ಮುನ್ನುಡಿ

ನಿಜಕ್ಕೂ ಆಳದಲ್ಲಿ ಅನ್ನಿಸಿದ್ದನ್ನು ಗೆಳೆಯ, ಗೆಳತಿಯರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಒಟ್ಟಾರೆ ಲೋಕದ ಎಲ್ಲ ಮುಕ್ತ ಮನಸ್ಸುಗಳಿಗೆ ತಲುಪಿಸುವ ಕಾತರ; ಆದರೆ, ಕ್ಷಿಪ್ರ ವೇದಿಕೆಯಾದ ಫೇಸ್ ಬುಕ್ ಬಳಸಲು ಹಿಂಜರಿಕೆ…ಈ ಮನಸ್ಥಿತಿಯಲ್ಲಿದ್ದವನಿಗೆ ಕಂಡ ದಾರಿಯಾಗಿ ಈ ಬ್ಲಾಗ್ ನಿಮ್ಮ ಕಣ್ಣೆದುರಿಗಿದೆ. ಇಲ್ಲಿ ಆಗಾಗ್ಗೆ ಬರೆಯವುದರ ಜೊತೆಗೇ ನನ್ನ ಹಳೆಯ ಬರಹಗಳು, ಹೊಸ ಬರಹಗಳು, ಪುಸ್ತಕಗಳ ವಿವರಗಳು, ಪುಸ್ತಕಗಳ ಭಾಗಗಳು, ಫೋಟೋಗಳು, ವಿಡಿಯೋ ಲಿಂಕ್ಸ್, ಸುದ್ದಿಗಳು, ಕೃತಿ ವಿಮರ್ಶೆ ಮುಂತಾದವನ್ನು ಒಂದೆಡೆ ತರುವ ಈ ಬ್ಲಾಗ್ ಐಡಿಯಾ ಹುಟ್ಟಿದ್ದು ಪ್ರಿಯ ಗೆಳೆಯ ಕಿರಣ್ ಕುಮಾರ್ ಜೊತೆಗಿನ ಮಾತುಕತೆಯಲ್ಲಿ. ‘ಆಕೃತಿ ಕಿರಣ್’, ‘ಓಪನ್ ಮೈಂಡ್ಸ್ ಕಿರಣ್’ ಎಂದು ನಾವೆಲ್ಲ ಕರೆಯುವ ಕಿರಣ್ ಎರಡು ವರ್ಷಗಳ ಕೆಳಗೆ ಈ ಬ್ಲಾಗ್ ಸೃಷ್ಟಿಸುವ ಕೆಲಸ ಶುರು ಮಾಡಿದರು. ಇದೀಗ ಈ ಬ್ಲಾಗ್ ನಾನು ಪ್ರೀತಿಯಿಂದ ‘ಟೆಕ್ಕಿ ಗುರು’ ಎಂದು ಕರೆಯುವ ಸಮಂತ ಪತ್ತಾರ ಹಾಗೂ ವಿನ್ಯಾಸ ಬಡಿಗೇರ ಎಂಬ ಇಬ್ಬರು ಹದಿಹರೆಯದ ಪಡ್ಡೆಗಳ ಕೈ ಚಳಕ ಹಾಗೂ ಶ್ರಮದಿಂದ ಸೃಷ್ಟಿಯಾದ ಪೂರ್ಣ ವಿನ್ಯಾಸದೊಡನೆ ಬಾನೇರಿದೆ. ಈ ಇಬ್ಬರ ಜೊತೆಗೆ ಗೆಳೆಯ ದೇವು ಪತ್ತಾರ ಕೂಡ ಇದ್ದಾರೆ. ಈ ಗೆಳೆಯರಿಗೆ ನನ್ನ ಕೃತಜ್ಞತೆಗಳು. ಪ್ರತಿ ಭಾನುವಾರ ಬೆಳಗ್ಗೆ ಪುಟ್ಟ ಅಥವಾ ದೊಡ್ಡ ಟಿಪ್ಪಣಿಯ ಜೊತೆಗೆ ಇಲ್ಲಿ ಹಾಜರಾಗಲು ಪ್ರಯತ್ನಿಸುವೆ. ಜೊತೆಗೆ ದಿನ-ರಾತ್ರಿಗಳ ಯಾವ ಗಳಿಗೆಯಲ್ಲಾದರೂ ಓದುಗಿಯರೊಡನೆ, ಓದುಗರೊಡನೆ ಹಂಚಿಕೊಳ್ಳಬೇಕಾದ ಪುಸ್ತಕಗಳು, ಅನಿಸಿಕೆಗಳು, ನನ್ನನ್ನು ಕಾಡುವ ಲೇಖಕ, ಲೇಖಕಿಯರ ಮಾತುಗಳು, ಉಲ್ಲೇಖಗಳು, ಕ್ಲಾಸ್ ರೂಂನಲ್ಲಿ ಹೊಳೆದ ಐಡಿಯಾಗಳು, ಅನಿಸಿಕೆಗಳು ಕೂಡ ಆಗಾಗ್ಗೆ ಇಲ್ಲಿರುತ್ತವೆ. ಈ ಬ್ಲಾಗ್ ಉಸಿರಾಡತೊಡಗಿದಂತೆ ಯಾವ ದಿಕ್ಕು ಹಿಡಿದು ಯಾವ ಥರದ ಜೀವ ಪಡೆಯುತ್ತದೋ ಎಂಬ ಬಗ್ಗೆ ನನಗೂ ನಿಮ್ಮಷ್ಟೇ ಕುತೂಹಲ. ಸಾಧ್ಯವಾದಾಗ ಬ್ಲಾಗ್ ಶೇರ್ ಮಾಡಿ. ಗೆಳೆಯ ಗೆಳತಿಯರಿಗೆ ತಲುಪಿಸಿ. ಪ್ರತಿಕ್ರಿಯಿಸಿ.

ಪ್ರೀತಿಯಿಂದ

ನಟರಾಜ್ ಹುಳಿಯಾರ್

(20 ಆಗಸ್ಟ್ 2023, ಭಾನುವಾರ)

 

Share on:

Comments

0 Comments





Add Comment


Mundana Kathana Nataka

YouTube






Recent Posts

Latest Blogs