ಬುದ್ಧಪೂರ್ಣಿಮೆಯ ಬೆಳಕಿಗಾಗಿ
by Nataraj Huliyar
ನಿಮಗೂ ಹೀಗಾಗಿರಬಹುದು; ನಾವು ಯಾರ ಕಣ್ಣಿನ ಮೂಲಕ ಯಾರನ್ನು ನೋಡುತ್ತೇವೆ ಎಂಬುದು ಅನೇಕ ಸಲ ನಿರ್ಣಾಯಕವಾಗಬಲ್ಲದು!
ಬಾಲ್ಯದಲ್ಲಿ ಜಿ.ಪಿ. ರಾಜರತ್ನಂ ಮೊದಲಾದವರ ಮೂಲಕ ಬುದ್ಧನನ್ನು ಕಂಡಿದ್ದ ನನಗೆ, ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಲೇಖನ ಆತ್ಮೀಯ ಗೆಳೆಯನಂತಿರುವ ಬುದ್ಧನನ್ನು ಕಾಣಿಸಿತು. ಹಾಗೆಯೇ ರಾಜಲಕ್ಷ್ಮಿ ಎನ್. ರಾವ್ ಅವರ 'ಸಂಗಮ’ ಕಥಾಸಂಕಲನದ ‘ವೈಶಾಖ ಶುದ್ಧ ಪೂರ್ಣಿಮೆ’ಕತೆಯ ಪ್ರೀತಿ, ಹಾಡು, ದುರಂತಗಳ ನಡುವೆ ಮುಕ್ಕಾಗದ ಬುದ್ಧ ಪ್ರತಿಮೆ; ಈ ಪುಸ್ತಕದ ಮುಖಪುಟಕ್ಕಾಗಿ ಆರ್. ಎಸ್.ಎನ್. ನಾಯ್ಡು ಬರೆದ ಬುದ್ಧ…
ಇನ್ನು ಬೇಂದ್ರೆಯವರ ‘ಬುದ್ಧ... ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಬಣ್ಣನೆಯಂತೂ ಸದಾ ಚಕಿತಗೊಳಿಸುತ್ತಲೇ ಇರುತ್ತದೆ. ಕಾರಣ: ಈ ಬಣ್ಣನೆ ವಾಚ್ಯಾರ್ಥವಾಗಿಯೂ ನಿಜ; ನಿತ್ಯ ಬೆಳೆಯುವ ರೂಪಕಾರ್ಥಗಳಲ್ಲಿ ಇನ್ನಷ್ಟು ನಿಜ! 'ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ಎಂಬ ರೂಪಕಾರ್ಥದ ಪ್ರತಿರೂಪದಂತಿರುವ ಅಂಬೇಡ್ಕರ್ ವೈಚಾರಿಕ ಬುದ್ಧನನ್ನು ಕಡೆದರು. ಬರಬರುತ್ತಾ ನನ್ನೊಳಗೆ ಬೆಳೆಯತೊಡಗಿದ ಅಂಬೇಡ್ಕರ್ ಬುದ್ಧಶಿಲ್ಪ ನನ್ನೊಳಗೆ ನೆಲೆ ನಿಂತಿದೆ. ಮೇ ತಿಂಗಳ ೧೨ನೆಯ ತಾರೀಕಿನ ಬುದ್ಧ ಪೂರ್ಣಿಮೆಯನ್ನು ಎದುರುಗೊಳ್ಳಲು ಅಂಬೇಡ್ಕರ್ ರೂಪಿಸಿದ ಬುದ್ಧ, ಬೌದ್ಧ ಧಮ್ಮ ಕುರಿತು ಆಗಾಗ ಬರೆದ ಟಿಪ್ಪಣಿಗಳು:
ಅಂಬೇಡ್ಕರ್ ಒಮ್ಮೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಭೆಯಲ್ಲಿ ಮಾತಾಡುತ್ತಾ 'ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ಏನು ಮಾಡಿದರೋ ಅದನ್ನು ನಾನು ಬೌದ್ಧ ಧರ್ಮಕ್ಕೆ ಮಾಡುತ್ತೇನೆ’ ಎಂದರು. ಗೌತಮಬುದ್ಧನಿಗೆ ಜ್ಞಾನೋದಯವಾದ ಹಾಗೆಯೇ ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಬಹುದೊಡ್ಡ ಜ್ಞಾನೋದಯವಾಗಿತ್ತು. ಸ್ವಂತದ ದುಃಖ ಹಾಗೂ ಸಮುದಾಯದ ದುಃಖ, ಅವಮಾನ, ಅಧ್ಯಯನ, ಹುಡುಕಾಟ, ಚಿಂತನೆ, ಸಂಘರ್ಷಗಳಿಂದ ಹುಟ್ಟಿದ ಈ ಅಂಬೇಡ್ಕರ್ ಜ್ಞಾನೋದಯ ಭಾರತದ ಚರಿತ್ರೆಯ ದಿಕ್ಕನ್ನು ಬದಲಿಸುವಷ್ಟು ಶಕ್ತಿಶಾಲಿಯಾಗಿತ್ತು. ಅದು ೨೫೦೦ ವರ್ಷಗಳ ಕೆಳಗೆ ಬುದ್ಧನಿಗೆ ಆದ ಜ್ಞಾನೋದಯದ ಆಧುನಿಕ ಆವೃತ್ತಿಯಂತಿತ್ತು.
ಅಷ್ಟೊತ್ತಿಗಾಗಲೇ ಅಂಬೇಡ್ಕರ್ ತಮ್ಮ ಕಣ್ಣೆದುರಿಗಿರುವ ಯಾವ ಧರ್ಮದಲ್ಲಿ ದಲಿತರ ಅಸ್ಪೃಶ್ಯತೆಗೆ ಬಿಡುಗಡೆಯಿದೆಯೆಂದು ಆಳವಾಗಿ ಪರಿಶೀಲಿಸಿದ್ದರು. ಅಷ್ಟೇ ಅಲ್ಲ, ಇಡೀ ದೇಶಕ್ಕೇ ಅಗತ್ಯವಾದ ಅತ್ಯುತ್ತಮ ಧರ್ಮ ಯಾವುದೆಂಬ ಬಗ್ಗೆಯೂ ಯೋಚಿಸಿದ್ದರು. ಬೌದ್ಧ ಧಮ್ಮ ಸ್ವೀಕಾರಕ್ಕೂ ಮುನ್ನ ಅಂಬೇಡ್ಕರ್ ಪ್ರಾಚೀನ ಭಾರತದ ಚರಿತ್ರೆಯ ಅನೇಕ ವಿವರಗಳನ್ನು ಪುನರ್ ನಿರ್ಮಿಸಿಕೊಂಡರು. ಚರಿತ್ರೆಯಲ್ಲಿ ಬೌದ್ಧ ಧಮ್ಮ ಮತ್ತು ಬ್ರಾಹ್ಮಣವಾದಗಳ ನಡುವೆ ನಡೆದ ಮುಖಾಮುಖಿಯ ಸ್ವರೂಪವನ್ನು ಆಳವಾಗಿ ಸಂಶೋಧಿಸಿದರು. ದಲಿತರು ಮೂಲತಃ ಬೌದ್ಧರಾಗಿದ್ದರು ಎಂಬುದನ್ನು ಆಧಾರಸಮೇತ ಸಾಬೀತು ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಬೌದ್ಧ ಧಮ್ಮವನ್ನು ಆಧುನಿಕ ಕಾಲಕ್ಕೆ ತಕ್ಕ ಧರ್ಮವನ್ನಾಗಿ ವ್ಯಾಖ್ಯಾನಿಸಿ, ಮರುರೂಪಿಸಿದರು.
೧೯೫೪ರಲ್ಲಿ ಮಾಡಿದ ರೇಡಿಯೋ ಭಾಷಣವೊಂದರಲ್ಲಿ ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗಳ ತತ್ವವನ್ನು ಫ್ರೆಂಚ್ ಕ್ರಾಂತಿಯಿಂದ ನಾನು ಪಡೆಯಲಿಲ್ಲ; ಬದಲಿಗೆ ನನ್ನ ಗುರು ಬುದ್ಧನಿಂದ ಈ ತತ್ವಗಳನ್ನು ಪಡೆದೆ’ಎಂದು ಅಂಬೇಡ್ಕರ್ ಹೇಳಿದರು. ‘ನನ್ನ ಸಿದ್ಧಾಂತದ ಬೇರುಗಳು ಧರ್ಮದಲ್ಲಿವೆಯೇ ಹೊರತು ರಾಜ್ಯಶಾಸ್ತ್ರದಲ್ಲಲ್ಲ’ ಎಂದು ಅವರು ಇದೇ ಭಾಷಣದಲ್ಲಿ ಹೇಳಿದ್ದರು.
ಬುದ್ಧನನ್ನು ವೈಚಾರಿಕವಾಗಿ ವಿವರಿಸಲೆತ್ನಿಸಿದ ಅಂಬೇಡ್ಕರ್, ಬುದ್ಧನ ಬಗೆಗಿನ ಸಿದ್ಧಪುರಾಣಗಳನ್ನು ಒಡೆದರು. ನಾವೆಲ್ಲ ಚರಿತ್ರೆಯ ಜನಪ್ರಿಯ ಪುಸ್ತಕಗಳ ಮೂಲಕ ತಿಳಿದಿರುವಂತೆ ಸಿದ್ಧಾರ್ಥ ‘ರೋಗ, ಮುಪ್ಪು ಹಾಗೂ ಸಾವಿನ ಚಿತ್ರಗಳನ್ನು ಕಂಡು ವಿರಾಗಿಯಾದ’ ತಾನೆ? ಈ ದೃಶ್ಯಗಳು ರೂಪಕಗಳಾಗಿ ಅತ್ಯಂತ ಅರ್ಥಪೂರ್ಣವಾಗಿವೆ ಎನ್ನುವುದು ನಿಜ. ಆದರೆ ಚರಿತ್ರೆಯ ಅಧ್ಯಯನದ ಮೂಲಕ ಅಂಬೇಡ್ಕರ್ ಕಂಡುಕೊಂಡ ಸತ್ಯದ ಪ್ರಕಾರ, ಬುದ್ಧ ಈ ದೃಶ್ಯಗಳನ್ನು ಕಂಡು ವಿರಾಗಿಯಾಗಲಿಲ್ಲ; ಬದಲಿಗೆ, ತನ್ನ ತಂದೆಯ ರಾಜ್ಯಕ್ಕೂ ಪಕ್ಕದ ರಾಜ್ಯಕ್ಕೂ ನದಿಯ ನೀರಿನ ವಿಷಯದಲ್ಲಿ ಉಂಟಾದ ಜಗಳದಿಂದ ಬೇಸರಗೊಂಡು ರಾಜ್ಯ ತೊರೆದ. ಬುದ್ಧನನ್ನು ಹತ್ತು ಅವತಾರಗಳ ಜೊತೆ ಹನ್ನೊಂದಾಗಿಸಿ ನುಂಗಲೆತ್ನಿಸಿದ ಪುರಾಣಗಳನ್ನೂ ಅಂಬೇಡ್ಕರ್ ತಿರಸ್ಕರಿಸಿದರು. ಏಸು ಕ್ರಿಸ್ತ, ಪೈಗಂಬರರ ಹಾಗೆ ಬುದ್ಧ ತಾನು ದೇವದೂತನೆಂದಾಗಲೀ, ಕೃಷ್ಣನಂತೆ ದೇವರದೇವನೆಂದಾಗಲೀ ಎಂದೂ ಹೇಳಿಕೊಳ್ಳಲಿಲ್ಲ ಎಂಬ ಸತ್ಯವನ್ನು ಒತ್ತಿ ಹೇಳಿದರು.
ಹೀಗೆ ಅಂಬೇಡ್ಕರ್ ತಮ್ಮ ಒಟ್ಟು ಜೀವಿತದಲ್ಲಿ ಬೌದ್ಧ ಧಮ್ಮವನ್ನು ಆಧುನಿಕವಾಗಿ ಹಾಗೂ ವೈಚಾರಿಕವಾಗಿ ವಿವರಿಸಿಕೊಂಡ ಕ್ರಮ ಇಂದು ಇಡೀ ಜಗತ್ತಿಗೆ ಆದರ್ಶ ಮಾದರಿಯಾಗಬಲ್ಲದು. ಯಾಕೆಂದರೆ, ಧರ್ಮಗಳನ್ನು ಅಸಮಾನತೆ ಹಾಗೂ ಪ್ರತ್ಯೇಕತೆಗಳನ್ನು ಉತ್ತೇಜಿಸುವ ಕಾಲ ಇದು; ಧರ್ಮ ಉಕ್ಕಿಸಬಲ್ಲ ಭಾವನಾತ್ಮಕತೆಯನ್ನು ಜನರನ್ನು ಬೆಸೆಯಲು ಬಳಸದೆ, ಜನರಲ್ಲಿ ಭಾವನಾತ್ಮಕ ವಿಕಾರಗಳನ್ನು ಹಬ್ಬಿಸುವ ಕ್ರೌರ್ಯ ಇಂದು ಹೆಚ್ಚಾಗಿದೆ. ಇಂಥ ಕಾಲದಲ್ಲಿ, ಅಂಬೇಡ್ಕರ್ ಬೌದ್ಧಧಮ್ಮವನ್ನು ವಿವರಿಸಿರುವ ಆರೋಗ್ಯಕರ ರೀತಿಯನ್ನು ಹೀಗೆ ಸಂಗ್ರಹಿಸಬಹುದು:
೧.ಉದಾರವಾದಿ ಪ್ರಜಾಪ್ರಭುತ್ವ, ಮಾನವತಾವಾದ, ವೈಜ್ಞಾನಿಕತೆ ಹಾಗೂ ವಿಚಾರವಾದಗಳನ್ನು ಒಪ್ಪುವ ಆಧುನಿಕ ಮನಸ್ಸಿಗೆ ಬೌದ್ಧ ಧಮ್ಮ ಒಪ್ಪಿತವಾಗುತ್ತದೆ.
೨. ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತ್ವ-ಸೋದರಿತ್ವ(ಫ್ರಾಟರ್ನಿಟಿ)ಗಳ ತತ್ವವನ್ನು ಬೌದ್ಧ ಧಮ್ಮ ಪ್ರತಿಪಾದಿಸುತ್ತದೆ.
೩.ಧರ್ಮದ ಹೆಸರಿನಲ್ಲಿ ಅನಿಷ್ಟವಾದ ಆಚರಣೆಗಳನ್ನು ಬೌದ್ಧ ಧಮ್ಮ ಒಪ್ಪುವುದಿಲ್ಲ.
೪.ಬೌದ್ಧ ಧಮ್ಮ ಜಾತಿಯ ಮೇಲು, ಕೀಳುಗಳನ್ನು ತಿರಸ್ಕರಿಸುತ್ತದೆ.
೫.ಈ ಧಮ್ಮದ ಮಾರ್ಗಗಳನ್ನು ಪ್ರಶ್ನಿಸುವ, ವಿವರಣೆಯ ಮೂಲಕ ಅದಕ್ಕೆ ತಿದ್ದುಪಡಿ ತರುವ ಸ್ವಾತಂತ್ರ ಧಮ್ಮದ ಅನುಯಾಯಿಗೆ ಇದೆ.
೬.ಧರ್ಮಗಳು ಸಾಮಾನ್ಯವಾಗಿ ಪವಾಡಗಳು, ಅಲೌಕಿಕ ಘಟನೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಕಟ್ಟಿದ ಸುಳ್ಳುಗಳ ಮೂಲಕ ಜನರ ಮೇಲೆ ಯಜಮಾನಿಕೆ ಸ್ಥಾಪಿಸುತ್ತಿರುತ್ತವೆ. ಆದರೆ, ಬೌದ್ಧ ಧಮ್ಮ ಪವಾಡಗಳಾಗಲೀ ಅಲೌಕಿಕವಾದ ದೈವದ ಕಲ್ಪನೆಯಾಗಲೀ ಇಲ್ಲದ ಧರ್ಮ. ಧಾರ್ಮಿಕ ನಾಯಕರಲ್ಲಿ ಅಲೌಕಿಕ ಶಕ್ತಿಯಿದೆಯೆಂದು ಬೌದ್ಧ ಧಮ್ಮ ಬಿಂಬಿಸುವುದಿಲ್ಲ.
೭.ಸಮಾನತೆಯ ಆಶಯವನ್ನು ಪ್ರತಿಪಾದಿಸಲು, ರಾಜಕೀಯ ಕ್ರಾಂತಿಗೆ ಪೂರಕವಾಗಬಲ್ಲ ಧಾರ್ಮಿಕ ಕ್ರಾಂತಿಯನ್ನು ರೂಪಿಸಲು ಬೌದ್ಧ ಧಮ್ಮ ನೆರವಾಗಬಲ್ಲದು.
೮.ಬುದ್ಧನ ಪ್ರಕಾರ ‘ಧಮ್ಮ’ಎನ್ನುವುದು ಮೂಲತಃ ನ್ಯಾಯ ಹಾಗೂ ಸಾಮಾಜಿಕ ನೈತಿಕತೆ. ಈ ಧಮ್ಮದಲ್ಲಿ ತೀರ್ಥಯಾತ್ರೆ, ಬಲಿ ಇತ್ಯಾದಿಗಳಿಗೆ ಅವಕಾಶವಿಲ್ಲ.
೯.ಚರಿತ್ರೆಯುದ್ದಕ್ಕೂ ಧರ್ಮಗಳು ಯಾಜಮಾನ್ಯದ ರಾಜಕಾರಣ ಹಾಗೂ ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಲಾಭಕೋರ ರಾಜಕಾರಣದ ಮುಖವಾಡಗಳಾಗಿ ಬಳಕೆಯಾಗುತ್ತಾ ಬಂದಿವೆ. ಇದನ್ನು ಮನಗಂಡಿದ್ದ ಅಂಬೇಡ್ಕರ್ ‘ನನಗೆ ಧರ್ಮದ ಅಗತ್ಯವಿದೆಯೇ ಹೊರತು ಧರ್ಮದ ಹೆಸರಿನಲ್ಲಿ ಗೋಸುಂಬೆತನವಲ್ಲ’ಎಂದು ಹೇಳಿದರು. ಒಂದು ಉತ್ತಮ ಜೀವನಮಾರ್ಗವಾಗಿ ಕೂಡ ಅವರು ಬೌದ್ಧ ಮಾರ್ಗವನ್ನು ಒಪ್ಪಿಕೊಂಡರು.
೧೦.ಬೌದ್ಧ ಧಮ್ಮ ವೈದಿಕವಾದ, ಬ್ರಾಹ್ಮಣವಾದಗಳ ವಿರುದ್ಧ ಹೋರಾಡುತ್ತಾ ಅಸ್ಪೃಶ್ಯತೆಯನ್ನು ದೃಢವಾಗಿ ವಿರೋಧಿಸಿತ್ತು ಹಾಗೂ ಅಸ್ಪೃಶ್ಯರನ್ನು ತನ್ನ ತೆಕ್ಕೆಗೆ ಸ್ವೀಕರಿಸಿತ್ತು. ಈ ತಾತ್ವಿಕ ಹಾಗೂ ಧಾರ್ಮಿಕ ಬುನಾದಿ ಅಂಬೇಡ್ಕರ್ ವೈದಿಕ ವಿಕಾರಗಳ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಪೂರಕವಾಗಿತ್ತು.
ಅಂಬೇಡ್ಕರ್ ಚಿಂತನೆ ಹಾಗೂ ಅವರ ಬೌದ್ಧ ವ್ಯಾಖ್ಯಾನಗಳೆರಡೂ ಇಂದಿನ ಭಾರತೀಯ ಚಿಂತನೆಯ ಬಹುಮುಖ್ಯ ಧಾರೆಯನ್ನು ರೂಪಿಸತೊಡಗಿವೆ. ಭಾರತದ ದಲಿತ ಚಳುವಳಿಯಲ್ಲಿ ಅಂಬೇಡ್ಕರ್ವಾದ ಹಾಗೂ ಬೌದ್ಧ ಧಮ್ಮಗಳು ಪರಸ್ಪರ ಬೆರೆತುಹೋಗಿವೆ. ದಲಿತರು ತಮ್ಮ ಮೇಲೆ ಹೇರಲಾದ ಕೀಳರಿಮೆಯನ್ನು ಬೌದ್ಧ ಧಮ್ಮದ ಮೂಲಕ ಮೀರಲೆತ್ನಿಸಿದ್ದಾರೆ. ಅಸ್ಪೃಶ್ಯತೆಯ ಅವಮಾನದಿಂದ ಕುಗ್ಗಿಹೋದ ದಲಿತರ ದೇಹ ಹಾಗೂ ಚೈತನ್ಯಗಳನ್ನು ಬಿಡುಗಡೆಗೊಳಿಸದಿದ್ದರೆ ಆ ಮನಸ್ಸುಗಳಲ್ಲಿ ಯಾವ ಉತ್ಸಾಹವೂ ಹುಟ್ಟುವುದಿಲ್ಲ; ಮನಸ್ಸಿನಲ್ಲಿ ಉತ್ಸಾಹ ಉಕ್ಕದೆ ಪ್ರಗತಿಯಿಲ್ಲ ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗ್ರಹಿಸಿದ್ದರು. ಮಹಾರಾಷ್ಟ್ರದಲ್ಲಿ ಸ್ವಾತಂತ್ರೋತ್ತರ ದಲಿತ ತಲೆಮಾರುಗಳ ಮೇಲೆ ಬುದ್ಧ ತತ್ವಗಳ ಪ್ರಭಾವವನ್ನು ಕುರಿತು ಅಧ್ಯಯನ ಮಾಡಿರುವ ಅರುಣ್ಸಾಧು ತಾವು ಕಂಡ ಬೌದ್ಧಬೆಳವಣಿಗೆಯನ್ನು ಹೀಗೆ ದಾಖಲಿಸುತ್ತಾರೆ:
‘ಬೌದ್ಧ ಧಮ್ಮದಿಂದಾಗಿ ದಲಿತರಲ್ಲಿ ಹೊಸ ಐಡೆಂಟಿಟಿ ಹಾಗೂ ಆತ್ಮವಿಶ್ವಾಸ ಕಾಣುತ್ತಿದೆ. ಬೌದ್ಧರಾಗಿರುವ ಯುವಕರು ಪೂರ್ವಜನ್ಮದ ಕರ್ಮದ ಸಿದ್ಧಾಂತವನ್ನಾಗಲೀ ಹಳೆಯ ಆಚರಣೆಗಳನ್ನಾಗಲೀ ನಂಬುವುದಿಲ್ಲ. ಮೇಲುಜಾತಿಯ ಹಿಂದೂ ತರುಣ ತರುಣಿಯರಿಗಿಂತ ಇವರಲ್ಲಿ ಹೆಚ್ಚಿನ ದೃಢತೆ, ವೈಜ್ಞಾನಿಕತೆ ಹಾಗೂ ಪ್ರಗತಿಪರತೆ ಕಂಡುಬರುತ್ತಿವೆ. ಅವರು ಕುರುಡು ನಂಬಿಕೆಗಳನ್ನು ಬಿಟ್ಟು ವೈಚಾರಿಕತೆಯ ಕಡೆಗೆ ನಡೆದಿರುವುದರಿಂದ, ಅವರಲ್ಲಿ ಶಿಕ್ಷಣದ ಹಸಿವು ಹಾಗೂ ಜ್ಞಾನದ ಹಸಿವು ಹೆಚ್ಚಿದೆ. ಅವರ ಆರ್ಥಿಕ ಪ್ರಗತಿಗೆ ಇದೂ ಕೂಡ ಮುಖ್ಯ ಕಾರಣವಾಗಿದೆ.’
ಅವತ್ತು ಅಂಬೇಡ್ಕರ್ ಆರಂಭಿಸಿದ ಚರಿತ್ರೆಯ ಚಕ್ರದ ಓಟದ ಫಲಗಳನ್ನು ಇವತ್ತು ಭಾರತದ ದಲಿತ, ಹಿಂದುಳಿದ ಜಾತಿಗಳ ಬಹುಜನರು ಹಾಗೂ ಮಹಿಳೆಯರು ಪಡೆಯಲಾರಂಭಿಸಿದ್ದಾರೆ. ಅಂಬೇಡ್ಕರ್ ವ್ಯಾಖ್ಯಾನಿಸಿ ರೂಪಿಸಿಕೊಟ್ಟ ಬೌದ್ಧಧಮ್ಮದಿಂದಲೂ ಆಧುನಿಕ ಭಾರತದ ಅಸಲಿ ಪುನರುಜ್ಜೀವನ ಶುರುವಾಯಿತು. ಈ ಪುನರುಜ್ಜೀವನದ ಅರ್ಥವನ್ನು ನಿತ್ಯ ಹಬ್ಬಿಸುವ ಕರ್ತವ್ಯ ಕೂಡ ನಮ್ಮೆದುರಿಗಿದೆ.
ಹೀಗೆಂದುಕೊಳ್ಳುತ್ತಿರುವಾಗ… ಗ್ಯಾಂಗ್ಟಕ್ನಲ್ಲಿ ಹಿಂದೊಮ್ಮೆ ಕೊಂಡಿದ್ದ ಮಂಡಿಯ ಮೇಲೆ ಮುಖವಿಟ್ಟ ಪುಟ್ಟ ಬುದ್ಧ ವಿಗ್ರಹ ನೆನಪಾಗುತ್ತದೆ. ಕಾಯಿಲೆಗಳ ಭಾರಕ್ಕೆ ಸೋತು ಖಿನ್ನಳಾಗಿ ಮಂಡಿಯ ಮೇಲೆ ಮುಖವಿಟ್ಟು ಕೂತಿದ್ದ ವಿದ್ಯಾರ್ಥಿನಿಯೊಬ್ಬಳು ನೆನಪಾಗಿ, ಕೊಂಡ ಪ್ರತಿಮೆ ಅದು…ಆಕೆಯ ಮುಖ ಮಸುಕಾಗಿದೆ; ಆದರೆ ದುಃಖವನ್ನು, ದುಃಖಿಗಳನ್ನು ನೋಡುವ ರೀತಿ ಹೇಳಿಕೊಟ್ಟ ಬುದ್ಧನ ಅನಂತ ಕರುಣೆಯ ಪಾಠಗಳು ತೀರಾ ಮಸುಕಾಗಿಲ್ಲ. ಬುದ್ಧ ಪೂರ್ಣಿಮೆಯ ನೆಪದಲ್ಲಿ ಅಂಬೇಡ್ಕರ್ ಬುದ್ಧ ಮಾರ್ಗದಲ್ಲಿ ಹಬ್ಬಿಸಿದ ಹೊಸ ವೈಚಾರಿಕ ಬೆಳಕು ಮುಸುಕಿದೀ ಮಬ್ಬಿನಲಿ ನಮ್ಮ ಕೈ ಹಿಡಿದು ನಡೆಸುವಂತಾಗಲಿ!
ಹ್ಯಾಪಿ ಬುದ್ಧ ಪೂರ್ಣಿಮಾ! ಈ ಅಂಕಣ ಬರೆಯುವ ಮೇ೧೧ನೆಯ ತಾರೀಕು ಮದರ್ಸ್ ಡೇ! ಬುದ್ಧನಂತೆ ನಮ್ಮನ್ನೆಲ್ಲ ಪೊರೆಯುವ ಎಲ್ಲ ಬಗೆಯ ತಾಯಂದಿರಿಗೂ ನಮ್ಮ ಕೃತಜ್ಞತೆಯಿರಲಿ. ಒಂದು ಚಣ ನಮ್ಮ ಕಣ್ಣಲ್ಲಿ ಬುದ್ಧ ಪ್ರತಿಮೆ-ತಾಯಿ ಪ್ರತಿಮೆ ಬೆರೆಯತೊಡಗಿವೆ… ಎನ್ನಿಸಿದರೆ ಅದೇನೂ ಮಾಂತ್ರಿಕವಾಸ್ತವ ಅಲ್ಲ; ಅದು ನಾವು ಕಂಡುಂಡ ನಿತ್ಯದ ವಾಸ್ತವ ಕೂಡ!
Comments
14 Comments
| ವಿಜಯೇಂದ್ರ ಕುಮಾರ್ ಜಿ ಎಲ್
ನಮಸ್ತೆ ಸರ್, ನಾಳೆ 'ಬುದ್ಧ ಪೂರ್ಣಿಮೆ' ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ನಾನು ಮಾತನಾಡಬೇಕಿದೆ. ಇಲ್ಲಿ ನೀವು ಸಂಗ್ರಹಿಸಿ ನಿರೂಪಿಸಿರುವ (ಅಂಬೇಡ್ಕರ್ ಬೌದ್ಧಧಮ್ಮವನ್ನು ವಿವರಿಸಿರುವ ಆರೋಗ್ಯಕರ ರೀತಿಯನ್ನು) ಕೃತಜ್ಞತಾಪೂರ್ವಕವಾಗಿ ಬಳಸಿಕೊಳ್ಳುತ್ತೇನೆ.
| ಮಂಜುನಾಥ್ ಸಿ ನೆಟ್ಕಲ್
ಸಕಾಲಿಕ ಮತ್ತು ಸಾರ್ವಕಾಲಿಕ ಸತ್ಯವನ್ನು. ಸಾರುವ ಬರಹ. ಧನ್ಯವಾದಗಳು ಸರ್ .. ಅಂಬೇಡ್ಕರ್ ದೃಷ್ಟಿಯಿಂದ ಬುದ್ಧನನ್ನು ನಾವೆಲ್ಲರೂ ನೋಡುವಂತಾಗಿದೆ.
| Nataraj Huliyar Replies
Dear Vijayendra, I am so happy my take on Ambedkar's Buddha will grow further in your talk 😍
| vinay
ಬೌದ್ಧ ದಮ್ಮದ ಕುರಿತು ಹಬ್ಬಿರುವ ವದಂತಿಗಳನ್ನು ಈ ಬರಹ ತೊಳೆದು ಹಾಕುತ್ತದೆ. ಈ ಬರಹವನ್ನು ಓದಿದ ಮೇಲೆ ಬೌದ್ಧ ಧರ್ಮದ ಕುರಿತ ಆಳವಾಗಿ ತಿಳಿಯ ಬೇಕೆಂಬ ಆಸೆ ಹುಟ್ಟಿದೆ. ಯಾವುದಾದರು ಕನ್ನಡ ಪುಸ್ತಕಗಳ್ನು ತಿಳೀಸುವಿರಾ?
| Nataraj Huliyar Replies
Dear Vinay, You can download Buddha and his Dhamma by Ambedkar straight away. Or You can read it in one of AMBEDKAR Volumes - Kannada or English. Start on Buddha Purnimna today!
| Vasantha
ಬುದ್ಧ ಪೂರ್ಣಿಮೆಯ ದಿನ ದ ಜೊತೆಗೆ ತಾಯಂದಿರುಗಳಿಗೂ ಧನ್ಯವಾದ ತಿಳಿಸಿದ ಮಾತೃ ಹೃದಯಕ್ಕೆ ಧನ್ಯವಾದಗಳು
| ಡಾ. ನಿರಂಜನ ಮೂರ್ತಿ ಬಿ ಎಂ
ಬೌದ್ಧ ಧರ್ಮದ ಅಂಬೇಡ್ಕರ್ ವ್ಯಾಖ್ಯಾನವನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ, ಸಮರ್ಥವಾಗಿ, ಸಕಾಲಿಕವಾಗಿ, ಮತ್ತು ಸಮಂಜಸವಾಗಿ ಸಂಗ್ರಹಿಸಿಕೊಟ್ಟಿರುವ ಹುಳಿಯಾರರಿಗೆ ನಮೋನ್ನಮಃ. ಜನನಾಯಕನೆಂದರೆ ಅಂಬೇಡ್ಕರ್ ಹಾಗಿರಬೇಕು; ಧರ್ಮವೆಂದರೆ ಬೌದ್ಧ ಧರ್ಮದ ಹಾಗಿರಬೇಕೆನಿಸಿತು. ಕೊನೆಯಲ್ಲಿ ಬುದ್ಧ ಮತ್ತು ಅಮ್ಮನ ಸಮೀಕರಣ ಆನಂದಮಯ! ಬುದ್ಧನನ್ನು ಮತ್ತು ಅಂಬೇಡ್ಕರ್ ಅವರನ್ನು ಮನಸಿಗೆ ಮತ್ತಷ್ಟು ಹತ್ತಿರವಾಗಿಸುವ ಅದ್ಭುತ ಬರಹವಿದು!!
| Dr.Prabhakar
Superb!
| Dr.Aru Rangaswamy
ಸಕಾಲಿಕ , ಮೌಲಿಕ ,ಉತ್ತಮ ಬರಹ. ನಮಸ್ಕಾರ.
| Subramanya Swamy
ಬುದ್ಧ ಮತ್ತು ಅಂಬೇಡ್ಕರ್ ಹಾಗೂ ತಾಯಂದಿರನ್ನು ಒಂದು ಮಾನವ ಸಮಾಜದ ಮಾದರಿ ಮತ್ತು ನಾವು ಕಾಣಬೇಕಾದ , ಸಾಗಬೇಕಾದ ಹಾದಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟ ಹುಳಿಯಾರ್ ಸಾರ್ ಅವರಿಗೆ ನನ್ನ ಧನ್ಯವಾದಗಳು.
| ಮಾಲತಿ ಪಟ್ಟಣಶೆಟ್ಟಿ
ಬುದ್ಧ, ಅಂಬೇಡ್ಕರ್ ವೈಚಾರಿಕತೆಯ ಕೇಂದ್ರ ದಲ್ಲಿ ಮನುಷ್ಯನಿದ್ದಾನೆ, ಬ್ರಾಹ್ಮಣ, ಹಿಂದೂ ವೈಚಾರಿಕತೆಯಲ್ಲಿ ದೇವರುಗಳಿದ್ದಾರಾದ್ದರಿಂದ ಮಾನವೀಯ ಬದುಕಿಗೆ ಅವರ ಯೋಚ್ನೆ ಗಳು ಹತ್ತಿರವಾಗುತ್ತವೆ.
| ಮಾಲತಿ ಪಟ್ಟಣಶೆಟ್ಟಿ
ನಿ ಮ್ಮ "ಶೇಕ್ ಸ್ಪೀಯರ್ ಮನೆಗೆ ಬಂಡ " ನನ್ನಮನೆಗೂ ಬಂದ!!
| Prakashmanteda
ಬುದ್ಧತ್ವ ಬಗೆಗೆ ಚಾರಿತ್ರಿಕ ಅಧ್ಯಯನ ಕ್ರಮದೊಂದಿಗೆ ಸಾಗುವ ಈ ಲೇಖನ ಕಾವ್ಯ ಪ್ರತಿಮೆಯೊಂದಿಗೆ ಹರಡಿಕೊಳ್ಳುತ್ತದೆ. ತಥಾಗತ ನಮ್ಮ ಮನೋಬಿಂಬಗಳಾಗಿ ಆವರಿಸುವ ಸುಪ್ತ ಕ್ರಿಯೆಗೆ ಈ ಲೇಖನ ಬೆಳದಿಂಗಳಂತೆ ಹರಡಿಕೊಳ್ಳುತ್ತದೆ. ಡಿ.ಆರ್ ಎನ್ ರವರು ಗುರುತಿಸಿದಂತೆ ನಮ್ಮ ಆಧುನಿಕತೆ ಹಾಗೂ ಪರಂಪರೆಯ ಕೊಳಕನ್ನು ಮೀರಲು ಬುದ್ಧನ ದಾರಿ ನಮಗೆ ಸದಾ ಪ್ರಜ್ಞೆಯ ಹುಣ್ಣಿಮೆಯಾಗಿ ಜೊತೆಗಿರುತ್ತದೆ. ಬುದ್ಧತ್ವವೇ ಸಕಲವನ್ನೂ ಪೊರೆಯುವ ತಾಯಿ ಎಂಬ ಪ್ರಜ್ಞೆಯ ರೂಪಾಂತರ ಈ ಲೇಖನ ನಮಗೆ ಇನ್ನೂ ಆಪ್ತವಾಗುವಂತೆ ಮಾಡುತ್ತದೆ. ನಮೋ ಬುದ್ಧಾಯ.... ಅಭಿನಂದನೆಗಳು ಸರ್
| Prakashmanteda
ಬುದ್ಧತ್ವ ಬಗೆಗೆ ಚಾರಿತ್ರಿಕ ಅಧ್ಯಯನ ಕ್ರಮದೊಂದಿಗೆ ಸಾಗುವ ಈ ಲೇಖನ ಕಾವ್ಯ ಪ್ರತಿಮೆಯೊಂದಿಗೆ ಹರಡಿಕೊಳ್ಳುತ್ತದೆ. ತಥಾಗತ ನಮ್ಮ ಮನೋಬಿಂಬಗಳಾಗಿ ಆವರಿಸುವ ಸುಪ್ತ ಕ್ರಿಯೆಗೆ ಈ ಲೇಖನ ಬೆಳದಿಂಗಳಂತೆ ಹರಡಿಕೊಳ್ಳುತ್ತದೆ. ಡಿ.ಆರ್ ಎನ್ ರವರು ಗುರುತಿಸಿದಂತೆ ನಮ್ಮ ಆಧುನಿಕತೆ ಹಾಗೂ ಪರಂಪರೆಯ ಕೊಳಕನ್ನು ಮೀರಲು ಬುದ್ಧನ ದಾರಿ ನಮಗೆ ಸದಾ ಪ್ರಜ್ಞೆಯ ಹುಣ್ಣಿಮೆಯಾಗಿ ಜೊತೆಗಿರುತ್ತದೆ. ಬುದ್ಧತ್ವವೇ ಸಕಲವನ್ನೂ ಪೊರೆಯುವ ತಾಯಿ ಎಂಬ ಪ್ರಜ್ಞೆಯ ರೂಪಾಂತರ ಈ ಲೇಖನ ನಮಗೆ ಇನ್ನೂ ಆಪ್ತವಾಗುವಂತೆ ಮಾಡುತ್ತದೆ. ನಮೋ ಬುದ್ಧಾಯ.... ಅಭಿನಂದನೆಗಳು ಸರ್
Add Comment