ಕತೆಗಾರಿಕೆಗೆ ನಿಯಮಗಳಿವೆಯೆ?

ಲಂಕೇಶ್ ಕೃತಿಗಳ ಅಧ್ಯಯನ ಕಮ್ಮಟದಲ್ಲಿ ಭಾಗಿಯಾಗಿದ್ದ ತರುಣ ಲೇಖಕ ಸಂಪತ್ ಕುಮಾರ್  ಕೇಳಿದರು: 'ಕತೆ ಬರೆಯಲು ನಿಯಮಗಳಿವೆಯೇ?’

ಇ.ಎಂ. ಫಾಸ್ಟರ್ ಕಾದಂಬರಿ ಬರವಣಿಗೆ ಕುರಿತು ಹೇಳಿದ ಮಾತೊಂದನ್ನು ಅವರಿಗೆ ನೆನಪಿಸಿದೆ: 'ಕಾದಂಬರಿ ಬರೆಯಲು ಮೂರು ನಿಯಮಗಳಿವೆ. ದುರದೃಷ್ಟವೆಂದರೆ ಅವು ಯಾರಿಗೂ ಗೊತ್ತಿಲ್ಲ!’ 

‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿ ಬರೆದ ಫಾಸ್ಟರ್ ಹೇಳಿದ ಈ ತಮಾಷೆಯ ಮಾತು ಕಥಾಬರವಣಿಗೆಗೂ ಅನ್ವಯಿಸುತ್ತದೆ. ಆದರೂ 'ಕತೆ ಬರೆಯುವ ನಿಯಮಗಳಿವೆಯೆ’ ಎಂಬ ಪ್ರಶ್ನೆ ಬರೆಯುವವರಿಗೆಲ್ಲ ಎಲ್ಲ ಕಾಲದಲ್ಲೂ ಎದುರಾಗುವುದರಿಂದ ಈ ಪ್ರಶ್ನೆಯನ್ನು ಕೊಂಚ ಆಳವಾಗಿ ನೋಡುವ ಅಗತ್ಯವಿದೆ. 

ಬರೆಯುವ ಎಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೊದಲು ಯಾರನ್ನಾದರೂ ಅನುಕರಣೆ ಮಾಡುತ್ತಿರುತ್ತಾರೆ. ಇದು ಸಹಜ. ಅನುಕರಣೆಯೂ ಕಲಿಕೆಯ ಭಾಗವೇ. ಪ್ಲೇಟೋ 'ಕಲೆ ಬದುಕಿನ ಅನುಕರಣೆಯ ಅನುಕರಣೆ’ ಎಂದಾಗ, ಅರಿಸ್ಟಾಟಲ್ 'ಕಲೆ ಮಾನವನ ಆಂತರಿಕ ಕ್ರಿಯೆಯ ಅನುಕರಣೆ’ ಎಂದು ಉತ್ತರ ಕೊಟ್ಟ; 'ಅನುಕರಣೆ ಸೃಜನಶೀಲ ಚಟುವಟಿಕೆ’ ಎಂದು ವಾದಿಸಿದ. 

ಅವತ್ತು ಕಮ್ಮಟದಲ್ಲಿ ಮಾತಾಡುತ್ತಿದ್ದಾಗ, ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ಲಂಕೇಶ್ ಒಂದು ಸಂಜೆಯ ಮಾತುಕತೆಯಲ್ಲಿ 'ಕ್ಯಾಥರಿನ್ ಆ್ಯನ್ ಪೋರ್ಟರ್ ನಮಗೆಲ್ಲ ಕತೆ ಬರೆಯುವುದನ್ನು ಕಲಿಸಿದವಳು’ ಎಂದಿದ್ದು ನೆನಪಾಯಿತು. ಹೀಗೆನ್ನುತ್ತಾ ಕುರ್ಚಿ ಬಿಟ್ಟೆದ್ದ ಲಂಕೇಶರು ಪುಸ್ತಕದ ಕಪಾಟು ತಡಕಿ, ಆಕೆಯ 'ಫ್ಲವರಿಂಗ್ ಜುದಾಸ್ ಅಂಡ್ ಅದರ್ ಸ್ಟೋರೀಸ್’ ಕಥಾಸಂಕಲನವನ್ನೂ ನನಗೆ ಕೊಟ್ಟಿದ್ದರು. ಸ್ವತಃ ಲಂಕೇಶರೇ ಒಬ್ಬ ಅಪ್ರತಿಮ ಕತೆಗಾರ. ಅವರಂತೆ ವಿದ್ಯಮಾನಗಳ ಅತಿ ಸೂಕ್ಷ್ಮ ಸತ್ಯಗಳನ್ನು, ಊಹೆಗೆ ನಿಲುಕದ ಮಾನವ ವರ್ತನೆಗಳನ್ನು ತಮ್ಮೊಳಗೂ ಹೊರಗೂ ನೋಡಿ ಕತೆಯಾಗಿಸಿದ ಮತ್ತೊಬ್ಬರು ಕನ್ನಡದಲ್ಲಿಲ್ಲ! ಇಂಥ ಲಂಕೇಶರಿಗೆ ಕ್ಯಾಥರಿನ್ ಆ್ಯನ್ ಪೋರ್ಟರ್ ಏನು ಕಲಿಸಿರಬಹುದು ಎಂಬ ಕುತೂಹಲದಿಂದ ಆಕೆಯ ಕತೆಗಳನ್ನು ಓದಿದೆ. 

ಕಾಲದ ಉರುಳಿನಲ್ಲಿ ಕ್ಯಾಥರಿನ್ ಸಂಕಲನದ ಕತೆಗಳ ವಿವರಗಳು ಮಸುಕಾಗಿವೆ. ಕ್ಯಾಥರಿನ್ ಕತೆಯ ಹೆಂಗಸೊಬ್ಬಳು ಸೈಕಲ್ ಮೇಲೆ ಕೋಳಿಗಳನ್ನು ಹೇರಿಕೊಂಡು ಸಂತೆಯಲ್ಲಿ ಮಾರಲು ಹೊರಡುವ ಒಂದು ವಿವರ ಚೆನ್ನಾಗಿ ನೆನಪಿದೆ: ತೂಗುಬಿಟ್ಟ ಕೋಳಿಯೊಂದರ ಕಣ್ಣು ಅವಳನ್ನೇ ನೋಡುತ್ತಿದೆ. ಆಕೆಯಿಂದ ಕತೆಗಾರ ಲಂಕೇಶ್ ಏನು ಕಲಿತಿರಬಹುದು? ಈಕೆಯ ಕತೆಗಳ ಜೊತೆಗೇ, ಅವರು ಓದಿದ ಸೇಡ್, ಬೋದಿಲೇರ್, ಕಿಂಗ್ಸ್‌ಲೇ ಏಮಿಸ್, ಸ್ಯಾಲಿಂಜರ್, ಯೇಟ್ಸ್ ಥರದ ಹತ್ತಾರು ಲೇಖಕರು ಕೂಡ ಅವರಿಗೆ ಏನೇನನ್ನೋ ಕಲಿಸಿರಬಹುದು. 

ಇಪ್ಪತ್ತು ವರ್ಷದ ತರುಣ ಮಾರ್ಕ್ವೆಜ್ ಒಂದು ದಿನ ಅಸಾಧ್ಯ ಸೆಖೆ, ಸೊಳ್ಳೆಗಳ ದಾಳಿಯ ನಡುವೆ, ವರ್ಜೀನಿಯಾ ವುಲ್ಫ್‌ಳ 'ಮಿಸೆಸ್ ಡಾಲೋವೇ’ ಕಾದಂಬರಿ ಓದುತ್ತಿದ್ದ. ಅದರಲ್ಲಿ ಡಾಲೋವೇಯ  'ಇಂಟೀರಿಯರ್ ಮಾನೋಲಾಗ್’ (ವ್ಯಕ್ತಿಯ ಚಿತ್ತದೊಳಗೇ ನಡೆಯುವ ಅಡೆತಡೆಯಿಲ್ಲದ ಸುದೀರ್ಘ ಸಂಭಾಷಣೆ) ಓದುತ್ತಿದ್ದಾಗ ವಿವಿಧ ಕಾಲಗಳನ್ನು ಒಂದೇ ಪಟ್ಟಿಗೆ ಹೇಗೆ ಹಿಡಿದಿಡಬಹುದು ಎಂಬುದು ಅವನಿಗೆ ಹೊಳೆದು ಥ್ರಿಲ್ಲಾಯಿತು. ಕಾಲವನ್ನು ಹಿಡಿಯುವ ಈ ರೀತಿಯನ್ನು ಮಾರ್ಕ್ವೆಜ್ ತನ್ನ ಕತೆಯಲ್ಲಿ ಬಳಸಿದ. ವಿಲಿಯಂ ಫಾಕ್ನರ್ ಕತೆಗಳಿಂದ ಕಥಾತಂತ್ರ ಕಲಿತ. ಕಾನ್ರಾಡ್‌ನಿಂದ ಸಾಧಾರಣ ಸಂಗತಿಗಳನ್ನೂ ಕಾವ್ಯಾತ್ಮಕವಾಗಿ ನೋಡುವ ಕಲೆ ಅರಿತ. 

ಮತ್ತೊಂದು ದಿನ ಮಾರ್ಕ್ವೆಜ್ ಕಾಫ್ಕಾನ ‘ಮೆಟಮಾರ್ಫಸಿಸ್’ ಕಾದಂಬರಿಯ ಮೊದಲ ಸಾಲಿನಲ್ಲೇ ‘ತಳಮಳದ ಕನಸುಗಳ ನಂತರದ ಒಂದು ಬೆಳಗ್ಗೆ ಗ್ರೆಗರ್ ಸಾಂಸ ಎದ್ದಾಗ ತಾನೊಂದು ದೊಡ್ಡ ಹುಳುವಾಗಿರುವುದನ್ನು ಕಂಡ’ ಎಂಬ ವಿಚಿತ್ರ ಚಿತ್ರ ಕಂಡು ಝಲ್ಲೆಂದ. ಮಾರ್ಕ್ವೆಜ್‌ನ ಊರಿನಲ್ಲೂ ಜನ ನೋಡುವ ರೀತಿ ಹೀಗೇ ಇತ್ತು. ಲ್ಯಾಟಿನ್ ಅಮೆರಿಕದ ಜನರಿಗೆ ಅದೇನೂ ಫ್ಯಾಂಟಸಿಯಲ್ಲ; ಅದು ಅಲ್ಲಿನ ವಾಸ್ತವ! ‘ಮೆಟಮಾರ್ಫಸಿಸ್’ ಓದಿದ ಮೇಲೆ ಮಾರ್ಕ್ವೆಜ್ ಜಗತ್ತಿನ ಎಲ್ಲ ಒಳ್ಳೆಯ ಕಾದಂಬರಿಗಳನ್ನೂ ಓದಲು ಹೊರಟ. ಬೈಬಲ್‌ನಿಂದ ಶುರು ಮಾಡಿದ. 

ಇದೆಲ್ಲವನ್ನೂ ಕಮ್ಮಟದಲ್ಲಿದ್ದ ಹೊಸ ಲೇಖಕ, ಲೇಖಕಿಯರಿಗೆ ವಿವರವಾಗಿ ಹೇಳಲು ಟಿಪ್ಪಣಿ ಮಾಡಿಕೊಂಡಿರಲಿಲ್ಲ! ಆದರೂ ಬರೆಯುವವರಿಗೆ ಇನ್ನೊಬ್ಬ ಲೇಖಕ, ಲೇಖಕಿಯೇ ಗುರು ಎಂಬ ನನ್ನ ಅನುಭವವನ್ನು ಅಲ್ಲಿದ್ದ ಕಮ್ಮಟಿಗರಿಗೂ ಹೇಳುತ್ತಾ, ಒಂದು ಸವಾಲನ್ನೂ ಎಸೆದೆ: ‘ಗದ್ಯ ಬರೆಯುವುದನ್ನು ಕಲಿಯಲು ಹೊರಡುವವರು ಒಂದು ವರ್ಷ ಲಂಕೇಶರ ‘ಟೀಕೆ ಟಿಪ್ಪಣಿ’, ‘ಮರೆಯುವ ಮುನ್ನ’ ಇನ್ನಿತರ ಪುಸ್ತಕಗಳನ್ನು ಮತ್ತೆ ಮತ್ತೆ ಓದಿ ನೋಡಿ; ನಿಮಗೆ ಗದ್ಯ ಬರೆಯುವ ಕಲೆ ದಕ್ಕದಿದ್ದರೆ ಕೇಳಿ! ಹಾಗೆಯೇ ಲಂಕೇಶರ ಕತೆಗಳನ್ನು ಮತ್ತೆ ಮತ್ತೆ ಹತ್ತಿರದಿಂದ ಅಧ್ಯಯನ ಮಾಡಿ; ನಿಮಗೆ ಕತೆ ಬರೆಯುವ ಹಾದಿ ಹೊಳೆಯದಿದ್ದರೆ ಹೇಳಿ!’

ಈ ಮಾತನ್ನು ಸುಮ್ಮನೆ ಹೇಳುತ್ತಿಲ್ಲ. ೧೯೮೦ರಿಂದೀಚೆಗೆ ಕರ್ನಾಟಕದಲ್ಲಿ ಹುಟ್ಟಿದ ಟ್ಯಾಬ್ಲಾಯ್ಡ್‌ಗಳು, ಹೊಸ ಪತ್ರಕರ್ತರು, ಅಂಕಣಕಾರರು ಗೊತ್ತಿದ್ದೋ ಗೊತ್ತಿಲ್ಲದೆಯೇ ಲಂಕೇಶರಿಂದ ಗದ್ಯ ಬರವಣಿಗೆಯನ್ನು ಕಲಿತಿದ್ದಾರೆ. ಹಾಗೆ ಕಲಿತು ನೈತಿಕ ಬರವಣಿಗೆ, ಅನೈತಿಕ ಬರವಣಿಗೆ ಎರಡನ್ನೂ ಮಾಡಿದವರಿದ್ದಾರೆ! ನಾನೇ ಬಲ್ಲಂತೆ ಗೆಳೆಯ ಬಸವರಾಜು ‘ಲಂಕೇಶ್ ಪತ್ರಿಕೆ’ ಸೇರುವ ತನಕ ಪತ್ರಿಕೋದ್ಯಮ ಬರವಣಿಗೆ ಮಾಡಿರಲಿಲ್ಲ. ಅವರು ‘ಲಂಕೇಶ್ ಪತ್ರಿಕೆ’ಯಲ್ಲೇ ಬರೆಯುವುದನ್ನು ಕಲಿತು ವರದಿಗಾರ, ಪತ್ರಕರ್ತ, ಪತ್ರಿಕಾ ಸಂಪಾದಕ ಎಲ್ಲವೂ ಆದರು. ಇಂಥ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ನನ್ನನ್ನೂ ಒಳಗೊಂಡಂತೆ ಕತೆ ಬರೆಯುವ ಹತ್ತಾರು ಜನ ಲಂಕೇಶರ ಕತೆಗಳಿಂದ ಕಲಿತಿದ್ದಾರೆ. ಆದರೆ ಬಹುತೇಕ ಲೇಖಕರು ಎಲ್ಲಿ ಯಾರಾದರೂ ತಮ್ಮ ಮೇಲಿನ ಪ್ರಭಾವವನ್ನು ಗುರುತಿಸುತ್ತಾರೋ ಎಂಬ ಹುಂಬ ಭಯದಿಂದ ಅದನ್ನೆಲ್ಲ ಹೇಳುವುದಿಲ್ಲ!

ಇಷ್ಟಾಗಿಯೂ, ‘ಕತೆ ಬರೆಯಲು ನಿಯಮಗಳಿವೆಯೆ?’ ಎಂಬ ಪ್ರಶ್ನೆಗೆ ಸುಲಭದ ಉತ್ತರಗಳಿಲ್ಲ. ಕತೆಯೊಂದು ತನ್ನದೇ ಆದ ತರ್ಕವನ್ನು ಬೇಡುತ್ತದೆ. ಅದಕ್ಕೂ ಒಳನಿಯಮಗಳಿರುತ್ತವೆ. ಕತೆ ಬರೆಯುವವರು ಯಾವುದಾದರೂ ಪಾತ್ರವನ್ನು ಸಮರ್ಥಿಸಲು ಹೋಗಿ ಅದಕ್ಕೆ ಅತಿಯಾದ ಒತ್ತು ಕೊಟ್ಟರೆ ಪಾತ್ರ ಕೃತಕವಾಗುತ್ತದೆ; ಬರವಣಿಗೆ ಅನೈತಿಕವಾಗುತ್ತದೆ. ಸೆಂಟಿಮೆಂಟಾಲಿಟಿ ಹೆಚ್ಚಾದರೆ ಅಶ್ಲೀಲವಾಗುತ್ತದೆ. ಕತೆ ಬರೆಯುವವರು ಅತಿಯಾದ ಸ್ಪಷ್ಟತೆಯಿಂದ ಹೊರಟರೆ ಪಾತ್ರಗಳು, ಘಟನೆಗಳು ಬರೆವವರ ಮೂಗಿನ ನೇರಕ್ಕೇ ಮೂಡುತ್ತವೆ. ಪಾತ್ರಗಳು ಸ್ವತಂತ್ರವಾಗಿ ವರ್ತಿಸಿದಾಗ ಕಾಣುವ ಸತ್ಯಗಳು ಕತೆಗಾರ್ತಿಗೆ ಗೋಚರಿಸದೇ ಹೋಗುತ್ತವೆ. ಇಷ್ಟೆಲ್ಲ ಹೇಳಿಯೂ, ‘ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳ ಪರಿಶುದ್ಧತೆಯಲ್ಲ’ ಎಂಬ ಲಂಕೇಶರ ಮಾತನ್ನೇ ಮತ್ತೆ ಮತ್ತೆ ಗಂಭೀರವಾಗಿ ಮನನ ಮಾಡಿಕೊಳ್ಳಬೇಕಾಗುತ್ತದೆ.

ಇಲ್ಲಿ ‘ಬರೆಯುವ ಪ್ರಾಮಾಣಿಕತೆ’ ಎಂಬ ಮಾತನ್ನು ರೂಪಕದಂತೆ ಅರ್ಥ ಮಾಡಿಕೊಂಡು ವಿಸ್ತರಿಸಿ ಅರಿಯಬೇಕಾಗುತ್ತದೆ. ‘ಪ್ರಾಮಾಣಿಕತೆ’ ಎಂದರೆ, ಕಂಡದ್ದನ್ನು ಕಂಡ ಹಾಗೆ ಬರೆಯುವುದೇ? ಕಂಡದ್ದನ್ನು ಪರೀಕ್ಷೆಗೆ ಒಳಪಡಿಸುವುದೇ? ನಾವು ಬಳಸುತ್ತಿರುವ ಭಾಷೆಯ ಸುಳ್ಳು- ನಿಜಗಳನ್ನು ತೀವ್ರ ಪರೀಕ್ಷೆಗೆ ಒಡ್ಡುವುದೇ…? ಹೀಗೆ ’ಬರೆಯುವ ಪ್ರಾಮಾಣಿಕತೆ’ ಎಂಬುದನ್ನು ನಮಗೆ ನಾವೇ ಮತ್ತೆ ಮತ್ತೆ ಪ್ರಾಮಾಣಿಕವಾಗಿ ವಿವರಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ.  ‘ತನ್ನೆದುರಿಗೆ ನಿಂತ ಭಿಕ್ಷುಕನನ್ನು ಕಂಡು ಮಂಜುನಾಥನ ಮನ ಮಮ್ಮಲ ಮರುಗಿತು’ ಎಂದು ಕತೆಗಾರನೊಬ್ಬ ಬರೆಯುತ್ತಿರುವಾಗ, ‘ಮರುಕ’ದ ಅರ್ಥವೇನು ಎಂಬುದನ್ನು ತಾನೇ ನಿಷ್ಠುರವಾಗಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಆ ಗಳಿಗೆಯಲ್ಲಿ ಮಂಜುನಾಥನಲ್ಲಿ ಉಕ್ಕಿದ್ದು ಮರುಕವೋ; ಅಸಹ್ಯವೋ; ಭಿಕ್ಷುಕನಿಂದ ತಪ್ಪಿಸಿಕೊಳ್ಳುವ ತಹತಹವೋ; ಅಥವಾ ಕತೆಗಾರನ ‘ಮ’ಕಾರದ ಅನುಪ್ರಾಸದ ಮಮಕಾರವೋ... ಇವನ್ನೆಲ್ಲ ತನ್ನೊಳಗನ್ನೇ ಸೀಳಿ ನೋಡಿಕೊಳ್ಳಬೇಕಾಗುತ್ತದೆ. 

ಅದೇ ರೀತಿ, ‘ರಾಜಪುತ್ರನು ಬಿದಿಗೆಯ ಚಂದ್ರನಂತೆ ಬೆಳೆಯುತ್ತಿದ್ದನು’ ಎಂದು ಬರೆಯುವ ‘ನವ ಪ್ರಾಚೀನ’ ಲೇಖಕರು ಇಂಥ ‘ಕ್ಲೀಷೋಪಮೆ’ಗಳ ಹುಸಿತನವನ್ನು ಧ್ಯಾನಿಸಿ ನೋಡಬೇಕಾಗುತ್ತದೆ. ಬರೆಯುವಾಗ ಉಕ್ಕಿ ಬರುವ ವಿವರ, ಪದ, ಚಿತ್ರ, ಮಾತುಗಳ ನಿಜ-ಸುಳ್ಳುಗಳನ್ನು ಕೆದಕಿ ನೋಡುತ್ತಿರಬೇಕಾಗುತ್ತದೆ… ಕತೆ ಬರೆಯಲು ಬೇಕಾದ ಅಲಿಖಿತ ‘ನಿಯಮ’ಗಳಲ್ಲಿ ಇಂಥ ಹತ್ತಾರು ನೈತಿಕ ಸಂಗತಿಗಳೂ ಸೇರಿಕೊಂಡಿರುತ್ತವೆ…

ಮೊನ್ನೆ ಗೆಳೆಯ ಅನಿಲ್ ಗುನ್ನಾಪುರ ಕಳಿಸಿದ ‘ಸರ್ವೆ ನಂಬರ್ ೯೭’ ಕಥಾಸಂಕಲನದಲ್ಲಿರುವ ‘ಲಿಂಗಾಯತ ಖಾನಾವಳಿ’ ಎಂಬ ಕತೆ ಓದುವಾಗ ಅದರ ಶಕ್ತಿ, ದೌರ್ಬಲ್ಯ; ಅದರಲ್ಲಿರುವ ಮನುಷ್ಯರ ದಯನೀಯ ಸ್ಥಿತಿ, ಕ್ಷುದ್ರತೆ, ಘನತೆ; ಕತೆಯ ಮುಕ್ತಾಯದ ಸವಾಲು-ಸಮಸ್ಯೆ ಇವೆಲ್ಲದರ ಬಗ್ಗೆ ಯೋಚಿಸುತ್ತಾ ಮೇಲಿನ ಮಾತುಗಳನ್ನೆಲ್ಲ ಅನಿಲ್‌ಗೂ ಹೇಳಬೇಕೆನ್ನಿಸಿತು. ಒಂದೇ ಮನೆಯಲ್ಲಿ ತಾಯಿ ಶೋಭಾ-ಮಗ ಅನಿಲ್ ಇಬ್ಬರೂ ಬರೆವ ಬದುಕಿನ ಮುಗ್ಧತೆಯ ಪುಳಕಗಳನ್ನು ಸವಿಯುತ್ತಾ ಬರೆಯುತ್ತಿರುವ ಈ ಕಾಲದಲ್ಲಿ ಈ ‘ಕಳ್ಳುಬಳ್ಳಿ’ಯ ಕಥಾನಂಟನ್ನು ಕೊಂಚ ಕೆಣಕಬೇಕೆನ್ನಿಸಿತು! ಇವೆಲ್ಲ ಬರೆವ ಬದುಕಿನ ಇತರರಿಗೂ ಅಷ್ಟಿಷ್ಟು ಉಪಯುಕ್ತವಾಗಬಹುದೆಂದು ಇಲ್ಲಿ ಕೊಡಬಹುದೆನ್ನಿಸಿತು.
 
ಕನ್ನಡಿಸಿದ ಕವಿತೆ

ಎರಡು ವಾರಗಳ ಕೆಳಗೆ ಈ ಅಂಕಣದಲ್ಲಿ ‘ಬೆಡ್ ಸೈಡ್ ಬುಕ್ಸ್’ ಲೇಖನದ ಕೊನೆಗೆ ಕೊಟ್ಟಿದ್ದ ಯೇಟ್ಸ್‌ನ ‘ವೆನ್ ಯು ಆರ್ ಓಲ್ಡ್’ ಕವಿತೆಯ ಕನ್ನಡರೂಪ ಓದಿ, ಗೆಳೆಯರಾದ ನಿರಂಜನಮೂರ್ತಿ, ವಿಜಯೇಂದ್ರಕುಮಾರ್ ಕನ್ನಡ ಓದುಗ, ಓದುಗಿಯರಿಗಾಗಿ ಆಗಾಗ್ಗೆ ಇಂಗ್ಲಿಷ್ ಹಾಗೂ ಇತರ ಭಾಷೆಗಳ ಒಳ್ಳೆಯ ಕವಿತೆಗಳನ್ನು ಕನ್ನಡಿಸಿಕೊಟ್ಟರೆ ಚೆನ್ನಾಗಿರುತ್ತದೆ ಎಂದರು. ಅನುವಾದಿಸಿಕೊಂಡಾಗ ಕವಿತೆಗಳು ಹೆಚ್ಚೆಚ್ಚು ಅರ್ಥವಾಗುತ್ತವೆ ಎಂದು ನಂಬುವವರಲ್ಲಿ ನಾನೂ ಒಬ್ಬ. ಹೀಗೆ ನನ್ನ ಅರಿವಿಗಾಗಿ ಕನ್ನಡಿಸಿಕೊಂಡ ಕವಿತೆಗಳನ್ನು ಆಗಾಗ್ಗೆ ಇಲ್ಲಿ ಕೊಡಬಹುದೆಂದು ಕಾಣುತ್ತದೆ.

’ಸಂಕ್ರಾಂತಿ’ ನಾಟಕದ ಶುರುವಿನಲ್ಲಿ ಲಂಕೇಶರು ಅಮೆರಿಕನ್ ಕವಯಿತ್ರಿ Edna St. Vincent Millay ಬರೆದ ’ಲವ್ ಈಸ್ ನಾಟ್ ಆಲ್’ ಸಾನೆಟ್ಟಿನ ಭಾಗವನ್ನು ಕೊಟ್ಟಿದ್ದಾರೆ. ನಮ್ಮ ’ಥಿಯೇಟರ್ ತತ್ಕಾಲ್’ ತಂಡ ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕ ಆಡಿದಾಗ ಲಂಕೇಶರ ಬಗ್ಗೆ ಮಾತಾಡುತ್ತಾ, ಆ ಭಾಗವನ್ನು ಕನ್ನಡಿಸಿದೆ:

ಒಲವೊಂದೇ ಎಲ್ಲವೂ ಅಲ್ಲ; ಅದು ಮಾಂಸವಲ್ಲ, ಮದಿರೆಯಲ್ಲ;
ಗಾಢ ನಿದ್ರೆಯಲ್ಲ; ಮಳೆ ತಡೆದು ಕಾಪಾಡಬಲ್ಲ ಛಾವಣಿಯಲ್ಲ;
ಮುಳುಗುವವರಿಗಾಗಿ, ಮೇಲೆದ್ದು ಮುಳುಗಿ, ಮತ್ತೆ ಮೇಲೆದ್ದು ಮುಳುಗಿ, 
ಮತ್ತೆ ಮುಳುಗುವವರಿಗಾಗಿ ತೇಲಿ ಬರುವ ಮರದ ಕೊರಡಲ್ಲ;
ಒಲವು ಜಡಗೊಂಡ ಶ್ವಾಸಕೋಶಗಳಲ್ಲಿ ಉಸಿರು ತುಂಬುವುದಿಲ್ಲ;
ರಕ್ತ ಶುದ್ಧಿಗೊಳಿಸುವುದಿಲ್ಲ; ಮುರಿದ ಮೂಳೆಗಳನ್ನು ಮರಳಿ ಜೋಡಿಸುವುದಿಲ್ಲ;
ಆದರೂ, ಈ ಈಗಲೂ, ನಾನು ಈ ನುಡಿ ನುಡಿವ ಚಣದಲ್ಲೂ,
ಎಷ್ಟೋ ಮಂದಿ ಸಾವಿನೊಡನೆ ಸ್ನೇಹಕ್ಕೆಳಸುತ್ತಿದ್ದಾರೆ- 
ಒಲವು ದಕ್ಕಲಿಲ್ಲ ಎಂಬ ಒಂದೇ ಕಾರಣದಿಂದ.

ಲಂಕೇಶ್ ’ಸಂಕ್ರಾಂತಿ’ ನಾಟಕದ ಕೇಂದ್ರ ಧ್ವನಿಗೆ ಪೂರಕವಾಗುವಂತೆ ಎಡ್ನಾಳ ಸಾನೆಟ್ಟಿನ ಇಷ್ಟು ಸಾಲುಗಳನ್ನು ಮಾತ್ರ ಉಲ್ಲೇಖಿಸಿದ್ದರು. ಅವತ್ತು ಅಷ್ಟನ್ನು ಮಾತ್ರ ಕನ್ನಡಿಸಿದೆ.  
 

Share on:

Comments

10 Comments



| ಗುರುಪ್ರಸಾದ್

ಲಂಕೇಶರು ಈ ತಲೆಮಾರಿನ ನಮ್ಮಂಥವರನ್ನು ಪ್ರಭಾವಿಸಿದರು ಎನ್ನುವುದರಲ್ಲಿ ಅನುಮಾನವೇ ಇಲ್ಲ.ಹೋದವಾರದ ಹಾವಿನ ಕತೆಯ ಹಲವು ಜನ್ಮದಲ್ಲಿನ ನೈತಿಕ ,ಅನೈತಿಕದ ಬಗ್ಗೆ. ನನಗೆ ಆಲನಹಳ್ಲಿ ಕೃಷ್ಣರ ಪರಸಂಗದ ಗೆಂಡೆತಿಮ್ಮ ನೆನಪಾಯಿತು.ಕಾದಂಬರಿ ಜೀವಪರ.ಸಿನಿಮಾ ಜೀವವಿರೋಧಿ.ಸಿನಿಮಾ ನಾಯಕ \r\nಕೊನೆಗೆ ಆತ್ಮಕತ್ಯೆಮಾಡಿಕೊಂಡರೆ,ಕಾದಂಬರಿಯಲ್ಲಿ ಗೆಂಡೆತಿಮ್ಮ ತನ್ನ ಹೆಂಡತಿಯನ್ನು ಕ್ಷಮಿಸಿ ಮತ್ತೆ ಮನೆಗೆ ಕರೆತರುತ್ತಾನೆ.


| Naveen Kumar

ಈ ಲೇಖನ ಓದಿದಾಗ ಕತೆಗಳಿಗೂ ನಿಯಮಗಳಿವೆ? ಇದ್ದರೆ ಯಾವ ಬಗೆಯವು ಎಂಬ ತರ್ಕವನ್ನು ಸಂದರ್ಭವನ್ನು ಇಟ್ಟುಕೊಂಡು ಚೆನ್ನಾಗಿ ಹೇಳಿದ್ದೀರಿ. ಕತೆಯನ್ನು ಬರೆಯುವಾಗ ಕತೆಗಾರ ನಿಯಮ ಹುಡುಕಿ ರಚಿಸುತ್ತಾನೋ? ಇಲ್ಲ ಓದುಗ ಅಥವಾ ವಿಮರ್ಶಕ ಆ ನಿಯಮಗಳನ್ನು ಹುಡುಕುತ್ತಾನೋ ಎಂಬುದೇ ಪ್ರಶ್ನೆ.


| ಶಿವಲಿಂಗಮೂರ್ತಿ

ಕತೆಗಾರಿಕೆಗೆ ಸಿದ್ದ ಸೂತ್ರದ ನಿಯಮಗಳಿಲ್ಲ ಅದು ಸಾಧನೆಯಿಂದ ಸಿದ್ದಿಸಿಕೊಳ್ಳಬೇಕಾದದ್ದು ಎಂಬುದನ್ನು ನಿಮ್ಮ ಈ ಬರಹ ಸ್ಪಷ್ಟಪಡಿಸಿದೆ.ಓದು-ಬರಹಕ್ಕೆ ಉತ್ತಮ ಸಲಹೆಗಳಿವೆ. ಧನ್ಯವಾದಗಳು ಸರ್.


| Udaykumar Habbu

ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್! ಇತರರ ಕೃತಿಗಳನ್ನು ಓದುವುದರಿಂದ ನಮ್ಮ ಬರವಣಿಗೆ sharp and bright ಆಗಬಹುದು. ಮಾರ್ಕ್ವಿಸ್ ನಿಗೆ ಆದ ಹಾಗೆ. ನಮ್ಮಲ್ಲಿ ಒಬ್ಬ ಉತ್ತಮ ಕಾದಂಬರಿಕಾರರು ಇದ್ದಾರೆ. ನಾನು ಇನ್ನೊಬ್ಬರ ಕೃತಿಗಳನ್ನು ಓದುವುದಿಲ್ಲ ಎನ್ನುತ್ತಾರೆ. ಇನ್ನೋರ್ವರು ಹೆಚ್ಚೆಚ್ಚು ಓದಿದಂತೆ ನಮಗೆ ಬರೆಯಲಿಕ್ಕೇನಿದೆ ಎಂದು ಭಾವಿಸಿ, ತುಂಬ ಓದು ನಮ್ಮ ಸೃಜನಶೀಲತೆಯ ಹರಣ ಮಾಡುತ್ತದೆ ಎನ್ನುತ್ತಾರೆ. ನಾನು ಡಾ. ಶಿವರಾಮ ಕಾರಂತರಿಗೆ ನನ್ನ‌ ಯೌವನ ಕಾಲದಲ್ಲಿ ಕೇಳಿದೆ‌- ನಿಮ್ಮ ಮರಳಿ ಮಣ್ಣಿಗೆ ಕಾದಂಬರಿ ಪರ್ಲ್‌ ಎಸ್ ಬಕ್ ರ Good Earthನಿಂದ ಪ್ರೇರಣೆಗೊಂಡಿದ್ದೆ? ಎಂದು. ಅದಕ್ಕೆ ಅವರ ಉತ್ತರ- ಅವಳಿಗಿಂತ ನಾನು ಮೊದಲೇ‌ ಬರೆಯುತ್ತಿದ್ದರೆ ಆಗ ನೀವು ಏನು ಹೇಳುತ್ತಿದ್ದಿರಿ? ನನ್ನ‌ ಕೃತಿ ಮೂರು ತಲೆಮಾರುಗಳ ಕತೆ. ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆ, ಜಿಂಕೆ ಮನುಷ್ಯನ ವೀರ್ಯ ಕುಡಿದು ಓರ್ವ ಮನುಷ್ಯನಿಗೆ ಜನ್ಮ ನೀಡುವುದು, ಕುರುಡ ಧೃತರಾಷ್ಟ್ರ, ಗಂಗಾ ನದಿಯನ್ನೇ ವಿವಾಹವಾಗುವ ಶಂತನು... ಇವೆಲ್ಲ ಮ್ಯಾಜಿಕ್ ರಿಯಲಿಸಂಗೆ ಉದಾಹರಣೆಗಳಾಗಬಹುದಲ್ಲವೆ?


| ಗುರುಪ್ರಸಾದ್ ಕಂಟಲಗೆರೆ

ಕುಂವಿಯ ದೇವರಹೆಣ, ಮಹದೇವರ ಮಾರಿಕೊಂಡೋರು ಓದಿ ಸಮ್ಮೋಹಿತನಾಗಿದ್ದ ನಾನು, ಲಂಕೇಶರಿಂದ ಶುರುವಾಗಲಿಲ್ಲ ಯಾಕೆ ಎಂದು ಯೋಚಿಸುತ್ತಿರುವೆ ಸರ್..


| Devendrappa

ಲಂಕೇಶ್ ಕೃತಿಗಳ ಅಧ್ಯಯನ ಕಮ್ಮಟದಲ್ಲಿ ನಾನು ಭಾಗವಹಿಸಿದ್ದೆ. ನಿಮ್ಮ ಉಪನ್ಯಾಸ ಕೇಳಿದೆ. ಲಂಕೇಶರ ಕಥೆಗಳ ಕುರಿತ ಕೆಲವು ಸಂಗತಿಗಳನ್ನು ತಾವು ಹೇಳಿದಿರಿ. ಕಥೆಯನ್ನು ಓದಲು ಕೂಡ ಒಂದು ತಯಾರಿ ಬೇಕು ಎಂದು ಅರಿತುಕೊಂಡೆ. ಕಥೆಯನ್ನು ರಚಿಸುವ ಲೇಖಕರು ಪ್ರಭಾವದ ಹಿನ್ನೆಲೆಯಲ್ಲಿ ಕಥೆ ರಚಿಸುತ್ತಾರೆ ಎಂದು ಹೇಳಬಹುದು. ಏನನ್ನೋ ನೋಡಿದ್ದನ್ನು, ತಮ್ಮ ಬದುಕಿಗೆ ತೀರಾ ಹತ್ತಿರವಾದ ಸಂಗತಿಗಳಿಗೆ ಜೋಡಿಸುತ್ತಾ ಹೋಗುತ್ತಾರೆ. ಒಂದು ಹೊಸ ಕಥೆಯ ರಚನೆಯ ಹಿಂದೆ ಆ ಕಥೆ ಅವರೊಳಗೆ ಹಲವು ದಿನಗಳಿಂದ ಪ್ರಯಾಣ ಮಾಡುತ್ತಾ ಇರುತ್ತದೆ. ಅದಕ್ಕೆ ಅವರು ಜೀವ ನೀಡುತ್ತಾರೆ. ಕಥೆ ರಚಿಸಲು ನಿಯಮಗಳಿಲ್ಲ. ಆದರೆ ಮಾನದಂಡಗಳಿವೆ. ತಾವು ಕಥೆ ಬರೆಯುವಾಗ ಯಾವುದೇ ಸಮುದಾಯಕ್ಕೆ ನೋವುಂಟು ಮಾಡದಂತೆ ಬರೆಯುವ ಎಚ್ಚರ ಸದಾ ಲೇಖಕನಿಗೆ ಇರಬೇಕಾದದ್ದು ಎಂಬುದು ನನ್ನ ಅಭಿಪ್ರಾಯ. ಕಥಾ ಪ್ರಪಂಚಕ್ಕೆ ಪ್ರವೇಶಿಸುವವರಿಗೆ ಒಳ್ಳೆಯ ಲೇಖನ.


| Sanganagowda

ಕತೆಗಾರನಿಗೆ ನಿಯಮಗಳಿವೆಯೇ \'\r\nಓದಿದೆ. \'ಆಗಸದ ಚುಕ್ಕಿಗಳು ಹಿಡಿಯಲು ಏಣಿ ನನ್ನೀ ಗಿಟಾರ್\' ಎಂಬ\r\nಕನಕರಾಜು ಬಾಲಸುಬ್ರಹ್ಮಣ್ಯ ಅವರ ಲೇಖನ ಓದಿದ್ದೆ. \'1973ರಲ್ಲಿ ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ನಡೆದ ಹತ್ಯಾಕಾಂಡವು ಪ್ರಭುತ್ವದ ಅಂತಹ ಪೈಶಾಚಿಕ ಮನೋಭಾವದ ಪ್ರತಿಬಿಂಬ. ಅದರಲ್ಲೂ ಮುಖ್ಯವಾಗಿ, ಸಂಗೀತಗಾರ ವಿಕ್ಟರ್ ಹಾರಾನ ಕಗ್ಗೊಲೆ ಎಂಥವರನ್ನೂ ತಲ್ಲಣಗೊಳಿಸುವಂಥದ್ದು\' ಎಂದು ಬರೆಯುತ್ತಾರೆ.\r\n\r\nಈ ಲೇಖನದ ಪ್ರಭಾವಕ್ಕೆ ಒಳಗಾಗಿ ನಾನು \'ಬೃಂಗನಾಗು ನೀ\' ಕಥೆ ಬರೆದಿದ್ದೆ. ಆ ಕಥೆ ಕರೊನಾ ಸಂದರ್ಭದಲ್ಲಿ ಜನಶಕ್ತಿ ಮೀಡಿಯಾದಿಂದ ಪ್ರಥಮ ಬಹುಮಾನ ಪಡೆದಿತ್ತು. ಕಥೆಯ ಪ್ರಾರಂಭದ ಸಾಲು ಹೀಗಿವೆ: \'ಭಿಕಾರಿ ಬೆಳದಿಂಗಳು ಕತ್ತಲನ್ನು ಕದ್ದು ನೋಡುವ ಹೊತ್ತಿನ್ನು ಹಾಗಿರಲಿಲ್ಲ. ಎಷ್ಟೇ ಹಗರು ಹೆಜ್ಜೆ ಹಾಕಿದರೂ ಗಟ್ಟಿ ಮೆಟ್ಟಿನ ಬುಡಕ್ಕೆ ಹೊಡಿಸಿದ್ದ ನಾಲುಗಳ ಕಟ್ ಕಟ್ ಸಪ್ಪಳ. ಬೆದರಿದ ಹೆಣ್ಣು ನಾಯಿಯೊಂದು ಗವ್ವೆಂದು ತೊಡೆಗೆ ಬಾಯಿ ಹಾಕಿತು. ಬೀಡಿಯ ಕಿಡಿ ಕೂತಿದ್ದ ದೋತಿಗೆ ಹಲ್ಲು ಸಿಕ್ಕಿಸಿ ಮತ್ತಷ್ಟು ಬೆತ್ತಲೆಗೊಳಿಸಿತು...\'\r\nಕನಕರಾಜ ಸುಬ್ರಹ್ಮಣ್ಯ ಅವರು ವಿಕ್ಟರ್ ಹಾರಾನ ಒಂದು ಪದ್ಯವನ್ನು ಹೀಗೆ ಅನುವಾದಿಸಿದ್ದಾರೆ. \r\nಸಿರಿವಂತರ, ಹೊಟ್ಟೆ ತುಂಬಿದವರ ತೇಗಿಗಾಗಲ್ಲ\r\n\r\nನನ್ನೀ ಗಿಟಾರ್\r\n\r\nಅವರ ತೆವಲಿನ ತೇಗಾಗಲು ಸಾಧ್ಯವೇ ಇಲ್ಲ!\r\n\r\nಇದೊಂದು ಏಣಿ!\r\n\r\nಆಗಸದ ಚುಕ್ಕಿಗಳ ಹಿಡಿಯಲು\r\n\r\nನಾವು ನಿರ್ಮಿಸುತ್ತಿರುವ ಹೊಸ ಹಾದಿ...’ \r\n\r\nನಾನು ನನ್ನ ಕಥೆಯಲ್ಲಿ \r\n\r\n\'ಹೆದ್ದಾರಿಗೆ ಹದ್ದು ಬಡಿಯಲಿ ಗುರುವೇ \r\n\r\nಕಾಲುದಾರಿ ಕವಲು ಡಿಯಲ್ಲಿ ನನ್ನಪ್ಪ\'\r\n\r\nಮತ್ತು \r\n\r\n\'ಜಗದ ನೋವುಗಳೆಲ್ಲ ಒಂದಾಗುವ ಕಾಲ \r\n\r\nಎಲ್ಲಿ ಹೊಂಟಿರೇ ಯಾಕ ಒಂಟಿರೇ \r\n\r\nಹಾಕ ಬನ್ನಿ ತಾಳ ಮೇಲೆ ತೆಗಿತೀನಿ ನಾದ\'\r\n\r\nಎಂದು ಬರೆದಿದ್ದೆ 🙏\r\n\r\n


| Dr.Prabhakar

Intricate analysis on how stories can be crafted; undoubtedly Lankesh influenced innumerable aspiring youth to venture into story writing! Congrats on yet another masterpiece!


| Dr. Vasantkumar Kadlimatti

Certainly Sir, \'honesty in writing\' can transform every ordinary writer into an extraordinary. It applies not only to stories but to any literary genre. Similarly, we also find that even the subtle, deep and rereading of a few writers indirectly influences our writing style.


| ಡಾ. ನಿರಂಜನ ಮೂರ್ತಿ ಬಿ ಎಂ

\'ಕತೆಗಾರಿಕೆಗೆ ನಿಯಮಗಳಿವೆಯೆ?\' ಎಂಬ ಚರ್ಚೆ ತುಂಬಾ ಚೆನ್ನಾಗಿದೆ. ಇದೊಂದು ಅತ್ತುತ್ತಮ ಲೇಖನ. ಕತೆಗಾರಿಕೆಯನ್ನು ಬೆಳೆಸುವಲ್ಲಿ ಲಂಕೇಶರ ಪಾತ್ರ ದೊಡ್ಡದಿದೆಯೆಂಬುದು ಸರ್ವವಿದಿತ. ಕತೆ ಕಟ್ಟುವಿಕೆಗೆ ಮತ್ತು ಒಟ್ಟಾರೆ ಬರವಣಿಗೆಯ ಕಾಯಕಕ್ಕೆ ಪ್ರಾಮಾಣಿಕತೆ ಬಹು ಮುಖ್ಯ ಎಂಬುದು ಮನದಟ್ಟಾಗುತ್ತದೆ. \r\n\r\nಕವಯಿತ್ರಿ ಎಡ್ನಾಳ \'ಲವ್ ಈಸ್ ನಾಟ್ ಆಲ್\' ಕವಿತೆಯ ಅನುವಾದ ಚೆನ್ನಾಗಿ ಮೂಡಿಬಂದಿದೆ. ಇನ್ನಷ್ಟು ಅನುವಾದಗಳು ನಿಮ್ಮಿಂದ ಆಗಾಗ್ಗೆ ಮೂಡಿಬರುತ್ತಿರಲಿ.




Add Comment


Nataraj Huliyar on Book Prize Awardees

YouTube






Recent Posts

Latest Blogs