಂದ, ಮೂರನಾಲ್ಕು ಭಾಷೆಯಿಂದ ಹೆಕ್ಕಿ ತೆಗೆದು ರೂಪ ಮನೋಜ್ಞ. ಕಥನ ಶೈಲಿಗೆ ಫೀದಾ ಆದೆ ಸಾರ್.....


| Mahalingeshwar

Very good Comparative analysis. ತೌಲನಿಕ ಅಧ್ಯಯನಕ್ಕೆ ಹೊಸ ಹೊಳಹುಗಳು


| Sumit Metri

Lovely...


| Krishna M

ಜನಪದದ್ದಲ್ಲಿ ಹಾದರವನ್ನ ಸಮಜಾಯಿಸಿಕೊಳ್ಳುವ ಕಥೆಗಳು ಸೊಗಸಾಗಿವೆ. ಹಾದರ ಗಂಡು ಮಾಡಿದರೆ ಸಹಜವಾಗಿ ಬಿಡುವ ಸಮಾಜ ಹೆಣ್ಣು ಅದನ್ನೇ ಮಾಡಿದರೆ ವಕ್ರಿಸುತ್ತೆ, ಸದಾ ಪರಿಶುದ್ಧೆಯಾಗಿರಿಸಲು ಹೆಣ್ಣನು ಅಸಂಭವವೆನ್ನಿಸುವ ಕತೆಗಳು ಕಟ್ಟಿ ಸಮರ್ಥಿಸಿ ಕೊಳುತ್ತಾರೆ. ಅರಿವಿಗೆ ಬಾರದಂತೆ ಜಾರಿದಳು …, ಸಂದರ್ಭ ಕೈ ಕೊಟ್ಟಿತು ಮಾತೊಂದು ಮಗದೊಂದು ಕತೆ ಸಂಪ್ರದಾಯ ಉಳಿಸಲು. \r\n ಮಕ್ಕಳಾದ ನಂತರ ತೃಪ್ತಾಳದ ಮಹಿಳೆ ಕಾಮ ನಿರಾಸಕ್ತಿ ಎಂಬುದು ಸುಳ್ಳು, ಪುರುಷ ಸಂತಾನಕ್ಕಷ್ಟೇ ಸಾಕು ಆಮೇಲೆ ಲಿಂಗದ ಸಾವು ಸರಿಯಲ್ಲ. \r\nಸೊರಗಿ ಶಯೆಯಲ್ಲಿರುವವ ಆಲೋಚನೆಗಳಲ್ಲಿ ಕಾಮವೇ ಹೆಚ್ಚು ತುಂಬಿರುವುದಂತೆ.


| ಡಾ. ನಿರಂಜನ ಮೂರ್ತಿ ಬಿ ಎಂ

\'ಹಾವಿನ ಕತೆಯ ಹಲವು ಜನ್ಮ\' ದಲ್ಲಿ, ಜನಪದ ಕತೆಯ ಹಲವು ರೂಪಗಳನ್ನು ಹುಳಿಯಾರರು ವಿಶ್ಲೇಷಿಸಿರುವ ರೀತಿ ಮನಸನ್ನು ಮುಟ್ಟುತ್ತದೆ. ಕಂಬಾರರ ಸಿರಿಸಂಪಿಗೆ ಮತ್ತು ಕಾರ್ನಾಡರ ನಾಗಮಂಡಲ ಕತೆಗಳಿಗಿಂತ ಪರವುಗುಂಡಿಯ ಕತೆ ಭಿನ್ನವಾದ ಸಾಂಸ್ಕೃತಿಕ ಮತ್ತು ಮಾನವೀಯ ಔದಾರ್ಯವನ್ನು ಬಿಂಬಿಸುತ್ತದೆ. ಆದರೂ ಅನೈತಿಕ ಕಾಮದ ವಿಚಾರದಲ್ಲಿ ಹೆಂಡತಿಗಿಂತ ಗಂಡನಿಗಿರುವ ಔದಾರ್ಯ ವಿಪರೀತವಾಗಿದೆ. ಹೆಣ್ಣಿನ ಅಕ್ರಮ ಲೈಂಗಿಕತೆಯನ್ನು ಖಂಡಿಸುವ ಸಮಾಜದಲ್ಲಿ, ಗಂಡಿನ ಅಕ್ರಮ ಒಪ್ಪಿತವಾಗುತ್ತದೆ. ಆದರೆ ಈ ಅಕ್ರಮ ನಡೆಸುವ ಮೂಲಕ, ಅದೇ ಹೆಣ್ಣನ್ನು ಖಂಡನಾರ್ಹ ಅಕ್ರಮಕ್ಕೆ ದೂಡುವ ಗಂಡಿನ ಧೂರ್ತತೆಯನ್ನು ವಿಶ್ಲೇಷಿಸುವುದು ಹೇಗೆ?


| ಟಿ ಗೋವಿಂದರಾಜು

ಕಾಯುತ್ತಿದ್ದೆ. ಧನ್ಯವಾದಗಳು ಸರ್. ನಿಮ್ಮ ಆಯ್ಕೆ ಉಲ್ಲೇಖ ವಿಶ್ಲೇಷಣೆಗಳಿಂದ ನನ್ನೂರ ಕತೆಗಾರರ ಪ್ರತಿಭೆಗೆ ಆತ್ಮಕ್ಕೆ ಗೌರವ ಸಿಕ್ಕಿದಂತಾಗಿದೆ.


| ಜೀನಹಳ್ಳಿ ಸಿದ್ಧಲಿಂಗಪ್ಪ

ಹಾವಿನ ಕಥೆ ಇನ್ನೂ ಅನೇಕ ಕಥೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವ ಅವಶ್ಯಕತೆ ಇದೆ.


| NATARAJ HULIYAR replies

DEAR Siddalingappa, Please suggest such stories. I will be grateful


| Shamarao

ಜನಪದರ ಔದಾರ್ಯವೇ ಮೂರ್ತಿವೆತ್ತ ಸಹಪಾಠಿ ಗೋವಿಂದರಾಜು ಅವರ ಸಂಗ್ರಹದ ಕತೆಯನ್ನು ಸೂಕ್ತ ಪರಿಪ್ರೇಕ್ಷ್ಯದಲ್ಲಿರಿಸಿ ವಿಶ್ಲೇಷಿದ್ದೀರಿ.




Add Comment


Nataraj Huliyar on Book Prize Awardees

YouTube






Recent Posts

Latest Blogs