ಚಿಯರ್‍ಸ್ ಜೇಪಿ!

ನಾಲ್ಕು ವರ್ಷಗಳ ಕೆಳಗೆ ಒಂದು ಡಿಸೆಂಬರ್ ಮಧ್ಯಾಹ್ನ ಫೋನಿನಲ್ಲಿ ಗೆಳೆಯ ಜೇಪಿಗೆ ‘ಚಿಯರ್‍ಸ್’ ಎಂದೆ. 

‘ಕಾರಣ?’ ಎಂದರು ಜೇಪಿ, ಅಲಿಯಾಸ್, ಬಂಜಗೆರೆ ಜಯಪ್ರಕಾಶ್.

‘ನಿಮ್ಮ ಪದ್ಯರೂಪಕಕ್ಕೆ ಕೊನೆಗೂ ‘ಮದ್ಯಮನ್ನಣೆ’ ಸಿಕ್ಕಿದೆ!’

‘ಆಂ?!’

‘ಒರಿಸ್ಸಾ ಸರ್ಕಾರ ’ಮಹೂವಾ’ ಪಾನೀಯವನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ!’

ಈ ಸುದ್ದಿ ‘ಮಹೂವಾ’ ಹೆಸರಿನ ಪದ್ಯ ಬರೆದು, ಅದೇ ಹೆಸರಿನ ಕವನ ಸಂಕಲನವನ್ನು ಪ್ರಕಟಿಸಿದ್ದ ಜೇಪಿಗೆ ಪುಳಕ ಹುಟ್ಟಿಸಿದ್ದು ಅಚ್ಚರಿಯಲ್ಲ! ಆ ಪುಳಕವನ್ನು ಕೆಲ ದಿನಗಳ ನಂತರ ಜೇಪಿಯ ಸಮಗ್ರ ಕಾವ್ಯಕ್ಕೆ ಬರೆದ ಮುನ್ನುಡಿಯ ಕೊನೆಯ ಭಾಗವಾಗಿಸಿದೆ: 

‘ಈಚೆಗೆ ಒರಿಸ್ಸಾ ಸರ್ಕಾರ ಬಸ್ತಾರ್ ಪ್ರದೇಶದ ಮಹೂವಾ ಹೂಗಳಿಂದ ತಯಾರಾಗುವ ಗುಡ್ಡಗಾಡಿನ ಆರೋಗ್ಯಕರ ಮದ್ಯವನ್ನು ಅಧಿಕೃತವಾಗಿ ಮಾರಾಟಕ್ಕೆ ಬಿಡುಗಡೆ ಮಾಡಿದ ಸುದ್ದಿ ಬಂದಿದೆ! ಮೂವತ್ತು ವರ್ಷಗಳ ಕೆಳಗೆ ‘ಮಹೂವಾ’ವನ್ನು ಕನ್ನಡ ಕಾವ್ಯದ ಚಿರಪರಿಚಿತವಾದ ಸುಂದರ ರೂಪಕವಾಗಿಸಿದ ಜೇಪಿಯ ಸಮಗ್ರ ಕಾವ್ಯಸಂಪುಟದ ಬಿಡುಗಡೆಯ ಸಂದರ್ಭದಲ್ಲೇ ಮಹೂವಾ ಪಾನೀಯದ ಬಿಡುಗಡೆಯ ಸುದ್ದಿಯನ್ನೂ ಕೇಳಿ ರೋಮಾಂಚನಗೊಂಡೆ. ಮಹೂವಾ ಹೂವಿನಿಂದ ತಯಾರಿಸಿದ ಗುಡ್ಡಗಾಡಿನ ಪಾನೀಯದ ಹಾಗೆಯೇ ಲೋಕದ ಸಂಘರ್ಷಗಳ ಒಡಲಿನಿಂದ ಸಹಜವಾಗಿ ಒಡಮೂಡಿರುವ ಜೇಪಿಯ ಒಟ್ಟು ಕಾವ್ಯದ ಆರೋಗ್ಯಕರ ಸಂಘರ್ಷ ಈ ತಲೆಮಾರುಗಳಲ್ಲೂ ಬೆಳೆಯಲಿ.’

ಈ ಸಮಗ್ರ ಕಾವ್ಯ ಸಂಪುಟ ಇನ್ನೂ ಪ್ರಕಾಶಕರ ಸರಳುಗಳಿಂದ ಬಿಡುಗಡೆಯಾಗಿಲ್ಲ. ಇದೆಲ್ಲ ಈಗ ನೆನಪಾಗಿದ್ದಕ್ಕೆ ಕಾರಣ: ಜೇಪಿಗೆ ತಕ್ಕಮಟ್ಟಿಗೆ ವಯಸ್ಸಾಗಿದೆಯೆಂದು ಹೆದರಿಸಲು  ಗೆಳೆಯರ ‘ಗೆಟ್ ಟುಗೆದರ್‍’ ಕುರಿತು ಕೃಷಿತಜ್ಞ ಸ್ವಾಮಿ ಆನಂದ್ ಅವರ ಬ್ರೇಕಿಂಗ್ ನಾಯ್ಸ್. ಮೊನ್ನೆ ತಾನೇ ಲೇಖಕ ಮಿತ್ರರೊಬ್ಬರೊಡನೆ ಮಾತಾಡುತ್ತಾ, ’ಜೇಪಿ ಅಸಲಿ ಬಂಡಾಯ ಕವಿ. ಅವರ ಕಾವ್ಯವನ್ನು ಬಂಡಾಯ ಮಾರ್ಗದವರು ಕೂಡ ಸೀರಿಯಸ್ಸಾಗಿ ಚರ್ಚಿಸಿದಂತಿಲ್ಲ’ ಎಂದು ನಾನು ಹೇಳಿದ್ದು ನೆನಪಾಯಿತು.

‘ಅವರು ಕವಿತೆ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಹೀಗಾಗಿ…’ ಎಂದರು ಆ ಲೇಖಕರು.

‘ಅವರು ಆ ಮಾರ್ಗದ ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸಿದ್ದು ಒಂದು ರೀತಿಯಲ್ಲಿ ಸರಿಯಿರಬಹುದು; ಯಾಕೆಂದರೆ, ಕೆಲವರು ತಮ್ಮ ಬಂಡಾಯ ಸಂವೇದನೆ ಬತ್ತಿ ಹೋಗಿ, ಸಹಜ ಪ್ರತಿಭಟನೆಯ ಸಾಮರ್ಥ್ಯ ಕುಂದಿದ ಮೇಲೆ ಅಂಥದೇ ಕವಿತೆಯನ್ನು ಏಳದಿದ್ದರೂ ಏಳಿಸಲು ಹೋಗಿ ಸೊರಗಿದ ಕಾವ್ಯ ಬರೆದಿದ್ದಾರೆ…’ಎನ್ನುತ್ತಾ ಸುಮ್ಮನಾದೆ.

ಸಮರ್ಥವಾದ ಕಾವ್ಯ ಬರೆಯುತ್ತಾ, ಕವಿ ಎನ್ನಿಸಿಕೊಳ್ಳುತ್ತಿದ್ದಾಗಲೇ ಜೇಪಿ ಸುಮ್ಮನಾಗಿದ್ದು; ಆಮೇಲೆ ಬೇರೆ ಬೇರೆ ಥರದ ಚಟುವಟಿಕೆ, ಭಾಷಣ, ಬರವಣಿಗೆ ಮಾಡಿದ್ದು ಅದೆಲ್ಲ ಅವರ ಪಾಡು… ಎಂದುಕೊಳ್ಳುತ್ತಿರುವಾಗ, ಇಪ್ಪತ್ತು ವರ್ಷಗಳ ಕೆಳಗೆ ಜೇಪಿಯ ಎಲ್ಲ ಕವಿತೆಗಳನ್ನೂ ಒಟ್ಟಿಗೆ ಓದಿದ ದಿನಗಳು ನೆನಪಾದವು.

ಅವತ್ತು ಜೆಪಿ ತಮ್ಮ ಎರಡುಮೂರು ಹಳೆಯ ಕವನ ಸಂಕಲನಗಳನ್ನು ಕೊಟ್ಟು, ‘ಇವನ್ನೆಲ್ಲ ಸೇರಿಸಿ, ಸಮಗ್ರ ಕವಿತೆಗಳನ್ನು ಪ್ರಕಟಿಸುತ್ತಿದ್ದೇನೆ; ನಿಮಗನ್ನಿಸಿದ್ದನ್ನು ಬರೆಯಿರಿ’ ಎಂದರು. ಅದು ಮುನ್ನುಡಿ ಬರೆಯಲು ನನಗೆ ಅಷ್ಟಿಷ್ಟು ವಿರಾಮದ ಸಮಯವಿದ್ದ ಕಾಲ ಕೂಡ. ಈಗ ಆ ಲಕ್ಷುರಿ ಇಲ್ಲ.

image.pngಅವತ್ತು ಜೇಪಿಗೆ ಬರೆದ ಮುನ್ನುಡಿ ಅವರ ಸಂಕಲನದಲ್ಲಿ, ಅವರ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾದ ನಂತರ ಅವರ ಮತ್ತೊಂದು ಸಮಗ್ರ ಕಾವ್ಯ ಸಂಪುಟ ಬರುವ ಕಾಲ ಬಂತು. ಅದರಲ್ಲಿ ತೆಲುಗು, ಇಂಗ್ಲಿಷಿನಿಂದ ಜೇಪಿ ಕನ್ನಡಿಸಿದ್ದ ಕವಿತೆಗಳಿದ್ದವು; ಅವರ ಕವಿತೆಗಳಂತೇ ಇದ್ದ ಅವು ಕೂಡ ನನ್ನನ್ನು ಸೆಳೆದವು. ಆಗ ನನ್ನ ಹಳೆಯ ಮುನ್ನುಡಿಗೆ ಅವರ ಅನುವಾದಿತ ಕವಿತೆಗಳನ್ನು ಕುರಿತ ಮಾತುಗಳನ್ನೂ ಸೇರಿಸಿ ಕೊಟ್ಟೆ. ಈ ಮುನ್ನುಡಿ ಯಾಕೋ ಸೂರ್ಯನ ಬೆಳಕಿಗೆ ಬರುವಂತೆ ಕಾಣುತ್ತಿಲ್ಲ. ಹೀಗಾಗಿ ಈ ಟಿಪ್ಪಣಿಗಳ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ. ಅದರಲ್ಲೂ ಮುಖ್ಯವಾಗಿ, ಅವರ ಕವಿತೆಗಳನ್ನು ಓಟ್ಟಿಗೇ ಓದಿದಾಗ ನನ್ನ ಮೇಲೆ ಆದ ಪರಿಣಾಮ ಕುರಿತ ಒಂದು ಭಾಗ:

‘ಒಂದು ರಾತ್ರಿ ಜೇಪಿಯ ಈ ಕವಿತೆಗಳನ್ನು ಓದುತ್ತಾ ಹಾಗೇ ಮಲಗಿದ ನನಗೆ ಕಾಡು, ಕಾಡಿನ ವಿಚಿತ್ರ ಪ್ರತಿಮೆಗಳು, ಹಾಗೂ ಯಾರೋ ಬೆನ್ನಟ್ಟುವ, ಪರ್ಸಿಕ್ಯೂಷನ್ನಿನ ಭಾವಗಳು ಮತ್ತೆ ಮತ್ತೆ ಕನಸಿನಲ್ಲಿ ಕಾಣಿಸಿಕೊಳ್ಳತೊಡಗಿದವು. ಜೇಪಿಯ ಕಾವ್ಯದ ಭಿತ್ತಿಯಲ್ಲಿರುವ ಧೀರತೆ-ಅಧೀರತೆ, ಹೋರಾಟ-ಆತಂಕ ಮುಂತಾದ ಅವಳಿ ವೈರುಧ್ಯಗಳು ನನ್ನ ಸುಪ್ತ ಪ್ರಜ್ಞೆಗಿಳಿದು ಅವು ಕನಸಿನಲ್ಲಿ ಒಸರಿದಂತಿದ್ದವು; ಅವು ಹಾಗೆ ಕನಸಿನಲ್ಲಿ ಪ್ರಕಟವಾದ ರೀತಿ ಕಂಡು ಜೇಪಿಯ ಕಾವ್ಯದಲ್ಲಿರುವ ಅಥೆಂಟಿಕ್ ಅನುಭವದ ಶಕ್ತಿಯ ಅರಿವಾಗತೊಡಗಿತು. ಜೇಪಿ ರೀತಿಯಲ್ಲಿ ಹೋರಾಟದ ಹಾಗೂ ಚಳುವಳಿಯ ಅನುಭವವುಳ್ಳ ಹಾಗೂ ಈ ಅನುಭವವೇ ದಟ್ಟವಾದ ಸ್ಥಾಯಿ ಭಿತ್ತಿಯಾಗಿರುವ ಕಾವ್ಯ ಕನ್ನಡದಲ್ಲಿ ಹೆಚ್ಚು ಇದ್ದಂತಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದಲ್ಲಿ ಜೇಪಿ ರೀತಿಯ ಕವಿ ಇನ್ನೊಬ್ಬನಿದ್ದಂತಿಲ್ಲ.

ಹೀಗಿದ್ದೂ ಕೂಡ, ಬಂಡಾಯ ಮನೋಧರ್ಮವನ್ನು ತಾತ್ವಿಕ ನೆಲೆಯಲ್ಲಿ ಸ್ವೀಕರಿಸಿದ ‘ಪಾತ್ರಧಾರಿ’ ಕವಿಗಳೇ ಹೆಚ್ಚು ಕೇಂದ್ರ ರಂಗದಲ್ಲಿ ಕಾಣಿಸಿಕೊಂಡು, ಜೇಪಿಯಂಥ ನಿಜ ಬಂಡಾಯಗಾರನ ರಾಜಕೀಯ ಕಾವ್ಯ ಕೊಂಚ ಹಿನ್ನೆಲೆಗೆ ಸರಿದದ್ದು ವಿಚಿತ್ರವಾಗಿದೆ. ಜೇಪಿ ಕಾವ್ಯ ಕನ್ನಡ ಎಡಪಂಥೀಯ ಕಾವ್ಯದ ಬಹುಮುಖ್ಯ ಪ್ರಾತಿನಿಧಿಕ ರೂಪ ಎಂಬುದನ್ನು ಕನ್ನಡ ವಿಮರ್ಶೆ ಸರಿಯಾಗಿ ಗ್ರಹಿಸದಿರುವುದು ಕೂಡ ವಿಚಿತ್ರವಾಗಿದೆ. ಆಂಧ್ರದ ದೊಡ್ಡ ಹೋರಾಟಗಾರರಲ್ಲೊಬ್ಬರಾದ ವರವರರಾವ್ ಅವರು, ‘ಸಮಕಾಲೀನ ಕ್ರಾಂತಿಕಾರಿ ಕಾವ್ಯದಲ್ಲಿ ಭಾರತೀಯ ಭಾಷೆಗಳಲ್ಲಿ ಬಂದ ಹೊಸ ಮುನ್ನಡೆಗೆ, ತಿರುವಿಗೆ ಕನ್ನಡದಲ್ಲಿ ಈ ಕವಿ ಖಚಿತವಾಗಿ ಒಂದು ಸಂಕೇತ’ಎಂದು ಹೇಳಿರುವುದನ್ನು ಬಂಡಾಯ ವಿಮರ್ಶೆ ಕೂಡ ಸರಿಯಾಗಿ ಗಮನಿಸಿದಂತಿಲ್ಲ.’ ಜೇಪಿ ಕಾವ್ಯಕ್ಕೆ ಆಗ ಬರೆದ ಮುನ್ನುಡಿಗಳಲ್ಲಿ ಉಲ್ಲೇಖಿಸಿದ ಕವಿತೆಗಳ ಪ್ರತಿಮೆಗಳನ್ನು ಈಗ ಮತ್ತೆ ನೋಡಿದೆ. ಅವುಗಳಲ್ಲಿ ಕೆಲವು ಇವತ್ತೂ ಫ್ರೆಶ್ ಆಗಿ ಕಂಡವು. 

೨೦೧೭ರ ಸುಮಾರಿಗೆ ಜೇಪಿ ನನಗಾಗಿ ಕೆಲವು ಆಫ್ರಿಕನ್ ಕವಿತೆಗಳನ್ನು ಅನುವಾದಿಸಿದರು. ಆಗ ನಾನು ಕೇಶವ ಮಳಗಿ, ಗಂಗಾಧರಯ್ಯನವರ ಜೊತೆಗೂಡಿ ‘ಆಫ್ರಿಕನ್ ಸಾಹಿತ್ಯ’ ವಾಚಿಕೆ ಮಾಡುವಾಗ ಕವಿ, ಕವಯಿತ್ರಿಯರ ಸಂವೇದನೆಗೆ ಹತ್ತಿರವಿರುವ ಕವಿತೆಗಳನ್ನೇ ಆರಿಸಿ ಅನುವಾದಿಸಲು ಕೊಟ್ಟಿದ್ದೆ; ಅದು ನಿಜಕ್ಕೂ ಉತ್ತಮ ಫಲ ಕೊಟ್ಟಿತ್ತು. ಇದೀಗ ಮತ್ತೆ ‘ಆಫ್ರಿಕನ್ ಸಾಹಿತ್ಯ’ ವಾಚಿಕೆಯ ಮರುಮುದ್ರಣ ಕುವೆಂಪು ಭಾಷಾಭಾರತಿಯಿಂದ ಪ್ರಕಟವಾಗಿದೆ.  

ಪ್ರಾಯಶಃ ಈ ಆಫ್ರಿಕನ್ ಸಾಹಿತ್ಯ ವಾಚಿಕೆಯಲ್ಲಿರುವ ಅನುವಾದಗಳೇ ಜೇಪಿಯ ಇತ್ತೀಚಿನ ಕವಿತೆಗಳಿರಬಹುದು. ಜೇಪಿ ತೆಲುಗಿನ, ಇಂಗ್ಲಿಷಿನ ಇತರರ ಪದ್ಯಗಳನ್ನು ಕನ್ನಡಿಸಿದಾಗಲೂ ಅವು ಜೇಪಿಯ ಪದ್ಯಗಳೇ ಆಗಿ, ಅವೆಲ್ಲ ಅವರ ಸಮಗ್ರ ಕಾವ್ಯದ ಸಹಜ ಭಾಗವಾಗಿಬಿಟ್ಟಿವೆ. ಆಫ್ರಿಕನ್ ಕವಿ ಲೆನ್ರಿ ಪೀಟರ್‍ಸ್ ಬರೆದ ‘ಸೊವೆಟೋ, ಐ ನೋ ಯುವರ್ ಆಂಗ್ವಿಶ್’ ಪದ್ಯವನ್ನು ಜೇಪಿ, ‘ಸೋವೆಟೋ ನಿನ್ನ ಬೇಗುದಿ ನಂಗೊತ್ತು’ ಎಂದು ಕನ್ನಡಿಸಿದ್ದಾರೆ. ಆ ಪದ್ಯದ ಕೆಲವು  ಪ್ರತಿಮೆಗಳು: 

ಹಸಿ ಕಂದಗಳ ತಲೆಬುರುಡೆ 
ಛಿದ್ರಗೊಳಿಸುವ ತುಪಾಕಿ
ನನ್ನ ನಿದ್ದೆಯ ಚೂರುಚೂರಾಗಿಸುತ್ತೆ
ಅಲ್ಸೇಶಿಯನ್ ನಾಯಿಯ ಹಲ್ಲುಗಳು ನಾಟಿದ ಆಳಗಾಯ 

ನನ್ನ ಮಾಂಸಖಂಡದ ಆಳದಲ್ಲಿ. 
ಕಾಲುದಾರಿಗಳಲ್ಲಿ ಇಡಿಕಿರಿದ 
ವಿಷಾನಿಲಗಳ ನಾನು ಉಸಿರಾಡಲಾರೆ 

ಬಚಾವಾಗಲು ನಾನು ಹೊರಳಿ ವಿಲಿವಿಲಿ ಒದ್ದಾಡುವಾಗ
ಪೊಲೀಸರ ತುಕಡಿ ನನ್ನ ತಲೆಬುರುಡೆಯನ್ನು
ಒಡೆದ ಮೊಟ್ಟೆಯ ಚಿಪ್ಪಿನಂತಾಗಿಸುತ್ತೆ.

ದಕ್ಷಿಣ ಆಫ್ರಿಕಾದ ಸೊವೆಟೋ ಪಟ್ಟಣದಲ್ಲಿ ಶಾಲೆಗಳಲ್ಲಿ ವರ್ಣಭೇದ ನೀತಿಯ ಭಾಗವಾಗಿ ಬಿಳಿಯರ ಸರ್ಕಾರ ೧೯೭೬ರಲ್ಲಿ ‘ಆಫ್ರಿಕಾನ್’ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಹೇರಿತು. ಇದರ ವಿರುದ್ಧ ೧೯೭೬ರ ಜೂನ್ ೧೬ರಂದು ಸೊವೆಟೋದ ೨೦೦೦೦ ಕಪ್ಪು ಆಫ್ರಿಕನ್ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರು.  ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿಳಿಯರ ಸರ್ಕಾರದ ಪೊಲೀಸರ ಬರ್ಬರ ಹಿಂಸೆ ಚೆಲ್ಲಾಡಿತು. ೧೭೬ ಜನ ಸಾವನ್ನಪ್ಪಿದ್ದರು ಎಂದು ಅಧಿಕೃತ ಅಂಕಿ ಅಂಶ ಹೇಳುತ್ತದೆ; ಆದರೆ ೭೦೦ಕ್ಕೂ ಹೆಚ್ಚು ಜನ ಸತ್ತು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡರು ಎಂದು ಒಂದು ಅಂದಾಜು ಹೇಳುತ್ತದೆ. 

ಈ ಹಿಂಸೆಯಲ್ಲಿ ತೀರಿಕೊಂಡ ಹೆಕ್ಟರ್ ಪೀಟರ್ಸನ್ ಎಂಬ ಹುಡುಗನ ಗಾಯಗೊಂಡ ದೇಹವನ್ನು ಮಬುಸಿಯಾ ಮಾಖುಬೋ ಎಂಬ ಹುಡುಗ ಆಸ್ಪತ್ರೆಗೆ ಒಯ್ದ. ಹೆಕ್ಟರ್ ತಂಗಿ ಆಂಟೊನಿಟ್ ಸಿಥೋಲೆ ಕೂಡ ಅವನ ಜೊತೆಗಿದ್ದಳು. ಆಸ್ಪತ್ರೆ ತಲುಪುವ ಹೊತ್ತಿಗೆ ಹೆಕ್ಟರ್ ತೀರಿಕೊಂಡಿದ್ದ. ಹಾದಿಯಲ್ಲಿ ಸ್ಯಾಮ್ ನಝಿಮಾ ತೆಗೆದ ಈ ಫೋಟೋ ಸೊವೆಟೋ   ದಂಗೆಯ ಮೂಲ ಚಿತ್ರವಾಯಿತು; ಜಗತ್ತಿನಾದ್ಯಂತ ಪ್ರಕಟಗೊಂಡು ಜನರು ವರ್ಣಭೇದ ನೀತಿಯ ವಿರುದ್ಧ ಕೆರಳುವಂತೆ ಮಾಡಿತು. ಸ್ವತಂತ್ರ ಆಫ್ರಿಕಾದ ಪ್ರಥಮ ಅಧ್ಯಕ್ಷರಾದ ನೆಲ್ಸನ್ ಮಂಡೇಲ ಸೊವೆಟೋದಲ್ಲಿ ಹೆಕ್ಟರ್ ಗೆ ಗುಂಡೇಟು ಬಿದ್ದ ಸ್ಥಳದ ಬಳಿ ೧೯೯೨ರಲ್ಲಿ ಹೆಕ್ಟರ್ ಮೆಮೋರಿಯಲ್ ಉದ್ಘಾಟಿಸಿದರು. ಅದರ ಪಕ್ಕದಲ್ಲೇ ೨೦೦೨ರಲ್ಲಿ ಹೆಕ್ಟರ್ ಪಿಯರ್ಸನ್ ಮ್ಯೂಸಿಯಂ ಕೂಡ ಶುರುವಾಯಿತು. 

ಸೊವೆಟೋ ಪಟ್ಟಣವನ್ನೇ ಒಂದು ಪಾತ್ರವನ್ನಾಗಿಸಿ, ೧೯೭೬ರ ಸೊವೆಟೋ ದಂಗೆಯನ್ನು ವಸಾಹತು ಹಿಂಸೆಯ ವಿಶಾಲ ರೂಪಕವಾಗಿಸಿ, ಲೆನ್ರಿ ಪೀಟರ್‍ಸ್ ಬರೆದ ‘ಸೊವೆಟೋ, ಐ ನೋ ಯುವರ್ ಆಂಗ್ವಿಶ್’. ಪದ್ಯವನ್ನು ಓದಿ, ಕನ್ನಡಿಸುವ ಮೂವತ್ತಾರು ವರ್ಷಗಳ ಮೊದಲೇ ಜೇಪಿ ‘ಎನ್ಕೊಸೆ ಸಿಕಲೆಲೆ ಆಫ್ರಿಕಾ’ (‘ದೇವರೇ ಆಫ್ರಿಕಾಕ್ಕೆ ಒಳ್ಳೆಯದು ಮಾಡು’) ಕವಿತೆ ಬರೆದಿದ್ದರು. ಅದೇ ಸುಮಾರಿಗೆ ಇಂಡಿಯಾದ ಪೊಲೀಸ್ ಕ್ರೌರ್ಯದ ಚಿತ್ರಗಳನ್ನು ತಮ್ಮ ಕವಿತೆಗಳಲ್ಲಿ ಬಿಚ್ಚಿಟ್ಟಿದ್ದರು:

‘ಬೂಟು ಕಾಲೊದೆತಕ್ಕೆ 
ಚೆಲ್ಲಾಪಿಲ್ಲಿ ಬಿದ್ದ
ಅನ್ನದ ಅಗುಳಿನಂತೆ ನಕ್ಷತ್ರ’ 
 
‘ಹೀಗೆ ಮನಸು 
ಕರ್ಫ್ಯೂ ವಿಧಿಸಿದ ಬೀದಿ.’

‘ಆಗಸದ ಲಾಕಪ್‌ನಲ್ಲಿ ಚಂದ್ರ ಬಂದಿ; 
ಮುಖ ತುಂಬ ಬಾಸುಂಡೆ’ 

ಇವು ಕೂಡ ಲೆನ್ರಿ ಪೀಟರ್‍ಸ್ ಕವಿತೆಯ ಆಫ್ರಿಕನ್ ಅನುಭವದ ಪ್ರತಿಮೆಗಳಂತೆಯೇ ಇವೆ.  ಎಷ್ಟೋ ಸಲ ಲೇಖಕ, ಲೇಖಕಿಯರು ತಂತಮ್ಮ ಮನಸ್ಥಿತಿಗೆ ಒಗ್ಗುವುದನ್ನೇ ಅನುವಾದ ಮಾಡಿದಾಗ ಕೂಡ ಅಕಸ್ಮಾತ್ ಹಿಂಜರಿದಿರುವ ಅವರ ಕ್ರಿಯೇಟಿವಿಟಿ ಮರಳಬಲ್ಲದು; ಕುಂದಿರುವ ಸೃಜನಶೀಲ ಶಕ್ತಿ ಹಠಾತ್ತನೆ ಒಲಿದು ಬರಬಲ್ಲದು. ಎಪ್ಪತ್ತರ ದಶಕದ ತಮ್ಮ ಆಳದ ತಲ್ಲಣಗಳಿಗೆ ಹತ್ತಿರವಿದ್ದ ಬೋದಿಲೇರ್ ಕಾವ್ಯವನ್ನು ಕನ್ನಡದಲ್ಲಿ ತೀವ್ರವಾಗಿ ಮರುಸೃಷ್ಟಿಸಿ ಲೇಖಕ ಲಂಕೇಶರು ರಿವೈವ್ ಆದದ್ದು, ಆ ತೀವ್ರತೆ ಅವರನ್ನು ಕೊನೆವರೆಗೂ ಬಿಡದೆ ಹಿಡಿದಿದ್ದು ನೆನಪಾಗುತ್ತದೆ. ಇದು ಎಂಟು ವರ್ಷಗಳ ಕೆಳಗೆ ಆಫ್ರಿಕನ್ ಕವಿತೆಗಳನ್ನು ಅನುವಾದಿಸಿದಾಗ ಜೇಪಿಯಲ್ಲೂ ಒಂದು ಮಟ್ಟದಲ್ಲಿ ಆದಂತಿದೆ.

ಅಸಲಿ ಕವಿಯೊಬ್ಬನಿಗೆ ಕಾವ್ಯ ಪ್ರಕಾರವೇ ಕೈ ಕೊಟ್ಟರೆ, ಅಥವಾ ಕವಿತೆಯನ್ನು ಕವಿಯೇ ಕೈಬಿಟ್ಟರೆ, ಅದು ಕವಿಗೂ, ಸಂಸ್ಕೃತಿಗೂ ಒಂಥರದ ನಷ್ಟವೇ. ಆದರೆ ಯಾವುದೇ ಲೇಖಕನಿಗೆ ಬರೆಯುವ, ಬರೆಯಲಾಗದ ಘಟ್ಟಗಳು ಇದ್ದೇ ಇರುತ್ತವೆ. ಅತಿಯಾದ ಸಾರ್ವಜನಿಕ ಮಾತು, ನಮ್ಮ ಸಂವೇದನೆಗೆ, ಒಳವ್ಯಕ್ತಿತ್ವಕ್ಕೆ ಹೊರತಾದ ಭಾಷಣಗಳು ಕೂಡ ಬರವಣಿಗೆಗೆ ಅಡ್ಡಿಯೇ. ಇಂಥ ಗಳಿಗೆಗಳಲ್ಲಿ ಮಾತು-ಬರಹ ಎರಡನ್ನೂ ಒಂದೇ ಕೇಂದ್ರದಿಂದ ನಿರ್ವಹಿಸುತ್ತಾ, ಎರಡರಲ್ಲೂ ಒಂದೇ ತೂಕ, ಆಳ, ಜವಾಬ್ದಾರಿಗಳನ್ನು ಇರಿಸಿಕೊಂಡ ಅಂಬೇಡ್ಕರ್, ಲೋಹಿಯಾ ಮಾದರಿಗಳು ನಮ್ಮ ನಿತ್ಯದ ಪ್ರೇರಣೆಗಳಾಗಬೇಕು.  
ಬರವಣಿಗೆಯ ಕಾಲ, ಬರೆಯದ ಕಾಲ – ಈ ಎರಡೂ ಕಾಲದಲ್ಲೂ ಅಸಲಿ ಲೇಖಕ ಅಥವಾ ಲೇಖಕಿ ಬರೆಯುತ್ತಲೇ ಇರಬೇಕಾಗುತ್ತದೆ. ಅದು ಅವರಿಗೆ ಗಾಳಿ, ಉಸಿರು, ಆಹಾರದ ಹಾಗೆ! ಕೆಲ ಬಗೆಯ ಸಡಗರ, ಸಂಭ್ರಮಗಳು ಕೂಡ ಬರೆವವರಲ್ಲಿ ಹೊಸ ಸೃಜನಶೀಲ ಎನರ್ಜಿ ಉಕ್ಕಿಸಬಲ್ಲವು. ಅದು ಗೆಳೆಯ ಜೇಪಿಗೂ ಆಗುವಂತಾಗಲಿ. ಚಿಯರ್‍ಸ್!

Share on:

Comments

7 Comments



| Swamy Anand

Super!


| ದೊಡ್ಡಿಶೇಖರ

ಇವತ್ತಿನ ಬರಹ ಚೆನ್ನಾಗಿದೆ ಸರ್. ಯಾವುದೇ ಲೇಖಕನಿಗೆ/ಳಿಗೆ ಬರೆಯುವ ಘಟ್ಟ ಮತ್ತು ಬರೆಯದಿರುವ ಘಟ್ಟವಿರುತ್ತದೆ ಎಂಬ ಮಾತು ಇಷ್ಟವಾಯಿತು. ಅದನ್ನು ದಾಟಿಕೊಳ್ಳುವ ಮಾದರಿಯಾಗಿ ಲೋಹಿಯಾ ಮತ್ತು ಅಂಬೇಡ್ಕರ್ ಮಾದರಿಯನ್ನು ಮುನ್ನೆಲೆಗೆ ತಂದಿರುವುದು ಉಚಿತವಾದುದ್ದು ಸರ್.


| Gangadhara BM

ನಾಡಿದ್ದು ಆಚರಿಸುವ/ ಆಚರಿಸದ ಜೇಪಿ ಸರ್ ಬರ್ತಡೆಗೆ ಗೆಳೆತನದ ಸವಿ ಮತ್ತು ಕವಿತೆಯ ಆಪ್ತತೆ ಸೇರಿ ಬರೆಸಿರುವ 'ಮಹುವಾ' ದಂತಹ ವಿಮರ್ಶಾ ಲೇಖನ. ಚೆನ್ನಾಗಿದೆ ಸರ್


| ಬಂಜಗೆರೆ ಜಯಪ್ರಕಾಶ

ನಿಮ್ಮ ಪ್ರೀತಿಪೂರ್ವಕ ಹಾರೈಕೆಗಳಿಗೆ ಮಣಗಟ್ಟಲೆ ಧನ್ಯವಾದಗಳು. ಹುರ್ರೇ @ 60. ಈತ ನಿಜಕ್ಕೂ ಒಬ್ಬ ಕವಿ ಎಂಬ ಮೆಚ್ಚುಗೆಯನ್ನು ಗಟ್ಟಿ ವಿಮರ್ಶಕನೊಬ್ಬನಿಂದ ಪಡೆದುಕೊಂಡಾಗ ಹುಟ್ಟಿರುವ ಖುಷಿ..... ತ್ಯಾಂಕ್ಯು. ಡಬಲ್ ಚೀಯರ್ಸ್


| Kariswamy K

ಸರ್ ಜೇಪಿ ಸರ್ ಅವರ ಕಾವ್ಯದ ಓದನ್ನು ನನ್ನ ಮಟ್ಟಿಗೆ ಹೊಸ ಕಾಣ್ಕೆಯೊಂದಿಗೆ ಕಟ್ಟಿಕೊಟ್ಟಿದ್ದೀರಿ. ಅವರ ಅನೂಹ್ಯ ಕಾವ್ಯ ಲೋಕದ ಘಮಲನ್ನು ಇನ್ನಷ್ಟು ಸವಿಯಲು ನಿಮ್ಮ ಬರಹ ಚಿಮ್ಮುಹಲಗೆಯಂತಿದೆ.


| Dr.Nanjaiah

ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು


| Dr.Nanjaiah

ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು




Add Comment


Nataraj Huliyar on Book Prize Awardees

YouTube






Recent Posts

Latest Blogs