ನಾಟಕಕಾರ್ತಿಯರು, ಅನುವಾದಕಿಯರು

‘ನಾನು ಬರೆಯಹೊರಟ ಪುಸ್ತಕ ಇದಲ್ಲ. ನನ್ನ ರಿಸರ್ಚಿನ ಅರ್ಧ ಹಾದಿಯಲ್ಲಿ ನಾನು ಮನಸ್ಸು ಬದಲಿಸಿದೆ’.

ಇದು ಡೇಲ್ ಸ್ಪೆಂಡರ್ ಅವರ ‘ಮದರ್‍ಸ್ ಆಫ್ ದಿ ನಾವೆಲ್’ ಪುಸ್ತಕದ ಮುನ್ನುಡಿಯ ಮೊದಲ ಸಾಲು. ಸ್ತ್ರೀವಾದಿ ಚಿಂತಕಿ ಡೇಲ್ ಸ್ಪೆಂಡರ್ ಬರೆಯಲು ಹೊರಟದ್ದು ಆರಂಭದ ಕಾದಂಬರಿಕಾರ್ತಿಯರ ಬಗ್ಗೆ; ಕಾದಂಬರಿಗೂ ಮಹಿಳೆಯರಿಗೂ ಇರುವ ಸಂಬಂಧದ ಬಗ್ಗೆ. ಕೊನೆಗೆ ಅವರು ಬರೆದದ್ದೇ ಬೇರೆ ಪುಸ್ತಕ!

ಕಳೆದ ಭಾನುವಾರ ಹಿಸ್ಟರಿ ಲಿಟರೇಚರ್ ಫೆಸ್ಟಿವಲ್‌ನಲ್ಲಿ ’ಕನ್ನಡ ನಾಟಕ, ರಂಗಭೂಮಿ ಮತ್ತು ಪಶ್ಚಿಮದ ಸಂಬಂಧ’ ಕುರಿತು ಮಾತಾಡಲು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ನನಗೂ ನಾನು ಹೇಳಬೇಕಾದ ಮಾತುಗಳು ಇವಲ್ಲ ಎನ್ನಿಸತೊಡಗಿದವು. ಅದಕ್ಕೆ ಮೇಲೆ ಕೊಟ್ಟಿರುವ ಡೇಲ್ ಸ್ಪೆಂಡರ್ ಮಾತು ಕಾರಣವಾಗಿರಲಿಲ್ಲ; ಬದಲಿಗೆ ಅವರಂಥ ಸ್ತ್ರೀವಾದಿಗಳು ಕಳೆದ ಕೆಲವು ದಶಕಗಳಿಂದ ನನ್ನಂಥವರಿಗೆ ಕಲಿಸಿದ್ದ ಎಚ್ಚರ ಕಾರಣವಾಗಿತ್ತು. ಆ ಎಚ್ಚರದ ಫಲವಾಗಿ, ಕನ್ನಡ ನಾಟಕ ಚರಿತ್ರೆಯ ಎರಡು ಪುಸ್ತಕಗಳನ್ನು ಮತ್ತೆ ಮತ್ತೆ ಗಮನಿಸಿದೆ. ಎರಡರಲ್ಲೂ ನಾಟಕಕಾರ್ತಿಯರ ಬಗ್ಗೆ ಹೆಚ್ಚಿನ ಉಲ್ಲೇಖವಿರಲಿಲ್ಲ. ಮೊದಲನೆಯದು, ತ.ಸು. ಶಾಮರಾಯರ ‘ಕನ್ನಡ ನಾಟಕ’. ಎರಡನೆಯದು, ಕೆ. ಮರುಳಸಿದ್ದಪ್ಪನವರ ‘ಆಧುನಿಕ ಕನ್ನಡ ನಾಟಕ’. ಇದೇನು ಈ ಕತೆ… ಎಂದುಕೊಂಡು ಅಕ್ಕಮಹಾದೇವಿ ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿರುವ ನಾಟಕ ಸಂಪುಟ ನೋಡಿದೆ. ಅಲ್ಲಿ ನೂರಾರು ನಾಟಕಕಾರ್ತಿಯರ ಹೆಸರುಗಳಿದ್ದವು. ನೂರಾರು ನಾಟಕಗಳ ಉಲ್ಲೇಖಗಳಿದ್ದವು.

‘ಇದೇಕೆ ಹೀಗೆ?’ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿತ್ತು: ಮಹಿಳೆಯರು ಬರೆದ ನಾಟಕ ಚರಿತ್ರೆಯಲ್ಲಿ ನಾಟಕಕಾರ್ತಿಯರ ಸಾಧನೆಗಳಿವೆ; ಪುರುಷರು ಬರೆದ ನಾಟಕ ಚರಿತ್ರೆಗಳಲ್ಲಿ ಬಹುತೇಕವಾಗಿ ನಾಟಕಕಾರರ ಚರ್ಚೆಯೇ ಇದೆ. ಈ ಸಮಸ್ಯೆ ಇಂಗ್ಲಿಷ್ ಸಾಹಿತ್ಯ ಚರಿತ್ರೆ ಬರೆದ ಪುರುಷ ಚರಿತ್ರಕಾರರಲ್ಲೂ ಇತ್ತು. ಆ ಸಾಹಿತ್ಯ ಚರಿತ್ರಕಾರರು ಹೇಳಿದ್ದನ್ನೇ ತಲೆಯಲ್ಲಿಟ್ಟುಕೊಂಡು ಡೇಲ್ ಸ್ಪೆಂಡರ್ ಕೂಡ ಹತ್ತೊಂಬತ್ತನೇ ಶತಮಾನದ ಮುಖ್ಯ ಇಂಗ್ಲಿಷ್ ಕಾದಂಬರಿಕಾರ್ತಿ ಜೇನ್ ಆಸ್ಟಿನ್‌‌ ಅವರಿಗಿಂತ ಮೊದಲು ಹೇಳಿಕೊಳ್ಳುವಂಥ ಕಾದಂಬರಿಕಾರ್ತಿಯರಿರಲಾರರು ಎಂದುಕೊಂಡೇ ಮಹಿಳಾ ಕಾದಂಬರಿಗಳ ಬಗ್ಗೆ ಸಂಶೋಧನೆ ಶುರು ಮಾಡಿದರು. ಆದರೆ ಕೊನೆಗೆ, ಜೇನ್ ಆಸ್ಟಿನ್ ೧೮೧೧ರಲ್ಲಿ ಪ್ರಕಟಿಸಿದ ’ಸೆನ್ಸ್ ಅಂಡ್ ಸೆನ್ಸಿಬಲಿಟಿ’ ಕಾದಂಬರಿ ಬರುವುದಕ್ಕಿಂತ ೧೯೦ ವರ್ಷಗಳ ಮೊದಲೇ Lady Mary Wroath ಬರೆದ Urania ಮೊದಲ ಇಂಗ್ಲಿಷ್ ಕಾದಂಬರಿಯೆಂಬುದನ್ನು ಕಂಡುಕೊಂಡರು. ಕೊನೆಗೆ ಹದಿನೇಳನೆಯ ಶತಮಾನದಿಂದಲೇ ಕಾದಂಬರಿಗಳನ್ನು ಬರೆದ ಹಳೆಯ ಕಾದಂಬರಿಕಾರ್ತಿಯರ ಬಗ್ಗೆ ಬರೆದು ’ಮದರ್‍ಸ್ ಆಫ್ ದ ನಾವೆಲ್’ ಪುಸ್ತಕ ಬರೆದು ಮುಗಿಸಿದರು.  ಸ್ತ್ರೀವಾದಿ ಚಿಂತಕಿ ಎಲ್. ಜಿ. ಮೀರಾ ಅವರ ಸಹಿಯಿರುವ ಈ ಪುಸ್ತಕ ನನ್ನ ಕೈ ಸೇರಿದ್ದು ಕೂಡ ತಮಾಷೆಯಾಗಿದೆ. ಅದೆಲ್ಲ ಇಲ್ಲಿ ಅನಗತ್ಯ!

’ಮದರ್‍ಸ್ ಆಫ್ ದಿ ನಾವೆಲ್’ನಲ್ಲಿ ಡೇಲ್ ಸ್ಪೆಂಡರ್ ಶೋಧಿಸಿದ ಹತ್ತಾರು ಕಾದಂಬರಿಕಾರ್ತಿಯರಿಗಿಂತ ಮೊದಲು ಜಪಾನಿನ ಲೇಡಿ ಮರಸಕಿ ಶಿಕಿಬು ಬರೆದ ’ದ ಟೇಲ್ ಆಫ್ ಗೆಂಜಿ’ (೧೦೧೧) ಜಗತ್ತಿನ ಮೊದಲ ಕಾದಂಬರಿ ಎಂದು ನಂತರದ ಸಂಶೋಧನೆಗಳು ಹೇಳುತ್ತವೆ. ಅಂದರೆ, ಕಾದಂಬರಿಯ ತಾಯಿ ಹೆಣ್ಣೇ ಎಂದಂತಾಯಿತು. ನನ್ನ ಪ್ರಕಾರ ಕಾದಂಬರಿ ನಿಜಕ್ಕೂ ಹೆಣ್ಣು ಪ್ರಕಾರವೇ.

ಇದೆಲ್ಲದರ ಹಿನ್ನೆಲೆಯಲ್ಲಿ ಮೊನ್ನೆ ಕನ್ನಡ ರಂಗಭೂಮಿ ಮತ್ತು ಪಶ್ಚಿಮದ ಬಗ್ಗೆ ಟಿಪ್ಪಣಿ ಮಾಡುತ್ತಿದ್ದಾಗ ಮಹಿಳೆಯರ ನಾಟಕಗಳ ಸಾಮಾಜಿಕ-ಸಾಂಸ್ಕೃತಿಕ ಮಹತ್ವದ ಅರಿವು ಸಾಹಿತ್ಯ ಚರಿತ್ರಕಾರರಿಗೆ ಅಗತ್ಯವಾಗಿ ಇರಬೇಕಾಗಿತ್ತು ಎಂದು ನನಗನ್ನಿಸಿದ್ದು ಸಹಜವಾಗಿತ್ತು. ಈ ಎರಡೂ ನಾಟಕ ಚರಿತ್ರೆಗಳಲ್ಲಿ ಮಹಿಳಾ ನಾಟಕ-ರಂಗಭೂಮಿ ಕುರಿತ ಅಧ್ಯಾಯವೊಂದು ಇರಲೇಬೇಕಾಗಿತ್ತು. ಸ್ತ್ರೀವಾದಿ ವಿಮರ್ಶೆಯ ಆರಂಭ ಘಟ್ಟದ ಒಂದು ಗುರಿಯೆಂದರೆ, ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದ ಮಹಿಳೆಯರ ಕೃತಿಗಳನ್ನು ಹುಡುಕಿ ದಾಖಲಿಸುವುದು; ಆ ಕೃತಿಗಳನ್ನು ಮರುಜೀವಗೊಳಿಸುವುದು. ಕನ್ನಡ ಸ್ತ್ರೀವಾದಿಗಳು, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟಗಳ ಲೇಖಕಿಯರು ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಮಹಿಳಾ ನಾಟಕ, ಮಹಿಳಾ ರಂಗಭೂಮಿ ಕುರಿತು ಡಾ. ಕಾವ್ಯಶ್ರೀ, ಡಾ. ಗೀತಾ ಸಿದ್ದಿ ಬರೆದಿರುವ ಪಿಎಚ್.ಡಿ. ಥೀಸಿಸ್‌ಗಳು ಈ ಕೆಲಸ ಮಾಡಲೆತ್ನಿಸಿವೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕೂಡ ಇಂಥದೊಂದು ಸಂಶೋಧನೆ ನಡೆದಿತ್ತೆಂದು ಕೇಳಿರುವೆ.

ಮಾರ್ಚ್ ೮ರ ಮಹಿಳಾ ದಿನಾಚರಣೆಯ ಮುನ್ನಾ ದಿನ ಬರೆಯುತ್ತಿರುವ ಈ ಟಿಪ್ಪಣಿಗೆ ಸ್ತ್ರೀವಾದಿ ದನಿ ತಂತಾನೇ ಬಂದಿದ್ದು ಅಚ್ಚರಿಯಲ್ಲ! ಈ ಅಂಕಣದ ಶುರುವಿನಲ್ಲಿ ಹೇಳಿದ ಭಾಷಣದ ಟಿಪ್ಪಣಿಗಳಿಗಾಗಿ ಇಂಗ್ಲಿಷಿನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮಹಿಳೆಯರ ವಿವರಗಳನ್ನೂ ಹುಡುಕಿದೆ. ವಾಸಂತಿ ಪಡುಕೋಣೆ ೧೯೩೪ರಲ್ಲೇ ರಷ್ಯಾದ ಆಂಟನ್ ಚೆಕಾಫನ ’ಅಂಕಲ್ ವ್ಯಾನ್ಯಾ’ ನಾಟಕವನ್ನು ‘ವೇಣು ಮಾವ’ ಎಂದು ಅನುವಾದಿಸಿದ್ದರು. ಹೀಗೇ ಹುಡುಕುತ್ತಾ ಹೋದಂತೆಲ್ಲ ಮಹಿಳೆಯರು ಅನುವಾದಿಸಿದ ನೂರಾರು ನಾಟಕಗಳು ಕಂಡವು. ತೇಜಸ್ವಿನಿ ನಿರಂಜನ, ವೈದೇಹಿ ಮೊದಲಾದವರು ಶೇಕ್‌ಸ್ಪಿಯರನ ನಾಟಕಗಳನ್ನು ಕನ್ನಡಿಸಿದ್ದರು. ಇಂಗ್ಲಿಷಿನ ಮೊದಲ ಮಹಿಳಾ ವಿಮೋಚನೆಯ ನಾಟಕ ಎನ್ನಲಾದ ಇಬ್ಸನ್‌ನ ’ಡಾಲ್ಸ್ ಹೌಸ್’ ನಾಟಕವನ್ನು ಎಸ್. ಮಾಲತಿ ’ವಾಸಂತಿ’ ಎಂದು ಅನುವಾದಿಸಿದರು; ಮೀರಾಮೂರ್ತಿ ’ಬೊಂಬೆ ಮನೆ’ ಎಂದು ಅನುವಾದಿಸಿದದರು. ಮಾಲತಿ ಬ್ರೆಕ್ಟ್ ನಾಟಕವನ್ನು ಅನುವಾದಿಸಿದರು. ಹೀಗೇ ನೂರಾರು ಅನುವಾದಗಳ ಪಟ್ಟಿ ಬೆಳೆಯುತ್ತದೆ.

ಕನ್ನಡ ಲೇಖಕಿಯರು ಪಶ್ಚಿಮದಿಂದ ಕನ್ನಡಕ್ಕೆ ತಂದ ಈ ನಾಟಕಗಳನ್ನು ಗಮನಿಸುತ್ತಿರುವಾಗ ಒಂದು ಅಂಶ ನನ್ನನ್ನು ಚಕಿತಗೊಳಿಸಿತು: ಈ ಅನುವಾದಕಿಯರು ಬಹುತೇಕ ಪಶ್ಚಿಮದ ಗಂಡಸರ ನಾಟಕಗಳನ್ನೇ ಅನುವಾದಿಸಿದ್ದಾರಲ್ಲ! ತಂತಮ್ಮ ಕಾಲದಲ್ಲಿ ಪಶ್ಚಿಮದ ಯಾವ ನಾಟಕಗಳು ಪ್ರಸಿದ್ಧವಾಗಿವೆಯೋ ಅವನ್ನು ಈ ಲೇಖಕಿಯರು ಕನ್ನಡಿಸಿರುವುದು ಸಹಜ. ಬಂಗಾಳಿಯ ಮಹಾಶ್ವೇತಾದೇವಿಯವರ ’ರುಡಾಲಿ’ ಕತೆಯನ್ನು ದೀಪಾ ಗಣೇಶ್ ನಾಟಕರೂಪ ಮಾಡಿದ್ದು, ಸಿ.ಜಿ.ಕೆ. ನಿರ್ದೇಶಿಸಿದ್ದು; ದ್ರೌಪದಿ ಕುರಿತ ಶಾವೊಲಿ ಮಿತ್ರರ ’ನಾಥವತಿ ಅನಾಥವತ್’ ನಾಟಕವನ್ನು ಮೀರಾ ಚಕ್ರವರ್ತಿ ಹಾಗೂ ಮುಕುಂದರಾಜ್ ’ನಾಥರಿದ್ದೂ ಅನಾಥೆ’ ಎಂದು ನನ್ನದೊಂದು ನಾಟಕ ಸಂಪುಟಕ್ಕೆ ಅನುವಾದಿಸಿದ್ದು ನೆನಪಾಯಿತು.

ಭಾರತೀಯ ಮಹಿಳಾ ನಾಟಕಗಳ ಇನ್ನಿತರ ಕನ್ನಡಾನುವಾದಗಳೂ, ರಂಗರೂಪಗಳೂ ನೆನಪಾದವು. ಆದರೆ ಪಶ್ಚಿಮದ ನಾಟಕಕಾರ್ತಿಯರ ನಾಟಕಗಳನ್ನು ನಮ್ಮ ಲೇಖಕಿಯರು ಅನುವಾದಿಸಿರುವ ವಿವರಗಳು ಸಿಗಲಿಲ್ಲ. ಈ ಬಗ್ಗೆ ನಾಟಕ, ರಂಗಭೂಮಿಗಳಲ್ಲಿ ತೊಡಗಿರುವ ಲೇಖಕಿಯರಾದ ಹೆಚ್.ಎಲ್. ಪುಷ್ಪ, ಮಮತಾ ಅರಸೀಕೆರೆಯವರನ್ನು ಕೇಳಿದೆ. ತಕ್ಷಣ ಅವರಿಗೂ ವಿವರಗಳು ಹೊಳೆಯಲಿಲ್ಲ. ಈ ಅಂಕಣದ ಗಂಭೀರ ಓದುಗಿ-ಓದುಗರಿಗೆ ಈ ಪ್ರಶ್ನೆಯನ್ನು ದಾಟಿಸಿ, ಉತ್ತರಕ್ಕಾಗಿ ಕಾಯುವೆ.

‘ಮಾಡುವುದು ಮಾಡುವುದು ಮನ ಮುಟ್ಟಿ’ ಎಂದು ಯಾವುದನ್ನೇ ಆಗಲಿ ಮಾಡಿದರೆ ಅಷ್ಟಿಷ್ಟಾದರೂ ಅರ್ಥಪೂರ್ಣವಾದ ಹಾದಿಗಳು ತೆರೆಯುತ್ತವೆ ಎಂಬುದು ನನ್ನ ನಿತ್ಯದ ಅನುಭವ. ಮೊನ್ನೆಯ ಸೆಮಿನಾರ್ ಹುಡುಕಾಟದಲ್ಲಿ ಎದ್ದು ಕಂಡ ಒಂದು ವಿವರ ನಮ್ಮ ಸ್ತ್ರೀವಾದಿಗಳ ಅಗತ್ಯ ಗಮನಕ್ಕೆ ಅರ್ಹವಾಗಿದೆ. ಅದೇನೆಂದರೆ, ಕನ್ನಡದಲ್ಲಿ ಸ್ತ್ರೀವಾದ ಭದ್ರವಾಗಿ ಗಟ್ಟಿಯಾಗಿ ವಿಕಾಸಗೊಳ್ಳುವ ಮೊದಲೇ ಇಳಾ ವಿಜಯಾ ಅವರ ’ಎಲ್ಲಿದ್ದೀರಿ ನೀವು ಎಲ್ಲಿದ್ದೀರಿ’ ಮತ್ತು ಮಾಲತಿಯವರ ’ಕೂಲಿ ಹೆಣ್ಣು’ ಎಂಬ ಬೀದಿ ನಾಟಕಗಳು ಸ್ತ್ರೀನೋಟದಿಂದ ಸಮಾಜವನ್ನು ವಿಶ್ಲೇಷಿಸುವ ಆರಂಭದ ಮುಖ್ಯ ಪ್ರಯತ್ನಗಳಾಗಿವೆ. ಈ ನಾಟಕಗಳ ಸ್ತ್ರೀಪರ ನೋಟದ ಹಿಂದೆ ಸ್ತ್ರೀವಾದವಿದೆ; ಅದಕ್ಕೆ ಪೂರಕವಾಗಿ ಸಮಾಜವಾದ, ಮಾರ್ಕ್ಸ್‌ವಾದ, ಸಮುದಾಯ, ಬೀದಿ ನಾಟಕಗಳ ತಾತ್ವಿಕತೆ…ಇವು ಕೂಡ ಕೆಲಸ ಮಾಡಿವೆ; ಇವೆಲ್ಲವೂ ಸ್ತ್ರೀ ದೃಷ್ಟಿಕೋನದಿಂದ ಸಮಾಜವನ್ನು ನೋಡುವಂತೆ ಈ ಇಬ್ಬರೂ ಆಕ್ಟಿವಿಸ್ಟ್-ನಾಟಕಕಾರ್ತಿಯರನ್ನು ಪ್ರೇರೇಪಿಸಿವೆ. ೧೯೭೫ರಿಂದ-೧೯೮೫ರ ನಡುವಣ ದಶಕವನ್ನು ಇಡೀ ಜಗತ್ತಿನಲ್ಲಿ ಮಹಿಳಾ ದಶಕವೆಂದು ಘೋಷಿಸಿದ್ದು ಕೂಡ ಇಲ್ಲಿ ನೆನಪಾಗುತ್ತದೆ.

ಇದಕ್ಕೂ ಮುನ್ನ ತಿರುಮಲಾಂಬ, ಕಲ್ಯಾಣಮ್ಮ ಅವರಿಂದ ಹಿಡಿದು ಸುನಂದಮ್ಮ, ಎಸ್, ಸಂಧ್ಯಾ, ಮಲ್ಲಿಕಾ ಘಂಟಿ, ವೈದೇಹಿ, ಹೇಮಾ, ದು. ಸರಸ್ವತಿ, ಎಚ್. ಎಲ್. ಪುಷ್ಪ, ಮಮತಾ ಸಾಗರ ಮುಂತಾದ ಹತ್ತಾರು ನಾಟಕಕಾರ್ತಿಯರು ಬಂದಿದ್ದಾರೆ. ಜಯಶ್ರೀ, ಪ್ರೇಮಾ ಕಾರಂತ, ಮಂಗಳಾ, ದಾಕ್ಷಾಯಿಣಿ ಭಟ್, ವಿದ್ಯಾ, ಸುಮತಿ, ಚಂಪಾ ಶೆಟ್ಟಿ, ಛಾಯಾ ಭಾರ್ಗವಿ, ಸುಮತಿ, ಗಿರಿಜಾ ಸಿದ್ದಿ ಮೊದಲಾದ ವಿಶಿಷ್ಟ ರಂಗ ನಿರ್ದೇಶಕಿಯರು ಕನ್ನಡ ರಂಗಭೂಮಿಯನ್ನು ರೂಪಿಸಿದ್ದಾರೆ.

ಇವನ್ನೆಲ್ಲ ಕುರಿತು ವ್ಯವಸ್ಥಿತವಾಗಿ, ಸಮಗ್ರವಾಗಿ, ವಸ್ತನಿಷ್ಠವಾಗಿ ಚಿಂತಿಸಲು ಈ ಸಲದ ಮಹಿಳಾ ದಿನ ಎಲ್ಲರಿಗೂ ಪ್ರೇರಣೆಯಾಗಲಿ. ಕೊನೆಯ ಪಕ್ಷ ಮುಂದಿನ ವರ್ಷದ ಹೊತ್ತಿಗೆ ಈ ಕುರಿತ ಗಂಭೀರ ಅಧ್ಯಯನಗಳು, ಪುಸ್ತಕಗಳು ಹೊರಬರುವಂತಾಗಲಿ! ನಾಟಕಕಾರ್ತಿಯರು, ಅನುವಾದಕಿಯರು, ಕೃತಿಗಳು, ರಂಗನಿರ್ದೇಶಕಿಯರು, ನಟಿಯರು ಇವೆಲ್ಲದರ ಒಂದು ಸುದೀರ್ಘ, ಸಮಗ್ರ ಸಮಕಾಲೀನ ಪಟ್ಟಿಯಾದರೂ ಮೊದಲು ಬರಲಿ. ಈ ಪಟ್ಟಿ ಡಿಜಿಟಲೈಸ್ ಆಗಿ ಸದಾ ಅಪ್ ಡೇಟ್ ಆಗುತ್ತಿರಲಿ. 

Share on:

Comments

9 Comments



| ಮಹಾಂತೇಶ ಪಾಟೀಲ

ಶಾಂತಾ ಇಮ್ರಾಪುರ ಮೇಡಂ, ಧಾರವಾಡ ಭಾಗದ ಮೊದಲ ಮಹಿಳಾ ಕಥೆಗಾರ್ಥಿಯರು, ಪ್ರಕಾಶಕಿಯರು, ನಾಟಕಕಾರ್ತಿಯ ಕುರಿತು ಬರೆದಿದ್ದು ಓದಿದ ನೆನಪು, ಅವರ ಪುಸ್ತಕ ಪುನರ್ ಓದಿ ಮಾಹಿತಿ ನೀಡುವೆ ಸರ್. ಕೆಪಿಸಿಸಿ ಬಸವನಾಳ ಗ್ರಂಥಾಲಯದಲ್ಲಿ 1920 ರಿಂದ ಬಂದ ಪರಿಷತ್ಪತ್ರಿಕೆ, ವಾಗ್ಭೂಷಣ ಇತರೆ ಮ್ಯಾಗಜೀನ್ ಸಂಗ್ರಹವಿದೆ. ಅದಕ್ಕೆ ಬ್ಲಾಕ್ ವ್ಯಾಲೂಮ್ ಸೆಕ್ಷನ್ ಹೆಸರು. . . . ಅಲ್ಲಿ ಇಂತಹ ಹುಡುಕಾಟಕ್ಕೆ ಆಕರ ದೊರೆಯಬಹುದು.


| Nataraj Huliyar Replies

Thank you Mahantesh, I request Bhimesh Yeradoni or Dr. Channabasappa in Dharwad to dig Shanta Imrapur\'s book for me.


| ಭೀಮೇಶ ಯರಡೋಣಿ

ಕಳೆದ ಎರಡು ವಾರಗಳಿಂದ ತಮ್ಮ ಲೇಖನಗಳನ್ನು ಓದಲು ಸಾಧ್ಯವಾಗಿರಲಿಲ್ಲ. ಸ್ತ್ರೀವಾದಿ ನೋಟ, ಭಾನು - ದೀಪಾರ ಬೂಕರ್ ಜೋಡಿ ಹಾಗೂ ಪ್ರಸ್ತುತ ಲೇಖನ ಎಲ್ಲವನ್ನು ಇಂದು ಓದಿದಾಗ ಈ ಮೂರು ಲೇಖನಗಳಲ್ಲಿ ಒಂದರೊಳಗೆ ಒಂದು ಹದವಾಗಿ ಬೆರೆತ ಆರ್ಗ್ಯಾನಿಕ್ ಆದ ಸ್ತ್ರೀ ನೋಟ ಕ್ರಮವಿದೆ. ಪುರುಷ ಅಹಂಕಾರದ ಹೊಣೆಗೇಡಿತನದಿಂದ ಉಂಟಾದ ಸ್ತ್ರೀ ಚರಿತ್ರೆಯ ಗೈರನ್ನು, ವರ್ತಮಾನದಲ್ಲಿ ಸರಿಪಡಿಸಬೇಕಾದ ಹೊಣೆಗಾರಿಕೆಯನ್ನು ಕೇವಲ ಸಾಹಿತ್ಯದ ವಿದ್ಯಾರ್ಥಿನಿ/ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಳ್ಳುವ ಜಾಗೃತಗೊಳಿಸುವ ಬರಹವಾಗಿವೆ. \r\n


| Aiyasha Aisu

ಹೆಣ್ಮಕ್ಳೆ ಸ್ಟ್ರಾಂಗು ಗುರು. \r\nಒಂದು ಸಂಶೋಧನೆಯನ್ನು ಮಾಡುವ ಎಲ್ಲ ವಿವರಗಳನ್ನು ಸರ್ ಕೊಟ್ಟಿದ್ದೀರಾ ಇದು ಸಂಶೋಧನಾಕಾರರಿಗೆ ಇನ್ನೂ ಹೆಚ್ಚು ಹೊಳಹುಗಳನ್ನ ನೀಡುತ್ತೆ ಅಂತ ನಾನು ಅಂದುಕೊಳ್ಳುತ್ತೇನೆ .


| ದೇವಿಂದ್ರಪ್ಪ ಬಿ.ಕೆ.

ನಾಟಕಕಾರ್ತಿಯರು, ಅನುವಾದಕಿಯರು ಲೇಖನವು ಹಲವು ಹೊಸ ಸಾಧ್ಯತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಡೇಲ್ ಸ್ಪೆಂಡರ್ ಹೇಳಿದ ಒಂದು ಮಾತಿನ ಎಳೆ ಹಿಡಿದುಕೊಂಡು ಇಡೀ ಪ್ರಪಂಚದ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳೆಯರ ಕುರಿತ ಪುರುಷ ಪ್ರಧಾನ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದ್ದೀರಿ. ನಾಟಕದಲ್ಲಿ ಅಥವಾ ಅನುವಾದದಲ್ಲಿ ಇಡೀ ಪಶ್ಚಿಮದ ಮೂಲಕ ನೋಡುತ್ತಾ ಹೋದರೂ ಸಹ ಅಲ್ಲಿಯೂ ಕೂಡ ಮಹಿಳೆಯರ ಗೈರು ಹಾಜರಿ ಎದ್ದು ಕಾಣುತ್ತದೆ. ನೇಪಥ್ಯದಲ್ಲಿ ಬರೆದ ಅನೇಕ ಸ್ತ್ರೀಯರು ಇದ್ದರೂ ಸಹ ಅದನ್ನು ಸಾಹಿತ್ಯ ಎಂದು ಪರಿಗಣಿಸದೆ ನಿರ್ಲಕ್ಷ್ಯ ಮಾಡಿದ್ದು ಇದೇ ಪುರುಷ ಲೇಖಕರು. ಕನ್ನಡದಲ್ಲಿ ಬರೆದ ವೈದೇಹಿ ಅವರು ಆರಂಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿ ಬರೆದು ಪ್ರಕಟಣೆಗೆ ಕಳುಹಿಸಿದ್ದು ನೋಡಿದರೆ ಮಹಿಳೆಯರ ಸ್ಥಿತಿ ಹೇಗಿತ್ತು ಎಂದು ಗೊತ್ತಾಗುತ್ತದೆ. ಅವರನ್ನು ಸಾಹಿತ್ಯದ ಮುಖ್ಯ ಧಾರೆಗೆ ತರಲು ಯಾರು ಪ್ರಯತ್ನಿಸಲಿಲ್ಲ. ಕೊನೆಗೆ ಸ್ತ್ರೀಯರು ಹೋರಾಟದ ಸಂಕೇತವಾಗಿ ಅಕ್ಕಮಹಾದೇವಿಯನ್ನೇ ಗುರು ಎಂದು ಭಾವಿಸಿದ್ದಾರೆ.ಎಚ್. ಎಸ್. ಶ್ರೀಮತಿ ಅವರು ಮಹಿಳಾ ಸಾಹಿತ್ಯ ಚರಿತ್ರೆ ಬರೆದು ಅನೇಮಹಿಳೆಯರನ್ನು ಗುರುತಿಸಿದ್ದು ಗಮನಾರ್ಹ. ಇತ್ತೀಚೆಗೆ ನಾಟಕಗಳನ್ನು ರಚನೆ ಮಾಡುವುದರಲ್ಲಿ ಮಹಿಳೆಯರೇ ಮುಂದಿದ್ದಾರೆ. ಅವರು ರಚಿಸುವ ನಾಟಕ ಇಡೀ ಪುರುಷ ಸಮಾಜದ ಹುಳುಕುಗಳನ್ನು ನಮ್ಮ ಮುಂದಿಡುತ್ತಿದೆ. ಇದನ್ನು ಇಂದಿಗೂ ಕೂಡ ಪುರುಷರು ಒಪ್ಪದೇ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪಿ. ಚಂದ್ರಿಕಾ ಅವರ ಮೋದಾಳಿ ನಾಟಕ ಓದಿದಾಗ ಗೊತ್ತಾಗುತ್ತದೆ. ಸ್ತ್ರೀಯರ ದನಿಯನ್ನು ಎಷ್ಟು ದಿನ ಹತ್ತಿಕ್ಕಲು ಸಾಧ್ಯ ಎಂದು. ಇನ್ನೂ ಅನುವಾದದ ವಿಷಯಕ್ಕೆ ಬಂದಾಗ ಇತ್ತೀಚೆಗೆ ಅನೇಕ ಅನುವಾದಕಿಯರು ಸಿಗುತ್ತಾರೆ. ಜ.ನಾ. ತೇಜಶ್ರೀ, ಸಂಯುಕ್ತಾ ಪುಲಿಗಲ್, ನಾಗರೇಖಾ ಗಾಂವ್ಕರ್, ಎಚ್. ಎಸ್. ಅನುಪಮಾ ಅನೇಕರಿದ್ದಾರೆ. ಈಗ ಮಹಿಳೆಯರ ಕುರಿತು ಸಾಹಿತ್ಯ ಚರಿತ್ರೆ ಬರೆಯಲು ಹೊರಟರೆ ಪುರುಷರು ಬರೆದ ಸಾಹಿತ್ಯ ಹಿನ್ನೆಲೆಗೆ ಸರಿಯುತ್ತದೆ ಎಂಬುದು ಸತ್ಯ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಮಹಿಳಾ ನಾಟಕಕಾರ್ತಿ


| Krishnabai Hagalavadi

ಕೃಷ್ಣಾಬಾಯಿ ಹಾಗಲವಾಡಿ ಯಾದ ನಾನು ಮಧ್ಯ ಪ್ರದೇಶದ ವೀರರಾಣಿ ಅಹಲ್ಯಾಬಾಯಿ ಹೋಳ್ಕರರನ್ನು ಕುರಿತು ವೀರಮಾತೆ ಅಹಿಲ್ಯಾಬಾಯಿ ಹೋಳ್ಕರ್ ಎಂಬ ನಾಟಕವನ್ನು ರಚಿಸಿ ರುವೆ.\r\nಹಾಗೆ ಯೇ ದಾನಚಿಂತಾಮಣಿಅತ್ತಿಮಬ್ಬೆ ಎಂಬ ನಾಟಕವನ್ನು ರಚಿಸಿರುವೆನು


| Nataraj Huliyar Replies

Thanks Krishnabai Hagalwadi, I request Dr.Kavyashree and Dr. Geeta Siddi to please include these texts in their lists of women playwrights


| ಡಾ. ನಿರಂಜನ ಮೂರ್ತಿ ಬಿ ಎಂ

ಮಹಿಳಾ ಲೇಖಕಿಯರು, ತಮಗೆ ಒಗ್ಗುವ ಕಾದಂಬರಿಯಲ್ಲದೆ, ನಾಟಕದಲ್ಲೂ ಇಷ್ಟೊಂದು ಕೃಷಿ ಮಾಡಿರುವುದನ್ನು ತಿಳಿದು ಆಶ್ಚರ್ಯವಾಯಿತು. ಅವರ ಕೃಷಿಗೆ ನಮನಗಳು. ಬೆಳಕಿಗೆ ಬಾರದೆ ತೆರೆಮರೆಯಲ್ಲೇ ಇರುವ ಅವರ ಸಾಧನೆಗಳನ್ನು ಪಟ್ಟಿಮಾಡಿ, ಓದುಗರ ಗಮನ ಸೆಳೆದಿರುವ, ಮತ್ತು ಈ ದಿಸೆಯಲ್ಲಿ ಮುಂದಿನ ವರುಷವೊಂದರಲ್ಲಿ ಆಗಬೇಕಿರುವ ಕಾರ್ಯವನ್ನು ನಿಗದಿಗೊಳಿಸಿರುವ ಹುಳಿಯಾರರ ಪ್ರಯತ್ನ ಶ್ಲಾಘನೀಯ.


| Shamarao

ತಾವು ದಿಕ್ಸೂಚಿ ನೀಡಿದ್ದೀರಿ.ಅಗೆದು ತೆಗೆಯಬೇಕಾದ್ದು ಬೇಕಾದಷ್ಟಿದೆ.\r\nಕಾದಂಬರಿ ಹೆಣ್ಣು ಪ್ರಕಾರ ಕುರಿತು ಒಂದು ಲೇಖನ ನಿರೀಕ್ಷಿಸುತ್ತಿದ್ದೇನೆ!




Add Comment


Nataraj Huliyar on Book Prize Awardees

YouTube






Recent Posts

Latest Blogs