ಕರೆಕ್ಷನ್ V/S ಕರಪ್ಷನ್
by Nataraj Huliyar
'ಸಾರ್! ನೀವೂ, ನಿಮ್ಮ ಮೈಸೂರಿನಲ್ಲಿರುವ ಆ ಇನ್ನೊಬ್ಬ ಲೇಖಕರೂ ಹಳೇ ಹಿಂದಿ ಸಿನಿಮಾಗಳಲ್ಲಿ ಬಾಲ್ಯದಲ್ಲಿ ಬೇರ್ಪಟ್ಟ ಅವಳಿ-ಜವಳಿಗಳ ಹಾಗೆ ಅಂತ ನನಗೆ ಒಂದೊಂದ್ಸಲ ಅನ್ನಿಸುತ್ತೆ...'
ಮಾತಾಡುತ್ತಲೇ ಕಣ್ಣಂಚಿನಲ್ಲಿ ಅವರನ್ನು ಗಮನಿಸಿದೆ. ಅವರ ಮುಖದಲ್ಲಿ ರೇಗು ಹರಡುತ್ತಿತ್ತು...
ಈ ಹೋಲಿಕೆಯ ಪರಿಣಾಮವನ್ನು ಊಹಿಸಿದ್ದ ನಾನು, ಟಿಪ್ಪಣಿ ಮಾಡಿಕೊಂಡಿದ್ದ ಮುಂದಿನ ಮಾತನ್ನು ತಕ್ಷಣ ಹೇಳಿದೆ: ‘...ಆ ಹಳೇ ಸಿನಿಮಾಗಳ ಅವಳಿಗಳಲ್ಲಿ ಒಬ್ಬ ಒಳ್ಳೆಯವನಾಗುತ್ತಾನೆ, ಇನ್ನೊಬ್ಬ ಕೆಟ್ಟವನಾಗುತ್ತಾನೆ. ನೀವು ಸೀರಿಯಸ್ ರೈಟರ್ ಆದ್ರಿ. ಅವರು ಜನಪ್ರಿಯ ರೈಟರ್ ಆದರು...'
ಅವರ ಮುಖದ ಗಂಟು ಸಡಿಲಾಯಿತು. ಅದೇ ಆಗ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ಮನಸಾರೆ ನಕ್ಕರು. ಮರುಗಳಿಗೆಗೇ ನನ್ನತ್ತ ತಮ್ಮ ಬ್ರಾಂಡ್ ಮೋಹಕ ನಗೆಯನ್ನೂ ತೂರಿಬಿಟ್ಟರು!
ಅದು ನಡೆದಿದ್ದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ಇಪ್ಪತ್ತನೆಯ ಶತಮಾನದ ಮೊದಲಲ್ಲಿ 'ಕನ್ನಡ ಸಾಹಿತ್ಯ ಪರಿಷತ್ ಈಸ್ ನಥಿಂಗ್ ಬಟ್ ಕನ್ನಡ ಸಾಹಿತ್ಯದ ಶರಬತ್!’ ಎಂದು ಟಿ.ಪಿ. ಕೈಲಾಸಂ ತಮಾಷೆ ಮಾಡಿದ್ದು ನೆನಪಾಗುತ್ತದೆ. ಅಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲೂ ಒಮ್ಮೊಮ್ಮೆ ಸಾಹಿತ್ಯದ ಚರ್ಚೆಗಳು ನಡೆಯುತ್ತಿದ್ದವು! ನಲ್ಲೂರು ಪ್ರಸಾದ್ ಅಧ್ಯಕ್ಷರಾಗಿದ್ದಾಗ ನಡೆದ ಒಂದು ಸಂಜೆಯ ಕಾರ್ಯಕ್ರಮ ಅಲ್ಲಿದ್ದ ಕೆಲವರಿಗಾದರೂ ನೆನಪಿರಬಹುದು. ಅನಂತಮೂರ್ತಿಯವರ ಹುಟ್ಟುಹಬ್ಬದ ಕಾರ್ಯಕ್ರಮ. ಅದರಲ್ಲಿ ನಾನೂ ಒಬ್ಬ ಸ್ಪೀಕರ್.

ಅವತ್ತು ಭೈರಪ್ಪ-ಅನಂತಮೂರ್ತಿಯವರ ನಡುವೆ ತಮಾಷೆಯ ಹೋಲಿಕೆ ಮಾಡಿದ್ದರೂ, ಅದರ ಹಿಂದೆ ಒಬ್ಬ ಓದುಗನಾಗಿ ನನ್ನ ಅನುಭವದ ಪ್ರಾಮಾಣಿಕ ಥೀಸಿಸ್ ಕೂಡ ಇತ್ತು. ಹದಿಹರೆಯದಲ್ಲಿ ಎನ್. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿಯವರ ಪತ್ತೇದಾರಿ ಕಾದಂಬರಿಗಳು, ಅಶ್ವಿನಿ, ಸಾಯಿಸುತೆಯವರ ಧಾರಾವಾಹಿಗಳನ್ನು ಓದುತ್ತಾ ಓದುತ್ತಾ… ಭೈರಪ್ಪನವರ ಕಾದಂಬರಿಗಳಿಗೆ ಬಡ್ತಿ ಪಡೆದು ಮುಂದೆ ಹೊರಟ ಕನ್ನಡ ಓದುಗರಲ್ಲಿ ನಾನೂ ಒಬ್ಬ. ಅಷ್ಟೊತ್ತಿಗಾಗಲೇ ಕಾರಂತರನ್ನೂ ಓದಿದ್ದ ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಏನೋ ಸಮಸ್ಯೆ ಇದೆ ಎನ್ನಿಸುತ್ತಿತ್ತು.
ಓದಲು ಚೆನ್ನಾಗಿದೆ, ಕತೆಯ ಓಟ ಸರಾಗವಾಗಿದೆ…ಆದರೆ ಏನೋ ಸಮಸ್ಯೆಯಿದೆ ಎನ್ನಿಸುತ್ತಿತ್ತು; ಏನು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ! ಈ ಕಾದಂಬರಿಗಳಲ್ಲಿ ಹಸು, ಕಾಳಿಂಗ, ವಿದೇಶಿ ಹೆಂಡತಿ ಏನೇನೋ ಬರುತ್ತಿವೆ...ಪಾತ್ರಗಳು ತಲೆಯಲ್ಲೇ ಮಾತಾಡುತ್ತಿವೆ… ಅದ್ಯಾಕೋ ಏನೋ ಅವೆಲ್ಲ ನನ್ನ ಹುಡುಗುಮನಸ್ಸಿಗೆ ಕನ್ವಿನ್ಸ್ ಆಗುತ್ತಿರಲಿಲ್ಲ. ಆ ಪುಟ್ಟ ಊರಿನಲ್ಲಿ ಹದಿನಾರನೆಯ ವಯಸ್ಸಿನ ಈ ಓದುಗನಿಗೆ ಕಾದಂಬರಿಯ ವಿಮರ್ಶೆಯ ಬಗ್ಗೆ ಅಷ್ಟಾಗಿ ಏನೂ ಗೊತ್ತಿಲ್ಲದ ಕಾಲ ಅದು. ಅವು ಯಾವ ವಿಮರ್ಶಾ ತರಬೇತಿಯೂ ಇಲ್ಲದ ಮುಗ್ಧ, ಸರಳ ಓದುಗನೊಬ್ಬನ ಒಳಗೇ ಹುಟ್ಟಿದ ನಿಜವಾದ ಅನುಮಾನಗಳು.
ಅವತ್ತಿನ ಗೊಂದಲ, ಅನುಮಾನಗಳನ್ನು ನೆನೆಯುತ್ತಾ, ಈ ಅಂಕಣ ಬರೆಯುತ್ತಿರುವಾಗ ಇದ್ದಕ್ಕಿದ್ದಂತೆ ಹೀಗನ್ನಿಸಿತು: ಕಾದಂಬರಿಕಾರನೊಬ್ಬ ‘ಜಾಣ’ ಓದುಗನಿಗೆ ಮಂಕುಬೂದಿ ಎರಚಬಹುದು; ಆದರೆ ಹದಿನಾರು ವರ್ಷದ ಮುಗ್ಧ ಓದುಗನ ವಿಚಾರದಲ್ಲಿ ಅದೆಲ್ಲ ನಡೆಯುವುದಿಲ್ಲ!
ಅದೇನೇ ಇರಲಿ, ಅದೇ ಸರಿಸುಮಾರಿನಲ್ಲಿ ಈ ಮುಗ್ಧ ಗೊಂದಲ, ಅನುಮಾನಗಳಿಗೆ ಆಕಸ್ಮಿಕವಾಗಿ ಒಂದು ಉತ್ತರ ಸಿಕ್ಕ ಗಳಿಗೆ ಮಾತ್ರ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಅದು ನಾನು ಸಿಕ್ಕಸಿಕ್ಕ ಕನ್ನಡ ಪುಸ್ತಕಗಳನ್ನು ಓದಿ ಮುಕ್ಕುತ್ತಿದ್ದ ಅಸಾಧ್ಯ ‘ಪುಸ್ತಕ ಹಸಿವಿನ’ ಕಾಲ. ಒಂದು ಬಿಸಿಲ ಮಧ್ಯಾಹ್ನ. ನಮ್ಮೂರಿನ ಒಂದು ಕಲ್ಲು ಬೆಂಚಿನ ಮೇಲೆ ಸಗಣಿ ಎತ್ತಲು ಬಳಸಿ, ಬರಿದಾಗಿ ಒಣಗಿ ಹೋಗಿದ್ದ ಬಿದಿರು ತಟ್ಟಿ. ಆ ತಟ್ಟಿಯೊಳಗೆ ಒಂದು ಪುಸ್ತಕ. ಅದರ ಮುಖಪುಟ, ಮೊದಲ ಪುಟಗಳು, ಕೊನೆಯ ಪುಟಗಳು ಎಲ್ಲವೂ ಹರಿದು ಹೋಗಿ, ಏಕ್ದಂ ಯಾವುದೋ ಲೇಖನ ಕಣ್ಣಿಗೆ ಬಿದ್ದ ಪುಸ್ತಕ. ಆಸೆಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹೆಸರು ಇತ್ತೋ, ಇರಲಿಲ್ಲವೋ, ಮರೆತುಹೋಗಿದೆ. ಬರೆದವರಂತೂ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ.
ಸರಸರ ಪುಸ್ತಕದ ಪುಟ ತಿರುಗಿಸಿ ಕಣ್ಣಾಡಿಸಿದ ತಕ್ಷಣ ಇದು ಯಾವುದೋ ಬುದ್ಧಿಜೀವಿ ಪುಸ್ತಕವೇ ಹೌದು ಎಂದು ಎದೆ ರೋಮಾಂಚನದಿಂದ ಡವಗುಟ್ಟತೊಡಗಿತು. ಓಡುನಡಿಗೆಯಲ್ಲಿ ಮನೆಗೆ ಬಂದು ಕಾತರದಿಂದ ಓದಲು ಶುರು ಮಾಡಿದಾಗ ಇದು ಯಾರೋ ದೊಡ್ಡವರ ಪುಸ್ತಕವೇ ಎಂಬುದಂತೂ ಹೊಳೆಯಿತು. ಅದು ಯಾರ ಪುಸ್ತಕ ಎಂದು ಗುರುತಿಸಿ ಹೇಳಬಲ್ಲ ಜ್ಞಾನಿಗಳು ಯಾರೂ ಆ ಊರಿನಲ್ಲಿರಲಿಲ್ಲ! ಆದರೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ನಾಗರಹಾವು’ ಸಿನಿಮಾದ ಜನಪ್ರಿಯತೆ, ಹುಸಿತನ ಹಾಗೂ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆ- ಎರಡೂ ಒಂದೇ ಎಂದು ತೋರಿಸಿದ್ದ ಆ ಬರಹದ ಒಳನೋಟಕ್ಕೆ ಬೆರಗಾದೆ. ಆ ಲೇಖನ ನನಗರಿವಿಲ್ಲದೆಯೇ ನನ್ನ ಅಭಿರುಚಿಯನ್ನು ತಿದ್ದಿಬಿಟ್ಟಿತ್ತು.
ಇದಾದ ಐದಾರು ವರ್ಷಗಳ ನಂತರ ವಿಮರ್ಶೆಯ ಕೆಲಸವೆಂದರೆ ‘ಕರೆಕ್ಷನ್ ಆಫ್ ಟೇಸ್ಟ್’ ಎಂಬ ಟಿ.ಎಸ್. ಎಲಿಯಟ್ನ ಪ್ರಖ್ಯಾತ ಮಾತನ್ನು ಓದಿದೆ. ಹದಿಹರೆಯದಲ್ಲಿ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಲೇಖನ ಓದಿದಾಗ ನನಗಾದದ್ದು ಅಭಿರುಚಿಯನ್ನು ತಿದ್ದಿದ ಅನುಭವ ಎಂಬುದು ಆಗ ಅರಿವಾಯಿತು. ಮುಂದೆ ಎಲಿಯಟ್ ಪಾಠ ಮಾಡುವಾಗ ನಮ್ಮ ಟೀಚಿಂಗ್, ವಿಮರ್ಶೆ, ಪಠ್ಯಪುಸ್ತಕ ಇವೆಲ್ಲವೂ ಓದುಗ, ಓದುಗಿಯರ, ವಿದ್ಯಾರ್ಥಿ, ವಿದ್ಯಾರ್ಥಿನಿಯರ 'ಕರೆಕ್ಷನ್ ಆಫ್ ಟೇಸ್ಟ್’ ಆಗಿರಬೇಕೇ ಹೊರತು, ಅಭಿರುಚಿ ಕೆಡಿಸುವ ‘ಕರಪ್ಷನ್ ಆಫ್ ಟೇಸ್ಟ್’ ಆಗಬಾರದು ಎಂಬುದನ್ನೂ ಹೇಳತೊಡಗಿದೆ.
ಅವತ್ತು ಇದ್ದಕ್ಕಿದ್ದಂತೆ ನನ್ನ ಅಭಿರುಚಿ ತಿದ್ದಿದ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಬರಹ ಬರೆದವರು ಯು. ಆರ್. ಅನಂತಮೂರ್ತಿ ಹಾಗೂ ಅವರ ಪುಸ್ತಕದ ಹೆಸರು ‘ಸನ್ನಿವೇಶ’ ಎಂಬುದು ಗೊತ್ತಾಗಲು ಎರಡು ವರ್ಷ ಹಿಡಿಯಿತು. ಅಕ್ಷರ ಪ್ರಕಾಶನದ ಯಾವುದೇ ಪುಸ್ತಕ ಬಂದರೂ, ಅದು ಗಂಭೀರವಾದ ಪುಸ್ತಕ, ಅದನ್ನು ಹೇಗಾದರೂ ಹುಡುಕಿ ಓದಬೇಕು ಎಂದುಕೊಂಡೆ. ಅವತ್ತು ಒಂದೇ ಏಟಿಗೆ ಭೈರಪ್ಪನವರನ್ನು ಕೈಬಿಟ್ಟ ಜಾಣ ಓದುಗನೊಬ್ಬ ಅನಂತಮೂರ್ತಿಯವರ ಓದುಗನಾದದ್ದು ಸಹಜವಾಗಿತ್ತು.

ಮುಂದೊಮ್ಮೆ ಅನಂತಮೂರ್ತಿಯವರ ಆಯ್ದ ಬರಹಗಳ ಪುಸ್ತಕಗಳ ಬಿಡುಗಡೆಯಲ್ಲಿ ಮಾತಾಡಲು ಗೆಳೆಯ ಇಸ್ಮಾಯಿಲ್ ಕರೆದಾಗ, ‘ಸನ್ನಿವೇಶ’ ಎಂಬ ಪುಸ್ತಕ ಹೀಗೆ ನನಗೆ ಸಿಕ್ಕ ಕತೆ ಹೇಳಿದೆ; ‘ನಿಮ್ಮ ಲೇಖನ ಏಕ್ದಂ ನನ್ನನ್ನು ತಿದ್ದಿತು’ ಎಂಬುದನ್ನೂ ಅನಂತಮೂರ್ತಿಯವರಿಗೆ ಹೇಳಿದೆ. ಅವರಿಗೆ ಆ ಪುಸ್ತಕ, ಲೇಖನ ಎಲ್ಲವೂ ಮರೆತುಹೋಗಿತ್ತು. ಆದರೂ ನನ್ನ ಮಾತು ಕೇಳಿದಾಗ ಕೆಲವು ವರ್ಷಗಳ ಹಿಂದೆ ಸಾಹಿತ್ಯ ಪರಿಷತ್ತಿನಲ್ಲಿ ಮೂಡಿದ್ದ ಅದೇ ಸಂತೃಪ್ತ ಭಾವ ಅವರ ಮುಖದಲ್ಲಿ ಮೂಡಿತು! ಮುಂದೊಮ್ಮೆ ಈ ಪುಸ್ತಕದಲ್ಲಿರುವ `ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ’ ಎಂಬ ಕಾದಂಬರಿ ಥಿಯರಿಯ ಲೇಖನವನ್ನು ನಾನೇ ಎಂ.ಎ. ಪಠ್ಯವಾಗಿ ಆಯ್ಕೆ ಮಾಡುವ ಕಾಲ ಬಂತು. ಅದನ್ನು ಇಷ್ಟಪಟ್ಟು, ವಿಸ್ತೃತವಾಗಿ ಟೀಚ್ ಮಾಡಿದ ನೆನಪು ಹಸಿರಾಗಿದೆ. ಈ ಲೇಖನದಲ್ಲಿ ಕಾದಂಬರಿಕಾರ ಒತ್ತಾಯಪೂರ್ವಕವಾಗಿ ಏನನ್ನಾದರೂ ಹೇರಿದರೆ, ಕಾದಂಬರಿಗಿಂತಲೂ ತಾನು ದೊಡ್ಡವನಾಗಲು ಹೊರಟರೆ ಏನಾಗುತ್ತದೆ ಎಂಬ ಬಗ್ಗೆ ಆರ್ಟಿಗಾ ಗ್ಯಾಸೆಯ ಸೂಕ್ಷ್ಮ ನೋಟ ಕಾದಂಬರಿ ಕುರಿತ ನನ್ನ ಅಭಿರುಚಿಯನ್ನು ಮತ್ತಷ್ಟು ತಿದ್ದಿತು.
ಮೇಲೆ ಹೇಳಿರುವ ಆರ್ಟಿಗಾ ಗ್ಯಾಸೆಯ ಮಾತು; ಕಾದಂಬರಿಕಾರ ತನಗಿಂತ ಹೆಚ್ಚಿನವನಾಗಲು ಹೊರಟರೆ ಕಾದಂಬರಿ ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ಅವನ ಅಪೂರ್ವ ಒಳನೋಟ; ಹಾಗೂ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಎಂಬ ಲೇಖನ ಈ ಮೂರನ್ನೂ ಓದಿ ಧ್ಯಾನಿಸಿದ್ದರೆ ಭೈರಪ್ಪನವರ ಕಲೆಗೆ ಒಳ್ಳೆಯದಾಗುತ್ತಿತ್ತೇನೋ. ಸ್ವತಃ ಅನಂತಮೂರ್ತಿಯವರೇ ತಮ್ಮ 'ಭಾರತೀಪುರ’ ಕಾದಂಬರಿ ಬರೆಯುವಾಗ ಆರ್ಟಿಗಾ ಗ್ಯಾಸೆಯನ್ನು ಗ್ರಹಿಸಿದ್ದರೆ ಅವರಿಗೂ ಒಳ್ಳೆಯದಾಗುತ್ತಿತ್ತೇನೋ!
ಈ ಬರಹದ ಶುರುವಿನಲ್ಲಿ ಹೇಳಿದ ತಮಾಷೆಯ ಹೋಲಿಕೆ ಮಾಡುವ ಹೊತ್ತಿಗಾಗಲೇ ಅನಂತಮೂರ್ತಿಯವರ ಎಲ್ಲ ಕಾದಂಬರಿಗಳನ್ನೂ ಓದಿದ್ದ ನನಗೆ, ಅನಂತಮೂರ್ತಿ ಕೂಡ ಭೈರಪ್ಪ ಶೋಧಿಸಿದ ರೀತಿಯ ವಸ್ತುಗಳನ್ನು ಬೇರೆ ಥರ ಶೋಧಿಸಿದ್ದನ್ನು ಕಂಡು ಅಚ್ಚರಿಯಾಗಿತ್ತು; ಈ ಅವಳಿ-ಜವಳಿ ಹೋಲಿಕೆ ಹುಟ್ಟಿದ್ದು ಆಗ. ಬ್ರಾಹ್ಮಣರ ಶವಸಂಸ್ಕಾರದ ಕಾಲದ ಬಿಕ್ಕಟ್ಟು, ದೇವಾಲಯ ಪ್ರವೇಶದ ಸಮಸ್ಯೆ, ಬ್ರಾಹ್ಮಣ ಹುಡುಗರ ಬಂಡಾಯ... ಕೊನೆಗೆ ಈ ಸಂಸ್ಕೃತಿಯಲ್ಲಿ 'ಹೊಂಡವೆಂದುಕೊಂಡಿದ್ದ ಕಡೆ ದಿವ್ಯ ಸರಸ್ಸೂ ಇದೆ' ಎಂಬ ದಿವ್ಯ ಜ್ಞಾನ...ಇವೆಲ್ಲ ನೆನಪಾದಂತೆ, ಎಲ್ಲೋ ಈ ಬೇರ್ಪಟ್ಟ ಅವಳಿಗಳ ‘ತಾತ್ವಿಕ ಭೇಟಿ’ ನಡೆದಿರಬಹುದೇ ಎನ್ನಿಸತೊಡಗಿತು.
ಇದೆಲ್ಲದರ ನಡುವೆ ಈ ಇಬ್ಬರನ್ನೂ ಕುರಿತ ಒಂದು ಕುತೂಹಲಕರ ವಿವರ ನೆನಪಾಗುತ್ತದೆ: ಅನಂತಮೂರ್ತಿ, ಭೈರಪ್ಪ ಇಬ್ಬರೂ ಕೆಲ ಕಾಲ ತಂತಮ್ಮ ಜಾತಿಸಮುದಾಯದ ವಿರುದ್ಧ ಒಂದು ಕಾಲಕ್ಕೆ ಬಂಡೆದ್ದವರೇ; ಒಳಗಿನ ಹುಳುಕನ್ನು ಬಯಲಿಗೆಳೆದವರೇ; ಸ್ವಜಾತಿಗಳ ವಿಮರ್ಶಕರಾಗಿದ್ದವರೇ. ಲೋಹಿಯಾ ಸಮಾಜವಾದಿ ಫಿಲಾಸಫಿಯ ಪ್ರಭಾವ ಅನಂತಮೂರ್ತಿಯವರಿಗೆ ಜಾತಿಸಮಾಜದ ಹಿಂಸೆಗಳನ್ನು ಗ್ರಹಿಸುವ ಕಣ್ಣನ್ನು, ತಾತ್ವಿಕ ಚೌಕಟ್ಟನ್ನು ಕೊಟ್ಟಿತು. ಲೋಹಿಯಾ ಚಿಂತನೆ ಇಂಗ್ಲಿಷ್ ಪ್ರೊಫೆಸರ್ ಅನಂತಮೂರ್ತಿಯವರ ನೋಟವನ್ನು ತಿದ್ದಿದ್ದರಿಂದ ಅವರು ಗಟ್ಟಿಯಾದರು. ಆದರೆ ಫಿಲಾಸಫಿ ಪ್ರೊಫೆಸರ್ ಭೈರಪ್ಪ ತಮ್ಮ ಬರವಣಿಗೆಗೆ ಬೇಕಾದ ಅಸಲಿ ಫಿಲಾಸಫಿಯೊಂದನ್ನು ಹುಡುಕಿಕೊಳ್ಳಲಾರದೆ ಹೋದರು. ಎಲ್ಲಕ್ಕಿಂತ ಮುಖ್ಯವಾಗಿ, ಸ್ವಜಾತಿಯ ವಿಮರ್ಶಕನಾಗಿ ಒಂದು ಕಾಲಕ್ಕೆ ತಮ್ಮ ಬರವಣಿಗೆ ಪಡೆದ ಒಗರನ್ನು ಉಳಿಸಿಕೊಳ್ಳಲಾಗದೆ ಭೈರಪ್ಪ ದೂರ ಸರಿದರು. ಕೊನೆಕೊನೆಗೆ ಬಂದ ಅನಂತಮೂರ್ತಿಯವರ ‘ದಿವ್ಯ’, ‘ಭವ’ ಕಾದಂಬರಿಗಳೂ ಕಾದಂಬರಿಕಾರನ ಆರಂಭಘಟ್ಟದ ಸ್ವವಿಮರ್ಶೆಯ ತೀಕ್ಷ್ಣತೆಯನ್ನು ಕಳೆದುಕೊಂಡಿದ್ದವು.
ಆದರೆ ಅನಂತಮೂರ್ತಿಯವರ ಸಮಾಜ ವಿಮರ್ಶೆ ಹಾಗೂ ಸಂಸ್ಕೃತಿ ವಿಮರ್ಶೆ ಅವರ ಬರಹಗಳನ್ನು ಕೊನೆಯತನಕ ಹಾಗೂ ಹೀಗೂ ಉಳಿಸಿತು. ಭೈರಪ್ಪ ಮಾತ್ರ ಸ್ವಧರ್ಮ ವೈಭವೀಕರಣದ ಹಳ್ಳಕ್ಕೆ ಬಿದ್ದು ಹೊಸ ಸಾಧ್ಯತೆಯೇ ಇಲ್ಲದೆ, ಹಳೆಯ ಕಸುವನ್ನೂ ಕಳೆದುಕೊಂಡು ಕಣ್ಮರೆಯಾದರು.
ತನ್ನ ಬರವಣಿಗೆಯ ಬಗ್ಗೆ ಕಾಲಕಾಲದ ಸ್ವವಿಮರ್ಶೆಯಿಲ್ಲದ ಯಾವುದೇ ಲೇಖಕ ಉಳಿಯುವುದು ಕಷ್ಟ…

ಒಬ್ಬರಿಗಾಗಿಯೇ
ಪ್ರೀತಿಯನ್ನು ಮುಡಿಪಾಗಿಡುವುದು ಬರ್ಬರ;
ಯಾಕೆಂದರೆ ಆ ಪ್ರೀತಿ
ಉಳಿದೆಲ್ಲರನ್ನೂ ಕಡೆಗಾಣಿಸುವುದು;
ದೇವರ ಮೇಲಣ ಪ್ರೀತಿಯೂ ಹಾಗೆಯೇ.
Comments
18 Comments
| ವಿಜಯಾ
ನಟರಾಜ್,ಇನ್ನು ನಿಮ್ಮಂಥ ಓದಿ,ಅನುಭವಿಸಿ ತಿಳಿದವರು ನಿಮ್ಮ ಪರಿಕಲ್ಪನೆಗಳನ್ನು ಹೇಳುತ್ತ ಹೋದರೆ ಹೊಸದೇನಾದರೂ ಹುಟ್ಟುತ್ತದೇನೋ.ಇನ್ನೂ ಎಷ್ಟು ಕಾಲ ಹಿಂದಿನ ತಲೆಮಾರಿನ ಮಾತು,ತಿಳಿವು,ಕ್ರಿಯೆ ಕುರಿತು ವಿಶ್ಲೇಷಿಸುತ್ತೀರಿ. ಬದುಕನ್ನು ಕಂಡವರು,ವಿಶಿಷ್ಟ ನೋಟ ಉಳ್ಳವರು ನಿಮ್ಮ ಥಿಯರಿ ಕಟ್ಟಿದರೆ ಈ ಸಂಕೀರ್ಣ ಕಾಲಘಟ್ಟದಲ್ಲಿ ಹೊಸ ಓದುಗನಿಗೆ ವಿವೇಚಿಸಲು ಆಹಾರ ಸಿಕ್ಕೀತು. ಎಲ್ಲ ಸಾಧ್ಯತೆ,ಸಿದ್ಧತೆ ಇರುವ ನಿಮ್ಮಂಥವರು ಮಾಡಬೇಕಾ್ದ ಕೆಲಸ ಬಹಳ ಇದೆ. ನೀವು ಪದೇ ಪದೇ ಉದ್ಧರಿಸುವ ಆರಾಧಿಸುತ್ತಿರುವಿರೋ ಎಂಬಷ್ಟು ನಿಮ್ಮನ್ನು ಕಾಡುತ್ತಿರುವ ಮಾತುಗಳನ್ನು ಮೀರಿದೆ ನಿಮ್ಮ ಅಧ್ಯಯನ. ತಪ್ಪಿಯೂ ಹೆಣ್ಣನ್ನು ಟೀಕಿಸದೆ ಕಾರ್ಯ ಕರಣಗಳನ್ನು ಸಮರ್ಥವಾಗಿ ವಿಶ್ಲೇಷಿಸಿ ನೋಡುವ ನಿಮ್ಮ ಲಿಂಗಾತೀತ ಸಮಸ್ಥಿತಿ ನೀವು ಪದೇ ಪದೇ ಮೆಚ್ಚುವ ಲೇಖಕರಲ್ಲಿ ಇರಲೇ ಇಲ್ಲ. ಯಾರ ಟೀಕೆಯೂ ನನಗೆ ಬೇಡ.ಹೊಸ ಆಲೋಚನೆ ಕೊಡಿ.ಮಥಿಸಲು ಹೇಳಿ.ನಿಮಗೆ ಸಾಧ್ಯ ಎಂಬ ಕಾರಣಕ್ಕೇ ಹೇಳುತ್ತಿರುವೆ.ಆಗಬೇಕಾದ ಕೆಲಸ ಬಹಳ ಇದೆ ಅಲ್ಲವೆ?
| ಮಂಜುನಾಥ್ ಸಿ ನೆಟ್ಕಲ್
ಬರಹಗಾರನ/ಳ ಅಳಿವು ಹಾಗೂ ಉಳಿವನ್ನು ಕಾಲವೇ ನಿರ್ಧರಿಸುತ್ತದೆ. "ತನ್ನ ಬರವಣಿಗೆಯ ಬಗ್ಗೆ ಕಾಲಕಾಲದ ಸ್ವವಿಮರ್ಶೆಯಿಲ್ಲದ ಯಾವುದೇ ಲೇಖಕ ಉಳಿಯುವುದು ಕಷ್ಟ" ನಿಮ್ಮ… ಈ ಮಾತನ್ನು ಪ್ರತಿಯೊಬ್ಬ ಲೇಖಕ/ಲೇಖಕಿಯರು ತಮ್ಮ ಪ್ರತಿ ಬರವಣಿಗೆ ಕಾಲದಲ್ಲಿ ನೆನೆಯುತ್ತಾ ಇದ್ದರೆ ಬಹುಶಃ ಕೆಲವು ಕಾಲವಾದರೂ ಉಳಿಯಬಹುದು... ಅನಿಸುತ್ತದೆ... ಕಾಲದ ನಿರ್ದಯತೆಯಲ್ಲಿ ಕೊಚ್ಚಿ ಹೋಗದಂತೆ ಇರಬಹುದು... ನಿಮ್ಮ ಬಾಲ್ಯದ ನೆನಪುಗಳು ಓದಲು ಕುತೂಹಲಕಾರಿಯಾಗಿದೆ ಸರ್ ಧನ್ಯವಾದಗಳು
| ಶ್ರೀಧರ್ ಆರ್.
ಸರ್, ನಮಸ್ಕಾರ... ಡಿ.ಆರ್. ನಾಗರಾಜ್ ತಾರುಣ್ಯದಲ್ಲಿ ಮಾಡಿಕೊಂಡಿದ್ದ ಟಿಪ್ಪಣಿಯ ಒಂದು ಭಾಗ. ಎಸ್.ಎಲ್. ಭೈರಪ್ಪ ಒಬ್ಬ ಜನಪ್ರಿಯ ಕಾದಂಬರಿಕಾರ... 1. ಒಬ್ಬ ಲೇಖಕ ತೀರ ಸುಲಭವಾಗಿ ಜನಪ್ರಿಯನಾದ ಎಂದರೆ, ಆತ ಹೊಸ ರುಚಿಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕಿಂತ ಒಗ್ಗಿರುವ ರುಚಿಗೇ ಬರೆಯುತ್ತಿದ್ದಾನೆ. 2. ಹೀಗೆ ಜನಪ್ರಿಯವಾಗುವ ಕೃತಿಗಳು ಆ ಜನಾಂಗದ ಮೇಲ್ಪದರದ ಅಭಿರುಚಿಯನ್ನು, ಆಲೋಚನಾ ಕ್ರಮವನ್ನು ಬಿಂಬಿಸುತ್ತವೆ; ಇವು ಸರಳ ಮತ್ತು ಮಾದಕವಾಗಿರುತ್ತವೆ. -ಡಿ.ಆರ್. ನಾಗರಾಜ್ (1974) ಉಲ್ಲೇಖ: -'ಡಿ.ಆರ್. ನಾಗರಾಜರ ತಾರುಣ್ಯದ ಟಿಪ್ಪಣಿಗಳು' ಕೃಪೆ: -ಮಯೂರ (ಮಾಸಿಕ, ಪುಟ: 93, ಏಪ್ರಿಲ್ 2022) ನಿರೂಪಣೆ: -ನಟರಾಜ್ ಹುಳಿಯಾರ್
| Sanganagouda
ಆ ವಯಸ್ಸಿಗೆ ನಿಮ್ಮ ಹಿರಿಯ ತಲೆಮಾರನ್ನು ಓದಿಕೊಂಡಿದ್ದೀರಿ. ನಮ್ಮ ತಲೆಮಾರು ಕನಿಷ್ಠ ತಮ್ಮ ತಲೆಮಾರೂ ಓದಿಕೊಳ್ಳುತ್ತಿಲ್ಲ ಸರ್
| ಡಾ. ಶಿವಲಿಂಗೇಗೌಡ ಡಿ.
ಜನಪ್ರಿಯ ಮತ್ತು ಗಂಭೀರ ಸಾಹಿತ್ಯದ ರಚನೆ ಮತ್ತು ಓದನ್ನು ಕುರಿತ ನಿಮ್ಮ ಅಭಿಪ್ರಾಯಗಳು ನಿಜಕ್ಕೂ ಸಾಹಿತ್ಯಾಭಿರುಚಿಗಳನ್ನು ತಿದ್ದುವಂತವು. ಲೇಖಕನಿಗಿರಬೇಕಾದ ಸ್ವವಿಮರ್ಶೆ, ಓದುಗ ಮತ್ತು ವಿಮರ್ಶಕನಿಗಿರಬೇಕಾದ ಅಭಿರುಚಿಗಳ ಬಗೆಗಿನ ಎಚ್ಚರದ ಅಗತ್ಯವನ್ನು ಈ ಲೇಖನ ಪ್ರತಿಪಾದಿಸುತ್ತಿದೆ. ಧನ್ಯವಾದಗಳು ಸರ್
| Subramanyaswamy Swamy
ಅನಂತ ಮೂರ್ತಿ ಯವರ ಸನ್ನಿವೇಶ ಪುಸ್ತಕ ಸಗಣಿಯಲ್ಲಿ ಬಿದ್ದು ಒಣಗಿ ಹೋಗಿದೆ ಶೀ್ಷಿಕೆ ಇಲ್ಲದ ಪುಸ್ತಕ ಆದರೂ ಅದನ್ನು ಗಮನಿಸಿ ಎತ್ಕೊಂಡು ಓದುವ ಆ ತೀವ್ರವಾದ ಹಂಬಲವೆ ಇಂದು ಒಬ್ಬ ಕನ್ನಡದ ಸೂಷ್ಮ ಸಂವೇದನಾಶೀಲ ಬರಹಗಾರ ಡಾ.ನಟರಾಜ್ ಹುಳಿಯಾರ್ ನನ್ನು ರೂಪಿಸಲು ಸಾಧ್ಯವಾಯಿತು ಎಂದು ನನಗೆ ಅನಿಸುತ್ತದೆ. ಅಪರೂಪದ ಆಂತರ್ಯದ ಸಂಗತಿಗಳನ್ನು ಹಂಚಿಕೊಂಡ ನಿಮಗೆ ನಮಸ್ಕಾರಗಳು.
| ಗುರು ಜಗಳೂರು
ಸರ್ ಭೈರಪ್ಪನವರ ಬಗ್ಗೆ ಏನಾದರೂ ಬರೆಯಿರಿ ಎಂದು ಹೇಳಲು ಅಳಕು.ಈವಾರ ಬರೆದಿದ್ದೀರಿ.ಒಳ್ಳೆಯದು.comparisonಚೆನ್ನಾಗಿದೆ.ಸಾಹಿತ್ಯದ ಸಾಮಾನ್ಯರ ಓದುಗರ ನಾಡಿಮಿಡಿತ ಚೆನ್ನಾಗಿ ಗ್ರಹಿಸಿದ್ದೀರಿ.ಇಂಥ ಸಮಯದಲ್ಲೂ ನನ್ನ ಸ್ಹೇಹಿತ ಭೈರಪ್ಪನವರ ಮನೆ ಮೇಲೆ ಕಲ್ಲು ಹೊಡೆಸಿದ್ದು ಅನಂತಮೂರ್ತಿಯವರಂತೆ ಅಂದ.ಅದಕ್ಕೆ ನಾನು ನನಗೆ ತಿಳಿದಂತೆ ಅವರಲ್ಲ ಬೇರೆಯವರು ಎಂದೆ.ಈ ಗುದ್ದಾಟಗಳು ಲಂಕೇಶರು,ಚಂಪಾ ಇವರ ಕಾಲಘಟ್ಟದಲ್ಲಿ ಮಜವಾಗಿದ್ದವು.ಈಗಿನ ಗುದ್ದಾಟಗಳು ಸಪ್ಪೆ ಅಥವಾ ಗುದ್ದಾಡುವುದಕ್ಕೆ ಯಾರೂ ಇಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅನಿಸದಿರದು.ಭೈರಪ್ಪನವರ ಮಾಂತ್ರಿಕತೆ ಅವರ ಪ್ರಾರಂಭಿಕ ಕೃತಿಗಳಲ್ಲಿ ಇದ್ದದ್ದು ನಂತರ ಮಾಯವಾಯಿತು ಎನಿಸುತ್ತದೆ.ನನ್ನ ದೃಷ್ಟಿಯಲ್ಲಿ ಅವರ ಮೌಲಿಕ ಕೃತಿ" ಸಾರ್ಥ".ತೀರ ಚರ್ಚಿತವಾಗಲೇಬಾರದು ಎಂಬ ಕನಿಷ್ಟ ವ್ಯಕ್ತಿ ಭೈರಪ್ಪನವರಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
| ರಾಮಚಂದ್ರ ನಾಯಕ
ಒಂದಂತೂ ನಿಜ , ಬೈರಪ್ಪ ಕನ್ನಡಕ್ಕೆ ಅಗಾಧ ಸಂಖ್ಯೆಯ ಓದುಗರನ್ನು ಸ್ರೃಷ್ಟಿಸಿ ಕೊಟ್ಟರು
| Jyothi
I agree with what Vijayamma says. Our established and popular writers as well as critics rarely have feminist sensitivity and sensibility.... it is time to accept these hard facts.
| ಪ್ರಕಾಶ್ ಮರ್ಗನಳ್ಳಿ
ನಮಸ್ಕಾರ ಸರ್, ಕರೆಕ್ಷನ್ ಆಫ್ ಟೇಸ್ಟ್ - ಗಂಭೀರ ಓದಿಗೆ ಇರಲೇಬೇಕಾದ ಎಚ್ಚರವನ್ನು ಈ ನಿಮ್ಮ ಲೇಖನ ಗಟ್ಟಿಯಾಗಿ, ಸ್ಪಷ್ಟವಾಗಿ ನಿರೂಪಿಸಿದೆ. ಎಂದಿಗಿಂತಲೂ ಇಂದಿನ ನಮ್ಮ ತಲೆಮಾರಿಗೆ ಈ ಎಚ್ಚರ ಅತಿ ಅಗತ್ಯ ಅನಿಸುತ್ತದೆ. ಧನ್ಯವಾದಗಳು ಸರ್.
| Dr. Narasimhamurthy Halehatti
ಎಸ್.ಎಲ್.ಭೈರಪ್ಪ ಮತ್ತು ಅನಂತಮೂರ್ತಿಯವರ ಸಾಹಿತ್ಯ ಕೃತಿಗಳನ್ನು ಹೋಲಿಕೆ ಮಾಡುತ್ತಲೇ ಇಬ್ಬರ ಹೆಚ್ಚುಗಾರಿಕೆ ಮತ್ತು ಮಿತಿಗಳೆರಡನ್ನು ಗುರುತಿಸಿದ್ದೀರಿ. ತುಂಬಾ ಗಂಭೀರವಾದ ಲೇಖನ. ಅಭಿನಂದನೆಗಳು ಸರ್...
| Venkatesha R K
ತುಂಬ ಚೆನ್ನಾಗಿ ಗಮನಿಸಿ ಬರೆದಿದ್ದೀರಿ ಸರ್. ವಾಸ್ತವವಾಗಿ ಕರೆಕ್ಷನ್ ಆಫ್ ಟೇಸ್ಟ್ ಅನ್ನು ಕಲೆ-ಸಾಹಿತ್ಯದ ಮಟ್ಟದಲ್ಲೂ, ದಿನನಿತ್ಯದ ಬದುಕಿನ ಮಟ್ಟದಲ್ಲೂ ಲಂಕೇಶ್ ಅವರು ನಿರಂತರ ಮಾಡುತ್ತಲೇ ಬಂದರು. ನಿಮ್ಮ ಕಾಳಜಿಪೂರ್ಣ ಬರವಣಿಗೆಗಳಲ್ಲಿ ಅದೇ ಪ್ರಯತ್ನ ಹಾಗೂ ಸಾಧನೆಯನ್ನು ಕಾಣಬಹುದಾಗಿದೆ. ಥ್ಯಾಂಕ್ಸ್ ನಿಮಗೆ. ಭೈರಪ್ಪನವರ ಜನಪ್ರಿಯತೆಯ ಮೋಡಿಗೆ ನೀವೂ ಒಂಚೂರು ಜಾರಿದಂತಿದೆ. 'ಅವರು ...........ಹಳೆಯ ಕಸುವನ್ನೂ ಕಳೆದುಕೊಂಡು ಕಣ್ಮರೆಯಾದರು' ಎಂದಿದ್ದೀರಿ. ಆ ಕಸುವು ಎಲ್ಲಿ ಯಾವಾಗ ಇತ್ತು ಸರ್?
| Suresh R
ಸಮಸ್ಯೆ ಸರಳವಿರಲಾರದು. ʼಇನ್ನೊಬ್ಬʼ ನಿಚ್ಚಳವಾಗಿ ಒಳ್ಳೆಯವನೂ, ಒಳ್ಳೆ ಲೇಖಕನೂ ಆಗಿದ್ದರೆ ಲಂಕೇಶರು ಅವನನ್ನು ಸಾಹಿತ್ಯಿಕ, ಅಸಾಹಿತ್ಯಿಕ ಕಾರಣಗಳಿಗಾಗಿ ಟೀಕಿಸಬೇಕಾಗಿ ಬರುತ್ತಿರಲಿಲ್ಲ. ಅವಳಿ-ಜವಳಿ ಲೇಖಕರ ಕಲ್ಪನೆ ಬೈನರಿ ದೋಷ, ಲಾಜಿಕಲ್ ಫ್ಯಾಲಸಿ ಮತ್ತು ಪೂರ್ವಗ್ರಹಗಳಿಂದ ಮುಕ್ತವಾಗಿಲ್ಲ. ಭೈರಪ್ಪನವರ ಮಾದರಿ ಹೊಸತೂ ಅಲ್ಲ. ʼಆರ್ಟ್ ಫಾರ್ ಆರ್ಟ್ಸ್ ಸೇಕ್ʼ ಇತ್ತಲ್ಲ. ಭಾರತದ ರಸ ಸಿದ್ಧಾಂತದ ಕೃತಿಗಳನ್ನು ತಳ್ಳುವಂತೆಯೂ ಇಲ್ಲ. ಸಾಹಿತ್ಯಕ್ಕೆ ಪರಂಪರೆ, ತತ್ವಜ್ಞಾನಗಳ ಹಂಗು ಇಲ್ಲವೆಂದೂ ಹೇಳಲಾಗದು. ನವ್ಯಸಾಹಿತ್ಯದ ಅನೇಕ ಕೃತಿಗಳು ಒಂದು ಪರಿಸ್ಥಿತಿ, ಮನೋಸ್ಥಿತಿ, ವ್ಯಕ್ತಿಕೇಂದ್ರಿತ ವಿಶಿಷ್ಟವಾದ ಇಂಥವನ್ನು ಒಳಗೊಂಡಿಲ್ಲವೆ? ಕೃತಿಯೊಂದು ಎಷ್ಟು ಸಮಾಜಮುಖಿ ಎಷ್ಟು ಕಲಾಮುಖಿ ಎಂದು ಹೇಗೆ ಹೇಳುವುದು? ಒಂದರಲ್ಲೊಂದು ಸೂಚ್ಯವಾಗಿ, ಪ್ರಕಟವಾಗಿ ರೂಪಿತವಾಗಿರುತ್ತಲ್ಲವೇ? ಆಕ್ಟಿವಿಸ್ಟ್ ಗೆ ತೀವ್ರ ಸಮಾಜಮುಖಿ ಕೃತಿಯೂ ದುರ್ಬಲವಾಗಿ ಕಾಣಬಹುದು. ನೇರ ಕ್ರಿಯೆಯೇ ಅವನ ಅಗತ್ಯ. ಹಾಗೆ ನೋಡಿದರೆ ಅಗಾಧ ಸಮಾಜಪರತೆ ಬಯಸುವವರು ಪತ್ರಿಕಾ ಬರಹ ಹಾಗೂ ಪಾಂಫ್ಲೆಟೀರಿಂಗ್ ಅನ್ನು ಆಶ್ರಯಿಸಬಹುದು. ಭೈರಪ್ಪರನ್ನು ಸಾಹಿತ್ಯಿಕವಾಗಿ ಮುಖಾಮುಖಿ ಮಾಡುವುದಕ್ಕಿಂತ ರಾಜಕೀಯವಾಗಿ ಎದುರಿಸಿ ಅವರನ್ನು ಬಲಗೊಳಿಸುತ್ತಿದ್ದೇವೆಯೆ? ಸರಿಯಾಗಿ ಪ್ರಾಬ್ಲಮಟೈಸ್ ಮಾಡಲು ಆಗುತ್ತಿಲ್ಲವೆಂದು ಅನಿಸುತ್ತದೆ. ನೀವು ಏನು ಹೇಳುತ್ತೀರಿ ಸರ್?
| ಹರಿಪ್ರಸಾದ್ ಬೇಸಾಯಿ
ಆಲ್ ರೈಟ್ ಮುಂದುಕೋಗನ
| ಡಾ. ನಿರಂಜನ ಮೂರ್ತಿ ಬಿ ಎಂ
ಕರೆಕ್ಷನ್ ಮತ್ತು ಕರಪ್ಷನ್ ಆಫ್ ಟೇಸ್ಟ್ ವಿಚಾರದ ಹಿನ್ನೆಲೆಯಲ್ಲಿ ಇಬ್ಬರು ಮಹತ್ವಪೂರ್ಣ ಲೇಖಕರ ಹೋಲಿಕೆ ಮತ್ತು ವ್ಯತ್ಯಾಸಗಳ ವಿಶ್ಲೇಷಣೆ ಚಿಂತನಾರ್ಹ ಮತ್ತು ಚರ್ಚಾರ್ಹವಾಗಿದೆ.
| Kariswamy
ಸರ್, ನಾನು ೧೯೯೫ರ ಹೊತ್ತಿಗೆ ಸಾಹಿತ್ಯ ಓದಲು ಆರಂಭಿಸಿದೆ. ಲಂಕೇಶ್, ಶೂದ್ರ, ಸಂಕ್ರಮಣ ಪತ್ರಿಕೆಗಳ ಸಮೃದ್ಧಿಯ ಕಾಲ. ಕಾರಂತರು, ತೇಜಸ್ವಿ, ಲಂಕೇಶ್, ಅನಂತಮೂರ್ತಿ ಅವರಿಂದ ಓದನ್ನು ಆರಂಭಿಸಿದ್ದರಿಂದಲೋ ಏನೋ ಭೈರಪ್ಪನವರನ್ನು ಓದುವುದರಿಂದ ವಿಮುಖನಾದೆ. ಇತ್ತೀಚೆಗಷ್ಟೇ ಗೃಹಭಂಗ ಓದಿದೆ. ನನಗೆ ಅಷ್ಟೇನೂ ರುಚಿಸಲಿಲ್ಲ. ಆದರೆ, ಆರಂಭದಲ್ಲಿ ಎಲ್ಲ ರೀತಿಯ ಬರೆಹಗಳನ್ನೂ ಓದುವುದರಿಂದ ಅವುಗಳ ನಡುವಿನ ತರತಮ ಆಗ ತಿಳಿಯದಿದ್ದರೂ ಕಾಲಾನಂತರದಲ್ಲಿ ತಿಳಿಯುತ್ತದೆ. ನಿಮ್ಮ ಈ ತೌಲನಿಕ ಬರೆಹದ ನಿಚ್ಛಳತೆ ಇನ್ನೊಂದು ರೀತಿಯ ಸ್ಷಷ್ಟತೆ ಕೊಟ್ಟಿತು. ಎಂದಾದರೊಂದು ದಿನ ಒಳ್ಳೆಯ ಕಾದಂಬರಿ ಬರೆದರೆ ಅದನ್ನು ನಿಮ್ಮ ಈ ಬರಹಕ್ಕೆ ಅರ್ಪಿಸುವೆ!
| ದೇವಿಂದ್ರಪ್ಪ ಬಿ.ಕೆ.
ಕರೆಕ್ಷನ್ ಆಫ್ ಕರಪ್ಶನ್ ಲೇಖನ ಓದಿದೆ. ನಿಮ್ಮ ಬಾಲ್ಯದ ಬದುಕಿನಲ್ಲಿ ಹೆಸರೇ ಇಲ್ಲದ ಸಿಕ್ಕ ಪುಸ್ತಕ ನಿಮ್ಮಲ್ಲಿ ಉಂಟು ಮಾಡಿದ ಬದಲಾವಣೆ ಅಗಾಧವಾದದ್ದು. ಪ್ರತಿಯೊಂದು ಪುಸ್ತಕವು ಮನುಷ್ಯನ ಕುರಿತು ಶೋಧಿಸಬೇಕು. ಅವನಲ್ಲಿನ ಕೇಡು ಅಳಿಸಿ ಒಳಿತಿನೆಡೆಗೆ ಕೊಂಡೊಯ್ಯಬೇಕು. ಎಸ್. ಎಲ್. ಭೈರಪ್ಪ ಅವರ ಕೆಲವು ಕಾದಂಬರಿಗಳನ್ನು ಪದವಿ ಹಂತದಲ್ಲಿ ಓದಿದೆ. ತುಂಬಾ ಇಷ್ಟವಾದವು. ಓದಿಸಿಕೊಂಡು ಹೋದವು. ವಂಶವೃಕ್ಷದ ಕಾತ್ಯಾಯಿನಿ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಯ ಕಾಳಿಂಗ, ಆವರಣ ಕಾದಂಬರಿಯ ರಝಿಯಾ ಉರುಫ್ ಲಕ್ಷ್ಮಿ ಈ ಪಾತ್ರಗಳ ಬಗ್ಗೆ ಓದುವಾಗ ನಮ್ಮಲ್ಲಿ ನೆಗೆಟಿವ್ ಚಿತ್ರಣ ಮೂಡಿ ಲೇಖಕರೇ ಸರಿ ಎನ್ನುವ ಭಾವ ಮೂಡುತ್ತದೆ. ಆದರೆ ಮುಂದೆ ಓದಿನ ವಿಸ್ತಾರ ಮತ್ತು ಧರ್ಮ, ರಾಜಕಾರಣ, ಸ್ತ್ರೀವಾದ, ವೈಚಾರಿಕತೆಯನ್ನು ಅರಿತುಕೊಂಡು ಓದಲು ಶುರು ಮಾಡಿದ ನಂತರವೇ ಈ ಕಾದಂಬರಿಗಳಲ್ಲಿನ ಕೆಲವು ಅಂಶಗಳು ಎಷ್ಟು ಕರಪ್ಶನ್ ಆಗಿವೆ ಎಂದು ಗೊತ್ತಾಯ್ತು. ಓದುವ ದಾರಿಗಳು ತೆರೆದುಕೊಳ್ಳಬೇಕು ಆಗ ಕರೆಕ್ಷನ್ ಆಫ್ ಟೇಸ್ಟ್ ಗೊತ್ತಾಗುತ್ತದೆ. ಅತ್ಯುತ್ತಮ ಚಿಂತನೆಗೆ ಹಚ್ಚುವ ಲೇಖನ ಬರೆದ ತಮಗೆ ಧನ್ಯವಾದಗಳು.
| Tumbadiramaiah
ಸರ್ ನಮಸ್ಕಾರ ಸಿನಿಮಾ, ಸಾಹಹಿತ್ಯದಲ್ಲಿ ಸಾಮ್ರಾಟರೆನಿಸಿಕೊಂಡವರ ಹೋಲಿಕೆ ಅದ್ಬುತ ಕಲ್ಪನೆ ಅವರೆಲ್ಲ ಮಿತಿಗಳ ಮದ್ಯೆ ಕೂಡ ಬೈರಪ್ಪನವರು ಓದುಗರ ಮೇಲೆ ಹಾವಾಡಿಸಿ ಮೋಡಿ ಮಾಡುತ್ತಿದ್ದರು. ಹಾವಾಡಿಸುವವನು ಹೊಸ ಹಾವು ಈಗತಾನೆ ಹಿಡಿದು ತಂದಿದ್ದೇನೆ ಅದನ್ನ ಮುಂಗುಸಿ ಮೇಲೆ ಬಿಟ್ಟು ಜಗಳವಾಡಿಸುತ್ತೇನೆ ಅದನ್ನು ನೋಡದೆ ಹೋಗಬಾರದೆಂದು ಪ್ರೇಕ್ಷಕರ ಹಿಡಿದಿಟ್ಟುಕೊಳ್ಳುವಂತೆ ಮುಗ್ಧ ಓದುಗರ ಹಿಡಿದಿಟ್ಟುಕೊಳ್ಳುವ ಚಾಕ ಚಕ್ಯತೆ ಅವರ ಬರವಣಿಗೆಯಲ್ಲಿ ಇತ್ತು. ಆದ್ರೆ ಅವರ ಮುಂದಿನ ಕೃತಿ ಅದೇ ಹಾಡು ಅದೇ ತಾಳ ತಿರು ತಿರುಚಿ ಹೇಳುತಿತ್ತು. ಅವರ ಅಗಲುವಿಕೆ ಕನ್ನಡದ ಒಂದು ಓದುವ ವರ್ಗಕ್ಕೆ ತುಂಬಲಾರದ ನಷ್ಟವಂತೂ ಆಗಿದೆ ಎನಿಸುತ್ತದೆ. ಆ ರೀತಿ ಅನಿಸಲು ಕಾರಣ ಆ ವರ್ಗ ಬೇರೆಯವರನ್ನು ಓದುವುದಿಲ್ಲ ಅದು ಒಂದು ದುರಂತ. ಬೈರಪ್ಪವರು ಲೋಕದ ವ್ಯಾಪಾರ ಮುಗಿಸಿ ಸಾರಸ್ವತ ಲೋಕ ಬಿಟ್ಟೋದ ಮರುದಿನ ಕನ್ನಡದ ಮುಗ್ಧ ಓದುಗರೊಬ್ಬರು ಕರೆ ಮಾಡಿ ತುಂಬ ಅಲವತ್ತುಕೊಂಡರು. ಆಯಸ್ಸು ಮುಗಿದ ಮೇಲೆ ಎಲ್ಲರದು ಅದೇ ಕಥೆ ಅಲ್ಲವೇ ಎಂದು ಸಮಾಧಾನ ಪಡಿಸಲು ಯತ್ನಿಸಿದೆ. ಆದ್ರೆ ಅವರ ದುಃಖದ ಮೂಲ ಬೇರೆಯದೆ ಆಗಿತ್ತು. ಸ್ನೇಹಿತರು ಬೈರಪ್ಪನವರು ನಮ್ಮನ್ನು ಅಗಲಿದ ಒಂದು ಒಂದೂವರೆ ತಿಂಗಳ ಘಟನಾವಳಿಗಳ ನೆನಪಿಸಿದರು. 1. ಬೈರಪ್ಪನವರು ತಮ್ಮ ಕೃತಿಯೊಂದರ ಪಾತ್ರಗಳ ಅಧ್ಯಯನಕಾಗಿ ಕಷ್ಟಪಟ್ಟು ಒಂದು ವಾರ ತಂಗಿದ್ದ ಮುಸ್ಲಿಂ ಮನೆ ಹೆಣ್ಣು ಮಗಳು ಭಾನುಮಸ್ಟಾಕ್ ಅವರಿಗೆ ಅಂತರರಾಷ್ಟ್ರೀಯ ಭೂಕರ್ ಪ್ರಶಸ್ತಿ ಬಂದಿತ್ತು. 2. ಕೇಂದ್ರದಲ್ಲಿರುವ ಆಡಳಿತರೂಢರನ್ನು ಹೊರತು ಪಡಿಸಿ ಇಡೀ ದೇಶವೇ ಸಂಭ್ರಮಿಸಿತು. 3. ಕರ್ನಾಟಕದ ಮಟ್ಟಿಗೆ ಅದೊಂದು ಹಬ್ಬವಾಯಿತು. ಕರ್ನಾಟಕ ಸರ್ಕಾರ ಇಡೀ ನಾಡಿಗೆ ಪ್ರಶಸ್ತಿ ಬಂದಂತೆ ಭಾನುಮಸ್ಟಾಕ್ ಮತ್ತು ಅನುವಾದಕಿ ಬಸ್ತಿಯವರಿಗೆ ಕ್ಯೆತುಂಬಾ ಕೊಡುಗೆ ನೀಡಿ ಸನ್ಮಾನಿಸಿತು. 4. ಈ ಸಂಭ್ರಮ ಜನಮನದಿಂದ ಮಾಸುವ ಮುಂಚೆ ಕರ್ನಾಟಕ ಸರ್ಕಾರ ಭಾನುಮಸ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಅಹ್ವಾನವಿತ್ತು ಮತ್ತೊಂದು ಅವಘಡಕ್ಕೆ ಕಾರಣವಾಯಿತು. 5. ಬೈರಪ್ಪನವರ ಮುಂಬಾಲಕರು ಹಿಂಬಾಲಕರು ಅಹ್ವಾನ ಹಿಂಪಡೆಯುವಂತೆ ಮಾಡಲು ಶತಾಯ ಗತಾಯ ಪ್ರಯತ್ನಿಸಿದರು. ನ್ಯಾಯಾಲಯದ ಕದತಟ್ಟಿ ಅಲ್ಲ ಎನಿಸಿಕೊಂಡರು 5. ಕೇವಲ ಕಂಣ್ಣೋಟದಲ್ಲಿ ಎಲ್ಲ ಕಾಣುತಿದ್ದ ಬೈರಪ್ಪನವರು ಪರಿತಪಿಸಿದರು. ಹಿಂಬಾಲಕರು ಮುಂಬಾಲಕರು ಎಲ್ಲಾದ್ರೂ ಹಾಳಾಗಿ ಹೋಗ್ಲಿ ಬಿಡಿ ಎನ್ನುತ್ತಿರುವಾಗ ಅವರಿಗೆ ಬರಸಿಡಿಲು ಬಡಿದಂತಾಯಿತು. 6. ಭಾನುಮಸ್ಟಾಕ್ ಯಾವ ಹಿಂದೂ ಹೆಣ್ಣುಮಗಳಿಗೂ ಕಮ್ಮಿಇಲ್ಲ ಎನ್ನುವಂತೆ ದಸರಾ ಉದ್ಘಾಟಿಸಿದರು ಒಳ್ಳೆಯ ಮಾತುಗಳಾಡಿದರು ಹಿಂದೂ ಅಣ್ಣಂದಿರಿಂದ ಭಾಗಿನ ಪಡೆದ ಕವನ ವಾಚಿಸಿದರು. 7. ಕೆಲವೇ ವರ್ಷಗಳ ಹಿಂದೆ ಬೈರಪ್ಪನವರು ದಸರಾ ಉದ್ಘಾಟಿಸಿ ತಮ್ಮ ಮಾಮೂಲಿ ರಾಗ ಹಾಡಿದ್ದರು. 8. ಭಾನುಮಸ್ಟಾಕ್ ನಾಡಿನ ಜನರಿಗೆ ಮತಬೇಧ ಜಾತಿಭೇಧ ಲಿಂಗಬೇಧವಿಲ್ಲದ ಸಮ ಸಮಾಜ ಸ್ಥಾಪನೆಯಾಗುವಂತ ಬಹುತ್ವ ಭಾವನೆ ಜನರಲ್ಲಿ ಹಾಸುಹೊಕ್ಕಾಗಿರಲಿ ಎಂಬಂತ ಮಾತುಗಳಾಡಿದರೆ ತಮ್ಮ ಬಾಯಲ್ಲೇಕೆ ಅಂತ ಒಳ್ಳೆಯ ಮಾತು ಅಂದು ಹೊರಡಲಿಲ್ಲ ಎಂಬಂತೆ ಬೈರಪ್ಪನವರ ಆತ್ಮ ಮಿಲುಗುಟ್ಟುತಿದ್ದರೆ ಮುಂಬಾಲಕ ಹಿಂಬಾಲಕರ ಆತ್ಮಗಳು ಪತರಗುಟ್ಟುತಿದ್ದವು. ಇಷ್ಟು ದೀರ್ಘವಾಗಿ ಮಾತನಾಡುತಿದ್ದ ಸ್ನೇಹಿತರ ಮತ್ತೆ ಕೇಳಿದೆ ನಿಮಗಣಿಸಿದ್ದು ನಿಜವಾ ಎಂದ. ಮತ್ತೊಮ್ಮೆ ಮಗದೊಮ್ಮೆ ಪ್ರಮಾಣಿಸಿ ಹೇಳುತ್ತೇನೆ ನಾನು ಹೇಳುತ್ತಿರುವುದು ಸತ್ಯ ನಾನು ಸತ್ಯವನಲ್ಲದೆ ಬೇರೇನೂ ಹೇಳುವುದಿಲ್ಲ. ಅವರ ಮಾತು ಕೇಳಿ ಸ್ನೇಹಿತರ ಅನಿಸಿಕೆ ಸತ್ಯಕೆ ಎಷ್ಟು ಹತ್ತಿರವಾಗಿದೆಯಲ್ಲ!! ಅವರವರ ಭಾವಕ್ಕೆ ಅವರವರ ಭಕುತಿಗೆ.
Add Comment