ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ?

ಅಮೆರಿಕನ್ ಲೇಖಕಿ ಪರ್ಲ್ ಎಸ್. ಬಕ್ ಇಂಡಿಯಾದ ಸಮಾಜವಾದಿ ಚಿಂತಕ-ರಾಜಕಾರಣಿ ರಾಮಮನೋಹರ ಲೋಹಿಯಾರನ್ನು ತಮ್ಮ ಮನೆಗೆ ಊಟಕ್ಕೆ ಕರೆದರು. ತಮ್ಮ ಮೂವತ್ತೆಂಟನೆಯ ವಯಸ್ಸಿನಲ್ಲಿ ಆಕೆ ಬರೆದ 'ದ ಗುಡ್ ಅರ್ತ್’ ಕಾದಂಬರಿ ಜಗತ್ತಿನಾದ್ಯಂತ ಹೆಸರು ಪಡೆದಿತ್ತು. ೧೯೩೨ ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದ ಪರ್ಲ್ ಎಸ್. ಬಕ್, ೧೯೩೮ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಲೇಖಕಿ. ೧೯೫೨ರಲ್ಲಿ ಅಮೆರಿಕಾ ಪ್ರವಾಸದಲ್ಲಿದ್ದ ಲೋಹಿಯಾ ಜೊತೆಗಿನ ಮಾತುಕತೆಯ ನಡುವೆ ಪರ್ಲ್ ಎಸ್. ಬಕ್ ಲೋಹಿಯಾರನ್ನು ಒಂದು ಪ್ರಶ್ನೆ ಕೇಳಿದರು: 

‘Does self ever meet self in your country?'  

ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಈ ಪ್ರಶ್ನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ  ಲೋಹಿಯಾಗೆ ಎದುರಾಯಿತು. ''ನಮ್ಮ 'ಇಗೋ’ ಲೋಕದ ಸಕಲ ಸೆಲ್ಫ್‌ಗಳನ್ನು (ಯೂನಿವರ್ಸಲ್ ಸೆಲ್ಫ್) ಸಂಧಿಸುವುದರ ಬಗ್ಗೆ ಈಕೆ ಕೇಳುತ್ತಿದ್ದಂತಿಲ್ಲ. ಪ್ರಾಯಶಃ ಇಬ್ಬರು ವ್ಯಕ್ತಿಗಳ ನಡುವಣ ಆಳವಾದ ಸಂವಹನವನ್ನು; ಎಲ್ಲ ಜಡ, ಕೃತಕ ಹೊದಿಕೆಗಳನ್ನು ತೊಡೆದು ಹಾಕಿ ಶುಭ್ರವಾದ ಎರಡು ಸೆಲ್ಫ್‌ಗಳು ಸಂಧಿಸುವುದನ್ನು ಕುರಿತು ಆಕೆ ಕೇಳುತ್ತಿರಬಹುದು...’’ ಎಂದು ಲೋಹಿಯಾ ಊಹಿಸಿಕೊಳ್ಳಲೆತ್ನಿಸಿದರು.

ಪರ್ಲ್ ಎಸ್. ಬಕ್ ಪ್ರಶ್ನೆಯನ್ನು ಓದಿದಾಗಿನಿಂದಲೂ ಅಲ್ಲಿರುವ ‘ಸೆಲ್ಫ್’ ಎಂಬ ಪದವನ್ನು ಕನ್ನಡಿಸುವುದು ಎಷ್ಟು ಕಷ್ಟ ಎನ್ನಿಸುತ್ತಲೇ ಇದೆ. 'ಸೆಲ್ಫ್ ಕ್ರಿಟಿಸಿಸಂ’ ಎಂಬುದನ್ನು ‘ಸ್ವ-ವಿಮರ್ಶೆ’ ಎನ್ನುವಂತೆ, ‘ಸೆಲ್ಫ್’ ಎಂಬುದನ್ನು 'ಸ್ವ' ಎಂದು ಅನುವಾದಿಸಿದರೆ, ಪರ್ಲ್ ಎಸ್. ಬಕ್ ಪ್ರಶ್ನೆಯ ಆಳ ಅರ್ಥವಾಗುವುದಿಲ್ಲ. ಈ ಪ್ರಶ್ನೆಯನ್ನು ಕೆದಕುತ್ತಾ ಹೋದಂತೆಲ್ಲ ಈ ಪದ ಎಷ್ಟು ಸಂಕೀರ್ಣ ಎನ್ನಿಸತೊಡಗುತ್ತದೆ. ಸದ್ಯಕ್ಕೆ, ಈ ಪ್ರಶ್ನೆಯನ್ನು 'ಇಂಡಿಯಾದಲ್ಲಿ ಒಬ್ಬ ವ್ಯಕ್ತಿಯ ಆಳದ ಒಳಗು ಮತ್ತೊಬ್ಬನ ಅಥವಾ ಮತ್ತೊಬ್ಬಳ ಆಳದ ಒಳಗನ್ನು ಎಂದಾದರೂ ಸಂಧಿಸುತ್ತದೆಯೆ?’  ಎಂದು ಸರಳವಾಗಿ ವಿವರಿಸಿಕೊಳ್ಳಲೆತ್ನಿಸಿದೆ. 

ಮೊನ್ನೆ ಈ ಪ್ರಶ್ನೆಯನ್ನು ಗಂಭೀರ ಮನಸ್ಸಿನ ಗೆಳೆಯರಿಗೆ ಕೇಳಿದ ತಕ್ಷಣ, 'ಇಲ್ಲ! ಈ ಕಾಲದಲ್ಲಂತೂ ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದನ್ನು ಸಂಧಿಸುವ ಗಳಿಗೆಗಳು ಇಲ್ಲವೇ ಇಲ್ಲ’ ಎಂದರು. ನಿಜಕ್ಕೂ ಅವರಿಗೆ ತಮ್ಮಾಳದಲ್ಲಿ ಹಾಗನ್ನಿಸಿದಂತಿತ್ತು. ಪರ್ಲ್ ಎಸ್. ಬಕ್ ಪ್ರಶ್ನೆ ಸೂಚಿಸುತ್ತಿರುವ ಎರಡು ಸೆಲ್ಫ್‌ಗಳ ಭೇಟಿ ನಿತ್ಯದ ಸಂಬಂಧಗಳಲ್ಲಂತೂ ಸಾಧ್ಯವೇ ಇಲ್ಲದ ಸ್ಥಿತಿ ಇವತ್ತು ಇದೆ ಎಂದು ಅವರಿಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅಚ್ಚರಿಯಲ್ಲ. ಆದರೆ ಒಬ್ಬರ ಒಳಗು ಇನ್ನೊಬ್ಬರಿಗೆ ತಲಪದ ಸ್ಥಿತಿ ಸಾವಿಗೆ ಹತ್ತಿರವಿರಬಲ್ಲದು ಎಂಬುದು ಹೊಳೆದಾಗ ದಿಗ್ಭ್ರಮೆಯಾಗುತ್ತದೆ. 

ಇನ್ನೊಬ್ಬರ ಸೆಲ್ಫನ್ನು ಸಂಧಿಸುವ ಮಾತು ಹಾಗಿರಲಿ; ಬಹುತೇಕ ಸಲ ‘ನಮ್ಮ ಸೆಲ್ಫನ್ನು ನಾವು ಸಂಧಿಸುವ ಗಳಿಗೆಗಳಾದರೂ ಇವೆಯೆ?’ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ! ಕೆಲವರು ತಮ್ಮ ಆತ್ಮಚರಿತ್ರೆಯಲ್ಲಿ ಕೂಡ ತಮ್ಮ ಸೆಲ್ಫನ್ನು ಸಂಧಿಸಿದಂತೆ ಕಾಣುವುದಿಲ್ಲ. ಇನ್ನು ಕತೆ, ಕವಿತೆ, ಪ್ರಬಂಧ, ಭಾಷಣಗಳಲ್ಲಿ ತಮ್ಮ ಸೆಲ್ಫನ್ನು ಸಂಧಿಸಿದ್ದಾರೆಯೆ ಎಂಬ ಮಾತನ್ನಂತೂ ಕೇಳುವಂತೆಯೇ ಇಲ್ಲ!

ಸೆಲ್ಫ್ ಸುತ್ತಣ ಪ್ರಶ್ನೆಗಳು ಇಷ್ಟು ಸೂಕ್ಷ್ಮವಾಗಿರುವುದರಿಂದಲೇ ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಲೋಹಿಯಾಗೆ ಉತ್ತರ ಹೊಳೆಯಲಿಲ್ಲ. ಸಾಮಾನ್ಯ ಮಾತುಕತೆಯಲ್ಲಿ ಕೂಡ ಲೋಹಿಯಾ ತಮ್ಮ ಸೆಲ್ಫ್ ನಿಂದ ಹುಟ್ಟದಿರುವ ಉತ್ತರ ಕೊಡುವವರಾಗಿರಲಿಲ್ಲ. ಪ್ರತಿ ಪ್ರಶ್ನೆಗೂ 'ಯೆಸ್’ ಅಥವಾ 'ನೋ’ ಎಂಬ ಉತ್ತರ ಇರುವುದಿಲ್ಲವಲ್ಲ! ಪರ್ಲ್ ಎಸ್. ಬಕ್ ಕೇಳಿದ ಅತಿ ಸೂಕ್ಷ್ಮ ಪ್ರಶ್ನೆಗೆ ವರ್ಷಗಟ್ಟಲೆ ಯೋಚಿಸಿದರೂ ಸ್ಪಷ್ಟ ಉತ್ತರ ಹೊಳೆಯುವುದು ಕಷ್ಟ. ಅದರಲ್ಲೂ ಇಂಡಿಯಾದಲ್ಲಿ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಯಾವಾಗಲಾದರೂ ಸಂಧಿಸುತ್ತದೆಯೇ ಎಂಬ ಪ್ರಶ್ನೆಗಂತೂ ಉತ್ತರ ಹುಡುಕುವುದು ಇನ್ನಷ್ಟು ಕಷ್ಟ. ಇಂಡಿಯಾದಲ್ಲಿ ಎದ್ದು ಕಾಣುವ 'ಬೂಟಾಟಿಕೆ ಹಾಗೂ ಎರಡು ನಾಲಗೆ’ಗಳನ್ನು ಕುರಿತು ಮುಂದೆ ೧೯೫೬ರಲ್ಲಿ ಲೇಖನ ಬರೆದ ಲೋಹಿಯಾಗೆ ಆ ಕಾಲಕ್ಕಾಗಲೇ ಈ ದೇಶದಲ್ಲಿ ಒಂದು ಸೆಲ್ಫ್‌ ಮತ್ತೊಂದು ಸೆಲ್ಫ್ ನಡುವಣ ಭೇಟಿ ಅಸಾಧ್ಯವಾಗತೊಡಗಿದೆ ಎನ್ನಿಸಿತ್ತೇನೋ.

ಲೋಹಿಯಾ ಆ ಹೊತ್ತಿಗೆ ಇಂಡಿಯಾದ ಅತ್ಯಂತ ಸೂಕ್ಷ್ಮ ಚಿಂತಕ-ರಾಜಕಾರಣಿಯಾಗಿ ರೂಪುಗೊಳ್ಳತೊಡಗಿದ್ದವರು. ತಮ್ಮೊಳಗೆ, ತಮ್ಮ ಆಳದಲ್ಲಿ, ತುಡಿಯುತ್ತಿದ್ದುದನ್ನು ಆಪ್ತರ ಜೊತೆಗೆ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಜೊತೆಗೆ, ವಿರೋಧಿಗಳ ಜೊತೆಗೆ ಹಂಚಿಕೊಳ್ಳಬಲ್ಲವರಾಗಿದ್ದರು. ಸ್ವಪರೀಕ್ಷೆಯ ಆತ್ಮಚರಿತ್ರೆಯನ್ನೇ ಬರೆದಿದ್ದ ಗಾಂಧೀಜಿಯ ಒಡನಾಟವಿದ್ದವರು. ಲೋಹಿಯಾ ತಮ್ಮ  ಸಾರ್ವಜನಿಕ ಭಾಷಣಗಳಲ್ಲೂ, ಎಲ್ಲ ಬಗೆಯ ಸಭೆಗಳಲ್ಲೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನೇ ಹೆಚ್ಚು ಮಾತಾಡಲೆತ್ನಿಸುತ್ತಿದ್ದರು. ಅಂದರೆ, ತಮ್ಮ ಸೆಲ್ಫನ್ನು ಇತರರಿಗೂ ತಲುಪಿಸಲೆತ್ನಿಸುತ್ತಾ, ತಾವೂ ಇತರರ ಸೆಲ್ಫನ್ನು ತಲುಪಲೆತ್ನಿಸುತ್ತಿದ್ದರು. ಲೋಕಸಭಾ ಸದಸ್ಯೆ-ಬುದ್ಧಿಜೀವಿ ತಾರಕೇಶ್ವರಿ ಸಿನ್ಹಾ ಇರಲಿ; ಸ್ತ್ರೀವಾದಿ ಚಿಂತಕಿ ಶಕುಂತಲಾ ಶ್ರೀವಾಸ್ತವ ಇರಲಿ; ದಿಲ್ಲಿಯ ಕಾಫೀ ಹೌಸಿನಲ್ಲಿ ಲೋಹಿಯಾ ಕೂತಿದ್ದ ಟೇಬಲ್ಲಿನ ಚರ್ಚೆಗೆ ಬಂದು ಸೇರಿಕೊಳ್ಳುತ್ತಿದ್ದ ವೇಟರುಗಳಿರಲಿ; ಲೋಹಿಯಾರ ಕ್ಷೌರಿಕನಿರಲಿ; ಐದು ವರ್ಷದ ಹುಡುಗಿ ನಂದನಾ ರೆಡ್ಡಿಯಿರಲಿ… ಲೋಹಿಯಾ ಈ ಯಾರ ಜೊತೆ ಮಾತಾಡಿದಾಗಲೂ ಅವರ ಸೆಲ್ಫನ್ನು ಸಹಜವಾಗಿಯೇ ಸಂಧಿಸಲೆತ್ನಿಸುತ್ತಿದ್ದರು ಎಂದು ನನಗನ್ನಿಸಿದೆ. 

ಇದು ಲೋಹಿಯಾರ ಸಾವಿರಾರು ಪುಟಗಳ ಬರಹಗಳನ್ನು ಓದಿದ ಹಿನ್ನೆಲೆಯಲ್ಲಿ ನನ್ನನ್ನು ತಟ್ಟಿರುವ ಸತ್ಯ. ಲೋಹಿಯಾರ ಸೆಲ್ಫ್ ಅವರ ಓದುಗನಾದ ನನ್ನ ಸೆಲ್ಫನ್ನು ಸಂಧಿಸಿದ ರೀತಿಯನ್ನೂ ಗಮನಿಸಿರುವ ಆಧಾರದ ಮೇಲೆ ಈ ಮಾತು ಹೇಳುತ್ತಿರುವೆ. ಲೋಹಿಯಾ ಕುರಿತು ಬರೆದಿರುವ ಸೂಕ್ಷ್ಮ ಮನಸ್ಸಿನ ಬಹುತೇಕರು ಲೋಹಿಯಾರ ಈ ಗುಣವನ್ನು ಮನಗಂಡಂತಿದೆ. ಅವರ ತೀಕ್ಷ್ಣ ವರ್ತನೆಯನ್ನು, ನಿಷ್ಠುರ ನಿಲುವುಗಳನ್ನು ಟೀಕಿಸುವವರಿದ್ದಾರೆ. ಆದರೆ ಲೋಹಿಯಾರ ಸೆಲ್ಫ್ ಉಳಿದವರ ಸೆಲ್ಫನ್ನು ಸಂಧಿಸಲೆತ್ನಿಸುತ್ತಿತ್ತು ಎಂಬುದನ್ನು ಬಿಡಿಸಿ ಹೇಳದಿದ್ದರೂ, ಈ ಬಗ್ಗೆ ಅವರನ್ನು ಬಲ್ಲವರಿಗೆ ಅನುಮಾನವಿದ್ದಂತಿರಲಿಲ್ಲ.

೧೯೫೨ರಲ್ಲಿ ಅಮೆರಿಕದಲ್ಲಿ ಲೋಹಿಯಾಗೆ ಹೊಳೆಯದ ಉತ್ತರ ಬರಬರುತ್ತಾ ಅವರ ಅನುಭವಕ್ಕೆ ಹೊಳೆದಿರಬಹುದು ಎನ್ನಿಸುತ್ತದೆ. ರಮಾ ಮಿತ್ರರ ಸಖ್ಯದಲ್ಲಿ ಲೋಹಿಯಾಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು ಎಂದು 'ಸುಧಾ’ ವಾರಪತ್ರಿಕೆಯಲ್ಲಿ 'ಡಾಕ್ಟರ್ ಸಾಹೇಬ್’ ಧಾರಾವಾಹಿ ಬರೆಯುತ್ತಿದ್ದಾಗ ಊಹಿಸಿದೆ. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಭೂಗತ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಲೋಹಿಯಾ ೧೯೪೩-೪೪ರ ನಡುವೆ ಲಾಹೋರ್ ಜೈಲಿನಲ್ಲಿ ಭೀಕರ ಹಿಂಸೆಯ ಸೆರೆಮನೆವಾಸ ಮುಗಿಸಿ ಕಲ್ಕತ್ತಾಕ್ಕೆ ಬಂದರು. ಆಗ ಹಿಸ್ಟರಿ ಲೆಕ್ಚರರ್ ರಮಾ ಮಿತ್ರ ಲೋಹಿಯಾರನ್ನು ಮೊದಲ ಬಾರಿಗೆ ಭೇಟಿಯಾದರು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಕೆಲವು ಭೂಗತ ಚಳುವಳಿಗಾರರು ಆಗ ಲೇಡೀಸ್ ಹಾಸ್ಟೆಲ್ಲಿನಲ್ಲಿದ್ದ ರಮಾ ಮಿತ್ರರ ಕೊಠಡಿಯನ್ನು ಸ್ಫೋಟಕ ಅಸ್ತ್ರಗಳನ್ನು ಬಚ್ಚಿಡಲು ಕೂಡ ಬಳಸಿಕೊಂಡಿದ್ದರು. 

ರಮಾ-ರಾಮಮನೋಹರರ ಸಖ್ಯ ಗಾಢವಾಯಿತು. ೧೯೫೬ರಿಂದೀಚೆಗೆ ರಮಾಗೆ ಲೋಹಿಯಾ ಬರೆದ ಪತ್ರಗಳನ್ನು ಓದುತ್ತಿದ್ದರೆ, ಇಂಡಿಯಾದಲ್ಲಿ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ನಿರಂತರವಾಗಿ ಸಂಧಿಸಿದ ಅಪೂರ್ವ ಗಳಿಗೆಗಳು ಕಾಣುತ್ತವೆ. ಈ ಪತ್ರಗಳಿಗೆ ರಮಾ ಮಿತ್ರ ಬರೆದ ಉತ್ತರಗಳಲ್ಲೂ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸಿದ್ದ ಸೂಚನೆಗಳು ಲೋಹಿಯಾರ ಮಾರೋಲೆಗಳಲ್ಲಿವೆ. ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವುದೆಂದರೆ ಅಲ್ಲಿ ಎಲ್ಲ ಭಾವಗಳೂ ಪರಸ್ಪರ ಮುಕ್ತವಾಗಿ ಹರಿದು ತಲುಪುವಂತಿರಬೇಕೇನೋ! ಎರಡು ಸೆಲ್ಫ್‌ಗಳ ಈ ಅಪೂರ್ವ ಭೇಟಿಯ ವಿವರಗಳನ್ನು ಅರಿಯಬಯಸುವವರ ದುರದೃಷ್ಟವೆಂದರೆ, ರಮಾ ಲೋಹಿಯಾಗೆ ಬರೆದ ಪತ್ರಗಳು ಹೈದರಾಬಾದಿನಲ್ಲಿ ಅಚ್ಚಿಗೆ ಸಿದ್ಧವಾಗುವ ಕಾಲದಲ್ಲಿ ಕಳೆದುಹೋದವು.  

ಕಲೆ: ಮೋನಪ್ಪ

ಕಾಲದ ಒತ್ತಾಯದಿಂದಾಗಿ ಬಹುತೇಕ ಕಾಲ ಸಾರ್ವಜನಿಕ ವ್ಯಕ್ತಿಯಾಗಬೇಕಾಗಿ ಬಂದಿದ್ದ ಅಂಬೇಡ್ಕರ್ ಅವರು ಸವಿತಾಗೆ ಬರೆದ ಪತ್ರಗಳಲ್ಲಿ ಹೀಗೆ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳನ್ನು ಈಚೆಗೆ ನೋಡಿದೆ. ಆ ಬಗ್ಗೆ ಮುಂದೊಮ್ಮೆ ಚರ್ಚಿಸೋಣ. ಹೆಣ್ಣು-ಗಂಡಿನ ನಡುವೆ, ಗಂಡು-ಗಂಡಿನ ನಡುವೆ, ಹೆಣ್ಣು-ಹೆಣ್ಣಿನ ನಡುವೆ ಒಂದು ಸೆಲ್ಫ್ ಇನ್ನೊಂದು ಸೆಲ್ಫನ್ನು ಸಂಧಿಸುವ ಗಳಿಗೆಗಳು ನಮ್ಮೊಳಗನ್ನು ಅಥವಾ ಸೆಲ್ಫನ್ನು ಸದಾ ಜೀವಂತವಾಗಿಟ್ಟಿರುತ್ತವೆಂದು ಕಾಣುತ್ತದೆ. ಹಟಾತ್ತನೆ ಎದ್ದು ನಿಲ್ಲುವ ಅಗೋಚರ ಗೋಡೆಗಳ ಈ ಕಾಲದಲ್ಲೂ ಇಂಥದೊಂದು ನಂಬಿಕೆ ಈ ಕಾಲದಲ್ಲೂ ಸಿನಿಕರಾಗದಂತೆ ನಮ್ಮನ್ನು ಪೊರೆಯಬಲ್ಲದೆ?
   

Share on:

Comments

17 Comments



| ಮಂಜುನಾಥ್ ಸಿ ನೆಟ್ಕಲ್

ಎಷ್ಟೋ ಸಲ ನಮ್ಮ ಸೆಲ್ಫ್ ಅನ್ನೇ ನಾವು ಸರಿಯಾಗಿ ಅರಿಯಲು ನಿಯಂತ್ರಿಸಲು ಸಹ ಆಗಿದೆ ಸೋತಿರುತ್ತೇವೆ ಸರ್ ...ಇದರ ನಡುವೆ ಮತ್ತೊಬ್ಬರ ಸೆಲ್ಫ್ ಅನ್ನು ಸಂಧಿಸುವುದು ಬಹುತೇಕ ಅಸಾಧ್ಯವೇ ಅನಿಸುತ್ತದೆ. ಈ ಬರಹ ಕನಿಷ್ಠ ನಮ್ಮ ಸೆಲ್ಫ್ ಅನ್ನು ಅರಿಯುವ ಕಡೆ ದಾರಿ ತೋರಲಿ , ನಂತರದ ದಿನಗಳಲ್ಲಿ ಮತ್ತೊಬ್ಬರ ಸೆಲ್ಫ ಅನ್ನು ಸಹ ಸಂಧಿಸುವಂತಾಗಲಿ ಧನ್ಯವಾದಗಳು ಸರ್


| Dr.Mohan Mirle

ಅಂಕಣ ಓದುತ್ತಾ ಇಲ್ಲಿನ ಶೀರ್ಷಿಕೆ \"ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ?\" ಎಂಬ ಪ್ರಶ್ನಾರ್ಥಕ ವಾಕ್ಯಕ್ಕೆ ಪೂರಕವಾಗಿ \"ಆತ್ಮಗಳ ಅನುಸಂಧಾನ\" ಅಥವಾ \"ಆತ್ಮಾನುಸಂಧಾನ\" ಎಂಬ ಕನ್ನಡದ ನುಡಿಗಟ್ಟು ನೆನಪಿಗೆ ಬಂದಿತು. ಹಾಗೆಯೇ ಅಡಿಗರ \"ಚಿಂತಾಮಣಿಯಲ್ಲಿ ಕಂಡ ಮುಖ\" ಕವನವೂ ಮನದಲ್ಲಿ ಹಾದು ಹೋಯಿತು. \"ಒಬ್ಬರು ಮತ್ತೊಬ್ಬರ ಮನಸ್ಸನ್ನು ಅಥವಾ ಪರಸ್ಪರರು ಪರಸ್ಪರರ ಮನಸ್ಸನ್ನು ನಿರ್ವ್ಯಾಜವಾಗಿ ಅರಿಯುವ ಬಗೆ\"ಯನ್ನು “ಆತ್ಮಾನುಸಂಧಾನ\" ಎಂದುಕೊಳ್ಳಬಹುದಾದರೆ, \"ಚಿಂತಾಮಣಿಯಲ್ಲಿ ಕಂಡ ಮುಖ\" ಸ್ವಯಂ ಅರಿವಿನ ಅಥವಾ ತನ್ನೊಳಗನ್ನು ಅರಿಯುವ ಆ ಅಪರೂಪದ ಅಮೃತ ಘಳಿಗೆ\"ಯನ್ನು ತಿಳಿಸುತ್ತದೆ. ಈ ಎರಡೂ ಬಗೆಗಳೂ ಒಂದು ಸೆಲ್ಫ್ ಇನ್ನೊಂದು‌ ಸೆಲ್ಫ್ ಅನ್ನು ತಲುಪುವ ಕ್ಲಿಷ್ಟಕರ ಅಥವಾ ಅಪರೂಪದ ಹಾದಿಗಳೇ ಆಗಿವೆ. ನನ್ನ ಪ್ರಕಾರ ಇಂದಿನ ಸತ್ಯೋತ್ತರ ಕಾಲಘಟ್ಟದಲ್ಲಿ ಇಂತಹ ಸ್ಥಿತಿ ತಲುಪುವ ಸಾಧ್ಯತೆ ಮರೀಚಿಕೆಯೇ ಸರಿ. ಒಂದು ವೇಳೆ ಯಾರಾದರೂ ತಲುಪಿದ್ದೇವೆ ಎಂದುಕೊಂಡರೂ ಬಹುಶಃ ಅದು ಭ್ರಮೆಯೋ ಇಲ್ಲವೇ ಅರ್ಧಸತ್ಯವೋ ಆಗಿರುತ್ತವೆ. ಲೋಹಿಯಾ ಮತ್ತು ರಮಾ ಅವರ ನಡುವಿನ ಸಂಬಂಧದಲ್ಲಿ ಇದರ ಪ್ರಮಾಣ ಶೇಕಡಾವಾರು ಹೆಚ್ಚಿರಬಹುದಷ್ಟೆ.


| Vikram Visaji

ಲೋಹಿಯಾ ಅಸ್ತಿತ್ವವಾದ ಮತ್ತು ಸಮಾಜವಾದದ ಬೆಸುಗೆ ಅನ್ನಿಸಿತು


| Dr.G.Gangaraju

ಇದು ಮನುಕುಲದ ಸಾರ್ವಕಾಲಿಕ ಪ್ರಶ್ನೆ ಎಂದು ತೋರುತ್ತದೆ. ಬಸವಣ್ಣನ ಬಗ್ಗೆ ಆತನ \'ವಿಚಾರಪತ್ನಿ\' ನೀಲಾಂಬಿಕೆ ಎತ್ತುವ ಪ್ರಶ್ನೆಯಲ್ಲೂ ಇದರ ಬೀಜಗಳಿವೆ. ಗಾಂಧೀಜಿ ಮತ್ತು ಕಸ್ತೂರ್ ಬಾ ಸಂಬಂಧ ಕುರಿತ ಇತ್ತೀಚಿನ ಕೆಲ ಬರವಣಿಗೆಗಳು ಈ ಪ್ರಶ್ನೆಯನ್ನು ಮೇಲ್ಪದರಿನಲ್ಲಿ ಗ್ರಹಿಸಿದಂತೆ ಕಾಣಿತ್ತದೆ. ಆಳಕ್ಕಿಳಿದರೆ ಹೊಸರೂಪ ತೋರಬಹುದು


| ಡಾ. ನಿರಂಜನ ಮೂರ್ತಿ ಬಿ ಎಂ

\'ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ?\' ಈ ಲೇಖನದ ಶೀರ್ಷಿಕೆಯಲ್ಲಿನ ಪ್ರಶ್ನೆಗೆ ನಿಖರ ಉತ್ತರ ದೊರೆಯುವ ಸಾಧ್ಯತೆ ತುಂಬಾ ಕಡಿಮೆಯೆನಿಸಿದರೂ, ಇಲ್ಲಿನ ವಿಶ್ಲೇಷಣೆ ಮಾತ್ರ ತುಂಬಾ ಚೆನ್ನಾಗಿದೆ!\r\nಇಬ್ಬರ ಸಂಬಂಧದ ಬಗ್ಗೆ ಮಾತನಾಡುವಾಗ, ಅವರ ದೇಹಗಳು ಮಾತ್ರ ಬೇರೆ ಅವರ ಜೀವ ಒಂದೇ ಎಂದು ಹೇಳುವುದನ್ನು ಕೇಳಿದ್ದೇವೆ. ಬಹುಶಃ ಇಂತಹ ಸಂಬಂಧಗಳಲ್ಲಿ ಮಾತ್ರ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುತ್ತದೆನಿಸುತ್ತದೆ. ಸಂಧಿಸದೆ ಸೇರುತ್ತದೆ ಎಂದರೆ ಸರಿಯಾಗುತ್ತದೆನಿಸುತ್ತದೆ.\r\nಅಂದಹಾಗೆ ಈ ಇಬ್ಬರು ಯಾರಾದರೂ ಆಗಿರಬಹುದು. ಗೆಳೆಯ-ಗೆಳತಿ, ಗೆಳೆಯ-ಗೆಳೆಯ, ಗೆಳತಿ-ಗೆಳತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅಣ್ಣ-ತಂಗಿ, ಅಥವಾ ಗಂಡ-ಹೆಂಡತಿ. ವಯಸ್ಸು, ಲಿಂಗ, ಜಾತಿ, ಮತ, ಪಂಥಗಳನ್ನು ಮೀರಿದ ಈ ತರಹದ ಸಂಬಂಧಗಳಲ್ಲಿ ಒಂದು ತಂತನ (ಸೆಲ್ಫ್) ಮತ್ತೊಂದು ತಂತನವನ್ನು (ಸೆಲ್ಫನ್ನು) ಸಂಧಿಸಬಹುದು ಅಥವಾ ಸೇರಬಹುದು ಎಂದೆನಿಸುತ್ತದೆ. ರಮಾ-ರಾಮ ಮನೋಹರ ಲೋಹಿಯಾ ಮತ್ತು ಅಂಬೇಡ್ಕರ್-ಸವಿತಾ ಅವರ ಸಂಬಂಧಗಳು ಹೀಗೇ ಇದ್ದಿರಬಹುದಲ್ಲವೆ? ಇಂತಹ ಸಂಬಂಧಗಳು ಹೆಚ್ಚೆಚ್ಚು ಬೆಳೆದಷ್ಟು ಸಮಾಜ ಹೆಚ್ಚೆಚ್ಚು ಆರೋಗ್ಯಪೂರ್ಣವಾಗುತ್ತದೆ. ಈ ದಿಸೆಯಲ್ಲಿ ಈ ಲೇಖನದ ಮೂಲಕ ಹುಳಿಯಾರರ ಪ್ರಯತ್ನ ಶ್ಲಾಘನೀಯ!


| ವಿಜಯೇಂದ್ರ ಕುಮಾರ್‌ ಜಿಎಲ್

ಕಿಲಾಡಿತನ ಮೀರಿದ ಮುಗ್ಧತೆ, ನಾನು ಎಂಬ ಅಹಂ ಅನ್ನು ಮೀರಿದ ಮನಸ್ಥಿತಿ, ನಿರಾಡಂಬರ ಗುಣ, ಸಂಪೂರ್ಣ ನಿಸ್ವಾರ್ಥತೆ, ಇತರರ ಸ್ಥಾನದಲ್ಲಿ ತಾನು ನಿಂತು ಯೋಚಿಸುವ ಮತ್ತು ಸ್ಪಂದಿಸುವ ವಿಶಾಲವಾದ ಮನೋಭಾವ, ಗೊತ್ತೊದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು Confession ಮಾಡಿಕೊಳ್ಳುವ - ತನ್ನ ತಪ್ಪನ್ನು ತಿದ್ದಿಕೊಳ್ಳುವ ಒಳ್ಳೇತನ, ಪ್ರತಿಫಲಾಪೇಕ್ಷೆಗಳು ಇಲ್ಲದ ನೈಜ ಪ್ರೀತಿ ಇದ್ದಲ್ಲಿ ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸಲು ಸಾಧ್ಯ ಸರ್.‌ ಇದು ಸಾಧ್ಯವಾಗಲು ಜೀವನಪ್ರೀತಿಯುಳ್ಳ ʼಸಂತ ಸ್ಥಿತಿʼಗೆ ತಲುಪಬೇಕೆನಿಸುತ್ತದೆ. ಅಂಬೇಡ್ಕರ್‌, ಗಾಂಧಿ, ಲೋಹಿಯಾ ಅವರ ಹಾಗೆ!


| ಕುಸುಮ

ಶಿವರಾಮ ಕಾರಂತರ ಕನ್ನಡಿಯಲ್ಲಿ ಕಂಡಾತ; ಗೋಪಾಲಕೃಷ್ಣ ಅಡಿಗರ ಚಿಂತಾಮಣಿಯಲ್ಲಿ ಕಂಡ ಮುಖ, ಗೊಂದಲಪುರ, ಭೂಮಿಗೀತ; ಅಕ್ಕನ ವಚನಗಳು ಮೊದಲಾದ ಕಲಾಕೃತಿಗಳು ನೆನಪಾಗುತ್ತವೆ. ಬಹುಶಃ ಸಾಹಿತ್ಯದಲ್ಲಿ ಕನಸು ಮತ್ತು ಕನ್ನಡಿ ಆ ಸೆಲ್ಫ್ ನ್ನು ಕಾಣುವ ಬಗೆಗಳಾಗಿವೆ. ಒಬ್ಬರ ಬದುಕಿನಲ್ಲಿ once self ಎನ್ನುವುದನ್ನು ಬಗೆಯುವ ಪರಿಯೇ ಸಮಸ್ಯೆಯೇನೋ ಎನಿಸುತ್ತದೆ. ಮತ್ತು once self ಎಂಬುದು ಸಾಮಾಜಿಕವಾದ ಅನುಭವಗಳೇ ಅಥವಾ ವೈಯಕ್ತಿಕವಾದುದೇ...ಅಥವಾ ಇನ್ನೂ ಹಲವು ಪ್ರಶ್ನೆಗಳು ಎದುರಾಗುತ್ತವೆ.


| ನಟರಾಜ್ ಹುಳಿಯಾರ್ ನಮಸ್ಕಾರ

ನೊಬೆಲ್ ಲೇಖಕಿ ಪರ್ಲ್ ಎಸ್ ಬಕ್ ಲೋಹಿಯಾಗೆ ಕೇಳಿದ ಬಹು ಸೂಕ್ಷ್ಮ ಪ್ರಶ್ನೆ ಕುರಿತು ಇಷ್ಟು ಬೇಗ, ಇಷ್ಟು ಗಂಭೀರವಾಗಿ ಚಿಂತಿಸುತ್ತಿರುವ ಮನಸ್ಸುಗಳ ಪ್ರತಿಕ್ರಿಯೆ ಅನನ್ಯ. ಗೆಳೆಯರಾದ ಮೋಹನ್ ಮಿರ್ಲೆ, ಗಂಗರಾಜು, ಮಂಜು ನೆಟ್ಕಲ್, ನಿರಂಜನ್, ವಿಕ್ರಮ್, ವಿಜಯೇಂದ್ರ, ಕುಸುಮಾ....ಯು ಹ್ಯಾವ್ ಮೇಡ್ ಮಿ ಥಿಂಕ್ ಮಚ್ ಮೋರ್ ಡೀಪ್ಲಿ. ಥ್ಯಾಂಕ್ಯು ಆಲ್. ಟ್ರೂಲಿ grateful.


| ಭೀಮೇಶ ಯರಡೋಣಿ

ಸೆಲ್ಫ್ ಮತ್ತೊಂದು ಸೆಲ್ಫನ್ನು ತಲುಪದಿದ್ದಲ್ಲಿ ಬದುಕು ಸಹನೀಯವಾಗುವುದು ಹೇಗೆ? ಹಸನಾಗುವುದು ಹೇಗೆ? ತತ್ವಪದಕಾರರ ಗುರು ಪರಂಪರೆ ಹಿನ್ನೆಲೆಯಲ್ಲಿ ಮತ್ತು ಬದುಕಿನ ಸಹಜ ಸಂಬಂಧಗಳಲ್ಲಿ ಹೂವು ಅರಳುವಂತೆಯೇ ಸೆಲ್ಫ್ ಮತ್ತೊಂದು ಸೆಲ್ಫನ್ನು ತಲುಪುತ್ತದೆ ಎಂದು ಭಾವಿಸಿರುವೆ.


| ಮಂಜುನಾಥ್ ಸಿ ನೆಟ್ಕಲ್

ನಟರಾಜ್ ಹುಳಿಯಾರ್ ಅವರ\' ಒಂದು ಸೆಲ್ಫ್ ಮತ್ತೊಂದು ಸೆಲ್ಫ್ ಅನ್ನು ಸಂಧಿಸುವುದೇ\' ಲೇಖನ ಓದಿದ ನಂತರ  ಅಕ್ಷರ ಪ್ರಕಾಶನ ಪ್ರಕಟಿಸಿರುವ \'ಅಶಿಶ್ ನಂದಿ ವಿಚಾರ \'  ಪುಸ್ತಕ ಓದುತ್ತಿದ್ದೆ, ಅದರಲ್ಲಿ ಅವರು ಪ್ರಸ್ತಾಪಿಸಿದ ಕೆಲವು ಮಾತುಗಳು ಈ ಲೇಖನಕ್ಕೆ ಪೂರಕವಾಗಿದೆ ಅನಿಸಿತು. ಹಾಗಾಗಿ ಹಂಚಿಕೊಳ್ಳುತ್ತಿದ್ದೇನೆ. ಲಿಯೋ ಫೋಲ್ಡ್ ಸೆಂಗೋರ್ ನ\r\nಈ ಪ್ರಸಿದ್ಧ ಹೇಳಿಕೆಯನ್ನು ನೋಡಿ \" ಐ ಫೀಲ್ ಐ ಕ್ಯಾನ್ ಡ್ಯಾನ್ಸ್ ದ ಅದರ್ ಅಂಡ್ ದೇರ್ ಫೋರ್ ಅಯಾಮ್ \"   ಇದು ಇನ್ನೊಂದು ಸುಪ್ರಸಿದ್ಧವಾದ ಹೇಳಿಕೆ -ಡೆಕಾರ್ಟ್ ನ \" ಐ ಥಿಂಕ್ ದೇರ್ ಫೋರ್ ಅಯಾಮ್ ಗೆ  ತದ್ವಿರುದ್ಧವಾದದ್ದು ; ಯುರೋಪಿಯನ್ ಸ್ವ-ಪರಿಕಲ್ಪನೆಗಿಂತ ತೀರಾ ಭಿನ್ನವಾದ ಆಫ್ರಿಕನ್ ಸ್ವ -ಪರಿಕಲ್ಪನೆಯನ್ನು ಸ್ಪಷ್ಟಪಡಿಸಿರುವಂಥದ್ದು. ಆಫ್ರಿಕನ್ ದೇಶಿಯ ಪರಂಪರೆಗಳಲ್ಲಿ \'ನಾನು \' ಎಂದರೆ \'ನಾನು\' ಮಾತ್ರವಲ್ಲದೆ ಇನ್ನೊಬ್ಬನನ್ನು ಪರಿಗ್ರಹಿಸಬಲ್ಲ, ಫರಿಭಾವಿಸಬಲ್ಲ \'ನಾನು\' ಕೂಡ ಸೇರುತ್ತದೆ ಅದಕ್ಕೆ ಸೆಂಗೋರ್ ಘೋಷಿಸುವುದು:  \'ನಾನು\'  ಇನ್ನೊಬ್ಬನನ್ನು ನರ್ತಿಸಬಲ್ಲೆ ಅಂದರೆ ನಾನು ಇನ್ನೊಬ್ಬನನ್ನು ಕಲಾತ್ಮಕವಾಗಿ ನನ್ನಲ್ಲಿ ಅಂತರ್ಗತಗೊಳಿಸಿಕೊಳ್ಳಬಲ್ಲೆ ಹಾಗೂ ಅಭಿವ್ಯಕ್ತಿಸಬಲ್ಲೆ , ಆ ಕಾರಣ ನಾನು ಇದ್ದೇನೆ;  ನನ್ನ ಇಂಥ ಶಕ್ತಿಯೇ ನನ್ನ ಅಸ್ತಿತ್ವಕ್ಕೆ ಸಾಕ್ಷಿ.  ಇದಕ್ಕೆ ಪೂರಕವಾಗಿ ಸೆಂಗೋರ್ ನ ಮತ್ತೊಂದು ಅಷ್ಟೇ ಪ್ರಸಿದ್ಧ ಹೇಳಿಕೆಯನ್ನು ಗಮನಿಸಬಹುದು ಆತ ಹೇಳುತ್ತಾನೆ \'ಆಫ್ರಿಕಾದಲ್ಲಿ ಜ್ಞಾನವೆಂದರೆ ಮುಖಾಮುಖಿಯ ಹಾಗೂ ಅಂತಸ್ಫುರಣೆಯ  ಮುಖಾಂತರ ಒದಗಿ ಬರುವ ಜ್ಞಾನ\' \r\n(ನಾಲೆಜ್ ಬೈ ಕನ್ ಫ್ರಾಂಟೇಶನ್ \r\n ಅಂಡ್ ಇನ್ ಟ್ಯೂಶನ್. )


| Krishna Kumar

ತುಂಬಾ ಸಂಕೀರ್ಣವಾದ ಆತ್ಮ ವಿಮರ್ಶೆ ಗೆ ಸಂಬಂಧಿಸಿದ ,ಚಿಂತನೆಯ ಮೇಲ್ಮುಖ ಚಲನೆಯ ಲೇಖನ. ಅರ್ಥವಾಗದೆ ಉಳಿಯುವ ಚಿಂತನೆ


| ದೇವಿಂದ್ರಪ್ಪ ಬಿ.ಕೆ.

ಲೇಖನ ಲೋಹಿಯಾ ಅವರ ಬದುಕಿನ ಅನೇಕ ಸಂಗತಿಗಳನ್ನು ನಮ್ಮ ಮುಂದೆ ಇಟ್ಟು ನಮ್ಮನ್ನೇ ನಾವು ಮತ್ತೆ ಸಿಂಹಾವಲೋಕನ ಕ್ರಮದಲ್ಲಿ ನೋಡಿಕೊಳ್ಳುವಂತೆ ಮಾಡುತ್ತದೆ. ವಾಸ್ತವದಲ್ಲಿಯೂ ಕೂಡ ಒಬ್ಬರನ್ನೊಬ್ಬರು ಸಂಧಿಸಲು ಸಾಧ್ಯವಾಗಿಲ್ಲ. ಈ ಮುಂಚೆಯೂ ಕೂಡ ಸಾಧ್ಯವಾಗಿಲ್ಲ. ಒಬ್ಬ ವ್ಯಕ್ತಿಯ ಒಳಗೆ ಎಷ್ಟೊಂದು ಇಗೋ ಇರುತ್ತೆ ಎನ್ಜುವುದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಅದರಲ್ಲೂ ಉನ್ನತ ಆಲೋಚನೆ ಉಳ್ಳ ಅನೇಕರಲ್ಲಿ ಈ ಸಂಧಿಸುವಿಕೆ ಗುಣ ಕಡಿಮೆ ಇರುತ್ತದೆ. ಬಸವಣ್ಣ ಮತ್ತೆ ಮತ್ತೆ ತನ್ನ ವಚನಗಳಲ್ಲಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುತ್ತಲೇ ಇರುತ್ತಾನೆ. ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ , ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ, ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗಾ ಕೂಡಲಸಂಗಮದೇವಾ. ಈ ತರಹದ ಅನೇಕ ದಾರ್ಶನಿಕರು ತಮ್ಮನ್ನು ಸಂಧಿಸುವುದರ ಜೊತೆಗೆ ಲೋಕವನ್ನು ಸಂಧಿಸಿದ ಉದಾಹರಣೆ ಸಿಗುತ್ತದೆ.


| Dr.Prabhakar

You have chosen this time truly an intricate and intriguing issue that perhaps haunt most of the people who struggle throughout life kind of \'dual life\', where an outward life is for show off while the inward life is a suffering one, because of the inner conflicts of self and materialistic livng. Analysing such issues is really challenging and you have so nicely crafted them! Hope I have understood the essence of your topic!


| ರೂಪ ಹಾಸನ

ನಿಮ್ಮಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ? ಎಂಬ ಅಂಕಣ ಓದಿ, ದಶಕದ ಹಿಂದೆ ಅವಧಿ ವೆಬ್ ಪೋರ್ಟಲ್ ಗೆ ನಾನು ಬರೆದಿದ್ದ ಒಂದು ಕಿರು ಅನುಭವ ನೆನಪಾಯ್ತು. ಅದನ್ನು ಕಳಿಸುತ್ತಿರುವೆ. ಈ ಮತ್ತೊಂದು ಸೆಲ್ಫ್ ಮುಟ್ಟುವ ಪ್ರಯತ್ನದಷ್ಟೇ ತೀವ್ರವಾಗಿ ನಮ್ಮ ಸೆಲ್ಫ್ ಮುಟ್ಟುವ, ಅದಕ್ಕಾಗಿ ದಾರಿಗಳನ್ನು ಹುಡುಕಾಡುವ ಪ್ರಯತ್ನವೂ ಅವಿರತವಾಗಿ ನಡೆಯುತ್ತಲೇ ಇರುತ್ತದೆಂಬುದು ನನ್ನ ನಂಬಿಕೆ. ಅದಕ್ಕೆ ಈ ಜಂಜಡದ ಬದುಕಿನಲ್ಲಿ ಅದೆಷ್ಟು ಅಡೆತಡೆಗಳು! ಆಗೆಲ್ಲ ಮೂಡಿದ ಕೆಲ ಕವಿತೆಗಳನ್ನೂ ನಿಮ್ಮ ಗಮನಕ್ಕಾಗಿ ಕಳಿಸಿರುವೆ\r\n\r\n\'ಎಚ್ಚರ ಮೈಮರೆವುಗಳ ಮಧ್ಯೆ\' – ರೂಪ ಹಾಸನ\r\n\r\nಅದು ರೈಲಿನಲ್ಲಿ ರಾತ್ರಿ ಪ್ರಯಾಣದ ದಿನ. ಮಧ್ಯ ರಾತ್ರಿ ಕಳೆದ ನಂತರ ಯಾವುದೋ ಸ್ಟೇಷನ್ನಿನಲ್ಲಿ ಎಳೆ ಕಂದಮ್ಮನನ್ನು ಎತ್ತಿಕೊಂಡು ದಂಪತಿಗಳು ರೈಲೇರಿದರು. ಮೊದಲೆ ಕಾದಿರಿಸಿದ್ದ ಸೀಟಿನಲ್ಲಿ ಮಲಗಲು ಸಿದ್ಧತೆ ನಡೆಸಿದ್ದರು. ತಾಯಿ ತನ್ನ ಪಕ್ಕದಲ್ಲೇ ಸೀಟಿನ ಮೇಲೆ ಮಗುವಿಗೆ ಮಲಗಲು ಅನುವು ಮಾಡಿ ತಾನೂ ಮಲಗಿದಳು. ಮತ್ತೆ ರೈಲು ಹೊರಟಿತು. ತಕ್ಷಣವೇ ಮಗು ಜೋರಾದ ದನಿಯಲ್ಲಿ ಅಳತೊಡಗಿತು. ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗುತ್ತಲೇ ಇಲ್ಲ. ಮಗುವನ್ನು ಸಮಾಧಾನಿಸುವುದು ಹೇಗೆಂದು ಒಂದು ಚಿಂತೆಯಾದರೆ, ನಿದ್ದೆಗೆಟ್ಟ ಜನರೆಲ್ಲಾ ಬೈಯ್ದುಕೊಳ್ಳುವರಲ್ಲಾ ಎಂಬ ಆತಂಕ ಆ ಹೊಸ ತಂದೆ-ತಾಯಿಯರಿಗೆ. ಆದರೆ ಮಗುವಿಗೆ ಮಾತ್ರ ಅದೇನು ಹಿಂಸೆಯಾಗುತ್ತಿತ್ತೋ ತೆರೆದ ಬಾಯಿ ಮುಚ್ಚುತ್ತಲೇಇಲ್ಲ.\r\n\r\nಸಹಪ್ರಯಾಣಿಕರು ಒಂದೊಂದು ಸಲಹೆ ನೀಡಿದಂತೆಲ್ಲಾ ಅಪ್ಪ-ಅಮ್ಮ ಅದನ್ನು ಮಾಡಿ ಮುಗಿಸಿದರು. ಆದರೆ ಮಗು ಅಳು ನಿಲ್ಲಿಸುತ್ತಿಲ್ಲ. ಮಲಗುತ್ತಿಲ್ಲ. ಕೈಗೆತ್ತಿಕೊಂಡಾಗೊಮ್ಮೆ ಸ್ವಲ್ಪ ರಚ್ಚೆ ಕಡಿಮೆಯಾದರೂ ಸೀಟಿನ ಮೇಲೆ ಮಲಗಿಸಿದಾಕ್ಷಣ ಮತ್ತೆ ಜೋರನೆ ಅಳು. ರೈಲು ಮಾತ್ರ ಇದಾವುದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ತನ್ನಷ್ಟಕ್ಕೆ ಭರ್ರನೆ ಸಾಗುತ್ತಿತ್ತು. ಚಿಕ್ಕವಯಸ್ಸಿನ ತಾಯಿಗೂ ಏನು ಮಾಡಬೇಕೆಂದು ತೋರದೇ ತಾನೂ ಬಿಕ್ಕಳಿಸಲಾರಂಭಿಸಿದಳು. ಅಚಾನಕ್ ಆಗಿ ನನಗೆ ಅನ್ನಿಸಿತ್ತು, ಬಹುಶಃ ಇದು ಮಗುವಿನ ಮೊದಲ ರೈಲು ಪ್ರಯಾಣವಿರಬೇಕೆಂದು. ಮೂರು ತಿಂಗಳ ಮಗುವಿಗೆ ಇದು ಮೊದಲ ಪ್ರಯಾಣ. ಅದರ ಜೊತೆಗೆ ಅಷ್ಟು ಚಿಕ್ಕ ಮಗುವನ್ನು ಪ್ರಯಾಣಕ್ಕೆ ಕರೆದುಕೊಂಡು ಹೊರಟಿರುವ ಅನನುಭವಿ ದಂಪತಿಗಳಿಗೂ ಮಗುವಿನೊಂದಿಗೆ ಇದು ಮೊದಲ ಪ್ರಯಾಣ! \r\n‘ಮಗು ರೈಲಿನ ಅಲುಗಾಟ, ಕರ್ಕಶ ಶಬ್ಧಕ್ಕೆ ಬೆಚ್ಚುತ್ತಿರಬೇಕು. ಸೀಟಿನ ಮೇಲೆ ಮಲಗಿಸಬೇಡಿ. ನಿಮ್ಮ ಮೇಲೆಯೇ ಮಲಗಿಸಿಕೊಂಡು ನೋಡಿ’ ಎಂದು ಸಲಹೆ ನೀಡಿದೆ. ‘ ಮಗುವನ್ನು ಮೈ ಮೇಲೆ ಮಲಗಿಸಿಕೊಂಡು ನಮಗೆ ಹಾಗೇ ನಿದ್ದೆ ಬಂದು ಕೈನಿಂದ ಜಾರಿ ಹೋದರೇನು ಮಾಡುವುದು? ಕಷ್ಟವಾಗುತ್ತದೆ’ ಎಂದರು ಅಪ್ಪ ಅಮ್ಮ. ಸರಿ ನಾನೇ ಪ್ರಯೋಗಕ್ಕೆ ಮುಂದಾದೆ. ಮಗುವನ್ನು ಅಪ್ಪಿ ಹಿಡಿದು ಮೈ ಮೇಲೆ ಮಲಗಿಸಿಕೊಂಡು ಬೆಚ್ಚಗೆ, ಅಲುಗಾಡದಂತೆ ಶಾಲು ಸುತ್ತಿದೆ. ನಿಧಾನಕ್ಕೆ ಮಗು ಅಳು ನಿಲ್ಲಿಸುತ್ತಾ ನನ್ನ ಮೇಲೆ ಮೈಮರೆತು ನಿದ್ದೆ ಹೋಯ್ತು. ನಾನು ನಿದ್ದೆಯಿಂದ ಸಂಪೂರ್ಣ ಎಚ್ಚರಗೊಂಡೆ! ಮಗು ನನ್ನ ಕೈಜಾರಿ ಕೆಳಗೆ ಬೀಳದಂತೆ ಕಾವಲು ಕಾಯಲು ನನ್ನ ನಿದ್ದೆ ಎಚ್ಚರಗೊಂಡಿತ್ತು! ಆದರೆ ನನ್ನ ಮನಸು ಮಗುವಿನ ಕೋಮಲ ಸ್ಪರ್ಶಕ್ಕೆ ಮೈಮರೆತಿತ್ತು.\r\n\r\nಮಗುವಿನದು ಇದಕ್ಕೆ ತದ್ವಿರುದ್ಧ ಸ್ಥಿತಿ. ಮಗುವಿನ ಹೊರಗು ಸಂಪೂರ್ಣ ಮೈಮರೆತಿತ್ತು. ನಿದ್ದೆ ಹೋಗಿತ್ತು. ಆದರೆ ಅದರ ಒಳಗು ನನ್ನ ಸ್ಪರ್ಶಕ್ಕೆ ಎಚ್ಚರಾಗಿತ್ತು! ಆ ಮಗುವಿಗೆ ಭೀತಿಗೊಂದು ಸಾಂತ್ವನ ಬೇಕಿತ್ತು. ಅದು ಸ್ಪರ್ಶದ ಮೂಲಕ ಸಿಕ್ಕಿದೊಡನೆ ಅದರ ಒಳಗು ನನ್ನ ಒಳಗಿಗೆ ಸ್ಪಂದಿಸಿ ಜಾಗೃತಗೊಂಡು ಅದರ ಹೊರಗು ಮೈಮರೆತು ನಿದ್ದೆಗಿಳಿದಿತ್ತು. ಈ ಅನುಭವವನ್ನು ನನ್ನ ಮನಸು ವಿಶ್ಲೇಷಿಸಿದ್ದು ಹೀಗಷ್ಟೇ. ಇದನ್ನೂ ಮೀರಿ ಇದಕ್ಕೆ ಅದಾವ ಆಯಾಮಗಳಿವೆಯೋ ಗೊತ್ತಿಲ್ಲ. ಈ ಒಳಗು ಹೊರಗಿನ ಎಚ್ಚರ ಮೈಮರೆವಿನ ಆಟ ನನ್ನ ಬದುಕಿನ ಅಮೂಲ್ಯ ಕ್ಷಣಗಳಲ್ಲೊಂದು. ಮಗು ಬೆಳಗ್ಗೆ ಹೊತ್ತು ಮೂಡಿ ಎಷ್ಟೋ ಹೊತ್ತಿನವರೆಗೆ ಮೈಮರೆತು ನಿದ್ರಿಸುತ್ತಲೇ ಇತ್ತು. ನಾನು ಎಚ್ಚರಾಗಿಯೇ ಇದ್ದೆ!\r\n\r\n


| ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

Self has to meet another self - ತನ್ನ ಅಂತರಾತ್ಮನ ಆಂದೋಲನದಲ್ಲಿ ತನ್ನೊಳಗಿನ ತನ್ನತನವನ್ನು ತಾನರಿಯದ ಹೊರತಯ ಎರವರ ಅಂತರಾಳದ ತುಮುಲಗಳನ್ನು ಅರಿಯಲು ಸಾಧ್ಯವೇ? ಅತೀ ಸೂಕ್ಷ್ಮವಾದ ಸೆಲ್ಪ್ ಅರ್ಥಾತ್ ಅಂತರಾತ್ಮ ತನ್ನೊಳಗಿನ ಅಹಂ ಅನ್ನು ತ್ಯಜಿಸಿ ಕ್ರಾಂತಿಕಾರಿ ಬಸವಣ್ಣರಂತೆ ಗದ್ದುಗೆಯ ಆಕರ್ಷಣೆಯಿಂದ ದೂರಾದಾಗ ತಾ ಮಾಡುವ ಕಾಯಕದಲ್ಲಿ ನಿಷ್ಠೆಯನ್ನು ಹೊಂದಿದಾಗ ಬಹುಶಃ ಅಕ್ಕ ನಲ್ಲಿ ಕಂಡ ದಿವ್ಯವಾದ ಅನುಭೂತಿಯನ್ನು ಎಲ್ಲರೂ ಕಾಣಬಹುದೇನೋ. \r\n ತಾ ಬರೆಯುವಾಗ ತಾನೇನೋ ಈ ಸಮಾಜಕ್ಕೆ ಮಹದುಪಕಾರ ಮಾಡುತ್ತಿದ್ದೇನೆ ಎಂದೋ ಎರವರ ಬರಹಗಳನ್ನು ಓದುವಾಗ ತನ್ನಿಂದಲೇ ಏನೇನೋ ಘಟಿಸಲಿದೆ ಎಂಬ ಹುಂಬತನದ ಮನೋಭಾವ ಬಿಟ್ಟಾಗ ಬಹುಶಃ ನಮ್ಮೊಳಗಿನ ಸೆಲ್ಫ್ ಮತ್ತೊಬ್ಬರ ಸೆಲ್ಫ್ ನೊಂದಿಗೆ ಸಂಧಿಸಬಹುದು ಲೋಕಾಭಿರಾಮ ಮಾತುಕತೆಯಲ್ಲಿ ಮಕ್ಕಳಾಗಬಹುದು ಮಗುತನದ ಜೋಳಿಗೆಯಲ್ಲಿ ಸುಖ ಕಾಣಬಹುದೇನೋ.


| ಅಮರೇಂದ್ರ ಹೊಲ್ಲಂಬಳ್ಳಿ

ಒಂದು ಸೆಲ್ಫ್ ಮತ್ತೊಂದು ಸೆಲ್ಫ್ ಅನ್ನು ಸಂಧಿಸುವುದೆ? ಬರಹವನ್ನು ಇವತ್ತು ಓದಿದೆ. ನನ್ನನ್ನು ಇತ್ತೀಚೆಗೆ ಬಹುವಾಗಿ ಯೋಚನೆಗೆ ಹಚ್ಚಿದ ಸಂಗತಿಗಳು ಅಲ್ಲಿವೆ. ಸೆಲ್ಫ್ ಎನ್ನುವುದಕ್ಕೆ \'ಸ್ವ\' ಎನ್ನುವ ಸಂವಾದಿ ಪದ ನೀವು ಸರಿಯಾಗಿ ಗುರುತಿಸಿರುವಂತೆ ಸೀಮಿತವೂ ಸಂದಿಗ್ದವೂ ಆದುದು. ಸೆಲ್ಫ್ ಗಳು ಸಂಧಿಸುವುದು ಎನ್ನುವುದನ್ನು ಅನುಭಾವಿಕ ಅರ್ಥದ ಆತ್ಮಸಾಂಗತ್ಯ ಎನ್ನುವಂತೆಯೂ ಹೇಳಬಹುದು, ಇನ್ನೂ ಅದರಾಚೆಗೂ ಮೂರ್ತ ಹಾಗೂ ಅಮೂರ್ತ ಎರಡೂ ನೆಲೆಗಳಲ್ಲಿ ವ್ಯಾಖ್ಯಾನಿಸಬಹುದು. ಇಲ್ಲಿ ನನಗೆ ಅಕ್ಕ- ಚೆನ್ನಮಲ್ಲಿಕಾರ್ಜುನ: ಬಸವಣ್ಣ -ಅಲ್ಲಮ; ಗಾಂಧಿ - ನೆಹರೂ; ಗಾಂಧಿ - ಲೋಹಿಯಾ; ಡಿ ಆರ್ ಎನ್- ಲಂಕೇಶ್ ಮುಂತಾದ ವ್ಯಕ್ತಿತ್ವಗಳ ಮುಖಾಮುಖಿ ನೆನಪಾಗುತ್ತದೆ. ಇಲ್ಲಿ ಪಡೆದವರು ಯಾರು? ನೀಡಿದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ನೆಹರೂರನ್ನು ಮಗನಿಗಿಂತ ಹೆಚ್ಚು ಹಚ್ಚಿಕೊಂಡಿದ್ದ ಗಾಂಧಿ, ಲೋಹಿಯಾರನ್ನು ತಮ್ಮ ಆತ್ಯಂತಿಕ ನಂಬಿಕಸ್ಥನನ್ನಾಗಿ ಕಂಡಿದ್ದರು. ನೆಹರೂ ನೊಂದುಕೊಂಡರೆ ತಳಮಳಿಸಿಬಿಡುತ್ತಿದ್ದ ಗಾಂಧಿ, ಕಲ್ಕತ್ತೆಯ ಕೋಮುಗಲಭೆಗಳ ಬೆಂಕಿಯನ್ನು ನಿನ್ನ ವ್ಯಕ್ತಿಗತ ಸ್ನೇಹ ಸಂಬಂಧಗಳ ಮೂಲಕ ನಂದಿಸು ಎಂದು ಚಿಕ್ಕಪ್ರಾಯದ ಲೋಹಿಯಾರನ್ನು ಅಟ್ಟಿದ ಗಾಂಧಿ - ಈ ಎರಡೂ ಸಂದರ್ಭಗಳಲ್ಲಿ ಅವರು ನೆಹರೂ ಮತ್ತು ಲೋಹಿಯಾರ ಒಳಜೀವಗಳನ್ನು ಸಂಧಿಸಿದ ಬಗೆ ತುಂಬ ವಿಸ್ಮಯಕಾರಿಯಾದುದು. ಸೆಲ್ಫ್ ಗಳ ಸಂಧಿಸುವಿಕೆಗೆ ನೀವು ಹೇಳುವ \"ಆಳದ ಒಳಗುಗಳ ಸಂಧಿಸುವಿಕೆ\" ಎನ್ನುವ ವ್ಯಾಖ್ಯೆ ಒಂದು ವಂಡರ್


| Shridhar R

ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ? ಎಂಬ ನಿಮ್ಮ ಜಿಜ್ಞಾಸೆಗೆ ಯೇಟ್ಸ್ ಹೇಳಿರುವ ಈ ಮಾತುಗಳು ಸಲ್ಲಬಹುದೇನೋ? ನೋಡಿ: \'ಒಂದು ಉದ್ದೇಶದ ಬೆನ್ನು ಹತ್ತಿ ಹೊರಟ ಹುಚ್ಚರೆಲ್ಲರೂ ಯಾವುದೋ ಆಕಸ್ಮಿಕದಿಂದ ಎಂಬಂತೆ ತಾವು ಓದಲೇಬೇಕಾದ್ದನ್ನು ಓದುತ್ತಾರೆ; ಸಂಧಿಸಲೇಬೇಕಾದ ಮನುಷ್ಯರನ್ನು ಸಂಧಿಸುತ್ತಾರೆ.\' -ಡಬ್ಲ್ಯೂ. ಬಿ. ಯೇಟ್ಸ್




Add Comment


Nataraj Huliyar on Book Prize Awardees

YouTube






Recent Posts

Latest Blogs