ರಿಸರ್ಚ್ ಜೀತ ಪದ್ಧತಿ!
by Nataraj Huliyar
ಪೂರ್ಣಚಂದ್ರ ತೇಜಸ್ವಿಯವರ ರಿಸರ್ಚ್ ಮನೋಭಾವ ಕುರಿತು ಮಾತಾಡುತ್ತಾ, ‘ಸಂಶೋಧನಾ ಜೀತ ಪದ್ಧತಿ ಎಂಬ ನುಡಿಗಟ್ಟು ಅದು ಹೇಗೋ ಯಾಕೋ ನನ್ನ ಬಾಯಿಂದ ಹೊರಬಿತ್ತು. ಈ ಮಾತು ಕೇಳಿ ಅಲ್ಲಿದ್ದ ಕೆಲವು ಸಂಶೋಧಕ, ಸಂಶೋಧಕಿಯರು ನಕ್ಕರು. ಇದಾದದ್ದು ಮೊನ್ನೆ ‘ಪೂರ್ಣಚಂದ್ರ’ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ. ಗಾಂಧಿಯನ್ ಎಂ.ಸಿ. ನರೇಂದ್ರರ ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಗೊಟ್ಟಿಗೆರೆಯ ವಿಶಿಷ್ಟ ರಾಗಿ ಕಣವನ್ನೊಳಗೊಂಡ ತೋಟದಲ್ಲಿದೆ; ಇಲ್ಲಿನ ಸಹ್ಯಾದ್ರಿವನದ ‘ಸಂಧ್ಯಾಸ್ಮೃತಿ’ ಕ್ಯಾಂಪಸ್ಸಿನಲ್ಲಿ ಹುಲ್ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಟ್ರಸ್ಟ್ ಜೊತೆಗೂಡಿ ನರೇಂದ್ರ, ಗೆಳೆಯ ಶಿವಾರೆಡ್ಡಿ, ವಿದ್ಯಾರ್ಥಿ ಮಿತ್ರ ಕಿಶೋರ್ ಮುಂತಾದ ಹಲವರ ಶ್ರಮದಿಂದ ‘ಪೂರ್ಣಚಂದ್ರ’ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮೈದಾಳಿದೆ.
ಈ ಅಂಕಣ ಬರೆಯುವ ಶನಿವಾರ ಅವತ್ತಿನ ನಗುವಿನ ಗಳಿಗೆ ನೆನಪಾಯಿತು; ಆ ಸಂಶೋಧಕಿಯರು-ಸಂಶೋಧಕರು ಯಾಕೆ ನಕ್ಕಿರಬಹುದು? ಅವರ ನಗುವಿನ ಅರ್ಥ ಏನಿರಬಹುದು ಎಂದುಕೊಂಡೆ. ತಕ್ಷಣ, ದೇವನೂರ ಮಹಾದೇವರ ‘ಮಾರಿಕೊಂಡವರು’ ಕತೆಯ ಕೊನೆಯ ಎರಡು ಸಾಲುಗಳು ನೆನಪಾದವು:
ಯಾತಕ್ಕೊ ಕಿಟ್ಟಪ್ಪ ನಕ್ಕ
ಬೀರನೂ ನಕ್ಕನು.
ಕತೆಯ ಕೊನೆಗೆ ಬರುವ ಈ ಎರಡು ಚಿತ್ರಗಳ ಸಂದಿಗ್ಧಾರ್ಥವನ್ನು- ಅಂದರೆ ಬಹು ಅರ್ಥಗಳನ್ನು- ಕ್ಲಾಸುಗಳಲ್ಲಿ ಚರ್ಚಿಸಿದ್ದು ನೆನಪಾಯಿತು. ಆ ಬಗ್ಗೆ ಮುಂದೆಂದಾದರೂ ಬರೆಯಬಹುದು. ಆ ಜಾಡಿಗೆ ಹೋಗಿ ಅವತ್ತಿನ ಸಂಶೋಧಕಿಯರ, ಸಂಶೋಧಕರ ನಗುವಿನ ಹಿಂದಿನ ಮನಸ್ಥಿತಿಯನ್ನು ಅರ್ಥೈಸಬಹುದು ಎನ್ನಿಸಿ, ಅಲ್ಲಿದ್ದ ಕೆಲವರನ್ನು ಅನಂತರ ಕೇಳಿದೆ:
‘ಸಂಶೋಧನಾ ಜೀತಪದ್ಧತಿ ಎಂಬ ಹೊಸ ನುಡಿಗಟ್ಟು ಹೇಗಿದೆ?!’
ಈ ನುಡಿಗಟ್ಟಿನಲ್ಲಿರುವ ಸತ್ಯದ ಬಗ್ಗೆ ಯಾರಿಗೂ ತಕರಾರಿದ್ದಂತಿರಲಿಲ್ಲ! ಸಂಶೋಧನೆಯ ಬಗೆಬಗೆಯ ಜೀತಗಳನ್ನು ಅವರೆಲ್ಲ ಕಂಡವರೇ. ಆ ಜೀತ ಫ್ಯೂಡಲ್ ಗೈಡುಗಳ ಜೀತದಿಂದ ಹಿಡಿದು, ಕೊನೆಗೆ ರಿಸರ್ಚರುಗಳು ಆರಿಸಿಕೊಂಡ ವಸ್ತುವಿನ ಹುಡುಕಾಟದಲ್ಲಿ ಆನಂದ ಸಿಗದೆ, ಆ ವಸ್ತು ಕುರಿತ ಜೀತ ಪದ್ಧತಿಯ ತನಕ ಮುಟ್ಟುತ್ತದೆ! ಈ ಬಗೆಯ ಜೀತ ಪದ್ಧತಿಯ ಮಾತಾಡಿದ ಐದಾರು ದಿನಗಳಾದ ಮೇಲೆ ‘ವರ್ಕರ್’ ಮತ್ತು ‘ವರ್ಕ್’ ಬಗ್ಗೆ ಕಾರ್ಲ್ ಮಾರ್ಕ್ಸ್ ಹೇಳಿದ ಮಾತೊಂದು ಕಣ್ಣಿಗೆ ಬಿತ್ತು:
‘ಕಾರ್ಮಿಕನಿಗೆ ‘ಕೆಲಸ’ ಎನ್ನುವುದು ಅವನ ವ್ಯಕ್ತಿತ್ವದಿಂದ ಹೊರಗಿರುವಂಥದು. ಅದು ಅವನ ಸಹಜ ಸ್ವಭಾವದ ಭಾಗವಲ್ಲ. ಅದರ ಪರಿಣಾಮವಾಗಿ ಅವನು ಮಾಡುವ ಕೆಲಸದಲ್ಲಿ ಅವನಿಗೆ ಸಾರ್ಥಕ್ಯ ಭಾವ ಹುಟ್ಟುವುದಿಲ್ಲ; ಬದಲಿಗೆ ನಿರಾಕರಣೆಯ ಭಾವವೇ ಹುಟ್ಟುತ್ತದೆ. ಆದ್ದರಿಂದ ಕಾರ್ಮಿಕನೊಬ್ಬ ಬಿಡುವಿನ ವೇಳೆಯಲ್ಲಿ ಹೆಚ್ಚು ನೆಮ್ಮದಿಯಲ್ಲಿರುತ್ತಾನೆ; ಆದರೆ ಕೆಲಸ ಮಾಡುವಾಗ ಅವನನ್ನು ಅನಾಥಭಾವ ಕಾಡುತ್ತದೆ.’ ಕಾರ್ಮಿಕರ ಮನೋಲೋಕ ಕುರಿತು ಕಾರ್ಲ್ ಮಾರ್ಕ್ಸ್ ಹೇಳಿದ ಮಾತು ಅವನ ಏಲಿಯನೇಶನ್ ಥಿಯರಿಯ ಭಾಗ ಕೂಡ.
ಕಾರ್ಲ್ ಮಾರ್ಕ್ಸ್ ಕಾರ್ಮಿಕರ ಬಗ್ಗೆ ಹೇಳಿದ ಮಾತನ್ನು ಓದುತ್ತಾ, ನಮ್ಮ ಸಂಶೋಧಕ, ಸಂಶೋಧಕಿಯರು ಕೂಡ ಕಳೆದ ಕೆಲವು ದಶಕಗಳಲ್ಲಿ ‘ವರ್ಕರ್’ ರೀತಿಯಲ್ಲಿ ‘ರಿಸರ್ಚ್…ಅಬ್ಬಾ ಸದ್ಯ ಮುಗೀತು! ಕೊನೆಗೂ ಮುಗೀತು!’ ಈ ಥರದ ಉದ್ಗಾರಗಳನ್ನೇ ಹೊರಡಿಸಿರುವುದು ನೆನಪಾಯಿತು. ಡಿ. ಆರ್. ನಾಗರಾಜರಂಥ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನದಲ್ಲಿ ರಿಸರ್ಚ್ ಮಾಡುತ್ತಾ, ಕೊನೆಯ ಎರಡು ವರ್ಷ ಸತತವಾಗಿ ಬರೆದು, ಮತ್ತೆ ಮತ್ತೆ ಬರೆದು, ಕೆಲಸ ಮಾಡಿದ ನನಗೂ ‘ಸದ್ಯ ಮುಗೀತು’ ಎನ್ನಿಸಿದ್ದು ನಿಜ; ನಂತರ ಅದನ್ನು ಪುಸ್ತಕ ರೂಪದಲ್ಲಿ ಬರೆಯುವಾಗ ಇನ್ನಷ್ಟು ಕೆಲಸ ಮಾಡಬೇಕಾಗಿತ್ತು ಎಂದು ವಿಷಾದ ಹುಟ್ಟಿ, ಮತ್ತಷ್ಟು ಕೆಲಸ ಮಾಡಿದ್ದೂ ನಿಜ. ಆದರೂ ನನ್ನ ‘ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ಸಂಶೋಧನಾ ಕೃತಿಯ ಲೇಖಕನ ಮಾತುಗಳ ಕೊನೆಯ ಸಾಲಿನಲ್ಲಿರುವ ‘ಜ್ಞಾನೋದಯ’ ಇದು:
‘ಈ ಸಂಶೋಧನಾಬರಹದ ಕೊನೆಗೆ ಹೇಳಬೇಕಾದ ಮುಖ್ಯವಾದ ಮಾತೊಂದಿದೆ: ಅದೇನೆಂದರೆ, ಈ ಅಧ್ಯಯನ ಈಗ ಆರಂಭವಾಗಿದೆ…’
ಗೋಪಾಲಕೃಷ್ಣ ಅಡಿಗರ ಪ್ರಾರ್ಥನೆ ಪದ್ಯದ ‘ಆದರು ಕಲಿತಿಲ್ಲವೆಂಬ ನೆನಪುಳಿಸು…’ ಎಂಬ ವಿವೇಕ ಕೂಡ ನನ್ನ ಪುಸ್ತಕದ ಕೊನೆಯ ಸಾಲನ್ನು ಪ್ರೇರೇಪಿಸಿರಬಹುದು! ಅದೆಲ್ಲ ಇರಲಿ, ತೇಜಸ್ವಿ ಯಾವ ಡಾಕ್ಟರೇಟಿನ ತಂಟೆಗೂ ಹೋಗದೆ, ಸರ್ಕಾರಿ ಕೆಲಸಕ್ಕೂ ಹೋಗದೆ, ಕತೆ, ಕಾದಂಬರಿ, ಫಿಲಾಸಫಿ, ಇನ್ನಿತರ ಪುಸ್ತಕಗಳನ್ನು ಬರೆಯಲು ತಮ್ಮ ಪಾಡಿಗೆ ತಾವು ರಿಸರ್ಚ್ ಮಾಡುತ್ತಾ, ಬರೆಯುತ್ತಾ ಹೋದ ಮಾದರಿ ಅವರೇ ಕಂಡುಕೊಂಡ ಶೋಧದ ಮಾದರಿಯಾಗಿತ್ತು. ಆದರೆ ತೇಜಸ್ವಿ ಅಸಾಮಾನ್ಯ ಕತೆಗಾರರಾದ್ದರಿಂದ ರಿಸರ್ಚ್ ಎಲ್ಲೂ ಹೊರೆಯಾಗದೆ ಅದನ್ನು ಕತೆಯಾಗಿಸುವ ಕಲೆ ಅವರಿಗೆ ಒಲಿದುಬಿಟ್ಟಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಒಬ್ಬ ರಿಸರ್ಚರ್ ಗೆ ಇರಬೇಕಾದ ’ನಿರ್ಭಯ’ ಅಕಡೆಮಿಕ್ ಗುಣ- ’ವೇರ್ ದ ಮೈಂಡ್ ಈಸ್ ವಿಥೌಟ್ ಫಿಯರ್’ ಮನಸ್ಥಿತಿ- ತೇಜಸ್ವಿಯವರ ಸ್ವತಂತ್ರ ವ್ಯಕ್ತಿತ್ವದಲ್ಲಿತ್ತು. ಯಾರ ನೇರ ಮಾರ್ಗದರ್ಶನವೂ ಇಲ್ಲದೆ, ತಾವು ಇಷ್ಟಪಟ್ಟು ಓದಿದ ಪುಸ್ತಕಗಳು; ತಾವು ಮುಕ್ತವಾಗಿ ನೋಡಲೆತ್ನಿಸುತ್ತಿದ್ದ ಜನಜೀವನ; ಲೋಹಿಯಾವಾದದ ಕಣ್ಣಿನ ಮೂಲಕ ಗ್ರಹಿಸಿದ ಚರಿತ್ರೆ ಹಾಗೂ ಸಮಕಾಲೀನ ಭಾರತ…ಇವೆಲ್ಲವನ್ನೂ ಅರಿತು ತೇಜಸ್ವಿ ಬರೆಯುತ್ತಾ ಹೋದರು. ತಮ್ಮ ಹುಡುಕಾಟದ ಭಾಗವಾಗಿಯೇ ಹಲವು ಶಿಸ್ತುಗಳ ಬೆನ್ನು ಹತ್ತಿದರು…ಅದು ಎಂದೂ ಅವರಿಗೆ ಜೀತವಾಗಲಿಲ್ಲ!
ಇಷ್ಟಾಗಿಯೂ. ಮಾನವಿಕ ವಿಜ್ಞಾನಗಳ ಅಥವಾ ಸಾಹಿತ್ಯ ಕ್ಷೇತ್ರಗಳ ಸಂಶೋಧಕ, ಸಂಶೋಧಕಿಯರಿಗೆ ತೇಜಸ್ವಿ ಮಾರ್ಗದ ಜೊತೆಗೇ ಹಲವು ಮಾರ್ಗಗಳಿವೆ. ಅವರ ಎದುರು ಡಿ. ಆರ್. ನಾಗರಾಜರಂತೆ ಪಠ್ಯದ ನಿಕಟ ಓದು ಮತ್ತು ಫಿಲಸಾಫಿಕಲ್, ಐಡಿಯಲಾಜಿಕಲ್, ಥಿಯರಿಟಿಕಲ್ ಗ್ರಹಿಕೆಗಳ ಮಾರ್ಗವಿದೆ; ಎಡ್ವರ್ಡ್ ಸೈದ್ ಅವರಂತೆ ಪಠ್ಯಗಳನ್ನು ಸೃಷ್ಟಿಸುವ ಕಾಲಘಟ್ಟಗಳು, ಆ ಕಾಲಘಟ್ಟಗಳ ತಾತ್ವಿಕತೆಗಳು ಇವೆಲ್ಲ ಸೇರಿ ಕೆಲ ಬಗೆಯ ಸತ್ಯಗಳನ್ನು ಬರೆಸುವ ರೀತಿಯನ್ನು ಅಧ್ಯಯನ ಮಾಡುವ ಮಾರ್ಗವಿದೆ; ನೋಮ್ ಚಾಮ್ಸ್ಕಿಯವರಂತೆ ಪ್ರತಿದಿನದ ರಾಜಕಾರಣದ ಹಿಂದೆ ಕೆಲಸ ಮಾಡುತ್ತಿರುವ ಜಾಗತಿಕ ಯಜಮಾನಿ ಶಕ್ತಿಗಳನ್ನು ಗ್ರಹಿಸುವ ತೀಕ್ಷ್ಣ ಮಾರ್ಗವಿದೆ. ಇವೆಲ್ಲಕ್ಕೆ ಮೂಲ ಸ್ಫೂರ್ತಿಯಂತೆ ೨೦೭ ವರ್ಷಗಳ ಕೆಳಗೆ ೧೮೧೮ರ ಮೇ ೫ ರಂದು ಹುಟ್ಟಿದ ಕಾರ್ಲ್ ಮಾರ್ಕ್ಸ್ ಅಪಾರ ಬಡತನವನ್ನು ಸಹಿಸಿಕೊಂಡು, ಚರಿತ್ರೆ, ಫಿಲಾಸಫಿ, ಅರ್ಥಶಾಸ್ತ್ರ, ಸಾಹಿತ್ಯ ಎಲ್ಲವನ್ನೂ ಆಳವಾಗಿ ಓದಿ, ವಿಶ್ವವಿಮೋಚನೆಗಾಗಿ ಮಾಡಿದ ಅನನ್ಯ ಸಂಶೋಧನೆಯ ಮಾರ್ಗವಿದೆ… ಇವು ತಕ್ಷಣಕ್ಕೆ ಹೊಳೆದ ಉದಾಹರಣೆಗಳಷ್ಟೆ…
ಇದೆಲ್ಲ ಆಗುವುದು ಎಲ್ಲ ಬಗೆಯ ಬೌದ್ಧಿಕ ಕೆಲಸವೂ ನಿಜಕ್ಕೂ ನಾವು ತೊಡಗುವ ಸೃಜನಶೀಲ ಆಟ ಹಾಗೂ ಮಹಾಜವಾಬ್ದಾರಿಯ ಕಾಯಕ ಎಂದು ನಮ್ಮ ಆಳದಲ್ಲಿ ಅನ್ನಿಸಿದಾಗ ಮಾತ್ರ. ಆಗ ಮಾತ್ರವೇ ಗಂಟೆಗಟ್ಟಲೆ ಅನ್ನ, ನೀರು, ಹೊರಗಿನ, ಒಳಗಿನ ಕಿರಿಕಿರಿ ಯಾವುದರ ನೆದರೂ ಇಲ್ಲದೆ ನಾವು ನಮ್ಮ ಲೋಕದಲ್ಲಿ ಮುಳುಗುವುದು. ಮಾನವಜೀವಿಯ ದುರದೃಷ್ಟ: ಅಂಥ ಸ್ಥಿತಿ ಸದಾ ದಕ್ಕುವುದಿಲ್ಲ. ಆದರೆ ಒಮ್ಮೆ ಈ ಜೀವನಮಾರ್ಗ ಅಥವಾ ಸ್ಥಿತಿ ರೂಢಿಯಾಯಿತೆಂದರೆ, ಯಾವುದೂ ನಮ್ಮನ್ನು ಈ ತಪಸ್ಸಿನಿಂದ ಕದಲಿಸಲಾಗದು. ಎಂಥ ನುರಿತ ಆಟಗಾರ್ತಿಯೂ ಕೂಡ ಕೆಲವು ದಿನ ಪ್ರಾಕ್ಟೀಸ್ ಬಿಟ್ಟರೆ ಅವಳ ಆಟ ತನ್ನ ಖದರ್ ಕಳೆದುಕೊಳ್ಳುತ್ತದೆ; ಹಾಗೇ ಸಂಶೋಧನೆ ಕೂಡ.
ತೇಜಸ್ವಿ ರಿಸರ್ಚನ್ನು ಎಂದೂ ತಮ್ಮ ಹೊರಗೆ ಇರುವ ಕೆಲಸ ಅಂದುಕೊಂಡಂತಿಲ್ಲ; ಹಾಗಾಗಿಯೇ ಅವರಿಗೆ ಅದು ಜೀವನವಿಧಾನ ಆದಂತಿದೆ; ಒಮ್ಮೆ ಅದೊಂದು ಜೀವನವಿಧಾನ ಆದ ನಂತರ, ಇಲ್ಲಿಂದ ಹೊರಬೀಳಬೇಕು, ಇಲ್ಲಿಂದ ಓಡಿಹೋಗಬೇಕು ಎಂಬ ತಹತಹವೇ ಹುಟ್ಟಲಾರದು. ಅದು ಕೂಡ ‘ವರ್ಕ್’. ಆಗ ಈ ’ವರ್ಕ್’ ಮಾರ್ಕ್ಸ್ ಹೇಳುತ್ತಿರುವ ‘ವರ್ಕರ್’ನ ಅನುಭವದಂತೆ ಅನಾಥ ಭಾವ ಹುಟ್ಟಿಸುವುದಿಲ್ಲ. ಮಾರ್ಕ್ಸ್ ಹೇಳುತ್ತಿರುವ ಬಂಡವಾಳಶಾಹಿ ಲೋಕದ ‘ವರ್ಕರ್’ನ ಅನುಭವವು ಸ್ವತಂತ್ರನಾದ, ತನ್ನ ಕೆಲಸವನ್ನು ಇಷ್ಟ ಪಡುವ ಬಡಗಿಗೆ, ಮೆಕ್ಯಾನಿಕ್ಕಿಗೆ ಪೂರಾ ಅನ್ವಯಿಸಲಾರದು. ವಿಮರ್ಶಕನೊಬ್ಬ 'ವರ್ಕ್ಸ್ ಆಫ್ ಶೇಕ್ಸ್ಪಿಯರ್’ ಎಂದರೆ ಕೇವಲ ‘ಶೇಕ್ಸ್ಪಿಯರ್ ಕೃತಿಗಳು’ ಎಂದು ಅರ್ಥವಲ್ಲ; ಬದಲಿಗೆ, ಶೇಕ್ಸ್ಪಿಯರನ 'ಕೆಲಸ’; ಅವನು ನಾಟಕವೊಂದರ ಮೇಲೆ ವರ್ಕ್ ಮಾಡುತ್ತಿದ್ದ ರೀತಿ; ಅವನು ಪಡುತ್ತಿದ್ದ ಶ್ರಮ… ಇವನ್ನೆಲ್ಲ ‘ವರ್ಕ್ಸ್’ ಸೂಚಿಸುತ್ತದೆ; ಇವೆಲ್ಲ ಕಾರಣಗಳಿಂದಾಗಿ ಇವು 'ವರ್ಕ್ಸ್ ಆಫ್ ಶೇಕ್ಸ್ಪಿಯರ್’ ಎಂದಿದ್ದ. ಈ ವಿವರಣೆಯ ಬಗ್ಗೆ ಮೊದಲು ನನ್ನ ಗಮನ ಸೆಳೆದವರು ಹಿರಿಯರಾದ ಕಿ.ರಂ. ನಾಗರಾಜ್.
ಈ ಮಾತು ಬರೆಯುತ್ತಿರುವಾಗ ಕಿ.ರಂ. ಒಮ್ಮೆ ಕುಮಾರವ್ಯಾಸನ ಕೃಷ್ಣನ ಬಗ್ಗೆ ಪಾಠ ಮಾಡಲು ಮಾಡಿದ ರಿಸರ್ಚ್ ನೆನಪಾಯಿತು. ಅವರದೇ ಮಾತಿನಲ್ಲಿ ಕೇಳಿಸಿಕೊಳ್ಳಿ: ‘ಏನ್ಸಾರ್! ಆಗಿನ್ನೂ ಹೊಸದಾಗಿ ಎಂ.ಎ. ಕ್ಲಾಸಿಗೆ ಪಾಠ ಹೇಳ್ತಾ ಇದ್ದೆ… ಆ ಕ್ಲಾಸಲ್ಲಿ ಅಗ್ರಹಾರ ಕೃಷ್ಣಮೂರ್ತಿ…ಈ ಥರದ ಶಾರ್ಪ್ ಹುಡುಗರು…ನಾನು ಏನಾದ್ರೂ ಹೊಸದಾಗಿ ಹೇಳಬೇಕಲ್ಲ ಅಂತ ಯೋಚನೆ ಮಾಡ್ದೆ…ಇದ್ದಕ್ಕಿದ್ದಂತೆ ಲೋಹಿಯಾ ಸಾಹೇಬರ 'ರಾಮ ಕೃಷ್ಣ ಶಿವ’ ಲೇಖನ ತಗೊಂಡು ರಾತ್ರಿಯೆಲ್ಲ ಓದಿದೆ…ನಾಳೆ ಕ್ಲಾಸಲ್ಲಿ ಕೃಷ್ಣಾ ಕ್ಯಾರಕ್ಟರ್ ಬೇರೆ ಥರ ಎಮರ್ಜ್ ಆಯ್ತು…’
ಇದಾದ ಹಲ ವರ್ಷಗಳ ನಂತರ ಇದನ್ನೆಲ್ಲ ನೆನಸಿಕೊಂಡು ಹೇಳುತ್ತಿದ್ದ ಕಿ.ರಂ. ಮೋರೆಯಲ್ಲಿ ದಶಕಗಳ ಹಿಂದಿನ ‘ಪಾಠರತಿ’ಯ ರಂಗು ಹಾಗೇ ಏರಿದಂತಿತ್ತು! ಅದನ್ನು ಒಮ್ಮೆ ‘ಪಾಠರತಿ’ ಎಂದು ಕರೆದವರು ಲಕ್ಷ್ಮಿನಾರಾಯಣ ಭಟ್ಟರು! ತರುಣ ಕಿ.ರಂ. ಕುಮಾರವ್ಯಾಸ ಅಥವಾ ಲೋಹಿಯಾ ಲೇಖನವನ್ನು ಜೀತದಂತೆ ಓದಿರಲಿಲ್ಲ…ಆಟದಂತೆ ಓದಿದ್ದರು…ಆದ್ದರಿಂದಲೇ ಅವರ ಓದಿನ ಆಟ ಸದಾ ಸೃಜನಶೀಲವಾಗಿತ್ತು…ನಾವು ಮಾಡುವ ಕೆಲಸ ಹೀಗೆ ಆಟವಾಗುವ ಗಳಿಗೆಗಳು ಹೆಚ್ಚುತ್ತಿರಲಿ!
ಇವೆಲ್ಲ ಬರೆಯುವಾಗ ಇದೇ ಐಡಿಯಾ ಕುರಿತ ಲಂಕೇಶರ ನೀಲು ಪದ್ಯ ತಲೆಯೊಳಗೆ- ಛೆ! ಛೆ! ನೀಲು ಪದ್ಯವಾದ್ದರಿಂದ ಮೈಯೊಳಗೆ- ಸುತ್ತುತ್ತಿತ್ತು. ಅದನ್ನು ಹುಡುಕಲು ನೂರಾರು ನೀಲು ಪದ್ಯಗಳನ್ನು ಹುಡುಕುತ್ತಾ, ಗಂಟೆಗಟ್ಟಲೆ ನೀಲು ಮಿಂಚುಕಾವ್ಯಲೋಕದಲ್ಲಿ ಕಳೆದು ಹೋದೆ. ಲಂಕೇಶ್ ತಮ್ಮ ಪ್ರತಿ ಬರವಣಿಗೆಯಲ್ಲೂ ಈ ಆಟದ ಆನಂದ ಅನುಭವಿಸಿರುವುದು ನನ್ನ ಅನುಭವಕ್ಕೂ ಬರತೊಡಗಿತು. ಆದರೆ ಆ ನೀಲು ಮಿಂಚುಕಾವ್ಯ ಮಾತ್ರ ಸಿಕ್ಕಲಿಲ್ಲ. ಅದು ಕೊನೆಗೆ ಗೆಳೆಯ ಐಜೂರ್ ಬಾಯಲ್ಲೇ ಇತ್ತು:
ನನ್ನ ಕೆಲಸ ನನಗೆ
ನನ್ನಹೃದಯದ ಪ್ರೀತಿಯಂತೆ
ಹರ್ಷ ಕೊಡದಿದ್ದರೆ
ಅದು ಜೀತ.
-ನೀಲು
Comments
13 Comments
| Dr.P.Nanjunda
ಸರ್ ತೇಜಸ್ವಿ ಅವರ ಸಂಶೋಧನಾ ಬಹು ಶಿಸ್ತ್ರೀಯ ಆಯಾಮಗಳು,ಇಂದಿನ ನವ ಸಂಶೋಧಕರಿಗೆ ಅಗತ್ಯ ಎಂದಿನೆಸುತ್ತದೆ. ಗೈಡುಗಳು ಮತ್ತು ಸಂಶೋಧಕರು ಒಟ್ಟಾಗಿ ಬೌದ್ಧಿಕವಾಗಿ ಕಲೆತರೆ ಹಾಗೂ ಬೆರೆತರೆ ಮಾತ್ರ ಸಮಾಜಕ್ಕೆ ಬೌದ್ದಿಕ ಕಾಣ್ಕೆ ಯನ್ನು ನೀಡಬಹುದು,ಇಲ್ಲವಾದರೆ ಪದವಿಗಾಗಿ ಶೋಧನೆ ಮಾಡಲು ಹೋದರೆ,ಬಡ್ತಿಗಾಗಿ ಮಾರ್ಗ ತೋರಿದರೆ ಮುಕ್ತ ಸ೦ಶೋಧನೆ ದೊರಕದೆ,ಪರಸ್ಪರ ಹೊಂದಾಣಿಕೆ ( ಜೀತ ) ಪರಂಪರೆ ಮುಂದುವರೆಯುತ್ತದೆ. ಕಿ.ರಂ ಸರ್ ಅವರ ಜಂಗಮ ಕೇಂದ್ರಿತ ಶೋಧನೆ ಇಂದಿನ ನವಮಾರ್ಗ ಕಾರರಿಗೆ ಮತ್ತು ನವ ಶೋಧನ ಕಾರರಿಗೆ ಅಗತ್ಯವಿನಿಸುತ್ತಿದೆ. ಹುಡುಕಾಟ ಹುಡುಗಾಟವಾದರೆ (ಹುಡುಗಿಯಾಟ) ನಿಜವಾದ ಶೋಧನೆ ದೊರಕಬಹುದು. ಬಿ.ಜಿ.ಎಲ್ ಸ್ವಾಮಿ ಹಸಿರು ಹೊನ್ನು
| Banjagere Jayaprakash
ಅದು ಅವನ ಸ್ವಂತ ಇಚ್ಛೆಯಿಂದ ಮಾಡುವ ಕೆಲಸಾಗಿಲ್ಲದಿರುವುದರಿಂದ ಹುಟ್ಟುವ ಉದಾಸ ಭಾವ ಆ ಇಡೀ ಕೆಲಸದ ಸತ್ವವನ್ನೂ, ಕೆಲಸಗಾರನ ಸಂತೋಷವನ್ನೂ ಕೆಡಿಸುತ್ತದೆ ಎಂಬ ಮಾರ್ಕ್ಸ್ ನ ಮಾತನ್ನು ಬಹಳ ಚೆನ್ನಾಗಿ ಅನ್ವಯಗೊಳಿಸಿ ಹೇಳಿದ್ದೀರಿ. ಸಂಶೋಧನೆಯೊಂದು ಅರಿಯುವ, ಹೊಸತನ್ನು ಅರಸುವ ಆಟದಂತಿದ್ದರೆ ಸಂಶೋಧನಾ ವಿದ್ಯಾರ್ಥಿಗಳು ಬಹಳ ಮಹತ್ವದ ಕೊಡುಗೆಯನ್ನು ನೀಡಬಲ್ಲವರಾಗುತ್ತಿದ್ದರೇನೋ.
| ಮಂಜುನಾಥ್ ಸಿ ನೆಟ್ಕಲ್
ನಾವು ಮೊದಲು ಮಾಡುವ ಕಾಯಕವನ್ನು ಪ್ರೀತಿಸಬೇಕು ಹಾಗೆಯೇ ಪ್ರತಿಯೊಂದು ಕೆಲಸವನ್ನೂ ಆನಂದಿಸಬೇಕು ಅಥವಾ ಎಂಜಾಯ್ ಮಾಡಬೇಕು...ಆಗ ಯಾವ ಉದ್ಯೋಗವೂ ಶ್ರಮದಾಯಕ ಅನಿಸುವುದಿಲ್ಲ... ಕೆಲಸದ ಮಧ್ಯೆ ಬಿಡುವು ಎಂದರೆ ಬೇರೊಂದು ಕೆಲಸಕ್ಕೆ ಶಿಫ್ಟ್ ಆಗುವುದು. ಹೀಗೆ ಇನ್ನೂ ತತ್ವಗಳನ್ನು ಹೇಳುತ್ತಾ ತಮ್ಮ ತಮ್ಮ ವೃತ್ತಿಯನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ನನ್ನ ಕೆಲಸ ನನಗೆ ನನ್ನಹೃದಯದ ಪ್ರೀತಿಯಂತೆ ಹರ್ಷ ಕೊಡದಿದ್ದರೆ ಅದು ಜೀತ. -ನೀಲು ಆದರೆ ಲಂಕೇಶರು ಈ ನೀಲು ಪದ್ಯದ ಕೇವಲ ಒಂದೇ ಸಾಲು ಈ ಎಲ್ಲಾ ತಾತ್ವಿಕತೆಯನ್ನು ಅಡಕವಾಗಿ ಹಿಡಿದಿಟ್ಟಿದ್ದಾರೆ... ಇದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್ ಈ ಲೇಖನ ಪ್ರತಿಯೊಬ್ಬರಲ್ಲೂ ತಮ್ಮ ತಮ್ಮ ವೃತ್ತಿಯನ್ನು ಆನಂದಿಸುವ ಹಾಗೆ ಮಾಡಲು ಪ್ರೇರಣೆ ನೀಡುತ್ತಾ ಸ್ಫೂರ್ತಿದಾಯಕವಾಗಿದೆ ಜನ ತಮ್ಮ ವೃತ್ತಿ ಜೀವನದ ಬಗ್ಗೆ
| Dr.Aiyasha
ಸರ್ ನೀವು ಹೇಳಿದಂತ ಮಾತು ನನ್ನ ಪಿಹೆಚ್ಡಿ ಮಾಡುವ ಸಂದರ್ಭದ ಘಟನೆ ನೆನಪಾಗುತ್ತದೆ .ನನಗೆ ಕಿರಂ ಕೊಟ್ಟಂತಹ ಶೀರ್ಷಿಕೆ ಬೇರೆ ಇತ್ತು .ಆದರೆ ನನಗೆ ನನ್ನ ಮಾರ್ಗದರ್ಶಕರು ನೀಡಿದ ವಿಷಯವೇ ಬೇರೆಯಾಗಿತು. ಇಷ್ಟವಿಲ್ಲದಿದ್ದರೂ ಇಷ್ಟಪಟ್ಟು ಮಾಡಬೇಕಾದ ಸಂದರ್ಭ ಹೀಗಾಗಿ ನೀವು ಆ ದಿನ ಬಳಸಿದ ಜೀತ ಅನ್ನುವ ಶಬ್ದ ಸರಿಯೇ ಎನಿಸುತ್ತದೆ..
| ಕುಸುಮ ಬಿ. ಎಂ
ನಿಮ್ಮ ಬರಹ ಇಂದಿನ ಸಂಶೋಧನೆಯ ಬಹುಮುಖಿ ನೆಲೆಯನ್ನು ಚರ್ಚಿಸುತ್ತದೆ ಸರ್. ಸಂಶೋಧನೆಗಳ ಮಿತಿ ಸಂಶೋಧಕರ ಮಿತಿಯ ಜತೆಗೆ ಸಂಶೋಧನೆಯಲ್ಲಿ ಸ್ವಾತಂತ್ರ್ಯವೂ ಹೆಚ್ಚು ಕೊಡುಗೆ ನೀಡಬಲ್ಲದು ಎಂಬುದು ತೇಜಸ್ವಿಯವರ ಸಂಶೋಧನೆಯಿಂದ ಕಾಣಬಹುದು.
| ಎಂ.ಜಿ. ಚಂದ್ರಶೇಖರಯ್ಯ
'ಕನ್ನಡ ಸಾಹಿತ್ಯದಲ್ಲಿ ಯುದ್ಧ' ಎಂಬ ವಿಷಯ ಕುರಿತು ಪಿಎಚ್ಡಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಪ್ರೊ.ಎಚ್. ಎಂ.ಚನ್ನಯ್ಯನವರು "ಈಗ ಫ್ರೀ ಇದೀನಿ, ಗೈಡ್ ಆಗ್ತೀನಿ, ಬಂದು ರಿಜಿಸ್ಟ್ರೇಷನ್ ಮಾಡಿಸು" ಎಂದಿದ್ದರು. ಅದೇವೇಳೆಗೆ ಯುಜಿಸಿಯವರು ಪಿಎಚ್ಡಿ ಮಾಡಿದವರಿಗೆ ಒಂದು ಇನ್ಕ್ರಿಮೆಂಟ್, ಬಡ್ತಿಯಲ್ಲಿ ರಿಯಾಯಿತಿ ಘೋಷಣೆ ಮಾಡಿದ್ದರು. ಆಕಸ್ಮಿಕವಾಗಿ ಭೇಟಿಯಾದ ನನ್ನ ಆತ್ಮೀಯ ಗೆಳೆಯ ರಾಮಮೂರ್ತಿ "ಲೋ, ಪ್ರೊಮೋಷನ್ ಕೊಡ್ತಾರೆಂದು ಪಿಎಚ್ಡಿ ಮಾಡ್ತೀಯ?" ಎಂದದ್ದು ಎದೆಯೊಳಗೆ ನಾಟಿಕೊಂಡು ಸಂಶೋಧನೆಗೆ ಎಳ್ಳು-ನೀರು ಬಿಟ್ಟೆ. ಈ ಬಯಕೆ ಸುಪ್ತವಾಗಿದ್ದರೂ ಅದು ಕೂಡ ಜೀತ ಆಗಬಹುದು ಎಂದು ಈಗ ಅನಿಸುತ್ತಿದೆ. ಆದರೆ ಒಂದು ಪದವಿಗಾಗಿ, ತಿಳಿವಳಿಕೆಗಾಗಿ ಅಲ್ಲ, ನಮ್ಮ ಅನೇಕ ಯುವಕ/ಯುವತಿಯರು ಪಡುವ ಪಾಡು ನೋಡಿದರೆ ನೀವು ಹೇಳಿದ ಜೀತ ಕೂಡ ಅದನ್ನು ವ್ಯಕ್ತ ಮಾಡಲಾರದೇನೊ!!?
| Nataraj Huliyar Replies
Dear MGC, Your Ph.D experience is hilarious sir!
| Dr.Prabhakar
Your research Jeetha is fantastic. As you rightly pointed out one can not feel that 'aloukika ananda' unless fully lived it while working. But that boredom or jeetha haunts all of us one time or the other. Even Tejaswi in his karvalo expresses this when he says he wanted to get rid of the ordeals of agriculture and related hardship by selling his lands and move out of this, in spite of being surrounded by nature, which he loved most. Lankesh's Neelu lines just speak about the whole gamut of this. Amazingly brilliant lines! Thanks for taking me to the deeper world of research!!
| Chandrashekhara Talya
ತೇಜಸ್ವಿ, ಲಂಕೇಶ್ ಗೆ ಅವರ ಎತ್ತರಕ್ಕೂ ಡಾ ಗಳ ಸುರಿ ಮಳೆಯನ್ನೇ ಸುರಿಸಬಹುದು, ಅವರ ಸಾಧನೆ ಅಷ್ಟು ಎತ್ತರದ್ದು, ಆದರೆ ಅವರು ಅದಕ್ಕೆ ಕವಡೆ ಕಿಮ್ಮತ್ತನ್ನೂ ಕೊಟ್ಟವರಲ್ಲ, ಸಹಜ ಹಾಗೂ ಸ್ವಯಂಪ್ರೇರಿತ, ಸ್ವ-ಆಸಕ್ತಿಯ ಕ್ರಿಯಾಶೀಲ ಓದು ಬರಹಕ್ಕಷ್ಟೇ ಅವರು ಗಮನ ಹರಿಸಿದ್ದರು, ಆದುದರಿಂದಲೇ ಅವರು ಈಗಲೂ ತಾಜಾ ಆಗಿ ಕಾಣಿಸಬಲ್ಲರು. ಈಗಿನ ಗುಲಾಮೀ ಡಾ ಉದ್ಯೋಗ ಅವರದಾಗಿರಲಿಲ್ಲ. ನಿಮ್ಮ ನೋಟ ಪ್ರಾಮಾಣಿಕ.
| Khajane
Good piece
| ಗುರು ಜಗಳೂರು
ರಿಸರ್ಚ್ ಜೀತ ಪದ್ದತಿ.ಸರಿಯಾಗಿಯೇ ಇದೆ ಆದರಿಂದ ಹೊರಬರುವ ಯಾವುದೇ ಥೀಸಿಸ್ ಗಳು ಕಾಣೆಯಾಗಿರುತ್ತವೆ ಮತ್ತು ಅದರಲ್ಲಿ ಬರೀ ಬೂಸಾ ಇರುತ್ತದೆ.ಇದನ್ನು ವಿಜ್ಞಾನದ ವಿಭಾಗಕ್ಕೂ ಅನ್ವಯಿಸಬಹುದು.ಅದಕ್ಕಾಗಿ ನಮ್ಮಲ್ಲಿ ಯಾವುದೇ ಹೊಸ ಸಂಶೋಧನೆಗಳು ಬರುವುದಿಲ್ಲ.ನಮ್ಮವರೇ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮಾಡುವ ಸಾಧನೆಗಳನ್ನು ನೋಡುತ್ತಿರುತ್ತೇವೆ.ಏಕೆಂದರೆ ಅಲ್ಲಿನ ವಾತಾವರಣ ಹಾಗೆ ಇರುತ್ತದೆ. ತೇಜಸ್ವಿಯವರು 90ದಶಕದಲ್ಲಿ ಮತ್ತು ಇತ್ತೀಚಿನ ವರೆಗೂ ಅತೀ ಹೆಚ್ಚು ಯುವ ಓದುಗರನ್ನು ಸೆಳೆದವರು.ಪರಿಸರದ ಕಥೆ ಕೃತಿ ಬಂದಾಗ ನನಗೆ ಇನ್ನೂ ನೆನಪಿದೆ.ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹರಿದಾಡಿದ ಕೃತಿ.ತೇಜಸ್ವಿ ಅಭಿಮಾನ ಬಳಗ ನಮ್ಮಲ್ಲಿ ಒಬ್ಬ ಚಿತ್ರನಟನ ಸ್ಟಾರ್ ವ್ಯಾಲ್ಯೂ ಥರ ಚಾಲನೆಯಲ್ಲಿತ್ತು.ಇದೀಗ ಕಸ್ತೂರಿ ಮಾಸಿಕದಲ್ಲಿ ಕರ್ವಾಲೋ ಗೆ 50 ವರ್ಷ ಎಂಬ ಒಂದು ಒಳ್ಳೆಯ ವಿಮರ್ಶೆ ಬಂದಿದೆ.ಅದರಲ್ಲಿ ಹೇಳಿದಂತೆ ತೇಜಸ್ವಿಯವರ ಈ ಕೃತಿ ಹಿಂದಿನ ವ್ಯಕ್ತಿ ಕೇಂದ್ರದಿಂದ ಸಮಷ್ಟಿಯ ಅಥವಾ ಒಟ್ಟಾರೆ ಪರಿಸರದ ಬಗ್ಗೆ ಹೊರಳಿದ ಮೊದಲ ಕಾದಂಬರಿ ಎಂಬುದು ಮಹತ್ವದ ಮಾತು. ಹಾಗಾಗಿ ಇವರ ಕೃತಿಗಳು ಇಂದಿಗೂ ಮಾರಾಟದಲ್ಲಿ ಕಡಿಮೆಯಾಗಿಲ್ಲ.ನಮ್ಮ ಪಕ್ಕದ ಅಂಗಡಿಯವರು ಪಕ್ಜಾ RSS . ನಾನು ತೇಜಸ್ವಿಯವರ ಪುಸ್ತಕಗಳನ್ನು ಮಾರಾಟ ಮಡುವುದನ್ನು ನೋಡಿ ಕುತೂಹಲ.ಅವರಿಗೆ ಇವನ್ನು ಓದಲು ಹೇಳಿದಾಗ ಬೆಚ್ಚಿಬಿದ್ದರು.ಬಹುಶಃ ಅದರಲ್ಲಿ RSS ಗೆ ಬೈದಿರಬಹುದೆಂದು.ಓದಿದ ಅವರು ಖುಷಿಗೊಂಡು ಬೇರೆ ಗೆಳೆಯರಿಗೆ ಹೇಳಿದ್ದು ನೆನಪಿದೆ.ಪೂರ್ಣಚಂದ್ರ ಗೊಟ್ಟಿಗೆರೆಯಲ್ಲಿ ಪ್ರಾರಂಭ ಆದದ್ದು ಖುಷಿ.ಅದು ಮತ್ತೊಂದು ಕುಪ್ಪಳಿ ,ಮೂಡಿಗೆರೆಯಾಗಲಿ.
| ದೇವಿಂದ್ರಪ್ಪ ಬಿ.ಕೆ.
ರಿಸರ್ಚ್ ಜೀತ ಪದ್ಧತಿ ಲೇಖನ ಓದಿದ ತಕ್ಷಣ ಶಾಕ್ ಆದೆ. ಈ ಪದ ಬಹಳ ದಿನಗಳ ನಂತರ ಮನವರಿಕೆ ಆಯ್ತು. ನಾವೆಲ್ಲ ಏನೇನೋ ಕನಸನ್ನು ಹೊತ್ತುಕೊಂಡು ವಿವಿಗೆ ರಿಸರ್ಚ್ ಮಾಡಲು ಬರುತ್ತೇವೆ. ಆದರೆ ವಿಷಯದ ಆಯ್ಕೆಯಿಂದ ಹಿಡಿದು ಅಂತಿಮ ಮಹಾಪ್ರಬಂಧ ಸಲ್ಲಿಕೆಯವರೆಗೂ ಮಾರ್ಗದರ್ಶಕರು ವಿದ್ಯಾರ್ಥಿಯ ಆಯ್ಕೆಗೆ ಬಿಡಬೇಕು ಆಗ ಅದು ಜೀತವಾಗುವುದಿಲ್ಲ. ಆದರೆ ಇತ್ತೀಚಿನ ಬಹುತೇಕ ಸಂಶೋಧನೆಗಳು ಕಳಪೆ ಗುಣಮಟ್ಟದ್ದು ಎಂಬ ವರದಿಗಳು ಬಂದಿವೆ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ ತೇಜಸ್ವಿಯ ಹಾಗೆ ರೆಬೆಲ್ ಆಗಿ ಮಾತಾಡುವ, ಬರೆಯುವ ಸ್ವಾತಂತ್ರ್ಯ ಸಿಕ್ಕರೆ ಬಹುತೇಕ ಸಂಶೋಧನೆ ಜೀತ ಪದ್ಧತಿ ಆಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಲಂಕೇಶ್ ಅವರು ಹೇಳುವ ಹಾಗೆ ಇಷ್ಟವಿಲ್ಲದವನ ಕಿರು ಬೆರಳು ಕೂಡ ನರಕದಂತೆ ಕಾಣಿಸುತ್ತದೆ ಎಂಬ ಮಾತು ಅನ್ವಯಿಸಿ ಹೇಳಬಹುದು.
| ಡಾ. ನಿರಂಜನ ಮೂರ್ತಿ ಬಿ ಎಂ
ಸಂಶೋಧನೆಯ ಹಲವು ಮಾರ್ಗಗಳನ್ನು ವಿವರಿಸುವ ಹುಳಿಯಾರರ ಈ ಲೇಖನ ಸಂಶೋಧಕರಿಗೆ ದಾರಿದೀಪವಾಗಿದೆ. ಸಂಶೋಧನೆ ಜೀತವಾಗುವುದರಿಂದ ಹಿಡಿದು ಆಟವಾಗುವ ಹಂತದವರೆಗಿನ ವಿವಿಧ ಮುಖಗಳನ್ನು ಪರಿಚಯಿಸುವ ಲೇಖಕರ ವಿಧಾನ ಮನಸಿನಾಳಕ್ಕೆ ಇಳಿಯುತ್ತದೆ. ಹಲವು ಬಾರಿ ಬಳಸಿರುವ ಸಂಶೋಧನಾ ಜೀತಪದ್ಧತಿ, ಪಾಠರತಿ ಮುಂತಾದ ಪದಪುಂಜಗಳು ಮುದನೀಡುತ್ತವೆ. ಕೊನೆಯ ನೀಲು ಕವನ ಅಗದೀ ಚೆಂದ!
Add Comment