ಕೊಂದವರುಳಿಯುವರೆ?

 ಭಾಗ: ೧

ಬರೆವ ಬದುಕಿನ ವ್ಯಕ್ತಿಯೊಬ್ಬ ಮತ್ತೆ ಮತ್ತೆ ಕೆಲವು ವಸ್ತುಗಳಿಗೆ ಮರಳುವುದು ಸಾಮಾನ್ಯ. ಕತೆ, ಅಂಕಣ, ನಾಟಕ, ಕಾವ್ಯ, ರಾಜಕೀಯ ವಿಶ್ಲೇಷಣೆ… ಹೀಗೆ ಹಲವು ಪ್ರಕಾರಗಳ ಮೋಹನ ಮುರಳಿಗಳು ಕರೆಯುವ ನನ್ನಂಥವನಿಗಂತೂ ಈ ಅನುಭವ ಇನ್ನಷ್ಟು ಸಾಮಾನ್ಯ. ನನ್ನ ಕೆಲವು ಕತೆಗಳು ಪ್ರಕಟವಾದ ಹತ್ತಾರು ವರ್ಷಗಳ ನಂತರ ಕೂಡ ಈ ಕತೆಗಳು ಬೆಳೆದ ವಿಸ್ಮಯವನ್ನು ನನ್ನ ೨೦೨೩ರ ಕಥಾಸಂಕಲನ (ಪಲ್ಲವ ಪ್ರಕಾಶನ) ‘ಕಥಾನಂತರ’ದಲ್ಲಿ ಶೋಧಿಸಲೆತ್ನಿಸಿದ್ದೆ…

ಇದನ್ನೆಲ್ಲ ಹೇಳಬೇಕಾಗಿ ಬಂದಿದ್ದು ಈಚೆಗೆ ಎರಡು ಹಳೆಯ ಪ್ರಶ್ನೆಗಳು-ಎರಡು ಹಳೆಯ ವಸ್ತುಗಳು- ಮತ್ತೆ ನನ್ನೊಳಗೆ ಸುತ್ತತೊಡಗಿದ್ದರಿಂದ.

ಒಂದು:  ನಮ್ಮ ಅರಿವು, ಜ್ಞಾನ, ತಿಳಿವಳಿಕೆ ಇವೆಲ್ಲ ಸದಾ ಯಾಕೆ ನಮ್ಮ ನೆನಪಿಗೆ ಬಂದು ನಮ್ಮ ಕೈ ಹಿಡಿಯುವುದಿಲ್ಲ?  

ಎರಡು: ನಾವು ಮಾತಾಡುವಾಗ ಅನೇಕ ಸಲ ಮಾತಾಡುವಾಗ ನ್ಯಾಯವಾದ ಅಭಿಪ್ರಾಯ ಹೇಳದೆ ನಮ್ಮ ಪೂರ್ವಗ್ರಹಗಳನ್ನೇ ಬಿತ್ತುತ್ತಿರುತ್ತೇವೆಯೆ? ನಾವು ನಮ್ಮೆದುರಿಗಿರುವ ಮಾನವಜೀವಿಯೊಂದು ಕಸದ ಬುಟ್ಟಿ ಎಂದುಕೊಂಡು ಅವಳ ಅಥವಾ ಅವನ ತಲೆಗೆ ನಮ್ಮ ತಲೆಯ ಕಸವನ್ನು ತುಂಬುತ್ತಿರುತ್ತೇವೆಯೇ? ಶೇಕ್‌ಸ್ಪಿಯರನ ‘ಒಥೆಲೊ’ ನಾಟಕದ ಇಯಾಗೊ  ಇಂಥವರ ಮೂಲ ಮಾದರಿಯಲ್ಲವೆ! 

ಈ ಥರದ ಪ್ರಶ್ನೆಗಳು ಈಚೆಗೆ ಇಂಥ ಪೂರ್ವಗ್ರಹ ಬಿತ್ತನೆಗಾರನೊಬ್ಬ ಕಣ್ಮುಂದೆ ಬಂದಾಗ ಮತ್ತೆ ಎದುರಾದವು. ಈ ಥರದ ‘ಪೂರ್ವಗ್ರಹ ಬಿತ್ತನೆಯ ಕಾಯಂ ಕಾರ್ಮಿಕ’ನ ಬಗ್ಗೆ ನಾನು ೧೯೯೯ರಲ್ಲಿ ‘ಲಂಕೇಶ್ ಪತ್ರಿಕೆ’ಯ ಅಂಕಣದಲ್ಲಿ ‘ಅವರ ಹೊರೆ’ ಎಂಬ ಟಿಪ್ಪಣಿ ಬರೆದಿದ್ದು ಕೂಡ ನೆನಪಾಯಿತು.  ಅದು ಹಲವು ವ್ಯಕ್ತಿಗಳ ಎಳೆಗಳು ಸೇರಿ ಮೂಡಿದ್ದ ಒಂದು ಸಂಕೀರ್ಣ ವ್ಯಕ್ತಿತ್ವ ಕೂಡ. ಇದನ್ನು ಆಗ ಓದಿದ ಗೆಳೆಯನೊಬ್ಬ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಅತಿಯಾಗಿ ತಲೆದೂಗಿ ಮೆಚ್ಚಿದ್ದ. ಈ ಮೆಚ್ಚುಗೆಯ ನಂತರ ಏನಾಯಿತು ಎಂಬ ಕತೆ ಹೇಳುವ ಮುನ್ನ ’ಲಂಕೇಶ್ ಪತ್ರಿಕೆ’ಗೆ ಬರೆದ ಟಿಪ್ಪಣಿಯಲ್ಲಿದ್ದ ಕೇಂದ್ರ ವ್ಯಕ್ತಿಯ ಜೊತೆಗಿನ ಪ್ರಶ್ನೋತ್ತರಗಳ ಸ್ಯಾಂಪಲ್‌ಗಳನ್ನು, ಗ್ರಹಿಕೆಗಳನ್ನು ಮುಂದಿನ ಭಾಗದಲ್ಲಿ ಕೊಟ್ಟಿರುವೆ:

ಭಾಗ: ೨

‘ಬಾಲ್ಯಕಾಲದ ಗೆಳೆಯ ರಾಮಚಂದ್ರ ಸಿಕ್ಕಿದ್ದನೆ?’
 ‘ಕಳ್ಳ! ಅವನೆಲ್ಲಿ ಸಿಗುತ್ತಾನೆ?' 
‘ನಮ್ಮ ಮ್ಯಾಥಮ್ಯಾಟಿಕ್ಸ್ ಮೇಷ್ಟರ ಮನೆ ಈಗ ಎಲ್ಲಿದೆ?’
 ‘ಆ ಖದೀಮ ಅವರಿವರ ದುಡ್ಡು ಹೊಡೆದು ಊರ ಹೊರಗೆ ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ!’ 
‘ಊರಲ್ಲಿ ಉಳಿದವರು ಹೇಗಿದ್ದಾರೆ?'  
ಈ ಪ್ರಶ್ನೆಗಂತೂ ಅವನು ಪ್ರತಿಯೊಬ್ಬನಿಗೂ ‘ದುಷ್ಟ’, ‘ಕೇಡಿ’, ‘ನೀಚ’ ಹರಾಮ್’ ಮುಂತಾದ ವಿಶೇಷಣಗಳನ್ನು ಕೊಟ್ಟೇ ಅವರ ಕತೆ ಹೇಳಲು ಶುರು ಮಾಡುತ್ತಿದ್ದ!

ಬಹುಕಾಲ ಕಾಣೆಯಾಗಿದ್ದ ಈ ವ್ಯಕ್ತಿ ಮತ್ತೆ ಪ್ರತ್ಯಕ್ಷನಾದಾಗ ಮೇಲೆ ಹೇಳಿದ್ದೆಲ್ಲ ನನ್ನೆದುರು ಫ್ಲ್ಯಾಷ್‌ಬ್ಯಾಕಿನಂತೆ ಮೂಡತೊಡಗಿತು: ‘ಊರಲ್ಲೇನು ವಿಶೇಷ?' ಎಂದು ನಾನು ಕೇಳುವುದನ್ನೇ ಕಾದು ಕೂತಿದ್ದವನಂತೆ, ‘ಎಲ್ಲರೂ ಕಳ್ಳರು ಕಣಯ್ಯ!’ ಎಂದು ಅವನು ಶುರು ಮಾಡಿದ. ನನಗೆ ಭಯ ಶುರುವಾಯಿತು. ಕಾರಣ, ಹತ್ತಾರು ವರ್ಷ ಕಾಲ ಅವನು ಕೊಟ್ಟ ಕನ್ನಡಕದ ಮೂಲಕ ನೂರಾರು ಜನರನ್ನು ನೋಡಿ, ಅವರೆಲ್ಲ ಖಳರೆಂದು ತೀರ್ಮಾನಿಸಿದ್ದೆ; ಇದು ನನಗೆ ಹೊಳೆದದ್ದು ನಂತರದ ವರ್ಷಗಳಲ್ಲಿ. ಆದರೆ ಕಳೆದ ಇಪ್ಪತೈದು ವರ್ಷಗಳಿಂದ ಅವನು ಮಾತ್ರ ಬದಲಾದಂತಿಲ್ಲ. ‘ಪೂರ್ವಗ್ರಹ ಬಿತ್ತನೆ’ಯ ತನ್ನ ಕಾಯಂ ಕೆಲಸವನ್ನು ಅವನು ಆರಾಮಾಗಿ ಮುಂದುವರಿಸಿದ್ದ!

ದುರಂತವೆಂದರೆ, ಅವನ ಪೂರ್ವಗ್ರಹ ಬಿತ್ತನೆಯ ಕಾಯಂ ಕಸುಬು ನನಗೆ ಗೊತ್ತಾಗುವ ಹೊತ್ತಿಗೆ ಹತ್ತಾರು ವರ್ಷಗಳು ಉರುಳಿದ್ದವು! ಅದು ತಿಳಿದದ್ದು ಕೂಡ ಆಕಸ್ಮಿಕ;  ಅದೂ ‘ದುಡ್ಡು ಹೊಡೆದು ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ’ ಎಂದು ಅವನು ವರ್ಣಿಸಿದ್ದ ಮ್ಯಾಥಮ್ಯಾಟಿಕ್ಸ್ ಮೇಷ್ಟ್ರು ಪುಟ್ಟ ಮನೆಯಲ್ಲಿ ತೀರಾ ಸಾಧಾರಣವಾಗಿ ಬದುಕುತ್ತಿದ್ದನ್ನು ನಾನೇ ಕಣ್ಣಾರೆ ಕಂಡ ನಂತರ. ಈ ನಡುವೆ ಅವನ ಪೂರ್ವಗ್ರಹ ಬಿತ್ತನೆಯಿಂದಾಗಿ ಎಷ್ಟೊಂದು ಜನ ನನಗೆ ವಿಕೃತರಾಗಿ ಕಂಡಿದ್ದರು; ಎಷ್ಟೊಂದು ಜನರ ಬಗ್ಗೆ ನನ್ನೊಳಗೇ ಅನಗತ್ಯ ಅಸಹ್ಯ ಮೂಡಿ ಅವರನ್ನು ಸುಮ್ಮ ಸುಮ್ಮನೆ ಹೀಗಳೆದಿದ್ದೆ!

ಪೂರ್ವಗ್ರಹ ಬಿತ್ತನೆಯ ವಿಕೃತರು ನಮಗರಿವಿಲ್ಲದಂತೆಯೇ ನಮ್ಮ ಜೀವಕೋಶಗಳಿಗೆ ಎಂಥ ಮಾರಕಹಾನಿ ಮಾಡಿಬಿಟ್ಟಿರುತ್ತಾರೆ ಎಂಬುದು ನನಗೆ ಸರಿಯಾಗಿ ಅರ್ಥವಾದದ್ದು ಮರಣಶಯ್ಯೆಯಲ್ಲಿದ್ದ ಸಾಹಿತಿಯೊಬ್ಬರನ್ನು ಕಂಡಾಗ. ‘ಮರಣಶಯ್ಯೆ' ಎಂದರೇನೆಂಬುದು ಸರಿಯಾಗಿ ಅರಿವಿಗೆ ಬಂದದ್ದು ಕೂಡ ಆಗಲೇ. ಆ ಸಾಹಿತಿ ಮುದುಡಿಕೊಂಡು ಹಿಡಿಯಷ್ಟಾಗಿ ಮಲಗಿದ್ದರು. ಅವರನ್ನು ಈಚಿನ ವರ್ಷಗಳಲ್ಲಿ ಭೇಟಿಯಾಗಿರಲಿಲ್ಲ. ಭೇಟಿಯಾಗದಿರಲು ವಿಚಿತ್ರ ಕಾರಣಗಳಿದ್ದವು. ಈತ ಮಹಾ ಹೊಟ್ಟೆಕಿಚ್ಚಿನ ಮನುಷ್ಯನೆಂದು ಮಿತ್ರರೊಬ್ಬರು ಹೇಳಿದ್ದರು. ಅವನು ಯಾರ‍್ಯಾರದೋ ಪುಸ್ತಕಗಳನ್ನು ತನ್ನ ಹೆಸರಲ್ಲಿ ಅಚ್ಚು ಹಾಕಿಸಿಕೊಳ್ಳುತ್ತಾನೆಂದೂ ಹೇಳಿದ್ದರು. ಈತ ಫೋರ್ಜರಿ ಮಾಡಿದ್ದಾನೆಂದು ಕೂಡ ಅವರೇ ವದಂತಿ ಹಬ್ಬಿಸಿದ್ದರು. ಇವತ್ತು ಮರಣಶಯ್ಯೆಯಲ್ಲಿದ್ದ, ನೆರೆತ ಗಡ್ಡದ ಆ ಮುಖದಲ್ಲಿ ಆ ಯಾವುದರ ಕಲೆಯೂ ಕಾಣುವಂತಿರಲಿಲ್ಲ...

ಸಾವಿನ ಹಾಸಿಗೆಯಲ್ಲಿ ಮಲಗಿದವರ ಎದುರಿಗೆ ಕೂತಾಗ ಕೆಲವು ಭೀಕರ ಸತ್ಯಗಳು ಕಾಣತೊಡಗುತ್ತವೇನೋ. ಆಗ ಥಟ್ಟನೆ, ಈ ವ್ಯಕ್ತಿಯ ಬಗ್ಗೆ ಈ ತನಕ ನಾನು ಮತ್ತೊಬ್ಬನಿಂದ ಕೇಳಿರುವ ಮಾತುಗಳು ಸುಳ್ಳಾಗಿದ್ದರೆ... ಎನ್ನಿಸಿ ಕಸಿವಿಸಿ ಮುತ್ತಿಕೊಳ್ಳತೊಡಗಿತು. ಅವೆಲ್ಲ ಸುಳ್ಳಾಗಿದ್ದರೂ, ನಿಜವಾಗಿದ್ದರೂ, ಸಾಯುತ್ತಿರುವ ವ್ಯಕ್ತಿಗೆ ಅದರಿಂದೆಲ್ಲ ಏನೂ ಆಗಬೇಕಿರಲಿಲ್ಲ. ಆದರೆ ಪಾಪಪ್ರಜ್ಞೆ ಕಾಡತೊಡಗಿದ್ದು ನನಗೆ; ಈ ವ್ಯಕ್ತಿಯ ಬಗ್ಗೆ ಯಾರೋ ಹೊರಿಸಿದ ಹೊರೆಯನ್ನೇ ಹೊತ್ತು, ಅದನ್ನು ಹೆಗಲಿನಿಂದ ಕೆಳಗಿಳಿಸದೆ ಇಷ್ಟು ವರ್ಷ ಓಡಾಡಿರುವ ನನಗೆ; ನನ್ನಿಡೀ ಜೀವನದಲ್ಲಿ ಈ ವ್ಯಕ್ತಿಯ ಜೊತೆ ಸರಿಯಾಗಿ ಅರ್ಧ ಗಂಟೆ ಕೂಡ ಮಾತಾಡದೆ ಯಾರೋ ಎಳೆದುಕೊಟ್ಟ ಗೆರೆಗಳನ್ನೆಲ್ಲ ಕೂಡಿಸಿಕೊಂಡು ಈ ವ್ಯಕ್ತಿಯೊಬ್ಬ ಖಳನೆಂಬಂತೆ ಚಿತ್ರಿಸಿಕೊಂಡಿದ್ದ ನನಗೆ...

ನನಗೆ ನಿಜಕ್ಕೂ ಶಾಕ್ ಆದದ್ದು- ನಾವು ಹತ್ತಾರು ವರ್ಷ ಬೇರೆಯವರು ಕೊಟ್ಟ ಎರಕದಲ್ಲೇ ಇತರರ ವ್ಯಕ್ತಿತ್ವಗಳ ಅಚ್ಚುಗಳನ್ನು ಕಣ್ಣುಮುಚ್ಚಿಕೊಂಡು ತೆಗೆಯುತ್ತಿರುತ್ತೇವೆ ಅನ್ನಿಸಿದಾಗ; ಹಿಂದೆ ಮುಂದೆ ನೋಡದೆ ಅದನ್ನೇ ಸತ್ಯವೆಂದು ಇನ್ನೊಬ್ಬರಿಗೂ ಹಂಚುತ್ತಿರುತೇವೆ ಎಂಬುದು ಹೊಳೆದಾಗ. ಬಂಡಾಯ ಸಾಹಿತಿಯೊಬ್ಬರ ಅನುಯಾಯಿಯೊಬ್ಬ ಸುಮಾರು ಇಪ್ಪತ್ತು ವರ್ಷಗಳ ಕಾಲ ಅನಂತಮೂರ್ತಿಯವರ ಪುಸ್ತಕಗಳನ್ನೇ ಓದಿರಲಿಲ್ಲವಂತೆ. ಕಾರಣ: ಅವನ ಬಂಡಾಯ ಗುರುಗಳು ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಇಷ್ಟಪಡುತ್ತಿರಲಿಲ್ಲ. ಕನ್ನಡ ನಾಟಕಗಳ ಬಗ್ಗೆ ಡಾಕ್ಟರೇಟ್ ಪ್ರಬಂಧ ಬರೆದ ವಿದ್ಯಾರ್ಥಿಯೊಬ್ಬ ತನ್ನ ಥೀಸಿಸ್ಸಿನಲ್ಲಿ ಎಲ್ಲೂ ಲಂಕೇಶರ ನಾಟಕಗಳನ್ನೇ ಚರ್ಚಿಸದ ಹಾಗೆ ಆತನ ಗೈಡ್ ಬಹಳ ಜಾಗರೂಕತೆಯಿಂದ ‘ಮಿಸ್‌ಗೈಡ್’ ಮಾಡಿರುವುದನ್ನು ಕುರಿತು ಆ ಥೀಸಿಸ್ ಮೌಲ್ಯಮಾಪನ ಮಾಡಿದ ಪ್ರೊಫೆಸರೊಬ್ಬರು ಹೇಳಿದ್ದರು. ನಾನೇ ನೋಡಿದಂತೆ, ಎಷ್ಟೋ ಜನ ಮೇಷ್ಟ್ರುಗಳು, ನಾಯಕರು ತಮ್ಮ ಅನುಯಾಯಿಗಳೆಂದರೆ ತಮ್ಮ ವಿಷ, ಪೂರ್ವಗ್ರಹಗಳನ್ನು ತುಂಬುವ ಕಸದ ಬುಟ್ಟಿಗಳೆಂದು ಖಚಿತವಾಗಿ ನಂಬಿಕೊಂಡಂತೆ ಕಾಣುತ್ತದೆ.

ದಿನನಿತ್ಯದ ಚಟುವಟಿಕೆಗಳಲ್ಲೇ ಹೀಗೆ ಅವರಿವರ ಹೊರೆ ಹೊತ್ತು ಜೀವಮಾನ ಸವೆಸುವ ನಾವು ಎಂಥ ಹೊರಬರಲಾಗದ ಜಾಲದಲ್ಲಿ ಸಿಕ್ಕಿದ್ದೇವೆ ಎನ್ನುವುದು ಸರಿಯಾಗಿ ಗೊತ್ತಾಗುವುದು ನಮ್ಮ ಟೆಲಿವಿಷನ್, ಪತ್ರಿಕೆಗಳು ಹಾಗೂ ಧಾರ್ಮಿಕ, ರಾಜಕೀಯ ನಾಯಕರನ್ನು ಕಂಡಾಗ. ತಮ್ಮ ಬಾಯಿಗೆ ಬಂದದ್ದನ್ನೇ ಶಾಶ್ವತ ಸತ್ಯವೆಂಬಂತೆ ಘೋಷಿಸುವ ಟೆಲಿವಿಷನ್ ಮಾತುಗಾರರು, ಸುಳ್ಳು ಬರೆಯುವುದನ್ನೇ ರೂಢಿ ಮಾಡಿಕೊಂಡ ಪತ್ರಕರ್ತರು, ತಮ್ಮನ್ನು ಹೊಗಳದವರನ್ನು, ಪ್ರಶಸ್ತಿ ಕೊಡದವರನ್ನು ಬಯ್ಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಲೇಖಕರು.... ಸದಾ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವುದನ್ನೇ ಜೀವನವಾಗಿಸಿಕೊಂಡಿರುವ ಕೋಮುವಾದಿಗಳು, ಜಾತಿವಾದಿಗಳು... 

ಇಂಥವರೆಲ್ಲ ಸೇರಿ ಜನರಲ್ಲಿ ರೂಪಿಸಿರಬಹುದಾದ ಅಭಿಪ್ರಾಯಲೋಕ ಎಷ್ಟು ನರಕಸದೃಶವಾದುದು ಎಂಬುದನ್ನು ನೆನೆದರೆ ದಿಗ್ಭ್ರಮೆಯಾಗುತ್ತದೆ. ಅದಕ್ಕಿಂತ ಹೆಚ್ಚು ದಿಗ್ಭ್ರಮೆಯಾಗುವುದು ‘ಪೂರ್ವಗ್ರಹ ಬಿತ್ತನೆ’ಯನ್ನೇ ತಮ್ಮ ಜೀವಮಾನವಿಡೀ ಮಾಡುವ ವ್ಯಕ್ತಿಗಳು ತಮ್ಮೊಳಗೇ ಸೃಷ್ಟಿಸಿಕೊಂಡಿರುವ ಭೀಕರ ನರಕ ಎಂಥದೆಂಬುದನ್ನು ನೆನೆಸಿಕೊಂಡಾಗ! 
-ಇವು ಮೇಲೆ ಹೇಳಿದ ೧೯೯೮ರ ಲೇಖನದ ಕೆಲವು ಭಾಗಗಳು. 

ಭಾಗ:೩

ಅಪ್ ಡೇಟ್:  ಸದರಿ ಲೇಖನವನ್ನು ಓದಿದ್ದ ಗೆಳೆಯನೊಬ್ಬ ಅದರಲ್ಲಿದ್ದ ಪೂರ್ವಗ್ರಹಬಿತ್ತನೆ ಕುರಿತ ಗ್ರಹಿಕೆಗಳನ್ನು ಬಹುವಾಗಿ ಒಪ್ಪಿದ್ದನೆಂದು ಹೇಳಿದೆನಷ್ಟೆ? ‘ಅದು ನನ್ನ ಕಣ್ಣು ತೆರೆಸಿತು’ ಎಂದು ಕೂಡ ಆತ ಹೇಳಿದ್ದ. ಅದೆಲ್ಲ ನಿಜವಿರಬಹುದು. ವಿಚಿತ್ರವೆಂದರೆ, ಈತ ಕೂಡ ಮುಂದೆ ಬಹು ಕಾಲ ನಮ್ಮ ಅನೇಕ ಮಿತ್ರರ ಬಗ್ಗೆ ಇದೇ ಬಗೆಯ ಪೂರ್ವಗ್ರಹ ಬಿತ್ತನೆಯ ಕೆಲಸ ಮಾಡಿದ್ದು ಈಚೆಗೆ ಕಂಡು ಬಂದಾಗ ಬೆಚ್ಚಿದೆ.

ಇದು ನಿಜಕ್ಕೂ ನನ್ನಲ್ಲಿ ವಿಚಿತ್ರ ತಳಮಳ ಹುಟ್ಟಿಸಿತು. ಪೂರ್ವಗ್ರಹಗಳನ್ನು ಬಿತ್ತುವವರ ಬಗ್ಗೆ ಒಂದು ‘ತಾತ್ವಿಕ’ ಲೇಖನ ಬರೆದವನಿಗಾಗಲೀ, ಆ ಲೇಖನದ ಗ್ರಹಿಕೆಗಳನ್ನು ಒಪ್ಪಿ ಮೆಚ್ಚಿದವನಿಗಾಗಲೀ ‘ಜ್ಞಾನೋದಯ’ ಎನ್ನುವುದು ಅಷ್ಟು ಸುಲಭವಲ್ಲ ಎಂಬ ಹೊಸ ಜ್ಞಾನೋದಯ ಈ ಅನುಭವದಿಂದ ಮೂಡತೊಡಗಿತು! 

ಮೊನ್ನೆ ಈ ಥರದ ಪೂರ್ವಗ್ರಹ ಬಿತ್ತನೆಯ ಬಗ್ಗೆ ಕತೆಗಾರ ಮಿತ್ರರೊಬ್ಬರ ಜೊತೆ ಮಾತಾಡುತ್ತಿದ್ದಾಗ, ಇಂಥ ಮತ್ತೊಬ್ಬ ಪೂರ್ವಗ್ರಹ ಬಿತ್ತನೆಕಾರನ ಉದಾಹರಣೆ ಎದುರಾಯಿತು! ಈ ಸಲ ಏನಾಯಿತೆಂದರೆ, ನಾನೂ, ಈ ಕತೆಗಾರ ಮಿತ್ರರೂ ಆ ಪೂರ್ವಗ್ರಹ ಬಿತ್ತನೆಯ ಹೊಸ ವ್ಯಕ್ತಿಯ ಮಿಕಗಳಾಗಿದ್ದೆವು! ಅಂದರೆ, ಲೋಕದಲ್ಲಿ ಇಂಥ ಮಹನೀಯರದೇ ಒಂದು ಸಿದ್ಧ ಮಾದರಿ ಇರುವಂತಿದೆ. ಯಾವುದೇ ಘಟನೆ ಇರಲಿ, ವ್ಯಕ್ತಿಯಿರಲಿ, ಇವರ ವರ್ಷನ್ ಸದಾ ಸಿದ್ಧವಿರುತ್ತದೆ! ಅದೂ ನಿಜದ ತಲೆಯ ಮೇಲೆ ಹೊಡೆದಂತೆ! 

ಅದೇನೇ ಇರಲಿ, ಪೂರ್ವಗ್ರಹ ಬಿತ್ತನೆಗಾರರು ಸೃಷ್ಟಿಸುವ ನರಕಕ್ಕಿಂತ ಅವರೊಳಗೆ ಸೃಷ್ಟಿಯಾಗಿರುವ ನರಕ ನಿಜಕ್ಕೂ ಭೀಕರವಾಗಿರಬಲ್ಲದು! ‘ಕೊಂದವರುಳಿಯುವರೇ ಕೂಡಲ ಸಂಗಮದೇವಾ?’ ಎಂದು ಬಸವಣ್ಣ ತನ್ನ ಸುತ್ತ ಮುತ್ತ ನೋಡಿ, ಆಳವಾಗಿ ಯೋಚಿಸಿ, ನಿಜಕ್ಕೂ ಮರುಕದಿಂದ ಹೇಳಿದ್ದನೆಂಬುದು ನನ್ನ ಊಹೆ!

Share on:

Comments

1 Comments



| ಮಂಜುನಾಥ್ ಸಿ ನೆಟ್ಕಲ್

ಕೊಂದವರುಳಿಯುವರೆ ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಪೂರ್ವಗ್ರಹ ಬಿತ್ತನೆಯ ವಿಕೃತರು ನಮಗರಿವಿಲ್ಲದಂತೆಯೇ ನಮ್ಮ ಜೀವಕೋಶಗಳಿಗೆ ಎಂಥ ಮಾರಕಹಾನಿ ಮಾಡಿಬಿಟ್ಟಿರುತ್ತಾರೆ. ಎಂಬುದು ಅಕ್ಷರಶಃ ಸತ್ಯ ಸರ್... ಕೆಲವೊಮ್ಮೆ ಸತ್ಯಾಂಶ ತಿಳಿಯಲು ಪ್ರಯತ್ನ ಪಡದೆ ಕೇಳಿದ್ದನ್ನೇ ನಂಬಿ ನಿರ್ಧಾರ ಮಾಡಿ ದುರಂತಗಳೇ ನಡೆದು ಹೋಗಿವೆ. ಪ್ರತಿಯೊಬ್ಬರೂ ಕೇಳಿದ್ದು... ನೋಡಿದ್ದು ಮಾತ್ರ ಸತ್ಯ ಎಂದು ನಂಬದೆ ಯೋಚಿಸಿ ವಿಶ್ಲೇಷಣೆ ಮಾಡಿ ಅರಿಯಬೇಕು ಎಂಬುದನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು




Add Comment


Mundana Kathana Nataka

YouTube






Recent Posts

Latest Blogs